Tuesday, June 17, 2025

'ಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

 

ʻಮಹಾನಾಯಕʼನ ಮಾದರಿ ಬದುಕಿನ ಚಿತ್ರಗಳು

·         ಡಾ. ರಾಜೇಂದ್ರ ಬುರಡಿಕಟ್ಟಿ

ಮಹಾವ್ಯಕ್ತಿಗಳ ವೈಯಕ್ತಿಕ ಬದುಕಿನ ವಿವರಗಳನ್ನು ತಿಳಿಯುವ ಕುತೂಹಲ ಸಾಮಾನ್ಯ ಜನರಿಗೆ ಸಹಜವಾಗಿ ಇರುತ್ತದೆ. ಈ ಮಹಾವ್ಯಕ್ತಿಗಳು ಬರೆಹಗಾರರಾದರಂತೂ ಅವರ ಕೃತಿಗಳನ್ನು ಓದುವ ಓದುಗರಿಗೆ ಅವರ ಬದುಕಿನ ವಿವರಗ್ತಳನ್ನು ತಿಳಿಯುವ ಹಂಬಲ ತುಸು ಹೆಚ್ಚೇ ಇರುತ್ತದೆ. ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ಕಾರಣ ಎಲ್ಲರಿಗೂ ಇರುವಂತೆ ಅವರಿಗೂ ದಿನಕ್ಕೆ ಇಪ್ಪತ್ತನಾಲ್ಕೇ ಗಂಟೆಗಳ ಸಮಯವಿರುವಾಗ ನಮಗೆ ಆಗದ್ದನ್ನು ಸಾಧಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಯುವ ಕುತೂಹಲ. ಇಂತಹ ಸಾಮಾನ್ಯರ ಅಪೇಕ್ಷೆಯನ್ನು ಈಡೇರಿಸುವಂಥವು ಅಂತಹ ಮಹಾವ್ಯಕ್ತಿಗಳ ಆತ್ಮಕಥೆಗಳು ಅಥವಾ ಅವರನ್ನು ಕುರಿತ ಜೀವನಚರಿತ್ರೆಗಳು. ಆತ್ಮಕಥೆಗಳಿಗಿಂತ ಜೀವನಚರಿತ್ರೆಗಳಿಗೆ ಜನ ಒಂದಿಷ್ಟು ಹೆಚ್ಚು ಆದ್ಯತೆ ನೀಡುವುದುಂಟು. ಆತ್ಮಕಥೆಗಳಲ್ಲಿ ಒಬ್ಬ ವ್ಯಕ್ತಿ ಕೆಲವು ಸಂಗತಿಗಳನ್ನು ಬರೆಯುವ ಮೂಲಕ ತನ್ನನ್ನು ತೆರೆದುಕೊಳ್ಳಲು ಇಷ್ಟಪಡದೆ ಬಿಟ್ಟ ಸಂಗತಿಗಳನ್ನೂ ಜೀವನಚರಿತ್ರೆಗಳು ಒಳಗೊಂಡಿರಲು ಸಾಧ್ಯವೆಂದು ನಂಬುವುದು ಬಹುಶಃ ಇದಕ್ಕೆ ಕಾರಣವಿರಬಹುದು. ಹಾಗಾಗಿ ಮಹಾವ್ಯಕ್ತಿಗಳ ಜೀವನ ಚರಿತ್ರೆಗಳಿಗೆ ಅವರ ಬದುಕಿನ ವಿವರಗಳನ್ನು ಕುರಿತ ವ್ಯಕ್ತಿಚಿತ್ರಗಳು ಮತ್ತು ಬಿಡಿಲೇಖನಗಳಿಗೆ ತಮ್ಮದೇ ಆದ ಮಹತ್ವವಿದೆ.

ಭಾರತ ಮಾತ್ರವಲ್ಲ ವಿಶ್ವದ ಮಹಾವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಹೆಸರು ಡಾ ಬಿ ಆರ್‌ ಅಂಬೇಡ್ಕರ್‌ ಅವರದ್ದು. ಅವರಷ್ಟು ಓದಿಕೊಂಡವರು ಈಗಿನ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಅವರ ಕಾಲಕ್ಕಂತೂ ಇರಲೇ ಇಲ್ಲವೆಂದು ಧೈರ್ಯದಿಂದ ಹೇಳಬಹುದು. ಭಾರತದಲ್ಲಿ ಈಗಲೂ ಅಂಬೇಡ್ಕರ್‌ ಅಂದರೆ ಬಹಳಷ್ಟು ಜನರಿಗೆ ತಕ್ಷಣಕ್ಕೆ ನೆನಪಿಗೆ ಬರುವುದು ಅವರ ಜಾತಿಯೇ ಹೊರತು ಅವರ ವಿದ್ವತ್ತು ಅಲ್ಲ. ಆದರೆ ಅಂಬೇಡ್ಕರ್‌ ಅಂದರೆ ಏನು? ಅವರ ವ್ಯಕ್ತಿತ್ವ ಎಷ್ಟು ದೊಡ್ಡಮಟ್ಟದ್ದು ಎಂಬುದನ್ನು ಇಡೀ ವಿಶ್ವ ಗುರುತಿಸಿದೆ. ಅನೇಕ ಕಡೆ ಅವರ ಜನ್ಮದಿನವನ್ನು ʼಜ್ಞಾನದ ದಿನʼವೆಂದು ಕೂಡ ಆಚರಿಸಲಾಗುತ್ತಿದೆ.

ಇಂತಹ ಒಬ್ಬ ಮಹಾವ್ಯಕ್ತಿಯ ಜೀವನದ ವಿವಿರಗಳನ್ನು ತಿಳಿಸುವ ಅನೇಕ ಕೃತಿಗಳು ಈಗಾಗಲೇ ಕನ್ನಡವೂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಅಂತಹವುಗಳ ಸಾಲಿಗೆ ಇತ್ತೀಚೆಗೆ ಪ್ರಕಟವಾಗಿರುವ ʼಡಾ ಬಾಬಾ‌ ಸಾಹೇಬ್ಅಂಬೇಡ್ಕರ್‌ ದಿನಚರಿʼ ಹೊಸದಾಗಿ ಸೇರ್ಪಡೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಸುಮಾರು ೧೬೦ ಪುಟಗಳ ಈ ಪುಸ್ತಕ ಅಂಬೇಡ್ಕರ್‌ ಅವರ ಖಾಸಗೀ ಬದುಕಿನ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸುವ ಹನ್ನೊಂದು ಕಿರುಲೇಖನಗಳು ಮತ್ತು ಅನುಬಂಧದಲ್ಲಿ ಸೇರಿಸಲ್ಪಟ್ಟ ಮೂರು ದೊಡ್ಡ ಲೇಖನಗಳನ್ನು ಒಳಗೊಂಡಿದೆ. ಅಂಬೇಡ್ಕರ್‌ ಅವರ ಮನೆಯ ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯ ಮೇಲೆ ಬಹಳಷ್ಟು ಕಾಲ ಅವರೊಂದಿಗೆ ತೀರಾ ಹತ್ತಿರದ ಒಡನಾಟದಲ್ಲಿದ್ದ ಉತ್ತರ ಪ್ರದೇಶ ಮೂಲದ ದೇವಿದಯಾಳ್‌ ಅವರು ಅಂಬೇಡ್ಕರ್‌ ಅವರ ಬೃಹತ್‌ ಜೀವನ ಚರಿತ್ರೆಯನ್ನು ಹಲವು ಸಂಪುಟಗಳಲ್ಲಿ ಬರೆದಂಥವರು. ಹಿಂದಿಯಲ್ಲಿರುವ ಅವರ ಕೆಲವು ಆಯ್ದ ಲೇಖನಗಳು ಮತ್ತು ಅವುಗಳ ತೆಲುಗು ಅನುವಾದಗಳನ್ನು ಇಟ್ಟುಕೊಂಡು ಅವನ್ನು ಇಲ್ಲಿ ಕನ್ನಡಕ್ಕೆ ತಂದಿರುವವರು ಪ್ರಾಧ್ಯಾಪಕ ಪಿ ಆರಡಿ ಮಲ್ಲಯ್ಯ ಕಟ್ಟೇರ ಅವರು.

ಅಂಬೇಡ್ಕರ್‌ ಅಂತಹವರ ಜೀವನ ಚರಿತ್ರೆಯನ್ನು ಯಾರು ಬರೆದರೂ ಎಷ್ಟು ಬರೆದರೂ ಇನ್ನೂ ಏನಾದರೂ ಮಹತ್ವದ್ದು ಉಳಿದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳವ ಅನುವಾದಕರು ʼಈ ಪುಸ್ತಕವನ್ನು ಅನುವಾದ ಮಾಡುವಾಗ ಮುಖ್ಯವಾಗಿ ನನ್ನ ಎದುರಿಗೆ ಇದ್ದದ್ದು ವಿದ್ಯಾರ್ಥಿ ಸಮೂಹ; ಅವರ ಜೀವನಕ್ಕೆ ಮಾರ್ಗದರ್ಶನ ನೀಡಬಲ್ಲ ಅಂಬೇಡ್ಕರ್‌ ಜೀವನದ ಕೆಲವು ಮುಖ್ಯ ಸಂಗತಿಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುವುದನ್ನೇ ಇಲ್ಲಿ ನಾನು ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದೇನೆʼ ಎಂದು ಹೇಳಿ ಈ ಕೆಲಸವನ್ನು ಮಾಡಿದ್ದಾರೆ. ಅವರು ಹೇಳಿದಂತೆ ಇದು ಇಂದು ಕೋಮುವಾದ, ಜಾತಿಯತೆ, ದೇವರು ಧರ್ಮಗಳ ಹೆಸರಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಅಸೂಯೆಗಳನ್ನು ಹುಟ್ಟುಹಾಕಿ ಹೊಡೆದಾಟದ ಅಸ್ತ್ರಗಳಾಗಿ ಬಳಕೆಯಾಗುವ ಮೂಲಕ ತಮ್ಮ ಭವಿಷ್ಯವನ್ನೂ ಆ ಮೂಲಕ ದೇಶದ ಭವಿಷ್ಯವನ್ನೂ ಹಾಳುಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರು ಅಂಬೇಡ್ಕರ್‌ ಅವರ ಜೀವನದಿಂದ ಕಲಿಯಬಹುದಾದ ಮತ್ತು ಕಲಿಯಲೇಬೇಕಾದ ಹತ್ತು ಹಲವು ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ.

ʻನಾನು ಮಲಗುವ ಕೋಣೆಯೇ ನನ್ನ ಸಮಾಧಿʼ ʻಡಾ ಅಂಬೇಡ್ಕರ್‌ ಅವರ ರಜಾದಿನಗಳುʼ ʻಶಿಕ್ಷಣ ಪಡೆಯುವುದೆಂದರೆ ಶಕ್ತಿಯನ್ನು ಪಡೆಯುವುದೆಂದೆ ಅರ್ಥʼ ʼ ಅಂಬೇಡ್ಕರ್‌ ಅವರ ಅಧ್ಯಯನಶೀಲತೆʼ ಮುಂತಾದ ಲೇಖನಗಳು ಅಂಬೇಡ್ಕರ್‌ ಅವರ ಓದಿನ ತೀವ್ರವಾದ ಆಸಕ್ತಿ, ಅದನ್ನು ಪೂರೈಸಿಕೊಳ್ಳಲು ಅವರು ತಮಗಿರುವ  ಬಡತನದ ನಡುವೆಯೇ ಮಾಡುತ್ತಿದ್ದ ಪ್ರಯತ್ನಗಳು, ಬಿಡುವಿಲ್ಲದೆ ಕೆಲಸಗಳ ನಡುವೆಯೂ ಓದಲು ಹೊಂದಿಸಿಕೊಳ್ಳುತ್ತಿದ್ದ ಸಮಯ, ಮಿತವಾದ ಆದಾಯದಲ್ಲಿಯೇ ಅವರು ಪುಸ್ತಕ ಖರೀದಿಗೆ ಎಷ್ಟುಹಣವನ್ನು ಹೇಗೆ ಮೀಸಲಿಡುತ್ತಿದ್ದರು  ಇತ್ಯಾದಿಗಳ ಬಗ್ಗೆ ಅನೇಕ ಮಾರ್ಗದರ್ಶಿ ಅಂಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುತ್ತವೆ.

ಅಂಬೇಡ್ಕರ್‌ ಅವರ ಆದಾಯ ೧೦೦ ರೂಪಾಯಿ ಇದ್ದಾಗ ಅದರಲ್ಲಿ ೫೦ ರೂಪಾಯಿಗಳನ್ನು ಪುಸ್ತಕ ಖರೀದಿಸಲು ಬಳಸುತ್ತಿದ್ದರಂತೆ! ಅಂಬೇಡ್ಕರ್‌ ಮನೆ ಎಂದರೆ ಅದು ಒಂದು ಗ್ರಂಥಾಲಯವಲ್ಲದೇ ಬೇರೆ ಏನೂ ಅಲ್ಲ. ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿ ಅವರಷ್ಟು ಪುಸ್ತಕಗಳನ್ನು ವೈಯಕ್ತಿಕ ಗ್ರಂಥಾಲಯವಾಗಿ ಸಂಗ್ರಹಿಸಿದವರು, ಮತ್ತು ಅವನ್ನು ಓದಿದವರು ಇಲ್ಲ. ಆ ಕಾಲಕ್ಕೇ ಅವರ ಗ್ರಂಥಾಲಯದಲ್ಲಿ ಐವತ್ತು ಸಾವಿರ ಪುಸ್ತಕಗಳಿದ್ದವಂತೆ! ಭಾರತದಲ್ಲಿ ಪುಸ್ತಕಗಳನ್ನು ಇಡಲೆಂದೇ ಒಂದು ಭವ್ಯವಾದ ಮನೆಯನ್ನು ಕಟ್ಟಿಸಿದವರೆಂದರೆ ಅವರು ಅಂಬೇಡ್ಕರ್‌ ಮಾತ್ರ. ಮುಂಬೈನ ʼರಾಜಗೃಹʼ ಅವರ ಮನೆಯೆಂಬ ಒಂದು ಅಮೂಲ್ಯ ಗ್ರಂಥಾಲಯವೇ! ಅವರು ಕೇಂದ್ರದ ಮಂತ್ರಿಯಿದ್ದಾಗ ದೆಹಲಿಯ ಮನೆಗಳೂ ಕೂಡ ಒಂದರ್ಥದಲ್ಲಿ ಗ್ರಂಥಾಲಯಗಳೇ! ಅಂಬೇಡ್ಕರ್‌ ಅವರು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸಿ ಆಗಿರಲಿಲ್ಲ; ಬದಲಾಗಿ ಅವುಗಳನ್ನು ಅಮೂಲಾಗ್ರವಾಗಿ ಓದುವ ಶಿಸ್ತುಬದ್ಧ ಅಧ್ಯಯನಕಾರರೂ ಆಗಿದ್ದರು. ಅವರು ಎಲ್ಲಿಗೇ ಹೊರಡಲಿ ಅವರ ಜೊತೆಗೆ ಕೆಲವಾದರೂ ಪುಸ್ತಕಗಳು ಇದ್ದೇ ಇರುತ್ತಿದ್ದವಂತೆ.  ʻಪುಸ್ತಕ ಜೊತೆಗೆ ಇಲ್ಲದ ಅಂಬೇಡ್ಕರ್‌ ಅವರನ್ನು ನೀವು ನೋಡಲಾರಿರಿʼ ಎಂಬ ಲೇಖಕರ ಮಾತು ಅತಿಶಯೋಕ್ತಿಯೇನಲ್ಲ. ಅವರಿಗೆ ಹತ್ತು ನಿಮಿಶ ಸಮಯ ಸಿಕ್ಕರೂ ಅವರು ಯಾವುದಾದರೂ ಒಂದು ಪುಸ್ತಕ ಓದಲು ತೊಡಗುತ್ತಿದ್ದರು. ಕಛೇರಿಯಲ್ಲಿರುವಾಗ, ಮನೆಯಲ್ಲಿರುವಾಗ, ಯಾರದ್ದಾದರೂ ಜೊತೆ ಮಾತನಾಡಲು ಕೊಟ್ಟ ಸಮಯ ಮುಗಿದಾಗ, ಕೋರ್ಟಿನಲ್ಲಿ ಬೇರೆಯವರು ವಾದ ಮಾಡುವಾಗ ಅಷ್ಟೇ ಏಕೆ ಮನೆಯಿಂದ ಐದಾರು ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಕಾರಿನಲ್ಲಿ ಕುಳಿತಾಗ ಕೂಡ ಅವರು ಮಾಡುತ್ತಿದ್ದ ಕೆಲಸ ಎಂದರೆ ಅದು ಓದುವುದು! ಹಾಳು ಹರಟೆ ಹೊಡೆಯುವುದು, ಕೆಲಸಕ್ಕೆ ಬಾರದ ಕೆಲಸಗಳಲ್ಲಿ, ಮಾತುಗಳಲ್ಲಿ ತೊಡಗುವುದು ಇತ್ಯಾದಿಗಳಲ್ಲಿಅವರೆಂದೂ ಸಮಯವನ್ನು ಪೋಲುಮಾಡುತ್ತಿರಲಿಲ್ಲ.

