ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ
ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಈ ವರ್ಷ ಎಲ್ಲಿಲ್ಲದ ಅಡ್ಡಿ ಆತಂಕಗಳು ಎದುರಾಗಿವೆ. ನಿರ್ವಿಘ್ನವಾಗಿಯಲ್ಲದಿದ್ದರೂ ಸವಿಘ್ನವಾಗಿಯಾದರೂ `ಒಟ್ಟಿನಲ್ಲಿ ನಡೆಯಿತು’ ಎಂಬಂತೆ ಈ ಉತ್ಸವವನ್ನು ನೆಡೆಸಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕೆಂದಿರುವ ಗುಲ್ಬರ್ಗ ಜಿಲ್ಲಾಡಳಿತದ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಲಿಕ್ಕೆ ನಾವೆಲ್ಲ ಇನ್ನೊಂದು ವಾರವಾದರೂ ಕಾಯಬೇಕಾಗಿದೆ. ಈ ಅಡ್ಡಪಲ್ಲಕ್ಕಿ ಉತ್ಸವದ ಪರ-ವಿರೋಧ ನಡೆದ ಮತ್ತು ನಡೆಯುತ್ತಿರುವ ಚರ್ಚೆ ಮತ್ತು ವಾಗ್ವಾದಗಳು, ಪ್ರತಿರೋಧ ಹಾಗೂ ಪ್ರತಿಭಟನೆಗಳು ನಮ್ಮ ಸಂವಿಧಾನ ಹಾಗೂ ನಮ್ಮ ಭಾವನೆಗಳ ಹೊಂದಾಣಿಕೆ ಕುರಿತು ನಾವು ಮತ್ತೊಮ್ಮೆ ಚಿಂತಿಸುವಂತೆ ಮಾಡಿವೆ.
ಜೇವರ್ಗಿಯಲ್ಲಿ
ಅಕ್ಟೋಬರ್ ೫ ರಿಂದ ೧೪ರವರೆಗೆ
ನಡೆಸಲು ಉದ್ದೇಶಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಈ ವರ್ಷ ವಿವಾದಕ್ಕೆ
ಸಿಲುಕಲು ಕಾರಣ ಅದೇ ಅವಧಿಯಲ್ಲಿ
ಅಲ್ಲಿನ ಕೆಲವು ಸಂಘಟನೆಗಳು ಮತ್ತು ಸ್ವಾಮೀಜಿಗಳು ಸೇರಿ `ನಿಜಶರಣರ ಜೀವನದರ್ಶನ ಪ್ರವಚನ’ ಎಂಬ ಕಾರ್ಯಕ್ರಮವನ್ನು ಸಂಘಟಿಸಿರುವುದು.
ಅಖಿಲ ಭಾರತ ಕನ್ನಡ ಸಾಹಿತ್ಯ
ಸಮ್ಮೇಳನಗಳು ನಡೆಯುವ ವೇಳೆ ಸಮ್ಮೇಳನದ ಅಧ್ಯಕ್ಷರು
ಸೆಕ್ಯುಲರ್ ಅಲ್ಲವೆಂದೋ ಆಯ್ಕೆಮಾಡಿಕೊಂಡ ಸ್ಥಳ ಸೆಕ್ಯೂಲರ್ ಅಲ್ಲ
ಎಂದೋ ಮತ್ತೆ ಇನ್ನಾವುದೋ ಕಾರಣಕ್ಕೋ ಅದೇ ಸಮಯದಲ್ಲಿ ಕೆಲವು
ವೇಳೆ ಅದೇ ಸ್ಥಳದಲ್ಲಿ ನಡೆಯುವ
ಪರ್ಯಾಯ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಇದು ಒಂದು ರೀತಿಯ
ಪರ್ಯಾಯ ಧಾರ್ಮಿಕ ಸಮ್ಮೇಳನ ಅನ್ನಬಹುದು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದವರೇ ಎದುರುಬದುರು ಆದಂತೆ ಇಲ್ಲಿ ಧಾರ್ಮಿಕ ಕ್ಷೇತ್ರದವರೆ ಎದುರು ಬದುರು ಆಗಿರುವುದು ಒಂದು ಆರೋಗ್ಯಕರ ಬೆಳವಣಿಗೆ
ಎಂದೇ ಹೇಳಬೇಕು.
