Wednesday, April 8, 2026

ಹಿಂದಿ ಹಿಂದಿ ಎಂಬ ಹುಂಬು ಹಂಬಲವೇಕೆ?

ಹಿಂದಿ ಹಿಂದಿ ಎಂಬ ಹುಂಬು ಹಂಬಲವೇಕೆ?



ಹಿಂದಿ ಹಿಂದಿ ಎಂಬ ಹುಂಬು ಹಂಬಲವದೇಕೆ

ಹಿಂದುಮುಂದುಗಳನರಿಯದ ಬಂಧುಗಳಿರಾ?

ಭಾಷೆ ಎಂಬುದು ಕೂಡ ಪಾಷಾಣವಾದೀತು

ನಾಶವನೆ ಮಾಡೀತು ಎದೆಯ ನುಡಿಯ!

ಇತ್ತೀಚೆಗೆ ಕರ್ನಾಟಕ ಸರ್ಕಾರವು ಎಸ್‌ ಎಸ್‌ ಎಲ್‌ ಸಿ ಯಲ್ಲಿ ತೃತೀಯ ಭಾಷೆಗಳ ಅಂಕಗಳನ್ನು ಫಲಿತಾಂಶ ನಿರ್ಧರಿಸಲು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವುಗಳ ಪ್ರಗತಿಯನ್ನು ಶ್ರೇಣಿಗಳಾಗಿ ಗುರುತಿಸಲು ತೆಗೆದುಕೊಂಡ ತೀರ್ಮಾನವು ಸಾಕಷ್ಟು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿರುವ ಸಂದರ್ಭದಲ್ಲಿ ಬಂದ ಒಂದು ಅರ್ಥಪೂರ್ಣ ಕವಿತೆಯ ನಾಲ್ಕು ಸಾಲುಗಳಿವು.  ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಚರ್ಚೆಯ ಚಹರೆಯನ್ನು ಗಮನಿಸಿದರೆ ಸ್ಪಷ್ಟವಾಗಿ ಪರ ಮತ್ತು ವಿರೋಧದ ಎರಡು ಗುಂಪುಗಳಾಗಿ ವಾದ ನಡೆಯುತ್ತಿರುವುದು ಎದ್ದುಕಾಣುತ್ತಿದೆ. ಸರ್ಕಾರ ಒಟ್ಟಾರೆಯಾಗಿ ತೃತೀಯ ಭಾಷೆಗಳೆಲ್ಲವನ್ನೂ ಅಂಕಗಳಿಗೆ ಬದಲಾಗಿ ಶ್ರೇಣಿಗಳಾಗಿ ತೋರಿಸಲು ತೀರ್ಮಾನಿಸಿದೆಯಾದರೂ ಈ ಚರ್ಚೆ ಮುಖ್ಯವಾಗಿ ʻಹಿಂದಿಪರʼ ಮತ್ತು ʻಹಿಂದಿವಿರೋಧʼ ಆಗಿಯೇ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ಪ್ರೌಢಶಾಲಾ ಹಂತದಲ್ಲಿ ತೃತೀಯ ಭಾಷೆಗಳಾಗಿ ಕಲಿಸಲ್ಪಡುತ್ತಿರುವ ಭಾಷೆಗಳಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವುದು ಹಿಂದಿಯೇ ಆಗಿರುವುದಾಗಿದೆ. ಈ ಹಿನ್ನಲೆಯಲ್ಲಿ ಈ ಲೇಖನದಲ್ಲಿನ ಚರ್ಚೆಯನ್ನು ಹಿಂದಿ ಕೇಂದ್ರಿತವಾಗಿಯೇ ಮಾಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯ ಪರ ಮತ್ತು ವಿರೋಧದ ಚರ್ಚೆ ಇಂದು ನಿನ್ನೆಯದಲ್ಲ. ಇದಕ್ಕೆ ಸ್ವತಂತ್ರ ಭಾರತದಲ್ಲಿ ಉದ್ದನೆಯ ಇತಿಹಾಸವೇ ಇದೆ. ಈ ಚರ್ಚೆಗೆ ತೊಡಗುವ ಮೊದಲು ಭಾರತೀಯ ಭಾಷೆಗಳಲ್ಲಿ ಹಿಂದಿ ವಿಶೇಷವಾಗಿ ಬೆಳೆದದ್ದು ಹೇಗೆ ಎಂಬುದನ್ನು ನೋಡೋಣ.

ಹಿಂದಿಯ ಆರಂಭಿಕ ಹೆಜ್ಜೆಗಳು

ವಾಸ್ತವದಲ್ಲಿ ಹಿಂದಿ ದೊಡ್ಡಭಾಷೆಯಾಗಿ ಬೆಳೆದಿರುವುದು ಉತ್ತರ ಭಾರತದ ಅನೇಕ ಚಿಕ್ಕಪುಟ್ಟ ಭಾಷೆಗಳನ್ನು ನುಂಗಿ ನೀರು ಕುಡಿದದ್ದರಿಂದ. ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಹಿಮಚಲ ಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಆಡುವ ಭಾಷೆ ಒಂದೇ ಇಲ್ಲ. ಭೋಜಪುರಿ, ಗೊಂಡಿ ಸೇರಿದಂತೆ ಅನೇಕ ಚಿಕ್ಕಪುಟ್ಟ ಭಾಷೆಗಳನ್ನು ಜನ ಮಾತನಾಡುತ್ತಾರೆ. ಆದರೆ ಅವೆಲ್ಲವನ್ನೂಒಂದು ದೊಡ್ಡ ಬುಟ್ಟಿಯಲ್ಲಿ ಹಾಕಿ ಮೇಲೆ ಹಿಂದಿ ಎಂದು ಲೇಬಲ್‌ ಅಂಟಿಸಲಾಗಿರುವುದರಿಂದ ಹಿಂದಿ ಇಂದು ಭಾರತ ʻಬಹುಜನರ ಭಾಷೆʼ ಎಂದು ಬಿಂಬಿತವಾಗಿದೆ. ಭಾಷಿಕವಾಗಿ ಹೀಗಾದರೆ ಕೆಲವು ಆಡಳಿತಾತ್ಮಕ ಕ್ರಮಗಳಿಂದಲೂ ಹಿಂದಿ ದೊಡ್ಡದಾಗಿದೆ. ಉದಾಹರಣೆಗೆ 1951ರ ಜನಗಣತಿಯಲ್ಲಿ ʻಹಿಂದೂಸ್ತಾನಿʼ ಮಾತನಾಡುವ ಜನ 15 ಕೋಟಿ ಎಂದು ಗುರುತಿಸಲಾಗಿದೆ. ಆದರೆ 1961 ರ ಜನಗಣತಿಯಲ್ಲಿ ಹಿಂದೂಸ್ತಾನಿ ಮಾತನಾಡುವ ಜನರೇ ಇಲ್ಲ! ಕೇವಲ ಹತ್ತು ವರ್ಷಗಳಲ್ಲಿ ಈ ಹದಿನೈದು ಕೋಟಿ ಜನ ಏನಾದರು? ಆ ಅವಧಿಯಲ್ಲಿ ಯಾವುದೇ ದೊಡ್ಡ ಯುದ್ಧ, ಹತ್ಯಾಕಾಂಡ ಏನೂ ನಡೆದಿಲ್ಲ. ಇದು ಹೇಗೆ ಸಾಧ್ಯವಾಯಿತು ಎಂದರೆ ಅವರಲ್ಲಿ ಕೆಲವರನ್ನು ಉರ್ದುಗೆ ವರ್ಗಾಯಿಸಿದರೆ ಬಹಳಷ್ಟು ಜನರನ್ನು ಹಿಂದಿಗೆ ವರ್ಗಾಯಿಸಲಾಯಿತು! ಹಿಂದಿ ಬೆಳೆದು ಬಂದ ದಾರಿಯಿದು.

ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ನಮ್ಮ ದೇಶ ಬಹುಸಂಸ್ಕೃತಿ ಮತ್ತು ಬಹುಭಾಷೆಗಳ ಸಮೂಹವಾಗಿತ್ತಾದ ಕಾರಣ ದೇಶದ ಏಕತೆ ಮತ್ತು ಸಮಗ್ರತೆಯ ಸಲುವಾಗಿ ದೇಶದ ಎಲ್ಲ ಜನರೂ ಪರಸ್ಪರ ಸಂವಹನ ನಡೆಸಲು ಅನುಕೂಲಕರವಾದ ಒಂದು ಸಾಮಾನ್ಯ ಭಾಷೆಯನ್ನು ಒಕ್ಕೂಟದ ʻಆಡಳಿತ ಭಾಷೆʼಯೆಂದು ಆಯ್ಕೆಮಾಡಿಕೊಳ್ಳಬೇಕಾದ ಜರೂರು ಆಗ ನಮ್ಮ ರಾಷ್ಟ್ರೀಯ ನಾಯಕರಿಗೆ ಉಂಟಾಯಿತು. ಆ ಸಂದರ್ಭದಲ್ಲಿ ಇಂಗ್ಲಿಷೋ ಅಥವಾ ಭಾರತದ್ದೇ ಆದ ಯಾವುದಾದರೂ ಭಾಷೆಯೋ ಎಂಬ ಬಗ್ಗೆ ದೀರ್ಘ ಚರ್ಚೆ ನಡೆದಿದೆ. ಅದೇ ಆಗ ಬ್ರಿಟೀಷರನ್ನು ದೇಶದಿಂದ ಹೊರಗೆ ಓಡಿಸಿದ್ದ ಭಾರತೀಯ ನಾಯಕರಿಗೆ ಅವರ ಭಾಷೆಯಾದ ಇಂಗ್ಲಿಷನ್ನು ಹೀಗೆ ಒಕ್ಕೂಟದ ʻಆಡಳಿತ ಭಾಷೆʼಯಾಗಿ ಇಟ್ಟುಕೊಳ್ಳುವುದು ಅವರ ದಾಸ್ಯ ಅಥವಾ ಹಂಗಿನಲ್ಲಿಯೇ ಇದ್ದಂತೆ ಆಗುತ್ತದೆ ಅನ್ನಿನಿದ್ದು ಸಹಜವೆ.

ಇಂತಹ ಸಂದರ್ಭದಲ್ಲಿ ಇಂಗ್ಲಿಷಿನ ಸ್ಥಳದಲ್ಲಿ ʼಸಂಸ್ಕೃತʼವನ್ನು ಕೂರಿಸಲು ಕೆಲವು ಸಂಪ್ರದಾಯವಾದಿಗಳು ಹವಣಿಸಿದರಾದರೂ ಆಗಲೇ ಸಂಸ್ಕೃತ ʼಪೂಜಾಕೋಣೆಯ ಭಾಷೆʼಯಾಗಿಬಿಟ್ಟಿದ್ದರಿಂದ ಅವರ ಹವಣಿಕೆಗೆ ಅವಕಾಶವಾಗಲಿಲ್ಲ. ಆಗ ಅನಿವಾರ್ಯವಾಗಿ ಭಾರತದಲ್ಲಿ ಬಹಳಷ್ಟು ಜನ ಆಡುವ ಭಾಷೆ ಎಂಬ ಅರ್ಹತೆಯ ಮೇರೆಗೆ ಈ ಹಿಂದಿ ಮುನ್ನೆಲೆಗೆ ಬಂತು. ಹಿಂದಿ ಒಂದು ರೀತಿಯಲ್ಲಿ ಸಂಸ್ಕೃತದ ಅವತಾರವಾಗಿ ಇರುವುದರಿಂದಲೂ, ಸಂಸ್ಕೃತದಂತೆ ದೇವನಾಗರಿಯ ಲಿಪಿಯನ್ನೇ ಹೊಂದಿರುವುದರಿಂದಲೂ ಸಂಪ್ರದಾಯವಾದಿಗಳು ಇದನ್ನು ಸಂತೋಷದಿಂದ ಅಲ್ಲದಿದ್ದರೂ ಅನಿವಾರ್ಯ ಆಯ್ಕೆಯಾಗಿ ಒಪ್ಪಬೇಕಾಯಿತು. ಹೀಗಾಗಿ ಸಂವಿಧಾನ ರಚನಾ ಸಭೆ 1949ರ ಸೆಪ್ಟಂಬರ್‌ ಹದಿನಾಲ್ಕರಂದು ಹಿಂದಿಯನ್ನು ಭಾರತದ ಒಂದು (ಒಂದೇ ಅಲ್ಲ) ಅಧಿಕೃತ ʻಆಡಳಿತ ಭಾಷೆʼಯನ್ನಾಗಿ ಅಂಗೀಕರಿಸಿತು. ಇದರ ನೆನಪಿಗಾಗಿ ಪ್ರತಿವರ್ಷ ಈ ದಿನವನ್ನು ರಾಷ್ಟ್ರೀಯ ಹಿಂದಿದಿನ ವೆಂದು ಈಗಲೂ ಆಚರಿಸಲಾಗುತ್ತಿದೆ.

ಸಾಂವಿಧಾನಿಕ ಬಲದಿಂದ ಹಿರಿಯಕ್ಕನಾದ ಹಿಂದಿ

ಹೀಗೆ ಆಡಳಿತ ಭಾಷೆಯಾಗಿ ಅಂಗೀಕಾರವಾದ ಮೇಲೆ ಸಂವಿಧಾನದಲ್ಲಿ ಅದರ ಬಗ್ಗೆ ಒತ್ತುಕೊಟ್ಟು ಹೇಳಬೇಕಾದ ಅವಶ್ಯಕತೆ ಉಂಟಾಯಿತು. ನಮ್ಮ ಸಂವಿಧಾನದ ಹದಿನೇಳನೆಯ ವಿಭಾಗವು ʼಆಡಳಿತ ಭಾಷೆʼ (OFFICIAL LANGUAGE) ಕುರಿತೇ ಇದೆ. ಅದರಲ್ಲಿ ಮೊದಲ ಅಧ್ಯಾಯ ಭಾರತ ಒಕ್ಕೂಟದ ಆಡಳಿತ ಭಾಷೆ ಯಾವುದಿರಬೇಕು ಎಂಬ ಬಗ್ಗೆ ವಿವರಿಸುತ್ತದೆ. ಅದರ ಮೊದಲನೆಯ ವಿಧಿ ಅಂದರೆ ಸಂವಿಧಾನದ 343ನೇ ವಿಧಿಯ ಮೂಲಕ ಅಂತರರಾಷ್ಟ್ರೀಯ ಅಂಕಿ ಸಂಖ್ಯೆಗಳನ್ನು ಒಳಗೊಂಡ ದೇವನಾಗರಿ ಲಿಪಿಯ ಹಿಂದಿಯನ್ನು ಒಕ್ಕೂಟದ ಆಡಳಿತ ಭಾಷೆಯನ್ನಾಗಿ ಸಂವಿಧಾನಬದ್ಧಗೊಳಿಸಲಾಯಿತು. (ದೇವನಾಗರಿಯ ಅಂಕಿ ಸಂಖ್ಯೆಗಳನ್ನು ಕೈಬಿಡಲಾಯಿತು). ಈ ಅಧ್ಯಾಯದ ವಿವಿಧ ವಿಧಿಗಳ ಪ್ರಕಾರ ಆಗ ಆಡಳಿತ ಭಾಷೆಯಾಗಿದ್ದ ಇಂಗ್ಲಿಷನ್ನು ಇಲ್ಲದಂತೆ ಮಾಡಿ ದೇಶದ ಏಕಮೇವ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನೇ ಇಟ್ಟುಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ ದೇಶದ ಎಲ್ಲಭಾಗಗಳ ಜನರಿಗೆ ವಿಶೇಷವಾಗಿ ದಕ್ಷಿಣದವರಿಗೆ ಆಗ ಹಿಂದಿಗಿಂತ ಇಂಗ್ಲಿಷ್‌ ಹತ್ತಿರವಾಗಿದ್ದ ಕಾರಣ ತಾತ್ಕಾಲಿಕವಾಗಿ ಸಂವಿಧಾನ ಜಾರಿಗೆ ಬಂದು ಹದಿನೈದು ವರ್ಷಗಳವರೆಗೆ ಹಿಂದಿಯನ್ನು ಆಡಳಿತ ಭಾಷೆಯಾಗಿಟ್ಟುಕೊಳ್ಳುವುದರ ಜೊತೆಗೆ ಇಂಗ್ಲಿಷನ್ನೂ ʻಸಹ ಆಡಳಿತ ಭಾಷೆʼಯಾಗಿ ಉಳಿಸಿಕೊಳ್ಳಲಾಯಿತು.

ಆ ಹದಿನೈದು ವರ್ಷಗಳಾದ ಮೇಲೆ ಅದಕ್ಕಾಗಿ ರಾಷ್ಟ್ರಪತಿಗಳು ಒಂದು ಸಮಿತಿ ರಚಿಸಿ ತೀರ್ಮಾನಿಸಲು ನಿರ್ಧರಿಸಿದರು. ಅಂದರೆ ಹಂತಹಂತವಾಗಿ ಹಿಂದಿಯ ಕಲಿಕೆಯನ್ನು ಪ್ರೋತ್ಸಾಹಿಸುತ್ತಾ ಇಂಗ್ಲಿಷಿನ ಪ್ರಭಾವವನ್ನು ಕಡಿಮೆ ಮಾಡುತ್ತಾ ಹೋಗಿ ಅದು ಇಲ್ಲದಂತೆ ಮಾಡುವುದು ಅವರ ಉದ್ದೇಶ. ಹೀಗಾಗಿ ಹಿಂದಿಯ ಕಲಿಸುವಿಕೆಗೆ ಆದ್ಯತೆ ನೀಡುವುದನ್ನು 351ನೇ ವಿಧಿಯ ಪ್ರಕಾರ ಸಂವಿಧಾನಬದ್ಧಗೊಳಿಸಲಾಯಿತು. ಈ ವಿಧಿಯು, ಭಾರತದ ಸಂಯೋಜಿತ ಸಂಸ್ಕೃತಿಯ ಎಲ್ಲ ಅಂಶಗಳ ಅಭಿವ್ಯಕ್ತಿಗೆ ಮಾಧ್ಯಮವಾಗುವಂತೆ ಹಿಂದಿ ಭಾಷೆಯನ್ನು ಅಭಿವೃದ್ಧಿಪಡಿಸುವುದನ್ನು ಒಕ್ಕೂಟದ ಕರ್ತವ್ಯವಾಗಿಸಿದ್ದರಿಂದ ಮತ್ತು ಇದೇ ವಿಧಿ ಸಂಸ್ಕೃತ ಸೇರಿದಂತೆ ಒಕ್ಕೂಟದ ಎಲ್ಲ ಭಾಷೆಗಳಿಂದ ಸಾಧ್ಯವಿರುವಕಡೆ ಮತ್ತು ಅವಶ್ಯವೆನಿಸಿದಕಡೆ ಶಬ್ದಸಂಪತ್ತನ್ನು ಪಡೆದುಕೊಂಡು ಈ ಹಿಂದಿಗೆ ಬೆಳೆಯುವ ಅವಕಾಶ ಮಾಡಿಕೊಟ್ಟದ್ದರಿಂದ ಈ ವಿಧಿಯನ್ನು ಬೆನ್ನಿಗೆ ಇಟ್ಟುಕೊಂಡು ಒಕ್ಕೂಟ ಸರ್ಕಾರ ಈ  ಭಾಷೆಯ ಅಭಿವೃದ್ಧಿಗಾಗಿ ಭಾರಿಮೊತ್ತದ ಹಣಕಾಸಿನ ನೆರವನ್ನು ಒದಗಿಸುವ ಮೂಲಕ ವಿಶೇಷ ಯೋಜನೆಗಳನ್ನು ರೂಪಿಸತೊಡಗಿದ್ದರಿಂದ ಈ ಭಾಷೆ ಸಹಜವಾಗಿಯೇ ವ್ಯಾಪಕವಾಗಿ ಬೆಳೆಯಲು ಕಾರಣವಾಗಿ ಅದನ್ನು ಹಿಡಿಯುವವರೇ ಇಲ್ಲದಂತಾಯಿತು.