ʻಅವರು ಮಲಗುವ ಮೊದಲು ಹಾಸಿಗೆ ಹತ್ತಿರ ಕೆಲವು ಪುಸ್ತಕಗಳನ್ನು ಇಡಲು ಹೇಳುತ್ತಿದ್ದರು. ಅವರು ಮಲಗುವ ಸಂದರ್ಭವನ್ನು ಕೊನೆಗೂ ನನಗೆ ನೋಡಲು ಆಗಲೇ ಇಲ್ಲ. ಯಾವಾಗ ನೋಡಿದರೂ ಓದುತ್ತಲೇ ಇರುತ್ತಿದ್ದರು. ಕೆಲವು ದಿನ ಬೆಳಗಿನ ಜಾವದವರೆಗೂ ಓದಿ ಆಗ ಒಂದಿಷ್ಟು ಹೊತ್ತು ಮಲಗುತ್ತಿದ್ದರುʼ ಎಂದು ಲೇಖಕರು ಬರೆಯುತ್ತಾರೆ. ದಿನಪತ್ರಿಕೆಗಳನ್ನು ಕೂಡ ಸುಮ್ಮನೆ ತಿರುವಿ ಹಾಕದೇ ಅವನ್ನು ಅತ್ಯಂತ ಶಿಸ್ತುಬದ್ಧವಾಗಿಯೇ ಓದುತ್ತಿದ್ದರಂತೆ. ಪತ್ರಿಕೆಗಳನ್ನು ಓದುವಾಗ ಒಂದು ಕೆಂಪು ಮಸಿಯ ಪೆನ್ನು ಕೈಯಲ್ಲಿ ಇರಲೇಬೇಕಿತ್ತಂತೆ. ಪತ್ರಿಕೆಗಳಲ್ಲಿ ಓದಿದ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು, ಪ್ರಮುಖ ಸುದ್ಧಿಗಳನ್ನು ಗೆರೆಎಳೆದು ಗುರ್ತುಮಾಡಿಕೊಳ್ಳುವುದು, ಅಂತಹ ಸುದ್ಧಿಗಳನ್ನು ಕಟ್‌ ಮಾಡಿ ನಿರ್ಧಿಷ್ಟವಾದ ಫೈಲ್‌ಗಳಲ್ಲಿ ಜೋಡಿಸುವುದು ಇತ್ಯಾದಿ ಮಾಡುತ್ತಿದ್ದರಂತೆ. ಇನ್ನೂ ಕುತೂಹಲದ ಸಂಗತಿ ಎಂದರೆ ಟಾಯ್ಲೆಟ್‌ ರೂಮಿಗೆ ಹೋಗುವಾಗ ಕೂಡ ಒಂದೆರಡು ಪತ್ರಿಕೆ ಎತ್ತಿಕೊಂಡು ಹೋಗಿ ಓದಿಕೊಂಡು ಬರುತ್ತಿದ್ದರಂತೆ! ಅಂಬೇಡ್ಕರ್‌ ಅವರನ್ನು ಇಂದು ವಿಶ್ವಮಟ್ಟದ ನಾಯಕನನ್ನಾಗಿ ಬೆಳಸಿದ್ದು ಅವರ ಈ ಬಗೆಯ ಓದೇ  ಹೊರತು ಬೇರೇನೂ ಅಲ್ಲ. ಅವರನ್ನು ನಾವೆಲ್ಲ ಇಂದು ಅಷ್ಟೊಂದು ಗೌರವಿಸುವಂತೆ ಮಾಡಿದ್ದು ಯಾವುದೇ ವ್ಯಕ್ತಿಯಲ್ಲ; ಬದಲಾಗಿ ಅವರ ಪುಸ್ತಕಗಳು ಎಂಬುದನ್ನು ಮೊಬೈಲ್‌ ರೀಲ್ಸ್‌ಗಳ ಹಿಂದೆ ಬಿದ್ದು ದಿನದಿನಕ್ಕೂ ಓದಿನಿಂದ ವಿಮುಖವಾಗುತ್ತಿರುವ ನಮ್ಮ ವಿದ್ಯಾರ್ಥಿಗಳು ಇಂದು ಅಗತ್ಯವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್‌ ಅವರ ಓದು ಅಧ್ಯಯನದ ವಿಧಾನ ಇತ್ಯಾದಿಗಳ ಜೊತೆಗೆ ಅವರು ತಮ್ಮ ಮೊದಲನೆಯ ಹೆಂಡತಿಯ ಮರಣದ ನಂತರದ ತಮ್ಮ ಏಕಾಂಗಿತನದ ಬದುಕನ್ನು ಬೇಸರದ ಬದುಕನ್ನಾಗಿಸಿಕೊಂಡು ನರಳದೆ ಹೇಗೆ ಅದನ್ನು ಸಂತೋಷದ ಬದುಕನ್ನಾಗಿಸಿಕೊಂಡರು, ಅವರ ಬಹುಮುಖ್ಯವೆನಿಸುವ ಕೃತಿಗಳನ್ನು ರಚಿಸುವಾಗ ಏನೆಲ್ಲ ಸಮಸ್ಯೆ ಸವಾಲುಗಳನ್ನು ಎದುರಿಸಿದರು ಎಂಬುದರ ಬಗ್ಗೆ ಕೆಲವು ಸೂಕ್ಷ್ಮ ಅಂಶಗಳನ್ನು ಈ ಕೃತಿ ನೀಡಿದೆ. ದೇಶದ ಕಾರ್ಮಿಕ ಮಂತ್ರಿಯಾಗಿದ್ದರೂ ಅತಿಥಿಗಳಿಗೇ ತಾವೇ ಖುದ್ಧಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಅವರ ಅತಿಥಿ ಸತ್ಕಾರದ ರೀತಿ ಗಮನ ಸೆಳೆಯುತ್ತದೆ. ಗಾಂಧೀಜಿಯೊಂದಿಗೆ ಇಡೀ ಬದುಕಿನ ತುಂಬಾ ಅವರು ಇಟ್ಟುಕೊಂಡಿದ್ದ ಸೈದ್ದಾಂತಿಕ ವೈರುಧ್ಯದ ಮಧ್ಯೆಯೂ ಅವರ ಹತ್ಯೆಯ ಸುದ್ಧಿ ಕೇಳಿ ದಿಗ್ಭ್ರಾಂತರಾಗುವುದು ಮತ್ತು ʼಆತನ ಯಾವ ಶತೃ ಕೂಡ ಆತನಿಗೆ ಇಂತಹ ಸಾವು ಬರಲಿ ಎಂದು ಬಯಸುವುದಿಲ್ಲʼ ಎಂದು ಉದ್ಗರಿಸುವುದು ಅವರು ಗಾಂಧಿಯ ಬಗ್ಗೆ ಹೊಂದಿದ್ದ ಗೌರವವನ್ನು ತೋರಿಸುತ್ತದೆ.

ಈ ದೇಶದ ಶೇಕಡಾ ತೊಂಬತ್ತರಷ್ಟು ಜನರ ಬದುಕು ಹಸನಾಗಲು ಜೀವನಪೂರ್ತಿ ಹೋರಾಡಿದ ಅಂಬೇಡ್ಕರ್‌ ನಮ್ಮ ದೇಶದ ತಳಸಮುದಾಯದ ಪಾಲಿಗಂತೂ ನಿಜಾರ್ಥದಲ್ಲಿ ಭಾಗ್ಯವಿಧಾನೇ ಸರಿ. ಈ ಪುಸ್ತಕದಲ್ಲಿನ ಒಂದು ಕುತೂಹಲಕಾರಿ ಸಂದರ್ಭವನ್ನು ಉಲ್ಲೇಖಿಸಬೇಕು: ಒಮ್ಮೆ ʼದಿ ಗಾರ್ಡಿಯನ್‌ʼ ಮತ್ತು ʼದಿ ನ್ಯೂಯಾರ್ಕ್‌ʼ ಪತ್ರಿಕೆಗಳ ಪ್ರತಿನಿಧಿಗಳು ಗಾಂಧೀಜಿ, ಜಿನ್ನಾ ಮತ್ತು ಅಂಬೇಡ್ಕರ್‌ ಅವರನ್ನು ಭೇಟಿ ಮಾಡಲು ಬಂದಿರುತ್ತಾರೆ. ಗಾಂಧೀಜಿ ಅವರಿಗೆ ರಾತ್ರಿ ೯.೦೦ ಗಂಟೆಗೆ ಸಮಯ ನೀಡಿದ್ದರಂತೆ. ಜಿನ್ನಾ ರಾತ್ರಿ ೯.೩೦ಕ್ಕೆ ನೀಡಿದ್ದರಂತೆ. ಅಂಬೇಡ್ಕರ್‌ ಅವರನ್ನು ಕೇಳಿದಾಗ ಯಾವಾಗಲಾದರೂ ಬನ್ನಿ ಎಂದು ಹೇಳಿದ್ದರಂತೆ. ಆದರೆ ನೀಡಲಾದ ಸಮಯದಂತೆ ಅವರು ಹೋದಾಗ ಗಾಂಧೀಜಿ ನಿದ್ರಿಸುತ್ತಿದ್ದಾರೆ ಎಂದು ಉತ್ತರ ದೊರೆಯಿತಂತೆ. ಜಿನ್ನಾ ಅವರ ಸಹಾಯಕರೂ ಇದೇ ಉತ್ತರವನ್ನು ನೀಡಿದರಂತೆ. ಆ ಪ್ರತಿನಿಧಿಗಳು ಅಂಬೇಡ್ಕರ್‌ ಅವರಲ್ಲಿಗೆ ಬರುವಾಗ ಸರಿಸುಮಾರು ಮಧ್ಯರಾತ್ರಿ ಆಗಿತ್ತಂತೆ. ಆಗಲೂ ಓದುತ್ತಾ ಕುಳಿತ ಅಂಬೇಡ್ಕರ್‌ ಅವರನ್ನು ನೋಡಿ ಬೆರಗಾದ ಅವರ ಬಾಯಿಂದ ʼಗಾಂಧೀಜಿ, ಜಿನ್ನಾ ಭೇಟಿಗೆ ಸಿಗಲಿಲ್ಲ. ಅವರು ನಿದ್ರಿಸುತ್ತಿದ್ದರು. ನೀವು ಇಷ್ಟುಹೊತ್ತಿನಲ್ಲೂ ಎಚ್ಚರವಾಗಿದ್ದೀರಲ್ಲ? ಎಂಬ ಪ್ರಶ್ನೆ ಸಹಜವೆಂಬಂತೆ ಬಂದಾಗ ಅಂಬೇಡ್ಕರ್‌ ಕೊಡುವ ಉತ್ತರ ಮಾರ್ಮಿಕವಾಗಿದೆ: “ಗಾಂಧೀಜಿ, ಜಿನ್ನಾ ಅವರು ನಿದ್ರಿಸುತ್ತಿದ್ದಾರೆಂದರೆ ಅವರವರ ಸಮಾಜ ಎಚ್ಚರಗೊಂಡಿವೆ. ಅದು ಅವರಿಗೂ ಗೊತ್ತು ಅವರ ಸಮಾಜಕ್ಕೂ ಗೊತ್ತು. ನಾನು ಎಚ್ಚರವಾಗಿದ್ದೇನೆಂದರೆ ನನ್ನ ಸಮಾಜ ಇನ್ನೂ ಗಾಢನಿದ್ದೆಯಿಂದ ಎದ್ದೇಳುವ ಮನಸ್ಸೂ ಮಾಡಿಲ್ಲ.”

ಹೀಗೆ ಹೆಚ್ಚಾಗಿ ಸಾರ್ವಜನಿಕವಾಗಿ ಗೊತ್ತಿಲ್ಲದ ಅಂಬೇಡ್ಕರ್‌ ಅವರ ಜೀವನದ ಕೆಲವು ಮಹತ್ವದ ಸಂಗತಿಗಳ ಬಗ್ಗೆ ಸೂಕ್ಷ್ಮ ಒಳನೋಟವನ್ನು ನೀಡಬಲ್ಲ ಈ ಕೃತಿಗೆ ಮಿತಿಗಳೇ ಇಲ್ಲ ಎಂದೇನೂ ಇಲ್ಲ. ಅನುವಾದಕರು ತಮ್ಮ ಸುಮಾರು ಹದಿನೆಂಟು ಪುಟಗಳ ಸುದೀರ್ಘವಾದ ಮಾತುಗಳನ್ನು ಬರೆದಿದ್ದಾರೆ. ಇದು ಸಹಜವಾಗಿ ಅನೇಕ ಅಂಶಗಳ ಪುನರಾವರ್ತನೆಗೆ ಕಾರಣವಾಗಿದೆ. ಅದನ್ನು ತುಸು ಸಂಕ್ಷಿಪ್ತಗೊಳಿಸಿ ದಿಕ್ಸೂಚಿಯನ್ನಾಗಿಸಬೇಕಿತ್ತು. ಹಾಗೆಯೇ ಕೃತಿಗೆ ತುಸು ʻಭಾರʼವೆನಿಸುವ ಯು ಆರ್‌ ರಾವ್‌ ಮತ್ತು ದಯಾ ಪವಾರ್‌ ಅವರ ದೀರ್ಘಲೇಖನಗಳನ್ನು ಬಿಟ್ಟು ಅದರ ಬದಲು ದೇವಿದಯಾಳ್‌ ಅವರು ಬರೆದ ಅಂಬೇಡ್ಕರ್‌ ಜೀವನ ಚರಿತ್ರೆಯ ಇನ್ನಷ್ಟು ಚಿಕ್ಕ ಚಿಕ್ಕ ಮತ್ತು ಸ್ವಾರಸ್ಯಕರ ಸಂಗತಿಗಳನ್ನೇ ಹೆಕ್ಕಿ ಹಾಕಿಕೊಂಡಿದ್ದರೆ ಕೃತಿ ಇನ್ನಷ್ಟು ʻವಿದ್ಯಾರ್ಥಿಸ್ನೇಹಿʼ ಆಗುವ ಮೂಲಕ ತಮ್ಮ ಉದ್ದೇಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಈಡೇರಿಸುವಲ್ಲಿ ಸಹಾಯವಾಗುತ್ತಿತ್ತು.

ಇಂತಹ ಒಂದೆರಡು ಮಿತಿಗಳ ನಡುವೆಯೂ ಈ ಕೃತಿಗೆ ಮೌಲಿಕ ಮುನ್ನುಡಿ ಬರೆದಿರುವ ಹಿರಿಯ ವಿದ್ವಾಂಸ, ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂಬೇಡ್ಕರ್‌ ಅವರ ಮೊದಲನೆಯ ಹೆಂಡತಿಯ ಮರಣದ ನಂತರ ಸುಮಾರು ಹದಿಮೂರು ವರ್ಷಗಳ ಅವರ ಏಕಾಂತ ಜೀವನವನ್ನು ಪ್ರಸ್ತಾಪಿಸುತ್ತಾ, ʼಜ್ಙಾನವನ್ನು ಸಂಪಾದಿಸುವುದು, ಶಿಸ್ತುಬದ್ಧ ಜೀವನವನ್ನು ನಡೆಸುವುದು, ಮತ್ತು ಸಮಾಜಕ್ಕಾಗಿ ಬದುಕನ್ನು ಮುಡುಪಾಗಿಡುವುದು ಈ ಮೂರು ತತ್ವಗಳನ್ನು ಅಳವಡಿಸಿಕೊಂಡವನಿಗೆ ದುಃಖವು ಹತ್ತಿರ ಸುಳಿಯುವುದಿಲ್ಲʼ ಎಂಬ ಅಂಬೇಡ್ಕರ್‌ ಅವರ ಬೆಲೆಯುಳ್ಳ ಮಾತನ್ನು ಉಲ್ಲೇಖ ಮಾಡುವಂತೆ ಏನೆಲ್ಲ ಮನರಂಜನೆಯ ಸೌಕರ್ಯ ಸೌಲಭ್ಯಗಳನ್ನು ಬಳಸಿಕೊಂಡೂ, ಖಿನ್ನತೆಯಿಂದ ಬಳಲುತ್ತಿರುವ ಮತ್ತು ಈ ಸೌಲಭ್ಯ ಸೌಕರ್ಯಗಳಲ್ಲಿ ತಮ್ಮನ್ನೇ ಕಳೆದುಕೊಳ್ಳುತ್ತಿರುವ ನಮ್ಮ ವಿದ್ಯಾರ್ಥಿ ಯುವಜನರು ಮಾತ್ರಲ್ಲ ತಮ್ಮ ಬದುಕನ್ನು ʼಸಾರ್ಥಕʼವಾಗಿ ಬದುಕಬೇಕು ಎಂಬ ಕನಸನ್ನು ಕಟ್ಟಿಕೊಂಡಿರುವ ಎಲ್ಲರೂ ಒಮ್ಮೆ ಓದಬೇಕಾದ ಕೃತಿಯಿದು. ಇಂತಹ ಮೌಲಿಕ ಕೃತಿಯನ್ನು ಕನ್ನಡಕ್ಕೆ ತಂದ ಲೇಖಕರು ಮತ್ತು ಅದನ್ನು ಆಸಕ್ತಿವಹಿಸಿ ಪ್ರಕಟಿಸಿದ ಅಹರ್ನಿಶಿಯ ಅಕ್ಷತಾ ಹುಂಚದಕಟ್ಟೆ ಅಭಿನಂದಾರ್ಹರು.

