Tuesday, June 16, 2026

ಇಂದಿರಾ ಲಂಕೇಶ್‌ ಅವರ ʻಹುಳಿಮಾವು ಮತ್ತು ನಾನುʼ ಕೃತಿಯಿಂದ ಆಯ್ದ ಕೆಲವು ಪ್ರಸಂಗಗಳು..

ಇಂದಿರಾ ಲಂಕೇಶ್‌ ಅವರ ʻಹುಳಿಮಾವು ಮತ್ತು ನಾನುʼ ಕೃತಿಯಿಂದ ಆಯ್ದ ಕೆಲವು ಪ್ರಸಂಗಗಳು..


ಕನ್ನಡದಲ್ಲಿ ಕೇವಲ ಒಂದೇ ಒಂದು ಕೃತಿ ಬರೆದು ʻಲೇಖಕಿʼ ಎಂದು ಗುರುತಿಸಿಕೊಂಡ ಮೂವರು ಪ್ರಮುಖರೆಂದರೆ ಒಬ್ಬರು ತೇಜಸ್ವಿಯವರ ಹೆಂಡತಿ ರಾಜೇಶ್ವರಿ. ಇನ್ನೊಬ್ಬರು ಕುವೆಂಪು ಅವರ ಮಗಳು ತಾರಿಣಿ ಚಿದಾನಂದ. ಮತ್ತೊಬ್ಬರು ಲಂಕೇಶರ ಪತ್ನಿ ಇಂದಿರಾ ಲಂಕೇಶ್.‌ ಈ ಮೂವರು ಲೇಖಕಿಯರು ತಮ್ಮ ಕೃತಿಗಳಿಗೆ ಆಯ್ದುಕೊಂಡ ವಿಷಯವಸ್ತುಗಳೇ ಅವರನ್ನು ತಮ್ಮ ಒಂದೇ ಕೃತಿಯಿಂದ ಅವರಿಗೆ ʼಲೇಖಕಿʼಸ್ಥಾನವನ್ನು ನೀಡಿದವೋ ಅಥವಾ ಅವರ ಬರೆವಣಿಗೆಗೆ ಬೇರೆ ಲೇಖಕಿಯರಲ್ಲಿ ಕಾಣದ ಯಾವುದಾದರೂ ವಿಶೇಷತೆ ಇತ್ತೆ ಎಂಬುದು ಬೇರೆಯದೇ ಆದ ಚರ್ಚೆಯ ವಿಷಯ. ಇಲ್ಲಿ ಇಷ್ಟು ಮಾತ್ರ ಹೇಳಬಹುದು. ತಾರಿಣಿಯವರು ಕುವೆಂಪು ಅವರ ಮಗಳಾಗಿ ತಮ್ಮ ಅನುಭವ ದಾಖಲಿಸಿದ್ದಾಗಲೀ, ರಾಜೇಶ್ವರಿ ಅವರು ತೇಜಸ್ವಿಯವರ ಹೆಂಡತಿಯಾಗಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾಗಲೀ ಓದುವಾಗ ಓದುಗರಿಗೆ ಆಗದ ಒಂದು ವಿಶಿಷ್ಟ ಅನುಭವ ಇಂದಿರಾ ಲಂಕೇಶರ ಪುಸ್ತಕ ಓದಿದಾಗ ಆಗುತ್ತದೆ. ಏಕೆಂದರೆ ತೇಜಸ್ವಿ ಅವರ ಬದುಕಾಗಲೀ ಕುವೆಂಪು ಅವರ ಬದುಕಾಗಲೀ ಲಂಕೇಶರ ಬದುಕಿನಷ್ಟು ಸಂಕೀರ್ಣವಾಗಿರಲಿಲ್ಲ. ಹಾಗಾಗಿಯೇ ಇಂದಿರಾ ಅವರಿಗೆ ಆದ ಅನೇಕ ಕಹಿ ಅನುಭವಗಳು ಉಳಿದಿಬ್ಬರಿಗೆ ಆಗಲಿಲ್ಲ ಅನಿಸುತ್ತದೆ.

ಹೀಗೆ ಕನ್ನಡ ಸಾಹಿತ್ಯದ, ಸಂಕೀರ್ಣ ವ್ಯಕ್ತಿತ್ವದ ಮೇರು ಪ್ರತಿಭೆಯಾದ ಲಂಕೇಶರ ಜೊತೆ ಸಂಸಾರ ಹೂಡಿದ ಇಂದಿರಾ ತಮ್ಮ ಆರಂಭದ ಉತ್ಸಾಹದ ಜೀವನ, ದಾಂಪತ್ಯದಲ್ಲಿ ಉಂಟಾದ ಬಿರುಕು, ಅದಕ್ಕೆ ಕಾರಣ ಮತ್ತು ಅದರ ಪರಿಣಾಮ, ಅದರಿಂದ ಅವರು ಅನುಭವಿಸಿದ ನೋವು ಸಂಕಟ,  ಎಲ್ಲವನ್ನು ತಮ್ಮ ಆತ್ಮಕಥೆ ʻಹುಳಿಮಾವು ಮತ್ತು ನಾನುʼ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ನಮ್ಮನ್ನು ಅಗಲಿದ ಈ ಸಂದರ್ಭದ ಓದಿಗಾಗಿ ಆ ಕೃತಿಯ ಆಯ್ದ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ. ಈ ಆಯ್ದ ಭಾಗಗಳು ಪ್ರಾತಿನಿಧಿಕವಾದವೇನಲ್ಲ. ನನಗೆ ಮನಸ್ಸಿಗೆ ತಟ್ಟಿದ ಭಾಗಗಳು ಮಾತ್ರ ಎಂಬುದನ್ನು ಓದುಗರು ಗಮನಿಸಲು ಕೋರುವೆ. – ಡಾ ರಾಜೇಂದ್ರ ಬುರಡಿಕಟ್ಟಿ   

*****

ಮದುವೆಗೆ ಮೊದಲು……..

ನನ್ನ ಹೆಸರು ಇಂದಿರಾ. ನನ್ನ ಅಪ್ಪಯ್ಯನಿಗೆ ಜವಾಹರಲಾಲ್‌ ನೆಹರೂ ಅವರ ಬಗ್ಗೆ ಅಪಾರ ಅಭಿಮಾನ. ಅದಕ್ಕೇ ನೆಹರೂ ಅವರ ಮಗಳ ಹೆಸರನ್ನೇ ನನಗೆ ಇಟ್ಟರು.

***

ನನ್ನ ತಮ್ಮ ಹುಟ್ಟಿದ ಹಲವು ತಿಂಗಳಲ್ಲೇ ನಮ್ಮ ತಾಯಿ ತೀರಿಕೊಂಡಿದ್ದರು. ನನಗಾಗ ಎರಡೂವರೆ ವರ್ಷ ವಯಸ್ಸಾಗಿದ್ದರಿಂದ ನನ್ನ ಅಮ್ಮನ ನೆನಪೂ ನನಗಿಲ್ಲ. ಕೆಲಸದ ಮೇಲೆ ಅಪ್ಪಯ್ಯ ಸದಾ ಊರೂರು ಸುತ್ತುತ್ತಿದ್ದರಿಂದ ಆಗಿನ್ನೂ ಚಿಕ್ಕವರಾಗಿದ್ದ ನನ್ನನ್ನು ಮತ್ತು ನನ್ನ ತಮ್ಮನನ್ನು ನಮ್ಮ ಅಜ್ಜಿ ಮನೆಯಲ್ಲಿ ಅಪ್ಪಯ್ಯ ಬಿಟ್ಟಿರಬಹುದಿತ್ತು. ಆದರೆ ನಮ್ಮ ಅಪ್ಪಯ್ಯನಿಗೆ ನಮ್ಮನ್ನೆಲ್ಲಾ ಚೆನ್ನಾಗಿ ಓದಿಸುವ ಆಸೆ. ಆದ್ದರಿಂದ ದಾವಣಗೆರೆಯಲ್ಲಿ ಮನೆ ಮಾಡಿದ್ದರು. ಮನೆಯನ್ನು ನೋಡಿಕೊಳ್ಳಲು ಕೆಲಸದವರನ್ನೂ ನೇಮಿಸಿದ್ದರು. ಅಮ್ಮ ತೀರಿಕೊಂಡಾಗ ನಾವು ಚಿಕ್ಕವರಾಗಿದ್ದರಿಂದ ನಮ್ಮ ಅಜ್ಜಿ ಚೆನ್ನಮ್ಮ ನನಗೆ ಐದು ವರ್ಷ ಆಗುವವರೆಗೆ ನನ್ನನ್ನು ಮತ್ತು ನನ್ನ ತಮ್ಮನನ್ನು ಕುಸ್ಕೂರಿನಲ್ಲಿಯೇ (ಶಿಕಾರಿಪುರ ತಾ) ಸಾಕಿದ್ದರು. ಆ ನಂತರ ಅಪ್ಪಯ್ಯ ನಮ್ಮನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಬಂದು ಸ್ಕೂಲಿಗೆ ಸೇರಿಸಿ ಮನೆ, ಮಕ್ಕಳು ಮತ್ತು ಆಫೀಸಿನ ಜವಾಬ್ದಾರಿಗಳನ್ನೆಲ್ಲ ನಿಭಾಯಿಸುತ್ತಿದ್ದರು.

***

ಒಂದುದಿನ ಮಧ್ಯಾಹ್ನದ ಊಟಕ್ಕೆ ಹುಡುಗ ಬರುತ್ತಾನೆ ಎಂದು ನಿಗಧಿಯಾಯಿತು. ಅದನ್ನು ಕೇಳಿ ಬಾಡಿಗೆ ಮನೆಯಲ್ಲಿದ್ದವರಿಗೆಲ್ಲ ಸಂಭ್ರಮ. ಎಲ್ಲರೂ ಸೇರಿ ನನಗೆ ಡ್ರೆಸ್‌ ಮಾಡಿದರು. ಆಗ ʼನವರಂಗ್‌ʼ ಎಂಬ ಹಿಂದಿ ಸಿನಿಮಾ ಬಿಡುಗಡೆಯಾಗಿ ಅದರಲ್ಲಿ ನಟಿ ಜಯಶ್ರೀ ಉಟ್ಟಿದ್ದ ಬಣ್ಣಬಣ್ಣದ ಸೀರೆ ತುಂಬಾ ಫ್ಯಶನ್‌ ಆಗಿತ್ತು. ಅಕ್ಕನ ಹತ್ತಿರ ಅಂತಹದ್ದೇ ಶಿಫಾನ್‌ ಸೀರೆ ಇತ್ತು. ಅದನ್ನು ನನಗೆ ಉಡಿಸಿ, ಎರಡು ಜಡೆ ಹೆಣೆದು ಅಲಂಕಾರ ಮಾಡಿದರು.

ನನ್ನನ್ನು ನೋಡಲು ಲಂಕೇಶಪ್ಪನವರು ಬಂದರು. ಆಗ ನಾನು ಸಣಕಲು ಕಡ್ಡಿ. ಆದರೆ ಅವರು ಗಟ್ಟಿಮುಟ್ಟಾದ ಆಳು. ನನ್ನ ಮೂಗು ಮೊಂಡ. ಅವರದ್ದು ತುಂಬಾ ನೀಟಾದ ಮೂಗು. ನನಗಿಂತ ಬೆಳ್ಳಗಿದ್ದರು. ಅವರಿಗೆ ಹೋಲಿಸಿದರೆ ನಾನು ಏನೇನೂ ಅಲ್ಲ. ನನ್ನ ಅಕ್ಕ ʼಹುಡುಗ ಎಷ್ಟು ಚೆನ್ನಾಗಿದ್ದಾನೆ. ಇದೇನು ಆಗುವ ಮಟ್ಟಿಗೆ ಕಾಣುವುದಿಲ್ಲʼ ಎಂದಳು ಮಾರನೆಯ ದಿನ ಬೆಳಿಗ್ಗೆ ತಿಂಡಿಗೆ ಮತ್ತೆ ಬರುವುದಾಗಿ ಹೇಳಿ ಅವರೆಲ್ಲ ಹೊರಟರು.

ಮರುದಿನ ಬೆಳಿಗ್ಗೆ ವೈ ಎನ್‌ ಕೆ, ಸುಮತೀಂದ್ರ ನಾಡಿಗ್‌ ಮತ್ತು ಈಶ್ವರಪ್ಪನವರ ಜೊತೆಗೆ (ಈಶ್ವರಪ್ಪನವರು ಲಂಕೇಶರು ಹೆಣ್ಣು ನೋಡಲು ಹೋಗುವ ಮೊದಲು ಅವರ ಪರವಾಗಿ ಹೋಗಿ ಹೆಣ್ಣು ನೋಡಿಕೊಂಡುಬಂದು ಆಗಬಹುದು ಎಂದು ಲಂಕೇಶರಿಗೆ ಶಿಫಾರಸ್ಸು ಮಾಡಿದ್ದ ಅವರ ಚಿಕ್ಕಪ್ಪನ ಮಗ) ಲಂಕೇಶಪ್ಪ ಬಂದರು. ಅವತ್ತು ಯಾರದ್ದೋ ವಾಚ್‌ಅನ್ನು ನನ್ನ ಕೈಗೆ ಕಟ್ಟಿದ್ದರು.

ಅದನ್ಜು ಗಮನಿಸಿದ ಲಂಕೇಶಪ್ಪನವರು, “ಟೈಮ್‌ ಎಷ್ಟ್ರೀ?” ಎಂದು ಕೇಳಿದರು. ಆಗ ಅವರದ್ದು ಕೀರಲು ದನಿ. ನಾನು ವಾಚ್‌ ನೋಡಿಕೊಂಡು, “ಹತ್ತು ಗಂಟೆ ಹತ್ತು ನಿಮಿಷ” ಅಂದೆ. ಇದೇ ನನ್ನ ಮತ್ತು ಅವರ ನಡುವಿನ ಮೊದಲ ಸಂಭಾಷಣೆ.

***

ಅದು ಕರಿಬಸಪ್ಪ ಚಿಕ್ಕಪ್ಪನಿಗೆ ಗೊತ್ತಾಗಿ “ಆಹಾ ನೀನು ಮದುವೆ ಆಗುತ್ತಿರುವ ಹುಡುಗ ರಾವಣ ಅಂದರೆ ರಾವಣ. ಮಂದಿ ಸೇರಲ್ಲ ಮನುಷ್ಯ ಸೇರಲ್ಲ. ತುಂಬಾ ಒರಟ” ಎಂದು ಬೇಜಾರು ಮಾಡಿಕೊಂಡಿದ್ದರು……… ನಿಶ್ಚಿತಾರ್ಥ ಆದನಂತರ “ಸಧ್ಯದಲ್ಲೆ ಮದುವೆ ಬೇಡ. ಒಂದು ವರ್ಷ ಕಳೆಯಲಿ, ಇಂದಿರಾನೂ ಓದಲಿ” ಎಂದು ಲಂಕೇಶರು ಹೇಳಿದರು. ಅಷ್ಟು ಹೊತ್ತಿಗೆ ಅವರಿಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕೆಲಸ ಸಿಕ್ಕಿತು.

