Saturday, February 21, 2026

ಅನನ್ಯತೆ ಮತ್ತು ಆತ್ಮಗೌರವದ ತಾಯ್ನುಡಿ ದಿನ

ಅನನ್ಯತೆ ಮತ್ತು ಆತ್ಮಗೌರವದ ತಾಯ್ನುಡಿ ದಿನ


“ಮೊಲೆಯ ಹಾಲಂತಂತೆ ಸವಿಜೇನು ಬಾಯ್ಗೆ

ತಾಯಿ ಅಪ್ಪುಗೆಯಂತೆ ಬಲುಸೊಗಸು ಮೈಗೆ”

ಈಗ ಅರ್ಧ ವಯಸ್ಸನ್ನು ಮುಗಿಸಿರುವ ಬಹುತೇಕ ಕನ್ನಡಿಗರಿಗೆ ಕುವೆಂಪು ಅವರ  ಕವಿತೆಯ ಈ ಸಾಲುಗಳು ಬಹುಶಃ ನೆನಪಿನಿಂದ ಮರೆಯಾಗಿರಲಾರವು. ತಾಯ್ನುಡಿಯ ಸಂಪರ್ಕವು ನಮಗೆ ಉಂಡುಮಾಡುವ ಭಾವನೆ ಎಂಥದ್ದು ಎಂಬುದನ್ನು ಹೇಳುವ ಇವು ಆಗ ಶಾಲೆಗಳ ಚಿಕ್ಕ ತರಗತಿಯಲ್ಲಿ ಪಠ್ಯವಾಗಿರುತ್ತಿದ್ದ ಕುವೆಂಪು ಅವರ ಕವಿತೆಯ ಸಾಲುಗಳು.

ಯುನೆಸ್ಕೋ ನೇತೃತ್ವದಲ್ಲಿ ಪ್ರತಿವರ್ಷ ಫೆಬ್ರವರಿ 21ನ್ನು ʼವಿಶ್ವಮಾತೃಭಾಷಾ ದಿನʼ ಎಂದು ಜಗತ್ತಿನಾಧ್ಯಂತ ಆಚರಿಸಲಾಗುತ್ತಿದೆ. ಈ ದಿನದ ಹಿನ್ನಲೆ ಮತ್ತು ಮಾತೃಭಾಷೆಗಳ ಇಂದಿನ ಸ್ಥಿತಿ, ಅದರಿಂದ ಉಂಟಾಗಬಹುದಾದ ಸಾಂಸ್ಕೃತಿಕ ಪರಿಣಾಮ ಮತ್ತು ನಾವೆಲ್ಲ ವಹಿಸಬೇಕಾದ ಎಚ್ಚರಿಕೆ ಇಂತಹ ಕೆಲವು ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚೆಗೆ ಎತ್ತಿಕೊಂಡಿದೆ.

ಐತಿಹಾಸಿಕ ಹಿನ್ನಲೆ:

ನಮ್ಮ ದೇಶ ಮಾತ್ರವಲ್ಲ ಇಡೀ ವಿಶ್ವವನ್ನೇ ಗಮನದಲ್ಲಿ ಇಟ್ಟುಕೊಂಡು ಹೇಳಬಹುದಾದ ಒಂದು ಮಾತೆಂದರೆ ತಮ್ಮ ಧರ್ಮಕ್ಕಾಗಿ, ತಮ್ಮ ಜಾತಿಗಾಗಿ, ತಮ್ಮ ದೇವರಿಗಾಗಿ ಪ್ರಾಣವನ್ನು ತ್ಯಾಗಮಾಡಿದ ಹತ್ತು ಹಲವು ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಿಗುತ್ತವೆ. ಆದರೆ ಇಡೀ ವಿಶ್ವದಲ್ಲಿ ತಮ್ಮ ಭಾಷೆಗಾಗಿ ಪ್ರಾಣ ತ್ಯಾಗಮಾಡಿದ ಉದಾಹರಣೆಗಳು ಇಲ್ಲ ಎನ್ನುವಷ್ಟು ಅಪರೂಪ. ಇಂತಹ ಅಪರೂಪದ ಘಟನೆಯೊಂದು ಕಳೆದ ಶತಮಾನದ ಮಧ್ಯಭಾಗದಲ್ಲಿ ಭಾರತ ಉಪಖಂಡದಲ್ಲಿಯೇ ಜರುಗಿತು. ಅದೆಂದರೆ ಅಂದಿನ ಪೂರ್ವ ಪಾಕಿಸ್ತಾನದ (ಇಂದಿನ ಬಾಂಗ್ಲಾದೇಶದ) ರಾಜಧಾನಿಯಾದ ಡಾಕಾದಲ್ಲಿ ತಮ್ಮ ಭಾಷೆಗಾಗಿ ಹೋರಾಟಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಅಲ್ಲಿನ ಆಡಳಿತ ವ್ಯವಸ್ಥೆಯಿಂದ ಹತ್ಯೆಗೀಡಾದ ಧಾರುಣ ಘಟನೆ.

ಭಾರತ ಉಪಖಂಡದ ಬಹುಮುಖ್ಯವಾದ ಭೂಪ್ರದೇಶಗಳಲ್ಲಿ ಒಂದಾದ ಬಂಗಾಳ ನಮ್ಮ ದೇಶದ ಚಿರಿತ್ರೆಯಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಮಹತ್ವದ ಸ್ಥಾನವನ್ನು ಪಡೆದಿದೆ. ಆಧುನಿಕ ಭಾರತದ ಚರಿತ್ರೆಯಲ್ಲಿಯೇ ಇದು ಎರಡು ಸಲ ಆಡಳಿತಾತ್ಮಕವಾಗಿ ವಿಭಜನೆ ಹೊಂದಿತು. ಮೊದಲ ಸಲ ಬ್ರಿಟೀಷರ ಆಳ್ವಿಕೆಯಲ್ಲಿ 1905ರಲ್ಲಿ ಅಂದಿನ ವೈಸರಾಯ್‌ ಲಾರ್ಡ್‌ ಕರ್ಜನ್‌ ಇದನ್ನು ವಿಭಜನೆ ಮಾಡಿದ. ಬ್ರಿಟೀಷ್‌ ಆಡಳಿತದ ವಿರುದ್ದ ದಿನದಿನಕ್ಕೂ ಹೆಚ್ಚುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಈ ಬಂಗಾಲದ ಕೊಡುಗೆ ದೊಡ್ಡಮಟ್ಟದಲ್ಲಿತ್ತು. ಈ ಹೋರಾಟವನ್ನು ಬಗ್ಗುಬಡಿಯಬೇಕಾದರೆ ಅಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವಿನ ಒಗ್ಗಟ್ಟನ್ನು ಮುರಿಯುವುದು ಆತನಿಗೆ ಅತಿಮುಖ್ಯವಾಗಿತ್ತು. ಈ ಕಾರಣಕ್ಕಾಗಿಯೇ ಆತ ಬಂಗಾಲದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ಪಶ್ಚಿಮದ ಭಾಗ ಮತ್ತು ಮುಸ್ಲಿಮರು ಬಹುಸಂಖ್ಯಾತರಾಗಿರುವ ಪೂರ್ವದ ಭಾಗಗಳನ್ನು ಪ್ರತ್ಯೇಕಗೊಳಿಸಿ ಕ್ರಮವಾಗಿ ʼಪಶ್ಚಿಮ ಬಂಗಾಳʼ ಮತ್ತು ಪೂರ್ವ ಬಂಗಾಳʼ ಎಂದು ಹೆಸರಿಸಿದ. ಆದರೆ ಬ್ರಿಟೀಷರು ನಿರೀಕ್ಷಿಸಿದ್ದೇ ಬೇರೆ. ಅದು ಆದದ್ದೇ ಬೇರೆ. ಯಾವ ಸ್ವಾತಂತ್ರ್ಯ ಹೋರಾಟವನ್ನು ಬಗ್ಗುಬಡಿಯಲು ಅವರು ಈ ಬಂಗಾಲವನ್ನು ವಿಭಸಿಜಿದ್ದರೋ ಅದೇ ವಿಭಜನೆ ಭಾರತದ ಸ್ವಾತಂತ್ರ್ಯ ಹೋರಾಟ ʼಸ್ವದೇಶಿ ಚಳುವಳಿʼ ಹೆಸರಿನಲ್ಲಿ ಇನ್ನೊಂದು ರೂಪ ಪಡೆದುಕೊಂಡು ಇನ್ನಷ್ಟು ತೀವ್ರವಾಗಲು ಕಾರಣವಾಗಿಬಿಟ್ಟಿತು. ಉದ್ದೇಶ ಈಡೇರದೆ ಇದೇ ಬ್ರಿಟೀಷ್‌ ಸರ್ಕಾರ ವಿಭಜನೆಯ ಎಂಟು ವರ್ಷಗಳ ನಂತರ 1911 ರಲ್ಲಿ ಲಾರ್ಡ್‌ ಹಾರ್ಡಿಂಗ್ಸ್‌ನ ನೇತೃತ್ವದಲ್ಲಿ ಮತ್ತೆ ಬಂಗಾಳವನ್ನು ಒಂದುಗೂಡಿಸಿತು.

ಬಂಗಾಳ ಎರಡನೆಯ ಸಲ ವಿಭಜನೆ ಆದದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ದೇಶ ವಿಭಜನೆಯೂ ಆಯಿತು. ಆಗ ದೇಶ ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆ ಆದಾಗ ಪಾಕಿಸ್ತಾನಕ್ಕೆ ಹಿಂದೆ ಬ್ರಿಟೀಷರು ಪೂರ್ವಬಂಗಾಳವಾಗಿ ವಿಭಾಗಿಸಿದ್ದ ಭಾಗ ಮುಸ್ಲಿಂ ಜನರ ಬಾಹುಳ್ಯದ ಕಾರಣಕ್ಕೆ ಸೇರಿತು. ಆದರೆ ಭೌಗೋಳಿಕವಾಗಿ ಪಾಕಿಸ್ತಾನ ಎಂಬ ದೇಶದ ಭೂಭಾಗ ಒಂದು ಕಡೆ ಆಗದ ಭಾರತದ ಪಶ್ಚಿಮ ದಿಕ್ಕಿನಲ್ಲಿ ಅರ್ಧಭಾಗ ಮತ್ತು ಪೂರ್ವದಿಕ್ಕಿನಲ್ಲಿ ಅರ್ಧಭಾಗ ಆಗಿಬಿಟ್ಟಿತು. ಆ ಹಂತದಲ್ಲಿ ಪಾಕಿಸ್ತಾನದ ಈ ಭಾಗಗಳನ್ನು ಸಹಜವಾಗಿ ʼಪಶ್ಚಿಮ ಪಾಕಿಸ್ತಾನʼ ಮತ್ತು ʼಪೂರ್ವ ಪಾಕಿಸ್ತಾನʼ ಎಂದು ಕರೆಯಲಾಯಿತು. (ಮುಂದೆ ಭಾರತದ ಸಹಾಯದಿಂದಾಗಿ ಇಂದಿರಾಗಾಂಧಿ ಅವರ ಕಾಲದಲ್ಲಿ ಈ ಪೂರ್ವ ಪಾಕಿಸ್ತಾನದ ಭಾಗ ಸ್ವತಂತ್ರ ದೇಶವಾಗಿ ಇಂದಿನ ಬಾಂಗ್ಲಾದೇಶ ಅದದ್ದು ಬೇರೆ ವಿಚಾರ.) ಈ ಎರಡೂ ಪ್ರದೇಶಗಳು ಒಂದು ದೇಶದ ಭಾಗಗಳೇ ಆದರೂ ಸಾಂಸ್ಕೃತಿಕವಾಗಿ ಬಹಳಷ್ಟು ಭಿನ್ನವಾಗಿದ್ದವು.

ಹೀಗೆ ಆಗ ಪೂರ್ವಪಾಕಿಸ್ತಾನ ಎಂದು ಗುರುತಿಸಲ್ಪಟ್ಟ ಇಂದಿನ ಬಾಂಗ್ಲಾದೇಶದಲ್ಲಿ ಆಗಲೂ ಕೇವಲ ಉರ್ದು ಭಾಷಿಕರು ಮಾತ್ರವಿರಲಿಲ್ಲ. ಬಹುದೊಡ್ಡ ಸಂಖ್ಯೆಯ ಬಂಗಾಲಿ ಭಾಷಿಕರೂ ಇದ್ದರು. ಆದರೂ ಅಂದಿನ ಪಾಕಿಸ್ತಾನ ಸರ್ಕಾರ ಬಂಗಾಲಿಗಳ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉರ್ದುಭಾಷೆಯೊಂದನ್ನೆ ದೇಶದ ʼಅಧಿಕೃತʼ ಭಾಷೆ ಎಂದು ಘೋಷಿಸಿತು. ಇದು ಸಹಜವಾಗಿ ಬಂಗಾಲಿಗಳ ಕ್ರೋಧಕ್ಕೆ ಕಾರಣವಾಯಿತು. ಬಂಗಾಲಿ ಒಂದನ್ನೇ ಅಲ್ಲದಿದ್ದರೂ ಕನಿಷ್ಠ ಉರ್ದುವಿನ ಜೊತೆಗೆ ಈ ಬಂಗಾಲಿಯನ್ನೂ ದೇಶದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ಬಂಗಾಲಿಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಮೊಟ್ಟಮೊದಲ ಬಾರಿ ಪೂರ್ವಬಂಗಾಳದ ಪ್ರಸಿದ್ಧ ವಕೀಲರಾದ, ಪಾಕಿಸ್ತಾನದ ಮೊದಲ ಅಸೆಂಬ್ಲಿಯಲ್ಲಿ ಸದಸ್ಯರೂ ಆಗಿದ್ದ, ಧೀರೇಂದ್ರನಾಥ ದತ್ತ ಅವರು. ಅವರು 1948 ರ ಫೆಬ್ರವರಿ 23ರಂದು  ಅಸೆಂಬ್ಲಿಯಲ್ಲಿ ಈ ಬಹುಮುಖ್ಯ ವಿಷಯವನ್ನು ಎತ್ತಿದರು. ಆದರೆ ಸರ್ಕಾರದಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ. ಸಹಜವಾಗಿ ಇದನ್ನು ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಎಂದು ಭಾವಿಸಿದ ಬಂಗಾಳಿಗಳು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ದೊಡ್ಡ ಮಟ್ಟದ ಹೋರಾಟವನ್ನು ಆರಂಭಿಸಿದರು.

ಯಾವುದೇ ದೇಶವಿರಲಿ, ಆಡಳಿತವಿರಲಿ ತನ್ನ ವಿರುದ್ಧದ ಹೋರಾಟವನ್ನು ಅದು ಸಹಿಸುವುದಿಲ್ಲ. ಅದನ್ನು ಬಗ್ಗುಬಡಿಯಲು ಅದು ಮುಂದಾಗುವುದು ಸಹಜ. ಇಲ್ಲಿಯೂ ಇದೇ ಆಯಿತು. ಸರ್ಕಾರ ಜನರು ಈ ಬಗ್ಗೆ ಹೋರಾಟ ಮಾಡುವುದನ್ನು ಮತ್ತು ಸಭೆ ಸಮಾರಂಭ ಮಾಡುವುದನ್ನು ʼಕಾನೂನು ಬಾಹಿರʼ ಎಂದು ಘೋಷಿಸಿತು. ಆದರೆ ಹೋರಾಟಗಾರರು ಸುಮ್ಮನಿರುತ್ತಾರೆಯೇ? ಹೋರಾಟ ಮುಂದುವರೆಯಿತು. ಈ ಹೋರಾಟ ಯುವಸಮುದಾಯವನ್ನು ತಲುಪಿದಾಗ ತೀವ್ರಸ್ವರೂಪವನ್ನು ಪಡೆದುಕೊಂಡಿತು. 1952ರ ಫೆಬ್ರವರಿ 21 ರಂದು ಡಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರ ಬೆಂಬಲದೊಂದಿಗೆ ಈ ಬೇಡಿಕೆಗಾಗಿ ಶಾಂತವಾಗಿ ಮೆರವಣಿಗೆ ಹೊರಟಾಗ ಅಲ್ಲಿನ ಪೋಲೀಸರು ವಿದ್ಯಾರ್ಥಿಗಳ ಮೇಲೆ  ಗೋಲಿಬಾರ್‌ ನಡೆಸಿಬಿಟ್ಟರು. ಪೋಲೀಸರ ಈ ಅಮಾನವೀಯ ಕೃತ್ಯದಲ್ಲಿ ಅಬ್ದುಲ್‌ ಸಲೀಂ, ಅಬ್ದುಲ್‌ ಬರಾಕತ್‌, ರಫಿಕ್‌ ಉದ್ದಿನ್‌ ಅಹ್ಮದ್‌, ಅಬ್ದುಲ್‌ ಜಬ್ಬರ್‌, ಸಫಿಯುರ್‌ ರೆಹಮಾನ್ ಎಂಬ ವಿದ್ಯಾರ್ಥಿಗಳ ಜೊತೆಗೆ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಗಾಯಗೊಂಡರು. (ಇಲ್ಲಿನ ಹೆಸರು ಗಮನಿಸಿದರೆ ಬಂಗಾಲಿ ಭಾಷೆಯ ಅಸ್ತಿತ್ವಕ್ಕಾಗಿ ಕೇವಲ ಬಂಗಾಲಿಗಳು ಮಾತ್ರ ಜೀವ ಕಳೆದುಕೊಳ್ಳಲಿಲ್ಲ ಎಂಬುದು ಗೊತ್ತಾಗುತ್ತದೆ.) ಹೀಗೆ ಇಡೀ ಪ್ರಪಂಚದ ಇತಿಹಾಸದಲ್ಲಿಯೇ ಹೀಗೆ ತಮ್ಮ ಭಾಷೆಗಾಗಿ ಪ್ರಾಣಕಳೆದುಕೊಂಡ ಅಪರೂಪದ ಘಟನೆಯಾಗಿ ಇದು ದಾಖಲಾಗಿಬಿಟ್ಟಿತು.

ಅಂದಿನಿಂದ ಬಂಗ್ಲಾದೇಶಿಗರು ಈ ದಿನವನ್ನು ಒಂದು ದುಃಖದ ದಿನವನ್ನಾಗಿ ಆಚರಿಸುತ್ತಾರೆ. ಆ ದಿನ ಅವರು ಶಾಹಿದ್‌ ಮಿನಾರ್‌ಗೆ (ಹುತಾತ್ಮರ ಸ್ಮಾರಕ) ಹೋಗಿ ತಮ್ಮ ಗೌರವವನ್ನು ಸಲ್ಲಿಸಿ ಬರುತ್ತಾರೆ. ಈ ದಿನದಂದು ಬಂಗ್ಲಾದೇಶ ಸರ್ಕಾರಿ ರಜೆಯನ್ನೂ ಘೋಷಿಸಿದೆ. ಕೇವಲ ಬಾಂಗ್ಲಾ ಮಾತ್ರವಲ್ಲದೆ ಭಾರತದ ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಣಿಪುರ, ಅಸ್ಸಾಂ, ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಸಮೂಹದಲ್ಲಿ ವಾಸಿಸುವ ಬಂಗಾಳಿಗಳೆಲ್ಲರೂ ಬಹಳಷ್ಟು ಶ್ರದ್ಧೆಯಿಂದ ಆಚರಿಸುತ್ತಾರೆ.

ಹೀಗೆ ಬಂಗಾಳಿಗಳ ಭಾವನಾತ್ಮಕ ಬದುಕಿನ ಒಂದು ಮುಖ್ಯದಿನವಾದ ಫೆಬ್ರವರಿ 21ನ್ನು ವಿಶ್ವಮಟ್ಟದಲ್ಲಿ ಆಚರಿಸುವ ಪ್ರಸ್ತಾವನೆಗೆ ಚಾಲನೆ ದೊರೆತದ್ದು ಈ ಘಟನೆ ನಡೆದು ಸುಮಾರು ಐವತ್ತು ವರ್ಷಗಳ ನಂತರ. ಈ ಘಟನೆಯ ನೆನಪಿನಲ್ಲಿ ಜಗತ್ತಿನ ಎಲ್ಲ ಮಾತೃಭಾಷೆಗಳ ಮಹತ್ವವನ್ನು ಅರಿತು ಅವನ್ನು ರಕ್ಷಿಸುವ ಬೆಳೆಸುವ ಕೆಲಸಗಳಾಗಬೇಕು ಎಂಬ ಪ್ರಸ್ತಾವವನ್ನು ಮೊಟ್ಟಮೊದಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಪಿ ಅನ್ನಾನ್‌ ಅವರಿಗೆ ಪತ್ರಬರೆದು ಮನವಿ ಮಾಡಿಕೊಂಡದ್ದು ಬಾಂಗ್ಲಾದೇಶ ಮೂಲದವರೇ ಆಗಿದ್ದು ಕೆನಡಾದಲ್ಲಿ ವಾಸವಾಗಿದ್ದ ರಫೀಕ್‌ ಇಸ್ಲಾಮ್‌ ಮತ್ತು ಅಬ್ದುಲ್‌ ಸಲಾಮ್‌ ಎಂಬ ಇಬ್ಬರು ವ್ಯಕ್ತಿಗಳು. 1998ರ ಜನವರಿಯಲ್ಲಿ. ರಫೀಕ್‌ ಅವರ ಪ್ರಸ್ತಾವನೆಯನ್ನು ಶೇಖ್‌ ಹಸೀನಾ ನೇತೃತ್ವದ ಬಂಗ್ಲಾದೇಶ ಸರ್ಕಾರ ಕೈಗೆತ್ತಿಕೊಂಡು ವಿಶ್ವಸಂಸ್ಥೆಗೆ ಈ ಬಗ್ಗೆ ಪ್ರಸ್ತಾವನೆಯನ್ನು ಕಳಿಸಿದ್ದು ಈ ಬಗ್ಗೆ ಚರ್ಚೆ ನಡೆದು 1999ರಲ್ಲಿ ಯುನೆಸ್ಕೋ ಈ ದಿನವನ್ನು ವಿಶ್ವ ಮಾತೃಭಾಷಾ ದಿನʼ ಎಂದು ಘೋಷಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿತು. ತತ್ಪರಿಣಾಮವಾಗಿ 2000 ನೇ ವರ್ಷದಿಂದ ಈ ದಿನ ವಿಶ್ವಾದ್ಯಂತ ಆಚರಿಸಲ್ಪಡುತ್ತಿದೆ.

ಮಾತೃಭಾಷೆಯ ಮಹತ್ವ

ಮಾತೃಭಾಷೆಯ ಮಹತ್ವ ಎಷ್ಟು ದೊಡ್ಡದು ಎಂಬುದನ್ನು ಚರ್ಚಿಸುವ ಮೊದಲು ನಾವು ಸ್ಪಷ್ಟಪಡಿಸಿಕೊಳ್ಳಬೇಕಾದ ಒಂದು ಅಂಶವೆಂದರೆ ಮಾತೃಭಾಷೆ ಅಂದರೆ ಏನು ಎಂಬುದು. ಸಾಮಾನ್ಯವಾಗಿ ತಾಯಿಯಿಂದ ಬಂದ ನುಡಿ ಎಂದು ಇದನ್ನು ಕರೆಯಬಹುದಾದರೂ ಎಲ್ಲ ಸಂದರ್ಭಗಳಲ್ಲಿಯೂ ಇದು ಸರಿಯಲ್ಲ. ಒಂದು ಚಿಕ್ಕ ಉದಾಹರಣೆಯೊಂದಿಗೆ ಇದನ್ನು ಸ್ಪಷ್ಟಪಡಿಸಬಹುದು. ಕನ್ನಡ ಮಾತೃಭಾಷೆಯ ತಾಯಿಯೊಬ್ಬಳಿಗೆ ಒಂದು ಮಗು ಹುಟ್ಟುತ್ತದೆ. ಆ ಮಗುವನ್ನು ಹುಟ್ಟಿದ ತಕ್ಷಣವೇ ಅವಳಿಂದ ಬೇರ್ಪಡಿಸಿ ಇಂಗ್ಲಿಷ್‌ ಮಾತೃಭಾಷೆಯ ದಂಪತಿಗಳಿಗೆ ಕೊಟ್ಟು ಅಲ್ಲಿ ಅದು ಬೆಳೆಯುತ್ತದೆ ಎಂದು ಇಟ್ಟುಕೊಳ್ಳಿ. ಅಲ್ಲಿ ಅದು ಒಂದು ವಸ್ತುವಿಗೆ Ball ಎಂಬ ಪದವನ್ನು ಮೊದಲು ಕಲಿಯುತ್ತದೆ ಎಷ್ಟೋ ವರ್ಷಗಳ ನಂತರ ಕನ್ನಡದ ಪರಿಸರಕ್ಕೆ ಬಂದಾಗ ಅದೇ ವಸ್ತುವಿಗೆ ʼಚೆಂಡುʼ ಎಂಬ ಪದವನ್ನು ಕಲಿಯುತ್ತದೆ. ಇಲ್ಲಿ ಆ ಮಗುವಿನ ಮಾತೃಭಾಷೆಯ ಪದ ಯಾವುದು? Ball ಅಥವಾ ಚೆಂಡು. ಚೆಂಡು ಆ ಮಗುವಿನ ಹೆತ್ತತಾಯಿಯ ಭಾಷೆಯ ಪದವೇ ಇರಬಹುದು. ಆದರೆ ಅದು ಮೊದಲು ಕಲಿತದ್ದು Ball ಎಂಬ ಪದವನ್ನು ಹಾಗಾಗಿ ಇಲ್ಲಿ ಮಗುವಿನ ಮಾತೃಭಾಷೆಯ ಪದವಾಗಿ Ball ಗುರುತಿಸಲ್ಪಡುತ್ತದೆಯೇ ಹೊರತು ಚೆಂಡು ಅಲ್ಲ. ಅಂದರೆ ಮಾತೃಭಾಷೆ ಎಂದರೆ ನಾವು ಮೊದಲು ಆಲಿಸುವ, ಕಲಿಯುವ ಭಾಷೆಯೇ ಹೊರತು ತಾಯಿಯಿಂದ ಬಂದ ಭಾಷೆ ಎಂದಲ್ಲ. ಹಾಗಿದ್ದೂ ಅದಕ್ಕೆ ತಾಯ್ನುಡಿ ಎನ್ನುವುದು ಏಕೆ ಎಂದರೆ ನಾವೆಲ್ಲರೂ ಮೊದಲ ಭಾಷೆಯನ್ನು ಬಹುತೇಕ ತಾಯಿಯಿಂದಲೇ ಕಲಿಯುತ್ತೇವೆ ಅದಕ್ಕೆ.

