Friday, September 29, 2017

ಎಲ್.ಇ.ಡಿ. ಸೀರೆ ಮತ್ತು ಡುಮ್ಮಿ ಟಿ.ವಿ.

ಇದು ಎಲ್.ಇ.ಡಿ. ಸೀರೆಯಂತೆ! ಏಳು ಸೆಕೆಂಡಿನ ಈ ವಿಡಿಯೋವನ್ನು ಆಮೇಲೆ ಗಮನಿಸಿ. ಹೊಸದಾಗಿ ಮದುವೆಯಾದಾಗ ಇಪ್ಪತ್ತು ವರ್ಷಗಳ ಹಿಂದೆ ನಾನು ನನ್ನ ಹೆಂಡತಿ ಹೋಗಿ ತಂದಿದ್ದ ಒನಿಡಾ ಡುಮ್ಮಿ ಟಿವಿನೇ ಇನ್ನೂ ನಾವು ಎಲ್.ಇ.ಡಿ.ಗೆ ಬದಲಿ ಮಾಡಿಕೊಂಡಿಲ್ಲ. ಅಷ್ಟರೊಳಗೇ ಸೀರೆಯೂ ಎಲ್.ಇ.ಡಿ. ಬಂತಾ?

ಎಲ್ಲ ಹೆಂಗಸರೇ (ಸಹೋದರಿಯರೇ, ಗೆಳತಿಯರೇ, ಮಾತೆಯರೇ ಹಿಂಗೆಲ್ಲ ಏನೇ ಪದ ಬಳಸಿದರೂ ಒಂದಿಷ್ಟು ಜನ ಆ ಪದದ ವ್ಯಾಪ್ತಿಯಿಂದ ಹೊರಗೆ ಉಳಿಯುವುದರಿಂದ ಹೀಗನ್ನುತ್ತಿರುವೆ ಅಷ್ಟೇ, ಒರಟೆನಿಸಿದರೆ ಸಹಿಸಿಕೊಂಡು ಕ್ಷಮಿಸಿ) ಹೇಗಿದ್ದರೂ `ನಿಮ್ಮ’ ಗಂಡಸರೆಲ್ಲ ಇವತ್ತು ವಿಜಯದಶಮಿ ಹಬ್ಬ ಅಂತ ಮನೆಯಲ್ಲಿಯೇ ಇರ್ತಾರೆ. “ಮೈಸೂರು ದಸರಾ ಎಷ್ಟೊಂದು ಸುಂದರಾ” ಎಂದು ಮಂಜುಳಾ ರಾಜಕುಮಾರನ ಜೊತೆಗೆ ಕುಣಿಯುವ ಹಾಡನ್ನು ಟಿವಿಯವರು ತೋರಿಸುವುದನ್ನು ನೋಡ್ತಾ ಒಂದ್ತರಾ ಹ್ಯಾಪಿ ಮೂಡಿನಲ್ಲಿ ಇರ್ತಾರೆ. ಅವರು ಈ ಹಬ್ಬಕ್ಕೆ ಹೊಸ ಸೀರೆ ಕೊಡಿಸಿದರೇನು ಬಿಟ್ಟರೇನು ನೀವು ಮಾತ್ರ ಪೂಜೆ ಪುನಸ್ಕಾರ ಮಾಡುವುದರಲ್ಲಿಯಾಗಲಿ ಸಿಹಿ ಅಡುಗೆ ಮಾಡುವುದರಲ್ಲಾಗಲೀ ಏನೂ ಕಡಿಮೆ ಮಾಡದೇ ಏನೇನು ಮಾಡಬೇಕೋ ಅದೆಲ್ಲ ಮಾಡಿ ಅವರ ಮನಸ್ಸನ್ನು ಗೆದ್ದಿರ್ತಿರಾ.

ಈ ಸಮಯದಲ್ಲಿ ಗಂಡಸರಿಗೆ ನಿಮ್ಮ ಬಗ್ಗೆ ಒಂದು ಗುಡ್ ವಿಲ್ ಇದ್ದೇ ಇರ್ತದೆ. ಇದೇ ಒಳ್ಳೇ ಟೈಮು. ಗಂಡಸರು ಊಟಮಾಡುವಾಗ `ಸಾರು ತುಂಬಾ ಚೆನ್ನಾಗಿದೆ’ `ಪಾಯಸ ತುಂಬಾ ಟೇಸ್ಟಿದೆ’ ಎನ್ನುವ ಮಾತು ಅವರ ಬಾಯಿಂದ ಹೊರಬರುವ ಸಮಯ ನೋಡಿ, ಅವರು ತುತ್ತು ನೆತ್ತಿಗೆ ಹತ್ತದ ಹಾಗೆ ನೈಸಾಗಿ ಅವರ ಕಿವಿಗೆ ಈ ಸೀರೆ ಬಗ್ಗೆ ಒಂದು ಮಾತು ಹಾಕಿಡಿ. ತಗಳ್ಳುವುದೋ ಬಿಡೋದೋ ಆಮೇಲೆ ನೋಡಿದರಾಯಿತು.ಯಾವುದಕ್ಕೂ ದೀಪಾವಳಿ ಇನ್ನೂ ಒಂದು ತಿಂಗಳಿದೆಯಲ್ಲ! ಇಂತಹ ಹ್ಯಾಪಿ ಮೂಡಿನಲ್ಲಿರುವಾಗ ಈ ಸೀರೆಯನ್ನು ಕೊಡಿಸುವ ಬಗ್ಗೆ ಎಲ್ಲ ಗಂಡಸರೂ `ಭರವಸೆ’ ಕೊಟ್ಟೇಕೊಡ್ತಾರೆ. ಭರವಸೆ ಕೊಡದಿದ್ದರೆ ಕೊನೆಯ ಪಕ್ಷ `ಆಸ್ವಾಸನೆ’ಯನ್ನಾದರೂ ಕೊಡದಿದ್ದರೆ ಅವರ ಗಂಡಸುತನಕ್ಕೆ ಅವಮಾನವಾಗುವುದರಿಂದ ನಿಮ್ಮ ಪ್ರಯತ್ನ ಹುಸಿಹೋಗಲಿಕ್ಕಿಲ್ಲ!

ಮನೆಯಲ್ಲಿರುವ ಮಹಿಳೆಯರು ಸೀರೆಗಾಗಿ ಗಂಡಸರನ್ನು ಗೋಗರೆಯುವುದು ಭಾರತದಲ್ಲಿ ಸಾಮಾನ್ಯ ಬಿಡಿ. ಆದರೆ ಹೊರಗಡೆ ಹೋಗಿ ದುಡಿಯುವ ಬಹಳಷ್ಟು ಮಹಿಳೆಯವರು ಕೂಡ ತಮ್ಮ ದುಡಿಮೆಯ ಹಣದಲ್ಲಿಯೇ ಒಂದು ಹೊಸಸೀರೆಯನ್ನು ತೆಗೆದುಕೊಳ್ಳುವಾಗಲೂ ತಮ್ಮ ಗಂಡಂದಿರಿಗೆ `ಒಂದುಮಾತು ಹೇಳಿ ತಗೊಳ್ಳುವುದು’ ಅವರು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ! ಆ ಮೂಲಕ `ನಾನು ಈ ಮನೆಯ ಯಜಮಾನ ಅಲ್ಲ’ ಎಂಬ ಅಸುರಕ್ಷತೆಯ ಭಾವ ಗಂಡಸರಲ್ಲಿ ಮೂಡದಂತೆ ಅವರುನ್ನು ಕಾಪಾಡಿಕೊಂಡು ಅವರು ಬರುತ್ತಿದ್ದಾರೆ. ಅದು ಅವರ ದೊಡ್ಡಗುಣವೋ ಇರಬಹುದು ಅಸಹಾಯಕತೆಯೂ ಎಂಥದಾದರೂ ಇರ್ಲಿಬಿಡಿ. ಅದನ್ನ ಕಟ್ಟಿಕೊಂಡು ಆಗಬೇಕಾಗಿದ್ದಾದರೂ ಏನು? ಒಟ್ಟಿನಲ್ಲಿ “ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು…. ಬದುಕು ಹಗುರ ಎನ್ನುತಿರಲು ಪ್ರೇಮವೆನಲು ಹಾಸ್ಯವೇ’’ ಎಂಬ ಕವಿವಾಣಿಯಂತೆ ನೋಡೋಕೆ ಚೆನ್ನಾಗಿ ಕಾಣುವಂತೆ ಬದುಕುತ್ತಾರಲ್ಲ ಅಷ್ಟು ಸಾಕು.