“ಮನುಷ್ಯರೇ
ಆದ ಸ್ವಾಮಿಗಳನ್ನು ದೇವರಂತೆ ಹೊತ್ತು ಒಯ್ಯುವ (ದೇವರನ್ನು ಉದ್ದಪಲ್ಲಕ್ಕಿಯಲ್ಲಿ ಒಯ್ಯುತ್ತಾರಾದರೂ) ಅಡ್ಡಪಲ್ಲಕ್ಕಿ ಉತ್ಸವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಮಾನವ ಹಕ್ಕುಗಳ
ಉಲ್ಲಂಘನೆಯಾಗಿದೆ ಆದ್ದರಿಂದ ಸರ್ಕಾರ ಅದನ್ನು ನಿಷೇಧಿಸಬೇಕು”
ಎಂಬುದು ಈ ಅಡ್ಡಪಲ್ಲಕ್ಕಿ ಉತ್ಸವವನ್ನು
ವಿರೋಧಿಸುವ ಗುಂಪಿನ ಪ್ರಮುಖ ವಾದವಾದರೆ, “ಈ ಉತ್ಸವ ಪರಂಪರಾಗತವಾಗಿ
ನಡೆದುಕೊಂಡು ಬಂದ ಒಂದು ಧಾರ್ಮಿಕ
ಆಚರಣೆ, ಅದಕ್ಕೆ ಅಡ್ಡಿಪಡಿಸುವುದು ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಆ ಮೂಲಕ ಸಂವಿಧಾನ
ವಿರೋಧಿಯಾಗುತ್ತದೆ” ಎಂಬುದು
ಉತ್ಸವವನ್ನು ಬೆಂಬಲಿಸುವ ಗುಂಪಿನ ವಾದವಾಗಿದೆ.
ಸಂವಿಧಾನದ
ಪ್ರಕಾರ ಯಾವುದು ಸರಿ ಯಾವುದು ತಪ್ಪು
ಎಂಬುದು ನಿರ್ಣಯವಾಗಬೇಕಾದದ್ದು ನ್ಯಾಯಾಲಯದಲ್ಲಿ. ಅದನ್ನು ನಿರ್ಧಿಷ್ಟವಾಗಿ ಸ್ಪಷ್ಟಪಡಿಸಿಕೊಳ್ಳುವುದು ತುರ್ತಾಗಿ ಸಾಧ್ಯವಿಲ್ಲವಾದ್ದರಿಂದ ಎರಡೂ ಗುಂಪುಗಳ ನಡುವೆ
ಶಾಂತಿ ಸಂಧಾನ ನಡೆಸಿ ಕೆಲವು ಷರತ್ತುಗಳನ್ನು ವಿಧಿಸಿ ಗುಲ್ಬರ್ಗ ಜಿಲ್ಲಾಧಿಕಾರಿಗಳು ಈ ಅಡ್ಡಪಲ್ಲಕ್ಕಿ ಉತ್ಸವವನ್ನು
ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಅವರು ವಿಧಿಸಿರುವ ಪ್ರಮುಖ
ಷರತ್ತುಗಳು ಹೀಗಿವೆ:
ರಂಭಾಪುರಿ
ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಕೇವಲ ಎರಡು ನೂರು ಮೀಟರ್ವರೆಗೆ ಮಾತ್ರ ಸಾಂಕೇತಿಕವಾಗಿ ನಡೆಯಬೇಕು. ಉತ್ಸವದಲ್ಲಿ ಗಾಂಧೀಜಿ, ಬಸವಣ್ಣ, ಮಾದಾರ ಚೆನ್ನಯ್ಯ ಮುಂತಾದ ವೇಷಧಾರಿಗಳಿಂದ `ನಜರ್’ ಸ್ವೀಕರಿಸುವ (ನಮಸ್ಕಾರ ಮಾಡುವುದು) ಸಂಪ್ರದಾಯ ಕೈಬಿಡಬೇಕು. ಬಸವತತ್ವ ಅನುಯಾಯಿಗಳು (ಅಂದರೆ ಈ ಅಡ್ಡಪಲ್ಲಕ್ಕಿ ವಿರೋಧಿ
ಗುಂಪು) ಸಂಜೆ ೬.೦೦
ರಿಂದ ೭.೩೦ ರವರೆಗೆ
ಪ್ರವಚನ ನೀಡಬೇಕು. ಸಂಜೆ ೭.೩೦
ರಿಂದ ೧೦.೩೦ ರವರೆಗೆ
ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಬೇಕು.