ನಮ್ಮ ಮಾತೃಭಾಷೆ ಅಥವಾ ತಾಯ್ನುಡಿ ಎಂಬುದು ಕೇವಲ ಒಂದು ವ್ಯಾಕರಣದನ್ವಯ ರಚಿತವಾದ ಶಬ್ದಗಳ ಜೋಡಣೆಯಲ್ಲ. ಅದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಒಂದು ಜನಾಂಗದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಅತ್ಯಂತ ಪ್ರಬಲ ವಾಹಕ ಕೂಡ ಹೌದು. ತತ್ವಶಾಸ್ತ್ರಕ್ಕಿಂತ ಮೊದಲು ನಾವು ಕಟ್ಟುಕತೆಗಳನ್ನು ಕೇಳುವುದು, ಗಂಭೀರ ಸಂಶೋಧನಾ ಪ್ರಬಂಧಗಳ ಮೊದಲು ಬೀದಿಹಾಡುಗಳನ್ನು ಕೇಳುವುದು ತೀರಾ ಸ್ವಾಭಾವಿಕವಲ್ಲವೇ? ಅವೆಲ್ಲವೂ ನಮಗೆ ದೊರೆಯುವುದು ದಕ್ಕುವುದು ನಮ್ಮ ನಮ್ಮ ಮಾತೃಭಾಷೆಯಿಂದ ಮಾತ್ರ. ಹೀಗಾಗಿ ಮಾತೃಭಾಷೆ ನಮ್ಮೆಲ್ಲರ ಒಂದು ಅನನ್ಯತೆ (ಐಡಂಟಿಟಿ) ನಮ್ಮೆಲ್ಲರ ಘನತೆ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕ ಎಂಬುದನ್ನು ನಾವು ಮರೆಯಬಾರದು. ಹಾಗಾಗಿಯೇ ಒಬ್ಬ ವ್ಯಕ್ತಿಯ ಭಾಷಿಕ ಹಕ್ಕು ಇಂದು ಮಾನವಹಕ್ಕುಗಳ ವ್ಯಾಪ್ತಿಯಲ್ಲಿ ಬಂದು ಅತ್ಯಂತ ಮಹತ್ವದ್ದಾಗಿ ಪರಿಗಣಿತವಾಗಿದೆ.

ಮಾತೃಭಾಷೆಯು ನಮಗೆ ವಿವಿಧ ಹಂತಗಳ ಅನನ್ಯತೆಯನ್ನು ರೂಪಿಸುತ್ತಾ ಹೋಗುತ್ತದೆ. ಈ ಅನನ್ಯತೆಯಲ್ಲಿ ಎರಡು ವಿಧ. ಒಂದು ವೈಯಕ್ತಿಕ ಅನನ್ಯತೆ. ಇನ್ನೊಂದು ಸಾಂಸ್ಕೃತಿಕ ಅನನ್ಯತೆ.  ವೈಯಕ್ತಿಕ ಅನನ್ಯತೆಯ ಬಗ್ಗೆ ಹೇಳುವುದಾದರೆ ಮಾತೃಭಾಷೆ ಎಂಬುದು ಎಂಬುದು ನಮ್ಮಲ್ಲಿ ಅತ್ಯಂತ ಬಲಶಾಲಿಯಾದ ಭಾವನಾತ್ಮಕ ಸಂಬಂಧವನ್ನು ಕಟ್ಟುತ್ತದೆ. ಅನೇಕ ಮನೋವಿಜ್ಞಾನಿಗಳು ಹೇಳುವಂತೆ ಒಬ್ಬ ವ್ಯಕ್ತಿಯ ಭಾವಾನಾನತ್ಮಕ ಸಂಬಂಧ ರೂಪುಗೊಳ್ಳುವಲ್ಲಿ ಆತನ ಅಥವಾ ಆಕೆಯ ಮೊದಲ ಭಾಷೆ ಅಥವಾ ತಾಯ್ನುಡಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇನ್ನು ಎರಡನೆಯದು ಸಾಂಸ್ಕೃತಿಕ ಅನನ್ಯತೆ. ಜನಪದ ಗೀತೆಗಳು, ಕಥೆಗಳು, ಗಾದೆಗಳು, ನುಡಿಗಟ್ಟುಗಳು ಒಡಪುಗಳು ಜೊತೆಗೆ ಒಂದು ಜನಾಂಗದ ಆಚರಣೆ ನಂಬಿಕೆ ಸಂಪ್ರದಾಯ ಇವೆಲ್ಲವನ್ನೂ ತಲೆಮಾರಿನಿಂದ ತಲೆಮಾರಿಗೆ ಸಾಗಿಸು ಗುರುತರ ಜವಾಬುದಾರಿಯನ್ನು ಮಾಡುವುದು ಮಾತೃಭಾಷೆಯೇ. ಭಾಷೆ ಇಲ್ಲದಿದ್ದರೆ ಇವೆಲ್ಲ ಉಳಿಯುವುದು ಕಷ್ಟ. ಹೀಗಾಗಿ ಇಂದು ಕನ್ನಡ, ತೆಲುಗು, ತಮಿಳು ಬಂಗಾಳಿ ಮುಂತಾದವು ಕೇವಲ ಭಾಷೆಗಳಾಗಿ ಇರದೇ ಒಂದು ಸಂಸ್ಕೃತಿಯಾಗಿಯೇ ಪರಿಗಣಿತವಾಗಿವೆ.

ಭಾರತೀಯ ಪರಿಸರಕ್ಕೆ ಮಿತಗೊಳಿಸಿಕೊಂಡು ಹೇಳುವುದಾದರೆ 2011 ರ ಜನಗಣತಿಯು (2021ರ ಜನಗಣತಿ ಕೋವಿಡ್‌ ಕಾರಣಕ್ಕೆ ನಡೆಯಲಿಲ್ಲ) ಭಾರತದಲ್ಲಿನ ಮಾತೃಭಾಷೆಗಳ ಸಂಖ್ಯೆಯನ್ನು 19569 ಎಂದು ಗುರುತಿಸಿದೆ. ಇವುಗಳಲ್ಲಿ ಸ್ವಂತಂತ್ರ ಭಾಷೆಗಳು ಎಂದು ಪರಿಗಣಿತವಾದವುಗಳು 121 ಭಾಷೆಗಳು ಮಾತ್ರ ಆದರೆ ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿ ಭಾರತದ ಅಧಿಕೃತ ರಾಷ್ಟ್ರಭಾಷೆಗಳೆಂದು ಪರಿಗಣಿತವಾದ ಭಾಷೆಗಳ ಸಂಖ್ಯೆ ಕೇವಲ 22 ಮಾತ್ರ. ಸಂವಿಧಾನ ಜಾರಿಗೆ ಬಂದ ಹೊಸತರದಲ್ಲಿ ಈ ಅಧಿಕೃತ ಭಾಷೆಗಳು ಇದ್ದದ್ದು ಕೇವಲ 14. ನಂತರದ ದಿನಗಳಲ್ಲಿ ನೇಪಾಳಿ, ಕೊಂಕಣಿ, ಮಣಿಪುರಿ ಮುಂತಾದವು ಈ ಪಟ್ಟಿಗೆ ಸೇರಿಕೊಂಡವು. ಯಾವುದೇ ಒಂದು ರಾಜ್ಯದ ಅಧಿಕೃತ ಭಾಷೆಯು ಸಹಜವಾಗಿ ನಮ್ಮ ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಕೊಳ್ಳಬೇಕು. ಆದರೆ ಬೇರೆ ಬೇರೆ ಕಾರಣಕ್ಕಾಗಿ ದೊಡ್ಡ ಭಾಷೆಗಳಿಗಿಂತ ಮೊದಲೇ ಅವಕ್ಕಿಂತ ಚಿಕ್ಕ ಭಾಷೆಗಳೂ ಈ ಅಧಿಕೃತ ಪಟ್ಟಿ ಸೇರಿಬಿಡುವುದುಂಟು. ಭಾರತದಲ್ಲಿ ಯಾವ ರಾಜ್ಯದ ಅಧಿಕೃತ ಭಾಷೆಗಳೂ ಅಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳು ಎಂಟನೆಯ ಪರಿಚ್ಚೇದವನ್ನು ಸೇರಿದ್ದು ಅವುಗಳ ಅರ್ಹತೆಯಾಚೆಗಿನ ರಾಜಕೀಯ ಕಾರಣದಿಂದ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹತ್ತು ಸಾವಿರಕ್ಕಿಂತ ಕಡಿಮೆ ಜನ ಮಾತನಾಡುವ ಭಾಷೆಗಳನ್ನು ಜನಗಣತಿಯು ವಿಶ್ಲೇಷಣೆಗೆ ಒಳಪಡಿಸುವುದಿಲ್ಲವಾದ ಕಾರಣ ಅವುಗಳ ಮಾಹಿತಿಯೂ ಅನೇಕ ಸಲ ನಮಗೆ ದೊರೆಯುವುದಿಲ್ಲ. ಭಾರತದ ಸುಮಾರು ಶೇ. 97 ರಷ್ಟು ಜನ ನಮ್ಮ ಅಧಿಕೃತವೆಂದು ಪರಿಗಣಿತವಾದ ಈ 22 ಭಾಷೆಗಳನ್ನೇ ಮಾತೃಭಾಷೆಗಳನ್ನಾಗಿ ಹೊಂದಿದ್ದಾರೆ ಆದ್ದರಿಂದ ನಮ್ಮ ಗಮನ ಸಹಜವಾಗಿ ಅತ್ತಕಡೆ ಇದೆ. ಅಂದಮಾತ್ರಕ್ಕೆ ಉಳಿದವು ಅಲಕ್ಷಕ್ಕೆ ಗುರಿಯಾಗಬೇಕಾಗಿಲ್ಲ.

ಶಿಕ್ಷಣ ಮತ್ತು ಮಾತೃಭಾಷೆ

ಮಾತೃಭಾಷೆಯ ಮೂಲಕ ಶಿಕ್ಷಣ ನೀಡಬೇಕು ಎನ್ನುವ ಅಂಶ ಇಂದು ಅತ್ಯಂತ ವಿವಾದದ ವಿಷಯವಾಗಿ ಕುಳಿತಿದೆ. ನ್ಯಾಯಾಲಯಗಳು ಈ ಬಗ್ಗೆ ನೀಡಿರುವ ಅನೇಕ ತೀರ್ಪುಗಳು ಮಾತೃಭಾಷೆಯ ಭವಿಷ್ಯ ಏನು ಎಂಬ ಮುಖ್ಯಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಈ ಅಂಶಗಳನ್ನು ಒಂದೆಡೆ ಇರಿಸಿ ಕೇವಲ ಶೈಕ್ಷಣಿಕವಾಗಿ ಯೋಚಿಸಿ ಹೇಳುವುದಾದರೆ ಜಗತ್ತಿನ ಬಹುತೇಕ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಹೇಳುವ ಪ್ರಕಾರ ಯಾವುದೇ ಕಲಿಕಾಂಶ ಮಗುವಿನ ಮಾತೃಭಾಷೆಯಲ್ಲಿ ಹೇಳಿದಾಗ ಸುಲಭವಾಗಿ, ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಅರ್ಥವಾದಂತೆ ಉಳಿದ ಯಾವುದೇ ಭಾಷೆಗಳಲ್ಲಿ ಹೇಳಿದಾಗ ಅರ್ಥವಾಗುವುದಿಲ್ಲ. ಇದೇ ಕಾರಣಕ್ಕೆ ಕೊನೆಯ ಪಕ್ಷ ಮಗುವಿನ ಆರಂಭಿಕ ಶಿಕ್ಷಣವಾದರೂ ಮಗುವಿನ ಮಾತೃಭಾಷೆಯಲ್ಲಿ ಇರಬೇಕು ಎಂಬುದು ಬಹುತೇಕ ಎಲ್ಲ ಶಿಕ್ಷಣ ತಜ್ಞರ ಅಭಿಮತ. ಆದರೆ ಸಾರ್ವಜನಿಕ ಶಿಕ್ಷಣಕ್ಕೆ ಇರುವ ತೊಡಕು, ಸಮಸ್ಯೆ, ಮತ್ತು ಸ್ಪಷ್ಟತೆಯ ಕೊರತೆಗಳು ಇದನ್ನು ಆಗುಮಾಡುವಲ್ಲಿ ಇಂದು ಸೋತಿವೆ.  ಆರಂಭಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯುವ ಮಗು ಬೇರೆ ಭಾಷೆಗೆ ವರ್ಗವಾಗುವಾಗ ಒಂದಿಷ್ಟು ತೊಡಕುಗಳನ್ನು ಎದುರಿಸುವುದು ನಿಜವಾದರೂ ಅದು ಆ ಹೊಸ ಭಾಷಾ ಪರಿಸರಕ್ಕೆ ಹೊಂದಿಕೊಂಡ ಮೇಲೆ ಅದು ಆ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಯುತ್ತದೆ. ಇದಕ್ಕೆ ತಳಪಾಯವಾಗಿ ಕೆಲಸ ಮಾಡುವಂಥದ್ದು ಅದರ ಮಾತೃಭಾಷೆಯೇ. ವಿದ್ಯಾರ್ಥಿಗಳು ಮಾತೃಭಾಷೆಯ ಕಲಿಕೆಯನ್ನು ಮಾತ್ರ ಅನುಭವಾತ್ಮಕವಾಗಿಸಿಕೊಳ್ಳಬಲ್ಲರು. ಇತರ ಭಾಷೆಗಳ ಕಂಠಪಾಠಕ್ಕೆ ಗಂಟುಬೀಳಿಸುವ ಸಾಧ್ಯತೆಗಳೇ ಹೆಚ್ಚು.

ಇಂಗ್ಲಿಷ್ ಬಗ್ಗೆ ನಮ್ಮಲ್ಲಿ ಬಹಳಷ್ಟು ಅಜ್ಞಾನವಿದೆ. ಬಹಳಷ್ಟು ಜನ ಇಂಗ್ಲಿಷ್‌ ಭಾಷೆಗೆ ಮಕ್ಕಳನ್ನು ಎಷ್ಟುಬೇಗ ಮುಖಮಾಡಿಸುತ್ತೇವೆಯೋ ಅಷ್ಟು ಪರಿಣಾಮಕಾರಿಯಾಗಿ ಅವರು ಅದನ್ನು ಕಲಿಯುತ್ತಾರೆ ಎಂದು ತಿಳಿದಿದ್ದಾರೆ. ಆದರೆ ಇದಕ್ಕೆ ಯಾವುದೇ ಭದ್ರ ಆಧಾರಗಳಿಲ್ಲ. ಕರ್ನಾಟಕವೂ ಸೇರಿದಂತೆ ಭಾರತದ ಬಹಳಷ್ಟು ರಾಜ್ಯಗಳಲ್ಲಿ ಈಗ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಸುತ್ತಿದ್ದಾರೆ. ಸುಮಾರು ಹನ್ನೆರಡು ವರ್ಷ ಸತತವಾಗಿ ಇಂಗ್ಲಿಷ್‌ ಕಲಿಸಿದರೂ ಹನ್ನೆರಡು ವರ್ಷಗಳ ಶಿಕ್ಷಣ ಮುಗಿಸಿದ ಮೇಲೆ ಅಪರಿಚಿತ ಪರಿಸರದಲ್ಲಿ ಸುಲಲಿತವಾಗಿ ಹನ್ನೆರಡು ವಾಕ್ಯಗಳನ್ನೂ ಮಾತನಾಡಲು ಮಕ್ಕಳಿಗೆ ಆಗುತ್ತಿಲ್ಲ ಏಕೆ? ಈ ಬಗ್ಗೆ ಸಂಶೋಧನೆ ಮಾಡಿರುವ ಒಬ್ಬ ವಿದ್ವಾಂಸರು ಹೇಳುವ ಪ್ರಕಾರ ಇದು ಕೇವಲ ಭಾರತ ಒಂದರ ಸಮಸ್ಯೆಯಲ್ಲ. ಇಡೀ ತೃತೀಯ ರಾಷ್ಟ್ರಗಳ ಸಮಸ್ಯೆಯಂತೆ. ಈ ಎಲ್ಲ ದೇಶಗಳಲ್ಲಿ ಇಂಗ್ಲಿಷನ್ನು ತಪ್ಪುವಿಧಾನದಿಂದ ಕಲಿಸುವುದು ಈ ನ್ಯೂನತೆಗೆ ಕಾರಣ ಎಂಬುದು ಅವರ ಅಭಿಪ್ರಾಯ. ಯಾವುದೇ ಭಾಷೆಗೆ ʼಓರಲ್‌ ಟ್ರ್ಯಾಕ್‌ʼ ʼರಿಟನ್‌ ಟ್ರ್ಯಾಕ್‌ʼ ಎಂಬ ಎರಡು ದಾರಿಗಳು ಇರುತ್ತವೆ. ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು ಈ ಬಹುಮುಖ್ಯವಾದ ಭಾಷಾ ಕೌಶಲಗಳು ಕ್ರಮವಾಗಿಯೇ ಕಲಿಸಲ್ಪಡಬೇಕು. ಆದರೆ ನಮ್ಮಲ್ಲಿ ಬಹಳಷ್ಟು ಕಡೆ ʼಮೊದಲೆರಡು ಕೌಶಲಗಳನ್ನು ಬಿಟ್ಟು ಮೂರನೆಯದು ಮತ್ತು ನಾಲ್ಕನೆಯದು ಕಲಿಸತೊಡಗುವುದರಿಂದ ಅಂದರೆ  ʻರಿಟನ್‌ ಟ್ರ್ಯಾಕ್‌ʼ ಮೂಲಕ ಕಲಿಸುತ್ತಿರುವುದರಿಂದ ಹೀಗಾಗುತ್ತಿದೆ ಎಂಬುದು ಈ ಬಗ್ಗೆ ಅವರ ವಿವರಣೆ.

ಇವತ್ತು ನಾವೆಷ್ಟೇ ಮಾತೃಭಾಷಾ ಅಭಿಮಾನಿಗಳಾದರೂ ಇಂಗ್ಲಿಷ್‌ ಬೇಡ ಎಂದು ಹೇಳುವ ಪರಿಸ್ಥಿತಿಯಿಲ್ಲ. ಇಂಗ್ಲಿಷ್‌ ಒಂದು ಕಾಲಘಟ್ಟದಲ್ಲಿ ʻಹೇರಿಕೆಯ ಭಾಷೆʼ ಆಗಿದ್ದು ನಿಜ. ಆದರೆ ಅದು ಇಂದು ʻಬೇಡಿಕೆಯ ಭಾಷೆʼ ಆಗಿದೆ. ಯಾವುದೇ ಒಂದು ಭಾಷೆ ಹೇರಿಕೆಯ ಭಾಷೆಯಾಗಿದ್ದಾಗ ಅದನ್ನು ವಿರೋಧಿಸುವುದು ಸುಲಭ. ಏಕೆಂದರೆ ಅದಕ್ಕೆ ಜನಬೆಂಬಲ ದೊರೆಯುತ್ತದೆ. ಆದರೆ ಅದು ಬೇಡಿಕೆಯ ಭಾಷೆ ಆದಾಗ ಅದನ್ನು ವಿರೋಧಿಸುವುದು ಬಲುಕಷ್ಟ. ಏಕೆಂದರೆ ಯಾರ ಒಳಿತಿಗಾಗಿ ಅದನ್ನು ನಾವು ವಿರೋಧಿಸಹೊರಡುತ್ತೇವೆಯೋ ಆ ಜನವೇ ನಮ್ಮನ್ನು ತಮ್ಮ ವೈರಿಗಳೆಂದು ಪರಿಗಣಿಸಿಬಿಡುತ್ತಾರೆ. ಹಾಗಾಗಿ ಇಂದು ನಾವು ʻಕನ್ನಡಕ್ಕೆ ವಿರೋಧಿ ಇಂಗ್ಲಿಷ್‌ʼ ಎಂಬ ಧೋರಣೆಯಿಂದ ಹಿಂದೆ ಸರಿದು ʻಕನ್ನಡದ ಜೊತೆಗೆ ಇಂಗ್ಲಿಷ್‌ʼ ಎಂಬ ಧೋರಣೆ ತಾಳಬೇಕಾಗಿದೆ.  ಭಾಷೆಯ ವಿಷಯದಲ್ಲಿ ಬಹುಭಾಷಿಕ ಕೌಶಲವೇ ಇಂದು ʼಬುದ್ಧಿವಂತಿಕೆʼ ಎನಿಸುತ್ತದೆ

ನಾವು ಮಾಡಬೇಕಾಗಿರುವುದೇನು?