ಗಂಡುಹೆಣ್ಣಿನ ಪ್ರೀತಿಗೂ ಇಂತಹ ಸೀರೆಗಳಿಗೂ ಎಂತೆಂಥದೋ ಸಂಬಂಧಗಳು ಇರುತ್ತವೆ. ಅವನ್ನೆಲ್ಲ ಹೇಳೋದು ಕಷ್ಟ. `ಪ್ರೀತಿ’ `ಪ್ರೇಮ’ ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕವಾಗಿ ಮಾತನಾಡಲು ನಮ್ಮ ಹಿಂದಿನ ತಲೆಮಾರಿನ ಜನ ಮುಜುಗರಪಡುತ್ತಿದ್ದರು. `ಮೈಸೂರು ಮಲ್ಲಿಗೆ’ ಕೃತಿಯ ಪ್ರೇಮಗೀತೆಗಳ ಮೂಲಕ ಕನ್ನಡ ಜನಮಾನಸದಲ್ಲಿ `ಪ್ರೇಮಕವಿ’ ಎಂದೇ ಹೆಸರಾದ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ಗೀತೆಗಳನ್ನು ಯಾರಾದರೂ `ಪ್ರೇಮಗೀತೆಗಳು’ ಎಂದದ್ದು ತಮ್ಮ ಕಿವಿಗೆ ಬಿದ್ದರೆ, `ಅವು ಪ್ರೇಮಗೀತೆಗಳಲ್ಲ ದಾಂಪತ್ಯಗೀತೆಗಳು’ ಎಂದು ತಿದ್ದಿ ಹೇಳುತ್ತಿದ್ದರಂತೆ! ಬಹುಶಃ ದಾಂಪತ್ಯದಲ್ಲಿರುವ `ಪತ್ಯ’ದ ಕಾರಣಕ್ಕೆ ಅವರು ಹಾಗೆ ತಿದ್ದುತ್ತಿರಬಹುದು. ಆ ಕಾಲದ ದಾಂಪತ್ಯದ್ದು ಈ ಕಥೆಯಾದರೆ ಇನ್ನು ಈ ಕಾಲದ ಇತ್ತೀಚಿನ ಜೋಡಿಗಳು, ಅಂದರೆ ಮದುವೆಯಾದ ಅಥವಾ ಆಗದೆಯೂ ಆದವರಂತೆ ಜೊತೆಯಾಗಿ ಬದುಕುತ್ತಿರುವ ಪ್ರೀತಿ ಪ್ರೇಮದ ಹುಡುಗ ಹುಡುಗಿಯರ ಜೋಡಿಗಳಿಗೆ ಈ ಸೀರೆ ಬೇಕಾಗಿಲ್ಲ. ಅವರು ಒಂದು ರೀತಿಯಲ್ಲಿ `ಜಿನ್ಪ್ ಪ್ಯಾಂಟ್ ಟೀ ಶರ್ಟ್ ಜೋಡಿ’ಗಳು. ಅವರಿಗೆ ಗಂಡಸರ ಬಟ್ಟೆ ಹೆಂಗಸರ ಬಟ್ಟೆ ಇವುಗಳ ನಡುವೆ ವ್ಯತ್ಯಾಸ ಏನೂ ಇರಬೇಕಾಗಿಲ್ಲ. ಎಲ್ಲಿಗಾದರು ಹೊರಟರೆ ಎರಡು ಜಿನ್ ಪ್ಯಾಂಟು ಎರಡು ಟೀ ಶರ್ಟ್ ಬ್ಯಾಗಿನಲ್ಲಿ ತುರುಕಿಕೊಂಡರೆ ಮುಗಿಯಿತು. ಇಬ್ಬರಿಗೂ ಆಗುತ್ತೆ. ಅಷ್ಟೇ ಅಲ್ಲ  ಕವಿ ಬೇಂದ್ರೆ ಅವರ `ಬಳಸಿಕೊಂಡೆವು ನಾವು ಅದನೆ ಅದಕು ಇದಕು ಎದಕು’ ಎನ್ನುವ ಸಾಲಿನಂತೆ ಹಗಲು ತಿರುಗಲಿಕ್ಕೆ ರಾತ್ರಿ ಮಲಗಲಿಕ್ಕೆ ಎಲ್ಲದಕ್ಕೂ ಆಗುತ್ತೆ. ಅವರಿಗೂ ಈ ಸೀರೆಗೂ ಸಂಬಂಧನೇ ಇಲ್ಲದ್ದರಿಂದ ಅವರ ಉಸಾಬರಿ ನಮಗೆ ಬೇಡ!

ಹೆಂಗಸರಿಗೆ ಸೀರೆ ಕೊಡಿಸುವ ವಿಚಾರದಲ್ಲಿ ಗಂಡಸರು ಹೆಂಗೆಂಗೋ ವರ್ತಿಸುತ್ತಾರೆ. ಕೆಲವು ಗಂಡಸರು ಹೆಂಗಸರಿಗಿಂತಲೂ ಹೆಚ್ಚಾಗಿ ಸೀರಿಯಸ್ಸಾಗಿ ಅಂಗಡಿಗಳಲ್ಲಿ ಅವರಿಗಿಂತಲೂ ಹೆಚ್ಚು ಸೀರೆ ಕಿತ್ತುಹಾಕಿಸಿ ಅವರಿಗಿಂತಲೂ ಹೆಚ್ಚಾಗಿ ಎತ್ತಿಕೊಳ್ಳೊದು ಮತ್ತೆ ವಾವಸ್ಸು ಕೊಡೋದು ಬದಲಿ ಮಾಡಿಕೊಳ್ಳೋದು ಮಾಡುವುದುಂಟು. ಆದರೆ ಇಂಥವರ ಸಂಖ್ಯೆ ಬಹಳ ಕಡಿಮೆ. ನಾನು ಕಂಡಂತೆ ನಮ್ಮ ಲಂಕೇಶ್ ಅವರಂಥ ಗಂಡಸರೇ ಹೆಚ್ಚು. ಲಂಕೇಶ್ ಹೆಸರು ಹೇಳಿದೆನಲ್ಲ, ಅವರ ಕಥೆ ಕೇಳಿ: ಲಂಕೇಶ್ ಸೀರೆ ಕೊಡಿಸಲೆಂದು ಅವರ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗನ್ನುವುದಕ್ಕಿಂತ ಅವರ ಹೆಂಡತಿಯೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಎನ್ನುವುದು ಹೆಚ್ಚು ಸರಿಯಾಗುವ ಮಾತು ಆಗಬಹುದು. ಹಾಗೆ ಹೋದ ಲಂಕೇಶ್ ಹೆಂಡತಿಯನ್ನು ಬಟ್ಟೆ ಅಂಗಡಿ ಒಳಗೆ ಕಳಿಸಿ ಹೊರಗಡೆ ನಿಂತು ಒಂದು ಸಿಗರೇಟು ಹಚ್ಚುತ್ತಿದ್ದರಂತೆ. ಆ ಸಿಗರೇಟು ಮುಗಿದು ಅದರ ತುಂಡನ್ನು ಅವರು ನೆಲಕ್ಕೆ ಎಸೆದು ಹೊಸಕಿಹಾಕುವುದರೊಳಗೆ ಹೆಂಡತಿ ಸೀರೆ ಸೆಲೆಕ್ಟ್ ಮಾಡಿಕೊಂಡು ಬರಬೇಕಾಗಿತ್ತಂತೆ. ಅಷ್ಟರೊಳಗೆ ಒಂದು ವೇಳೆ ಅವರು ಬರದಿದ್ದರೆ, “ನೀನೇನು ಜೀವನಪೂರ್ತಿ ಒಂದೇ ಸೀರೆ ಉಡ್ತೀಯಾ?” ಎಂದು ಜೋರು ಮಾಡುತ್ತಿದ್ದರಂತೆ!

