Sunday, January 18, 2026

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು!

 

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು!          

·         ಡಾ. ರಾಜೇಂದ್ರ ಬುರಡಿಕಟ್ಟಿ 

ತಾಯ ಮೊಲೆವಾಲು ನಂಜಾಗಿ ಕೊಲುವೊಡೆ

ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ?

ಇವು ಬಸವಣ್ಣನವರ ವಚನವೊಂದರಲ್ಲಿ ಬರುವ ಎರಡು ಧ್ವನಿಪೂರ್ಣ ಸಾಲುಗಳು. ರಾಜ್ಯದಲ್ಲಿ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಒಂದು ಕೆಟ್ಟಬೆಳವಣಿಗೆಯನ್ನು ಗಮನಿಸುವಾಗ ಈ ಸಾಲುಗಳು ನೆನಪಾದವು. ಈ ಕೆಟ್ಟ ಬೆಳವಣಿಗೆ ಏನೆಂದರೆ ಎಸ್.‌ಎಸ್.‌ಎಲ್.ಸಿ ಮಕ್ಕಳಿಗೆ ನಿಗಧಿಯಾಗಿರುವ ಆಂತರಿಕ ಅಂಕಗಳನ್ನು ಶಿಕ್ಷಕರು ಪೂರ್ಣಪ್ರಮಾಣದಲ್ಲಿ ನೀಡಬೇಕು ಎಂದು ವಿವಿಧ ಹಂತದ ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ತರುತ್ತಿರುವುದು. ಈ ಬಗ್ಗೆ ಅನೇಕ ಕಡೆ ಮುಖ್ಯಶಿಕ್ಷಕರ ಸಭೆ ನಡೆಸಿರುವ ಅಧಿಕಾರಿಗಳು ಈ ಬಗ್ಗೆ ಅವರಿಗೆ ಮೌಖಿಕ ಸೂಚನೆಗಳನ್ನು ನೀಡಿರುವುದೂ ನಡೆದಿದೆಯಂತೆ. ಒಂದು ವೇಳೆ ಇದು ʻಹೌದುʼ ಎನ್ನುವುದಾದರೆ ʼಶಿಕ್ಷಕರ ಘನತೆ ಗೌರವಗಳನ್ನು ಮಣ್ಣುಪಾಲು ಮಾಡುವ ಈ ನಡೆ ಒಂದು ಕೆಟ್ಟ ನಡೆಯಲ್ಲದೇ ಬೇರೇನೂ ಅಲ್ಲ. ಶಿಕ್ಷಕರ ಸಂಘದ ಶಾಖೆಗಳು ಎಲ್ಲ ಹಂತದಲ್ಲಿ ಇದ್ದರೂ ಅವು ಈ ವಿಷಯವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇದು  ನಮ್ಮ ಶಿಕ್ಷಕರ ಹಕ್ಕನ್ನು ಕಸಿಯುವ ಅಥವಾ ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿ ಎಂದು ಅವಕ್ಕೆ ಅನ್ನಿಸಿ “ಮಕ್ಕಳಿಗೆ ಅಂಕನೀಡುವುದು ಶಿಕ್ಷಕರ ವಿವೇಚನೆಗೆ ಸಂಬಂಧಿಸಿದ್ದು; ಅದರಲ್ಲಿ ನೀವು ಹಸ್ತಕ್ಷೇಪ ಮಾಡುವುದು ಸರಿಯಲ್ಲ; ಅದನ್ನು ಮಾಡಬೇಡಿ” ಎಂದು ಈ ಸಂಘಗಳು ಶಿಕ್ಷಕರ ಸ್ವಾಭಿಮಾನವನ್ನು ಕಾಯುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದು ಎಲ್ಲಿಯೂ ಆದಂತೆ ಕಾಣುತ್ತಿಲ್ಲ. 

ಈಗಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ಎಸ್‌ ಎಸ್‌ ಎಲ್‌ ಸಿ ಮಗುವೊಂದು ಪ್ರಥಮ ಭಾಷೆಗೆ ಇಪ್ಪತ್ತೈದು, ಉಳಿದ ವಿಷಯಗಳಿಗೆ ಇಪ್ಪತ್ತರಂತೆ ಶಾಲೆಯ ವಿಷಯ ಬೋಧಕರಿಂದ ಅಂಕಪಡೆಯಬೇಕಾಗಿದೆ. ಈ ಅಂಕಗಳನ್ನು ಶಿಕ್ಷಕರು ಶಾಲೆಯಲ್ಲಿ ನಡೆಸುವ ಕಿರುಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವುದು, ಅವರು ನೀಡುವ ಯೋಜನಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆ ಬಗ್ಗೆ ವರದಿ ಸಲ್ಲಿಸುವುದು ಇತ್ಯಾದಿ ಮಾಡುವ ಮೂಲಕ ಆ ಮಗು ಪಡೆಯುಬೇಕಾಗಿದೆ.  ಶಿಕ್ಷಕರು ಈ ಅಂಕಗಳನ್ನು ನೀಡುವಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳೂ ನಿಯಮಗಳೂ ಇವೆ. ವ್ಯವಸ್ಥೆ ಹೀಗಿರುವಾಗ ತಮ್ಮ ಅಧಿಕಾರದ ಬಲದಿಂದ ವ್ಯಾಪ್ತಿಯನ್ನು ಮೀರಿ ಯಾವುದೇ ಹಂತದ ಅಧಿಕಾರಿಗಳು ಈ ರೀತಿ ಸೂಚನೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚರ್ಚಾಸ್ಪದವಾದದ್ದು.

ಈ ಸೂಚನೆ ಸಂಬಂಧವೋ ಏನೋ ಮೊನ್ನೆ ಶಿಕ್ಷಕರೊಬ್ಬರು ಪ್ರಶ್ನೆಯೊಂದನ್ನು ಕಳಿಸಿ ಸಲಹೆ ಕೇಳಿದ್ದಾರೆ. ಎಸ್.‌ಎಸ್.‌ಎಲ್.ಸಿ ಕನ್ನಡ ಬೋಧನೆ ಮಾಡುತ್ತಿರುವ ಅವರಿಗೆ, ಮಕ್ಕಳಿಗೆ ಎಲ್ಲರಿಗೂ ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು ನೀಡಿ ಎಂದು ಅವರ ಮುಖ್ಯೋಪಾಧ್ಯಾಯರು ಸಭೆಕರೆದು ಹೇಳಿದರಂತೆ. ಉಳಿದ ವಿಷಯ ಶಿಕ್ಷಕರೂ ಇಪ್ಪತ್ತಕ್ಕೆ ಇಪ್ಪತ್ತು ಅಂಕ ನೀಡಬೇಕು ಎಂಬುದು ಅವರ ಸೂಚನೆ. ʻಈ ಸೂಚನೆಯನ್ನು ನಾನೇ ನೀಡುತ್ತಿಲ್ಲ ನನಗೆ ಮೇಲಿನವರು ನೀಡಿದ್ದಾರೆ. ನಮ್ಮ ಜಿಲ್ಲೆಯ ಫಲಿತಾಂಶ ರಾಜ್ಯದ ಜಿಲ್ಲೆಗಳ ಫಲಿತಾಂಶದ ಪಟ್ಟಿಯಲ್ಲಿ ಮೇಲೆ ಬರಬೇಕಂತೆ. ಅದಕ್ಕೆ ಎಲ್ಲರೂ ಸಹಕರಿಸಬೇಕಂತೆ. ಅವರು ಹೇಳಿದ್ದನ್ನೇ ನಾನು ನಿಮಗೆ ಹೇಳುತ್ತಿದ್ದೇನೆʼ ಎಂದೂ ಸೇರಿಸಿದರಂತೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನನಗೆ ಸಲಹೆ ಕೇಳಿದ ಶಿಕ್ಷಕರ ಪ್ರಶ್ನೆ. ಏಕೆಂದರೆ ಅವರ ತರಗತಿಯಲ್ಲಿ ವಿಭಿನ್ನ ಕಲಿಕಾ ಮಟ್ಟದ ವಿದ್ಯಾರ್ಥಿಗಳಿದ್ದಾರೆ. “ಅವರೆಲ್ಲರೂ ಪ್ರಾಯೋಗಿಕ ಕಾರ್ಯಗಳನ್ನು ಸರಿಯಾಗಿ ಮಾಡಿಕೊಟ್ಟಿಲ್ಲ. ಕಿರುಪರೀಕ್ಷೆಗಳಲ್ಲಿಯೂ ಪಾಸಾಗಿಲ್ಲ” ಎಂದದ್ದಕ್ಕೆ ಅದಕ್ಕೆಲ್ಲ ನೀವು ಏನಾದರೂ ಮಾಡಿಕೊಳ್ಳಿ ಅಂಕಮಾತ್ರ ಎಲ್ಲರಿಗೂ ಪೂರ್ತಿಕೊಡಿ ಬೇಕಾದರೆ ಹೊಸದಾಗಿ ಎಲ್ಲ ಬರೆಸಿಕೊಳ್ಳಿ ಎಂದು ಸುಳ್ಳುದಾಖಲೆ ಸೃಷ್ಟಿಸಿ ಇಟ್ಟುಕೊಳ್ಳಲೂ ಅವರೇ ʻಮಾರ್ಗದರ್ಶನʼವನ್ನೂ ಮಾಡಿದರಂತೆ!


ಇದು ಆ ಶಿಕ್ಷಕರೊಬ್ಬರ ಶಾಲೆಯ ಕಥೆ ಆಗಿದ್ದರೆ ಇದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ನನಗೆ ತಿಳಿದಂತೆ ಇದು ಈಗ ರಾಜ್ಯದ ಹಲವು ಜಿಲ್ಲೆಗಳ ಬಹುತೇಕ ಶಾಲೆಗಳ ಕಥೆಯಾಗಿಬಿಟ್ಟಿದೆ. ಶಾಲೆಯ ಶಿಕ್ಷಕರಿಗೆ ಒಳ್ಳೆಯದನ್ನು ಹೇಳುವ, ಅವರು ತಪ್ಪು ಮಾಡಿದರೆ ತಿದ್ದಿಹೇಳಬೇಕಾದ ಸ್ಥಾನದಲ್ಲಿರುವ ಮುಖ್ಯೋಪಾಧ್ಯಾಯರು ಮತ್ತು ಅವರ ಮೇಲಿನ ಅಧಿಕಾರಿಗಳೇ ಹೀಗೆ ಶಿಕ್ಷಕರಿಗೆ ಕಳ್ಳತನ, ಸುಳ್ಳುತನ, ಅಪ್ರಮಾಣಿಕತೆ ಇಂಥವನ್ನು ಕಲಿಸುವ ಹಂತಕ್ಕೆ ಇಳಿದುಬಿಟ್ಟಿದ್ದಾರೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ.  ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಬಸವಣ್ಣನವರ ವಚನದ ಸಾಲುಗಳು, ಈ ಸ್ಥಿತಿಯನ್ನು ನೋಡಿಯೇ ನೆನಪಾದದ್ದು. ಈ ಅಧಿಕಾರಿಗಳೆಲ್ಲರೂ ಶಿಕ್ಷಕರಿಗೆ ʻಮಾರ್ಗದರ್ಶನʼ ಎಂಬ ʼಮೊಲೆಹಾಲʼನ್ನು ಕೊಡುವ ತಾಯಿಯ ಸ್ಥಾನದಲ್ಲಿರುವವರು. ಇಂತಹ ತಾಯಿಯರೇ ಈಗ ತಮ್ಮ ಮೊಲೆಗಳಿಗೆ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಶಿಕ್ಷಕರೆಂಬ ಮಕ್ಕಳಿಗೆ ಮೊಲೆಚೀಪಲು ಹೇಳುತ್ತಿದ್ದಾರೆ! ಈ ಮೊಲೆಹಾಲನ್ನು ಕುಡಿಯುವುದೋ ಉಗುಳುವುದೋ ಎಂಬ ಧರ್ಮಸಂಕಟ ಶಿಕ್ಷಕರೆಂಬ ಮಕ್ಕಳದ್ದು. ಹಾಲು ಕುಡಿಯದಿದ್ದರೆ ತಾಯಿ ಏನೇನೋ ನೆಪಮಾಡಿ ಗುದ್ದುತ್ತಾಳೆ. ಕುಡಿದರೆ ನಂಜೇರಿ ಸಾಯುವ ಸಾಧ್ಯತೆಗಳೂ ಇರುತ್ತವೆ. ಅತ್ತ ಧರೆ; ಇತ್ತ ಪುಲಿ ಎತ್ತ ಹೋಗುವುದು. ಅವರಿಗೆ ದಾರಿಕಾಣದಾಗಿದೆ.

ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳುವುದಾದರೆ ಯಾವುದೇ ಹಂತದ ಅಧಿಕಾರಿಗಳು ಇಂತಹ ಅಸಂಬದ್ಧ ಸೂಚನೆಯನ್ನು ಶಿಕ್ಷಕರಿಗೆ ನೀಡುವುದು ಸರಿಯಾದ ನಡವಳಿಕೆಯೇ ಅಲ್ಲ. ಮೇಲಧಿಕಾರಿಗಳು, ಶಾಲೆಗೆ ಹೋಗದ ಶಿಕ್ಷಕರಿಗೆ, ಹೋದರೂ ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳದ ಶಿಕ್ಷಕರಿಗೆ, ಅಶಿಸ್ತಿನಿಂದ ವರ್ತಿಸುವ ಬೇಜವಾಬ್ದಾರಿ ತೋರಿಸುವ ಶಿಕ್ಷಕರಿಗೆ, ಬುದ್ಧಿಹೇಳುವುದು, ಅದಕ್ಕೆ ಅವರು ಸ್ಪಂದಿಸಿ ತಿದ್ದಿಕೊಳ್ಳದಿದ್ದರೆ ಅವರ ಮೇಲೆ ಶಿಸ್ತುಕ್ರಮ ತಗೆದುಕೊಳ್ಳುವುದು ಇತ್ಯಾದಿ ಮಾಡಬೇಕೆ ಹೊರತು, ಶಿಕ್ಷಕರಿಗೆ ಅಂಕವನ್ನು ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು ಹೇಳುವ ಕೆಲಸಕ್ಕೆ ಕೈಹಾಕಬಾರದು. ಅದನ್ನೂ ಅವರು ಹೇಳುವುದಾದರೆ ಶಿಕ್ಷಕರು ಇರುವುದಾದರೂ ಏತಕ್ಕೆ ಮತ್ತು ಶಾಲೆಯಲ್ಲಿ ಶಿಕ್ಷಕರು ಪರೀಕ್ಷೆ, ಯೋಜನೆ ಇತ್ಯಾದಿ ಮಾಡಿಸುವುದಾದರೂ ಏತಕ್ಕೆ? ಈಗಿನ ವ್ಯವಸ್ಥೆಯಲ್ಲಿ ಎಲ್ಲ ಹಂತದ ಅಧಿಕಾರಿಗಳಿಗೂ ತಮ್ಮ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳ ಅಂಕಿಅಂಶಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ. ಹೀಗಿರುವಾಗ ತಮ್ಮ ವ್ಯಾಪ್ತಿಯ ಎಲ್ಲ ಮಕ್ಕಳಿಗೂ ಅವರೇ ಸಾಮೂಹಿಕವಾಗಿ ಆಂತರಿಕ ಅಂಕಗಳನ್ನು ನೀಡಿಬಿಡಬಹುದು. ಆದರೆ ವ್ಯವಸ್ಥೆ ಅದಕ್ಕೆ ಅನುವು ಮಾಡಿಕೊಡದೇ ಅದನ್ನು ಶಿಕ್ಷಕರೇ ಮಾಡಬೇಕು ಎಂಬುದು ಸುಮ್ಮನೆ ಅಲ್ಲ. ಅದರು ಅವರು ಮಾತ್ರ ಸರಿಯಾಗಿ ಮಾಡಬಹುದಾದ ಜವಾಬ್ದಾರಿಯ ಕೆಲಸ ಎಂಬ ಕಾರಣಕ್ಕಾಗಿ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅವರಿಗೆ ಮುಕ್ತ ಅವಕಾಶ ಕೊಡಬೇಕೆ ಹೊರತು ಇಂತಹ ವಿಷಯದಲ್ಲಿ ಕೈ ಆಡಿಸಲು ಹೋಗಬಾರದು. ಇದು ತಮ್ಮ ಕೆಳಹಂತದ ಅಧಿಕಾರಿಗಳು, ನೌಕರರು ತಮ್ಮ ಮೇಲೆ ಇಟ್ಟಿರುವ ಗೌರವ, ಘನತೆಗಳನ್ನೂ ಕಳೆಯುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಹಿಂದೊಮ್ಮೆ ನಮ್ಮಲ್ಲಿ ವಿದ್ಯಾರ್ಥಿಗಳಿಗೆ ರ್ಯಾಂಕ್‌ ನೀಡುವ ವ್ಯವಸ್ಥೆ ಇತ್ತು. ಅದು ಮಕ್ಕಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡಿ ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನಿಸಿದಾಗ ಅದನ್ನು ತೆಗೆದು ಗ್ರೇಡಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆ ಮೂಲಕ ಮಕ್ಕಳ ಮೇಲೆ ಅನಗತ್ಯವಾಗಿ ನಡೆಯುತ್ತಿದ್ದ ಒತ್ತಡವನ್ನು ಸಂಪೂರ್ಣ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಡಿಮೆ ಮಾಡಲಾಯಿತು. ಆದರೆ ಜಿಲ್ಲೆಗಳ ಶ್ರೇಣೀಕರಣ ಆರಂಭವಾದ ಮೇಲೆ ಮಕ್ಕಳ ನಡುವಿನ ಈ ಅನಾರೋಗ್ಯಕರ ಸ್ಪರ್ಧೆಯು ಜಿಲ್ಲೆ ಜಿಲ್ಲೆಗಳ ನಡುವೆ ನಡೆಯತೊಡಗಿತು. ಇದಕ್ಕಾಗಿ ತಮ್ಮ ಜಿಲ್ಲೆಯನ್ನು ಎತ್ತರದ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಹವಣಿಸುವ ಅನೇಕ ಜಿಲ್ಲೆಗಳ ಅಧಿಕಾರಿಗಳು ಸರಿಯಾದ ವೈಜ್ಞಾನಿಕ ಹಿನ್ನಲೆಯಿಲ್ಲದ ಅನೇಕ ಕ್ರಮಗಳನ್ನು ಜಾರಿಗೆ ಮಾಡತೊಡಗಿದರು. ಯಾವುದೇ ವಿಶೇಷವಿಲ್ಲದ ವಿಶೇಷ ತರಗತಿಗಳು, ಮಿತಿಮೀರಿದ ಕಲಿಕಾವೇಳೆ, ಅಪರಿಮಿತವಾದ ಬರೆವಣಿಗೆ ಹೀಗೆ ಪಟ್ಟಿ ಬೆಳಸಬಹುದು.

ಆದರೆ ಇವು ಯಾವೂ ಅವರ ನಿರೀಕ್ಷಿತ ಫಲ ನೀಡಲಿಲ್ಲ. ಕೆಲವು ಕಡೆ ಇದರಿಂದ ವ್ಯತಿರಿಕ್ತಪರಿಣಾಮ ಆಗಿದ್ದೂ ಇದೆ. ಇದಕ್ಕೆ ಕಾರಣವೂ ಇದೆ. ಆ ವಯಸ್ಸಿನ ಮಕ್ಕಳು ದಿನಕ್ಕೆ ಎಷ್ಟು ಸಮಯ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಬೇಕು. ಎಷ್ಟು ಓದಬೇಕು ಎಷ್ಟು ಬರೆಯಬೇಕು ಎಂಬುದೆಲ್ಲವೂ ವೈಜ್ಞಾನಿಕವಾಗಿ ರಾಜ್ಯಮಟ್ಟದಲ್ಲಿ ತೀರ್ಮಾನವಾಗಿಯೇ ಪಠ್ಯ ರಚನೆಯಾಗಿರುತ್ತದೆ. ಫೆಬ್ರವರಿಗೆ ಮುಗಿಯಬೇಕಾದ ಪಠ್ಯವನ್ನು ಡಿಸೆಂಬರಿಗೇ ಅವಸರ ಅವಸರವಾಗಿ ಮುಗಿಸುವುದು. ಮಕ್ಕಳಿಗೆ ಆಟಗಳೇ ಇಲ್ಲದಂತೆ ಅವರನ್ನು ಬಂಧೀಖಾನೆಯ ಖೈದಿಗಳಂತೆ ನೋಡಿಕೊಳ್ಳುವುದು ಒಂದೇ ಎರಡೇ ಮಕ್ಕಳ ಮೇಲೆ ಇವರ ಹಿಂಸೆಗಳು. ಮಕ್ಕಳ ಮೇಲೆ ನಿರಾತಂಕವಾಗಿ ಮುಂದುವರೆಯುತ್ತಿರುವ ಈ ಹಿಂಸೆಯನ್ನು ನೋಡಿದರೆ ಯಾರಾದರೂ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಅನೇಕ ಶಿಕ್ಷಕರು ಅಧಿಕಾರಿಗಳು ತಕ್ಕ ಶಿಕ್ಷೆ ಅನುಭವಿಸುವ ಕಾಲವೂ ದೂರವಿಲ್ಲವೆನಿಸುತ್ತದೆ. ಮಾಡಬಾರದ್ದನ್ನು ಮಾಡಲು ಹೋದಾಗ ಆಗಬಾರದ್ದೇ ಆಗುತ್ತದೆ ಎಂಬ ಮಾತೊಂದಿದೆ. ಏನೆಲ್ಲ ಮಾಡಿದರೂ ಫಲಿತಾಂಶ ಏರದಿದ್ದನ್ನು ಕಂಡ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಅಡ್ಡದಾರಿಯನ್ನು ಅನೇಕರು ತುಳಿಯತೊಡಗಿದ್ದಾರೆ. ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ತಮ್ಮ ಕೆಳಗಿನವರೆದುರು ʼಕುಬ್ಜʼರಾಗುತ್ತಿದ್ದಾರೆ! ಹೀಗೆ ಕಳ್ಳತನ ಸುಳ್ಳುತನ ಹೇಳಿಕೊಡುವ ಅಧಿಕಾರಿಗಳ ಬಗ್ಗೆ ಶಿಕ್ಷಕರು ಹೇಗೆ ತಾನೆ ಗೌರವದ ಭಾವನೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ?

ಅಧಿಕಾರಿಗಳು ಈ ರೀತಿ ಸೂಚನೆ ನೀಡಿದಾಗ ಶಿಕ್ಷಕರು ಏನು ಮಾಡಬೇಕು ಎಂಬುದು ಇಲ್ಲಿ ಮುಖ್ಯ ಪ್ರಶ್ನೆ. ಇದರ ಬಗ್ಗೆಯೇ ಆ ಶಿಕ್ಷಕರು ನನ್ನ ಸಲಹೆ ಕೇಳಿದ್ದಾರೆ. ನನಗೆ ತಿಳಿದಂತೆ ಇದಕ್ಕೆ ಎರಡು ಮುಖಗಳಿವೆ. ಒಂದು ‌ʼನಿಯಮ-ಕಾನೂನುʼ ಇತ್ಯಾದಿಗೆ ಸಂಬಂಧಿಸಿದ್ದು! ಇನ್ನೊಂದು ʼವೃತ್ತಿನೈತಿಕತೆʼ (ಪ್ರೊಫೆಶನಲ್‌ ಎಥಿಕ್ಸ್). ಅವೆರಡನ್ನೂ ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. ಮೊದಲನೆಯದು ನಿಯಮ-ಕಾನೂನು ಮುಖ. ನಾನು ಈಗಾಗಲೇ ಹೇಳಿದಂತೆ ಮಕ್ಕಳಿಗೆ ಆಂತರಿಕ ಅಂಕ ನೀಡುವುದು ಶಿಕ್ಷಕರೇ ಮಾಡಬೇಕಾದ ಕೆಲಸ. ಅದು ಅಧಿಕಾರಿಗಳು ಹೇಳುವ ವಿಷಯವೇ ಅಲ್ಲ. ಹಾಗಾಗಿ ಅವರು ಹೇಳುವ ಮಾತನ್ನು ಯಾವ ಶಿಕ್ಷಕರೂ ಕೇಳುವ ಅವಶ್ಯಕತೆಯಿಲ್ಲ. ಕೇಳಬಾರದು ಕೂಡ!

ಹಾಗಂತ ಶಿಕ್ಷಕರೂ ತಮ್ಮ ಮನಬಂದಂತೆ ಈ ಅಂಕಗಳನ್ನು ನೀಡಬಾರದು. ಅಂಕ ನೀಡುವುದು ಶಿಕ್ಷಕರ ʻವಿವೇಚನಾಧಿಕಾರʼವೇ ಹೊರತು ʻಸರ್ವಾಧಿಕಾರʼವಲ್ಲ ಎಂಬುದನ್ನೂ ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಯಾವುದೇ ಮಕ್ಕಳಿಗೆ ಭೇದಭಾವ ಮಾಡದೆ ಅವರು ಮಾಡಿರುವ ಕೆಲಸಕ್ಕೆ ತಕ್ಕಂತೆ ಅವರು ಆಂತರಿಕ ಅಂಕವನ್ನು ನೀಡುವುದೇ ಸರಿಯಾದ ಕ್ರಮ. ಹೀಗೆ ʻಅಷ್ಟು ಅಂಕಕೊಡಿ ಇಷ್ಟು ಅಂಕಕೊಡಿʼ ಎಂದು ಹೇಳಿದವರು ಕಷ್ಟಕಾಲದಲ್ಲಿ ಶಿಕ್ಷಕರ ನೆರವಿಗೆ ಬರುವುದಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಅದು ತಪ್ಪು ಎಂದು ಗೊತ್ತಿರುವುದರಿಂದಲೇ ಅವರು ಯಾವುದೇ ಲಿಖಿತ ಆದೇಶವನ್ನು ನೀಡುವುದಿಲ್ಲ. ಹೋಗಲಿ ಈ ಬಗ್ಗೆ ಏನಾದರೂ ವಿಚಾರಣೆ ನಡೆದರೆ ʼಹೌದು ನಾನು ಹಾಗೆ ಮಾರ್ಗದರ್ಶನ ಮಾಡಿದ್ದು ನಿಜʼ ಎಂದು ಹೇಳುವ ಮೂಲಕ ಅವರ ಮಾತು ಕೇಳಿದ ಶಿಕ್ಷಕರ ಬೆನ್ನಿಗೆ ನಿಲ್ಲುವ ಎದೆಗಾರಿಕೆಯನ್ನಾದರೂ ಯಾವುದಾದರೂ ಅಧಿಕಾರಿ ತೋರಬಹುದೇ? ಖಂಡಿತಾ ಇಲ್ಲ. ಎಲ್ಲದನ್ನೂ ಶಿಕ್ಷಕರೇ ಅನುಭವಿಸಬೇಕು. ಈ ಬಗ್ಗೆ ಯಾರು ಎಷ್ಟೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡರೂ ಅವು ಕಷ್ಟಕಾಲದಲ್ಲಿ ಅವನ್ನು ಕಾಪಾಡುವ ಗ್ಯಾರಂಟಿ ಇರುವುದಿಲ್ಲ. ಶಿಕ್ಷಕರು ಒಂದು ತಪ್ಪು ಮಾಡಲು ಹೋಗಿ ಅದಕ್ಕೆ ನೂರು ತಪ್ಪುಗಳನ್ನು ಮಾಡಬೇಕಾಗುತ್ತದೆ. ಈಗಿನ ಡಿಜಿಟಲ್‌ ಯುಗದಲ್ಲಿ ಎಲ್ಲೆಲ್ಲೋ ಕಾಲಕಾಲಕ್ಕೆ ಸಾಕ್ಷಿಗಳು ದಾಖಲಾಗಿರುತ್ತವೆ. ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಬಹುದೇ ಹೊರತು ಶಾಸ್ವತವಾಗಿ ಅಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನೇರವಾಗಿ ಸ್ಪಷ್ಟವಾಗಿ ಇರುವುದೇ ಸರಿಯಾದ ಕ್ರಮ.

ಇನ್ನು ಎರಡನೆಯದು ವೃತ್ತಿ ನೈತಿಕತೆಗೆ ಸಂಬಂಧಿಸಿದ್ದು. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ʻವೃತಿನೈತಿಕತೆʼ ಎಂಬುದು ಇರುತ್ತದೆ.  ಅದರಲ್ಲಿಯೂ ಶಿಕ್ಷಕ ವೃತ್ತಿಯಂಥ ವೃತ್ತಿಗಳಲ್ಲಿ ಇದು ಅತ್ಯಂತ ಮಹತ್ವವನ್ನು ವಹಿಸುತ್ತದೆ. ಸಮಾಜದಲ್ಲಿ ಶಿಕ್ಷಕರ ಬೆಲೆ ಬಹಳ ಕಡಿಮೆ ಆಗಿದೆ ಎಂಬಂತಹ ಈ ಕಾಲದಲ್ಲಿಯೂ ನಮ್ಮ ಸಮಾಜದಲ್ಲಿ ʼಶಿಕ್ಷಕ ಎಂದರೆ ಕೇವಲ ಒಬ್ಬ ಸರ್ಕಾರಿ ನೌಕರ ಅಲ್ಲʼ ಎಂಬುದನ್ನು ನಮ್ಮ ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಅವರು ತಮ್ಮ ವೃತ್ತಿನೈತಿಕತೆಯನ್ನು ಹಾಳುಮಾಡಿಕೊಳ್ಳುವ ಯಾವುದೇ ಕಾರ್ಯಕ್ಕೆ ಕೈ ಹಾಕಬಾರದು. ಈ ಹಿನ್ನಲೆಯಲ್ಲಿ ತಮ್ಮ ಮೇಲಧಿಕಾರಿಗಳು ಹೀಗೆ ಕೆಟ್ಟ ಮಾರ್ಗದರ್ಶನ ಮಾಡಿದಾಗ ಅದನ್ನು ಅವರು ಕುರುಡಾಗಿ ಅನುಸರಿಸಬಾರದು. ಅಲ್ಲೆಲ್ಲ ತಮ್ಮ ವಿವೇಚನೆಯನ್ನು ಬಳಸಿ ಮುಂದೆ ಹೆಜ್ಜೆ ಇಡಬೇಕು. ನನ್ನ ಪ್ರಕಾರ ಯಾರೋ ಹೇಳಿದರು ಎಂದು ಅಂಕ ಕೊಡುವ ಒಬ್ಬ ವ್ಯಕ್ತಿ ತನಗೆ ಮೇಷ್ಟ್ರ ಕೆಲಸವನ್ನು ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡ ಒಬ್ಬ ಅಯೋಗ್ಯ ವ್ಯಕ್ತಿಯೇ ಆಗುತ್ತಾನೆ. ಇದು ಕೇವಲ ಆ ಶಿಕ್ಷಕನನ್ನು ಮಾತ್ರವಲ್ಲ ಇಡೀ ಶಿಕ್ಷಕ ಸಮುದಾಯವನ್ನು ಸಮಾಜ ಕೆಟ್ಟರೀತಿ ಕಾಣಲು ಕಾರಣವೂ ಆಗುತ್ತದೆ.