ಮಾತೃಭಾಷೆಯನ್ನು ಬಳಸುವುದರ ಜೊತೆಗೆ ಬೆಳಸುವುದೂ ನಮ್ಮೆಲ್ಲರ ಹೊಣೆ ಎಂಬುದನ್ನು ಅರ್ಥಮಾಡಿಕೊಂಡು ಕಾರ್ಯೋನ್ಮುಖರಾದಾಗ ಯಾವುದೇ ಭಾಷೆ ಗಂಡಾಂತರಕ್ಕೆ ತಾನೂ ಸಿಲುಕುವುದಿಲ್ಲ; ತನ್ನನ್ನು ಆಡುವವರನ್ನೂ ಗಂಡಾಂತರಕ್ಕೆ ಸಿಲುಕಿಸುವುದಿಲ್ಲ. ಇಂದು ಜಗತ್ತಿನ ಯಾವ ಭಾಷೆಯೂ ತನ್ನನ್ನು ಆಡುವವರ ಸಂಪೂರ್ಣ ಅಗತ್ಯಗಳನ್ನು ಪೂರೈಸುವಷ್ಟು ಸಮರ್ಥವಾಗಿಲ್ಲ. ಇದು ಇಂಗ್ಲೀಷಿಗೂ ಅನ್ವಯಿಸುತ್ತದೆ. ದಿನ ನಿತ್ಯ ಇಂಗ್ಲಿಷ್‌ ಭಾಷೆಯ ಸಂಪರ್ಕದಲ್ಲಿರುವವರಿಗೆ ಆ ಭಾಷೆಯನ್ನು ಹೇಗೆ ಬೆಳಸಲಾಗುತ್ತದೆ ಎಂಬುದು ಗೊತ್ತಿರುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದ ವಿವಿಧ ಭಾಷೆಗಳಿಂದ ವರ್ಷಕ್ಕೆ ಸುಮಾರು ಐದು ಸಾವಿರದಷ್ಟು ಪದಗಳನ್ನು ಇಂಗ್ಲಿಷಿಗೆ ಸೇರಿಸಿಕೊಳ್ಳಲಾಗುತ್ತದೆಯಂತೆ! ಇದು ಸಣ್ಣಸಂಖ್ಯೆಯಲ್ಲ. ಹೀಗಾಗಿ ಭಾರತದ ವಿವಿಧ ಭಾಷೆಗಳ ಶಬ್ದಗಳಾದ, ರೋಟಿ, ಧರಣಿ, ಲಕ್ಷದೀಪೋತ್ಸವ, ಮಹಾಮಸ್ತಕಾಭಿಷೇಕ, ಸಮ್ಮೇಳನ, ಜಾತ್ರೆ, ಇವೆಲ್ಲ ಇಂದು ಇಂಗ್ಲಿಷಿನ ಭಾಷೆಯಲ್ಲಿ ಅದೇ ಭಾಷೆಯ ಪದಗಳಂತೆ ಬಳಸಲ್ಪಡುತ್ತಿವೆ. ನಾವು ಮಾತ್ರ, ಟಿ.ವಿ ಬಂದಾಗ ʼದೂರದರ್ಶನʼ ಎಂದು, ಪೋಲಿಸ ಮುಖ್ಯಸ್ಥನಿಗೆ ʼಆರಕ್ಷಕ ಮಹಾರಕ್ಷಕʼ ಎಂದು ಜನರು ಎಂದೆಂದೂ ಬಳಸಲಾಗದ ಶಬ್ದಗಳನ್ನು ಟಂಕಿಸಿಕೊಂಡು ಕುಬ್ಜರಾಗುತ್ತಿದ್ದೇವೆ. ಬೇರೆ ಭಾಷೆಯ ಪದಗಳಿಗೆ ನಾವು ಟಂಕಿಸುವ ಪದಗಳು ಉಚ್ಛಾರಕ್ಕೆ ಆ ಭಾಷೆಯ ಪದಗಳಿಗಿಂತ ಒಂದಿಷ್ಟಾದರೂ ಕಡಿಮೆ ಕಾಲವನ್ನು ತೆಗೆದುಕೊಳ್ಳುವಂತಾದಾಗ ಮಾತ್ರ ಅವು ಜನರ ನಾಲಿಗೆಯ ಮೇಲೆ ಉಳಿಯುತ್ತವೆ. ಭಾಷೆಗಳು ಬದುಕುವುದು ಮತ್ತು ಬೆಳೆಯುವುದು ಜನರ ನಾಲಿಗೆಯ ಮೇಲೆಯೇ ಹೊರತು ಗ್ರಂಥಗಳಲ್ಲಿ ಅಲ್ಲ ಎಂಬ ತಿಳಿವಳಿಕೆ ನಮಗೆ ಬರಬೇಕಿದೆ.

ಮನುಷ್ಯ ಎಷ್ಟೇ ಬುದ್ದಿವಂತನಾದರೂ ಅವನ ಬಹುತೇಕ ಬದುಕು ನಡೆಯುವುದು ಅವನ ಭಾವನೆಗಳ ಮೇಲೆಯೇ. ಭಾವನೆಗಳು ಹುಟ್ಟುವುದು ಅರಳುವುದು ಮಾತೃಭಾಷೆಯಲ್ಲಿಯೇ. ನಾವು ಯೋಚಿಸುವುದು, ಕನಸುಕಾಣುವುದು, ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವುದು ನಮ್ಮ ತಮ್ಮ ತಾಯ್ನುಡಿಗಳಲ್ಲಿಯೇ. ಹೀಗಾಗಿ ತಾಯ್ನುಡಿಯ ಮಹತ್ವ ಎಂದಿಗೂ ಕಡಿಮೆ ಆಗಲು ಸಾಧ್ಯವಿಲ್ಲ. ರವೀಂದ್ರನಾಥ ಠ್ಯಾಗೋರರು ನನಗೆ ಮೂರು ಜನ ತಾಯಂದಿರು: ತಾಯಿ, ತಾಯಿನಾಡು ಮತ್ತು ತಾಯಿನುಡಿ ಎಂದು ಹೇಳುತ್ತಿದ್ದರು.  ನಾನೊಮ್ಮೆ ಕೇರಳ ಮೂಲಕ ಇಂಗ್ಲಿಷ್‌ ಲೇಖಕ ಡಾ. ಕೆ. ಸಚ್ಚಿದಾನಂದನ್‌ ಅವರನ್ನು ಭೇಟಿಮಾಡಿದಾಗ ಅವರೊಡನೆ ಮಾತನಾಡುವಾಗ ಅವರು, ನಾನು ಈಗಲೂ ಕವಿತೆಗಳನ್ನು ಮೊದಲು ಮಲೆಯಾಳಿಯಲ್ಲಿ ಬರೆದು ನಂತರ ಇಂಗ್ಲಿಷಿಗೆ ತರ್ಜುಮೆ ಮಾಡುವೆʼ ಎಂದು ಹೇಳಿದರು. ಟ್ಯಾಗೂರರು ತಮ್ಮ ಗೀತಾಂಜಲಿಯನ್ನು ಬರೆದದ್ದೂ ಅವರ ಮಾತೃಭಾಷೆ ಬಂಗಾಳಿಯಲ್ಲಿಯೇ. ಜಗತ್ತಿನ ಕಾಲುಭಾಗ ಜನರ ಆಲೋಚನಾ ಕ್ರಮದ ದಿಕ್ಕನ್ನೇ ಬದಲಿಸಿದ ಕಾರ್ಲ್‌ ಮಾರ್ಕ್ಸ್‌ ಬರೆದದ್ದು ತನ್ನ ಮಾತೃಭಾಷೆ ಜರ್ಮನಿಯಲ್ಲಿ. ಇವೆಲ್ಲ ಸಂಗತಿಗಳನ್ನು ನೋಡಿದಾಗ ನಮ್ಮ ಮಾತೃಭಾಷೆಗೆ ಸರಿಸಮವಾಗಿ ಯಾವುದೇ ಭಾಷೆ ಏರಲು ಸಾಧ್ಯವಿಲ್ಲವೇನೋ ಅನ್ನಿಸುತ್ತದೆ.

ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತು. ಇಂದು ಧರ್ಮಗಳಿಗೆ ಹೇಗೆ ಸ್ಪೋಟಕ ಶಕ್ತಿಗಳನ್ನು ತುಂಬಲಾಗುತ್ತಿದೆಯೋ ಹಾಗೆಯೇ ಭಾಷೆಗಳಿಗೂ ಸ್ಪೋಟಕ ಶಕ್ತಿಯನ್ನು ತುಂಬುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿವೆ. ಭಾಷೆಗೆ ಒಂದುಗೂಡಿಸುವ ಶಕ್ತಿ ಇದ್ದಂತೆ ವಿಭಜಿಸುವ ಶಕ್ತಿಕೂಡ ಇರುತ್ತದೆ. ಭಾಷೆ ಕೂಡ ದೇವರು ಧರ್ಮದಂತೆ ಭಾವನಾತ್ಮಕ ಅಂಶ. ಇದನ್ನು ಅರ್ಥಮಾಡಿಕೊಂಡು ತಮ್ಮ ರಾಜಕೀಯ ಅಥವಾ ಆರ್ಥಿಕ ಲಾಭಕ್ಕಾಗಿ ಭಾಷೆಭಾಷೆಗಳ ನಡುವೆ ಬೆಂಕಿಹಚ್ಚಿ ಚಳಿಕಾಯಿಸಿಕೊಳ್ಳುವವರು ನಮ್ಮ ನಡುವೆ ಇದ್ದೇ ಇರುತ್ತಾರೆ. ಈ ಬಗ್ಗೆ ನಮ್ಮ ಜನ ವಿಶೇಷವಾಗಿ ಯುವಜನಾಂಗ ತುಂಬಾ ಎಚ್ಚರದಿಂದ ಇರಬೇಕು. ಭಾರತದಲ್ಲಿ ಈಗ ಒಂದು ದೇಶ ಒಂದು ಚುನಾವಣೆ, ಚರ್ಚೆಯಲ್ಲಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಒಂದು ದೇಶ ಒಂದು ಧರ್ಮ, ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಜನಾಂಗ ಹೀಗೆ ಮುಂದುವರೆಯುತ್ತದೆ. ಭಾರತದ ಸಂವಿಧಾನವು ಭಾಷೆಯ ವೈವಿಧ್ಯತೆಯನ್ನು ಪ್ರೋತ್ಸಾಹಿಸುತ್ತದೆಯೇ ಹೊರತು ಭಾಷೆಯ ಏಕತೆಯನ್ನಲ್ಲ. ಇದನ್ನೇ ಇಕ್ಬಾಲ್‌ ಅವರು ತಮ್ಮ ಸಾರೆ ಜಹಾಂಸೆ ಅಚ್ಚಾ ಎಂಬ ಸುಪ್ರಸಿದ್ಧ ದೇಶಭಕ್ತಿಗೀತೆಯಲ್ಲಿ, ಹಮ್‌ ಬುಲ್‌ ಬುಲೇ ಹೈ ಇಸಕಿ ಹೇ ಗುಲ್ಸಿತಾ ಹಮಾರʼ ಎಂದು ಹಾಡಿರುವುದು. ಭಾರತ ಎಂಬ ಈ ಉದ್ಯಾನವನದಲ್ಲಿ ವಿವಿಧ ಭಾಷೆಗಳ ಜನರು ತಮ್ಮ ತಮ್ಮ ಭಾಷೆಗಳನ್ನು ಆಡುತ್ತಾ ಹಕ್ಕಿಗಳಂತೆ ಇದ್ದರೇನೇ ಈ ಉದ್ಯಾನಕ್ಕೆ ಕಳೆಬರುವುದು. ಈ ತಿಳಿವಳಿಕೆ ನಮಗೆ ಬಂದರೆ ನಮ್ಮ ನಮ್ಮ ನಡುವಿನ ಭಾಷಿಕ ಜಗಳಗಳು ತುಂಬಾ ಕ್ಷುಲ್ಲಕ ಎಂದು ನಮಗೇ ಅನ್ನಿಸಿ ನಾವೆಲ್ಲ ಕವಿಹಾಡುವಂತೆ, “ನಾವೆಲ್ಲ ಒಂದು ಎಂಬ ಭಾವ ಮೂಡಲಿ; ನಮ್ಮಲ್ಲಿ ಭೇದಭಾವ ಪ್ರಭುವು ದೂರಮಾಡಲಿ” ಎಂದು ಪ್ರಾರ್ಥಿಸತೊಡಗುತ್ತೇವೆ.

ಹೌದು. ʼವಿಶ್ವ ಮಾತೃಭಾಷಾ ದಿನʼ ಎಂಬುದು ಒಂದು ಕಹಿಘಟನೆಯನ್ನು ನೆನಪಿಸುವ ದಿನ. ಆದರೆ ಅದಕ್ಕಾಗಿ ನಾವು ಶೋಕಿಸುತ್ತಾ ಕೂರಬೇಕಿಲ್ಲ. ಶೋಕವನ್ನು ಶ್ಲೋಕವಾಗಿಸಿಕೊಳ್ಳುವ ಕಲೆ ನಮಗೆ ಬರಬೇಕು. ಭಾಷೆಗಾಗಿ ಮಾಡಿದ ತ್ಯಾಗ ಬಲಿದಾನಗಳು ವ್ಯರ್ಥವಾಗಬಾರದು ಅನ್ನುವುದಾದರೆ ಅವರ ಸಾವನ್ನು ಸಾರ್ಥಕಗೊಳಿಸುವ ಕೆಲಸಗಳು ನಮ್ಮಿಂದ ಆಗಬೇಕು. ಅವರ ಸಾವು ಹೇಗೆ ವ್ಯರ್ಥವಲ್ಲ ಎಂಬುದನ್ನು ಕುವೆಂಪು ಅವರ ಇನ್ನೊಂದು ಕವಿತೆಯ ಸಾಲುಗಳು ಹೀಗೆ ದಾಖಲಿಸುತ್ತವೆ:

“ನಾವಳಿಯುವೆವು; ನಮ್ಮ ಎಲುಬುಗಳ ಮೇಲೆ

ಮೂಡುವುದು ನಮ ಭಾರತದ ಲೀಲೆ”

*****

ಡಾ. ರಾಜೇಂದ್ರ ಬುರಡಿಕಟ್ಟಿ

21-02-2026 (ವಿಶ್ವ ಮಾತೃಭಾಷಾ ದಿನ)

Friday, February 13, 2026

ʻಅಂಕವ್ಯಸನʼದ ಅವಾಂತರಗಳು…. ಭಾಗ-೧

 

ʻಅಂಕವ್ಯಸನʼದ ಅವಾಂತರಗಳು…. (ಭಾಗ-೧)

(Note: Purpose of this article is do something to educate the erring ones and to prevent the system from derailing and not to hinder or humiliate anything or anyone.)

ಪರೀಕ್ಷೆಗಳು ಹತ್ತಿರ ಹತ್ತಿರ ಬಂದಹಾಗೆ ಬೇಸಗೆಯ ಬಿಸಿಲು ಹೊರಗಡೆಯಿಂದ ಹೊಡೆಯತೊಡಗಿದಂತೆ ಒಳಗಿಂದ ಪರೀಕ್ಷೆಯ ಭಯದ ಜ್ವರವೂ ಏರುತ್ತಾ ಹೋಗುತ್ತದೆ. ಅಂಕಗಳ ಹಿಂದೆ ಬಿದ್ದಿರುವ ನಮ್ಮ ಇಡೀ ವ್ಯವಸ್ಥೆ ಇಂದು ದಿನದಿನಕ್ಕೆ ಕಲಿಯುವವರು ಮತ್ತು ಕಲಿಸುವವರ ಮೇಲೆ ಅನಗತ್ಯವಾದ ಮತ್ತು ಅತಿಯಾದ ಒತ್ತಡಗಳನ್ನು ಸೃಷ್ಟಿಸುತ್ತಾ ಅವರ ಭವಿಷ್ಯವನ್ನು ಮಂಕಾಗಿಸುತ್ತಿರುವುದು ಆತಂಕದ ವಿಷಯ. ಒಂದುಕಡೆ ಮಕ್ಕಳ ಹಕ್ಕುಗಳ ಬಗ್ಗೆ ಪ್ರಚಾರ ಮಾಡುತ್ತಾ ಅವರ ಹಕ್ಕುಗಳನ್ನು ಗೌರವಿಸುವುದು ಇಡೀ ವ್ಯವಸ್ಥೆಯ ಭಾಗ ಎಂದು ಹೇಳುತ್ತಲೇ ಇನ್ನೊಂದು ಕಡೆಯಿಂದ ಅವರ ಅನೇಕ ಹಕ್ಕುಗಳನ್ನು ಅವರ ʻಭವಿಷ್ಯರೂಪಿಸುವʼ ನೆಪದಲ್ಲಿ ಧಮನಮಾಡುತ್ತಿರುವುದನ್ನು ಒಂದು ಆತಂಕಕಾರಿ ಬೆಳವಣಿಗೆಯಾಗಿದೆ.

ಶಿಕ್ಷಣದ ಮೂಲ ಉದ್ದೇಶವೇ ಮಕ್ಕಳ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆ ಎಂಬುದನ್ನು ಎಲ್ಲ ಶಿಕ್ಷಕರಿಗೂ ಅವರು ಪಡೆಯುವ ಶಿಕ್ಷಕ ತರಬೇತಿಯಲ್ಲಿ ಮನನ ಮಾಡಿಸಲಾಗುತ್ತದೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆಯುವುದೇ ಶಿಕ್ಷಣದ ಉದ್ದೇಶ ಅಥವಾ ಗುರಿ ಎಂದು ಯಾವ ಶಿಕ್ಷಣ ತಜ್ಞರೂ ಯಾವ ಪುಸ್ತಕದಲ್ಲಿಯೂ ಬರೆದದ್ದನ್ನಾಗಲೀ ಯಾವ ಮೇಷ್ಟ್ರೂ ಯಾವ ತರಗತಿಯಲ್ಲೂ ಶಿಕ್ಷಕ ತರಬೇತಿ ಪಡೆಯುವಾಗ ಹೇಳಿದ್ದಾಗಲೀ ನಾನಂತೂ ಕೇಳಿಲ್ಲ. ಹಾಗಿದ್ದ ಮೇಲೆ ಅಂಕಗಳನ್ನು ಅತಿಹೆಚ್ಚು ಪಡೆಯುವುದೇ ಶಿಕ್ಷಣದ ಉದ್ದೇಶ ಎಂಬ ಹಂತಕ್ಕೆ ವ್ಯವಸ್ಥೆಯನ್ನು ತಲುಪಿಸಿದವರು ಯಾರು? ಒಬ್ಬರು ಇನ್ನೊಬ್ಬರ ಕಡೆ ಬೆರಳು ತೋರಿಸುವುದು ಸುಲಭ. ಆದರೆ ನಮ್ಮೆಲ್ಲರ ಪಾಲೂ ಅಷ್ಟಿಷ್ಟು ಇರುವುದನ್ನು ತಳ್ಳಿಹಾಕಲಾದೀತೆ? 

ಈ ಅತಿಹೆಚ್ಚು ಅಂಕಪಡೆಯುವ ʼವ್ಯಸನʼ ಒಂದು ಜಾಡ್ಯದಂತೆ ಹರಡಿಕೊಂಡು ಏನೆಲ್ಲ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಕಡೆ ನಮ್ಮ ಗಮನ ಸರಿಯಾಗಿ ಹರಿದಂತಿಲ್ಲ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಬಹುದು ʻನನ್ನ ವಿಷಯ, ನಮ್ಮ ಶಾಲೆ, ನಮ್ಮ ತಾಲ್ಲೂಕು, ನಮ್ಮ ಜಿಲ್ಲೆ ಎಲ್ಲರಿಗಿಂತ ಮೇಲಿರಬೇಕುʼ ಎಂಬ ʻದುರಾಸೆʼ ನಮ್ಮ ಶಿಕ್ಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ತಲೆಯಲ್ಲಿ ತುಂಬಿಕೊಂಡಿರುವುದು. ಯಾವುದೇ ಒಬ್ಬ ಶಿಕ್ಷಕ ತಾನು ಬೋಧಿಸುವ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಬರಬೇಕು ಎಂದು ಆಸೆ ಪಡುವುದು,  ಒಬ್ಬ ಅಧಿಕಾರಿ ತನ್ನ ಶಾಲೆಗೋ ತನ್ನ ತಾಲ್ಲೂಕಿಗೋ ಜಿಲ್ಲೆಗೋ ಒಳ್ಳೆಯ ಫಲಿತಾಂಶ ಬರಬೇಕು ಎಂದು ಆಸೆಪಡುವುದು ಖಂಡಿತಾ ತಪ್ಪಲ್ಲ. ಆದರೆ ಈ ಆಸೆಯು ʼವ್ಯಸನʼದ ಹಂತ ತಲುಪಿದರೆ ಅದು ಉಂಟುಮಾಡುವ ಪರಿಣಾಮ ಒಳ್ಳೆಯದಕ್ಕಿಂತ ಕೆಟ್ಟದ್ದೇ ಇರುತ್ತದೆ. ವಿಷಯ ಯಾವುದಾದರೂ ಇರಲಿ, ಆಸೆ ಕೆಟ್ಟದ್ದಲ್ಲ. ಏಕೆಂದರೆ ಆಸೆಯು ಮಾಡಬೇಕಾದ ಕೆಲಸವನ್ನು ಇನ್ನಷ್ಟು ಉತ್ಸಾಹದಿಂದ ಮಾಡಲು ನಮಗೆ ಪ್ರೇರಣೆ ನೀಡುತ್ತದೆ. 

ಆದರೆ ಈ ಆಸೆ ಬೆಳೆಯುತ್ತಾ ʼಅತಿಯಾಸೆʼಯಾದಾಗ ಅದು ಮಾಡಬೇಕಾದ ಕೆಲಸಗಳ ಜೊತೆಗೆ ಒಂದಿಷ್ಟು ಮಾಡಬಾರದ ಕೆಲಸಗಳನ್ನೂ ಮಾಡಲು ನಮ್ಮ ಮನಸ್ಸನ್ನು ತಯಾರುಮಾಡುತ್ತದೆ. ಈ ಅತಿಯಾಸೆ ಇನ್ನಷ್ಟು ಬೆಳೆದು ʼದುರಾಸೆʼಯಾದಾಗ ಅದು ಮಾಡಬೇಕಾದ ಕೆಲಸಗಳನ್ನು ನಿರ್ಲಕ್ಷಿಸಿ ಮಾಡಬಾರದ ಕೆಲಸಗಳನ್ನು ಮಾಡಲಿಕ್ಕಾಗಿ ಅಡ್ಡದಾರಿ ಹಿಡಿಯಲು ಧೈರ್ಯಕೊಟ್ಟು ನಮ್ಮಿಂದ ಕೆಟ್ಟ ಕೆಲಸಗಳನ್ನು ಅಳುಕಿಲ್ಲದಂತೆ ಮಾಡಿಸತೊಡಗುತ್ತದೆ. ಇವೆಲ್ಲವೂ ಅಂತಿಮವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆ ಎಳೆಯುವ ಕೆಲಸಗಳೇ ಆಗುತ್ತವೆ! ಮಕ್ಕಳಿಗೆ ಕಲಿಸುವ ವಿಷಯದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಇದೇ ಬಗೆಯ ಕೆಲಸಕ್ಕೆ ನಾವು ಮುಂದಾಗುತ್ತಿದ್ದೇವೆಯೇ ಎಂಬುದನ್ನು ಸಂಬಂಧಪಟ್ಟವರೆಲ್ಲರೂ ಆತ್ಮಾವಲೋಕನ (ಆತ್ಮ ಇದ್ದವರು) ಮಾಡಿಕೊಳ್ಳುವ ಅತಿ ತುರ್ತು ಇಂದು ಬಂದಿದೆ.

ಸಖಿಯ ಅಲಂಕಾರ

ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಶೇಕಡಾ ನೂರು ಫಲಿತಾಂಶವನ್ನು ಪಡೆದ ಶಾಲೆಗಳನ್ನು ಗೌರವಿಸುವ ಕೆಲಸ ಆರಂಭವಾಗಿ ಅದು ಇಂದಿಗೂ ಮುಂದುವರೆಯುತ್ತಿದೆ. ಇದು ಒಂದು ಉತ್ತಮ ಕಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಪ್ರತಿಭೆಗಳನ್ನು ಗೌರವಿಸುವುದು ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲೇಬೇಕಾದ ಒಂದು ಕೆಲಸ. ಆದರೆ ಈ ಫಲಿತಾಂಶ ಪಡೆದವರು ʻಅದನ್ನು ಹೇಗೆ ಪಡೆದರುʼ ಎಂಬುದನ್ನು ಗೌರವ ಕೊಡುವಾಗ ಪರಿಶೀಲಿಸಿ ನೋಡಿ ಕೊಡುವ ಕ್ರಮವೇನೂ ಇಲ್ಲ! ಹೀಗಾಗಿ ಇದು ಬರುಬರುತ್ತಾ ಈ ಗೌರವವನ್ನು ಪಡೆಯಲು ನಮ್ಮ ಶಿಕ್ಷಕರು ಅಡ್ಡದಾರಿಯನ್ನು ಹಿಡಿಯಲೂ ಪ್ರೇರೇಪಿಸಿದ್ದೂ ಇದೆ. ಎಲ್ಲರೂ ಅಲ್ಲದಿದ್ದರೂ ಕೆಲವು ಶಾಲೆಗಳ ಶಿಕ್ಷಕರಾದರೂ ಏನಾದರೂ ಮಾಡಿ (ʻಏನಾದರೂ ಮಾಡಿʼ ಎಂಬುದಕ್ಕೆ ಏನೆಲ್ಲ ಅರ್ಥಗಳು ಬರುತ್ತವೆ ಎಂದು ಬಿಡಿಸಿ ಹೇಳಬೇಕಾಗಿಲ್ಲ) ʻಶೇಕಡಾ ನೂರುʼ ಫಲಿತಾಂಶ ಪಡೆಯಲು ಪಟ್ಟು ಹಿಡಿದಿರುವುದು ಸುಳ್ಳಲ್ಲ; ಅದಕ್ಕಾಗಿ ಅವರು ನೈತಿಕತೆ, ನಾಚಿಕೆ ಮಾನ ಮರ್ಯಾದೆಗಳನ್ನು ತ್ಯಾಗಮಾಡಲು ತಯಾರಿರುವುದೂ ಗುಟ್ಟಲ್ಲ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಈ ಶೇಕಡಾ ನೂರು ಫಲಿತಾಂಶ ಪಡೆಯುವುದು ಕೂಡ ಒಂದು ರೀತಿಯಲ್ಲಿ ʻಮಾದಕ ವ್ಯಸನʼ (Drug Addiction) ಇದ್ದಹಾಗೆ. ಒಂದು ಸಲ ಅದಕ್ಕೆ ಅಡಿಕ್ಟ್‌ ಆದರೆ ಅದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಅದಕ್ಕೆ ದಾಸರಾಗುವುದು ಯಾರಿಗೂ ಒಳ್ಳೆಯದಲ್ಲ.

