Saturday, May 2, 2026

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ

 

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ


ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವರ್ಷ ಎಲ್ಲಿಲ್ಲದ ಅಡ್ಡಿ ಆತಂಕಗಳು ಎದುರಾಗಿವೆ. ನಿರ್ವಿಘ್ನವಾಗಿಯಲ್ಲದಿದ್ದರೂ ಸವಿಘ್ನವಾಗಿಯಾದರೂ `ಒಟ್ಟಿನಲ್ಲಿ ನಡೆಯಿತುಎಂಬಂತೆ ಉತ್ಸವವನ್ನು ನೆಡೆಸಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕೆಂದಿರುವ ಗುಲ್ಬರ್ಗ ಜಿಲ್ಲಾಡಳಿತದ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಲಿಕ್ಕೆ ನಾವೆಲ್ಲ ಇನ್ನೊಂದು ವಾರವಾದರೂ ಕಾಯಬೇಕಾಗಿದೆ. ಅಡ್ಡಪಲ್ಲಕ್ಕಿ ಉತ್ಸವದ ಪರ-ವಿರೋಧ ನಡೆದ ಮತ್ತು ನಡೆಯುತ್ತಿರುವ ಚರ್ಚೆ ಮತ್ತು ವಾಗ್ವಾದಗಳು, ಪ್ರತಿರೋಧ ಹಾಗೂ ಪ್ರತಿಭಟನೆಗಳು ನಮ್ಮ ಸಂವಿಧಾನ ಹಾಗೂ ನಮ್ಮ ಭಾವನೆಗಳ ಹೊಂದಾಣಿಕೆ ಕುರಿತು ನಾವು ಮತ್ತೊಮ್ಮೆ ಚಿಂತಿಸುವಂತೆ ಮಾಡಿವೆ.

ಜೇವರ್ಗಿಯಲ್ಲಿ ಅಕ್ಟೋಬರ್ ರಿಂದ ೧೪ರವರೆಗೆ ನಡೆಸಲು ಉದ್ದೇಶಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವರ್ಷ ವಿವಾದಕ್ಕೆ ಸಿಲುಕಲು ಕಾರಣ ಅದೇ ಅವಧಿಯಲ್ಲಿ ಅಲ್ಲಿನ ಕೆಲವು ಸಂಘಟನೆಗಳು ಮತ್ತು ಸ್ವಾಮೀಜಿಗಳು ಸೇರಿ `ನಿಜಶರಣರ ಜೀವನದರ್ಶನ ಪ್ರವಚನಎಂಬ ಕಾರ್ಯಕ್ರಮವನ್ನು ಸಂಘಟಿಸಿರುವುದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವ ವೇಳೆ ಸಮ್ಮೇಳನದ ಅಧ್ಯಕ್ಷರು ಸೆಕ್ಯುಲರ್ ಅಲ್ಲವೆಂದೋ ಆಯ್ಕೆಮಾಡಿಕೊಂಡ ಸ್ಥಳ ಸೆಕ್ಯೂಲರ್ ಅಲ್ಲ ಎಂದೋ ಮತ್ತೆ ಇನ್ನಾವುದೋ ಕಾರಣಕ್ಕೋ ಅದೇ ಸಮಯದಲ್ಲಿ ಕೆಲವು ವೇಳೆ ಅದೇ ಸ್ಥಳದಲ್ಲಿ ನಡೆಯುವ ಪರ್ಯಾಯ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಇದು ಒಂದು ರೀತಿಯ ಪರ್ಯಾಯ ಧಾರ್ಮಿಕ ಸಮ್ಮೇಳನ ಅನ್ನಬಹುದು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದವರೇ ಎದುರುಬದುರು ಆದಂತೆ ಇಲ್ಲಿ ಧಾರ್ಮಿಕ ಕ್ಷೇತ್ರದವರೆ ಎದುರು ಬದುರು ಆಗಿರುವುದು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬೇಕು.

ಮನುಷ್ಯರೇ ಆದ ಸ್ವಾಮಿಗಳನ್ನು ದೇವರಂತೆ ಹೊತ್ತು ಒಯ್ಯುವ (ದೇವರನ್ನು ಉದ್ದಪಲ್ಲಕ್ಕಿಯಲ್ಲಿ ಒಯ್ಯುತ್ತಾರಾದರೂ) ಅಡ್ಡಪಲ್ಲಕ್ಕಿ ಉತ್ಸವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಆದ್ದರಿಂದ ಸರ್ಕಾರ ಅದನ್ನು ನಿಷೇಧಿಸಬೇಕುಎಂಬುದು ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧಿಸುವ ಗುಂಪಿನ ಪ್ರಮುಖ ವಾದವಾದರೆ, “ ಉತ್ಸವ ಪರಂಪರಾಗತವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಆಚರಣೆ, ಅದಕ್ಕೆ ಅಡ್ಡಿಪಡಿಸುವುದು ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಮೂಲಕ ಸಂವಿಧಾನ ವಿರೋಧಿಯಾಗುತ್ತದೆಎಂಬುದು ಉತ್ಸವವನ್ನು ಬೆಂಬಲಿಸುವ ಗುಂಪಿನ ವಾದವಾಗಿದೆ.

ಸಂವಿಧಾನದ ಪ್ರಕಾರ ಯಾವುದು ಸರಿ ಯಾವುದು ತಪ್ಪು ಎಂಬುದು ನಿರ್ಣಯವಾಗಬೇಕಾದದ್ದು ನ್ಯಾಯಾಲಯದಲ್ಲಿ. ಅದನ್ನು ನಿರ್ಧಿಷ್ಟವಾಗಿ ಸ್ಪಷ್ಟಪಡಿಸಿಕೊಳ್ಳುವುದು ತುರ್ತಾಗಿ ಸಾಧ್ಯವಿಲ್ಲವಾದ್ದರಿಂದ ಎರಡೂ ಗುಂಪುಗಳ ನಡುವೆ ಶಾಂತಿ ಸಂಧಾನ ನಡೆಸಿ ಕೆಲವು ಷರತ್ತುಗಳನ್ನು ವಿಧಿಸಿ ಗುಲ್ಬರ್ಗ ಜಿಲ್ಲಾಧಿಕಾರಿಗಳು ಅಡ್ಡಪಲ್ಲಕ್ಕಿ ಉತ್ಸವವನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಅವರು ವಿಧಿಸಿರುವ ಪ್ರಮುಖ ಷರತ್ತುಗಳು ಹೀಗಿವೆ:

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಕೇವಲ ಎರಡು ನೂರು ಮೀಟರ್ವರೆಗೆ ಮಾತ್ರ ಸಾಂಕೇತಿಕವಾಗಿ ನಡೆಯಬೇಕು. ಉತ್ಸವದಲ್ಲಿ ಗಾಂಧೀಜಿ, ಬಸವಣ್ಣ, ಮಾದಾರ ಚೆನ್ನಯ್ಯ ಮುಂತಾದ ವೇಷಧಾರಿಗಳಿಂದ `ನಜರ್ಸ್ವೀಕರಿಸುವ (ನಮಸ್ಕಾರ ಮಾಡುವುದು) ಸಂಪ್ರದಾಯ ಕೈಬಿಡಬೇಕು. ಬಸವತತ್ವ ಅನುಯಾಯಿಗಳು (ಅಂದರೆ ಅಡ್ಡಪಲ್ಲಕ್ಕಿ ವಿರೋಧಿ ಗುಂಪು) ಸಂಜೆ .೦೦ ರಿಂದ .೩೦ ರವರೆಗೆ ಪ್ರವಚನ ನೀಡಬೇಕು. ಸಂಜೆ .೩೦ ರಿಂದ ೧೦.೩೦ ರವರೆಗೆ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಬೇಕು. ಷರತ್ತುಗಳ ಜೊತೆಗೆ ಕೊನೆಯಲ್ಲಿ ಎರಡೂ ಗುಂಪಿನವರಿಗೆ ಅನ್ವಯಿಸುವಂತೆ ಯಾರೂ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂಬುದು ಸಹಜವಾಗಿ ನೀಡಲಾಗಿರುವ ಎಚ್ಚರಿಕೆ ಇದೆ.

ಮುಖ್ಯವಾಗಿ ಇಲ್ಲಿ ನಡೆಯುತ್ತಿರುವ ಸಂಘರ್ಷ ಶೈವ-ವೀರಶೈವ-ಲಿಂಗಾಯತ ಮುಂತಾಗಿ ಕರೆಯಲಾಗುತ್ತಿರುವ, ಇವುಗಳ ಮಧ್ಯೆ ಒಂದಿಷ್ಟು ಭಿನ್ನತೆಗಳಿದ್ದಾಗ್ಯೂ ಸರ್ಕಾರಿ ಲೆಕ್ಕದಲ್ಲಿ ಒಂದೇ ಜಾತಿಯಾಗಿ ಗುರುತಿಸಲಾಗುತ್ತಿರುವ ಧರ್ಮದ ಸ್ಥಾಪಕರ ಕುರಿತಾದದ್ದು. ಒಂದು ವಾದದ ಪ್ರಕಾರ ವೀರಶೈವ ಧರ್ಮ ರಂಭಾಪುರಿ ಸೇರಿದಂತೆ ಐದು ಪೀಠಗಳಿಂದ ಪ್ರಾರಂಭವಾಯಿತು. ಪೀಠಗಳನ್ನು ಪಂಚಪೀಠಗಳೆಂದೂ ಇವುಗಳನ್ನು ಪ್ರತಿನಿಧಿಸುವ ಸ್ವಾಮಿಗಳನ್ನು ಪಂಚಪೀಠಾಧೀಶ್ವರರೆಂದು ಕರೆಯಲಾಗುತ್ತಿದೆ. ಇವರ ಮಠಗಳಿಗೆ ನಡೆದುಕೊಳ್ಳುವ ವೀರಶೈವ ಧರ್ಮದ ಭಕ್ತರನ್ನು `ಪಂಚಮಸಾಲಿಗಳುಎಂದು ಸಾಮಾನ್ಯವಾಗಿ ಎಂದು ಗುರುತಿಸಲಾಗುತ್ತದೆ. ಇವರ ಪ್ರಕಾರ ಬಸವಣ್ಣ ಧರ್ಮದ ಸ್ಥಾಪಕ ಅಲ್ಲ. ಆತ ಒಂದಿಷ್ಟು ಸುಧಾರಣೆ ಮಾಡಿದ ವ್ಯಕ್ತಿಮಾತ್ರ.

ಆದರೆ ಬಸವತತ್ವ ಪ್ರತಿಪಾದಕರ ಪ್ರಕಾರ ಬಸವಣ್ಣನೇ ಲಿಂಗಾಯತ -ವೀರಶೈವ ಧರ್ಮದ ಸ್ಥಾಪಕನೇ ಹೊರತು ಪಂಚಪೀಠಾಧೀಶ್ವರರಲ್ಲ. ಹಿಂದೂ ಧರ್ಮದಿಂದ ಸಿಡಿದೆದ್ದ ವಿಚಾರಧಾರೆಗಳು ಹೇಗೆ ಸ್ವತಂತ್ರವಾಗಿ ಜೈನ, ಬೌದ್ಧ ಧರ್ಮಗಳಾದವೋ ಹಾಗೆಯೇ ಧರ್ಮ ಕೂಡ ಒಂದು ಸ್ವತಂತ್ರ ಅಸ್ತಿತ್ವ ಉಳ್ಳದ್ದೇ ಹೊರತು ಹಿಂದೂ ಧರ್ಮದ ಉಪಪಂಗಡವಲ್ಲ ಎಂದುದು ಇವರ ವಾದ. ವಚನಸಾಹಿತ್ಯವನ್ನು ಧರ್ಮಗ್ರಂಥವೆಂದು ನಂಬುವ, ಇಷ್ಟಲಿಂಗವನ್ನು ಪೂಜಿಸುವ ಸ್ಥಾವರಕ್ಕಿಂತ ಜಂಗಮಕ್ಕೆ ಆದ್ಯತೆ ನೀಡುವ ಲಿಂಗಾಯತ-ವೀರಶೈವ ಧರ್ಮದ ಭಕ್ತರನ್ನು ಸಾಮಾನ್ಯವಾಗಿ `ಸಾದರುಎಂದು ಗುರುತಿಸಲಾಗುತ್ತದೆ.