ಬಾಹ್ಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದೇನೋ. ನಾನು ಒಂದು ಸಲ ಪರೀಕ್ಷಾ ಮೌಲ್ಯಮಾಪನಕ್ಕೆ ಹೋಗಿದ್ದೆ. ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಮಾಡಿದರೂ ನನ್ನ ಮೌಲ್ಯಮಾಪನ ಮುಗಿಯುತ್ತಿರಲಿಲ್ಲ. ಇದರ ಮಧ್ಯೆ ನನಗೆ ಪರಿಚಯ ಇರುವ ಹಿಂದಿ ಶಿಕ್ಷಕಿಯೊಬ್ಬರು ದಿನಾ ಹನ್ನೊಂದು ಗಂಟೆಗೆ ಬಂದು ಮೂರು ಮೂರೂವರೆ ವೇಳೆಗೆ ಮೌಲ್ಯಮಾಪನ ಮುಗಿಸಿ ಹೊರಡುತ್ತಿದ್ದರು. ಎರಡು ದಿನ ಇದನ್ನು ನೋಡಿದ ನಾನು ಕುತೂಹಲ ತಾಳದೆ ಮೂರನೆ ದಿನ ಅವರು ಮನೆಗೆ ಹೊರಟ ಸಂದರ್ಭದಲ್ಲಿ ಮಾತನಾಡಿಸಿ, “ನೀವೇನು ಪೇಪರ್‌ ಓದಿ ವ್ಯಾಲುವೇಶನ್‌ ಮಾಡೋದಿಲ್ಲೇನೋ” ಎಂದು ಕೇಳಿಬಿಟ್ಟೆ. ನನ್ನ ಮಾತನ್ನು ಕೇಳಿದ ಅವರು, “ಪಡನೇಕಿ ಜರೂರತ್‌ ಕ್ಯಾ ಹೈ ರಾಬು ಜೀ? ಡಿಡಿಪಿಐ ಸಾಬ್‌ನೆ ಸಬ್‌ಕೊ ಪಾಸ್‌ ಕರ್ನೆಕೋ ಬೋಲಾ ಹೈ ನ?” ಎಂದು ನನ್ನ ಕಡೆ ಒಂದು ಮುಗಳು ನಗೆ ಬೀರಿ ಸ್ಕೂಟಿ ಸ್ಟಾರ್ಟ್‌ ಮಾಡಿದರು.

ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇನ್ನೊಂದು ಘಟನೆ ನಡೆಯಿತು. ನಾನು ಶಿಕ್ಷಕನಾದ ಮೇಲೆ ಒಂದು ಶಾಲೆಯಲ್ಲಿ ನನ್ನ ವಿಷಯದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ೧೨೫ಕ್ಕೆ ೧೨೩ ಅಂಕ ಬಂದಿತ್ತು. ಆಕೆ ಬಾಹ್ಯಪರೀಕ್ಷೆಯಲ್ಲಿ ನೂರಕ್ಕೆ ನೂರೂ ಅಂಕಗಳನ್ನು ಪಡೆದಿದ್ದಳು. ಆದರೆ ಶಾಲೆಯಲ್ಲಿ ಆಂತರಿಕ ಅಂಕಗಳು ಅವಳಿಗೆ ಇಪ್ಪತ್ತೈದಕ್ಕೆ ಇಪ್ಪತ್ತೈದು ಅಂಕಗಳು ಬಂದಿರಲಿಲ್ಲ. ಇಪ್ಪತ್ಮೂರು ಬಂದಿತ್ತು. ಇದನ್ನು ನೋಡಿದ ಅನೇಕ ನಮ್ಮ ಅನೇಕ ಸಹೋದ್ಯೋಗಿಗಳು, ನಮ್ಮ ಸರ್‌ ದೊಡ್ಡ ಮನಸ್ಸು ಮಾಡಿ ಪೂರ್ತಿ ಅಂಕಗಳನ್ನು ನೀಡಬಹುದಿತ್ತು. ಆ ಹುಡುಗಿಗೆ ಅನ್ಯಾಯ ಮಾಡಿದರುʼ ಎಂದೇ ಭಾವಿಸಿದರು. ನನ್ನ ವಿಷಯದಲ್ಲಿಯೇ ಶಾಲೆಯಲ್ಲಿ ಕೆಲವರು ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು ಪಡೆದದ್ದೂ ಇತ್ತು. ಅವರಲ್ಲಿ ಕೆಲವರಿಗೆ ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಡೆಯುವುದು ಸಾಧ್ಯವಾಗಿದ್ದರೆ ಕೆಲವರಿಗೆ ಸಾಧ್ಯವಾಗಿರಲಿಲ್ಲ.


ನಾನು ಆ ಮಗುವನ್ನೂ ಅದರ ಪಾಲಕರನ್ನೂ ಕರೆದು ಅವಳು ಇನ್ನೊಂದಿಷ್ಟು ಕಾಳಜಿ ವಹಿಸಿದ್ದರೆ ಶಾಲೆಯಲ್ಲಿ ಕೂಡ ಹೇಗೆ ಪೂರ್ತಿ ಅಂಕಗಳನ್ನು ಪಡೆಯಬಹುದಿತ್ತು ಎಂಬುದನ್ನು ತಿಳಿಹೇಳಿದೆ. ಇಪ್ಪತ್ತೈದು ಅಂಕ ಪಡೆದವರು ಹೇಗೆ ಪಡೆದರು ಮತ್ತು ಅಷ್ಟು ಅಂಕ ತನಗೇಕೆ ಬರಲಿಲ್ಲ ಎಂಬುದನ್ನು ಆ ಮಗು ಅರ್ಥಮಾಡಿಕೊಂಡಿತು. ಅವಳಿಗಾಗಲೀ ಅವಳ ಪಾಲಕರಿಗಾಗಲೀ ನಾನು ಮಾಡಿದ್ದು ತಪ್ಪು ಎನಿಸಲಿಲ್ಲ. ಅವರಿಗೆ ನನ್ನ ಬಗ್ಗೆ ಯಾವುದೇ ಬಗೆಯ ಕೆಟ್ಟಭಾವನೆ ಕೂಡ ಹುಟ್ಟಿ ಬೆಳೆಯಲಿಲ್ಲ. ಆದರೆ ನಮ್ಮಲ್ಲಿಯೇ ಕೆಲವು ಶಿಕ್ಷಕರು ಮಾತ್ರ ಇದನ್ನು ನಾನು ಮಗುವಿಗೆ ಮಾಡಿದ ಅನ್ಯಾಯ ಎಂದೇ ಭಾವಿಸಿದರು. ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವಂತೆ ಮಗು ಬರೆದಿರಬಹುದು. ಆದರೆ ಶಾಲೆಯಲ್ಲಿ ಇಪ್ಪತ್ತೈದಕ್ಕೆ ಇಪ್ಪತ್ತೈದು ಅಂಕ ಬರುವಂತೆ ಕೆಲಸ ಮಾಡಿರಲಿಕ್ಕಿಲ್ಲ ಎಂಬ ಸಣ್ಣ ತಿಳಿವಳಿಕೆಯೂ ಇಲ್ಲದ ಸೋಗಲಾಡಿಗಳು ಇವರಾಗಿದ್ದರು. ಜೊತೆಗೆ ಮಕ್ಕಳು ಕೆಲಸಮಾಡಿದರೇನು ಬಿಟ್ಟರೇನು ಅವರಿಗೆ ಪೂರ್ಣ ಅಂಕಗಳನ್ನು ನೀಡಿದದ ಗಣ್ಯವ್ಯಕ್ತಿಗಳೂ ಇದರಲ್ಲಿ ಇದ್ದರು.

ಯಾವುದೇ ಒಂದು ತರಗತಿಯಲ್ಲಿ ಒಂದೇ ಮಟ್ಟದ ಕಲಿಕೆಯ ಮಕ್ಕಳಿರುವುದಿಲ್ಲ ಎಂಬುದು ಶಿಕ್ಷಕರ ಕೆಲಸ ಮಾಡಿದ ಯಾರೇ ಆದರೂ ಒಪ್ಪಿಕೊಳ್ಳುವ ಸಂಗತಿ. ಹೀಗಿರುವಾಗ ಎಲ್ಲರಿಗೂ ಒಂದೇ ರೀತಿಯ ಅಂಕಗಳನ್ನು ಹೇಗೆ ಕೊಡಲು ಸಾಧ್ಯ? ಬಾಹ್ಯಪರೀಕ್ಷೆಯಲ್ಲಿ ಎಂಬತ್ತಕ್ಕೆ ಇಪ್ಪತ್ತು ಅಂಕಗಳನ್ನೂ ಪಡೆಯಲಾರದ ಒಂದು ಮಗುವಿಗೆ ಆಂತರಿಕವಾಗಿ ಇಪ್ಪತ್ತಕ್ಕೆ ಇಪ್ಪತ್ತು ಅಂಕಗಳನ್ನು ನೀಡಿದರೆ ಅದು ಏನನ್ನು ಸೂಚಿಸುತ್ತದೆ? ನಾಚಿಕೆ, ಮಾನ, ಮರ್ಯಾದೆ ಇರುವ ಯಾವುದಾದರೂ ಶಿಕ್ಷಕರು ಇದನ್ನು ಸಮರ್ಥಿಸಿಕೊಳ್ಳಬಹುದೇ?  ಇಂತಹ ಸಂದರ್ಭದಲ್ಲಿ ನಮ್ಮ ಅನೇಕ ಶಿಕ್ಷಕರು ʼಪಾಪ ಏನೋ ಸಹಾಯ ಮಾಡುವುದುʼ ಎಂಬ ಧೋರಣೆ ತಾಳುತ್ತಾರೆ. ನನಗೊಬ್ಬ ಶಿಕ್ಷಕಿ ಒಂದು ಸಲ ಹೀಗೆ ಮಾತನಾಡುತ್ತಾ, ʼರಾಬು ಸರ್‌, ಮಕ್ಕಳಿಗೆ ನಾವು ಇನ್ನೇನು ಸಹಾಯ ಮಾಡ್ಲಿಕ್ಕೆ ಆಗುತ್ತೆ ಹೇಳಿ? ಏನೋ ಒಂದಿಷ್ಟು ಮಾರ್ಕ್ಸು ಕೊಡೋದಪ. ನಾವೇನು ಅವನ್ನು ದುಡ್ಡು ಕೊಟ್ಟು ತರ್ತೀವಾ? ಎಂದು ಪ್ರೀತಿಯಿಂದಲೇ ಛೇಡಿಸಿದ್ದಿದೆ.

ಇಂತಹ ಶಿಕ್ಷಕರು ನಮ್ಮಲ್ಲಿ ಬಹಳ ಜನ ಇದ್ದಾರೆ. ಇವರು ಶಿಕ್ಷಕರ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವವರು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮುಖ್ಯವಾಗಿ ಮೂರು ರೀತಿಯ ಪಾತ್ರಗಳನ್ನು ವಹಿಸಬೇಕಾಗುತ್ತದೆ. ಅವರು ಪಾಠಮಾಡುವಾಗ ತಾಯಿಯಾಗಿರಬೇಕು. ಪರೀಕ್ಷೆ ಮಾಡುವಾಗ ಸಬ್‌ ಇನ್ಸ್ ಪೆಕ್ಟರ್‌ ಆಗಿರಬೇಕು. ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶ ಆಗಿರಬೇಕು. ಅದರೆ ನಮ್ಮಲ್ಲಿ ಅನೇಕರದ್ದು ಉಲ್ಟಾ ಕೇಸು. ಅವರು ಪಾಠಮಾಡುವಾಗ ಸಬ್‌ ಇನ್ಸ್ ಪೆಕ್ಟರ್‌ ಆಗಿರುತ್ತಾರೆ. ಪರೀಕ್ಷೆ ಮಾಡುವಾಗ ತಾಯಿಯಾಗಿಬಿಡುತ್ತಾರೆ! ಮೌಲ್ಯಮಾಪನದ ಬಗ್ಗೆ ಕೇಳಬೇಡಿ. ಏಕೆಂದರೆ ಅವರು ಅಲ್ಲಿ ʻತಳ್ಳುಸೇವಕʼರಾಗಿ ಕೆಲಸಮಾಡುತ್ತಿರುತ್ತಾರೆ!!

ಒಂದು ತರಗತಿಯಲ್ಲಿ ಎಲ್ಲರಿಗೂ ಹೆಚ್ಚು ಅಂಕಗಳನ್ನು ಅಥವಾ ಪೂರ್ಣ ಅಂಕಗಳನ್ನು ಕೊಡುವುದರಿಂದ ಯಾರಿಗೂ ಅನ್ಯಾಯ ಮಾಡಿದಂತೆ ಆಗುವುದಿಲ್ಲವಲ್ಲ ಎಂಬುದು ಕೆಲವು ಶಿಕ್ಷಕರ ವಾದ. ಆದರೆ ಅದು ಸರಿಯಲ್ಲ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ನಾವು ಕೆಲವರಿಗೆ ಮಾಡುವ ʼಸಹಾಯʼವು ಪರೋಕ್ಷವಾಗಿ ಬೇರೆ ಯಾರಿಗೋ ಮಾಡುವ ʼಅನ್ಯಾಯʼವೇ ಆಗಿರುತ್ತದೆ. ಸಹಾಯ ಮಾಡಿದ ಪುಣ್ಯ ನಮಗೆ ಬರುತ್ತದೆ ಎಂದು ಭಾವಿಸುವಾಗಲೇ ಆಕಡೆ ಉಂಟಾದ ಅನ್ಯಾಯದ ಪಾಪ ತುಸು ಹೆಚ್ಚಾಗಿಯೇ ನಮಗೆ ಅಂಟಿಕೊಳ್ಳಬಹುದು. ಒಂದು ತರಗತಿಯಲ್ಲಿ ಕಷ್ಟಪಟ್ಟು ಶ್ರದ್ಧೆಯಿಂದ ಓದುವ ಒಂದು ಪ್ರತಿಭಾವಂತ ಮಗುವಿಗೂ, ಯಾವುದೇ ಯೋಜನಾ ಕಾರ್ಯವನ್ನು ಮಾಡದ, ಏನನ್ನೂ ಒದಿ ಬರೆದು ಮಾಡದ, ಶಿಕ್ಷಕರ ಯಾವ ಮಾತಿಗೂ ಸ್ಪಂದಿಸದೇ ಅಡ್ಡ ಉದ್ದ ಸೆಟೆಯುವ ಒಂದು ಮಗುವಿಗೂ ಒಬ್ಬ ಶಿಕ್ಷಕ ಸಮಾನ ಅಂಕಗಳನ್ನು (ಆ ಅಂಕಗಳು ಎಷ್ಟಾದರೂ ಇರಲಿ) ನೀಡಿದರೆ ಅದು ಹೇಗೆ ನ್ಯಾಯ ಆಗುತ್ತದೆ? ಇದರಿಂದ ಪ್ರತಿಭಾವಂತ ಮಗುವಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ನಾನೇಕ ಇಷ್ಟು ಕಷ್ಟಪಟ್ಟು ಓದಿ ಶಿಕ್ಷಕರು ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಿತ್ತು? ಎಂದು ಆ ಮಗುವಿಗೆ ಅನ್ನಿಸುವುದಿಲ್ಲವೇ?

ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರು ತಮ್ಮಲ್ಲಿರುವ ಇಪ್ಪತ್ತು ಅಂಕಗಳಲ್ಲಿ 18,19,20 ಈ ಮೂರನ್ನು ಮಾತ್ರ ಬಳಸುತ್ತಿದ್ದರು. ಅದರ ಕೆಳಗೆ ಸಂಖ್ಯೆಗಳಿವೆ ಎಂಬುದನ್ನೂ ಅವರು ಮರೆತಂತಿತ್ತು. ಈ ಅಂಕಗಳನ್ನು ಕೊಡುವಾಗ ಅವರು ತಮ್ಮದೇ ಅದ ಒಂದು ತತ್ವವನ್ನು ಇಟ್ಟುಕೊಂಡಿದ್ದರು. ದಿನವೂ ಶಾಲೆಗೆ ತಪ್ಪದೇ ಬಂದು ಶಿಕ್ಷಕರು ಹೇಳಿದ ಎಲ್ಲ ಬರೆವಣಿಗೆ ಮಾಡಿ ಕೊಡುವವರಿಗೆ ಇಪ್ಪತ್ತು, ಆಗೊಮ್ಮ ಈಗೊಮ್ಮೆ ಬರುವವರಿಗೆ ಹತ್ತೊಂಬತ್ತು ಮತ್ತು ಎಂದೂ ಶಾಲೆಗೆ ಬರದೇ ಇರುವರಿಗೆ ಹದಿನೆಂಟು ಕೊಡುತ್ತಿದ್ದರು. ಈ ಅಂಕಗಳ ನಡುವೆ ಬಹಳಷ್ಟು ಅಂತರವಿಲ್ಲದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಹದಿನೆಂಟು ಪಡೆಯುವುದನ್ನೇ ಆಯ್ದುಕೊಳ್ಳುತ್ತಿದ್ದರು! ಏಕೆಂದರೆ, “ನೀನು ಕೆಲಸಮಾಡಿದರೆ ಇಪ್ಪತ್ತು ಸಾವಿರ ಕೊಡುತ್ತೇನೆ. ಕೆಲಸ ಮಾಡದಿದ್ದರೆ ಹತ್ತು ಸಾವಿರ ಕೊಡುತ್ತೇನೆ” ಎಂದು ನಮಗೆ ಯಾರಾದರೂ ಆಯ್ಕೆ ನೀಡಿದರೆ ನಮ್ಮಲ್ಲಿ ಬಹುತೇಕರ ಆಯ್ಕೆಯು ಹತ್ತು ಸಾವಿರವೇ ಆಗಿರುತ್ತದೆ ಅಲ್ಲವೇ?

ಶಿಕ್ಷಕರ ಈ ಬಗೆಯ ಕೆಟ್ಟ ಮತ್ತು ಬೇಜವಾಬ್ದಾರಿಯ ವರ್ತನೆಯು ಮಕ್ಕಳ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಕರ ಮೇಲಿನ ಗೌರವ ಕಡಿಮೆ ಮಾಡುವುದು, ಅವರ ಬಗ್ಗೆ ದ್ವೇಷ ಬೆಳೆಸುವುದು, ಕಷ್ಟಪಟ್ಟು ಕೆಲಸ ಮಾಡುವುದನ್ನು ಕೈಬಿಡುವುದು ಹೀಗೆ. ನನ್ನದೇ ಒಂದು ಉದಾಹರಣೆಯನ್ನು ಕೊಡುವುದಾದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆಯುವಾಗ ಒಂದು ಘಟನೆ ನಡೆಯಿತು. ಆಗ ನನಗೆ ಪುಟ್ಟಮ್ಮ ಎಂಬ ಹೆಸರಿನ ಗೆಳತಿಯೊಬ್ಬಳು ಇದ್ದಳು. ನಾವಿಬ್ಬರೂ ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿ ಬೆಳೆದವರು. ನಮ್ಮಿಬ್ಬರ ಮನೆಗಳಲ್ಲೂ ಕರೆಂಟ್‌ ಇರಲಿಲ್ಲ. ಹೊಗೆ ಉಗುಳುವ ಚಿಮಣಿಬುಡ್ಡಿ ದೀಪದಲ್ಲಿ ನಾವು ಓದುತ್ತಿದ್ದೆವು. ದೀಪದ ಕರಕಲು ಹೊಗೆಯಿಂದಾಗಿ ನಮ್ಮ ಮೂಗಿನ ಹೊರಳೆಗಳು ಮತ್ತು ಕಣ್ಣ ರೆಪ್ಪೆಯ ತುಂಬೆಲ್ಲ ದೀಪದ ಕರಿ ತುಂಬಿರುತ್ತಿತ್ತು.

ನಾವು ರಾತ್ರಿ ಇಡೀ ಓದಿಕೊಂಡು ತರಗತಿಗೆ ಮೊದಲು ಬರಬೇಕು ಎಂಬ ಹುಮ್ಮಸ್ಸಿನೊಂದಿಗೆ ಬೆಳಿಗ್ಗೆ ಪರೀಕ್ಷೆಗೆ ಹೋಗುತ್ತಿದ್ದೆವು. ಆದರೆ ಆ ಪರೀಕ್ಷಾ ಕೇಂದ್ರದಲ್ಲಿ ಒಂದು ಕೆಟ್ಟ ಪದ್ಧತಿ ಇದ್ದದ್ದು ನಮ್ಮ ಗಮನಕ್ಕೆ ಬಂದಿತು. ಮಕ್ಕಳು ಪಾಸಾಗಲು ಬೇಕಾಗುವಷ್ಟು ಅಂಕಗಳು ಬರುವಂತೆ ಪರೀಕ್ಷಾ ಕೊಠಡಿಗೆ ಬಂದು ವಸ್ತುನಿಷ್ಠಮಾದರಿ ಪ್ರಶ್ನೆಗಳಿಗೆ ಉತ್ತರವನ್ನು ಹೇಳಿಕೊಡುತ್ತಿದ್ದರು. ಮೊದಲ ದಿನ ಹೀಗೆ ಬಂದು ಹೇಳಿಕೊಟ್ಟಾಗ ನನಗೆ ಬಹಳ ದುಃಖವಾಯಿತು. ನಾನು ರಾತ್ರಿ ಇಡೀ ಓದಿದ್ದೇ ವೇಸ್ಟು ಎನ್ನಿಸಿತು. ಏಕೆಂದರೆ ಏನೂ ಓದದೇ ಬಂದವರೂ ಸರಾಗವಾಗಿ ಅಂಕ ತೆಗೆದುಕೊಳ್ಳುವಂತೆ ಆಯಿತು.  ಅಂದಿನ ಪರೀಕ್ಷೆ ಮುಗಿದ ಮೇಲೆ ನನ್ನ ಹತ್ತರ ಓಡಿ ಬಂದ ʻಪುಟ್ಟಿʼ ಅಳುತ್ತಾ ಈ ಬಗ್ಗೆ ತನ್ನ ನೋವನ್ನು ಹೇಳಿಕೊಂಡಳು.

ನಾವು ಏನು ತಾನೇ ಮಾಡುವ ಸ್ಥಿತಿಯಲ್ಲಿದ್ದೆವು? ಬಡವರ ಮಕ್ಕಳು. ಬಡವರ ಕೋಪ ದವಡೆಗೆ ಮೂಲ ಎಂಬ ಮಾತು ಬೇರೆ ಇದೆ.  ಆದರೂ ಮನಸ್ಸು ತಡೆಯಲಿಲ್ಲ. ಏನೂ ಓದದೇ ಇರುವವರು ನಮ್ಮ ಸರಿಸಮ ಅಂಕಗಳನ್ನು ಪಡೆಯುವುದನ್ನು ಒಪ್ಪಿಕೊಳ್ಳಲು ನಾವು ತಯಾರಿರಲಿಲ್ಲ. ನಾನು ಅವಳಿಗೆ ಧೈರ್ಯ ತುಂಬುತ್ತಾ ಮರುದಿನ ಉತ್ತರ ಹೇಳಿಕೊಡಲು ಬರುವವರನ್ನು ವಾಪಸ್ಸು ಕಳಿಸುವ ಧೈರ್ಯ ಮಾಡಿದೆವು. ಒಂಬತ್ತನೆ ರೂಮಿನಲ್ಲಿ ಅವಳಿದ್ದಳು. ಹನ್ನೆರಡನೆಯ ರೂಮಿನಲ್ಲಿ ನಾನಿದ್ದೆ. ಉತ್ತರ ಹೇಳಿಕೊಡಲು ಬರುವ ʻಲೋಫರ್‌ʼಗಳಿಗೆ ಎದ್ದುನಿಂತು ಪ್ರತಿರೋಧ ವ್ಯಕ್ತಪಡಿಸಬೇಕೆಂದು ಮಾತನಾಡಿಕೊಂಡೆವು. ಆರಂಭದಲ್ಲಿ ಹಾಗೆ ಮಾಡಲು ಅವಳು ಹೆದರಿದಳಾದರೂ ನಾನು ಕೊಟ್ಟ ಧೈರ್ಯದಿಂದ ಅದನ್ನು ಮಾಡಲು ಮುಂದಾದಳು.

ಮರುದಿನ ಹೀಗೆ ಹೇಳಿಕೊಡಲು ನಾನು ನಿರೀಕ್ಷಿಸಿದಂತೆ ನನ್ನ ಕೊಠಡಿಗೆ ಒಬ್ಬ ಬಂದ. ಕೂಡಲೆ ಎದ್ದುನಿಂತು ನಾನು ಆಗಲೇ ಬಾಯಿಪಾಟ ಮಾಡಿಕೊಂಡಂತೆ, ʼಸರ್‌, ನಾವು ಕಷ್ಟಪಟ್ಟು ಇಡೀ ರಾತ್ರಿ ಓದಿಕೊಂಡು ಬಂದಿದ್ದೇವೆ. ದಯವಿಟ್ಟು ನೀವು ಹೀಗೆ ಉತ್ತರ ಹೇಳಿಕೊಡಬೇಡಿ. ನಮಗೆ ಅನ್ಯಾಯ ಅಗುತ್ತದೆʼ ಎಂದು ಒಂದೇ ಉಸುರಿಗೆ ಹೇಳಿಬಿಟ್ಟೆ. ಹಾಗೆ ಬಂದ ವ್ಯಕ್ತಿ ಇಂಗು ತಿಂದ ಮಂಗನಂತೆ ಸುತ್ತಲೂ ನೋಡಿ ಅಲ್ಲಿಂದ ತಕ್ಷಣ ಕಾಲ್ಕಿತ್ತ. ಪರೀಕ್ಷೆ ಮುಗಿದ ಮೇಲೆ ಹೊರಬಂದ ಪುಟ್ಟಿಯ ಮುಖದ ಮೇಲಿನ ಗೆಲುವಿನ ನಗು ನೋಡಿಯೇ ನನಗೆ ಅರ್ಥವಾಯಿತು ಅವಳೂ ತನ್ನ ರೂಮಿನಲ್ಲಿ ಅದನ್ನೇ ಮಾಡಿದ್ದಾಳೆ ಎಂದು. ಹಿಂದಿನ ದಿನದ ಅವಳ ಬಾಡಿದ ಮುಖವನ್ನು ನೋಡಿ ಕಂದಿಹೋಗಿದ್ದ ನನ್ನ ಮನಸ್ಸು ಅಂದಿನ ಅವಳ ನಗುಮುಖ ನೋಡಿ ಹಗುರಾಯಿತು ಮಾತ್ರವಲ್ಲ ಅವತ್ತು ಹಾಗೆ ಹೇಳಿಕೊಡಲು ಬಂದ ಶಿಕ್ಷಕರಿಗೆ ಬಳಸಿದ ʼಲೋಫರ್‌ʼ ಪದಕ್ಕೆ ಇವತ್ತಿಗೂ ನನಗೆ ಹಾಗೆ ಅನ್ನಬಾರದಿತ್ತು ಅನ್ನಿಸುತ್ತಿಲ್ಲ.

ಈಗ ಶಿಕ್ಷಕರು ನೀಡುವ ಆಂತರಿಕ ಅಂಕಗಳು ಕೂಡ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ನಮೂದಾಗಿ ಸಾರ್ವಜನಿಕಗೊಳ್ಳುತ್ತವೆ. ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಅಕ್ಕಪಕ್ಕ ಓದುವ ಮಕ್ಕಳು ಓದಿದವರು ಓದದೇ ಇರುವವರು, ಶಾಲೆಗೆ ಬರುವವರು, ಬರದೇ ಇರುವವರು ಎಲ್ಲರಿಗೂ ಒಂದೇ ರೀತಿಯ ಅಂಕ ನೀಡಿದ್ದನ್ನು ನೋಡಿದರೆ ಓದಿದ ಮಕ್ಕಳು ಶಿಕ್ಷಕರ ಬಗ್ಗೆ ಯಾವ ಭಾವನೆಯನ್ನು ತಾಳುತ್ತಾರೆ? ವರ್ಷಪೂರ್ತಿ ಶಾಲೆಗೆ ಬರದೆ ಊರಲ್ಲಿ ತಿರುಗಾಡುವ ಹುಡುಗನೊಬ್ಬನಿಗೆ ಹೀಗೆ ಅಂಕಕೊಟ್ಟಾಗ ಆ ಹುಡುಗ ತನ್ನ ಹಿಂದಿನ ತರಗತಿಯ ಹುಡುಗರಿಗೆ, ʼಏಯ್‌ ಸುಮ್ನೆ ಯಾತಕ್ಕೆ ಕಷ್ಟಪಟ್ಟು ಪ್ರಾಜೆಕ್ಟ್‌ ಮಾಡ್ತೀರಾ? ನಾನೇನು ಮಾಡಿರ್ಲಿಲ್ಲ ನನಗೆ ಇಪ್ಪತ್ತು ಮಾರ್ಕ್ಸ್‌ ಕೊಟ್ಟಿದಾರೆ.. ನೀವು ಮಾಡಿದ್ರೇನು ಬಿಟ್ರೇನು ಅವ್ರು ಕೊಟ್ಟೇ ಕೊಡ್ತಾರೆ” ಎಂದು ಹೇಳಿ ಹಾದಿತಪ್ಪಿಸುತ್ತಿದ್ದನ್ನು ನಾನೇ ಕಣ್ಣಾರೆ ಕಂಡದ್ದಿದೆ.  ಶಾಲೆಯಲ್ಲಿ ಮಕ್ಕಳಿಗೆ ಸಲುಗೆ ಸಿಗಬಾರದು ಎಂದು ಆ ಶಾಲೆಯಲ್ಲಿ ಶಿಕ್ಷಕರು ʻನಾನು ಸುಮ್ಮಸುಮ್ಮನೆ ಮಾರ್ಕ್ಸು ಕೊಡಲ್ಲ. ಕೆಲಸ ಮಾಡಿದವರಿಗೆ ಅಷ್ಟೇ ಕೊಡೋದು ಎಂದು ಹೇಳುತ್ತಿದ್ದರು. ಆದರೆ ವರ್ಷದ ಕೊನೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳದೇ ಎಲ್ಲರಿಗೂ ʻದೇವರ ಅಂಕಿʼ ನೀಡುತ್ತಿದ್ದರು. ಹಾಗೆ ಮಾಡಲು ಅವರ ಮೇಲೆ ಯಾರದ್ದಾದರೂ ಒತ್ತಡ ಇದ್ದೀತು. ಆದರೆ ಈ ವರ್ತನೆಯಿಂದ ಆ ಶಿಕ್ಷಕರು ʻಸುಳ್ಳುಹೇಳುವವರುʼ ಎಂಬ ಸತ್ಯ ಮಾತ್ರ ಮಕ್ಕಳಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿತು. ಶಿಕ್ಷಕರಿಗೆ ಇದೆಲ್ಲ ಬೇಕೆ?