ಈ ಷರತ್ತುಗಳ ಜೊತೆಗೆ ಕೊನೆಯಲ್ಲಿ ಎರಡೂ ಗುಂಪಿನವರಿಗೆ ಅನ್ವಯಿಸುವಂತೆ
ಯಾರೂ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂಬುದು
ಸಹಜವಾಗಿ ನೀಡಲಾಗಿರುವ ಎಚ್ಚರಿಕೆ ಇದೆ.
ಮುಖ್ಯವಾಗಿ
ಇಲ್ಲಿ ನಡೆಯುತ್ತಿರುವ ಸಂಘರ್ಷ ಶೈವ-ವೀರಶೈವ-ಲಿಂಗಾಯತ
ಮುಂತಾಗಿ ಕರೆಯಲಾಗುತ್ತಿರುವ, ಇವುಗಳ ಮಧ್ಯೆ ಒಂದಿಷ್ಟು ಭಿನ್ನತೆಗಳಿದ್ದಾಗ್ಯೂ ಸರ್ಕಾರಿ ಲೆಕ್ಕದಲ್ಲಿ ಒಂದೇ ಜಾತಿಯಾಗಿ ಗುರುತಿಸಲಾಗುತ್ತಿರುವ
ಧರ್ಮದ ಸ್ಥಾಪಕರ ಕುರಿತಾದದ್ದು. ಒಂದು ವಾದದ ಪ್ರಕಾರ
ವೀರಶೈವ ಧರ್ಮ ರಂಭಾಪುರಿ ಸೇರಿದಂತೆ
ಐದು ಪೀಠಗಳಿಂದ ಪ್ರಾರಂಭವಾಯಿತು. ಈ ಪೀಠಗಳನ್ನು ಪಂಚಪೀಠಗಳೆಂದೂ
ಇವುಗಳನ್ನು ಪ್ರತಿನಿಧಿಸುವ ಸ್ವಾಮಿಗಳನ್ನು ಪಂಚಪೀಠಾಧೀಶ್ವರರೆಂದು ಕರೆಯಲಾಗುತ್ತಿದೆ. ಇವರ ಮಠಗಳಿಗೆ ನಡೆದುಕೊಳ್ಳುವ
ವೀರಶೈವ ಧರ್ಮದ ಭಕ್ತರನ್ನು `ಪಂಚಮಸಾಲಿಗಳು’
ಎಂದು ಸಾಮಾನ್ಯವಾಗಿ ಎಂದು ಗುರುತಿಸಲಾಗುತ್ತದೆ. ಇವರ ಪ್ರಕಾರ
ಬಸವಣ್ಣ ಈ ಧರ್ಮದ ಸ್ಥಾಪಕ
ಅಲ್ಲ. ಆತ ಒಂದಿಷ್ಟು ಸುಧಾರಣೆ
ಮಾಡಿದ ವ್ಯಕ್ತಿಮಾತ್ರ.