ಲಂಕೇಶ್ ಅವರ ಕಥೆ ಹಂಗಾಯ್ತಲ್ಲ, ಅದು ಒಂದುಕಡೆ ಇರ್ಲಿ. ಗಂಡಸರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಲ್ಕು ಮಾತು: ಅಂದಹಾಗೆ ಈ ಸೀರೆ ಬೆಲೆ ಎಷ್ಟು ಅಂತ ಇನ್ನೂ ಗೊತ್ತಿಲ್ಲ. ಆದರೆ ಇದನ್ನು ಉಟ್ಟುಕೊಂಡು ಬಳುಕಾಡುತ್ತಾ, ಬೆಳಕುಬೀರುತ್ತಾ ಹೆಂಗಸರು ನಡೆಯುವುದು ಯಾವುದೇ ಗಂಡಸರಿಗಾದರೂ ಪುಳಕವನ್ನುಂಟುಮಾಡುವ ಸಂಗತಿಯಾದೀತು. ಸ್ವತಃ ಹೆಂಗಸರಿಗೂ ಇದು ಸಂತೋಷವನ್ನುಂಟು ಮಾಡೀತು. ಮನೆಯಲ್ಲಿ ಸ್ವಲ್ಪಹೊತ್ತು ಕರೆಂಟು ಹೋದರೂ ನಡೆದೀತು. ರಸ್ತೆಯಲ್ಲಿ ಬೀದಿದೀಪ ಇಲ್ಲದಿದ್ದರೂ ಆದೀತು. ಆದರೆ ಇಂತಹ ಈ ಸೀರೆ ಉಟ್ಟುಕೊಂಡ ಹೆಂಗಸರ ಮೈಮುಟ್ಟಿದರೆ ಪ್ರೀತಿಪ್ರೇಮದ, ಅನುರಾಗದ ಭಾವನೆ ಉಂಟಾಗುತ್ತದೆಯೋ ಅಥವಾ ಕರೆಂಟ್ ಹೊಡೆಸಿಕೊಂಡ ಅನುಭವ ಆಗುತ್ತದೆಯೋ ಇನ್ನೂ ಗಂಡಸರಿಗೆ ಗೊತ್ತಿಲ್ಲ. ಹತ್ತಿರ ಹೋದರೆ ಗ್ರೌಂಡಿಂಗ್ ಆಗಿ ಶಾಕ್ ಹೊಡೆಯುವ ಚಾನ್ಸ್ ಕೂಡ ಇರಬಹುದು. ಯಾವುದಕ್ಕೂ `ಹತ್ತಿರವಿದ್ದರೂ ಹತ್ತಿಕೊಂಡಿರುವುದನ್ನು ತಪ್ಪಿಸುವುದು’ ಆ ಮೂಲಕ `ಸುರಕ್ಷಿತ ಅಂತರ’ ಅಂದರೆ `Comfortable Distance’ ಮೇಂಟೇನ್ ಮಾಡೋದು ಒಳ್ಳೆಯದೇನೋ ಅಲ್ವಾ?

ನನ್ನ ಕಥೆ ಕೇಳಿ. ನಾನಂತು ಈ ಸೀರೆ ಕೊಡಿಸುವ ಸಂದರ್ಭ ಬರ್ಲಿಕ್ಕಿಲ್ಲ ಅಂದ್ಕೊಂಡಿದ್ದೇನೆ. ಯಾಕೆಂದರೆ ನನ್ನ ಹೆಂಡತಿ ಅದನ್ನು ಉಟ್ಟುಕೊಂಡು ಬಳ್ಳಿಯಂತೆ ಬಳುಕಾಡಿ ನಡೆದಾಡುವಷ್ಟು ತೆಳ್ಳಗೂ ಇಲ್ಲ. ಕ್ಯಾಟ್ ವಾಕ್ ಮಾಡಿ ನನ್ನನ್ನು ಖುಷಿಪಡಿಸುವ ವಯಸ್ಸೂ ಅವಳದಲ್ಲ! ನನಗೂ ನನ್ನ ಹೆಂಡ್ತಿಗೂ ನಮ್ಮ ಮನೆಯ ಡುಮ್ಮಿ ಟಿವಿಗೂ ಹೇಳಿಮಾಡಿಸಿದ ಜೋಡಿ! ಮೇಡ್ ಫಾರ್ ಈಚ್ ಅದರ್ ಅಂತನೋ ಏನೋ ಹೇಳ್ತಾರಲ್ಲ ಹಂಗೆ. ನಮ್ಮ ಕವಿ ಜಿ.ಪಿ. ರಾಜರತ್ನಂ ಅವರ ರತ್ನ ಹೇಳುವಂತೆ, `ನಮ್ಮಷ್ಟಕ್ ನಾವಾಗಿ, ಇದ್ದದ್ರಲ್ಲಿ ಹಾಯಾಗಿ’ ಅದೀವಿ. ನೀವು ಯಾರಾದ್ರು ಬೇಕಾದರೆ ಕೊಡಿಸಿ ಉಡಿಸಿ ನೋಡಿ ಸಂತೋಷ ಪಡಿರಪ್ಪ. ನಾವೆಲ್ಲ ದೂರದಿಂದ ನೋಡಿ ಸಂತೋಷ ಪಡ್ತೀವಿ. ಕೊನೆಯಲ್ಲಿ ನಾಲ್ಕು ಸಾಲಿನ ಒಂದು ಪದ್ಯ:

ಬಂದಿತು ನೋಡಿ ಎಲ್ಇಡಿ ಸೀರೆ
ಜಗಮಗ ಜಗಮಗ ಬೆಳಕಿನ ಧಾರೆ
ಉಟ್ಟುನಡೆದರೆ ಬಳುಕುತ ನೀರೆ
ನಿಂತು ನೋಡೀತು ಊರಿಗೆ ಊರೆ