ಒಂದು ಸಲ ಇದಕ್ಕೆ ದಾಸರಾದರೆ ಅದು ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ನಿಮಗೆ ತಮಾಸೆಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ಒಂದು ಶಾಲೆಯಲ್ಲಿ ಒಂದು ವರ್ಷ ಸುಮಾರು ನೂರಿಪ್ಪತ್ತು ಮಕ್ಕಳು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆಯುವವರಿದ್ದರು. ಅವರಲ್ಲಿ ಸಹಜವಾಗಿಯೇ ಎಲ್ಲ ಹಂತದ ಮಕ್ಕಳೂ ಇದ್ದರು. ಆದರ ಹಿಂದಿನ ವರ್ಷ ಆ ಶಾಲೆಗೆ ಶೇಕಡಾ ನೂರು ಫಲಿತಾಂಶ ಬಂದಿತ್ತು. ಈ ವರ್ಷವೂ ಅದನ್ನು ಪಡೆಯಲೇ ಬೇಕು ಎಂದು ಅಲ್ಲಿನ ಮುಖ್ಯೋಪಾಧ್ಯಾಯರೂ ಶಿಕ್ಷಕರೂ ಅದನ್ನು ಮತ್ತೆ ಪಡೆಯಲು ಮಾಡಬೇಕಾದ ಕೆಲಸ ಏನನ್ನು ಮಾಡಬೇಕು ಮತ್ತು ಮಾಡಬಾರದ ಕೆಲಸ ಏನು ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರು.  ಏಕೆಂದರೆ ಈ ವರ್ಷ ಶೇಕಡಾ ನೂರರ ಫಲಿತಾಂಶವನ್ನು ಪಡೆಯಲು ನಾಲ್ಕು ಮಕ್ಕಳು ಅಡ್ಡಿಯಾಗಿದ್ದರು. ಅವರು ದೈಹಿಕ ನ್ಯೂನತೆಯುಳ್ಳ ಮಕ್ಕಳಾಗಿದ್ದರಿಂದ ಅವರ ಉತ್ತೀರ್ಣತೆ ಅಷ್ಟು ಸುಲಭವಿರಲಿಲ್ಲ. ಹೀಗೆ ದೈಹಿಕ ನ್ಯೂನತೆಯುಳ್ಳ ಮಕ್ಕಳು ಬೌದ್ಧಿಕವಾಗಿ ಪರೀಕ್ಷೆ ಎದುರಿಸಲು ಸಮರ್ಥರಿದ್ದೂ ತಮ್ಮ ದೈಹಿಕ ನ್ಯೂನತೆಯ ಕಾರಣದಿಂದ ಅನ್ಯಾಯಕ್ಕೊಳಗಾಗಬಾರದೆಂದು ಅವರಿಗೆ ಪರೀಕ್ಷೆ ಬರೆಯಲು ಸಹಾಯಕರನ್ನು ಕೊಡುವ ಕ್ರಮವೊಂದು ಇದೆ. ಈ ಮಕ್ಕಳಿಗೂ ಅದನ್ನು ವ್ಯವಸ್ಥೆ ಮಾಡಿದರು.

ಹೀಗೆ ಸಹಾಯಕರನ್ನು ಕೊಡುವಾಗ ಕೆಲವು ನಿಯಮಗಳಿರುತ್ತವೆ. ಎಸ್‌ ಎಸ್‌ ಎಲ್‌ ಸಿ ಗಿಂತ ಹಿಂದಿನ ತರಗತಿಯ ಮಕ್ಕಳಾಗಿರಬೇಕು… ಇತ್ಯಾದಿ. ಇಲ್ಲಿನ ತಾತ್ವಿಕತೆ ಏನೆಂದರೆ ಸಹಾಯಕರಾಗಿರುವ ವಿದ್ಯಾರ್ಥಿ ತನ್ನ ಬುದ್ಧಿ ಅಥವಾ ಜ್ಞಾನವನ್ನು ಬಳಸಬಾರದು. ಅದು ಅಭ್ಯರ್ಥಿಯದ್ದೇ ಆಗಿರಬೇಕು. ಉದಾಹರಣೆಗೆ ಅಭ್ಯರ್ಥಿಗೆ ಕೈ ಬರೆಯಲು ಬರುತ್ತಿಲ್ಲ ಎಂದರೆ ಅವರಿಗೆ ತಕ್ಷಣ ಬೇರೆ ಕೈ ಹಾಕಲು ಆಗುವುದಿಲ್ಲ. ಕಣ್ಣು ಸರಿಯಾಗಿ ಕಾಣದಿದ್ದರೆ ಕಣ್ಣು ಹಾಕಲು ಆಗುವುದಿಲ್ಲ. ಈ ಸಹಾಯಕರು ಅವರಿಗೆ ಕಣ್ಣಾಗಿ ಅಥವಾ ಕೈ ಆಗಿ ಒಂದು ರೀತಿ ʼಉಪಕರಣದಂತೆʼ ಬಳಕೆಯಾಗಬೇಕಾಗುತ್ತದೆ. ಆದರೆ ಈ ಸೌಲಭ್ಯವನ್ನು ಬಳಸಿಕೊಂಡ (ಹಾಗನ್ನುವುದಕ್ಕಿಂತ ದುರುಪಯೋಗ ಮಾಡಿಕೊಂಡ) ಆ ಶಾಲೆಯ ಶಿಕ್ಷಕರು ಮೂಲ ಅಭ್ಯರ್ಥಿಗಳನ್ನು ಬಿಟ್ಟು ಈ ಸಹಾಯಕರಿಗೇ ಪಾಠಮಾಡುವುದು ಅವರನ್ನೇ ಪರೀಕ್ಷೆಗೆ ತಯಾರು ಮಾಡುವುದು ಇತ್ಯಾದಿ ಮಾಡತೊಡಗಿದರು. ಇದು ಒಂದು ರೀತಿಯಲ್ಲಿ ಮದುಮಗಳನ್ನು ಬಿಟ್ಟು ಅವಳ ಜೊತೆಗಿರುವ ಅವಳ ಸಖಿಗೆ ಅಲಂಕಾರ ಮಾಡಿದಂತೆ! ನಮ್ಮ ಅಲಂಕಾರ ಏನಿದ್ದರೂ ಮದುಮಗಳಿಗೆ ಹೆಚ್ಚಿರಬೇಕೇ ಹೊರತು ಅವಳ ಸಖಿಗಲ್ಲ. ಮದುಮಗಳಿಗಿಂತ ಸಖಿಗೆ ಹೆಚ್ಚು ಅಲಂಕಾರ ಮಾಡುವುದು ವಾಸ್ತವದಲ್ಲಿ ಮದುಮಗಳಿಗೆ ʻವರʼ ಆಗುವ ಬದಲು ʼಶಾಪʼ ಆಗುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ ಮದುವೆ ಮಂಟಪದಲ್ಲಿ ವಧುವಿಗಿಂತ ಈ ಸಖಿಯೇ ಹೆಚ್ಚು ಚೆಂದ ಕಾಣುವುದರಿಂದ ಮದುಮಗ ಮೂಲವಧುವನ್ನು ಬಿಟ್ಟು ಈ ಸಖಿಗೇ ಮನಸೋತು ಅವಳಿಗೇ ತಾಳಿಕಟ್ಟಲು ಹಟಮಾಡಬಹುದು; ಕಟ್ಟಿಯೂ ಬಿಡಬಹುದು!

ಮೃಷ್ಟಾನ್ನ ಮತ್ತು ಗೋಮೂತ್ರ

ಈ ನೂರರ ಫಲಿತಾಂಶದ ಹುಚ್ಚಿಗೆ ಬಲಿಯಾದವರು ನಾನು ಮೊದಲೇ ಹೇಳಿದ ಹಾಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಾಡಬಾರದ ಅನೇಕ ಕೆಲಸಗಳಿಗೆ ಕೈಹಾಕುತ್ತಾರೆ. ಅವುಗಳಲ್ಲಿ ಆಂತರಿಕ ಅಂಕಗಳ ನೀಡಿಕೆಯೂ ಒಂದು. ಈ ಮೊದಲು ಈ ಆಂತರಿಕ ಅಂಕಗಳ ಬಗ್ಗೆಯೇ ಬರೆದ ನನ್ನ ಲೇಖನವೊಂದನ್ನು ಓದಿದ ಅನೇಕ ಶಿಕ್ಷಕರು ಈ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಭಾವಿತರಾಗಿ ʻತಮ್ಮತನʼವನ್ನು ಉಳಿಸಿಕೊಳ್ಳುವ ಧೈರ್ಯಮಾಡಿದ್ದಾರೆ. ಆ ವಿಷಯವನ್ನು ಆ ಲೇಖನದಲ್ಲಿ ವಿವರವಾಗಿ ಚರ್ಚಿಸಿರುವುದರಿಂದ ಇಲ್ಲಿ ಅದನ್ನು ಪುನರಾವರ್ತನೆ ಮಾಡದೆ  ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಚರ್ಚೆಗೆ ಎತ್ತಿಕೊಳ್ಳುತ್ತೇನೆ.

ಪ್ರಸ್ತುತ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮಂಡಳಿಯು ನಡೆಸುವ ಬಾಹ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಜೊತೆಗೆ ತಮ್ಮ ವಿಷಯ ಶಿಕ್ಷಕರಿಂದ ಪ್ರಥಮ ಭಾಷೆಗೆ ಇಪ್ಪತ್ತೈದು ಮತ್ತು ಇತರೆ ಭಾಷೆ ಮತ್ತು ವಿಷಯಗಳಿಗೆ ಇಪ್ಪತ್ತು ಗರಿಷ್ಠ ಅಂಕಗಳನ್ನು ಪಡೆಯುವ ಅವಕಾಶವಿದೆ. ಈ ಆಂತರಿಕ ಅಂಕಗಳನ್ನು ಇಡುವ ಉದ್ದೇಶವೇನೆಂದರೆ ಕೆಲವು ಸಂಗತಿಗಳನ್ನು ಬಾಹ್ಯ ಪರೀಕ್ಷೆಯ ಮೂಲಕ ಪರೀಕ್ಷಿಸಲು ಸಾಧ್ಯವೇ ಇಲ್ಲ. ಅಂತಹ ವಿಷಯಗಳಲ್ಲಿ ಮಕ್ಕಳ ಕೌಶಲ, ಜ್ಞಾನಗಳನ್ನು ಶಿಕ್ಷಕರು ತಮ್ಮ ಹಂತದಲ್ಲಿ ಒರೆಗೆ ಹಚ್ಚಿ ಪರೀಕ್ಷಿಸಿ ಈ ಅಂಕಗಳನ್ನು ನ್ಯಾಯಯುತವಾಗಿ ಮಕ್ಕಳಿಗೆ ನೀಡಬೇಕು ಎಂಬುದು. ಉದಾಹರಣೆಗೆ ಒಂದು ಮಗು ಒಂದು ಪದ್ಯವನ್ನು ಬಹಳಷ್ಟು ಚೆನ್ನಾಗಿ ಒಂದಿಷ್ಟೂ ತಪ್ಪಿಲ್ಲದಂತೆ ಸೊಗಸಾಗಿ ಓದುತ್ತದೆ ಅಥವಾ ಹಾಡುತ್ತದೆ ಎಂದಿಟ್ಟುಕೊಳ್ಳಿ. ಆದರೆ ಈ ಮಗುವಿಗೆ ಬರೆಯುವ ಕೌಶಲವಿಲ್ಲ. ಹಾಗಾಗಿ ತನಗೆ ಸರಿಯಾಗಿ ಬರುವ ಪದ್ಯವನ್ನೂ ಲಿಖಿತ ಪರೀಕ್ಷೆಯಲ್ಲಿ ಸರಿಯಾಗಿ ಬರೆಯಲು ಬಾರದ ಕಾರಣಕ್ಕೆ ಪೂರ್ಣ ಅಂಕಗಳನ್ನು ಪಡೆಯಲು ಆಗುವುದಿಲ್ಲ. ಇದರಿಂದ ಆ ಮಗುವಿಗೆ ಆಗುವ ಅನ್ಯಾಯವನ್ನು ಶಿಕ್ಷಕರು ಇಲ್ಲಿ ಪದ್ಯ ಹೇಳಿಸಿ ಅಂಕಕೊಟ್ಟು ಸರಿಪಡಿಸಲು ಸಾಧ್ಯವಿದೆ. ಹೀಗೆಯೇ ಇತರ ವಿಷಯಗಳಲ್ಲೂ ಕೆಲವು ಸಂಗತಿಗಳು ಇದ್ದೇ ಇರುತ್ತವೆ. ಇವುಗಳನ್ನು ಶಿಕ್ಷಕರು ನ್ಯಾಯಯುತವಾಗಿ ಪರೀಕ್ಷಿಸಿ ಮೌಲ್ಯಮಾಪನಮಾಡಿ ಮಗುವಿಗೆ ಅಂಕಗಳನ್ನು ನೀಡಬೇಕಾಗುತ್ತದೆ.

ಮೊದಲು ಈ ಆಂತರಿಕ ಅಂಕಗಳನ್ನು ಎಷ್ಟು ಪಡೆದುಕೊಂಡರೂ ಬಾಹ್ಯ ಪರೀಕ್ಷೆಯಲ್ಲಿ ಪಡೆಯಬೇಕಾದ ಕನಿಷ್ಠ ಅಂಕಗಳನ್ನು ನಿಗಧಿಪಡಿಸಲಾಗಿತ್ತು. ಆದರೆ ಈ ವರ್ಷ ಇದನ್ನು ತುಸು ಮಾರ್ಪಡಿಸಿ ಆಂತರಿಕ ಮತ್ತು ಬಾಹ್ಯಗಳ ಭೇದ ತಗೆದು ಒಟ್ಟಾರೆ ಮಗು ಇಷ್ಟು ಅಂಕಗಳಿಸಿದರೆ ಸಾಕು ಎಂದು ಮಾಡಲಾಯಿತು. ಜೊತೆಗೆ ಕನಿಷ್ಠ ತೇರ್ಗಡೆಗೆ ಇದ್ದ ಅಂಕಗಳನ್ನೂ ತುಸು ಇಳಿಸಲಾಯಿತು. ಈ ಎಲ್ಲ ಕ್ರಮಗಳೂ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರ ಮೇಲಿನ ಗೌರವ ಹೆಚ್ಚಿಸುವ ಕೆಲಸಗಳೇ ಎಂದು ನನಗಾದರೂ ಅನ್ನಿಸುತ್ತದೆ. ಏಕೆಂದರೆ ಶಿಕ್ಷಕರು ಮಂಡಳಿ ನಡೆಸುವ ಬಾಹ್ಯ ಮೌಲ್ಯಮಾಪನವನ್ನು ಹೇಗೆ ಜವಾಬ್ದಾರಿಯಿಂದ ಮಾಡಬೇಕೋ ಹಾಗೆಯೇ ಮತ್ತು ಅಷ್ಟೇ ಜವಾಬ್ದಾರಿಯಿಂದ ನಿಷ್ಪಕ್ಷಪಾತವಾಗಿ ಆಂತರಿಕ ಮೌಲ್ಯಮಾಪನವನ್ನೂ ಮಾಡುತ್ತಾರೆ ಎಂದು ವ್ಯವಸ್ಥೆ ನಂಬಿದಂತೆ ಆಯಿತು. 

ಆದರೆ ವ್ಯವಸ್ಥೆ ತಮ್ಮ ಮೇಲಿಟ್ಟಿದ್ದ ಈ ನಂಬಿಕೆಯನ್ನು ಎಷ್ಟು ಜನ ಶಿಕ್ಷಕರು ಉಳಿಸಿಕೊಂಡರು? ಮತ್ತು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುತ್ತಾರೆ? ಎಷ್ಟು ಜನ ಈ ಗುರುತರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆಯಬೇಕಾದರೆ ಕನಿಷ್ಟ ಈ ವರ್ಷದ ಫಲಿತಾಂಶ ಪ್ರಕಟವಾಗುವವರೆಗೂ ಕಾಯಬೇಕೇನೋ. ಫಲಿತಾಂಶ ಪ್ರಕಟವಾದಾಗ ಮಕ್ಕಳ ಅಂಕಪಟ್ಟಿಗಳನ್ನು ನೋಡಿದಾಗ ಬಹಳ ವಿಚಿತ್ರವಾದರೂ ಸತ್ಯವೆಂಬ ಸಂಗತಿಗಳು ಗೋಚರಿಸಬಹುದು. ಅಂಕಪಟ್ಟಿಯಲ್ಲಿ ತಾಯಿಗಿಂತ ಮಗಳೇ ದೊಡ್ಡವಳಾಗಿ ಕಾಣುವ ಅಂದರೆ ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೋ ಎಂಬತ್ತಕ್ಕೋ ತಗೆಯುವ ಅಂಕಗಳಿಗಿಂತ ಆಂತರಿಕವಾದ ಇಪ್ಪತ್ತೈದಕ್ಕೋ ಇಪ್ಪತ್ತಕ್ಕೋ ತೆಗೆಯುವ ಅಂಕಗಳೇ ಹೆಚ್ಚಾಗಿರುವ ಲಕ್ಷಾಂತರ ಉದಾಹರಣೆಗಳು ನಮಗೆ ಸಿಗಬಹುದು. ಅದು ಮಕ್ಕಳ ಮೌಲ್ಯಮಾಪನ ಆಗದೆ ಶಿಕ್ಷಕರ ಮೌಲ್ಯಮಾಪನವೇ ಆಗಿಬಿಡಬಹುದು!

ಹೀಗೆ ಬೇಕಾಬಿಟ್ಟಿ ಅಂಕಕೊಡುವ ಶಿಕ್ಷಕರಲ್ಲಿ ನಾನು ಕಂಡಂತೆ ಎರಡು ಬಗೆಯ ಶಿಕ್ಷಕರಿರುತ್ತಾರೆ. ಮೊದಲನೆಯವರು ಸ್ವಭಾವತಃ ಬೇಜವಾಬ್ದಾರಿಯವರು. ಸರಿಯಾಗಿ ಪಾಠಮಾಡದೇ ಇರುವುದು, ಕಾಲಕಾಲಕ್ಕೆ ಮಕ್ಕಳಿಂದ ನಿಯೋಜಿತ ಕಾರ್ಯಮಾಡಿಸದೇ ಇರುವುದು, ಕಿರುಪರೀಕ್ಷೆಗಳನ್ನು ಸರಿಯಾಗಿ ಮಾಡದೇ ಇರುವುದು ಅಥವಾ ಮಾಡಿದರೂ ಸರಿಯಾಗಿ ಮೌಲ್ಯಮಾಪನ ಮಾಡದೆ ಇರುವುದು ಇವರ ಸಾಮಾನ್ಯ ಲಕ್ಷಣಗಳು. ಇವರ ಸಂಖ್ಯೆ ಕಡಿಮೆ ಇರಬಹುದು; ಆದರೆ ಇಲ್ಲವೇ ಇಲ್ಲ ಎನ್ನಲು ಸಾಧ್ಯ ಇದೆಯೇ?  ಇವರು ವರ್ಷಪೂರ್ತಿ ಉಂಡಾಡಿ ಗುಂಡಾಡಿಗಳಾಗಿರುವಂಥವರು. ಇಂಥವರ ಬಗ್ಗೆ ನಮ್ಮ ವ್ಯವಸ್ಥೆಯೂ, “ಅವರು ಶಾಲೆಗೆ ಬರುವುದೇ ಹೆಚ್ಚು, ಒಂದಿಷ್ಟು ಅಡ್ಜೆಸ್ಟ್‌ ಮಾಡಿಕೊಂಡು ಹೋಗಿ” ಎಂದು ಉಳಿದವರಿಗೆ ಹೇಳುವ ಮೂಲಕ ಅವರಿಗೆ ʼವಿಶೇಷ ರಿಯಾಯತಿʼ ಕೊಟ್ಟಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ. 

ಇನ್ನೊಂದು ಬಗೆಯವರು ಬಹಳ ಒಳ್ಳೆಯ ಶಿಕ್ಷಕರು. ಇವರ ಸಂಖ್ಯೆಯೂ ದೊಡ್ಡದು. ಅವರು ಒಳ್ಳೆಯವರಿದ್ದೂ ಹೀಗೆ ಏಕೆ ಬೇಕಾಬಿಟ್ಟಿ ಅಂಕಕೊಟ್ಟು ಕಳಿಸುತ್ತಾರೆ ಎಂದು ಯಾರಾದರೂ ಕೇಳಬಹುದು? ಹೌದು ಇವರು ಮೊದಲಿನವರಂತೆ ಬೇಜವಾಬ್ದಾರಿ ಶಿಕ್ಷಕರಲ್ಲ. ವರ್ಷಪೂರ್ತಿ ಕಷ್ಟಪಟ್ಟು ಪಾಠ ಮಾಡುವವರು, ಮಕ್ಕಳಿಂದ ನಿಯೋಜಿತ ಕಾರ್ಯ, ಕಿರುಪರೀಕ್ಷೆ ಎಲ್ಲವನ್ನು ಮಾಡಿಸಿ ಅವನ್ನು ಶ್ರದ್ಧೆಯಿಂದ ಶಾಲೆಯಲ್ಲಿ ಆಗದಿದ್ದರೆ ಮನೆಗೆ ಹೊತ್ತುಕೊಂಡು ಹೋಗಿ ಮೌಲ್ಯಮಾಪನ ಮಾಡುವವರು. ಇಂಥವರೂ ಕೂಡ ವರ್ಷದ ಕೊನೆಗೆ ತಾವು ವರ್ಷವಿಡೀ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೂ ತಾವು ವರ್ಷದ ಕೊನೆಯಲ್ಲಿ ಕೊಡುವ ಅಂಕಕ್ಕೂ ಸಂಬಂಧವಿಲ್ಲದಂತೆ ಬೇಕಾಬಿಟ್ಟಿಯಾಗಿ ಅಂಕಗಳನ್ನು ಎಲ್ಲರಿಗೂ ಕೊಟ್ಟುಬಿಡುವುದುಂಟು!  ಹೀಗೆ ಬೇಧಭಾವ ಮಾಡದೆ ಸಮಾನವಾಗಿ ಹಂಚಲು ಅಂಕಗಳು ಸಾಮೂಹಿಕ ಸತ್ಯನಾರಾಯಣ ವ್ರತದ  ಪ್ರಸಾದ ಅಲ್ಲ ಎಂಬುದನ್ನು ಇಂಥವರೂ ಆ ಕ್ಷಣ ಮರೆತುಬಿಡುತ್ತಾರೆ. ಯಾರೋ ಅದುವರೆಗೂ ಮೃಷ್ಟಾನ್ನ ಭೋಜನವನ್ನು ಸಂತೋಷದಿಂದ ಊಟಮಾಡಿ ಕೊನೆಯಲ್ಲಿ ಗೋಮೂತ್ರದಲ್ಲಿ ಬಾಯಿ ತೊಳೆದುಕೊಂಡರಂತೆ! ಹಾಗಿರುತ್ತದೆ ಇಂತಹ ಶಿಕ್ಷಕರ ಸ್ಥಿತಿ.

ಒತ್ತಡಮಾತ್ರ ಕಾರಣವೇ?