ಹೀಗೆ ಸಾಂವಿಧಾನಿಕ ಸ್ಥಾನಮಾನ ಪಡೆದ ಮೇಲೆ ಹಿಂದಿಗೆ ಕೆಲವು ಸುಳ್ಳು ಆರೋಪಗಳನ್ನು ಹೊರಿಸಲಾಯಿತು. ಅಂತಹ ಸುಳ್ಳು ಆರೋಪಗಳಲ್ಲಿ ಅತ್ಯಂತ ಮುಖ್ಯವಾದದ್ದು ಅದನ್ನು ʻರಾಷ್ಟ್ರಭಾಷೆʼ ಎಂದು ಪರಿಗಣಿಸಲಾಗಿದೆ ಎಂಬುದು. ಹಿಂದಿಯನ್ನು ಸಂವಿಧಾನದಲ್ಲಿಯಾಗಲೀ ಆ ಬಗ್ಗೆ ಬಂದ ವರದಿಗಳಲ್ಲಾಗಲಿ ಎಲ್ಲಿಯೂ ʻರಾಷ್ಟ್ರಭಾಷೆʼ (National Language) ಎಂದು ಕರೆದಂತಿಲ್ಲ. ಅದನ್ನು ಕರೆದಿರುವುದು ʼಆಡಳಿತ ಭಾಷೆʼ (Official Language) ಎಂದು.  ಅದನ್ನು ಹಾಗೆ ಕರೆದದ್ದೂ ಸಂವಹನದ ಅನುಕೂಲಕ್ಕಾಗಿ.  ವಾಸ್ತವ ಹೀಗಿದ್ದೂ ಅದು ʼರಾಷ್ಟ್ರಭಾಷೆʼ ಎಂಬ ವಿಶೇಷ ಗೌರವ ಪಡೆಯತೊಡಗಿತು. ಭಾರತ ಸಂವಿಧಾನದಲ್ಲಿನ ಭಾಷೆಗಳ ಕುರಿತ ಎಂಟನೆಯ ಪರಿಚ್ಚೇದದಲ್ಲಿರುವ ಎಲ್ಲ ಭಾಷೆಗಳೂ ದೇಶದ ಅಧಿಕೃತ ಭಾಷೆಗಳೆ ಆಗಿದ್ದರೂ ಹಿಂದಿಯನ್ನು ಕುರಿತ ಈ ರೀತಿಯ ತಪ್ಪುಗ್ರಹಿಕೆಯಿಂದ ಉಳಿದ ಭಾಷೆಗಳು ಕೀಳರಿಮೆಗೆ ಒಳಗಾಗುವಂತಾಗಿ ಹಿಂದಿ ಎಲ್ಲರೊಳಗೊಂದಾಗದೆ ಹಿರಿಯಕ್ಕನಾಗಿ ಮರೆಯತೊಡಗಿತು.

ತ್ರಿಭಾಷಾಸೂತ್ರದ ಜನನ ಮತ್ತು ಬಾಲ್ಯ

ಹಿಂದಿಯನ್ನು ಬೆಳೆಸುವ ಕೆಲಸ ಒಂದು ಸಾಂವಿಧಾನಿಕ ಜಬಾಬ್ದಾರಿ ಎಂದಾದ ಬಳಿಕ ಅದನ್ನು ದೇಶವಾಸಿಗಳಲ್ಲಿ ತಳಮಟ್ಟದಿಂದಲೇ ಕಲಿಸುವ ಕೆಲಸಗಳು ಆರಂಭವಾಗುವುದು ಸಹಜ. ಈಗ ನಮ್ಮಲ್ಲಿ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರ 1966ರ ಕೊಠಾರಿ ಆಯೋಗವೇ ಮೊದಲಬಾರಿ ಕೊಟ್ಟದ್ದು ಎಂದು ಬಹಳ ಜನ ತಿಳಿದಿದ್ದಾರೆ. ಆದರೆ ಇದು ಅರ್ಥಸತ್ಯವೇ ಹೊರತು ಪೂರ್ಣಸತ್ಯವಲ್ಲ. ಏಕೆಂದರೆ ಕೊಠಾರಿ ಆಯೋಗ ತಾನೇ ಮೊದಲಾಗಿ ಈ ತ್ರಿಭಾಷಾ ಸೂತ್ರವನ್ನು ಹುಟ್ಟುಹಾಕಲಿಲ್ಲ. ಬದಲಾಗಿ ಆಗಲೇ ಸಿದ್ಧವಾಗಿದ್ದ ಆ ಸೂತ್ರವನ್ನು ಒಂದಿಷ್ಟು ಮಾರ್ಪಡಿಸಿ ಕೊಟ್ಟಿತು. ಹಾಗಾದರೆ ಈ ತ್ರಿಭಾಷಾ ಸೂತ್ರದ ಜನ್ಮಸ್ಥಳ ಯಾವುದು?

ಐವತ್ತರ ದಶಕದಲ್ಲಿ ಕರ್ನಾಟಕ (ಆಗಿನ ಮೈಸೂರು) ಸೇರಿದಂತೆ ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದ ಮೇಲೆ ರಾಜ್ಯಗಳಲ್ಲಿ ಶಿಕ್ಷಣ ಮಾಧ್ಯಮ ಯಾವುದಿರಬೇಕು, ಅಲ್ಲಿ ಕಲಿಸುವ ಭಾಷೆಗಳು ಯಾವಿರಬೇಕು ಎಂಬ ಬಗ್ಗೆ ಸಹಜವಾಗಿ ಚರ್ಚೆಗಳು ಮುನ್ನೆಲೆಗೆ ಬಂದವು. ಭಾರತದಂತಹ ಒಂದು ಸಂಕೀರ್ಣ ಬಹುಭಾಷಿಕ ದೇಶದಲ್ಲಿ ಭಾಷೆಗಳ ನಿರ್ವಹಣೆ ಯಾರಿಗಾದರೂ ಒಂದು ಸವಾಲಿನ ಕೆಲಸವೇ ಸರಿ. ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯನ್ನು ದೀರ್ಘವಾಗಿ ಅಧ್ಯಯನ ಮಾಡಿದ ಆಗಿನ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ (The Central Advisory Board of Education) 1956 ರಲ್ಲಿ ಮೊಟ್ಟಮೊದಲ ಬಾರಿಗೆ ʼತ್ರಿಭಾಷಾ ಸೂತ್ರʼ ಎಂಬ ಒಂದು ಸೂತ್ರವನ್ನು ರೂಪಿಸಿತು. ಇದೇ ನಮ್ಮ ಈಗಿರುವ ತ್ರಿಭಾಷಾ ಸೂತ್ರದ ಜನ್ಮಸ್ಥಳ ಮತ್ತು ಹುಟ್ಟಿದ ವರ್ಷ!

ಇದೇ ಸೂತ್ರವನ್ನು ಒಂದಿಷ್ಟು ಚರ್ಚೆಗಳ ನಂತರ 1961ರಲ್ಲಿ ನಡೆದ ಮುಖ್ಯಮಂತ್ರಿಗಳ ಮಹಾಸಮ್ಮೇಳನ ಒಪ್ಪಿಕೊಂಡಿತು. ಈ ಸೂತ್ರದ ಪ್ರಕಾರ ಹಿಂದಿಯೇತರ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಯನ್ನು ಪ್ರಥಮ ಭಾಷೆಯಾಗಿಯೂ, ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿಯೂ ಹಿಂದಿಯನ್ನು ತೃತೀಯ ಭಾಷೆಯಾಗಿಯೂ ಕಲಿಸಬೇಕು ಮತ್ತು ಹಿಂದೀ ರಾಜ್ಯಗಳಲ್ಲಿ ಹಿಂದಿಯನ್ನು ಪ್ರಥಮ ಭಾಷೆಯಾಗಿಯೂ, ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿಯೂ ಇವುಗಳ ಜೊತೆಗೆ ಇನ್ನೊಂದು ಭಾರತೀಯ ಭಾಷೆಯನ್ನು ತೃತೀಯ ಭಾಷೆಯಾಗಿಯೂ ಕಲಿಸಬೇಕು ಎಂಬುದು ಅಂತಿಮವಾಗಿ ತೀರ್ಮಾನವಾಯಿತು. ಆ ಹಂತದಲ್ಲಿ ಇಂಗ್ಲಿಷು ಅನಿವಾರ್ಯ ಅನ್ನಿಸಿತ್ತಾದ್ದರಿಂದ ಎಲ್ಲರಿಗೂ ಅದನ್ನು ಇರಿಸಲಾಯಿತು. ದಕ್ಷಿಣದವರಿಗೆ ಹಿಂದಿಯ ಅವಶ್ಯಕತೆ ಇದ್ದಂತೆ ಉತ್ತರದವರಿಗೆ ಹಿಂದಿ ಮತ್ತು ಇಂಗ್ಲಿಷು ಹೊರತು ಬೇರ ಒಂದು ಭಾಷೆಯನ್ನು ಕಲಿಸುವ ಅಗತ್ಯ ಆಗ ಇಲ್ಲದಿದ್ದರೂ ʻನಾವಷ್ಟೇ ಏಕೆ ಅವರ ಭಾಷೆ ಕಲಿಯಬೇಕು; ಅವರೂ ನಮ್ಮದನ್ನು ಕಲಿಯಲಿʼ ಎಂಬ ದಕ್ಷಿಣದ ಒತ್ತಡ ಇದರ ಹಿಂದೆ ಕೆಲಸ ಮಾಡಿತ್ತು!

ಸೂತ್ರವನ್ನು ಶಿಸ್ತುಬದ್ಧಗೊಳಿಸಿದ ಕೊಠಾರಿ ಆಯೋಗ

ದೇಶದ ಶಿಕ್ಷಣವನ್ನು ಕುರಿತು ಅಲ್ಲಲ್ಲಿ ಇಂತಹ ಬಿಡಿಬಿಡಿಯಾದ ತೀರ್ಮಾನಗಳು ಆಗುತ್ತಿದ್ದದ್ದನ್ನು ಬಿಟ್ಟರೆ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ನಮ್ಮದೇ ಆದ ಒಂದು ಶಿಸ್ತುಬದ್ಧವಾದ ಶಿಕ್ಷಣ ನೀತಿ ಎಂಬುದು ಇರಲಿಲ್ಲ. ಇದನ್ನು ಮನಗಂಡ ಆಗಿನ ಒಕ್ಕೂಟ ಸರ್ಕಾರ ಈ ಬಗ್ಗೆ ನೀತಿರೂಪಿಸಲು ಒಂದು ವರದಿ ಕೊಡಲು ಆಗಿನ ಯುಜಿಸಿ ಛೇರ್‌ಮನ್‌ ಆಗಿದ್ದ ದೇಶದ ಮುಖ್ಯ ಶಿಕ್ಷಣ ತಜ್ಞರೂ ಆಗಿದ್ದ ಡಾ. ಜಿ. ಎಸ್.‌ ಕೊಠಾರಿ ಅವರ ಅಧ್ಯಕ್ಷತೆಯಲ್ಲಿ ಆಯೋಗವೊಂದನ್ನು ರಚಿಸಿತು. 1964ರಲ್ಲಿ ರಚಿತವಾದ ಈ ಆಯೋಗ 1966ರಲ್ಲಿ ತನ್ನ ವರದಿಯನ್ನು ನೀಡಿತು. ʻಕೊಠಾರಿ ಆಯೋಗʼ ಎಂದೇ ಹೆಸರಾಗಿರುವ ಈ ಆಯೋಗದ ವರದಿ ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎಂದೇ ಗುರುತಿಸಲ್ಪಡುತ್ತದೆ. ʼಭಾರತದ ಭವಿಷ್ಯವು ಈಗ ಶಾಲಾ ಕೋಣೆಗಳಲ್ಲಿ ರೂಪಿತವಾಗುತ್ತದೆʼ ಎಂಬ ಅತ್ಯಂತ ಮಹತ್ವದ ಹೇಳಿಕೆಯಿಂದಲೇ ಪ್ರಾರಂಭವಾಗುವ ಈ ಬೃಹತ್‌ ವರದಿಯ ಶೀರ್ಷಿಕೆಯೇ ʻಶಿಕ್ಷಣ ಮತ್ತು ರಾಷ್ಟ್ರೀಯ ಅಭಿವೃದ್ಧಿʼ ಎಂದು! ಈ ವರದಿ ದೇಶದ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಅನೇಕ ಶಿಸ್ತುಬದ್ಧ ಕ್ರಮಗಳನ್ನು ಶಿಫಾರಸ್ಸು ಮಾಡಿತು., 10+2+3 ಶಿಕ್ಷಣ ಹಂತಗಳು, ಮಾತೃಭಾಷೆಯ ಮೂಲಕ ಶಿಕ್ಷಣ, ಶಿಕ್ಷಕರ ತರಬೇತಿ, ಶಿಕ್ಷಣಕ್ಕೆ ಮುಂಗಡಪತ್ರದಲ್ಲಿ ತೆಗೆದಿಡಬೇಕಾದ ಹಣದ ಪಾಲು ಇಂಥವು ಅವುಗಳನ್ನು ಮುಖ್ಯವಾದವು.

ಕೊಠಾರಿ ಆಯೋಗವು ಇಷ್ಟೆಲ್ಲ ಒಳ್ಳೆಯ ಶಿಫಾರಸ್ಸುಗಳನ್ನು ಮಾಡಿದರೂ ಅದು ಮಾಡಿದ ಒಂದು ಶಿಫಾರಸ್ಸು ದೇಶದಲ್ಲಿ ಮುಂದೆ ದಕ್ಷಿಣ ಮತ್ತು ಉತ್ತರದ ನಡುವೆ ಭಾಷಿಕ ಸಮಸ್ಯೆಯೊಂದು ಹುಟ್ಟಿಕೊಳ್ಳಲು ಕಾರಣವಾಯಿತು. ಆ ಶಿಫಾರಸ್ಸು ಎಂದರೆ ಈಗಾಗಲೇ ಮೇಲೆ ತಿಳಿಸಿದಂತೆ ಸಿದ್ಧವಾಗಿದ್ದ ತ್ರಿಭಾಷಾ ಸೂತ್ರವನ್ನು ಒಂದಿಷ್ಟು ಮಾರ್ಪಡಿಸಿ ಅದನ್ನು ಅನುಷ್ಠಾನಕ್ಕೆ ಶಿಫಾರಸ್ಸು ಮಾಡಿದ್ದು. ಅದಕ್ಕೂ ಮೊದಲು ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಅಂತಿಮಗೊಂಡಿದ್ದ ತ್ರಿಭಾಷಾ ಸೂತ್ರವನ್ನು ಅದು, “ಶೈಕ್ಷಣಿಕ ಕಾರಣಕ್ಕಿಂತ ರಾಜಕೀಯ ಮತ್ತು ಸಾಮಾಜಿಕ ಕಾರಣಕ್ಕಾಗಿ ರೂಪುಗೊಂಡ ಸೂತ್ರ” ಎಂದು ಕರೆದು ಅದನ್ನು ಮಾರ್ಪಡಿಸಿತು. ಅದು ಹಾಗೆ ಕರೆಯಲು ಹಿಂದಿಯನ್ನು ದಕ್ಷಿಣದವರು ಕಲಿಯುವಂತೆ ಉತ್ತರದವರು ಇನ್ನೊಂದು ಭಾಷೆಯನ್ನು ಕಲಿಯಲಿ ಎಂದು ದಕ್ಷಿಣದಿಂದ ಬಂದ ಒತ್ತಡ ಅದಕ್ಕೆ ರಾಜಕೀಯ ಕಾರಣವಾಗಿ ಕಂಡದ್ದು.