ವೀರಶೈವ ಮತ್ತು ಲಿಂಗಾಯತ ಧರ್ಮಗಳು ಬೇರೆ ಬೇರೆ ಎನ್ನುವಾಗ ಸಮಸ್ಯೆ ಇಲ್ಲ. ಪಂಚಪೀಠಾಧೀಶ್ವರರು ವೀರಶೈವ ಧರ್ಮದ ಸ್ಥಾಪಕರು, ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂಬ ಸರಳ ಸೂತ್ರದಿಂದ ಇದನ್ನು ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಲೆಕ್ಕದಲ್ಲಿ ಶೈವ-ವೀರಶೈವ-ಲಿಂಗಾಯತ ಎಲ್ಲವೂ ಸೇರಿ ಒಂದು ಜಾತಿಯಾಗಿ ಪರಿಗಣಿತವಾಗಿರುವುದರಿಂದ ಮತ್ತು ಜಾತಿಗೆ ಧಾರ್ಮಿಕ ಆಚರಣೆಗಳ ಜೊತೆಗೆ ರಾಜಕೀಯ ಸಾಮಾಜಿಕ ಆಯಾಮಗಳೂ ಇರುವುದರಿಂದ ಸಮಸ್ಯೆ ಹೆಚ್ಚು ಬಿಗಡಾಯಿಸಿದೆ. ಮಧ್ಯೆ ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಪರಿಗಣಿಸಬೇಕು ಎನ್ನುವ ಮತ್ತು ಅದಕ್ಕೆ ವಿರುದ್ಧವಾಗಿ ಇವರೆಲ್ಲರನ್ನೂ ಒಂದೇ ಎಂದು ಪರಿಗಣಿಸಬೇಕು ಎಂಬ ಒತ್ತಡಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ನಡೆಯುತ್ತಲೇ ಇವೆ. ಇದು ಕೇವಲ ಒಂದು ಧರ್ಮದ ಅನುಯಾಯಿಗಳ ನಡುವಿನ ತಿಕ್ಕಾಟವಾಗಿದ್ದರೆ ಇದನ್ನು ಇಲ್ಲಿ ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ಅದಕ್ಕೆ ಅದರಾಚೆಗೂ ಸಾಮಾಜಿಕ ಮಹತ್ವವಿರುವುದರಿಂದ ಚರ್ಚೆ ಅವಶ್ಯವಾಗಿದೆ.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಬಂಧ ಗುಲ್ಬರ್ಗ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಸೂಕ್ಷ್ಮವಾಗಿ ನೋಡಿದರೆ ಷರತ್ತುಗಳು ಬಹುವಾಗಿ ಅಡ್ಡಪಲ್ಲಕ್ಕಿ ಪರವಾದ ಗುಂಪಿಗೇ ವಿಧಿಸಿರುವ ಷರತ್ತುಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ರಂಭಾಪುರಿ ಶ್ರೀಗಳು ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾಡಬಾರದು ಎಂಬುದನ್ನೇ ಒತ್ತುಕೊಟ್ಟು ಹೇಳಲಾಗಿದೆನಮ್ಮದು ಇತ್ತ ಸಂಪೂರ್ಣ ಧಾರ್ಮಿಕವೂ ಅಲ್ಲದ ಅತ್ತ ಸಂಪೂರ್ಣ ಸೆಕ್ಯುಲರ್ ಕೂಡ ಅಲ್ಲದ ಆದರೆ ಎರಡೂ ಅಂಶಗಳನ್ನು ಒಳಗೊಂಡ ಸಂಕೀರ್ಣ ಸಮಾಜೋರಾಜಕೀಯ ವ್ಯವಸ್ಥೆ. ಹಾಗಾಗಿ ನಮ್ಮ ಧಾರ್ಮಿಕ ಭಾವನೆಗಳು ಮತ್ತು ನಮ್ಮ ಸಂವಿಧಾನದ ಆಶಯಗಳ ನಡುವೆ ಘರ್ಷಣೆ ಆಗಾಗ ಇಲ್ಲಿ ಸಾಮಾನ್ಯ.

ಭಾರತ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಬಹುಶಃ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಷ್ಟು ಬೇರೆ ಯಾವುದೇ ಹಕ್ಕನ್ನು ನಾವು ದುರುಪಯೋಗ ಪಡಿಸಿಕೊಂಡಿಲ್ಲವೇನೋ. ಅನೇಕ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಹಕ್ಕಿನ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ಸಮರ್ಥಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸ್ವಾಮಿಗಳು ಕೊಡುವ ಒಂದು ಸಾಮಾನ್ಯ ಉತ್ತರ ಎಂದರೆಇದು ಭಕ್ತರ ಇಚ್ಚೆಯ ಮೇರೆಗೆ ನಡೆಯುತ್ತಿದೆ; ನನಗಾಗಿ ಅಲ್ಲಎಂಬುದು. ಹುಬ್ಬಳ್ಳಿಯಿಂದ ವರದಿಯಾದಂತೆ ಉತ್ಸವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಇದನ್ನೇ ಹೇಳಿದ್ದಾರೆ: “ದಸರಾ ದರ್ಬಾರ್ ವೀರಶೈವ ಭಕ್ತರ ಒತ್ತಾಸೆಯಿಂದ ನಡೆಯುತ್ತಿದೆಯೇ ಹೊರತು ನನ್ನ ಒತ್ತಾಸೆಯಿಂದಲ್ಲ ಹಿಂದೆ ನಡೆಯದ ಹೋರಾಟಗಳು ಈಗ ಏಕೆ?”

ಕೇವಲ ಹಿಂದಿನಿಂದ ನಡೆದು ಬಂದಿದೆ ಎಂಬ ಒಂದೇ ಕಾರಣಕ್ಕೆ ನಾವು ಯಾವುದನ್ನೂ ಒಪ್ಪಿಕೊಳ್ಳಬೇಕಾಗಿಲ್ಲ. ಯಾವುದೇ ಒಂದು ಧರ್ಮ ಅದು ಕಾಲಕ್ಕೆ ತಕ್ಕಂತೆ ತನ್ನೊಳಗೆ ಸುಧಾರಣೆ ತಂದುಕೊಳ್ಳದೇ ಹೋದರೆ ಅವನತಿಯ ಹಾದಿ ಹಿಡಿಯುತ್ತದೆ. ನಿಂತನೀರು ಗಂಗಾಜಲವೇ ಆದರೂ ಕೆಲದಿನಗಳ ನಂತರ ಕುಡಿಯಲು ಯೋಗ್ಯವಾಗದೇ ಹೋಗುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು ನಿಜ. ಆದರೆ ಬುದ್ಧಿಯನ್ನು ಒತ್ತೆಯಿಟ್ಟು ಭಾವನೆಗಳನ್ನು ಗೌರವಿಸುವ ಅವಿವೇಕಕ್ಕೆ ನಾವು ಹೋಗುವ ಅವಶ್ಯಕತೆಯಿಲ್ಲ. ಏಕೆಂದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ನೆಪವೊಡ್ಡಿ ನಾವು ನಮ್ಮ ವೈದಿಕ ಮಠಗಳಲ್ಲಿ ನಡೆಯುವ ಪಂಕ್ತಿಭೇದವನ್ನೂ ಅಷ್ಟೇ ಏಕೆ ಕುಕ್ಕೆ ಸುಬ್ರಹ್ಮಣ್ಯದ ಎಂಜಲೆಲೆ ಮೇಲಿನ ಹೊರಳಾಟದ ಮಡೆಸ್ನಾನವನ್ನೂ ಸಮರ್ಥಿಸಬಹುದಾದ ಅಪಾಯವಿದೆ.

ರಂಭಾಪುರಿ ಶ್ರೀಗಳ ಆಚರಣೆ ಪ್ರಜಾಪ್ರಭುತ್ವ ವಿರೋಧಿಯಾದ ರಾಜಪ್ರಭುತ್ವದ ಮಾದರಿಯಾದ ಅನೇಕ ಅನಿಷ್ಟ ಚಟುವಟಿಕೆಗಳನ್ನು ಹೊಂದಿರುವುದು ಎಲ್ಲರಿಗೂ ಎದ್ದುಕಾಣುವ ವಿಷಯ. ಬಸವಣ್ಣ ಮತ್ತು ಗಾಂಧೀಜಿಯ ವೇಷಧಾರಿಗಳು ಶ್ರೀಗಳಿಗೆ ಬಗ್ಗಿ ನಮಸ್ಕರಿಸುವುದು, ಜೀವಂತವಿರುವ ವ್ಯಕ್ತಿ ತನ್ನ ಸಹಮಾನವರ ಮೇಲೆ ಸವಾರಿ ಮಾಡುವುದು ಏನನ್ನು ಸೂಚಿಸುತ್ತವೆಕಾರ್ಲ್ಮಾರ್ಕ್ಸ್ ಎಂಬ ಮೇಧಾವಿ ಜಗತ್ತಿಗೆ ಬರುವ ಎಷ್ಟೋ ನೂರು ವರ್ಷಗಳ ಹಿಂದೆಯೇ ಜಗತ್ತಿಗೆ ಕಾಯಕದ ಮಹತ್ವವನ್ನೂ, ಮನುಷ್ಯರ ನಡುವಿನ ಸಮಾನತೆಯನ್ನೂ ಬಸವನ ನೇತೃತ್ವದ ಶರಣರು ಪ್ರತಿಪಾದಿಸಿದ್ದರು. ಇಂದು ವೀರಶೈವ ಸಮುದಾಯದ ಅನುಯಾಯಿಗಳ ಆಚೆಯೂ ಧರ್ಮದ ಆಶಯಗಳು ಏನಾದರು ಹರಡಿಕೊಂಡಿದ್ದರೆ ಅದಕ್ಕೆ ಬಸವಾದಿ ಶರಣರು ಮೂಲ ಕಾರಣ. ಧರ್ಮ ಮತ್ತು ಸಾಹಿತ್ಯಗಳನ್ನು ಸಮಾಜಪರಿವರ್ತನೆಯ ಪ್ರಬಲ ಅಸ್ತ್ರವಾಗಿ ಅವರಷ್ಟು ಸಮರ್ಥವಾಗಿ ಬಳಸಿಕೊಂಡವರು ಜಗತ್ತಿನಲ್ಲಿಯೇ ವಿರಳ. ಅವರ ತಾತ್ವಿಕತೆಯನ್ನು ಆಚರಣೆಗಳನ್ನು ಅವರ ನಂತರ ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರು ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ನಮ್ಮ ಸಮಾಜದ ಹತ್ತು ಹಲವು ಸಮಸ್ಯೆಗಳು ಇಂದು ಇರುತ್ತಲೇ ಇರಲಿಲ್ಲ. ಶಿವನನ್ನು ಮತ್ತು ಶವವನ್ನು ಮಾತ್ರ ಮನುಷ್ಯರು ಹೋರುವುದು ನಾನು ತಿಳಿದುಕೊಂಡಂತೆ ವೀರಶೈವ-ಲಿಂಗಾಯತ ಧರ್ಮದಲ್ಲಿ ಗೌರವದ ಸಂಕೇತವೇ ಹೊರತು ಜೀವಂತವಿರುವ ಸ್ವಾಮಿಗಳನ್ನು ಅಲ್ಲ. ಇದನ್ನು ಅರ್ಥಮಾಡಿಕೊಂಡ ಅನೇಕ ಸ್ವಾಮಿಗಳು ಇಂತಹ ಆಚರಣೆಗಳು ಹಿಂದೆ ಇದ್ದರೂ ಅವನ್ನು ತಾವೇ ಕೈಬಿಟ್ಟಿದ್ದಾರೆ. ರಂಭಾಪುರಿ ಶ್ರೀಗಳೂ ಅದನ್ನು ಬಿಟ್ಟು ದೊಡ್ಡವರಾಗಬೇಕು. ಭಕ್ತರು ಹಠಮಾಡಿದರೆ ಅವರಿಗೆ ಶ್ರೀಗಳೇ ತಿದ್ದಿ ಹೇಳಬೇಕು.