*****

Saturday, June 7, 2025

ʻಕಾವೇರಿ ಆರತಿʼ: ಯಾವುದರ ಆಹುತಿ?

 

ʻಕಾವೇರಿ ಆರತಿʼ: ಯಾವುದರ ಆಹುತಿ?

ಡಾ. ರಾಜೇಂದ್ರ ಬುರಡಿಕಟ್ಟಿ

`ದಕ್ಷಿಣ ಭಾರತದ ಮುಖ್ಯನದಿ’ ಎಂದು ಕರೆಯಲ್ಪಡುವ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಬಳಿ ʼಕಾವೇರಿ ಆರತಿʼ ಎಂಬ ಕಾರ್ಯಕ್ರಮವನ್ನು ಆರಂಭಿಸುವ ಕುರಿತಂತೆ ಪರವಿರೋಧಗಳ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ರಾಜ್ಯ ರೈತ ಸಂಘದ ಅನೇಕ ಮುಖಂಡರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಈ ಆರತಿ ಕಾರ್ಯಕ್ರಮದ ಸಾಧಕ ಬಾದಕಗಳೇನು? ಈ ಕಾರ್ಯಕ್ರಮ ಒಂದು ವೇಳೆ ಜಾರಿಯಾಗದಿದ್ದರೆ ಆಗಬಹುದಾದ ನಷ್ಟವೇನು ಮತ್ತು ಜಾರಿಯಾದರೆ ಆಗಬಹುದಾದ ಲಾಭ ನಷ್ಟಗಳೇನು ಎಂಬುದನ್ನು ಚರ್ಚಿಸುವುದು ಈ ಲೇಖನದ ಉದ್ದೇಶ.

ಈ ʼಆರತಿʼ ಕಾರ್ಯಕ್ರಮದ ಚರ್ಚೆಗೆ ತೊಡಗುವ ಮುನ್ನ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದಲ್ಲಿ ದಕ್ಷಿಣದ ʼಕಾವೇರಿ ವಲಯವುʼ ಉತ್ತರದ ʼಕೃಷ್ಣಾವಲಯʼದ ಮೇಲೆ ಹೇಗೆಲ್ಲ ತನ್ನ ಅಧಿಪತ್ಯವನ್ನು ಸಾಧಿಸಿದೆ ಎಂಬುದನ್ನು ತುಸು ವಿವರವಾಗಿ ನೋಡೋಣ. ಇದನ್ನು ಇದರ ಭಾಗವಾದ ಕಾವೇರಿ ನದಿಯಿಂದಲೇ ಆರಂಭಿಸಬಹುದು.  ರಾಜಕೀಯ ಪ್ರಭಾವದಿಂದ  ನದಿಗಳಲ್ಲಿ ಕಾವೇರಿಯು ಉಳಿದ ನದಿಗಳಿಗಿಂತ ತಕ್ಕ ಅರ್ಹತೆಯಿಲ್ಲದೆ ಹೇಗೆ ಮೇಲುಸ್ಥಾನವನ್ನು ಪಕ್ಷಪಾತವಾಗಿ ಪಡೆದುಕೊಂಡಿದೆ ಹಾಗನ್ನುವುದಕ್ಕಿಂತ ನಾವು ಅದಕ್ಕೆ ಪಕ್ಷಪಾತಮಾಡಿ ಹೇಗೆ ಅದಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದ್ದೇವೆ ಎಂಬುದನ್ನು ನೋಡಿ. ʻಕಾವೇರಿಗೆ ದಕ್ಷಿಣದ ಗಂಗೆʼ ಎಂದು ಕರೆಯಲಾಗಿದೆ. ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌ ಬಳಿ) ಗಂಗಾ ಯಮುನಾ ಮತ್ತು ಅದೃಶ್ಯ ಸರಸ್ವತಿಯರ ಸಂಗಮ ಸ್ಥಾನವೆಂದು ಕರೆಯುವ ʻತ್ರಿವೇಣಿಸಂಗಮʼವಿದೆ. ಇದು ಇಡೀ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಅನುಸರಿಸಿ ನಮ್ಮ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನನಲ್ಲಿ ಕೂಡ ಒಂದು ಈ ರೀತಿಯ ಒಂದು ʻಮೂರುನದಿ ಕೂಡುಸ್ಥಳʼವಿದೆ. ಕಾವೇರಿ, ಕಪಿಲಾ ಮತ್ತು ಸ್ಪಟಿಕಸರೋವರ ನದಿಗಳು ಕೂಡುವ ಈ ಸ್ಥಳವನ್ನು ಸಂಕ್ತಿಪ್ತವಾಗಿ ʻ

ಸಂಗಮʼ ಎಂದು ಕರೆಯಲಾಗುತ್ತಿದ್ದು ಇತ್ತೀಚೆಗೆ ಅದಕ್ಕೂ ʼತ್ರಿವೇಣಿ ಸಂಗಮʼ ಎಂಬ ಹೆಸರನ್ನೇ ಜನಪ್ರಿಯಗೊಳಿಸಲಾಗಿದೆ. ಇಲ್ಲಿಗೆ ಅಷ್ಟೇನೂ ದೂರದಲ್ಲಿ ಇಲ್ಲದ ಶ್ರೀರಂಗಪಟ್ಟಣದ ಬಳಿ ಕೂಡ ಒಂದು ತ್ರಿವೇಣಿ ಸಂಗಮ ಇರುವುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅದು ಕೂಡ ಕಾವೇರಿ, ಹೇಮಾವತಿ ಮತ್ತು ಲೋಕಪಾವನಿ ಎಂಬು ಮೂರು ನದಿಗಳ ಕೂಡು ಸ್ಥಳವಾಗಿದ್ದು ಅದು ಟಿ ನರಸೀಪುರದಷ್ಟು ಜನಪ್ರಿಯವಾಗಿಲ್ಲ. ಇದಕ್ಕೆ ಕಾರಣ ಪ್ರಯಾಗರಾಜ್‌ ನಲ್ಲಿ ಕೂಡುವ ಮೂರು ನದಿಗಳಲ್ಲಿ ಸರಸ್ವತಿ ಗುಪ್ತಗಾಮಿನಿಯಾಗಿದ್ದು ಅದರಂತೆ ಟಿ ನರಸೀಪುರದಲ್ಲಿ ಸ್ಪಟಿಕಸರೋವರನದಿ ಗುಪ್ತಗಾಮಿನಿ ಆಗಿರುವ ಸಾಮ್ಯತೆ ಕಾರಣವಿರಲೂಬಹುದು.

ಧಾರ್ಮಿಕವಾಗಿ ಕರ್ನಾಟಕದಲ್ಲಿ ಬೇರೆ ಯಾವ ನದಿಗೂ ಇಲ್ಲದ ವಿಶೇಷ ಸ್ಥಾನಮಾನ ಕಾವೇರಿಗೆ ಮಾತ್ರ ಇರುವಲ್ಲಿ ಇರುವ ವಾಸ್ತವ ಕಾರಣಗಳೆಷ್ಟು ಮತ್ತು ನಾವು ಆರೋಪಿಸಿರುವ ಕಾರಣಗಳೆಷ್ಟು ಎಂಬುದನ್ನು ಒರೆಗೆ ಹಚ್ಚುವುದು ತುಸು ಕಷ್ಟವಾಗಬಹುದು. ಇಲ್ಲಿ ಇತಿಹಾಸಕ್ಕಿಂತ ಪುರಾಣದ ಪ್ರಭಾವಳಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ಪುರಾಣದ ಸಂಗತಿಗಳು ಇತಿಹಾಸದಂತೆ ಒಂದಿಷ್ಟಾದರೂ ಗಟ್ಟಿಯಾದ ಸಾಕ್ಷಗಳು ಮತ್ತು ಆಧಾರಗಳನ್ನು ಒಳಗೊಂಡಿರುವುದಿಲ್ಲ. ಅದಕ್ಕೆ ನಂಬಿಕೆ ಒಂದಿದ್ದರೆ ಸಾಕು. ಹಾಗಾಗಿ ಯಾರು ಬೇಕಾದರೂ ಹೇಗೆ ಬೇಕಾದರೂ ಅದನ್ನು ತಮ್ಮ ತಮ್ಮ ಕಡೆಗೆ ಎಳೆದುಕೊಂಡು ವಾದಿಸಬಹುದಾಗಿದೆ. ಕರ್ನಾಟಕದ ಉತ್ತರ ಭಾಗಕ್ಕಿಂತ ʻಪುರಾಣಪ್ರವೀಣʼರ ಸಂಖ್ಯೆ ದಕ್ಷಿಣ ಕರ್ನಾಟಕದಲ್ಲಿ ಅಂದರೆ ಕಾವೇರಿ ವಲಯದಲ್ಲಿ ದಟ್ಟವಾಗಿರುವುದರಿಂದ ಕಾವೇರಿಗೆ ಅವರು ಉಳಿದೆಲ್ಲ ನದಿಗಳಿಗಿಂತ ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವುದು ತೀರಾ ಸಹಜವಾದದ್ದು.

ಪುರಾಣದ ಸಂಗತಿಗಳ ಮಿತಿ ಇದಾದರೆ ಇತಿಹಾಸ ಮತ್ತು ವರ್ತಮಾನವಾದರೂ ಈ ಅನ್ಯಾಯವನ್ನು ಸರಿಪಡಿಸುವಲ್ಲಿ ತಕ್ಕುದಾದ ಏನಾದರೂ ಕೆಲಸ ಮಾಡಿದೆಯೇ ಎಂದು ಸೂಕ್ಷ್ಮವಾಗಿ ನೋಡಿದರೆ ಅಲ್ಲಿಯೂ ನಮಗೆ ನಿರಾಶೆಯೇ ಆಗುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಚಳವಳಿಯನ್ನೇ ಗಮನಿಸಿ. ಈ ಏಕೀಕರಣಕ್ಕಾಗಿ ಪಣತೊಟ್ಟು ಹೋರಾಡಿದವರು ಇಂದಿನ ʻಕಿತ್ತೂರು ಕರ್ನಾಟಕʼ ಮತ್ತು ʻಕಲ್ಯಾಣ ಕರ್ನಾಟಕʼ ಭಾಗದವರು. ಮೈಸೂರು ಭಾಗದವರು ಮುಂದೆ ನಿಂತು ಹೋರಾಡುವುದಿರಲಿ ಅವರ ಹೋರಾಟಕ್ಕೂ ಒಮ್ಮತದಿಂದ ಬೆಂಬಲ ಕೊಡಲಿಕ್ಕೇ ಮೀನಾಮೇಷ ಎಣಿಸಿದರು. ಅಂದಿನ ಮೈಸೂರು ರಾಜಕೀಯ ವಲಯವೇ ಈ ನಿಟ್ಟಿನಲ್ಲಿ ಇಬ್ಬಾಗವಾಯಿತು. ಉತ್ತರ ಭಾಗದಲ್ಲಿ ಏಕೀಕರಣ ಪರವಾದ ಸಮ್ಮೇಳನಗಳು ನಡೆಯುತ್ತಿರುವಾಗಲೇ ಇಲ್ಲಿ ಏಕೀಕರಣ ವಿರೋಧಿ ಸಮ್ಮೇಳನಗಳೂ ನಡೆದವು! ಬಹುಶಃ ಕುವೆಂಪು ಅಂಥ ಸಾಂಸ್ಕೃತಿಕ ನಾಯಕರು ಆ ಕಾಲದಲ್ಲಿ ಏಕೀಕರಣದ ಪರವಾಗಿ ಗಟ್ಟಿಯಾಗಿ ನಿಲ್ಲದಿದ್ದರೆ ಏಕೀಕರಣದ ಸಾಧ್ಯತೆಗಳು ಇನ್ನಷ್ಟು ಕ್ಷೀಣಿಸುತ್ತಿದ್ದವೇನೋ…

ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತುʼ ಎಂಬಂತೆ ಏಕೀಕರಣ ಸಾಧ್ಯವಾಗಿ ವಿಶಾಲ ಕರ್ನಾಟಕವೇನೋ ಉದಯವಾಯಿತು. ಆದರೆ ಆ ಹಂತದಲ್ಲಿಯೇ ಈಗಿನ ʻಕಾವೇರಿವಲಯʼ ತನ್ನ ರಾಜಕೀಯ ಪ್ರಭಾವನ್ನು ಬಳಸಿ ಸಿಂಹಪಾಲನ್ನು ಪಡೆದುಕೊಂಡು ಯಾರು ಏಕೀಕರಣಕ್ಕಾಗಿ ಹಗಲಿರುಳು ಚಳವಳಿ ಕಟ್ಟಿ ದುಡಿದು ದಣಿದಿದ್ದರೋ ಅಂತಹ ಕರ್ನಾಟಕದ ಉತ್ತರ ಭಾಗದ ರಾಜಕೀಯ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿಬಿಟ್ಟಿತು. ಹೊಸ ರಾಜ್ಯ ಉದಯವಾಗುವಾಗಲೇ ಉತ್ತರದವರ ಪ್ರಾತಿನಿಧ್ಯವನ್ನು ದಕ್ಷಿಣದವರ ಪ್ರಭಾವ ಕುಗ್ಗಿಸಿಬಿಟ್ಟಿತು!

ವಿಶಾಲ ರಾಜ್ಯಕ್ಕೆ ʼಮೈಸೂರುʼ ಎಂದು ಹೆಸರಿಡಲಾಯಿತು. ರಾಜಧಾನಿ ಬೆಂಗಳೂರೇ ಆಯಿತು. ರಾಜ್ಯಪಾಲರು ಮೈಸೂರಿನ ರಾಜರೇ ಆದರು. ನಾಡದೇವತೆಯಾಗಿ ʼಬನಶಂಕರಿʼ ಬದಲು ʼಚಾಮುಂಡಿʼಯನ್ನೇ ಆಯ್ಕೆಮಾಡಲಾಯಿತು. ಅಷ್ಟೇ ಏಕೆ ಕನ್ನಡದ ವಿವಿಧ ಪ್ರಾದೇಶಿಕ ನುಡಿಗಳಲ್ಲಿ ʼಮೈಸೂರು ಕನ್ನಡʼವನ್ನೇ ಹೊಸರಾಜ್ಯದ ʻಅಧಿಕೃತ ಆಡಳಿತ ಕನ್ನಡʼವನ್ನಾಗಿ ಸ್ವೀಕರಿಸಲಾಯಿತು. ಈ ನಾಲ್ಕು ಮಹತ್ವದ ಸ್ಥಾನಮಾನಗಳಲ್ಲಿ ಒಂದೂ ಉತ್ತರದವರಿಗೆ ದಕ್ಕಲಿಲ್ಲ! ಇದೇ ಕಾರಣಕ್ಕಾಗಿ ಏಕೀಕರಣದ ದಿನ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರುಗಳಿಗೆ ತೆರಳುವಾಗ ಆ ನಾಯಕರಲ್ಲಿ ಅತ್ಯಂತ ಪ್ರಮುಖರಾದವರೊಬ್ಬರು, ʼಇಟ್‌ ಇಸ್‌ ನಾಟ್‌ ಯುನಿಫಿಕೇಷನ್‌ ಆಫ್‌ ಕರ್ನಾಟಕ ಬಟ್‌ ದ ಎಕ್ಸಟೆನ್ಷನ್‌ ಆಫ್‌ ಮೈಸೂರ್‌ʼ ಎಂಬ ಹೇಳಿಕೆ ನೀಡಿ ʼಮೈಸೂರಿನವರು ನಮ್ಮನ್ನು ಗೆದ್ದುಕೊಂಡುಬಿಟ್ಟರುʼ ಎಂಬ ತಮ್ಮ ಮನದಾಳದ ಅಸಮಾಧಾನವನ್ನು ಹೊರಹಾಕಿದರಂತೆ!