ನಮ್ಮ ಶಿಕ್ಷಕರು ತಮ್ಮ ಮೇಲೆ ಯಾವುದೇ ರೀತಿಯ ಎಷ್ಟೇ ಒತ್ತಡವಿದ್ದರೂ ತಮ್ಮ ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಳ್ಳುವ ಕೆಲಸಕ್ಕೆ ಕೈಹಾಕಬಾರದು. ಬಹುತೇಕ ಶಿಕ್ಷಕರು ಅಧಿಕಾರಿಗಳಿಂದ ಹೊಗಳಿಸಿಕೊಳ್ಳುವುದು ಅದಾಗದಿದ್ದರೆ ಕನಿಷ್ಠಪಕ್ಷ ಅವರ ಕಿರಿಕಿರಿ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನೇ ಚಿಂತಿಸುತ್ತಿರುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಅವರು ಚಿಂತಿಸಬೇಕಾಗಿರುವ ಅಂಶವೆಂದರೆ ನಾವು ನಮ್ಮ ಮತ್ತು ನಮ್ಮ ವೃತ್ತಿಯ ಮಾನ ಮರ್ಯಾದೆಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಯಾರಿಗೂ ತಲೆತಗ್ಗಿಸದೆ ತಲೆಯೆತ್ತಿ ಬದುಕುವುದು ಹೇಗೆ ಎಂಬುದು. ನನ್ನ ಪ್ರಕಾರ ಅಧಿಕಾರಿಗಳ ಕಿರಿಕಿರಿ ಅನುಭವಿಸುವುದು, ವಿದ್ಯಾರ್ಥಿಗಳು ಪಾಲಕ ಪೋಷಕರೆದುರು ಮರ್ಯಾದೆ ತಲ್ಲದಂತಾಗುವುದು ಇವೆರಡಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಆಯ್ಕೆ ಅವರ ಮುಂದೆ ಬಂದಾಗ ಅವರು ಮೊದಲನೆಯದನ್ನೇ ಆಯ್ದುಕೊಳ್ಳಬೇಕು; ಅದು ಎಷ್ಟೇ ಕಷ್ಟವಾದರೂ ಸರಿ!

ʻThink globally Act Locallý ಎಂಬುದು ಇಂದು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬೇಕಾದ ಒಂದು ಬಹುಮುಖ್ಯ ತತ್ವ. ಒಬ್ಬ ಶಿಕ್ಷಕ ತಾನು ಕೆಲಸ ಮಾಡುವುದು ಯಾವುದೋ ಒಂದು ಹಳ್ಳಿಯ ಒಂದು ಚಿಕ್ಕಶಾಲೆಯ ಚಿಕ್ಕ ತರಗತಿ ಇರಬಹುದು. ಅವನ ಕಾರ್ಯವ್ಯಾಪ್ತಿ ಅಷ್ಟು ಸಣ್ಣದಿರಬಹುದು. ಆದರೆ ಅವನ ಆಲೋಚನೆ ಮಾತ್ರ ವಿಶ್ವಮಟ್ಟದಲ್ಲಿ ಇರಬೇಕು. ಇಲ್ಲಿ ನನ್ನ ತರಗತಿಯಲ್ಲಿ ನನ್ನ ಎದುರು ಇರುವ ಮಕ್ಕಳು ಮಾತ್ರ ನನ್ನ ವಿದ್ಯಾರ್ಥಿಗಳಲ್ಲ; ಬದಲಾಗಿ ಈ ಜಗತ್ತಿನ ಯಾವುದೇ ಮೂಲೆಯಲ್ಲಿ ಕಲಿಯುತ್ತಿರುವ ಮಗುವೂ ನನ್ನ ವಿದ್ಯಾರ್ಥಿಯೇ ಎಂಬ ವಿಶಾಲ ಭಾವ ಅವರಲ್ಲಿ ಬೆಳೆಯಬೇಕು. ಆವಾಗ ನನ್ನ ವಿಷಯವೇ ಮೊದಲು ಬರಬೇಕು. ನಮ್ಮ ಶಾಲೆಯೇ ಮೇಲೆ ಬರಬೇಕು ಎಂಬ ಕ್ಷುಲ್ಲಕ ಮನಸ್ಥಿತಿಯಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತದೆ. ಅವರು ಆ ಹಂತಕ್ಕೆ ಬಂದಾಗ ಪಾಸಾಗಬೇಕಾದ ಒಬ್ಬ ಮಗುವು ಫೇಲ್‌ ಆದಾಗ ಹೇಗೆ ಮನಸ್ಸಿಗೆ ನೋವಾಗುತ್ತದೆಯೋ ಹಾಗೆಯೇ ಅರ್ಹತೆಯಿಲ್ಲದ ಮಗುವೊಂದು ಅಪ್ರಮಾಣಿಕವಾಗಿ ಪಾಸ್‌ ಆದಾಗಲೂ ಅವರ ಮನಸ್ಸಿಗೆ ನೋವಾಗುತ್ತದೆ. ಮಾತ್ರವಲ್ಲ ಅರ್ಹತೆ ಮೀರಿ ತಮ್ಮ ಶಾಲೆಗೆ ಉತ್ತಮ ಫಲಿತಾಂಶ ಬಂದಾಗ ಸಿಹಿಹಂಚಿ ಸಂಭ್ರಮಿಸಲು ಅವರಿಗೆ ಮುಜುಗರ ನಾಚಿಕೆ ಆಗುತ್ತದೆ. ಅದಕ್ಕಾಗಿ ತೊಡಿಸುವ ಸಾಧನೆಯಕಿರೀಟ ಮುಳ್ಳಿನ ಕಿರೀಟವಾಗಿ ತಲೆಯನ್ನು ಚುಚ್ಚುತ್ತದೆ. ಆಗ ಶಿಕ್ಷಣದ ಪಥವೇ ಬದಲಾಗುತ್ತದೆ. ಆಗ ಮಾತ್ರ ನೆಲ್ಸನ್‌ ಮಂಡೇಲಾ ಹೇಳಿದಂತೆ ಶಿಕ್ಷಣವು ಸಮಾಜ ಪರಿವರ್ತನೆಯ ಪ್ರಬಲ ಆಯುಧವಾಗಿ ಕೆಲಸ ಮಾಡುತ್ತದೆ.

*****

ಡಾ ರಾಜೇಂದ್ರ ಬುರಡಿಕಟ್ಟಿ

18-01-2026

Saturday, November 29, 2025

ಎಳೆಯ ವಯಸ್ಸಿನ ಮನಸ್ಸನ್ನು ಸೆಳೆಯುವ ಸಂವಿಧಾನ ಕೃತಿ

 ಎಳೆಯ ವಯಸ್ಸಿನ ಮನಸ್ಸನ್ನು ಸೆಳೆಯುವ ಸಂವಿಧಾನ ಕೃತಿ

ಶಾಲಾ ಮಕ್ಕಳಿಗೆ ತೀರಾ ಇತ್ತೀಚಿನವರೆಗೂ ಬಡತನ, ಅನಕ್ಷರತೆ, ಜನಸಂಖ್ಯಾಸ್ಪೋಟ, ನಿರುದ್ಯೋಗ ಇಂಥವುಗಳನ್ನು ಭಾರತವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಗಳೆಂದು ಹೇಳಿಕೊಡಲಾಗುತ್ತಿತ್ತು. ಆದರೆ ತೀರಾ ಇತ್ತೀಚೆಗಿನ ವಿದ್ಯಮಾನಗಳನ್ನು ನೋಡಿದರೆ ಇವು ಯಾವೂ ಇಂದು ಭಾರತದ ಗಂಭೀರ ಸಮಸ್ಯೆಗಳೆಂದು ತೊರುತ್ತಿಲ್ಲ. ಈಗ ಇಡೀ ದೇಶವನ್ನು ಗಂಭೀರವಾಗಿ ಕಾಡುತ್ತಿರುವ ಏಕೈಕ ಮತ್ತು ಬೃಹತ್‌ ಆದ ಸಮಸ್ಯೆ ಎಂದರೆ ಅದು ʻಕೂಡಿಬಾಳುವಿಕೆʼ ಅಥವಾ ʻಸೌಹಾರ್ದ ಬದುಕುʼ ಅನ್ನಿಸುತ್ತದೆ.

ಈ ಮೊದಲು ಹೇಳಿದ ಸಮಸ್ಯೆಗಳು ಹಲವಾರು ವರ್ಷಗಳು ನಮ್ಮ ದೇಶದ ಮುಖ್ಯ ಸಮಸ್ಯೆಗಳು ಆಗಿದ್ದಾಗ್ಯೂ ದೇಶದ ಜನ ಅದನ್ನು ಹೇಗೋ ನಿಭಾಯಿಸಿಕೊಂಡು ಬದುಕುತ್ತಾ ಬಂದಿದ್ದಾರೆ. ಆದರೆ ಈಗ ಜನಾಂಗಿಯ ಕಾರಣಕ್ಕಾಗಿ, ಧರ್ಮಗಳ ಕಾರಣಕ್ಕಾಗಿ ಹುಟ್ಟಿಕೊಂಡಿರುವ ಮೂಲಭೂತವಾದ ಮತ್ತು ಕೋಮುವಾದಗಳು ಇಡೀ ದೇಶದ ಜನಜೀವನವನ್ನೇ ಆತಂಕದ ಹೊಸ್ತಿಲಿಗೆ ತಂದು ನಿಲ್ಲಿಸಿವೆ. ದೇಶದಲ್ಲಿ ಅನೇಕ ಧರ್ಮಗಳು, ಅವುಗಳ ಮಠಮಾನ್ಯಗಳು, ಶ್ರದ್ಧಾಕೇಂದ್ರಗಳು ಇದ್ದಾಗ್ಯೂ ಅವುಗಳ ಗಮನ ತಮ್ಮ ತಮ್ಮ ಧರ್ಮಗಳ ಜನರನ್ನು ಒಳ್ಳೆಯ ಸಂಬಂಧದಿಂದ ಕೂಡಿಬಾಳುವುದನ್ನು ಕಲಿಸುವುದರ ಕಡೆಗೇ ಇದ್ದು ತಮ್ಮ ತಮ್ಮ ಧಾರ್ಮಗಳ ಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಉದ್ದೀಪನಗೊಳಿಸುವಲ್ಲಿಯೇ ಅವು ನಿರತವಾಗಿವೆ.

ಹೀಗೆ ಧಾರ್ಮಿಕ ಭಾವನೆಗಳ ಉದ್ದೀಪನ ಕಾರ್ಯ ಎಷ್ಟರ ಮಟ್ಟಿಗೆ ಇವತ್ತು ಆಗಿದೆ ಎಂದರೆ ಎಲ್ಲ ಧರ್ಮಗಳ ಜನ ತಮ್ಮ ಧರ್ಮಗಳ ಬಗ್ಗೆ ಶ್ರದ್ಧೆಯನ್ನು ಹೊಂದುವುದು  ಅಂದರೆ ಇತರ ಧರ್ಮಗಳನ್ನು ಅಗೌರವಿಸುವುದು ಅನ್ನುವಷ್ಟರ ಮಟ್ಟಿಗೆ! ಹಾಗಾಗಿ ಈ ಧರ್ಮಗಳು ಧರ್ಮಗ್ರಂಥಗಳು ಇವೆಲ್ಲ ಬಹುತ್ವದ ದೇಶವಾದ ಭಾರತದ ಸಮಸ್ತ ಜನತೆಯನ್ನು ಒಟ್ಟಾಗಿ ನಾವೆಲ್ಲ ಒಂದು ಎಂದು ಭಾವಿಸಿ ಪರಸ್ಪರ ಪ್ರೀತಿ ವಿಶ್ವಾಸ, ಶ್ರದ್ಧೆಯಿಂದ ಕೂಡಿಬಾಳುವುದನ್ನು ಕಲಿಸುವಲ್ಲಿ ವಿಫಲವಾಗಿವೆ ಎಂದೇ ಹೇಳಬೇಕು.

ಇಂತಹ ಸಂದರ್ಭದಲ್ಲಿ ಭಿನ್ನಭಿನ್ನ ಸಂಸ್ಕೃತಿ ಪರಂಪರೆ, ಧಾರ್ಮಿಕ ‍ಶ್ರದ್ಧೆ ಮತ್ತು ಸಂಪ್ರದಾಯಗಳ ಜನರೆಲ್ಲರನ್ನೂ ಒಳಗೊಂಡ ಎಲ್ಲ ಭಾರತೀಯರನ್ನು ಒಟ್ಟಾಗಿ ಬಾಳುವಂತೆ ಮಾಡಬಹುದಾದ ಶಕ್ತಿ ಇರುವುದು ಒಂದೇ ಒಂದು ಗ್ರಂಥಕ್ಕೆ. ಆ ಗ್ರಂಥ ಬೇರೆ ಯಾವುದೂ ಅಲ್ಲ ನಮ್ಮ ಸಂವಿಧಾನ! ಎಲ್ಲ ಧರ್ಮಗಳ ಗ್ರಂಥಗಳು ತಮ್ಮ ತಮ್ಮ ಧರ್ಮದ ಜನರಿಗೆ ಮಾರ್ಗದರ್ಶನ ನೀಡಿದರೆ ಇದು ಎಲ್ಲ ಧರ್ಮಗಳ ಜನರಿಗೂ ಮಾರ್ಗದರ್ಶನ ನೀಡಬಲ್ಲ ಗ್ರಂಥ! ಎಲ್ಲ ಧರ್ಮಗ್ರಂಥಗಳು ಸಾವಿನ ನಂತರದ ಸ್ವರ್ಗ ನರಕ ಇತ್ಯಾದಿಗಳ ಮಹತ್ವವದ ಕಡೆಗೆ ಹೆಚ್ಚು ಗಮನ ಹರಿಸಿದರೆ ಸಾಯುವತನಕ ನಾವು ಬದುಕಬೇಕಾದ ಇಹದ ಬದುಕನ್ನು ನೆಮ್ಮದಿಯುತವಾಗಿ ಗೌರವಯುತವಾಗಿ ಕಳೆಯುವುದು ಹೇಗೆ ಎಂಬುದರ ಕಡೆ ನಮ್ಮ ಸಂವಿಧಾನ ಗಮನ ಹರಿಸುತ್ತದೆ.

ಹೀಗಾಗಿ ಇಂದು ನಮ್ಮ ಜನರಿಗೆ ವಿಶೇಷವಾಗಿ ಯುವಜನತೆ ಮತ್ತು ಶಾಲಾಮಕ್ಕಳಿಗೆ ನಮ್ಮ ನಮ್ಮ ಧರ್ಮಗ್ರಂಥಗಳ ಪರಿಚಯ ಮಾಡಿಕೊಡುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಸಂವಿಧಾನವನ್ನು ಪರಿಚಯಮಾಡಿಕೊಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಡಿಮೆಯಾದರೂ ಕೆಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಕರ್ನಾಟಕ ಸರ್ಕಾರ ಶಾಲಾಕಾಲೇಜುಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ಮಕ್ಕಳಿಂದ ಹೇಳಿಸುವ ಆದೇಶ ಮಾಡಿ ಅದು ನಡೆಯುವಂತೆ ಮಾಡಿರುವುದು ಈ ಹಿನ್ನಲೆಯಲ್ಲಿ ಒಂದು ಮಹತ್ವದ ಹೆಜ್ಜೆ ಎಂದೇ ಹೇಳಬೇಕು. ಇದರ ಜೊತೆಗೆ ಮಕ್ಕಳಿಗೆ ಮತ್ತು ಯುವಕರಿಗೆ ಸಂವಿಧಾನವನ್ನು ಸರಳವಾಗಿ ಪರಿಚಯ ಮಾಡಿಕೊಡುವ ಕೆಲವು ಪುಸ್ತಕಗಳು ಪ್ರಕಟವಾಗುತ್ತಿರುವುದೂ ಒಂದು ಒಳ್ಳೆಯ ಬೆಳವಣಿಗೆ.

ಕನ್ನಡದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ, ಪ್ರೊ. ಎಂ. ಅಬ್ದುಲ್‌ ರೆಹಮಾನ್‌ ಪಾಷ ಅವರ ʻಸರಳ ಓದಿಗಾಗಿ ಭಾರತ ಸಂವಿಧಾನʼ ಸೇರಿದಂತೆ ಕೆಲವು ಚಿಕ್ಕಚಿಕ್ಕಪುಸ್ತಕಗಳು ಪ್ರಕಟವಾಗಿ ಈ ಬಗೆಯ ಒಂದು ತುರ್ತು ಅಗತ್ಯವನ್ನು ಪೂರೈಸಿವೆ. ಆದರೆ ಈ ಕೆಲಸ ಎಷ್ಟಕ್ಕೂ ಸಾಲದು. ಬಹಳಷ್ಟು ಜನ ಲೇಖಕರು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಸಂವಿಧಾನವವನ್ನು ವಿವಿಧ ಹಂತದ ಮಕ್ಕಳಿಗೆ ಅವರ ವಯೋಮಾನಕ್ಕೆ ತಕ್ಕಂತೆ ಸರಳವಾಗಿ ಆಕರ್ಷಕ ಭಾಷೆಯಲ್ಲಿ ಪರಿಚಯಿಸುವ ಕೆಲಸ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ನೋಡಿದಾಗ ಇತ್ತೀಚೆಗೆ ಪ್ರಕಟವಾದ ಡಾ. ಎಂ ಬಸವರಾಜಪ್ಪ ಅವರ, ʼವಿದ್ಯಾರ್ಥಿಗಳಿಗಾಗಿ ಭಾರತ ಸಂವಿಧಾನʼ ಎಂಬ ಚಿಕ್ಕ ಪುಸ್ತಕವೊಂದು ಗಮನ ಸೆಳೆಯುತ್ತದೆ.

ಈ ಮೊದಲು ಪ್ರಸ್ತಾಪವಾದ ಪ್ರೊ. ಅಬ್ದುಲ್‌ ರೆಹಮಾನ್‌ ಅವರ ಪುಸ್ತಕ ಒಂದಿಷ್ಟು ವಿವರಣೆಗಳನ್ನು ಹೊಂದಿದ್ದು ಅದು ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೆ ಸರಿಹೊಂದುವಂತಿದೆ. ಆದರೆ ಅದಕ್ಕೂ ಮೊದಲೇ ಬರುವ ಪ್ರೌಢಶಾಲೆ ಮಕ್ಕಳ ಮಟ್ಟಕ್ಕೆ ಸರಿಯಾಗಿ ಬಸವರಾಜಪ್ಪ ಅವರ ಈ ಪುಸ್ತಕ ರಚನೆಯಾಗಿರುವುದು ಈ ನಿಟ್ಟಿನಲ್ಲಿರುವ ಒಂದು ಕೊರತೆಯನ್ನು ತುಂಬುವ ಪ್ರಯತ್ನವಾಗಿದೆ ಎನ್ನಬಹುದು.

ಎಂಬತ್ತು ಪುಟಗಳ, ಬಣ್ಣದ ಮುದ್ರಣವನ್ನು ಹೊಂದಿರುವ ಈ ಪುಸ್ತಕ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಂಡಿದೆ ಮಾತ್ರವಲ್ಲ; ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರಾದ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ಸಂವಿಧಾನದದ ಅಂತಿಮ ಪ್ರತಿಯನ್ನು ಸಂವಿಧಾನ ರಚನಾಸಮಿತಿಯ ಅಧ್ಯಕ್ಷರಾಗಿದ್ದ ಡಾ ಬಾಬು ರಾಜೇಂದ್ರ ಪ್ರಸಾದ್‌ ಅವರಿಗೆ, ನೆಹರೂ ಪಟೇಲ್‌ ಮುಂತಾದ ಗಣ್ಯರ ಸಮ್ಮುಖದಲ್ಲಿ ಸಲ್ಲಿಸುತ್ತಿರುವ ಐತಿಹಾಸಿಕ ಮಹತ್ವದ ಭಾವಚಿತ್ರವನ್ನು ಮುಖಪುಟವಾಗಿ ಬಳಸಿಕೊಳ್ಳುವ ಮೂಲಕ ಆಕರ್ಷಕ ಹೊರನೋಟವನ್ನೂ ಹೊಂದಿದೆ.

ನಮ್ಮ ಸಂವಿಧಾನವನ್ನು ಪರಿಚಯಿಸುವ ಇದುವರೆಗಿನ ಪುಸ್ತಕಗಳಿಗಿಂತ ಈ ಪುಸ್ತಕ ಒಂದು ವಿಷಯದಲ್ಲಿ ಭಿನ್ನವಾಗಿದೆ. ಅದೆಂದರೆ ನಮ್ಮ ಸಂವಿಧಾನ ಹೊಂದಿರುವ ಇಪ್ಪತ್ತೆರಡು ವಿಭಾಗಗಳಲ್ಲೂ ಪ್ರತಿವಿಭಾಗದ ಆರಂಭದಲ್ಲಿ ಬಳಸಲ್ಪಟ್ಟಿರುವ ಇಪ್ಪತ್ತೆರಡು ಚಿತ್ರಗಳು ಮತ್ತು ಅವುಗಳ ವಿವರಣೆ ನೀಡಿರುವುದು. ಈ ಚಿತ್ರಗಳು ಭಾರತದ ಪ್ರಾಚೀನ ಮತ್ತು ಅರ್ವಾಚೀನ ಪರಂಪರೆ ಮತ್ತು ಇತಿಹಾಸಗಳೊಂದಿಗೆ ಸಂಬಂಧಹೊಂದಿರುವ ಮಹತ್ವದ ಚಿತ್ರಗಳಾಗಿದ್ದು ಇವುಗಳ ವಿವರಣೆ ಪುಸ್ತಕದ ಅರ್ಧದಷ್ಟು ಪುಟಗಳನ್ನು ತಗೆದುಕೊಂಡಿದೆ.

ಸಂವಿಧಾನದ ಮೊದಲನೆಯ ಭಾಗವಾದಲ್ಲಿ ಕಾಣಿಸಿಕೊಳ್ಳುವ ಸಿಂಧೂನಾಗರಿಕತೆಯ ಪ್ರಮುಖ ಗುರುತಾಗಿರುವ ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವ ಲಿಪಿಯೊಂದಿಗಿರುವ ಗೂನುಳ್ಳ ಬುಲ್ ಸೀಲ್‌ ನಿಂದ ಹಿಡಿದು ಕೊನೆಯ ಅಂದರೆ ಇಪ್ಪತ್ತೆರಡನೆಯ ವಿಭಾಗದಲ್ಲಿ ಚಿತ್ರಿಸಲ್ಪಟ್ಟಿರುವ ಭಾರತದ ಸಮುದ್ರಯಾನದ ದೃಶ್ಯದ ವರೆಗೆ ಎಲ್ಲ ವಿಭಾಗಳ ಚಿತ್ರಗಳೂ ಅವುಗಳ ಐತಿಹಾಸಿಕ ಮಹತ್ವದೊಂದಿಗೆ ಒಂದೊಂದು ಪುಟದಲ್ಲಿ ವಿವರಿಸಲ್ಪಟ್ಟಿವೆ. ವಿವಿಧ ವಿಭಾಗಗಳಲ್ಲಿ ಚಿತ್ರಿತವಾಗಿರುವ ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣ, ರಾಮಾಯಣದ ಪುಷ್ಪಕ ವಿಮಾನಯಾನ, ಮಹಾಭಾರತದ ಗೀತಾಬೋಧನೆ, ಬುದ್ಧ ಮಹಾವೀರ, ಗುರುಗೋವಿಂದ ಸಿಂಗ್ ಮುಂತಾದ ಧಾರ್ಮಿಕ ನಾಯಕರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳ ಜೊತೆಗೆ ಅಶೋಕ, ವಿಕ್ರಮಾದಿತ್ಯ, ಶಿವಾಜಿ, ಅಕ್ಬರ್‌ ಮುಂತಾದ ರಾಜರಿಗೆ ಸಂಬಂಧಿಸಿದ  ಚಿತ್ರಗಳೂ ನಮ್ಮ ಸಂವಿಧಾನದಲ್ಲಿ ಸ್ಥಾನ ಪಡೆದಿದ್ದು ಆ ಎಲ್ಲ ಚಿತ್ರಗಳನ್ನು ಸೂಕ್ತ ವಿವರಣೆಯೊಂದಿಗೆ ಇಲ್ಲಿ ನೀಡಲಾಗಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಆರಂಭದ ಕಾಲಘಟ್ಟದಲ್ಲಿ ಬ್ರಿಟೀಷರೊಂದಿಗೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ‍ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಟಿಪ್ಪುಸುಲ್ತಾನ್‌, ಇವರುಗಳ ಜೊತೆಗೆ ಕೊನೆಯ ಘಟ್ಟದ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿಯ ಉಪ್ಪಿನ ಸತ್ಯಾಗ್ರಹ, ಸುಭಾಷ್‌ ಚಂದ್ರದ ಫಾರ್ವರ್ಡ್‌ ಬ್ಲಾಕ್‌ ಇವುಗಳ ಚಿತ್ರಗಳ ವಿವರಣೆ ಕೂಡ ಚೆನ್ನಾಗಿದೆ. ಸ್ವಾತಂತ್ರ್ಯ ಸಿಕ್ಕ ಹೊಸತರದಲ್ಲಿ ಉಂಟಾದ ಕೋಮುಗಲಭೆಗಳನ್ನೂ ಅದರ ಶಮನಕ್ಕೆ ಗಾಂಧೀಜಿ ಮಾಡಿದ ಪ್ರಯತ್ನವನ್ನು ನೆನಪಿಸುವಂತೆ ಹದಿನೆಂಟನೆಯ ವಿಭಾಗದಲ್ಲಿರುವ ನೌಖಾಲಿಯ ಗಾಂಧೀಪ್ರವಾಸದ ಚಿತ್ರ ಮತ್ತು ಅದರ ವಿವರಣೆ ಗಮನ ಸೆಳೆಯುತ್ತದೆ. ಇವುಗಳ ಜೊತೆಗೆ ಭಾರತ ಭೌಗೋಳಿಕ ಭಿನ್ನತೆಯ ಪ್ರತೀಕವಾಗಿ ಚಿತ್ರಿಸಲ್ಪಟ್ಟ ಉತ್ತರದ ಹಿಮಾಲಯ ಪರ್ವತ ಶ್ರೇಣಿ ಹಾಗೂ ರಾಜಸ್ಥಾನದ ಮರುಭೂಮಿ ಚಿತ್ರಣಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವಂತೆ ಇವೆ. ಸಂವಿಧಾನದ ಹಿಂದಿನ ರಕ್ಷಾಪುಟದಲ್ಲಿ ಚಿತ್ರಿತವಾಗಿರುವ ಕಪ್ಪುಹಿನ್ನಲೆಯ ಕಮಲಮಾಲೆಯ ವೃತ್ತಾಕಾರದ ಚಿತ್ರ, ಆರಂಭದಲ್ಲಿ ಅಲಂಕಾರಿಕ ಪುಟದಲ್ಲಿರುವ ಪ್ರಸ್ತಾವನೆ ಹೀಗೆ ಇಡೀ ಸಂವಿಧಾನದಲ್ಲಿ ಬಳಕೆಯಾಗಿರುವ ಎಲ್ಲ ಬಗೆಯ ಕಲಾತ್ಮಕ ಚಿತ್ರಗಳನ್ನು ಅವುಗಳ ಪೌರಾಣಿಕ ಅಥವಾ ಐತಿಹಾಸಿಕ ಮಹತ್ವಗಳೊಂದಿಗೆ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಲಾಗಿದೆ.

ಮೊದಲಭಾಗ ಹೀಗೆ ಚಿತ್ರಗಳು ಮತ್ತು ಅವುಗಳ ವಿವರಣೆಗೆ ಮೀಸಲಾಗಿದ್ದರೆ ಮುಂದಿನ ಭಾಗ ಇಡೀ ನಮ್ಮ ಸಂವಿಧಾನದಲ್ಲಿ ಒಟ್ಟು ಎಷ್ಟು ಭಾಗಗಳಿವೆ ಮತ್ತು ಅವು ಯಾವುದಕ್ಕೆ ಸಂಬಂಧಿಸಿದ ವಿಭಾಗಗಳಾಗಿವೆ ಹಾಗೂ ಆ ವಿಭಾಗದಲ್ಲಿ ಯಾವೆಲ್ಲ ವಿಧಿಗಳು ಬರುತ್ತವೆ ಎಂಬುದನ್ನು ತಿಳಿಸಲು ಮೀಸಲಾಗಿದೆ. ಇಲ್ಲಿ ಪ್ರತಿ ವಿಭಾಗದಲ್ಲಿ ಬರುವ  ಎಲ್ಲ ವಿಧಿಗಳನ್ನೂ ಯಾವುದನ್ನೂ ಬಿಡದಂತೆ ವಿವರಿಸಲಾಗಿದೆಯಾದರೂ ಯಾವ ವಿಧಿಯನ್ನೂ ದೀರ್ಘವಾಗಿ ವಿವರಿಸದೇ ಒಂದೆರಡು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿದೆ. ಮುಖ್ಯವಾಗಿ ಆ ವಿಧಿಗಳು ಏನನ್ನು ಹೇಳುತ್ತವೆ ಎಂಬುದಕ್ಕೆ ಕೇಂದ್ರೀಕರಿಸಿ ಈ ವಿವರಣೆ ನೀಡಲಾಗಿದೆ. ಚಿಕ್ಕಮಕ್ಕಳನ್ನು ಉದ್ದೇಶಿಸಿರುವ ಪುಸ್ತಕವಾಗಿರುವುದರಿಂದ ಲೇಖಕರು ಇದನ್ನು ಬಹಳ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಅನ್ನಿಸುತ್ತದೆ.