ಶಿವಮೊಗ್ಗೆ ಮನೆಯಲ್ಲಿ ಲಂಕೇಶರಿಗೆಂದು ನನ್ನ ಅಪ್ಪಯ್ಯ ತಮ್ಮ ಬೆಡ್‌ ರೂಮನ್ನು ಬಿಟ್ಟುಕೊಟ್ಟಿದ್ದರು. ತಮ್ಮ ಭಾವಿ ಅಳಿಯನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವಾಗಲೂ ಮನೆ ಬಾಡಿಗೆಯನ್ನು ಅಪ್ಪಯ್ಯ ನನ್ನ ಭಾವ ಶಿವರುದ್ರಪ್ಪನವರಿಗೆ  (ಲಂಕೇಶರ ಸಹೋದರ) ಕೊಡುತ್ತಿದ್ದರು. ಹೀಗೆ ಅಧಿಕೃತವಾಗಿ ಅಳಿಯ ಆಗುವ ಮೊದಲೇ ಲಂಕೇಶರು ತಮ್ಮ ಮಾವನ ಮನೆಯಲ್ಲಿ ದರ್ಬಾರು ಶುರುಮಾಡಿದ್ದರು.

ಲಂಕೇಶರು ಬೆಳಿಗ್ಗೆ ಎದ್ದು, ಅಡುಗೆಯವರು ಮಾಡಿದ್ದ ತಿಂಡಿ ತಿಂದು, ನೀಟಾಗಿ ಡ್ರೆಸ್‌ ಮಾಡಿಕೊಂಡು, ಸೂಟ್‌ಬೂಟ್‌ ಧರಿಸಿ, ಕೋಟಿನ ಜೇಬಿನಲ್ಲಿ ಒಂದು ಗುಲಾಬಿ ಹೂವನ್ನು ಸಿಕ್ಕಿಸಿಕೊಂಡು ಸೈಕಲ್‌ ಹತ್ತಿ ಕಾಲೇಜಿಗೆ ಹೋಗುತ್ತಿದ್ದರು. ಆದರೆ ಆಗಲೂ ಅವರು ತಲೆಕೂದಲನ್ನು ಸರಿಯಾಗಿ ಬಾಚಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಅವರ ಶಿಷ್ಯರು ಒಂದು ದಿನ ಅವರಿಗೆ ಬಾಚಣಿಕೆಯನ್ನು ಉಡುಗೊರೆಯಾಗಿ ನೀಡಿದ್ದರು.

***

ಲಂಕೇಶರು ಸಾಧ್ಯವಾದಾಗಲೆಲ್ಲ ಬೆಂಗಳೂರಿಗೆ ಬಂದು ನನ್ನನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು. ಸಿನಿಮಾ, ಎಂ.ಜಿ.ರೋಡ್‌, ಹೊಟೆಲ್‌ ಎಂದೆಲ್ಲ ಸುತ್ತುತ್ತಿದ್ದೆವು. ನನ್ನನ್ನು ನೋಡಲು ಬರುವ ಮುನ್ನ ಅವರು ಸಿಗರೇಟ್‌ ಸೇದಿದ್ದರೆ ಅಥವಾ ಬಿಯರ್‌ ಕುಡಿದಿದ್ದರೆ ಬಾಯಿಗೆ ಒಂದು ಬಂಡಿ ಏಲಕ್ಕಿ ಹಾಕಿಕೊಂಡು ಬರುತ್ತಿದ್ದರು. ಆ ಏಲಕ್ಕಿಯ ಮರ್ಮ ಮದುವೆಯಾದ ನಂತರವೇ ನನಗೆ ಗೊತ್ತಾಗಿದ್ದು.

****

ಈ ಮಧ್ಯೆ ನನಗೆ  ಸಣ್ಣದಾಗಿ ಸ್ಟ್ರೋಕ್‌ ಆಯಿತು. ಅದು ಒಂದೆರಡು ತಿಂಗಳಲ್ಲಿ ಸರಿಯಾಯಿತು. ಅದನ್ನು ಲಂಕೇಶಪ್ಪನವರಿಗೆ ಹೇಳಬೇಡ ಎಂದು ಅಪ್ಪಯ್ಯ ಸೇರಿದಂತೆ ಎಲ್ಲರೂ ಎಚ್ಚರಿಸಿದ್ದರು. ಆದರೆ ಅವರಿಂದ ಇದನ್ನು ಬಚ್ಚಿಡಲು ನನಗೆ ಮನಸ್ಸು ಬರಲಿಲ್ಲ. ಒಮ್ಮೆ ಅವರು ಬೆಂಗಳೂರಿಗೆ ಬಂದಾಗ ನನಗೆ ಆಗಿದ್ದನ್ನೆಲ್ಲ ಹೇಳಿದೆ. ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ “ಪರವಾಗಿಲ್ಲ ಬಿಡು” ಎಂದರು.

***

ಲಂಕೇಶರು ಬಹಳ ಮುಂಗೋಪಿಯಾಗಿದ್ದರಿಂದ ಅವರು ಕಾಲೇಜಿನಲ್ಲಿ ಹಲವು ಗಲಾಟೆಗಳನ್ನು ಮಾಡಿಕೊಂಡಿದ್ದರು. ನನ್ನ ಗೆಳತಿಯೊಬ್ಬಳು ಇವರ ವಿದ್ಯಾರ್ಥಿನಿಯಾಗಿದ್ದಳು. ಒಂದು ದಿನ ಇವರು ಪಾಠಮಾಡುವಾಗ ಆಕೆ ಕ್ಲಾಸ್‌ ರೂಮಿನಲ್ಲಿ ಪೆನ್‌ ಬೀಳಿಸಿದಳಂತೆ. ಅಷ್ಟಕ್ಕೇ ಕೋಪಗೊಂಡ ಲಂಕೇಶರು, “ಏನ್ರಿ, ಸರಿಯಾಗಿ ಪೆನ್‌ ಹಿಡಿದುಕೊಳ್ಳೊಕು ಬರಲ್ಲ ನಿಮಗೆ, ಕಾಲೇಜಿಗೆ ಬರ್ತೀರಿ” ಎಂದೆಲ್ಲ ಬೈದಿದ್ದರಂತೆ, ಆಕೆ ನನ್ನನ್ನು ಭೇಟಿಯಾಗಿ, “ಅಬ್ಬಬ್ಬ ಸಿಡುಕಾ ಅಂದ್ರೆ ಸಿಡುಕಾ. ಹೇಗೆ ಇರ್ತಿಯೋ ಅವರನ್ನು ಮದುವೆಯಾಗಿ” ಎಂದಿದ್ದಳು.

***

ಆಗ ಸಹ್ಯಾದ್ರಿ ಕಾಲೇಜಿನಲ್ಲಿ ಬ್ರಾಹ್ಮಣರ ಗುಂಪು ಮತ್ತು ಲಿಂಗಾಯತರ-ಒಕ್ಕಲಿಗರ ಗುಂಪು ಎಂದೂ ಗಲಾಟೆಗಳು ಪ್ರಾರಂಭವಾಗಿದ್ದವು. ಆಗ ಒಮ್ಮೆ ಕೆಲ ಹುಡುಗರು ಲಂಕೇಶರಿಗೆ ಸಮಾ ಹೊಡೆಯಲು ರಾತ್ರಿ ಮನೆಗೆ ನುಗ್ಗಲು ಪ್ರಯತ್ನಿಸಿದರು. ಅವರು ಹೊರಗಡೆ ಮಾಡುತ್ತಿದ್ದ ಗಲಾಟೆಯನ್ನು ಗಮನಿಸಿದ ಲಂಕೇಶ್‌ ಹಿತ್ತಲ ಕಾಂಪೌಡ್‌ ಹಾರಿ ಬೆಂಗಳೂರಿಗೆ ಬಂದರು.

ಇತ್ತ ಕಾಲೇಜಿನಲ್ಲೂ ಗಲಾಟೆ. ಅತ್ತ ಮನೆಯಲ್ಲೂ ಗಲಾಟೆ.. ಇದೆಲ್ಲವನ್ನು ಕಂಡು ಲಂಕೇಶರು “ಆದಷ್ಟು ಬೇಗ ಮದುವೆ ಮಾಡಿ ಮುಗಿಸಿ” ಎಂದರು. 1960 ಮೇ 16ಕ್ಕೆ ಮದುವೆ ಎಂದು ನಿರ್ಧಾರವಾಯಿತು.

ಮದುವೆಯ ಆಮಂತ್ರಣ ಪತ್ರಗಳನ್ಜು ಸಿದ್ದಪಡಿಸುವಾಗ ಇದ್ದಕ್ಕಿದ್ದಂತೆ ಲಂಕೇಶಪ್ಪನವರಿಗೆ ಅದೇನನ್ನಿಸಿತೋ “ನನ್ನ ಹೆಸರನ್ನು ಬದಲಾಯಿಸಲಾ?” ಎಂದರು. ಅದಕ್ಕೆ ನಾನು, “ಯಾಕೆ?” ಅಂದೆ. “ಎಲ್ಲರೂ ಲಂಕೇಶಪ್ಪ ಅಂದರೆ ರಾವಣ ಅಂತೆಲ್ಲ ಅಂತಾರೆ. ಅದಕ್ಕೆ” ಎಂದರು. “ಏನೂ ಬೇಡ. ನಿಮಗೆ ಈ ಹೆಸರೇ ಚೆನ್ನಾಗಿದೆ” ಅಂದೆ. ಆಗ ಅವರು “ಇರಲಿ ಬಿಡು” ಎಂದರು. ಆದರೆ ಆಮಂತ್ರಣ ಪತ್ರದಲ್ಲಿ ಅವರಿಗೆ ಇಟ್ಟಿದ್ದ ಲಂಕೇಶಪ್ಪ ಎಂಬ ಹೆಸರನ್ನು ಬರೀ ಲಂಕೇಶ ಎಂದು ಸ್ವಲ್ಪ ತಿದ್ದಿದ್ದರು.

ನನ್ನ ಅಪ್ಪಯ್ಯ ಮದುವೆಯ ಆಮಂತ್ರಣವನ್ನು ಮುದ್ರಣಕ್ಕೆ ಕಳಿಸುವ ಮುನ್ನ ಮತ್ತೊಮ್ಮೆ ನನಗೆ ಹೇಳಿದರು. “ನೋಡು ಕೊನೆಯ ಬಾರಿಗೆ ಹೇಳುತ್ತಿದ್ದೇನೆ. ಈ ಹುಡುಗ ಬೇಡ. ಈ ಮದುವೆಯನ್ನು ಇಲ್ಲೇ ನಿಲ್ಲಿಸೋಣ”… ಆದರೆ ನಾನು ಲಂಕೇಶರನ್ನೇ ಮದುವೆಯಾಗುತ್ತೇನೆ ಎಂದಾಗ ಅಪ್ಪಯ್ಯನಿಗೆ ನೋವು ಸಿಟ್ಟು ಬೇಸರ ಎಲ್ಲವೂ ಆಯಿತು.

ಆಗ ಅಪ್ಪಯ್ಯ “ಹಾಗಾಗದರೆ ಆತನೊಂದಿಗೆ ನಿನಗೆ ಎಷ್ಟೇ ಕಷ್ಟಬಂದರೂ ನ್ನ ಸಹಾಯವನ್ನು ಎಂದೂ ಕೇಳಬಾರದು” ಎಂದು ಷರತ್ತು ಹಾಕಿದರು. ಅದಕ್ಕೆ ನಾನು ಒಪ್ಪಿಕೊಂಡೆ ಮತ್ತು ಆನಂತರದ ವರ್ಷಗಳಲ್ಲಿ ಲಂಕೇಶರ ಜೊತೆಗಿನ ಬದುಕಿನಲ್ಲಿ ಅದೆಷ್ಟೇ ನೋವು, ಕಷ್ಟ, ಸಮಸ್ಯೆಗಳು ಎದುರಾದರೂ ನಾನೆಂದೂ ನನ್ನ ಅಪ್ಪಯ್ಯನ ನೆರವನ್ನು ಕೇಳಲೇ ಇಲ್ಲ.

***

ಶಿವಮೊಗ್ಗೆಯ ಎನ್‌ಡಿವಿ ಹಾಸ್ಟೆಲ್‌ನಲ್ಲಿ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದವು. ಲಂಕೇಶರ ಬಗ್ಗೆ ಮತ್ತು ಕೊನಗವಳ್ಳಿಯ ಜನರ ಬಗ್ಗೆ ರೋಸಿಹೋಗಿದ್ದ ಅಪ್ಪಯ್ಯ ಮದುವೆಯ ಆರೆಂಜ್‌ ಮೆಂಟ್‌ ಎಲ್ಲ ಮಾಡಿ ಯಾವುದೋ ಹೊಟೆಲ್‌ಗೆ ಹೋಗಿಬಿಟ್ಟಿದ್ದರು. ಮದುವೆಗೆಂದು ನನ್ನ ಅಪ್ಪಯ್ಯ ಕೊಟ್ಟಿದ್ದು ಒಂದು ತಾಳಿ ಮಾತ್ರ. ಲಂಕೇಶರ ಮನೆಯವರೆ ಮೂರೆಳೆಯ ಸರ, ಬಳೆ ಸೇರಿದಂತೆ ಹತ್ತು ತೊಲ ಬಂಗಾರ ಹಾಕಿದ್ದರು.

ಲಂಕೇಶರು ತಮ್ಮ ಎರಡನೆಯ ಅಕ್ಕ ಬಸಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಆಕೆಯನ್ನು ಸಣ್ಣಕ್ಕ ಎಂದೇ ಕರೆಯುತ್ತಿದ್ದರು. ಸಣ್ಣಕ್ಕನಿಗೆ ತನ್ನ ಮಗಳನ್ನೆ ತನ್ನ ತಮ್ಮನಿಗೆ ಕೊಡಬೇಕೆಂಬ ಆಸೆ ಇತ್ತು. ಆದರೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಲಂಕೇಶ್‌ ನನ್ನನ್ನು ಮದುವೆಯಾಗಿದ್ದು ಸಣ್ಣಕ್ಕನಲ್ಲಿ ತುಂಬಾ ನಿರಾಶೆಯನ್ನು ಮೂಡಿಸಿತ್ತು. ಆದ್ದರಿಂದ ಆಕೆ ಮದುವೆಯ ದಿನ ತನ್ನ ತಮ್ಮನಿಗೆ ಮಾತ್ರ ಆರತಿ, ಅಕ್ಷತೆ ಹಾಕಿ ಹಾರೈಸಿದರೆ ವಿನಃ ನನಗೆ ಆರತಿಯನ್ನೂ ಎತ್ತಲಿಲ್ಲ. ಅಕ್ಷತೆಯನ್ನೂ ಹಾಕಿ ಹಾರೈಸಲಿಲ್ಲ.

ಮದುವೆಯ ನಂತರ……..