ಅಯೋಧ್ಯೆಯಲ್ಲಿ ನಡೆಯುವ ಸರಯೂ ಆರತಿ ದೃ‍ಶ್ಯ

ಹೀಗೆ ಹುಟ್ಟಿಕೊಂಡ ಉತ್ತರ ದಕ್ಷಿಣಗಳ ಏರುಪೇರಿನ ಸ್ಥಾನಮಾನ ಮುಂದೆಯೂ ಕೂಡ ಸರಿಯಾಗಲಿಲ್ಲ. ʻಕಾವೇರಿಯಿಂದ ಗೋದಾವರಿವರಮಿರ್ದʼ ಎಂಬ ಕವಿರಾಜಮಾರ್ಗಕಾರನ ಹೇಳಿಕೆಯಲ್ಲಿ ಈ ʻಕಾವೇರಿʼ ಕನ್ನಡ ನಾಡಿನ ಒಂದು ಗಡಿರೇಖೆಯಾಗಿ ಮಾನ್ಯತೆ ಪಡೆದದ್ದು ಪ್ರಾಚೀನ ಸಂಗತಿಯಾದರೆ ಕುವೆಂಪು ಅವರು ಸಾಂಸ್ಕೃತಿಕ ಕರ್ನಾಟಕ ತಾತ್ವಿಕತೆಯನ್ನು ಪ್ರತಿಪಾದಿಸಲು ಬರೆದ ʼಎಲ್ಲಾದರು ಇರು ಎಂತಾದರು ಇರುʼ ಎಂಬ ಪ್ರಸಿದ್ಧ ಗೀತೆಯಲ್ಲಿ ಕೂಡ ʼನೀ ಕುಡಿಯುವ ನೀರ್‌ ಕಾವೇರಿʼ ಎಂಬ ಮಾತು ಬಂದು ಅದೇ ಪ್ರವೃತ್ತಿ ಮುಂದುವರೆಯುತ್ತಾ ಬಂದಿತು. ಅದಕ್ಕೊಂದು ʻಬ್ರೆಕ್‌ʼ ಹಾಕುವ ಕೆಲಸ ಶುರುವಾಗಲು ಎಪ್ಪತ್ತರ ದಶಕದ ಬಂಡಾಯ ಬರೆಹಗಾರ ಕಾಲದವರೆಗೂ ಕಾಯಬೇಕಾಯಿತು. ಬರಗೂರು ಅಂಥವರು ಕುವೆಂಪು ಅವರ ಗೀತೆಯಲ್ಲಿ ಬರುವ ʻಶ್ರೀಗಂಧʼ ಮತ್ತು ʼಕಾವೇರಿʼ ಎರಡೂ ಕರ್ನಾಟಕದ ಪ್ರಾತಿನಿಧಿಕ ಅಂಶಗಳು ಅಲ್ಲ ಎಂಬುದನ್ನು ಸರಿಯಾಗಿಯೇ ಗುರುತಿಸಿದರು. ಈ ಸಾಂಸ್ಕೃತಿಕ ಯಜಮಾನಿಕೆಯನ್ನು ತಾತ್ವಿಕವಾಗಿ ಪ್ರಶ್ನಿಸಿ ಕರ್ನಾಟಕದ ಬಹುಭಾಗದಲ್ಲಿ ಬೆಳೆಯುವುದು ಜಾಲಿಯೇ ಹೊರತು ‍ಶ್ರೀಗಂಧವಲ್ಲ; ಹಾಗೆಯೇ ಕರ್ನಾಟಕದ ಬಹುಭಾಗದ ಜನ ಕುಡಿಯುವುದು ಕೃಷ್ಣಾನದಿಯ ನೀರನ್ನೇ ಹೊರತು ಕಾವೇರಿ ಅಲ್ಲ ಎಂಬುದು ಅವರ ವಾದಕ್ಕೆ ಮೂಲವಾಗಿತ್ತು.

ಹೀಗೆ ಆಡಳಿತಾತ್ಮಕ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ ಇವುಗಳ ಬಲದಿಂದ ಕರ್ನಾಟಕದ ದಕ್ಷಿಣ ಭಾಗ ಉತ್ತರ ಭಾಗವನ್ನು ಅನೇಕ ಅಂಶಗಳಲ್ಲಿ ಸರಿಸಮಾನವಾಗಿ ಕಾಣದೆ ʻಸಾಮಂತʼ ಸ್ಥಾನದಲ್ಲಿಟ್ಟುಕೊಂಡೇ ಬಂದಿರುವುದು ವಾಸ್ತವ. ಈ ಅಂಶಗಳು ರಾಜಕಾರಣ, ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲಕಡೆಗೂ ವಿಸ್ತರಿಸಿಕೊಂಡಿವೆ. ಇದಕ್ಕೆ ಪೂರಕವಾಗಿ ಇನ್ನೊಂದು ಸಂಗತಿಯನ್ನು ಉದಾಹರಿಸಬಹುದು. ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುವ ಜನಪದ ಕಲೆಯಾದ ಯಕ್ಷಗಾನಕ್ಕೆ ಬಹಳಷ್ಟು ದಿನಗಳ ಹಿಂದೆಯೇ ಒಂದು ಅಕಾಡಮಿಯನ್ನೇ ರಚಿಸಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೆ ಕರ್ನಾಟಕದ ಉತ್ತರ ಭಾಗದ ಅನೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಸಣ್ಣಾಟ, ದೊಡ್ಡಾಟ ಇವುಗಳಿಗೆ ಬಹುಕಾಲದವರೆಗೆ ಇಂತಹ ಯಾವುದೇ ಸ್ಥಾನಮಾನ ದೊರೆಯಲೇಯಿಲ್ಲ. ಶಿವರಾಮ ಕಾರಂತರಂಥ ಅತಿರಥರು ಆ ಕಲೆಯಲ್ಲಿ ತೊಡಗಿಕೊಂಡದ್ದು ಅದರ ಬಗ್ಗೆ ಪುಸ್ತಕ ಇತ್ಯಾದಿ ಬರೆಯುವುದು ಮಾಡಿದಂತೆ ಆ ಭಾಗದಂತೆ ಯಾರೂ ಮಾಡಲಾಗದ್ದು ಇದಕ್ಕೆ ಕಾರಣವಾಗಿಯೂ ಇದ್ದೀತು.

ಕಾಶಿಯ ಬಳಿ ಗಂಗಾನದಿಯಲ್ಲಿ ನಡೆಯುವ ಗಂಗಾ ಆರತಿಯ ಒಂದು ದೃಶ್ಯ:


ಈಗ  ಚರ್ಚೆಯ ಮೂಲ ವಿಷಯವಾದ  ʻಕಾವೇರಿ ಆರತಿʼಗೆ ಬರೋಣ. ಇದು ಕೂಡ ತಿಳಿದೋ ತಿಳಿಯದೆಯೋ ಕರ್ನಾಟಕದಲ್ಲಿ ಈಗ ಇರುವ ಈ ಅಸಮತೋಲನವನ್ನು ಹೋಗಲಾಡಿಸುವ ಬದಲಾಗಿ ಅದನ್ನು ಇನ್ನಷ್ಟು ವಿಸ್ತರಿಸುವ ಕಾರ್ಯಕ್ರಮವೇ ಆಗಬಹುದಾದ ಎಲ್ಲ ಲಕ್ಷಣಗಳನ್ನೂ ಹೊಂದಿರುವ ಒಂದು ಕಾರ್ಯಕ್ರಮ. ನೇರವಾಗಿ ಉತ್ತರ ಭಾರತದ ನೆರಳು ಇದರ ಮೇಲೆ ಇದೆ ಎಂದು ಬೇರೆ ಹೇಳಬೇಕಾಗಿಲ್ಲ.  ಏಕೆಂದರೆ ದಕ್ಷಿಣ ಭಾರತದಲ್ಲಿ ಇಂತಹ ಆಚರಣೆಗಳು ಸಾಂಪ್ರದಾಯಿಕವಾಗಿ ಇಲ್ಲ. ನನಗೆ ತಿಳಿದಿರುವಂತೆ ಉತ್ತರ ಭಾರತದ ಎರಡು ಮೂರು ಕಡೆ ಈ ʻಆರತಿʼ ಇದೆ. ಇವುಗಳಲ್ಲಿ ಕಾಶಿಯಲ್ಲಿ ನಡೆಯುವ ʻಗಂಗಾ ಆರತಿʼ ಮತ್ತು ಅಯೋಧ್ಯೆಯ ಸರಯೂ ನದಿಯ ದಂಡೆಯಲ್ಲಿ ನಡೆಯುವ ʻಸರಯೂ ಆರತಿʼ ಇವುಗಳಲ್ಲಿ ಮುಖ್ಯವಾದಂಥವು. ಇವುಗಳಲ್ಲಿ ಭಾಗವಹಿಸಿದ ನನ್ನ ಸ್ವಂತ ಅನುಭವದ ಮೇಲೆ ಹೇಳುವುದಾದರೆ ಕಾಶಿಯಲ್ಲಿ ನಿತ್ಯ ಸಂಜೆ ನಡೆಯುವ ಗಂಗಾ ಆರತಿ ಉಳಿದವಕ್ಕೆ ಹೋಲಿಸಿದರೆ ಜನಸಂದಣಿ ದೃಷ್ಟಿಯಿಂದ ಅತಿದೊಡ್ಡದು ಮತ್ತು ದಿನನಿತ್ಯ ಸಾವಿರಾರು ಜನ ಸೇರುವಂಥದ್ದು! ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಜನಸಂಖ್ಯೆಯ ಸೇರುವಿಕೆಯ ದೃಷ್ಟಿಯಿಂದ ಗಂಗಾ ಆರತಿಗಿಂತ ಚಿಕ್ಕದಾದದ್ದು. ಅಲ್ಲಿ ನಿತ್ಯ ಸುಮಾರು ಒಂದರಿಂದ ಒಂದೂವರೆ ಸಾವಿರ ಜನ ಕೆಲವು ವೇಳೆ ಎರಡು ಸಾವಿರ ಜನ ಸೇರುತ್ತಾರೆ.

ಸ್ವಚ್ಚತೆ ಮತ್ತು ನೈರ್ಮಲ್ಯದ ಹಿನ್ನಲೆಯಲ್ಲಿ ಹೇಳುವುದಾದರೆ ಚಿಕ್ಕದಾದ ಅಯೋಧ್ಯೆಯ ಸರಯೂ ಆರತಿ ಸ್ಥಳ ಗಂಗಾ ಆರತಿ ಸ್ಥಳಕ್ಕಿಂತ ಸಹಜವಾಗಿಯೇ ಚೆನ್ನಾಗಿದೆ. ಗಂಗಾನದಿಯಷ್ಟು ಮಾಲಿನ್ಯ ಅಲ್ಲಿ ಉಂಟಾಗಿಲ್ಲ ಅನ್ನಬಹುದು. ಇದೇ ಕಾರಣಕ್ಕೆ ಸರಯೂ ನದಿಯಲ್ಲಿ ದೋಣಿವಿಹಾರ ಮಾಡಿದಾಗ ಆನಂದ ನಮಗೆ ಗಂಗಾನದಿಯಲ್ಲಿ ಮಾಡುವಾಗ ಆಗುವುದಿಲ್ಲ. ಇಲ್ಲಿ ನಡೆಯುವ ಆರತಿ ಕಾರ್ಯಕ್ರಮಗಳ ಬಗ್ಗೆ ಹೇಳುವುದಾದರೆ ಇವು ನಿತ್ಯ ಆರತಿ ಕಾರ್ಯಕ್ರಮಗಳು. ಎರಡೂ ಕಡೆ ಸಂಜೆ ಸುಮಾರು ಆರರಿಂದ ಎಂಟು ಗಂಟೆಯವರೆಗೂ ಈ ಕಾರ್ಯಕ್ರಮಗಳು ನಡೆಯುತ್ತವೆ. ನದಿಯನ್ನು ನದಿಯೆಂದು ಭಾವಿಸಿ ಗೌರವಿಸಲಾಗದವರು ಅದನ್ನು ತಾಯಿಯೆಂದೋ ದೇವಿಯೆಂದೋ ಭಾವಿಸಿಕೊಂಡು ಗೌರಿವಿಸುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತವೆ. ಸರಯೂ ನದಿಯಲ್ಲಿ ದಂಡೆಯ ಮೆಟ್ಟಿಲುಗಳ ಮೇಲೆಯೇ ಕುಳಿತು ಜನ ಈ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾರೆ. ಆದರೆ ಕಾಶಿಯ ವಿಶ್ವನಾಥನ ಮಂದಿರದ ಹತ್ತಿರ ನಡೆಯುವ ಗಂಗಾ ಆರತಿ ದೊಡ್ಡ ಪ್ರಮಾಣದಲ್ಲಿ ಜನಸೇರುವ ಕಾರ್ಯಕ್ರಮವಾಗುವುದರಿಂದ ದಂಡೆಯಲ್ಲಿ ಕುಳಿತು ಎಲ್ಲ ಜನ ನೋಡಲು ಅಲ್ಲಿ ಸಾಧ್ಯವಿಲ್ಲ. ಅದರ ಬದಲು ನದಿಯ ಇನ್ನೊಂದು ದಂಡೆಯಿಂದ ದೋಣಿಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಗಂಗಾನದಿಯ ಮಧ್ಯದಲ್ಲಿಯೇ ದೋಣಿಗಳನ್ನು ನಿಲ್ಲಿಸಿ ಅಲ್ಲಿಂದ ಈ ಕಾರ್ಯಕ್ರಮ ತೋರಿಸುವ ವ್ಯವಸ್ಥೆ ಇದೆ. ಇದಕ್ಕೆ ಖಾಸಗೀ ದೋಣಿಗಳ ಜೊತೆಗೆ ಕೇಂದ್ರ ಸರ್ಕಾರದ ಒಳನಾಡು ಜಲಸಾರಿಗೆಯ ಕ್ರೂಸರ್‌ ಗಳೂ ಇಲ್ಲಿವೆ.

ಈ ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವ ವಿಶೇಷತೆ ಏನೂ ಇರುವುದಿಲ್ಲ. ಎಲ್ಲ ದೇವಸ್ಥಾನಗಳಗಳಂತೆ ಇಲ್ಲಿಯೂ ಪೂಜೆ ಪುನಸ್ಕಾರ ಇತ್ಯಾದಿ ನಡೆಯುತ್ತವೆ. ಇದಾದ ಮೇಲೆ ಇದಕ್ಕಾಗಿ ನಿಯೋಜಿತರಾದ ಐದರಿಂದ ಒಂಬತ್ತು ತರುಣ ಪುರೋಹಿತರು (ಅಯೋಧ್ಯೆಯಲ್ಲಿ ಐದು, ಕಾಶಿಯಲ್ಲಿ ಒಂಬತ್ತು) ನದಿಗಳಿಗೆ ಮುಖವಾಗಿ ʻಸರಯೂ ಮಾತಾʼ ʻಗಂಗಾ ಮಾತಾʼ ಎಂಬ ಭಕ್ತಿಗೀತೆಯನ್ನು ಹಾಕಿಕೊಂಡು ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾರೆ. (ಒಂದು ಸಾರೆ ಊದುಬತ್ತಿಯಿಂದ ಪ್ರದಕ್ಷಣೆ, ಇನ್ನೊಂದು ಬಾರಿ ಆರತಿ ತಟ್ಟೆಯಿಂದ ಪ್ರದಕ್ಷಣೆ ಇತ್ಯಾದಿ). ಜನರನ್ನು ಭಕ್ತಿಯಿಂದ ಭಾವಪರವಶರಾಗುವ ವಾತಾವರಣವನ್ನು ಸೃಷ್ಟಿಮಾಡಲಾಗುತ್ತದೆ. ಬರುವವರೆಲ್ಲರೂ ಇಲ್ಲಿ ಭಕ್ತರೇ ಆಗುವುದರಿಂದ ಅದನ್ನು ಆನಂದಿಸುತ್ತಾರೆ. 'ಕಾಯಕವೇ ಕೈಲಾಸ' ಎಂಬ ತತ್ವಕ್ಕೆ ವಿರುದ್ಧವಾಗಿ ಕೈಲಾಸವನ್ನೇ ಕಾಯಕವನ್ನಾಗಿ ಮಾಡಿಕೊಂಡ ಒಂದು ದೊಡ್ಡ ಪುರೋಹಿತ ವರ್ಗ ಇದನ್ನು ವ್ಯವಸ್ಥಿತವಾಗಿ ಮಾಡುತ್ತದೆ. ಯಾರೇ ಆಗಲಿ ಒಂದು ಸಲ ನೋಡಿ ಆನಂದಿಸಲು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಅನುಮಾನವೇನಿಲ್ಲ. ಆದರೆ ಇದು ಒಂದು ದೇಶದ ಅಥವಾ ರಾಜ್ಯದ ಅಭಿವೃದ್ಧಿಗಾಗಿ ನಡೆಯಲೇಬೇಕಾದ ಕಾರ್ಯವೇನೂ ಅಲ್ಲ. 