ಆದರೆ
ಬಸವತತ್ವ ಪ್ರತಿಪಾದಕರ ಪ್ರಕಾರ ಬಸವಣ್ಣನೇ ಈ ಲಿಂಗಾಯತ -ವೀರಶೈವ
ಧರ್ಮದ ಸ್ಥಾಪಕನೇ ಹೊರತು ಪಂಚಪೀಠಾಧೀಶ್ವರರಲ್ಲ. ಹಿಂದೂ ಧರ್ಮದಿಂದ ಸಿಡಿದೆದ್ದ ವಿಚಾರಧಾರೆಗಳು ಹೇಗೆ ಸ್ವತಂತ್ರವಾಗಿ ಜೈನ,
ಬೌದ್ಧ ಧರ್ಮಗಳಾದವೋ ಹಾಗೆಯೇ ಈ ಧರ್ಮ ಕೂಡ
ಒಂದು ಸ್ವತಂತ್ರ ಅಸ್ತಿತ್ವ ಉಳ್ಳದ್ದೇ ಹೊರತು ಹಿಂದೂ ಧರ್ಮದ ಉಪಪಂಗಡವಲ್ಲ ಎಂದುದು ಇವರ ವಾದ. ವಚನಸಾಹಿತ್ಯವನ್ನು
ಧರ್ಮಗ್ರಂಥವೆಂದು ನಂಬುವ, ಇಷ್ಟಲಿಂಗವನ್ನು ಪೂಜಿಸುವ ಸ್ಥಾವರಕ್ಕಿಂತ ಜಂಗಮಕ್ಕೆ ಆದ್ಯತೆ ನೀಡುವ ಲಿಂಗಾಯತ-ವೀರಶೈವ ಧರ್ಮದ ಈ ಭಕ್ತರನ್ನು ಸಾಮಾನ್ಯವಾಗಿ
`ಸಾದರು’ ಎಂದು
ಗುರುತಿಸಲಾಗುತ್ತದೆ.
ವೀರಶೈವ
ಮತ್ತು ಲಿಂಗಾಯತ ಧರ್ಮಗಳು ಬೇರೆ ಬೇರೆ ಎನ್ನುವಾಗ
ಈ ಸಮಸ್ಯೆ ಇಲ್ಲ. ಪಂಚಪೀಠಾಧೀಶ್ವರರು ವೀರಶೈವ ಧರ್ಮದ ಸ್ಥಾಪಕರು, ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂಬ ಸರಳ ಸೂತ್ರದಿಂದ
ಇದನ್ನು ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಲೆಕ್ಕದಲ್ಲಿ
ಈ ಶೈವ-ವೀರಶೈವ-ಲಿಂಗಾಯತ
ಎಲ್ಲವೂ ಸೇರಿ ಒಂದು ಜಾತಿಯಾಗಿ
ಪರಿಗಣಿತವಾಗಿರುವುದರಿಂದ ಮತ್ತು ಈ ಜಾತಿಗೆ ಧಾರ್ಮಿಕ
ಆಚರಣೆಗಳ ಜೊತೆಗೆ ರಾಜಕೀಯ ಸಾಮಾಜಿಕ ಆಯಾಮಗಳೂ ಇರುವುದರಿಂದ ಸಮಸ್ಯೆ ಹೆಚ್ಚು ಬಿಗಡಾಯಿಸಿದೆ. ಈ ಮಧ್ಯೆ ವೀರಶೈವರು
ಮತ್ತು ಲಿಂಗಾಯತರು ಬೇರೆ ಬೇರೆ ಎಂದು
ಪರಿಗಣಿಸಬೇಕು ಎನ್ನುವ ಮತ್ತು ಅದಕ್ಕೆ ವಿರುದ್ಧವಾಗಿ ಇವರೆಲ್ಲರನ್ನೂ ಒಂದೇ ಎಂದು ಪರಿಗಣಿಸಬೇಕು
ಎಂಬ ಒತ್ತಡಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ
ಮೇಲೆ ನಡೆಯುತ್ತಲೇ ಇವೆ. ಇದು ಕೇವಲ
ಒಂದು ಧರ್ಮದ ಅನುಯಾಯಿಗಳ ನಡುವಿನ ತಿಕ್ಕಾಟವಾಗಿದ್ದರೆ ಇದನ್ನು ಇಲ್ಲಿ ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ಅದಕ್ಕೆ ಅದರಾಚೆಗೂ
ಸಾಮಾಜಿಕ ಮಹತ್ವವಿರುವುದರಿಂದ ಚರ್ಚೆ ಅವಶ್ಯವಾಗಿದೆ.