ಈ ಪುಸ್ತಕ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಅದರಲ್ಲೂ ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದದ್ದಾಗಿದ್ದಾಗ್ಯೂ ದೊಡ್ಡವರಿಗೂ ಒಂದು ರೀತಿಯಲ್ಲಿ ಸಂವಿಧಾನದ ಕೈಪಿಡಿಯಂತೆ ಬಳಸಲು ಬಹಳ ಉಪಯುಕ್ತವಾಗಿದೆ. ದೊಡ್ಡವರಿಗೆ ಇದು ವಿಶೇಷವಾಗಿ ʻರೆಫರೆನ್ಸ್‌ ಗೈಡ್‌ʼ ಆಗಿ ಬಳಕೆಗೆ ಸೂಕ್ತವಾಗಿದೆ. ಉದಾಹರಣೆಗೆ ಭಾರತದ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಸಂವಿಧಾನ ಯಾವ ವಿಧಿ ಮೂಲಕ ನೀಡಿದೆ ಎಂಬ ಮಾಹಿತಿಯೋ ಅಥವಾ  ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಕರ್ತವ್ಯವನ್ನು ಯಾವ ವಿಧಿಯ ಮೂಲಕ ಮೂಲಭೂತ ಕರ್ತವ್ಯವಾಗಿ ವಿಧಿಸಿದೆ ಎಂಬ ಮಾಹಿತಿಯೋ ಬೇಕಾಯಿತು ಎಂದರೆ ಇದರಲ್ಲಿ ಅದು ತಕ್ಷಣಕ್ಕೆ ಸಿಗುತ್ತದೆ. ಹೆಚ್ಚಿನ ವಿವರಣೆ ಬೇಕಾದರೆ ಬೇರೆಯ  ಗ್ರಂಥಗಳನ್ನು ಪರಿಶೀಲಿಸಿವುದು ಅಗತ್ಯವಾಗಬಹುದಾದರೂ ತಕ್ಷಣದ ಮಾಹಿತಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.

ಭವ್ಯಭಾರತದ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕಾಗಿರುವ ನಮ್ಮ ಮಕ್ಕಳಿಗೆ ಇಂತಹ ಉತ್ತಮ ಕೃತಿಗಳನ್ನುಎಳೆಯ ವಯಸ್ಸಿನಲ್ಲಿಯೇ ನಾವು ಪರಿಚಯಿಸುವುದು ಆ ಮೂಲಕ ಅವರು ಧಾರ್ಮಿಕ ಮೂಲವಾದಿಗಳು ಹಾಗೂ ಕೋಮುವಾದಿಗಳ ಕೈಗೆ ಸಿಕ್ಕು ಹಾಳಾಗದೆ, ಉತ್ತಮ ನಾಗರಿಕಾಗಿ ಬೆಳೆದು ಭಾರತದ ಸೌಹಾರ್ದ ಪರಂಪರೆಯನ್ನು ಗೌರವಿಸುತ್ತ ಎಲ್ಲ ಜಾತಿಧರ್ಮಗಳೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ನೆಮ್ಮದಿಯ ಬದುಕನ್ನು ಬದುಕುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಅದು ಅವರು ತಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಕೊಡುವ ಅತ್ಯಮೂಲ್ಯ ಕೊಡುಗೆಯೂ ಹೌದು. ಅಂತಹ ಕೊಡುಗೆ ನೀಡಲು ಈ ಪುಸ್ತಕ ಕೂಡ ಒಂದು ಅತ್ಯುತ್ತಮ ಸಾಧನ. ಈ ಪುಸ್ತಕವನ್ನು ನಮ್ಮ ನಮ್ಮ ಮಕ್ಕಳಿಗೆ ಕೊಡಿಸಿ ಓದಿಸುವ ಮೂಲಕ ಕೃತಿಯ ಲೇಖಕರನ್ನೂ ಅದನ್ನು ಪ್ರಕಟಿಸಿದ ಶಿವಮೊಗ್ಗದ ಬಸವಾಮೃತ ಪ್ರಕಾಶನವನ್ನೂ ಅವರ ಈ ಶ್ಲಾಘನೀಯ ಕಾರ್ಯಕ್ಕಾಗಿ ಬೆಂಬಲಿಸೋಣ.

ಡಾ. ರಾಜೇಂದ್ರ ಬುರಡಿಕಟ್ಟಿ

22-10-2025

 

Monday, November 17, 2025

ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ!

 ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ!                                                                        

ಡಾ. ರಾಜೇಂದ್ರ ಬುರಡಿಕಟ್ಟಿ

ಭಗವದ್ಗೀತೆ ಈಗ ರಾಜ್ಯದಲ್ಲಿ ಮತ್ತೆ ಸುದ್ಧಿಯಲ್ಲಿದೆ. ʻಆಕಳುʼ ʻವಂದೇ ಮಾತರಂʼ ಮತ್ತು ʻಭಗವದ್ಗೀತೆʼ ದೇಶದ ರಾಜಕಾರಣದ ಕಾರಣಕ್ಕಾಗಿ ಆಗೊಮ್ಮ ಈಗೊಮ್ಮೆ ಚರ್ಚೆಗೆ ಬರುತ್ತಲೇ ಇರುತ್ತವೆ. ಕೆಲದಿನಗಳು ʻವಂದೇ ಮಾತರಂʼ ಆವರಿಸಿದ್ದ ಸಾಮಾಜಿಕ ಸುದ್ಧಿಮಾಧ್ಯಮದ ಬಹುಮುಖ್ಯ ಜಾಗೆಯನ್ನು ಸಧ್ಯ ಗೀತಾಮಾತೆ ಆವರಿಸತೊಡಗಿದೆ. ನಾಡಿನ ಸಾಂಸ್ಕೃತಿಕ ಧೀಮಂತ ವ್ಯಕ್ತಿತ್ವವಾದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನ ವಿಶ್ವವಿದ್ಯಾಲಯ ʼಭಗವದ್ಗೀತೆ ಮತ್ತುಅಪರಾಧ ನಿಯಂತ್ರಣʼ ಎಂಬ ವಿಚಾರ ಸಂಕಿರಣವನ್ನು ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಸಹಹೋಗದಲ್ಲಿ ಏರ್ಪಡಿಸಿದ್ದು ಬಹಳಷ್ಟು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರಗತಿಪರ ಸಂಘಟನೆಗಳು ವ್ಯಕ್ತಿಗಳು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಜಾರ್ಥದಲ್ಲಿ ಸಾಮಾನ್ಯ ಮಾನವರ ಪ್ರತಿನಿಧಿಯಾದ ಅರ್ಜುನ ಯುದ್ಧದಲ್ಲಿ ಎದುರಾದ ತನ್ನ ಅಜ್ಜ ಭೀಷ್ಮರನ್ನೂ ಸೇರಿದಂತೆ ತನ್ನ ಒಡಹುಟ್ಟಿದವರು ಕೂಡಿ ಆಡಿದವರು ಬಂದುಬಳಗ ಇವರನ್ನೆಲ್ಲ ನೋಡಿ ಯುದ್ಧಮಾಡಲು ಹಿಂದೇಟು ಹಾಕುತ್ತಾನೆ. ಅದು ಅವನ ಹೇಡಿತನವಲ್ಲ. ಬದಲಾಗಿ ಅವನೊಳಗೆ ಉಕ್ಕುವ ಮಾನವಸಹಜವಾದ ಒಳ್ಳೆಯ ಗುಣ. ಅಂತಹ ಒಳ್ಳೆಯ ಗುಣವನ್ನು ಹೇಡಿತನವೆಂದು ಅವನ ಬ್ರೇನ್‌ ವಾಶ್‌ ಮಾಡಿ ಅವನು ತನ್ನ ಬಂಧುಬಳಗದವರನ್ನು ಕರುಣೆಯಿಲ್ಲದೆ ಕೊಲೆಮಾಡಲು ಗೀತೆಯʼಭಗವಂತʼ ಶ್ರೀಕೃಷ್ಣ ಹಚ್ಚುತ್ತಾನೆ! ಆಗ ಕೊಲೆ ಅಪರಾಧ ಅಲ್ಲದಿರಬಹುದು ಆದರೆ ಅದು ಈಗ ಶಿಕ್ಷಾರ್ಹ ಅಪರಾಧ! ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ಕೊಲೆಯಂಥ ಅಪರಾಧವನ್ನು ಮಾಡಲು ಹುರುದುಂಬಿಸುವ ಭಗವದ್ಗೀತೆಯಲ್ಲಿ ಅಪರಾಧ ನಿಯಂತ್ರಣ ಮಾಡುವ ಅಂಶಗಳನ್ನು ಹುಡುಕುವುದು ಒಂದು ತಮಾಸೆಯ ಸಂಗತಿಯೇ ಸರಿ. ಮಾತ್ರವಲ್ಲ; ಪ್ರಖರ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾದ ಯುವ ಸಮೂಹವನ್ನು ಇಂತಹ ಸನಾತನ ನಿಂತನೀರಿನ ಹೊಂಡಕ್ಕೆ ತಳ್ಳುವುದು ಅಪಾಯಕಾರಿ ಕೂಡ ಹೌದು! ಈ ಹಿನ್ನಲೆಯಲ್ಲಿ ಭಗವದ್ಗೀತೆಯ ಹುಟ್ಟು ಬೆಳವಣಿಗೆ ನೀಡುವ ಸಂದೇಶವನ್ನು ಈ ಬಗ್ಗೆ ಮಹಾನ್‌ ವ್ಯಕ್ತಿಗಳಾದ, ಶಂಕರಾಚಾರ್ಯ, ಜ್ಞಾನೇಶ್ವರ, ಲೋಕಮಾನ್ಯ ತಿಲಕ್‌,  ಅಂಬೇಡ್ಕರ್‌, ಕುವೆಂಪು, ವಿನೋಬಾಬಾವೆ, ಗಾಂಧೀ, ಲೋಹಿಯಾ, ರವೀಂದ್ರನಾಥ ಠಾಕೂರ್ ಮುಂತಾದವರ ಚಿಂತನೆಯ ಬೆಳಕಿನಲ್ಲಿ ಅರಿಯುವ ಪ್ರಾಮಾಣಿಕ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಭಗವದ್ಗೀತೆಯ ಹುಟ್ಟು ಮತ್ತು ಬೆಳವಣಿಗೆ

ಭಗವದ್ಗೀತೆಯ ಸಂದೇಶ ಏನು? ಪ್ರಶ್ನೆಯನ್ನು ನಾವು ಯಾರಿಗಾದರೂ ತಟ್ಟನೆ ಕೇಳಿದರೆ ಅವರು ಏನು ಹೇಳಬಹುದು? ಖಂಡಿತಾ ಒಂದೇ ರೀತಿಯ ಉತ್ತರವನ್ನು ನಾವು ಪಡೆಯಲು ಸಾಧ್ಯವಿಲ್ಲ.  ಶತಶತಮಾನಗಳಿಂದ ಭಗವದ್ಗೀತೆಯ ಬಗ್ಗೆ ಅನೇಕ ಸಹಸ್ರ ಸಂಖ್ಯೆಯಲ್ಲಿ ಉಪನ್ಯಾಸಗಳು, ಮಹಾನ್ಯಾಸಗಳು, ಟೀಕೆ ಟಿಪ್ಪಣಿಗಳು ನಡೆಯುತ್ತಲೇ ಬಂದಿದ್ದರೂ ಮೇಲಿನ ಪ್ರಶ್ನೆಗೆ `ಒಂದು ನಿರ್ದಿಷ್ಟವಾದ ಉತ್ತರ' ಎಂಬುದನ್ನು ನಾವು ಕಂಡುಕೊಳ್ಳಲಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದಕ್ಕೆ ಕಾರಣವೂ ಇದೆ. ಭಗವದ್ಗೀತೆ ಕೇವಲ ೭೦೧ ಶ್ಲೋಕಗಳಿರುವ, ಒಂದೇ ಒಂದು ಓದುವಿಕೆಯಲ್ಲಿ ಓದಿ ಮುಗಿಸಬಹುದಾದ ಒಂದು ತೀರಾ ಚಿಕ್ಕದಾದ ಕೃತಿ. ಇದು ಎಷ್ಟು ಚಿಕ್ಕದಾದ ಕೃತಿ ಎಂದರೆ ಅದನ್ನು ನಮ್ಮ ಕೈ ಮುಷ್ಠಿಯಲ್ಲಿ ಯಾವ ತೊಂದರೆಯೂ ಇಲ್ಲದೆ ಬಚ್ಚಿಟ್ಟುಕೊಳ್ಳಬಹುದು.

ಗಾತ್ರದಲ್ಲಿ ಇಷ್ಟೊಂದು ಚಿಕ್ಕದಾದ ಭಗವದ್ಗೀತೆಯ ಮೇಲೆ ಅದರ ರಚನೆಯ ಕಾಲದಿಂದ ಇದುವರೆಗೆ ಬಂದ ಟೀಕೆ, ಟಿಪ್ಪಣಿ, ವ್ಯಾಖ್ಯಾನ, ಭಾಷ್ಯ ಇವುಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಇವುಗಳನ್ನು ಬರೆದ ವಿದ್ವಾಂಸರಲ್ಲಿ ಕೇವಲ ಭಾರತೀಯರು ಮಾತ್ರ ಇಲ್ಲ. ಅನೇಕ ವಿದೇಶಿಯರೂ ಇದ್ದಾರೆ. ಇವರೆಲ್ಲರ ಗೀತೆಯ ಮೇಲಿನ ಬರಹಗಳನ್ನು ಸೂಕ್ಷ್ಮವಾಗಿ ನಾವು ಅವಲೋಕಿಸಿದರೆ ನಮಗೆ ಅನೇಕ ಕುತೂಹಲಕಾರಿಯಾದ ಅಂಶಗಳು ಸಿಗುತ್ತವೆ. ಗೀತೆಯನ್ನು ಅವರು ಹೇಗೆಲ್ಲ ಅರ್ಥಮಾಡಿಕೊಂಡಿದ್ದಾರೆ ಎಂದು ನಾವು ನೋಡಿದರೆ ನಮಗೆ ಖಂಡಿತಾ ಗೊಂದಲ ಉಂಟಾಗಿಯೇ ಆಗುತ್ತದೆ. ಗೊಂದಲವೇ ಇವತ್ತಿಗೂ ಗೀತೆಯ ಸಂದೇಶವೇನು ಎಂದು ಯಾರಾದರೂ ಕೇಳಿದರೆ ತಕ್ಷಣ ಸರಳವಾಗಿ ಉತ್ತರಿಸಲಾಗದ ಒಂದು ಮನಸ್ಥಿತಿಯನ್ನು ನಾವಿಂದು ನಮ್ಮ ಸಮಾಜದಲ್ಲಿ ಕಾಣಲು ಕಾರಣವಾದ ಅಂಶ. ಈಗ ಗೀತೆಯನ್ನು ನಮ್ಮ ಹಿರಿಯರು ಹೇಗೆಲ್ಲ ಅರ್ಥೈಸಿಕೊಂಡಿದ್ದಾರೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

ಒಬ್ಬೊಬ್ಬರಿಗೆ ಒಂದೊದು ರೀತಿ ಕಂಡ ಗೀತೆ

ನಮ್ಮಲ್ಲಿ ಗೀತೆಯ ಬಗ್ಗೆ ಬಹುಶಃ ಮೊಟ್ಟಮೊದಲು ಬರೆದವರು ಶಂಕರಾಚಾರ್ಯರು ಎನಿಸುತ್ತದೆ. ಅವರಿಗಿಂತ ಮೊದಲು ಬಂದಿರಬಹುದಾದ ಬೇರೆ ವ್ಯಾಖ್ಯಾನಗಳು ನನ್ನ ಗಮನಕ್ಕೆ ಬಂದಿಲ್ಲ.  `ಬ್ರಹ್ಮಂ ಸತ್ಯಂ ಜಗತ್ ಮಿಥ್ಯಂ' ಎಂದು ಸಾರಿದ ಶಂಕರಾಚಾರ್ಯರಿಗೆ ಗೀತೆಯು `ಪಾರಮಾರ್ಥಿಕ ಜ್ಞಾನ' ಮತ್ತು `ಸಂನ್ಯಾಸ' ಇವುಗಳನ್ನು ಬೋಧಿಸುತ್ತದೆ ಎಂದು ಕಂಡಿದೆ.  ಆದರೆ ಅವರ ನಂತರ ಬಂದ ಭಕ್ತಿಪಂಥದ ಪ್ರಮುಖರಾದ ಜ್ಞಾನೇಶ್ವರ ಮತ್ತು ಚೈತನ್ಯ ಮುಂತಾದವರಿಗೆ ಭಕ್ತಿ ಮತ್ತು ಶ್ರದ್ಧೆಯಿಂದ ಭಗವಂತನಿಗೆ ಶರಣಾಗುವುದೇ ಗೀತೆಯ ತಿರುಳಾಗಿ ಕಂಡಿದೆ.  ಇನ್ನು ನಮ್ಮ ರಾಷ್ಟೀಯ ಚಳವಳಿಯ ಸಂದರ್ಭಕ್ಕೆ ಬಂದರೆ, ಅಲ್ಲಿ ನಮ್ಮ ಸ್ವಾತಂತ್ರ್ಯಯ ಹೋರಾಟಗಾರರಲ್ಲಿ ತೀವ್ರಗಾಮಿ ಪ್ರಮುಖರೆಂದು ಗುರುತಿಸಲ್ಪಡುವ ಬಾಲಗಂಗಾಧರ ತಿಲಕರಿಗೆ `ಶಠಂ ಪ್ರತಿ ಶಾಠ್ಯಂ' ಅಂದರೆ `ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು' ಎಂಬ ಸಂದೇಶವನ್ನು ಗೀತೆ ನೀಡಿದೆ. ಇದೇ ಅಧಾರದ ಮೇಲೆ ಅವರು ಬ್ರಿಟೀಷರು ದುಷ್ಟರು. ನಾವು ಅವರನ್ನು ದುಷ್ಟರಾಗಿಯೇ ಎದುರಿಸುವುದು ಸರಿಯಾದ ಕ್ರಮ ಎಂಬ ತೀರ್ಮಾನಕ್ಕೆ ಬಂದು ತೀವ್ರಗಾಮಿಯಾಗಿ ಗುರುತಿಸಲ್ಪಟ್ಟರು.

ಆದರೆ ಅದೇ ಸಂದರ್ಭದಲ್ಲಿ ಮಂದಗಾಮಿಗಳ ನಾಯಕರಾದ ಗಾಂಧೀಜಿ ಕೂಡ ಗೀತೆಯಿಂದ ಪ್ರಭಾವಿತರಾಗಿದ್ದರು.  ಸತ್ಯ ಮತ್ತು ಅಹಿಂಸೆಗಳನ್ನು ತಮ್ಮ ಜೀವನದ ಅತೀ ಮುಖ್ಯವಾದ ಎರಡು ತತ್ವಗಳನ್ನಾಗಿ ಸ್ವೀಕರಿಸಿದ್ದ ಗಾಂಧೀಜಿ ಅವೆರಡೂ ಇರದ ಗೀತೆಯನ್ನು ಬೇರೊಂದು ರೀತಿಯಲ್ಲಿ ಅರ್ಥೈಸಿದರು. ಅಲ್ಲಿ ಬರುವ ವೈರಿಗಳು ಅಂದರೆ ನಮ್ಮ ದೇಹದಲ್ಲಿ ಮನೆಮಾಡಿರುವ ಅರಿಷಡ್ವರ್ಗಗಳು ಎಂಬರ್ಥದಲ್ಲಿ ಅವರು ಗೀತೆಯನ್ನು ವ್ಯಾಖ್ಯಾನಿಸಿಕೊಂಡುಬಿಟ್ಟರು! ಇದೇ ಸಂದರ್ಭದಲ್ಲಿ


ಗೋಲ್ವಾಲ್ಕರ್ ಅಂಥ ಹಿಂದೂ ನಾಯಕರಿಗೆ ಮುಸ್ಲಿಮರು ದೇಶಕ್ಕೆ ಪರಕೀಯರು ಎಂಬರ್ಥ ಗೀತೆಯಿಂದ ಸಿಕ್ಕಿತು. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಇವರೆಲ್ಲರಿಗೂ ಸಮಾನ ವೈರಿಯಾಗಿದ್ದ ಬ್ರಿಟೀಷರು ಕೂಡ ಗೀತೆಯನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು `ಲೌಕಿಕ ಜ್ಞಾನ ಕಡಿಮೆ ಇರುವ ಕಾರಣ ಭಾರತೀಯರು ಸ್ವಾತಂತ್ರ್ಯ ಪಡೆಯಲು ಇನ್ನೂ ಅರ್ಹತೆ ಪಡೆದಿಲ್ಲʼ ಎಂಬ ತೀರ್ಮಾನಕ್ಕೆ ಬಂದರು!!  ಇನ್ನು ಸ್ವಾತಂತ್ರ್ಯ ನಂತರದ ಚಿಂತಕರಾದ ಡಾ. ಎಸ್. ರಾಧಾಕೃಷ್ಣನ್ ಅಂಥವರಿಗೆ ಮಾನವನ ಜೀವನದ ಅಭಿವೃದ್ಧಿಗೆ ಅಗತ್ಯವಾದ ಅಂಶಗಳು ಗೀತೆಯಲ್ಲಿ ಇವೆ ಅನ್ನಿಸಿದರೆ ಡಾ. ಅಂಬೇಡ್ಕರ್ ಅಂಥವರಿಗೆ ಅದು ಯಾವುದೇ ಸಾಮಾಜಿಕ ಬದಲಾವಣೆಯನ್ನು ಇಷ್ಟಪಡದ ಮತ್ತು ಜನರ ಮೇಲೆ ಯಾವುದೋ ಒಂದು ಜನಾಂಗದ ಧಾರ್ಮಿಕ ನಂಬಿಕೆಗಳನ್ನು ಆಕರ್ಷಕ ಶೈಲಿಯಲ್ಲಿ ಹೇರುವ ಒಂದು ಕೃತಿಯಾಗಿ ಕಂಡಿದೆ.

ಗೀತೆಯ ಸಂದೇಶ ಅರಿಯುವ ಬಗೆ

ಮೇಲಿನ ಅನೇಕ ವಿದ್ವಾಂಸರು ಗೀತೆಯನ್ನು ವಿಭಿನ್ನ ರೀತಿಯಲ್ಲಿ ಅನೇಕ ವೇಳೆ ಪರಸ್ಪರ ವಿರುದ್ಧವಾದ ರೀತಿಯಲ್ಲಿ ಅರ್ಥೈಸಿರುವುದನ್ನು ನೋಡಿದರೆ ಅದರಲ್ಲಿ ನಿಜವಾಗಿಯೂ ಇರುವ ಸಂದೇಶ ಯಾವುದು ಎಂಬ ನಮ್ಮ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ. ಭಾರತದ ಉಪರಾಷ್ಟçಪತಿಗಳಾಗಿದ್ದ ಬಿ.ಡಿ. ಜತ್ತಿ ಅವರ, "ಭಗವದ್ಗೀತೆ ಕನ್ನಡಿ ಇದ್ದಂತಿದೆ. ಅದನ್ನು ನೋಡುವವರ ಬಿಂಬವೇ ಅದರಲ್ಲಿ ಪ್ರತಿಫಲನಗೊಳ್ಳುತ್ತದೆ" ಎನ್ನುವ ಮಾತನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಭಗವದ್ಗೀತೆಯಲ್ಲಿ ತನ್ನದು ಎನ್ನುವುದು ಏನೂ ಇಲ್ಲ. ಅದು ನಮ್ಮಲ್ಲಿರುವುದನ್ನು ನಮಗೆ ತೋರಿಸುವ ಒಂದು ಕನ್ನಡಿಯಂಥ ಪುಸ್ತಕ ಎಂದು ಅರ್ಥಮಾಡಿಕೊಳ್ಳುವುದೇ ಸರಿಯಾದ ಅರ್ಥೈಸುವಿಕೆ ಎನಿಸುತ್ತದೆ. ಗೀತೆಯಲ್ಲಿ ನಿಜವಾಗಿಯೂ ಇರುವ ಸಂದೇಶ ಯಾವುದು ಎಂಬ ನಮ್ಮ ಪ್ರಶ್ನೆಗೆ ನಿಜವಾದ ಉತ್ತರ ಬೇಕು ಎನ್ನುವುದಾದರೆ ಇವರೆಲ್ಲರ ಅಭಿಪ್ರಾಯಗಳನ್ನು ಗಮನಿಸಿಯೂ, ಗೌರವಿಸಿಯೂ ಗೀತೆಯ ಹುಟ್ಟು ಆದದ್ದಾದರೂ ಏಕೆ ಮತ್ತು ಯಾವಾಗ ಹಾಗೂ ಅದರ ಹುಟ್ಟಿನ ಹಿಂದಿನ ಒತ್ತಾಸೆಗಳೇನು ಮತ್ತು ಅದು ಬೋಧಿಸುವ ತಾತ್ವಿಕತೆ ಏನು ಎಂಬುದನ್ನು ಕೂಲಕಂಷವಾಗಿ ಪರಿಶೀಲಿಸಿಕೊಳ್ಳುವುದು ನಮಗೆ ಅನಿವಾರ್ಯ.

ಋಗ್ವೇದ ಕಾಲದ ಸಮಾಜ

ಹಿಂದೂ ದೇವತಾಶಾಸ್ತ್ರದ ಲಭ್ಯವಿರುವ ಅತೀ ಪ್ರಾಚೀನ ಗ್ರಂಥವೆನಿಸಿರುವ ಋಗ್ವೇದದ ಕಾಲದಲ್ಲಿನ ಸಮಾಜದಲ್ಲಿ ಜನರ ಜೀವನ ಹೇಗಿತ್ತು ಎಂಬ ಬಗ್ಗೆ ಅನೇಕ ಅಧ್ಯಯನಗಳನ್ನು ತಜ್ಞರು ಮಾಡಿದ್ದಾರೆ. ಇವುಗಳ ಹಿನ್ನಲೆಯಲ್ಲಿ ಹೇಳುವುದಾದರೆ ಕಾಲದ ಜನರಿಗೆ ಮೋಕ್ಷ ಅಥವಾ ಮುಕ್ತಿಯ ಕಲ್ಪನೆ ಇರಲಿಲ್ಲ. ಪಾರಮಾರ್ಥಿಕ ಬದುಕಿನ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಕಾಲದಲ್ಲಿ ಯಜ್ಞವೇ ಅವರ ಮುಖ್ಯ ಆರಾಧನಾ ಶಕ್ತಿಯಾಗಿತ್ತು. ಇಂದ್ರನಂಥ ದೇವರೂ ಕೂಡ ಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಹಳ ಎಂದರೆ ಅವರಿಗೆ ಸ್ವರ್ಗವಾಸದಂತಹ ಆಸೆ ಇದ್ದಿರಬಹುದೇ ಹೊರತು ಜನನ ಮರಣಗಳಿಂದ ಅತೀತವಾದ ಮೋಕ್ಷದ ಕಲ್ಪನೆ ಇರಲೇ ಇಲ್ಲ.  ನಮಗೆ ಕಾಣುತ್ತಿರುವ ಇಹದ ಬದುಕನ್ನು ಸಾಧ್ಯವಾದಷ್ಟೂ ಉಂಡುಟ್ಟು ಸುಖ-ಸಂತೋಷಗಳಿA ಕಳೆಯುವುದು ಅವರ ಬಯಕೆಯಾಗಿತ್ತು. ಸುಖವಾಗಿ ಬದುಕಲು ಬೇಕಾದ ಮನುಷ್ಯ ಸಹಜ ಅವಶ್ಯಕತೆಗಳನ್ನು ಪೂರೈಸಲು ಅವರು ಮಾಡಿಕೊಳ್ಳುತ್ತಿದ್ದ ಅನೇಕ ಪ್ರಾರ್ಥನೆಗಳನ್ನು ನಾವು ಋಗ್ವೇದದಲ್ಲಿಯೇ ಕಾಣುತ್ತೇವೆ.

ಉಪನಿಷತ್ ಕಾಲದ ಸಮಾಜ

ಆದರೆ ನಮ್ಮ ಸಮಾಜ ಉಪನಿಷತ್ ಕಾಲಕ್ಕೆ ಬಂದಾಗ ಜನನ ಮರಣಗಳಿಂದ ಅತೀತವಾದ `ಮುಕ್ತಿ' ಎಂಬುದೊಂದು ಇದೆ. ಮುಕ್ತಿಯನ್ನು ಪಡೆಯುವುದೇ ಮನುಷ್ಯ ಜೀವನದ ಪರಮಗುರಿ ಎಂಬ ತಾತ್ವಿಕತೆ ಹುಟ್ಟಿಕೊಂಡಿತು. ಮುಕ್ತಿಯನ್ನು ಪಡೆಯಲು ಇರುವ ಏಕಮಾತ್ರ ಮಾರ್ಗ ಎಂದರೆ `ಜ್ಞಾನಮಾರ್ಗ' ಎಂದು ಸಾರಲಾಯಿತು. ಆದರೆ ಜ್ಞಾನಮಾರ್ಗವನ್ನು ಎಲ್ಲರಿಗೂ ಮುಕ್ತವಾಗಿಡದೇ ಕೆಲವರಿಗೆ ಮಾತ್ರ ಸೀಮಿತಗೊಳಿಸಿ ಸಮಾಜದ ಬಹುಪಾಲು ಜನರಿಗೆ ಅದನ್ನು ನಿರ್ಬಂಧಿಸಲಾಯಿತು. ಸಮಾಜದ ಬಹುಪಾಲು ದುಡಿಯುವ ವರ್ಗದ ಜನತೆ ಮತ್ತು ಎಲ್ಲ ವರ್ಗಗಳ ಹೆಂಗಸರು ಹೀಗೆ ಜ್ಞಾನಮಾರ್ಗಕ್ಕೆ ಮೂಲಕ ಮುಕ್ತಿಗೆ ನಿರ್ಬಂಧಿಸಲ್ಪಟ್ಟವರಲ್ಲಿ ಸೇರಿದರು. ಅವರು `ಪಾಪಯೋನಿಜರು' ಎಂದು ಗುರುತಿಸಲ್ಪಟ್ಟು, ಅಜ್ಞಾನಿಗಳು ಎಂದು ಕರೆಯಲ್ಪಟ್ಟು ಅವರೆಲ್ಲ ಜ್ಞಾನಮಾರ್ಗದ ಮೂಲಕ ಮುಕ್ತಿಪಡೆಯಲು ತಮ್ಮ ಹುಟ್ಟಿನ ಕಾರಣಕ್ಕಾಗಿಯೇ ಅನರ್ಹರೆಂದು ಪರಿಗಣಿಸಲ್ಪಟ್ಟರು. ಹೀಗೆ ಕಾಲದಲ್ಲಿ ಜೀವನದ ಪರಮಗುರಿ ಎಂಬ ಗೌರವಕ್ಕೆ ಪಾತ್ರವಾಗಿದ್ದ `ಮುಕ್ತಿ' ಎಂಬುದು ಸಮಾಜದಲ್ಲಿ ಕೆಲವರ ಸೊತ್ತಾಗಿ ಹೋಯಿತು. ಹಲವರ ಕನಸಾಗಿ ಉಳಿಯಿತು.