ಕರ್ನಾಟಕದಲ್ಲಿ ಚರ್ಚೆಗೆ ಬಂದಿರುವ ಈ ಕಾವೇರಿ ಆರತಿಗೆ ಈ ಮೇಲೆ ಉಲ್ಲೇಖಿಸಿದ ಆರತಿ ಕಾರ್ಯಕ್ರಮಗಳೇ ಉತ್ತೇಜನ. ಇತ್ತೀಚೆಗೆ ಪ್ರಯಾಗ್‌ ರಾಜ್‌ ನಲ್ಲಿ ಮಹಾಕುಂಭಮೇಳ ನಡೆದಾಗ ಅದರ ಪಡಿಯಚ್ಚಾಗಿ ಟಿ. ನರಸೀಪುರದ ಸಂಗಮದಲ್ಲಿ ಕೂಡ ಕುಂಭಮೇಳ ತುಸು ವಿಜೃಂಬಣೆಯಿಂದಲೇ ನಡೆದದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲಿ ನಡೆದದ್ದು ʻಮಹಾ ಕುಂಭಮೇಳʼ. ಇಲ್ಲಿ ನಡೆದದ್ದು ಸಾಮಾನ್ಯ ಕುಂಭಮೇಳ. ಆದರೆ ಅದುವರೆಗೂ ಎರಡು ಮೂರು ತಿಂಗಳು ಮಹಾಕುಂಭಮೇಳದ ಭಜನೆ ಮಾಡಿದ್ದ ಟಿವಿಯವರು ಇದಕ್ಕೂ ʼಮಹಾʼ ಹಚ್ಚಿಯೇ ಪ್ರಸಾರ ಮಾಡಿ ಇದನ್ನೂ ʻಮಹಾಕುಂಭಮೇಳʼವನ್ನಾಗಿಯೇ ಮಾಡಿದರು!

ಈಗ ಕರ್ನಾಟಕದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸುವ ಬಗ್ಗೆ ಮಾಡುತ್ತಿರುವ ವಿರೋಧಕ್ಕೆ ಬೇರೆ ಬೇರೆ ಕಾರಣಗಳಿವೆ. ರೈತಸಂಘವು ಮುಖ್ಯವಾದಿ ಕೃಷ್ಣರಾಜ ಸಾಗರ ಪ್ರದೇಶದಲ್ಲಿ ಉಂಟಾಗುವ ಜನಸಂದಣಿ, ಇದರಿಂದ ಅಲ್ಲಿನ ನೆಲಜಲಮಾಲಿನ್ಯ ಇದರಿಂದ ಜನಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ, ಅನವಶ್ಯಕ ಆರ್ಥಿಕ ಹೊರೆ  ಇಂಥವುಗಳನ್ನು ಮುಂದೆಮಾಡಿ ತೋರಿಸಿದೆ. ಆದರೆ ಇದಕ್ಕೂ ಮಿಗಿಲಾದ ಕೆಲವು ಕಾರಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಅಂಥಹ ಕಾರಣಗಳಲ್ಲಿ ಅತ್ಯಂತ ಮುಖ್ಯವಾದದ್ದು ಇದು ಜನರ ವಿಚಾರಶಕ್ತಿಯನ್ನು ಕುಂದಿಸಿ ಅವರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತದೆ ಎಂಬುದು. ಈ ಮಾತು ಅನೇಕ ಶ್ರದ್ಧಾವಂಥ ಭಕ್ತರಿಗೆ ಸಿಟ್ಟು ತರಿಸಬಹುದಾದ ಮಾತೂ ಆಗಬಹುದು. ಇದು ನಮ್ಮ ಧಾರ್ಮಿಕ ಶ್ರದ್ಧೆಗೆ ಮಾಡುವ ಅವಮಾನ ಎಂದು ಅವರು ಗ್ರಹಿಸುವುದು ಅವರ ಸಿಟ್ಟಿಗೆ ಕಾರಣ. ಆದರೆ ಅವರಿಗೆ ಸಿಟ್ಟುಬರುತ್ತದೆ ಎಂದು ಇದನ್ನು ಹೇಳದೆ ಬಿಡಲು ಬರುವುದಿಲ್ಲ.

ಅಯೋಧ್ಯೆಯ ಸರಯೂ ನದಿಯ ಸುಂದರ ದೃಶ್ಯ


ಏಕೆಂದರೆ ಈ ಆರತಿ ಕಾರ್ಯಕ್ರಮ ಮುಖ್ಯವಾದಿ ಒಂದು ಧಾರ್ಮಿಕ ಕಾರ್ಯಕ್ರಮ. ಅಂತಹ ಕಾರ್ಯಕ್ರಮಗಳ ಸ್ಥಾನಮಾನ – ಅವು ಯಾವ ಧರ್ಮಕ್ಕೇ ಸೇರಿರಲಿ – ಹೇಗೆ ಇರಬೇಕು ಎಂಬುದರ ಬಗ್ಗೆ ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಪಾಲಿಸುವಲ್ಲಿ ನಾವೂ ನಮ್ಮನ್ನಾಳುವವರೂ ಸೋತಿದ್ದೇವೆ ಎಂಬುದು ಸತ್ಯ. ಅದಕ್ಕೆ ನಮ್ಮ ಅಜ್ಞಾನವೂ ಕಾರಣವಿರಬಹುದು;  ಜ್ಞಾನವಿದ್ದೂ ಬೇರೆಯದೇ ಆದ ಉದ್ದೇಶವೂ ಇರಬಹುದು. ನಮ್ಮ ದೇಶ ಮುಖ್ಯವಾಗಿ ಅನೇಕ ಧರ್ಮಗಳ ನಾಡು. ನಮ್ಮಲ್ಲಿ ಧರ್ಮ ಮತ್ತು ವಿಜ್ಞಾನಗಳ ತಿಕ್ಕಾಟ ಮೊದಲಿನಿಂದ ಇದ್ದರೂ ಸಂವಿಧಾನ ರಚನೆಯಾದ ಮೇಲಂತೂ ಇದು ತುಸು ಹೆಚ್ಚೇ ಆಗಿದೆ. ಈ ʼಧಾರ್ಮಿಕ ಮನೋಭಾವʼ ಮತ್ತು ವೈಜ್ಞಾನಿಕ ಮನೋಭಾವʼ ಇವುಗಳನ್ನು ಕುರಿತಂತೆ ನಮ್ಮ ಸಂವಿಧಾನ ಏನು ಹೇಳುತ್ತದೆ ಎಂದರೆ ಭಾರತ ಪ್ರಜೆಗಳು ತಮಗೆ ಇಷ್ಟಬಂದ ಧರ್ಮವನ್ನು ಆಚರಿಸಬಹುದು; ಸಮಾಜದ ಇತರ ಜನರಿಗೆ ಧಕ್ಕೆ ಆಗದಂತೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ಇದರಲ್ಲಿ ಸರ್ಕಾರದ ಪಾತ್ರ ಏನು? ಏನೂ ಇಲ್ಲ. ಅವರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು. ಅಂದರೆ ಸರ್ಕಾರ ಅವುಗಳನ್ನು ನಿರ್ಭಂದಿಸಬಾರದು ಅಷ್ಟೇ. ಆದರೆ ಸರ್ಕಾರವೇ ಮುಂದೆ ನಿಂತು ಈ ಕಾರ್ಯಗಳನ್ನು ಮಾಡುವುದನ್ನು ಅದು ಬೆಂಬಲಿಸುವುದು ಹಾಗಿರಲಿ ಸಹಿಸುವುದಿಲ್ಲ ಕೂಡ. ಸರ್ಕಾರ ಧಾರ್ಮಿಕವಾಗಿ ನಿರ್ಲಿಪ್ತವಾಗಿರಬೇಕು ಎಂಬುದು ಅದರ ಆಶಯ.

ಆದರೆ ವೈಜ್ಞಾನಿಕ ಮನೋಭಾವನೆಯ ಬಗ್ಗೆ ಅದು ನಿರ್ಲಿಪ್ತವಾಗಿರಲು ಹೇಳುವುದಿಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ.  ಇದಕ್ಕೆ ಸಂಬಂಧಿಸಿದಂತೆ ಅದು ಹೇಳುವುದೇನೆಂದರೆ ಈ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು. ಹಾಗಾಗಿ ಇದನ್ನು ವ್ಯಕ್ತಿಗಳು ಮತ್ತು ಸರ್ಕಾರಗಳು ಮುಂದೆ ನಿಂತು ಮಾಡಬೇಕಾಗುತ್ತದೆ! ʻಕಾವೇರಿ ಆರತಿʼ ಸ್ಪಷ್ಟವಾಗಿ ಒಂದು ಧಾರ್ಮಿಕ ಕಾರ್ಯಕ್ರಮ ಆಗುವುದರಿಂದ ಅದನ್ನು ಪ್ರಜೆಗಳಿಂದ ಆಯ್ಕೆಯಾದ ಭಾರತದ ಯಾವುದೇ ಸರ್ಕಾರಗಳು ಮುಂದೆನಿಂತು ಮಾಡುವ ಅಗತ್ಯವಿಲ್ಲವೆಂಬುದು ಇಲ್ಲಿ ಮುಖ್ಯವಾದ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವು ಯಾವುದೇ ಧರ್ಮಕ್ಕೆ ಸೇರಿರಲಿ ವೈಯಕ್ತಿಕ ಮಟ್ಟದಲ್ಲಿ ಇದ್ದಾಗ ಅವಕ್ಕೊಂದು ಖಾಸಗೀತನದ ಬೆಲೆ ಇರುತ್ತದೆ. ನಾವು ನಂಬುವ ದೇವರನ್ನು ನಮ್ಮ ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುವುದೇ ಬೇರೆ. ತಲೆಯ ಮೇಲೆ ಹೊತ್ತುಕೊಂಡು ಬೀದಿಯಲ್ಲಿ ಕುಣಿಯುವುದೇ ಬೇರೆ. ಭಕ್ತಿಯೆಂಬುದು ಬೀದಿಗೆ ಬಂದಾಗ ಅದು ತೋರುಂಬ ಲಾಭವಾಗುತ್ತದೆ. ಹೀಗಾಗಿಯೇ ಇರಬೇಕು ವಚನಕಾರರು ದೇವರು ಮತ್ತು ಭಕ್ತನ ಸಂಬಂಧವನ್ನು ಗಂಡ-ಹೆಂಡತಿಯ ಸಂಬಂಧಕ್ಕೆ ಸಮೀಕರಿಸಿದರು. ಗಂಡಹೆಂಡತಿಯ ಸಂಬಂಧ ಖಾಸಗೀ ಆಗಿದ್ದಷ್ಟೂ ಅದರ ಘನತೆ ಹಿಗ್ಗುತ್ತದೆ; ಬೀದಿಗೆ ಬಂದಷ್ಟೂ ಕುಗ್ಗುತ್ತದೆ!

ಇಂತಹ ಆಚರಣೆಗಳು ಮಾಡುವ ಇನ್ನೊಂದು ಅನಾಹುತವೆಂದರೆ ಅವಕ್ಕೊಂದು ಪೌರಾಣಿಕತೆಯನ್ನು ಕಟ್ಟಿಕೊಡುವುದು. ಮತ್ತು ಇತ್ತೀಚಿನ ಆಚರಣೆಗಳನ್ನೂ ತಲೆತಲಾಂತರದಿಂದ ಬಂದ ಆಚರಣೆಗಳೆಂದು ಬಿಂಬಿಸಹೋಗುವುದು. ಇದಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಇವತ್ತು ಮಳೆಗಾಲದಲ್ಲಿ ಜಲಾಶಯಗಳು ತುಂಬಿದಾಗ ಅವುಗಳಿಗೆ ʼಬಾಗಿನʼ ಅರ್ಪಿಸುವ ಕಾರ್ಯಕ್ರಮ. ಇವತ್ತು ಮಳೆ ಜೋರಾಗಿ ಬಂದು ಜಲಾಶಯಗಳು ತುಂಬಿದೊಡನೆ ದೊಡ್ಡದೊಡ್ಡ ಜನನಾಯಕರು ದೊಡ್ಡ ದೊಡ್ಡ ಜಲಾಶಯಗಳಿಗೆ ಈ ʼಭಾಗಿನʼ ಅರ್ಪಿಸುವುದು ʼಪದ್ಧತಿʼಯಾಗಿಯೇ ಬಿಟ್ಟಿದೆ. ಅವರು ಹಾಗೆ ಮಾಡಿದರೆ ಸ್ಥಳೀಯ ರಾಜಕೀಯ ಮುಂದಾಳುಗಳು ಅವರ ಊರ ಹತ್ತಿರದ ಕೆರೆ ತುಂಬಿದಾಗಲೂ ಇದನ್ನು ಅರ್ಪಿಸುವ ಒಂದು ʻಪದ್ಧತಿʼ ಮಾಡಿಕೊಂಡಿದ್ದಾರೆ. ಇದನ್ನು ಏಕೆ ಮಾಡಬೇಕು? ಇದರ ಮಹತ್ವವೇನು ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ಏನು ಹೇಳಬಹುದು. ಏನೋ ಹೇಳುತ್ತಾರೆ ಅದು ಬೇರೆ ಪ್ರಶ್ನೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವೇ? ಇದು ಯಾವಾಗಿನಿಂದ ಜಾರಿಗೆ ಬಂತು ಎಂಬುದನ್ನು ನೋಡಿದರೆ ನಮಗೆ ಕುತೂಹಲವಾದ ಕೆಲವು ಸಂಗತಿಗಳು ದೊರೆಯುತ್ತವೆ. ಕೇವಲ ಐವತ್ತು ವರ್ಷಗಳ ಹಿಂದೆ ಹೀಗೆ ಜನನಾಯಕರು ʼಭಾಗಿನʼ ಅರ್ಪಿಸುವ ಒಂದು ಪದ್ಧತಿ ನಮ್ಮಲ್ಲಿ ಇರಲೇ ಇಲ್ಲವಂತೆ. ನನಗೆ ಒಬ್ಬರು ಹಿರಿಯರು ಹೇಳಿದ ಪ್ರಕಾರ ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇದೇ ಕಾವೇರಿಗೆ ಸಂಬಂಧಿಸಿದ ಕೃಷ್ಣರಾಜ ಸಾಗರ ಜಲಾಶಯ ತುಂಬಿದಾಗ ಮೊದಲಬಾರಿಗೆ ಹೀಗೆ ಒಮ್ಮೆ ಈ ರೀತಿ ʼಬಾಗಿನʼ ಅರ್ಪಿಸಿದರಂತೆ! ಆಮೇಲೆ ಅದು ಸಾಂಕ್ರಾಮಿಕವಾಗಿ ಹಬ್ಬಿತಂತೆ! 