“ನೀನು ಮನೆಯಲ್ಲಿ ಕುಳಿತು ಏನು ಮಾಡುತ್ತಿ? ಕಾಲೇಜ್‌ ಸೇರು” ಎಂದರು ಮಾವ. ಅದನ್ನುಕೇಳಿ ಓದುವ ಆಸೆ ಮತ್ತೆ ನನ್ನಲ್ಲಿ ಚಿಗುರೊಡೆಯಿತು. ಆದರೆ ಆಗ ಶಿವಮೊಗ್ಗೆಯಲ್ಲಿ ಇದ್ದದ್ದು ಒಂದೇ ಕಾಲೇಜ್.‌ ಸಹ್ಯಾದ್ರಿ ಕಾಲೇಜ್.‌ ಲಂಕೇಶರು ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರಿಂದ ಲಂಕೇಶರು, “ಬೇಡ, ನಾನು ಪಾಠ ಹೇಳಿಕೊಡುವ ಕಾಲೇಜ್‌ಗೆ ಇವಳೂ ಬಂದರೆ ಚೆನ್ನಾಗಿರುವುದಿಲ್ಲ.” ಎಂದಾಗ ನಾನು ಸುಮ್ಮನಾಗಬೇಕಾಯಿತು.

ಆಗ ಲಂಕೇಶರರಿಗೆ ತಿಂಗಳಿಗೆ 240 ರೂ ಸಂಬಳ. ಒಮ್ಮೊಮ್ಮೆ ನನ್ನ ಭಾವ ಶಿವರುದ್ರಪ್ಪ ಅವರು ಎರಡನೆಯ ತಾರೀಖಿನಂದು ಬಂದು ಇವರ ಜೇಜಿನಲ್ಲಿದ್ದ ದುಡ್ಡನ್ನೆಲ್ಲ ತೆಗೆದುಕೊಂಡು ಹೋಗಿಬಿಡುತ್ತಿದ್ದರು. ಆನಂತರ ಲಂಕೇಶರು ತಮ್ಮ ಸಂಬಳವನ್ನು ನನ್ನ ಕೈಗೆ ಕೊಡಲಾರಂಭಿಸಿದರು.

ಲಂಕೇಶರು ಪ್ರತಿದಿನ ಕಾಲೇಜಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದರು. ಅವತ್ತಿನ ಶಿವಮೊಗ್ಗೆಯಲ್ಲಿ ಸೈಕಲ್ಲೆ ಒಂದು ಲಕ್ಸುರಿ ವಾಹನವಾಗಿತ್ತು. ಯೌವನದ ಹುಮ್ಮಸ್ಸು, ಹೊಸ ಬದುಕಿನ ಆಶಯಗಳಿಂದ ತುಂಬಿದ್ದ ನಮ್ಮಿಬ್ಬರಿಗೂ ಒಂದು ಸ್ಕೂಟರ್‌ ಕೊಂಡುಕೊಂಡು ಅದರಲ್ಲಿ ಜುಂ ಅಂತ ಓಡಾಡುವ ಆಸೆ. ಆದರೆ ಸ್ಕೂಟರ್‌ ಕೊಳ್ಳಲು ನಮ್ಮಹತ್ತಿರ ದುಡ್ಡು ಇರಲಿಲ್ಲ. ಆಗ ಮದುವೆ ಸಮಯದಲ್ಲಿ ನನಗೆ ಕೊಟ್ಟಿದ್ದ ಒಡವೆ ಇತ್ತಲ್ಲ, ಅದನ್ನು ಇಟ್ಟುಕೊಂಡು ಏನು ಮಾಡುವುದು? ಅದಕ್ಕೆ ಬದಲಾಗಿ ಚಿನ್ನವನ್ನೆಲ್ಲ ಮಾರಿ ಒಂದು ಸ್ಕೂಟರ್‌ ತೆಗೆದುಕೊಳ್ಳೋಣ ಎಂದು ನಾವಿಬ್ಬರೂ ನಿರ್ಧರಿಸಿದೆವು……. ಚಿನ್ನ ಮಾರಿದ್ದು ಮತ್ತು ಸ್ಕೂಟರ್‌ ಮೇಲೆ ಕೂತು ತಿರುಗಾಡುತ್ತಿದ್ದದ್ದು, ಎರಡೂ ಸೇರಿ ಅಪ್ಪಯ್ಯನ ಕೋಪ ನೆತ್ತಿಗೇರಿ ನನ್ನನ್ನು ಚೆನ್ನಾಗಿ ಬೈದರು.

ಒಂದು ದಿನ ನಾವಿಬ್ಬರೂ ಸ್ಕೂಟರಿನಲ್ಲೇ ಬೆಂಗಳೂರಿಗೆ ಹೋಗುವುದೆಂದು ಏಕಾಏಕಿ ನಿರ್ಧರಿಸಿದೆವು. ನನ್ನ ತಮ್ಮನಿಗೆ ಮಾತ್ರ ಈ ಬಗ್ಗೆ ಹೇಳಿ ಬೆಳಗಿನ ಜಾವ 4.30ಕ್ಕೆ ಹೊರಟೆವು. ಸ್ಕೂಟರ್‌ ಶಬ್ದ ಅಪ್ಪಯ್ಯನಿಗೆ ಕೇಳಿಸಬಾರದೆಂದು ಮನೆಯಿಂದ ಸ್ವಲ್ಪ ದೂರ ಸ್ಕೂಟರ್‌ಅನ್ನು ತಳ್ಳಿಕೊಂಡು ಹೋಗಿ ಆಮೇಲೆ ಸ್ಟಾರ್ಟ್‌ ಮಾಡಿಕೊಂಡು ಬೆಂಗಳೂರಿಗೆ ಹೊರಟೆವು.

ಭದ್ರಾವತಿ ದಾಟುತ್ತಿದ್ದಂತೆ ಇವರು ಸ್ಕೂಟರ್‌ಅನ್ನು ವೇಗವಾಗಿ ಓಡಿಸಿ ಅದು ಒಂದು ಗುಂಡಿಯನ್ನು ಹಾದು ಹೋಗುವಾಗ ನಾನು ಸ್ಕೂಟರ್‌ನಿಂದ ಜಾರಿ ರಸ್ತೆಗೆ ಬಿದ್ದೆ…. ನನ್ನ ಕೈಕಾಲು ತರಚಿತ್ತು.  ತೊಟ್ಟಿದ್ದ ಸೀರೆ ಕೆಸರುಮಯವಾಗಿತ್ತು… ಇದನ್ನು ತಿಳಿದ ಅಪ್ಪಯ್ಯ “ಇವನನ್ನು ಮದುವೆಯಾದ ಮೇಲೆ ಇಂದೂ ಹಾಳಾಗಿ ಹೋದಳು ಎಂದು ಕೂಗಾಡಿದರಂತೆ….

ಮಧ್ಯಾಹ್ನ ಎರಡು ಗಂಟೆಗೆ ಬೆಂಗಳೂರು ತಲುಪಿ ಮಲಗಿದ ನಾವು ಮಾರನೆ ದಿನ ಬೆಳಿಗ್ಗೆ ಎದ್ದೆವು…… ನನಗೆ ಬ್ಲೀಡಿಂಗ್‌ ಕಾಣಿಸಿಕೊಂಡಿತು. ನಾಲ್ಕೈದು ದಿನದ ನಂತರ್‌ ಸ್ಕೂಟರ್‌ಅನ್ನು ಟ್ರೈನಿನಲ್ಲಿ ಹಾಕಿಕೊಂಡು ಶಿವಮೊಗ್ಗಕ್ಕೆ ಮರಳಿ ಬಂದೆವು…. ಅವತ್ತು ರಾತ್ರಿ ನನಗೆ ಬ್ಲೀಡಿಂಗ್‌ ಇನ್ನೂ ಹೆಚ್ಚಾಯಿತು…… ನನ್ನನ್ನು ಪರೀಕ್ಷಿಸಿದ ಡಾಕ್ಟರ್‌ ನನಗೆ ಗರ್ಭಪಾತ ಆಗಿರುವುದಾಗಿ ಹೇಳಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ನನ್ನ ಗರ್ಭವನ್ನು ಕ್ಲೀನ್‌ ಮಾಡಿದರು. ನಾನು ಪ್ರಿಗ್ನೆಂಟ್‌ ಆಗಿದ್ದೆ ಎಂಬುದೇ ನಮ್ಮಿಬ್ಬರಿಗೆ ಗೊತ್ತಿರಲಿಲ್ಲವಾದ್ದರಿಂದ ಗರ್ಭಪಾತದ ಸುದ್ಧಿ ಕೇಳಿ ನಾವಿಬ್ಬರೂ ತತ್ತರಿಸಿ ಹೋದೆವು.

***

ಯಾವಾಗಲಾದರೊಮ್ಮೆ “ನಿನಗೆ ಸೀರೆ ಕೊಡಿಸುತ್ತೇನೆ ಬಾ” ಎಂದು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಇವರು ಅರ್ಧ ಸಿಗರೇಟ್‌ ಸೇದುವ ಹೊತ್ತಿಗೆ ನಾನು ಸೀರೆ ಸೆಲೆಕ್ಟ್‌ ಮಾಡಬೇಕಿತ್ತು. ನಾನು ತಡಮಾಡಿದರೆ “ಜೀವನವೆಲ್ಲ ಒಂದೇ ಸೀರೆ ಉಡುತ್ತೀಯ? ಬೇಗ ತೆಗೆದುಕೊಂಡು ಬಾ” ಎನ್ನುತ್ತಿದ್ದರು. ಹೀಗೆ ಒಂದೆರಡು ಬಾರಿ ಆದ ನಂತರ ನಾನು ಪಾಠ ಕಲಿತೆ. ನಾನು ಮುಂಚಿತವಾಗಿಯೇ ಅಂಗಡಿಗೆ ಹೋಗಿ ಸೀರೆ ಸೆಲೆಕ್ಟ್‌ ಮಾಡಿ ಅದನ್ನು ಕಾಯ್ದಿರಿಸಿ ಬರುತ್ತಿದ್ದೆ. ಆಮೇಲೆ ಇವರೊಂದಿಗೆ ಹೋಗಿ, “ಒಂದೆ ನಿಮಿಷದಲ್ಲಿ ಸೀರೆ ಸೆಲೆಕ್ಟ್‌ ಮಾಡಿದೆ” ಎಂದು ಅದನ್ನು ತೆಗೆದುಕೊಂಡು ಬರುತ್ತಿದ್ದೆ.

ನಮ್ಮ ಮೂವರು ಮಕ್ಕಳು ಶಿವಮೊಗ್ಗೆಯ ಮೆಗ್ಗನ್‌ ಆಸ್ಪತ್ರೆಯಲ್ಲೇ ಹುಟ್ಟಿದ್ದು. ಗೌರಿ ಹುಟ್ಟಿದಾಗ ಒಟ್ಟು 70 ರೂಪಾಯಿ ಖರ್ಚಾಗಿದ್ದರೆ, ಬೇಬಿ ಹುಟ್ಟಿದಾಗ 40 ರೂಪಾಯಿ ಖರ್ಚಾಯಿತು. ಆದರೆ ಮೂರನೆಯ ಹೆರಿಗೆ ಆದ ನಂತರ ನಾನು ಆಪರೇಷನ್‌ ಮಾಡಿಸಿಕೊಂಡಿದ್ದರಿಂದ ಆಸ್ಪತ್ರೆಯವರೇ ನನಗೆ 240 ರೂಪಾಯಿ ಕೊಟ್ಟಿದ್ದರು. ಅಂದರೆ ನಮ್ಮ ಮೂವರ ಮಕ್ಕಳ ಹೆರಿಗೆಗೆ ನಾನು ಆಸ್ಪತ್ರೆಗೆ ಒಟ್ಟಿ 110 ರೂಪಾಯಿ ಕೊಟ್ಟಿದ್ದರೆ ಅವರೇ ನನಗೆ 130 ರೂಪಾಯಿ ಹೆಚ್ಚಿಗೆ ಕೊಟ್ಟು ಕಳಿಸಿದ್ದರು.

***

ಲಂಕೇಶರು ಎಂಥವರು ಎಂದರೆ ರಾತ್ರಿ 11 ಗಂಟೆಗೂ ಸ್ನೇಹಿತರನ್ನು ಕರೆದುಕೊಂಡು ಬಂದು ನನ್ನನ್ನು ಎಬ್ಬಿಸಿ “ಕಾಫಿ ಮಾಡಿಕೊಡು” ಎನ್ನುತ್ತಿದ್ದರು. ಒಮ್ಮೆ ಅನಂತಮೂರ್ತಿಯವರು, “ಅವರಿಗೇಕೆ ಇಷ್ಟು ಹೊತ್ತಿನಲ್ಲಿ ತೊಂದರೆ?” ಅಂದರು. ಆಗ ಲಂಕೇಶರು ಎಂದಿನಂತೆ, “ಇಲ್ಲಾ ನನ್ನ ಹೆಂಡತಿ ಒಂದಿಷ್ಟೂ ಬೇಜಾರು ಮಾಡಿಕೊಳ್ಳುವುದಿಲ್ಲ. ಅಲ್ವೇನೆ?” ಎಂದು ನನ್ನನ್ನೇ ಕೇಳಿದರು. ಮನೆಗೆ ಬಂದವರ ಎದುರಿಗೆ “ಹೌದು ನನಗೆ ಬೇಜಾರು ಆಗುತ್ತೆ. ಕಾಫಿ ಮಾಡಿಕೊಡಲ್ಲ ಹೋಗಿ” ಎಂದು ಹೇಳಲು ನನಗೆ ಸಾಧ್ಯವಿರಲಿಲ್ಲ.

***

ನಮ್ಮ ಮನೆಗೆ ಬರುತ್ತಿದ್ದ ಲಂಕೇಶರ ಶಿಷ್ಯರಲ್ಲಿ ಕಿ.ರಂ. ನಾಗರಾಜ್‌ ಪ್ರಮುಖರು. ನಾಗರಾಜ್‌ ಎಷ್ಟೋದಿನ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ನನಗೆ ಅಥವಾ ಮಕ್ಕಳಿಗೆ ಕಾಯಿಲೆ ಆದರೆ ನಮ್ಮನ್ನು ಡಾಕ್ಟರ್‌ ಹತ್ತಿರ ಕರೆದುಕೊಂಡು ಹೋಗುತ್ತಿದ್ದದ್ದು ಲಂಕೇಶರಲ್ಲ; ಬದಲಾಗಿ ನಾಗರಾಜ್‌ ಅವರು.