ಹಾಗಾಗಿ ಇದು ಆ ಸೂತ್ರವನ್ನು ತುಸು ಮಾರ್ಪಡಿಸಿ ಮೂರು ಭಾಷೆಗಳನ್ನು ಕಲಿಸುವುದು ಹೀಗೆ ಇರಬೇಕು ಎಂದು ಹೇಳಿತು: ೧) ಪ್ರಾದೇಶಿಕ ಅಥವಾ ರಾಜ್ಯದ ಭಾಷೆ ೨) ಒಕ್ಕೂಟದ ಅಧಿಕೃತ ಭಾಷೆ (ಹಿಂದಿ),  ಅಥವಾ ಸಹ ಅಧಿಕೃತ ಭಾಷೆ (ಇಂಗ್ಲಿಷ್) ೩) ಆಧುನಿಕ ಭಾರತೀಯ ಅಥವಾ ವಿದೇಶಿ ಭಾಷೆ (ಮೇಲಿನ ಎರಡರಲ್ಲಿ ಇಲ್ಲದ ಭಾಷೆ). ಈ ಮಾರ್ಪಡಿತ ಸೂತ್ರದ ಪ್ರಕಾರ ಯಾವ ಯಾವ ಭಾಷೆಗಳನ್ನು ಯಾವ ಹಂತದಲ್ಲಿ ಪ್ರಾರಂಭಿಸಬೇಕು ಮತ್ತು ಅದನ್ನು ಎಷ್ಟು ವರ್ಷ ಕಲಿಯಬೇಕು ಎಂದೂ ಅದು ಶಿಫಾರಸ್ಸು ಮಾಡಿತು. ಮೊದಲ ಭಾಷೆಯನ್ನು ಒಂದರಿಂದ ಹತ್ತನೆಯ ತರಗತಿವರೆಗೆ (ಹತ್ತು ವರ್ಷ),‌ ಎರಡನೆ ಭಾಷೆಯನ್ನು ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ (ಆರುವರ್ಷ), ಮತ್ತು ಮೂರನೆಯ ಭಾಷೆಯನ್ನು ಎಂಟನೆಯ ತರಗತಿಯಿಂದ ಹತ್ತನೆಯ ತರಗತಿವರೆಗೆ (ಮೂರು ವರ್ಷ) ಕಲಿಸಲು ಅದು ಸೂಚಿಸಿತು.

ಇದರ ಅನ್ವಯ ಉತ್ತರದ ಹಿಂದಿ ರಾಜ್ಯಗಳು ಹಿಂದಿಯನ್ನು ಹತ್ತುವರ್ಷ, ಇಂಗ್ಲಿಷನ್ನು ಆರು ವರ್ಷ ಮತ್ತು ಮೂರನೆಯ ಭಾಷೆಯಾದ ಇನ್ನೊಂದು ಭಾಷೆಯನ್ನು ಮೂರು ವರ್ಷ ಕಲಿಸುವುದು ಎಂದಾಯಿತು. ಆದರೆ ದಕ್ಷಿಣದ ಅಂದರೆ ಹಿಂದಿಯೇತರ ರಾಜ್ಯಗಳಿಗೆ ತಮ್ಮ ಭಾಷೆಯನ್ನು ಪ್ರಥಮ ಭಾಷೆಯಾಗಿ ಹತ್ತು ವರ್ಷ ಕಲಿಸುವುದರ ಜೊತೆಗೆ ಎರಡನೆಯ ಮತ್ತು ಮೂರನೆಯ ಭಾಷೆಗಳಾಗಿ ಯಾವುದಾದರೂ ಭಾಷೆ ಆಯ್ಕೆಯಾಗದೆ ಇಂಗ್ಲಿಷ್‌ ಅಥವಾ ಹಿಂದಿ ಇವೇ ಭಾಷೆಗಳಾಗಬೇಕಾಯಿತು. ಅಂದರೆ ಈ ರಾಜ್ಯಗಳು ಇವುಗಳಲ್ಲಿ ಒಂದನ್ನು ಎರಡನೆಯ ಭಾಷೆಯಾಗಿ ಇನ್ನೊಂದನ್ನು ಮೂರನೆಯ ಭಾಷೆಯಾಗಿ ಕಲಿಸಬೇಕಾಯಿತು.

ಇದರಿಂದ ದಕ್ಷಿಣದವರು ಉತ್ತರದ ಹಿಂದಿ ಕಲಿಯುವುದು ʻಕಡ್ಡಾಯʼವಾಯಿತು. ಆದರೆ ಉತ್ತರದವರು ದಕ್ಷಿಣ ಭಾರತದ ಭಾಷೆಯನ್ನು ಕಲಿಯುವುದು ಕಡ್ಡಾಯವಾಗದೆ ʻಆದ್ಯತೆʼಆಯಿತು. ಈ ಸೌಲಭ್ಯವನ್ನು ಬಳಸಿಕೊಂಡ ಉತ್ತರದ ರಾಜ್ಯಗಳನೇಕವು ದಕ್ಷಿಣದ ಕನ್ನಡ, ತೆಲುಗು, ತಮಿಳು ಇವನ್ನು ಆಯ್ದುಕೊಳ್ಳದೆ ಉತ್ತರದ್ದೇ ಆದ ಪಂಜಾಬಿಯನ್ನೋ ಅಥವಾ ಸಂಸ್ಕೃತವನ್ನೋ ʼಇನ್ನೊಂದು ದೇಶೀಯ ಭಾಷೆಯನ್ನಾಗಿ ಆಯ್ದುಕೊಂಡವು. ಸಂಸ್ಕೃತ ಕೂಡ ದೇವನಾಗರಿ ಲಿಪಿಯಲ್ಲಿರುವ ಮತ್ತು ಹಿಂದಿಗೆ ತೀರಾ ಸಮೀಪದ ಭಾಷೆಯಾಗಿದ್ದರಿಂದ ಆ ಭಾಷೆಯ ಕಲಿಕೆ ಅಲ್ಲಿನ ಮಕ್ಕಳಿಗೆ ಹೊರೆಯೂ ಆಗಲಿಲ್ಲ; ಹೇರಿಕೆಯೂ ಆಗಲಿಲ್ಲ. ಆದರೆ ದಕ್ಷಿಣದ ರಾಜ್ಯಗಳ ಮಕ್ಕಳಿಗೆ ಹಿಂದಿ ಹೊರೆಯೂ ಆಯಿತು; ಹೇರಿಕೆಯೂ ಆಯಿತು. ಕೊಠಾರಿ ಆಯೋಗ ಈ ಶಿಫಾರಸ್ಸು ಮಾಡಲು ಹಿಂದಿಯನ್ನು ಅಭಿವೃದ್ಧಿ ಪಡಿಸುವುದು ಒಕ್ಕೂಟದ ಜವಾಬ್ದಾರಿ ಎಂಬ ಸಂವಿಧಾನದ ವಿಧಿ ಕಾರಣವಿರಬಹುದು. ಆದರೆ ಅದು ಮಾಡಿದ ಪರಿಣಾಮ ಮಾತ್ರ ದಕ್ಷಿಣದ ರಾಜ್ಯಗಳಿಗೆ ನಷ್ಟವನ್ನೇ ಉಂಟುಮಾಡುತ್ತಲೇ ಹೋಯಿತು.

ದಕ್ಷಿಣ ಭಾರತಕ್ಕೆ ತ್ರಿಭಾಷಾ ಸೂತ್ರ ಬರಲು ಕನ್ನಡದವರೂ ಕಾರಣವೇ?

ಕರ್ನಾಟಕದಲ್ಲಿ ಸಂಸ್ಕೃತ ಮತ್ತು ಹಿಂದಿಗಳು ಹೇಗೆಲ್ಲ ಕನ್ನಡದ ಮೇಲೆ ಸವಾರಿ ಆಟವನ್ನು ಆಡಿದವು ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಒಂದು ಮುಖ್ಯ ಸಂಗತಿಯನ್ನು ಗಮನಿಸಬೇಕು. ಮೇಲೆ ಉಲ್ಲೇಖಿಸಿದ ಕೊಠಾರಿ ಆಯೋಗ ಸ್ವತಂತ್ರ ಭಾರತದಲ್ಲಿ ರಚಿತವಾದ ಮೊಟ್ಟಮೊದಲ ಮಹತ್ವದ ಆಯೋಗ. ಹದಿನೇಳು ಸದಸ್ಯರ ಈ ಆಯೋಗದಲ್ಲಿ ಭಾರತ ಮಾತ್ರವಲ್ಲದೆ ವಿದೇಶಿ ಶಿಕ್ಷಣ ತಜ್ಞರು ಕೂಡ ಇದ್ದರು. ಇಂತಹ ತಜ್ಞರ ಸಮಿತಿಯಲ್ಲಿ ಇಡೀ ದಕ್ಷಿಣ ಭಾರತದಿಂದ ಒಬ್ಬ ವ್ಯಕ್ತಿ ಮಾತ್ರ ಇದ್ದರು. ಸರ್ಕಾರಕ್ಕೆ ಸಲ್ಲಿಕೆಯಾದ ಅಂತಿಮ ವರದಿಯಲ್ಲಿ ಭಾಷೆಗಳನ್ನು ಕುರಿತ ತನ್ನ ಶಿಫಾರಸ್ಸುಗಳನ್ನು ಮಾಡುವ ಸಂದರ್ಭದಲ್ಲಿ ಸಮಿತಿಯು ದಕ್ಷಿಣ ಭಾರತದ ಈ ಸದಸ್ಯರ ಅಭಿಪ್ರಾಯವನ್ನು ಅತ್ಯಂತ ವಿವರವಾಗಿ ದಾಖಲಿಸಿ ಅವರ ಅಭಿಪ್ರಾಯವನ್ನು ಗೌರವಿಸಿಯೂ ಅದನ್ನು ಸಂಪೂರ್ಣ ಒಪ್ಪಿಕೊಳ್ಳದೆ ತುಸು ಮಾರ್ಪಡಿಸಿ ಅಂತಿಮಗೊಳಿಸಿದ್ದಾಗಿ ಹೇಳಿದೆ. ಹಾಗಾದರೆ ಅವರ ಅಭಿಪ್ರಾಯ ಏನು ಮತ್ತು ಸಮಿತಿ ಅಂತಿಮವಾಗಿ ಮಾಡಿದ್ದು ಏನು?

ಸಮಿತಿ ತ್ರಿಭಾಷಾ ಸೂತ್ರದ ಬಗ್ಗೆ ಮೂರು ಭಾಷೆಗಳನ್ನು ಯಾವ ಯಾವ ಹಂತದಲ್ಲಿ ಅಳವಡಿಸಬೇಕು ಎಂದು ಎಂದು ಚರ್ಚಿಸುವಾಗ ಸಮಿತಿಯ ಬಹುತೇಕ ಸದಸ್ಯರು ಪ್ರೌಢಶಾಲಾ ಹಂತದಲ್ಲಿ ಮೂರು ಭಾಷೆಗಳಿರುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಾಗ ಈ ದಕ್ಷಿಣ ಭಾರತದ ಪ್ರತಿನಿಧಿ ಪ್ರೌಢಶಾಲಾ ಹಂತಕ್ಕಿಂತ ತುಸು ಮೊದಲೇ ಅಂದರೆ ಹಿರಿಯ ಪ್ರಾಥಮಿಕ ಹಂತದಿಂದಲೇ ಮೂರು ಭಾಷೆಗಳ ಕಲಿಕೆ ಆರಂಭಿಸಿವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ದಕ್ಷಿಣ ಭಾರತದ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಆ ವಯಸ್ಸಿನಲ್ಲಿ ಮಕ್ಕಳು ತುಂಬಾ ಸಂತೋಷದಿಂದಲೇ ಭಾಷೆಗಳನ್ನು ಕಲಿಯುವವರಾಗಿರುತ್ತಾರೆಯಾದ್ದರಿಂದ ಅದೇನೂ ಹೊರೆಯಾಗಲಾರದು ಎಂಬುದು ಅವರ ಅಭಿಪ್ರಾಯ. ಆದರೆ ಸಮಿತಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗೆ ಮೂರು ಭಾಷೆಗಳನ್ನು ಕಲಿಸುವುದು ಅಷ್ಟೇನೂ ಒಳ್ಳೆಯದಲ್ಲವೆಂಬ ತೀರ್ಮಾನಕ್ಕೆ ಬಂದು ಕೊನೆಗೆ ಪ್ರೌಢಹಂತದಿಂದ ಮೂರೂ ಭಾಷೆಗಳ ಕಲಿಕೆಯನ್ನು ಅಂತಿಮವಾಗಿ ಶಿಫಾರಸ್ಸು ಮಾಡಿತು. ಇದರರ್ಥ ದಕ್ಷಿಣ ಭಾರತಕ್ಕೆ ಮುಂದೆ ಪ್ರೌಢಶಾಲೆಯ ಹಂತದಲ್ಲಿಯೇ ಹೊರೆಯಾದ ಈ ತ್ರಿಭಾಷಾಸೂತ್ರವನ್ನು ಇನ್ನೂ ಒಂದಿಷ್ಟು ಕೆಳಹಂತಕ್ಕೇ ತರಲು ಸಲಹೆ ಕೊಟ್ಟವರು ದಕ್ಷಿಣದವರೇ ಎಂದಾಯಿತು. ಆ ಮೂಲಕ ಈ ತ್ರಿಭಾಷಾ ಸೂತ್ರ ದಕ್ಷಿಣಕ್ಕೆ ಬರಲು ಅವರೂ ಕಾರಣ ಎಂದಾಯಿತು. ಹಾಗಾದರೆ ಅವರು ಯಾರು? ಅವರು ಬೇರೆ ಯಾರೂ ಅಲ್ಲ ನಮ್ಮ ಕರ್ನಟಕದಿಂದಲೇ ಹೋಗಿದ್ದ ಕುಮಾರಿ ಸುಲಭಾ ಪನಾಂಡಿಕರ್! ಪುಣೆ ಮೂಲದ ಅವರು ಆಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಗಿದ್ದರು. ಮತ್ತು ಅವರೊಬ್ಬರೇ ಇಡೀ ದಕ್ಷಿಣ ಭಾರತದಿಂದ ಈ ಸಮಿತಿಯಲ್ಲಿದ್ದರು!

ತ್ರಿಭಾಷಾ ಸೂತ್ರವನ್ನು ಭಾಷಾತ್ರಿಶೂಲ ಎಂದು ಕರೆದ ಕುವೆಂಪು!

ತ್ರಿಭಾಷಾ ಸೂತ್ರ ದಕ್ಷಿಣ ಭಾರತದಿಂದ ಎದುರಿಸುತ್ತಿರುವ ವಿರೋಧ ಇಂದು ನಿನ್ನೆಯದಲ್ಲ. ಅದರ ಜನ್ಮದಿಂದಲೇ ಈ ವಿರೋಧ ಶುರುವಾಗಿ ಆಗಾಗ ಭಾಷೆಗಳ ಕುರಿತು ವಿವಾದ ಎದ್ದಾಗಲೆಲ್ಲ ಮುನ್ನೆಲೆಗೆ ಬಂದು ಚರ್ಚೆಗೆ ಒಳಗಾಗುತ್ತಿದೆ. ಇದು ಶುರುವಾದಾಗಲೇ ಕನ್ನಡದ ಹಿರಿಯ ಕವಿ ಕುವೆಂಪು ಅದನ್ನು ತಾತ್ವಿಕವಾಗಿ ವಿರೋಧಿಸಿದರು. ಕೊಠಾರಿ ಆಯೋಗಕ್ಕೆ ಮೊದಲೇ ದೇಶದ ಮುಖ್ಯಮಂತ್ರಿಗಳ ಮಹಾ ಸಮ್ಮೇಳನ 1961ರಲ್ಲಿ ಈ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿದ ಸಂದರ್ಭದಲ್ಲಿಯೇ ಅವರು ಬರೆದ ʼಬಲತ್ಕಾರದ ತ್ರಿಭಾಷಾ ಸೂತ್ರʼ ಎಂಬ ಕವಿತೆಯ ಸಾಲುಗಳಿವು:

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ ;

ಬಾಲಕರ ರಕ್ಷಿಸೈ ಹೇ ತ್ರಿಣೇತ್ರ!

ಚೂರು ತಿಂಡಿಗೆ ಸಿಕ್ಕಿಸಿಹರೋ ಮೂರು ಗಾಳ

ನುಂಗದಿದ್ದರೆ ಹಸಿವೆ ನುಂಗಿದರೆ ಪ್ರಾಣಶೂಲ

ಇತ್ತೀಚೆಗೆ ಈ ವಿವಾದ ಬುಗಿಲೆದ್ದಾಗ ಹಿಂದಿಯ ಪರವಾಗಿ ಮಾತನಾಡಿದ ಕೇಂದ್ರದಲ್ಲಿರುವ ಮಂತ್ರಿಯಾಗಿರುವ ಕನ್ನಡದ ಸಂಸದೆಯೊಬ್ಬರು ಇಲ್ಲಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳು, ಉತ್ತರ ಭಾಗಕ್ಕೆ ಅಧಿಕಾರಿಗಳಾಗಿ ಹೋಗುವವರು ಮುಂತಾದವರು ಹಿಂದಿ ಕಲಿಯದಿದ್ದರೆ ಅವಕಾಶ ವಂಚಿತಾರುತ್ತಾರೆ ಎಂಬ ವಾದವನ್ನು ಮುಂದಿಟ್ಟರು. ಅವರ ಈ ವಾದದ ಅಂಶಗಳು ಹೇಗೆ ಅರ್ಥವಿಲ್ಲದವು ಎಂಬುದನ್ನು ನೋಡೋಣ. ಮೊದಲನೆಯದಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಅವಕಾಶವಂಚಿತರಾಗುವುದು: ಕೇಂದ್ರಕ್ಕೆ ಆಯ್ಕೆಯಾಗಿ ಹೋಗುವರು ಕರ್ನಾಟಕದಿಂದ 28 ಜನರು. ರಾಜ್ಯಸಭೆಗೆ ಹೋಗುವವರನ್ನೂ ಸೇರಿಸಿಕೊಂಡರೂ ಇದು ಮೂವತ್ತೈದು ದಾಟುವುದಿಲ್ಲ. ಇನ್ನು ಅಧಿಕಾರಿಗಳು ಇಲ್ಲ ಎನ್ನುವಷ್ಟು ಕಡಿಮೆ. ಈ ಐವತ್ತೊರಳಗಿನ ಜನರಿಗಾಗಿ ಕರ್ನಾಟಕದ ಲಕ್ಷಾಂತರ ಮಕ್ಕಳು ಹಿಂದಿಗೆ ಬಲಿಯಾಬಬೇಕೆ? ಅದಕ್ಕೆ ಆಗಲೇ ಕುವೆಂಪು ಹೀಗೆ ತಮ್ಮ ಸಿಟ್ಟನ್ನು ಹೊರಗೆ ಹಾಕಿದ್ದಾರೆ:

ಮುಂದೆ ದಿಳ್ಳಿಯ ಮಂತ್ರಿಯಾಗುವವ ನೀನೋ?

 ಬೇಡವೆಂದವರಾರು? ಹಿಂದಿಯನು ಕಲಿಯೋ!

ಬದುಕಿ ಇಲ್ಲಿಯೇ ಬಾಳಿ ಸಾಯುವವ ನಾನೋ!