ನಾಳೆ ಈ ಕಾವೇರಿ ಆರತಿ ಕೂಡ ಹೀಗೆ ಆಗುವುದರಲ್ಲಿ ಅನುಮಾನವಿಲ್ಲ. ಇದು ಮುಂದೆ ಕವಲೊಡೆದು ತುಂಗಾ ಆರತಿ, ಕೃಷ್ಣಾ ಆರತಿ, ಶರಾವತಿ ಆರತಿ, ಕುಂಟೆಹೊಳೆ ಆರತಿ, ಹೇಮಾವತಿ ಆರತಿ, ಮೇಲ್ದಂಡೆ ಆರತಿ, ಕೆಳದಂಡೆ ಆರತಿ, ಕೆರೆಆರತಿ, ಹೊಳೆಆರತಿ, ಹಳ್ಳಾರತಿ ಹೀಗೇ ಬೆಳೆಯುತ್ತಾ ಜನರನ್ನು ಮೌಢ್ಯದ ಕಡೆಗೆ ಒಯ್ಯುವಲ್ಲಿ ದೊಡ್ಡಪಾತ್ರವನ್ನೇ ವಹಿಸಬಹುದು. ಇದು ರಾಜ್ಯ ಮತ್ತು ದೇಶಗಳಿಗೆ ಆಗುವ ನಷ್ಟ. ಉತ್ತರ ಭಾರತದ ರಾಜ್ಯಗಳು ಇವತ್ತು ದಕ್ಷಿಣಭಾರತದ ರಾಜ್ಯಗಳಿಗಿಂತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಹಿಂದೆ ಉಳಿದಿರುವುದಕ್ಕೆ ಅವುಗಳು ಜನರ ಧಾರ್ಮಿಕತೆಯನ್ನು ಅತಿಯಾಗಿ ಬೆಂಬಲಿಸುತ್ತಿರುವುದು ಕೂಡ ಕಾರಣವಾಗಿದೆ ಎಂಬ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರು ಮುಂದೆ ಬರಲು ನಮ್ಮನ್ನು ಅನುಸರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಾವು ಹಿಂದಕ್ಕೆ ಹೋಗಲು ಅವರನ್ನು ಅನುಸರಿಸುವುದು ಜಾಣನಡೆಯಾಗುವುದಿಲ್ಲ. ಹಾಗಾಗಿ ಇಂತಹ ಧಾರ್ಮಿಕ ಕಾರ್ಯಗಳಿಂದ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತವೆ. ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ ಇದರಿಂದ ಜನಜೀವನಕ್ಕೆ ನೆರವಾಗುತ್ತದೆ ಎಂದು ಹೇಳುವಾಗಲೆಲ್ಲ ನಾವು ಇಂತಹ ಕಾರ್ಯಗಳು ಉಂಟುಮಾಡುವ ಸಣ್ಣಪುಟ್ಟ ಲಾಭಗಳಿಗಿಂತ ಅವು ಉಂಟುಮಾಡುವ ದೊಡ್ಡಮಟ್ಟದ ಮತ್ತು ಶಾಶ್ವತ ನಷ್ಟದ ಕಡೆಗೆ ಹೆಚ್ಚು ಗಮನಹರಿಸಬೇಕು ಮತ್ತು ಯಾವುದೇ ಚುನಾಯಿತ ಸರ್ಕಾರಗಳು ಆದಷ್ಟೂ ಧಾರ್ಮಿ ಚಟುವಟಿಕಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಜನರ ವೈಚಾರಿಕತೆ ಮತ್ತು ಜನಜೀವನಮಟ್ಟವನ್ನು ಎತ್ತರಿಸುವತ್ತ ತಮ್ಮ ಶಕ್ತಿ ಮತ್ತು ಸಮಯವನ್ನು ವಿನಿಯೋಗಿಸಬೇಕಾದದ್ದು ಬಹಳ ಮುಖ್ಯವಾದ ಸಂಗತಿಯಾಗುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಲೇಖನದ ಶೀರ್ಷಿಕೆಯು ಕೇಳುವ ʼ ಕಾವೇರಿ ಆರತಿ ಯಾವುದರ ಆಹುತಿ ? ಎಂಬ ಪ್ರಶ್ನೆಗೆ ಅದು ಈ ದೇಶದ ಅಜ್ಞಾನ, ಅಂಧಕಾರ, ಬಡತನ ಮುಂತಾದವುಗಳ ಆಹುತಿಯಾಗದೇ ಅವುಗಳನ್ನು ಬಡಿದೋಡಿಸಬಲ್ಲ ಶಿಕ್ಷಣ ಅದರ ಮೂಲಕ ಲಭ್ಯವಾಗುವ ವೈಜ್ಞಾನಿಕ ಮನೋಭಾವದ ಆಹುತಿ ಎಂಬುದೇ ಉತ್ತರವಾಗುತ್ತದೆ.

*****

07-06-2025

Thursday, June 5, 2025

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ಅನುಮತಿ

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ಅನುಮತಿ


ಮಹಾದೇವಿ ಅಕ್ಕ ತನ್ನ ಒಂದು ವಚನದಲ್ಲಿ ʼಕಿಚ್ಚಿಲ್ಲದ ಬೆಂಕಿಯಲಿ ಬೆಂದೆನವ್ವಾʼ ಎಂದು ಹೇಳುತ್ತಾಳೆ. ಅವಳ ವಚನದ ಈ ಸಾಲನ್ನು ಕೇಳುತ್ತಿದ್ದಂತೆಯೇ ಮನುಷ್ಯತ್ವವನ್ನು ಉಳ್ಳ ಯಾರಿಗೇ ಆದರೂ ಒಂದು ಕ್ಷಣ ಅಯ್ಯೋ ಅನ್ನಿಸಿಬಿಡುತ್ತದೆ. ಏಕೆಂದರೆ ಆ ಮಾತಿನ ಹಿಂದಿರುವ ಅವಳ ಯಾತನೆ ಯಾವಬಗೆಯದ್ದು ಎಂಬುದನ್ನು ಈ ವಚನಸಾಲು ಧ್ವನಿಪೂರ್ಣವಾಗಿ ಕಟ್ಟಿಕೊಡುತ್ತದೆ. ಈ ವರ್ಷದ ಎಸ್. ಎಸ್.‌ ಎಸ್.ಸಿ. ಪರೀಕ್ಷೆ -೨ ರ ಮೌಲ್ಯಮಾಪನದ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರ ಪರಿಸ್ಥಿತಿಯನ್ನು ನೋಡಿ ಯಾಕೋ ಅಕ್ಕನ ಈ ಮಾತು ಒಂದು ಕ್ಷಣ ಮನಸ್ಸಿನಲ್ಲಿ ಮಿಂಚಿ ಮಾಯವಾಯಿತು.

ಬಹಳಷ್ಟು ಶಿಕ್ಷಕರಿಗೆ ತಿಳಿದಿರುವಂತೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆ- ೨ ರ ಮೌಲ್ಯಮಾಪನ ಕಾರ್ಯ ಜೂನ್‌ ಆರಕ್ಕೆ ಆರಂಭವಾಗುತ್ತಿದೆ. ರಾಜ್ಯದ ಬಹಳಷ್ಟು ಜನ ಶಿಕ್ಷಕರು ಈ ಕೆಲಸಕ್ಕೆ ನಿಯೋಜಿತರಾಗಿದ್ದಾರೆ. ಇದೆಲ್ಲ ಅವರು ಮಾಡಲೇಬೇಕಾದ ಕೆಲಸ ಬಿಡಿ. ಅದೇನೂ ಉಲ್ಲೇಖಿಸಬೇಕಾದ ಸಂಗತಿಯಲ್ಲ. ಆದರೆ ಈ ದಿನಾಂಕಗಳನ್ನು ಸೂಕ್ಷ್ಮವಾಗಿ ತುಸು ಗಮನಿಸಿ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್‌ ಐದು-ಆರು ಈ ದಿನಗಳಲ್ಲಿ ಪೂರ್ವಪರೀಕ್ಷೆಯನ್ನು ಸಾಮೂಹಿಕವಾಗಿ ಮಾಡುತ್ತಿದ್ದಾರೆ. ಆ ದಿನಾಂಕಗಳೂ ಮೊದಲೇ ಘೋಷಣೆಯಾದಂಥವು. 

ಆರನೆಯ ತಾರೀಖೇ ಈ ಮೌಲ್ಯಮಾಪನಕ್ಕೆ ಶಿಕ್ಷಕರು ಹಾಜರಾಗಲು ತಿಳಿಸಲಾಗಿದೆ. ಆರನೆಯ ತಾರೀಖಿನ ಪರೀಕ್ಷೆ ಶಾಲೆಗಳಲ್ಲಿ ಯಾವ ರೀತಿ ನಡೆಯಬಹುದು ಯೋಚಿಸಿ. ಏಕೆಂದರೆ ಕೆಲವು ಶಾಲೆಗಳಲ್ಲಿ ಮೌಲ್ಯಮಾಪನಕ್ಕೆ ಶಿಕ್ಷಕರು ಹೋದರೆ ಅಲ್ಲಿ ಪರೀಕ್ಷೆ ಮಾಡುವವರೇ ಇಲ್ಲ. ಇರಲಿ ಅದನ್ನು ಇನ್ನೊಂದು ದಿನ ಮಾಡಿಕೊಂಡರಾಯಿತು ಅನ್ನಲಿಕ್ಕೆ ಅದು ಅನೇಕ ಕಡೆ ಸ್ಥಳೀಯವಾಗಿ ಶಾಲಾ ಹಂತದಲ್ಲಿ ನಡೆಯದೇ ತಾಲ್ಲೂಕು ಹಂತದಲ್ಲಿಯೋ ಜಿಲ್ಲಾ ಹಂತದಲ್ಲಿಯೋ ನಡೆಯುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಯಾರೂ ಸೂಚಿಸಲಿಲ್ಲ. ಎಸ್.‌ ಎಸ್.‌ ಎಲ್.‌ ಸಿ. ಮೌಲ್ಯಮಾಪನಕ್ಕೆ ಹೋಗುವ ಶಿಕ್ಷಕರು ಹೋಗಲೇ ಬೇಕು ಹೊರಡುತ್ತಾರೆ. ಉಳಿದ ಶಿಕ್ಷಕರು ಇನ್ನೇನು ಮಾಡುತ್ತಾರೆ?  ʻಆದಂಗಾಯ್ತು ಹಾಟಗಳ್ಳನ ಮದ್ವೆʼ ಅನ್ನುವ ಗಾದೆಯಂತೆ ಒಟ್ಟಿನಲ್ಲಿ ಪರೀಕ್ಷೆ ಮಾಡುವ ಶಾಸ್ತ್ರವನ್ನು ಮಾಡಿ ಮುಗಿಸುತ್ತಾರೆ.

ಶಾಲೆಯ ಕಥೆ ಇದಾದರೆ ಶಿಕ್ಷಕರದ್ದು ವೈಯಕ್ತಿಕವಾಗಿ ಬೇರೊಂದು ಕಥೆ. ಆರು ಶುಕ್ರವಾರ. ಏಳು ಶನಿವಾರ ಬಕ್ರಿದ್‌ ರಜೆ. ಎಂಟು ಭಾನುವಾರ. ಉಳಿದ ಶಿಕ್ಷಕರು ಬಕ್ರಿದ್‌ ರಜೆ ಮತ್ತು ಭಾನುವಾರದ ರಜೆಯಲ್ಲಿ ಮನೆಯಲ್ಲಿ ಇರುವಾಗ ಈ ಶಿಕ್ಷಕರು ಮೌಲ್ಯಮಾಪನ ಮಾಡಬೇಕು. ಇವರು ಅದೆಷ್ಟು ಮನಸ್ಸುತುಂಬಿ ಈ ಕೆಲಸವನ್ನು ರಜಾ ದಿನದಲ್ಲಿ ಶ್ರದ್ಧಾಪೂರ್ವಕವಾಗಿ ಮಾಡುತ್ತಾರೋ ಭಗವಂತನೇ ಬಲ್ಲ. ರಾಜ್ಯಮಟ್ಟದಲ್ಲಿ ಶಿಕ್ಷಕರ ಸಂಘಗಳು ಬಲಾಢ್ಯವಾಗಿರುವುದು ಬೇಡ ಅರ್ಧಬರ್ಧ ಜೀವ ಇಟ್ಟುಕೊಂಡರೂ ಅಲ್ಲಿನ ಅಧಿಕಾರಿಗಳಿಗೆ ಮನವರಿಕೆ ಮಾಡಿ, “ಎರಡು ದಿನ ಮೌಲ್ಯಮಾಪನ ಮುಂದೆ ಹಾಕಿ. ಎರಡು ದಿನ ತಡವಾದರೆ ರಾಜ್ಯದ ಶಿಕ್ಷಣ ವ್ಯವಸ್ಥೆಯೇ ಕುಸಿದು ಬೀಳುವುದಿಲ್ಲ” ಎಂದು ಈ ಕಾರ್ಯವನ್ನು ಮುಂದೆ ಹಾಕಿಸಲು ಅವಕ್ಕೆ ಸಾಧ್ಯವಾಗುತ್ತಿತ್ತು. ಅವು ಆ ಪ್ರಯತ್ನವನ್ನು ಮಾಡಲೇ ಇಲ್ಲವೋ ಅಥವಾ ಮಾಡಲು ಹೋಗಿ ಯಶಸ್ವಿಯಾಗಲಿಲ್ಲವೋ ತಿಳಿಯದು.

ಈ ಮಧ್ಯೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಿಲ್ಲಾ ಉಪನಿರ್ದೇಶಕರುಗಳಿಗೆ ಪತ್ರವೊಂದನ್ನು ಬರೆದು ಬಕ್ರಿದ್‌ ರಜೆ ದಿನ ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲು ಮನವಿ ಸಲ್ಲಿಸುವ ಶಿಕ್ಷಕರಿಗೆ ಅನುಮತಿ ನೀಡಲು ಸೂಚಿಸಿದ್ದು ತುಸು ಸಮಾಧಾನ ತರುವ ಸಂಗತಿಯಾಗಿದೆ. ಬಕ್ರಿದ್‌ ಹಬ್ಬ ದಿಢೀರನೆ ಘೋಷಣೆ ಆದದ್ದೇನೂ ಅಲ್ಲ. ಅದು ಶನಿವಾರ ಇದೆ ಅನ್ನುವುದು ಸಾಕಷ್ಟು ಮುಂಚಿತವಾಗಿ ತಿಳಿದಿದ್ದರೂ ಅವತ್ತು ಮೌಲ್ಯಮಾಪನ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿ ನಂತರ ಶಿಕ್ಷಕರ ಸಂಘದ ಅಥವಾ ಯಾರದಾದರೂ ಒತ್ತಡ ಬಂತೋ ಅಥವಾ ಯಾರಿಗಾದರೂ ಬುದ್ಧನಿಗೆ ಒಮ್ಮೆಲೆ ಜ್ಞಾನೋದಯ ವಾದಂತೆ ಜ್ಞಾನೋದಯವಾಯಿತೋ ತಿಳಿಯದು. ಅಂತೂ ಒಂದು ಸಣ್ಣ ಪರಿಹಾರ ಬಂದು ಬಿಸಿಲಿನಲ್ಲಿ ಬಾಯಾರಿ ಸಾಯುವಂತಿದ್ದವರಿಗೆ ಎಲ್ಲೋ ಒಂದು ಲೋಟ ತಣ್ಣನೆಯ ನೀರು ಕುಡಿಯಲು ಸಿಕ್ಕ ಅನುಭವ ಆಗಿದೆ.

ಈ ಪತ್ರದ ವಿಶೇಷತೆ ಎಂದರೆ ಇದರಲ್ಲಿ ಬಕ್ರಿದ್‌ ಹಬ್ಬದ ನಿಮಿತ್ತ ಅನುಮತಿ ಕೇಳುವ ಶಿಕ್ಷಕರಿಗೆ ಅನುಮತಿ ನೀಡಲು ಸೂಚಿಸಲಾಗಿದೆ.  ಇದರ ಅನುಷ್ಠಾನದ ಸಂಕೀರ್ಣತೆಯ ಬಗ್ಗೆ ಅಲ್ಲಿ ಯಾವುದೇ ಉಲ್ಲೇಖವಿಲ್ಲ. ಒಂದು ಕಾಲ್ಪನಿಕ ಉದಾಹರಣೆ ಗಮನಿಸಿ. ಯಾವುದೋ ಒಂದು ಪರೀಕ್ಷಾ ಕೇಂದ್ರಕ್ಕೆ ಬಂದ ಎಲ್ಲ ಶಿಕ್ಷಕರೂ ಬಕ್ರಿದ್‌ ಹಬ್ಬದ ನಿಮಿತ್ತ ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲು ಅನುಮತಿ ಕೋರುತ್ತಾರೆ ಅಂತ ಇಟ್ಟುಕೊಳ್ಳಿ. ಆಗ ಅನುಮತಿ ಕೊಡುವವರು ಏನು ಮಾಡಬೇಕು? ಅದು ಅವರಿಗೆ ಬಿಟ್ಟದ್ದು. ಎಲ್ಲರಿಗೂ ಅನುಮತಿ ಕೊಟ್ಟು ಅವತ್ತಿನ ಮಟ್ಟಿಗೆ ಮೌಲ್ಯಮಾಪನ ಕಾರ್ಯವನ್ನು ಸ್ಥಗಿತಗೊಳಿಸುವದು ಒಂದು ಮಾರ್ಗ.