ಶಿಕ್ಷಕರು ಹೀಗೆ ತಮಗಿರುವ ಗುರುತರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ಬೇಕಾಬಿಟ್ಟಿ ಅಂಕಗಳನ್ನು ಮಕ್ಕಳಿಗೆ ನೀಡುವ ಪರಿಪಾಠವು ಮುಂದೆ ಏನೆಲ್ಲ ಅನಾಹುತಗಳನ್ನು ಉಂಟುಮಾಡಬಹುದು ಎಂಬುದರ ಚರ್ಚೆಗೆ ತೊಡಗುವ ಮುನ್ನ ಇದರ ಬಗ್ಗೆ ಶಿಕ್ಷಕರ ಅಭಿಪ್ರಾಯ ಏನು ಎಂಬುದನ್ನೂ ಇಲ್ಲಿ ದಾಖಲಿಸಬೇಕು. ಈ ಬಗ್ಗೆ ನಾನು ಅನೇಕ ಶಿಕ್ಷಕರನ್ನು ಮಾತನಾಡಿಸಿದಾಗ ಅವರಲ್ಲಿ ಬಹುತೇಕರು ಕೊಡುವ ಅಭಿಪ್ರಾಯವೆಂದರೆ “ಈ ರೀತಿ ನಾವು ಮಾಡುವುದು ನಮ್ಮ ಸ್ವಂತ ಇಚ್ಚೆಯಿಂದ ಅಲ್ಲ; ಮೇಲಿನವರ ಒತ್ತಡದಿಂದ.” ಎಂಬುದು. ನಾನು ಗಮನಿಸಿದಂತೆ ಶಿಕ್ಷಕರು ಹೇಳುವ ಈ ಮಾತು ಸುಳ್ಳಲ್ಲ. ಅನೇಕ ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯನ್ನು ಎಲ್ಲರಿಗಿಂತ ಮುಂದೆ ನಿಲ್ಲಿಸುವ ಉಮೇದಿನಲ್ಲಿರುವ ಅಧಿಕಾರಿಗಳು ಹೀಗೆ ಹೇಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಇದರ ಬಗ್ಗೆ ನಾನು ಕೇಳಿದಾಗ ಒಬ್ಬ ಶಿಕ್ಷಕಿ ನನಗೆ, “We are not hopeless sir but helpless” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡದ್ದೂ ಇದೆ. ಇದರ ಜೊತೆಗೆ ನಾನು ಕಂಡುಕೊಂಡ ಒಂದು ಸತ್ಯವೇನೆಂದರೆ ಇದು ಕೇವಲ ಮೇಲಧಿಕಾರಿಗಳ ಒತ್ತಡದಿಂದ ಶಿಕ್ಷಕರು ತಮ್ಮ ಇಚ್ಚೆಗೆ ವಿರುದ್ಧವಾಗಿ ಮಾಡುವ ಕೆಲಸವಲ್ಲಎಂಬುದು. ಇಲ್ಲಿ ಶಿಕ್ಷಕರ ಮೇಲೆ ನಿಜವಾಗಿಯೂ ಒತ್ತಡ ಇರುತ್ತದೆಯೋ ಅಥವಾ ಒತ್ತಡ ಇದೆ ಎಂಬ ಒತ್ತಡದವನ್ನು ಅವರವರೇ ಸೃಷ್ಟಿಸಿಕೊಳ್ಳುತ್ತಾರೆಯೇ ಎಂಬುದು ಇಲ್ಲಿ ಬಹುಮುಖ್ಯ ಪ್ರಶ್ನೆ. ಏಕೆಂದರೆ   ಮೇಲಧಿಕಾರಿಗಳು ಹೀಗೆ ಹೆಚ್ಚು ಅಂಕಕೊಡಿ ಎಂತಲೋ ಪೂರ್ತಿ ಅಂಕಕೊಡಿ ಎಂದು ಹೇಳಲಿ ಎಂದೇ ಹಲವರು ಕಾಯ್ದುಕೊಂಡಿದ್ದು ಅವರಿಂದ ಸೂಚೆನೆ ಬಂದ ತಕ್ಷಣ ಒಳಗೊಳಗೇ ಬಹಳ ಸಂತೋಷದಿಂದಲೇ ಈ ಕೆಲಸ ಮಾಡುತ್ತಾರೆ ಎಂಬುದು ಸುಳ್ಳೇನಲ್ಲ.

ಮೇಲಧಿಕಾರಿಗಳ ಇಂತಹ ಮಾತನ್ನು ಬಹಳಷ್ಟು ಶಿಕ್ಷಕರು ʻರಕ್ಷಣಾ ತಂತ್ರʼವನ್ನಾಗಿ ಬಳಸಿಕೊಳ್ಳುತ್ತಾರೆ. ಅಂದರೆ ತಮ್ಮ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಪಡೆಯುವ ಆಸೆಯಿಂದಲೋ ಅಥವಾ ಕೆಲವು ಮಕ್ಕಳು ಫೇಲಾದರೆ ಅಧಿಕಾರಿಗಳಿಂದ ಉಂಟಾಗುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲೆಂದೋ ಈ ರೀತಿ ಎಲ್ಲಮಕ್ಕಳಿಗೂ ಸುಮ್ಮನೆ ಬೇಕಾಬಿಟ್ಟಿಯಾಗಿ ಹೆಚ್ಚು ಅಂಕಗಳನ್ನು ಅಥವಾ ಪೂರ್ಣ ಅಂಕಗಳನ್ನು ಕೊಡಲು ಅವರೂ ಮಾನಸಿಕವಾಗಿ ಮೊದಲೇ ತಯಾರಾಗಿರುತ್ತಾರೆ. ಆದರೆ ತಮ್ಮಷ್ಟಕ್ಕೆ ತಾವೇ ಹಾಗೆ ಮಾಡಿದರೆ ಯಾರಾದರೂ ʼಬೇಜವಾಬ್ದಾರಿಯ ವ್ಯಕ್ತಿಗಳುʼ ಎಂದು ಆಡಿಕೊಳ್ಳಬಹುದು. ಅದರ ಬದಲು ಮೇಲಧಿಕಾರಿಯೊಬ್ಬರು ಒಂದು ಮಾತು ಹೇಳಿದರೆ ಚೆನ್ನಾಗಿರುತ್ತದೆ ಎಂದು ಇವರೆಲ್ಲ ಬಯಸುತ್ತಿರುತ್ತಾರೆ. ಏಕೆಂದರೆ ಆಗ ಯಾರಾದರೂ ಕೇಳಿದರೆ, ʻಅವ್ರು ಹೇಳಿದ್ರು ಅದ್ಕೆ ನಾವು ಕೊಟ್ವಿ; ನಾವೇನ್‌ ಮಾಡೋಕೆ ಆಗುತ್ತೆ ಹೇಳಿʼ ಎಂದು  ಅವರ ಕಡೆ ಬೆರಳು ಮಾಡಿ ತೋರಿಸಲು ಇದರಿಂದ  ಅನುಕೂಲವಾಗುತ್ತದೆ ಮತ್ತು ಆ ಮೂಲಕ ತಮಗೆ ಬರಬಹುದಾದ ಕೆಟ್ಟ ಹೆಸರಿನಿಂದ ಬಚಾವಾಗಬಹದು ಎಂಬುದು ಇವರ ಲೆಕ್ಕ. ಹೀಗೆ ಮಾಡುವುದರಿಂದ ಬಾಳೆಹಣ್ಣು ತಿಂದ ತೃಪ್ತಿಯೂ ಆಗುತ್ತದೆ. ಬಾಳೆಹಣ್ಣು ಕದ್ದ ಆರೋಪವೂ ಬರುವುದಿಲ್ಲ. "ರೋಗಿ ಬಯಸಿದ್ದೂ ಹಾಲು ಅನ್ನ; ವೈದ್ಯ ಹೇಳಿದ್ದೂ ಹಾಲು ಅನ್ನ” ಅನ್ನುತ್ತಾರಲ್ಲ ಹಾಗೆ ಇದು. 

ಅಲಕ್ಷಿಸಲಾಗದ ಅನಾಹುತಗಳು

ನಮ್ಮ ಶಿಕ್ಷಕರು ಒತ್ತಡಕ್ಕೆ ಒಳಗಾಗಿ ಹೀಗೆ ಅಂಕಕೊಡುತ್ತಾರೆ ಎಂದೇ ಇಟ್ಟುಕೊಂಡರೂ ಅದೇನೂ ಸಮರ್ಥಿಸಿಕೊಳ್ಳುವ ಸಂಗತಿಯಾಗುವುದಿಲ್ಲ. ಏಕೆಂದರೆ ಬೇರೆಯವರು, ಯಾವುದೇ ಮಟ್ಟದ ಅಧಿಕಾರಿಗಳು ಆಗಿರಲಿ, ಅವರು ಹೇಳಿದಂತೆ ಶಿಕ್ಷಕರು ಅಂಕ ಕೊಡುತ್ತಾರೆ ಎಂದರೆ ಅದಕ್ಕೆ ಎರಡೇ ಅರ್ಥ ಬರುವುದು. ಒಂದು: ಮೌಲ್ಯಮಾಪನ ಮಾಡುವ ʻತಿಳಿವಳಿಕೆ ಇಲ್ಲದವರು.ʼ ಇನ್ನೊಂದು  ತಿಳಿವಳಿಕೆ ಇದ್ದರೂ ಎಲ್ಲ ಬಗೆಯ ಸ್ವಾತಂತ್ರ್ಯವನ್ನೂ ಕೆಳೆದುಕೊಂಡ ʻಮಾರಿಕೊಂಡವರು.ʼ ಎಂಬುದು. ಇವೆರಡರಲ್ಲಿ ಯಾವ ಅರ್ಥ ಬಂದರೂ ಅದು ಶಿಕ್ಷಕರ ಸ್ವಾಭಿಮಾನಕ್ಕೆ, ಘನತೆ, ಗೌರವಕ್ಕೆ ಧಕ್ಕೆ ತರುವ ಸಂಗತಿಯೇ ಆಗಿಬಿಡುತ್ತದೆ. ತಪ್ಪನ್ನು ಮಾಡಿದ ಮೇಲೆ ಅದನ್ನು ಮೆಚ್ಚಿಕೊಂಡು ಮಾಡಿದೆವೋ ಅಥವಾ ಮನಸ್ಸಿಲ್ಲದೆ ಮಾಡಿದೆವೋ ಎಂಬುದು ಬಹಳಷ್ಟು ಮುಖ್ಯವಾಗುವುದಿಲ್ಲ. ನಾವು ಮಾಡಿದ್ದು ಹೌದೋ ಅಲ್ಲವೋ ಎಂಬುದಷ್ಟೇ ಮುನ್ನೆಲೆಗೆ ಬಂದು ಚರ್ಚೆಗೊಳಪಡುತ್ತದೆ.

ಶಿಕ್ಷಕರು ಹೀಗೆ ಬೇಕಾಗಿಯೋ ಅಥವಾ ಒತ್ತಡಕ್ಕೆ ಒಳಗಾಗಿಯೋ ಬೇಕಾಬಿಟ್ಟಿ ಅಂಕಕೊಡುವುದರಿಂದ ಆಗುವ ಅಪಾಯಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ. ಈ ಕೆಲಸ ನಿಯಮಗಳ ಪ್ರಕಾರವೂ ತಪ್ಪು. ನೈತಿಕತೆಯ ಪ್ರಕಾರವೂ ತಪ್ಪು. ನಿಯಮಗಳ ಪ್ರಕಾರ ತಪ್ಪು ಏಕೆಂದರೆ ಆಂತರಿಕ ಅಂಕಗಳನ್ನು ಕೊಡಲು ಇಲಾಖೆ ನಿಯಮಗಳನ್ನು ರೂಪಿಸಿರುತ್ತದೆ. ವಿವಿಧ ಹಂತಗಳ ವಿವಿಧ ಚಟುವಟಿಕೆ ಮತ್ತು ಕಿರುಪರೀಕ್ಷೆಗಳಲ್ಲಿ ಪಡೆದ ಅಂಕಗಳು ಆಯಾ ಕಾಲದಲ್ಲಿಯೇ ಎಲ್ಲೆಂದರಲ್ಲಿ ದಾಖಲಾಗಿರುತ್ತವೆ. ಅನೇಕ ಶಾಲೆಗಳಲ್ಲಿ ಉತ್ತರ ಪತ್ರಿಕೆ ಅಂಕಪಟ್ಟಿಗಳನ್ನು ಮಕ್ಕಳಿಗೆ ಅವರ ಪಾಲಕರಿಗೆ ತೋರಿಸಲಾಗಿರುತ್ತದೆ. ಇವೆಲ್ಲವನ್ನೂ ಗಾಳಿಗೆ ತೂರಿ ವರ್ಷದ ಕೊನೆಯಲ್ಲಿ ಮನಸ್ಸಿಗೆ ಬಂದಂತೆ ಅಂಕಗಳನ್ನು ಕೊಡುವುದು ದೊಡ್ಡ ತಪ್ಪಾಗಿ ಬಿಡುತ್ತದೆ. ಶಿಕ್ಷಕರು ಎಷ್ಟೇ ಕಷ್ಟಪಟ್ಟು ಸುಳ್ಳುದಾಖಲೆಗಳನ್ನು ಸೃಷ್ಟಿಸಿದರೂ ನಿಜಾರ್ಥದಲ್ಲಿ ತನಿಖೆ ನಡೆದರೆ ಅವರು ತಮ್ಮನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಏಕೆಂದರೆ ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಬಹುದೇ ವಿನಃ ಶಾಶ್ವತವಾಗಿ ಅಲ್ಲ!

ನಿಯಮಗಳ ಕಥೆ ಒತ್ತಟ್ಟಿಗಿರಲಿ. ನೈತಿಕತೆಯ ಕಥೆ ಏನು? ಶಿಕ್ಷಕರು ಎಂದರೆ ಮಕ್ಕಳಿಗೆ ಒಳ್ಳೆಯದು ಕೆಟ್ಟದ್ದನ್ನು ಕಲಿಸುವವರು. ಅವರೇ ಹಾದಿತಪ್ಪಿದರೆ ಮಕ್ಕಳ ಗತಿಯೇನು? ಅವರು ಮೌಲ್ಯಶಿಕ್ಷಣ ತರಬೇತಿ ಪಡೆಯುವುದು, ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಡುವುದು ಇವೆಲ್ಲ ಹಾಸ್ಯಾಸ್ಪದ ಎನಿಸುವುದಿಲ್ಲವೇ? ನೈತಿಕತೆಯ ಅಧಪತನದ ಅವರ ಈ ಕಾರ್ಯವು ಉಂಟುಮಾಡಬಹುದಾದ ಬಹಳಷ್ಟು ದುಷ್ಪರಿಣಾಮಗಳಲ್ಲಿ ನಾಲ್ಕನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ. ಮೊದಲನೆಯದು ಇದು ಶಿಕ್ಷಕರು ತಾವು ವರ್ಷಪೂರ್ತಿ ಮಾಡುವ ಕಿರುಪರೀಕ್ಷೆ, ಚಟುವಟಿಕೆ, ಅವುಗಳ ಮೌಲ್ಯಮಾಪನ ಇತ್ಯಾದಿ ಶ್ರದ್ಧಾಪೂರ್ವಕ ಕೆಲಸಗಳಿಗೆ ಅರ್ಥವಿಲ್ಲದಂತೆ ಮಾಡುತ್ತದೆ. ಆ ಮೂಲಕ ಶಿಕ್ಷಕರು ಇಂತಹ ಅಗತ್ಯ ಚಟುವಟಿಕೆಗಳನ್ನು ಮಾಡುವಲ್ಲಿ ನಿರಾಸಕ್ತಿ ತಾಳುವಂತಾಗುತ್ತದೆ. ಎರಡನೆಯದು ಇದು ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುವ ಘನಘೋರ ಅನ್ಯಾಯದ ಕ್ರಮವಾಗುತ್ತದೆ. ವರ್ಷಪೂರ್ತಿ ಕಷ್ಟಪಟ್ಟು ಅನೇಕಸಲ ಊಟಆಟನಿದ್ರೆಗಳನ್ನೂ ತ್ಯಾಗಮಾಡಿ ಶಿಕ್ಷಕರು ಹೇಳಿದ ಎಲ್ಲ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದ ವಿದ್ಯಾರ್ಥಿಗಳು, ಇಂತಹ ಯಾವ ಕೆಲಸಗಳನ್ನೂ ಮಾಡದೆ ವರ್ಷಪೂರ್ತಿ ಉಂಡಾಡಿ ಗುಂಡಾಡಿದ ತನ್ನ ಸಹಪಾಠಿಗಳೂ ತಮ್ಮ ಸರಿಸಮ ಅಂಕಗಳನ್ನು ಪಡೆಯುವುದರಿಂದ ಖಿನ್ನರಾಗುತ್ತಾರೆ. ಅವರು ಓದು ಬರೆಹಗಳಲ್ಲಿ ನಿರಾಸಕ್ತಿ ತಾಳುತ್ತಾರೆ.

ಮೂರನೆಯದು ಇದು  ಮಕ್ಕಳಿಗೆ ಶಿಕ್ಷಕರೇ ಮುಂದಾಗಿ ʻದುರ್ಬುದ್ಧಿʼಯನ್ನು ಕಲಿಸುವ ಕ್ರಮವಾಗುತ್ತದೆ. ಏಕೆಂದರೆ ಶಿಕ್ಷಕರು ಕೊಡುವ ಅಂಕಗಳು ಗುಟ್ಟಾಗಿ ಉಳಿಯುವಂಥದ್ದೇನಲ್ಲ. ಅಂಕಪಟ್ಟಿಯಲ್ಲಿ ಪ್ರಕಟವಾಗುವಂಥದ್ದು. ಓದಿದವರು ಓದದವರು ಎಲ್ಲರಿಗೂ ಹೆಚ್ಚುಕಡಿಮೆ ಸರಿಸಮ ಅಂಕಗಳು ಬಂದಿರುವುದನ್ನು ನೋಡುವ ಹಿಂದಿನ ತರಗತಿಗಳ ಮಕ್ಕಳು ಮುಂದಿನ ವರ್ಷಗಳಲ್ಲಿ ಶಿಕ್ಷಕರು ಹೇಳುವ ಯಾವ ಚಟುವಟಿಕೆಗಳನ್ನು ಮಾಡದೆ ಯಾವ ಕಿರುಪರೀಕ್ಷೆಗಳಿಗೂ ಹಾಜರಾಗದೆ ಉಡಾಫೆಯನ್ನು ತೋರತೊಡಗಬಹುದು. ನಾಲ್ಕನೆಯದು ಮತ್ತು ಕೊನೆಯದು ಅತ್ಯಂತ ಗಂಭೀರವಾದದ್ದು ಮತ್ತು ಶಿಕ್ಷಕರಿಗೇ ಸಂಬಂಧಿಸಿದ್ದು. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಎಲ್ಲರಿಗೂ ಪೂರ್ಣ ಅಂಕಗಳನ್ನು ಕೊಡುವ ಒಂದು ಕೆಟ್ಟ ಕ್ರಮವನ್ನು ಒಮ್ಮೆ ಆರಂಭಿಸಿದರೆ ಮುಂದಿನ ವರ್ಷಗಳಲ್ಲಿ ಅದು ಆ ಶಾಲೆಯ ಒಂದು ʼರೂಢಿಗತ ಸಂಪ್ರದಾಯʼ ಆಗಿಬಿಡುತ್ತದೆ. ಒಮ್ಮೆ ಅದು ಸಂಪ್ರದಾಯ ಆದ ಮೇಲೆ ಅದನ್ನು ನಿಲ್ಲಿಸುವುದು ಕಷ್ಟ. ಈ ಕೆಟ್ಟ ಸಂಪ್ರದಾಯವನ್ನು ಆರಂಭಿಸಿದ ಶಿಕ್ಷಕರು ಒಬ್ಬೊಬ್ಬರಾಗಿ ಶಾಲೆಬಿಟ್ಟು ಹೋಗಬಹುದು. ಹೊಸಬರು ಒಬ್ಬಬ್ಬರಾಗಿ ಬಂದು ಸೇರಬಹುದು. ಆದರೆ ಈ ಸಂಪ್ರದಾಯ ಮುಂದುವರೆದುಬಿಡುತ್ತದೆ.

ಮುಂದೆ ಇದು ಯಾವ ಹಂತ ತಲುಪುತ್ತದೆ ಎಂದರೆ ಮುಂದೊಂದು ವರ್ಷ ಶಾಲೆಯಲ್ಲಿ ಅತ್ಯಂತ ದುರ್ವರ್ತನೆ ತೋರುವ ನಾಲ್ಕು ಮಕ್ಕಳು ಬರುತ್ತಾರೆ ಎಂದಿಟ್ಟುಕೊಳ್ಳಿ. ಅವರು ಶಿಕ್ಷಕರು ಹೇಳಿದ ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಅವರ ಮೇಲೆ ಎಗರಾಡುವವರಾಗಿರುತ್ತಾರೆ ಎಂದಿಟ್ಟುಕೊಳ್ಳಿ. ಆಗ ಅವರಿಗೆ ಆಂತರಿಕ ಅಂಕಗಳನ್ನು ಹೆಚ್ಚು ಕೊಡಬಾರದು ಎಂದು ಎಲ್ಲ ಶಿಕ್ಷಕರಿಗೆ ಅನ್ನಿಸಿದರೂ ಹಾಗೆ ಮಾಡುವ ಸ್ವಾತಂತ್ರ್ಯ ಆಗ ಅವರ ಕೈಯಲ್ಲಿ ಇರುವುದಿಲ್ಲ. ಪೂರ್ಣ ಅಂಕ ಕೊಡದಿದ್ದರೆ, ಅಥವಾ ಅತ್ಯಂತ ಕಡಿಮೆ ಅಂಕ ಕೊಟ್ಟರೆ, ಆ ವಿದ್ಯಾರ್ಥಿಗಳು, “ಯಾಕೆ ಕೊಡುವುದಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಶಾಲೆಯಲ್ಲಿ ಎಲ್ಲರಿಗೂ ಪೂರ್ಣ ಅಂಕಗಳನ್ನು ಕೊಡುವ ಸಂಪ್ರದಾಯ ಇದೆ. ಕೊಡ್ತೀರೋ ಇಲ್ಲವೋ ಹೇಳಿ” ಎಂದು ಶಿಕ್ಷಕರಿಗೆ ಚಾಕು ಚೂರಿ ತೋರಿಸಿ ಅವರು ಅಂಕಗಳನ್ನು ಪಡೆಯುವುದಿಲ್ಲ ಎನ್ನುವುದು ಏನು ಗ್ಯಾರಂಟಿ. ಆಗ ಶಿಕ್ಷಕರ ಪಾಡು ನಾಯಿಪಾಡು ಅನ್ನುತ್ತಾರಲ್ಲ ಹಾಗಾಗುತ್ತದೆ. ಕನ್ನಡದ ಮಹಾ ಕಾವ್ಯವೊಂದರಲ್ಲಿ ʻಹಚ್ಚಿದವನ ಇಚ್ಚೆಯಲ್ಲಿರದು ಕಿಚ್ಚುʼ ಎಂಬ ಅರ್ಥಪೂರ್ಣ ಮಾತೊಂದು ಬರುತ್ತದೆ. ನಾವೇ ಹಚ್ಚಿದರೂ ಬೆಂಕಿ ಒಂದು ಹಂತಕ್ಕೆ ಬೆಳೆದ ಮೇಲೆ ನಮ್ಮ ಮಾತನ್ನೂ ಕೇಳುವುದಿಲ್ಲವಂತೆ. ಇದೂ ಹಾಗೇ! ಈ ಬಗ್ಗೆ ಶಿಕ್ಷಕರು ಎಚ್ಚರದಿಂದ ಇರಬೇಕು.

ತೋರಣ ಒಣಗಲು ಕಾರಣ ಯಾರು?