ಇದೇ ವೇಳೆಗೆ ಸಮಾಜದಲ್ಲಿ ವರ್ಣಾಶ್ರಮಗಳು ರೂಪುಗೊಂಡವು. ವರ್ಣಪದ್ಧತಿ ಆರಂಭದಲ್ಲಿ ವ್ಯಕ್ತಿಯ ಹುಟ್ಟನ್ನು ಅವಲಂಬಿಸಿರದೆ ವ್ಯಕ್ತಿಯ ಗುಣಧರ್ಮವನ್ನು ಆಧರಿಸಿತ್ತು ಎಂದು ವಾದಿಸುವವರು ಸಾಕಷ್ಟು ಜನ ನಮ್ಮಲ್ಲಿದ್ದಾರೆ. ಅವರ ವಾದವನ್ನು `ಹೌದು ಹಾಗೇ ಇರಬಹುದು ಎಂದು ನಾವು ಒಪ್ಪಿಕೊಂಡರೂ ಪದ್ಧತಿ ಕೆಲವೇ ವರ್ಷಗಳಲ್ಲಿ ಹುಟ್ಟಿನ ಆಧಾರಕ್ಕೆ ತಿರುಗಿದ್ದಂತೂ ಸತ್ಯ. ಅದನ್ನಂತೂ ಅಲ್ಲಗಳೆಯಲಾಗದು. ವರ್ಣಪದ್ಧತಿಯೇ ಮುಂದೆ ಜಾತಿಪದ್ಧತಿಯಾಗಿ ರೂಪತಾಳಿದ್ದು, ಸಮಾಜದ ಜನರು ಹಲವರು ಸೇವೆ ಮಾಡುವವರಾಗಿಯೂ ಮತ್ತೆ ಕೆಲವರು ಸೇವೆ ಮಾಡಿಸಿಕೊಳ್ಳುವವರಾಗಿಯೂ ಮೊದಲಬಾರಿಗೆ ಇಬ್ಬಾಗವಾದದ್ದು, ಮತ್ತು ಹೀಗೆ ಇಬ್ಬಾಗವಾದ  ಗುಂಪುಗಳೇ ಮುಂದಿನ ದಿನಗಳಲ್ಲಿ `ಶ್ರಮ ಸಂಸ್ಕೃತಿಮತ್ತು `ಪೂಜಾ ಸಂಸ್ಕೃತಿಗಳ ಸೃಷ್ಟಿಗೆ ಕಾರಣವಾದದ್ದು ಮತ್ತೊಂದು ಪ್ರತ್ಯೇಕ ಚರ್ಚೆಯ ವಿಷಯವಾದ್ದರಿಂದ ಇಲ್ಲಿ ಚರ್ಚೆಯನ್ನು ಬೆಳೆಸದೆ ವೇದಗಳ ಕಾಲದಲ್ಲಿ ಇಲ್ಲದ ಅನೇಕ ಕಟ್ಟುಪಾಡುಗಳ, ಜನಾಂಗೀಯ ಭೇದದ ಬೀಜಗಳು ಉಪನಿಷತ್ ಕಾಲದ ಸಮಾಜದಲ್ಲಿ ಬಿದ್ದು ಮೊಳಕೆಯೊಡೆದವು ಎಂಬುದನ್ನು ನಾವು ಗುರುತಿಸಿಕೊಂಡರೆ ಇಲ್ಲಿ ಸಾಕಾಗುತ್ತದೆ. 

ಬುದ್ಧನ ಆಗಮನ; ಗೀತೆಯ ಜನನ:

ಇದೇ ಸಂದರ್ಭಕ್ಕೆ ಭಾರತೀಯ ಸಮಾಜೋಧಾರ್ಮಿಕ ಇತಿಹಾಸದಲ್ಲಿ ಬುದ್ಧನ ಪ್ರವೇಶವಾಗುತ್ತದೆ. ಉಪನಿಷತ್ ಕಾಲದ ಸಮಾಜ ಯಾವ ಜನರನ್ನು ಪಾಪಯೋನಿಜರು ಮತ್ತು ಅಜ್ಞಾನಿಗಳು ಎಂದು ಅವರಿಗೆ ಜ್ಞಾನಮಾರ್ಗವನ್ನು ನಿರಾಕರಿಸಿ ಮುಕ್ತಿಗೆ ಅನರ್ಹರನ್ನಾಗಿ ಮಾಡಿತ್ತೋ ಜನರ ಬಾಳಿನ ಆಶಾಕಿರಣವಾಗಿ ಬುದ್ಧ ಎದ್ದುಬರುತ್ತಾನೆ.  ಹಳೆಯ ಕಾಲದ ಕರ್ಮಸಿದ್ಧಾಂತಕ್ಕೆ ಬದಲಾಗಿ ಹೊಸದಾದ, ಮತ್ತು ಕಾಲಕ್ಕೆ ಹೆಚ್ಚು ವೈಜ್ಞಾನಿಕ ಎನಿಸುವಂತಹ ಕರ್ಮಸಿದ್ಧಾಂತವನ್ನು ಬೋಧಿಸುವ ಮೂಲಕ, ಸಂಸಾರ ಸಿದ್ಧಾಂತದ ಬದಲು ಪುನರ್ಜನ್ಮ ಸಿದ್ಧಾಂತವನ್ನು, `ಮೋಕ್ಷ ಸಿದ್ಧಾಂತ'ಕ್ಕೆ ಬದಲಾಗಿ `ನಿರ್ವಾಣ ಸಿದ್ಧಾಂತ'ವನ್ನು ಮಂಡಿಸುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾನೆ.  ಆಗ ಜನ ಸಹಜವಾಗಿಯೇ ಬುದ್ಧನ ಬೋಧನೆಗಳಿಂದ ಆಕರ್ಷಿತರಾಗುತ್ತಾರೆ. ಇದು ಆಗಿನ ಸಮಾಜದಲ್ಲಿನ ತಳಮಳಕ್ಕೆ ಕಾರಣವಾಗುತ್ತದೆ. ಯಾರು ಇದುವರೆಗೆ ತಾವು ಮಾತ್ರ ಮೋಕ್ಷಕ್ಕೆ ಅರ್ಹರೆಂದು ಬೀಗುತ್ತಾ ತಮ್ಮಂತೆಯೇ ಇರುವ ಇತರ ಮನುಷ್ಯರ ಮೇಲೆ ಸವಾರಿ ಮಾಡುತ್ತಿದ್ದರೋ ಅವರಿಗೆ ಬುದ್ಧನ ಕಾರ್ಯ ಸಂಕಟವನ್ನುಂಟುಮಾಡುತ್ತದೆ. ತಿರಸ್ಕೃತ ಜನ ಬುದ್ಧನ ಕಡೆ ಹೋಗಿಬಿಟ್ಟರೆ ಏನಾಗುತ್ತದೆ ಎಂಬ ಅರಿವು ಅವರಿಗಿತ್ತು. ತಮ್ಮ ಸೇವೆಯನ್ನು ಮಾಡುವವರು ಇಲ್ಲವಾಗುತ್ತಾರೆ, ಜೊತೆಗೆ ತಮಗಿಂತ ಕೀಳಾದವರು ತಮ್ಮ ಎದುರಿಗೆ ಹೋಲಿಸಿಕೊಳ್ಳಲು ಇಲ್ಲದಿದ್ದರೆ ತಾವು ಮೇಲೆ ಎಂದು ಹೇಳಿಕೊಳ್ಳುವುದು ಅರ್ಥವಿಲ್ಲದ ಸಂಗತಿಯಾಗುತ್ತದೆ. ಇದರಿಂದ `ಅಜ್ಞಾನಿಗಳು' ಬುದ್ಧನ ಕಡೆಗೆ ಹೋಗದಂತೆ ತಡೆಯಬೇಕಾದ ಒಂದು ಅನಿವಾರ್ಯತೆ ಅವರಿಗೆ ಮೊಟ್ಟಮೊದಲಿಗೆ ಉಂಟಾಯಿತು.

ಆದರೆ ಅವರು ಹೋಗದಂತೆ ತಡೆಯುವುದು ಹೇಗೆ? ಅವರಿಗೂ ಜ್ಞಾನಮಾರ್ಗವನ್ನು ತೆರೆದು ಅವರನ್ನೂ ಮುಕ್ತಿಗೆ ಅರ್ಹರೆಂದು ಘೋಷಿಸಬೇಕು. ಇದನ್ನು ಅವರ ಮನಸ್ಸು ಹೇಗೆ ತಾನೆ ಒಪ್ಪಿಕೊಂಡೀತು? ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ಒಲ್ಲದ ಮನಸ್ಸಿನಿಂದ ಹಾಗೆ ಘೋಷಿಸಿದರೂ ಜ್ಞಾನಮಾರ್ಗ ಎಂಬುದು ಕಬ್ಬಿಣದ ಕಡಲೆ. ಎಲ್ಲರಿಗೂ ಅದು ಆಗದ ಕೆಲಸ. ಇಂಥ ಸಂಕೀರ್ಣ ಸಂದರ್ಭದಲ್ಲಿ, ಶೋಷಿತ ಜನರು ಹೊರಗಡೆ ಹೋಗದೆ ತಮ್ಮಲ್ಲೇ ಉಳಿಯಲೂ ಬೇಕು ಮತ್ತು ಉಳಿದೂ ತಮ್ಮೊಳಗೆ ಸೇರಿ ಸ್ಥಾನಮಾನದಲ್ಲಿ ತಮ್ಮ ಸಮ ಬರದೆ ತಮ್ಮಿಂದ ಕೆಳಗೆ ಇರಲೂ ಬೇಕು ಇಂಥದೊಂದು ಉಪಾಯವನ್ನು ಕಂಡುಹಿಡಿಯಬೇಕಾದ ಅನಿವಾರ್ಯತೆ ಅವರಿಗೆ ಒದಗಿ ಬಂತು.  ಅನಿವಾರ್ಯತೆಯ ಕೂಸಾಗಿ ಹುಟ್ಟಿದ್ದೇ ಭಗವದ್ಗೀತೆ! ಮುಕ್ತಿ ಪಡೆಯಲು ಇರುವುದೊಂದೇ ದಾರಿ ಅದು ಜ್ಞಾನಮಾರ್ಗ ಎಂಬ ಅದುವರೆಗಿನ ಕಟ್ಟಳೆಯನ್ನು ಸಡಿಲಿಸಿ, ಮುಕ್ತಿಯನ್ನು ಪಡೆಯಲು ಇನ್ನೊಂದು ಮಾರ್ಗವೂ ಇದೆ, ಅದೇ ಭಕ್ತಿಮಾರ್ಗ, ಇಲ್ಲಿ ಜ್ಞಾನ ಕಡ್ಡಾಯವಲ್ಲ, ಶ್ರದ್ಧೆ ಮತ್ತು ಭಕ್ತಿಯಿಂದ ಶರಣಾದರೆ ಸಾಕಾಗುತ್ತದೆ ಎಂದು ಹೊಸದೊಂದು ತತ್ವವನ್ನು ಹುಟ್ಟುಹಾಕಲಾಯಿತು. ಹೊಸ ತತ್ವದ ಜಾಹಿರಾತಾಗಿ ಹುಟ್ಟಿಕೊಂಡದ್ದೇ ನಮ್ಮ ಭಗವದ್ಗೀತೆ. ಭಗವದ್ಗೀತೆಯ ಭಾಷೆಯಲ್ಲಿಯೇ ಇದನ್ನು ಹೇಳಬೇಕಾದರೆ ಭಗವದ್ಗೀತೆ ಹುಟ್ಟಿದ್ದೇ ಅಜ್ಞಾನಿಗಳ ಅಥವಾ ಅವಿವೇಕಿಗಳ ಸಲುವಾಗಿ!! ಭಾರತದ ಖ್ಯಾತ ವಿಚಾರವಾದಿ ಡಾ. ವಿ.ಆರ್. ನಾರ್ಲಾ ಅವರು ಗುರುತಿಸುವಂತೆ, "ಎರಡು ಮಹಾಕಾವ್ಯಗಳೂ (ರಾಮಾಯಣ-ಮಹಾಭಾರತ), ಪ್ರಮುಖವೂ; ಪ್ರಮುಖವಲ್ಲದವೂ ಆದ ಮೂವತ್ತಾರು ಪುರಾಣಗಳೂ ಶೂದ್ರರಿಗಾಗಿ ರಚಿತವಾದವು ಅಂದರೆ ವೈದಿಕ ಸಾಹಿತ್ಯ ಜ್ಞಾನದಿಂದ ಹೊರಗೆ ನಿಲ್ಲಿಸಲ್ಪಟ್ಟ ಬಹುಸಂಖ್ಯೆಯಲ್ಲಿದ್ದ ಜನತೆಯ ಮೇಲೆ ಪ್ರಭಾವಯುತವಾಗಿ ಬಳಸಲು ಹುಟ್ಟಿಕೊಂಡAತಹವು ಇವು." ಬಹುಶಃ ಬುದ್ಧ ಬರದಿದ್ದರೆ ಭಗವದ್ಗೀತೆ ಹುಟ್ಟುತ್ತಲೇ ಇರಲಿಲ್ಲವೇನೋ.

ಭಗವದ್ಗೀತೆಯು ಹುಟ್ಟಿದ್ದು ಯಾತಕ್ಕಾಗಿ, ಅದರ ಹುಟ್ಟಿನ ಹಿಂದಿದ್ದ ಒತ್ತಾಸೆಗಳೇನು ಎಂಬುದನ್ನು ಮೇಲಿನ ಅಂಶಗಳಿA ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಗೀತೆಯಲ್ಲಿ ಯಾವ ತಾತ್ವಿಕತೆ ಇರಬಹುದು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು. ಈಗ ಗೀತೆಯಲ್ಲಿ ಏನೆಲ್ಲ ತಾತ್ವಿಕತೆ ಇದೆ ಎಂಬುದನ್ನು ನೋಡೋಣ:

ಅಹಿಂಸೆ, ಸ್ನೇಹ, ವಿಶ್ವಶಾಂತಿ ಇವುಗಳ ವಿರುದ್ಧ ಹಿಂಸೆ, ಕೊಲೆ, ಯುದ್ಧ ಪ್ರಚೋದನೆ!

ಭಗವದ್ಗೀತೆಯನ್ನು ಯಾರೇ ಓದಿದರೂ ತಕ್ಷಣ ಅರ್ಥವಾಗುವ ಒಂದು ಸಂಗತಿ ಎಂದರೆ ಅದು ಯುದ್ಧಕ್ಕೆ ನೀಡಿದ ಕರೆ ಎಂಬುದು. ಯುದ್ಧ ಮತ್ತು ಸಂಬಂಧದ ಕೊಲೆಗಳನ್ನು ಗೀತೆ ಸಮರ್ಥಿಸುವುದು ಅದರಲ್ಲಿ ಅತ್ಯಂತ ಸ್ಪಷ್ಟವಾಗಿ ದಾಖಲಾಗಿದೆ. ಕುರುಕ್ಷೇತ್ರ ಯುದ್ಧ ಇನ್ನೇನು ಪ್ರಾರಂಭವಾಗಬೇಕು. ಅರ್ಜುನ ತನ್ನ ಎದುರು ವೈರಿ ಪಾಳೆಯಲ್ಲಿ ನಿಂತಿರುವ, ತನ್ನನ್ನು ಸಾಕಿ ಸಲಹಿದ ಭೀಷ್ಮ, ಧನುರ್ವಿದ್ಯೆಯನ್ನು ಹೇಳಿಕೊಟ್ಟ ಗುರು ದ್ರೋಣ ಸೇರಿದಂತೆ ಅನೇಕ ಬಂಧುಬಾಂಧವರನ್ನು ನೋಡಿ ದಂಗಾಗಿಬಿಡುತ್ತಾನೆ. "ಅವರನ್ನೆಲ್ಲ ನಾನು ರಾಜ್ಯಕ್ಕಾಗಿ ಕೊಲೆಮಾಡಲಾರೆ ಅದು ಪಾಪದ ಕೆಲಸ. ಅದನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ" ಎಂದು ಖಡಾಖಂಡಿತವಾಗಿ ಬಿಲ್ಲನ್ನು ಕೆಳಗಿಟ್ಟುಬಿಡುತ್ತಾನೆ. ನಿಜವಾದ ಮನುಷ್ಯನ ಗುಣಗಳು ಅರ್ಜುನನಲ್ಲಿ ಸಹಜವಾಗಿಯೇ ಆಗ ಪ್ರಕಟವಾಗುತ್ತವೆ. ಆದರೆ `ಪುರುಷೋತ್ತಮ' ಕೃಷ್ಣ ಅವನು ಹಾಗೆ ಭಾವಿಸುವದನ್ನು `ಅವಿವೇಕಿಗಳ ಲಕ್ಷಣ' ಎಂದು ಅವನಿಗೆ `ಬುದ್ಧಿ' ಹೇಳಿ, ಅವನಲ್ಲಿಯ ಮಾನವ ಗುಣಗಳು ನಾಶವಾಗುವಂತೆ ಮಾಡಿ ಅವನಿಂದಲೇ ಅವನ ಬಂಧುಬಳಗದ ಕೊಲೆ ಮಾಡಿಸಿಬಿಡುತ್ತಾನೆ!

ಕೊಲೆಯ ಸಮರ್ಥನೆಯ ಮೂರು ಧಾಟಿಗಳು:

ಭಗವದ್ಗೀತೆಯಲ್ಲಿ ಯುದ್ಧವಿಮುಖನಾದ ಅರ್ಜುನನ್ನು ಯುದ್ಧಮುಖನನ್ನಾಗಿ ಮಾಡಲು ಕೃಷ್ಣ ಎರಡು ಧಾಟಿಯಲ್ಲಿ ಕೊಲೆಯ ಸಮರ್ಥನೆ ಮಾಡುವುದನ್ನು ಡಾ: ಬಿ. ಆರ್. ಅಂಬೇಡ್ಕರ್ ಗುರುತಿಸುತ್ತಾರೆ. ಅವರು ಗುರುತಿಸಿದ ಎರಡು ಧಾಟಿಗಳನ್ನು `ಆತ್ಮದ ಅವಿನಾಶೀ ತತ್ವದ ಧಾಟಿ' ಮತ್ತು `ಲೋಕ ನಶ್ವರ ತತ್ವದ ಧಾಟಿ' ಎಂದು ಕರೆಯಬಹುದು. ಎರಡು ಧಾಟಿಗಳಲ್ಲದೆ ಕೃಷ್ಣ  ಇನ್ನೂ ಒಂದು ಧಾಟಿಯಲ್ಲಿ ಕೊಲೆಯ ಸಮರ್ಥನೆ ಮಾಡುತ್ತಾನೆ. ಮೂರನೇ ಧಾಟಿಯನ್ನು `ಪ್ರತಿಷ್ಠೆಯ ಧಾಟಿ' ಎಂದು ಗುರುತಿಸಬಹುದು.  ಮೂರೂ ಧಾಟಿಗಳಲ್ಲಿ ಕೃಷ್ಣ ಕೊಲೆಯ ಸಮರ್ಥನೆಯನ್ನು ಹೇಗೆ ಮಾಡುತ್ತಾನೆ ಎಂಬುದನ್ನು ನೋಡೋಣ:

ಮೊದಲನೆಯದು ಆತ್ಮದ ಅವಿನಾಶೀ ತತ್ವದ ಧಾಟಿ. ತತ್ವದ ಪ್ರಕಾರ ದೇಹ ಮತ್ತು ಆತ್ಮ ಎರಡು ಬೇರೆ ಬೇರೆಯದೇ ಆದ ಸಂಗತಿಗಳು. ವ್ಯಕ್ತಿ ಎಂಬುದು ಆತ್ಮಕ್ಕೆ ಸಂಬಂಧಿಸಿದ ಸಂಗತಿ. ಆತ್ಮ ಹುಟ್ಟುವುದೂ ಇಲ್ಲ. ಸಾಯುವುದೂ ಇಲ್ಲ. ಆತ್ಮನು ಶಾಶ್ವತ. ತತ್ವವನ್ನು ಪ್ರತಿಪಾದಿಸುವ ಕೃಷ್ಣನ ಮಾತುಗಳಿವು: "ಆತ್ಮನು ನಾಶರಹಿತನು. ದೇಹವೇನಿದ್ದರು ಅವನ ಬಟ್ಟೆ ಇದ್ದಂತೆ.  ನಾವು ಹರಿದ ಬಟ್ಟೆಯನ್ನು ಕಿತ್ತು ಬೀಸಾಡಿ ಹೊಸಬಟ್ಟೆಯನ್ನು ಹಾಕಿಕೊಳ್ಳುವಂತೆ ಆತ್ಮನೂ ಹಳೆಯದೂ ಸವಕಲೂ ಆದ ದೇಹವನ್ನು ಬೀಸಾಡಿ ಬೇರೆ ದೇಹವನ್ನು ಆಯ್ಕೆಮಾಡಿಕೊಳ್ಳುತ್ತಾನೆ."  " ಆತ್ಮ ಒಮ್ಮೆ ದೇಹತಾಳಿ ಇನ್ನೊಮ್ಮೆ ದೇಹ ತಾಳುವುದಿಲ್ಲವೆಂದೂ ಇಲ್ಲ. ಇವನು ನಾಶರಹಿತನು. ನಿತ್ಯನು. ಶಾಶ್ವತನು. ಶರೀರ ಕೊಲ್ಲಲ್ಪಟ್ಟರೂ ಇವನು (ಆತ್ಮನು) ಕೊಲ್ಲಲ್ಪಡುವುದಿಲ್ಲ." "ಆತ್ಮನು ಕೊಲ್ಲುವವನು ಮತ್ತು ಕೊಲ್ಲಲ್ಪಡುವವನು ಎಂದು ತಿಳಿಯುವವರಿಬ್ಬರೂ, ಇವನು (ಆತ್ಮನು) ಕೊಲ್ಲುವುದೂ ಇಲ್ಲ ಕೊಲ್ಲಲ್ಪಡುವುದೂ ಇಲ್ಲ ಎಂಬುದನ್ನು ಅರಿಯರು." ಕಾರಣದಿಂದ ಅರ್ಜುನ ತನ್ನ ಬಂಧುಬಾಂಧವರನ್ನು ಕೊಂದರೆ ಅವನಿಂದ ಕೊಲ್ಲಲ್ಪಟ್ಟವರ ದೇಹ ಮಾತ್ರ ಸಾಯುತ್ತವೆ. ಅವರ ಆತ್ಮಗಳು ಸಾಯುವುದಿಲ್ಲ. ಅವರನ್ನು ಕೊಲೆಮಾಡುವುದರಿಂದ ಅರ್ಜುನ ಯಾವ ಪಾಪಕಾರ್ಯಗಳನ್ನೂ ಮಾಡಿದಂತಾಗುವುದಿಲ್ಲ. ಸಾವು ಅಥವಾ ಕೊಲೆ ಎಂಬುದು ಕೇವಲ ಒಂದು ಬಟ್ಟೆ ಬದಲಾವಣೆ ಮಾತ್ರ. ತನ್ನ ಬಂಧುಬಾಂಧವರು ಹಳೆಯ ಬಟ್ಟೆ ಎಸೆದು ಹೊಸಬಟ್ಟೆ ಹಾಕಿಕೊಳ್ಳುತ್ತಾರೆ ಎಂಬುದು ಅರ್ಜುನನಿಗೆ ಸಂತೋಷದ ಸಂಗತಿಯಾಗಬೇಕೆ ಹೊರತು ದುಃಖದ ಸಂಗತಿಯಾಗಬಾರದು!! 

ಇನ್ನು ಎರಡನೇ ದಾಟಿ, ಲೋಕನಶ್ವರ ತತ್ವದ ಧಾಟಿ. ಮೊದಲಿಗೆ ಆತ್ಮದ ಅವಿನಾಶೀ ತತ್ವದ ಧಾಟಿಯಲ್ಲಿ ಬಂಧುಬಾಂಧವರ ಕೊಲೆ ಸಮರ್ಥನೆ ಮಾಡುವುದು ಒಂದು ಅಲೌಕಿಕವಾದ ಅಂಶ. ಇಷ್ಟರಿಂದಲೇ ಅರ್ಜುನ ಕೊಲ್ಲಲು ತಯಾರಾಗದ್ದನ್ನು ಗಮನಿಸಿದ ಕೃಷ್ಣ ಲೌಕಿಕ ವಿಚಾರದ ಮೂಲಕ ಅವನನ್ನು ತಯಾರಿ ಮಾಡಲು ತೊಡಗುತ್ತಾನೆ. ಇದಕ್ಕಾಗಿ ಅವನು ಬಳಸಿಕೊಳ್ಳುವುದು ಲೋಕ ನಶ್ವರ ತತ್ವದ ಧಾಟಿ. ಇಲ್ಲಿ ಕೃಷ್ಣ ಹೇಳುತ್ತಾನೆ, "ಇನ್ನು ಇವನು (ಆತ್ಮನು) ನಿತ್ಯ ಹುಟ್ಟುವವನು ಹಾಗೂ ನಿತ್ಯ ಸಾಯುವವನೆಂದು ನೀನೂ ಬಗೆದರೂ ಇವನ ವಿಷಯಕ್ಕೆ ಶೋಕ ಮಾಡುವುದು ಉಚಿತವಲ್ಲ. ಏಕೆಂದರೆ ಹುಟ್ಟಿದವನಿಗೆ ಸಾವು, ಸತ್ತವನಿಗೆ ಹುಟ್ಟು ಕಟ್ಟಿಟ್ಟಂತೆ; ಹೀಗೆ ಇವೆರಡೂ ತಪ್ಪಿಸಲಿಕ್ಕೆ ಬಾರದ್ದವಾದ್ದರಿಂದ ನೀನು ಶೋಕ ಮಾಡುವುದು ಯೋಗ್ಯವಲ್ಲ." ಅಂದರೆ ಒಂದು ವೇಳೆ ಅರ್ಜುನ ಆತ್ಮದ ಅವಿನಾಶೀ ತತ್ವವನ್ನು ಒಪ್ಪಿಕೊಳ್ಳದಿದ್ದರೂ ಅವನು ಲೋಕ ನಶ್ವರ ತತ್ವವನ್ನು ಒಪ್ಪಿಕೊಂಡಾದರೂ ಯುದ್ಧಮಾಡಬೇಕು. ಕೃಷ್ಣನ ತತ್ವದ ಪ್ರಕಾರ ವಿಶ್ವವಾಗಲೀ ಮನುಷ್ಯರಾಗಲೀ ಶಾಶ್ವತವಲ್ಲ. ಇವೆಲ್ಲ ನಶ್ವರ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಮನುಷ್ಯ ಸ್ವಾಭಾವಿಕವಾಗಿ ಸಾಯುವುದಕ್ಕೂ ಮತ್ತು ಅವನು ಹಿಂಸೆಗೊಳಪಟ್ಟು ಸಾಯುವುದಕ್ಕೂ ಯಾವುದೇ ಭೇದವನ್ನು ವಿವೇಕಿಗಳಾದವರು ಮಾಡುವುದಿಲ್ಲ. ಆದ್ದರಿಂದ ಅರ್ಜುನ ತನ್ನ ಬಂಧುಬಾಂಧವರನ್ನು ಕೊಲ್ಲುವುದರಿಂದ ಯಾವ ಪಾಪಕಾರ್ಯವನ್ನೂ ಮಾಡಿದಂತಾಗುವುದಿಲ್ಲ!!