ಇನ್ನೊಂದು ಕೆಲವರಿಗೆ ಅನುಮತಿ ಕೊಟ್ಟು ಕೆಲವರಿಗೆ ನಿರಾಕರಿಸುವುದು. ಇದರಿಂದ ಮೌಲ್ಯಮಾಪನ ಕಾರ್ಯ ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆಯಾದರೂ ಈ ಆಯ್ಕೆ ಅಷ್ಟು ಸುಲಭದ ದಾರಿಯಲ್ಲ. ಇಲ್ಲಿ ಅನುಮತಿ ನೀಡುವಿಕೆಯ ಪುರಸ್ಕಾರ ಮತ್ತು ತಿರಸ್ಕಾರಗಳನ್ನು ಯಾವ ಮಾನದಂಡ ಇಟ್ಟುಕೊಂಡು ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ.  ಹಾಗೆ ಮಾಡಲು ಬಹಳಷ್ಟು ಜನರಿಗೆ ತಕ್ಷಣಕ್ಕೆ ಹೊಳೆಯುವ ಮಾನದಂಡ ಎಂದರೆ ʻಬಕ್ರಿದ್‌ ಮಾಡುವವರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸಬಹುದುʼ ಎಂಬುದು. ಆದರೆ ಅದು ಸಮಸ್ಯಾತ್ಮಕವಾದದ್ದು. ಏಕೆಂದರೆ ಈ ಆಯ್ಕೆಯನ್ನು  ಯಾವ ಆಧಾರದ ಮೇಲೆ ನಿರ್ಧರಿಸಬೇಕು? ಆಗ ಅನುಮತಿ ಕೊಡುವ ವ್ಯಕ್ತಿ ಅನಿವಾರ್ಯವಾಗಿ ʻಜಾತಿ- ಜನಾಂಗʼಗಳ ಅಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಇದನ್ನು ಇನ್ನೂ ಬಿಡಿಸಿ ಹೇಳುವುದಾದರೆ ಬಕ್ರಿದ್‌ ಹಬ್ಬ ಮಾಡುವ ಮುಸ್ಲಿಮರಿಗೆ ಅನುಮತಿ ಕೊಟ್ಟು ಉಳಿದವರಿಗೆ ನಿರಾಕರಿಸುವುದು. 

ಆದರೆ ಹೀಗೆ ಮಾಡುವುದು ಸರಿಯಾಗುತ್ತದೆಯೇ? ನನ್ನ ಪ್ರಕಾರ ಇಲ್ಲ. ಏಕೆಂದರೆ ನಮ್ಮಲ್ಲಿ ಹಿಂದೂ ಹಬ್ಬಗಳು, ಮುಸ್ಲಿಮ್‌ ಹಬ್ಬಗಳು, ಕ್ರಿಶ್ಚಿಯನ್‌ ಹಬ್ಬಗಳು ಎಂದು ಕೆಲವು ಹಬ್ಬಗಳನ್ನು ಕರೆಯುವ ವಾಡಿಕೆ ಇದೆಯಾದರೂ ಭಾರತದ ಸಾಂವಿಧಾನಿಕ ಭಾಷೆಯಲ್ಲಿ ಹಾಗೆ ವಿಭಜಿಸಿ ಹೇಳಲು ಬರುವುದಿಲ್ಲ. ಏಕೆಂದರೆ ಅವೆಲ್ಲವನ್ನೂ ಒಟ್ಟಾಗಿ ʻಭಾರತೀಯ ಧಾರ್ಮಿಕ ಹಬ್ಬಗಳುʼ ಎಂದೆ ಅವನ್ನು ಕರೆಯಲಾಗುತ್ತದೆ. ಅಂದರೆ ಭಾರತದ ಯಾವುದೇ ಪ್ರಜೆ ಈ ಯಾವುದೇ ಧಾರ್ಮಿಕ ಹಬ್ಬಕ್ಕೆ ತನ್ನ ಹಕ್ಕನ್ನು ಮಂಡಿಸಬಹುದು ಎಂದಾಗುತ್ತದೆ. ಹೀಗಿರುವಾಗ ʻದೀಪಾವಳಿ ಹಬ್ಬಕ್ಕೆ ಹಿಂದೂಗಳಿಗೆ ಅನುಮತಿ ಕೊಡುತ್ತೇನೆ; ಬಕ್ರಿದ್‌ ಗೆ ಮುಸ್ಲಿಮರಿಗೆ ಅನುಮತಿ ಕೊಡುತ್ತೇನೆ; ಕ್ರಿಸ್‌ಮಸ್‌ಗೆ ಕ್ರಿಶ್ಚಿಯನ್ನರಿಗೆ ಅನುಮತಿ ಕೊಡುತ್ತೇನೆ ಎಂದು ಯಾರಾದರೂ ಹೇಳಿದರೆ ಅದು ನನ್ನ ಪ್ರಕಾರ ಸಂವಿಧಾನದ ಆಶಯಕ್ಕೆ ವಿರೋಧಿಯಾದ ನಡೆಯಾಗುತ್ತದೆ ಮಾತ್ರವಲ್ಲ ಯಾರಾದರೂ ಪ್ರಶ್ನಿಸಿದರೆ ಅದು ದಂಡನಾರ್ಹ ಅಪರಾಧವೂ ಆಗಿಬಿಡಬಹುದು! ಹಾಗಾದರೆ ಅನುಮತಿ ಕೊಡುವವರು ಏನು ಮಾಡಬೇಕು? ನನ್ನ ಪ್ರಕಾರ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ  ಕೇಳಿದವರಿಗೆಲ್ಲ ಅನುಮತಿ ಕೊಟ್ಟು ಕೈತೊಳೆದುಕೊಳ್ಳುವುದೇ ಸರಿ. 

ಇದೆಲ್ಲ ನಮಗೆ ಯಾತಕ್ಕೆ. ಆದೇಶ ಮಾಡುವವರು ಅನುಮತಿ ಕೊಡುವವರು ಏನಾದ್ರೂ ಮಾಡಿಕೊಳ್ಳಲಿ ನಾವು ನಮ್ಮ ಕಷ್ಟ ಮಾತ್ರ ಹೇಳಿಕೊಳ್ಳೋಣ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಅವರೆಲ್ಲರಿಗೂ ರಜಾದಿನದಲ್ಲಿ ಮೌಲ್ಯಮಾಪನಕ್ಕೆ ಕರೆದಿರುವುದರಿಂದ ಒಳಗೊಳಗೆ ಯಾರದ್ಯಾರದೋ ಮೇಲೆ ಸಿಟ್ಟು ಇರುವುದಂತೂ ಸುಳ್ಳಲ್ಲ. ಕೆಲವರು ನನಗೆ ಫೋನ್‌ ಮಾಡಿ ಯಾರ್ಯಾರಿಗೋ ಬಾಯಿಗೆ ಬಂದಂತೆ ಬಯ್ದದ್ದೂ ಇದೆ. ಆದರೆ ಇವರಿಗೆಲ್ಲ ಹೊಟ್ಟೆಯಲ್ಲಿ ಇರುವ ಸಿಟ್ಟು ರಟ್ಟೆಗೆ ಬರಲ್ಲ. ಎಂತದು ಮಾಡುವುದು ಹೇಳಿ. ಅಂದಮಾತ್ರಕ್ಕೆ ಇವರೆಲ್ಲ ಮೈಗಳ್ಳರಲ್ಲ. ಬಹಳ ಶ್ರದ್ಧೆಯಿಂದಲೇ ಕೆಲಸ ಮಾಡುವಂಥವರು. ಆದರೆ ಮನಶ್ಶಾಸ್ತ್ರ ಓದಿರುವಂಥ ಯಾರಿಗಾದರೂ ತಿಳಿಯುವ ಸಣ್ಣ ಸಂಗತಿ ಎಂದರೆ ವಾರದ ರಜೆ, ಹಬ್ಬದ ರಜೆ ಇವೆಲ್ಲ ನೌಕರರಲ್ಲಿ ಹೊಸಚೈತನ್ಯವನ್ನು ತುಂಬಿ ಅವರ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತವೆ ಎಂಬುದು. ಇದನ್ನು ನಮ್ಮ ಮೇಲಿನವರು ಅರ್ಥಮಾಡಿಕೊಳ್ಳುವುದಿಲ್ಲವಲ್ಲ ಎಂಬುದು ಇವರ ಸಕಾರಣಯುಕ್ತ ಕೋಪಕ್ಕೆ ಕಾರಣ ಅಷ್ಟೆ.; ದ್ವೇಷಕ್ಕಲ್ಲ. ಬಂಡಾಯಕ್ಕಂತೂ ಅಲ್ಲವೇ ಅಲ್ಲ. 

ಇತ್ತೀಚೆಗೆ ಭಾರತಕ್ಕೆ ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ ತಂದುಕೊಟ್ಟ ಭಾನು ಮುಸ್ತಾಕ್‌ ಅವರ ʻಹಾರ್ಟ್‌ ಲ್ಯಾಂಪ್‌ʼ (ಎದೆಯ ಹಣತೆ) ಕೃತಿಯ ಕಥೆಯೊಂದರಲ್ಲಿ  ʻಮನೆಯ ಮಗಳು ಬೇಸರಪಟ್ಟುಕೊಂಡು ಶಪಿಸಬಾರದು. ಹಕ್‌ದಾರ್‌ ತರ್‌ಸೇ ತೋ ಅಂಗಾರ್‌ ಕಾ ನ್ಹೂ ಬರ್‌ಸೆʼ  ಎಂಬ ಮಾತು ಬರುತ್ತದೆ. ಅಂದರೆ ಯಾರಾದರೂ ತಮ್ಮ ನ್ಯಾಯಯುತ ಹಕ್ಕನ್ನು ಕೇಳಿದಾಗ ನಾವು ಅಧಿಕಾರದ ಬಲದಿಂದ ಅದನ್ನು ನಿರಾಕರಿಸಿದರೆ, ಆಗ ಆ ಹಕ್ಕುದಾರರು ದೇವರಲ್ಲಿ ಮನವಿ ಮಾಡಿಕೊಂಡರೆ ಬೆಂಕಿಯ ಮಳೆಯೇ ಸುರಿದೀತು ಎಂಬುದು ಇದರ ಅರ್ಥ. ಇಲ್ಲಿ ಶಿಕ್ಷಕರು ಶಿಕ್ಷಣ ಇಲಾಖೆಯ ಮಕ್ಕಳು. ಅವರು ಶಾಪ ಹಾಕಿದರೆ ಇಲಾಖೆಗೆ ಒಳ್ಳೆಯದಾಗುವುದಿಲ್ಲ. ಇದನ್ನು ಸಂಬಂಧಪಟ್ಟ ಎಲ್ಲರೂ ಅರ್ಥಮಾಡಿಕೊಳ್ಳುವುದು ಯಾರದೋ ಒಬ್ಬರ ಆರೋಗ್ಯಮಾತ್ರವಲ್ಲ ಇಡೀ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನನ್ನ ಕತೆ ಕೇಳಿ. ವಾರಪೂರ್ತಿ ಶ್ರದ್ಧೆಯಿಂದ ಕೆಲಸ ಮಾಡುವ ನನಗೆ  ಭಾನುವಾರ ವಿ‍ಶ್ರಾಂತಿ ತೆಗೆದುಕೊಳ್ಳದಿದ್ದರೆ ಮುಂದಿನ ವಾರ ಪೂರ್ತಿ ತಲೆಯೇ ಸರಿ ಇರುವುದಿಲ್ಲ. ಹುಚ್ಚ ಮಾಡಿದಂಗೆ ಮಾಡುತ್ತಿರುತ್ತೇನೆ. ಈ ಸಲ ನನಗೂ ಮೌಲ್ಯಮಾಪನ ಇದೆ. ಶನಿವಾರ ಬಕ್ರಿದ್‌ ರಜೆಗೆ ಮನವಿ ಮಾಡಿಕೊಳ್ಳುವುದೋ ಬೇಡವೋ ಅಂಥ ವಿಚಾರ ಮಾಡುತ್ತಿರುವೆ. ಬೆಳಿಗ್ಗೆ ಮೂಡು ಬಂದ ರೋಡು ಹಿಡಿಯುವೆ. ನಾನು ಅನುಮತಿ ಕೇಳಿದರೆ ಅದಕ್ಕೆ ಅವರು  ಕೊಟ್ಟರೆ ಪಸಂದ ಆಯ್ತು. ಕೊಡದಿದ್ದರೆ ಮುಂದೆ ಏನು ಅಂಥ ನೋಡುವ. ಏಕೆಂದರೆ ಒಂದು ವೇಳೆ ಶನಿವಾರವೂ ಹೋಗಿ ಭಾನುವಾರವೂ ನಾನು ವ್ಯಾಲೂವೇಷನ್ನಿಗೆ ಹೋದರೆ ಭಾನುವಾರ ನನ್ನ ಕೈಗೆ ಬರುವ ಪೇಪರ್ರುಗಳ ಮಕ್ಕಳ ಗತಿ ಏನು ಎಂಬ ಚಿಂತೆಯಾಗಿದೆ. ಏಕೆಂದರೆ ಅವತ್ತಿನ ನನ್ನ ಕೆಲಸ ಅತ್ಯಂತ ಕಳಪೆಯಾಗಿರುತ್ತದೆ. ಈ ಕಳಪೆ ಕೆಲಸಕ್ಕೆ ನನಗೆ ಏನೂ ಆದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮಕ್ಕಳ ಗತಿ? ಊಪರ್‌ ವಾಲಾನೇ ನೋಡಿಕೊಳ್ಳಬೇಕಾಗುತ್ತದೆ.

ನಾನು ಮೌಲ್ಯಮಾಪನ ಮಾಡಲಾರದೆ ಹೀಗೆ ಮಾಡುತ್ತಿದ್ದೇನೆ ಎಂದು ನೀವು ತಿಳಿದುಕೊಳ್ಳಲಾರಿರಿ; ಇದರೆ ಹಿಂದೇ ಏನೇನೋ ಕಾರಣಗಳು ಏನೇನೋ ಉದ್ದೇಶಗಳು ಇರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ ಅಂದುಕೊಂಡಿದ್ದೇನೆ. ನೀವು ಯಾರು ಯಾರು ಏನು ಮಾಡುವಿರೋ ಗೊತ್ತಿಲ್ಲ. ನೀವು ಕೂಡ ನಿಮ್ಮ ಮೂಡು ಬಂದ ರೋಡು ಹಿಡಿದು ನಡೆಯೋದೇ ಸರಿ. ಹೇಳಲಿಕ್ಕೂ ಆಗಲ್ಲ ತಾಳಲಿಕ್ಕೂ ಆಗಲ್ಲ ಅಂದರೆ ಅಕ್ಕ ಹೇಳಿದಂತೆ ಕಿಚ್ಚಿಲ್ಲದ ಬೆಂಕಿಯಲ್ಲಿ ಬೇಯುತ್ತಲೇ ಇರಬೇಕುತ್ತದೆ ಸತತ. ಅಷ್ಟೆ!

ಶಿವನೇ ಶಂಭುಲಿಂಗ!!

ರಾಬು (05-06-2025)


Monday, June 2, 2025

ಮನಸೂರೆಗೈದ ʻಮಹಾಬೆಳಗುʼ!

 

ಮನಸೂರೆಗೈದ ʻಮಹಾಬೆಳಗುʼ!

·        ಡಾ. ರಾಜೇಂದ್ರ ಬುರಡಿಕಟ್ಟಿ

ಟಿ.ವಿ, ಮೊಬೈಲುಗಳ ಹಿಂದೆ ಬಿದ್ದಿರುವ ಜನ ಪುಸ್ತಕ ಓದು ರಂಗಭೂಮಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ ಎಂಬುದು  ಈಗ ನಿತ್ಯ ಕೇಳಿಬರುತ್ತಿರುವ ಕ್ಲೀಷೆಯಾದ ಮಾತು. ಆದರೆ ಒಂದು ಒಳ್ಳೆಯ ಪುಸ್ತಕ ಪ್ರಕಟವಾದಾಗ ಅದರ ಪ್ರತಿಗಳು ಖರ್ಚಾಗುವ ರೀತಿ ಒಂದು ಒಳ್ಳೆಯ ನಾಟಕ ಪ್ರದರ್ಶನಗೊಂಡಾಗ ಅದನ್ನು ಮುಗಿಬಿದ್ದು ನೋಡುವ ಜನರ ಸಂಖ್ಯೆ ಒಂದೊಂದು ಸಲ ಈ ಹೇಳಿಕೆ ತಪ್ಪು ಎನ್ನುವಂತೆ ಮಾಡುತ್ತವೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಶಿವಮೊಗ್ಗದ ರಂಗಮಂದಿರದಲ್ಲಿ ನಡೆದ ʻಮಹಾಬೆಳಗುʼ ನಾಟಕ.