ರಂಭಾಪುರಿ
ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಬಂಧ ಗುಲ್ಬರ್ಗ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಸೂಕ್ಷ್ಮವಾಗಿ ನೋಡಿದರೆ ಈ ಷರತ್ತುಗಳು ಬಹುವಾಗಿ
ಅಡ್ಡಪಲ್ಲಕ್ಕಿ ಪರವಾದ ಗುಂಪಿಗೇ ವಿಧಿಸಿರುವ ಷರತ್ತುಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ರಂಭಾಪುರಿ ಶ್ರೀಗಳು ಏನು ಮಾಡಬೇಕು ಎನ್ನುವುದಕ್ಕಿಂತ
ಏನು ಮಾಡಬಾರದು ಎಂಬುದನ್ನೇ ಒತ್ತುಕೊಟ್ಟು ಹೇಳಲಾಗಿದೆ. ನಮ್ಮದು
ಇತ್ತ ಸಂಪೂರ್ಣ ಧಾರ್ಮಿಕವೂ ಅಲ್ಲದ ಅತ್ತ ಸಂಪೂರ್ಣ ಸೆಕ್ಯುಲರ್
ಕೂಡ ಅಲ್ಲದ ಆದರೆ ಈ ಎರಡೂ
ಅಂಶಗಳನ್ನು ಒಳಗೊಂಡ ಸಂಕೀರ್ಣ ಸಮಾಜೋರಾಜಕೀಯ ವ್ಯವಸ್ಥೆ. ಹಾಗಾಗಿ ನಮ್ಮ ಧಾರ್ಮಿಕ ಭಾವನೆಗಳು
ಮತ್ತು ನಮ್ಮ ಸಂವಿಧಾನದ ಆಶಯಗಳ
ನಡುವೆ ಘರ್ಷಣೆ ಆಗಾಗ ಇಲ್ಲಿ ಸಾಮಾನ್ಯ.
ಭಾರತ
ಸಂವಿಧಾನ ನೀಡಿದ ಹಕ್ಕುಗಳಲ್ಲಿ ಬಹುಶಃ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಷ್ಟು ಬೇರೆ ಯಾವುದೇ ಹಕ್ಕನ್ನು
ನಾವು ದುರುಪಯೋಗ ಪಡಿಸಿಕೊಂಡಿಲ್ಲವೇನೋ. ಅನೇಕ ವೇಳೆ ಮಾನವ
ಹಕ್ಕುಗಳ ಉಲ್ಲಂಘನೆಯನ್ನೂ ಈ ಹಕ್ಕಿನ ತೆಕ್ಕೆಯಲ್ಲಿ
ಬಚ್ಚಿಟ್ಟುಕೊಂಡು ಸಮರ್ಥಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ
ಸ್ವಾಮಿಗಳು ಕೊಡುವ ಒಂದು ಸಾಮಾನ್ಯ ಉತ್ತರ
ಎಂದರೆ “ಇದು ಭಕ್ತರ ಇಚ್ಚೆಯ
ಮೇರೆಗೆ ನಡೆಯುತ್ತಿದೆ; ನನಗಾಗಿ ಅಲ್ಲ” ಎಂಬುದು. ಹುಬ್ಬಳ್ಳಿಯಿಂದ ವರದಿಯಾದಂತೆ ಈ ಉತ್ಸವದ ಬಗ್ಗೆ
ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ
ಇದನ್ನೇ ಹೇಳಿದ್ದಾರೆ: “ದಸರಾ ದರ್ಬಾರ್ ವೀರಶೈವ
ಭಕ್ತರ ಒತ್ತಾಸೆಯಿಂದ ನಡೆಯುತ್ತಿದೆಯೇ ಹೊರತು ನನ್ನ ಒತ್ತಾಸೆಯಿಂದಲ್ಲ ಹಿಂದೆ
ನಡೆಯದ ಹೋರಾಟಗಳು ಈಗ ಏಕೆ?”