ಕಣ್ಣುಮುಚ್ಚಿಕೊಂಡು ಆಶೀರ್ವಾದ ಮಾಡುವ ಸ್ವಾಮಿಗಳಿಗಿಂತ ಕಣ್ಣುತೆರೆಸುವ ಕೆಲಸ ಮಾಡುವ ಸ್ವಾಮಿಗಳ ಅವಶ್ಯಕತೆ ನಮ್ಮ ಸಮಾಜಕ್ಕೆ ಹಿಂದಿಗಿಂತಲೂ ಇಂದು ಹೆಚ್ಚಿದೆ. ಅಂಥವರು ನಮ್ಮ ಸಮಾಜ ಪರಿವರ್ತನೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಬಲ್ಲರು. ಏಕೆಂದರೆ ಭಾರತದಲ್ಲಿ ಒಬ್ಬ ಸಾಹಿತಿ ಅಥವಾ ಒಬ್ಬ ರಾಜಕಾರಣಿಯ ಹಿಂದೆ ಇರುವುದಕ್ಕಿಂತ ಹೆಚ್ಚು ಜನ ಒಬ್ಬ ಧರ್ಮಗುರುವಿನ ಹಿಂದೆ ಇರುತ್ತಾರೆ. ನಿಟ್ಟಿನಲ್ಲಿ ರಂಭಾಪುರಿ ಶ್ರೀಗಳು ತಾವೇ ಮುಂದೆ ನಿಂತು ಆಚರಣೆಯನ್ನು ನಿಲ್ಲಿಸುವ, ಮೂಲಕ ಎಲ್ಲ ಮಾನವಪ್ರೇಮಿಗಳ ಗೌರವಕ್ಕೆ ಪಾತ್ರರಾಗಬೇಕು. ಇಲ್ಲದೇ ಹೋದರೆ ವರ್ಷ ೨೦೦ ಮೀಟರ್ಗೆ ಇಳಿದ ಅಡ್ಡಪಲ್ಲಕ್ಕಿ ಉತ್ಸವ ಮುಂದಿನ ವರ್ಷ ೧೦೦ ಮೀಟರ್ಗೆ ಅದರ ಮುಂದಿನ ವರ್ಷ ೫೦ ಮೀಟರ್ಗೆ ಹೀಗೆ ಇಳಿಯುತ್ತಾ ಹೋಗಿ ಕೊನೆಗೆ ಸ್ವಾಮಿಗಳ ಸಹಕಾರವಿಲ್ಲದೆಯೂ ನಿಂತುಹೋಗಬಹುದು!

 *****

ಡಾ. ರಾಜೇಂದ್ರ ಬುರಡಿಕಟ್ಟಿ

ಅಕ್ಟೋಬರ್‌, 2013

ಗಮನಿಸಿ: ಈ ಬರೆಹ ಬರೆದದ್ದು 2013ರ ಅಕ್ಟೋಬರ್‌ ಮೊದಲ ವಾರದಲ್ಲಿ. ಆದರೆ ಇದನ್ನು ಈ ಬ್ಲಾಗಿನಲ್ಲಿ ಹಾಕಿದ್ದು 2026ರ ಮೇ ಮೊದಲ ವಾರದಲ್ಲಿ. ಇಲ್ಲಿ ಬಳಕೆಯಾಗಿರುವ ಚಿತ್ರವು ಈ ಲೇಖನದಲ್ಲಿ ಉಲ್ಲೇಖವಾಗಿರುವ ಜೇವರ್ಗಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ್ದು. ರಾಬು

 

*****

Wednesday, April 29, 2026

ಫಲಿತಾಂಶ ಚಟಕ್ಕೆ ಮಕ್ಕಳ ಭವಿಷ್ಯ ಬಲಿಯೇ?

 ಫಲಿತಾಂಶ ಚಟಕ್ಕೆ ಮಕ್ಕಳ ಭವಿಷ್ಯ ಬಲಿಯೇ?

ಕೆಲವು ಮಕ್ಕಳು ಶಾಲೆಗೆ ಸರಿಯಾಗಿ ಬರದೇಅಥವಾ ಮಧ್ಯದಲ್ಲಿ ಶಾಲೆ ಬಿಟ್ಟು ಅಗತ್ಯ ಹಾಜರಿ ಕಡಿಮೆಯಾಗಿ ಪರೀಕ್ಷೆಗೆ ಕುಳಿತುಕೊಳ್ಳುವ ಅರ್ಹತೆ ಇಲ್ಲದಂತೆ ಅದಾಗ ಅವರ ಭವಿಷ್ಯದ ದೃಷ್ಟಿಯಿಂದ ಖಾಸಗಿ ಆಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಮ್ಮ ಶಿಕ್ಷಕರು ಕಟ್ಟಿಸುವುದು ಒಂದು ಮಾನವೀಯ ಕಾರ್ಯವಾಗಿದ್ದು ಅದು ಶ್ಲಾಘನೀಯವಾದದ್ದು. ಅಂಥ ಅನೇಕ ಶಿಕ್ಷಕರನ್ನು ನಾನು ನೋಡಿದ್ದೇನೆ ಮತ್ತು ಅವರ ಕಾರ್ಯಕ್ಕಾಗಿ ಅಭಿನಂದಿಸಿದ್ದೇನೆ.

ಆದರೆ ಇದರ ಜೊತೆಗೇ ಹೇಳಬೇಕಾದ ಒಂದು ಸಂಗತಿಯೂ ಇದೆ. ಅದೇನೆಂದರೆ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದು ಸನ್ಮಾನದ ಶಾಲು ಹೊದಿಸಿಕೊಳ್ಳುವ ಚಟಕ್ಕೆ ಬಿದ್ದು ಮಾಡಬಾರದ ಕೆಲಸಕ್ಕೆ ಕೈ ಹಾಕುವ ಕೆಲವು ಶಿಕ್ಷಕರು ಕಲಿಕೆಯಲ್ಲಿ ಬಹಳ ಹಿಂದಿರುವ ಕೆಲವು ಮಕ್ಕಳನ್ನು ಅವರು ಫೇಲಾಗುವವರು ಎಂದು ಗೊತ್ತಾಗುತ್ತಿದ್ದಂತೆ, ಅವರು ಪ್ರತಿದಿನ ಶಾಲೆಗೆ ಬರುತ್ತಿದ್ದರೂ ಉದ್ದೇಶಪೂರ್ವಕವಾಗಿ ಹಾಜರಿ ಕೊರತೆ ಮಾಡಿಸಿ, ಅವರನ್ನು ಖಾಸಗಿ ಅಭ್ಯರ್ಥಿ ಆಗಿ ಪರೀಕ್ಷೆಗೆ ಕಟ್ಟಿಸುವುದು ಕೂಡ ಇದೆ. ಇದೊಂದು ಒಂದು ಕೆಟ್ಟ ಕೆಲಸವೇ ಸರಿ.

 
ಇದರ ಜೊತೆಗೆ ಇರುವುದು ಅಂಥ ಒಂದು ವರದಿ. ರಾಷ್ಟ್ರೀಯ ದಿನಪತ್ರಿಕೆ 'ದಿ ಹಿಂದೂ' ದಲ್ಲಿ ಇಷ್ಟು ದೊಡ್ಡದಾಗಿ ಪ್ರಕಟವಾಗಿರುವ ಈ ವರದಿ ಬೇಗಾರ್ ಕೆ. ಪಿ ಎಸ್ ಶಾಲೆಯದ್ದು. ರಿಸಲ್ಟ್ ದುರಾಸೆಯಿಂದ ಶಾಲೆಗೆ ಬರುವ ರೆಗ್ಯುಲರ್ ಮಕ್ಕಳನ್ನು ನಮಗೆ ಗೊತ್ತಿಲ್ಲದಂತೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಕಟ್ಟಿಸಿದ್ದಾರೆ ಮತ್ತು ಆಮೂಲಕ ಮಕ್ಕಳು ಫೇಲ್ ಆಗಲು (ಆಂತರಿಕ ಅಂಕಗಳ ನೆರವು ಇಲ್ಲದಾಗುವ ಕಾರಣ) ಕಾರಣರಾಗಿದ್ದಾರೆ ಎಂದು ಪಾಲಕರಿಂದ ಶಿಕ್ಷಕರ ಮೇಲೆ ದೂರು ದಾಖಲಾಗಿದೆ.


ಅಲ್ಲಿನ ಶಿಕ್ಷಕರು ಇದನ್ನು ಉದ್ದೇಶಪೂರ್ವಕವಾಗಿ ಫಲಿತಾಂಶ ಚಟದಿಂದ ಮಾಡಿದ್ದು ಹೌದೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.  ಒಂದುವೇಳೆ ಹೌದು ಎಂತಾದರೆ ಉದ್ದೇಶಪೂರ್ವಕವಾಗಿ ಈ ರೀತಿ ಮಕ್ಕಳನ್ನು ತಮ್ಮ ಫಲಿತಾಂಶ ಚಟಕ್ಕೆ ಬಳಸಿಕೊಂಡು ಅವರ ಭವಿಷ್ಯಕ್ಕೆ ಮಾರಕವಾಗುವುದು ಕೇವಲ ನಿಯಮದ ಕಡೆಯಿಂದ ಮಾತ್ರವಲ್ಲ ನೈತಿಕತೆ ಕಡೆಯಿಂದಲೂ ಅಕ್ಷಮ್ಯ ಅಪರಾಧ.


ಹಾಗಾಗಿ ಇಂಥವರಿಗೆ ಸರಿಯಾದ ಶಿಕ್ಷೆ ಆಗಬೇಕು. ಇವರು ಮಾತ್ರವಲ್ಲ! ಅನೇಕರು ಇರುವುದು ಸುಳ್ಳಲ್ಲ. ನಮ್ಮಲ್ಲಿ ಕದ್ದವರೆಲ್ಲರನ್ನೂ ಕಳ್ಳರು ಎನ್ನುವುದಿಲ್ಲ. ಸಿಕ್ಕಿಬಿದ್ದವರನ್ನು ಮಾತ್ರ ಕಳ್ಳರು ಎನ್ನಲಾಗುತ್ತದೆ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ.