ನಿನ್ನ ಸೂತ್ರಕೆ ಏಕೆ ನನ್ನ ಬಲಿಯೋ?”

ಕನ್ನಡದ ಕತ್ತುಹಿಚುಕುತ್ತಿದ್ದ ಸಂಸ್ಕೃತದ ಆಟ

ಇಡೀ ಕರ್ನಾಟಕದ ಶಾಲಾ ಮಕ್ಕಳ ಭಾಷಾಕಲಿಕೆಯಲ್ಲಿ ಹಿಂದಿ ಕಲಿಸುವಿಕೆಯ ಕುರಿತು ಪ್ರಶ್ನೆ ಎದ್ದಿರುವ ಈ ಈ ಸಂದರ್ಭದಲ್ಲಿ ಅದಕ್ಕೂ ಮೊದಲು ಇದರ ಪೂರ್ವಾವತಾರವಾದ ಸಂಸ್ಕೃತ ಆಡಿದ ಆಟಗಳು ಇಲ್ಲಿ ಅಧ್ಯಯನಯೋಗ್ಯ. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ದೂರದೃಷ್ಟಿತ್ವದ ರೂಪಿಸಿದ ಯೋಜನೆಗಳ ಕಾರಣದಿಂದ ಸಮಾಜದ ತಳಸಮುದಾಯದ ಎಲ್ಲ ಜನ ಆಡಳಿತ, ಅಧಿಕಾರದ ಕ್ಷೇತ್ರಗಳಿಗೆ ಇಂದು ಪ್ರವೇಶಪಡೆಯಲು ಸಾಧ್ಯವಾಯಿತು. ಅವರು ಕರ್ನಾಟಕದ ಜನ ಎಂದೂ ಮರೆಯಲಾರದ ಮತ್ತು ಮರೆಯಬಾರದ ಮುಖ್ಯಂತ್ರಿ ಡಿ. ದೇವರಾಜ ಅರಸು ಅವರು. ಮಹಾ ಮೇಧಾವಿ ಎಲ್‌ ಜಿ ಹಾವನೂರ ಅವರಿಂದ ಸಮ್ಮ ಸಮಾಜದ ಅಧ್ಯಯನ ಮಾಡಿಸಿ ಅವರ ವರದಿಯನ್ನು ಜಾರಿಗೆ ತಂದ ಕಾರಣಕ್ಕಾಗಿಯೇ ಇಂದು ಎಲ್ಲ ಕ್ಷೇತ್ರಗಳಲ್ಲಿ ತಳಸಮುದಾಯದ ಜನ ಪ್ರವೇಶಿಸಲು ಕಾರಣವಾಯಿತು.

ಇಂತಹ ಒಬ್ಬ ದೂರದೃಷ್ಟಿಯ ನಾಯಕ ಮತ್ತು ತಳಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು ಸೇರಿದಂತೆ ಸಂಸ್ಕೃತ ಕೂಡ ಇತ್ತು. ಸಾಮಾನ್ಯವಾಗಿ ಜನರಾಡುವ ಭಾಷೆಗಳೇ ಪ್ರಥಮ ಭಾಷೆಗಳಾಗಿರುವುದು ಶಿಕ್ಷಣದ ಒಂದು ಕ್ರಮ. ಆದರೆ ನಮ್ಮ ಸಮಾಜದ ಮೇಲ್ವರ್ಗದ ಸಂಪ್ರದಾಯವಾದಿಗಳ ಕುಮ್ಮಕ್ಕಿನಿಂದಾಗಿ ಯಾರೂ ಆಡದ ಸಂಸ್ಕೃತ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿತ್ತು. ಈ ಸಂಸ್ಕೃತದ ಕಲಿಕೆ ಹೇಗಿತ್ತು ಎಂದರೆ ಸಂಸ್ಕೃತದ ಉತ್ತರಗಳನ್ನು ವಿದ್ಯಾರ್ಥಿಗಳು ಸಂಸ್ಕೃತದಲ್ಲಿಯೇ ಬರೆಯಬೇಕಾಗಿರಲಿಲ್ಲ. ಕನ್ನಡ ಅಥವಾ ಇಂಗ್ಲಿಷಿನಲ್ಲಿಯೂ ಉತ್ತರ ಬರೆಯಬಹುದಾಗಿತ್ತು! ಪ್ರಥಮ ಭಾಷೆ ಇಡುವುದೇ ಭಾಷೆ ಕಲಿಯಲಿಕ್ಕೆ. ಹೀಗೆ ಬೇರೆ ಭಾಷೆಯಲ್ಲಿ ಉತ್ತರ ಬರೆದರೆ ಸಂಸ್ಕೃತದ ಕಲಿಕೆ ಹೇಗೆ ಆಗುತ್ತದೆ?

ಹಾಗಿದ್ದೂ ಸಂಸ್ಕೃತವನ್ನು ವಿದ್ಯಾರ್ಥಿಗಳು ಏಕೆ ತೆಗೆದುಕೊಳ್ಳುತ್ತಿದ್ದರು ಎಂದರೆ ಅವರಿಗೆ ಸಂಸ್ಕೃತ ಕಲಿಯುವುದು ಮುಖ್ಯವಾಗಿರಲಿಲ್ಲ; ಬದಲಿಗೆ ಹೆಚ್ಚು ಅಂಕಗಳನ್ನು ಪಡೆಯುವುದು ಮುಖ್ಯವಾಗಿತ್ತು. ಸಂಸ್ಕೃತದ ಪಠ್ಯವನ್ನು ಬಹಳ ಸುಲಭವಾಗಿ ಇಡಲಾಗಿತ್ತು. ಒಂದೆರಡು ವಾಕ್ಯಗಳನ್ನು ಬರೆದರೂ ನಾಲ್ಕೈದು ಅಂಕಗಳನ್ನು ಸುಲಭವಾಗಿ ಪಡೆಯಬಹುದಾಗಿತ್ತು. ಈ ಸೌಲಭ್ಯ ಪಡೆಯುವ ಆಸೆಯಿಂದ ಅನೇಕ ವಿದ್ಯಾರ್ಥಿಗಳನ್ನು ಸಂಸ್ಕೃತವನ್ನೇ ಪ್ರಥಮ ಭಾಷೆಯಾಗಿ ಆಯ್ಕೆಮಾಡಿಕೊಳ್ಳತೊಡಗಿದರು. ಇದರಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕುಸಿಯತೊಡಗಿತು.

ಕನ್ನಡ ಭಾಷೆ ಮತ್ತು ನಾಡಿಗೆ ಧಕ್ಕೆ ಬಂದಾಗಲೆಲ್ಲ ಅದನ್ನು ತಮ್ಮ ಹೋರಾಟ ಚಳವಳಿಗಳ ಮೂಲಕ ಸರಿದಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಕನ್ನಡ ಹೋರಾಟಗಾರರು ಮತ್ತು ಸಾಹಿತಿಗಳು ಎಂತಹ ಅವಮಾನ ಆದರೂ ಹಿಂದೆ ಉಳಿದಿಲ್ಲ. ಆಗಲೂ ಅವರು ಈ ವಿದ್ಯಮಾನಕ್ಕೆ ತಕ್ಷಣ ಸ್ಪಂದಿಸಿ ಕನ್ನಡ ನಾಡುನುಡಿಗೆ ಆಗಬಹುದಾದ ನಷ್ಟದ ಬಗ್ಗೆ ತಮ್ಮ ಆತಂಕವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅದಕ್ಕೆ ತಕ್ಷಣ ಸ್ಪಂದಿಸಿದ ಅರಸು ಅವರು ತಕ್ಷಣ ಕನ್ನಡದ ಮೇಲೆ ಸವಾರಿ ಮಾಡುತ್ತಿದ್ದ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ತೆಗೆದು ತೃತೀಯ ಭಾಷೆಗಳ ಪಟ್ಟಿಗೆ ವರ್ಗಾಯಿಸಿದರು.

ಗೋಕಾಕ್‌ ಚಳವಳಿ ಮತ್ತು ರಾಜ್‌ ಕುಮಾರ್

ಆದರೆ ಮುಂದೆ ದೇವರಾಜ ಅರಸು ಹೋಗಿ ಗುಂಡುರಾವ್‌ ಅವರು ಮುಖ್ಯಮಂತ್ರಿಗಳಾದ ಮತ್ತೆ ನಮ್ಮ ಸತಾನತವಾದಿಗಳು ಜಾಗೃತರಾದರು! ಗುಂಡುರಾಯರ ಮೇಲೆ ಒತ್ತಡ ತಂದು ತೃತೀಯ ಭಾಷೆಗಳ ಪಟ್ಟಿಯಲ್ಲಿದ್ದ ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆಗಳ ಪಟ್ಟಿಗೆ ಸೇರಿಸುವಲ್ಲಿ ಇವರು ಯಶಸ್ವಿಯಾದರು! ಇದನ್ನು ನೋಡಿಕೊಂಡು ನಮ್ಮ ಸಾಹಿತಿಗಳು ಸುಮ್ಮನಿರುತ್ತಾರೆಯೇ? ಮತ್ತೆ ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟ ಆರಂಭಿಸಿದರು. ಈ ಹೋರಾಟ ತೀವ್ರವಾಗುತ್ತಿರುವುದನ್ನು ಗಮನಿಸಿದ ಗುಂಡುರಾವ್‌ ಸರ್ಕಾರ ಪ್ರೌಢಶಾಲೆಗಳಲ್ಲಿ ಅಳವಳಡಿಸಬೇಕಾದ ಭಾಷೆಗಳ ಅಧ್ಯಯನ ಮಾಡಿ ವರದಿಕೊಡಲು ಕನ್ನಡದ ಖ್ಯಾತ ಸಾಹಿತಿ ವಿ. ಕೃ. ಗೋಕಾಕ್‌ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಗೋಕಾಕ್‌ ಸಮಿತಿ ಆರಂಭದಲ್ಲಿ ಕನ್ನಡದ ಪರವಾಗಿ ವರದಿಯನ್ನು ತಯಾರಿಸಿರಲಿಲ್ಲವಾದರೂ ಚಳವಳಿಯ ತೀವ್ರತೆಯನ್ನು ಗಮನಿಸಿ ಅಂತಿಮವಾಗಿ ಕನ್ನಡದ ಪರವಾಗಿ ವರದಿ ನೀಡಿತು. ಅದು ಪ್ರೌಢಶಾಲೆಗಳ ಪ್ರಥಮ ಭಾಷೆಗಳ ಪಟ್ಟಿಯಿಂದ ಕನ್ನಡದ ಜೊತೆಗೆ ಇದ್ದ ಸಂಸ್ಕೃತ ಸೇರಿದಂತೆ ಉಳಿದೆಲ್ಲ ಭಾಷೆಗಳನ್ನು ತೆಗೆದುಹಾಕಿ ಪ್ರಥಮಭಾಷೆಯಾಗಿ ಕನ್ನಡ ಮಾತ್ರ ಇರಬೇಕು ಎಂದು ಶಿಫಾರಸ್ಸು ಮಾಡಿಬಿಟ್ಟಿತು!

ಆದರೆ ಈ ವರದಿಯನ್ನು ಜಾರಿಗೆ ತರಲು ಸರ್ಕಾರ ಮೀನಮೇಷ ಮಾಡಿದಾಗ ಇಡೀ ಕರ್ನಾಟಕದಲ್ಲಿ ಉಗ್ರ ಹೋರಾಟ ಆರಂಭವಾಯಿತು. ಇದೇ ಇತಿಹಾಸ ಪ್ರಸಿದ್ಧ ʻಗೋಕಾಕ್‌ ಚಳವಳಿʼ. ಕನ್ನಡದ ವರನಟ ಡಾ. ರಾಜಕುಮಾರ್‌ ಅವರ ನೇತೃತ್ವದಲ್ಲಿ ಚಲನಚಿತ್ರ ನಟರ ತಂಡ ಇಡೀ ರಾಜ್ಯಾದ್ಯಂತ ಪ್ರವಾಸಮಾಡಿ ಸಭೆ ನಡೆಸುವ ಮೂಲಕ ಈ ಚಳವಳಿ ವ್ಯಾಪಕವಾಗಿ ಜನಮಾನಸದಲ್ಲಿ ಹರಡಿಕೊಂಡಿತು. ಸರ್ಕಾರ ಮಣಿದು ವರದಿಯನ್ನು ಜಾರಿಗೆ ತರಬೇಕಾಯಿತು. ಈ ಚಳವಳಿ ಕೇವಲ ಭಾಷಾ ಕಲಿಕೆ ಮಾತ್ರವಲ್ಲ ಭಾಷಾ ಮಾಧ್ಯಮಕ್ಕೂ ವ್ಯಾಪಿಸಿತು. ಮುಂದೆ ಇದರ ವಿರುದ್ಧ ನ್ಯಾಯಾಲಕ್ಕೆ ಪ್ರಕರಣ ಹೋಗಿ ಅಲ್ಲಿ ಮತ್ತೆ ಕನ್ನಡಕ್ಕೆ ಹಿನ್ನಡೆ ಉಂಟಾಯಿತು ಅದು ಬೇರೆಯದೇ ಅದ ಚರ್ಚೆ. ನಡುಗನ್ನಡದ ಕವಿ ನಯಸೇನ, ʼಮಿಸುಕದ ಸಕ್ಕದʼ ಎಂದು ಕರೆಯುವ ಸಂಸ್ಕೃತ ಹೀಗೆ ಆರಂಭದಿಂದಲೂ ನಮ್ಮ ʻಚರಿಸುವಕನ್ನಡʼದ ಕತ್ತು ಹಿಚುಕುವ ಆಟವನ್ನು ಹೇಗೆ ಆಡುತ್ತಲೆ ಬಂದಿತು ಎನ್ನುವುದನ್ನು ಅರಿಯಲಷ್ಟೇ ಇದನ್ನು ಹೇಳಿದ್ದು.

ಇಂಗ್ಲಿಷನ್ನು ಬಗ್ಗಿಸಲಾಗದೆ ಸ್ಪರ್ಧೆಗಿಳಿದ ಹಿಂದಿ

ಕೊಠಾರಿ ಆಯೋಗದಲ್ಲಿ ನಮ್ಮ ದಕ್ಷಿಣದ ಕಡೆಯಿಂದ ಧಾರವಾಡದ ಕುಮಾರಿ ಎಸ್‌ ಪನಾಂಡಿಕರ್ ಇರುವ ಬದಲು ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಿ ಅದೇ ಆಗ ನಿವೃತ್ತರಾಗಿದ್ದ ಕುವೆಂಪು ಅಂಥವರೇನಾದರೂ ಇದ್ದಿದ್ದರೆ ಬಹಶಃ ಆ ತ್ರಿಭಾಷಾ ಸೂತ್ರ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲ ಬಂದರೂ ಅದು ಕೊನೆಗೆ ಯಾವ ಸ್ವರೂಪದಲ್ಲಿ ಬಂತೋ ಆ ಸ್ವರೂಪದಲ್ಲಿಯಂತೂ ಇರುತ್ತಿರಲಿಲ್ಲ ಎಂಬುದು ಖಚಿತ. ಹಾಗಾಗಲಿಲ್ಲವಾಗಿ ಅದು ಅಂತೂ ಇಂತೂ ಈಗಿರುವಂತೆಯೇ ಬಂದುಬಿಟ್ಟಿತು. ಆನಂತರ ಯಾವ ಸರ್ಕಾರ ಬಂದರೂ ಯಾವ ಶಿಕ್ಷಣ ನೀತಿ ಬಂದರೂ ಇದು ಉಂಟು ಮಾಡಿದ ತರತಮಗಳ ಬಗ್ಗೆ ಹೆಚ್ಚೇನೂ ಅ‍ಧ್ಯಯನ ಮಾಡಿ ವರದಿ ಮಾಡಲಿಲ್ಲವೆಂದೇ ಹೇಳಬೇಕು. ಬಹಳಷ್ಟು ಸಂದರ್ಭದಲ್ಲಿ ಕನ್ನಡಕ್ಕೆ ಕುತ್ತಾಗಿ ಇನ್ನೆರಡು ಭಾಷೆಗಳು ಸವಾರಿ ಮಾಡಿದವು ಎಂದು ಚರ್ಚಿಸುವಾಗ ನಾವು ಕೊಠಾರಿ ಆಯೋಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತೇವೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡಿದರೆ ಕೊಠಾರಿ ಆಯೋಗ ಮಾಡಿದ ಶಿಫಾರಸ್ಸಿನಲ್ಲಿ ತಪ್ಪಿದೆ ಎಂದು ನಮಗೆ ಅನ್ನಿಸದು.

ಕುವೆಂಪು ಅವರ ಅಭಿಪ್ರಾಯವನ್ನು ಗೌರವಿಸಿಯೂ ಕೊಠಾರಿ ಆಯೋಗದ ಮುಂದಿದ್ದ ಆದ್ಯತೆಯನ್ನು ಗಮನಿಸಿದರೆ ಆ ಆಯೋಗದ ಬದ್ಧತೆ ನಮಗೆ ಅರಿವಾಗುತ್ತದೆ. ಆಡಳಿತ ಭಾಷೆಯನ್ನು ಕುರಿತ ನಮ್ಮ ಸಂವಿಧಾನದ ರಚನಕಾರರ ಮುಖ್ಯ ಉದ್ದೇಶವೇ ಇಂಗ್ಲಿಷನ್ನು ನಿಯಂತ್ರಿಸುತ್ತಾ ಹೋಗಿ ಅದನ್ನು ಇಲ್ಲದಂತೆ ಮಾಡಿ ಅದರ ಸ್ಥಾನದಲ್ಲಿ ಹಿಂದಿಯನ್ನು ಇಡುವುದಾಗಿತ್ತು ಎಂಬ ಅಂಶವನ್ನು ಈ ಮೊದಲೇ ಹೇಳಲಾಗಿದೆ. ಸಂವಿಧಾನದ ಆಶಯವೇ ಹೀಗಿರುವಾಗ ಅವರು ದಕ್ಷಿಣದವರಿಗೆ ಹಿಂದಿ ಕಡ್ಡಾಯ ಮಾಡಿದ್ದು ದೇಶದ ಏಕತೆಗಾಗಿಯೇ ಕೈಗೊಂಡ ಉತ್ತಮ ಕ್ರಮವಾಗಿತ್ತು.  ಇಲ್ಲಿ ಉತ್ತರದವರಿಗೇಕೆ ದಕ್ಷಿಣದ ಭಾಷೆಯನ್ನು ಕಡ್ಡಾಯ ಮಾಡಲಿಲ್ಲ ಎಂಬುದು ಪ್ರಶ್ನೆಯೇ ಅಲ್ಲ. ಅದರ ಅಗತ್ಯವೇ ಆಗ ಇರಲಿಲ್ಲ. ಹಾಗೆ ಮಾಡಿದ್ದರೆ ಅದು ಒಂದು ರಾಜಕೀಯ ನಡೆ ಆಗುತ್ತಿತ್ತೇ ಹೊರತು ಶೈಕ್ಷಣಿಕ ನಡೆ ಆಗುತ್ತಿರಲಿಲ್ಲ. ಪನಾಂಡಿಕರ್‌ ಅವರ ಅಭಿಪ್ರಾಯದಲ್ಲಿ ಮತ್ತು ಇಡೀ ಆಯೋಗದ ವಿವಿಧ ಶಿಫಾರಸ್ಸುಗಳಲ್ಲಿ ಈ ಬಗ್ಗೆ ಸಾಕಷ್ಟು ವಿವರಗಳು ಇವೆ. ಇದರಿಂದ ದಕ್ಷಿಣದವರಿಗೆ ಹೊರೆಯನ್ನು ಹಾಕುವ ಉದ್ದೇಶವಿರದೆ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವೇ ಇರುವುದು ಸ್ಪಷ್ಟವಾಗುತ್ತದೆ.