ಕಿ.ರಂ. ವಿಜಯಲಕ್ಷ್ಮಿಯನ್ನು ಲವ್‌ ಮಾಡುತ್ತಿದ್ದರು. ಆದರೆ ಕಿ.ರಂ. ಅವರನ್ನು ಮದುವೆ ಆಗುವುದು ವಿಜಯಲಕ್ಷ್ಮಿ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರಿಬ್ಬರೂ ಗುಟ್ಟಾಗಿ ನಮ್ಮ ಮನೆಯಲ್ಲಿ ಭೇಟಿ ಮಾಡುತ್ತಿದ್ದರು. ಅದೆಷ್ಟೋ ಬಾರಿ ವಿಜಯಲಕ್ಷ್ಮಿ ಮನೆಯಿಂದ ಗುಟ್ಟಾಗಿ ತಂದಿದ್ದ ಸೀರೆಯನ್ನು ನಮ್ಮ ಮನೆಯಲ್ಲಿ ಉಟ್ಟು ಕಿ.ರಂ. ಜೊತೆ ಹೋಗುತ್ತಿದ್ದರು. ವಿಜಯಲಕ್ಷ್ಮಿ ಯಾವಾಗಲೂ ನೀಟಾಗಿ ಡ್ರೆಸ್‌ ಮಾಡಿಕೊಳ್ಳುತ್ತಿದ್ದರೆ ಕಿ.ರಂ. ಸ್ನಾನ ಮಾಡಿದ್ದಾರೋ ಇಲ್ಲವೋ ಎನ್ನುವಂತೆ ಇರುತ್ತಿದ್ದರು. ಆದರೂ ಅವರಿಬ್ಬರ ನಡುವೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಇತ್ತು. ಅವರಿಬ್ಬರು ರಿಜಿಸ್ಟರ್‌ ಮದುವೆ ಆದ ಮೇಲೆ ವಿಧಿಯಿಲ್ಲದೆ ಮನೆಯವರು ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು.

***

ಮರುಳುಸಿದ್ಧಪ್ಪನವರಿಗೆ ಜಿ.ಎಸ್.‌ ಶಿವರುದ್ರಪ್ಪನವರ ಮಗಳಾದ ಜಯಂತಿಯನ್ನು ಮದುವೆ ಆಗುವ ಆಸೆ ಇತ್ತು. ಜಿ.ಎಸ್.ಎಸ್.‌ ಅವರಿಗೂ ಮರುಳುಸಿದ್ಧಪ್ಪ ಅಳಿಯ ಆಗುವುದು ಇಷ್ಟವಿತ್ತು. ಆದರೆ ರುದ್ರಾಣಿ (ಜಿ.ಎಸ್.ಎಸ್.‌ ಪತ್ನಿ) ಅವರಿಗೆ ತನ್ನ ಮಗಳನ್ನು ಮೇಷ್ಟ್ರಿಗೆ ಕೊಟ್ಟು ಮದುವೆ ಮಾಡುವ ಆಸೆ ಇದ್ದಹಾಗೆ ಇರಲಿಲ್ಲ. ಆದರೂ ಮರುಳುಸಿದ್ದಪ್ಪ ಮತ್ತು ಜಯಂತಿ ಮದುವೆ ಆಯಿತು.

***

ನಮ್ಮ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದಾಗಲೇ ಲಂಕೇಶರು ಕುದುರೆ ರೇಸ್‌ಗೆ ಹೋಗಲು ಶುರು ಮಾಡಿದರು. ಇದರ ಬಗ್ಗೆ ನಮ್ಮಿಬ್ಬರ ನಡುವೆ ಜಗಳಗಳು ಶುರುವಾದವು. ಒಂದು ದಿನ “ನೀವು ಇನ್ನುಮುಂದೆ ರೇಸ್‌ಗೆ ಹೋಗುವುದಿಲ್ಲ ಎಂದು ಪ್ರಾಮೀಸ್‌ ಮಾಡಿ ಎಂದು ಹಠ ಹಿಡಿದೆ. ಆಗ ಅವರು “ಹೋಗಲ್ಲ ಬಿಡೆ” ಎಂದರೇ ಹೊರತು ಪ್ರಾಮಿಸ್‌ ಮಾಡಲಿಲ್ಲ…… ಮಗನ ಮೇಲೆ ಆಣೆ ಮಾಡಿ ಕುದುರೆ ರೇಸ್‌ಗೆ ಹೋಗುವುದಿಲ್ಲ ಎಂದರು. ನನಗೆ ನೆಮ್ಮದಿಯಾಯಿತು. ಆದರೆ ಅಷ್ಟುಹೊತ್ತಿಗೆ ನನಗೆ ತಿಳಿದಿರಬೇಕಿತ್ತು; ಈ ಆಣೆ ಪ್ರಮಾಣಗಳೆಲ್ಲ ಲಂಕೇಶರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವೆಂದು. ಲಂಕೇಶರ ಜೂಜು ಮೋಜು ಮುಂದುವರೆಯಿತು….

***

“ನಾನು ನಿನ್ನನ್ನು ತುಂಬಾ ಇಷ್ಟಪಡುತ್ತೇನೆ. ನೀನೂ ನನ್ನನ್ನು ಇಷ್ಟಪಡುತ್ತೀಯಾ ಅಂತ ಗೊತ್ತು. ಆದರೂ ಯಾಕೆ ಇತ್ತೀಚೆಗೆ ನನ್ನನ್ನು ಸರಿಯಾಗಿ ಮಾತನಾಡಿಸುತ್ತಿಲ್ಲ ನೀನು? ನಿನ್ನ ಈ ವರ್ತನೆಯಿಂದ ನನಗೆ ತುಂಬಾ ಬೇಜಾರಾಗಿದೆ. ಯಾಕೆ ನೀನು ಹೀಗೆ ಮಾಡುತ್ತಿದ್ದೀಯಾ?

ನಿನ್ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ನಾವಿಬ್ಬರೂ ಎಲ್ಲಿಗಾದರೂ ಹೋಗಿ ಬಿಡೋಣ. ನನಗೆ ಹೆಂಡತಿ ಮಕ್ಕಳು ಯಾರೂ ಬೇಡ. ನಾವಿಬ್ಬರೇ ಬಹುದೂರ ಹೋಗೋಣ. ದಯವಿಟ್ಟು ನನಗೆ ನಿರಾಶೆ ಮಾಡಬೇಡ……..

ಆ ಪತ್ರವನ್ನು ಮತ್ತೆ ಮತ್ತೆ ಓದಿದೆ. ಅದೆಷ್ಟು ಸಾರಿ ಓದಿದೆನೋ ಗೊತ್ತಿಲ್ಲ. ನಾನು ಕೂತಿದ್ದಕಡೆಯೇ  ಒಂದು ಗಂಟೆಗೂ ಹೆಚ್ಚು ಸಮಯ ಕೂತೆ ಇದ್ದೆ ಮಂಕುಬಡಿದವಳಂತೆ…..

***

ಅವರೊಂದಿಗೆ ದೊಡ್ಡದಾಗಿ ಜಗಳ ಆಡಿದೆ. ನನಗೆಷ್ಟು ಕೋಪ ಬಂದಿತ್ತು ಎಂದರೆ ಲಂಕೇಶರು ನನಗೆ ಬರೆದಿದ್ದ ಎಲ್ಲ ಪತ್ರಗಳನ್ನೂ ನಾನು ತೆಗೆದಿದ್ದ ಅವರ ಫೋಟೋಗಳನ್ನು ಹರಿದು ಅವಕ್ಕೆ ಬೆಂಕಿ ಹಚ್ಚಿ ಸುಟ್ಟುಹಾಕಿದೆ. ಅಷ್ಟೇ ಅಲ್ಲ ನನ್ನ ಮತ್ತು ಲಂಕೇಶರ ಸಂಬಂಧ ಮುಗಿಯಿತು ಎಂದು ನಾನು ಹಾಕಿಕೊಂಡಿದ್ದ ತಾಳಿಯನ್ನೂ ತೆಗೆದೆ….. “ತಾಳಿ ಹಾಕಿಕೋ ಈಗ ಅವಳಿಲ್ಲ” ಎಂದು ಲಂಕೇಶರು ಏನೇನೋ ಹೇಳಿದರೂ ಹಲವಾರು ಬಾರಿ ಬೇಡಿಕೊಂಡರೂ ನಾನು ಅವರ ಮಾತನ್ನು ಕೇಳದೆ ಸುಮ್ಮನೆ ಮಲಗಿರುತ್ತಿದ್ದೆ….. ನನಗೆ ತಂದೆ ತಾಯಿ ಎರಡೂ ಆಗಿದ್ದ ಅಪ್ಪಯ್ಯನ ಮಾತು ಮೀರಿ ಲಂಕೇಶರನ್ನು ಮದುವೆ ಆಗಿದ್ದೆನಲ್ಲ, ನನಗೆ ತಕ್ಕ ಶಿಕ್ಷೆ ಆಯಿತು ಅಂದುಕೊಂಡೆ….

.. ಅವತ್ತಿನಿಂದ ನನ್ನ ಜೀವನ ಬೇರೆ ದಾರಿ ಹಿಡಿಯಲಿದೆ ಎಂದು ನನಗೆ ಅರ್ಥವಾಯಿತು. ಆದರೆ ನನ್ನ ಕಣ್ಣ ಮುಂದೆ ಯಾವ ದಾರಿಯೂ ಕಾಣಿಸುತ್ತಿರಲಿಲ್ಲ.  ನನ್ನ ಹೆಣ್ಣು ಮಕ್ಕಳು ತಮ್ಮ ಕಾಲಮೇಲೆ ನಿಲ್ಲುವವರೆಗೂ ಅವರಿಗೆ ಮದುವೆ ಮಾಡಬಾರದು, ಅವರೆಂದಿಗೂ ನನ್ನಂತೆ ಅಸಹಾಯಕ ಸ್ಥಿತಿಯನ್ನು ಎದುರಿಸಬಾರದು, ವಿಧಿಯಿಲ್ಲದೆ ಪುರುಷನೊಬ್ಬನ ಜೊತೆ ಬಲವಂತದಿಂದ ನನ್ನ ಮಕ್ಕಳು ಇರಕೂಡದು ಅವರನ್ನು ಚೆನ್ನಾಗಿ ಓದಿಸಬೇಕು ಎಂದೆಲ್ಲ ಯೋಚಿಸಿದೆ.

ಹೀಗೆ ಪ್ರೀತಿ ಇಲ್ಲದಿದ್ದರೂ ಸಹಮತವಿದ್ದ, ಹೇಗಾದರೂ ಜೀವನವೆಂಬ ಪಯಣದಲ್ಲಿ ಸಾಗಬೇಕೆಂದಿದ್ದ ನನ್ನ ಮತ್ತು ಲಂಕೇಶರ ಜೀವನ ನಡೆಯುತ್ತಿತ್ತು. ಅಂತಹ ಒಂದು ದಿನ ನಾನು ಈ ಹಿಂದೆ ಬಿಚ್ಚಿಟ್ಟಿದ್ದ ತಾಳಿಯನ್ನು ಮತ್ತೆ ಹಾಕಿಕೊಳ್ಳಲು ಶುರುಮಾಡಿದೆ….

***

ಲಂಕೇಶರು ಆಗ ಅಧ್ಯಾಪಕರಾಗಿದ್ದರಿಂದ ʼಪಲ್ಲವಿʼ ಚಿತ್ರವನ್ನು ಇಂದಿರಾ ಲಂಕೇಶ್‌ ಪ್ರೋಡಕ್ಸನ್‌ ಎಂಬ ಹೆಸರಿನಲ್ಲಿ ನಿರ್ಮಿಸಿದ್ದರು. 1977ರಲ್ಲಿ ʼಪಲ್ಲವಿʼ ಚಿತ್ರಕ್ಕೆ ʼರಜತ ಕಮಲʼ ಪ್ರಶಸ್ತಿಯ ಜೊತೆಗೆ ಲಂಕೇಶರಿಗೆ ʼಅತ್ಯುತ್ತಮ ನಿರ್ದೇಶಕʼ ಪ್ರಶಸ್ತಿಯೂ ಪ್ರಕಟಗೊಂಡಿತು.

ಪಲ್ಲವಿ ಚಿತ್ರಕ್ಕೆ ಬಂದಿದ್ದ ಪ್ರಶಸ್ತಿಯನ್ನು ಪಡೆಯಲು ದೆಹಲಿಗೆ ಹೋಗುವ ತಯಾರಿ ಶುರುವಾಯತು. ಲಂಕೇಶರಿಗೆ ನಿರ್ದೇಶಕನಾಗಿ ಪ್ರಶಸ್ತಿ ಬಂದಿದ್ದರೆ, ಅವರು ಸಿನೇಮಾವನ್ನು ನನ್ನ ಹೆಸರಿನಲ್ಲಿ ನಿರ್ಮಿಸಿದ್ದರಿಂದ ನಾನೂ ಪ್ರಶಸ್ತಿ ಪಡೆಯಲಿದ್ದೆ.

ಮೂವರೂ ಮಕ್ಕಳನ್ನು ಕರೆದುಕೊಂಡು ದೆಹಲಿಗೆ ಹೊರಟೆವು….. ಆದರೆ ನಾವೆಲ್ಲ ಜೊತೆಯಾಗಿ ಹೋಗಲಿಲ್ಲ. ಲಂಕೇಶರು ವಿಮಲಾ ನಾಯ್ಡು ಜೊತೆ ವಿಮಾನದಲ್ಲಿ ಹಾರಿ ಹೋದರು. ಆದರೆ ನಾನು, ನಮ್ಮ ಮೂವರು ಮಕ್ಕಳು, ಅಪ್ಪಯ್ಯ, ನನ್ನ ತಮ್ಮ ಶಿವಕುಮಾರ, ಶಿವು ಹೆಂಡತಿ ವಿಮಲಾ.. ಎಲ್ಲರಿಗೂ ಬುತ್ತಿ ಕಟ್ಟಿಕೊಂಡು ಸೆಕೆಂಡ್‌ ಕ್ಲಾಸ್‌ ಟ್ರೈನ್‌ ಹತ್ತಿ ಹೊರಟೆ. ದೆಹಲಿಯಲ್ಲಿ ಲಂಕೇಶರು ಯಾವುದೋ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದರು. ನಾವೆಲ್ಲ ಯಾರದ್ದೋ ಚಿಕ್ಕಮನೆಯಲ್ಲಿ ಉಳಿದುಕೊಂಡೆವು.

ಅವಾರ್ಡ್‌ ಫಂಕ್ಷನ್‌ ವಿಜ್ಞಾನ ಭವನದಲ್ಲಿ ಏರ್ಪಾಡಾಗಿತ್ತು. ಆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರಲಿದ್ದರಿಂದ ಎಲ್ಲರೂ ಅರ್ಧ ಗಂಟೆ ಮುಂಚಿತವಾಗಿಯೇ ಒಳಗೆ ಹೋಗಿರಬೇಕಿತ್ತು. ಆದರೆ ನಮಗೆ ದೆಹಲಿ ಹೊಸದು. ನಾವೆಲ್ಲ ಹೊರಟು ವಿಜ್ಞಾನ ಭವನ ತಲುಪುವುದು ಸ್ವಲ್ಪ ತಡವಾಯಿತು. ಅಲ್ಲಿ ನೋಡಿದರೆ ತುಂಬಾ ಬಂದೋಬಸ್ತು. ಯಾವ ಬಾಗಿಲಿನಿಂದ ಒಳಗೆ ಹೋಗಬೇಕು ಎಂದೂ ನನಗೆ ಗೊತ್ತಾಗಲಿಲ್ಲ. ಲಂಕೇಶರನ್ನು ಕೇಳೋಣ ಎಂದರೆ ಅವರು ಅಷ್ಟು ಹೊತ್ತಿಗಾಗಲೇ ವಿಮಲಾ ನಾಯ್ಡು ಜೊತೆ ಒಳಗೆ ಕೂತಿದ್ದರು. ಕೊನೆಗೂ ನನ್ನ ಜೊತೆಯಲ್ಲಿದ್ದವರನ್ನೆಲ್ಲ ಹೊರಗೆ ಬಿಟ್ಟು ಪೋಲಿಸರಿಗೆ ನಾನೂ ಪ್ರಶಸ್ತಿ ವಿಜೇತೆ ಎಂದು ಹೇಳಿ ಹೇಗೋ ಕಷ್ಟಪಟ್ಟು ಒಳಗೆ ಪ್ರವೇಶ ಪಡೆದೆ.

