Monday, June 19, 2017

ಮುಚ್ಚುತ್ತಿರುವ ಶಾಲೆಗಳು ಕಾರಣ ಯಾರು? ಪರಿಹಾರ ಏನು?

ಬಾಲಕೃಷ್ಣ ಮತ್ತು ಪೂತನಿಯ ಮೊಲೆಹಾಲು
`ಶಾಲೆಯಲ್ಲಿರುವ ಮಕ್ಕಳು ಕಡಿಮೆಯಾದರೆ ಅದಕ್ಕೆ ಅಲ್ಲಿನ ಶಿಕ್ಷಕರನ್ನೇ ಹೊಣೆಮಾಡಲಾಗುತ್ತದೆ’ ಎಂದು ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ತೇರದಾಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಕರ್ನಾಟಕದ ಸಾರ್ವಜನಿಕ ಶಿಕ್ಷಣವು ಇತರೆ ರಾಜ್ಯಗಳ ಹಾಗೆಯೇ ಅತ್ಯಂತ ಗಂಭೀರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂಕೀರ್ಣ ಸಂದರ್ಭವೊಂದರಲ್ಲಿ ಅದರ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಸದುದ್ದೇಶದಿಂದಲೇ ಹೇಳಿರಬಹುದೆಂದು ಭಾವಿಸಬಹುದಾದ ಅವರ ಈ ಮಾತು ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಅವರ ಕಾಳಜಿಯನ್ನು ತೋರಿಸುತ್ತದೆಯಾದರೂ ಶಾಲೆಗಳ ದುಸ್ಥಿತಿಗೆ ಕಾರಣವಾದ ಬಹುಮುಖ್ಯ ಅಂಶಗಳನ್ನು ಅವರು ಸರಿಯಾಗಿ ಗ್ರಹಿಸಿಲ್ಲವೇನೋ ಎಂದು ಭಾವಿಸುವಂತೆ ಮಾಡಿದೆ.  ನಮ್ಮ ಶಿಕ್ಷಣ ಇಂದು ಹಿಡಿಯಬಾರದ ಹಾದಿ ಹಿಡಿದು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಿಕ್ಕಟ್ಟುಗಳಿಗೆ ಕಾರಣಗಳೇನು ಎಂಬುದನ್ನು ತಲಸ್ಪರ್ಶಿಯಾಗಿ ಅಧ್ಯಯನಮಾಡಿ ಸೂಕ್ತಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮ ಸಮಾಜ ಅದಕ್ಕೆ ಅಪಾರವಾದ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದು ಕೂಡ ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ತೃಪ್ತಿಕರವಾಗಿಲ್ಲವೆಂದು ಹೇಳದೇ ಗತ್ಯಂತರವಿಲ್ಲ.


ಒಂದು ಊರಿನ ಸರ್ಕಾರಿ ಶಾಲೆ ಮುಚ್ಚುವುದು ಅಂದರೆ ಅದು ಕೇವಲ ಪಾಠಮಾಡುವ ಒಂದು ಕೆಲಸ ಅಲ್ಲಿ ನಿಂತಂತೆ ಅಲ್ಲ. ಬದಲಾಗಿ ಒಂದು ಊರಿನ ಸಮಾಜಕಟ್ಟುವ ಕೆಲಸವೇ ನಿಂತಂತೆ. ಈ ಮಹತ್ವವನ್ನು ನಾವು ಸರಿಯಾಗಿ ಗ್ರಹಿಸಲು ಸಾಧ್ಯವಾಗದಿದ್ದುದೋ ಅಥವಾ ಅದು ಸಾಧ್ಯವಾಗಿಯೂ ನಮ್ಮ ಪ್ರಲೋಭನೆಗಳ ಕಾರಣವಾಗಿಯೋ ಅಸಹಾಯಕತೆಯಿಂದಲೋ ನಾವು ಸರ್ಕಾರಿ ಶಾಲೆಗಳ ಸಬಲೀಕರಣವನ್ನು ಆದ್ಯತೆಯ ಅಂಶವಾಗಿ ಸ್ವೀಕರಿಸಿಲ್ಲವೆಂಬುದು ಸತ್ಯ. ಸರ್ಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಈ ಕಾರಣದಿಂದ ಅನೇಕ ಶಾಲೆಗಳು ಮುಚ್ಚಿರುವಂಥದ್ದು ಮತ್ತು ಇನ್ನೂ ಅನೇಕ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತಿರುವುದು ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಅರಿತ ಯಾರಿಗಾದರೂ ನೋವನ್ನುಂಟುಮಾಡುವ ಸಂಗತಿಯೇ ಆಗಿದೆ. ಆ ಶಾಲೆಗಳು ಹಿಂದಿನ ಕಾಲದಲ್ಲಿದ್ದಂತೆ ಮಕ್ಕಳಿಂದ ತುಂಬಿತುಳುಕಬೇಕು ಎಂಬ ಇಂತಹ ವ್ಯಕ್ತಿಗಳೆಲ್ಲರ ಬಹುದಿನಗಳ ಕನಸು ನನಸಗಾದ ಕನಸಾಗಿಯೇ ಇನ್ನೂ ಉಳಿದುಕೊಂಡೇ ಬರುತ್ತಿದೆ.
ಈ ಶಾಲೆಗಳು ಹೀಗೆ ದುಸ್ಥಿತಿಗೆ ತಲುಪಲು ಕಾರಣಗಳೇನು ಎಂಬುದನ್ನು ಕಂಡುಹಿಡಿಯುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ಎಷ್ಟರಮಟ್ಟಿಗೆ ಆಗಿವೆಯೋ ಆದರೆ ವೈಯಕ್ತಿಕ ಹಂತದಲ್ಲಿ ಮತ್ತು ಸಾಂಘಿಕವಾಗಿ ಅನೇಕ ಪ್ರಾಮಾಣಿಕ ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆದಿವೆ. ಅನೇಕ ಚಿಕ್ಕದೊಡ್ಡ ಅಧ್ಯಯನಗಳು ನಡೆದು ವರದಿಗಳು ಬೆಳಕುಕಂಡಿವೆ. ಹೀಗೆ ಬಂದ ವರದಿಗಳಲ್ಲಿ ಯಾವೊಂದು ವರದಿಯೂ `ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಅಲ್ಲಿನ ಶಿಕ್ಷಕರ ಕಳೆಪೆ ಬೋಧನೆಯೇ ಕಾರಣ’ ಎಂದು ಹೇಳಿದಂತಿಲ್ಲ. ಇದರ ಬದಲು ಅನೇಕ ವರದಿಗಳು `ಶಾಲೆಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿದ್ದರೂ, ಅನೇಕ ಸೌಲಭ್ಯಗಳು ಇದ್ದರೂ ಉತ್ತಮವಾಗಿ ಬೋಧಿಸುವ ಶಿಕ್ಷಕರನ್ನು ಹೊಂದಿದ್ದರೂ ಮಕ್ಕಳಿಲ್ಲದೆ ಸೊರಗುತ್ತಿವೆ’ ಎಂಬರ್ಥದ ಮಾತುಗಳನ್ನು ಹೇಳಿವೆ. ಸರ್ಕಾರದ ಬಳಿಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರೇ ಕಾರಣವೆಂದು ನಿರೂಪಿಸುವಷ್ಟು ಆಧಾರಗಳು ಇವೆಯೆಂದು ಅನ್ನಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಅಂಶ ಮತ್ತು ಆಧಾರಗಳ ಮೇಲೆ  ಮತ್ತು ಹೇಗೆ ಸಚಿವರು ಶಿಕ್ಷಕರನ್ನು ಇಂತಹದ್ದಕ್ಕೆಲ್ಲ ಹೊಣೆಗಾರರನ್ನಾಗಿ ಮಾಡುತ್ತಾರೋ ತಿಳಿಯದು!
ಸರ್ಕಾರಿ ಶಾಲೆಗಳ ಅಧೋಗತಿಗೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚುವ ಕೆಲಸ ಬಹುತೇಕ ಮುಗಿದಿದೆ. ಉಳಿದಿರುವುದು ಈ ಕಾರಣಗಳಿಗೆ ಪರಿಹಾರವನ್ನು ಕಂಡುಕೊಂಡುಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕೆಲವು `ಕಠಿಣ’ ಕ್ರಮಗಳು ಮಾತ್ರ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವೈಜ್ಞಾನಿಕವಾಗಿ ಖಾಸಗೀ ಶಾಲೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತಿರುವುದು, ಶಿಕ್ಷಣ ಹಕ್ಕು ಕಾಯ್ದೆಯನ್ನು ಅದರ ಅನೇಕ ಒಳ್ಳೆಯ ಅಂಶಗಳನ್ನು ಅಲಕ್ಷಿಸಿ ಕೇವಲ ಸರ್ಕಾರಿ ಶಾಲೆಯ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವುದಕ್ಕಾಗಿ ಬಳಸಿಕೊಳ್ಳುತ್ತಿರುವುದು, ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ರಾಜಾರೋಷವಾಗಿ (ಕದ್ದುಮುಚ್ಚಿ ಅಲ್ಲ) ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವ ಖಾಸಗೀ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಇಂತಹ ಇಂಗ್ಲಿಷ್‍ ಮಾಧ್ಯಮದ ಬಗ್ಗೆ ಪಾಲಕರಲ್ಲಿರುವ ಅರ್ಥರಹಿತ ಮೋಹ, ಇವು ಮುಖ್ಯವಾಗಿ ಸರ್ಕಾರಿ ಶಾಲೆಗಳ ಕತ್ತು ಹಿಚುಕುತ್ತಿರುವ ಬಹುಮುಖ್ಯವಾದ ಅಂಶಗಳಾಗಿವೆ ಎಂಬುದು ಬಹುತೇಕ ಅಧ್ಯಯನ ವರದಿಗಳ ಸಾರಾಂಶ. ಇತ್ತೀಚೆಗೆ ನಡೆದ ಅಧ್ಯಯನ ವರದಿಯೊಂದರ ಪ್ರಕಾರ ಕಳೆದ ಹತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಸುಮಾರು ಹತ್ತು ಸಾವಿರ ಶಾಲೆಗಳು ಮುಚ್ಚಿದ್ದರೆ ಅದಕ್ಕೆ ಸರಿಸಮನಾದ ಹತ್ತು ಸಾವಿರ ಶಾಲೆಗಳು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಖಾಸಗೀ ಕ್ಷೇತ್ರದಲ್ಲಿ ತೆರೆದಿವೆಯಂತೆ!!