ಇನ್ನು ಮೂರನೇ ಧಾಟಿ, `ಪ್ರತಿಷ್ಠೆಯ ಧಾಟಿ. ಮೇಲಿನ ಎರಡೂ ತತ್ವಗಳಿಂದ ಪ್ರಭಾವಿತನಾಗದೇ ಹೋದರೂ ತತ್ವದಿಂದಲಂತೂ ಖಂಡಿತಾ ಅರ್ಜುನ ಪ್ರಭಾವಿತನಾಗಿ ಯುದ್ಧವನ್ನು ಮಾಡೇತೀರುತ್ತಾನೆಂದು ಕೃಷ್ಣ ಭಾವಿಸಿದಂತಿದೆ. ಮೇಲಿನ ಎರಡೂ ತತ್ವಗಳನ್ನೂ ಹೇಳಿದ ನಂತರ ಅಳಿದುಳಿದ ಒಂದಿಷ್ಟು ಸಂಶಯವೂ ಅವನಲ್ಲಿ ಉಳಿಯಬಾರದೆಂದು ಕೃಷ್ಣ ಹೇಳುವುದೇನೆಂದರೆ, "ನೀನು ಕ್ಷತ್ರಿಯ. ಯುದ್ಧಮಾಡಿ ಸತ್ತು ಸ್ವರ್ಗ ಸೇರುವ ಸುದೈವ ಕ್ಷತ್ರಿಯರಿಗೆ ಮಾತ್ರ ಲಭ್ಯವಿರುವಂಥದು. ಅಂಥವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಅಂಥ ಕ್ಷತ್ರಿಯನಾದ ನೀನು ನಿನ್ನ ಸ್ವಧರ್ಮಕ್ಕಾದರೂ ಯುದ್ಧಮಾಡಬೇಕು.  ನೀನು ಒಂದು ವೇಳೆ ಯುದ್ಧಮಾಡದೇ ಹೋದರೆ ನಿನ್ನ ಶತ್ರುಗಳು ನಿನ್ನನ್ನು ಶಕ್ತಿಯಿಲ್ಲದವನು ಎಂದು ಹಂಗಿಸುತ್ತಾರೆ. ನಿನ್ನ ಬಂಧುಬಳಗದವರು ಕೂಡ ಕ್ಷತ್ರಿಯರಿಗೆ ಯೋಗ್ಯವಾದ ಯುದ್ಧವನ್ನು ಮಾಡಲು ಆಗದವನು ಎಂದು ನಿನ್ನನ್ನು ಕೀಳಾಗಿ ಕಾಣತೊಡಗುತ್ತಾರೆ. ಬಂಧುಬಾಂಧವರಲ್ಲಿ ನಿನ್ನ ಮರ್ಯಾದೆ ಹೋಗುತ್ತದೆ. ಆದ್ದರಿಂದ ಯುದ್ಧಮಾಡು"

ಮೊದಲನೇ ಧಾಟಿಯಲ್ಲಿ ಸಂಪೂರ್ಣ ಅಲೌಕಿಕವಾದ ಬೋಧನೆ ಇದೆ. ಎರಡನೆಯದರಲ್ಲಿ ಅರ್ಧ ಲೌಕಿಕ ಅರ್ಧ ಅಲೌಕಿಕ ಬೋಧನೆ ಇದೆ. ಕೊನೆಯದರಲ್ಲಿ ಸಂಪೂರ್ಣ ಅರ್ಥವಾಗುವಂತಹ ಲೌಕಿಕ ಬೋಧನೆ ಇದೆ. ಮೊದಲೆರಡು ತತ್ವಗಳು ಅರ್ಜುನನ ಮನಸ್ಸನ್ನು ಬದಲಾಯಿಸುವಲ್ಲಿ ವಿಫಲವಾದರೂ ಮೂರನೆಯ ಅಂಶವಂತೂ ಖಂಡಿತಾ ವಿಫಲವಾಗುವುದಿಲ್ಲ ಎಂದು ಕೃಷ್ಣನಂಥವನಿಗೆ ಖಂಡಿತಾ ಗೊತ್ತಿರುತ್ತದೆ. ಭಗವದ್ಗೀತೆ ರೀತಿ ಕೊಲೆಯ ಸಮರ್ಥನೆಯನ್ನು ಮಾಡುವುದನ್ನು ಅಂಬೇಡ್ಕರ್ ಬಲವಾಗಿ ಖಂಡಿಸುತ್ತಾರೆ, ಅವರು ಹೇಳುತ್ತಾರೆ, "ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ, ಅತ್ಯಂತ ಕನಿಷ್ಠವಾಗಿ ಹೇಳುವುದಾದರೆ ಬಾಲಿಷವಾಗಿದೆ. ಕೊಂದರೆ ಕೊಲೆಯಲ್ಲ ಏಕೆಂದರೆ ಕೊಲೆಯಾಗುವುದು ದೇಹ, ಆತ್ಮವಲ್ಲ ಎಂದು ಹೇಳುವುದು ಎಂದೂ ಕೇಳರಿಯದ ಕೊಲೆಯ ಸಮರ್ಥನೆಯಾಗಿದೆ. ಸಿದ್ಧಾಂತಗಳು ಜನರನ್ನು ಭೀತಿಗೊಳಿಸುತ್ತವೆ ಎಂದು ಕೆಲವರು ಹೇಳುವ ಸಿದ್ಧಾಂತಗಳಲ್ಲಿ ಇದೂ ಒಂದು"

ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ ಹಾಗೂ ಗೀತಾ ಸಂದೇಶ

ಭಗವದ್ಗೀತೆಯ ಕೃಷ್ಣ ಯುದ್ಧದ ಸಮರ್ಥನೆಗಾಗಿ ಬಳಸಿದ ಮೂರು ತತ್ವಗಳ ಪ್ರಭಾವದಿಂದ ನಮ್ಮಲ್ಲಿ ಏನೆಲ್ಲ ಆಯಿತು ಮತ್ತು ಏನೆಲ್ಲ ಆಗುತ್ತಿದೆ ಎಂಬುದರ ಕಡೆ ಸ್ವಲ್ಪ ಗಮನ ಹರಿಸೋಣ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ರಾಷ್ಟ್ರೀಯ ಚಳವಳಿಯ ನಾಯಕರನೇಕರು ಗೀತೆಯಿಂದ ಪ್ರಭಾವಿತರಾಗಿದ್ದರು ಎಂಬುದನ್ನು ಈಗಾಗಲೇ ಉಲ್ಲೇಖಿಸಿದೆ.  ಬ್ರಿಟೀಷರೊಂದಿಗೆ ಹೋರಾಟಮಾಡಿ ಸ್ವಾತಂತ್ರ್ಯ ಗಳಿಸಬೇಕಿದ್ದ ಅವರಿಗೆ ಪ್ರೇರಣೆ ನೀಡಿದ ಅತಿ ಮುಖ್ಯವಾದ ಗೀತೆಯ ಅಂಶಗಳೆಂದರೆ ಆತ್ಮದ ಅವನಾಶೀ ತತ್ವ ಮತ್ತು ಲೋಕನಶ್ವರ ತತ್ವಗಳೆ. ಗೀತೆಯಲ್ಲಿ ಕೃಷ್ಣ ಕೌರವರನ್ನು ದುಷ್ಟರೆಂದೂ ಅವರ ಕಾರ್ಯವನ್ನು ಅಧರ್ಮವೆಂದೂ ಹಾಗೇ ಪಾಂಡವರನ್ನು ಶಿಷ್ಟರೆಂದೂ ಅವರ ಕಾರ್ಯವನ್ನು ಧರ್ಮವೆಂದೂ ಗುರುತಿಸಿಕೊಂಡಿದ್ದಾನೆ.  ದೇವರಾದ ತನ್ನ ಕೆಲಸ ಧರ್ಮಕ್ಕೆ ಜಯವನ್ನುಂಟುಮಾಡುವುದು ಆದುದರಿಂದ ಪಾಂಡವರ ಕಡೆ ತಾನಿದ್ದು ಅವರಿಂದ ಕೌರವರನ್ನು ನಾಶಪಡಿಸಿ ಪಾಂಡವರಿಗೆ ಮೂಲಕ ಧರ್ಮಕ್ಕೆ ಜಯವನ್ನುಂಟುಮಾಡಲು ಶ್ರಮಿಸುತ್ತಾನೆ. "ಧರ್ಮಕ್ಕೆ ಜಯ ಉಂಟುಮಾಡುವ ಸಲುವಾಗಿ ಅಧರ್ಮದೊಟ್ಟಿಗೆ ಅಧರ್ಮದಿಂದಲೇ ಸೆಣಸಾಡಲು ಸನ್ನದ್ಧನಾಗಿರುವುದರ ಪ್ರತೀಕ ಕೃಷ್ಣ" ಎಂದು ಲೋಹಿಯಾ ಕೂಡ ಅಭಿಪ್ರಾಯಪಡುತ್ತಾರೆ.

ಗೀತೆಯ ಸಂದರ್ಭದಲ್ಲಿ ದುಷ್ಟರಾದ ಕೌರವರು ಹೆಚ್ಚು ಬಲಶಾಲಿಗಳಾಗಿರುತ್ತಾರೆ. ಅವರ ವಿರುದ್ಧ ಅಲ್ಪಬಲದವರಾದ ಪಾಂಡವರು ಧೈರ್ಯಗೆಡದೇ ಹೋರಾಡುವ ಸಲುವಾಗಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಕೃಷ್ಣ ಗೀತೆಯ ಮೂಲಕ ಬೋಧನೆ ಮಾಡಿದ್ದಾನೆಂದು ತಿಳಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅವನ ಬೋಧನೆ ಭಾರತೀಯರಾದ ನಮಗೆಲ್ಲ ಬ್ರಿಟೀಷರ ವಿರುದ್ಧ ಹೋರಾಡಲು ನೀಡಿದ ಕರೆಯೇ ಆಗಿದೆ ಎಂದು ವ್ಯಾಖ್ಯಾನಿಸಿಕೊಂಡರು. ಮಹಾಭಾರತದ ಕೌರವರ ಸ್ಥಾನದಲ್ಲಿ ಬ್ರಿಟೀಷರನ್ನು ನಿಲ್ಲಿಸಿ, ಪಾಂಡವರ ಸ್ಥಾನದಲ್ಲಿ ತಾವು ನಿಂತುಕೊಂಡು, ತಾವು ಅನ್ಯಾಯದ ವಿರುದ್ಧ ಹೋರಾಡುತ್ತಿರುವವರು, ಸಾವಿಗೆ ಅಂಜದೇ ಹೋರಾಡಬೇಕು ಎಂಬ ತಾತ್ವಿಕತೆಯನ್ನು ಅವರು ರೂಪಿಸಿಕೊಂಡರು. ರಾಷ್ಟ್ರೀಯ ಚಳವಳಿಗೆ ಇದರಿಂದ ಖಂಡಿತಾ ಒಂದಿಷ್ಟು ಲಾಭವಾಯಿತು. ನಾವು ಸತ್ತರೆ ನಿಜವಾಗಿ ಸಾಯುವುದು ನಾವಲ್ಲ. ನಮ್ಮ ದೇಹಮಾತ್ರ ಎಂಬ ಆತ್ಮದ ಅವಿನಾಶೀ ತತ್ವ  ಮತ್ತು ನಾವು ಎಂದಿದ್ದರೂ ಸಾಯಲೇಬೇಕು ಎಂಬ ಲೋಕನಶ್ವರ ತತ್ವಗಳು ಸಹಜವಾಗಿ ಹೆಚ್ಚು ಜನ ರಾಷ್ಟ್ರೀಯ ಚಳವಳಿಯಲ್ಲಿ ಪಾಲ್ಗೋಳ್ಳುವಂತೆ ಮಾಡಿದವು.  ಅವರು ಸಾವಿನ ಭಯವನ್ನು ಬಿಟ್ಟು ಧೈರ್ಯದಿಂದ ಬ್ರಿಟೀಷರ ಲಾಠಿಯೇಟಿಗೆ ಗುಂಡಿನೇಟಿಗೆ ಸಂತೋಷದಿಂದಲೇ ಎದುರಾಗುವಂಥ ಆತ್ಮಸ್ಥೈರ್ಯವನ್ನು ಉಂಟುಮಾಡಿದವು. ಖದಿರಾಮ್ ಬೋಸ್ ಅಂಥ ಹೋರಾಟಗಾರರು ಸಾಯುವಾಗ ತಮ್ಮ ಕೈಯಲ್ಲಿ ಗೀತೆಯ ಪ್ರತಿಯನ್ನು ಹಿಡಿದುಕೊಳ್ಳುವಂತೆ ಮಾಡಿದ್ದು ತತ್ವಗಳಾಗಿರದೆ ಮತ್ತೇನಾಗಿರಲು ಸಾಧ್ಯ?

ಪ್ರಸ್ತುತ ಭಾರತೀಯ ಸಾಮಾಜಿಕ ಸಂದರ್ಭಕ್ಕೆ ಗೀತೆಯು ಪ್ರಸ್ತುತವೇ?

ಇದೆಲ್ಲ ಸರಿ. ಆದರೆ ಈಗ ನಾವು ಬದುಕುತ್ತಿರುವುದು ಇಪ್ಪತ್ತೊಂದನೆಯ ಶತಮಾನದಲ್ಲಿ. ನಾವೀಗ ಗೀತೆಯಿಂದ ಯಾವ ಪ್ರೇರಣೆಯನ್ನು ಪಡೆಯಬೇಕು?  ಗೀತೆಯ ರಚನಾ ಕಾಲದಿಂದ, ಅಷ್ಟು ದೂರ ಏಕೆ ಕಳೆದ ಶತಮಾನದ ರಾಷ್ಟ್ರೀಯ ಚಳುವಳಿಯ ಕಾಲದಿಂದ ಕಾಲದವರೆಗಿನ ಅವಧಿಯಲ್ಲಿಯೇ ಮನುಷ್ಯನ ಆಲೋಚನಾ ಕ್ರಮವೇ ಸಾಕಷ್ಟು ಬದಲಾಗಿಬಿಟ್ಟಿದೆ.  ಜಗತ್ತು ಎರಡು ಮಹಾಯುದ್ಧಗಳ ಪರಿಣಾಮಗಳನ್ನು ಕಂಡು ನಲುಗಿದೆ. ವಿಶ್ವದಾದ್ಯಂತ ಯುದ್ಧವಿರೋಧಿ ನಿಲುವುಗಳು ಪ್ರಕಟವಾಗುತ್ತಿವೆ. ಯುದ್ಧಬೇಡ ಯುದ್ಧಬೇಡ ಎಂಬ ಕೂಗು ವಿಶ್ವದಾದ್ಯಂತ ಮೊಳಗುತ್ತಿರುವ ಸಂದರ್ಭದಲ್ಲಿ ಯುದ್ಧಕ್ಕೆ ಕರೆ ನೀಡಿದ ಭಗವದ್ಗೀತೆ ನಮಗೆ ಎಷ್ಟು ಪ್ರಸ್ತುತ ಎಂಬುದನ್ನು ನಾವು ಅರ್ಥಮಾಡಿಕೊಂಡು ಮುನ್ನಡೆಯಬೇಕಿದೆ. ಕೃಷ್ಣನು ಕೌರವರನ್ನು, ನಮ್ಮ ರಾಷ್ಟ್ರೀಯ ಚಳುವಳಿಯ ನೇತಾರರು ಬ್ರಿಟೀಷರನ್ನು ತಮ್ಮ ವೈರಿಗಳೆಂದು ಗುರುತಿಸಿಕೊಂಡಂತೆ ನಾವು ಈಗ ಯಾರನ್ನು ವೈರಿಗಳೆಂದು ಗುರುತಿಸಬೇಕು? ಸ್ವಾತಂತ್ರ್ಯ ಹೋರಾಟಕಾಲದಲ್ಲಿ ಬ್ರಿಟೀಷರನ್ನು ದೇಶದಿಂದ ಹೊರಗೆ ಹಾಕುವ ಒಂದು ದೊಡ್ಡ ಉದ್ದೇಶ ನಮ್ಮ ಹಿರಿಯರಿಗೆ ಇತ್ತು. ಆದರೆ ನಾವು ಇಂದು ಯಾರನ್ನು ದೇಶದಿಂದ ಹೊರಹಾಕಬೇಕಾಗಿದೆ?

ಸ್ವತಂತ್ರ ಭಾರತದ ಅಲ್ಪಕಾಲದ ಚರಿತ್ರೆಯನ್ನೇ ನೋಡಿದರೆ ಗೀತೆಯಿಂದ ನಾವು ಏನೆಲ್ಲ ಪ್ರೇರಣೆ ಪಡೆಯುತ್ತಿದ್ದೇವೆ ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ.  ಅನೇಕ ಜನಾಂಗೀಯ ಕಲಹಗಳು, ಸಂಬಂಧದ ಕೊಲೆಗಳು ಮುಂತಾದ ಸಂದರ್ಭಗಳಲ್ಲಿ ಕೃತ್ಯವನ್ನು ಗೀತೆಯ ತತ್ವದ ಆಧಾರ ಕೊಟ್ಟು ಸಮರ್ಥಿಸಿಕೊಳ್ಳುವ ಧಾರ್ಮಿಕ ನಾಯಕರು ಇಂದು ನಮ್ಮಲ್ಲಿ ದಿನದಿನಕ್ಕೂ ಬೆಳೆಯುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಕಾಲದಲ್ಲಿ ಕೃಷ್ಣನ ಮೊದಲ ಎರಡು ತತ್ವಗಳ ಪ್ರಭಾವವನ್ನು ಗುರುತಿಸಿದರೆ ಸ್ವಾತಂತ್ರೋತ್ತರ ಭಾರತದಲ್ಲಿ ಮೂರನೆ ತತ್ವವಾದ ಸ್ವಧರ್ಮ ಪ್ರತಿಷ್ಠೆಯ ತತ್ವದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ತಮಗೆ ವೈರಿಗಳೆಂದು ದೇಶದ ಪ್ರಜೆಗಳಲ್ಲಿಯ ಕೆಲವರನ್ನೇ ಗುರುತಿಸಿಕೊಂಡು ಅವರನ್ನು ಕೊಲ್ಲುವುದು ನಮ್ಮ ಕರ್ತವ್ಯವೆಂದೂ ಅವರನ್ನು ಕೊಲ್ಲದಿದ್ದರೆ ತಾವು ಹೇಡಿಗಳೆಂದು ಅವಮಾನಕ್ಕೆ ಗುರಿಯಾಗುತ್ತೇವೆಂದೂ ಭಾವಿಸಿದ ಕೆಲವರು ಸತತ ಜನಾಂಗೀಯ ಕಲಹ ಕೋಮುಗಲಭೆ ಮುಂತಾದವುಗಳನ್ನು ಸೃಷ್ಟಿಸುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯುಂಟುಮಾಡುತ್ತಿರುವುದು ಸರ್ವವೇದ್ಯ ಸಂಗತಿ.

ಭಾರತ ಸಂವಿಧಾನ ಇಲ್ಲಿ ಹುಟ್ಟಿದ ಎಲ್ಲ ಜಾತಿ-ಜನಾಂಗಗಳ ಜನರನ್ನು ಸಮಾನ ದೃಷ್ಟಿಯಿಂದ ಕಾಣಲು ನಮಗೆ ಕರೆ ನೀಡುತ್ತದೆ. ಯುದ್ಧ ಬೇಡ ಎಂಬುದು ಇಂದು ನಮ್ಮೆಲ್ಲರ ಆಶಯ.  ಗೀತೆ ಇದಕ್ಕೆ ಪೂರಕವಾದದ್ದನ್ನೇನಾದರೂ ಹೇಳುತ್ತದೆಯೇ? ಖಂಡಿತಾ ಇಲ್ಲ. ಹೇಳಿ ಕೇಳಿ ಅದು ಯುದ್ಧಕ್ಕೆ ನೀಡಿದ ಕರೆ. ಹಾಗಾಗಿ ಗೀತೆಯ ಯುದ್ಧಪರ ನಿಲುವು ನಮ್ಮ ಕಾಲಕ್ಕೆ ಅಲಕ್ಷಿಸಬೇಕಾದ ತತ್ವ ಮಾತ್ರ ಅಲ್ಲ ಅನುಸರಿಸಲು ಅಪಾಯಕಾರಿ ತತ್ವ ಕೂಡ ಹೌದು ಎಂಬುದನ್ನು ನಾವಿಂದು ಅರಿಯಬೇಕಾಗಿದೆ.

ಜಾತೀಯತೆಗೆ ತಾತ್ವಿಕತೆಯನ್ನು ಕೊಡುವಿಕೆ

ಗೀತೆಯ ಹುಟ್ಟಿನ ಹಿಂದಿನ ಗುಟ್ಟನ್ನು ನೋಡಿದರೆ ಜಾತಿ-ವರ್ಗ ಸಮಾನತೆಯನ್ನು ಒಪ್ಪಿಕೊಳ್ಳಲಾಗದ ಮನಸ್ಸುಗಳೇ ಜಾತಿ-ವರ್ಗಗಳ ಅಸಮಾನತೆಗೆ ಒಂದು ತಾತ್ವಿಕ ನೆಲೆಗಟ್ಟನ್ನು ಒದಗಿಸಿ ಅಸಮಾನತೆಯನ್ನು ಅಭಾದಿತವಾಗಿ ಮುಂದುವರೆಸಿಕೊಂಡು ಹೋಗುವುದಕ್ಕಾಗಿ ಗೀತೆಯನ್ನು ಆವಿಷ್ಕರಿಸಿದವು ಎಂಬುದು ಸ್ಪಷ್ಟವಾಗುವ ಸಂಗತಿ. ಇದನ್ನು ನೋಡಿದರೆ ಜಾತಿ-ವರ್ಗಗಳ ಸಮಾನತೆಯ ಅಂಶಗಳು ಗೀತೆಯಲ್ಲಿ ಇರುತ್ತವೆ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಗೀತೆಯ ಕೃಷ್ಣ ಚಾತುರ್ವರ್ಣ ಸಂಬಂಧದ ಕರ್ತವ್ಯಕ್ಕೆ ಸಂಬಂಧಿಸಿದAತೆ, "ಸ್ವಧರ್ಮವನ್ನು ತಪ್ಪಾಗಿ ಮಾಡಿದರೂ ಸರಿ, ಪರಧರ್ಮವನ್ನು ಮಾಡಲು ಹೋಗಬಾರದು. ಸ್ವಧರ್ಮಕ್ಕಾಗಿ ಸಾಯುವುದೂ ಶ್ರೇಷ್ಠ. ಪರಧರ್ಮ ಭಯವನ್ನುಂಟುಮಾಡುವಂಥದ್ದು." ಎಂದು ಹೇಳುತ್ತಾನೆ.

ಕೃಷ್ಣ ಇಲ್ಲಿ ಹೇಳುವ `ಸ್ವಧರ್ಮ' ಎಂಬ ಪದ ಏನನ್ನು ಸೂಚಿಸುತ್ತದೆ?  ಸ್ವಾತಂತ್ರ್ಯ ಹೋರಾಟ ಕಾಲದ ಕನ್ನಡದ ಮುಖ್ಯ ಸಮಾಜಸೇವಕರೂ ರಾಜಕೀಯ ನೇತಾರರು ಆಗಿದ್ದ ರಂಗನಾಥ ದಿವಾಕರರ ಟಿಪ್ಪಣಿ ನೋಡಿ: "ಯಾವ ತಾಯಿ ತಂದೆಗಳಿಂದ ಹುಟ್ಟಿರುವೆವೋ ಅವರ ಧರ್ಮವು, ಜಾತಿಧರ್ಮವು, ಇದು ಸಂಕುಚಿತ ಅರ್ಥವು. ನಮ್ಮ ಜೀವನ ಗುಣಕ್ಕನುಸರಿಸುವ ಪ್ರಗತಿಯ ವಿಕಾಸಮಾರ್ಗವು ಎಂಬುದು ಎರಡನೆಯ ಅರ್ಥವು. ಎರಡನೆಯ ಅರ್ಥವೇ ಇಲ್ಲಿ ಹೆಚ್ಚು ಸಮಂಜಸ." ಆದರೆ ಗೀತೆಯಲ್ಲಿ `ಸ್ವಧರ್ಮ' ಪದಕ್ಕೆ ರಂಗನಾಥರು ಹೇಳುವ ಎರಡನೇ ಅರ್ಥ - ನಮ್ಮ ಜೀವನ ಗುಣಕ್ಕನುಸರಿಸುವ ಪ್ರಗತಿಯ ವಿಕಾಸಮಾರ್ಗ ಎಂಬ ಅರ್ಥಖಂಡಿತಾ ಬರುವುದಿಲ್ಲ. ಅವರು ಯಾವುದನ್ನು ಸ್ವಧರ್ಮದ ಸಂಕುಚಿತ ಅರ್ಥ ಎಂದು ಕರೆದಿರುವರೋ ಅಂದರೆ ಜಾತಿಧರ್ಮ ಇದೆಯಲ್ಲ, ಅದೇ ಪದಕ್ಕೆ ಗೀತೆಯಲ್ಲಿ ಬರುವ ನಿಜವಾದ ಅರ್ಥ.

ಕುರಿಯು ಹಸುವಾಗಲು ಸಾಧ್ಯವಿಲ್ಲ

ಆಚಾರ್ಯ ವಿನೋಬಾ ಭಾವೆಯವರು ಕೂಡ ಗೀತೆಯ ಸ್ವಧರ್ಮದ ಕಲ್ಪನೆಯನ್ನು ಹೊಗಳುತ್ತಾ ಸಾಮಾಜಿಕ ಯಥಾಸ್ಥಿತಿಯನ್ನೇ ಪ್ರತಿಪಾದಿಸುತ್ತಾರೆ. ಭಗವದ್ಗೀತೆಯ ಬಗ್ಗೆ ೧೯೩೨ ರಲ್ಲಿ ಧುಳೇ ಜೈಲಿನಲ್ಲಿ ಸುಮಾರು ನಾಲ್ಕು ತಿಂಗಳು ಪ್ರವಚನ ನೀಡಿದ ವಿನೋಬಾ ಅವರು ತಮ್ಮ ಪ್ರವಚನ ಮಾಲಿಕೆಯ ಕೊನೆಯದಿನವಾದ ೧೯.೦೬.೧೯೩೨ ರಂದು ಗೀತೆಯ ಸ್ವಧರ್ಮದ ಬಗ್ಗೆ ಹೀಗೆ ಹೇಳುತ್ತಾರೆ, "ಸ್ವಧರ್ಮದಲ್ಲಿ ಸ್ವದೇಶಿ ಧರ್ಮ, ಸ್ವಜಾತಿ ಧರ್ಮ, ಸ್ವಕಾಲೀನ ಧರ್ಮಗಳು ಬರುತ್ತವೆ. ಮೂರರಿಂದ ಸ್ವಧರ್ಮವಾಗುತ್ತದೆ" ಮುಂದುವರೆದು ಅವರು ಹೇಳುತ್ತಾರೆ, "ಕುರಿಯ ವಿಕಾಸ ಕುರಿಯಾಗುವುದರಲ್ಲೇ. ಕುರಿಯಾಗಿದ್ದೇ ಅದು ವಿಕಾಸಮಾಡಿಕೊಳ್ಳಬೇಕು. ಕುರಿ ತಾನು ಹಸುವಾಗುತ್ತೇನೆ ಎಂದರೆ ಸಾಧ್ಯವಿಲ್ಲ. ಸ್ವಯಂ ಪ್ರಾಪ್ತವಾದ ಕುರಿತನವನ್ನು ತ್ಯಾಗಮಾಡಲಿಕ್ಕೆ ಬಾರದು. ಅದಕ್ಕಾಗಿ ದೇಹವನ್ನೇ ಬಿಡಬೇಕಾದೀತು."

ಉದಾಹರಣೆಯನ್ನು ಕೊಡುವ ಮೂಲಕ ವಿನೋಬಾ ಅವರು ಏನನ್ನು ಹೇಳಲು ಬಯಸುತ್ತಾರೆ? ನಮ್ಮ ಕಾಲದ ಶೂದ್ರನೋ ಅಥವಾ ದಲಿತನೋ ಬ್ರಾಹ್ಮಣನಾಗಲು ಪ್ರಯತ್ನಿಸಬಾರದು. ತನಗೆ ಸ್ವಯಂಪ್ರಾಪ್ತವಾಗಿರುವ ದಲಿತತನ ಅಥವಾ ಶೂದ್ರತನವೇ ಅವನಿಗೆ ಪವಿತ್ರ. ಅದನ್ನು ಮೀರಲು ಪ್ರಯತ್ನಿಸಿದರೆ ಅವನು ತನ್ನ ದೇಹವನ್ನೇ ತ್ಯಾಗಮಾಡಬೇಕಾದೀತು ಎಂದು ತಾನೆ?  ಕುರಿ ಹಸುವಾಗಲಿಕ್ಕೆ ಸಾಧ್ಯವಿಲ್ಲ ಎನ್ನುವ ಸಂಗತಿ ನಿಜವಾದದ್ದು. ಅದು ನಿಸರ್ಗವೇ ಮಾಡಿರುವ ಸ್ವಾಭಾವಿಕ ವ್ಯತ್ಯಾಸ. ಆದರೆ ಗೀತೆಯಲ್ಲಿ ಸ್ವಧರ್ಮದ ಸಂಗತಿ ಇರುವುದು ರೀತಿಯ ನಿಸರ್ಗದತ್ತವಾದ ಒಂದು ವ್ಯತ್ಯಾಸವನ್ನು ಹೊಂದಿರುವ ಪ್ರಾಣಿಗಳಿಗೆ ಸಂಬಂಧಿಸಿದ್ದಲ್ಲ.  ಅದು ನೈಸರ್ಗಿಕವಾಗಿ ಒಂದೇ ರೀತಿಯಲ್ಲಿ ಹುಟ್ಟಿರುವ, ಒಂದೇ ದೈಹಿಕ ರಚನೆಯನ್ನು ಹೊಂದಿರುವ, ಮನಸ್ಸು ಬುದ್ಧಿಗಳನ್ನು ಹೊಂದಿರುವ, ಒಂದೇ ಜಾತಿಯ ಪ್ರಾಣಗಳಾದ ಮನುಷ್ಯರಿಗೆ ಸಂಬಂಧಿಸಿದ್ದು. ಜೈವಿಕವಾದದ್ದು, ನೈಸರ್ಗಿಕವಾದದ್ದು ಬದಲಾವಣೆಗೆ ಸಾಧ್ಯವಿಲ್ಲದಿರಬಹುದು. ಆದರೆ ಸಾಮಾಜಿಕವಾದದ್ದು, ಮಾನವನಿರ್ಮಿತವಾದದ್ದು ಬದಲಾವಣೆಗೆ ಸಾಧ್ಯವಿರುವಂಥದ್ದು! ಇದು ವಿನೋಭಾ ಅವರ ಅರಿವಿಗೆ ಬರಲಿಲ್ಲವೋ ಅಥವಾ ಬಂದೂ ಅದನ್ನು ಅವರು ಅಲಕ್ಷಿಸಿ ಅದಕ್ಕೊಂದು ತಾತ್ವಿಕ ನೆಲೆಗಟ್ಟನ್ನು ಕೊಡಲು ಪ್ರಯತ್ನಿಸಿದರೋ ಎಂಬುದನ್ನು ಅರಿಯುವುದು ಕಷ್ಟಸಾಧ್ಯವಾದ ಸಂಗತಿ.

ಸ್ವಧರ್ಮದ ಹಿನ್ನಲೆಯಲ್ಲಿ ಕುಲ ಮತ್ತು ಗುಣ

ಸ್ವಧರ್ಮ ಎಂಬುದನ್ನು ʻಗುಣಧರ್ಮʼ ಎಂದು ಗುರುತಿಸಿ ಅದು ಜಾತಿಧರ್ಮವನ್ನು ಸೂಚಿಸುವುದಿಲ್ಲ ಗುಣಧರ್ಮವನ್ನು ಸೂಚಿಸುತ್ತದೆ. ಹಾಗಾಗಿ ಚಾತುರ್ವರ್ಣ ಪದ್ಧತಿ ಜಾತಿ ಆಧಾರಿತವಾಗಿರಲಿಲ್ಲ ಬದಲಾಗಿ ಗುಣಧರ್ಮವನ್ನು ಆಧರಿಸಿ ಇತ್ತು ಎಂದು ವಾದಮಾಡುವವರು ಅನೇಕ ಜನರಿದ್ದಾರೆ. ಅವರೆಲ್ಲ ತಮ್ಮ ವಾದಕ್ಕೆ ಬೆಂಬಲವಾಗಿ ಗೀತೆಯ ಒಂದು ಶ್ಲೋಕವನ್ನು ಬಳಸುತ್ತಾರೆ. ಶ್ಲೋಕವೇ ಮೂರನೇ ಅಧ್ಯಾಯದ ಹದಿಮೂರನೇ ಶ್ಲೋಕ. ಅದರಲ್ಲಿ ಕೃಷ್ಣ, "ಗುಣಧರ್ಮಗಳಿಗನುಗುಣವಾಗಿ ನಾನೇ ನಾಲ್ಕೂ ವರ್ಣಗಳನ್ನು ಸೃಷ್ಟಿಸಿದ್ದೇನೆ" ಎಂದು ಹೇಳುತ್ತಾನೆ. ಇಲ್ಲಿ ಕೃಷ್ಣ ಗುಣಧರ್ಮಕ್ಕನುಗುಣವಾಗಿ ನಾಲ್ಕೂ ವರ್ಣಗಳನ್ನು ಸೃಷ್ಟಿಸಿದ್ದೇನೆ ಎನ್ನುವುದನ್ನು ಸುಮ್ಮನೇ ಒಪ್ಪಿಕೊಳ್ಳದೇ ಅವನು ಗುಣಧರ್ಮ ವಿಭಾಗವನ್ನು ಯಾವ ಆಧಾರದ ಮೇಲೆ ಮಾಡಿದ ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ಅದರ ಗುಟ್ಟು ಸ್ಪಷ್ಟವಾಗುತ್ತದೆ. 