ನಾನು ಆ ಬೃಹತ್‌ ಹಾಲಿನೊಳಗೆ ಕಾಲಿಡಿವುದಕ್ಕೂ, ಇಂದಿರಾ ಲಂಕೇಶರಿಗೆ ಪ್ರಶಸ್ತಿ ಎಂದು ಅನೌನ್ಸ್‌ ಮಾಡುವುದಕ್ಕೂ ಸರಿಹೋಯಿತು. ಆದರೆ ನಾನು ವೇದಿಕೆಯ ಹತ್ತಿರ ಹೋಗುವ ಮುನ್ನ ವಿಮಲಾ ನಾಯ್ಡು ಎದ್ದು ವೇದಿಕೆ ಏರಿ ನನ್ನ ಪ್ರಶಸ್ತಿ ಸ್ವೀಕರಿಸಿದಳು. ಅಲ್ಲಿದ್ದ ಛಾಯಾಗ್ರಾಹಕರೆಲ್ಲ ಆಕೆಯ ಫೋಟೋ ತೆಗೆದರು. ಆ ನಂತರ ಲಂಕೇಶರು ಆಕೆಯ ಫೋಟೋ ಪತ್ರಿಕೆಗಳಲ್ಲಿ ಪ್ರಕಟಗೊಳ್ಳದಂತೆ ನೋಡಿಕೊಂಡರು.

ಆದರೂ ನಾನು ಕುದ್ದು ಹೋದೆ.

ಆದರೆ ಲಂಕೆಶರ ಜೊತೆ ಜಗಳವಾಡಿ ಯಾವ ಪ್ರಯೋಜನವೂ ಇರಲಿಲ್ಲ.

ಹೀಗೆ ನಾವಿಬ್ಬರೂ ಸ್ವಲ್ಪ ಸ್ವಲ್ಪ ದೂರವಾಗುತ್ತಾ ಹೋದೆವು.

****


ಆಕರ: ಇಂದಿರಾ ಲಂಕೇಶ್‌ ಅವರ ಆತ್ಮಕಥೆ ʼಹುಳಿಮಾವು ಮತ್ತು ನಾನುʼ

ಆಯ್ಕೆ: ಡಾ ರಾಜೇಂದ್ರ ಬುರಡಿಕಟ್ಟಿ

ಸಂದರ್ಭ: ಇಂದಿರಾ ಲಂಕೇಶ ಅವರು ಮರಣ ಹೊಂದಿದ ಸಂದರ್ಭ

ದಿ: 16-06-2026

Saturday, May 23, 2026

ಊರಿಗೆ ಊರೇ ಹಸೆಯಲಿ ನಿಂತರೆ……

ಊರಿಗೆ ಊರೇ ಹಸೆಯಲಿ ನಿಂತರೆ……

ಕಾರವಾರದ ಕಡಲತಡಿಯಲ್ಲಿ ಇಂಗ್ಲಿಷ್‌ ಶಿಕ್ಷಕಿಯಾರುವ ‍ಲೇಖನಿ ಸ್ನೇಹಿತೆ ಶ್ರೀದೇವಿ ಕೆರೆಮನೆ ಜನಗಣತಿ, ಚುನಾವಣೆ ಇಂತಹ ಸಂದರ್ಭಗಳಲ್ಲಿ ಇತರೆ ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿ ಬರೆದ ಲೇಖನವೊಂದನ್ನು ಗಮನಿಸಿದೆ. ಅದರಲ್ಲಿ ಅವರು, ವಯಸ್ಸು ಅನುಭವ ಅಷ್ಟೇ ಏಕೆ ಅಧಿಕಾರದ ಸ್ಥಾನಮಾನದಲ್ಲಿಯೂ ಕಿರಿಯರಾದ ಸಿಬ್ಬಂಧಿ ಸಂದರ್ಭಾನುಸಾರ ಸಿಕ್ಕ ಅಧಿಕಾರದ ಅಮಲಿನಿಂದ ಮೇಲಿನ ಎಲ್ಲ ವಿಷಯಗಳಲ್ಲೂ ಬಹಳಷ್ಟು ಹಿರಿಯರಾದ ಶಿಕ್ಷಕರಿಗೆ ಹೇಗೆಲ್ಲ ಮೂದಲಿಸುವುದು, ಹಿಯ್ಯಾಳಿಸುವುದು, ಬೇಜವಾಬ್ದಾರಿ ವ್ಯಕ್ತಿಗಳೆಂದು ಪರಿಗಣಿಸಿ ನಿಂದನೆಯ ಮಾತುಗಳನ್ನು ಆಡುವುದು ಮಾಡುತ್ತಾರೆ ಮತ್ತು ಶಿಕ್ಷಕರನ್ನು ಎಷ್ಟೊಂದು ತುಚ್ಛವಾಗಿ ಕಾಣುತ್ತಾರೆ ಎಂಬುದನ್ನು ಬಹಳಷ್ಟು ಮನಮುಟ್ಟುವಂತೆ ವಿವರಿಸಿದ್ದಾರೆ.

ಶ್ರೀದೇವಿ ಅವರು ಲೇಖನದಲ್ಲಿ ಹೇಳಿದ ಯಾವ ವಿಷಯವೂ ಸುಳ್ಳಲ್ಲ. ಇದನ್ನು ಬಹಳಷ್ಟು ಜನ ಶಿಕ್ಷಕರು ಸ್ವತಃ ಅನುಭವಿಸಿದ್ದರೆ ಉಳಿದವರು ಅನುಭವಿಸುವುದನ್ನು ಕಂಡಾದರೂ ಇದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇವೆಲ್ಲವನ್ನೂ ಒಪ್ಪಿಕೊಂಡೂ ಈ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗುತ್ತಿದೆ. ಇದು ಈ ಸಮಸ್ಯೆಯನ್ನು ಇನ್ನೊಂದು ಕಡೆಯಿಂದ ನೋಡುವ ಪ್ರಯತ್ನವಷ್ಟೆ.

ಶ್ರೀದೇವಿ ಅವರು ತಮ್ಮ ಲೇಖನದಲ್ಲಿ ಇತ್ತೀಚೆಗೆ ನಡೆದ ಮನೆಗಣತಿಗೆ ನಿಯೋಜಿತರಾದ ದೈಹಿಕವಾಗಿ ಅದನ್ನು ನಿಜವಾಗಿಯೂ ಮಾಡಲು ಕಷ್ಟಪಡುವ ಶಿಕ್ಷಕಿ ಆ ಕೆಲಸದಿಂದ ವಿನಾಯತಿ ಕೋರಿದಾಗ ಸಿಬ್ಬಂದಿ ಹೇಗೆಲ್ಲ ಅವರನ್ನು ಗೇಲಿ ಮಾಡಿ ಅಪಹಾಸ್ಯ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ಇದು ಅನೇಕ ಕಡೆ ಈ ಗಣತಿ ಸಂದರ್ಭದಲ್ಲಿ ಮಾತ್ರವಲ್ಲ ಇತರ ಗಣತಿಗಳೂ ಸೇರಿದಂತೆ, ಚುನಾವಣೆಗಳ ಸಂದರ್ಭಗಳಲ್ಲಿಯೂ ನಡೆಯುವಂಥ ಒಂದು ಸಾಮಾನ್ಯ ವಿದ್ಯಮಾನ. ಚುನಾವಣೆ ಅಥವಾ ಗಣತಿ ಕಾರ್ಯಕ್ಕೆ ನಿಯೋಜಿತರಾದ ಅನೇಕರು ತಮ್ಮನ್ನು ಆ ಕೆಲಸದಿಂದ ಬಿಡುಗಡೆ ಮಾಡಲು ಕೋರಿಕೊಳ್ಳುವ ಮನವಿಗಳನ್ನು ಹಿಡಿದುಕೊಂಡು ಅಧಿಕಾರಿಗಳ ಕಛೇರಿಗಳಿಗೆ ಅಲೆದಾಡುವ ದೃ‍ಶ್ಯಗಳನ್ನು ಎಲ್ಲರೂ ಸಾಮಾನ್ಯವಾಗಿ ನೋಡಿಯೇ ಇರುತ್ತಾರೆ. ಇಂಥವರಲ್ಲಿ ಕೆಲವರು ಆಸ್ಪತ್ರೆಯವರು ನೀಡುವ ಆಳೆತ್ತರದ ಬಾಡಿ ಸ್ಕ್ಯಾನಿಂಗ್‌ ಚಿತ್ರಗಳು, ಹೃದಯ ಕಾಯಿಲೆಗೆ ಸಂಬಂಧಿಸಿದ ಫೈಲುಗಳು ಇತ್ಯಾದಿಗಳೊಂದಿಗೆ ಬಂದರೆ ಇನ್ನು ಕೆಲವು ತಾಯಂದಿರು ಹಾಲುಕುಡಿಯವ ಕೂಸುಗಳನ್ನು ಕಂಕುಳಲ್ಲಿ ಇಟ್ಟುಕೊಂಡೇ ಕಛೇರಿಗಳಿಗೆ ಬರುವುದೂ ಇದೆ. ತಮ್ಮ ಸಮಸ್ಯೆಗೆ ಪ್ರತ್ಯಕ್ಷ ಸಾಕ್ಷಿ ಒದಗಿಸಿ ವಿನಾಯತಿ ಪಡೆಯುವುದು ಇವರ ಉದ್ದೇಶವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ಇಂತಹ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯತಿ ಸಿಗುತ್ತದೆ. ಇನ್ನು ಕೆಲವರಿಗೆ ಸಿಗುವುದಿಲ್ಲ. ಸಿಕ್ಕವರು ಸಂತೋಷದಿಂದ ಅಲ್ಲದಿದ್ದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮನೆಕಡೆಗೆ ಕಾಲು ಹಾಕಿದರೆ ಸಿಗದಿದ್ದವರು ʼಇನ್ನೇನು ಮಾಡ್ಲಿಕ್ಕೆ ಆಗುತ್ತೆʼ ಎಂದು ಮುಖ ಸಣ್ಣದು ಮಾಡಿಕೊಂಡು ಚುನಾವಣೆಯ ಸೂಟ್‌ಕೇಸ್‌ ಹಿಡಿದುಕೊಂಡು ಬಸ್ಸಿನ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾರೆ. ಇಲ್ಲಿ ಸಮಸ್ಯೆ ಹೇಳಿಕೊಂಡವರಲ್ಲಿ ಯಾರಿಗೆ ವಿಯಾಯತಿ ಸಿಗುತ್ತದೆ ಮತ್ತು ಯಾರಿಗೆ ಸಿಗುವುದಿಲ್ಲ ಎಂಬುದನ್ನು ಹೀಗೆಯೇ ಎಂದು ಹೇಳುವುದು ಕಷ್ಟ. ಕೆಲವು ಗಂಭೀರ ಪ್ರಕರಣಗಳನ್ನು ಸಂಬಂಧ ಪಟ್ಟ ವ್ಯವಸ್ಥೆ ಗುರುತಿಸಿ ಅವುಗಳನ್ನು ಪರಿಗಣಿಸಲು ವ್ಯವಸ್ಥೆ ಮಾಡುತ್ತದೆಯಾದರೂ ಇವುಗಳ ಇತ್ಯರ್ಥದಲ್ಲಿ ಎಲ್ಲಕಡೆಯೂ ಬಹಳಷ್ಟು ನ್ಯಾಯಯುತವಾಗಿಯೇ ಇಂತಹ ಪ್ರಕರಣಗಳ ಇತ್ಯರ್ಥ ಆಗುತ್ತದೆ ಎನ್ನುವಂತಿಲ್ಲ. ಕೆಲವು ಗಂಭೀರ ಸಮಸ್ಯೆಯಲ್ಲಿರುವವರಿಗೆ ವಿನಾಯತಿಯ ಸೌಲಭ್ಯ ಸಿಗದೇ ಅಷ್ಟೇನೂ ಗಂಭೀರವಲ್ಲದವರಿಗೆ ವಿನಾಯತಿಯ ಸೌಲಭ್ಯ ದೊರೆಯುವುದೂ ಇದೆ. ಇದಕ್ಕೆ ಅವರು ಸಮಸ್ಯೆಯನ್ನು ಪ್ರಸ್ತುತ ಪಡಿಸುವ ವಿಧಾನ, ಸಲ್ಲಿಸುವ ದಾಖಲೆಗಳು, ಇವುಗಳ ಜೊತೆಗೆ ಇವುಗಳನ್ನು ಇತ್ಯರ್ಥ ಪಡಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ನ್ಯಾಯಪರತೆ, ಮಾನವೀಯ ಕಾಳಜಿ ಹೀಗೆ ಹತ್ತು ಹಲವು ಕಾರಣಗಳು ಸೇರಿಕೊಳ್ಳುತ್ತವೆ.


ಇಂತಹ ಸಮಸ್ಯೆಗಳನ್ನು ತಮ್ಮ ಬಿಡುವಿಲ್ಲದೆ ಅನೇಕ ಕಾರ್ಯಗಳ ನಡುವೆಯೂ ಸರಿಯಾಗಿ ಪರಿಶೀಲಿಸಿ ತುಂಬಾ ಗಂಭೀರ ಕಾರಣಗಳಿದ್ದವರಿಗೆ ನ್ಯಾಯಯುತವಾಗಿ ವಿನಾಯತಿ ನೀಡುವ ಅಧಿಕಾರಿಗಳು ಇಲ್ಲವೆಂದಲ್ಲ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ. ಒಬ್ಬಿಬ್ಬರಿಗೆ ಕೊಟ್ಟರೆ ಉಳಿದವರೂ ʼಶುರುವುʼಮಾಡುತ್ತಾರೆ ಎಂದು ಅರ್ಹರಿಗೂ ವಿನಾಯತಿ ನೀಡಲು ಹಿಂದೆಮುಂದೆ ನೀಡುವವರೆ ಹೆಚ್ಚು. ಆಗ ನಿಜವಾಗಿ ತೊಂದರೆ ಇರುವವರಿಗೂ ವಿನಾಯತಿ ಸಿಗದೆ ಅವರು ಕಷ್ಟ ಅನುಭವಿಸಬೇಕಾಗುತ್ತದೆ.