ಇನ್ನೊಂದು ಅಂಶವೆಂದರೆ ಇತ್ತೀಚೆಗೆ ಆರ್.ಟಿ.ಇ.ಯನ್ನು `ಸರ್ಕಾರಿ ಶಾಲೆಗಳ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವ ಮತ್ತು ಆ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ’ ಎಂದು ಹಿರಿಯ ರಾಜಕಾರಣಿಯೇ ಒಬ್ಬರು ಮಾಡಿದ ಟೀಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಬಹುತೇಕ ಎಲ್ಲರೂ ಗಮನಿಸಿದ್ದಾರೆ. ಇಂಥದ್ದಕ್ಕೆಲ್ಲ ಯಾರು ಕಾರಣ? ಈ ಅಂಶಗಳೆಲ್ಲ ಶಿಕ್ಷಕರ ಕಾರ್ಯವ್ಯಾಪ್ತಿ ಮತ್ತು ನಿಯಂತ್ರಣದ ಹೊರಗಿರುವಾಗ ಅವರೇನು ಮಾಡಲು ಸಾಧ್ಯವಿದೆ? ಈ ಬಗ್ಗೆ ನಿಯಮ ರೂಪಿಸುವವರು ಮತ್ತು ಅವನ್ನು ಅನುಷ್ಠಾನಕ್ಕೆ  ತರಬೇಕಾದ ಹೊಣೆಗಾರಿಕೆಯನ್ನು ಹೊತ್ತಿರುವ ಉನ್ನತ ಮಟ್ಟದ ಅಧಿಕಾರಿಗಳು ಈ ಬಗ್ಗೆ ಮಾಡಬೇಕಾದದ್ದು ಬಹಳಷ್ಟಿದೆ ಅನ್ನಿಸುವುದಿಲ್ಲವೇ? ಇದಕ್ಕೆ ಯಾರೆಲ್ಲ ಕಾರಣ ಎಂದು ಆಲೋಚಿಸುವಾಗ ನನಗೊಂದು ಘಟನೆ ನೆನಪಿಗೆ ಬರುತ್ತಿದೆ.
ದೂರದಿಂದ ಸಂಬಂಧಿಯೂ ಆಗಬೇಕಿದ್ದ ನನ್ನ ಸ್ನೇಹಿತನೊಬ್ಬ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದ. ಅವನು ಅಧಿಕಾರಿಯಾಗಿರುವ ವೇಳೆಯಲ್ಲಿಯೇ ಖಾಸಗೀ ಶಾಲೆಯೊಂದು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವುದು ಯಾಕೋ ಏನೋ ಸುದ್ಧಿಯಾಗಿ ವಿವಾದ ಉಂಟಾಯಿತು. ಆಗ ಅವನೂ ಸೇರಿದಂತೆ ಅನೇಕ ಅಧಿಕಾರಿಗಳು `ಸೂಕ್ತಕ್ರಮ’ ತೆಗೆದುಕೊಳ್ಳಲು ಆ ಶಾಲೆಗೆ ಭೇಟಿ ನೀಡುವುದು, `ವಿಚಾರಣೆ ಮಾಡುವುದು’ ಇತ್ಯಾದಿಗಳೆಲ್ಲ ನಡೆಯುತ್ತಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಬರುತ್ತಿತ್ತು. ಇದು ನನಗೆ ಆಶ್ಚರ್ಯ ಎನಿಸಿ ಅವನಿಗೆ ಫೋನ್ ಮಾಡಿ, “ಪತ್ರಿಕೆಯಲ್ಲಿ ಬರುವವರೆಗೂ ನಿಮಗ್ಯಾರಿಗೂ ಅವರು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಮಾಡುವ ವಿಚಾರ ಗೊತ್ತಿರಲಿಲ್ಲವೇ?” ಎಂದು ಕೇಳಿದೆ. ಅವನು ಏಕೋ ಗಂಟಲು ಕಟ್ಟಿದಂತೆ ಹಿಡಿದು ಹಿಡಿದು ಹಾರಿಕೆಯ ಎರಡು ಮಾತುಗಳನ್ನು ಆಡಿ, “ಒಂದು ಅರ್ಜೆಂಟ್ ಮೀಟಿಂಗ್‍ಗೆ ಹೊರಟಿದ್ದೇನೆ, ಆಮೇಲೆ ಫೋನ್ ಮಾಡುತ್ತೇನೆ” ಎಂದು ಮಾತು ಮುಗಿಸಿದ.
ನಾನು ಅವನನ್ನು ಹಾಗೆ ಕೇಳಲು ಕಾರಣವೇನೆಂದರೆ ವಿವಾದಕ್ಕೆ ಗುರಿಯಾದ ಖಾಸಗೀ ಶಾಲೆಯು ಯಾರೋ ನಕ್ಸಲೀಯರೋ ಇನ್ಯಾರೋ ನಡೆಸುತ್ತಿದ್ದ ಯಾರಿಗೂ ಗೊತ್ತಾಗದ ಯಾವುದೋ ಕಾಡಿನ ಮಧ್ಯದ ಅಜ್ಞಾನ ಸ್ಥಳದಲ್ಲಿ ಇರುವಂಥದ್ದಾಗಿರಲಿಲ್ಲ. ಬದಲಾಗಿ ಅವನು ಮುಖ್ಯಸ್ಥನಾಗಿರುವ ಜಿಲ್ಲಾ ಶಿಕ್ಷಣ ಕಛೇರಿಗೆ ಹೋಗುವ ಹೆದ್ದಾರಿಯಲ್ಲಿ ಅವನ ಕಛೇರಿಯ ಹತ್ತಿರವೇ ಇತ್ತು. ಏನಿಲ್ಲವೆಂದರೂ ಆ ಕಛೇರಿಯ ವಿವಿಧ ಹಂತಹ ಹತ್ತಿಪ್ಪತ್ತು ಅಧಿಕಾರಿಗಳಾದರೂ ದಿನಕ್ಕೆ ಎರಡು ಮೂರು ಬಾರಿಯಾದರೂ ಆ ಶಾಲೆಯ ಮುಂದೆಯೇ ಹೋಗುವುದೂ ಬರುವುದೂ ಮಾಡಬೇಕಾಗಿತ್ತು. ಹೀಗಿದ್ದೂ ಆ ಶಾಲೆಯಲ್ಲಿ ಅಕ್ರಮವಾಗಿ ಇಂಗ್ಲಿಷ್ ಬೋಧಿಸುತ್ತಿದ್ದುದು ಇವರಾರಿಗೂ ತಿಳಿಯದೇ ಉಳಿದುಕೊಂಡದ್ದು ಹೇಗೆ ಎಂಬುದು ನನ್ನ ಆಶ್ಚರ್ಯಕ್ಕೆ ಕಾರಣವಾಗಿತ್ತು! ಆಮೇಲೆ ಫೋನ್ ಮಾಡುತ್ತೇನೆ ಎಂದ ಆ ನನ್ನ ಮಿತ್ರ ನನಗೆ ಮರಳಿ ಫೋನ್ ಮಾಡಲಿಲ್ಲ. ಕೆಲವು ದಿನಗಳು ಕಾಯ್ದು ನಾನೇ ಫೋನ್ ಮಾಡೋಣ ಎಂದು ಒಂದು ದಿನ ಫೋನ್ ಎತ್ತಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಇದನ್ನು ತಿಳಿದ ನನ್ನ ಹೆಂಡತಿ ಹೇಳಿದಳು; “ಅವನ ಮಗಳೂ ಅದೇ ಶಾಲೆಯಲ್ಲಿ ಎರಡನೇ  ಕ್ಲಾಸ್ನಲ್ಲಿ ಓದ್ತಿದಾಳೆ.” ಎಂದು. ನನಗೆ ಕೇಳುವುದು ಹೇಳುವುದೂ ಏನೂ ಇಲ್ಲವೆನಿಸಿ ಫೋನ್ ಮಾಡುವುದನ್ನು ಬಿಟ್ಟೆ.