ಹಾಗಾದರೆ ತಪ್ಪಾಗಿದ್ದು ಎಲ್ಲಿ? ಯಾವ ಹಂತದಲ್ಲಿ ಸಂವಿಧಾನದ ರಚನಾಕಾರರ ಆಶಯದಂತೆ ಇಂಗ್ಲಿಷನ್ನು ಇಲ್ಲದಂತೆ ಮಾಡಿ ಅದರ ಸ್ಥಾನದಲ್ಲಿ ಹಿಂದಿಯನ್ನು ಸ್ಥಾಪಿಸುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಯಿತೋ ಆಗ ಇಂಗ್ಲಿಷನ್ನು ಬಿಡುವ ಬದಲು ದಕ್ಷಿಣದ ರಾಜ್ಯಗಳವರು ಹಿಂದಿಯನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು! ಹಾಗಾಗಿದ್ದರೆ ಇಲ್ಲಿ ಮೂರು ಭಾಷೆಗಳ ಹೊರೆ ಎಂಬುದು ಇರುತ್ತಿರಲೇ ಇಲ್ಲ. ಏಕೆಂದರೆ ಸಂವಿಧಾನದಲ್ಲಿ ಹೇಳಿಕೊಂಡಂತೆ ಹದಿನೈದು ವರ್ಷ ಇಂಗ್ಲಿಷ್‌ ಹಿಂದಿ ಎರಡನ್ನೂ ಆಡಳಿತ ಭಾಷೆಗಳನ್ನಾಗಿ ಇಟ್ಟುಕೊಂಡು ಹದಿನೈದು ವರ್ಷಗಳಾದ ಮೇಲೆ 1965 ರಲ್ಲಿ ಒಕ್ಕೂಟ ಸರ್ಕಾರ ರಾಜಭಾಷಾ ಕಾನೂನನ್ನು ಜಾರಿಗೆ ತಂದು ಅದರ ಅನ್ವಯ ದೇಶದ ಆಡಳಿತ ಭಾಷೆಯಾಗಿ ಇಂಗ್ಲಿಷನ್ನು ಬಿಟ್ಟು ಕೇವಲ ಹಿಂದಿಯನ್ನು ಇಟ್ಟುಕೊಳ್ಳಬಹುದೇ ಎಂಬುದನ್ನು ಅಧ್ಯಯನ ಮಾಡಲು ʼರಾಜಭಾಷಾ ಆಯೋಗವನ್ನು ರಚಿಸಿತು. ಆದರೆ ಈ ಆಯೋಗ ಕೇವಲ ಹಿಂದಿಯನ್ನು ಮಾತ್ರ ಇಟ್ಟುಕೊಳ್ಳುವಷ್ಟು ಹಿಂದಿ ಕಲಿಕೆ ದೇಶದಲ್ಲಿ ಎಲ್ಲರಿಗೂ ಆಗದೇ ಇರುವುದನ್ನು ಮನಗಂಡು ಮತ್ತೆ ಹದಿನೈದು ವರ್ಷ ಹಿಂದಿ ಜೊತೆಗೆ ಇಂಗ್ಲಿಷನ್ನು ಇಟ್ಟುಕೊಳ್ಳಲು ತೀರ್ಮಾನಿಸಿ ವರದಿಮಾಡಿತು!

ಹೀಗೆ ಸಂವಿಧಾನ ಜಾರಿಯಾಗಿ ಮೂವತ್ತು ವರ್ಷಗಳ ಕಾಲ ಹಿಂದಿ ಇಂಗ್ಲಿಷು ಎರಡೂ ದೇಶದ ಆಡಳಿತ ಭಾಷೆಗಳಾಗಿ ಮುಂದುವರೆಯುಂತಾಯಿತು. ಈ ದೀರ್ಘ ಅವಧಿಯಲ್ಲಿ ಏನೇನೇ ಜಾಗತಿಕ ಬದಲಾವಣೆಗಳಾಗಿ ಭಾರತ ಜಾಗತೀಕರಣಕ್ಕೆ ತೆರೆದುಕೊಳ್ಳುವಂತಾಯಿತು. ಪಿ ವಿ ನರಸಿಂಹ ರಾವ್‌ ಸರ್ಕಾರದಲ್ಲಿ ಅರ್ಥ ಸಚಿವರಾಗಿದ್ದ ಡಾ ಮನಮೋಹನ ಸಿಂಗ್‌ ಅವರು ಗ್ಯಾಟ್‌ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಭಾರತ ಜಾಗತಿಕರಣಕ್ಕೆ ತನ್ನನ್ನು ತೆರೆದುಕೊಂಡಿತು. ಹೀಗಾಗಿ ಇಂಗ್ಲಿಷ್‌ ತನ್ನ ಪ್ರಭಾವನ್ನು ದೇಶಾದ್ಯಂತ ಕಡಿಮೆ ಮಾಡಿಕೊಳ್ಳುವುದರ ಬದಲು ಇನ್ನಷ್ಟು ಹೆಚ್ಚಿಸಿಕೊಳ್ಳತೊಡಗಿತು! ಈ ಹಂತದಲ್ಲಿ ಇಂಗ್ಲಿಷ್‌ ʻಹೇರಿಕೆಯ ಭಾಷೆʼಯ ಹಂತದಿಂದ ʻಬೇಡಿಕೆಯ ಭಾಷೆʼಯ ಹಂತಕ್ಕೆ ವರ್ಗಾವಣೆ ಆಗಿಬಿಟ್ಟಿತು! ಯಾವುದೇ ಭಾಷೆಯಿರಲಿ ಅದು ಹೇರಿಕೆಯ ಭಾಷೆ ಆಗಿದ್ದಾಗ ಮಾತ್ರ ನಾವು ಅದನ್ನು ನಿಯಂತ್ರಿಸಬಹುದು. ನಿರ್ಬಂಧಿಸಬಹುದು; ಆದರೆ ಅದು ಬೇಡಿಕೆಯ ಭಾಷೆ ಆದಾಗ ಅದರ ನಿಯಂತ್ರಣವೂ ಸಾಧ್ಯವಾಗುವುದಿಲ್ಲ; ನಿರ್ಬಂಧವೂ ಸಾಧ್ಯವಾಗುವುದಿಲ್ಲ.

ಈ ಇಂಗ್ಲಿಷ್‌ ಉತ್ತರಕ್ಕಿಂತ ದಕ್ಷಿಣದಲ್ಲಿ ಹಿಂದಿಗಿಂತ ಹೆಚ್ಚು ಪ್ರಭಾವಶಾಲಿಯಾಯಿತು. ಇದಕ್ಕೆ ಕಾರಣವೂ ಇದೆ. ಉತ್ತರದವರಿಗೆ ಹಿಂದಿ ಅವರದ್ದೇ ಭಾಷೆ. ಇಂಗ್ಲಿಷ್‌ ಮಾತ್ರ ಪರಭಾಷೆ. ಆದರೆ ದಕ್ಷಿಣದವರಿಗೆ ಹಿಂದಿ ಇಂಗ್ಲಿಷ್‌ ಎರಡೂ ಪರಭಾಷೆಗಳೇ. ಹೀಗಾಗಿ ದಕ್ಷಿಣದವರು ಹಿಂದಿಗೆ ಒಲವು ತೋರಲಿಲ್ಲ. ಉತ್ತರದವರು ಇಂಗ್ಲಿಷ್ ಸೇರಿದಂತೆ ಯಾವುದೇ ಪರಭಾಷೆಯನ್ನು ಕಲಿಯದೆ ತಮ್ಮ ಮಾತೃಭಾಷೆಯಾದ ಹಿಂದಿಯನ್ನು ಮಾತ್ರ ಕಲಿತರೂ ಈ ದೇಶದಲ್ಲಿ ಪ್ರಧಾನಿ, ರಾಷ್ಟ್ರಪತಿ, ಐಎಎಸ್‌ ಅಧಿಕಾರಿ ಹೀಗೆ ಏನೆಲ್ಲ ಆಗಬಹುದಾಯಿತು!. ಆದರೆ ದಕ್ಷಿಣದವರು ಹೀಗೆ ಏನಾದರೂ ದೇಶದ ದೊಡ್ಡ ಆಡಳಿತಗಾರರೋ ಅಧಿಕಾರಿಗಳೋ ಆಗಬೇಕಾದರೆ ಅವರು ತಮ್ಮ ಮಾತೃಭಾಷೆ ಇಂಗ್ಲಿಷ್‌ ಅಥವಾ ಹಿಂದಿ ಕಲಿಯುವುದು ಅನಿವಾರ್ಯವಾಯಿತು. ಇದರಿಂದ ದಕ್ಷಿಣದವರು ಒಂದಾದರೂ ಪರಕೀಯ ಭಾಷೆಗೆ ಅಡಿಯಾಳಾಗುವುದು ಅನಿವಾರ್ಯವೇ ಆಯಿತು. ಇಂತಹ ಸಂದರ್ಭ ನಿರ್ಮಾಣವಾದ ಸಂದರ್ಭದಲ್ಲಿಯೇ ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಕನ್ನಡದ ಜೊತೆಗೆ ಇಂಗ್ಲಿಷನ್ನು ಮಾತ್ರ ಇಟ್ಟುಕೊಂಡು ಹಿಂದಿಯನ್ನು ಬಿಡುವ ರಾಜಕೀಯ ನಿರ್ಧಾರ ಆಗಬೇಕಿತ್ತು. ಅದು ಆಗಲಿಲ್ಲ. ತ್ರಿಭಾಷಾ ಸೂತ್ರ ಹಾಗೆಯೇ ಮುಂದುವರೆಯಿತು. ಅದು ಹೊರೆಯಾಗಿ ಪರಿಣಮಿಸತೊಡಗಿತು.

ಈಗಲೂ ತ್ರಿಭಾಷಾ ಸೂತ್ರ ಏಕೆ ಬೇಕು?

ಈಗ ಉತ್ತರದವರು ತಮ್ಮ ತಮ್ಮ ಶಾಲೆಗಳಲ್ಲಿ ಕಲಿಸಲು ತಮ್ಮ ಮಾತೃಭಾಷೆಯ ಜೊತೆಗೆ ಎರಡನೆಯ ಭಾಷೆಯನ್ನಾಗಿ ಇಂಗ್ಲಿಷನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಈ ಎರಡನೆಯ ಭಾಷೆಯೂ ಕೂಡ ಅವರಿಗೆ ಒಂದು ರೀತಿಯ ಫ್ಯಾಶನ್.‌ ಅದು ಇದ್ದರೂ ಆಗುತ್ತದೆ ಇಲ್ಲದಿದ್ದರೂ ಆಗುತ್ತದೆ. ಏಕೆ ಎಂದು ಮೇಲೆ ಹೇಳಲಾಗಿದೆ. ಆದರೆ ಕರ್ನಾಟಕದವರಾದ ನಾವು ನಮ್ಮ ಮಾತೃಭಾಷೆಯ ಜೊತೆಗೆ ಇಂಗ್ಲಿಷು ಮತ್ತು ಹಿಂದಿ ಎರಡನ್ನೂ ಇಟ್ಟುಕೊಂಡಿದ್ದೇವೆ. ಇದರ ಅಗತ್ಯ ಏನಿದೆ ಎಂಬುದನ್ನು ಈಗ ಒರೆಗೆ ಹಚ್ಚಿ ನೋಡಬೇಕಿದೆ. ಕೊಠಾರಿ ಆಯೋಗದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆಗ ದಕ್ಷಿಣದವರಿಗೆ ಹಿಂದಿ ಅನಿವಾರ್ಯ ಅಲ್ಲದಿದ್ದರೂ ಅಗತ್ಯ ಆಗಿತ್ತು. ಆದರೆ ಈಗ ಅದು ಅನಿವಾರ್ಯವೂ ಅಲ್ಲ ಅಗತ್ಯವೂ ಅಲ್ಲ.

ಈಗ ನಾವು ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಮಾತೃಭಾಷೆ ಕನ್ನಡದ ಜೊತೆಗೆ ಹಿಂದಿ ಅಥವಾ ಇಂಗ್ಲಿಷ್‌ ಒಂದನ್ನು ಕಲಿಸಿದರೆ ಸಾಕು. ಈ ಎರಡರಲ್ಲಿ ಯಾವುದು ಎಂದಾಗ ಬಹಳಷ್ಟು ಜನರ ಆಯ್ಕೆ ಇಂಗ್ಲಿಷ್‌ ಆಗುತ್ತದೆ. ಲಂಕೇಶ್‌ ಅವರು ಕೂಡ ಇಂಗ್ಲಿಷ್‌ ಮತ್ತು ಹಿಂದಿ ಎರಡರಲ್ಲಿ ಒಂದನ್ನು ಮಾತ್ರ ನಮ್ಮ ಶಾಲೆಗಳಲ್ಲಿ ಕಲಿಸಬೇಕು ಅಂತಾದರೆ ಇಂಗ್ಲಿಷನ್ನೇ ಆಯ್ದುಕೊಳ್ಳುವುದು ಸರಿ ಎಂದು ಹೇಳಿದ್ದರು. ಅದಕ್ಕೆ ಕಾರಣವೂ ಇದೆ. ಹಿಂದಿ ಇಂಗ್ಲಿಷು ಎರಡೂ ಪರಕೀಯ ಅಂದಮೇಲೆ ಯಾವುದನ್ನು ಕಲಿತರೆ ಅವಕಾಶಗಳು ಹೆಚ್ಚು ಎಂಬ ಲೆಕ್ಕಾಚಾರ ಬಂದೇ ಬರುತ್ತದೆ. ಆಗ ಸಹಜವಾಗಿ ಇಂಗ್ಲಿಷು ಆಯ್ಕೆ ಆಗುತ್ತದೆ. ಹಿಂದಿಯನ್ನು ಬಿಡಬೇಕಾಗುತ್ತದೆ.

ಹಿಂದಿಯ ಪರವಾಗಿ ವಾದಿಸುವವರು ನೀಡುವ ಒಂದು ಕಾರಣವನ್ನು ಈ ಮೊದಲೇ ಚರ್ಚಿಸಲಾಗಿದೆ. ಉಳಿದ ಒಂದೆರಡು ವಾದಗಳನ್ನು ನೋಡುವುದಾರೆ ಕೆಲವರು ಇದು ನಮ್ಮ ಮಕ್ಕಳಿಗೆ ಅವಕಾಶ ಕಡಿಮೆ ಮಾಡುತ್ತದೆ ಎಂದು ವಾದಿಸುತ್ತಾರೆ. ಈ ವಾದದಲ್ಲಿ ಈಗ ಹುರುಳಿಲ್ಲ. ನಮ್ಮ ಶಾಲೆಗಳಲ್ಲಿ ಹಿಂದೆ ಸಂಸ್ಕೃತ ಆಡಿದ ಆಟವನ್ನೇ ಈಗ ಹಿಂದಿ ಆಡುತ್ತಿದೆ. ಹಿಂದೆ ಭಾಷೆಯನ್ನು ಕಲಿಯುವ ಉದ್ದೇಶಕ್ಕಿಂತಲೂ ಹೆಚ್ಚಿನ ಅಂಕಗಳಿಕೆಗಾಗಿ ಸಂಸ್ಕೃತವನ್ನು ಹೇಗೆ ಆರಿಸಿಕೊಳ್ಳುತ್ತಿದ್ದರೋ ಹಾಗೆಯೇ ಇವತ್ತು ಬಹಳಷ್ಟು ಮಕ್ಕಳಿಗೆ ಹಿಂದಿ ಅಂಕಗಳ ಸ್ಕೋರ್‌ ಮಾಡಲಿಕ್ಕೆ ಸಾಧನವಾಗಿದೆಯೇ ಹೊರತು ಭಾಷಾಕಲಿಕೆಗೆ ಅಲ್ಲ. ಯಾವುದೇ ಭಾಷೆಗಳನ್ನು ಕಲಿಸುವುದರ ಹಿಂದೆ, ಅದರಲ್ಲಿಯೂ ಎರಡನೆಯ ಮತ್ತು ಮೂರನೆಯ ಭಾಷೆಗಳನ್ನು ಕಲಿಸುವುದರ ಹಿಂದೆ ಮುಖ್ಯ ಉದ್ದೇಶವೇ ನಮ್ಮ ಮಾತೃಭಾಷಾ ಪರಿಸರದಿಂದ ಹೊರಗೆ ಹೋದಾಗ ನಮ್ಮ ಮೂಲಭೂತ ಸಂವಹನಕ್ಕೆ ಸಹಾಯವಾಗಲಿ ಎಂದು. ಅಂದರೆ ʼಸಂವಹನ ಕೌಶಲʼ ಬೆಳೆಸುವುದೇ ಇಲ್ಲಿ ಮುಖ್ಯ ಉದ್ದೇಶ. ಆದರೆ ನಮ್ಮ ಶಾಲೆಗಳಲ್ಲಿ ಈ ಭಾಷೆಗಳ ಕಲಿಕೆಯ ಸಂವಹನ ಯಾವ ಮಟ್ಟದಲ್ಲಿದೆ ಎಂದರೆ ಹತ್ತು ವರ್ಷ ಇಂಗ್ಲಿಷ್‌ ಕಲಿಸಿದರೂ ಒಂದು ಮಗು ಅಪರಿಚಿತ ಪರಿಸರದಲ್ಲಿ ಹತ್ತು ವಾಕ್ಯಗಳನ್ನು ಸರಳವಾಗಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ ಗಳಿಸುತ್ತಿಲ್ಲ. ಹಿಂದಿಯ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಈ ಮೂರು ಭಾಷೆಗಳನ್ನು ಇಟ್ಟುಕೊಂಡು ಏಕೆ ಮಕ್ಕಳ ಜೀವ ಹಿಂಡಬೇಕು?