ಒಬ್ಬ ಅಧಿಕಾರಿಗೆ ಮುಂದಿನ ಪರೀಕ್ಷೆಯ ಬಗ್ಗೆ ಆಲೋಚಿಸುವ ಶಿಕ್ತಿ ಮಾತ್ರ ಇರಬಹುದು; ಆದರೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಗೆ ಅದರಾಚೆಗೆ ಹೋಗಿ ಮುಂದಿನ ಜನಾಂಗದ ಬಗ್ಗೆ ಕೂಡ ಆಲೋಚಿಸುವ ಶಕ್ತಿ ಇರುತ್ತದೆ; ಇರಬೇಕು ಕೂಡ. ಹೀಗೆ ಅವರಿಗೆ ಈ ಶಕ್ತಿ ಇರುತ್ತದೆ ಎಂದೇ ವ್ಯವಸ್ಥೆ ಅಧಿಕಾರಿಗಳ ಮುಂದೆ ಏನೂ ಅಲ್ಲದ ಶಿಕ್ಷಕರಿಗೇ ಈ ವಿಶಿಷ್ಟ ಜವಾಬ್ದಾರಿಯನ್ನು ನೀಡಿರುತ್ತದೆ. ಏನೇ ಒತ್ತಡಗಳಿದ್ದರೂ ಶಿಕ್ಷಕರು ತಮ್ಮಈ ಗುರುತರ ಜವಾಬ್ದಾರಿಯಿಂದ ಹಿಂತೆಗೆಯಬಾರದು. ಹೌದು, ಏಕಾಂಗಿಯಾಗಿ ವ್ಯವಸ್ಥೆಯ ವಿರುದ್ಧ ಎದೆ ಸೆಟೆಸಿ ನಿಲ್ಲುವುದು ಅನೇಕರಿಗೆ ಅನೇಕ ಕಾರಣಗಳಿಂದ ಆಗದಿರಬಹುದು. ಅಂತಹ ಸಂದರ್ಭಗಳಲ್ಲಿ ಅವರೇ ಕಟ್ಟಿಕೊಂಡ ಸಂಘಗಳಾದರೂ ಸಾಮೂಹಿಕವಾಗಿ ಶಿಕ್ಷಕರನ್ನು ʼತಿಳಿವಳಿಕೆಯಿಲ್ಲದವರನ್ನಾಗಿಯೋ ಗುಲಾಮರನ್ನಾಗಿಯೋ ಪರಿಗಣಿಸುವ ಕೆಲಸಗಳು ಯಾರಿಂದಲೇ ಆಗಲಿ ಅವನ್ನು ಪ್ರಶ್ನಿಸುವುದು, ಪ್ರತಿಭಟಿಸುವುದು ಇತ್ಯಾದಿ ಮಾಡಬೇಕಲ್ಲವೇ? ಅನೇಕ ಸಂಘಗಳು ಶಿಕ್ಷಕರ ಬಿಲ್‌ ಮಾಡಿಸುವುದು, ರಜೆ ಕೊಡಿಸುವುದು ಇತ್ಯಾದಿ ಕಾರ್ಯಗಳಲ್ಲಿಯೇ ತಲೆಕೆಡಿಸಿಕೊಂಡಿರುತ್ತವೆ. ಸಂಘದವರು ಅಲ್ಲಿ ತೊಡಗಿಕೊಳ್ಳದಿದ್ದರೂ ಆ ಕೆಲಸಗಳು ನಾಲ್ಕುದಿನ ತಡವಾಗಿಯಾದರೂ ಆಗುವಂಥವು. ಹಾಗಾಗಿ ಅವೆಲ್ಲವುಗಳಿಗಿಂತ ಶಿಕ್ಷಕರ ಮಾನ ಮರ್ಯಾದೆ, ಘನತೆ ಗೌರವಗಳಿಗೆ ಧಕ್ಕೆ ಬರುವ ಅಂಶಗಳನ್ನು ಶಿಕ್ಷಕ ಸಂಘಗಳು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳಬೇಕು. ಒಂದು ಮಾತನ್ನು ನಾವು ನೆನಪಿಡಬೇಕು. ದೌರ್ಜನ್ಯ ಎಲ್ಲಿಯಾದರೂ ನಡೆದರೆ ಅದಕ್ಕೆ ಅದನ್ನು ಮಾಡುವವರು ಮಾತ್ರ ಕಾರಣವಲ್ಲ; ಅದನ್ನು ಮಾಡಿಸಿಕೊಂಡು ತೆಪ್ಪಗಿರುವವರೂ ಕಾರಣವೇ. ಕವಿ ಬಿ ಆರ್‌ ಲಕ್ಷ್ಮಣರಾವ್‌ ಅವರ ಕವಿತೆಯ ಕೆಳಕಂಡ ಸಾಲುಗಳ ಮೂಲಕ ಈ ಲೇಖನ ಮುಗಿಸುತ್ತೇನೆ.


“ಬಾಗಿಲ ಮೇಲೆ ಒಣಗಿದ್ದರೆ ತೋರಣ;

ನಾನೊಬ್ಬಳೇ ಅಲ್ಲ ನೀನೂ ಕಾರಣ” 

ಡಾ ರಾಜೇಂದ್ರ ಬುರಡಿಕಟ್ಟಿ

13-09-2026

*****

ದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಗಿನ ಲೇಖನಗಳನ್ನೂ ತಾವು ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಓದಬಹುದು:

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು..

https://buradikatti.blogspot.com/2026/01/blog-post.html

ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?

https://buradikatti.blogspot.com/2025/07/blog-post.html

ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು

https://buradikatti.blogspot.com/2024/11/blog-post_17.html

ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?

https://buradikatti.blogspot.com/2025/08/blog-post.html

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

https://buradikatti.blogspot.com/2024/11/blog-post.html

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ರಜೆ

https://buradikatti.blogspot.com/2025/06/blog-post_5.html

ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು

https://buradikatti.blogspot.com/2024/05/blog-post_31.html

ಎಸ್.ಎಸ್.ಎಲ್.ಸಿ ಫಲಿತಾಂಶಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

https://buradikatti.blogspot.com/2022/05/blog-post.html

ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:

https://buradikatti.blogspot.com/2020/07/blog-post.html

ʻಅರಮನೆʼ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ

https://buradikatti.blogspot.com/2020/07/blog-post_14.html

 


Sunday, January 18, 2026

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು!

 

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು!          

·         ಡಾ. ರಾಜೇಂದ್ರ ಬುರಡಿಕಟ್ಟಿ 

ತಾಯ ಮೊಲೆವಾಲು ನಂಜಾಗಿ ಕೊಲುವೊಡೆ

ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ?

ಇವು ಬಸವಣ್ಣನವರ ವಚನವೊಂದರಲ್ಲಿ ಬರುವ ಎರಡು ಧ್ವನಿಪೂರ್ಣ ಸಾಲುಗಳು. ರಾಜ್ಯದಲ್ಲಿ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಒಂದು ಕೆಟ್ಟಬೆಳವಣಿಗೆಯನ್ನು ಗಮನಿಸುವಾಗ ಈ ಸಾಲುಗಳು ನೆನಪಾದವು. ಈ ಕೆಟ್ಟ ಬೆಳವಣಿಗೆ ಏನೆಂದರೆ ಎಸ್.‌ಎಸ್.‌ಎಲ್.ಸಿ ಮಕ್ಕಳಿಗೆ ನಿಗಧಿಯಾಗಿರುವ ಆಂತರಿಕ ಅಂಕಗಳನ್ನು ಶಿಕ್ಷಕರು ಪೂರ್ಣಪ್ರಮಾಣದಲ್ಲಿ ನೀಡಬೇಕು ಎಂದು ವಿವಿಧ ಹಂತದ ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ತರುತ್ತಿರುವುದು. ಈ ಬಗ್ಗೆ ಅನೇಕ ಕಡೆ ಮುಖ್ಯಶಿಕ್ಷಕರ ಸಭೆ ನಡೆಸಿರುವ ಅಧಿಕಾರಿಗಳು ಈ ಬಗ್ಗೆ ಅವರಿಗೆ ಮೌಖಿಕ ಸೂಚನೆಗಳನ್ನು ನೀಡಿರುವುದೂ ನಡೆದಿದೆಯಂತೆ. ಒಂದು ವೇಳೆ ಇದು ʻಹೌದುʼ ಎನ್ನುವುದಾದರೆ ʼಶಿಕ್ಷಕರ ಘನತೆ ಗೌರವಗಳನ್ನು ಮಣ್ಣುಪಾಲು ಮಾಡುವ ಈ ನಡೆ ಒಂದು ಕೆಟ್ಟ ನಡೆಯಲ್ಲದೇ ಬೇರೇನೂ ಅಲ್ಲ. ಶಿಕ್ಷಕರ ಸಂಘದ ಶಾಖೆಗಳು ಎಲ್ಲ ಹಂತದಲ್ಲಿ ಇದ್ದರೂ ಅವು ಈ ವಿಷಯವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇದು  ನಮ್ಮ ಶಿಕ್ಷಕರ ಹಕ್ಕನ್ನು ಕಸಿಯುವ ಅಥವಾ ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿ ಎಂದು ಅವಕ್ಕೆ ಅನ್ನಿಸಿ “ಮಕ್ಕಳಿಗೆ ಅಂಕನೀಡುವುದು ಶಿಕ್ಷಕರ ವಿವೇಚನೆಗೆ ಸಂಬಂಧಿಸಿದ್ದು; ಅದರಲ್ಲಿ ನೀವು ಹಸ್ತಕ್ಷೇಪ ಮಾಡುವುದು ಸರಿಯಲ್ಲ; ಅದನ್ನು ಮಾಡಬೇಡಿ” ಎಂದು ಈ ಸಂಘಗಳು ಶಿಕ್ಷಕರ ಸ್ವಾಭಿಮಾನವನ್ನು ಕಾಯುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದು ಎಲ್ಲಿಯೂ ಆದಂತೆ ಕಾಣುತ್ತಿಲ್ಲ. 

ಈಗಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ಎಸ್‌ ಎಸ್‌ ಎಲ್‌ ಸಿ ಮಗುವೊಂದು ಪ್ರಥಮ ಭಾಷೆಗೆ ಇಪ್ಪತ್ತೈದು, ಉಳಿದ ವಿಷಯಗಳಿಗೆ ಇಪ್ಪತ್ತರಂತೆ ಶಾಲೆಯ ವಿಷಯ ಬೋಧಕರಿಂದ ಅಂಕಪಡೆಯಬೇಕಾಗಿದೆ. ಈ ಅಂಕಗಳನ್ನು ಶಿಕ್ಷಕರು ಶಾಲೆಯಲ್ಲಿ ನಡೆಸುವ ಕಿರುಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವುದು, ಅವರು ನೀಡುವ ಯೋಜನಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆ ಬಗ್ಗೆ ವರದಿ ಸಲ್ಲಿಸುವುದು ಇತ್ಯಾದಿ ಮಾಡುವ ಮೂಲಕ ಆ ಮಗು ಪಡೆಯುಬೇಕಾಗಿದೆ.  ಶಿಕ್ಷಕರು ಈ ಅಂಕಗಳನ್ನು ನೀಡುವಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳೂ ನಿಯಮಗಳೂ ಇವೆ. ವ್ಯವಸ್ಥೆ ಹೀಗಿರುವಾಗ ತಮ್ಮ ಅಧಿಕಾರದ ಬಲದಿಂದ ವ್ಯಾಪ್ತಿಯನ್ನು ಮೀರಿ ಯಾವುದೇ ಹಂತದ ಅಧಿಕಾರಿಗಳು ಈ ರೀತಿ ಸೂಚನೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚರ್ಚಾಸ್ಪದವಾದದ್ದು.

ಈ ಸೂಚನೆ ಸಂಬಂಧವೋ ಏನೋ ಮೊನ್ನೆ ಶಿಕ್ಷಕರೊಬ್ಬರು ಪ್ರಶ್ನೆಯೊಂದನ್ನು ಕಳಿಸಿ ಸಲಹೆ ಕೇಳಿದ್ದಾರೆ. ಎಸ್.‌ಎಸ್.‌ಎಲ್.ಸಿ ಕನ್ನಡ ಬೋಧನೆ ಮಾಡುತ್ತಿರುವ ಅವರಿಗೆ, ಮಕ್ಕಳಿಗೆ ಎಲ್ಲರಿಗೂ ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು ನೀಡಿ ಎಂದು ಅವರ ಮುಖ್ಯೋಪಾಧ್ಯಾಯರು ಸಭೆಕರೆದು ಹೇಳಿದರಂತೆ. ಉಳಿದ ವಿಷಯ ಶಿಕ್ಷಕರೂ ಇಪ್ಪತ್ತಕ್ಕೆ ಇಪ್ಪತ್ತು ಅಂಕ ನೀಡಬೇಕು ಎಂಬುದು ಅವರ ಸೂಚನೆ. ʻಈ ಸೂಚನೆಯನ್ನು ನಾನೇ ನೀಡುತ್ತಿಲ್ಲ ನನಗೆ ಮೇಲಿನವರು ನೀಡಿದ್ದಾರೆ. ನಮ್ಮ ಜಿಲ್ಲೆಯ ಫಲಿತಾಂಶ ರಾಜ್ಯದ ಜಿಲ್ಲೆಗಳ ಫಲಿತಾಂಶದ ಪಟ್ಟಿಯಲ್ಲಿ ಮೇಲೆ ಬರಬೇಕಂತೆ. ಅದಕ್ಕೆ ಎಲ್ಲರೂ ಸಹಕರಿಸಬೇಕಂತೆ. ಅವರು ಹೇಳಿದ್ದನ್ನೇ ನಾನು ನಿಮಗೆ ಹೇಳುತ್ತಿದ್ದೇನೆʼ ಎಂದೂ ಸೇರಿಸಿದರಂತೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನನಗೆ ಸಲಹೆ ಕೇಳಿದ ಶಿಕ್ಷಕರ ಪ್ರಶ್ನೆ. ಏಕೆಂದರೆ ಅವರ ತರಗತಿಯಲ್ಲಿ ವಿಭಿನ್ನ ಕಲಿಕಾ ಮಟ್ಟದ ವಿದ್ಯಾರ್ಥಿಗಳಿದ್ದಾರೆ. “ಅವರೆಲ್ಲರೂ ಪ್ರಾಯೋಗಿಕ ಕಾರ್ಯಗಳನ್ನು ಸರಿಯಾಗಿ ಮಾಡಿಕೊಟ್ಟಿಲ್ಲ. ಕಿರುಪರೀಕ್ಷೆಗಳಲ್ಲಿಯೂ ಪಾಸಾಗಿಲ್ಲ” ಎಂದದ್ದಕ್ಕೆ ಅದಕ್ಕೆಲ್ಲ ನೀವು ಏನಾದರೂ ಮಾಡಿಕೊಳ್ಳಿ ಅಂಕಮಾತ್ರ ಎಲ್ಲರಿಗೂ ಪೂರ್ತಿಕೊಡಿ ಬೇಕಾದರೆ ಹೊಸದಾಗಿ ಎಲ್ಲ ಬರೆಸಿಕೊಳ್ಳಿ ಎಂದು ಸುಳ್ಳುದಾಖಲೆ ಸೃಷ್ಟಿಸಿ ಇಟ್ಟುಕೊಳ್ಳಲೂ ಅವರೇ ʻಮಾರ್ಗದರ್ಶನʼವನ್ನೂ ಮಾಡಿದರಂತೆ!


ಇದು ಆ ಶಿಕ್ಷಕರೊಬ್ಬರ ಶಾಲೆಯ ಕಥೆ ಆಗಿದ್ದರೆ ಇದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ನನಗೆ ತಿಳಿದಂತೆ ಇದು ಈಗ ರಾಜ್ಯದ ಹಲವು ಜಿಲ್ಲೆಗಳ ಬಹುತೇಕ ಶಾಲೆಗಳ ಕಥೆಯಾಗಿಬಿಟ್ಟಿದೆ. ಶಾಲೆಯ ಶಿಕ್ಷಕರಿಗೆ ಒಳ್ಳೆಯದನ್ನು ಹೇಳುವ, ಅವರು ತಪ್ಪು ಮಾಡಿದರೆ ತಿದ್ದಿಹೇಳಬೇಕಾದ ಸ್ಥಾನದಲ್ಲಿರುವ ಮುಖ್ಯೋಪಾಧ್ಯಾಯರು ಮತ್ತು ಅವರ ಮೇಲಿನ ಅಧಿಕಾರಿಗಳೇ ಹೀಗೆ ಶಿಕ್ಷಕರಿಗೆ ಕಳ್ಳತನ, ಸುಳ್ಳುತನ, ಅಪ್ರಮಾಣಿಕತೆ ಇಂಥವನ್ನು ಕಲಿಸುವ ಹಂತಕ್ಕೆ ಇಳಿದುಬಿಟ್ಟಿದ್ದಾರೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ.  ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಬಸವಣ್ಣನವರ ವಚನದ ಸಾಲುಗಳು, ಈ ಸ್ಥಿತಿಯನ್ನು ನೋಡಿಯೇ ನೆನಪಾದದ್ದು. ಈ ಅಧಿಕಾರಿಗಳೆಲ್ಲರೂ ಶಿಕ್ಷಕರಿಗೆ ʻಮಾರ್ಗದರ್ಶನʼ ಎಂಬ ʼಮೊಲೆಹಾಲʼನ್ನು ಕೊಡುವ ತಾಯಿಯ ಸ್ಥಾನದಲ್ಲಿರುವವರು. ಇಂತಹ ತಾಯಿಯರೇ ಈಗ ತಮ್ಮ ಮೊಲೆಗಳಿಗೆ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಶಿಕ್ಷಕರೆಂಬ ಮಕ್ಕಳಿಗೆ ಮೊಲೆಚೀಪಲು ಹೇಳುತ್ತಿದ್ದಾರೆ! ಈ ಮೊಲೆಹಾಲನ್ನು ಕುಡಿಯುವುದೋ ಉಗುಳುವುದೋ ಎಂಬ ಧರ್ಮಸಂಕಟ ಶಿಕ್ಷಕರೆಂಬ ಮಕ್ಕಳದ್ದು. ಹಾಲು ಕುಡಿಯದಿದ್ದರೆ ತಾಯಿ ಏನೇನೋ ನೆಪಮಾಡಿ ಗುದ್ದುತ್ತಾಳೆ. ಕುಡಿದರೆ ನಂಜೇರಿ ಸಾಯುವ ಸಾಧ್ಯತೆಗಳೂ ಇರುತ್ತವೆ. ಅತ್ತ ಧರೆ; ಇತ್ತ ಪುಲಿ ಎತ್ತ ಹೋಗುವುದು. ಅವರಿಗೆ ದಾರಿಕಾಣದಾಗಿದೆ.

ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳುವುದಾದರೆ ಯಾವುದೇ ಹಂತದ ಅಧಿಕಾರಿಗಳು ಇಂತಹ ಅಸಂಬದ್ಧ ಸೂಚನೆಯನ್ನು ಶಿಕ್ಷಕರಿಗೆ ನೀಡುವುದು ಸರಿಯಾದ ನಡವಳಿಕೆಯೇ ಅಲ್ಲ. ಮೇಲಧಿಕಾರಿಗಳು, ಶಾಲೆಗೆ ಹೋಗದ ಶಿಕ್ಷಕರಿಗೆ, ಹೋದರೂ ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳದ ಶಿಕ್ಷಕರಿಗೆ, ಅಶಿಸ್ತಿನಿಂದ ವರ್ತಿಸುವ ಬೇಜವಾಬ್ದಾರಿ ತೋರಿಸುವ ಶಿಕ್ಷಕರಿಗೆ, ಬುದ್ಧಿಹೇಳುವುದು, ಅದಕ್ಕೆ ಅವರು ಸ್ಪಂದಿಸಿ ತಿದ್ದಿಕೊಳ್ಳದಿದ್ದರೆ ಅವರ ಮೇಲೆ ಶಿಸ್ತುಕ್ರಮ ತಗೆದುಕೊಳ್ಳುವುದು ಇತ್ಯಾದಿ ಮಾಡಬೇಕೆ ಹೊರತು, ಶಿಕ್ಷಕರಿಗೆ ಅಂಕವನ್ನು ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು ಹೇಳುವ ಕೆಲಸಕ್ಕೆ ಕೈಹಾಕಬಾರದು. ಅದನ್ನೂ ಅವರು ಹೇಳುವುದಾದರೆ ಶಿಕ್ಷಕರು ಇರುವುದಾದರೂ ಏತಕ್ಕೆ ಮತ್ತು ಶಾಲೆಯಲ್ಲಿ ಶಿಕ್ಷಕರು ಪರೀಕ್ಷೆ, ಯೋಜನೆ ಇತ್ಯಾದಿ ಮಾಡಿಸುವುದಾದರೂ ಏತಕ್ಕೆ? ಈಗಿನ ವ್ಯವಸ್ಥೆಯಲ್ಲಿ ಎಲ್ಲ ಹಂತದ ಅಧಿಕಾರಿಗಳಿಗೂ ತಮ್ಮ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳ ಅಂಕಿಅಂಶಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ. ಹೀಗಿರುವಾಗ ತಮ್ಮ ವ್ಯಾಪ್ತಿಯ ಎಲ್ಲ ಮಕ್ಕಳಿಗೂ ಅವರೇ ಸಾಮೂಹಿಕವಾಗಿ ಆಂತರಿಕ ಅಂಕಗಳನ್ನು ನೀಡಿಬಿಡಬಹುದು. ಆದರೆ ವ್ಯವಸ್ಥೆ ಅದಕ್ಕೆ ಅನುವು ಮಾಡಿಕೊಡದೇ ಅದನ್ನು ಶಿಕ್ಷಕರೇ ಮಾಡಬೇಕು ಎಂಬುದು ಸುಮ್ಮನೆ ಅಲ್ಲ. ಅದರು ಅವರು ಮಾತ್ರ ಸರಿಯಾಗಿ ಮಾಡಬಹುದಾದ ಜವಾಬ್ದಾರಿಯ ಕೆಲಸ ಎಂಬ ಕಾರಣಕ್ಕಾಗಿ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅವರಿಗೆ ಮುಕ್ತ ಅವಕಾಶ ಕೊಡಬೇಕೆ ಹೊರತು ಇಂತಹ ವಿಷಯದಲ್ಲಿ ಕೈ ಆಡಿಸಲು ಹೋಗಬಾರದು. ಇದು ತಮ್ಮ ಕೆಳಹಂತದ ಅಧಿಕಾರಿಗಳು, ನೌಕರರು ತಮ್ಮ ಮೇಲೆ ಇಟ್ಟಿರುವ ಗೌರವ, ಘನತೆಗಳನ್ನೂ ಕಳೆಯುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಹಿಂದೊಮ್ಮೆ ನಮ್ಮಲ್ಲಿ ವಿದ್ಯಾರ್ಥಿಗಳಿಗೆ ರ್ಯಾಂಕ್‌ ನೀಡುವ ವ್ಯವಸ್ಥೆ ಇತ್ತು. ಅದು ಮಕ್ಕಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡಿ ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನಿಸಿದಾಗ ಅದನ್ನು ತೆಗೆದು ಗ್ರೇಡಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆ ಮೂಲಕ ಮಕ್ಕಳ ಮೇಲೆ ಅನಗತ್ಯವಾಗಿ ನಡೆಯುತ್ತಿದ್ದ ಒತ್ತಡವನ್ನು ಸಂಪೂರ್ಣ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಡಿಮೆ ಮಾಡಲಾಯಿತು. ಆದರೆ ಜಿಲ್ಲೆಗಳ ಶ್ರೇಣೀಕರಣ ಆರಂಭವಾದ ಮೇಲೆ ಮಕ್ಕಳ ನಡುವಿನ ಈ ಅನಾರೋಗ್ಯಕರ ಸ್ಪರ್ಧೆಯು ಜಿಲ್ಲೆ ಜಿಲ್ಲೆಗಳ ನಡುವೆ ನಡೆಯತೊಡಗಿತು. ಇದಕ್ಕಾಗಿ ತಮ್ಮ ಜಿಲ್ಲೆಯನ್ನು ಎತ್ತರದ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಹವಣಿಸುವ ಅನೇಕ ಜಿಲ್ಲೆಗಳ ಅಧಿಕಾರಿಗಳು ಸರಿಯಾದ ವೈಜ್ಞಾನಿಕ ಹಿನ್ನಲೆಯಿಲ್ಲದ ಅನೇಕ ಕ್ರಮಗಳನ್ನು ಜಾರಿಗೆ ಮಾಡತೊಡಗಿದರು. ಯಾವುದೇ ವಿಶೇಷವಿಲ್ಲದ ವಿಶೇಷ ತರಗತಿಗಳು, ಮಿತಿಮೀರಿದ ಕಲಿಕಾವೇಳೆ, ಅಪರಿಮಿತವಾದ ಬರೆವಣಿಗೆ ಹೀಗೆ ಪಟ್ಟಿ ಬೆಳಸಬಹುದು.

