ಅನನ್ಯತೆ ಮತ್ತು ಆತ್ಮಗೌರವದ ತಾಯ್ನುಡಿ ದಿನ
“ಮೊಲೆಯ ಹಾಲಂತಂತೆ ಸವಿಜೇನು ಬಾಯ್ಗೆ
ತಾಯಿ ಅಪ್ಪುಗೆಯಂತೆ ಬಲುಸೊಗಸು ಮೈಗೆ”
ಈಗ ಅರ್ಧ ವಯಸ್ಸನ್ನು ಮುಗಿಸಿರುವ ಬಹುತೇಕ ಕನ್ನಡಿಗರಿಗೆ ಕುವೆಂಪು
ಅವರ ಕವಿತೆಯ ಈ ಸಾಲುಗಳು ಬಹುಶಃ ನೆನಪಿನಿಂದ ಮರೆಯಾಗಿರಲಾರವು.
ತಾಯ್ನುಡಿಯ ಸಂಪರ್ಕವು ನಮಗೆ ಉಂಡುಮಾಡುವ ಭಾವನೆ ಎಂಥದ್ದು ಎಂಬುದನ್ನು ಹೇಳುವ ಇವು ಆಗ ಶಾಲೆಗಳ ಚಿಕ್ಕ
ತರಗತಿಯಲ್ಲಿ ಪಠ್ಯವಾಗಿರುತ್ತಿದ್ದ ಕುವೆಂಪು ಅವರ ಕವಿತೆಯ ಸಾಲುಗಳು.
ಯುನೆಸ್ಕೋ ನೇತೃತ್ವದಲ್ಲಿ ಪ್ರತಿವರ್ಷ ಫೆಬ್ರವರಿ 21ನ್ನು ʼವಿಶ್ವಮಾತೃಭಾಷಾ
ದಿನʼ ಎಂದು ಜಗತ್ತಿನಾಧ್ಯಂತ ಆಚರಿಸಲಾಗುತ್ತಿದೆ. ಈ ದಿನದ ಹಿನ್ನಲೆ ಮತ್ತು ಮಾತೃಭಾಷೆಗಳ ಇಂದಿನ ಸ್ಥಿತಿ,
ಅದರಿಂದ ಉಂಟಾಗಬಹುದಾದ ಸಾಂಸ್ಕೃತಿಕ ಪರಿಣಾಮ ಮತ್ತು ನಾವೆಲ್ಲ ವಹಿಸಬೇಕಾದ ಎಚ್ಚರಿಕೆ ಇಂತಹ ಕೆಲವು
ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚೆಗೆ ಎತ್ತಿಕೊಂಡಿದೆ.
ಐತಿಹಾಸಿಕ ಹಿನ್ನಲೆ:
ನಮ್ಮ ದೇಶ ಮಾತ್ರವಲ್ಲ ಇಡೀ ವಿಶ್ವವನ್ನೇ ಗಮನದಲ್ಲಿ ಇಟ್ಟುಕೊಂಡು
ಹೇಳಬಹುದಾದ ಒಂದು ಮಾತೆಂದರೆ ತಮ್ಮ ಧರ್ಮಕ್ಕಾಗಿ, ತಮ್ಮ ಜಾತಿಗಾಗಿ, ತಮ್ಮ ದೇವರಿಗಾಗಿ ಪ್ರಾಣವನ್ನು
ತ್ಯಾಗಮಾಡಿದ ಹತ್ತು ಹಲವು ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಿಗುತ್ತವೆ. ಆದರೆ ಇಡೀ ವಿಶ್ವದಲ್ಲಿ
ತಮ್ಮ ಭಾಷೆಗಾಗಿ ಪ್ರಾಣ ತ್ಯಾಗಮಾಡಿದ ಉದಾಹರಣೆಗಳು ಇಲ್ಲ ಎನ್ನುವಷ್ಟು ಅಪರೂಪ. ಇಂತಹ ಅಪರೂಪದ ಘಟನೆಯೊಂದು
ಕಳೆದ ಶತಮಾನದ ಮಧ್ಯಭಾಗದಲ್ಲಿ ಭಾರತ ಉಪಖಂಡದಲ್ಲಿಯೇ ಜರುಗಿತು. ಅದೆಂದರೆ ಅಂದಿನ ಪೂರ್ವ ಪಾಕಿಸ್ತಾನದ
(ಇಂದಿನ ಬಾಂಗ್ಲಾದೇಶದ) ರಾಜಧಾನಿಯಾದ ಡಾಕಾದಲ್ಲಿ ತಮ್ಮ ಭಾಷೆಗಾಗಿ ಹೋರಾಟಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳು
ಅಲ್ಲಿನ ಆಡಳಿತ ವ್ಯವಸ್ಥೆಯಿಂದ ಹತ್ಯೆಗೀಡಾದ ಧಾರುಣ ಘಟನೆ.
ಭಾರತ ಉಪಖಂಡದ ಬಹುಮುಖ್ಯವಾದ ಭೂಪ್ರದೇಶಗಳಲ್ಲಿ ಒಂದಾದ ಬಂಗಾಳ ನಮ್ಮ
ದೇಶದ ಚಿರಿತ್ರೆಯಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಮಹತ್ವದ ಸ್ಥಾನವನ್ನು ಪಡೆದಿದೆ. ಆಧುನಿಕ ಭಾರತದ
ಚರಿತ್ರೆಯಲ್ಲಿಯೇ ಇದು ಎರಡು ಸಲ ಆಡಳಿತಾತ್ಮಕವಾಗಿ ವಿಭಜನೆ ಹೊಂದಿತು. ಮೊದಲ ಸಲ ಬ್ರಿಟೀಷರ ಆಳ್ವಿಕೆಯಲ್ಲಿ
1905ರಲ್ಲಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ ಇದನ್ನು ವಿಭಜನೆ ಮಾಡಿದ. ಬ್ರಿಟೀಷ್ ಆಡಳಿತದ ವಿರುದ್ದ
ದಿನದಿನಕ್ಕೂ ಹೆಚ್ಚುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಈ ಬಂಗಾಲದ ಕೊಡುಗೆ ದೊಡ್ಡಮಟ್ಟದಲ್ಲಿತ್ತು.
ಈ ಹೋರಾಟವನ್ನು ಬಗ್ಗುಬಡಿಯಬೇಕಾದರೆ ಅಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವಿನ ಒಗ್ಗಟ್ಟನ್ನು ಮುರಿಯುವುದು
ಆತನಿಗೆ ಅತಿಮುಖ್ಯವಾಗಿತ್ತು. ಈ ಕಾರಣಕ್ಕಾಗಿಯೇ ಆತ ಬಂಗಾಲದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ
ಪಶ್ಚಿಮದ ಭಾಗ ಮತ್ತು ಮುಸ್ಲಿಮರು ಬಹುಸಂಖ್ಯಾತರಾಗಿರುವ ಪೂರ್ವದ ಭಾಗಗಳನ್ನು ಪ್ರತ್ಯೇಕಗೊಳಿಸಿ ಕ್ರಮವಾಗಿ
ʼಪಶ್ಚಿಮ ಬಂಗಾಳʼ ಮತ್ತು ಪೂರ್ವ ಬಂಗಾಳʼ ಎಂದು ಹೆಸರಿಸಿದ. ಆದರೆ ಬ್ರಿಟೀಷರು ನಿರೀಕ್ಷಿಸಿದ್ದೇ ಬೇರೆ.