·         ರಾಜೇಂದ್ರ ಬುರಡಿಕಟ್ಟಿ

Friday, September 22, 2017

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್
ಮೊನ್ನೆ ನಮ್ಮ ಬಿ.ವಿ. ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಪುಸ್ತಕ ಬಿಡುಗಡೆ ಮಾಡಲು ಶೂದ್ರ ಸಭೆ ಏರ್ಪಡಿಸಿದ್ದ ಸಂದರ್ಭ. ಶರ್ಮರ ಭಾಷಣ, ಕಿ.ರಂ. ನಾಗರಾಜನ ವಿಮರ್ಶೆ, ಮತ್ತು ವೀರಭದ್ರಪ್ಪನವರ ಒಂದೆರಡು ಮಾತುಗಳು. ನಮ್ಮ ಜನ ಇತ್ತೀಚೆಗೆ ಏನನ್ನು ಹೇಳಲೂ ಹಿಂಜರಿಯುತ್ತಿದ್ದಾರೆ; ಅವರು ಹಿಂಜರಿಯಲು ಕಾರಣಗಳಿವೆ. ಇಲ್ಲಿಯ ಕಂದಾಚಾರ, ಜಾತೀಯತೆ, ಮೂಢನಂಬಿಕೆಯ ವಿರುದ್ಧ ಸದಾ ಪ್ರತಿಭಟಿಸುವ ಒಂದು ಗುಂಪಿತ್ತು. ಅದರಲ್ಲಿ ದಲಿತರು, ಬಂಡಾಯದವರು, ಸಮಾಜವಾದಿಗಳು, ಕಮ್ಯುನಿಷ್ಟರು ಇದ್ದರು. ಇವರು ತುಂಬಾ ಉಗ್ರವಾಗಿ ಪ್ರತಿಭಟಿಸುತ್ತ ಇದ್ದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ; ಇಲ್ಲಿ ಸಮಾಜವಾದಿ ಸರ್ಕಾರ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗ್ಯಾರಂಟಿಯಾಗಿದ್ದಾಗ, ಈ ಪ್ರತಿಭಟನಾಕಾರರು ಪೂಜ್ಯರೂ ಪುನೀತರೂ ಆಗುವ ಸಂಭವವೇ ಇಲ್ಲ ಎಂಬುದು ನಿಶ್ಚಿತವಾಗಿದ್ದಾಗ…


ಆಮೇಲೇನಾಯಿತು ಅಂದರೆ, ಇವರಲ್ಲಿ ಅನೇಕರು ಸಾಂಪ್ರದಾಯಿಕ ಮದುವೆ ಮಾಡಿಕೊಂಡರು, ಕೆಲವರು ಪ್ರೇಮವಿವಾಹವಾಗಿ ವಿಚ್ಛೇದನಗೊಂಡರು. ಗುಟ್ಟಾಗಿ ವರದಕ್ಷಿಣೆ ತೆಗೆದುಕೊಂಡರು, ಜಗದ್ಗುರುಗಳ ನೇತೃತ್ವದ ಕಾಲೇಜಿನಲ್ಲಿ ಕೆಲಸಕ್ಕಾಗಿ ಜಗದ್ಗುರು ಮತ್ತು ಮ್ಯಾನೇಜ್ಮೆಂಟಿನ ಕಾಲಿಗೆ ಎರಗಿದರು. ಜನತಾದಳ, ಜನತಾ ಸರ್ಕಾರದಲ್ಲಿ ಸಾಕಷ್ಟು ತಿಂದು ಕೆಟ್ಟರು. ಕಾಂಗೈಗಳೊಂದಿಗೆ ಹೊಂದಾಣಿಕೆ ನಡೆಸಿಕೊಂಡು ಕೃತಾರ್ಥರಾದರು. ಇವರೆಲ್ಲರ ಪ್ರತಿಭಟನೆ ಸ್ಫೂರ್ತಿ ಕಳೆದುಕೊಂಡು ಶಿವಪೂಜೆಯ ಗುಣ ಪಡೆಯತೊಡಗಿತು. ಇದೊಂದು ವ್ಯರ್ಥವಾಗಿ ಹಾರಾಡುವವರ ಗುಂಪಾಗಿ ಜನ ಪರಿಗಣಿಸಿದರು.

ಆದ್ದರಿಂದಲೇ ವೀರಭದ್ರಪ್ಪ ತಮ್ಮೆಲ್ಲ ಕಷ್ಟಗಳ ನಡುವೆ, ಒತ್ತಡಗಳ ನಡುವೆ ನಮ್ಮ ತರುಣ ಜನಾಂಗಕ್ಕೆ ಉಪಯುಕ್ತವಾಗಬಲ್ಲ ಲೇಖನಗಳನ್ನು ಬರೆದಾಗ ಅವನ್ನೆಲ್ಲ ಸೇರಿಸಿ ಪುಸ್ತಕ ಮಾಡಿದೆವು. ಇವತ್ತು ಹೊಸ ಜನಾಂಗ, ಹೊಸ ಸ್ಫೂರ್ತಿಯಿಂದ, ಕಟ್ಟಕಡೆಯವರೆಗೆ ಇರಬಲ್ಲ ಕನಿಷ್ಠ ಕಾಳಜಿಯಿಂದ, ಬದುಕುವ ರೀತಿಯ ಅಂಗವಾಗಿಯೇ ಪ್ರತಿಭಟಿಸುವುದನ್ನು, ವೈಚಾರಿಕ ಪ್ರಶ್ನೆ ಕೇಳುವುದನ್ನು ಕಲಿಯಬೇಕಾಗಿದೆ. ಎಂದಿಗಿಂತ ಇವತ್ತು ವೈಚಾರಿಕತೆಯ ಅವಶ್ಯಕತೆ ಇದೆ. ವೈಚಾರಿಕತೆ ಎಂದರೆ ಕೇವಲ ತರ್ಕವಲ್ಲ, ಒಣವಾದವಲ್ಲ. ವೈಚಾರಿಕತೆ ಎಂದರೆ ನಮ್ಮ ಪಂಚೇಂದ್ರಿಯ ಮತ್ತು ಅಂತರಾಳಕ್ಕೆ ಗೋಚರಿಸುವ ಸತ್ಯಗಳ ಬಗ್ಗೆ ನಿಷ್ಠರಾಗಿರುವುದು, ನಮ್ಮಂತೆಯೇ ಅನುಭವಿಸುವ ಎಲ್ಲರೊಂದಿಗೆ ಆ ಸತ್ಯಗಳನ್ನು ಹಂಚಿಕೊಳ್ಳುವುದು. ಕಣ್ಣೆದುರು ಕಾಣುವ ಅನ್ಯಾಯ, ಅನಾಚಾರ, ಮೌಢ್ಯ, ಸ್ವಾರ್ಥದ ವಿರುದ್ಧ ಸೊಲ್ಲೆತ್ತುವ ದಿಟ್ಟತನ, ಸ್ಪಷ್ಟತೆ ಬೆಳಸಿಕೊಳ್ಳುವುದು.