ಶಿವಮೊಗ್ಗದ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ತಮ್ಮ ವೇದಿಕೆಯ ಬೆಳ್ಳಿಹಬ್ಬದ ಅಂಗವಾಗಿ ಅಭಿನಯಿಸಿದ ಈ ನಾಟಕ ಸಿರಿಗೆರೆ ತರಳಬಾಳು ಪೀಠದ ಹಿರಿಯ ಜಗದ್ಗುರು ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಡಾ ರಾಜಶೇಖರ ಹನಮಲಿ ಅವರು ರಚಿಸಿರುವಂಥದ್ದು. ಈ ನಾಟಕವನ್ನು ರಂಗಕ್ಕೆ ವಿನ್ಯಾಸಗೊಳಿಸಿ ಅದರ ನಿರ್ದೇಶನವನ್ನು ಮಾಡಿದವರು ಖ್ಯಾತ ರಂಗಭೂಮಿ ಕಲಾವಿದರೂ ನಾಟಕ ನಿರ್ದೇಶಕ ದಂಪತಿಗಳೂ ಆದ ಶ್ರೀ ವೈ. ಡಿ ಬಾದಾಮಿ ಮತ್ತು ಮಂಜುಳಾ ಬಾದಾಮಿ. 

1940ರಲ್ಲಿ ಸಿರಿಗೆರೆ ತರಳಬಾಳು ಪೀಠದ ಇಪ್ಪತ್ತನೆಯ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ ಸ್ವಾಮಿಗಳು ತಮ್ಮ ಪೀಠಾಧ್ಯಕ್ಷರ ಸ್ಥಾನವನ್ನು ʼಅಧಿಕಾರʼ ವಾಗಿ ಪರಿಗಣಿಸದೆ ʼಜವಾಬ್ದಾರಿʼಯಾಗಿ ಪರಿಗಣಿಸಿ ಆ ಪೀಠಕ್ಕೊಂದು ಘನತೆ ತಂದವರು. ಅವರು ತಮ್ಮ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ತಮ್ಮ ಈ ʼಜವಾಬ್ದಾರಿʼಯ ಅವಧಿಯಲ್ಲಿ ಮಾಡಿದ ಕಾರ್ಯವು ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು. ಬಡತನ, ಅನಕ್ಷರತೆ, ಅಜ್ಞಾನ ಮೂಢನಂಬಿಕೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಮ್ಮ ಸಮಾಜದ ಜನ ನರಳುತ್ತಿರುವಾಗ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಿ ಅವರು ಇವನ್ನು ತೊಡೆದುಹಾಕಲು ಅನೇಕ ಅಡೆತಡೆಗಳ ನಡುವೆಯೂ ಇಟ್ಟ ಆರಂಭಿಕ ಹೆಜ್ಜೆಗಳು ಈ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರವಾದ ಅಡಿಗಲ್ಲುಗಳನ್ನೇ ಹಾಕಿದವು. ಅವರ ಈ ಬಗೆಯ ಕೆಲಸಗಳು ಆ ಪೀಠದ ಮುಂದಿನ ಗುರುಗಳಿಗೆ  ಮಾತ್ರವಲ್ಲ ಯಾವುದೇ ಪೀಠದ ಪೀಠಾಧಿಪತಿಗಳಿಗೆ ಮಾದರಿ ಆಗುವಂಥವು.

ಶಿವಕುಮಾರ ಸ್ವಾಮಿಗಳು ಶಾಲೆ-ಕಾಲೇಜುಗಳನ್ನು ಕಟ್ಟುವಾಗ ಸ್ವತಃ ತಮ್ಮ ಶಿಷ್ಯಬಳಗ ಮತ್ತು ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡುತ್ತಿದ್ದಂಥವರು. ಅವರು ನಿಜಾರ್ಥದಲ್ಲಿ ʻ

ವಿದ್ಯಾವರ್ಧಕʼ ರಾಗಿದ್ದರೇ ಹೊರತು ಇಂದಿನ ಕೆಲವು ಮಠಾಧಿಪತಿಗಳಂತೆ, ʼವಿದ್ಯಾವರ್ತಕʼರಾಗಿರಲಿಲ್ಲ. ಸ್ವಭಾವತಃ ಒಂದಿಷ್ಟು ಕೋಪಿಷ್ಠರೆಂದು ಹೆಸರಾಗಿದ್ದ ಅವರು ಅಷ್ಟೇ ಮೃದುಸ್ವಭಾವದವರು ತಾಯಿಯ ಅಂತಃಕರಣವನ್ನು ಹೊಂದಿದವರೂ ಆಗಿದ್ದರೆಂದು ಅವರ ಹತ್ತಿರದ ಒಡನಾಟ ಇದ್ದವರು ಹೇಳುವುದಿದೆ. ಯಾರು ಬಯಸದಿದ್ದರೂ ತಮ್ಮ ನಿವೃತ್ತಿಯನ್ನು ತಾವೇ ಘೋಷಿಸಿಕೊಂಡು ಅದರಂತೆ ಪೀಠತ್ಯಾಗ ಮಾಡಿದ ಅಪರೂಪರಲ್ಲಿ ಅಪರೂಪದ ಸಂತ ಅವರು!

ಇಂತಹ ಒಬ್ಬ ಮಹಾ ಸಂತನ ಜೀವನವನ್ನು ನಾಟಕರೂಪದಲ್ಲಿ ಆಡಿ ತೋರಿಸಿ ಅವರ ಜೀವನ ಮತ್ತು ಸಾಧನೆಯನ್ನು ಇಂದಿನ ಪೀಳಿಗೆಗೆ ಕಣ್ಣಿಗೆ ಕಟ್ಟುವಂತೆ ಮಾಡಿ ಅಪಾರ ಜನಮನ್ನಣೆಯನ್ನು ಈ ಈ ಸೃಷ್ಟಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಪಡೆದರು. ಸುಮಾರು ಇಪ್ಪತ್ತೈದು ಮೂವತ್ತು ಜನ ಕಲಾವಿದರನ್ನು ಒಳಗೊಂಡ ಈ ಕಲಾತಂಡದ ಸದಸ್ಯರಲ್ಲಿ ಯಾರೊಬ್ಬರೂ ವೃತ್ತಿಕಲಾವಿದರಾಗಿರದೇ ಎಲ್ಲರೂ ಹವ್ಯಾಸಿ ಕಲಾವಿದರಾಗಿದ್ದದ್ದು ವಿಶೇಷ. ಅವರಲ್ಲಿ ಬಹಳಷ್ಟು ಜನ ಕಾಲೇಜು ಉಪನ್ಯಾಸಕರು, ವಕೀಲರು, ಮತ್ತು ವಿವಿಧ ಇಲಾಖೆಗಳ ನೌಕರರೂ ಇದ್ದು ಅವರೆಲ್ಲರೂ ತಮ್ಮ ಬಿಡುವಿಲ್ಲದ ವೃತ್ತಿಬದುಕಿನ ಒತ್ತಡಗಳ ನಡುವೆಯೂ ಅತ್ಯಂತ ಶ್ರದ್ಧೆಯಿಂದ ಈ ನಾಟಕದ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದರಿಂದಲೇ ಈ ನಾಟಕ ಅಷ್ಟೊಂದು ಯಶಸ್ವಿಯಾಗಲು ಕಾರಣವಾಯಿತು.

ಶಿವಕುಮಾರ ಮಹಾಸ್ವಾಮಿಗಳ ಪಾತ್ರವಹಿಸಿದ್ದ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ ಅವರ ಅಭಿನಯವಂತೂ ಸ್ವತಃ ಶಿವಕುಮಾರ ಸ್ವಾಮಿಗಳೇ ನಮ್ಮೆದುರಿಗಿದ್ದಾರೆ ಎಂಬ ಭಾವನೆಯನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿತು! ಶಿವಕುಮಾರ ಸ್ವಾಮಿಗಳು ಜಾತಿಭೇದಕ್ಕೆ ತೋರುತ್ತಿದ್ದ ಸಾತ್ವಿಕ ಕೋಪ, ರಾಜಕೀಯ ವ್ಯಕ್ತಿಗಳನ್ನು ದಭಾಯಿಸುವಲ್ಲಿ ಅವರಿಗಿದ್ದ ತಾಕತ್ತು, ಅಜ್ಞಾನ ಮೂಢನಂಬಿಕೆಗಳನ್ನು ಕಂಡಾಗ ಉರಿದುಬೀಳುತ್ತಿದ್ದ ರೀತಿ, ಒಳ್ಳೆಯ ಕೆಲಸಗಳನ್ನು ಕಂಡು ಸಂತೋಷದಿಂದ ʼಭೇಷ್‌ʼ ಎಂದು ಹುರುದುಂಬಿಸುತ್ತಿದ್ದ ಪರಿ, ಕಲೆ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅವರೇ ಮುಂದೆ ನಿಂತು ನಾಟಕಗಳನ್ನು ಬರೆದು ಪ್ರಯೋಗ ಮಾಡಿಸುತ್ತಿದ್ದ ಬಗೆ  ಹೀಗೆ ಅವರ ಸಂಕೀರ್ಣ ವ್ಯಕ್ತಿತ್ವವನ್ನು ತಮ್ಮ ಗಂಭೀರ ಮತ್ತು ಹಾಸ್ಯಗಳ ಸಮ್ಮಿಶ್ರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ಅವರ ಕಲಾನೈಪುಣ್ಯದ ಜೊತೆಗೆ ಅವರ ಅಜಾನುಬಾಹು ದೈಹಿಕ ವ್ಯಕ್ತಿತ್ವ ಕೂಡ ಈ ಪಾತ್ರ ಜನಮಾನಸದಲ್ಲಿ ಅಚ್ಚೊತ್ತಲು ವಿಶೇಷ ಕಾರಣವಾಯಿತು. ಶ್ರೀಗಳ ವಿವಿಧ ವಯಸ್ಸಿನ ದೈಹಿಕ ಚಲನೆಗಳನ್ನು ತೋರಲು ಅವರು ಮಾಡಿಕೊಂಡ ಸೂಕ್ಷ್ಮ ವ್ಯತ್ಯಾಸಗಳೂ ಅವರ ಅಭಿನಯಕ್ಕೆ ವಿಶೇಷ ಮೆರಗು ನೀಡಿದವು.  ಸಮಾಜ ಮುಖಂಡರ ಪಾತ್ರಗಳು, ತಮ್ಮ ಧರ್ಮದ ಜೊತೆಗೆ ʻಅನ್ಯʼ ಧರ್ಮಗಳನ್ನು ಗೌರವಿಸುವ ಶ್ರೀಗಳ ಮಹತ್ವದ ಆಲೋಚನೆಯನ್ನು ತೋರಿಸಲಿಕ್ಕೆಂದು ರೂಪಿಸಲ್ಪಟ್ಟ ಹಸನ್‌ ಮತ್ತು ರಜಿಯಾ ಪಾತ್ರಗಳು ಶ್ರೀಗಳ ಆಧ್ಯಾತ್ಮಿಕ ಜೀವನಕ್ಕಿಂತ ಸಾಮಾಜಿಕ ಜೀವನದ ಮಹತ್ವವನ್ನು ತೋರಿಸುವಲ್ಲಿ ಯಶಸ್ವಿಯಾದವು ಮಾತ್ರವಲ್ಲ ಧರ್ಮ ಮತ್ತು ಆಧ್ಯಾತ್ಮದಂತಹ ಗಂಭೀರ ವಿಷಯವಸ್ತುವಿಗೆ ಹಾಸ್ಯದ ಮೆರಗನು ನೀಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಈ ಪಾತ್ರಗಳನ್ನು ನಿರ್ವಹಿಸಿದ ಎಫ್‌ ಕುಟ್ರಿ, ತಿಪ್ಪಣ್ಣ, ಸುಧೀಂದ್ರರಾವ್‌, ಶ್ರೀಮತಿ ಲಕ್ಷ್ಮಿ,  ಮುಂತಾದವರ ಅಭಿನಯಕೂಡ ಬಹಳಷ್ಟು ಅದ್ಭುತವಾಗಿ ಮೂಡಿಬಂದಿತು.

ಸಾಮಾಜಿಕ ಸಮಸ್ಯೆಗಳು, ಹಾಸ್ಯಕಥೆಗಳು ಇವುಗಳನ್ನು ಆಧರಿಸಿದ ನಾಟಕಗಳಿಗೆ ಹೋಲಿಸಿದರೆ ವ್ಯಕ್ತಿಕೇಂದ್ರಿತವಾದ ಸಂತರು ಅಥವಾ ಸಮಾಜ ಸೇವಕರ ಜೀವನಾಧಾರಿತ ನಾಟಕಗಳಿಗೆ ಜನ ತೋರಿಸುವ ಉತ್ಸಾಹ ಕಡಿಮೆಯೇ. ಆದರೆ ಈ ನಾಟಕಕ್ಕೆ ಜನತೋರಿದ ಉತ್ಸಾಹ ಭಿನ್ನವಾಗಿಯೇ ಇತ್ತು. ಈ ಜನವರ್ಗದಲ್ಲಿ ಯಾವುದೋ ಒಂದು ಸಮಾಜ ಅಥವಾ ಕೋಮಿಗೆ ಸೇರಿದ ಜನರಿರದೇ ಎಲ್ಲ ವರ್ಗಗಳ ಜನರೂ ಇದ್ದರು ಎಂಬುದು ಗಮನಿಸಬೇಕಾದ ಅಂಶ. ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಂಡ ಈ ನಾಟಕ ತುಂಬಿದ ರಂಗಮಂದಿರದ ಜನರೆಲ್ಲರನ್ನೂ ತನ್ನಕಥಾಶಕ್ತಿ, ಕಲಾವಿದರ ಶ್ರದ್ಧೆಗಳಿಂದ ಹಿಡಿದಿಟ್ಟುಕೊಳ್ಳುವಲ್ಲಿ ಇದನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ ಬಾದಾಮಿ ದಂಪತಿಗಳ ಪರಿಶ್ರಮವಂತೂ ಬೆನ್ನಿಗೆ ಇದ್ದೇ ಇದೆ. ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿವಮೊಗ್ಗದ ಯಾವುದೇ ನಾಟಕಗಳಿಗೆ ಬೆಳಕು ತಜ್ಞರಾಗಿ ಕೆಲಸಮಾಡುವ ಹರಿಗೆ ಗೋಪಾಲಸ್ವಾಮಿ ಅವರ ಚಾತುರ್ಯ, ವಿವಿಧ ಸನ್ನಿವೇಶಗಳಿಗೆ ಮಾಡಿದ್ದ ವಚನಗಳ ಗಾಯನ ಸಂಯೋಜನೆ ಕೂಡ ತಮ್ಮದೇ ಆದ ಕೊಡುಗೆ ನೀಡಿದವು. 


ಶಿವಮೊಗ್ಗದ ರಂಗತಂಡಗಳಲ್ಲಯೇ ಕಡಿಮೆ ಸಂಖ್ಯೆಯ ನಾಟಕಗಳನ್ನು ಕೊಟ್ಟದ್ದು ಈ ಸೃಷ್ಟಿ ಸಾಂಸ್ಕೃತಿಕ ವೇದಿಕೆಯಾದರೂ ಅದು ಪ್ರಸ್ತುತ ಪಡಿಸಿದ ನಾಟಕಗಳಲ್ಲಿ ಬಹುಪಾಲು ನಾಟಕಗಳು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲಿಯೂ ಹೆಸರು ಮಾಡಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿವೆ. ನಾಟಕಕ್ಕೆ ಶುಭ ಹಾರೈಸಲು ಬಂದಿದ್ದ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟಂತೆ ಇದು ʻಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟುವ ಕೆಲಸʼವೇ ಸರಿ. ಅಂತಹ ಪ್ರತಿಭಾವಂತ ಮತ್ತು ಶ್ರದ್ಧಾವಂತ ಕಲಾವಿದರ ಕಾರಣಕ್ಕಾಗಿಯೇ ಈ ನಾಟಕಕೂಡ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಇದಕ್ಕಾಗಿ ಈ ತಂಡದ ಅ‍ಧ್ಯಕ್ಷರಾದ ಲೇಖಕ ಕಲೀಂ ಉಲ್ಲಾ ಅವರನ್ನು ನಾವು ಅಭಿನಂದಿಸಬೇಕು. ಇಂತಹ ನಾಟಕಗಳು ಹೆಚ್ಚು ಹೆಚ್ಚು ರಚನೆಯಾಗಿ ರಾಜ್ಯದ ಬೇರೆ ಬೇರೆ ಕಡೆ ಪ್ರದರ್ಶನಗೊಂಡು ದಿನದಿನಕ್ಕೂ ಕುಸಿಯುತ್ತಿರುವ ಸಮಾಜಸೇವಾಗುಣವನ್ನು ಮೇಲೆತ್ತುವಂತಹ ಕೆಲಸವನ್ನು ಮಾಡಲಿ ಎಂದು ಆಶಿಸೋಣ.

*****

02-06-2025