ಇದು ಅಧಿಕಾರಶಾಹಿಯ ಮನೋಧೋರಣೆಯನ್ನು ತೋರಿಸಿದರೆ ಆಡಳಿತಶಾಹಿ ಇನ್ನೊಂದು ನಿಟ್ಟಿನಿಂದ ನಮ್ಮ ಸರ್ಕಾರಿ ಶಾಲೆಗಳ ಕುತ್ತಿಗೆ ಕೊಯ್ಯುತ್ತಿದೆ. ನಮ್ಮ ಬಹುತೇಕ ಜನಪ್ರತಿನಿಧಿಗಳು ಒಂದಲ್ಲ ಒಂದು ಶಿಕ್ಷಣ ಸಂಸ್ಥೆಯ ಒಡೆಯರಾಗಿರುವಂಥವರು! ಅವರಲ್ಲಿ ಬಹಳಷ್ಟು ಜನರಿಗೆ ಅದು ಒಂದು ಲಾಭಧಾಯಕ ಉದ್ಯಮ. ಅದನ್ನು ಅವರು ಹೇಗೆತಾನೆ ಬಿಟ್ಟುಕೊಡುತ್ತಾರೆ? ಹಿಂದೆ ಅನೇಕ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರು ಸೇವಾ ಮನೋಭಾವದಿಂದ ಸ್ಥಾಪಿಸಿದಂತಹ ಕೆಲವು `ವಿದ್ಯಾವರ್ಧಕ’ ಸಂಘಗಳು ಕೂಡ ಇಂದು ಲಾಭಕೋರರ ಕಪಿಮುಷ್ಠಿಯಲ್ಲಿ ಸಿಕ್ಕು `ವಿದ್ಯಾವರ್ತಕ’ ಸಂಘಗಳಾಗಿ ಮಾರ್ಪಟ್ಟು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಇನ್ನು ಮೂರನೆಯವರು ಕೆಲವು ಪಾಲಕರು. ಅವರ ಮನಸ್ಥಿತಿ ಹೇಗಿದೆ ಎಂದರೆ ತಮ್ಮ ಮಕ್ಕಳು ಒಂದು ಹಂತದವರೆಗೆ ಅಂಕಗಳನ್ನು ಸುರಿಸುವ ಮಿಶಿನ್ ಆಗಿರಬೇಕೆಂದು ಮತ್ತು ಆ ಹಂತ ಮುಗಿದ ತಕ್ಷಣ  ಈ ಅಂಕ ಸುರಿಸುವ ಮಿಶಿನ್‍ಗಳು ಹಣ ಸುರಿಸುವ ಎ.ಟಿ.ಎಂ.ಗಳಾಗಿ ಪರಿವರ್ತನೆ ಹೊಂದಬೇಕೆಂದು ಅವರು ಬಯಸುತ್ತಿದ್ದಾರೆ!
ಹೀಗೆ ಮುಂದಾಲೋಚನೆ ಇಲ್ಲದೆ ನಿಯಮ ರೂಪಿಸುವ ಜನಪ್ರತಿನಿಧಿಗಳು, ಇರುವ ಒಳ್ಳೆಯ ಕೆಲವು ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘನೆ ಮಾಡುವ ಶಿಕ್ಷಣ ವ್ಯಾಪಾರಿಗಳು, ಈ ನಿಯಮಗಳ ಉಲ್ಲಂಘನೆ ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ, ಸಾಧ್ಯವಾದರೆ `ಪಾಲುಪಡೆದು’ ಇಂತಹ ಉಲ್ಲಂಘನೆಗೆ ಪರೋಕ್ಷ ಬೆಂಬಲ ನೀಡುವ ಅಧಿಕಾರಿಗಳು, ಹಣದಹಿಂದೆ ಬಿದ್ದು ಹಪಹಪಿಸುತ್ತಿರುವ ಪಾಲಕರು ಈ ನಾಲ್ಕೂ ಶಿಕ್ಷಣದ ಬಹುಮುಖ್ಯ ಆಧಾರ ಸ್ಥಂಭಗಳನ್ನು ಗೆದ್ದಲ ಹುಳುವಾಗಿ ತಿನ್ನುತ್ತಿರುವುದು ಪರಿಸ್ಥಿತಿ ಹದಗೆಡಲು ಬಹುಮುಖ್ಯ ಕಾರಣ. ಈ ನಾಲ್ವರು ಮನಸ್ಸುಮಾಡಿದರೆ ಯಾವುದೇ ಕ್ಷಣದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಸ್ಥಿತಿಗೆ ಒಯ್ಯಬಹುದಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಎದುರಾಗಬಹುದಾದ ಪರಿಸ್ಥಿತಿ ಬರಬಹುದಾದ ಗಂಭೀರವಾದ ಅನಾಹುತಗಳ ಬಗ್ಗೆ ಅನೇಕ ತಜ್ಞರು, ಚಿಂತಕರು ನೀಡುತ್ತಿರುವ ಎಚ್ಚರಿಕೆಯ ಮಾತುಗಳನ್ನು ಕೇಳುವ ಸಮಯ-ಸಾವಧಾನಗಳು ಯಾರಿಗೂ ಇಲ್ಲವಾಗಿದೆ. ಸಮಸ್ಯೆ ಹೀಗೆ ಸಂಕೀರ್ಣವಾಗಿ ಬಲೆಹೆಣೆದುಕೊಂಡಿರುವಾಗ ನಿಯಮ ರೂಪಿಸುವವರೂ ಅಲ್ಲದ, ಉಲ್ಲಂಘಿಸುವವರೂ ಅಲ್ಲದ, ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಏನೂ ಅಧಿಕಾರವೂ ಇಲ್ಲದ ಶಾಲೆಯಲ್ಲಿರುವ ಶಿಕ್ಷಕರು ಏನುತಾನೆ ಮಾಡಬಲ್ಲರು? ಬಸವಣ್ಣವರ ವಚನವೊಂದರಲ್ಲಿ  ಬರುವ `ಬಡಪಶು ಪಂಕದಲ್ಲಿ ಬಿದ್ದಡೆ ಕಾಲಬಡಿವದಲ್ಲದೇ ಏನ ಮಾಡಬಲ್ಲದು?’ ಎಂಬಂತಾಗಿದೆ ಅವರ ಪರಿಸ್ಥಿತಿ.
ಅಂದಮಾತ್ರಕ್ಕೆ ಶಿಕ್ಷಕರ ಹೊಣೆಗಾರಿಕೆ ಇಲ್ಲವೇ ಇಲ್ಲ ಎಂದರ್ಥವಲ್ಲ. ಯಾವುದೇ ಒಂದು ಶಾಲೆ ಹೊರಗಿನಿಂದ ಯಾವುದೇ ಬಗೆಯ ಬೆಂಬಲ ಅದು ಎಷ್ಟೇ ಇದ್ದರೂ ಆ ಶಾಲೆಯ ಏಳಿಗೆಗಾಗಿ  ಒಳಗಿರುವ ಶಿಕ್ಷಕರ ಹೃದಯ ಮಿಡಿಯದೇ ಹೋದರೆ ಆ ಶಾಲೆ ಏಳಿಗೆಯಾಗಲು ಸಾಧ್ಯವಿಲ್ಲ. ಹಳ್ಳಿಯೊಂದರಲ್ಲಿ ಶಿಕ್ಷಕರು ಮನಸ್ಸು ಮಾಡಿದರೆ ಈಗಲೂ ಅನೇಕ ಮಿತಿಗಳ ನಡುವೆಯೇ ಶಾಲೆಯೊಂದನ್ನು ಉನ್ನತಿಗೆ ತರಲು ಸಾಧ್ಯವಿದೆ ಎಂಬುದು ಸತ್ಯವಾದರೂ ಅದಕ್ಕೆ ತಮ್ಮವೇ ಆದ ಹತ್ತು ಹಲವು ಮಿತಿಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಮೊನ್ನೆ ಶಾಲಾ ಪ್ರಾರಂಭದ ದಿನಗಳ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ಸರ್ಕಾರಿ ಶಾಲೆಯೊಂದರ ಶಿಕ್ಷಕರು ಮಕ್ಕಳ ಕೈಯಲ್ಲಿ `ಪ್ಲೇ ಕಾರ್ಡ್’ ಹಿಡಿಸಿಕೊಂಡು ಊರಲ್ಲಿ `ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ’ ಎಂದು ಘೋಷಣೆ ಕೂಗಿಸುತ್ತಾ ಮೆರವಣಿಗೆ ಹೋಗಿದ್ದಾರೆ. ದಾರಿಯಲ್ಲೊಬ್ಬ ಅವರನ್ನು ನಿಲ್ಲಿಸಿ, `ನಿಮ್ಮ ಮಕ್ಕಳನ್ನು ಎಲ್ಲಿಗೆ ಕಳಿಸುತ್ತಿದ್ದೀರಿ ಹೇಳಿ. ನೀವೆಲ್ಲ ನಿಮ್ಮ ಮಕ್ಕಳನ್ನು ಖಾಸಗೀ ಶಾಲೆಗೆ ಸೇರಿಸಿಕೊಂಡು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಹೇಳಲಿಕ್ಕೆ ಬಂದಿದ್ದೀರಾ?” ಎಂದು ಜೋರುಮಾಡಿದ್ದಾನೆ. ಈ ಶಿಕ್ಷಕ-ಶಿಕ್ಷಕಿಯರಿಗೆ ಏನು ಹೇಳಬೇಕೆಂದು ತೋಚದೆ ಮೆರವಣಿಗೆಯನ್ನು ಅಲ್ಲಿಂದಲೇ ಹಿಂತಿರುಗಿಸಿ ಶಾಲೆಗೆ ಮರಳಿಬಂದಿದ್ದಾರೆ.
ಕಾನೂನಿಯ ಪ್ರಕಾರ ಈ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸಿ ಅವರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ಕೇವಲ ಕಾನೂನಿನ ಪ್ರಕಾರ ಸರಿಯಿರುವುದು ಸಾರ್ವತ್ರಿಕ ಶಿಕ್ಷಣವನ್ನು ಸುಧಾರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮೇಲಿನಿಂದ ವ್ಯವಸ್ಥೆ ಸರಿಯಾಗುತ್ತಾ ಬಂದರೆ ಇಂತಹ ಶಿಕ್ಷಕರೂ ತಮ್ಮ ಮನಸ್ಸನ್ನು ಬದಲಿಸಿಕೊಂಡು ತಾವಿರುವ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮನಸ್ಸುಮಾಡಬಹುದು. ಆ ಮೂಲಕ ಇತರೆ ಪಾಲಕರಲ್ಲೂ ಒಂದಿಷ್ಟು ಭರವಸೆಯನ್ನು ಮೂಡಿಸಬಹುದು. ಬಹುಶಃ ಇದಿಷ್ಟೇ ಇವರು ಮಾಡಬಹುದಾದ್ದು ಅನ್ನಿಸುತ್ತದೆ.