ಮಾರ್ಕ್ಸ್ ತೀರಿಕೊಂಡಿರುವುದಾಗಿ ಲೋಹಿಯಾ, ಜೆ.ಪಿ, ಗಾಂಧಿಗಳೆಲ್ಲ ಕಣ್ಮರೆಯಾಗಿರುವುದಾಗಿ ಬೀಗುತ್ತಿರುವ ಕೊಳಕರಾದ ಹುಂಬರು ಈ ಪ್ರತಿಭಟನೆಯ ಅರ್ಥ ತಿಳಿದುಕೊಳ್ಳದಿದ್ದರೆ ಮಣ್ಣುಮುಕ್ಕುತ್ತಾರೆ. ಭಾರತದ ಬಂಡವಾಳಶಾಹಿ ಮತ್ತು ಸಮಾಜವಾದ, ಸಮತಾವಾದಗಳೆಲ್ಲ ಕ್ಲೀಷೆಗಳಾಗಿವೆಯೇ ಹೊರತು ಸತ್ತುಹೋಗಿಲ್ಲ. ಇವಕ್ಕೆಲ್ಲ ಹೊಸ ಅರ್ಥ ಮತ್ತು ಚಾಲನೆ ಬರಬೇಕಾದರೆ ಚಿಂತನೆ ಮತ್ತು ಕ್ರಿಯೆಗೆ ಜೀವ ಬರಬೇಕಾಗಿದೆ.
*****

ಇದು ನಿನ್ನೆ - 21-09-2017- ನಮ್ಮ ಭೌತಿಕ ಜಗತ್ತಿನಿಂದ ಕಳಚಿಕೊಂಡ ನಾಡಿನ ವೈಚಾರಿಕ ಸಾಹಿತ್ಯದ ಪ್ರಮುಖ ಕೊಂಡಿ, ಕನ್ನಡದ ಆಚೆಗೆ ಹೋಗಿ ತೆಲುಗು ಇಂಗ್ಲಿಷ್ ಭಾಷೆಗಳಿಗೂ ಅನುವಾದ ಗೊಂಡಿದ್ದ ಬಹುಮುಖ್ಯ ವೈಚಾರಿಕ ಕೃತಿಗಳ ಲೇಖಕ ಪ್ರೊ.ಬಿ.ವಿ.ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಇಪ್ಪತ್ತೈದು ವರ್ಷಗಳ ಹಿಂದೆ (1991-92) ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ನೆಪಮಾಡಿಕೊಂಡು ಆಗಿನ ಬಹುಮುಖ್ಯ ಲೇಖಕ ಪಿ.ಲಂಕೇಶ್ ತಮ್ಮ `ಲಂಕೇಶ್ ಪತ್ರಿಕೆ’ಯಲ್ಲಿ ಆ ಕಾಲದ ವೈಚಾರಿಕ ಸಾಹಿತ್ಯ ಕ್ಷೇತ್ರದ ಸೂಕ್ಷ್ಮ ಒಳನೋಟವನ್ನು ಕೊಡುತ್ತಾ ಬರೆದ ಲೇಖನ - ಎತ್ತಿಕೊಟ್ಟದ್ದು: ರಾಜೇಂದ್ರ ಬುರಡಿಕಟ್ಟಿ)

Friday, September 15, 2017

ಕುವೆಂಪು - ಲಂಕಿಣಿ - ಗೌರಿ

ಕುವೆಂಪು - ಲಂಕಿಣಿ - ಗೌರಿ

ಒಂದು ನಾಡಿನ-ದೇಶದ ಕಲೆ, ಸಾಹಿತ್ಯ ಸಂಸ್ಕೃತಿಗಳನ್ನು ಆ ದೇಶದ ಮಕ್ಕಳಿಗೆ ಯುವಜನತೆಗೆ ಸರಿಯಾದ ರೀತಿಯಲ್ಲಿ ಪರಿಚಯ ಮಾಡಿಕೊಡದೆ ಅವರ ತಲೆಗೆ ಮತಧರ್ಮಗಳ ಲದ್ಧಿಯನ್ನು ತುಂಬಿದರೆ ಏನಾಗುತ್ತದೆ ಎಂಬುದಕ್ಕೆ ಈ ದೇಶದ ವರ್ತಮಾನ ಮತ್ತು ಭವಿಷ್ಯವನ್ನು ಹೆಗಲಮೇಲೆ ಹೊತ್ತುಕೊಂಡಿರುವ ಯುವ ಸಮುದಾಯದ ಒಂದು ಭಾಗ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭವನ್ನು ಸಂಭ್ರಮಾಚರಣೆಯನ್ನಾಗಿ ಸ್ವೀಕರಿಸುವಂತಹ ವಿಕೃತ ಮನಸ್ಥಿತಿಗೆ ಇಳಿದ ಘಟನೆ ಸೂಕ್ಷ್ಮವಾಗಿ ಸೂಚಿಸುತ್ತದೆ.

ಈ ಯುವಕರಲ್ಲಿ ಕೆಲವರು ಗೌರಿಯವರನ್ನು ಟೀಕಿಸುವ ಭರಾಟೆಯಲ್ಲಿ ಅವರನ್ನು `ಲಂಕಿಣಿ’ `ಲಂಕಿಣಿ’ ಎಂದು ಕರೆದು ಕುಣಿದು ಕುಪ್ಪಳಿಸಿದರು. (ಹೀಗೆ ಸಂಭ್ರಮಾಚರಣೆಯನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಆಚರಿಸಿದ ಒಬ್ಬಾತನನ್ನು ಪೋಲೀಸರು ಬಂಧಿಸಿದ್ದೂ ಈಗಾಗಲೇ ನಡೆದಿದೆ. ಆ ದಾರಿ ಒಂದು ಕಡೆ ಇರಲಿ) ಗೌರಿಯನ್ನು `ಲಂಕಿಣಿ’ ಎಂದು ಕರೆಯುವ ಮೂಲಕ ಅವರನ್ನು ತೆಗಳುತ್ತಿದ್ದೇವೆಯೋ ಹೊಗಳುತ್ತಿದ್ದೇವೆಯೋ ಎಂಬ ಪರಿಜ್ಞಾನವೂ ಇಲ್ಲದ ಖಾಲಿಕೊಡಗಳಾಗಿ ಈ ಯುವಕರು ವರ್ತಿಸಿದ್ದು ಮಾತ್ರ ದುಃಖದಲ್ಲೂ ತಮಾಸೆಯಾಗಿ ಕಾಣುವ ವ್ಯಂಗವಾಗಿತ್ತು!

ಗೌರಿ ಲಂಕೇಶ್ ಯಾರು ಏನು ಎಂಬುದನ್ನು ಇಂದು ಇಡೀ ಜಗತ್ತು ಹೇಳುತ್ತಿದೆ. ಅವರ ಹತ್ಯೆಗೆ ಹೊರದೇಶಗಳಿಂದ ಬಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನಾ ಪ್ರತಿಕ್ರಿಯೆ ನನಗೆ ಗೊತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಬೇರಾವ ಕನ್ನಡಿಗರಿಗೂ ಬಂದಂತಿಲ್ಲ. ಅವರ ಹತ್ಯೆಯನ್ನು ಖಂಡಿಸಿ ವಿಶ್ವಸಂಸ್ಥೆ ಖಂಡನಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪ್ರಪಂಚದ ಬೇರೆಬೇರೆ ರಾಷ್ಟ್ರಗಳ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಮಾಡುವ ಮೂಲಕ ಇದು ಜಾಗತಿಕ ಮಟ್ಟದ ಸುದ್ಧಿಯಾಯಿತು! ಆ ಮೂಲಕ ಭಾರತ ‘ಸಹಿಷ್ಣುತೆಯ ದೇಶ’ ಮತ್ತು ಅದರ ಭಾಗವಾದ ಕರ್ನಾಟಕ `ಸರ್ವಜನಾಂಗದ ಶಾಂತಿಯ ತೋಟ’ ಎಂಬಿತ್ಯಾದಿ ಭಾವನಾತ್ಮಕ ಹೇಳಿಕೆಗಳು ಮರುಪರಿಶೀಲನೆಗೆ ಒಳಪಡುವಂತಾಯಿತು ಕೂಡ. ಈ ಘಟನೆಯಿಂದಾಗಿ ರಾಜ್ಯದ ಮತ್ತು ಆ ಮೂಲಕ ದೇಶದ ಮರ್ಯಾದೆಯನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಹರಾಜು ಹಾಕಿದಂತಾಗಿದ್ದೂ ಸುಳ್ಳಲ್ಲ.