ಇಲ್ಲಿ ನಿಜವಾಗಿಯೂ ಶಿಕ್ಷಕರು ಅನುಭವಿಸುವ ಸಮಸ್ಯೆಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣವೇ ಅಥವಾ ಅದಕ್ಕೆ ಶಿಕ್ಷಕರೂ ಕಾರಣವೇ ಎಂಬುದನ್ನು ನಾವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ.  ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಅರ್ಹರಿಗೆ ವಿನಾಯತಿ ನೀಡಬೇಕಾದದ್ದು ಅಧಿಕಾರಿಗಳ ಹೊಣೆಗಾರಿಕೆ ಎಂಬುದನ್ನು ಒಪ್ಪಿಕೊಂಡೂ ಈ ಸಮಸ್ಯೆಯ ನಿರ್ವಹಣೆಯಲ್ಲಿ ಅವರಿಗೆ ಶಿಕ್ಷಕರೇ ಹೇಗೆ ಅಡೆತಡೆ ಉಂಟುಮಾಡುತ್ತಾರೆ ಎಂಬುದನ್ನೂ ನಾವು ನೋಡಬೇಕು.

ಚುನಾವಣೆ, ಜನಗಣತಿ ಇವು ರಾಷ್ಟ್ರೀಯ ಕಾರ್ಯಗಳು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಯಾರಿಗೆ ಏನೇ ಆದರೂ ಇವು ನಿಲ್ಲದೇ ನಡೆಯಬೇಕಾಗುತ್ತದೆ. ಶಿಕ್ಷಕರನ್ನು ಅನ್ಯಕೆಲಸಕ್ಕೆ ಬಳಸಿಕೊಳ್ಳಬಾರದು ಎಂಬ ನಿಯಮದಿಂದ ಈ ಎರಡು ಕಾರ್ಯಗಳನ್ನು ಹೊರಗಿಟ್ಟಿರುವುದು ಇವುಗಳ ಮಹತ್ವವನ್ನು ಸಾರುತ್ತದೆ. ಇಂತಹ ಕೆಲಸಗಳನ್ನು ಶಿಕ್ಷಕರನ್ನು ಬಿಟ್ಟು ಮಾಡುವುದೂ ವಾಸ್ತವದಲ್ಲಿ ಕಷ್ಟದ ಕೆಲಸವೇ ಸರಿ. ಹೀಗಿರುವಾಗ ಇಂತಹ ಕೆಲಸಗಳನ್ನು ಯಾರು ಯಾರಿಂದಲೋ ಮಾಡಿಸಲು ಸಾಧ್ಯವಿಲ್ಲ. ಇವು ನಾವೇ ಮಾಡಬೇಕಾದ ಬಹಳಷ್ಟು ಜವಾಬ್ದಾರಿಯ ಕೆಲಸಗಳು ಎಂದು ಸ್ವತಃ ಅರ್ಥಮಾಡಿಕೊಂಡು ಬಹಳಷ್ಟು ಸಂತೋಷದಿಂದ ಈ ಕೆಲಸದಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ ಎಷ್ಟಿದೆ ಎಂಬುದು ಇಲ್ಲಿ ಬಹಳ ಮುಖ್ಯವಾದ ಸಂಗತಿ. ಸಮಸ್ಯೆ ಇರುವವರನ್ನು  ಬಿಡಿ. ಸಮಸ್ಯೆ ಇಲ್ಲದವರಾದರೂ ಸಂತೋಷದಿಂದ ಇಂತಹ ಕೆಲಸಕ್ಕೆ ಮುಂದಾಗಿ ಬರುತ್ತಾರೆಯೇ? ಬರುತ್ತಾರೆ ಎನ್ನುವುದಾದರೆ ಅವರ ಸಂಖ್ಯೆ ಎಷ್ಟು? ನನ್ನ ಪ್ರಕಾರ ಬಹಳಷ್ಟು ಕಡಿಮೆ.

ಕಳೆದ ಮೂವತ್ತೈದು ವರ್ಷಗಳ ನನ್ನ ವೃತ್ತಿಜೀವನದಲ್ಲಿ ನನ್ನನ್ನು ಬಿಟ್ಟು ಒಂದೋ ಎರಡೋ ಚುನಾವಣೆ ನಡೆದಿರಬಹುದು ಅಷ್ಟೆ. ಇನ್ನು ಜನಗಣತಿ. ಒಬ್ಬ ಶಿಕ್ಷಕ ಅಥವಾ ನೌಕರನ ವೃತ್ತಿ ಜೀವನದಲ್ಲಿ ಸಾಮಾನ್ಯವಾಗಿ ಬರುವುದು ಎರಡೇ ಜನಗಣತಿ. ಒಂದಿಷ್ಟು ಪುಣ್ಯಮಾಡಿದವರಿಗೆ ಮೂರು ಸಿಗಬಹುದು ಅಷ್ಟೆ. ಯಾರಿಗಾದರೂ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕು ರಾಷ್ಟ್ರೀಯ ಜನಗಣತಿ ಕಾರ್ಯಗಳು ಸಿಕ್ಕರೆ ಅವರು ಬಾರೀ ಪುಣ್ಯ ಮಾಡಿದವರು ಅಂದುಕೊಳ್ಳಬೇಕು. ಏಕೆಂದರೆ ಹೀಗೆ ಒಬ್ಬ ನೌಕರನಿಗೆ ಅಥವಾ ನೌಕರಳಿಗೆ ನಾಲ್ಕು ಜನಗಣತಿ ಸಿಗಬೇಕು ಎಂದರೆ ಎರಡು ಶರತ್ತುಗಳು ಪೂರೈಕೆ ಆಗಬೇಕು. ಒಂದು: ಅವರು ಇಪ್ಪತ್ತು ವರ್ಷದೊಳಗೇ ನೌಕರಿಗೆ ಸೇರಿರಬೇಕು. ಇನ್ನೊಂದು: ಅವರು ಕೆಲಸಕ್ಕೆ ಸೇರಿದ ತಕ್ಷಣ ಒಂದು ಜನಗಣತಿ ಬರಬೇಕು. ಈ ಎರಡು ಶರತ್ತು ಪೂರೈಕೆ ಆದವರು ಮಾತ್ರ ನಾಲ್ಕು ಜನಗಣತಿ ಮಾಡುವ  ಭಾಗ್ಯ ಪಡೆದುಕೊಳ್ಳುತ್ತಾರೆ.

ಹೀಗಿದ್ದೂ ನಮ್ಮ ಶಿಕ್ಷಕರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯವನ್ನು ಸ್ವಇಚ್ಚೆಯಿಂದ ಮಾಡಲು ಮುಂದೆಬರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದೇ ಈ ಸಮಸ್ಯೆಯನ್ನು ಗಂಭೀರಗೊಳಿಸುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಇಂತಹ ಕಾರ್ಯಗಳಿಗೆ ನಿಯೋಜಿತರಾದ ಶಿಕ್ಷಕರಲ್ಲಿ ನಿಜವಾಗಿಯೂ ಸಮಸ್ಯೆ ಇರುವವರನ್ನು ಬಿಟ್ಟು ಈ ಕಾರ್ಯಗಳನ್ನು ಮಾಡುವುದು ಯಾವ ಅಧಿಕಾರಿಗೂ ವಾಸ್ತವದಲ್ಲಿ ಸಮಸ್ಯೆಯೇ ಅಲ್ಲ. ಏಕೆಂದರೆ ನಿಜವಾಗಿಯೂ ಸಮಸ್ಯೆ ಇರುವ ಶಿಕ್ಷಕರು ಅಥವಾ ನೌಕರರ ಸಂಖ್ಯೆ ಎಷ್ಟಿರುತ್ತದೆ. ಅದು ಏನೇ ಇದ್ದರೂ ಶೇಕಡಾ ಹತ್ತನ್ನು ಮೀರುವುದಿಲ್ಲ. ಆದರೂ ಇದು ಸಮಸ್ಯೆ ಆಗುವುದು ಏಕೆ ಎಂದರೆ ಸಮಸ್ಯೆ ಇಲ್ಲದವರೂ ಕೂಡ ಇಂತಹ ಕೆಲಸಗಳಿಂದ ಹೊರಗುಳಿಯಲು ಇಲ್ಲಸಲ್ಲದ ನೆಪಹೇಳಿ ತಪ್ಪಿಸಿಕೊಳ್ಳಲು  ಪ್ರಯತ್ನಿಸುವುದು.

ಒಂದು ಚುನಾವಣೆ ಅಥವಾ ಗಣತಿಯ ಸಂದರ್ಭದಲ್ಲಿ ಸಮಸ್ಯೆ ಇರುವವರ ಜೊತೆಗೆ ಸಮಸ್ಯೆ ಇರದವರೂ ಕೂಡ ದೊಡ್ಡ ಸಂಖ್ಯೆಯಲ್ಲಿ ವಿನಾಯತಿಗಾಗಿ ಕೋರಿಕೆ ಸಲ್ಲಿಸುವುದು ಸುಳ್ಳಲ್ಲ. ಒಂದೊಂದು ಸಲ ವಿನಾಯತಿ ಕೋರುವವರಲ್ಲಿ ಶೇಕಡಾ ೯೦ರಷ್ಟು ವಿನಾಯತಿಗೆ ಅರ್ಹರಲ್ಲದವರೇ ಇರುತ್ತಾರೆ.    ಹಿಂದೆ ನಾವೆಲ್ಲ ಕೆಲಸಕ್ಕೆ ಸೇರಿದ ಹೊಸತರಲ್ಲಿ ಶಿಕ್ಷಕರಿಗೆ ಬಹಳ ಕಡಿಮೆ ಸಂಬಳ ಇತ್ತು. ಆದರ್ಶದ ಕಾರಣಕ್ಕೆ ಅಲ್ಲದಿದ್ದರೂ ಕೊನೆಯ ಪಕ್ಷ ಎರಡೋ ಮೂರೋ ಸಾವಿರ ರೂಪಾಯಿ ಗೌರವಧನ ಸಿಕ್ಕರೆ ಯಾವುದಾದರೂ ಖರ್ಚಿಗೆ ಆಗುತ್ತದೆ ಎಂದಾದರೂ ಶಿಕ್ಷಕರು ಈ ಕಾರ್ಯಗಳಿಗೆ ಹೋಗುತ್ತಿದ್ದರು. ಈಗ ಶಿಕ್ಷಕರಿಗೆ ಅಂತಹ ದರ್ದೂ ಏನಿಲ್ಲ. ಯಾರಿಗೂ ತೀರಾ ಕಳಪೆ ಸಂಬಳ ಏನಿಲ್ಲ. ʼನಮ್ಮನ್ನು ಗಣತಿಯಿಂದ ಬಿಟ್ಟರೆ ನಾವೇ ಎರಡು ಸಾವಿರ ಕೊಡ್ತೀವಿʼ ಅನ್ನುವ ಮಟ್ಟದಲ್ಲಿ ಅವರಿದ್ದಾರೆ. ಹಾಗಾಗಿ ಗೌರವ ಧನದ ಆಸೆಯಿಂದ ಹೋಗುವವರು ಯಾರೂ ಇಲ್ಲ. ಆದರ್ಶದ ನೆಲೆಯಲ್ಲಿ ಹೋಗುವವರೂ ದಿನೇ ದಿನೇ ಕಡಿಮೆ ಆಗುತ್ತಿದ್ದಾರೆ.

ಈ ಕಾರಣದಿಂದ ಇಂತಹ ಕಾರ್ಯಗಳಿಗೆ ಮಾನವ ಸಂಪನ್ಮೂಲಕ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಇಂತಹ ಅಭಾವವನ್ನು ಸೃಷ್ಟಿಸುತ್ತಿರುವವರಲ್ಲಿ ಶಿಕ್ಷಕರೇ ದೊಡ್ಡ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಸಮಸ್ಯೆಯನ್ನು ಈ ಕಡೆಯಿಂದಲೂ ನೋಡಬೇಕಾಗಿದೆ. ನೆರೆಹಾವಳಿಯಾದಾಗ ಸರ್ಕಾರ ಪರಿಹಾರ ಕೊಡುತ್ತದೆ ಎಂದು ಗೊತ್ತಾದ ತಕ್ಷಣ ಬೆಳೆ ಹಾಳದವರ ಜೊತೆಗೆ ಹಾಳಾಗದವರೂ ಒಂದಿಷ್ಟು ಫೋಟೋ ದಾಖಲೆ ಸೃಷ್ಟಿಸುವುದರಿಂದ ನೆರೆಹಾವಳಿಯಲ್ಲಿ ನೀರು ಹೊಲಕ್ಕೆ ನುಗ್ಗಿದಂತೆಯೇ ತಾಲ್ಲೂಕು ಕಛೇರಿಗೆ ಅರ್ಜಿಗಳ ನೆರೆಯೂ ಹರಿದು ಬರುತ್ತದೆ! ಆಗ ಯಾರಿಗೆ ಹಾನಿ ಆಗಿದೆ ಯಾರಿಗೆ ಆಗಿಲ್ಲ ಎಂಬುದನ್ನು ಪತ್ತೆಹಚ್ಚುವುದೇ ಒಂದು ದೊಡ್ಡ ಸಮಸ್ಯೆಯಾಗಿ ಬಂದ ಅರ್ಜಿಗಳಿಗೆಲ್ಲ ತಲಾ ಐದುನೂರು ರೂಪಾಯಿ ಕೊಟ್ಟು ವ್ಯವಸ್ಥೆ ಕೈತೊಳೆದುಕೊಳ್ಳುವುದಿದೆ. ಇಲ್ಲಿಯೂ ಹಾಗೇ ಆಗುತ್ತದೆ. ಸಮಸ್ಯೆ ಇರುವವರು ಇಲ್ಲದವರೂ ಎಲ್ಲರೂ ಅಳತೊಡಗಿದರೆ, ನಿಜವಾಗಿಯೂ ಅಳುವ ಸಂಕಟ ಯಾರಿಗೆ ಇದೆ ಎಂಬುದನ್ನು ಪತ್ತೆ ಹಚ್ಚುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿ, ʼಯಾರಿಗೂ ವಿನಾಯತಿ ಕೊಡಲ್ಲ, ಹೋಗಿʼ ಎಂದು ಅವರು ಹೇಳುವುದೂ ಇದೆ.