ಆದರೆ ಇವು ಯಾವೂ ಅವರ ನಿರೀಕ್ಷಿತ ಫಲ ನೀಡಲಿಲ್ಲ. ಕೆಲವು ಕಡೆ ಇದರಿಂದ ವ್ಯತಿರಿಕ್ತಪರಿಣಾಮ ಆಗಿದ್ದೂ ಇದೆ. ಇದಕ್ಕೆ ಕಾರಣವೂ ಇದೆ. ಆ ವಯಸ್ಸಿನ ಮಕ್ಕಳು ದಿನಕ್ಕೆ ಎಷ್ಟು ಸಮಯ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಬೇಕು. ಎಷ್ಟು ಓದಬೇಕು ಎಷ್ಟು ಬರೆಯಬೇಕು ಎಂಬುದೆಲ್ಲವೂ ವೈಜ್ಞಾನಿಕವಾಗಿ ರಾಜ್ಯಮಟ್ಟದಲ್ಲಿ ತೀರ್ಮಾನವಾಗಿಯೇ ಪಠ್ಯ ರಚನೆಯಾಗಿರುತ್ತದೆ. ಫೆಬ್ರವರಿಗೆ ಮುಗಿಯಬೇಕಾದ ಪಠ್ಯವನ್ನು ಡಿಸೆಂಬರಿಗೇ ಅವಸರ ಅವಸರವಾಗಿ ಮುಗಿಸುವುದು. ಮಕ್ಕಳಿಗೆ ಆಟಗಳೇ ಇಲ್ಲದಂತೆ ಅವರನ್ನು ಬಂಧೀಖಾನೆಯ ಖೈದಿಗಳಂತೆ ನೋಡಿಕೊಳ್ಳುವುದು ಒಂದೇ ಎರಡೇ ಮಕ್ಕಳ ಮೇಲೆ ಇವರ ಹಿಂಸೆಗಳು. ಮಕ್ಕಳ ಮೇಲೆ ನಿರಾತಂಕವಾಗಿ ಮುಂದುವರೆಯುತ್ತಿರುವ ಈ ಹಿಂಸೆಯನ್ನು ನೋಡಿದರೆ ಯಾರಾದರೂ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಅನೇಕ ಶಿಕ್ಷಕರು ಅಧಿಕಾರಿಗಳು ತಕ್ಕ ಶಿಕ್ಷೆ ಅನುಭವಿಸುವ ಕಾಲವೂ ದೂರವಿಲ್ಲವೆನಿಸುತ್ತದೆ. ಮಾಡಬಾರದ್ದನ್ನು ಮಾಡಲು ಹೋದಾಗ ಆಗಬಾರದ್ದೇ ಆಗುತ್ತದೆ ಎಂಬ ಮಾತೊಂದಿದೆ. ಏನೆಲ್ಲ ಮಾಡಿದರೂ ಫಲಿತಾಂಶ ಏರದಿದ್ದನ್ನು ಕಂಡ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಅಡ್ಡದಾರಿಯನ್ನು ಅನೇಕರು ತುಳಿಯತೊಡಗಿದ್ದಾರೆ. ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ತಮ್ಮ ಕೆಳಗಿನವರೆದುರು ʼಕುಬ್ಜʼರಾಗುತ್ತಿದ್ದಾರೆ! ಹೀಗೆ ಕಳ್ಳತನ ಸುಳ್ಳುತನ ಹೇಳಿಕೊಡುವ ಅಧಿಕಾರಿಗಳ ಬಗ್ಗೆ ಶಿಕ್ಷಕರು ಹೇಗೆ ತಾನೆ ಗೌರವದ ಭಾವನೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ?

ಅಧಿಕಾರಿಗಳು ಈ ರೀತಿ ಸೂಚನೆ ನೀಡಿದಾಗ ಶಿಕ್ಷಕರು ಏನು ಮಾಡಬೇಕು ಎಂಬುದು ಇಲ್ಲಿ ಮುಖ್ಯ ಪ್ರಶ್ನೆ. ಇದರ ಬಗ್ಗೆಯೇ ಆ ಶಿಕ್ಷಕರು ನನ್ನ ಸಲಹೆ ಕೇಳಿದ್ದಾರೆ. ನನಗೆ ತಿಳಿದಂತೆ ಇದಕ್ಕೆ ಎರಡು ಮುಖಗಳಿವೆ. ಒಂದು ‌ʼನಿಯಮ-ಕಾನೂನುʼ ಇತ್ಯಾದಿಗೆ ಸಂಬಂಧಿಸಿದ್ದು! ಇನ್ನೊಂದು ʼವೃತ್ತಿನೈತಿಕತೆʼ (ಪ್ರೊಫೆಶನಲ್‌ ಎಥಿಕ್ಸ್). ಅವೆರಡನ್ನೂ ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. ಮೊದಲನೆಯದು ನಿಯಮ-ಕಾನೂನು ಮುಖ. ನಾನು ಈಗಾಗಲೇ ಹೇಳಿದಂತೆ ಮಕ್ಕಳಿಗೆ ಆಂತರಿಕ ಅಂಕ ನೀಡುವುದು ಶಿಕ್ಷಕರೇ ಮಾಡಬೇಕಾದ ಕೆಲಸ. ಅದು ಅಧಿಕಾರಿಗಳು ಹೇಳುವ ವಿಷಯವೇ ಅಲ್ಲ. ಹಾಗಾಗಿ ಅವರು ಹೇಳುವ ಮಾತನ್ನು ಯಾವ ಶಿಕ್ಷಕರೂ ಕೇಳುವ ಅವಶ್ಯಕತೆಯಿಲ್ಲ. ಕೇಳಬಾರದು ಕೂಡ!

ಹಾಗಂತ ಶಿಕ್ಷಕರೂ ತಮ್ಮ ಮನಬಂದಂತೆ ಈ ಅಂಕಗಳನ್ನು ನೀಡಬಾರದು. ಅಂಕ ನೀಡುವುದು ಶಿಕ್ಷಕರ ʻವಿವೇಚನಾಧಿಕಾರʼವೇ ಹೊರತು ʻಸರ್ವಾಧಿಕಾರʼವಲ್ಲ ಎಂಬುದನ್ನೂ ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಯಾವುದೇ ಮಕ್ಕಳಿಗೆ ಭೇದಭಾವ ಮಾಡದೆ ಅವರು ಮಾಡಿರುವ ಕೆಲಸಕ್ಕೆ ತಕ್ಕಂತೆ ಅವರು ಆಂತರಿಕ ಅಂಕವನ್ನು ನೀಡುವುದೇ ಸರಿಯಾದ ಕ್ರಮ. ಹೀಗೆ ʻಅಷ್ಟು ಅಂಕಕೊಡಿ ಇಷ್ಟು ಅಂಕಕೊಡಿʼ ಎಂದು ಹೇಳಿದವರು ಕಷ್ಟಕಾಲದಲ್ಲಿ ಶಿಕ್ಷಕರ ನೆರವಿಗೆ ಬರುವುದಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಅದು ತಪ್ಪು ಎಂದು ಗೊತ್ತಿರುವುದರಿಂದಲೇ ಅವರು ಯಾವುದೇ ಲಿಖಿತ ಆದೇಶವನ್ನು ನೀಡುವುದಿಲ್ಲ. ಹೋಗಲಿ ಈ ಬಗ್ಗೆ ಏನಾದರೂ ವಿಚಾರಣೆ ನಡೆದರೆ ʼಹೌದು ನಾನು ಹಾಗೆ ಮಾರ್ಗದರ್ಶನ ಮಾಡಿದ್ದು ನಿಜʼ ಎಂದು ಹೇಳುವ ಮೂಲಕ ಅವರ ಮಾತು ಕೇಳಿದ ಶಿಕ್ಷಕರ ಬೆನ್ನಿಗೆ ನಿಲ್ಲುವ ಎದೆಗಾರಿಕೆಯನ್ನಾದರೂ ಯಾವುದಾದರೂ ಅಧಿಕಾರಿ ತೋರಬಹುದೇ? ಖಂಡಿತಾ ಇಲ್ಲ. ಎಲ್ಲದನ್ನೂ ಶಿಕ್ಷಕರೇ ಅನುಭವಿಸಬೇಕು. ಈ ಬಗ್ಗೆ ಯಾರು ಎಷ್ಟೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡರೂ ಅವು ಕಷ್ಟಕಾಲದಲ್ಲಿ ಅವನ್ನು ಕಾಪಾಡುವ ಗ್ಯಾರಂಟಿ ಇರುವುದಿಲ್ಲ. ಶಿಕ್ಷಕರು ಒಂದು ತಪ್ಪು ಮಾಡಲು ಹೋಗಿ ಅದಕ್ಕೆ ನೂರು ತಪ್ಪುಗಳನ್ನು ಮಾಡಬೇಕಾಗುತ್ತದೆ. ಈಗಿನ ಡಿಜಿಟಲ್‌ ಯುಗದಲ್ಲಿ ಎಲ್ಲೆಲ್ಲೋ ಕಾಲಕಾಲಕ್ಕೆ ಸಾಕ್ಷಿಗಳು ದಾಖಲಾಗಿರುತ್ತವೆ. ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಬಹುದೇ ಹೊರತು ಶಾಸ್ವತವಾಗಿ ಅಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನೇರವಾಗಿ ಸ್ಪಷ್ಟವಾಗಿ ಇರುವುದೇ ಸರಿಯಾದ ಕ್ರಮ.

ಇನ್ನು ಎರಡನೆಯದು ವೃತ್ತಿ ನೈತಿಕತೆಗೆ ಸಂಬಂಧಿಸಿದ್ದು. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ʻವೃತಿನೈತಿಕತೆʼ ಎಂಬುದು ಇರುತ್ತದೆ.  ಅದರಲ್ಲಿಯೂ ಶಿಕ್ಷಕ ವೃತ್ತಿಯಂಥ ವೃತ್ತಿಗಳಲ್ಲಿ ಇದು ಅತ್ಯಂತ ಮಹತ್ವವನ್ನು ವಹಿಸುತ್ತದೆ. ಸಮಾಜದಲ್ಲಿ ಶಿಕ್ಷಕರ ಬೆಲೆ ಬಹಳ ಕಡಿಮೆ ಆಗಿದೆ ಎಂಬಂತಹ ಈ ಕಾಲದಲ್ಲಿಯೂ ನಮ್ಮ ಸಮಾಜದಲ್ಲಿ ʼಶಿಕ್ಷಕ ಎಂದರೆ ಕೇವಲ ಒಬ್ಬ ಸರ್ಕಾರಿ ನೌಕರ ಅಲ್ಲʼ ಎಂಬುದನ್ನು ನಮ್ಮ ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಅವರು ತಮ್ಮ ವೃತ್ತಿನೈತಿಕತೆಯನ್ನು ಹಾಳುಮಾಡಿಕೊಳ್ಳುವ ಯಾವುದೇ ಕಾರ್ಯಕ್ಕೆ ಕೈ ಹಾಕಬಾರದು. ಈ ಹಿನ್ನಲೆಯಲ್ಲಿ ತಮ್ಮ ಮೇಲಧಿಕಾರಿಗಳು ಹೀಗೆ ಕೆಟ್ಟ ಮಾರ್ಗದರ್ಶನ ಮಾಡಿದಾಗ ಅದನ್ನು ಅವರು ಕುರುಡಾಗಿ ಅನುಸರಿಸಬಾರದು. ಅಲ್ಲೆಲ್ಲ ತಮ್ಮ ವಿವೇಚನೆಯನ್ನು ಬಳಸಿ ಮುಂದೆ ಹೆಜ್ಜೆ ಇಡಬೇಕು. ನನ್ನ ಪ್ರಕಾರ ಯಾರೋ ಹೇಳಿದರು ಎಂದು ಅಂಕ ಕೊಡುವ ಒಬ್ಬ ವ್ಯಕ್ತಿ ತನಗೆ ಮೇಷ್ಟ್ರ ಕೆಲಸವನ್ನು ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡ ಒಬ್ಬ ಅಯೋಗ್ಯ ವ್ಯಕ್ತಿಯೇ ಆಗುತ್ತಾನೆ. ಇದು ಕೇವಲ ಆ ಶಿಕ್ಷಕನನ್ನು ಮಾತ್ರವಲ್ಲ ಇಡೀ ಶಿಕ್ಷಕ ಸಮುದಾಯವನ್ನು ಸಮಾಜ ಕೆಟ್ಟರೀತಿ ಕಾಣಲು ಕಾರಣವೂ ಆಗುತ್ತದೆ.

ಬಾಹ್ಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದೇನೋ. ನಾನು ಒಂದು ಸಲ ಪರೀಕ್ಷಾ ಮೌಲ್ಯಮಾಪನಕ್ಕೆ ಹೋಗಿದ್ದೆ. ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಮಾಡಿದರೂ ನನ್ನ ಮೌಲ್ಯಮಾಪನ ಮುಗಿಯುತ್ತಿರಲಿಲ್ಲ. ಇದರ ಮಧ್ಯೆ ನನಗೆ ಪರಿಚಯ ಇರುವ ಹಿಂದಿ ಶಿಕ್ಷಕಿಯೊಬ್ಬರು ದಿನಾ ಹನ್ನೊಂದು ಗಂಟೆಗೆ ಬಂದು ಮೂರು ಮೂರೂವರೆ ವೇಳೆಗೆ ಮೌಲ್ಯಮಾಪನ ಮುಗಿಸಿ ಹೊರಡುತ್ತಿದ್ದರು. ಎರಡು ದಿನ ಇದನ್ನು ನೋಡಿದ ನಾನು ಕುತೂಹಲ ತಾಳದೆ ಮೂರನೆ ದಿನ ಅವರು ಮನೆಗೆ ಹೊರಟ ಸಂದರ್ಭದಲ್ಲಿ ಮಾತನಾಡಿಸಿ, “ನೀವೇನು ಪೇಪರ್‌ ಓದಿ ವ್ಯಾಲುವೇಶನ್‌ ಮಾಡೋದಿಲ್ಲೇನೋ” ಎಂದು ಕೇಳಿಬಿಟ್ಟೆ. ನನ್ನ ಮಾತನ್ನು ಕೇಳಿದ ಅವರು, “ಪಡನೇಕಿ ಜರೂರತ್‌ ಕ್ಯಾ ಹೈ ರಾಬು ಜೀ? ಡಿಡಿಪಿಐ ಸಾಬ್‌ನೆ ಸಬ್‌ಕೊ ಪಾಸ್‌ ಕರ್ನೆಕೋ ಬೋಲಾ ಹೈ ನ?” ಎಂದು ನನ್ನ ಕಡೆ ಒಂದು ಮುಗಳು ನಗೆ ಬೀರಿ ಸ್ಕೂಟಿ ಸ್ಟಾರ್ಟ್‌ ಮಾಡಿದರು.

ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇನ್ನೊಂದು ಘಟನೆ ನಡೆಯಿತು. ನಾನು ಶಿಕ್ಷಕನಾದ ಮೇಲೆ ಒಂದು ಶಾಲೆಯಲ್ಲಿ ನನ್ನ ವಿಷಯದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ೧೨೫ಕ್ಕೆ ೧೨೩ ಅಂಕ ಬಂದಿತ್ತು. ಆಕೆ ಬಾಹ್ಯಪರೀಕ್ಷೆಯಲ್ಲಿ ನೂರಕ್ಕೆ ನೂರೂ ಅಂಕಗಳನ್ನು ಪಡೆದಿದ್ದಳು. ಆದರೆ ಶಾಲೆಯಲ್ಲಿ ಆಂತರಿಕ ಅಂಕಗಳು ಅವಳಿಗೆ ಇಪ್ಪತ್ತೈದಕ್ಕೆ ಇಪ್ಪತ್ತೈದು ಅಂಕಗಳು ಬಂದಿರಲಿಲ್ಲ. ಇಪ್ಪತ್ಮೂರು ಬಂದಿತ್ತು. ಇದನ್ನು ನೋಡಿದ ಅನೇಕ ನಮ್ಮ ಅನೇಕ ಸಹೋದ್ಯೋಗಿಗಳು, ನಮ್ಮ ಸರ್‌ ದೊಡ್ಡ ಮನಸ್ಸು ಮಾಡಿ ಪೂರ್ತಿ ಅಂಕಗಳನ್ನು ನೀಡಬಹುದಿತ್ತು. ಆ ಹುಡುಗಿಗೆ ಅನ್ಯಾಯ ಮಾಡಿದರುʼ ಎಂದೇ ಭಾವಿಸಿದರು. ನನ್ನ ವಿಷಯದಲ್ಲಿಯೇ ಶಾಲೆಯಲ್ಲಿ ಕೆಲವರು ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು ಪಡೆದದ್ದೂ ಇತ್ತು. ಅವರಲ್ಲಿ ಕೆಲವರಿಗೆ ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಡೆಯುವುದು ಸಾಧ್ಯವಾಗಿದ್ದರೆ ಕೆಲವರಿಗೆ ಸಾಧ್ಯವಾಗಿರಲಿಲ್ಲ.


ನಾನು ಆ ಮಗುವನ್ನೂ ಅದರ ಪಾಲಕರನ್ನೂ ಕರೆದು ಅವಳು ಇನ್ನೊಂದಿಷ್ಟು ಕಾಳಜಿ ವಹಿಸಿದ್ದರೆ ಶಾಲೆಯಲ್ಲಿ ಕೂಡ ಹೇಗೆ ಪೂರ್ತಿ ಅಂಕಗಳನ್ನು ಪಡೆಯಬಹುದಿತ್ತು ಎಂಬುದನ್ನು ತಿಳಿಹೇಳಿದೆ. ಇಪ್ಪತ್ತೈದು ಅಂಕ ಪಡೆದವರು ಹೇಗೆ ಪಡೆದರು ಮತ್ತು ಅಷ್ಟು ಅಂಕ ತನಗೇಕೆ ಬರಲಿಲ್ಲ ಎಂಬುದನ್ನು ಆ ಮಗು ಅರ್ಥಮಾಡಿಕೊಂಡಿತು. ಅವಳಿಗಾಗಲೀ ಅವಳ ಪಾಲಕರಿಗಾಗಲೀ ನಾನು ಮಾಡಿದ್ದು ತಪ್ಪು ಎನಿಸಲಿಲ್ಲ. ಅವರಿಗೆ ನನ್ನ ಬಗ್ಗೆ ಯಾವುದೇ ಬಗೆಯ ಕೆಟ್ಟಭಾವನೆ ಕೂಡ ಹುಟ್ಟಿ ಬೆಳೆಯಲಿಲ್ಲ. ಆದರೆ ನಮ್ಮಲ್ಲಿಯೇ ಕೆಲವು ಶಿಕ್ಷಕರು ಮಾತ್ರ ಇದನ್ನು ನಾನು ಮಗುವಿಗೆ ಮಾಡಿದ ಅನ್ಯಾಯ ಎಂದೇ ಭಾವಿಸಿದರು. ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವಂತೆ ಮಗು ಬರೆದಿರಬಹುದು. ಆದರೆ ಶಾಲೆಯಲ್ಲಿ ಇಪ್ಪತ್ತೈದಕ್ಕೆ ಇಪ್ಪತ್ತೈದು ಅಂಕ ಬರುವಂತೆ ಕೆಲಸ ಮಾಡಿರಲಿಕ್ಕಿಲ್ಲ ಎಂಬ ಸಣ್ಣ ತಿಳಿವಳಿಕೆಯೂ ಇಲ್ಲದ ಸೋಗಲಾಡಿಗಳು ಇವರಾಗಿದ್ದರು. ಜೊತೆಗೆ ಮಕ್ಕಳು ಕೆಲಸಮಾಡಿದರೇನು ಬಿಟ್ಟರೇನು ಅವರಿಗೆ ಪೂರ್ಣ ಅಂಕಗಳನ್ನು ನೀಡಿದದ ಗಣ್ಯವ್ಯಕ್ತಿಗಳೂ ಇದರಲ್ಲಿ ಇದ್ದರು.

ಯಾವುದೇ ಒಂದು ತರಗತಿಯಲ್ಲಿ ಒಂದೇ ಮಟ್ಟದ ಕಲಿಕೆಯ ಮಕ್ಕಳಿರುವುದಿಲ್ಲ ಎಂಬುದು ಶಿಕ್ಷಕರ ಕೆಲಸ ಮಾಡಿದ ಯಾರೇ ಆದರೂ ಒಪ್ಪಿಕೊಳ್ಳುವ ಸಂಗತಿ. ಹೀಗಿರುವಾಗ ಎಲ್ಲರಿಗೂ ಒಂದೇ ರೀತಿಯ ಅಂಕಗಳನ್ನು ಹೇಗೆ ಕೊಡಲು ಸಾಧ್ಯ? ಬಾಹ್ಯಪರೀಕ್ಷೆಯಲ್ಲಿ ಎಂಬತ್ತಕ್ಕೆ ಇಪ್ಪತ್ತು ಅಂಕಗಳನ್ನೂ ಪಡೆಯಲಾರದ ಒಂದು ಮಗುವಿಗೆ ಆಂತರಿಕವಾಗಿ ಇಪ್ಪತ್ತಕ್ಕೆ ಇಪ್ಪತ್ತು ಅಂಕಗಳನ್ನು ನೀಡಿದರೆ ಅದು ಏನನ್ನು ಸೂಚಿಸುತ್ತದೆ? ನಾಚಿಕೆ, ಮಾನ, ಮರ್ಯಾದೆ ಇರುವ ಯಾವುದಾದರೂ ಶಿಕ್ಷಕರು ಇದನ್ನು ಸಮರ್ಥಿಸಿಕೊಳ್ಳಬಹುದೇ?  ಇಂತಹ ಸಂದರ್ಭದಲ್ಲಿ ನಮ್ಮ ಅನೇಕ ಶಿಕ್ಷಕರು ʼಪಾಪ ಏನೋ ಸಹಾಯ ಮಾಡುವುದುʼ ಎಂಬ ಧೋರಣೆ ತಾಳುತ್ತಾರೆ. ನನಗೊಬ್ಬ ಶಿಕ್ಷಕಿ ಒಂದು ಸಲ ಹೀಗೆ ಮಾತನಾಡುತ್ತಾ, ʼರಾಬು ಸರ್‌, ಮಕ್ಕಳಿಗೆ ನಾವು ಇನ್ನೇನು ಸಹಾಯ ಮಾಡ್ಲಿಕ್ಕೆ ಆಗುತ್ತೆ ಹೇಳಿ? ಏನೋ ಒಂದಿಷ್ಟು ಮಾರ್ಕ್ಸು ಕೊಡೋದಪ. ನಾವೇನು ಅವನ್ನು ದುಡ್ಡು ಕೊಟ್ಟು ತರ್ತೀವಾ? ಎಂದು ಪ್ರೀತಿಯಿಂದಲೇ ಛೇಡಿಸಿದ್ದಿದೆ.

ಇಂತಹ ಶಿಕ್ಷಕರು ನಮ್ಮಲ್ಲಿ ಬಹಳ ಜನ ಇದ್ದಾರೆ. ಇವರು ಶಿಕ್ಷಕರ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವವರು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮುಖ್ಯವಾಗಿ ಮೂರು ರೀತಿಯ ಪಾತ್ರಗಳನ್ನು ವಹಿಸಬೇಕಾಗುತ್ತದೆ. ಅವರು ಪಾಠಮಾಡುವಾಗ ತಾಯಿಯಾಗಿರಬೇಕು. ಪರೀಕ್ಷೆ ಮಾಡುವಾಗ ಸಬ್‌ ಇನ್ಸ್ ಪೆಕ್ಟರ್‌ ಆಗಿರಬೇಕು. ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶ ಆಗಿರಬೇಕು. ಅದರೆ ನಮ್ಮಲ್ಲಿ ಅನೇಕರದ್ದು ಉಲ್ಟಾ ಕೇಸು. ಅವರು ಪಾಠಮಾಡುವಾಗ ಸಬ್‌ ಇನ್ಸ್ ಪೆಕ್ಟರ್‌ ಆಗಿರುತ್ತಾರೆ. ಪರೀಕ್ಷೆ ಮಾಡುವಾಗ ತಾಯಿಯಾಗಿಬಿಡುತ್ತಾರೆ! ಮೌಲ್ಯಮಾಪನದ ಬಗ್ಗೆ ಕೇಳಬೇಡಿ. ಏಕೆಂದರೆ ಅವರು ಅಲ್ಲಿ ʻತಳ್ಳುಸೇವಕʼರಾಗಿ ಕೆಲಸಮಾಡುತ್ತಿರುತ್ತಾರೆ!!