ಖಾಸಗೀ ಶಿಕ್ಷಣವೆಂಬ ಹೆಬ್ಬಾವು ಇಂದು ಸಾರ್ವಜನಿಕ ಶಿಕ್ಷಣವನ್ನು ಹಂತಹಂತವಾಗಿ ನುಂಗತೊಡಗಿದೆ. ನಮಗೆ ಇರುವ ಆಯ್ಕೆಗಳು ಎರಡೆ. ಒಂದು ಅದರ ಆಹಾರವಾಗಿ ಅಂತ್ಯವಾಗುವುದು. ಇನ್ನೊಂದು ಅದನ್ನು ಮೆಟ್ಟಿನಿಂತು ಅದನ್ನು ತುಳಿಯುವುದು. ಹೀಗಾಗಿ ಎಲ್ಲಿಯವರೆಗೆ ಖಾಸಗೀ ಶಿಕ್ಷಣದ ಮೇಲೆ ನಮಗೆ ನಿಯಂತ್ರಣ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಸಹಜಸ್ಥಿತಿಯಲ್ಲಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಖಾಸಗೀ ಶಾಲೆಗಳಿಗೆ ಸರಿಸಮಾನವಾಗಿ ಪೈಪೋಟಿ ಕೊಡುವಂತೆ ನಮ್ಮ ಸರ್ಕಾರಿ ಶಾಲೆಗಳನ್ನು ರೂಪಿಸುವುದು ವಾಸ್ತವದಲ್ಲಿ ಸುಲಭವಾದ ಸಂಗತಿಯಲ್ಲ. ಹೀಗಾಗಿ ಈ ದೇಶದ ಭಾವೀ ಪ್ರಜೆಗಳೆಲ್ಲರೂ ಯಾವುದೇ ಜಾತಿ-ಮತ-ಭಾಷೆ-ಆಸ್ತಿ-ಅಂತಸ್ತುಗಳ ತರತಮಗಳಿಲ್ಲದೆ ಅಕ್ಕಪಕ್ಕ ಕುಳಿತು ಸಮಾನವಾಗಿ ಕಲಿಯುವ `ಏಕರೂಪ ಶಿಕ್ಷಣ’ ವೊಂದೇ ಇದಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು.
 ಈ ರೀತಿಯ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ತಮ್ಮ ತಮ್ಮ ಪಾಲಿನ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದೊಂದೇ ನಾವು ಮಾಡಬಹುದಾದ ಮತ್ತು ಮಾಡಲೇಬೇಕಾದ ತುರ್ತು ಕಾರ್ಯವಾಗಿದೆ. ಈ ತುರ್ತು ಕಾರ್ಯ ನಿರ್ವಹಿಸುವಾಗ ನಾವು ಇಟ್ಟುಕೊಳ್ಳಲೇಬೇಕಾದ ಒಂದು ಎಚ್ಚರ ಏನೆಂದರೆ ಔಷಧಿ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಅದನ್ನು ನೀಡುವ ವೈದ್ಯ ಎಷ್ಟೇ ನಿಪುಣನಾಗಿದ್ದರೂ ಕಾಯಿಲೆ ಯಾವುದು ಎಂಬುದನ್ನು ಸರಿಯಾಗಿ ಪತ್ತೆಹಚ್ಚಿಕೊಳ್ಳುವಲ್ಲಿ ಎಡವಿ ಅದನ್ನು ಬಳಸುವುದರಿಂದ ಕಾಯಿಲೆ ವಾಸಿಯಾಗುವುದಕ್ಕಿಂತ ಅದು ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬುದು. ಅಂತಹ ಪ್ರಮಾದ ನಮ್ಮ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಆಗದಿರಲಿ. ಕೊನೆಯ ಮಾತು: ಭಾಗವತದಲ್ಲಿ ಒಂದು ಸಂದರ್ಭ ಬರುತ್ತದೆ. ಪೂತನಿ ಎಂಬ ಒಬ್ಬ ರಾಕ್ಷಸಿ ಬಾಲಕೃಷ್ಣನಿಗೆ ಮೊಲೆಹಾಲು ಉಣ್ಣಿಸಲು ತಾಯಿಯ ರೂಪದಲ್ಲಿ ಬರುತ್ತಾಳೆ. ಹಾಲು ಉಣ್ಣಿಸಿ ಬದುಕಿಸುವುದು ಅವಳ ಉದ್ದೇಶವಲ್ಲ; ಅದರ ಬದಲು ತನ್ನನ್ನು ವಿಷ ಉಣ್ಣಿಸಿ ಕೊಲ್ಲುವುದೇ ಅವಳ ಉದ್ದೇಶ ಎಂದು ಸ್ಪಷ್ಟವಾಗಿ ಗ್ರಹಿಸಿದ ಬಾಲಕೃಷ್ಣ ತಾಯಿರೂಪದಲ್ಲಿದ್ದ ಈ ರಾಕ್ಷಸಿಯ ಮೊಲೆಯನ್ನು ಕಚ್ಚಿ ಕೊಂದುಹಾಕುತ್ತಾನೆ. ಅದೇ ಬಾಲಕೃಷ್ಣನ ಸ್ಥಾನದಲ್ಲಿರುವ ನಮ್ಮ ಸಾರ್ವಜನಿಕ ಶಿಕ್ಷಣ ಏನು ಮಾಡಬೇಕು ಎಂಬ ಪಾಠ ಇದರಿಂದ ದೊರೆಯಬಹುದು ಅನ್ನಿಸುತ್ತದೆ.
0-0-0-0
·         ಡಾ. ರಾಜೇಂದ್ರ ಬುರಡಿಕಟ್ಟಿ

Monday, June 19, 2017

Wednesday, June 14, 2017

ಸಗಣಿ ತಿನ್ನಿಸಿದ ಮಾಂತ್ರಿಕ!

ಚಿಕಿತ್ಸೆಯ ಹೆಸರಿನಲ್ಲಿ ಮುಗ್ಧ ಯುವತಿಯೋರ್ವಳಿಗೆ ನಮ್ಮ ಬೀದರಿನಲ್ಲಿ ಸಗಣಿ ತಿನ್ನಿಸಿದ ಮಾಂತ್ರಿಕನೊಬ್ಬನ ವಿರುದ್ಧ ಮಹಾರಾಷ್ಟ್ರದ ಚಾಕೂರ್ ಪೋಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿರುವುದು ವರದಿಯಾಗಿದೆ. ದಾಖಲಾದ ಈ ಪ್ರಕರಣ ಇಂತಹ ಅಯೋಗ್ಯರಿಗೆ ಶಿಕ್ಷೆ ಕೊಡಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಕೊನೆಯ ಪಕ್ಷ ಪ್ರಕರಣ ದಾಖಲಾಗಲು ಮಹರಾಷ್ಟ್ರ ಸರ್ಕಾರವು ಜಾರಿಗೆ ತಂದಿರುವ ಮಾಢ್ಯ ನಿಷೇಧ ಕಾಯ್ದೆ ಸ್ಪಷ್ಟವಾಗಿ ನೆರವಾಗಿದ್ದು ಮಾತ್ರ ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನಬೇಕು.
ಈ ಅಸಹ್ಯಕರ ಕೃತ್ಯಕ್ಕೆ ಬಲಿಯಾದ ಹದಿನೆಂಟು ವರ್ಷದ ಯುವತಿ ಅನಕ್ಷರಸ್ಥೆಯಲ್ಲ. ಬಿ.ಎ. ವ್ಯಾಸಂಗ ಮಾಡುತ್ತಿರುವ ಕಾಲೇಜು ಹುಡುಗಿ. ಅಂದರೆ ಹನ್ನೆರಡು ವರ್ಷಗಳ ಶಾಲಾ ಶಿಕ್ಷಣವನ್ನು ಮುಗಿಸಿರುವಂಥವಳು. ಹನ್ನೆರಡು ವರ್ಷಗಳ ದೀರ್ಘ ಅವಧಿಯಲ್ಲಿ ಅವಳಿಗೆ ನೀಡಲ್ಪಟ್ಟಿರುವ ಶಿಕ್ಷಣವು `ಸಗಣಿ ತಿನ್ನುವುದು ಅಸಹ್ಯವಾದದ್ದು, ಮೂರ್ಛೆರೋಗ ಅಥವಾ ಮಾಟ-ಮಂತ್ರಗಳಿಂದ ಆಗಿದೆ ಎನ್ನಲಾದ ತೊಂದರೆಗಳಿಗೆ ಪರಿಹಾರವು ಇದರಿಂದ ಸಿಗುವುದಿಲ್ಲ. ಇದು ಒಂದು ಮೂಢನಂಬಿಕೆ’ ಎಂಬ ಕನಿಷ್ಠ ಪ್ರಜ್ಞೆಯನ್ನೂ ಅವಳಲ್ಲಿ ಬೆಳಸಲಿಲ್ಲವೋ ಅಥವಾ ಅದು ಅವಳಲ್ಲಿ ಬೆಳದಿದ್ದರೂ ಅವಳ ಪಾಲಕರೂ ಸೇರಿದಂತೆ ಸುತ್ತಮುತ್ತಲ ಸಮಾಜ ಅವಳನ್ನು ಬಲತ್ಕಾರವಾಗಿ ಇಂತಹ ಕೃತ್ಯಕ್ಕೆ ದೂಡಿತೋ ಅದಿನ್ನೂ ಸ್ಪಷ್ಟವಾಗಬೇಕಾಗಿದೆ. ಕಾರಣ ಏನೇ ಇರಲಿ ನಮ್ಮ ಸಮಾಜ ಯಾವ ಹಂತದಲ್ಲಿದೆ ಮತ್ತು ಯಾವ ಕಡೆ ಚಲಿಸುತ್ತಿದೆ ಎಂಬುದು ಈ ಒಂದು ಘಟನೆ ನಮಗೆ ಬೆರಳುಮಾಡಿ ತೋರಿಸುತ್ತದೆ.