ಅದು ಆದದ್ದೇ ಬೇರೆ. ಯಾವ ಸ್ವಾತಂತ್ರ್ಯ ಹೋರಾಟವನ್ನು ಬಗ್ಗುಬಡಿಯಲು ಅವರು ಈ ಬಂಗಾಲವನ್ನು ವಿಭಸಿಜಿದ್ದರೋ
ಅದೇ ವಿಭಜನೆ ಭಾರತದ ಸ್ವಾತಂತ್ರ್ಯ ಹೋರಾಟ ʼಸ್ವದೇಶಿ ಚಳುವಳಿʼ ಹೆಸರಿನಲ್ಲಿ ಇನ್ನೊಂದು ರೂಪ ಪಡೆದುಕೊಂಡು
ಇನ್ನಷ್ಟು ತೀವ್ರವಾಗಲು ಕಾರಣವಾಗಿಬಿಟ್ಟಿತು. ಉದ್ದೇಶ ಈಡೇರದೆ ಇದೇ ಬ್ರಿಟೀಷ್ ಸರ್ಕಾರ ವಿಭಜನೆಯ
ಎಂಟು ವರ್ಷಗಳ ನಂತರ 1911 ರಲ್ಲಿ ಲಾರ್ಡ್ ಹಾರ್ಡಿಂಗ್ಸ್ನ ನೇತೃತ್ವದಲ್ಲಿ ಮತ್ತೆ ಬಂಗಾಳವನ್ನು
ಒಂದುಗೂಡಿಸಿತು.
ಬಂಗಾಳ ಎರಡನೆಯ ಸಲ ವಿಭಜನೆ ಆದದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ
ಸಂದರ್ಭದಲ್ಲಿ. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ದೇಶ ವಿಭಜನೆಯೂ ಆಯಿತು. ಆಗ ದೇಶ
ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆ ಆದಾಗ ಪಾಕಿಸ್ತಾನಕ್ಕೆ ಹಿಂದೆ ಬ್ರಿಟೀಷರು ಪೂರ್ವಬಂಗಾಳವಾಗಿ
ವಿಭಾಗಿಸಿದ್ದ ಭಾಗ ಮುಸ್ಲಿಂ ಜನರ ಬಾಹುಳ್ಯದ ಕಾರಣಕ್ಕೆ ಸೇರಿತು. ಆದರೆ ಭೌಗೋಳಿಕವಾಗಿ ಪಾಕಿಸ್ತಾನ
ಎಂಬ ದೇಶದ ಭೂಭಾಗ ಒಂದು ಕಡೆ ಆಗದ ಭಾರತದ ಪಶ್ಚಿಮ ದಿಕ್ಕಿನಲ್ಲಿ ಅರ್ಧಭಾಗ ಮತ್ತು ಪೂರ್ವದಿಕ್ಕಿನಲ್ಲಿ
ಅರ್ಧಭಾಗ ಆಗಿಬಿಟ್ಟಿತು. ಆ ಹಂತದಲ್ಲಿ ಪಾಕಿಸ್ತಾನದ ಈ ಭಾಗಗಳನ್ನು ಸಹಜವಾಗಿ ʼಪಶ್ಚಿಮ ಪಾಕಿಸ್ತಾನʼ
ಮತ್ತು ʼಪೂರ್ವ ಪಾಕಿಸ್ತಾನʼ ಎಂದು ಕರೆಯಲಾಯಿತು. (ಮುಂದೆ ಭಾರತದ ಸಹಾಯದಿಂದಾಗಿ ಇಂದಿರಾಗಾಂಧಿ ಅವರ
ಕಾಲದಲ್ಲಿ ಈ ಪೂರ್ವ ಪಾಕಿಸ್ತಾನದ ಭಾಗ ಸ್ವತಂತ್ರ ದೇಶವಾಗಿ ಇಂದಿನ ಬಾಂಗ್ಲಾದೇಶ ಅದದ್ದು ಬೇರೆ ವಿಚಾರ.)
ಈ ಎರಡೂ ಪ್ರದೇಶಗಳು ಒಂದು ದೇಶದ ಭಾಗಗಳೇ ಆದರೂ ಸಾಂಸ್ಕೃತಿಕವಾಗಿ ಬಹಳಷ್ಟು ಭಿನ್ನವಾಗಿದ್ದವು.
ಹೀಗೆ ಆಗ ಪೂರ್ವಪಾಕಿಸ್ತಾನ ಎಂದು ಗುರುತಿಸಲ್ಪಟ್ಟ ಇಂದಿನ ಬಾಂಗ್ಲಾದೇಶದಲ್ಲಿ
ಆಗಲೂ ಕೇವಲ ಉರ್ದು ಭಾಷಿಕರು ಮಾತ್ರವಿರಲಿಲ್ಲ. ಬಹುದೊಡ್ಡ ಸಂಖ್ಯೆಯ ಬಂಗಾಲಿ ಭಾಷಿಕರೂ ಇದ್ದರು. ಆದರೂ
ಅಂದಿನ ಪಾಕಿಸ್ತಾನ ಸರ್ಕಾರ ಬಂಗಾಲಿಗಳ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉರ್ದುಭಾಷೆಯೊಂದನ್ನೆ
ದೇಶದ ʼಅಧಿಕೃತʼ ಭಾಷೆ ಎಂದು ಘೋಷಿಸಿತು. ಇದು ಸಹಜವಾಗಿ ಬಂಗಾಲಿಗಳ ಕ್ರೋಧಕ್ಕೆ ಕಾರಣವಾಯಿತು. ಬಂಗಾಲಿ
ಒಂದನ್ನೇ ಅಲ್ಲದಿದ್ದರೂ ಕನಿಷ್ಠ ಉರ್ದುವಿನ ಜೊತೆಗೆ ಈ ಬಂಗಾಲಿಯನ್ನೂ ದೇಶದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು
ಬಂಗಾಲಿಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಮೊಟ್ಟಮೊದಲ ಬಾರಿ ಪೂರ್ವಬಂಗಾಳದ ಪ್ರಸಿದ್ಧ ವಕೀಲರಾದ,
ಪಾಕಿಸ್ತಾನದ ಮೊದಲ ಅಸೆಂಬ್ಲಿಯಲ್ಲಿ ಸದಸ್ಯರೂ ಆಗಿದ್ದ, ಧೀರೇಂದ್ರನಾಥ ದತ್ತ ಅವರು. ಅವರು 1948 ರ
ಫೆಬ್ರವರಿ 23ರಂದು ಅಸೆಂಬ್ಲಿಯಲ್ಲಿ ಈ ಬಹುಮುಖ್ಯ
ವಿಷಯವನ್ನು ಎತ್ತಿದರು. ಆದರೆ ಸರ್ಕಾರದಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ. ಸಹಜವಾಗಿ
ಇದನ್ನು ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಎಂದು ಭಾವಿಸಿದ ಬಂಗಾಳಿಗಳು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು
ದೊಡ್ಡ ಮಟ್ಟದ ಹೋರಾಟವನ್ನು ಆರಂಭಿಸಿದರು.
ಯಾವುದೇ ದೇಶವಿರಲಿ, ಆಡಳಿತವಿರಲಿ ತನ್ನ ವಿರುದ್ಧದ ಹೋರಾಟವನ್ನು
ಅದು ಸಹಿಸುವುದಿಲ್ಲ. ಅದನ್ನು ಬಗ್ಗುಬಡಿಯಲು ಅದು ಮುಂದಾಗುವುದು ಸಹಜ. ಇಲ್ಲಿಯೂ ಇದೇ ಆಯಿತು. ಸರ್ಕಾರ
ಜನರು ಈ ಬಗ್ಗೆ ಹೋರಾಟ ಮಾಡುವುದನ್ನು ಮತ್ತು ಸಭೆ ಸಮಾರಂಭ ಮಾಡುವುದನ್ನು ʼಕಾನೂನು ಬಾಹಿರʼ ಎಂದು
ಘೋಷಿಸಿತು. ಆದರೆ ಹೋರಾಟಗಾರರು ಸುಮ್ಮನಿರುತ್ತಾರೆಯೇ? ಹೋರಾಟ ಮುಂದುವರೆಯಿತು. ಈ ಹೋರಾಟ ಯುವಸಮುದಾಯವನ್ನು
ತಲುಪಿದಾಗ ತೀವ್ರಸ್ವರೂಪವನ್ನು ಪಡೆದುಕೊಂಡಿತು. 1952ರ ಫೆಬ್ರವರಿ 21 ರಂದು ಡಾಕಾ ವಿಶ್ವವಿದ್ಯಾಲಯದ
ವಿದ್ಯಾರ್ಥಿಗಳು ಸಾರ್ವಜನಿಕರ ಬೆಂಬಲದೊಂದಿಗೆ ಈ ಬೇಡಿಕೆಗಾಗಿ ಶಾಂತವಾಗಿ ಮೆರವಣಿಗೆ ಹೊರಟಾಗ ಅಲ್ಲಿನ
ಪೋಲೀಸರು ವಿದ್ಯಾರ್ಥಿಗಳ ಮೇಲೆ ಗೋಲಿಬಾರ್ ನಡೆಸಿಬಿಟ್ಟರು.