ಒಂದು ತರಗತಿಯಲ್ಲಿ ಎಲ್ಲರಿಗೂ ಹೆಚ್ಚು ಅಂಕಗಳನ್ನು ಅಥವಾ ಪೂರ್ಣ ಅಂಕಗಳನ್ನು ಕೊಡುವುದರಿಂದ ಯಾರಿಗೂ ಅನ್ಯಾಯ ಮಾಡಿದಂತೆ ಆಗುವುದಿಲ್ಲವಲ್ಲ ಎಂಬುದು ಕೆಲವು ಶಿಕ್ಷಕರ ವಾದ. ಆದರೆ ಅದು ಸರಿಯಲ್ಲ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ನಾವು ಕೆಲವರಿಗೆ ಮಾಡುವ ʼಸಹಾಯʼವು ಪರೋಕ್ಷವಾಗಿ ಬೇರೆ ಯಾರಿಗೋ ಮಾಡುವ ʼಅನ್ಯಾಯʼವೇ ಆಗಿರುತ್ತದೆ. ಸಹಾಯ ಮಾಡಿದ ಪುಣ್ಯ ನಮಗೆ ಬರುತ್ತದೆ ಎಂದು ಭಾವಿಸುವಾಗಲೇ ಆಕಡೆ ಉಂಟಾದ ಅನ್ಯಾಯದ ಪಾಪ ತುಸು ಹೆಚ್ಚಾಗಿಯೇ ನಮಗೆ ಅಂಟಿಕೊಳ್ಳಬಹುದು. ಒಂದು ತರಗತಿಯಲ್ಲಿ ಕಷ್ಟಪಟ್ಟು ಶ್ರದ್ಧೆಯಿಂದ ಓದುವ ಒಂದು ಪ್ರತಿಭಾವಂತ ಮಗುವಿಗೂ, ಯಾವುದೇ ಯೋಜನಾ ಕಾರ್ಯವನ್ನು ಮಾಡದ, ಏನನ್ನೂ ಒದಿ ಬರೆದು ಮಾಡದ, ಶಿಕ್ಷಕರ ಯಾವ ಮಾತಿಗೂ ಸ್ಪಂದಿಸದೇ ಅಡ್ಡ ಉದ್ದ ಸೆಟೆಯುವ ಒಂದು ಮಗುವಿಗೂ ಒಬ್ಬ ಶಿಕ್ಷಕ ಸಮಾನ ಅಂಕಗಳನ್ನು (ಆ ಅಂಕಗಳು ಎಷ್ಟಾದರೂ ಇರಲಿ) ನೀಡಿದರೆ ಅದು ಹೇಗೆ ನ್ಯಾಯ ಆಗುತ್ತದೆ? ಇದರಿಂದ ಪ್ರತಿಭಾವಂತ ಮಗುವಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ನಾನೇಕ ಇಷ್ಟು ಕಷ್ಟಪಟ್ಟು ಓದಿ ಶಿಕ್ಷಕರು ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಿತ್ತು? ಎಂದು ಆ ಮಗುವಿಗೆ ಅನ್ನಿಸುವುದಿಲ್ಲವೇ?

ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರು ತಮ್ಮಲ್ಲಿರುವ ಇಪ್ಪತ್ತು ಅಂಕಗಳಲ್ಲಿ 18,19,20 ಈ ಮೂರನ್ನು ಮಾತ್ರ ಬಳಸುತ್ತಿದ್ದರು. ಅದರ ಕೆಳಗೆ ಸಂಖ್ಯೆಗಳಿವೆ ಎಂಬುದನ್ನೂ ಅವರು ಮರೆತಂತಿತ್ತು. ಈ ಅಂಕಗಳನ್ನು ಕೊಡುವಾಗ ಅವರು ತಮ್ಮದೇ ಅದ ಒಂದು ತತ್ವವನ್ನು ಇಟ್ಟುಕೊಂಡಿದ್ದರು. ದಿನವೂ ಶಾಲೆಗೆ ತಪ್ಪದೇ ಬಂದು ಶಿಕ್ಷಕರು ಹೇಳಿದ ಎಲ್ಲ ಬರೆವಣಿಗೆ ಮಾಡಿ ಕೊಡುವವರಿಗೆ ಇಪ್ಪತ್ತು, ಆಗೊಮ್ಮ ಈಗೊಮ್ಮೆ ಬರುವವರಿಗೆ ಹತ್ತೊಂಬತ್ತು ಮತ್ತು ಎಂದೂ ಶಾಲೆಗೆ ಬರದೇ ಇರುವರಿಗೆ ಹದಿನೆಂಟು ಕೊಡುತ್ತಿದ್ದರು. ಈ ಅಂಕಗಳ ನಡುವೆ ಬಹಳಷ್ಟು ಅಂತರವಿಲ್ಲದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಹದಿನೆಂಟು ಪಡೆಯುವುದನ್ನೇ ಆಯ್ದುಕೊಳ್ಳುತ್ತಿದ್ದರು! ಏಕೆಂದರೆ, “ನೀನು ಕೆಲಸಮಾಡಿದರೆ ಇಪ್ಪತ್ತು ಸಾವಿರ ಕೊಡುತ್ತೇನೆ. ಕೆಲಸ ಮಾಡದಿದ್ದರೆ ಹತ್ತು ಸಾವಿರ ಕೊಡುತ್ತೇನೆ” ಎಂದು ನಮಗೆ ಯಾರಾದರೂ ಆಯ್ಕೆ ನೀಡಿದರೆ ನಮ್ಮಲ್ಲಿ ಬಹುತೇಕರ ಆಯ್ಕೆಯು ಹತ್ತು ಸಾವಿರವೇ ಆಗಿರುತ್ತದೆ ಅಲ್ಲವೇ?

ಶಿಕ್ಷಕರ ಈ ಬಗೆಯ ಕೆಟ್ಟ ಮತ್ತು ಬೇಜವಾಬ್ದಾರಿಯ ವರ್ತನೆಯು ಮಕ್ಕಳ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಕರ ಮೇಲಿನ ಗೌರವ ಕಡಿಮೆ ಮಾಡುವುದು, ಅವರ ಬಗ್ಗೆ ದ್ವೇಷ ಬೆಳೆಸುವುದು, ಕಷ್ಟಪಟ್ಟು ಕೆಲಸ ಮಾಡುವುದನ್ನು ಕೈಬಿಡುವುದು ಹೀಗೆ. ನನ್ನದೇ ಒಂದು ಉದಾಹರಣೆಯನ್ನು ಕೊಡುವುದಾದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆಯುವಾಗ ಒಂದು ಘಟನೆ ನಡೆಯಿತು. ಆಗ ನನಗೆ ಪುಟ್ಟಮ್ಮ ಎಂಬ ಹೆಸರಿನ ಗೆಳತಿಯೊಬ್ಬಳು ಇದ್ದಳು. ನಾವಿಬ್ಬರೂ ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿ ಬೆಳೆದವರು. ನಮ್ಮಿಬ್ಬರ ಮನೆಗಳಲ್ಲೂ ಕರೆಂಟ್‌ ಇರಲಿಲ್ಲ. ಹೊಗೆ ಉಗುಳುವ ಚಿಮಣಿಬುಡ್ಡಿ ದೀಪದಲ್ಲಿ ನಾವು ಓದುತ್ತಿದ್ದೆವು. ದೀಪದ ಕರಕಲು ಹೊಗೆಯಿಂದಾಗಿ ನಮ್ಮ ಮೂಗಿನ ಹೊರಳೆಗಳು ಮತ್ತು ಕಣ್ಣ ರೆಪ್ಪೆಯ ತುಂಬೆಲ್ಲ ದೀಪದ ಕರಿ ತುಂಬಿರುತ್ತಿತ್ತು.

ನಾವು ರಾತ್ರಿ ಇಡೀ ಓದಿಕೊಂಡು ತರಗತಿಗೆ ಮೊದಲು ಬರಬೇಕು ಎಂಬ ಹುಮ್ಮಸ್ಸಿನೊಂದಿಗೆ ಬೆಳಿಗ್ಗೆ ಪರೀಕ್ಷೆಗೆ ಹೋಗುತ್ತಿದ್ದೆವು. ಆದರೆ ಆ ಪರೀಕ್ಷಾ ಕೇಂದ್ರದಲ್ಲಿ ಒಂದು ಕೆಟ್ಟ ಪದ್ಧತಿ ಇದ್ದದ್ದು ನಮ್ಮ ಗಮನಕ್ಕೆ ಬಂದಿತು. ಮಕ್ಕಳು ಪಾಸಾಗಲು ಬೇಕಾಗುವಷ್ಟು ಅಂಕಗಳು ಬರುವಂತೆ ಪರೀಕ್ಷಾ ಕೊಠಡಿಗೆ ಬಂದು ವಸ್ತುನಿಷ್ಠಮಾದರಿ ಪ್ರಶ್ನೆಗಳಿಗೆ ಉತ್ತರವನ್ನು ಹೇಳಿಕೊಡುತ್ತಿದ್ದರು. ಮೊದಲ ದಿನ ಹೀಗೆ ಬಂದು ಹೇಳಿಕೊಟ್ಟಾಗ ನನಗೆ ಬಹಳ ದುಃಖವಾಯಿತು. ನಾನು ರಾತ್ರಿ ಇಡೀ ಓದಿದ್ದೇ ವೇಸ್ಟು ಎನ್ನಿಸಿತು. ಏಕೆಂದರೆ ಏನೂ ಓದದೇ ಬಂದವರೂ ಸರಾಗವಾಗಿ ಅಂಕ ತೆಗೆದುಕೊಳ್ಳುವಂತೆ ಆಯಿತು.  ಅಂದಿನ ಪರೀಕ್ಷೆ ಮುಗಿದ ಮೇಲೆ ನನ್ನ ಹತ್ತರ ಓಡಿ ಬಂದ ʻಪುಟ್ಟಿʼ ಅಳುತ್ತಾ ಈ ಬಗ್ಗೆ ತನ್ನ ನೋವನ್ನು ಹೇಳಿಕೊಂಡಳು.

ನಾವು ಏನು ತಾನೇ ಮಾಡುವ ಸ್ಥಿತಿಯಲ್ಲಿದ್ದೆವು? ಬಡವರ ಮಕ್ಕಳು. ಬಡವರ ಕೋಪ ದವಡೆಗೆ ಮೂಲ ಎಂಬ ಮಾತು ಬೇರೆ ಇದೆ.  ಆದರೂ ಮನಸ್ಸು ತಡೆಯಲಿಲ್ಲ. ಏನೂ ಓದದೇ ಇರುವವರು ನಮ್ಮ ಸರಿಸಮ ಅಂಕಗಳನ್ನು ಪಡೆಯುವುದನ್ನು ಒಪ್ಪಿಕೊಳ್ಳಲು ನಾವು ತಯಾರಿರಲಿಲ್ಲ. ನಾನು ಅವಳಿಗೆ ಧೈರ್ಯ ತುಂಬುತ್ತಾ ಮರುದಿನ ಉತ್ತರ ಹೇಳಿಕೊಡಲು ಬರುವವರನ್ನು ವಾಪಸ್ಸು ಕಳಿಸುವ ಧೈರ್ಯ ಮಾಡಿದೆವು. ಒಂಬತ್ತನೆ ರೂಮಿನಲ್ಲಿ ಅವಳಿದ್ದಳು. ಹನ್ನೆರಡನೆಯ ರೂಮಿನಲ್ಲಿ ನಾನಿದ್ದೆ. ಉತ್ತರ ಹೇಳಿಕೊಡಲು ಬರುವ ʻಲೋಫರ್‌ʼಗಳಿಗೆ ಎದ್ದುನಿಂತು ಪ್ರತಿರೋಧ ವ್ಯಕ್ತಪಡಿಸಬೇಕೆಂದು ಮಾತನಾಡಿಕೊಂಡೆವು. ಆರಂಭದಲ್ಲಿ ಹಾಗೆ ಮಾಡಲು ಅವಳು ಹೆದರಿದಳಾದರೂ ನಾನು ಕೊಟ್ಟ ಧೈರ್ಯದಿಂದ ಅದನ್ನು ಮಾಡಲು ಮುಂದಾದಳು.

ಮರುದಿನ ಹೀಗೆ ಹೇಳಿಕೊಡಲು ನಾನು ನಿರೀಕ್ಷಿಸಿದಂತೆ ನನ್ನ ಕೊಠಡಿಗೆ ಒಬ್ಬ ಬಂದ. ಕೂಡಲೆ ಎದ್ದುನಿಂತು ನಾನು ಆಗಲೇ ಬಾಯಿಪಾಟ ಮಾಡಿಕೊಂಡಂತೆ, ʼಸರ್‌, ನಾವು ಕಷ್ಟಪಟ್ಟು ಇಡೀ ರಾತ್ರಿ ಓದಿಕೊಂಡು ಬಂದಿದ್ದೇವೆ. ದಯವಿಟ್ಟು ನೀವು ಹೀಗೆ ಉತ್ತರ ಹೇಳಿಕೊಡಬೇಡಿ. ನಮಗೆ ಅನ್ಯಾಯ ಅಗುತ್ತದೆʼ ಎಂದು ಒಂದೇ ಉಸುರಿಗೆ ಹೇಳಿಬಿಟ್ಟೆ. ಹಾಗೆ ಬಂದ ವ್ಯಕ್ತಿ ಇಂಗು ತಿಂದ ಮಂಗನಂತೆ ಸುತ್ತಲೂ ನೋಡಿ ಅಲ್ಲಿಂದ ತಕ್ಷಣ ಕಾಲ್ಕಿತ್ತ. ಪರೀಕ್ಷೆ ಮುಗಿದ ಮೇಲೆ ಹೊರಬಂದ ಪುಟ್ಟಿಯ ಮುಖದ ಮೇಲಿನ ಗೆಲುವಿನ ನಗು ನೋಡಿಯೇ ನನಗೆ ಅರ್ಥವಾಯಿತು ಅವಳೂ ತನ್ನ ರೂಮಿನಲ್ಲಿ ಅದನ್ನೇ ಮಾಡಿದ್ದಾಳೆ ಎಂದು. ಹಿಂದಿನ ದಿನದ ಅವಳ ಬಾಡಿದ ಮುಖವನ್ನು ನೋಡಿ ಕಂದಿಹೋಗಿದ್ದ ನನ್ನ ಮನಸ್ಸು ಅಂದಿನ ಅವಳ ನಗುಮುಖ ನೋಡಿ ಹಗುರಾಯಿತು ಮಾತ್ರವಲ್ಲ ಅವತ್ತು ಹಾಗೆ ಹೇಳಿಕೊಡಲು ಬಂದ ಶಿಕ್ಷಕರಿಗೆ ಬಳಸಿದ ʼಲೋಫರ್‌ʼ ಪದಕ್ಕೆ ಇವತ್ತಿಗೂ ನನಗೆ ಹಾಗೆ ಅನ್ನಬಾರದಿತ್ತು ಅನ್ನಿಸುತ್ತಿಲ್ಲ.

ಈಗ ಶಿಕ್ಷಕರು ನೀಡುವ ಆಂತರಿಕ ಅಂಕಗಳು ಕೂಡ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ನಮೂದಾಗಿ ಸಾರ್ವಜನಿಕಗೊಳ್ಳುತ್ತವೆ. ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಅಕ್ಕಪಕ್ಕ ಓದುವ ಮಕ್ಕಳು ಓದಿದವರು ಓದದೇ ಇರುವವರು, ಶಾಲೆಗೆ ಬರುವವರು, ಬರದೇ ಇರುವವರು ಎಲ್ಲರಿಗೂ ಒಂದೇ ರೀತಿಯ ಅಂಕ ನೀಡಿದ್ದನ್ನು ನೋಡಿದರೆ ಓದಿದ ಮಕ್ಕಳು ಶಿಕ್ಷಕರ ಬಗ್ಗೆ ಯಾವ ಭಾವನೆಯನ್ನು ತಾಳುತ್ತಾರೆ? ವರ್ಷಪೂರ್ತಿ ಶಾಲೆಗೆ ಬರದೆ ಊರಲ್ಲಿ ತಿರುಗಾಡುವ ಹುಡುಗನೊಬ್ಬನಿಗೆ ಹೀಗೆ ಅಂಕಕೊಟ್ಟಾಗ ಆ ಹುಡುಗ ತನ್ನ ಹಿಂದಿನ ತರಗತಿಯ ಹುಡುಗರಿಗೆ, ʼಏಯ್‌ ಸುಮ್ನೆ ಯಾತಕ್ಕೆ ಕಷ್ಟಪಟ್ಟು ಪ್ರಾಜೆಕ್ಟ್‌ ಮಾಡ್ತೀರಾ? ನಾನೇನು ಮಾಡಿರ್ಲಿಲ್ಲ ನನಗೆ ಇಪ್ಪತ್ತು ಮಾರ್ಕ್ಸ್‌ ಕೊಟ್ಟಿದಾರೆ.. ನೀವು ಮಾಡಿದ್ರೇನು ಬಿಟ್ರೇನು ಅವ್ರು ಕೊಟ್ಟೇ ಕೊಡ್ತಾರೆ” ಎಂದು ಹೇಳಿ ಹಾದಿತಪ್ಪಿಸುತ್ತಿದ್ದನ್ನು ನಾನೇ ಕಣ್ಣಾರೆ ಕಂಡದ್ದಿದೆ.  ಶಾಲೆಯಲ್ಲಿ ಮಕ್ಕಳಿಗೆ ಸಲುಗೆ ಸಿಗಬಾರದು ಎಂದು ಆ ಶಾಲೆಯಲ್ಲಿ ಶಿಕ್ಷಕರು ʻನಾನು ಸುಮ್ಮಸುಮ್ಮನೆ ಮಾರ್ಕ್ಸು ಕೊಡಲ್ಲ. ಕೆಲಸ ಮಾಡಿದವರಿಗೆ ಅಷ್ಟೇ ಕೊಡೋದು ಎಂದು ಹೇಳುತ್ತಿದ್ದರು. ಆದರೆ ವರ್ಷದ ಕೊನೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳದೇ ಎಲ್ಲರಿಗೂ ʻದೇವರ ಅಂಕಿʼ ನೀಡುತ್ತಿದ್ದರು. ಹಾಗೆ ಮಾಡಲು ಅವರ ಮೇಲೆ ಯಾರದ್ದಾದರೂ ಒತ್ತಡ ಇದ್ದೀತು. ಆದರೆ ಈ ವರ್ತನೆಯಿಂದ ಆ ಶಿಕ್ಷಕರು ʻಸುಳ್ಳುಹೇಳುವವರುʼ ಎಂಬ ಸತ್ಯ ಮಾತ್ರ ಮಕ್ಕಳಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿತು. ಶಿಕ್ಷಕರಿಗೆ ಇದೆಲ್ಲ ಬೇಕೆ?

ನಮ್ಮ ಶಿಕ್ಷಕರು ತಮ್ಮ ಮೇಲೆ ಯಾವುದೇ ರೀತಿಯ ಎಷ್ಟೇ ಒತ್ತಡವಿದ್ದರೂ ತಮ್ಮ ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಳ್ಳುವ ಕೆಲಸಕ್ಕೆ ಕೈಹಾಕಬಾರದು. ಬಹುತೇಕ ಶಿಕ್ಷಕರು ಅಧಿಕಾರಿಗಳಿಂದ ಹೊಗಳಿಸಿಕೊಳ್ಳುವುದು ಅದಾಗದಿದ್ದರೆ ಕನಿಷ್ಠಪಕ್ಷ ಅವರ ಕಿರಿಕಿರಿ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನೇ ಚಿಂತಿಸುತ್ತಿರುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಅವರು ಚಿಂತಿಸಬೇಕಾಗಿರುವ ಅಂಶವೆಂದರೆ ನಾವು ನಮ್ಮ ಮತ್ತು ನಮ್ಮ ವೃತ್ತಿಯ ಮಾನ ಮರ್ಯಾದೆಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಯಾರಿಗೂ ತಲೆತಗ್ಗಿಸದೆ ತಲೆಯೆತ್ತಿ ಬದುಕುವುದು ಹೇಗೆ ಎಂಬುದು. ನನ್ನ ಪ್ರಕಾರ ಅಧಿಕಾರಿಗಳ ಕಿರಿಕಿರಿ ಅನುಭವಿಸುವುದು, ವಿದ್ಯಾರ್ಥಿಗಳು ಪಾಲಕ ಪೋಷಕರೆದುರು ಮರ್ಯಾದೆ ತಲ್ಲದಂತಾಗುವುದು ಇವೆರಡಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಆಯ್ಕೆ ಅವರ ಮುಂದೆ ಬಂದಾಗ ಅವರು ಮೊದಲನೆಯದನ್ನೇ ಆಯ್ದುಕೊಳ್ಳಬೇಕು; ಅದು ಎಷ್ಟೇ ಕಷ್ಟವಾದರೂ ಸರಿ!

ʻThink globally Act Locallý ಎಂಬುದು ಇಂದು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬೇಕಾದ ಒಂದು ಬಹುಮುಖ್ಯ ತತ್ವ. ಒಬ್ಬ ಶಿಕ್ಷಕ ತಾನು ಕೆಲಸ ಮಾಡುವುದು ಯಾವುದೋ ಒಂದು ಹಳ್ಳಿಯ ಒಂದು ಚಿಕ್ಕಶಾಲೆಯ ಚಿಕ್ಕ ತರಗತಿ ಇರಬಹುದು. ಅವನ ಕಾರ್ಯವ್ಯಾಪ್ತಿ ಅಷ್ಟು ಸಣ್ಣದಿರಬಹುದು. ಆದರೆ ಅವನ ಆಲೋಚನೆ ಮಾತ್ರ ವಿಶ್ವಮಟ್ಟದಲ್ಲಿ ಇರಬೇಕು. ಇಲ್ಲಿ ನನ್ನ ತರಗತಿಯಲ್ಲಿ ನನ್ನ ಎದುರು ಇರುವ ಮಕ್ಕಳು ಮಾತ್ರ ನನ್ನ ವಿದ್ಯಾರ್ಥಿಗಳಲ್ಲ; ಬದಲಾಗಿ ಈ ಜಗತ್ತಿನ ಯಾವುದೇ ಮೂಲೆಯಲ್ಲಿ ಕಲಿಯುತ್ತಿರುವ ಮಗುವೂ ನನ್ನ ವಿದ್ಯಾರ್ಥಿಯೇ ಎಂಬ ವಿಶಾಲ ಭಾವ ಅವರಲ್ಲಿ ಬೆಳೆಯಬೇಕು. ಆವಾಗ ನನ್ನ ವಿಷಯವೇ ಮೊದಲು ಬರಬೇಕು. ನಮ್ಮ ಶಾಲೆಯೇ ಮೇಲೆ ಬರಬೇಕು ಎಂಬ ಕ್ಷುಲ್ಲಕ ಮನಸ್ಥಿತಿಯಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತದೆ. ಅವರು ಆ ಹಂತಕ್ಕೆ ಬಂದಾಗ ಪಾಸಾಗಬೇಕಾದ ಒಬ್ಬ ಮಗುವು ಫೇಲ್‌ ಆದಾಗ ಹೇಗೆ ಮನಸ್ಸಿಗೆ ನೋವಾಗುತ್ತದೆಯೋ ಹಾಗೆಯೇ ಅರ್ಹತೆಯಿಲ್ಲದ ಮಗುವೊಂದು ಅಪ್ರಮಾಣಿಕವಾಗಿ ಪಾಸ್‌ ಆದಾಗಲೂ ಅವರ ಮನಸ್ಸಿಗೆ ನೋವಾಗುತ್ತದೆ. ಮಾತ್ರವಲ್ಲ ಅರ್ಹತೆ ಮೀರಿ ತಮ್ಮ ಶಾಲೆಗೆ ಉತ್ತಮ ಫಲಿತಾಂಶ ಬಂದಾಗ ಸಿಹಿಹಂಚಿ ಸಂಭ್ರಮಿಸಲು ಅವರಿಗೆ ಮುಜುಗರ ನಾಚಿಕೆ ಆಗುತ್ತದೆ. ಅದಕ್ಕಾಗಿ ತೊಡಿಸುವ ಸಾಧನೆಯಕಿರೀಟ ಮುಳ್ಳಿನ ಕಿರೀಟವಾಗಿ ತಲೆಯನ್ನು ಚುಚ್ಚುತ್ತದೆ. ಆಗ ಶಿಕ್ಷಣದ ಪಥವೇ ಬದಲಾಗುತ್ತದೆ. ಆಗ ಮಾತ್ರ ನೆಲ್ಸನ್‌ ಮಂಡೇಲಾ ಹೇಳಿದಂತೆ ಶಿಕ್ಷಣವು ಸಮಾಜ ಪರಿವರ್ತನೆಯ ಪ್ರಬಲ ಆಯುಧವಾಗಿ ಕೆಲಸ ಮಾಡುತ್ತದೆ.

*****

ಡಾ ರಾಜೇಂದ್ರ ಬುರಡಿಕಟ್ಟಿ

18-01-2026

ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದಾಗಿದೆ:

ಅಂಕವ್ಯಸನದ ಅವಾಂತರಗಳು.. (ಭಾಗ-೧)

https://buradikatti.blogspot.com/2026/02/blog-post.html

ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?

https://buradikatti.blogspot.com/2025/07/blog-post.html

ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು

https://buradikatti.blogspot.com/2024/11/blog-post_17.html

ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?

https://buradikatti.blogspot.com/2025/08/blog-post.html

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

https://buradikatti.blogspot.com/2024/11/blog-post.html

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ರಜೆ

https://buradikatti.blogspot.com/2025/06/blog-post_5.html

ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು

https://buradikatti.blogspot.com/2024/05/blog-post_31.html

ಎಸ್.ಎಸ್.ಎಲ್.ಸಿ ಫಲಿತಾಂಶಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

https://buradikatti.blogspot.com/2022/05/blog-post.html

ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:

https://buradikatti.blogspot.com/2020/07/blog-post.html

ʻಅರಮನೆʼ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ

https://buradikatti.blogspot.com/2020/07/blog-post_14.html