ಕರ್ನಾಟಕದಲ್ಲಿಯೂ ಇಂತಹ ಮೂಢನಂಬಿಕೆಗಳನ್ನು ನಿಷೇಧಿಸುವ, ಜನರಲ್ಲಿ ವೈಜ್ಞಾನಿಕತೆ, ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂಥದೊಂದು ಕಾನೂನು ಇಷ್ಟರೊಳಗೆ ಜಾರಿಗೆ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತಿದೆ. ಮಹಾರಾಷ್ಟ್ರ ಮಾದರಿಯ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ತರಲು ನಮ್ಮಲ್ಲಿಯೂ ಒತ್ತಡ ಹೆಚ್ಚಾದಾಗ ಕುಂಟುತ್ತಾ ಕುಂಟುತ್ತಾ ಅಂತೂ ಒಂದು ಕರಡು ಸಿದ್ಧವಾದರೂ ಅದು ಕಾನೂನಾಗಿ ಜಾರಿಗೆ ಬರಲು ಇನ್ನೂ ಮೀನಮೇಷ ಎಣಿಸುತ್ತಿದೆ. ಸರ್ಕಾರ ಅದರ ಕರಡನ್ನು ಸಿದ್ಧಪಡಿಸಲು ಎಷ್ಟೋ ದಿವಸ ತೆಗೆದುಕೊಂಡಿತು. ಅಂತೂ ಕೊನೆಗಾದರೂ ಪ್ರಕಟವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುವ ವೇಳಗೇ ಅದು ಮುಂದೆ ಹೋಗದಂತೆ ಕಾಲೆಳೆಯುವ ಪ್ರಯತ್ನಗಳು ಶುರುವಾದವು. ಸರ್ಕಾರ ತರಲು ಹೊರಟಿರುವ ಈ ಉದ್ದೇಶಿಸಿತ ಕಾನೂನಿನ ಬಗ್ಗೆ ನಮ್ಮ ಕೆಲವು `ಧಾರ್ಮಿಕ ಮುಖಂಡರು’, `ರಾಜಕೀಯ ಮುತ್ಸದ್ಧಿಗಳು’ ಮತ್ತು `ಧರ್ಮರಕ್ಷಕರು’ ಇದು `ಹಿಂದೂ ಧರ್ಮದ ಆಚರಣೆಗಳ ಮೇಲೆ ನಿರ್ಬಂಧ ಹೇರುವ ಹುನ್ನಾರ’ ಎಂದು ಕ್ಯಾತೆ ತೆಗೆದು ಎದ್ವಾತದ್ವ ಹೇಳಿಕೆ ನೀಡಿ ಜನರಲ್ಲಿ ಅನಗತ್ಯ ಗೊಂದಲವನ್ನುಂಟುಮಾಡಿಬಿಟ್ಟರು!
ಕೆಲವರ ಹೇಳಿಕೆಗಳನ್ನು ನೋಡಿದರೆ ಅವರು ಈ ಕಾನೂನಿನ ಕರಡನ್ನು ನೋಡಲೇ ಇಲ್ಲ ಎಂದು ಯಾರಾದರೂ ಹೇಳಬಹುದಿತ್ತು. ಹೀಗೆ ಕರಡನ್ನು ಓದದೇ ಮಾಧ್ಯಮದೆದುರು ಹೇಳಿಕೆ ನೀಡಲು ಹಿಂದೆ ರಾಜಕಾರಣಿಗಳು ಅಂಜುತ್ತಿದ್ದರು. ಮರುಪ್ರಶ್ನೆ ಮಾಡಿದರೆ ಏನುಗತಿ ಎಂಬುದು ಅವರ ಅಂಜಿಕೆಯ ಹಿಂದೆ ಇರುತ್ತಿದ್ದ ಕಾರಣವಾಗಿತ್ತು. ಆದರೆ ಇಂದು ಅವರಿಗೆ ಆ ಅಂಜಿಕೆ ಇಲ್ಲ. ಹೀಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದಾಗ ಅದನ್ನು ನೀಡಿದವರಿಗೆ ಮರಳಿ ಪ್ರಶ್ನೆಮಾಡಿ ಸತ್ಯಾಸತ್ಯತೆಯನ್ನು ಧೃಡಪಡಿಸಿಕೊಂಡೇ ಜನತೆಗೆ ಸಂದೇಶ ರವಾನಿಸುವ ಜವಾಬ್ದಾರಿಯುತ ಮಾಧ್ಯಮಗಳ ಸಂಖ್ಯೆ ದಿನದಿನಕ್ಕೆ ಕುಸಿಯುತ್ತಿದ್ದು ಅವರು ಹೇಳಿದ್ದನ್ನು ಹಸಿಹಸಿಯಾಗಿ ಜನರಿಗೆ ಯಥಾವತ್ತಾಗಿ ದಾಟಿಸುವ, ಇನ್ನೂ ಸಾಧ್ಯವಾದರೆ ಇನ್ನಷ್ಟು `ಉಪ್ಪುಕಾರ’ ಹಾಕಿ ಮಸಾಲೆಮಾಡಿ ಜನತೆಗೆ ದಾಟಿಸುವ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅವರ ಅಂಜಿಕೆ ಇಲ್ಲವಾಗಲು ಬಹುಶಃ ಕಾರಣವಾಗಿರಬಹುದು.
ಹೀಗೆ ಹೇಳಿಕೆ ನೀಡಿದ ಯಾರೊಬ್ಬರೂ ಈ ಉದ್ದೇಶಿತ ಕಾನೂನಿನಲ್ಲಿಯ ಯಾವ ಅಂಶ ಇವರ ಧರ್ಮದ ಯಾವ ಆಚರಣೆಗಳನ್ನು ಯಾವ ರೀತಿಯಲ್ಲಿ ನಿರ್ಬಂಧಿಸುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿಲ್ಲ. ಅವರು ಹೇಳಿದ್ದನ್ನೇ `ವೇದವಾಕ್ಯ’ ಮಾಡಿಕೊಂಡ ಅವರ ಹಿಂಬಾಲಕ ಪಡೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಂದರಲ್ಲಿ ಈ ನಾಯಕರ ಹೇಳಿಕೆಗಳನ್ನೇ ಪುನರುಚ್ಚರಿಸಿ `ಇದರಲ್ಲಿ ಎನೋ ದೊಡ್ಡ ಸಂಚು ಅಡಗಿದೆ ಈ ಕಾನೂನು ಬಂದರೆ ಹಿಂದೂ ಧರ್ಮಕ್ಕೆ ದೊಡ್ಡ ನಷ್ಟವಾಗಲಿದೆ’ ಎಂದು ಸಾಮಾನ್ಯ ಜನರನೇಕರು ಭಾವಿಸುವಂತೆ ಮಾಡಿಬಿಟ್ಟರು. ಒಟ್ಟಿನಲ್ಲಿ ಎಲ್ಲರೂ ಸೇರಿ ಇದನ್ನೊಂದು ಗೊಂದಲದ ಗೂಡನ್ನಾಗಿ ಮಾಡಿ ಆಗಲೇಬೇಕಾಗಿದ್ದ ಅತ್ಯಂತ ಮಹತ್ವದ ಕೆಲಸವೊಂದಕ್ಕೆ ಕಲ್ಲುಹಾಕಿ ತಡೆಯೊಡ್ಡಿದರು. ಒಂದು ವೇಳೆ ಇವರು ಭಾವಿಸುವಂತಹ ತಮ್ಮ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸುವ ಅಂಶಗಳೇನಾದರೂ ಅದರಲ್ಲಿ ಇದ್ದರೆ ಅವನ್ನು ಎತ್ತಿತೋರಿಸಿ ಪರಿಷ್ಕರಣೆಗೆ ಒತ್ತಾಯಿಸುವ ಅವಕಾಶವಿದ್ದರೂ ಹಾಗೆ ಮಾಡದೆ ಅದನ್ನು ವಿನಾಕಾರಣ ತಡೆಯುವ ಪ್ರಯತ್ನ ನಡೆಸಿದ್ದು ಮಾತ್ರ ಜನತೆಯ ವೈಚಾರಿಕತೆ ಬೆಳೆಸುವಲ್ಲಿ ಉಂಟಾದ ಒಂದು ಹಿನ್ನಡೆಯಲ್ಲದೆ ಬೇರೇನೂ ಅಲ್ಲ.
ಈ ಕಾನೂನು ಈಗಿನ ಮುಖ್ಯಮಂತ್ರಿಯ ಕಾಲದಲ್ಲಿ ಜಾರಿಗೆ ಬರದಿದ್ದರೆ ಇನ್ಯಾರ ಕಾಲದಲ್ಲಿ ಬರಲು ಸಾಧ್ಯ? ಈ ಸರ್ಕಾರದ ಅವಧಿ ಮುಗಿಯಲು ಇರುವ ಇನ್ನೊಂದು ವರ್ಷದ ಅವಧಿಯೊಳಗೆ ಏನಾದರೂ ಮಾಡಿ ಅದನ್ನು ಜಾರಿಗೆ ತರಲೇಬೇಕೆಂದು ಅನೇಕ ಪ್ರಗತಿಪರ ಚಿಂತಕರು, ಪ್ರಗತಿಪರ ಆಲೋಚನಾ ಕ್ರಮದ ಮಠಾದೀಶರೂ ಈ ನಿಟ್ಟಿನಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಪ್ರಯತ್ನಗಳು ನಿರೀಕ್ಷಿತಮಟ್ಟದಲ್ಲಿ ಯಶಸ್ಸು ನೀಡಿಲ್ಲವಾದರೂ ಹುಸಿಯಾಗಬಹುದೆಂಬ ನಿರಾಶೆಯನ್ನುಂಟುಮಾಡಿಲ್ಲ ಎಂಬುದು ಸಮಾಧಾನದ ಸಂಗತಿ. ಸರ್ಕಾರ ಕೊನೆಗಳಿಗೆಯಲ್ಲಿಯಾದರೂ ಅದನ್ನು ಜಾರಿಗೆ ತರಬಹುದೆಂಬ ಭರವಸೆ ಇನ್ನೂ ಅಳಿಸಿಲ್ಲ.
ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕೆಲದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಯಾವುದೋ ಒಂದು ಹಳ್ಳಿಯಲ್ಲಿ ಆ ಊರಿನ ಆಂಜನೇಯ ಸ್ವಾಮಿಯ ಜಾತ್ರೆಯ ದಿನದಂದೋ ಏನೋ ಒಬ್ಬ ಬಾಲಕನಿಗೆ ಮಿತಿಮೀರಿ ನೀರನ್ನೋ ಎಳೆನೀರನ್ನೋ ಕುಡಿಸಿ ಅವನಿಗೆ ಉಚ್ಚೆ ಬರುವಂತೆ ಮಾಡಿ ಆ ಉಚ್ಚೆಯನ್ನು `ಆಂಜನೇಯಸ್ವಾಮಿಯ ತೀರ್ಥ’ ಎಂದು ಊರಿಗೆಲ್ಲ ಹಂಚುತ್ತಿರುವ ಘಟನೆ ಟಿ.ವಿ.ವಾಹಿನಿಯೊಂದರಲ್ಲಿ ಪ್ರಸಾರವಾಯಿತು. ಈ ಬಗ್ಗೆ ನಡೆದ ಟಿ.ವಿ.ಚರ್ಚೆಯಲ್ಲಿ ಆ ಊರಿನ ದೇವಸ್ಥಾನದ ಅರ್ಚಕರು ಮತ್ತು ಊರಿನ ಮುಖಂಡರು ಒಟ್ಟಾಗಿ `ನಮ್ಮ ಊರಿನಲ್ಲಿ ಆ ಬಾಲಕನ ಮೂತ್ರವನ್ನು ಮೂತ್ರವೆಂದು ಯಾರೂ ಭಾವಿಸುವುದಿಲ್ಲ. ಅದನ್ನು ಆಂಜನೇಯ ಸ್ವಾಮಿಯ ತೀರ್ಥವೆಂದೇ ಶ್ರದ್ಧೆಯಿಂದ ಸ್ವೀಕರಿಸುತ್ತೇವೆ.ಇದರಿಂದ ನಮ್ಮ ಊರಿಗೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ನಮ್ಮ ನಂಬಿಕೆ. ಇದನ್ನು ನಾವು ಬದಲಿಸಿಕೊಳ್ಳಲು ಒಪ್ಪುವುದಿಲ್ಲ’ ಎಂದು ಬಹಳಷ್ಟು ಶ್ರದ್ಧೆಯಿಂದಲೇ ಹೇಳಿದರು!
ಈ ಘಟನೆ ಒಂದು ಉದಾಹರಣೆ ಮಾತ್ರ. ಮಕ್ಕಳಾಗದೆ ಚಿಂತಾಕ್ರಾಂತರಾದ ಮಹಿಳೆಯರನ್ನು ತಮ್ಮ ತೆವಲು ತೀರಿಸಿಕೊಳ್ಳಲು ಬಳಸಿಕೊಳ್ಳುವ ಮೂಲಕ ಲೈಂಗಿಕ ಶೋಷಣೆಗೊಳಪಡಿಸುವ ಘಟನೆಗಳೂ ಸೇರಿದಂತೆ ಈ ರೀತಿಯ ಮೌಢ್ಯವನ್ನು ಜನರಲ್ಲಿ ಬಿತ್ತುವ ಘಟನೆಗಳು ನಮ್ಮಲ್ಲಿ ದಿನದಿನಕ್ಕೂ ಹೆಚ್ಚುತ್ತಿವೆ. ಅನೇಕ ಪದವಿ ಪಡೆದ ಯುವ ಜನತೆಯೂ ಸಂಪ್ರದಾಯ-ಧರ್ಮ-ನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಮೂಢನಂಬಿಕೆಗಳಿಗೆ ಜೋತು ಬೀಳುತ್ತಿರುವುದನ್ನು ನೋಡಿದರೆ ಜನತೆಯಲ್ಲಿ ವಿದ್ಯಾಭ್ಯಾಸ ಹೆಚ್ಚಿದಂತೆ ಇವೆಲ್ಲ ಕಡಿಮೆ ಆಗುತ್ತವೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆಯೇನೋ ಅನ್ನಿಸುತ್ತಿದೆ. ಇಂತಹ ಘಟನೆಗಳಿಗೆ ಕಡಿವಾಣ ಬೇಡವೇ? ಈ ರೀತಿಯ ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು? ಅವು ಅವರ ನಂಬಿಕೆ ಎಂದು ನಾವು ಅವನ್ನು ಗೌರವಿಸಬೇಕೆ? ಏನಾದರೂ ಮಾಡಿಕೊಳ್ಳಲಿ ನಮಗೇನು ಎಂದು ಸುಮ್ಮನಿರಬೇಕೆ? ಬಹುಶಃ ಇವೆರಡೂ ಜವಾಬ್ದಾರಿಯುತ ನಡವಳಿಕೆ ಎನಿಸಲಾರವು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಅಸಹಯಕರ ಕೃತ್ಯಗಳನ್ನು ನಾವೆಲ್ಲ ವಿರೋಧಿಸಬೇಕಾಗಿದೆ.
ಮೌಢ್ಯ ನಿಷೇದ ಕಾಯ್ದೆ ಜಾರಿಗೆ ಬಂದರೆ ನಮ್ಮಲ್ಲಿ ಸಾಮಾನ್ಯ ಜನರ ಭಕ್ತಿ, ಧಾರ್ಮಿಕತೆ, ಆಧ್ಯಾತ್ಮಿಕತೆ ಇತ್ಯಾದಿಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಹೊಟ್ಟೆಹೊರೆಯುವ, ಜನರನ್ನು ಶೋಷಣೆ ಮಾಡುತ್ತಿರುವ ಅನೇಕ ಕಪಟ ದೇವಮಾನವರ ಅಂತಸ್ತು ಮತ್ತು ಆದಾಯ ಎರಡಕ್ಕೂ ಕತ್ತರಿ ಬೀಳುವುದರಿಂದ ಅವರಿಗೆ ಈ ಕಾನೂನು ಜಾರಿಗೆ ಬರುವುದು ಬೇಕಾಗಿಲ್ಲ. ಹಾಗಾಗಿ ಮುಗ್ದ ಜನರಲ್ಲಿ ತಪ್ಪು ತಿಳಿವಳಿಕೆಯನ್ನು ನೀಡಿ ಈ ಕಾನೂನು ಜಾರಿಗೆ ಬರದಂತೆ ಏನು ಮಾಡಬಹುದೋ ಅದನ್ನೆಲ್ಲ ಅವರು ಮಾಡುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳ ತಂತಿಯನ್ನು ಮೀಟುತ್ತಿದ್ದಾರೆ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ರಾಜಕಾರಣಿಗಳು ಮತ್ತು ಈ ರಾಜಕಾರಣಿಗಳ ವಿವೇಕರಹಿತ ಹೇಳಿಕೆಗಳಿಗೆ ಕಣ್ಣುಮುಚ್ಚಿಕೊಂಡು ಸಿಳ್ಳೆಹಾಕಿ ಬೆಂಬಲ ಸೂಚಿಸುತ್ತಿರುವ ನಮ್ಮ ಕೆಲವು ಯುವಪಡೆಗಳು ಈ ಕಾನೂನು ಜಾರಿಗೆ ಬರುವಲ್ಲಿ ಇರುವ ಮುಖ್ಯವಾದ ತೊಡಕಾಗಿದ್ದಾರೆ.
ಈ ಕಾನೂನಿನ ವಿಷಯದಲ್ಲಿ ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ನನಗೆ ತಿಳಿದಮಟ್ಟಿಗೆ ಯಾವ ಧರ್ಮದ ಆಚರಣೆಗಳಿಗೂ ಈ ಉದ್ದೇಶಿತ ಕಾಯ್ದೆ ನಿಯಂತ್ರಣವನ್ನಾಗಲೀ ನಿರ್ಬಂಧವನ್ನಾಗಲೀ ಹೇರುವುದಿಲ್ಲ. ಬದಲಾಗಿ ಧರ್ಮ, ದೇವರು ಇತ್ಯಾದಿಗಳನ್ನು ಬಳಸಿಕೊಂಡು ಮಾಡುವ ಕೆಲವು ಮೌಢ್ಯಾಚರಣೆಗಳನ್ನು ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ನಾವು ಬಹಳ ಎಚ್ಚರದಿಂದ ಗಮನಿಸಬೇಕಾದ ಸಂಗತಿಯೆಂದರೆ ಮನುಷ್ಯನ ಮೂತ್ರವನ್ನು ದೇವರ ತೀರ್ಥವೆಂದು ಸ್ವೀಕರಿಸುವ ಹಂತಕ್ಕೆ ಇಳಿದಿರುವ ಸಮಾಜ ಮನುಷ್ಯನ ಹೇಸಿಗೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸುವ ಹಂತಕ್ಕೆ ತಲುಪಲು ಬಹಳ ದಿನ ತೆಗೆದುಕೊಳ್ಳುವುದಿಲ್ಲ ಎಂಬುದು. ಹಾಗಾಗದಿರಲಿ ಎಂಬುದೇ ಬಹುತೇಕ ಎಲ್ಲರ ನಿರೀಕ್ಷೆಯಾಗಿರುತ್ತದೆ.