ಪೋಲೀಸರ ಈ ಅಮಾನವೀಯ ಕೃತ್ಯದಲ್ಲಿ ಅಬ್ದುಲ್ ಸಲೀಂ, ಅಬ್ದುಲ್ ಬರಾಕತ್, ರಫಿಕ್ ಉದ್ದಿನ್ ಅಹ್ಮದ್,
ಅಬ್ದುಲ್ ಜಬ್ಬರ್, ಸಫಿಯುರ್ ರೆಹಮಾನ್ ಎಂಬ ವಿದ್ಯಾರ್ಥಿಗಳ ಜೊತೆಗೆ ಅನೇಕ ವಿದ್ಯಾರ್ಥಿಗಳು ತಮ್ಮ
ಪ್ರಾಣವನ್ನು ಕಳೆದುಕೊಂಡರು. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಗಾಯಗೊಂಡರು. (ಇಲ್ಲಿನ ಹೆಸರು ಗಮನಿಸಿದರೆ
ಬಂಗಾಲಿ ಭಾಷೆಯ ಅಸ್ತಿತ್ವಕ್ಕಾಗಿ ಕೇವಲ ಬಂಗಾಲಿಗಳು ಮಾತ್ರ ಜೀವ ಕಳೆದುಕೊಳ್ಳಲಿಲ್ಲ ಎಂಬುದು ಗೊತ್ತಾಗುತ್ತದೆ.)
ಹೀಗೆ ಇಡೀ ಪ್ರಪಂಚದ ಇತಿಹಾಸದಲ್ಲಿಯೇ ಹೀಗೆ ತಮ್ಮ ಭಾಷೆಗಾಗಿ ಪ್ರಾಣಕಳೆದುಕೊಂಡ ಅಪರೂಪದ ಘಟನೆಯಾಗಿ
ಇದು ದಾಖಲಾಗಿಬಿಟ್ಟಿತು.
ಅಂದಿನಿಂದ ಬಂಗ್ಲಾದೇಶಿಗರು ಈ ದಿನವನ್ನು ಒಂದು ದುಃಖದ ದಿನವನ್ನಾಗಿ
ಆಚರಿಸುತ್ತಾರೆ. ಆ ದಿನ ಅವರು ಶಾಹಿದ್ ಮಿನಾರ್ಗೆ (ಹುತಾತ್ಮರ ಸ್ಮಾರಕ) ಹೋಗಿ ತಮ್ಮ ಗೌರವವನ್ನು
ಸಲ್ಲಿಸಿ ಬರುತ್ತಾರೆ. ಈ ದಿನದಂದು ಬಂಗ್ಲಾದೇಶ ಸರ್ಕಾರಿ ರಜೆಯನ್ನೂ ಘೋಷಿಸಿದೆ. ಕೇವಲ ಬಾಂಗ್ಲಾ ಮಾತ್ರವಲ್ಲದೆ
ಭಾರತದ ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಣಿಪುರ, ಅಸ್ಸಾಂ, ಮತ್ತು ಅಂಡಮಾನ್ ನಿಕೋಬಾರ್
ದ್ವೀಪಸಮೂಹದಲ್ಲಿ ವಾಸಿಸುವ ಬಂಗಾಳಿಗಳೆಲ್ಲರೂ ಬಹಳಷ್ಟು ಶ್ರದ್ಧೆಯಿಂದ ಆಚರಿಸುತ್ತಾರೆ.
ಹೀಗೆ ಬಂಗಾಳಿಗಳ ಭಾವನಾತ್ಮಕ ಬದುಕಿನ ಒಂದು ಮುಖ್ಯದಿನವಾದ ಫೆಬ್ರವರಿ
21ನ್ನು ವಿಶ್ವಮಟ್ಟದಲ್ಲಿ ಆಚರಿಸುವ ಪ್ರಸ್ತಾವನೆಗೆ ಚಾಲನೆ ದೊರೆತದ್ದು ಈ ಘಟನೆ ನಡೆದು ಸುಮಾರು ಐವತ್ತು
ವರ್ಷಗಳ ನಂತರ. ಈ ಘಟನೆಯ ನೆನಪಿನಲ್ಲಿ ಜಗತ್ತಿನ ಎಲ್ಲ ಮಾತೃಭಾಷೆಗಳ ಮಹತ್ವವನ್ನು ಅರಿತು ಅವನ್ನು
ರಕ್ಷಿಸುವ ಬೆಳೆಸುವ ಕೆಲಸಗಳಾಗಬೇಕು ಎಂಬ ಪ್ರಸ್ತಾವವನ್ನು ಮೊಟ್ಟಮೊದಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ
ಕೋಪಿ ಅನ್ನಾನ್ ಅವರಿಗೆ ಪತ್ರಬರೆದು ಮನವಿ ಮಾಡಿಕೊಂಡದ್ದು ಬಾಂಗ್ಲಾದೇಶ ಮೂಲದವರೇ ಆಗಿದ್ದು ಕೆನಡಾದಲ್ಲಿ
ವಾಸವಾಗಿದ್ದ ರಫೀಕ್ ಇಸ್ಲಾಮ್ ಮತ್ತು ಅಬ್ದುಲ್ ಸಲಾಮ್ ಎಂಬ ಇಬ್ಬರು ವ್ಯಕ್ತಿಗಳು. 1998ರ ಜನವರಿಯಲ್ಲಿ.
ರಫೀಕ್ ಅವರ ಪ್ರಸ್ತಾವನೆಯನ್ನು ಶೇಖ್ ಹಸೀನಾ ನೇತೃತ್ವದ ಬಂಗ್ಲಾದೇಶ ಸರ್ಕಾರ ಕೈಗೆತ್ತಿಕೊಂಡು ವಿಶ್ವಸಂಸ್ಥೆಗೆ
ಈ ಬಗ್ಗೆ ಪ್ರಸ್ತಾವನೆಯನ್ನು ಕಳಿಸಿದ್ದು ಈ ಬಗ್ಗೆ ಚರ್ಚೆ ನಡೆದು 1999ರಲ್ಲಿ ಯುನೆಸ್ಕೋ ಈ ದಿನವನ್ನು
ವಿಶ್ವ ಮಾತೃಭಾಷಾ ದಿನʼ ಎಂದು ಘೋಷಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿತು. ತತ್ಪರಿಣಾಮವಾಗಿ 2000 ನೇ
ವರ್ಷದಿಂದ ಈ ದಿನ ವಿಶ್ವಾದ್ಯಂತ ಆಚರಿಸಲ್ಪಡುತ್ತಿದೆ.