ಏನೂ ಓದು ಬರೆಹ ಬರದೇ ಇರುವ ಒಬ್ಬ ಅನಕ್ಷರಸ್ತ ಹುಡುಗ ಊರಿಗೆ ಬಂದ ಲಾರಿಯನ್ನು ಹತ್ತಿಕೊಂಡು ಮುಂಬೈಗೋ ದೆಹಲಿಗೋ ಹೋಗಿ ಅಲ್ಲಿ ಮೂರು ನಾಲ್ಕು ತಿಂಗಳಿದ್ದು ಊರಿಗೆ ಬಂದಾಗ ಅವನಿಗೆ ಲೀಲಾಜಾಲವಾಗಿ ಹಿಂದಿ ಮಾತನಾಡಲಿಕ್ಕೆ ಸಾಧ್ಯವಾಗುತ್ತದೆ ಆದರೆ ಮೂರು ನಾಲ್ಕು ವರ್ಷ ನಾವು ಶಾಲೆಯಲ್ಲಿ ಶಿಕ್ಷಕರನ್ನಿಟ್ಟು ಹಿಂದಿ ಕಲಿಸಿದರೂ ಅಪರಿಚಿತ ಪರಿಸರದಲ್ಲಿ ತಕ್ಷಣಕ್ಕೆ ನಾಲ್ಕಾರು ವಾಕ್ಯ ಮಾತನಾಡಲಿಕ್ಕೆ ಅವರು ಸಮರ್ಥರಾಗುವುದಿಲ್ಲ ಎಂದಾದರೆ ಅಂತಹ ಕಲಿಸುವಿಕೆ ಬೇಕಾದದ್ದಾದರೂ ಏತಕ್ಕೆ? ಇಲ್ಲಿ ಈ ಭಾಷೆಗಳನ್ನು ಕಲಿಸುವ ಯಾರನ್ನೋ ದೂರುವುದು ನನ್ನ ಉದ್ದೇಶವಲ್ಲ. ವಾಸ್ತವದ ಅರಿವಾಗಬೇಕು ಎನ್ನುವುದಷ್ಟೆ ನನ್ನ ಕಾಳಜಿ. ಯಾವುದೇ ಭಾಷೆಯನ್ನು ಕಲಿಸಲು ಭಾಷಾ ಕಲಿಕೆಯ ವೈಜ್ಞಾನಿಕ ಹಂತಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ ಇವುಗಳನ್ನು ಅನುಕ್ರಮವಾಗಿಯೇ ಕಲಿಸಬೇಕು. ಆಗ ಮಾತ್ರ ಕಲಿಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಮೊದಲ ಎರಡು ಹಂತಗಳನ್ನು ಕಲಿಸದೆ ಮೂರು ಮತ್ತು ನಾಲ್ಕನೆಯ ಹಂತಕ್ಕೆ ಮಕ್ಕಳನ್ನು ಹಾರಿಸಿಕೊಂಡು ಹೋಗುವುದರಿಂದ ಈ ಎರಡೂ ಭಾಷೆಗಳ ಕಲಿಕೆ ಯಾಂತ್ರಿಕವಾದ ಅಂಕಗಳಿಕೆಯ ಸಾಧನವಾಗಿಯೇ ಉಳಿದುಕೊಂಡಿದೆ.

ಹೀಗಿದ್ದೂ ನಮಗೆ ಈಗ ಇಂಗ್ಲಿಷ್‌ ಅನಿವಾರ್ಯ ಎನ್ನುವ ಹಂತದಲ್ಲಿದೆ. ಹಾಗಾಗಿ ಅದು ಬೇಕು. ಅದರ ಕಲಿಕೆಯ ವಿಧಾನದ ದೋಷಗಳನ್ನು ಪರಿಹರಿಸಿಕೊಂಡು ಅದರ ಕಲಿಕೆಯನ್ನು ಮುಂದುವರಿಸೋಣ. ಹಿಂದಿ ಈಗ ಅನಿವಾರ್ಯವಲ್ಲ. ಹಿಂದಿಯಿಂದ ಯಾವ ಯಾವ ಅವಕಾಶಗಳನ್ನು ನಮ್ಮ ಮಕ್ಕಳು ಈ ದೇಶದಲ್ಲಿ ಪಡೆಯಬಹುದೋ ಅವೆಲ್ಲವನ್ನು ಅವರು ಇಂಗ್ಲಿಷಿನಿಂದಲೂ ಪಡೆಯಬಹುದು. ಜೊತೆಗೆ ಇಂಗ್ಲಿಷಿನಿಂದ ವಿದೇಶಿ ಅವಕಾಶಗಳನ್ನೂ ಪಡೆಯಬಹುದು. ಹಾಗಿರುವಾಗ ಈ ಹಂತದಲ್ಲಿ ಅವರಿಗೆ ಹಿಂದಿ ಎಂಬುದು ಅನಗತ್ಯ. ಹೀಗೆ ಹಿಂದಿಯಿಲ್ಲದಿದ್ದರೆ ನಮ್ಮ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಾರೆ ಎಂಬ ವಾದಕ್ಕೆ ಯಾವುದೇ ಹುರುಳಿಲ್ಲ. ಹಾಗಾಗಿ ಈಗ ತ್ರಿಭಾಷಾ ಸೂತ್ರ ಬೇಕಾಗಿಲ್ಲ. ದ್ವಿಭಾಷಾ ಸೂತ್ರವೇ ಸಾಕು.


ಸಾರ್ವಜನಿಕ ಹಿತಾಸಕ್ತಿಯೋ ಪಟ್ಟಭದ್ರ ಹಿತಾಸಕ್ತಿಯೋ?

ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯನ್ನು ಅಂಕಕ್ಕೆ ಬದಲಾಗಿ ʼಶ್ರೇಣಿʼಯಾಗಿ ಪರಿಗಣಿಸುವ ಸರ್ಕಾರದ ಈ ನಿರ್ಧಾರದ ವಿರುದ್ಧ ಕೆಲವರು ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವುದು ವರದಿಯಾಗಿದೆ.  ನ್ಯಾಯಾಲಯ ಈ ಬಗ್ಗೆ ಚರ್ಚಿಸಿ ಯೋಗ್ಯ ನಿರ್ಧಾರ ತೆಗೆದುಕೊಳ್ಳಲಿ. ಅದು ಬೇರೆಯದೇ ಆದ ಸಂಗತಿ. ಆದರೆ ನ್ಯಾಯಾಲಯದ ಆಚೆಗೂ ಇದು ಚರ್ಚಿಸಬಹುದಾದ ಸಂಗತಿ. ನನ್ನ ತಿಳಿವಳಿಕೆಯ ಮಟ್ಟಿಗೆ ಹೇಳುವುದಾದರೆ ಸರ್ಕಾರ ʻಯಾರೂ ಹಿಂದಿಯನ್ನು ಕಲಿಯಬಾರದುʼ ಎಂದು ಆದೇಶ ಮಾಡಿದ್ದರೆ ಅದು ಸಂವಿಧಾನಬದ್ಧ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಂಶವಾಗಿ ಸಾರ್ವಜನಿಕ ಹಿತಾಸಕ್ತಿಯ ಅಂಶವಾಗುತ್ತಿತ್ತು.  ಒಂದು ಸರ್ಕಾರ ʻನಾವು ಹಿಂದಿಯನ್ನು ಕಲಿಸುವುದಿಲ್ಲʼ ಎಂದೋ ಅಥವಾ ಹಿಂದಿಯ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸುವುದಿಲ್ಲʼ ಎಂದು ಹೇಳುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಸಂಗತಿಯಾಗುವುದಿಲ್ಲ. ಅದು ಕೆಲವು ಪಟ್ಟಭದ್ರರ ಹಿತಾಸಕ್ತಿಗೆ ಧಕ್ಕೆ ತರುವ ಸಂಗತಿ ಆಗಬಹುದು ಅಷ್ಟೆ. ತ್ರಿಭಾಷಾ ಸೂತ್ರವನ್ನು ಚುನಾಯಿತ ಸರ್ಕಾರವೊಂದಕ್ಕೆ ಅಗತ್ಯವೆನಿಸಿದಾಗ ಅಳವಡಿಸುವ ಅಧಿಕಾರ ಇರುತ್ತದೆ ಎನ್ನುವುದಾದರೆ ಅದನ್ನು ಅನಗತ್ಯವೆನಿಸಿದಾಗ ತೆಗೆದು ಹಾಕುವ ಅಧಿಕಾರ ಇರುವುದಿಲ್ಲವೆ? ಆ ಎಲ್ಲ ಬಗೆಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರ ಮತ್ತು ಸ್ವಾತಂತ್ರ್ಯ ಚುನಾಯಿತ ಸರ್ಕಾರಕ್ಕೆ ಸಂವಿಧಾನಬದ್ಧವಾಗಿಯೇ ಇರುತ್ತದೆ.

ಇದರ ಜೊತೆಗೆ ಕರ್ನಾಟಕ ಹಿಂದಿ ಅಧ್ಯಾಪಕರ ವೇದಿಕೆ ಕೂಡ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ನ್ಯಾಯಾಲಯದ ಕದತಟ್ಟಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ದೇಶದಲ್ಲಿ ಯಾರು ಯಾರಿಗೆ ಅನ್ಯಾಯ ಆಗಿದೆ ಅನ್ನಿಸುತ್ತದೆಯೋ ಅವರೆಲ್ಲರಿಗೂ ನ್ಯಾಯಾಲಯಕ್ಕೆ ಹೋಗಲು ಸ್ವಾತಂತ್ರ್ಯವಿದೆ. ಅವರು ಹೋಗಲಿ. ಆದರೆ ಇಂತಹ ನಿರ್ಧಾರ ಮಾಡಿದ ಸರ್ಕಾರಕ್ಕೆ ತನ್ನ ನಿರ್ಧಾರವನ್ನು ಸೂಕ್ತ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವ ಜಾಣ್ಮೆ ಇರಬೇಕಾಗುತ್ತದೆ. ಕೇವಲ ಈ ನಿರ್ಧಾರ ಮಾತ್ರವಲ್ಲ ಎಲ್ಲ ನಿರ್ಧಾರಗಳಿಗೂ ಒಂದಿಷ್ಟು ವಿರೋಧ ಇದ್ದೇ ಇರುತ್ತದೆ. ಒಂದು ಆಣೆಕಟ್ಟನ್ನು ಕಟ್ಟಿ ಲಕ್ಷಾಂತರ ಜನರಿಗೆ ಉಪಯೋಗವಾಗವ ನಿರ್ಧಾರ ಮಾಡಿದಾಗ ಅದಕ್ಕಾಗಿ ಜಮೀನು ಮನೆ ಕಳೆದುಕೊಳ್ಳುವವರ ವಿರೋಧ ಸಹಜವಾಗಿ ಎದುರಾಗುತ್ತದೆ. ಅಷ್ಟೇ ಏಕೆ ಜನರ ಆರೋಗ್ಯ ಸುಧಾರಿಸಲೆಂದು ಸರಾಯಿ ಅಂಗಡಿ ಮುಚ್ಚಬೇಕು ಎಂಬ ನಿರ್ಧಾರ ಮಾಡಿದಾಗ ಕೂಡ ಸರಾಯಿ ಅಂಗಡಿಯವರ ಕುಟುಂಬಗಳಿಗೆ ಅನ್ಯಾಯ ಅಗುತ್ತದೆ ಎಂಬ ವಿರೋಧ ಬರುತ್ತದೆ.

ಅಂತಹ ಸಂದರ್ಭಗಳಲ್ಲಿ ಯಾವುದೇ ಸರ್ಕಾರ ಈ ವಿರೋಧಗಳಿಂದ ತನ್ನ ನಿರ್ಧಾರವನ್ನು ಬದಲಿಸಬಾರದು. ಅಂದ ಮಾತ್ರಕ್ಕೆ ಆ ವಿರೋಧಗಳನ್ನು ಅಲಕ್ಷಿಸಬೇಕೆಂದಲ್ಲ. ಯಾರಿಗೆ ಸರ್ಕಾರದ ನಿರ್ಧಾರದಿಂದ ಅನ್ಯಾಯ ಆಗುತ್ತದೆಯೋ ಅವರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆ ಹೊರತು ಬಹಳಷ್ಟು ಜನರಿಗೆ ಉಪಯೋಗವಾಗುವಂಥ ಯೋಜನೆಯನ್ನೇ ಕೈಬಿಡಬಾರದು. ಅಷ್ಟಕ್ಕೂ ಹಿಂದಿಯ ಬೋಧನೆಯನ್ನೇ ನಿಲ್ಲಿಸುತ್ತೇವೆ ಎಂದೇನೂ ಸರ್ಕಾರ ಹೇಳಿಲ್ಲ. ಹಾಗಾಗಿ ಇಲ್ಲಿ ಹಿಂದಿ ಶಿಕ್ಷಕರು ಆತಂಕ್ಕೆ ಒಳಗಾಗುವ ಯಾವ ಕಾರಣವೂ ಕಾಣುವುದಿಲ್ಲ.

ರೋಷವೇ ಹೊರತು ದ್ವೇಷವಲ್ಲ

ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತು ಎಂದರೆ ಇದು ಹಿಂದಿ ಮೇಲಿನ ದ್ವೇಷವಲ್ಲ. ಯಾವುದೇ ಭಾಷೆಯನ್ನು ನಾವು ದ್ವೇಷಿಸುವ ಯಾವ ಕಾರಣವೂ ಇಲ್ಲ. ಹಾಗೆ ನೋಡಿದರೆ ಭಾಷೆಗಳ ಕಲಿಕೆಯು ಒಂದು ವಿಶಿಷ್ಟ ಅನುಭವ. ಕೇವಲ ಜ್ಞಾನದ ದೃಷ್ಟಿಯಿಂದ ಮಾತ್ರವಲ್ಲ; ರಂಜನೆಯ ದೃಷ್ಟಿಯಿಂದ ಕೂಡ ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಒಂದು ಸಂತೋಷ ಕೊಡುವ ಸಂಗತಿ. ವರ್ಷಕ್ಕೋ ಎರಡು ವರ್ಷಕ್ಕೋ ಒಂದೊಂದು ಭಾಷೆಗಳನ್ನು ಕಲಿಯುವುದು ನನ್ನ ಪ್ರೀತಿಯ ಹವ್ಯಾಸಗಳಲ್ಲಿ ಒಂದು. ನಾನು ಹಿಂದಿ ಸೇರಿದಂತೆ ಕೆಲವು ಭಾಷೆಗಳನ್ನು ಕಲಿತದ್ದು ಹೀಗೆಯೇ. ಹಿಂದಿ ನನ್ನ ಪ್ರೀತಿಯ ಭಾಷೆಗಳಲ್ಲಿ ಒಂದಾಗಿರುವುದೂ ಸುಳ್ಳಲ್ಲ. ಹೀಗಿದ್ದೂ ಅದನ್ನು ಶಾಲೆಯಲ್ಲಿ ಕಡ್ಡಾಯವಾಗಿ ಕಲಿಸುವ ಅಗತ್ಯವಿಲ್ಲವೆಂಬುದೇ ನನ್ನ ಅಭಿಪ್ರಾಯ. ಏಕೆಂದರೆ ಅಗತ್ಯಬಿದ್ದವರು ಮತ್ತು ಆಸಕ್ತಿ ಇರುವವರು ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಕಲಿಯಲು ಈಗ ಶಾಲೆಯಾಚೆಗೆ ಅನೇಕ ಸೌಲಭ್ಯಗಳಿವೆ. ಅಲ್ಲಿ ಅವರು ಕಲಿಯುತ್ತಾರೆ. ಅದಕ್ಕಾಗಿ ಅಗತ್ಯವಿಲ್ಲದ ಹಲವರಿಗೆ ಅದನ್ನು ಕಡ್ಡಾಯ ಮಾಡುವ ಯಾವುದೇ ಅವಶ್ಯಕತೆಯಿಲ್ಲ. ಅಷ್ಟಕ್ಕೂ ಯಾವುದೇ ಭಾಷೆಯಿರಲಿ ಅದರ ಕಲಿಕೆ ಸಾಧ್ಯವಾಗುವುದು ಅದರ ಬಗೆಗಿನ ಪ್ರೀತಿ ಮತ್ತು ಆಸಕ್ತಿಯಿಂದಲೇ ಹೊರತು ಅದನ್ನು ಕಡ್ಡಾಯ ಮಾಡುವುದರಿಂದ ಅಲ್ಲ. ಹೀಗಾಗಿ ನಮ್ಮ ವಿರೋಧವೇನಿದ್ದರೂ ಕಡ್ಡಾಯದ ಕಲಿಸುವಿಕೆಗೇ ಹೊರತು ಭಾಷೆಯನ್ನು ಸ್ವಯಂ ಪ್ರೇರಣೆಯಿಂದ ಕಲಿಯುವುದಕ್ಕಲ್ಲ. ನನ್ನ ಈ ಅಭಿಪ್ರಾಯವನ್ನೇ ಕುವೆಂಪು ಅವರ ಕವಿತೆಯ ಮತ್ತೆರಡು ಸಾಲುಗಳು ಹೀಗೆ ಹೇಳುತ್ತವೆ:

ಬಲತ್ಕಾರಕ್ಕಾಗಿ ಮಾತ್ರವೇ ಹೊರತು ರೋಷ

ಭಾಷೆಗಾಗಿಯೇ ನಮ್ಮ ದ್ವೇಷವೇನಿಲ್ಲ

*****

ಡಾ ರಾಜೇಂದ್ರ ಬುರಡಿಕಟ್ಟಿ

Wednesday, April 8, 2026

 

 



Thursday, April 2, 2026

ಗುಡ್‌ ಫ್ರೈಡೆ: ಮರಣವೃಕ್ಷದಲ್ಲಿ ಬಿಟ್ಟ ಅಮೃತಫಲ!