ಗೌರಿಯವರನ್ನು `ಅವಳು ಅಂಥವಳು’ `ಅವಳು ಇಂಥವಳು’ `ಅವಳು ನಕ್ಷಲೀಯಳು’ `ಅವಳು ಸೈನಿಕರನ್ನು ಅವಮಾನಿಸುತ್ತಿದ್ದಳು’ `ಅವಳು ರಾಷ್ಟ್ರದ್ರೋಹಿಯಾಗಿದ್ದಳು’ ಎಂಬಿತ್ಯಾದಿ ನಮ್ಮ ರಾಷ್ಟ್ರಭಕ್ತರ `ಭಜನೆ’ಗೆ ಜಾಗತಿಕ ಸಮುದಾಯ ಕಿವಿಗೊಡದೇ ಒಬ್ಬ ದಿಟ್ಟಪತ್ರಕರ್ತೆಗೆ, ವಿಚಾರವಾದಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿತು.

ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ಘನತೆಯನ್ನು ತಿಳಿದುಕೊಳ್ಳುವ ಯೋಗ್ಯತೆ ಅಥವಾ ಇಚ್ಚೆ `ಸಂಗ್ತಿಸವಾಸ’ದಿಂದಾಗಿ ಇವರಿಗೆಲ್ಲ ಇಲ್ಲದಿರಬಹುದು. ಅದು ಸಹಜ ಕೂಡ. ಆದರೆ ಮಾತೆತ್ತಿದರೆ ತಮ್ಮನ್ನು ಈ ದೇಶದ ಧರ್ಮ ಮತ್ತು ಸಂಸ್ಕೃತಿಗಳ ಅಧಿಕೃತ ವಾರಸುದಾರರು ಎಂದು ಬಿಂಬಿಸಿಕೊಳ್ಳುವ ಇವರ `ದೇಶಪ್ರೇಮಿ’ ಗುರುಗಳು ಇವರಿಗೆ ಕೊನೆಯ ಪಕ್ಷ, ತಾವು ಈ ದೇಶದ ಸಂಸ್ಕೃತಿಯ ಪ್ರತೀಕಗಳೆಂದು ಸಾರಲಾಗುತ್ತಿರುವ ರಾಮಾಯಣ, ಮಹಾಭಾರತ ಅವುಗಳ ಅಂಗಗಳಾದ ರಾಮ, ಸೀತೆ, ಅಯೋಧ್ಯೆ, ರಾವಣ, ಲಂಕೆ, ಲಂಕಿಣಿ, ಪಾಂಡವರು, ಕೌರವರು ಇಂತಹ ಸಂಗತಿಗಳಲ್ಲಿಯಾದರೂ ಒಂದು ಮಟ್ಟದ ಪಾಠವನ್ನೂ ಹೇಳಿಕೊಡದಿದ್ದರೆ ಹೇಗೆ?

ಇಂತಹ ದಾರಿತಪ್ಪಿಸುವ ಗುರುಗಳ ಸಹವಾಸ ಬಿಟ್ಟು ದಾರಿತೋರಿಸುವ ಗುರುಗಳಾದ ಸಾಹಿತಿ-ಸಂಸ್ಕೃತಿ ಚಿಂತಕರ ಕಡೆ ಬಂದು ನಿಮ್ಮ ವ್ಯಕ್ತಿತ್ವವನ್ನು ಪೂರ್ಣಪ್ರಮಾಣದಲ್ಲಿ ಬೆಳಸಿಕೊಳ್ಳಿ ಎಂದು ಈ ದಾರಿಬಿಡುತ್ತಿರುವ ಯುವಜನತೆಗೆ ಪ್ರೀತಿಪೂರ್ವಕ ವಿನಂತಿ ಮಾಡಿಕೊಳ್ಳುತ್ತಾ ಲಂಕಿಣಿ ಯಾರು ಎಂಬುದನ್ನು ನಮ್ಮ ಕನ್ನಡ ಸಂಸ್ಕೃತಿ ಕಂಡ ಬಗೆಯ ಒಂದು ಉದಾಹರಣೆಯನ್ನು ಕೊಡುತ್ತೇನೆ ಗಮನಿಸಿ:

ಕನ್ನಡದ ಮಹಾಕವಿ ಕುವೆಂಪು ಅವರು ತಮ್ಮ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕೊಡುವ ಲಂಕಿಣಿಯ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಾಡಿನ ಮಧ್ಯೆ ಹೆಂಡತಿಯನ್ನು ಕಳೆದುಕೊಂಡ ರಾಮ ಅಕ್ಷರಶಃ ಅಲೆಮಾರಿ ಗಾಯಕನಾಗಿಬಿಡುತ್ತಾನೆ. ದೇವರ ಅವತಾರ ಎಂದು ನಾವೆಲ್ಲ ತಿಳಿದುಕೊಂಡಿರುವ ಈ ರಾಮ ಬುದ್ಧಿಸ್ಥಿಮಿತ ಕಳೆದುಕೊಂಡ ಸಾಮಾನ್ಯ ಮನುಷ್ಯನಂತೆ (ಮರಗಿಡಗಳನ್ನೆಲ್ಲ ನನ್ನ ಹೆಂಡತಿಯನ್ನು ಕಂಡಿರಾ ಕಂಡಿರಾ ಹೇಳಿರಿ ಹೇಳಿರಿ ಎಂದು ಕೇಳುತ್ತಾ) ಅಲೆದಾಡುವ ಸಂದರ್ಭ ನಿರ್ಮಾಣವಾಗಿ ಈ ದೇವಮಾನವ ಕಳೆದುಹೋದ ತನ್ನ ಸ್ವಂತ ಹೆಂಡತಿಯನ್ನೂ ಸ್ವಶಕ್ತಿಯಿಂದ ಹುಡುಕಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿಬಿಡುತ್ತಾನೆ!