ಮಾತೃಭಾಷೆಯ ಮಹತ್ವ ಎಷ್ಟು ದೊಡ್ಡದು ಎಂಬುದನ್ನು ಚರ್ಚಿಸುವ ಮೊದಲು
ನಾವು ಸ್ಪಷ್ಟಪಡಿಸಿಕೊಳ್ಳಬೇಕಾದ ಒಂದು ಅಂಶವೆಂದರೆ ಮಾತೃಭಾಷೆ ಅಂದರೆ ಏನು ಎಂಬುದು. ಸಾಮಾನ್ಯವಾಗಿ
ತಾಯಿಯಿಂದ ಬಂದ ನುಡಿ ಎಂದು ಇದನ್ನು ಕರೆಯಬಹುದಾದರೂ ಎಲ್ಲ ಸಂದರ್ಭಗಳಲ್ಲಿಯೂ ಇದು ಸರಿಯಲ್ಲ. ಒಂದು
ಚಿಕ್ಕ ಉದಾಹರಣೆಯೊಂದಿಗೆ ಇದನ್ನು ಸ್ಪಷ್ಟಪಡಿಸಬಹುದು. ಕನ್ನಡ ಮಾತೃಭಾಷೆಯ ತಾಯಿಯೊಬ್ಬಳಿಗೆ ಒಂದು
ಮಗು ಹುಟ್ಟುತ್ತದೆ. ಆ ಮಗುವನ್ನು ಹುಟ್ಟಿದ ತಕ್ಷಣವೇ ಅವಳಿಂದ ಬೇರ್ಪಡಿಸಿ ಇಂಗ್ಲಿಷ್ ಮಾತೃಭಾಷೆಯ
ದಂಪತಿಗಳಿಗೆ ಕೊಟ್ಟು ಅಲ್ಲಿ ಅದು ಬೆಳೆಯುತ್ತದೆ ಎಂದು ಇಟ್ಟುಕೊಳ್ಳಿ. ಅಲ್ಲಿ ಅದು ಒಂದು ವಸ್ತುವಿಗೆ
Ball ಎಂಬ ಪದವನ್ನು ಮೊದಲು ಕಲಿಯುತ್ತದೆ ಎಷ್ಟೋ ವರ್ಷಗಳ ನಂತರ ಕನ್ನಡದ ಪರಿಸರಕ್ಕೆ ಬಂದಾಗ ಅದೇ ವಸ್ತುವಿಗೆ
ʼಚೆಂಡುʼ ಎಂಬ ಪದವನ್ನು ಕಲಿಯುತ್ತದೆ. ಇಲ್ಲಿ ಆ ಮಗುವಿನ ಮಾತೃಭಾಷೆಯ ಪದ ಯಾವುದು? Ball ಅಥವಾ ಚೆಂಡು.
ಚೆಂಡು ಆ ಮಗುವಿನ ಹೆತ್ತತಾಯಿಯ ಭಾಷೆಯ ಪದವೇ ಇರಬಹುದು. ಆದರೆ ಅದು ಮೊದಲು ಕಲಿತದ್ದು Ball ಎಂಬ ಪದವನ್ನು
ಹಾಗಾಗಿ ಇಲ್ಲಿ ಮಗುವಿನ ಮಾತೃಭಾಷೆಯ ಪದವಾಗಿ Ball ಗುರುತಿಸಲ್ಪಡುತ್ತದೆಯೇ ಹೊರತು ಚೆಂಡು ಅಲ್ಲ.
ಅಂದರೆ ಮಾತೃಭಾಷೆ ಎಂದರೆ ನಾವು ಮೊದಲು ಆಲಿಸುವ, ಕಲಿಯುವ ಭಾಷೆಯೇ ಹೊರತು ತಾಯಿಯಿಂದ ಬಂದ ಭಾಷೆ ಎಂದಲ್ಲ.
ಹಾಗಿದ್ದೂ ಅದಕ್ಕೆ ತಾಯ್ನುಡಿ ಎನ್ನುವುದು ಏಕೆ ಎಂದರೆ ನಾವೆಲ್ಲರೂ ಮೊದಲ ಭಾಷೆಯನ್ನು ಬಹುತೇಕ ತಾಯಿಯಿಂದಲೇ
ಕಲಿಯುತ್ತೇವೆ ಅದಕ್ಕೆ.
ನಮ್ಮ ಮಾತೃಭಾಷೆ ಅಥವಾ ತಾಯ್ನುಡಿ ಎಂಬುದು ಕೇವಲ ಒಂದು ವ್ಯಾಕರಣದನ್ವಯ
ರಚಿತವಾದ ಶಬ್ದಗಳ ಜೋಡಣೆಯಲ್ಲ. ಅದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಒಂದು ಜನಾಂಗದ ಸಂಸ್ಕೃತಿಯನ್ನು
ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಅತ್ಯಂತ ಪ್ರಬಲ ವಾಹಕ ಕೂಡ ಹೌದು. ತತ್ವಶಾಸ್ತ್ರಕ್ಕಿಂತ ಮೊದಲು
ನಾವು ಕಟ್ಟುಕತೆಗಳನ್ನು ಕೇಳುವುದು, ಗಂಭೀರ ಸಂಶೋಧನಾ ಪ್ರಬಂಧಗಳ ಮೊದಲು ಬೀದಿಹಾಡುಗಳನ್ನು ಕೇಳುವುದು
ತೀರಾ ಸ್ವಾಭಾವಿಕವಲ್ಲವೇ? ಅವೆಲ್ಲವೂ ನಮಗೆ ದೊರೆಯುವುದು ದಕ್ಕುವುದು ನಮ್ಮ ನಮ್ಮ ಮಾತೃಭಾಷೆಯಿಂದ
ಮಾತ್ರ. ಹೀಗಾಗಿ ಮಾತೃಭಾಷೆ ನಮ್ಮೆಲ್ಲರ ಒಂದು ಅನನ್ಯತೆ (ಐಡಂಟಿಟಿ) ನಮ್ಮೆಲ್ಲರ ಘನತೆ ನಮ್ಮೆಲ್ಲರ
ಸ್ವಾಭಿಮಾನದ ಪ್ರತೀಕ ಎಂಬುದನ್ನು ನಾವು ಮರೆಯಬಾರದು. ಹಾಗಾಗಿಯೇ ಒಬ್ಬ ವ್ಯಕ್ತಿಯ ಭಾಷಿಕ ಹಕ್ಕು ಇಂದು
ಮಾನವಹಕ್ಕುಗಳ ವ್ಯಾಪ್ತಿಯಲ್ಲಿ ಬಂದು ಅತ್ಯಂತ ಮಹತ್ವದ್ದಾಗಿ ಪರಿಗಣಿತವಾಗಿದೆ.
ಮಾತೃಭಾಷೆಯು ನಮಗೆ ವಿವಿಧ ಹಂತಗಳ ಅನನ್ಯತೆಯನ್ನು ರೂಪಿಸುತ್ತಾ
ಹೋಗುತ್ತದೆ. ಈ ಅನನ್ಯತೆಯಲ್ಲಿ ಎರಡು ವಿಧ. ಒಂದು ವೈಯಕ್ತಿಕ ಅನನ್ಯತೆ. ಇನ್ನೊಂದು ಸಾಂಸ್ಕೃತಿಕ ಅನನ್ಯತೆ. ವೈಯಕ್ತಿಕ ಅನನ್ಯತೆಯ ಬಗ್ಗೆ ಹೇಳುವುದಾದರೆ ಮಾತೃಭಾಷೆ ಎಂಬುದು
ಎಂಬುದು ನಮ್ಮಲ್ಲಿ ಅತ್ಯಂತ ಬಲಶಾಲಿಯಾದ ಭಾವನಾತ್ಮಕ ಸಂಬಂಧವನ್ನು ಕಟ್ಟುತ್ತದೆ. ಅನೇಕ ಮನೋವಿಜ್ಞಾನಿಗಳು
ಹೇಳುವಂತೆ ಒಬ್ಬ ವ್ಯಕ್ತಿಯ ಭಾವಾನಾನತ್ಮಕ ಸಂಬಂಧ ರೂಪುಗೊಳ್ಳುವಲ್ಲಿ ಆತನ ಅಥವಾ ಆಕೆಯ ಮೊದಲ ಭಾಷೆ
ಅಥವಾ ತಾಯ್ನುಡಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇನ್ನು ಎರಡನೆಯದು ಸಾಂಸ್ಕೃತಿಕ ಅನನ್ಯತೆ.