ಇಂಥ ಪ್ರಕರಣಗಳು ಗೊತ್ತಿದ್ದೂ ತಮ್ಮ ವ್ಯಾಪ್ತಿಯ ಇದೇ ಫಲಿತಾಂಶ ಚಟದಿಂದ ಸುಮ್ಮನಿರುವ ಅಧಿಕಾರಿಗಳು ಯಾರೂ ಇಂತಹ ಕಷ್ಟದ ಸಂದರ್ಭದಲ್ಲಿ ಶಿಕ್ಷಕರ ನೆರವಿಗೆ ಬರುವುದಿಲ್ಲ. ಇಂತಹ ಘಟನೆಗಳು ನಮ್ಮ ಶಿಕ್ಷಕರನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಲಿ.


ರಾಜೇಂದ್ರ ಬುರಡಿಕಟ್ಟಿ
೨೯-೦೪-೨೦೨೬

Sunday, April 26, 2026

ʻಫುಲ್‌ಮೀಲ್ಸ್ʼ ಕೊಟ್ಟರೂ ʼದಿಲ್‌ಖುಷ್‌ʼ ಆಗಲಿಲ್ಲ ಏಕೆ?

 ಎಸ್.ಎಸ್.ಎಲ್‌.ಸಿ. ಫಲಿತಾಂಶ: ʻಫುಲ್‌ಮೀಲ್ಸ್ʼ ಕೊಟ್ಟರೂ ʻದಿಲ್‌ಖುಷ್‌ʼ ಆಗಲಿಲ್ಲ ಏಕೆ?


ಕನ್ನಡದ ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಕಥೆಯನ್ನು ಆಧರಿಸಿದ, ʼಭೂತಯ್ಯನ ಮಗ ಅಯ್ಯುʼ ಎಂಬ ಪ್ರಸಿದ್ಧ ಸಿನೇಮಾವೊಂದು ಕನ್ನಡದಲ್ಲಿ ಇರುವುದು ಬಹಳಷ್ಟು ಜನಕ್ಕೆ ಗೊತ್ತಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಈ ಸಿನೇಮಾದಲ್ಲಿ ಒಂದು ಸನ್ನಿವೇಶ ಬರುತ್ತದೆ. ಒಬ್ಬ ಹೊಟೆಲ್ಲಿನವನು, ʻಒಂದು ರೂಪಾಯಿಗೋ ಎರಡು ರೂಪಾಯಿಗೋ ʻಫುಲ್‌ ಮೀಲ್ಸ್‌ʼ ಎಂದು ಬೋರ್ಡು ಹಾಕಿರುತ್ತಾನೆ. ನಾಲ್ಕು ಜನ ಒಂದು ರಾತ್ರಿ ಊಟದ ಟೈಮಿಗೆ ತಲೆಯ ಮುಖಕ್ಕೆ ಮುಸುಕುಹಾಕಿಕೊಂಡು ಈ ಹೊಟೆಲ್ಲಿಗೆ ಬಂದು ಒಂದು ʼಫುಲ್‌ ಮೀಲ್ಸ್‌ʼಗೆ ಆರ್ಡರ್‌ ಮಾಡುತ್ತಾರೆ. ಅವರು ನಾಲ್ಕು ಜನ ಇರುವುದರಿಂದ ಹೊಟೆಲ್‌ ಮಾಲಿಕ ಅನುಮಾನ ದಿಂದ ಇವರ ಕಡೆ ನೋಡಿದಾಗ ಅವರು, ʼಒಬ್ಬರೇ ಊಟ ಮಾಡುವುದು; ಉಳಿದವರು ಸುಮ್ಮನೆ ಜೊತೆಗೆ ಕುಳಿತುಕೊಳ್ಳುತ್ತೇವೆʼ ಎಂದು ಹೇಳುತ್ತಾರೆ. ಮಾಲೀಕ ಮಾಣಿಗೆ ʻಒಂದು ಫುಲ್‌ ಮೀಲ್ಸ್‌ʼ ಎಂದು ಕೂಗಿಹೇಳಿ ಇವರನ್ನು ಒಳಗೆ ಬಿಡುತ್ತಾನೆ.

ಈ ನಾಲ್ಕೂಜನ ಸಾಲಾಗಿ ಊಟಕ್ಕೆ ಕೂರುತ್ತಾರೆ ಹೊಟೆಲ್‌ ಮಾಣಿ ಈ ನಾಲ್ವರಲ್ಲಿ ಮೊದಲಿಗೆ ಕುಳಿತವನ ಎದುರು ಒಂದು ಬಾಳೆ ಎಲೆ ಹಾಕಿ ಎಲೆ ತುಂಬ ಅನ್ನ ಸಾಂಬಾರು ತಂದು ಹಾಕಿ ಒಳಗೆ ಹೋಗುತ್ತಾನೆ. ಆ ಎಲೆಯಲ್ಲಿದ್ದನ್ನು ಎಲ್ಲ ಉಂಟು ಅವನು ʻಅನ್ನʼ ಎಂದು ಕೂಗುತ್ತಾನೆ. ಮಾಣಿ ಬಂದು ಎರಡನೆಯ ಸಲ ಅನ್ನ ಸಾಂಬಾರು ಹಾಕಿ ಹೋಗುತ್ತಾನೆ. ಅದನ್ನು ಉಂಡಾಗ ಅವನಿಗೆ ಹೊಟ್ಟೆ ತುಂಬುತ್ತದೆ. ಆದರೆ ಅವನು ಹೀಗೆ ಹೊಟ್ಟೆತುಂಬ ಉಂಡ ತಕ್ಷಣ ಅವನ ಸ್ಥಳಕ್ಕೆ ಪಕ್ಕದ ಇನ್ನೊಬ್ಬನು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟು, ಊಟಮಾಡಿದವನು ಮಾಡದವನ ಸ್ಥಳದಲ್ಲಿ ಕುಳಿತು, ʼಅನ್ನʼ ಎಂದು ಕೂಗುತ್ತಾನೆ. ಅಡುಗೆಯವನು ಮತ್ತೆ ಅನ್ನ ಸಾಂಬಾರು ತಂದು ಹಾಕುತ್ತಾನೆ. ಅವನೂ ಇನ್ನೊಮ್ಮೆ ತರಿಸಿಕೊಂಡು ಉಣ್ಣುತ್ತಾನೆ. ಹೊಟ್ಟೆತುಂಬಿದ ಮೇಲೆ ಅವನೂ ಇತ್ತ ಸರಿದು ಉಳಿದವರಿಗೆ ಅವಕಾಶ ಮಾಡಿಕೊಡುತ್ತಾನೆ.

ಹೀಗೇ ಇವರು ʻಅನ್ನʼ ಎಂದು ಕೂಗುವುದು, ಮಾಣಿ ಅನ್ನ ತಂದು ಹಾಕುವುದು ನಡದೇ ನಡೆಯುತ್ತದೆ. ಎಲ್ಲಿಯವರೆಗೆ ಅಂದರೆ, ಕೊನೆಯವನು ಎರಡನೆ ಬಾರಿ ʻಅನ್ನʼ ಎಂದು ಕೂಗಿದಾಗ, ಅಡುಗೆ ಮನೆಯಲ್ಲಿ ಅನ್ನವೇ ಖಾಲಿ ಆಗಿರುತ್ತದೆ. ಆಗ ಹೊಟೆಲ್‌ ಮಾಲಿಕನೇ ಬಂದು ವಿಚಾರಿಸಲಾಗಿ ʼಫುಲ್‌ ಮೀಲ್ಸ್‌ʼ ಎಂದು ಬೋರ್ಡು ಹಾಕಿದ ಮೇಲೆ ಹೊಟ್ಟೆತುಂಬ ಕೊಡಬೇಕಲ್ಲವೇ? ಈಗ ಅನ್ನ ಇಲ್ಲ ಎಂದರೆ ಹೇಗೆ” ಎಂದು ಇವರು ಜಗಳಕ್ಕೆ ನಿಲ್ಲುತ್ತಾರೆ. ವಾಸ್ತವವಾಗಿ ಇವರು ಒಂದೇ ಎಲೆಯಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು ನಾಲ್ಕೂ ಜನ ಉಂಡದ್ದರಿಂದ ಈ ಸಮಸ್ಯೆ ಆಗಿದ್ದರೂ ಅವರು ತುಂಬಾ ಸಾಚಾ ಜನರಂತೆ ಜಗಳಕ್ಕೆ ನಿಲ್ಲುತ್ತಾರೆ. ಕೊನೆಗೆ ತಲೆಕೆಟ್ಟು ಹೊಟೆಲ್‌ ಮಾಲೀಕ, ನೇತುಹಾಕಿದ್ದ ʼಫುಲ್‌ ಮೀಲ್ಸ್‌ʼ ಎಂಬ ಬೋರ್ಡನ್ನೇ ಕಿತ್ತು ಹಾಕಿ ʻಇನ್ನೇನಿದ್ದರೂ ಪ್ಲೇಟ್‌ ಮೀಲ್ಸ್‌ʼ ಎಂದು ಬೋರ್ಡ್‌ ಹಾಕಲು ತೀರ್ಮಾನಿಸುತ್ತಾನೆ.

ಆಕಾಶದೆತ್ತರೆತ್ತರಕ್ಕೇರುತ್ತಿದ್ದರೂ ಹೃದಯಕ್ಕೆ ಹತ್ತಿರವಾಗದ ಫಲಿತಾಂಶ

ಚಲನಚಿತ್ರದಲ್ಲಿ ತುಂಬಾ ಹಾಸ್ಯದಿಂದ ಕೂಡಿದ ಈ ಸಂದರ್ಭವು ಇದೀಗ ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಬಂದಾಗ ಪ್ರಕಟವಾದ ಅಂಕಿಅಂಶಗಳನ್ನು ನೋಡಿದಾಗ ಮತ್ತು ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ಗಮನಿಸಿದಾಗ ತಕ್ಷಣಕ್ಕೆ ನೆನಪಿಗೆ ಬಂತು. ನಾನು ಸುಮ್ಮನೆ ಗಮನಿಸಿದಂತೆ ತಮ್ಮ ತಮ್ಮ ಶಾಲೆಗಳ ಅಥವಾ ತಮ್ಮ ತಮ್ಮ ವಿಷಯಗಳ ಫಲಿತಾಂಶದ ಬಗ್ಗೆ ಹೆಮ್ಮಯಿಂದ ಎಲ್ಲಾ ಗುಂಪುಗಳಲ್ಲಿ ಸಂದೇಶ ಮತ್ತು ಫೋಟೋಗಳನ್ನು ಹಾಕುವವರ ಸಂಖ್ಯೆ ಹಿಂದಿನ ವರ್ಷಗಳಷ್ಟು ದೊಡ್ಡ ಪ್ರಮಾಣದಲ್ಲಿ ಈ ವರ್ಷ ನಡೆಯಲಿಲ್ಲ. ಅಂದ ಮಾತ್ರಕ್ಕೆ ಈ ವರ್ಷ ಅವರ ವಿಷಯಕ್ಕೆ ಹಾಗೂ ಅವರ ಶಾಲೆಗೆ ಹಿಂದಿನಷ್ಟು ಒಳ್ಳೆಯ ಫಲಿತಾಂಶ ಬಂದಿಲ್ಲ ಎಂದು ಅರ್ಥವಲ್ಲ. ಎಲ್ಲರ ವಿಷಯಗಳಲ್ಲಿ ಮತ್ತು ಎಲ್ಲ ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ ಬಹಳಷ್ಟು ಹೆಚ್ಚಿನ ಫಲಿತಾಂಶವೇ ಬಂದಿದೆ.