 ಶುಭ ಶುಕ್ರವಾರ (Good Friday): ಮರಣವೃಕ್ಷದಲ್ಲಿ ಬಿಟ್ಟ ಅಮೃತಫಲ!

“ದುಷ್ಟಕೃತಿಯ ಮುಚ್ಚಿಟ್ಟುಕೊಂಡು ಉತ್ತಮಿಕೆಯ ನಟಿಸಿ

ಕೊಂದಪಾಪ ಅವರನ್ನೆ ತಿಂದು ತೇಗುವುದು ಪೀಡೆಗೊಳಿಸಿ

ಇವು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿ ಅವರ ʻತೀರ್ಪುʼ ಎಂಬ ಕವಿತೆಯ ಎರಡು ಶಕ್ತಿಶಾಲಿಯಾದ ಸಾಲುಗಳು. ಯೇಸುಕ್ರಿಸ್ತನ ಜೀವನಕ್ಕೆ ಸಂಬಂಧಿಸಿದಂತೆ ಬರುವ ಬಹುಮುಖ್ಯ ಘಟನೆಗಳಲ್ಲಿ ಆತ ʼವ್ಯಭಿಚಾರಿಣಿʼ ಎಂಬ ಕಳಂಕಹೊತ್ತು ಬರುವ ಮರಿಯಾ ಎಂಬ ಮಹಿಳೆಯೊಬ್ಬಳಿಗೆ ನೀಡಿದ ಕ್ಷಮಾಧಾನ ಅತ್ಯಂತ ಮಹತ್ವದ್ದು. ವ್ಯಭಿಚಾರ ಮಾಡಿದ್ದಾಳೆ ಎಂದೂ ಅವಳಿಗೆ ಶಿಕ್ಷೆಯ ನಿರ್ಣಯವಾಗಬೇಕೆಂದೂ ಅವಳನ್ನು ಯೇಸುವಿನ ಬಳಿ ತಂದಾಗ ಯೇಸು, “ನಿಮ್ಮಲ್ಲಿ ಇದುವರೆಗೂ ಯಾವುದೇ ಪಾಪದ ಕೆಲಸ ಮಾಡದೇ ಇರುವವರು ಅವಳಿಗೆ ಕಲ್ಲಿನಿಂದ ಹೊಡೆಯಿರಿ” ಎಂದು ಹೇಳುವ ಸಂದರ್ಭದಲ್ಲಿ ಈ ಸಾಲುಗಳು ಬರುತ್ತವೆ.

ಯೇಸು ಹಾಗೆ ಹೇಳಿದಾಗ ಅಲ್ಲಿ ಯಾರೊಬ್ಬರೂ ಆ ಶಿಕ್ಷೆಕೊಡಲು ಮುಂದೆ ಬರುವುದಿಲ್ಲ. ʼಪಾಪವೆಂಬ
ತಿಳಿವಳಿಕೆ ಆಗ ನನಗಿರಲಿಲ್ಲ ತಂದೆ / ಇದಕೆ ಅವರು ಅಪರಾಧವೆನಲು ನಾನರಿಯದೇನೆ ಗೈದೆʼ
ಎನ್ನುವ ಅವಳ ಮಾತುಗಳು ಕೇವಲ ಯೇಸುವಿನ ಮನಸ್ಸನ್ನು ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಹೃದಯವಂತಿಕೆ ಇರುವ ಯಾರ ಮನಸ್ಸನ್ನಾದರೂ ಕರಗಿಸುವಂಥವು. ಕೊನೆಗೆ ಯೇಸು ಆ ಮಹಿಳೆಯನ್ನು ಕ್ಷಮಿಸಿ ಬದುಕುವ ಅವಕಾಶ ಮಾಡಿಕೊಡುತ್ತಾನೆ. ಈ ಘಟನೆ ನಾವು ಆರೋಪಿಗಳನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವಂಥದ್ದು. ಯಾವುದೇ ವ್ಯಕ್ತಿ ತಪ್ಪು ಮಾಡುವುದು ಬಹುತೇಕ ಅಜ್ಞಾನದಿಂದ. ಈ ಅಜ್ಞಾನದಿಂದ ಮಾಡುವ ತಪ್ಪುಗಳಿಗೆ
ʻಶಿಕ್ಷೆʼ ಪರಿಹಾರವಲ್ಲ. ಶಿಕ್ಷಣವೇ ಪರಿಹಾರ. ಇಂಥ ಅಪರಾಧಗಳು ಕ್ಷಮೆಗೆ ಅರ್ಹವಾದಂಥವು ಎಂಬ ಈ ತಿಳಿವಳಿಕೆಗೆ ಒಂದು ರೀತಿಯ ಜಗವನಾಳುವ ಶಕ್ತಿಯಿದೆ.

“ಪ್ರತಿಯೊಬ್ಬ ಮಹಾಪುರುಷನೂ ಅವನ ಕಾಲದ ಸೃಷ್ಟಿ. ಅವನ ಜನಾಂಗದ ಭೂತಕಾಲದ ಪರಿಣಾಮವಾಗಿರುತ್ತಾನೆ ಮತ್ತು ಆ ಜನಾಂಗದ ಭವಿಷತ್ತಿನ ನಿರ್ಮಾಪಕನಾಗುತ್ತಾನೆ.” ಇದು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಪಾಶ್ಚಾತ್ಯ ಜಗತ್ತಿಗೆ ಮೊಟ್ಟಮೊದಲ ಬಾರಿ ಪರಿಣಾಮಕಾರಿಯಾಗಿ ಪರಿಚಯಿಸಿದ ಕೀರ್ತಿಗೆ ಭಾಜನರಾಗಿರುವ ಸ್ವಾಮಿ ವಿವೇಕಾನಂದರು 1900 ರಲ್ಲಿ ಅಮೇರಿಕದ ಲಾಸ್‌ ಎಂಜಲೀಸ್‌ ನಗರದಲ್ಲಿ ಯೇಸುಕ್ರಿಸ್ತನನ್ನು ಕುರಿತು ಮಾಡಿದ ಮಹತ್ವದ ಉಪನ್ಯಾಸವೊಂದರಲ್ಲಿ ಹೇಳಿದ ಮಾತು. “ದೇವದೂತ ತನ್ನ ದೇಶ ಅವನತಿಯ ಸ್ಥಿತಿಯಲ್ಲಿದ್ದಾಗ ಬಂದ. ಅವನು ಮೂರು ವರ್ಷಗಳ ತನ್ನ ಕಾರ್ಯದಲ್ಲಿ ಒಂದು ಯುಗವನ್ನೇ ಭಟ್ಟಿ ಇಳಿಸಿದ್ದಾನೆ, ಇದು ಬೆಳಕಿಗೆ ಬರಲು ಹತ್ತೊಂತ್ತು ಶತಮಾನಗಳನ್ನು ತೆಗೆದುಕೊಂಡಿದೆ” ಎನ್ನುವ ಅವರು ಯೇಸುವಿನಂಥ ಮೇರು ಪ್ರಾಯದ ಮಹಾವ್ಯಕ್ತಿಗಳ ಭೀಮಛಾಯೆ ಇಡೀ ಪೃಥ್ವಿಯನ್ನು ವ್ಯಾಪಿಸುವಂಥದ್ದು ಎಂದು ಹೆಮ್ಮೆಪಡುತ್ತಾರೆ. ಹೀಗೆ ಜಗತ್ತಿನ ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯಲ್ಲಿ ಕ್ರೈಸ್ತಧರ್ಮದ ಉದಯಕ್ಕೆ ಅಡಿಪಾಯವನ್ನು ಹಾಕಿದ ಮಹಾಚೇತನ ಯೇಸುಕ್ರಿಸ್ತನ ಜೀವನಕ್ಕೆ ಸಂಬಂಧಿಸಿ ಒಂದು ಘಟನೆಯೊಂದಿಗೆ ʼಶುಭಶುಕ್ರವಾರʼ ಅಥವಾ ʼಗುಡ್‌ ಫ್ರೈಡೆʼ ಸಂಬಂಧ ಹೊಂದಿರುವಂಥದ್ದು.

ಐತಿಹಾಸಿಕ ಹಿನ್ನೆಲೆ

ಗುಡ್ ಫ್ರೈಡೇ ಮೂಲವು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೈಬಲ್ ಹೊಸ ಒಡಂಬಡಿಕೆಯಲ್ಲಿ ವಿವರಿಸಲಾದ ಘಟನೆಗಳಲ್ಲಿದೆ. ಕ್ರೈಸ್ತ ನಂಬಿಕೆಯ ಪ್ರಕಾರ, ಯೇಸು ಕ್ರಿಸ್ತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿ, ರೋಮನ್ ಸಾಮ್ರಾಜ್ಯದ ಅಧಿಕಾರದ ಅಡಿಯಲ್ಲಿ ಶಿಲುಬೆಗೇರಿಸುವ ಮೂಲಕ ಮರಣದಂಡನೆ ವಿಧಿಸಲಾಯಿತು. ರೋಮನ್ ಗವರ್ನರ್ ಪಾಂಟಿಯಸ್ ಪಿಲಾಟ್ ವಿಚಾರಣೆಯ  ನೇತೃತ್ವವಹಿಸಿದ್ದ. ಆತ ಯೇಸುವಿನಲ್ಲಿ ಯಾವುದೇ ತಪ್ಪು ಕಂಡುಬರದಿದ್ದರೂ, ಅಂತಿಮವಾಗಿ ಜನರ ವಿರೋಧವನ್ನು ಎದುರಿಸಲಾಗದೆ ಅವರ ಒತ್ತಡಕ್ಕೆ ಮಣಿದು ತನ್ನ ಮನಸ್ಸು ಇಲ್ಲದಿದ್ದರೂ ಯೇಸುವಿಗೆ ಮರಣದಂಡನೆಯ ಶಿಕ್ಷೆ ವಿಧಿಸುತ್ತಾನೆ!  

ಈ ಘಟನೆಯನ್ನು ಕುರಿತಂತೆ ಕನ್ನಡದ ಮೊದಲ ರಾಷ್ಟ್ರಕವಿ ಎಂದು ಹೆಸರಾಗಿರುವ ಎಂ ಗೋವಿಂದ ಪೈ ಅವರು 1930ರ ಹೊತ್ತಿಗೆ ʼಗೋಲ್ಗೊಥಾʼ ಎಂಬ ʻಖಂಡಕಾವ್ಯʼ ಎಂದು ಕರೆಯಬಹುದಾದ 377 ಸಾಲುಗಳ ಒಂದು ದೀರ್ಘ ಕವಿತೆಯನ್ನು ಬರೆದರು. ಈ ಕಾವ್ಯದಲ್ಲಿ ಅವರು ಯೇಸುವನ್ನು ವಿಚಾರಣೆಗೆ ಒಳಪಡಿಸಿ ಆತನನ್ನು ಶಿಲುಬೆಗೆ ಏರಿಸಿದ ದಿನದ ವಿವರಣೆಯನ್ನು ನೀಡಿದ್ದಾರೆ. “ಜಗದ ಪಾಪದ ಸಾಲವಿಂದು ಹರಿಪುದೆಂದು ಸಾರೆ ತಂಗಾಳಿ ಸುತ್ತಲೂ ತೀಡೆ, ದಿವಕಿಂದು ದೇವಕುವರಂ ಮರಳಿ ಬಹನೆಂದು ಗೆಲುವಿಂದ / ದೇವದೂತರೆ ಬಾರಿಸುವರೋ ಮಂಗಲವಾದ್ಯ” ಎಂದು ದೇವಲೋಕದ ಸಂಭ್ರಮವನ್ನು ವರ್ಣಿಸುವುದರೊಂದಿಗೆ ಆರಂಭವಾಗುವ ಈ ಕಾವ್ಯ ಭೂಲೋಕದಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುವ ಸಂಕಟ ಮತ್ತು ಶೋಕದ ಘಟನೆಯ ವಿವರಗಳನ್ನು ಮನಕಲಕುವಂತೆ ನೀಡುತ್ತಾ ಹೋಗುತ್ತದೆ.

ಬಡಗಿಯ ಕೆಲಸದ ತಂದೆ ತಾಯಿಗಳಿಗೆ ಜನಿಸುವ ಬಡತನದ ಬಾಳಿನ ಯೇಸು, ʼದೇವಸುತನಾದ ತನಗಿಂದ ಬೇರೆ ಶ್ರೀಮಂತನಿಲ್ಲʼಎಂದು ಸಾರಿದ್ದು, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಕೊಡಲು ಹೊಸಧರ್ಮವೊಂದರ ಅನ್ವೇಷಣೆಗೆ ತೊಡಗಿದ್ದೇ ದೊಡ್ಡ ತಪ್ಪಾಗಿಬಿಡುತ್ತದೆ. ಆತನನ್ನು ಶಿಕ್ಷಿಸಲೆಂದು ಕೈಸರನ ಪ್ರತಿನಿಧಿಯಾದ ಪಿಲಾತನ (ಗ್ರೀಕ್‌ ಹೆಸರುಗಳನ್ನು ಪೈಗಳು ಕನ್ನಡಕ್ಕೆ ಹೊಂದಿಕೆಯಾಗುವಂತೆ ಮುರಿದುಕಟ್ಟಿದ್ದಾರೆ.) ಮನೆಗೆ ಒಯ್ದಾಗ ನಡೆದ ವಿಚಾರಣೆಯಲ್ಲಿ ರಾಜನಿಗೆ ಯೇಸುವಿನಲ್ಲಿ ಯಾವ ತಪ್ಪು ಕಾಣದಿದ್ದರೂ ಅವನು ಪ್ರಜೆಗಳ ಒತ್ತಡಕ್ಕೆ ಮಣಿದು ಅವನಿಗೆ ಮರಣದ ಶಿಕ್ಷೆಯನ್ನು ವಿಧಿಸುತ್ತಾನೆ. ಹಾಗೆ ಮಾಡುವಾಗ ಅವನಿಗೆ ನಿಜವಾಗಿಯೂ ಗೊತ್ತಿರುತ್ತದೆ. ನಿರಪರಾಧಿಯಾದ ಯೇಸುವನ್ನು ಮರಣದಂಡನೆಗೆ ಆದೇಶಿಸಿದ ತನಗೆ ಆ ಪಾಪ ಅಂಟಿಕೊಳ್ಳುತ್ತದೆ ಎಂದು. ಹಾಗಾಗಿಯೇ ಅವನು ಅದನ್ನು ತಕ್ಕಮಟ್ಟಿಗೆ ಪರಿಹಾರ ಮಾಡಿಕೊಳ್ಳುವವನಂತೆ, ಅವನಿಗೆ ಮರಣದಂಡನೆಯ ಶಿಕ್ಷೆ ವಿಧಿಸಿ, ಒಂದಿಷ್ಟು ನೀರು ತರಿಸಿ ಅದರಲ್ಲಿ ಕೈತೊಳೆದುಕೊಂಡು ಈ ಪಾಪ ನನಗೆ ಅಂಟುವುದಿಲ್ಲ ಎನ್ನುತ್ತಾನೆ!

ವಿಚಿತ್ರವೆಂದರೆ ಅದರ ಹೊಣೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಇರಲಿ ಎಂದು ಅಲ್ಲಿನ ಜನರೇ ಉನ್ಮಾದದಲ್ಲಿ ಕೂಗುತ್ತಾರೆ. ಮಾತ್ರವಲ್ಲ ರಾಜ ಆ ಜನರಿಗೆ ಒಬ್ಬ ಕಳ್ಳ ಮತ್ತು ಯೇಸು ಇವರಲ್ಲಿ ಒಬ್ಬರನ್ನು ಶಿಕ್ಷೆಯಿಂದ ಬಿಡುಗಡೆ ಮಾಡುತ್ತೇನೆ ನಿಮ್ಮ ಆಯ್ಕೆ ಯಾರು ಎಂದು ಕೇಳಿದಾಗ ಇವರು ಆ ಕಳ್ಳನನ್ನೆ ಆಯ್ದುಕೊಳ್ಳುತ್ತಾರೆ. ಆಮೂಲಕ ಯೇಸುವಿನ ಮರಣಕ್ಕೆ ಕಾರಣವಾಗುತ್ತಾರೆ. ತಪ್ಪು ಅಭಿಪ್ರಾಯ ಎಂಬುದು ಒಂದು ಸಲ ಸಾಮಾನ್ಯ ಜನರ ಗುಂಪಿಗೆ ಹೊಕ್ಕರೆ ಅದು ಏನೆಲ್ಲ ಅನಾಹುತ ಮಾಡುತ್ತದೆ ಎಂಬುದಕ್ಕೆ ಯೇಸುವಿನ ವಿಚಾರಣೆ ಮತ್ತು ಮರಣದಂಡನೆಯ ಪ್ರಸಂಗ ಒಂದು ಉತ್ತಮ ಉದಾಹರಣೆ. ಯೇಸು ಯಾರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದನೋ ಆ ಜನರೇ ಅವನನ್ನು ಹಿಡಿದು ಶಿಕ್ಷೆಕೊಡುವಂತೆ ಮಾಡುತ್ತಾರೆ. ಈ ಬಗ್ಗೆ ಮಾತನಾಡುತ್ತಾ ವಿವೇಕಾನಂದರು ಯೇಸುವಿನ ಯಹೂದಿಗಳ ಎರಡು ಗುಂಪುಗಳಾದ ʼಸ್ಯಾಡೂಸಿಗಳುʼ ಮತ್ತು ʻಪ್ಯಾರಸಿಗಳುʼ ಎಷ್ಟೇ ಆಷಾಢಭೂತಿಗಳು ಇರಬಹುದು, ದುರ್ಜನರು ಇರಬಹುದು, ಮಾಡಬಾರದ ಕೆಲಸಗಳನ್ನು ಮಾಡಿರಬಹುದು ಆದರೆ ಅವರೆಲ್ಲರೂ ತಮ್ಮ ಈ ಕಾರ್ಯಗಳ ಮೂಲಕ ಈ ದೇವದೂತನ ಅವತಾರಕ್ಕೆ ಕಾರಣರಾದರು ಎನ್ನುತ್ತಾರೆ.