ಜನಪದ ಗೀತೆಗಳು, ಕಥೆಗಳು, ಗಾದೆಗಳು, ನುಡಿಗಟ್ಟುಗಳು ಒಡಪುಗಳು ಜೊತೆಗೆ ಒಂದು ಜನಾಂಗದ ಆಚರಣೆ ನಂಬಿಕೆ
ಸಂಪ್ರದಾಯ ಇವೆಲ್ಲವನ್ನೂ ತಲೆಮಾರಿನಿಂದ ತಲೆಮಾರಿಗೆ ಸಾಗಿಸು ಗುರುತರ ಜವಾಬುದಾರಿಯನ್ನು ಮಾಡುವುದು
ಮಾತೃಭಾಷೆಯೇ. ಭಾಷೆ ಇಲ್ಲದಿದ್ದರೆ ಇವೆಲ್ಲ ಉಳಿಯುವುದು ಕಷ್ಟ. ಹೀಗಾಗಿ ಇಂದು ಕನ್ನಡ, ತೆಲುಗು, ತಮಿಳು
ಬಂಗಾಳಿ ಮುಂತಾದವು ಕೇವಲ ಭಾಷೆಗಳಾಗಿ ಇರದೇ ಒಂದು ಸಂಸ್ಕೃತಿಯಾಗಿಯೇ ಪರಿಗಣಿತವಾಗಿವೆ.
ಭಾರತೀಯ ಪರಿಸರಕ್ಕೆ ಮಿತಗೊಳಿಸಿಕೊಂಡು ಹೇಳುವುದಾದರೆ 2011 ರ ಜನಗಣತಿಯು
(2021ರ ಜನಗಣತಿ ಕೋವಿಡ್ ಕಾರಣಕ್ಕೆ ನಡೆಯಲಿಲ್ಲ) ಭಾರತದಲ್ಲಿನ ಮಾತೃಭಾಷೆಗಳ ಸಂಖ್ಯೆಯನ್ನು
19569 ಎಂದು ಗುರುತಿಸಿದೆ. ಇವುಗಳಲ್ಲಿ ಸ್ವಂತಂತ್ರ ಭಾಷೆಗಳು ಎಂದು ಪರಿಗಣಿತವಾದವುಗಳು 121 ಭಾಷೆಗಳು
ಮಾತ್ರ ಆದರೆ ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿ ಭಾರತದ ಅಧಿಕೃತ ರಾಷ್ಟ್ರಭಾಷೆಗಳೆಂದು
ಪರಿಗಣಿತವಾದ ಭಾಷೆಗಳ ಸಂಖ್ಯೆ ಕೇವಲ 22 ಮಾತ್ರ. ಸಂವಿಧಾನ ಜಾರಿಗೆ ಬಂದ ಹೊಸತರದಲ್ಲಿ ಈ ಅಧಿಕೃತ ಭಾಷೆಗಳು
ಇದ್ದದ್ದು ಕೇವಲ 14. ನಂತರದ ದಿನಗಳಲ್ಲಿ ನೇಪಾಳಿ, ಕೊಂಕಣಿ, ಮಣಿಪುರಿ ಮುಂತಾದವು ಈ ಪಟ್ಟಿಗೆ ಸೇರಿಕೊಂಡವು.
ಯಾವುದೇ ಒಂದು ರಾಜ್ಯದ ಅಧಿಕೃತ ಭಾಷೆಯು ಸಹಜವಾಗಿ ನಮ್ಮ ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಕೊಳ್ಳಬೇಕು.
ಆದರೆ ಬೇರೆ ಬೇರೆ ಕಾರಣಕ್ಕಾಗಿ ದೊಡ್ಡ ಭಾಷೆಗಳಿಗಿಂತ ಮೊದಲೇ ಅವಕ್ಕಿಂತ ಚಿಕ್ಕ ಭಾಷೆಗಳೂ ಈ ಅಧಿಕೃತ
ಪಟ್ಟಿ ಸೇರಿಬಿಡುವುದುಂಟು. ಭಾರತದಲ್ಲಿ ಯಾವ ರಾಜ್ಯದ ಅಧಿಕೃತ ಭಾಷೆಗಳೂ ಅಲ್ಲದ ಬೋಡೋ, ಡೋಗ್ರಿ, ಸಂತಾಲಿ
ಮತ್ತು ಮೈಥಿಲಿ ಭಾಷೆಗಳು ಎಂಟನೆಯ ಪರಿಚ್ಚೇದವನ್ನು ಸೇರಿದ್ದು ಅವುಗಳ ಅರ್ಹತೆಯಾಚೆಗಿನ ರಾಜಕೀಯ ಕಾರಣದಿಂದ
ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹತ್ತು ಸಾವಿರಕ್ಕಿಂತ ಕಡಿಮೆ ಜನ ಮಾತನಾಡುವ ಭಾಷೆಗಳನ್ನು
ಜನಗಣತಿಯು ವಿಶ್ಲೇಷಣೆಗೆ ಒಳಪಡಿಸುವುದಿಲ್ಲವಾದ ಕಾರಣ ಅವುಗಳ ಮಾಹಿತಿಯೂ ಅನೇಕ ಸಲ ನಮಗೆ ದೊರೆಯುವುದಿಲ್ಲ.
ಭಾರತದ ಸುಮಾರು ಶೇ. 97 ರಷ್ಟು ಜನ ನಮ್ಮ ಅಧಿಕೃತವೆಂದು ಪರಿಗಣಿತವಾದ ಈ 22 ಭಾಷೆಗಳನ್ನೇ ಮಾತೃಭಾಷೆಗಳನ್ನಾಗಿ
ಹೊಂದಿದ್ದಾರೆ ಆದ್ದರಿಂದ ನಮ್ಮ ಗಮನ ಸಹಜವಾಗಿ ಅತ್ತಕಡೆ ಇದೆ. ಅಂದಮಾತ್ರಕ್ಕೆ ಉಳಿದವು ಅಲಕ್ಷಕ್ಕೆ
ಗುರಿಯಾಗಬೇಕಾಗಿಲ್ಲ.
ಶಿಕ್ಷಣ ಮತ್ತು ಮಾತೃಭಾಷೆ
ಮಾತೃಭಾಷೆಯ ಮೂಲಕ ಶಿಕ್ಷಣ ನೀಡಬೇಕು ಎನ್ನುವ ಅಂಶ ಇಂದು ಅತ್ಯಂತ
ವಿವಾದದ ವಿಷಯವಾಗಿ ಕುಳಿತಿದೆ. ನ್ಯಾಯಾಲಯಗಳು ಈ ಬಗ್ಗೆ ನೀಡಿರುವ ಅನೇಕ ತೀರ್ಪುಗಳು ಮಾತೃಭಾಷೆಯ ಭವಿಷ್ಯ
ಏನು ಎಂಬ ಮುಖ್ಯಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಈ ಅಂಶಗಳನ್ನು ಒಂದೆಡೆ ಇರಿಸಿ ಕೇವಲ ಶೈಕ್ಷಣಿಕವಾಗಿ
ಯೋಚಿಸಿ ಹೇಳುವುದಾದರೆ ಜಗತ್ತಿನ ಬಹುತೇಕ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಹೇಳುವ ಪ್ರಕಾರ ಯಾವುದೇ
ಕಲಿಕಾಂಶ ಮಗುವಿನ ಮಾತೃಭಾಷೆಯಲ್ಲಿ ಹೇಳಿದಾಗ ಸುಲಭವಾಗಿ, ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಅರ್ಥವಾದಂತೆ
ಉಳಿದ ಯಾವುದೇ ಭಾಷೆಗಳಲ್ಲಿ ಹೇಳಿದಾಗ ಅರ್ಥವಾಗುವುದಿಲ್ಲ. ಇದೇ ಕಾರಣಕ್ಕೆ ಕೊನೆಯ ಪಕ್ಷ ಮಗುವಿನ ಆರಂಭಿಕ
ಶಿಕ್ಷಣವಾದರೂ ಮಗುವಿನ ಮಾತೃಭಾಷೆಯಲ್ಲಿ ಇರಬೇಕು ಎಂಬುದು ಬಹುತೇಕ ಎಲ್ಲ ಶಿಕ್ಷಣ ತಜ್ಞರ ಅಭಿಮತ. ಆದರೆ
ಸಾರ್ವಜನಿಕ ಶಿಕ್ಷಣಕ್ಕೆ ಇರುವ ತೊಡಕು, ಸಮಸ್ಯೆ, ಮತ್ತು ಸ್ಪಷ್ಟತೆಯ ಕೊರತೆಗಳು ಇದನ್ನು ಆಗುಮಾಡುವಲ್ಲಿ
ಇಂದು ಸೋತಿವೆ. ಆರಂಭಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ
ಪಡೆಯುವ ಮಗು ಬೇರೆ ಭಾಷೆಗೆ ವರ್ಗವಾಗುವಾಗ ಒಂದಿಷ್ಟು ತೊಡಕುಗಳನ್ನು ಎದುರಿಸುವುದು ನಿಜವಾದರೂ ಅದು
ಆ ಹೊಸ ಭಾಷಾ ಪರಿಸರಕ್ಕೆ ಹೊಂದಿಕೊಂಡ ಮೇಲೆ ಅದು ಆ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಯುತ್ತದೆ.