ಹೀಗಾಗಿ ಇಂತಹ ಸಂಗತಿಗಳನ್ನು ನಾವು ಮುಕ್ತಮನಸ್ಸಿನಿಂದ ಸ್ವೀಕರಿಸಿ ಸಮಾಜದ ಮತ್ತು ಆಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಅನಗತ್ಯವಾಗಿ ಇವಕ್ಕೆಲ್ಲ ಧರ್ಮದ ಲೇಪನ ಮಾಡುವುದನ್ನು ಬಿಡಬೇಕು. ನಾವು ಧಾರ್ಮಿಕರಾಗಿರುವುದು ತಪ್ಪಲ್ಲ ನಿಜ ಆದರೆ ಎಲ್ಲದನ್ನೂ ಧರ್ಮದ ಮಿತಿಯಲ್ಲಿಯೇ ನೋಡುವ ಧರ್ಮಾಂಧರಾಗಿರುವುದು ಮಾತ್ರ ತಪ್ಪೆ. `ಭಾರತೀಯರ ರಕ್ತವು ಔದಾರ್ಯ ಮತ್ತು ದೃಢತೆಗಳಿಗೆ ಹೆಸರಾಗಿದೆ. ಧರ್ಮಾಂಧತೆ ಇಲ್ಲಿನ ದೌರ್ಬಲ್ಯದ ಹೆಗ್ಗುರುತು’ ಎಂಬ ಖ್ಯಾತ ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಮಾತನ್ನು ನಾವು ಎಚ್ಚರದಿಂದ ಗಮನಿಸಬೇಕು. ನಮ್ಮ ಸಂವಿಧಾನವು ನೀಡಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯದ ನೆನಪನ್ನು ಪದೇಪದೇ ಮಾಡಿಕೊಳ್ಳುವ ನಾವು ಅದೇ ನಮ್ಮ ಸಂವಿಧಾನವು ವಿಧಿಸಿರುವ ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿಯನ್ನೂ ಕೂಡ ಪದೇ ಪದೇ ನೆನಪು ಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮೌಢ್ಯ ನಿಷೇಧ ಕಾಯ್ದೆ ಆದಷ್ಟು ಬೇಗ ಜಾರಿಗೆ ಬರಲು ನಮ್ಮನಿಮ್ಮೆಲ್ಲರ ಒತ್ತಡ ಹೆಚ್ಚಬೇಕಾಗಿದೆ. ಸರ್ಕಾರವು ಕೂಡ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಜಾರಿಗೆ ತರುವ ಅಗತ್ಯವಿದೆ.ಇದು ಸರ್ಕಾರವು ಜನರಿಗೆ ನೀಡುತ್ತಿರುವ ಎಲ್ಲ `ಭಾಗ್ಯ’ಗಳಿಗಿಂತಲೂ ಮಿಗಿಲಾದ `ಭಾಗ್ಯ’ವಾಗುತ್ತದೆ. ಇದು ಆದರೆ ಮಾತ್ರ ಎಲ್ಲ ಜನರೂ ವೈಚಾರಿಕವಾಗಿ ಬೆಳೆಯಲು ಶೋಷಣೆಗೆ ಒಳಗಾಗದಿರಲು ಸಾಧ್ಯವಾಗುವ ಮೂಲಕ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಾತಿಗೆ ಅರ್ಥಬರುತ್ತದೆ.

Friday, June 2, 2017

ಮಳೆಗಾಗಿ ಪರ್ಜನ್ಯಹೋಮ ಮೌಢ್ಯ ಬಿತ್ತುವ ಕಾರ್ಯ


ಮುಂಗಾರು ಮಳೆಗಾಗಿ ಸರ್ಕಾರ ಪರ್ಜನ್ಯ ಹೋಮ ಮಾಡಿಸಲು ಹೊರಟಿರುವ ಕ್ರಮ ನಮ್ಮ ಸಂವಿಧಾನದ ಬಹುಮುಖ್ಯ ಆಶಯಗಲ್ಲಿ ಒಂದಾದ ಜನರಲ್ಲಿ ‘ವೈಜ್ಞಾನಿಕ ಮನೋಭಾವ' ಬೆಳೆಸುವ ಜವಾಬ್ದಾರಿಗೆ ವಿರುದ್ಧವಾದದ್ದು. ಮೌಢ್ಯನಿಷೇಧ ಕಾಯ್ದೆಯನ್ನು ತನ್ನ ಅಧಿಕಾರಾವಧಿಯು ಕೊನೆಗೊಳ್ಳುವದರೊಳಗೆಯಾದರೂ ಜಾರಿಗೆ ತರಬಹುದೇನೋ ಎಂಬ ವಿಶ್ವಾಸವನ್ನು ಅಲ್ಲದಿದ್ದರೂ ಆಶಾಭಾವನೆಯನ್ನು ಇಟ್ಟುಕೊಂಡಿರುವ ನಾಡಿನ ಬಹುತೇಕ ಜನರಿಗೆ ಸರ್ಕಾರದ ಈ ಕಡೆಯಿಂದ ಭರವಸೆ ಬತ್ತುವಂತಾಗಿದೆ.

ಮೈಸೂರು ಮಹಾರಾಜರ ಕಾಲದಿಂದಲೂ ಈ ಸಂಪ್ರದಾಯ ಇತ್ತು ಎಂದು ಸರ್ಕಾರ ನೀಡಿದೆ ಎನ್ನಲಾದ ಸಮರ್ಥನೆ ಸರಿಯಲ್ಲ. ನಮ್ಮಪೂರ್ವಜರು ನಡೆಸಿಕೊಂಡು ಬಂದಿರುವ ಅನೇಕ ಆಚರಣೆಗಳನ್ನು ನಾವಿಂದು ಬಿಟ್ಟಿದ್ದೇವೆ ಅಥವಾ ಮಾರ್ಪಡಿಸಿಕೊಂಡು ಮುಂದುವರೆಸಿದ್ದೇವೆ. ಹಿಂದೆ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲು (ಖುಷಿಪಡಿಸಲು) ರಾತ್ರಿ ಅವರೊಳಗೆ ಮನೆಯ ಮಹಿಳೆಯರನ್ನು ‘ಇದಗಿಸುವುದು’ ಕೂಡ ನಮ್ಮ ಸಂಪ್ರದಾಯವಾಗಿತ್ತು! 'ಬೆತ್ತಲೆಸೇವೆ' ಕೂಡ ನಮ್ಮ ಸಂಪ್ರದಾಯವಾಗಿತ್ತು. ಅವನ್ನು ಇಂದು ನಾವು ಬಿಟ್ಟಿಲ್ಲವೇ? ಇದೇ ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ರಾಜರನ್ನು ಕೂರಿಸಿ ಮೆರವಣಿಗೆ ಮಾಡುವ ಕ್ರಮವಿತ್ತು. ಅದನ್ನು ಇಂದು ನಾವು ಬದಲಿಸಿಕೊಂಡಿಲ್ಲವೇ? ಹೀಗೆ ಸಂಪ್ರದಾಯಗಳನ್ನು ಬಿಟ್ಟುಕೊಡುವಿಕೆ ಅಥವಾ ಮಾರ್ಪಡಿಸಿಕೊಳ್ಳುವಿಕೆ ಚಲನಶೀಲ ಸಮಾಜವೊಂದರ ಸಹಜ ಲಕ್ಷಣ. ಕಾಲದ ಅವಶ್ಯಕತೆಯಾದ ಇದು ನಮ್ಮ ಪರಂಪರೆಗೆ ಕೊಡುವ ನಿಜವಾದ ಗೌರವ. ಅದನ್ನು ಬಿಟ್ಟು ಒಂದು ಕಾಲದ ಆಚರಣೆಯನ್ನು ಯಥಾವತ್ತಾಗಿ ಇನ್ನೊಂದು ಕಾಲದಲ್ಲಿ ನಡೆಸಲು ಹೋಗುವುದು ಅನೇಕವೇಳೆ ಮೂರ್ಖತನವಾಗುತ್ತದೆ.