ಕೊನೆಗೆ ಮನುಷ್ಯರಿಗಿಂತ ಅಂತಸ್ತಿನಲ್ಲಿ ಒಂದು ಹೆಜ್ಜೆ ಕೆಳಗೆ ಎಂದು ಗುರುತಿಸಲ್ಪಟ್ಟಿದ್ದ ಸುಗ್ರೀವನ ಸಹಾಯವನ್ನು ಅವನು ಪಡೆಯುವಂತಾಗಿಬಿಡುತ್ತದೆ! ಕಂಗಾಲಾಗಿ ಅಂಗಲಾಚುವ ಸ್ಥಿತಿಯಲ್ಲಿದ್ದ ರಾಮಲಕ್ಷ್ಮಣರಿಗೆ ಈ ಸುಗ್ರೀವಸಖ್ಯದಿಂದಾಗಿಯೇ ಸೀತೆಯನ್ನು ಹುಡುಕಲು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಈ ಯೋಜನೆಯ ಪ್ರಕಾರ ಲಂಕೆಗೆ ಹೋದ ಹನುಮಂತನಿಗೆ ಲಂಕೆಯ ಪ್ರವೇಶದ್ವಾರದಲ್ಲಿ ಮೊದಲಿಗೆ ಸಿಗುವವಳೇ ಈ ಲಂಕಿಣಿ. ಅವಳು ತನ್ನನ್ನು ‘ದಶಶಿರ ಕಲಕಲಕ್ಷ್ಮಿ, ಲಂಕಾದೇವಿ, ಲಂಕಿಣಿಯೆನಾಂ’ ಎಂದು ಹನುಮಂತನಿಗೆ ಪರಿಚಯಿಸಿಕೊಳ್ಳುತ್ತಾಳೆ. ಅವಳು ಇಡೀ ಲಂಕಾ ಸಾಮ್ರಾಜ್ಯವನ್ನು ರಕ್ಷಿಸುವ ಲಂಕೆಯ ಅಧಿದೇವತೆ! ವೈರಿಪಾಳೆಯದಿಂದ ಬಂದ ಹನುಮಂತನನ್ನು ಆರಂಭದಲ್ಲಿ ಒಳಗೆ ಬಿಡಲು ಒಪ್ಪದ ಇವಳು ನಂತರ ಹನುಮಂತನ ಜೊತೆ ದೀರ್ಘಚರ್ಚೆಮಾಡಿ ಸಾವಧಾನದಿಂದ ಅವನ ಮಾತುಗಳನ್ನು ಆಲಿಸಿ ಅವನು ಬಂದ ಸದುದ್ದೇಶವನ್ನು ತಿಳಿದುಕೊಳ್ಳುತ್ತಾಳೆ.

ಕಾಡಿನಿಂದಲೇ ಬಂದಿದ್ದ ಸ್ವತಃ ಕಾಡುಮನುಷ್ಯನೇ ಆಗಿದ್ದ (ನಮ್ಮಲ್ಲಿ `ಹಳ್ಳಿಗಮಾರ’ ಅನ್ನುವ ನಿಂದನಾಪದ ಇದೆಯಲ್ಲ! ) ಹನುಮಂತ ಆಧುನಿಕತೆಯ ಅವತಾರವಾಗಿರುವ ಭವ್ಯನಗರವಾದ ಲಂಕೆಯ ವೈಭವವನ್ನು ಕಂಡು ಕೀಳರಿಮೆಯಿಂದ ಕುಗ್ಗಿಹೋಗುತ್ತಾನೆ. ಹಳ್ಳಿಯಿಂದ ಹೊಸದಾಗಿ ನಗರಕ್ಕೆ ಹೋದ ವ್ಯಕ್ತಿಯೊಬ್ಬ ಅಲ್ಲಿನ ನಯನಾಜೂಕುಗಳಿಗೆ ಹೊಂದಿಕೊಳ್ಳಲಾಗದೆ ಅನುಭವಿಸುವ ಹಿಂಸೆ ಕೀಳರಿಮೆಗಳನ್ನೆಲ್ಲ ಈ ಹನುಮಂತ ಅನುಭವಿಸುತ್ತಾನೆ.

ಆದರೆ ಬಹುಚಾಣಾಕ್ಷಮತಿಯಾದ ಲಂಕಿಣಿ ಅವನ `ಹಳ್ಳಿತನ’ದಲ್ಲಿರುವ `ಒಳ್ಳೆಯತನ’ವನ್ನು ಸೂಕ್ಷ್ಮವಾಗಿ ಗುರುತಿಸುತ್ತಾಳೆ. ಒಂದು ಹಂತದಲ್ಲಿ ಹನುಮಂತನೇ ಅವಳಿಗೆ, `ಮನ್ನಿಸೆನ್ನೊರಟುತನಮಂ’ ಎಂದು ಕ್ಷಮೆ ಕೇಳಿ ದೊಡ್ಡವನಾಗುತ್ತಾನೆ. ಆದರೆ ಒಳ್ಳೆಯತನ ತೋರಿಸುವಲ್ಲಿ ಅವನಿಗೂ ಒಂದು ಹೆಜ್ಜೆ ಮುಂದೆ ಹೋಗುವ ಈ ಲಂಕಿಣಿ, `ಸೋಲೊಪ್ಪಿದೆನ್! ನಿನಗೆ ವಶಳಾದೆನ್’ ಎಂದು ಹೇಳುವ ಮೂಲಕ ಅವನಿಗಿಂತಲೂ ದೊಡ್ಡವಳಾಗಿಬಿಡುತ್ತಾಳೆ! ಹನುಮಂತನ ಹೇಳಿಕೆ ಮತ್ತು ರಾವಣನ ಕಾರ್ಯ ಎರಡನ್ನೂ ಕೂಲಂಕಷವಾಗಿ ವಿಚಾರಿಸಿನೋಡಿ ಕೊನೆಗೆ ಈ ಹನುಮಂತನನ್ನು ಲಂಕೆಯ ಒಳಗೆ ಹೋಗಲು ಬಿಟ್ಟುಬಿಡುತ್ತಾಳೆ!!

ಲಂಕೆಯನ್ನು ಕಾಯಲು ಇದ್ದ ಲಂಕಿಣಿ ಹೀಗೆ ವೈರಿ ಪಾಳೆಯದಿಂದ ಬಂದ ಹನುಮಂತನನ್ನು ಲಂಕೆಯ ಒಳಗೆ ಬಿಟ್ಟದ್ದು ಅವಳ ಕರ್ತವ್ಯಲೋಪ ಆದಂತಾಗಲಿಲ್ಲವೇ ಎಂದು ಅವಳ ನಿರ್ಧಾರದಿಂದ ನಮಗೆ ಅನ್ನಿಸಬಹುದು. ಅವಳಿಗೂ ಈ ಪ್ರಶ್ನೆ ಆರಂಭದಲ್ಲಿ ಕಾಡುತ್ತದೆ. ಆಗ ಅವಳ ಮುಂದೆ ಎರಡು ಆಯ್ಕೆಗಳಿದ್ದವು. ಒಂದು: ಹನುಮಂತನಿಗೆ ಲಂಕಾಪ್ರವೇಶಕ್ಕೆ ಅನುಮತಿ ಕೊಡುವುದು. ಇನ್ನೊಂದು ಅವನಿಗೆ ಪ್ರವೇಶ ನಿರಾಕರಿಸುವುದು: ಮೊದಲ ಆಯ್ಕೆಯನ್ನು ಅವಳು ಮಾಡಿಕೊಂಡು ಅವನನ್ನು ಒಳಗೆ ಬಿಟ್ಟರೆ ನ್ಯಾಯಕ್ಕೆ ಬೆಂಬಲಕೊಟ್ಟಂತಾಗುತ್ತದೆ ನಿಜ; ಆದರೆ ಅದು ತನ್ನೊಡೆಯನಾದ ಲಂಕೇಶ ರಾವಣನಿಗೆ ದ್ರೋಹಬಗೆದಂತಾಗುತ್ತದೆ! ಎರಡನೆಯದನ್ನು ಆಯ್ದುಕೊಂಡು ಅವನಿಗೆ ಲಂಕಾಪ್ರವೇಶವನ್ನು ನಿರಾಕರಿಸಿದರೆ ತನ್ನೊಡೆಯ ರಾವಣನಿಗೆ `ಸ್ವಾಮಿನಿಷ್ಠೆ’ ತೋರಿಸಿದಂತಾಗುತ್ತದೆ ನಿಜ; ಆದರೆ ಅದು ಅನ್ಯಾಯಕ್ಕೆ ಬೆಂಬಲವನ್ನು ಕೊಟ್ಟಂತಾಗುತ್ತದೆ. ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಬಗ್ಗೆ ಅವಳು ತೀವ್ರ ಗೊಂದಲಕ್ಕೆ ಬೀಳುತ್ತಾಳೆ. `ನನ್ನವಳಿಯಲ್ ಅತ್ತಲುಮ್ ಇತ್ತಲುಮ್ ಕತ್ತರಿಪುದಿರ್ಬಾಯ ಖಡ್ಗದೋಲ್’ ಎನ್ನುವ ಅವಳು ಮಾತು ಎರಡು ಅಲಗಿನ ಕತ್ತಿಗೆ ಸಿಕ್ಕು ಒದ್ದಾಡುವ ಅವಳ ಮನಸ್ಸುನ್ನು ಬಿಂಬಿಸುತ್ತದೆ.