ಇದಕ್ಕೆ ತಳಪಾಯವಾಗಿ ಕೆಲಸ ಮಾಡುವಂಥದ್ದು ಅದರ ಮಾತೃಭಾಷೆಯೇ. ವಿದ್ಯಾರ್ಥಿಗಳು ಮಾತೃಭಾಷೆಯ ಕಲಿಕೆಯನ್ನು
ಮಾತ್ರ ಅನುಭವಾತ್ಮಕವಾಗಿಸಿಕೊಳ್ಳಬಲ್ಲರು. ಇತರ ಭಾಷೆಗಳ ಕಂಠಪಾಠಕ್ಕೆ ಗಂಟುಬೀಳಿಸುವ ಸಾಧ್ಯತೆಗಳೇ
ಹೆಚ್ಚು.
ಇಂಗ್ಲಿಷ್ ಬಗ್ಗೆ ನಮ್ಮಲ್ಲಿ ಬಹಳಷ್ಟು ಅಜ್ಞಾನವಿದೆ. ಬಹಳಷ್ಟು
ಜನ ಇಂಗ್ಲಿಷ್ ಭಾಷೆಗೆ ಮಕ್ಕಳನ್ನು ಎಷ್ಟುಬೇಗ ಮುಖಮಾಡಿಸುತ್ತೇವೆಯೋ ಅಷ್ಟು ಪರಿಣಾಮಕಾರಿಯಾಗಿ ಅವರು
ಅದನ್ನು ಕಲಿಯುತ್ತಾರೆ ಎಂದು ತಿಳಿದಿದ್ದಾರೆ. ಆದರೆ ಇದಕ್ಕೆ ಯಾವುದೇ ಭದ್ರ ಆಧಾರಗಳಿಲ್ಲ. ಕರ್ನಾಟಕವೂ
ಸೇರಿದಂತೆ ಭಾರತದ ಬಹಳಷ್ಟು ರಾಜ್ಯಗಳಲ್ಲಿ ಈಗ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುತ್ತಿದ್ದಾರೆ.
ಸುಮಾರು ಹನ್ನೆರಡು ವರ್ಷ ಸತತವಾಗಿ ಇಂಗ್ಲಿಷ್ ಕಲಿಸಿದರೂ ಹನ್ನೆರಡು ವರ್ಷಗಳ ಶಿಕ್ಷಣ ಮುಗಿಸಿದ ಮೇಲೆ
ಅಪರಿಚಿತ ಪರಿಸರದಲ್ಲಿ ಸುಲಲಿತವಾಗಿ ಹನ್ನೆರಡು ವಾಕ್ಯಗಳನ್ನೂ ಮಾತನಾಡಲು ಮಕ್ಕಳಿಗೆ ಆಗುತ್ತಿಲ್ಲ
ಏಕೆ? ಈ ಬಗ್ಗೆ ಸಂಶೋಧನೆ ಮಾಡಿರುವ ಒಬ್ಬ ವಿದ್ವಾಂಸರು ಹೇಳುವ ಪ್ರಕಾರ ಇದು ಕೇವಲ ಭಾರತ ಒಂದರ ಸಮಸ್ಯೆಯಲ್ಲ.
ಇಡೀ ತೃತೀಯ ರಾಷ್ಟ್ರಗಳ ಸಮಸ್ಯೆಯಂತೆ. ಈ ಎಲ್ಲ ದೇಶಗಳಲ್ಲಿ ಇಂಗ್ಲಿಷನ್ನು ತಪ್ಪುವಿಧಾನದಿಂದ ಕಲಿಸುವುದು
ಈ ನ್ಯೂನತೆಗೆ ಕಾರಣ ಎಂಬುದು ಅವರ ಅಭಿಪ್ರಾಯ. ಯಾವುದೇ ಭಾಷೆಗೆ ʼಓರಲ್ ಟ್ರ್ಯಾಕ್ʼ ʼರಿಟನ್ ಟ್ರ್ಯಾಕ್ʼ
ಎಂಬ ಎರಡು ದಾರಿಗಳು ಇರುತ್ತವೆ. ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು ಈ ಬಹುಮುಖ್ಯವಾದ
ಭಾಷಾ ಕೌಶಲಗಳು ಕ್ರಮವಾಗಿಯೇ ಕಲಿಸಲ್ಪಡಬೇಕು. ಆದರೆ ನಮ್ಮಲ್ಲಿ ಬಹಳಷ್ಟು ಕಡೆ ʼಮೊದಲೆರಡು ಕೌಶಲಗಳನ್ನು
ಬಿಟ್ಟು ಮೂರನೆಯದು ಮತ್ತು ನಾಲ್ಕನೆಯದು ಕಲಿಸತೊಡಗುವುದರಿಂದ ಅಂದರೆ ʻರಿಟನ್ ಟ್ರ್ಯಾಕ್ʼ ಮೂಲಕ ಕಲಿಸುತ್ತಿರುವುದರಿಂದ ಹೀಗಾಗುತ್ತಿದೆ
ಎಂಬುದು ಈ ಬಗ್ಗೆ ಅವರ ವಿವರಣೆ.
ಇವತ್ತು ನಾವೆಷ್ಟೇ ಮಾತೃಭಾಷಾ ಅಭಿಮಾನಿಗಳಾದರೂ ಇಂಗ್ಲಿಷ್ ಬೇಡ ಎಂದು ಹೇಳುವ ಪರಿಸ್ಥಿತಿಯಿಲ್ಲ. ಇಂಗ್ಲಿಷ್ ಒಂದು ಕಾಲಘಟ್ಟದಲ್ಲಿ ʻಹೇರಿಕೆಯ ಭಾಷೆʼ ಆಗಿದ್ದು ನಿಜ. ಆದರೆ ಅದು ಇಂದು ʻಬೇಡಿಕೆಯ ಭಾಷೆʼ ಆಗಿದೆ. ಯಾವುದೇ ಒಂದು ಭಾಷೆ ಹೇರಿಕೆಯ ಭಾಷೆಯಾಗಿದ್ದಾಗ ಅದನ್ನು ವಿರೋಧಿಸುವುದು ಸುಲಭ. ಏಕೆಂದರೆ ಅದಕ್ಕೆ ಜನಬೆಂಬಲ ದೊರೆಯುತ್ತದೆ. ಆದರೆ ಅದು ಬೇಡಿಕೆಯ ಭಾಷೆ ಆದಾಗ ಅದನ್ನು ವಿರೋಧಿಸುವುದು ಬಲುಕಷ್ಟ. ಏಕೆಂದರೆ ಯಾರ ಒಳಿತಿಗಾಗಿ ಅದನ್ನು ನಾವು ವಿರೋಧಿಸಹೊರಡುತ್ತೇವೆಯೋ ಆ ಜನವೇ ನಮ್ಮನ್ನು ತಮ್ಮ ವೈರಿಗಳೆಂದು ಪರಿಗಣಿಸಿಬಿಡುತ್ತಾರೆ. ಹಾಗಾಗಿ ಇಂದು ನಾವು ʻಕನ್ನಡಕ್ಕೆ ವಿರೋಧಿ ಇಂಗ್ಲಿಷ್ʼ ಎಂಬ ಧೋರಣೆಯಿಂದ ಹಿಂದೆ ಸರಿದು ʻಕನ್ನಡದ ಜೊತೆಗೆ ಇಂಗ್ಲಿಷ್ʼ ಎಂಬ ಧೋರಣೆ ತಾಳಬೇಕಾಗಿದೆ. ಭಾಷೆಯ ವಿಷಯದಲ್ಲಿ ಬಹುಭಾಷಿಕ ಕೌಶಲವೇ ಇಂದು ʼಬುದ್ಧಿವಂತಿಕೆʼ ಎನಿಸುತ್ತದೆ
ನಾವು ಮಾಡಬೇಕಾಗಿರುವುದೇನು?