ಆದರೂ ಈ ಬಗ್ಗೆ ಸಂದೇಶ ಫೋಟೋ ಹಾಕುವ ಉತ್ಸಾಹ ಶಿಕ್ಷಕರಿಗೆ ಏಕೆ ಕಡಿಮೆ ಆಯಿತು? ಇದಕ್ಕೆ ಕಾರಣವನ್ನು ನಾವು ಊಹಿಸಲು ಸಾಧ್ಯವಿದೆ. ನಾನು ಓದುವಾಗ ನನ್ನದು ಅರವತ್ತು ಪರ್ಸೆಂಟ್‌ ಫಲಿತಾಂಶ ಬಂದಿತ್ತು. ಇಡೀ ಶಾಲೆಗೆ ನನ್ನನ್ನು ʻಹಿರೋʼ ರೀತಿ ನಮ್ಮ ಹೆಡ್ಮಾಸ್ಟರ್‌ ಪರಿಚಯಿಸಿದ್ದರು! ಅದು ಹಳೇ ಕಾಲ ಅನ್ನಿ. ಈಗಿನ ಕಾಲಕ್ಕೇ ಬಂದರೂ ಕೆಲವು ವರ್ಷಗಳ ಹಿಂದೆ ಇಡೀ ತಾಲ್ಲೂಕಿಗೆ ಒಂದೋ ಎರಡೂ ಶಾಲೆಗಳಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಬರುತ್ತಿತ್ತು. ನೂರಕ್ಕೆ ನೂರು ಅಂಕ ಪಡೆಯುವ ಮಗು ಇಡೀ ತಾಲ್ಲೂಕಿಗೆ ಒಂದು ಇರಬೇಕಾದರೆ ಅದೇ ದೊಡ್ಡದಾಗಿತ್ತು. ಹಾಗಾಗಿ ʻಊರಿಗೊಬ್ಬಳೇ ಪದ್ಮಾವತಿʼ ಅನ್ನುವ ಹಾಗೆ ಆ ಶಾಲೆಗೆ ಆ ಮಗುವಿಗೆ ಎಲ್ಲಿಲ್ಲದ ಬೆಲೆ ಇರುತ್ತಿತ್ತು. ಈಗ ಯಾರನ್ನು ಕೇಳಿದರೂ, “ನಂದು ಹಂಡ್ರಡ್ಡು ನಿಂದು ಹಂಡ್ರಡ್ಡು.” ಎಲ್ಲರೂ ಹಂಡ್ರಡ್ಡು ಹಂಡ್ರಡ್ಡು ಅಂತ ಹೇಳೋರೇ ಆದ್ರೆ ಅದನ್ನು ಕೇಳೋರು ಬೇಡವೆ? ಬಸವಣ್ಣ ʻಬೇಡುವವರಿಲ್ಲದೆ ಬಡವನಾದೆನಯ್ಯʼ ಅಂತಾರಲ್ಲ ಹಾಗೆ ಇಲ್ಲಿ ʻಕೇಳುವವರಿಲ್ಲದೆ ಬಡವನಾದೆನಯ್ಯʼ ಎಂದು ಹಲವರಿಗೆ ಅನ್ನಿಸಿರಬಹುದು.

ಯಾವುದೇ ಶಿಕ್ಷಕರಿರಲಿ ವರ್ಷಪೂರ್ತಿ ಕಷ್ಟುಪಟ್ಟು ಕೆಲಸ ಮಾಡಿರುವವರಿಗೆ ಅದರ ಪ್ರತಿಫಲವಾದ ಮಕ್ಕಳ ಫಲಿತಾಂಶ ಬರುವುದು ಒಂದು ಕಾತರದ ಸಂಗತಿಯೇ ಆಗಿರುತ್ತದೆ. ಒಳ್ಳೆಯ ಫಲಿತಾಂಶ ಬಂದಾಗ ಬದುಕು ಒಂದು ಕ್ಷಣ ಸಾರ್ಥಕ ಅನ್ನಿಸಿ ಧನ್ಯತೆಯನ್ನು ತಂದುಕೊಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶಕ್ಕೂ ಈ ರೀತಿ ಶಿಕ್ಷಕರಿಗೆ ಧನ್ಯತೆಯ ಭಾವನೆಯನ್ನು ಮೂಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ʻಆಕಾಶದೆತ್ತರೆತ್ತರಕ್ಕೇರುತ್ತಿದ್ದರೂ ಹೃದಯಕ್ಕೆ ಹತ್ತಿರವಾಗದ ಅರ್ಥವಿಲ್ಲದ  ಫಲಿತಾಂಶ.ʼ ನನಗೆ ಅರವತ್ತು ಫಲಿತಾಂಶ ಬಂದಾಗ ನನ್ನ ಅಮ್ಮ ಇಡೀ ಊರಿಗೇ ಸ್ವೀಟ್‌ ಹಂಚಿದ್ದಳು. ಇವತ್ತು ತೊಂಬತ್ತೊಂಬತ್ತು ಫಲಿತಾಂಶ ಬಂದರೂ ತಾಯಿ ತಂದೆಯರು ಸಿಹಿ ಹಂಚುವ ಸಂಭ್ರಮ ತಾಳುವುದು ಕಷ್ಟ. ಏಕೆಂದರೆ ಅವರು ಮಗು ತೆಗೆದುಕೊಂಡ ೯೯ ಅಂಕಗಳಿಗಿಂತ ತೆಗೆದುಕೊಳ್ಳದೇ ಹೋದ ೦೧ ಅಂಕ ಬಹಳ ಮುಖ್ಯ ಅನ್ನಿಸುತ್ತದೆ. ಸಂತೋಷ ಪಡಲಿಕ್ಕೂ ಒಂದು ಮನಸ್ಥಿತಿ ಅಂತ ಇರಬೇಕಾಗುತ್ತದೆ. ಅದು ಇಲ್ಲದಿದ್ದರೆ ನೂರಕ್ಕೆ ನೂರು ಅಂಕ ಬಂದಾಗೂ ಆ ಮನಸ್ಸು ಇನ್ನೂ ಏನೋ ಕೊರತೆಯನ್ನು ಹುಡುಕುತ್ತಲೇ ಇರುತ್ತದೆ.

ನಾನು ಮೇಷ್ಟ್ರ ಕೆಲ್ಸ ಮಾಡೋದ್‌ ಯಾತುಕ್ಕೆ? ನೀನು ಶಾಲೆಗೆ ಬರೋದು ಯಾತುಕ್ಕೆ?

ಈಗಿನ ಪರೀಕ್ಷೆಯಲ್ಲಿ ಹೀಗೆ ಅರ್ಥವಿಲ್ಲದ ಎತ್ತರದ ಫಲಿತಾಂಶ ಬರಲಿಕ್ಕೆ ಬಹಳಷ್ಟು ಕಾರಣಗಳಿವೆ. ಅವುಗಳಲ್ಲಿ ನೀಲನಕ್ಷೆ, ಮಾದರಿ ಪ್ರಶ್ನೆಪತ್ರಿಕೆ ಇತ್ಯಾದಿಗಳ ಮೂಲಕ ನಾವು ಪ್ರಶ್ನೆಪತ್ರಿಕೆಯನ್ನು ಮೊದಲೇ ಅರ್ಧ ಬಿಡುಗಡೆ ಮಾಡುವಂಥದ್ದು ಒಂದು. ಹಿಂದೆ ಹೇಗೆ ಇತ್ತು ಎಂದರೆ ನಾನು ಓದುವಾಗ ನನ್ನ ಸ್ನೇಹಿತ ಒಂದು ಸಲ ತರಗತಿಯ ಪರೀಕ್ಷೆ ಮುಂದೆ ಇರುವಾಗ ಒಂದು ದಿನ ತರಗತಿಯಲ್ಲಿ, ʻಪ್ರಶ್ನೆಗಳು ಯಾವ ರೀತಿ ಬರುತ್ತವೆ ಅಂತನೋ  ಯಾವ ಯಾವ ಚಾಪ್ಟರ್‌ ನಲ್ಲಿ ಬರುತ್ತವೆ ಅಂತನೋ ಮೇಷ್ಟ್ರನ್ನು ಕೇಳಿಬಿಟ್ಟ. ಆ ಕಾಲದಲ್ಲಿ ಮೇಷ್ಟ್ರಿಗೆ ಇಂತಹ ಪ್ರಶ್ನೆ ಕೇಳಬೇಕಾದರೆ ಎದೆಯ ಗುಂಡಿಗೆ ಗಟ್ಟಿಯಾಗಿ ಇರಬೇಕಾಗಿತ್ತು. ಏಕೆಂದರೆ ಅದು ʻಒದ್ದು ಬುದ್ಧಿಯ ಕಲಿಸಿದಡೆ ಆಗಲಿ ಅದೇ ಮಹಾಪ್ರಸಾದವೆಂಬೆನಯ್ಯʼ ಅನ್ನುವ ಕಾಲ. ಅವನ ಪುಣ್ಯಕ್ಕೆ ಮೇಷ್ಟ್ರು ಆ ದಿನ ಯಾಕೋ ಸಮಾಧಾನದ ಮನಸ್ಥಿತಿಯಲ್ಲಿ ಇದ್ದದ್ದರಿಂದ ಅಂತಹ ಅನಾಹುತ ಏನೂ ಆಗಲಿಲ್ಲ. “ಪ್ರಶ್ನೆಗಳು ಹೇಗೆ ಹೇಗೆ ಬರುತ್ತವೆ, ಯಾವ ಯಾವ ಚಾಪ್ಟರ್‌ನಲ್ಲಿ ಬರುತ್ತವೆ ಅಂತ ಹೇಳಿ ಪರೀಕ್ಷೆ ಮಾಡೋದಾದ್ರೆ ನಾನು ಮೇಷ್ಟ್ರ ಕೆಲ್ಸ ಮಾಡೋದ್‌ ಯಾತುಕ್ಕೆ? ನೀನು ಶಾಲೆಗೆ ಬರೋದು ಯಾತುಕ್ಕೆ? ಏನೇನು ಪಾಟ ಮಾಡಿದೇನೋ ಅದನ್ನೆಲ್ಲದನ್ನೂ ಓದ್ಕೋಬೇಕು; ಕೂತ್ಕೊ.” ಎಂದು ಚಾಪ್ಟರ್‌ ಕ್ಲೋಸ್‌ ಮಾಡಿದರು.