ಒಂದು ಸಮಾಜ ವ್ಯವಸ್ಥಿತವಾಗಿ ನಡೆಯಬೇಕಾದರೆ ಅಲ್ಲಿ ಬೇರೆ ಬೇರೆ ರೀತಿಯ ಕಾರ್ಯಗಳು ಜರುಗಬೇಕು. ವಿಭಿನ್ನವಾದ ಕೆಲಸಗಳನ್ನು ಮಾಡಲು ಆಯಾ ಕೆಲಸಕ್ಕೆ ತಕ್ಕ ಮನೋಭಾವದವರನ್ನು ನಿಯೋಜಿಸಬೇಕು. ತಾತ್ವಿಕತೆಯನ್ನು ನಮ್ಮ ಕಾಲಕ್ಕೆ ಅನ್ವಯಿಸಿಕೊಂಡು ಹೇಳುವುದಾದರೆ ಧೈರ್ಯ ಸಾಹಸದ ಮನೋಭಾವ ಅಥವಾ ಗುಣಧರ್ಮ ಇರುವವರನ್ನು ಸೈನ್ಯಕ್ಕೆ, ಅದೇ ರೀತಿ ಜ್ಞಾನ, ಸಹನೆ ಮುಂತಾದ ಮನೋಭಾವನೆ ಅಥವಾ ಗುಣಧರ್ಮ ಇರುವವರನ್ನು ಪಾಠ ಹೇಳುವ ಕೆಲಸಕ್ಕೆ ಹೀಗೆ ಆಯಾ ವೃತ್ತಿಯು ಅಪೇಕ್ಷಿಸುವ ಗುಣಧರ್ಮಗಳನ್ನು ಹೊಂದಿರುವ ವ್ಯಕ್ತಿಗಳನ್ನು ಆಯಾ ವೃತ್ತಿಗಳಿಗೆ ನೇಮಿಸುವ ಒಂದು ಕ್ರಮ. ಹೀಗೆ ಅವರನ್ನು ನೇಮಿಸುವಾಗ ನಾವು ಯಾವ ಅಂಶಗಳನ್ನು ಪರಿಗಣಿಸಬೇಕು? ಅವರು ಹುಟ್ಟಿದ ಜಾತಿ, ಧರ್ಮ ಅಥವಾ ಕುಲ ಇವುಗಳನ್ನೋ ಅಥವಾ ಆಯಾ ಕೆಲಸಗಳು ಅಥವಾ ವೃತ್ತಿಗಳು ಅಪೇಕ್ಷಿಸುವ ಗುಣಧರ್ಮಗಳು ಅಥವಾ ಮನೋಭಾವಗಳು ಅವರಲ್ಲಿ ಇವೆಯೋ ಇಲ್ಲವೋ ಎಂಬುದನ್ನೋ?  ನಾವು ಪರಿಗಣಿಸಬೇಕಾದದ್ದು ಅವರಲ್ಲಿ ಕೆಲಸಕ್ಕೆ ಬೇಕಾದ ಮನೋಧರ್ಮ ಅಥವಾ ಗುಣಧರ್ಮಗಳು ಇವೆಯೋ ಇಲ್ಲವೋ ಎಂಬುದನ್ನು ಮಾತ್ರ ತಾನೆ?

ಆದರೆ ಗೀತೆಯ ಕೃಷ್ಣ ಏನು ಮಾಡುತ್ತಾನೆ? ಗುಣಧರ್ಮವನ್ನೇ ಆಧರಿಸಿ ಕೃಷ್ಣ ಅಲ್ಲಿಯೂ ಕೆಲಸ ನಿಯೋಜನೆ ಮಾಡಿದ್ದಾನೆ ಎಂಬುದು ಹೀಗೆ ವಾದಮಾಡುವವರು ಭಾವಿಸಿದಂತಿದೆ. ಆದರೆ ಇದು ಸುಳ್ಳು ಎಂಬುದಕ್ಕೆ ಗೀತೆಯಲ್ಲಿಯೇ ಆಧಾರಗಳಿವೆ. ಅಲ್ಲಿ ಕೃಷ್ಣ ಗುಣಧರ್ಮದ ಆಧಾರದ ಮೇಲೆ ವರ್ಣಗಳನ್ನು ಸೃಷ್ಟಿಸಿದ್ದು ಸರಿ ಇರಬಹುದು. ಆದರೆ ಗುಣಧರ್ಮವನ್ನು ಅವನು ಹೇಗೆ ಗುರುತಿಸುತ್ತಾನೆ ಎಂದರೆ ಒಂದು ನಿರ್ಧಿಷ್ಠ ಕುಲ ಅಥವಾ ಜಾತಿಯಲ್ಲಿ ಹುಟ್ಟಿದವರು ಒಂದು ಗುಣಧರ್ಮದವರು ಎಂದು ಪರಿಗಣಿಸುತ್ತಾನೆ! ಇಲ್ಲಿಯೇ ಇರುವುದು ಗುಟ್ಟು. ಬ್ರಾಹ್ಮಣರಲ್ಲಿ ಹುಟ್ಟಿದವರಿಗೆಲ್ಲ ಪೂಜೆ ಪುನಸ್ಕಾರ ಮಾಡುವ ಗುಣಧರ್ಮ ಇರುತ್ತದೆ ಎಂದೂ, ಕ್ಷತ್ರಿಯರಲ್ಲಿ ಹುಟ್ಟಿದವರಿಗೆಲ್ಲರಿಗೂ ಹೋರಾಟದ ಗುಣಧರ್ಮವಿರುತ್ತದೆಯೆಂದೂ ವೈಶ್ಯಕುಲದಲ್ಲಿ ಹುಟ್ಟಿದವರೆಲ್ಲರಿಗೂ ವ್ಯಾಪಾರ-ವ್ಯವಹಾರದ ಗುಣಧರ್ಮವಿರುತ್ತದೆಯೆಂದೂ ಹಾಗೇ ಶೂದ್ರರಲ್ಲಿ ಹುಟ್ಟಿದವರೆಲ್ಲರಿಗೂ ಮೇಲಿನ ಮೂರು ವರ್ಣದವರ ಸೇವೆಯನ್ನು ಮಾಡುವ ಗುಣಧರ್ಮವಿರುತ್ತದೆ ಎಂದೂ ಅವನು ಭಾವಿಸುತ್ತಾನೆ. ಅಂದರೆ ಗುಣಧರ್ಮ ಎಂಬುದನ್ನು ಅವನು ಹುಟ್ಟಿನೊಂದಿಗೆ ತಳುಕು ಹಾಕುತ್ತಾನೆ. ಹೀಗಾಗಿ ಬ್ರಾಹ್ಮಣ ತಂದೆ ತಾಯಿಯರಿಗೆ ಹುಟ್ಟಿದ ವ್ಯಕ್ತಿ ಶೂದ್ರರಿಗೆ ನಿಗಧಿಯಾದ ಕೆಲಸವನ್ನು ಮಾಡುವ ಮನೋಧರ್ಮ ಹೊಂದಿರುವುದಿಲ್ಲ. ಅದೇ ರೀತಿ ಶೂದ್ರ ತಂದೆತಾಯಿಯರಿಗೆ ಹುಟ್ಟಿದ ವ್ಯಕ್ತಿ ಬ್ರಾಹ್ಮಣ ವರ್ಣದವರ ಕೆಲಸವನ್ನು ಮಾಡುವ ಮನೋಧರ್ಮ ಹೊಂದಿರುವುದಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾನೆ.

ಅರ್ಜುನನಿಗೆ ನೆನಪು ಮಾಡಿಕೊಡುವುದು ಗುಣವನ್ನಲ್ಲ; ಕುಲವನ್ನು

ಮೊದಲು ಈಗಾಗಲೇ ಚರ್ಚೆಯಾದಂತೆ ಅರ್ಜುನನ್ನು ಯುದ್ಧಮುಖಿಯನ್ನಾಗಿ ಮಾಡಲು ಕೃಷ್ಣ ಮೂರು ರೀತಿಯಲ್ಲಿ ಯುದ್ಧ ಸಮರ್ಥನೆ ಮಾಡುತ್ತಾನೆ. ಅದರಲ್ಲಿ ಕೊನೆಯ ಅಂಶವನ್ನು ಹಿನ್ನಲೆಯಲ್ಲಿ ನೆನಪಿಸಿಕೊಳ್ಳೋಣ. ಅಲ್ಲಿ ಅರ್ಜುನನಿಗೆ ಕೃಷ್ಣ, "ನಿನ್ನಲ್ಲಿ ಯುದ್ಧಮಾಡುವ ಹೋರಾಡುವ ಮನೋಧರ್ಮ ಅಥವಾ ಗುಣಧರ್ಮ ಇದೆ. ಅದಕ್ಕಾಗಿಯಾದರೂ ನೀನು ಹೋರಾಡಬೇಕು" ಎಂದು ಹೇಳುವುದಿಲ್ಲ. ಬದಲಾಗಿ, "ಸ್ವಧರ್ಮದ ಕಡೆಗಾದರೂ ನೋಡಿ ನೀನು ಹಿಂಜರಿಯಬಾರದು. ಕ್ಷತ್ರಿಯರಿಗೆ ಧರ್ಮಾನುಕೂಲ ಯುದ್ಧಕ್ಕಿಂತ ಹೆಚ್ಚು ಕಲ್ಯಾಣಕರವಾದದ್ದು ಏನೂ ಇಲ್ಲ" ಎಂದು ಹೇಳುತ್ತಾನೆ. ಅಂದರೆ ಅವನು ಅರ್ಜುನನಿಗೆ ನೆನಪು ಮಾಡಿಕೊಡುವುದು ಕುಲವನ್ನೇ ಹೊರತು ಗುಣವನ್ನಲ್ಲ!

ಚರ್ಚೆಯಿಂದ ಸ್ಪಷ್ಟವಾಗುವ ಅಂಶವೆಂದರೆ `ಸ್ವಧರ್ಮೆ ನಿಧನಂ ಶ್ರೇಯಃ'  ಎಂಬ ಮಾತಿನ ಹಿಂದಿರುವುದು ಒಂದು ವ್ಯವಸ್ಥಿತ ಸಮಾಜದ ಚಲನೆಗೆ ಅನಿವಾರ್ಯವಾದ ಕಾರ್ಯನಿರ್ವಹಣೆಯ ಜವಾಬ್ದಾರಿಯಲ್ಲ. ಬದಲಾಗಿ ಯಾವ ಒಂದಿಷ್ಟು ಜನರನ್ನು ಉಳಿದ ಜನರ ಸೇವೆಗಾಗಿ ಬಳಸಿಕೊಳ್ಳಲಾಗುತ್ತಿತ್ತೋ ಅವರು ಅತ್ತಿತ್ತ ಆಲೋಚನೆ ಮಾಡದಂತೆ ತಮ್ಮ ಕೆಲಸವನ್ನು ಒಂದು ಪುಣ್ಯಕಾರ್ಯವೆಂದು ತಿಳಿದು ಶ್ರದ್ಧೆಯಿಂದ ಅದನ್ನು ಮಾಡುತ್ತಾ ಅಲ್ಲೇ ಇರಲಿ ಎಂಬ ಹುನ್ನಾರ ಮಾತ್ರ.  ಹಾಗಾಗಿ ನಮ್ಮ ಈಗಿನ ಜಾತಿಪದ್ಧತಿಗೆ ಗೀತೆಯ ವರ್ಣಪದ್ಧತಿ ಕಾರಣವಲ್ಲ ಅದಕ್ಕೂ ಈಗಿನ ಜಾತಿಪದ್ಧತಿಗೂ ಏನೇನೂ ಸಂಬಂಧವಿಲ್ಲ ಎಂದು ಮಾಡುವ ತರ್ಕ ಹುರುಳಿಲ್ಲದ್ದು. ಜಾತಿ ವ್ಯವಸ್ಥೆಯ ಬೇರುಗಳು ಅಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ ಅದನ್ನು ನೋಡುವ ಕಣ್ಣು ಮತ್ತು ನೋಡಿದ ಮೇಲೆ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಸು ನಮಗಿರಬೇಕು ಅಷ್ಟೆ.

ಜ್ಞಾನ-ವಿಜ್ಞಾನಗಳ, ವ್ಯಕ್ತಿಸ್ವಾತಂತ್ರ್ಯ, ವೈಚಾರಿಕತೆ, ಬೌದ್ಧಿಕತೆಗಳ ನಿರಾಕರಣ

ಆಧುನಿಕವಾಗಿ, ವೈಚಾರಿಕವಾಗಿ ಜ್ಞಾನ-ವಿಜ್ಞಾನಗಳ ಬೆಳವಣಿಗೆಯ ಹಿನ್ನಲೆಯಲ್ಲಿ ನಾವು ಒಪ್ಪಲು ಆಗದಂತಹ ಅನೇಕ ಅಂಶಗಳನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಚರ್ಚಿಸಬಹುದು.

ಭಗವದ್ಗೀತೆಯಲ್ಲಿ `ಜ್ಞಾನ' ಮತ್ತು `ವಿಜ್ಞಾನ' ಎಂಬ ಪದಗಳು ಕೆಲವುಕಡೆ ಬಳಕೆಯಾಗಿವೆ. ಅಲ್ಲಿ ಪದಗಳಿಗೆ ನಾವು ಇಂದು ಕೊಡುವ ಅರ್ಥವೇ ಇದೆಯೇ ಅಥವಾ ಅದಕ್ಕಿಂತ ಭಿನ್ನವಾದ ಅರ್ಥವೇನಾದರೂ ಇದೆಯೇ ಎಂಬುದನ್ನು ನಾವು ಅರಿಯುವುದು ಅಗತ್ಯ. ವಿದ್ಯೆಯ ಮಹತ್ವವನ್ನು ಹೇಳಬೇಕಾದ ಸಂದರ್ಭ ಬಂದಾಗ ನಮ್ಮಲ್ಲಿ ಅನೇಕರು ತಮ್ಮ ಭಾಷಣ ಮತ್ತು ಬರಹಗಳಲ್ಲಿ ಭಗವದ್ಗೀತೆಯ ಒಂದು ಶ್ಲೋಕಭಾಗವನ್ನು ಬಳಸುತ್ತಾರೆ. ಅದೆಂದರೆ, "ನಹೀ ಜ್ಞಾನೇನ ಸದೃಶ್ಯಂ ಪವಿತ್ರಮಿಹ ವಿದ್ಯತೇ" ಎಂಬುದು. `ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ' ಎಂಬ ಅರ್ಥದಲ್ಲಿಯೇ ಬಹುತೇಕ ಎಲ್ಲರೂ ಇದನ್ನು ಬಳಸುವುದು. ಕರ್ನಾಟಕದ ಒಂದು ವಿಶ್ವವಿದ್ಯಾಲಯದ ಎಂಬ್ಲಮ್ನಲ್ಲಿ ಶ್ಲೋಕಭಾಗ ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿಯೂ ಸೇರಿದೆ!

ಆದರೆ ಗಮನಿಸಬೇಕಾದ ಸಂಗತಿ ಎಂದರೆ ವಿಶ್ವವಿದ್ಯಾಲಯವೂ ಸೇರಿದಂತೆ ಆಧುನಿಕ ಜಗತ್ತಿನ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಶಾಲೆ ಕಾಲೇಜುಗಳು ನೀಡುವ ವಿದ್ಯೆಗಳಲ್ಲಿ ಶೇಕಡಾ ತೊಂಬತ್ತು ಭಾಗ ಭಗವದ್ಗೀತೆಯ ಕೃಷ್ಣನ ಪ್ರಕಾರ ವಿದ್ಯೆಗಳೇ ಅಲ್ಲ! ನಮ್ಮ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆ ಮುಂತಾದವುಗಳೂ ಅವನ ಪ್ರಕಾರ ಜ್ಞಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ! ಏಕೆಂದರೆ ರೀತಿಯ ವಿದ್ಯೆಗಳು, ಸಂಶೋಧನೆಗಳು ಇವೆಲ್ಲ ಮನುಷ್ಯನ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಬಳಕೆಯಿಂದ ಸಾಧಿತವಾಗುವಂಥವುಗಳು. ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳನ್ನು ಬಳಸಿಕೊಳ್ಳದೆ ವಿದ್ಯೆ ಅಥವಾ ಜ್ಞಾನಗಳ ಉತ್ಪನ್ನ ಸಾಧ್ಯವಿಲ್ಲದ ಸಂಗತಿಗಳು.  ಗೀತೆಯ ಕೃಷ್ಣನ ಪ್ರಕಾರ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಜ್ಞಾನವನ್ನು ಪಡೆಯಲು ಇರುವ ಸಾಧನಗಳಲ್ಲ. ಬದಲಾಗಿ ಅವು ಜ್ಞಾನವನ್ನು ಪಡೆಯಲು ಇರುವ ಅಡೆತಡೆಗಳು ಅಥವಾ ತೊಡಕುಗಳು!

ಹಾಗಾದರೆ ಅವನ ಪ್ರಕಾರ ಜ್ಞಾನ ಅಂದರೆ ಯಾವುದು? ಅವನ ಪ್ರಕಾರ ಇಂದ್ರಿಯ ಮನಸ್ಸು ಬುದ್ಧಿಗಳನ್ನು ಬಳಸಿಕೊಳ್ಳದೇ ಪಡೆಯುವ ಯಾವುದೋ ಒಂದು ರೀತಿಯ ಅಲೌಕಿಕ ಅನುಭವ ಜ್ಞಾನ! ಉಳಿದದ್ದೆಲ್ಲ ಅಜ್ಞಾನ!! (ವಾಸ್ತವದಲ್ಲಿ ರೀತಿ ಇಂದ್ರಿಯಗಳನ್ನು ಬಳಸಿಕೊಳ್ಳದೇ ಅನುಭವವನ್ನು ಪಡೆಯಲು ಸಾಧ್ಯವಿದೆಯೇ ಎಂಬುದು ಬೇರೆ ಚರ್ಚೆಯ ವಿಷಯ) ತಾತ್ಪರ್ಯ ಇಷ್ಟೆ: ಇಂದಿನ ಬೌದ್ಧಿಕ ವಲಯ ಯಾವುದನ್ನು `ಜ್ಞಾನ' ಎಂದು ಗುರುತಿಸುತ್ತದೆಯೋ ಅದು ಗೀತೆಯ ಪ್ರಕಾರ `ಅಜ್ಞಾನ'. ಮತ್ತು ಬೌದ್ಧಿಕ ವಲಯ ಯಾವುದನ್ನು ಬಹುತೇಕವಾಗಿ `ಅಜ್ಞಾನ' ಎಂದು ಗುರುತಿಸುತ್ತದೆಯೋ ಅದು ಗೀತೆಯ ಪ್ರಕಾರ `ಜ್ಞಾನ'!!!

ಸಮರ್ಪಣೆ ಎಂಬ ದಾಸ್ಯ

ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಪದೇ ಪದೇ ಹೇಳುವ ಒಂದು ಮಾತೆಂದರೆ ನೀನು ಯಾವುದರ ಬಗ್ಗೆಯೂ ಚಿಂತೆ (ಚಿಂತನೆ) ಮಾಡದೆ `ನಾನು ಹೇಳಿದಂತೆ ಮಾಡು' ಎಂಬುದು. ಇದನ್ನು ಅನೇಕ ಸಂಪ್ರದಾಯಿ ವ್ಯಾಖ್ಯಾನಕಾರರು `ಸಮರ್ಪಣಾ ಭಾವ' ಎಂದು ಉದಾತ್ತೀಕರಿಸಿ ತಾತ್ವಿಕತೆಯನ್ನು ಹೊಗಳುವುದುಂಟು. ಗೀತೆಯ ಅರ್ಜುನ ಆಧುನಿಕ ಕಾಲದ ಸಾಮಾನ್ಯ ಜನರ ಪ್ರತಿನಿಧಿಯೂ ಹೌದು.  ಅವನು ಗೀತೆಯಲ್ಲಿ ಕೇಳುವ ಪ್ರಶ್ನೆಗಳನ್ನು ನೋಡಿ. ಅವೆಲ್ಲ ತೀರಾ ಲೌಕಿಕ ಪ್ರಶ್ನೆಗಳು. ನಮಗೆ ನಿಮಗೆ ನಮ್ಮ ನಿಮ್ಮ ಬದುಕಿನಲ್ಲಿ ಎದುರಾಗುವ ಸಮಸ್ಯೆ ಸಂಕಟಗಳ ಪರಿಹಾರಕ್ಕಾಗಿ ಕೇಳಲಾದ ಪ್ರಶ್ನೆಗಳೇ. ಆದರೆ ಕೃಷ್ಣ ಎಲ್ಲ ಪ್ರಶ್ನೆಗಳಿಗೆ ಸಿದ್ಧ ಉತ್ತರಗಳನ್ನು ಕೊಡುತ್ತಾ ಹೋಗುತ್ತಾನೆ. ಎಲ್ಲಿಯೂ ಅರ್ಜುನನ್ನು ಆಲೋಚಿಸಲು ಅವನು ಬಿಡುವುದಿಲ್ಲ. ಅವನೇನಿದ್ದರೂ ತನ್ನ ಸಂಶಯಗಳನ್ನು ಕೇಳಬೇಕು ಮತ್ತು ಅದಕ್ಕೆ ಸಿದ್ಧ ಉತ್ತರಗಳನ್ನು ಪಡೆಯಬೇಕು ಅಷ್ಟೆ!

ಇಡೀ ಗೀತೆಯಲ್ಲಿ ಅರ್ಜುನನ ಪ್ರಶ್ನೆ ಮತ್ತು ಕೃಷ್ಣನ ಉತ್ತರಗಳನ್ನು ಸೂಕ್ಷ್ಮವಾಗಿ ನೋಡಿದರೆ ಪ್ರಶ್ನೆ ಬಂದಮೇಲೆ ಉತ್ತರ ಕಂಡುಕೊಳ್ಳಲಾಗಿದೆಯೋ ಅಥವಾ ಹೇಳಬೇಕಾದ ತತ್ವಗಳನ್ನು ಉತ್ತರರೂಪದಲ್ಲಿ ಮೊದಲೇ ಸಿದ್ಧಪಡಿಸಿಕೊಂಡು ಅದನ್ನು ಹೊರಹಾಕಲು ಅಗತ್ಯವಾದ ಪ್ರಶ್ನೆಗಳನ್ನು ನಂತರ ರಚಿಸಿಕೊಂಡು ಅರ್ಜುನನ ಬಾಯಿಂದ ಕೇಳಿಸಲಾಗಿದೆಯೋ ಎಂಬ ಸಂಶಯ ಖಂಡಿತಾ ಬರುತ್ತದೆ. ಇಡೀ ಗೀತೆಯಲ್ಲಿ ಅರ್ಜುನನ್ನು ಸ್ವಂತ ವ್ಯಕ್ತಿತ್ವವಿಲ್ಲದ, ಹೇಳಿದ್ದಕ್ಕೆಲ್ಲ ಹೂಂಗುಟ್ಟುವ ಒಬ್ಬ `ಹೌದಪ್ಪ'ನನ್ನಾಗಿ ಮಾಡಲಾಗಿದೆ. ಅರ್ಜುನ ಕೇಳುವ ಪ್ರಶ್ನೆಗಳಿಗೆ ಅರ್ಜುನನೇ ಆಲೋಚಿಸಿ ತೀರ್ಮಾನಿಸಲು ಅವನಿಗೆ ಸಲಹೆ ಸೂಚನೆ ನೀಡಿ ಅವಕಾಶ ಮಾಡಿಕೊಡುವ ಸಂದರ್ಭ ಎಲ್ಲಿಯೂ ಬರುವುದಿಲ್ಲ. ಅವನು ಬಗ್ಗೆ ಸಂಶಯಪಡುವುದನ್ನು ಕೃಷ್ಣ ಸಹಿಸುವುದಿಲ್ಲ. "ಶ್ರದ್ಧೆ ಇಲ್ಲದ ಅಜ್ಞಾನಿ ಸಂಶಯಗ್ರಸ್ಥನಾಗಿ ನಾಶಹೊಂದುತ್ತಾನೆ. ಸಂಶಯಗ್ರಸ್ಥನಿಗೆ ಲೋಕವೂ ಇಲ್ಲ. ಪರಲೋಕವೂ ಇಲ್ಲ" ಎಂದು ಅರ್ಜುನನನ್ನು ಹೆದರಿಸಿ ಅವನು ಸಂಶಯವನ್ನೂ ಪಡದಂತೆ ಮತ್ತು ತಾನು ಹೇಳಿದ್ದನ್ನು ಸುಮ್ಮನೆ ಒಪ್ಪಿಕೊಳ್ಳುವಂತೆ ಒತ್ತಡ ತರುತ್ತಾನೆ.

ಬಕಲ್ ತನ್ನ `ಹಿಸ್ಟರಿ ಆಫ್ ಸಿವಿಲೈಜೇಷನ್'ನಲ್ಲಿ ಹೀಗೆ ಹೇಳುತ್ತಾನಂತೆ: "ಸಂದೇಹ ಹುಟ್ಟುವವರೆಗೂ ಪ್ರಗತಿ ಅಸಾಧ್ಯ ಎಂಬ ಮಾತು ಸಿದ್ಧಸತ್ಯ. ಏಕೆಂದರೆ ನಾವೀಗಾಗಲೇ ಸ್ಪಷ್ಟವಾಗಿ ನೋಡಿರುವಂತೆ ನಾಗರಿಕತೆಯ ಪ್ರಗತಿಯು ಮುಖ್ಯವಾಗಿ ಮಾನವ ಬುದ್ಧಿ ತಾನು ಗಳಿಸಿಕೊಂಡಿರುವುದನ್ನು ಹಾಗೇ ಗಳಿಸಿಕೊಂಡದ್ದನ್ನು ಹೇಗೆ ಇತರರಿಗೆ ಎಷ್ಟರಮಟ್ಟಿಗೆ ಹಂಚಲಾಯಿತು ಎಂಬುದನ್ನು ಅವಲಂಬಿಸುತ್ತದೆ. ತಾವು ಗಳಿಸಿಕೊಂಡ ಜ್ಞಾನದ ಬಗ್ಗೆ ತೃಪ್ತಿ ಇರುವವರು, ಅದನ್ನು ಹೆಚ್ಚಿಸಿಕೊಳ್ಳಲು ಎಂದೂ ಪ್ರಯತ್ನಿಸುವುದಿಲ್ಲ. ತಮ್ಮ ಅಭಿಪ್ರಾಯಗಳ ವಿರುದ್ಧದ ಅಭಿಮತಗಳನ್ನು ಆಶ್ಚರ್ಯದಿಂದ ನೋಡುತ್ತಾರೆ. ಹಾಗೂ ಕೆಲವು ವೇಳೆ ಭಯದಿಂದ ನೋಡುತ್ತಾರೆ. ಅವರು ಇಂತಹ ಮಾನಸಿಕ ಸ್ಥಿತಿಯಲ್ಲಿರುವಾಗಲೇ ಮೊದಲೇ ತೆಗೆದುಕೊಂಡ ನಿರ್ಣಯಗಳಿಗೆ ಅಡ್ಡಿಮಾಡುವಂತಹ ಯಾವುದೇ ಹೊಸ ಸತ್ಯವನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗುವುದಿಲ್ಲ." 

ಹೀಗೆ ಬಕಲ್ ಯಾವುದನ್ನು ನಾಗರೀಕತೆಯ ಮುಖ್ಯ ಆಧಾರ ಎಂದು ಪರಿಗಣಿಸುತ್ತಾನೆಯೋ ಅಂತಹ `ಮಾನವನ ಬುದ್ಧಿ'ಯನ್ನು ಕೃಷ್ಣ ಇಲ್ಲಿ ಸಂಪೂರ್ಣವಾಗಿ ನಿರಾಕರಿಸುತ್ತಾನೆ. ಪ್ರಶ್ನೆ ಮಾಡುವುದು ಮತ್ತು ಸಂಶಯಪಡುವುದು ವೈಚಾರಿಕತೆಯ, ವೈಜ್ಞಾನಿಕತೆಯ ಮೊದಲ ಹೆಜ್ಜೆಗಳು. ಒಂದು ವೇಳೆ ಮನುಷ್ಯನ ಮನಸ್ಸು ಸಂಶಯವನ್ನು ತಾಳದೇ ಹೋಗಿದ್ದರೆ, ಪ್ರಶ್ನೆಮಾಡುವ ಮನೋಭಾವನೆಯನ್ನೇ ರೂಢಿಸಿಕೊಳ್ಳದೇ ಹೋಗಿದ್ದಿದ್ದರೆ ಬಕಲ್ ಹೇಳುವಂತೆ ಆಧುನಿಕ ಜಗತ್ತಿನ ಯಾವ ಸಂಶೋಧನೆಗಳೂ ಆಗುತ್ತಲೇ ಇರಲಿಲ್ಲ. ಭಗವದ್ಗೀತೆಯ ಶ್ರೀ ಕೃಷ್ಣ ಹೇಳಿದಂತೆ ನಾವು ಸಂಶಯ ತಾಳದೆ ಪ್ರಶ್ನೆಮಾಡದೆ ನಮ್ಮ ಬುದ್ಧಿಯನ್ನು ಒತ್ತೆ ಇಟ್ಟು ಹೇಳಿದ್ದಕ್ಕೆಲ್ಲ ಹೂಂಗುಟ್ಟುವ ಹೌದಪ್ಪಗಾಳಗುವ ಮೂಲಕ, ಇವತ್ತು ನಮಗೆ ಬರುವ ಸಮಸ್ಯೆಗಳಿಗೆ ಕೃಷ್ಣನಂತೆ ಯಾರೋ ಬಂದು ನಮ್ಮ ಸಮಸ್ಯೆ ಪರಿಹರಿಸುತ್ತಾರೆ ಎಂದು ಕಾಯುತ್ತಾ ಕೂರಬೇಕೋ ಅಥವಾ ನಮ್ಮ ಬುದ್ಧಿಶಕ್ತಿ ತಾರ್ಕಿಕ ಶಕ್ತಿಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕೋ? ಗೀತೆ ಹೇಳುವುದು ಮೊದಲನೆಯದನ್ನೇ ಹೊರತು ಎರಡನೆಯದನ್ನಲ್ಲ. ಇಲ್ಲಿ ಬರುವ ಸಮರ್ಪಣೆ ಎಂಬುದು ದಾಸ್ಯದ ಮತ್ತೊಂದು ಹೆಸರಲ್ಲದೇ ಬೇರೇನೂ ಅಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಗೀತೆ ಮತ್ತು ವ್ಯಕ್ತಿಸ್ವಾತಂತ್ರ್ಯ

ಭಗವದ್ಗೀತೆಯು ಕರ್ಮಸಿದ್ಧಾಂತ ಪ್ರತಿಪಾದನೆಯ ಮೂಲಕ ವ್ಯಕ್ತಿಸ್ವಾತಂತ್ರ್ಯವನ್ನು ಬಲವಾಗಿ ನಿರಾಕರಿಸುತ್ತದೆಯಾದರೂ ಅದನ್ನು ಒಪ್ಪಿಕೊಳ್ಳದ ಅನೇಕ ವ್ಯಾಖ್ಯಾನಕಾರರು ಅದನ್ನು ಸುತ್ತಿಬಳಸಿ ಹೇಗೋ ನಿರಾಕರಿಸಲು ಪ್ರಯತ್ನಿಸಿದ್ದಾರೆ. ಕೆಲವರು ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನೂ ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದು.