ಕೇವಲ
ಹಿಂದಿನಿಂದ ನಡೆದು ಬಂದಿದೆ ಎಂಬ ಒಂದೇ ಕಾರಣಕ್ಕೆ
ನಾವು ಯಾವುದನ್ನೂ ಒಪ್ಪಿಕೊಳ್ಳಬೇಕಾಗಿಲ್ಲ. ಯಾವುದೇ ಒಂದು ಧರ್ಮ ಅದು
ಕಾಲಕ್ಕೆ ತಕ್ಕಂತೆ ತನ್ನೊಳಗೆ ಸುಧಾರಣೆ ತಂದುಕೊಳ್ಳದೇ ಹೋದರೆ ಅವನತಿಯ ಹಾದಿ ಹಿಡಿಯುತ್ತದೆ. ನಿಂತನೀರು
ಗಂಗಾಜಲವೇ ಆದರೂ ಕೆಲದಿನಗಳ ನಂತರ
ಕುಡಿಯಲು ಯೋಗ್ಯವಾಗದೇ ಹೋಗುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು
ನಿಜ. ಆದರೆ ಬುದ್ಧಿಯನ್ನು ಒತ್ತೆಯಿಟ್ಟು
ಭಾವನೆಗಳನ್ನು ಗೌರವಿಸುವ ಅವಿವೇಕಕ್ಕೆ ನಾವು ಹೋಗುವ ಅವಶ್ಯಕತೆಯಿಲ್ಲ.
ಏಕೆಂದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ
ಎಂಬ ನೆಪವೊಡ್ಡಿ ನಾವು ನಮ್ಮ ವೈದಿಕ
ಮಠಗಳಲ್ಲಿ ನಡೆಯುವ ಪಂಕ್ತಿಭೇದವನ್ನೂ ಅಷ್ಟೇ ಏಕೆ ಕುಕ್ಕೆ ಸುಬ್ರಹ್ಮಣ್ಯದ
ಎಂಜಲೆಲೆ ಮೇಲಿನ ಹೊರಳಾಟದ ಮಡೆಸ್ನಾನವನ್ನೂ ಸಮರ್ಥಿಸಬಹುದಾದ ಅಪಾಯವಿದೆ.