ಹೀಗಿದ್ದೂ ಅವಳು ಅಂತಿಮವಾಗಿ ಆಯ್ಕೆಮಾಡಿಕೊಳ್ಳುವುದು ಹನುಮಂತನನ್ನು ಒಳಗೆ ಬಿಡುವ ಮೊದಲನೇ ಆಯ್ಕೆಯನ್ನೇ! ಇಲ್ಲಿ ಸಮಸ್ಯೆಯನ್ನು ಮೇಲ್ನೋಟದಲ್ಲಿ ಅಲ್ಲದೆ ಅಮೂಲಾಗ್ರವಾಗಿ ಗ್ರಹಿಸಿ ಅದರ ನಿವಾರಣೆ ಹೇಗೆ ಮಾಡಬಹುದೆಂದು ತೀರ್ಮಾನಿಸಿಯೇ ವೈರಿಪಾಳೆಯದ ಹನುಮಂತನನ್ನು ಒಳಗೆ ಬಿಡುವ ನಿರ್ಧಾರಕ್ಕೆ ಅವಳು ಬರುತ್ತಾಳೆ. ಆ ಮೂಲಕ ಬಹಳ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷೆಯಾಗಿ ನಮಗೆ ತೋರುತ್ತಾಳೆ. ಅವಳು ಯಾವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಳು ಎಂಬುದನ್ನು ಅವಳು ಹನುಮಂತನಿಗೆ ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ: ‘ಸೀತಾನ್ವೇಷಣಂ ನಿನಗೆ; ನನಗದಂ ಕೂಡಿ, ಲಂಕಾಕ್ಷೇಮ ಚಿಂತನಂ’

ಗಮನಿಸಿ: ಹನುಮಂತ `ನನಗೆ ಸೀತೆಯನ್ನು ಹುಡುಕುವುದು ಚಿಂತೆ’ ಎಂದಾಗ ಸಾಮಾನ್ಯ ಹೆಣ್ಣಾಗಿದ್ದರೆ ಅವಳು `ನನಗೆ ಲಂಕೆಯನ್ನು ಕಾಯುವುದು ಚಿಂತೆ’ ಎಂದು ಹೇಳಿಬಿಡುತ್ತಿದ್ದಳು. ಅವಳು ಹಾಗೆ ಹೇಳದೆ `ಸೀತೆಯ ಕ್ಷೇಮ ಮತ್ತು ಲಂಕೆಯ ಕ್ಷೇಮ ಎರಡನ್ನೂ ಮಾಡುವುದು ಹೇಗೆ ಎಂಬುದು ನನ್ನ ಚಿಂತನೆ’ ಎಂಬ ಅದ್ಭುತವಾದ ಮಾತನ್ನು ಹೇಳುತ್ತಾಳೆ. ಅವಳ ನಿರ್ಧಾರದಿಂದ ಆಗಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪುತ್ತದೆ.

`ಮಾತುಕತೆಯ ಮೂಲಕ ಅಂದರೆ ಚರ್ಚೆಯ ಮೂಲಕ ಎಂತಹ ಸಮಸ್ಯೆಯನ್ನಾದರೂ ನಾವು ಬಗೆಹರಿಸಿಕೊಳ್ಳಬಹುದು’ `ವೈರಿಗಳಲ್ಲಿಯೂ ಇರುವ ಒಳ್ಳೆಯತನವನ್ನು ನಾವು ಗೌರವಿಸಬೇಕು’ ಎನ್ನುವ ಎರಡು ಮುಖ್ಯ ತತ್ವಗಳನ್ನು ಪ್ರತಿಪಾದಿಸುವ ಲಂಕಿಣಿ ಇವುಗಳ ಜೊತೆಗೆ ಇವೆರಡಕ್ಕೂ ಮುಖ್ಯವಾದ ಇನ್ನೊಂದು ಮಹತ್ವದ ತತ್ವವನ್ನು ಪ್ರತಿಪಾದಿಸುತ್ತಾಳೆ. ಅದೆಂದರೆ `ನಾವು ಕೇವಲ ನಮ್ಮವರ ಯೋಗಕ್ಷೇಮವನ್ನಲ್ಲ ನಮ್ಮ ವೈರಿಗಳ ಯೋಗಕ್ಷೇಮವನ್ನೂ ಬಯಸುವ ಮೂಲಕ ಇಡೀ ನಾಡಿನ ಯೋಗಕ್ಷೇಮವನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು’

ವೈರಿಗಳ ಯೋಗಕ್ಷೇಮವನ್ನೂ, ಇಡೀ ನಾಡಿನ ಯೋಗಕ್ಷೇಮವನ್ನೂ ಬಯಸಿದ ಕುಶಲಮತಿ ಮತ್ತು ವಿಶಾಲಮತಿ ಎರಡೂ ಆದ `ಲಂಕಿಣಿ’ಗೆ ನಮ್ಮ ಗೌರಿಯನ್ನು ಹೋಲಿಸಿ ಟೀಕಿಸುತ್ತಿದ್ದಾರೆ ನಮ್ಮ ಈ ಯುವಕರು! ಬಹುಶಃ ಗೌರಿ ಅವರಂತಹ ವಿಶಿಷ್ಟವೂ ಸಂಕೀರ್ಣವೂ ಆದ ವ್ಯಕ್ತಿತ್ವಗಳಿಗೆ ಮಾತ್ರ ಹೀಗೆ `ಬುದ್ಧಿಜೀವಿ’ಗಳಿಂದ ಪ್ರಜ್ಞಾಪೂರ್ವಕವಾಗಿ ಮತ್ತು `ಬುದ್ಧಿಗೇಡಿ’ಗಳಿಂದ ಅಪ್ರಜ್ಞಾಪೂರ್ವಕವಾಗಿ ಒಟ್ಟಿನಲ್ಲಿ ಎರಡೂ ವರ್ಗಗಳಿಂದಲೂ ಗೌರವಪಡೆಯಲು ಸಾಧ್ಯವೇನೋ!!

ಡಾ, ರಾಜೇಂದ್ರ ಬುರಡಿಕಟ್ಟಿ
15-09- 2017