ಈಗ ಪರಿಸ್ಥಿತಿ ಹೇಗಿದೆ ಅಂದರೆ ಪರೀಕ್ಷೆಗೆ ಯಾವ ಯಾವ ಚಾಪ್ಟರ್‌ನಲ್ಲಿ ಪ್ರಶ್ನೆಗಳು ಬರುತ್ತವೆ ಅಂತನೂ ಹೇಳಲಾಗುತ್ತದೆ. ಅವು ಹೇಗೆ ಹೇಗೆ ಬರುತ್ತವೆ ಅಂತನೂ ಅಧಿಕೃತವಾಗಿಯೇ ಹೇಳಲಾಗುತ್ತದೆ. ತಮಾಸೆಯ ಸಂಗತಿ ಎಂದರೆ ನನ್ನ ಪರಿಚಯದ ಮೇಡಂ ಒಬ್ಬರು ಎರಡು ಪ್ರಶ್ನೆಪತ್ರಿಕೆಗಳನ್ನೇ ಬರೆಸಿ, “ಇವೆರಡರಲ್ಲಿಯೇ ಯಾವುದಾದರೂ ಒಂದನ್ನು ಪರೀಕ್ಷೆಗೆ ಕೊಡುತ್ತೇನೆ ಈ ಎರಡಕ್ಕೆ ಚೆನ್ನಾಗಿ ಓದಿಕೊಂಡು ರೆಡಿಯಾಗಿ ಸಾಕು” ಎಂದು ಹೇಳಿ ʻಪರೀಕ್ಷೆಯ ಶಾಸ್ತ್ರʼ ಮಾಡಿದರಂತೆ. ಹೀಗೆ ಮಾಡಿ ಪರೀಕ್ಷೆ ಮಾಡಿದಾಗೂ ಉತ್ತರ ಬರೆಯದ ಕೆಲವು ಮಕ್ಕಳನ್ನು ವಿಚಾರಿಸಿದರೆ, “ನಾವು ಅದನ್ನು ಕಲಿತಿದ್ವಿ; ನೀವು ಇದನ್ನು ಕೊಟ್ಟಿದ್ದೀರಿ” ಅಂತಲೋ ನಾವು ಇದನ್ನುಕಲಿತಿದ್ವಿ; ನೀವು ಅದನ್ನು ಕೊಟ್ಟಿದ್ದೀರಿ” ಎಂತಲೋ ಹೇಳಿದರಂತೆ. ಆ ಮಕ್ಕಳ ಪ್ರಕಾರ ಮೇಡಂ ಎರಡು ಪ್ರಶ್ನೆಪತ್ರಿಕೆ ಕೊಡುವ ಮೂಲಕ ಅವರಿಗೆ ಗೊಂದಲ ಆಯಿತಾದ್ದರಿಂದ ತಪ್ಪು ಮೇಡಮ್ಮನದೇ! ಇದನ್ನೇ ಅಲ್ಲಮಪ್ರಭು, “ಕಾಲದ ಕಟ್ಟಳೆಗೆ ಬೆರಗಾದೆನಯ್ಯ” ಅನ್ನುವುದು.

ಮೊದಮೊದಲು ನೀಲನಕ್ಷೆಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮಾದರಿ ಪ್ರಶ್ನೆಪತ್ರಿಕೆಗಳು, ಜೊತೆಗೆ ಎರಡು ಮೂರು ಪೂರ್ವಭಾವಿ ಪರೀಕ್ಷೆಗಳು ಅದು ಇದೂ ಅಂತ ಪರೀಕ್ಷೆಗೆ ಬರುವ ಎಲ್ಲ ಪ್ರಶ್ನೆಗಳನ್ನೂ ಮೊದಲೇ ಮಕ್ಕಳಿಗೆ ಗೊತ್ತುಮಾಡುವುದರಿಂದ ನಿಜವಾದ ಪರೀಕ್ಷೆಯ ಬಗ್ಗೆ ಮಕ್ಕಳಿಗೆ ಯಾವ ಗಾಂಭೀರ್ಯವೂ ಉಳಿದಿರುವುದಿಲ್ಲ. ಪರೀಕ್ಷೆಯ ಬಗ್ಗೆ ಭಯ ಕಳೆಯಬೇಕು ಎಂದು ನಾವು ಮಾಡುವ ಕೆಲಸಗಳು ಪರೀಕ್ಷಯ ಬಗ್ಗೆ ಗಾಂಭೀರ್ಯವನ್ನೇ ಕಳೆಯಬಾರದು. ಅಷ್ಟಕ್ಕೂ ಪರೀಕ್ಷೆಯ ಭಯ ಇರುವುದು ಮಕ್ಕಳಿಗೋ ಅಥವಾ ಶಿಕ್ಷಕರು ಮತ್ತು ಅಧಿಕಾರಿಗಳಿಗೋ ಎಂದೂ ನಾವು ಈಗ ಪರೀಕ್ಷಿಸಿಕೊಳ್ಳಬೇಕಾಗಿದೆ.

ಗಬ್ಬುವಾಸನೆಯ ರುಬ್ಬುವಿಕೆ ಮತ್ತು ಅಸ್ಥಳ ತಾಯ್ತನ!

ಫಲಿತಾಂಶದ ಮಿತಿಮೀರಿದ ಎತ್ತರಕ್ಕೆ ಇನ್ನೊಂದು ಕಾರಣ ತಮ್ಮ ತಮ್ಮ ವ್ಯಾಪ್ತಿಯ ಫಲಿತಾಂಶದ ಕಾರಣಕ್ಕೆ ತಮ್ಮ ಮೇಲಿನವರಿಂದ ಪ್ರಶಂಸೆಗೆ ಪಾತ್ರರಾಗಲು ಅದಲ್ಲದಿದ್ದರೆ ಕೊನೆಯ ಪಕ್ಷ ಅವಮಾನ ತಪ್ಪಿಸಿಕೊಳ್ಳಲು ಅನೇಕ ಅಧಿಕಾರಿಗಳು ಶಿಕ್ಷಣದ ಮೂಲ ಆಶಯವನ್ನು ಅರ್ಥಮಾಡಿಕೊಳ್ಳದೇ ಅಥವಾ ಅರ್ಥ ಮಾಡಿಕೊಂಡೂ ಗಣನೆಗೆ ತೆಗೆದುಕೊಳ್ಳದೆ ಮಕ್ಕಳ ಫಲಿತಾಂಶವನ್ನೇ ಕೇಂದ್ರೀಕರಿಸಿ, ಕಲಿಕೆಯನ್ನು ಅವಗಣಿಸಿ ಎಂಥದ್ದೆಂಥದ್ದೋ ಕ್ರಮಗಳನ್ನು ತಮ್ಮ ತಮ್ಮ ಹಂತದಲ್ಲಿ ಜಾರಿಗೊಳಿಸಿ ಶಿಕ್ಷಕರ ಮೇಲೆ ಒತ್ತಡ ತಂದು ಅದನ್ನು ಮಾಡಿಸುವುದು. ಇಂತಹ ಕಾರ್ಯಕ್ರಮಗಳು ಮಕ್ಕಳ ಸಹಜ ಕಲಿಕೆಯನ್ನು ಅಲಕ್ಷಿಸಿ ಅಂಕಕೇಂದ್ರಿತವಾಗಿ ರೂಪುಗೊಳ್ಳುವುದರಿಂದ, ಶಿಕ್ಷಕರು ಇಷ್ಟಪಟ್ಟೋ ಅಥವಾ ಒತ್ತಡಕ್ಕೆ ಒಳಗಾಗಿಯೋ ಚೈತನ್ಯ ಕೊಡುವ ಪರಿಮಳ ಹೊರಸೂಸಬೇಕಾದ ತಮ್ಮ ಪಾಠವನ್ನು ಗಬ್ಬು ವಾಸನೆ ಬರುವಂತೆ ಮಕ್ಕಳನ್ನು ಹಿಡಿದುಕೊಂಡು ʻರುಬ್ಬತೊಡಗುತ್ತಾರೆʼ. ಈ ರುಬ್ಬುವಿಕೆ ಅತ್ಯಂತ ಯಾಂತ್ರಿಕವಾಗಿ ಯಾವುದೇ ಚೈತನ್ಯವನ್ನು ನೀಡುವುದಿಲ್ಲವಾದ್ದರಿಂದ ಕಲಿಕೆ ತೀರಾ ಮೇಲ್ಮಟ್ಟದಲ್ಲಿ ಅಂದರೆ ಪರೀಕ್ಷೆ ಮುಗಿಯುವ ತನಕ ಮಾತ್ರ ಇರುವಂತೆ ಕೆಲವು ಸಲ ಯಶಸ್ವಿಯಾಗುವುದರಿಂದ ಅದೂ ಕೂಡ ಈ ಫಲಿತಾಂಶದ ಅಸಭ್ಯ ಏರಿಕೆಗೆ ಕಾರಣವಾಗುತ್ತಿದೆ.

ಮೂರನೆಯ ಕಾರಣ ಅಸ್ಥಳ ತಾಯ್ತನ. ಅಂದರೆ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಶಿಕ್ಷಕರು ಬಹುಕರುಣಾಮಯಿಗಳಾಗುವುದು. ನಾನು ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ ಶಿಕ್ಷಕರು ಪಾಠಮಾಡುವಾಗ ತಾಯಿಯಂತೆ ಇರಬೇಕು; ಪರೀಕ್ಷೆ ಮಾಡುವಾಗ ಸಬ್‌ ಇನಸ್ಪೆಕ್ಟರ್‌ ರೀತಿ ಇರಬೇಕು; ಮೌಲ್ಯಮಾಪನ ಮಾಡುವವಾಗ ನ್ಯಾಯಾದೀಶರಂತೆ ಇರಬೇಕು! ಎಷ್ಟು ಜನ ಈ ರೀತಿ ಇವತ್ತು ಇದ್ದಾರೆ. ಅನೇಕರದ್ದು ಇದಕ್ಕೆ ತದ್ವಿರುದ್ಧವಾದ ನಿಲುವು. ಅವರು ಪಾಠಮಾಡುವಾಗ ಸಬ್‌ ಇನಸ್ಪೆಕ್ಟರ್‌ ಆಗಿದ್ದು ಮೌಲ್ಯಮಾಪನ ಮಾಡುವಾಗ ತಾಯಿಯಾಗಿಬಿಡುತ್ತಾರೆ! ನ್ಯಾಯಾದೀಶರ ಪಾತ್ರ ಔಟ್! ತಾಯಿಗೆ ಮಗು ಏನು ಮಾಡಿದರೂ ಚೆಂದವೇ. ಇಂತಹ ಶಿಕ್ಷಕರಿಗೆ ಮಕ್ಕಳು ಉತ್ತರ ಪತ್ರಿಕೆಯಲ್ಲಿ ಏನು ಬರೆದರೂ ಅಂದವೇ‌! (ಅಂಧವೇ!). ಒಟ್ಟಿನಲ್ಲಿ ಖಾಲಿ ಹಾಳೆ ಬಿಡದಿದ್ದರೆ ಸಾಕು. ಅದರಲ್ಲಿ ಉತ್ತರವೇ ಇರಬೇಕು ಅಂತ ಏನೂ ಇಲ್ಲ!

ಹದ್ಮೂರು ಮಾರ್ಕ್ಸಿಗೆ ಹದ್ಮೂರು ಲಕ್ಷನಾ?