ರಂಭಾಪುರಿ
ಶ್ರೀಗಳ ಆಚರಣೆ ಪ್ರಜಾಪ್ರಭುತ್ವ ವಿರೋಧಿಯಾದ ರಾಜಪ್ರಭುತ್ವದ ಮಾದರಿಯಾದ ಅನೇಕ ಅನಿಷ್ಟ ಚಟುವಟಿಕೆಗಳನ್ನು
ಹೊಂದಿರುವುದು ಎಲ್ಲರಿಗೂ ಎದ್ದುಕಾಣುವ ವಿಷಯ. ಬಸವಣ್ಣ ಮತ್ತು ಗಾಂಧೀಜಿಯ ವೇಷಧಾರಿಗಳು ಶ್ರೀಗಳಿಗೆ ಬಗ್ಗಿ ನಮಸ್ಕರಿಸುವುದು, ಜೀವಂತವಿರುವ ವ್ಯಕ್ತಿ ತನ್ನ ಸಹಮಾನವರ ಮೇಲೆ
ಸವಾರಿ ಮಾಡುವುದು ಏನನ್ನು ಸೂಚಿಸುತ್ತವೆ? ಕಾರ್ಲ್ಮಾರ್ಕ್ಸ್
ಎಂಬ ಮೇಧಾವಿ ಈ ಜಗತ್ತಿಗೆ ಬರುವ
ಎಷ್ಟೋ ನೂರು ವರ್ಷಗಳ ಹಿಂದೆಯೇ
ಜಗತ್ತಿಗೆ ಕಾಯಕದ ಮಹತ್ವವನ್ನೂ, ಮನುಷ್ಯರ ನಡುವಿನ ಸಮಾನತೆಯನ್ನೂ ಬಸವನ ನೇತೃತ್ವದ ಶರಣರು
ಪ್ರತಿಪಾದಿಸಿದ್ದರು. ಇಂದು ವೀರಶೈವ ಸಮುದಾಯದ
ಅನುಯಾಯಿಗಳ ಆಚೆಯೂ ಆ ಧರ್ಮದ ಆಶಯಗಳು
ಏನಾದರು ಹರಡಿಕೊಂಡಿದ್ದರೆ ಅದಕ್ಕೆ ಬಸವಾದಿ ಶರಣರು ಮೂಲ ಕಾರಣ. ಧರ್ಮ
ಮತ್ತು ಸಾಹಿತ್ಯಗಳನ್ನು ಸಮಾಜಪರಿವರ್ತನೆಯ ಪ್ರಬಲ ಅಸ್ತ್ರವಾಗಿ ಅವರಷ್ಟು ಸಮರ್ಥವಾಗಿ ಬಳಸಿಕೊಂಡವರು ಜಗತ್ತಿನಲ್ಲಿಯೇ ವಿರಳ. ಅವರ ತಾತ್ವಿಕತೆಯನ್ನು ಆಚರಣೆಗಳನ್ನು
ಅವರ ನಂತರ ಆ ಧರ್ಮವನ್ನು
ಪ್ರತಿನಿಧಿಸುವ ಮಠಾಧೀಶರು ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ನಮ್ಮ ಸಮಾಜದ ಹತ್ತು
ಹಲವು ಸಮಸ್ಯೆಗಳು ಇಂದು ಇರುತ್ತಲೇ ಇರಲಿಲ್ಲ.
ಶಿವನನ್ನು ಮತ್ತು ಶವವನ್ನು ಮಾತ್ರ ಮನುಷ್ಯರು ಹೋರುವುದು ನಾನು ತಿಳಿದುಕೊಂಡಂತೆ ವೀರಶೈವ-ಲಿಂಗಾಯತ ಧರ್ಮದಲ್ಲಿ ಗೌರವದ ಸಂಕೇತವೇ ಹೊರತು ಜೀವಂತವಿರುವ ಸ್ವಾಮಿಗಳನ್ನು ಅಲ್ಲ. ಇದನ್ನು ಅರ್ಥಮಾಡಿಕೊಂಡ ಅನೇಕ ಸ್ವಾಮಿಗಳು ಇಂತಹ
ಆಚರಣೆಗಳು ಹಿಂದೆ ಇದ್ದರೂ ಅವನ್ನು ತಾವೇ ಕೈಬಿಟ್ಟಿದ್ದಾರೆ. ರಂಭಾಪುರಿ
ಶ್ರೀಗಳೂ ಅದನ್ನು ಬಿಟ್ಟು ದೊಡ್ಡವರಾಗಬೇಕು. ಭಕ್ತರು ಹಠಮಾಡಿದರೆ ಅವರಿಗೆ ಶ್ರೀಗಳೇ ತಿದ್ದಿ ಹೇಳಬೇಕು.