ಆ ಕಾಲದಲ್ಲಿ ಅಪರಾಧಿಗಳನ್ನು ಶಿಲುಬೆಗೆ ಏರಿಸುವುದು ಒಂದು ಸಾಮಾನ್ಯ ಶಿಕ್ಷೆಯಾಗಿತ್ತು. ಬಹುಶಃ ಈಗಿನಂತೆ ರಾಜಕೀಯ ಕೈದಿಗಳು ಮತ್ತು ಕಳ್ಳತನ ದರೋಡೆಗಳಂಥ ಅಪರಾಧ ಎಸಗಿದ ಕೈದಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಶಿಕ್ಷಿಸುವ ವ್ಯವಸ್ಥೆ ಇರಲಿಲ್ಲವೇನೋ. ಹಾಗಾಗಿ ಇಬ್ಬರು ಕಳ್ಳರ ನಡುವೆ ಯೇಸುವನ್ನು ಶಿಲುಬೆಗೆ ಏರಿಸಿ ಸಾಯಿಸುತ್ತಾರೆ. ಈ ಶಿಲುಬೆಗೇರಿಸುವ ಕಾರ್ಯ 'ಗೊಲ್ಗೊಥಾ' ಎಂಬ ಸ್ಥಳದಲ್ಲಿ ನಡೆಯಿತು, ಇದನ್ನು "ಕಪಾಲದ ಸ್ಥಳ" ಎಂದೂ ಕರೆಯಲಾಗುತ್ತದೆ. ಯೇಸುವನ್ನು ಮರದ ಶಿಲುಬೆಗೆ ಮೊಳೆ ಹೊಡೆದು ಸಾಯಲು ಬಿಡಲಾಯಿತು. ಇದು ಕಾಲದಲ್ಲಿ ಅಪರಾಧಿಗಳು ಮತ್ತು ಬಂಡಾಯಗಾರರಿಗೆ ರೋಮನ್ನರು ನೀಡುತ್ತಿದ್ದ ಸಾಮಾನ್ಯ ಶಿಕ್ಷೆಯಾಗಿತ್ತು. ಬಲಿದಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಬದಲಿಗೆ ಮಾನವಕುಲದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯೇಸು ಸ್ವಇಚ್ಛೆಯಿಂದ ತನ್ನ ಪ್ರಾಣವನ್ನು ನೀಡಿದ ದೈವಿಕ ವಿಮೋಚನೆಯ ಕಾರ್ಯ ಎಂದು ಕ್ರೈಸ್ತರು ನಂಬುತ್ತಾರೆ.

ಸಾಯುವ ಕಾಲದಲ್ಲಿಯೂ ಯೇಸು ಯಾರ ಮೇಲೂ ಕೋಪ ದ್ವೇಷ ತಾಳದೆ, ತನ್ನನ್ನು ಕೊಲ್ಲುತ್ತಿರುವವರನ್ನೂ ಕರುಣೆಯಿಂದಲೇ ಕಾಣುತ್ತಾ, “ಇವರೇನು ಮಾಡುತ್ತಿದ್ದಾರೆ ಎಂಬುದು ಇವರಿಗೆ ತಿಳಿದಿಲ್ಲವಾದ್ದರಿಂದ ಇವರ ತಪ್ಪನ್ನು ಕ್ಷಮಿಸು ತಂದೆ” ಎಂದು ಹೇಳುವ ಮಾತು ಮನುಕುಲಕ್ಕೆ ನೀಡಿದ ಒಂದು ಮಹಾನ್‌ ಸಂದೇಶವಾಗಿಯೇ ಇಂದಿಗೂ ಉಳಿದುಕೊಂಡಿದೆ. ಗೋವಿಂದ ಪೈಗಳು ಯೇಸುವು ತನ್ನ ಕೊನೆಯ ಕ್ಷಣದಲ್ಲಿ ಶಿಲುಬೆಯಲ್ಲಿ ತೂಗುವುದನ್ನು ʼಮರಣವೃಕ್ಷದೊಳಮೃತಫಲದಂತೆ ತೂಗುತಿರೆʼ ಎಂದು ಮಾರ್ಮಿಕವಾಗಿ ಹೇಳುತ್ತಾರೆ ಮಾತ್ರವಲ್ಲ ಆತನ ತ್ಯಾಗವನ್ನು, ʻತನ್ನ ಕಡಿವರ್ಗೆ ತಣ್ನೆಳಲನೀವ ಮರದಂತೆʼ ಎಂದು ‍ಶ್ಲಾಘಿಸುತ್ತಾರೆ.

ಯೇಸುವಿನ ಮರಣದ ಈ ಘಟನೆಯು ವಾಸ್ತವದಲ್ಲಿ ಒಂದು ಸಂತೋಷದ ಅಥವಾ ಉಲ್ಲಾಸದ ಘಟನೆಯಲ್ಲ ಬದಲಾಗಿ ಅದು ನೋವು, ಮತ್ತು ಕಹಿಭಾವನೆಗಳನ್ನು ನೆನಪಿಗೆ ತರುವ ಒಂದು ಶೋಕದ ಘಟನೆ. ಹಾಗಿದ್ದೂ ಅದನ್ನು ʼಶುಭʼ ಶುಕ್ರವಾರ ಎಂದು ಕರೆಯುವುದು ವಿರೋಧಾಭಾಸವಲ್ಲವೇ ಅನ್ನಿಸುವುದು ಸಹಜ.   ಆದರೆ ದುಃಖದ ಆಳದಿಂದಲೇ ಹೊಸಚೈತನ್ಯ ಹುಟ್ಟಿಬರುವುದು ಈ ಜಗದ ಒಂದು ನಿಯಮ. ಹೀಗಾಗಿಯೇ  ವಚನಕಾರರು ಮರಣವನ್ನು ʼಮಹಾನವಮಿʼ ಎಂದು ಕರೆದರು. ಹಾಗೆಯೇ ಇಲ್ಲಿ ಕೂಡ "ಶುಭ" ಅಥವಾ "ಗುಡ್" ಎಂಬ ಪದವನ್ನು ದೇವತಾಶಾಸ್ತ್ರದ ಅರ್ಥದಲ್ಲಿ ಬಳಸಲಾಗಿದೆ, ಇದು ವಿಶ್ವಾಸಿಗಳಿಗೆ ಮೋಕ್ಷ ಮತ್ತು ಭರವಸೆಯನ್ನು ತರುವಲ್ಲಿ ದಿನದ ಅಗಾಧ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಆಚರಣೆ ಮತ್ತು ಸಂಪ್ರದಾಯಗಳು

ಕ್ಯಾಥೋಲಿಕ್, ಪ್ರಾಟಸ್ಟಂಟ್ ಮತ್ತು ಆರ್ಥೊಡಾಕ್ಸ್ ಸೇರಿದಂತೆ ವಿವಿಧ ಕ್ರೈಸ್ತ ಪಂಗಡಗಳಲ್ಲಿ ಗುಡ್ ಫ್ರೈಡೇಯನ್ನು ಬಹಳ ಗೌರವದಿಂದ ಆಚರಿಸಲಾಗುತ್ತದೆ. ದಿನವನ್ನು ಸಾಮಾನ್ಯವಾಗಿ ಉಪವಾಸ, ಪ್ರಾರ್ಥನೆ ಮತ್ತು ಯೇಸುವಿನ ಸಂಕಟ ಹಾಗೂ ಮರಣದ ಮೇಲೆ ಕೇಂದ್ರೀಕರಿಸುವ ಚರ್ಚ್ ಸೇವೆಗಳ ಮೂಲಕ ಗುರುತಿಸಲಾಗುತ್ತದೆ.

ಮೂರು ಗಂಟೆಗಳ ಸಂಕಟ (Three Hours’ Agony): ಇದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನಡೆಯುವ ಭಕ್ತಿ ಸೇವೆಯಾಗಿದೆ. ಯೇಸು ಶಿಲುಬೆಯ ಮೇಲೆ ನೇತಾಡುತ್ತಿದ್ದ ಸಮಯವನ್ನು ಇದು ಪ್ರತಿನಿಧಿಸುತ್ತದೆ. ಸಮಯದಲ್ಲಿ ಉಪನ್ಯಾಸಗಳು ಮತ್ತು ಪ್ರಾರ್ಥನೆಗಳ ಮೂಲಕ ಯೇಸುವಿನ ಅಂತಿಮ ಮಾತುಗಳನ್ನು ಸ್ಮರಿಸಲಾಗುತ್ತದೆ.

ಶಿಲುಬೆಯ ಹಾದಿ (Stations of the Cross): ಯೇಸುವಿನ ಶಿಲುಬೆಗೇರಿಸುವಿಕೆಗೆ ಕಾರಣವಾದ 14 ಘಟನೆಗಳನ್ನು ನೆನಪಿಸುವ ಸರಣಿ ಇದಾಗಿದೆ. ಭಕ್ತರು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುತ್ತಾ, ಯೇಸುವಿಗೆ ಮರಣದಂಡನೆ ವಿಧಿಸಿದ ಸಮಯದಿಂದ ಹಿಡಿದು ಅವರ ಅಂತ್ಯಕ್ರಿಯೆಯವರೆಗಿನ ಪ್ರತಿ ಕ್ಷಣವನ್ನು ಧ್ಯಾನಿಸುತ್ತಾರೆ.

ಮೆರವಣಿಗೆಗಳು: ಅನೇಕ ದೇಶಗಳಲ್ಲಿ ಯೇಸುವಿನ ಕಷ್ಟಾನುಭವಗಳನ್ನು ಮರುಸೃಷ್ಟಿಸುವ ಮೆರವಣಿಗೆಗಳು ನಡೆಯುತ್ತವೆ. ಭಾರತದಲ್ಲಿ, ವಿಶೇಷವಾಗಿ ಕ್ರೈಸ್ತ ಧರ್ಮಾವಲಂಬಿಗಳು ಹೆಚ್ಚಿರುವ ಗೋವಾ, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕ್ರೈಸ್ತರು ವಿಶೇಷ ಚರ್ಚ್ ಸೇವೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಭಕ್ತಿಯ ಸಂಕೇತವಾಗಿ ಶಿಲುಬೆಗಳನ್ನು ಹೊತ್ತು ಮೆರವಣಿಗೆ ನಡೆಸುತ್ತಾರೆ.ಈ ಸಂದರ್ಭದಲ್ಲಿ ಚರ್ಚ್ಗಳಲ್ಲಿನ ಅಲಂಕಾರಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಪೀಠಗಳನ್ನು (Altars) ಬರಿದಾಗಿ ಬಿಡಲಾಗುತ್ತದೆ, ಇದು ದಿನದ ದುಃಖ ಮತ್ತು ಶೂನ್ಯತೆಯನ್ನು ಸಂಕೇತಿಸುತ್ತದೆ. ಗಂಟೆಗಳು ಸಾಮಾನ್ಯವಾಗಿ ಮೊಳಗುವುದಿಲ್ಲ ಮತ್ತು ಸಂಗೀತವು ತುಂಬಾ ಗಂಭೀರವಾಗಿರುತ್ತದೆ.


ಧಾರ್ಮಿಕ ಮತ್ತು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ

ಗುಡ್ ಫ್ರೈಡೇ ಕ್ರೈಸ್ತ ಧರ್ಮದಲ್ಲಿ ಅಪಾರ ದೈವಿಕ ಮಹತ್ವವನ್ನು ಹೊಂದಿದೆ. ಇದು ಮಾನವಕುಲದ ವಿಮೋಚನೆಗಾಗಿ ಯೇಸು ಕ್ರಿಸ್ತನು ಮಾಡಿದ ಪರಮ ತ್ಯಾಗವನ್ನು ಪ್ರತಿನಿಧಿಸುತ್ತದೆ. ದಿನವು ವಿಷಯಗಳನ್ನು ಒತ್ತಿಹೇಳುತ್ತದೆ: ತ್ಯಾಗ ಮತ್ತು ಪ್ರೀತಿ: ಯೇಸು ಸಂಕಟ ಮತ್ತು ಮರಣವನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದು ಪ್ರೀತಿಯ ಅತ್ಯುನ್ನತ ರೂಪವೆಂದು ಪರಿಗಣಿಸಲಾಗಿದೆ. ಕ್ಷಮೆ: ಯೇಸುವಿನ ಬಲಿದಾನದ ಮೂಲಕ ಮಾನವರ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ಕ್ರೈಸ್ತರು ನಂಬುತ್ತಾರೆ. ವಿಮೋಚನೆ: ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ಮಾನವಕುಲಕ್ಕೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಗೆ ಗುಡ್ ಫ್ರೈಡೇ ಕೇಂದ್ರಬಿಂದುವಾಗಿದೆ.

ಭಾರತ, ಬ್ರಿಟನ್‌  ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಗುಡ್ ಫ್ರೈಡೇ ಸಾರ್ವಜನಿಕ ರಜಾದಿನವಾಗಿದೆ. ಆಚರಣೆಯ ವಿಧಾನಗಳು ಬದಲಾಗಬಹುದಾದರೂ, ಅದರ ಆಂತರಿಕ ಸಂದೇಶವು ಒಂದೇ ಆಗಿರುತ್ತದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವಿವಿಧ ಸಮುದಾಯಗಳು ಒಟ್ಟಾಗಿ ಪ್ರಾರ್ಥನೆ ಮತ್ತು ಆತ್ಮಾವಲೋಕನದಲ್ಲಿ ತೊಡಗುವ ಮೂಲಕ ದಿನವು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ದಿನವೂ ಆಗಿದೆ.

ಗುಡ್‌ ಫ್ರೈಡೆಗೆ ಸಂಬಂಧಿಸಿದ ಕೆಲವು ಸಂಕೇತಗಳಿವೆ. ಅವುಗಳಲ್ಲಿ ಈ ಮೂರು ಮುಖ್ಯವಾದವು:  ೧) ಶಿಲುಬೆ: ಯೇಸುವನ್ನು ಶಿಲುಬೆಗೇರಿಸಿದ ಸಾಧನ ಮತ್ತು ಕ್ರೈಸ್ತ ಧರ್ಮದ ಅತ್ಯಂತ ಶಕ್ತಿಶಾಲಿ ಸಂಕೇತ.೨) ಕಪ್ಪು ಬಣ್ಣ: ಶೋಕ ಮತ್ತು ದುಃಖವನ್ನು ಸೂಚಿಸುತ್ತದೆ.೩)ಮೌನ: ದಿನದ ಗಾಂಭೀರ್ಯವನ್ನು ಪ್ರತಿಬಿಂಬಿಸಲು ಚರ್ಚ್ಗಳಲ್ಲಿ ಮೌನವನ್ನು ಆಚರಿಸಲಾಗುತ್ತದೆ.

ಹೀಗೆ ಗುಡ್ ಫ್ರೈಡೇ ಆಳವಾದ ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಗಾಂಭೀರ್ಯದ ದಿನವಾಗಿದೆ. ಇದು ಯೇಸು ಕ್ರಿಸ್ತನ ಸಂಕಟ ಮತ್ತು ತ್ಯಾಗವನ್ನು ನೆನಪಿಸುತ್ತದೆ ಹಾಗೂ ಪ್ರೀತಿ, ಕ್ಷಮೆ ಮತ್ತು ವಿಮೋಚನೆಯ ಮೌಲ್ಯಗಳನ್ನು ಒತ್ತಿಹೇಳುತ್ತದೆ. ಇದು ಒಂದು ದುರಂತ ಘಟನೆಯನ್ನು ಸ್ಮರಿಸಿದರೂ, ಇದರ ಅಂತಿಮ ಸಂದೇಶವು ಭರವಸೆ ಮತ್ತು ನವಜೀವನದ್ದಾಗಿದೆ. ಈಸ್ಟರ್ ಹಬ್ಬದ ಸಂಭ್ರಮಕ್ಕೆ ಭಕ್ತರನ್ನು ಸಿದ್ಧಪಡಿಸುವಲ್ಲಿ ಗುಡ್ ಫ್ರೈಡೇ ಪ್ರಮುಖ ಪಾತ್ರ ವಹಿಸುತ್ತದೆ. ಜಗತ್ತಿನ ಜನರ ಬಾಳಿಗೆ ಬೆಳಕನ್ನು ತಂದ ಮಹಾ ಚೈತನ್ಯಗಳನ್ಜು ಇಂದು ಜಾತಿ-ಧರ್ಮಗಳಂತಹ ಸಂಕುಚಿತ ಆಲೋಚನೆಗಳಿಂದ ನೋಡುವ ಮೂಲಕ ಅವರ ಬೋಧನೆಯ ಒಳಿತನ್ನು ಸ್ವೀಕರಿಸಲು ಸಾಧ್ಯವಿಲ್ಲದಂತೆ ಬೇಲಿಗಳನ್ನು ಕಟ್ಟಿಕೊಂಡು ಜನರು ಚಿಕ್ಕವರಾಗುತ್ತಿರುವಂಥ ಈ ಸಂದರ್ಭದಲ್ಲಿ ಅಂತಹ ಎಲ್ಲ ಬೇಲಿಗಳನ್ನೂ ಗೋಡೆಗಳನ್ನು ಕಿತ್ತುಹಾಕಿ ಜಗತ್ತಿನ ಒಳಿತಿಗಾಗಿ ಶ್ರಮಿಸಿದ ತ್ಯಾಗ ಬಲಿದಾನಗಳನ್ನು ಮಾಡಿದ ಎಲ್ಲ ಮಹಾವ್ಯಕ್ತಿಗಳ ಜೀವನ ಮತ್ತು ಬೋಧನೆಗಳಿಂದ ಚೈತನ್ಯವನ್ನು ಪಡೆಯುವ ಕಡೆಗೆ ನಮ್ಮ ಜನರ ಚಿತ್ತ ಹರಿಯುವಂತಾಗಲಿ. ಆ ಮೂಲಕ ಇಡೀ ಜಗತ್ತೇ ಸರ್ವಜನಾಂಗದ ಶಾಂತಿಯ ತೋಟವಾಗಲಿ.

*****

ಡಾ ರಾಜೇಂದ್ರ ಬುರಡಿಕಟ್ಟಿ

Friday, 03 April 2026