ಅಂದರೆ ಅಧಿಕಾರಿಗಳು ಹೀಗೆ ಸಾಮೂಹಿಕವಾಗಿ ವಿನಾಯತಿ ನಿರಾಕರಿಸುವುದು ಸರಿ ಎಂದು ಪರೋಕ್ಷವಾಗಿ ಹೇಳುವುದು ನನ್ನ ಮಾತಿನ ಉದ್ದೇಶವಲ್ಲ. ಅವರು ಅವನ್ನು ಪರಿಶೀಲಿಸಿ ಅರ್ಹರಿಗೆ ಅನುಮತಿ ನೀಡಬೇಕು ಅದು ಅವರ ಹೊಣೆಗಾರಿಕೆ. ಆದರೆ ಅಂತಹ ಕೃತಕ ಅಭಾವವನ್ನು ಸೃಷ್ಟಿಸುವ ಕೆಲಸಕ್ಕೆ ಶಿಕ್ಷಕರು ಕೈ ಹಾಕದಿದ್ದರೆ ಈ ಸಮಸ್ಯೆ ದೊಡ್ಡದಾಗಿ ಬೆಳೆಯುವುದೇ ಇಲ್ಲವಾದ್ದರಿಂದ ಇದಕ್ಕೆ ಶಿಕ್ಷಕರೂ ಸಹಕರಿಸಬೇಕು ಎಂಬುದಷ್ಟೆ ಇಲ್ಲಿ ಆಶಯ. ನಿಜವಾಗಿಯೂ ಸಮಸ್ಯೆ ಇರುವವರು ಮಾತ್ರ ವಿನಾಯತಿಗೆ ಅರ್ಜಿ ಸಲ್ಲಿಸಿ ಉಳಿದವರು ಇದೊಂದು ಗೌರವ ಮತ್ತು ಘನತೆಯ ಕೆಲಸ ಎಂದು ಸ್ವ ಇಚ್ಚೆಯಿಂದ ಈ ಕೆಲಸಗಳಿಗೆ ಮುಂದಾಗುವುದಾದರೆ ನನ್ನ ಪ್ರಕಾರ ಇದೊಂದು ಸಮಸ್ಯೆಯೇ ಆಗುವುದಿಲ್ಲ.

ಕೆ ಎಸ್‌ ನರಸಿಂಹ ಸ್ವಾಮಿ ಅವರ ಹಿಂದಿನ ಸಾಲಿನ ಹುಡುಗರು ಪದ್ಯದ ಈ ಸಾಲುಗಳನ್ನು ಗಮನಿಸಿ: ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗುವರಾರಲ್ಲಿ? / ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ?. ಹಾಗೆಯೇ ಎಲ್ಲರೂ ವಿನಾಯತಿ ಕೊಡಿ ಎಂದು ಅರ್ಜಿ ಹಿಡಿದುಕೊಂಡು ಹಿಂತರೆ ಕೆಲಸ ಮಾಡಲು ಜನವೆಲ್ಲಿ?

*****

ರಾಜೇಂದ್ರ ಬುರಡಿಕಟ್ಟಿ

Sunday, May 24, 2026

Saturday, May 2, 2026

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ

 

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ


ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವರ್ಷ ಎಲ್ಲಿಲ್ಲದ ಅಡ್ಡಿ ಆತಂಕಗಳು ಎದುರಾಗಿವೆ. ನಿರ್ವಿಘ್ನವಾಗಿಯಲ್ಲದಿದ್ದರೂ ಸವಿಘ್ನವಾಗಿಯಾದರೂ `ಒಟ್ಟಿನಲ್ಲಿ ನಡೆಯಿತುಎಂಬಂತೆ ಉತ್ಸವವನ್ನು ನೆಡೆಸಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕೆಂದಿರುವ ಗುಲ್ಬರ್ಗ ಜಿಲ್ಲಾಡಳಿತದ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಲಿಕ್ಕೆ ನಾವೆಲ್ಲ ಇನ್ನೊಂದು ವಾರವಾದರೂ ಕಾಯಬೇಕಾಗಿದೆ. ಅಡ್ಡಪಲ್ಲಕ್ಕಿ ಉತ್ಸವದ ಪರ-ವಿರೋಧ ನಡೆದ ಮತ್ತು ನಡೆಯುತ್ತಿರುವ ಚರ್ಚೆ ಮತ್ತು ವಾಗ್ವಾದಗಳು, ಪ್ರತಿರೋಧ ಹಾಗೂ ಪ್ರತಿಭಟನೆಗಳು ನಮ್ಮ ಸಂವಿಧಾನ ಹಾಗೂ ನಮ್ಮ ಭಾವನೆಗಳ ಹೊಂದಾಣಿಕೆ ಕುರಿತು ನಾವು ಮತ್ತೊಮ್ಮೆ ಚಿಂತಿಸುವಂತೆ ಮಾಡಿವೆ.

ಜೇವರ್ಗಿಯಲ್ಲಿ ಅಕ್ಟೋಬರ್ ರಿಂದ ೧೪ರವರೆಗೆ ನಡೆಸಲು ಉದ್ದೇಶಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವರ್ಷ ವಿವಾದಕ್ಕೆ ಸಿಲುಕಲು ಕಾರಣ ಅದೇ ಅವಧಿಯಲ್ಲಿ ಅಲ್ಲಿನ ಕೆಲವು ಸಂಘಟನೆಗಳು ಮತ್ತು ಸ್ವಾಮೀಜಿಗಳು ಸೇರಿ `ನಿಜಶರಣರ ಜೀವನದರ್ಶನ ಪ್ರವಚನಎಂಬ ಕಾರ್ಯಕ್ರಮವನ್ನು ಸಂಘಟಿಸಿರುವುದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವ ವೇಳೆ ಸಮ್ಮೇಳನದ ಅಧ್ಯಕ್ಷರು ಸೆಕ್ಯುಲರ್ ಅಲ್ಲವೆಂದೋ ಆಯ್ಕೆಮಾಡಿಕೊಂಡ ಸ್ಥಳ ಸೆಕ್ಯೂಲರ್ ಅಲ್ಲ ಎಂದೋ ಮತ್ತೆ ಇನ್ನಾವುದೋ ಕಾರಣಕ್ಕೋ ಅದೇ ಸಮಯದಲ್ಲಿ ಕೆಲವು ವೇಳೆ ಅದೇ ಸ್ಥಳದಲ್ಲಿ ನಡೆಯುವ ಪರ್ಯಾಯ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಇದು ಒಂದು ರೀತಿಯ ಪರ್ಯಾಯ ಧಾರ್ಮಿಕ ಸಮ್ಮೇಳನ ಅನ್ನಬಹುದು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದವರೇ ಎದುರುಬದುರು ಆದಂತೆ ಇಲ್ಲಿ ಧಾರ್ಮಿಕ ಕ್ಷೇತ್ರದವರೆ ಎದುರು ಬದುರು ಆಗಿರುವುದು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬೇಕು.

ಮನುಷ್ಯರೇ ಆದ ಸ್ವಾಮಿಗಳನ್ನು ದೇವರಂತೆ ಹೊತ್ತು ಒಯ್ಯುವ (ದೇವರನ್ನು ಉದ್ದಪಲ್ಲಕ್ಕಿಯಲ್ಲಿ ಒಯ್ಯುತ್ತಾರಾದರೂ) ಅಡ್ಡಪಲ್ಲಕ್ಕಿ ಉತ್ಸವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಆದ್ದರಿಂದ ಸರ್ಕಾರ ಅದನ್ನು ನಿಷೇಧಿಸಬೇಕುಎಂಬುದು ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧಿಸುವ ಗುಂಪಿನ ಪ್ರಮುಖ ವಾದವಾದರೆ, “ ಉತ್ಸವ ಪರಂಪರಾಗತವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಆಚರಣೆ, ಅದಕ್ಕೆ ಅಡ್ಡಿಪಡಿಸುವುದು ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಮೂಲಕ ಸಂವಿಧಾನ ವಿರೋಧಿಯಾಗುತ್ತದೆಎಂಬುದು ಉತ್ಸವವನ್ನು ಬೆಂಬಲಿಸುವ ಗುಂಪಿನ ವಾದವಾಗಿದೆ.

ಸಂವಿಧಾನದ ಪ್ರಕಾರ ಯಾವುದು ಸರಿ ಯಾವುದು ತಪ್ಪು ಎಂಬುದು ನಿರ್ಣಯವಾಗಬೇಕಾದದ್ದು ನ್ಯಾಯಾಲಯದಲ್ಲಿ. ಅದನ್ನು ನಿರ್ಧಿಷ್ಟವಾಗಿ ಸ್ಪಷ್ಟಪಡಿಸಿಕೊಳ್ಳುವುದು ತುರ್ತಾಗಿ ಸಾಧ್ಯವಿಲ್ಲವಾದ್ದರಿಂದ ಎರಡೂ ಗುಂಪುಗಳ ನಡುವೆ ಶಾಂತಿ ಸಂಧಾನ ನಡೆಸಿ ಕೆಲವು ಷರತ್ತುಗಳನ್ನು ವಿಧಿಸಿ ಗುಲ್ಬರ್ಗ ಜಿಲ್ಲಾಧಿಕಾರಿಗಳು ಅಡ್ಡಪಲ್ಲಕ್ಕಿ ಉತ್ಸವವನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಅವರು ವಿಧಿಸಿರುವ ಪ್ರಮುಖ ಷರತ್ತುಗಳು ಹೀಗಿವೆ:

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಕೇವಲ ಎರಡು ನೂರು ಮೀಟರ್ವರೆಗೆ ಮಾತ್ರ ಸಾಂಕೇತಿಕವಾಗಿ ನಡೆಯಬೇಕು. ಉತ್ಸವದಲ್ಲಿ ಗಾಂಧೀಜಿ, ಬಸವಣ್ಣ, ಮಾದಾರ ಚೆನ್ನಯ್ಯ ಮುಂತಾದ ವೇಷಧಾರಿಗಳಿಂದ `ನಜರ್ಸ್ವೀಕರಿಸುವ (ನಮಸ್ಕಾರ ಮಾಡುವುದು) ಸಂಪ್ರದಾಯ ಕೈಬಿಡಬೇಕು. ಬಸವತತ್ವ ಅನುಯಾಯಿಗಳು (ಅಂದರೆ ಅಡ್ಡಪಲ್ಲಕ್ಕಿ ವಿರೋಧಿ ಗುಂಪು) ಸಂಜೆ .೦೦ ರಿಂದ .೩೦ ರವರೆಗೆ ಪ್ರವಚನ ನೀಡಬೇಕು. ಸಂಜೆ .೩೦ ರಿಂದ ೧೦.೩೦ ರವರೆಗೆ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಬೇಕು. ಷರತ್ತುಗಳ ಜೊತೆಗೆ ಕೊನೆಯಲ್ಲಿ ಎರಡೂ ಗುಂಪಿನವರಿಗೆ ಅನ್ವಯಿಸುವಂತೆ ಯಾರೂ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂಬುದು ಸಹಜವಾಗಿ ನೀಡಲಾಗಿರುವ ಎಚ್ಚರಿಕೆ ಇದೆ.

ಮುಖ್ಯವಾಗಿ ಇಲ್ಲಿ ನಡೆಯುತ್ತಿರುವ ಸಂಘರ್ಷ ಶೈವ-ವೀರಶೈವ-ಲಿಂಗಾಯತ ಮುಂತಾಗಿ ಕರೆಯಲಾಗುತ್ತಿರುವ, ಇವುಗಳ ಮಧ್ಯೆ ಒಂದಿಷ್ಟು ಭಿನ್ನತೆಗಳಿದ್ದಾಗ್ಯೂ ಸರ್ಕಾರಿ ಲೆಕ್ಕದಲ್ಲಿ ಒಂದೇ ಜಾತಿಯಾಗಿ ಗುರುತಿಸಲಾಗುತ್ತಿರುವ ಧರ್ಮದ ಸ್ಥಾಪಕರ ಕುರಿತಾದದ್ದು. ಒಂದು ವಾದದ ಪ್ರಕಾರ ವೀರಶೈವ ಧರ್ಮ ರಂಭಾಪುರಿ ಸೇರಿದಂತೆ ಐದು ಪೀಠಗಳಿಂದ ಪ್ರಾರಂಭವಾಯಿತು. ಪೀಠಗಳನ್ನು ಪಂಚಪೀಠಗಳೆಂದೂ ಇವುಗಳನ್ನು ಪ್ರತಿನಿಧಿಸುವ ಸ್ವಾಮಿಗಳನ್ನು ಪಂಚಪೀಠಾಧೀಶ್ವರರೆಂದು ಕರೆಯಲಾಗುತ್ತಿದೆ. ಇವರ ಮಠಗಳಿಗೆ ನಡೆದುಕೊಳ್ಳುವ ವೀರಶೈವ ಧರ್ಮದ ಭಕ್ತರನ್ನು `ಪಂಚಮಸಾಲಿಗಳುಎಂದು ಸಾಮಾನ್ಯವಾಗಿ ಎಂದು ಗುರುತಿಸಲಾಗುತ್ತದೆ. ಇವರ ಪ್ರಕಾರ ಬಸವಣ್ಣ ಧರ್ಮದ ಸ್ಥಾಪಕ ಅಲ್ಲ. ಆತ ಒಂದಿಷ್ಟು ಸುಧಾರಣೆ ಮಾಡಿದ ವ್ಯಕ್ತಿಮಾತ್ರ.

ಆದರೆ ಬಸವತತ್ವ ಪ್ರತಿಪಾದಕರ ಪ್ರಕಾರ ಬಸವಣ್ಣನೇ ಲಿಂಗಾಯತ -ವೀರಶೈವ ಧರ್ಮದ ಸ್ಥಾಪಕನೇ ಹೊರತು ಪಂಚಪೀಠಾಧೀಶ್ವರರಲ್ಲ. ಹಿಂದೂ ಧರ್ಮದಿಂದ ಸಿಡಿದೆದ್ದ ವಿಚಾರಧಾರೆಗಳು ಹೇಗೆ ಸ್ವತಂತ್ರವಾಗಿ ಜೈನ, ಬೌದ್ಧ ಧರ್ಮಗಳಾದವೋ ಹಾಗೆಯೇ ಧರ್ಮ ಕೂಡ ಒಂದು ಸ್ವತಂತ್ರ ಅಸ್ತಿತ್ವ ಉಳ್ಳದ್ದೇ ಹೊರತು ಹಿಂದೂ ಧರ್ಮದ ಉಪಪಂಗಡವಲ್ಲ ಎಂದುದು ಇವರ ವಾದ. ವಚನಸಾಹಿತ್ಯವನ್ನು ಧರ್ಮಗ್ರಂಥವೆಂದು ನಂಬುವ, ಇಷ್ಟಲಿಂಗವನ್ನು ಪೂಜಿಸುವ ಸ್ಥಾವರಕ್ಕಿಂತ ಜಂಗಮಕ್ಕೆ ಆದ್ಯತೆ ನೀಡುವ ಲಿಂಗಾಯತ-ವೀರಶೈವ ಧರ್ಮದ ಭಕ್ತರನ್ನು ಸಾಮಾನ್ಯವಾಗಿ `ಸಾದರುಎಂದು ಗುರುತಿಸಲಾಗುತ್ತದೆ.