ಕಣ್ಣುಮುಚ್ಚಿಕೊಂಡು
ಆಶೀರ್ವಾದ ಮಾಡುವ ಸ್ವಾಮಿಗಳಿಗಿಂತ ಕಣ್ಣುತೆರೆಸುವ ಕೆಲಸ ಮಾಡುವ ಸ್ವಾಮಿಗಳ
ಅವಶ್ಯಕತೆ ನಮ್ಮ ಸಮಾಜಕ್ಕೆ ಹಿಂದಿಗಿಂತಲೂ
ಇಂದು ಹೆಚ್ಚಿದೆ. ಅಂಥವರು ನಮ್ಮ ಸಮಾಜ ಪರಿವರ್ತನೆಯಲ್ಲಿ
ಅತ್ಯಂತ ಮಹತ್ವದ ಪಾತ್ರವಹಿಸಬಲ್ಲರು. ಏಕೆಂದರೆ ಭಾರತದಲ್ಲಿ ಒಬ್ಬ ಸಾಹಿತಿ ಅಥವಾ
ಒಬ್ಬ ರಾಜಕಾರಣಿಯ ಹಿಂದೆ ಇರುವುದಕ್ಕಿಂತ ಹೆಚ್ಚು ಜನ ಒಬ್ಬ ಧರ್ಮಗುರುವಿನ
ಹಿಂದೆ ಇರುತ್ತಾರೆ. ಈ ನಿಟ್ಟಿನಲ್ಲಿ ರಂಭಾಪುರಿ
ಶ್ರೀಗಳು ತಾವೇ ಮುಂದೆ ನಿಂತು
ಈ ಆಚರಣೆಯನ್ನು ನಿಲ್ಲಿಸುವ, ಆ ಮೂಲಕ ಎಲ್ಲ
ಮಾನವಪ್ರೇಮಿಗಳ ಗೌರವಕ್ಕೆ ಪಾತ್ರರಾಗಬೇಕು. ಇಲ್ಲದೇ ಹೋದರೆ ಈ ವರ್ಷ ೨೦೦
ಮೀಟರ್ಗೆ ಇಳಿದ ಅಡ್ಡಪಲ್ಲಕ್ಕಿ
ಉತ್ಸವ ಮುಂದಿನ ವರ್ಷ ೧೦೦ ಮೀಟರ್ಗೆ ಅದರ ಮುಂದಿನ
ವರ್ಷ ೫೦ ಮೀಟರ್ಗೆ
ಹೀಗೆ ಇಳಿಯುತ್ತಾ ಹೋಗಿ ಕೊನೆಗೆ ಸ್ವಾಮಿಗಳ
ಸಹಕಾರವಿಲ್ಲದೆಯೂ ನಿಂತುಹೋಗಬಹುದು!
ಡಾ. ರಾಜೇಂದ್ರ ಬುರಡಿಕಟ್ಟಿ
ಅಕ್ಟೋಬರ್,
2013
ಗಮನಿಸಿ: ಈ ಬರೆಹ ಬರೆದದ್ದು 2013ರ ಅಕ್ಟೋಬರ್ ಮೊದಲ ವಾರದಲ್ಲಿ. ಆದರೆ ಇದನ್ನು ಈ ಬ್ಲಾಗಿನಲ್ಲಿ ಹಾಕಿದ್ದು 2026ರ ಮೇ ಮೊದಲ ವಾರದಲ್ಲಿ. ಇಲ್ಲಿ ಬಳಕೆಯಾಗಿರುವ ಚಿತ್ರವು ಈ ಲೇಖನದಲ್ಲಿ ಉಲ್ಲೇಖವಾಗಿರುವ ಜೇವರ್ಗಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ್ದು. ರಾಬು
*****