ನಾಲ್ಕನೆಯ ಮತ್ತು ನಾನು ಇಲ್ಲಿ ಮುಖ್ಯವಾಗಿ ಹೇಳಲೇಬೇಕಾಗಿರುವ ಕಾರಣ ಮಕ್ಕಳ ಉತ್ತೀರ್ಣತೆಯ ಅಂಕಗಳ ತಗ್ಗಿಸುವಿಕೆಯ ವ್ಯವಸ್ಥೆಯ ನಿರ್ಧಾರವನ್ನು ನಮ್ಮಲ್ಲಿ ಬಹಳಷ್ಟು ಜನ ಅಪಾರ್ಥ ಮಾಡಿಕೊಂಡಿರುವುದು ಮತ್ತು ಅದನ್ನು ದುರುಪಯೋಗ ಮಾಡಿಕೊಂಡಿರುವುದು. ಜೆ.ಡಿ ಹಂತದ ಒಬ್ಬ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ನನ್ನ ಜೊತೆ ಖಾಸಗಿಯಾಗಿ ಮಾತನಾಡುವಾಗ ಯಾತಕ್ಕೋ ಮಾತಿಗೆ ಮಾತು ಬೆಳೆದು ಮಾತು ಈ ವಿಷಯಕ್ಕೆ ಹೊರಳಿಕೊಂಡಿತು. ಆಗ ಮಾತನಾಡುತ್ತಾ, ಅವರು, “ನಮ್ಮ ಸರ್ಕಾರ್ದೊರು ಪಾಸಿಂಗ್‌ ಮಾರ್ಕ್ಸ್‌ ಇಷ್ಟು ಕಡಿಮೆಗೆ ಇಳಿಸ್ಬಾರ್ದಿತ್ತು ಕಣ್ರಿ. ಇದರಿಂದ ನಮ್ಮ ಮಾನ ಮರ್ಯಾದೆ ಎಲ್ಲ ಹೋಗ್ತಾ ಇದೆ. ಬಸ್ಸಿನಲ್ಲಿ ಬರುವಾಗ ಜನ ಮಾತಾಡ್ಕಳ್ತಾ ಇರೋದನ್ನ ಕೇಳಿದ್ರೆ ತಲೆ ತಗ್ಗಿಸಿ ಕೂತ್ಕೊಳ್ಳಂಗೆ ಆಗ್ತದೆ. ʼಹದ್ಮೂರು ಮಾರ್ಕ್ಸ ತಗೊಳ್ಳಂಗ ಮಾಡಾಕೆ ಇವ್ರಿಗೆ ಹದ್ಮೂರು ಲಕ್ಷ ಸಂಬಳʼ ಅಂತೆಲ್ಲ ಮಾತಾಡ್ತಾರೆ. ತೀರಾ ಹದಿಮೂರಕ್ಕೆ ಇಳಿಸೋದು ಅಂದ್ರೆ ಏನು? ಅದುಕ್ಕೊಂದು ರೀತಿ ನೀತಿ ಅಂತ ಬೇಡ್ವಾ” ಎಂದು ಬಹಳ ಬೇಜಾರು ಮಾಡಿಕೊಂಡು ಹೇಳಿದರು. ಇದನ್ನು ಕೇಳಿ ನಾನು ಅವಕ್ಕಾಗಿಬಿಟ್ಟೆ. ಏಕೆಂದರೆ ವ್ಯವಸ್ಥೆಯ ನಿರ್ಧಾರವನ್ನು ಕೇವಲ ಶಿಕ್ಷಕರು ಮಾತ್ರ ಈ ರೀತಿ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಅಂದುಕೊಂಡಿದ್ದೆ. ಅವರಷ್ಟೇ ಅಲ್ಲ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಇದನ್ನು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ಈ ಮಾತು ನನಗೆ ದೃಢಪಡಿಸಿತು.

ಮೂವತ್ತೈದು ಅಂಕಗಳಿಗೆ ಇದ್ದ ಉತ್ತೀರ್ಣತೆಯನ್ನು ಮೂವತ್ತಮೂರಕ್ಕೆ ಇಳಿಸಿದ್ದು ಮತ್ತು ಉತ್ತೀರ್ಣತೆಯ ಅಂಕಗಳನ್ನು ಲೆಕ್ಕಹಾಕುವಾಗ ಆಂತರಿಕ ಅಂಕಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದು ಇದಷ್ಟೇ ಸರ್ಕಾರ ಮಾಡಿದ್ದು ಬಿಟ್ಟರೆ ಇವರೆಲ್ಲ ತಿಳಿದುಕೊಂಡಂತೆ ಎಲ್ಲಿಯೂ ಹದಿಮೂರು ಅಂಕಗಳ ಪ್ರಸ್ತಾಪವನ್ನೇ ಮಾಡಿಲ್ಲ. ಸರ್ಕಾರ ಈ ನಿರ್ಧಾರವನ್ನು ಮಾಡಿದ್ದರ ಹಿಂದೆ ಅನೇಕ ವೈಜ್ಞಾನಿಕ ಮತ್ತು ತಾತ್ವಿಕ ಅಂಶಗಳಿರುತ್ತವೆ. ಉತ್ತೀರ್ಣತೆಯ ಅಂಕಗಳನ್ನು ಇಳಿಸಿದ್ದರಲ್ಲಿ  ಮಕ್ಕಳ ಹಿತಾಸಕ್ತಿಯ ಅಂಶವಿದೆ. (ಎಲ್ಲ ವಿಷಯಗಳಲ್ಲೂ ಅಷ್ಟೇ ಬರಬೇಕು ಎಂದೂ ಇಲ್ಲ. ಪ್ರತಿವಿಷಯಕ್ಕೆ ಮೂವತ್ತು ಬಂದು ಒಟ್ಟಿನಲ್ಲಿ ಸರಾಸರಿ ಮೂವತ್ತಮೂರು ಬಂದರೂ ಸರಿ).

ಉತ್ತೀರ್ಣತೆಗೆ ಆಂತರಿಕ ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂಬುದರಲ್ಲಿ ಶಿಕ್ಷಕರ ಕಾರ್ಯದ ಮೇಲೆ ನಂಬಿಕೆ ಮತ್ತು ಅವರ ಕಾರ್ಯಕ್ಕೆ ಗೌರವ ಕೊಡುವ ಉದಾತ್ತವಾದ ಆಶಯವಿದೆ. ಮೊದಲು ಲಿಖಿತ ಪರೀಕ್ಷಯಲ್ಲಿ ಕನಿಷ್ಟ ಇಷ್ಟು ಅಂಕಗಳನ್ನು ತೆಗೆದುಕೊಳ್ಳಲೇಬೇಕು ಎಂದು ಷರತ್ತು ಇದ್ದದ್ದರಿಂದ ಶಿಕ್ಷಕರಿಗೆ ಒಂದು ಅಸಮಾಧಾನವಿತ್ತು. “ಏಕೆ ನಾವು ಕೊಡುವ ಆಂತರಿಕ ಅಂಕಗಳಿಗೆ ಬೆಲೆಯಿಲ್ಲವೇ? ನಾವು ಬೇಜವಾಬ್ದಾರಿಯಿಂದ ಅಂಕ ಕೊಡುತ್ತೇವೆ ಎಂದು ಇದರ ಅರ್ಥವೇ?” ಎಂದೆಲ್ಲ ಅನೇಕ ಶಿಕ್ಷಕರು ಹೇಳುತ್ತಿದ್ದುದನ್ನು ನಾನು ಸ್ವತಃ ಕೇಳಿದ್ದೇನೆ. ವ್ಯವಸ್ಥೆಯ ಈ ನಿರ್ಧಾರದಿಂದ ಬಾಹ್ಯ ಪರೀಕ್ಷೆಯಷ್ಟೇ ಮಹತ್ವವನ್ನು ಆಂತರಿಕ ಪರೀಕ್ಷೆಗಳಿಗೂ ಕೊಟ್ಟಂತಾಗಿ ಶಿಕ್ಷಕರು ತಮ್ಮ ಮೇಲೆ ಯಾರೂ ಹೇಳುವವರು ಕೇಳುವವರು ಇಲ್ಲದ ಸಂದರ್ಭದಲ್ಲಿಯೂ ಬೇಜವಾಬ್ದಾರಿಯಿಂದ ಕೆಲಸ ಮಾಡುವವರಲ್ಲಎಂದೇ ಹೇಳಿದಂತೆ ಆಯಿತು ತಾನೆ? ಇದು ವ್ಯವಸ್ಥೆ ಶಿಕ್ಷಕರ ಮೇಲೆ ಇಟ್ಟ ನಂಬಿಕೆ ಮತ್ತು ಭರವಸೆ ಅಲ್ಲದೆ ಇನ್ನೇನು?

ಹದಿಮೂರರ ಸುಳ್ಳು; ಇದು ಯಾರ ಮಳ್ಳು?

ಆದರೆ ನಮ್ಮ ಶಿಕ್ಷಕರು ಮತ್ತು ಅಧಿಕಾರಿಗಳು ತಮ್ಮ ಮೇಲೆ ಭರವಸೆ ಇಟ್ಟು ನೀಡಿದ ಈ ಗೌರವನ್ನು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸಿದರು ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆಯಾಗಿ ನಿಲ್ಲುತ್ತಿದೆ. ಸರ್ಕಾರ ಹದಿಮೂರು ಅಂಕಗಳ ಬಗ್ಗೆ ಎಲ್ಲಿಯೂ ಹೇಳದಿದ್ದರೂ ʻಹದಿಮೂರಕ್ಕೆ ಇಳಿಸಲಾಯಿತುʼ ಎಂಬ ಸುಳ್ಳುಸುದ್ಧಿಯನ್ನು ಹುಟ್ಟಿಸಿ ಹರಿಬಿಟ್ಟವರು ಯಾರು? ಅದನ್ನು ನಮ್ಮ ಶಿಕ್ಷಕರೇ ಮಾಡಿದ್ದಲ್ಲವೇ? ಹೌದು ಒಂದು ಮಗು ಶಿಕ್ಷಕರು ಕೊಡುವ ಕಿರುಪರೀಕ್ಷೆ, ನಿಯೋಜಿತ ಕಾರ್ಯ ಎಲ್ಲವನ್ನೂ ಬಹಳ ಚೆಂದವಾಗಿ ಮಾಡಿಕೊಟ್ಟು ಪೂರ್ಣಪ್ರಮಾಣದಲ್ಲಿ ಅಂದರೆ ಇಪ್ಪತ್ತಕ್ಕೆ ಇಪ್ಪತ್ತೂ ಅಂಕಗಳನ್ನು ಪಡೆಯಬಹುದು. ಆ ಮಗು ಮಾತ್ರ ಬಾಹ್ಯ ಪರೀಕ್ಷೆಯಲ್ಲಿ ಹದಿಮೂರು ಪಡೆದರೆ ಸಾಕು. ಉಳಿದವರೆಲ್ಲರಿಗೂ ಇದು ಹೇಗೆ ಅನ್ವಯಿಸುತ್ತದೆ? ಅಷ್ಟಕ್ಕೂ ಹೀಗೆ ಪೂರ್ಣಪ್ರಮಾಣದ ಅಂಕಗಳನ್ನು ಪ್ರಾಮಾಣಿಕವಾಗಿಯೇ ಪಡೆಯುವ ಮಗು ಬಾಹ್ಯ ಪರೀಕ್ಷೆಯಲ್ಲಿ ಹದಿಮೂರು ಅಂಕ ಪಡೆಯುವಷ್ಟು ಕಳಪೆಯಾಗಿ ಬರೆಯುತ್ತದೆಯೇ?