ಭಾರತದ ಮಹತ್ವದ ತತ್ವಶಾಸ್ತçಜ್ಞರೆಂದು ಪರಿಗಣಿಸಲ್ಪಟ್ಟಿರುವ ದೇಶದ ರಾಷ್ಟ್ರಪತಿಗಳೂ ಆಗಿದ್ದ ಡಾ|| ಎಸ್. ರಾಧಾಕೃಷ್ಣನ್ ಅವರ ಅಭಿಪ್ರಾಯ ಇದು: "ಕರ್ಮಸಿದ್ಧಾಂತವು ಮಾನುಷ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಎಂಬುದಾಗಿ ಕೆಲವೊಮ್ಮೆ ವ್ಯಾಖ್ಯಾನಿಸಲಾಗಿದೆ. ಆದರೆ ಸರಿಯಾಗಿ ನೋಡಿದರೆ ಕರ್ಮಸಿದ್ಧಾಂತವು ಸ್ವಾತಂತ್ರ್ಯದ ನಿತ್ಯತೆಗೆ ವಿರುದ್ಧವಾಗಿಲ್ಲ." ಮುಂದುವರೆದು, "ಕರ್ಮಸಿದ್ಧಾಂತದಲ್ಲಿ ನಂಬಿಕೆಯಿದ್ದರೆ ಧಾರ್ಮಿಕ ಜೀವನ ಪ್ರಾರ್ಥನೆ ಮತ್ತು ಪೂಜೆ ಅಸಾಧ್ಯವಾಗುತ್ತವೆ ಎಂದು ಪ್ರತಿಪಾದಿಸುವ ಟೀಕಾಕಾರರಿಗೆ ಕರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ" ಎಂದು ಪ್ರತಿ ಟೀಕೆ ಮಾಡುವ ಅವರು ಹೇಳುತ್ತಾರೆ, "ನಮಗೆ ಬೇಕಾದ್ದನ್ನೆಲ್ಲ ಕೊಡುವ ಅಲ್ಲಾವುದ್ದೀನನ ಲಾಂದ್ರದಂತೆ ಪ್ರಾರ್ಥನೆ ಎಂದು ಹಿಂದುಗಳು ಭಾವಿಸುವುದಿಲ್ಲ.  ಸೂರ್ಯನು ಚಲಿಸದಂತೆ ನಿಲ್ಲಿಸುವ ಹಾಗೂ ಸಿಡಿದು ಹಾರಿಹೋಗುವ ಬಂದೂಕದ ಗುಂಡನ್ನು ತಡೆದು ನಿಲ್ಲಿಸುವ ಜಾದುಗಾರನಲ್ಲ ದೇವರು." 

ಹಾಗಾದರೆ ದೇವರ ಕೆಲಸವೇನು? ಅವನು ಒಬ್ಬ ಸಾಮಾನ್ಯ ಮನುಷ್ಯನಿಗೆ ಆಗುವಂಥದ್ದಷ್ಟೇ ಮಾಡುವುದಾದರೆ ಮನುಷ್ಯನಿಗೆ ಅವನ ಅಗತ್ಯವಾದರೂ ಏನು? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ನಮಗೆ ದೇವರು ಇರುವುದಾದರೆ ನಮ್ಮಿಂದ ಆಗದ ಕೆಲವು ಉತ್ತಮ ಕೆಲಸಗಳನ್ನು ಮಾಡಲು ಶಕ್ತಿ ಇರುವ ದೇವರು ಇರಲಿ ಎಂಬುದು ಕನ್ನಡದ ಖ್ಯಾತ ಲೇಖಕ . ಎನ್.  ಮೂರ್ತಿರಾಯರ ಇಚ್ಚೆ.  ಆದರೆ ಪ್ರಶ್ನೆಗಳನ್ನು ಚರ್ಚೆಗೆ ಎತ್ತಿಕೊಂಡರೆ ಚರ್ಚೆ ಬೇರೆ ಕಡೆಗೆ ಸಾಗುವುದರಿಂದ ರಾಧಾಕೃಷ್ಣನ್ ದೇವರ ಕೆಲಸವಲ್ಲ ಎಂದು ಹೇಳುವ ಜಾದೂಗಾರ ಮಾಡಬಹುದಾದ ಅನೇಕ ಕಾರ್ಯಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮಾಡುತ್ತಾನೆ ಎಂಬುದನ್ನು ಮಾತ್ರ ಹೇಳಿ ಗೀತೆಯಲ್ಲಿನ ವ್ಯಕ್ತಿಸ್ವಾತಂತ್ರ್ಯದ ಕಡೆ ಚರ್ಚೆಯನ್ನು ಬಾಗಿಸಿಕೊಳ್ಳೊಣ.

ರಾಧಾಕೃಷ್ಣನ್ ಅವರಂಥವರು ಗೀತೆಯಲ್ಲಿ ವ್ಯಕ್ತಿಸ್ವಾತಂತ್ರ್ಯದ ಪ್ರತಿಪಾದನೆ ಇದೆ ಎಂದು ಹೇಳುವುದಕ್ಕೆ ಆಧಾರವಾಗಬಹುದಾದ ಒಂದು ಶ್ಲೋಕ ಗೀತೆಯಲ್ಲಿ ಇದೆ. ಅದು ಗೀತೆಯ ಕೊನೆಯ ಅಂದರೆ ಹದಿನೆಂಟನೆಯ ಅಧ್ಯಾಯದ ಕೊನೆಯ ಭಾಗದಲ್ಲಿ ಬರುತ್ತದೆ. ಶ್ಲೋಕದಲ್ಲಿ ಅರ್ಜುನನಿಗೆ ಕೃಷ್ಣ, " ಪ್ರಕಾರ ಅತ್ಯಂತ ಗೂಢಕ್ಕಿಂತಲೂ ಗೂಢವಾದ ಜ್ಞಾನವನ್ನು ನಾನು ನಿನಗೆ ಹೇಳಿರುವೆನು. ಇದನ್ನು ಪೂರ್ಣ ವಿಮರ್ಶಿಸಿ ನಿನ್ನ ಮನಸ್ಸಿಗೆ ತೋಚಿದಂತೆ ಮಾಡು."  ಎಂದು ಹೇಳುತ್ತಾನೆ. ಶ್ಲೋಕವನ್ನೇ ಆಯುಧವನ್ನಾಗಿ ಮಾಡಿಕೊಂಡು ಗೀತೆಯ ಕೃಷ್ಣ ಅಷ್ಟೆಲ್ಲ ಬುದ್ಧಿ ಹೇಳಿದರೂ ಕೊನೆಗೆ `ನಿನಗೆ ತೋಚಿದಂತೆ ಮಾಡು' ಎಂದು ಅರ್ಜುನನಿಗೆ ಹೇಳುವ ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದಾನೆ. ಹೀಗಾಗಿ ಗೀತೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿವೆ ಎಂದು ವಾದಮಾಡುವವರು ಅನೇಕರು ನಮಗೆ ಸಿಗುತ್ತಾರೆ.  ಗೀತೆಯ ವ್ಯಕ್ತಿಸ್ವಾತಂತ್ರ್ಯ ಎಂಥದು ಎಂಬುದನ್ನು ಚರ್ಚಿಸುವ ಮೊದಲು ಗೀತೆಯನ್ನು ರೀತಿ ಹೊಗಳುವವರಿಗೆ ಉತ್ತರದಂತಿರುವ ರವೀಂದ್ರನಾಥ ಠಾಕೂರ್ ಅವರ ಒಂದು ವಿಶ್ಲೇಷಣೆಯನ್ನು ನೋಡೋಣ.

ರವೀಂದ್ರನಾಥ್ ಟ್ಯಾಗೋರ್ ಸಾಹಿತ್ಯವನ್ನು ಅಧ್ಯಯನ ಮಾಡಿದವರು ದಾಖಲಿಸುವಂತೆ ಅವರ ಅಪಾರವಾದ ಸಾಹಿತ್ಯ ರಾಶಿಯಲ್ಲಿ ಕೇವಲ ಒಂದೇ ಒಂದು ಕಡೆ ಅದೂ ಪ್ರಾಸಂಗಿಕವಾಗಿ ಮಾತ್ರ ಗೀತೆಯ ಪ್ರಸ್ತಾಪ ಬರುತ್ತದೆಯಂತೆ. ಗೀತೆಯನ್ನು ದೇಶದ ತುಂಬಾ ಹಾಡಿ ಹೊಗಳುವವರ ದಂಡೇ ಇರುವಾಗ ಭಾರತದ ಮಹತ್ವದ ಕವಿಗೆ ಭಗವದ್ಗೀತೆ ಒಂದು ಮುಖ್ಯ ಕೃತಿ ಅನಿಸಲೇ ಇಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅವರು ದಾಖಲಿಸುವ ಗೀತೆಯ ಅಂಶ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು ಘಟನೆಯ ವಿವರ ಹೀಗೆದೆ:

೧೯೩೨ ರಲ್ಲಿ ಒಂದು ಸಾರೆ ಅವರು ಪರ್ಶಿಯಾದ (ಈಗಿನ ಇರಾನ್) ದೊರೆಯ ಆಮಂತ್ರಣದ ಮೇರೆಗೆ ದೇಶಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸುತ್ತಾರೆ. ಆಗಲೇ ಅವರಿಗೆ ವಯಸ್ಸು ೭೦ ವರ್ಷ ದಾಟಿತ್ತು. ತಮ್ಮ ವಿಮಾನ ಪ್ರಯಾಣದ ವಿವರವನ್ನು ಅವರು ಹೀಗೆ ದಾಖಲಿಸಿದ್ದಾರಂತೆ: "ವಿಮಾನವು ಮೇಲೇರಿ ವೇಗವಾಗಿ ಹಾರತೊಡಗಿದಂತೆ, ಅನೇಕ ಪ್ರತ್ಯಕ್ಷ ಪ್ರಮಾಣಗಳಿಂದ ನನಗೆ ಚಿರಪರಿಚಿತವಾಗಿದ್ದ ಭೂಮಿಯು ತನ್ನ ವೈವಿಧ್ಯವನ್ನೂ ನಿಶ್ಚಿತತೆಯನ್ನೂ ಕಳೆದುಕೊಂಡು ತೆಳ್ಳಗಾಗತೊಡಗಿತು....... ಇಷ್ಟು ಎತ್ತರದಲ್ಲಿ ಹಾರುವ ವಿಮಾನದಿಂದ, ಒಬ್ಬ ಮನುಷ್ಯ ಶತಘ್ನಿಗಳನ್ನು (ಏಕ ಕಾಲಕ್ಕೆ ನೂರಾರು ಜನರನ್ನು ಕೊಲ್ಲಬಹುದಾದ ಬಾಂಬುಗಳು) ಕೆಳಗೆ ಸುರಿಸಬೇಕಾಗಿ ಬಂದರೆ, ಆತ ಯಾವ ಅನುಕಂಪನವೂ ಇಲ್ಲದೆ ನಿಷ್ಕರುಣೆಯಿಂದ ಕೃತ್ಯವನ್ನು ಮಾಡಬಹುದೆಂದು ನನಗೆ ಅನಿಸುತ್ತದೆ. ಏಕೆಂದರೆ ತಾನು ಮಾಡುತ್ತಿರುವ ವಿನಾಶದ ವಾಸ್ತವ ಪರಿಮಾಣ ಇಲ್ಲಿ ಅವನ ಕಣ್ಣುಗಳಿಂದ ಮರೆಯಾಗಿರುತ್ತದೆ ಅಥವಾ ಅದು ಬಹಳ ಮಸುಕಾಗಿರುತ್ತದೆ. ಆದ್ದರಿಂದ ಪಾತಕ ಕೃತ್ಯದ ಅಗಾಧತೆಯ ಅರಿವು ಅವನಿಗಾಗದೆ, ಅದನ್ನೆಸಗಲು ಆತ ಹಿಂದೆ ಮುಂದೆ ನೋಡಲಾರ; ಎತ್ತಿದ ಅವನ ಕೈ ನಡುಗಲಾರದು. ಮನುಷ್ಯನಿಗೆ ಸ್ವಾಭಾವಿಕ ಬಾಂಧವ್ಯವಿರುವ ವಾಸ್ತವತೆ ಮಸುಕಾದಾಗ, ಅವನ ಒಲವಿಗೆ ಪಾತ್ರವಾದದ್ದು ಅದೃಶ್ಯವಾಗುತ್ತದೆ. ಗೀತೆಯ ಸಿದ್ಧಾಂತಗಳು ಮತ್ತು ಬೋಧನೆಗಳು ರೀತಿಯ ಒಂದು `ವಿಮಾನ'. ಕೊಲ್ಲುವಾತ ಯಾರು, ಕೊಲ್ಲಲ್ಪಡುವಾತ ಯಾರು, ತನ್ನ ಬಂಧು ಯಾರು, ವೈರಿ ಯಾರು, ಎಂಬುದನ್ನು ಕಾಣಲು ಸಾಧ್ಯವಿಲ್ಲದಷ್ಟು ಎತ್ತರಕ್ಕೆ ಕರುಣಾರ್ದ್ರವಾಗಿದ್ದ ಅರ್ಜುನನ ಮನಸ್ಸು ಕೊಂಡೊಯ್ಯಲ್ಪಟ್ಟಿತು.  ಸಾಮಾಜಿಕ ಮತ್ತು ಧಾರ್ಮಿಕ ತತ್ವಗಳ ವಿಸ್ತರಣಾಕಾಂಕ್ಷೆಯಿಂದ ಪ್ರೇರಿತವಾದ ಆಕ್ರಮಣಕಾರಿ ಧೋರಣೆಗಳ ವಾಸ್ತವತೆಯನ್ನು ಮರೆಮಾಚುವ ಸಿದ್ಧಾಂತಗಳಿಂದ ತಯಾರಿಸಲ್ಪಟ್ಟಿರುವ ಇಂಥ ಅನೇಕ `ವಿಮಾನಗಳು' ಮಾನವನ ಶಸ್ತ್ರಾಗಾರದಲ್ಲಿವೆ, ಅಲ್ಲಿಂದ ತನ್ನ ಮೇಲೆ ವಿನಾಶ ಎರಗಿದಾಗ, " ಹನ್ಯತೇ ಹನ್ಯಮಾನೇ ಶರೀರೇ" (ಶರೀರವು ನಾಶವಾದರೂ ಆತ್ಮವು ನಾಶವಾಗುವುದಿಲ್ಲ) ಎಂಬುದೊಂದೇ ಮನುಷ್ಯನಿಗೆ ದೊರೆಯುವ ಸಮಾಧಾನ."

ಟ್ಯಾಗೋರ್ ಮೇಲಿನ ಟಿಪ್ಪಣಿ ಭಗವದ್ಗೀತೆಯ ಬೋಧನೆಗಳು ನಮಗೆ ಎಷ್ಟು ಅಪ್ರಯೋಜಕ ಎಂಬುದನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ ಅವು ಹೇಗೆ ಅಪಾಯಕಾರಿ ಎಂಬುದನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ. ಈಗ ಭಗವದ್ಗೀತೆಯಲ್ಲಿ ಅರ್ಜುನನಿಗೆ `ನಿನಗೆ ತಿಳಿದಂತೆ ಮಾಡು' ಎಂಬ ಸ್ವಾತಂತ್ರ್ಯವನ್ನು ಕೃಷ್ಣ ಯಾವಾಗ ಕೊಡುತ್ತಾನೆ ಎಂಬುದನ್ನು ನೋಡೋಣ. ಶ್ಲೋಕ ಬರುವುದು ಗೀತೆಯ ಕೊನೆಯ ಅಧ್ಯಾಯದಲ್ಲಿ. ಶ್ಲೋಕ ಮುಗಿದ ಮೇಲೆ ಅವರ ಸಂಭಾಷಣೆಗೆ ಸಂಬಂಧಿಸಿದಂತೆ ಕೇವಲ ಎಂಟು ಶ್ಲೋಕಗಳಿವೆ. ರೀತಿ ಕೃಷ್ಣ ಸ್ವಾತಂತ್ರ್ಯ ಕೊಡುವುದು ಅರ್ಜುನ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳಲು ಬೇಕಾದ ಮಾನಸಿಕ ಸ್ವಾಸ್ಥ್ಯವನ್ನು ಈಗಾಗಲೇ ಕಳೆದುಕೊಂಡಿದ್ದಾನೆ ಎಂಬುದು ಅವನಿಗೆ ಖಾತರಿಯಾದ ಮೇಲೆಯೇ! ಅದುವರೆಗೂ ಕೃಷ್ಣ ಅರ್ಜುನನಿಗೆ ಅಗಾಧ ಪ್ರಮಾಣದ ತತ್ವಬೋಧನೆ ಮಾಡಿ ಅವನ ಮೆದುಳು ತೊಳೆದಿರುತ್ತಾನೆ. ಅರ್ಜುನ ಅಗಾಧವಾದ ತತ್ವಬೋಧನೆಯಿಂದ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡಿರುತ್ತಾನೆ. ಅವನ ಮಾನಸಿಕ ಸ್ಥಿತಿಯನ್ನು `ಸ್ಥಿತಪ್ರಜ್ಞ ಸ್ಥಿತಿ' ಎನ್ನಿ. ಅಥವಾ `ಬುದ್ಧಿಬ್ರಮಣ ಸ್ಥಿತಿ' ಎನ್ನಿ ಅಥವಾ `ಹುಚ್ಚುತನ' ಎನ್ನಿ. ಒಟ್ಟಿನಲ್ಲಿ ಒಂದು ಅಸ್ವಾಭಾವಿಕ ಮಾನಸಿಕ ಸ್ಥಿತಿ ಎನ್ನುವುದಂತೂ ಸತ್ಯ.

ಹೀಗೆ ಮನುಷ್ಯನಿಗೆ ಮಾನಸಿಕ ಸ್ವಾಸ್ಥ್ಯವಿಲ್ಲದಾಗ ಸ್ವಾತಂತ್ರ್ಯ ಕೊಟ್ಟರೆ ಅದನ್ನು ತೆಗೆದುಕೊಂಡವನು ಅದರಿಂದ ಮಾಡುವ ಕೆಲಸ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗಿರುವ ಸಂಭವ ಹೆಚ್ಚಲ್ಲವೆ? ಇಲ್ಲಿ ಆಗುವುದೂ ಅದೇ. ಠಾಕೂರರು ಸೂಕ್ಷ್ಮವಾಗಿ ಗುರುತಿಸಿದಂತೆ ಕೃಷ್ಣ ಸ್ವಾತಂತ್ರ್ಯ ನೀಡಿದ್ದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ. ಅಷ್ಟೇ ಏಕೆ ಸ್ವಾತಂತವನ್ನು ಕೊಟ್ಟು ಅವನು ಆಗಲೂ ಸುಮ್ಮನಿರುವುದಿಲ್ಲ. ಮತ್ತೆ ಕೊಟ್ಟ ಸ್ವಾತಂತ್ರ್ಯವನ್ನು ನಯವಾಗಿ ವಾಪಸ್ಸು ಪಡೆದು, "ಮಿಕ್ಕೆಲ್ಲ ಧರ್ಮಗಳನ್ನೂ ಬಿಟ್ಟು ನನಗೊಬ್ಬನಿಗೆ ಶರಣಾಗು" ಎಂದು ಹೇಳುತ್ತಾನೆ. ಬಗ್ಗೆ ವಿಶ್ಲೇಷಣೆ ಮಾಡುವ ಭೂದಾನ ಚಳುವಳಿಯ ನೇತಾರ ವಿನೋಬಾ ಭಾವೆ, " ಸ್ವಾತಂತ್ರ್ಯದ ಇಚ್ಚೆಯೇ ಅರ್ಜುನನಿಗೆ ಬರದಿರಲಿ. ಅವನ ಸ್ವಂತ ಇಚ್ಚೆಯನ್ನು ನಡೆಯಗೊಡದೇ ತನ್ನ ಇಚ್ಚೆಯಂತೆಯೇ ಅವನು ನಡೆಯುವಂತಾಗಲಿ ಎಂಬುದು ಕೃಷ್ಣನ ಉದ್ದೇಶ" ಎಂದು ಬಹಳ ಮೆಚ್ಚುಗೆಯಿಂದ (ದುಃಖದಿಂದ ಹೇಳಬೇಕಾದ ಸಂಗತಿಯನ್ನು) ಹೇಳುತ್ತಾರೆ.

ಗೀತೆಯಲ್ಲಿ ಕೃಷ್ಣ ಅರ್ಜುನ ಸಂಭಾಷಣೆಯ ಕೊನೆಯ ಶ್ಲೋಕದಲ್ಲಿ ಕೃಷ್ಣ ಅರ್ಜುನಿಗೆ, "ಗೀತೆಯನ್ನು ಏಕಾಗ್ರಚಿತ್ತದಿಂದ ಕೇಳಿರುವಿಯಷ್ಟೆ. ನಿನ್ನ ಅಜ್ಞಾನರೂಪ ಮೋಹವು ನಷ್ಟವಾಯಿತೆ?" ಎಂದು ಒಂದು `ಖಾತ್ರಿ ಪ್ರಶ್ನೆ' (ಕನ್ಪರ್ಮೇಶನ್ ಕೊಶ್ಚನ್) ಕೇಳುತ್ತಾನೆ. ಅದಕ್ಕೆ ಅರ್ಜುನ, "ನನ್ನ ಮೋಹವಳಿಯಿತು. ನಿನ್ನ ಪ್ರಸಾದದಿಂದ ನನ್ನ ಕರ್ತವ್ಯದ ಎಚ್ಚರವು ನನಗೆ ಹುಟ್ಟಿತು.  ನನ್ನ ಸಂಶಯಗಳ ಪರಿಹಾರವಾಯಿತು. ನಿನ್ನ ಆಜ್ಞೆಯಂತೆ ಮಾಡುವೆ" ಎಂದು `ಮಾಹಿತಿ ಉತ್ತರ'ವನ್ನೇ ಕೊಡುತ್ತಾನೆ. ಸ್ಥಿತಿಗೆ ಅವನು ಬಂದದ್ದನ್ನು ಖಾತ್ರಿಪಡಿಸಿಕೊಂಡೇ ಕೃಷ್ಣ ತನ್ನ ಬೋಧನೆ ನಿಲ್ಲಿಸುತ್ತಾನೆ. ಅಲ್ಲಿಗೆ `ಬೋಧೆ' ನಿಲ್ಲುತ್ತದೆ. `ವಧೆ' ಆರಂಭವಾಗುತ್ತದೆ.  ಹೀಗಾಗಿ ಗೀತೆಯಲ್ಲಿ ಪ್ರಜಾಸತ್ತಾತ್ಮಕ ನಿಲುವುಗಳನ್ನು ಹುಡುಕುವುದು ಹಾಲಿನಲ್ಲಿ ಮೀನನ್ನು ಹುಡುಕಿದಂತೆ ನಿರರ್ಥಕ ಪ್ರಯತ್ನವೇ ಅಲ್ಲದೇ ಬೇರೇನೂ ಅಲ್ಲ.

ಸಂವಿಧಾನ ಮತ್ತು ಭಗವದ್ಗೀತೆ

ಯಾವೊಂದು ಗ್ರಂಥವೂ ಸರ್ವಶ್ರೇಷ್ಠ ಪೂಜ್ಯ ಗ್ರಂಥವಾಗಬಾರದು ಎಂಬುದು ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶದಲ್ಲಿ ನೀಡುವ ಕರೆ. ಭಗವದ್ಗೀತೆಯಂತಹ ಒಂದು ಧಾರ್ಮಿಕ ಗ್ರಂಥದ ಬಗ್ಗೆ ಗೌರವ ಇಟ್ಟುಕೊಳ್ಳುವುದು ಬಿಡುವುದು ನಮ್ಮ ವೈಯಕ್ತಿಕ ವಿಷಯ. ಅದನ್ನು ಪ್ರಶ್ನಿಸಲಾಗದು. ಆದರೆ ಸಂವಿಧಾನವನ್ನು ಒಪ್ಪಿಕೊಳ್ಳುವುದು ಭಾರತದ ಪ್ರಜೆಯಾಗಿ ನಮಗೆ ಕಡ್ಡಾಯ. ನೈತಿಕವಾಗಿ ಹೇಳುವುದಾದರೆ ಏಕಕಾಲಕ್ಕೆ ನಾವು ಗೀತೆಯ ಆರಾಧಕರೂ ಸಂವಿಧಾನದ ಆಜ್ಞಾಧಾರಕರೂ ಆಗಿ ಇರಲು ಸಾಧ್ಯವಿಲ್ಲಆದಾಗ್ಯೂ ಖಾಸಗೀ ಬದುಕಿನಲ್ಲಿ ಭಗವದ್ಗೀತೆಯ ಬಗ್ಗೆ ತಮ್ಮ ಗೌರವ ಇಟ್ಟುಕೊಂಡು ಸಾರ್ವಜನಿಕ ಬದುಕಿನಲ್ಲಿ ಸಂವಿಧಾನಕ್ಕೆ ವಿಧೇಯರಾಗಿ ಒಂದು ಬದುಕುವ ಅವಕಾಶವನ್ನು ನಾವೇ ರಚಿಸಿಕೊಂಡ ಸಂವಿಧಾನ ನಮಗೆ ನೀಡಿದೆ. ಭಗವದ್ಗಿತೆಯನ್ನು ಗೌರವಿಸುವವರು ಮತ್ತು ವಿರೋಧಿಸುವವರು ಇಬ್ಬರೂ ದೇಶದಲ್ಲಿ ಒಂದು ಸಹನೆಯ ಬಾಳನ್ನು ಬದುಕಬಹುದು. ಯಾರೂ ದೇಶಬಿಟ್ಟು ಹೋಗಬೇಕಾಗಿಲ್ಲ. ಹಾಗೆ ಒಂದು ವೇಳೆ ಇವರಿಬ್ಬರಲ್ಲಿ ಒಬ್ಬರು ದೇಶ ತೊರೆಯಲೇಬೇಕು ಎಂಬ ಆಯ್ಕೆ ಅನಿವಾರ್ಯವಾದರೆ ದೇಶತೊರೆಯಬೇಕಾದವರು ಯಾರು? ಸಂವಿಧಾನ ಒಪ್ಪಿಕೊಂಡವರೋ ಅಥವಾ ಸಂವಿಧಾನದ ಬಹಳಷ್ಟು ಆಶಯಗಳನ್ನು ಬುಡಮೇಲು ಮಾಡಬಲ್ಲ ಅನೇಕ ಅಪಾಯಕಾರಿ ಅಂಶಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿರುವ ಗೀತೆಯ ಆರೋಧಕರೋ ?

ಹೀಗೆ ಕೊಲೆಯಂಥ ಈ ಕಾಲಘಟ್ಟದ ಗಂಭೀರ ಅಪರಾಧ ಕೃತ್ಯಕ್ಕೆ ಹುರುದುಂಬಿಸುವ ಗೀತೆಯೂ ಸೇರಿದಂತೆ ಯಾವುದೇ ಧರ್ಮಗ್ರಂಥಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಬೋಧಿಸಹೋಗುವುದು ಸರಿಯಾದ ಕ್ರಮವೇ ಅಲ್ಲ. ಅಷ್ಟಕ್ಕೂ ಯಾವುದೇ ಧರ್ಮಗ್ರಂಥಗಳನ್ನು ಓದಲು ನಮ್ಮ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಇದ್ದೇ ಇದೆ.  ವಿಶ್ವವಿದ್ಯಾಲಯದ ಇಂತಹ ಕ್ರಮಗಳಿಂದ ಅವರ ವ್ಯಕ್ತಿತ್ವ ಕುಬ್ಜಗೊಳ್ಳುವುದು ಒಂದು ಸಮಸ್ಯೆಯಾದರೆ ಇದರ ಜೊತೆಗೆ ಇತರ ಧರ್ಮೀಯರೂ ತಮ್ಮ ತಮ್ಮ ಧರ್ಮಗ್ರಂಥಗಳಲ್ಲಿಯೂ ಒಳ್ಳೆಯ ವಿಚಾರಗಳಿವೆ ಎಂದೂ ಅವುಗಳ ಬಗ್ಗೆ ವಿಚಾರ ಸಂಕಿರಣವನ್ನು ಮಾಡೋಣ ಎಂದು ವಿವಿಗೆ ಮನವಿ ಸಲ್ಲಿಸಿದರೆ ಸಮಸ್ಯೆ ಬೇರೆಯದೇ ಆದ ದಿಕ್ಕು ಹಿಡಿಯಬಹುದು. ಹಾಗಾಗಿ ವಿಶ್ವವಿದ್ಯಾಲಯ ಇಂತಹ ಕ್ರಮಕ್ಕೆ ಮುಂದಾಗದಿರುವುದು ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮಾತ್ರವಲ್ಲ ಇಡೀ ವಿಶ್ವವಿದ್ಯಾಲಯದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.  

*****

17-11-2025