ವೀರಶೈವ ಮತ್ತು ಲಿಂಗಾಯತ ಧರ್ಮಗಳು ಬೇರೆ ಬೇರೆ ಎನ್ನುವಾಗ ಸಮಸ್ಯೆ ಇಲ್ಲ. ಪಂಚಪೀಠಾಧೀಶ್ವರರು ವೀರಶೈವ ಧರ್ಮದ ಸ್ಥಾಪಕರು, ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂಬ ಸರಳ ಸೂತ್ರದಿಂದ ಇದನ್ನು ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಲೆಕ್ಕದಲ್ಲಿ ಶೈವ-ವೀರಶೈವ-ಲಿಂಗಾಯತ ಎಲ್ಲವೂ ಸೇರಿ ಒಂದು ಜಾತಿಯಾಗಿ ಪರಿಗಣಿತವಾಗಿರುವುದರಿಂದ ಮತ್ತು ಜಾತಿಗೆ ಧಾರ್ಮಿಕ ಆಚರಣೆಗಳ ಜೊತೆಗೆ ರಾಜಕೀಯ ಸಾಮಾಜಿಕ ಆಯಾಮಗಳೂ ಇರುವುದರಿಂದ ಸಮಸ್ಯೆ ಹೆಚ್ಚು ಬಿಗಡಾಯಿಸಿದೆ. ಮಧ್ಯೆ ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಪರಿಗಣಿಸಬೇಕು ಎನ್ನುವ ಮತ್ತು ಅದಕ್ಕೆ ವಿರುದ್ಧವಾಗಿ ಇವರೆಲ್ಲರನ್ನೂ ಒಂದೇ ಎಂದು ಪರಿಗಣಿಸಬೇಕು ಎಂಬ ಒತ್ತಡಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ನಡೆಯುತ್ತಲೇ ಇವೆ. ಇದು ಕೇವಲ ಒಂದು ಧರ್ಮದ ಅನುಯಾಯಿಗಳ ನಡುವಿನ ತಿಕ್ಕಾಟವಾಗಿದ್ದರೆ ಇದನ್ನು ಇಲ್ಲಿ ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ಅದಕ್ಕೆ ಅದರಾಚೆಗೂ ಸಾಮಾಜಿಕ ಮಹತ್ವವಿರುವುದರಿಂದ ಚರ್ಚೆ ಅವಶ್ಯವಾಗಿದೆ.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಬಂಧ ಗುಲ್ಬರ್ಗ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಸೂಕ್ಷ್ಮವಾಗಿ ನೋಡಿದರೆ ಷರತ್ತುಗಳು ಬಹುವಾಗಿ ಅಡ್ಡಪಲ್ಲಕ್ಕಿ ಪರವಾದ ಗುಂಪಿಗೇ ವಿಧಿಸಿರುವ ಷರತ್ತುಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ರಂಭಾಪುರಿ ಶ್ರೀಗಳು ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾಡಬಾರದು ಎಂಬುದನ್ನೇ ಒತ್ತುಕೊಟ್ಟು ಹೇಳಲಾಗಿದೆನಮ್ಮದು ಇತ್ತ ಸಂಪೂರ್ಣ ಧಾರ್ಮಿಕವೂ ಅಲ್ಲದ ಅತ್ತ ಸಂಪೂರ್ಣ ಸೆಕ್ಯುಲರ್ ಕೂಡ ಅಲ್ಲದ ಆದರೆ ಎರಡೂ ಅಂಶಗಳನ್ನು ಒಳಗೊಂಡ ಸಂಕೀರ್ಣ ಸಮಾಜೋರಾಜಕೀಯ ವ್ಯವಸ್ಥೆ. ಹಾಗಾಗಿ ನಮ್ಮ ಧಾರ್ಮಿಕ ಭಾವನೆಗಳು ಮತ್ತು ನಮ್ಮ ಸಂವಿಧಾನದ ಆಶಯಗಳ ನಡುವೆ ಘರ್ಷಣೆ ಆಗಾಗ ಇಲ್ಲಿ ಸಾಮಾನ್ಯ.

ಭಾರತ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಬಹುಶಃ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಷ್ಟು ಬೇರೆ ಯಾವುದೇ ಹಕ್ಕನ್ನು ನಾವು ದುರುಪಯೋಗ ಪಡಿಸಿಕೊಂಡಿಲ್ಲವೇನೋ. ಅನೇಕ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಹಕ್ಕಿನ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ಸಮರ್ಥಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸ್ವಾಮಿಗಳು ಕೊಡುವ ಒಂದು ಸಾಮಾನ್ಯ ಉತ್ತರ ಎಂದರೆಇದು ಭಕ್ತರ ಇಚ್ಚೆಯ ಮೇರೆಗೆ ನಡೆಯುತ್ತಿದೆ; ನನಗಾಗಿ ಅಲ್ಲಎಂಬುದು. ಹುಬ್ಬಳ್ಳಿಯಿಂದ ವರದಿಯಾದಂತೆ ಉತ್ಸವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಇದನ್ನೇ ಹೇಳಿದ್ದಾರೆ: “ದಸರಾ ದರ್ಬಾರ್ ವೀರಶೈವ ಭಕ್ತರ ಒತ್ತಾಸೆಯಿಂದ ನಡೆಯುತ್ತಿದೆಯೇ ಹೊರತು ನನ್ನ ಒತ್ತಾಸೆಯಿಂದಲ್ಲ ಹಿಂದೆ ನಡೆಯದ ಹೋರಾಟಗಳು ಈಗ ಏಕೆ?”

ಕೇವಲ ಹಿಂದಿನಿಂದ ನಡೆದು ಬಂದಿದೆ ಎಂಬ ಒಂದೇ ಕಾರಣಕ್ಕೆ ನಾವು ಯಾವುದನ್ನೂ ಒಪ್ಪಿಕೊಳ್ಳಬೇಕಾಗಿಲ್ಲ. ಯಾವುದೇ ಒಂದು ಧರ್ಮ ಅದು ಕಾಲಕ್ಕೆ ತಕ್ಕಂತೆ ತನ್ನೊಳಗೆ ಸುಧಾರಣೆ ತಂದುಕೊಳ್ಳದೇ ಹೋದರೆ ಅವನತಿಯ ಹಾದಿ ಹಿಡಿಯುತ್ತದೆ. ನಿಂತನೀರು ಗಂಗಾಜಲವೇ ಆದರೂ ಕೆಲದಿನಗಳ ನಂತರ ಕುಡಿಯಲು ಯೋಗ್ಯವಾಗದೇ ಹೋಗುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು ನಿಜ. ಆದರೆ ಬುದ್ಧಿಯನ್ನು ಒತ್ತೆಯಿಟ್ಟು ಭಾವನೆಗಳನ್ನು ಗೌರವಿಸುವ ಅವಿವೇಕಕ್ಕೆ ನಾವು ಹೋಗುವ ಅವಶ್ಯಕತೆಯಿಲ್ಲ. ಏಕೆಂದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ನೆಪವೊಡ್ಡಿ ನಾವು ನಮ್ಮ ವೈದಿಕ ಮಠಗಳಲ್ಲಿ ನಡೆಯುವ ಪಂಕ್ತಿಭೇದವನ್ನೂ ಅಷ್ಟೇ ಏಕೆ ಕುಕ್ಕೆ ಸುಬ್ರಹ್ಮಣ್ಯದ ಎಂಜಲೆಲೆ ಮೇಲಿನ ಹೊರಳಾಟದ ಮಡೆಸ್ನಾನವನ್ನೂ ಸಮರ್ಥಿಸಬಹುದಾದ ಅಪಾಯವಿದೆ.

ರಂಭಾಪುರಿ ಶ್ರೀಗಳ ಆಚರಣೆ ಪ್ರಜಾಪ್ರಭುತ್ವ ವಿರೋಧಿಯಾದ ರಾಜಪ್ರಭುತ್ವದ ಮಾದರಿಯಾದ ಅನೇಕ ಅನಿಷ್ಟ ಚಟುವಟಿಕೆಗಳನ್ನು ಹೊಂದಿರುವುದು ಎಲ್ಲರಿಗೂ ಎದ್ದುಕಾಣುವ ವಿಷಯ. ಬಸವಣ್ಣ ಮತ್ತು ಗಾಂಧೀಜಿಯ ವೇಷಧಾರಿಗಳು ಶ್ರೀಗಳಿಗೆ ಬಗ್ಗಿ ನಮಸ್ಕರಿಸುವುದು, ಜೀವಂತವಿರುವ ವ್ಯಕ್ತಿ ತನ್ನ ಸಹಮಾನವರ ಮೇಲೆ ಸವಾರಿ ಮಾಡುವುದು ಏನನ್ನು ಸೂಚಿಸುತ್ತವೆಕಾರ್ಲ್ಮಾರ್ಕ್ಸ್ ಎಂಬ ಮೇಧಾವಿ ಜಗತ್ತಿಗೆ ಬರುವ ಎಷ್ಟೋ ನೂರು ವರ್ಷಗಳ ಹಿಂದೆಯೇ ಜಗತ್ತಿಗೆ ಕಾಯಕದ ಮಹತ್ವವನ್ನೂ, ಮನುಷ್ಯರ ನಡುವಿನ ಸಮಾನತೆಯನ್ನೂ ಬಸವನ ನೇತೃತ್ವದ ಶರಣರು ಪ್ರತಿಪಾದಿಸಿದ್ದರು. ಇಂದು ವೀರಶೈವ ಸಮುದಾಯದ ಅನುಯಾಯಿಗಳ ಆಚೆಯೂ ಧರ್ಮದ ಆಶಯಗಳು ಏನಾದರು ಹರಡಿಕೊಂಡಿದ್ದರೆ ಅದಕ್ಕೆ ಬಸವಾದಿ ಶರಣರು ಮೂಲ ಕಾರಣ. ಧರ್ಮ ಮತ್ತು ಸಾಹಿತ್ಯಗಳನ್ನು ಸಮಾಜಪರಿವರ್ತನೆಯ ಪ್ರಬಲ ಅಸ್ತ್ರವಾಗಿ ಅವರಷ್ಟು ಸಮರ್ಥವಾಗಿ ಬಳಸಿಕೊಂಡವರು ಜಗತ್ತಿನಲ್ಲಿಯೇ ವಿರಳ. ಅವರ ತಾತ್ವಿಕತೆಯನ್ನು ಆಚರಣೆಗಳನ್ನು ಅವರ ನಂತರ ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರು ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ನಮ್ಮ ಸಮಾಜದ ಹತ್ತು ಹಲವು ಸಮಸ್ಯೆಗಳು ಇಂದು ಇರುತ್ತಲೇ ಇರಲಿಲ್ಲ. ಶಿವನನ್ನು ಮತ್ತು ಶವವನ್ನು ಮಾತ್ರ ಮನುಷ್ಯರು ಹೋರುವುದು ನಾನು ತಿಳಿದುಕೊಂಡಂತೆ ವೀರಶೈವ-ಲಿಂಗಾಯತ ಧರ್ಮದಲ್ಲಿ ಗೌರವದ ಸಂಕೇತವೇ ಹೊರತು ಜೀವಂತವಿರುವ ಸ್ವಾಮಿಗಳನ್ನು ಅಲ್ಲ. ಇದನ್ನು ಅರ್ಥಮಾಡಿಕೊಂಡ ಅನೇಕ ಸ್ವಾಮಿಗಳು ಇಂತಹ ಆಚರಣೆಗಳು ಹಿಂದೆ ಇದ್ದರೂ ಅವನ್ನು ತಾವೇ ಕೈಬಿಟ್ಟಿದ್ದಾರೆ. ರಂಭಾಪುರಿ ಶ್ರೀಗಳೂ ಅದನ್ನು ಬಿಟ್ಟು ದೊಡ್ಡವರಾಗಬೇಕು. ಭಕ್ತರು ಹಠಮಾಡಿದರೆ ಅವರಿಗೆ ಶ್ರೀಗಳೇ ತಿದ್ದಿ ಹೇಳಬೇಕು.

ಕಣ್ಣುಮುಚ್ಚಿಕೊಂಡು ಆಶೀರ್ವಾದ ಮಾಡುವ ಸ್ವಾಮಿಗಳಿಗಿಂತ ಕಣ್ಣುತೆರೆಸುವ ಕೆಲಸ ಮಾಡುವ ಸ್ವಾಮಿಗಳ ಅವಶ್ಯಕತೆ ನಮ್ಮ ಸಮಾಜಕ್ಕೆ ಹಿಂದಿಗಿಂತಲೂ ಇಂದು ಹೆಚ್ಚಿದೆ. ಅಂಥವರು ನಮ್ಮ ಸಮಾಜ ಪರಿವರ್ತನೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಬಲ್ಲರು. ಏಕೆಂದರೆ ಭಾರತದಲ್ಲಿ ಒಬ್ಬ ಸಾಹಿತಿ ಅಥವಾ ಒಬ್ಬ ರಾಜಕಾರಣಿಯ ಹಿಂದೆ ಇರುವುದಕ್ಕಿಂತ ಹೆಚ್ಚು ಜನ ಒಬ್ಬ ಧರ್ಮಗುರುವಿನ ಹಿಂದೆ ಇರುತ್ತಾರೆ. ನಿಟ್ಟಿನಲ್ಲಿ ರಂಭಾಪುರಿ ಶ್ರೀಗಳು ತಾವೇ ಮುಂದೆ ನಿಂತು ಆಚರಣೆಯನ್ನು ನಿಲ್ಲಿಸುವ, ಮೂಲಕ ಎಲ್ಲ ಮಾನವಪ್ರೇಮಿಗಳ ಗೌರವಕ್ಕೆ ಪಾತ್ರರಾಗಬೇಕು. ಇಲ್ಲದೇ ಹೋದರೆ ವರ್ಷ ೨೦೦ ಮೀಟರ್ಗೆ ಇಳಿದ ಅಡ್ಡಪಲ್ಲಕ್ಕಿ ಉತ್ಸವ ಮುಂದಿನ ವರ್ಷ ೧೦೦ ಮೀಟರ್ಗೆ ಅದರ ಮುಂದಿನ ವರ್ಷ ೫೦ ಮೀಟರ್ಗೆ ಹೀಗೆ ಇಳಿಯುತ್ತಾ ಹೋಗಿ ಕೊನೆಗೆ ಸ್ವಾಮಿಗಳ ಸಹಕಾರವಿಲ್ಲದೆಯೂ ನಿಂತುಹೋಗಬಹುದು!

 *****

ಡಾ. ರಾಜೇಂದ್ರ ಬುರಡಿಕಟ್ಟಿ

ಅಕ್ಟೋಬರ್‌, 2013

ಗಮನಿಸಿ: ಈ ಬರೆಹ ಬರೆದದ್ದು 2013ರ ಅಕ್ಟೋಬರ್‌ ಮೊದಲ ವಾರದಲ್ಲಿ. ಆದರೆ ಇದನ್ನು ಈ ಬ್ಲಾಗಿನಲ್ಲಿ ಹಾಕಿದ್ದು 2026ರ ಮೇ ಮೊದಲ ವಾರದಲ್ಲಿ. ಇಲ್ಲಿ ಬಳಕೆಯಾಗಿರುವ ಚಿತ್ರವು ಈ ಲೇಖನದಲ್ಲಿ ಉಲ್ಲೇಖವಾಗಿರುವ ಜೇವರ್ಗಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ್ದು. ರಾಬು

 

*****