ತರಗತಿಯ ಎಲ್ಲ ಮಕ್ಕಳಿಗೂ ಶಿಕ್ಷಕರು ಪೂರ್ಣಪ್ರಮಾಣದ ಅಂಕಗಳನ್ನು ನೀಡಿದರೆ ಮಾತ್ರ ಇವರ ಲೆಕ್ಕಾಚಾರದ ಪ್ರಕಾರ ಅವರು ಬಾಹ್ಯಪರೀಕ್ಷಯಲ್ಲಿ ಹದಿಮೂರು ಪಡೆದರೆ ಉತ್ತೀರ್ಣರಾಗುವುದು ನಿಜ. ಆದರೆ ಇವರೇಕೆ ಕೆಲಸ ಮಾಡದವರಿಗೂ ಮಾಡಿದವರಿಗೂ ದೇವಸ್ಥಾನಕ್ಕೆ ಬಂದವರಿಗೆ ಭೇದಭಾವ ಮಾಡದೆ ಸಾಮೂಹಿಕವಾಗಿ ಊಟಹಾಕುವಂತೆ ಪೂರ್ಣಪ್ರಮಾಣದ ಅಂಕ ಕೊಡಬೇಕು? ಇದರಿಂದ ಮಕ್ಕಳ ಅಂಕಪಟ್ಟಿಯಲ್ಲಿ ʻಅಮ್ಮನಿಗಿಂತ ಅಮ್ಮಿಯೇ ಡುಮ್ಮಿʼ ಆಗಿ ಕಾಣುವುದಿಲ್ಲವೇ? ಹೀಗೆ ಮಾಡಲು  ಸರ್ಕಾರ ಇವರಿಗೆ ಹೇಳಿದೆಯೇ? ಮತ್ತೆ ಇವರಿಗೆ ಯಾರು ಹೇಳಿದರು? ಅಷ್ಟಕ್ಕೂ ಮೇಲಿನ ಯಾರಾದರೂ  ಹೇಳಿದರು ಎಂದೇ ಇಟ್ಟುಕೊಳ್ಳಿ ಇವರು ಆ ಮಾತನ್ನು ಏಕೆ ಕೇಳಬೇಕು? ಯಾರು ಯಾರೋ  ಹೇಳಿದಂತೆ ಮಾರ್ಕ್ಸು ಕೊಡುವುದಾದರೆ ನಾವೆಲ್ಲ ಮೇಷ್ಟ್ರ ಕೆಲ್ಸ ಮಾಡುವುದಾದರೂ ಯಾತಕ್ಕೆ ಎಂದು ಇವರಿಗೇಕೆ ಅನ್ನಿಸುವುದಿಲ್ಲ? ಎಲ್ಲ ಸಂದರ್ಭಗಳಲ್ಲಿ ಅಧಿಕಾರಿಗಳ ಎದುರು ಮಾತನಾಡುವುದು ಆಗದಿರುಬಹುದು. ಆದರೆ ಕೊನೆಪಕ್ಷ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೂ ಸುಮ್ಮನಿದ್ದರೆ ಹೇಗೆ? ಶಿಕ್ಷಕರಿಗೆ ದೊಡ್ಡ ಅಧಿಕಾರಗಳು ಇರುವುದಿಲ್ಲ ಎಂಬುದು ನಿಜ. ಆದರೆ ಇರುವ ಚಿಕ್ಕಪುಟ್ಟ ಅಧಿಕಾರವನ್ನೂ ಅವರು ಬಳಸಿಕೊಳ್ಳಲು ಅಸಮರ್ಥರಾದರೆ ಅವರಿಗೆ ದೊಡ್ಡ ದೊಡ್ಡ ಅಧಿಕಾರವನ್ನು ಯಾರು ಕೊಡುತ್ತಾರೆ  ಮತ್ತು ಏಕೆ ಕೊಡುತ್ತಾರೆ?  ಇದು ಅವರ ಅಸಹಾಯಕತೆ ಮತ್ತು ಬೇಜವಾಬ್ದಾರಿ ಆಗುವುದಿಲ್ಲವೇ? ತಮ್ಮ ಬೇಜವಾಬ್ದಾರಿಯಿಂದ ಆಗುವ ಅವಮಾನಕ್ಕೆ ಇನ್ಯಾರ ತಲೆಯ ಮೇಲೆ ಗೂಬೆ ಕೂರಿಸಿ ಅವರನ್ನು ಹೊಣೆಮಾಡುಡವುದು ಎಷ್ಟು ಸರಿ? (ಈ ಆಂತರಿಕ ಅಂಕಗಳ ಬಗ್ಗೆಯೇ ಎರಡು ಪ್ರತ್ಯೇಕ ಲೇಖನಗಳು ಇದೇ ಬ್ಲಾಗಿನಲ್ಲಿವೆ. ಹೆಚ್ಚಿನ ವಿವರಕ್ಕೆ ಆಸಕ್ತರು ಅವನ್ನು ಓದಬಹುದು)

ಕೊನೆಯಲ್ಲಿ ಆರಂಭದಲ್ಲಿ ಉಲ್ಲೇಖಿಸಿದ ಗೊರೂರು ಅವರ. ʼಭೂತಯ್ಯನ ಮಗ ಅಯ್ಯುʼ ಸಿನೇಮಾದ ಘಟನೆಯನ್ನು ನೆನಪಿಸಿಕೊಳ್ಳೋಣ. ಅಲ್ಲಿಯ ಹೋಟೆಲ್‌ ಮಾಲೀಕನೆ ಇಲ್ಲಿನ ಸರ್ಕಾರ. ಅಲ್ಲಿ ಊಟಮಾಡಲು ಬಂದವರೆ ಇಲ್ಲಿನ ಶಿಕ್ಷಕರು. ಆ ಘಟನೆಯಲ್ಲಿ ಕೊನೆಗೆ ʻಫುಲ್‌ಮೀಲ್ಸ್‌ʼ ಕೊಡುವ ಒಂದು ಉತ್ತಮ ಯೋಜನೆ ನಿಂತುಹೋಗುತ್ತದೆ. ಇದು ನಿಲ್ಲಲು ಮಾಲೀಕ ಕಾರಣನೇ ಅಥವಾ ಊಟಮಾಡಲು ಬಂದವರು ಕಾರಣವೇ? ಮಾಲೀಕನು ಗ್ರಾಹಕರು ಹೊಟ್ಟೆತುಂಬಾ ಊಟಮಾಡಲಿ ಎಂಬ ಉದಾತ್ತ ಉದ್ದೇಶದಿಂದಲೇ ಆ ಯೋಜನೆಯನ್ನು ತಂದಿರುತ್ತಾನೆ. ಆದರೆ ಊಟಮಾಡುವವರು ಒಬ್ಬರ ಹೆಸರಿನಲ್ಲಿ, ಒಂದೇ ಎಲೆಯಲ್ಲಿ ನಾಲ್ಕು ಜನ ಊಟಮಾಡಿ ಆ ಯೋಜನೆಯನ್ನು ದುರುಪಯೋಗ ಮಾಡಿಕೊಂಡುಬಿಡುತ್ತಾರೆ ಮತ್ತು ಆ ಮೂಲಕ ತಮ್ಮ ಒಳಿತಿಗಾಗಿ ರೂಪಿಸಿದ ಯೋಜನೆಯೊಂದು ತಮ್ಮಿಂದಲೇ ನಿಲ್ಲಲು ಕಾರಣರಾಗುತ್ತಾರೆ. ಇಲ್ಲಿಯೂ ಅಷ್ಟೇ ನಾಲ್ಕು ಜನ ವಿದ್ಯಾರ್ಥಿಗಳಿಗೆ ಕೊಡಬೇಕಾದಷ್ಟು ಅಂಕಗಳನ್ನು ಒಬ್ಬ ವಿದ್ಯಾರ್ಥಿಗೇ ʻಫುಲ್ ಮೀಲ್ಸ್‌ʼ ರೀತಿ ʼಫುಲ್‌ ಮಾರ್ಕ್ಸ್‌ʼ ಕೊಡುವ ಮೂಲಕ ವ್ಯವಸ್ಥೆಯನ್ನು ಹೀಗೆ ಶಿಕ್ಷಕರು ಹಳ್ಳಹಿಡಿಸುತ್ತಾ ಹೋದರೆ ಕೊನೆಗೊಮ್ಮೆ ಅಲ್ಲಿ ಮಾಲೀಕ ʻಪುಲ್‌ ಮೀಲ್ಸ್‌ʼ ಬೋರ್ಡನ್ನೇ ಕಿತ್ತು ಹಾಕಿದಂತೆ ಇಲ್ಲಿಯ ಮಾಲೀಕನು ʻಆಂತರಿಕ ಅಂಕಗಳೇ ಬೇಡʼ ಎಂದು  ಅದನ್ನು ಕಿತ್ತು ಹಾಕಬಹುದು. ಆಗ ಅತ್ತೂ ಕರೆದು ಮಾಡಲಿಕ್ಕೆ ಏನೂ ಇರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಎಚ್ಚರ ಇರಬೇಕಾದದ್ದು ಮುಖ್ಯವಾದದ್ದು.

ಹೀಗೆ ಆಕಾಶದೆತ್ತರಕ್ಕೆ ಏರಿದದರೂ  ಹೃದಯಕ್ಕೆ ಹತ್ತಿರವಾಗದ ಕಾರಣಕ್ಕೆ ಈ ಫಲಿತಾಂಶ ನಮಗೆ ಸಂತೋಷಕೊಡುವ ಶಕ್ತಿಯನ್ನು ಕಳೆದುಕೊಂಡು ʻಶವಶೃಂಗಾರʼವಾಗಿ ತೋರಿದ್ದರಲ್ಲಿ ಮತ್ತು ಅದಕ್ಕೆ ಅನೇಕರು ನೀರಸ ಪ್ರತಿಕ್ರಿಯೆ ತೋರಿದ್ದರಲ್ಲಿ ಆಶ್ಚರ್ಯವೇನಿಲ್ಲ. ʻಫುಲ್‌‌ ಮೀಲ್ಸ್‌ ಕೊಟ್ಟರೂ ದಿಲ್‌ ಖುಷ್ ಆಗಲಿಲ್ಲ ಏಕೆ ಎಂದು ಲೇಖನದ ಶೀರ್ಷಿಕೆಯಲ್ಲಿ ಕೇಳಿಕೊಂಡ ಪ್ರಶ್ನೆಗೆ ಉತ್ತರವಾಗಿ ನಾನು ಇದುವರೆಗೆ ವಿವರವಾಗಿ ಹೇಳಿದ್ದನ್ನೆ  ಕನ್ನಡದ ಹಿರಿಯ ಕವಿ ಕೆ. ಎಸ್.‌ ನರಸಿಂಹಸ್ವಾಮಿ ಅವರ ಕವಿತೆಯ ಕೆಳಗಿನ ನಾಲ್ಕು ಸಾಲುಗಳು ತುಂಬಾ ಅರ್ಥಪೂರ್ಣವಾಗಿ ಧ್ವನಿಸುತ್ತವೆ:

ಊರಿಗೆ ಊರೆ ಹಸೆಯಲಿ ನಿಂತರೆ

ಆರತಿ ಎತ್ತುವರಾರಲ್ಲಿ?

ಸಭೆಗೆ ಸಭೆಯೇ ಭಾಷಣಕೆದ್ದರೆ

ಚಪ್ಪಾಳೆಗೆ ಜನ ಇನ್ನೆಲ್ಲಿ?

 

****

ಡಾ ರಾಜೇಂದ್ರ ಬುರಡಿಕಟ್ಟಿ

Sunday, April 26, 2026

ಇಷ್ಟವಿದ್ದವರು ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದು.

ಅಂಕವ್ಯಸನದ ಅವಾಂತರಗಳು.. (ಭಾಗ-೨)

https://buradikatti.blogspot.com/2026/03/2.html

ಅಂಕವ್ಯಸನದ ಅವಾಂತರಗಳು.. (ಭಾಗ-೧)

https://buradikatti.blogspot.com/2026/02/blog-post.html

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು..

https://buradikatti.blogspot.com/2026/01/blog-post.html

ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?

https://buradikatti.blogspot.com/2025/07/blog-post.html

ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು

https://buradikatti.blogspot.com/2024/11/blog-post_17.html

ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?

https://buradikatti.blogspot.com/2025/08/blog-post.html

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

https://buradikatti.blogspot.com/2024/11/blog-post.html

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ರಜೆ

https://buradikatti.blogspot.com/2025/06/blog-post_5.html

ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು

https://buradikatti.blogspot.com/2024/05/blog-post_31.html

ಎಸ್.ಎಸ್.ಎಲ್.ಸಿ ಫಲಿತಾಂಶಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

https://buradikatti.blogspot.com/2022/05/blog-post.html

ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:

https://buradikatti.blogspot.com/2020/07/blog-post.html

ʻಅರಮನೆʼ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ

https://buradikatti.blogspot.com/2020/07/blog-post_14.html