ಮಾತೃಭಾಷೆಯನ್ನು ಬಳಸುವುದರ ಜೊತೆಗೆ ಬೆಳಸುವುದೂ ನಮ್ಮೆಲ್ಲರ ಹೊಣೆ ಎಂಬುದನ್ನು ಅರ್ಥಮಾಡಿಕೊಂಡು ಕಾರ್ಯೋನ್ಮುಖರಾದಾಗ ಯಾವುದೇ ಭಾಷೆ ಗಂಡಾಂತರಕ್ಕೆ ತಾನೂ ಸಿಲುಕುವುದಿಲ್ಲ; ತನ್ನನ್ನು ಆಡುವವರನ್ನೂ ಗಂಡಾಂತರಕ್ಕೆ ಸಿಲುಕಿಸುವುದಿಲ್ಲ. ಇಂದು ಜಗತ್ತಿನ ಯಾವ ಭಾಷೆಯೂ ತನ್ನನ್ನು ಆಡುವವರ ಸಂಪೂರ್ಣ ಅಗತ್ಯಗಳನ್ನು ಪೂರೈಸುವಷ್ಟು ಸಮರ್ಥವಾಗಿಲ್ಲ. ಇದು ಇಂಗ್ಲೀಷಿಗೂ ಅನ್ವಯಿಸುತ್ತದೆ. ದಿನ ನಿತ್ಯ ಇಂಗ್ಲಿಷ್ ಭಾಷೆಯ ಸಂಪರ್ಕದಲ್ಲಿರುವವರಿಗೆ ಆ ಭಾಷೆಯನ್ನು ಹೇಗೆ ಬೆಳಸಲಾಗುತ್ತದೆ ಎಂಬುದು ಗೊತ್ತಿರುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದ ವಿವಿಧ ಭಾಷೆಗಳಿಂದ ವರ್ಷಕ್ಕೆ ಸುಮಾರು ಐದು ಸಾವಿರದಷ್ಟು ಪದಗಳನ್ನು ಇಂಗ್ಲಿಷಿಗೆ ಸೇರಿಸಿಕೊಳ್ಳಲಾಗುತ್ತದೆಯಂತೆ! ಇದು ಸಣ್ಣಸಂಖ್ಯೆಯಲ್ಲ. ಹೀಗಾಗಿ ಭಾರತದ ವಿವಿಧ ಭಾಷೆಗಳ ಶಬ್ದಗಳಾದ, ರೋಟಿ, ಧರಣಿ, ಲಕ್ಷದೀಪೋತ್ಸವ, ಮಹಾಮಸ್ತಕಾಭಿಷೇಕ, ಸಮ್ಮೇಳನ, ಜಾತ್ರೆ, ಇವೆಲ್ಲ ಇಂದು ಇಂಗ್ಲಿಷಿನ ಭಾಷೆಯಲ್ಲಿ ಅದೇ ಭಾಷೆಯ ಪದಗಳಂತೆ ಬಳಸಲ್ಪಡುತ್ತಿವೆ. ನಾವು ಮಾತ್ರ, ಟಿ.ವಿ ಬಂದಾಗ ʼದೂರದರ್ಶನʼ ಎಂದು, ಪೋಲಿಸ ಮುಖ್ಯಸ್ಥನಿಗೆ ʼಆರಕ್ಷಕ ಮಹಾರಕ್ಷಕʼ ಎಂದು ಜನರು ಎಂದೆಂದೂ ಬಳಸಲಾಗದ ಶಬ್ದಗಳನ್ನು ಟಂಕಿಸಿಕೊಂಡು ಕುಬ್ಜರಾಗುತ್ತಿದ್ದೇವೆ. ಬೇರೆ ಭಾಷೆಯ ಪದಗಳಿಗೆ ನಾವು ಟಂಕಿಸುವ ಪದಗಳು ಉಚ್ಛಾರಕ್ಕೆ ಆ ಭಾಷೆಯ ಪದಗಳಿಗಿಂತ ಒಂದಿಷ್ಟಾದರೂ ಕಡಿಮೆ ಕಾಲವನ್ನು ತೆಗೆದುಕೊಳ್ಳುವಂತಾದಾಗ ಮಾತ್ರ ಅವು ಜನರ ನಾಲಿಗೆಯ ಮೇಲೆ ಉಳಿಯುತ್ತವೆ. ಭಾಷೆಗಳು ಬದುಕುವುದು ಮತ್ತು ಬೆಳೆಯುವುದು ಜನರ ನಾಲಿಗೆಯ ಮೇಲೆಯೇ ಹೊರತು ಗ್ರಂಥಗಳಲ್ಲಿ ಅಲ್ಲ ಎಂಬ ತಿಳಿವಳಿಕೆ ನಮಗೆ ಬರಬೇಕಿದೆ.
ಮನುಷ್ಯ ಎಷ್ಟೇ ಬುದ್ದಿವಂತನಾದರೂ ಅವನ ಬಹುತೇಕ ಬದುಕು ನಡೆಯುವುದು
ಅವನ ಭಾವನೆಗಳ ಮೇಲೆಯೇ. ಭಾವನೆಗಳು ಹುಟ್ಟುವುದು ಅರಳುವುದು ಮಾತೃಭಾಷೆಯಲ್ಲಿಯೇ. ನಾವು ಯೋಚಿಸುವುದು,
ಕನಸುಕಾಣುವುದು, ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವುದು ನಮ್ಮ ತಮ್ಮ ತಾಯ್ನುಡಿಗಳಲ್ಲಿಯೇ.
ಹೀಗಾಗಿ ತಾಯ್ನುಡಿಯ ಮಹತ್ವ ಎಂದಿಗೂ ಕಡಿಮೆ ಆಗಲು ಸಾಧ್ಯವಿಲ್ಲ. ರವೀಂದ್ರನಾಥ ಠ್ಯಾಗೋರರು ನನಗೆ ಮೂರು
ಜನ ತಾಯಂದಿರು: ತಾಯಿ, ತಾಯಿನಾಡು ಮತ್ತು ತಾಯಿನುಡಿ ಎಂದು ಹೇಳುತ್ತಿದ್ದರು. ನಾನೊಮ್ಮೆ ಕೇರಳ ಮೂಲಕ ಇಂಗ್ಲಿಷ್ ಲೇಖಕ ಡಾ. ಕೆ. ಸಚ್ಚಿದಾನಂದನ್
ಅವರನ್ನು ಭೇಟಿಮಾಡಿದಾಗ ಅವರೊಡನೆ ಮಾತನಾಡುವಾಗ ಅವರು, ನಾನು ಈಗಲೂ ಕವಿತೆಗಳನ್ನು ಮೊದಲು ಮಲೆಯಾಳಿಯಲ್ಲಿ
ಬರೆದು ನಂತರ ಇಂಗ್ಲಿಷಿಗೆ ತರ್ಜುಮೆ ಮಾಡುವೆʼ ಎಂದು ಹೇಳಿದರು. ಟ್ಯಾಗೂರರು ತಮ್ಮ ಗೀತಾಂಜಲಿಯನ್ನು
ಬರೆದದ್ದೂ ಅವರ ಮಾತೃಭಾಷೆ ಬಂಗಾಳಿಯಲ್ಲಿಯೇ. ಜಗತ್ತಿನ ಕಾಲುಭಾಗ ಜನರ ಆಲೋಚನಾ ಕ್ರಮದ ದಿಕ್ಕನ್ನೇ
ಬದಲಿಸಿದ ಕಾರ್ಲ್ ಮಾರ್ಕ್ಸ್ ಬರೆದದ್ದು ತನ್ನ ಮಾತೃಭಾಷೆ ಜರ್ಮನಿಯಲ್ಲಿ. ಇವೆಲ್ಲ ಸಂಗತಿಗಳನ್ನು
ನೋಡಿದಾಗ ನಮ್ಮ ಮಾತೃಭಾಷೆಗೆ ಸರಿಸಮವಾಗಿ ಯಾವುದೇ ಭಾಷೆ ಏರಲು ಸಾಧ್ಯವಿಲ್ಲವೇನೋ ಅನ್ನಿಸುತ್ತದೆ.
ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತು. ಇಂದು ಧರ್ಮಗಳಿಗೆ ಹೇಗೆ
ಸ್ಪೋಟಕ ಶಕ್ತಿಗಳನ್ನು ತುಂಬಲಾಗುತ್ತಿದೆಯೋ ಹಾಗೆಯೇ ಭಾಷೆಗಳಿಗೂ ಸ್ಪೋಟಕ ಶಕ್ತಿಯನ್ನು ತುಂಬುವ ಕೆಲಸಗಳು
ಅಲ್ಲಲ್ಲಿ ನಡೆಯುತ್ತಿವೆ. ಭಾಷೆಗೆ ಒಂದುಗೂಡಿಸುವ ಶಕ್ತಿ ಇದ್ದಂತೆ ವಿಭಜಿಸುವ ಶಕ್ತಿಕೂಡ ಇರುತ್ತದೆ.
ಭಾಷೆ ಕೂಡ ದೇವರು ಧರ್ಮದಂತೆ ಭಾವನಾತ್ಮಕ ಅಂಶ. ಇದನ್ನು ಅರ್ಥಮಾಡಿಕೊಂಡು ತಮ್ಮ ರಾಜಕೀಯ ಅಥವಾ ಆರ್ಥಿಕ
ಲಾಭಕ್ಕಾಗಿ ಭಾಷೆಭಾಷೆಗಳ ನಡುವೆ ಬೆಂಕಿಹಚ್ಚಿ ಚಳಿಕಾಯಿಸಿಕೊಳ್ಳುವವರು ನಮ್ಮ ನಡುವೆ ಇದ್ದೇ ಇರುತ್ತಾರೆ.
ಈ ಬಗ್ಗೆ ನಮ್ಮ ಜನ ವಿಶೇಷವಾಗಿ ಯುವಜನಾಂಗ ತುಂಬಾ ಎಚ್ಚರದಿಂದ ಇರಬೇಕು. ಭಾರತದಲ್ಲಿ ಈಗ ಒಂದು ದೇಶ
ಒಂದು ಚುನಾವಣೆ, ಚರ್ಚೆಯಲ್ಲಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಒಂದು ದೇಶ ಒಂದು ಧರ್ಮ, ಒಂದು
ದೇಶ ಒಂದು ಭಾಷೆ, ಒಂದು ದೇಶ ಒಂದು ಜನಾಂಗ ಹೀಗೆ ಮುಂದುವರೆಯುತ್ತದೆ. ಭಾರತದ ಸಂವಿಧಾನವು ಭಾಷೆಯ ವೈವಿಧ್ಯತೆಯನ್ನು
ಪ್ರೋತ್ಸಾಹಿಸುತ್ತದೆಯೇ ಹೊರತು ಭಾಷೆಯ ಏಕತೆಯನ್ನಲ್ಲ. ಇದನ್ನೇ ಇಕ್ಬಾಲ್ ಅವರು ತಮ್ಮ ಸಾರೆ ಜಹಾಂಸೆ
ಅಚ್ಚಾ ಎಂಬ ಸುಪ್ರಸಿದ್ಧ ದೇಶಭಕ್ತಿಗೀತೆಯಲ್ಲಿ, ಹಮ್ ಬುಲ್ ಬುಲೇ ಹೈ ಇಸಕಿ ಹೇ ಗುಲ್ಸಿತಾ ಹಮಾರʼ
ಎಂದು ಹಾಡಿರುವುದು. ಭಾರತ ಎಂಬ ಈ ಉದ್ಯಾನವನದಲ್ಲಿ ವಿವಿಧ ಭಾಷೆಗಳ ಜನರು ತಮ್ಮ ತಮ್ಮ ಭಾಷೆಗಳನ್ನು
ಆಡುತ್ತಾ ಹಕ್ಕಿಗಳಂತೆ ಇದ್ದರೇನೇ ಈ ಉದ್ಯಾನಕ್ಕೆ ಕಳೆಬರುವುದು. ಈ ತಿಳಿವಳಿಕೆ ನಮಗೆ ಬಂದರೆ ನಮ್ಮ
ನಮ್ಮ ನಡುವಿನ ಭಾಷಿಕ ಜಗಳಗಳು ತುಂಬಾ ಕ್ಷುಲ್ಲಕ ಎಂದು ನಮಗೇ ಅನ್ನಿಸಿ ನಾವೆಲ್ಲ ಕವಿಹಾಡುವಂತೆ, “ನಾವೆಲ್ಲ
ಒಂದು ಎಂಬ ಭಾವ ಮೂಡಲಿ; ನಮ್ಮಲ್ಲಿ ಭೇದಭಾವ ಪ್ರಭುವು ದೂರಮಾಡಲಿ” ಎಂದು ಪ್ರಾರ್ಥಿಸತೊಡಗುತ್ತೇವೆ.
ಹೌದು. ʼವಿಶ್ವ ಮಾತೃಭಾಷಾ ದಿನʼ ಎಂಬುದು ಒಂದು ಕಹಿಘಟನೆಯನ್ನು ನೆನಪಿಸುವ ದಿನ. ಆದರೆ ಅದಕ್ಕಾಗಿ ನಾವು ಶೋಕಿಸುತ್ತಾ ಕೂರಬೇಕಿಲ್ಲ. ಶೋಕವನ್ನು ಶ್ಲೋಕವಾಗಿಸಿಕೊಳ್ಳುವ ಕಲೆ ನಮಗೆ ಬರಬೇಕು. ಭಾಷೆಗಾಗಿ ಮಾಡಿದ ತ್ಯಾಗ ಬಲಿದಾನಗಳು ವ್ಯರ್ಥವಾಗಬಾರದು ಅನ್ನುವುದಾದರೆ ಅವರ ಸಾವನ್ನು ಸಾರ್ಥಕಗೊಳಿಸುವ ಕೆಲಸಗಳು ನಮ್ಮಿಂದ ಆಗಬೇಕು. ಅವರ ಸಾವು ಹೇಗೆ ವ್ಯರ್ಥವಲ್ಲ ಎಂಬುದನ್ನು ಕುವೆಂಪು ಅವರ ಇನ್ನೊಂದು ಕವಿತೆಯ ಸಾಲುಗಳು ಹೀಗೆ ದಾಖಲಿಸುತ್ತವೆ:
“ನಾವಳಿಯುವೆವು; ನಮ್ಮ ಎಲುಬುಗಳ ಮೇಲೆ
ಮೂಡುವುದು ನಮ ಭಾರತದ ಲೀಲೆ”
*****
ಡಾ. ರಾಜೇಂದ್ರ
ಬುರಡಿಕಟ್ಟಿ
21-02-2026 (ವಿಶ್ವ ಮಾತೃಭಾಷಾ ದಿನ)