ಆಡಳಿತ ನಡೆಸುವವರಿಗೆ ಯಾವುದೇ ವಿಚಾರವಿರಲಿ ಒಂದು ಸ್ಪಷ್ಟತೆ ಇರಬೇಕು. ಮಳೆ ಬರದಿರಲು ಕಾರಣಗಳೇನು ಮತ್ತು ಏನುಮಾಡುವುದರಿಂದ ಮಳೆಬರುತ್ತದೆ ಎಂಬುದು ಶಾಲಾ ಮಕ್ಕಳಾಗಿದ್ದಾಗಲೇ ತಿಳಿದುಕೊಳ್ಳಬೇಕಾದ ಚಿಕ್ಕ ಸಂಗತಿ. ಕಾಡು ನಾಶವೂ ಸೇರಿದಂತೆ ಪರಿಸರದ ಮೇಲೆ ಮಾಡಬಾರದ ಅನಾಚಾರಗಳನ್ನೆಲ್ಮ ಮಾಡಿ ಪರ್ಜನ್ಯ ಹೋಮ ಮಾಡಿ ಮಳೆ ತರಿಸುತ್ತೇವೆ ಎಂಬುದು ಹಾಸ್ಯಾಸ್ಪದವಾಗುತ್ತದೆ. ಹೀಗೆ ಮಳೆ ಬರಿಸಲು ಸಾಧ್ಯ ಎಂದು ಒಪ್ಪಿಕೊಂಡರೆ ಅರಣ್ಯ ಇಲಾಖೆಯು ಕೋಟಿಗಟ್ಟಲೆ ಖರ್ಚುಮಾಡಿ ಗಿಡಮರ ಬೆಳೆಸುವ ಅಗತ್ಯವೇ ಬರುವುದಿಲ್ಲ. ‘ಅದನ್ನೂ ಮಾಡುತ್ತೇವೆ; ಇದನ್ನೂ ಮಾಡುತ್ತೇವೆ. ಒಟ್ಟಿನಲ್ಲಿ ಹೇಗಾದರೂ ಸರಿ ಮಳೆಬಂದರಾಯಿತು' ಎನ್ನುವುದು ಎಡಬಿಡಂಗಿತನವಾಗುತ್ತದೆ. ಈ ಹೋಮದ ಶಕ್ತಿಯ ಬಗ್ಗೆ ಒಂದುವೇಳೆ ಅಷ್ಟೊಂದು ನಂಬಿಕೆ ಇದ್ದಿದ್ದರೆ ಮೇ ತಿಂಗಳ ಉರಿಬಿಸಿಲಿನಲ್ಲಿ ಜನ ಕುಡಿಯುವ ನೀರಿಗೆ ಆಹಾಕಾರಪಡುತ್ತಿದ್ದಾಗ ಅದನ್ನು ಮಾಡಬಹುದಿತ್ತು. ಆಗ ಅದನ್ನು ಮಾಡದೇ ನಮ್ಮ ಹವಾಮಾನ ಇಲಾಖೆ ಇನ್ನೇನು ಎರಡು ಮೂರು ದಿನಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿರುವಾಗ ಮಾಡಹೊರಟಿರುವುದು ನೋಡಿದರೆ ಈ ಹೋಮದ ‘ಅದ್ಭುತಶಕ್ತಿ’ಯಾರಿಗಾದರೂ ಅರಿವಾಗದೇ ಇರದು. ಇಂಥ ಕ್ರಮಗಳಿಂದ ಪುರೋಹಿತಶಾಹಿಯ ಹೊಟ್ಟೆ ಬೆಳೆಯುತ್ತದೆಯೇ ಹೊರತು ಮಳೆಯಾಗುವುದಿಲ್ಲ.
ಸರ್ಕಾರ ಇಂತಹ ಅಸಂಬದ್ದ ಕಾರ್ಯಗಳಿಗೆ ಸಾರ್ವಜನಿಕ ಹಣ ಮತ್ತು ತನ್ನ ಅಮೂಲ್ಯ ಸಮಯಗಳನ್ನು ಪೋಲುಮಾಡದೇ ಈ ನಿಟ್ಟಿನಲ್ಲಿ ಸ್ಪಷ್ಟತಿಳಿವಳಿಕೆ ಹೊಂದಿ ತಮ್ಮಷ್ಟಕ್ಕೆ ತಾವು ‘ಬೀಜದುಂಡೆ ಅಭಿಯಾನ' (Seed-ball Campaign) ದಂತಹ ಪರಿಸರ ಉಳಿಸಿಬೆಳೆಸುವ ಕಾರ್ಯದಲ್ಲಿ ರಾಜ್ಯದ ಬೇರೆಬೇರೆ ಕಡೆಗಳಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳಿಗೆ ಧನಸಹಾಯವೂ ಸೇರಿದಂತೆ ಎಲ್ಲ ಅಗತ್ಯ ನೆರವನ್ನು ನೀಡುವ ಮೂಲಕ ಮಳೆಬರಿಸುವ ನಿಜಕಾರ್ಯಕ್ಕೆ ಕೈಜೋಡಿಸಬೇಕು
- ಡಾ. ರಾಜೇಂದ್ರ ಬುರಡಿಕಟ್ಟಿ

Sunday, April 23, 2017

ಅಂಬೇಡ್ಕರ್ `ತೀರ್ಥಸ್ಥಳಗಳು ಮತ್ತು `ಹಿಂದೂ ಧರ್ಮದ ಒಗಟುಗಳು


ಯಾರು ಅಂಬೇಡ್ಕರ್ ಅವರನ್ನು ಅವರ ಜೀವಿತ ಅವಧಿಯಲ್ಲಿ ಮಾತ್ರವಲ್ಲ ಅವರ ಸಾವಿನ ನಂತರವೂ ಅಂದರೆ ತೀರಾ ಇತ್ತೀಚಿನವರೆಗೂ ಅಸ್ಪೃಶ್ಯರನ್ನಾಗಿಯೇ ದೂರತಳ್ಳುತ್ತಾ ಕೆಳಗೆ ತುಳಿಯುತ್ತಾ ಬಂದರೋ, ಯಾರು ಅವರನ್ನು `ಸುಳ್ಳುದೇವರು’ ಎಂದು ಅಸಹನೆ ತೋರುತ್ತಾ, ಸಂವಿಧಾನದ ಮೂಲ ಕರಡನ್ನು ಬರೆದದ್ದು ಅವರಲ್ಲ ಮೇಲ್ವರ್ಗದ ಒಬ್ಬ ಅನಾಮದೇಯ ವ್ಯಕ್ತಿ ಅಂತೆಲ್ಲ ಹೇಳುತ್ತಾ ಬಂದರೋ ಅವರೆಲ್ಲರಿಗೆ ಯಾಕೋ ಏನೋ ದಿಢೀರನೆ ಒಂದೆರಡು ವರ್ಷಗಳಿಂದ ಅಂಬೇಡ್ಕರ್ ಒಬ್ಬ ಮಹಾತ್ಮನಾಗಿ ಕಾಣತೊಡಗಿದ್ದಾರೆ. ನಿಜವಾಗಿ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಅರ್ಥಮಾಡಕೊಂಡು ಈ ಬದಲಾವಣೆ ಬಂದಿದ್ದರೆ ಬಹಳ ಸಂತೋಷಪಡಬಹುದಿತ್ತೇನೋ ಆದರೆ ಅದು ಹಾಗೆ ಆದಂತಿಲ್ಲ. ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಅವರ ವ್ಯಕ್ತಿತ್ವಕ್ಕೆ ಮಸಿಬಳಿಯಲು ಹೋಗಿ ಅದು ಏನೂ ವರ್ಕೌಟ್ ಆಗದಿದ್ದಕ್ಕಾಗಿ ಅನಿವಾರ್ಯವಾಗಿ `ಪ್ಲೇಟ್’ ಬದಲಾಗಿದ್ದು ನಿಚ್ಚಳವಾಗಿ ಕಾಣುತ್ತಿದೆ.
ಇಂದು ನಮ್ಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬೆಂಗಳೂರಿನಲ್ಲಿ ಮಾತನಾಡುತ್ತಾ `ನಮ್ಮ ಪ್ರಧಾನಮಂತ್ರಿಯವರು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು `ತೀರ್ಥಕ್ಷೇತ್ರ’ಗಳನ್ನಾಗಿ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಿರುವುದನ್ನು ಯಾವುದೋ ಟಿ.ವಿ.ಚಾನೆಲ್ನಲ್ಲಿ ಗಮನಿಸಿದೆ. ಬಹುಶಃ `ತೀರ್ಥ’ `ಪ್ರಸಾದ’ ಇವಿಲ್ಲದಿದ್ದರೆ ಇವರು ಬದುಕಲಾರರೇನೋ? ಯಾವ ತೀರ್ಥ, ಪ್ರಸಾದಗಳ ವಿರುದ್ಧ ತಮ್ಮ ಜೀವಿತದ ಬಹುಮುಖ್ಯ ಭಾಗವನ್ನು ಹೋರಾಟದಲ್ಲಿ ಕಳೆದರೋ ಅಂತಹ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು `ತೀರ್ಥಸ್ಥಳ’ ಮಾಡುವುದು ಅಂದರೇನೇ ಅವರ ವಿಚಾರಧಾರೆಯನ್ನು ಮಣ್ಣುಮಾಡುವ ಕಾರ್ಯದ ಮೊದಲ ಹೆಜ್ಜೆ.
ಅಂಬೇಡ್ಕರ್ ಅವರ ಬಗ್ಗೆ ಇವರೆಲ್ಲ ತೋರಿಸುವ ಪ್ರೀತಿ ಗೌರವ ನಿಜವಾದದ್ದೇ ಆದರೆ ಇವರು ಅವರ ಸ್ಥಳಗಳನ್ನು ಈಗ ಹೇಗೆ ಇವೆಯೋ ಹಾಗೇ ಬಿಡಬೇಕು! ಇವರು ಕಾಲಿಟ್ಟು ಅವನ್ನು ಮಲಿನಗೊಳಿಸಬಾರದು. ಇವರು ನಿಜವಾಗಿ ಮಾಡಬೇಕಾಗಿರುವ ಕೆಲಸ ಎಂದರೆ ಅಂಬೇಡ್ಕರ್ ತಮ್ಮ ಆಳವಾದ ಅಧ್ಯಯನದಿಂದ ಭಾರತೀಯ ಪುರಾಣಶಾಸ್ತ್ರ ಗ್ರಂಥಗಳನ್ನೆಲ್ಲ ತಲಸ್ಪರ್ಶಿ ಅಧ್ಯಯನ ಮಾಡಿ `ಹಿಂದೂ ಧರ್ಮದ ಒಗಟುಗಳು’ ಎಂಬ ಸುಮಾರು ಇಪ್ಪತ್ತೈದು ಒಗಟುಗಳು ಇರುವ ಒಂದು ಮಹತ್ವದ ಕೃತಿ ರಚಿಸಿದ್ದಾರೆ. ಅಲ್ಲಿ ಅವರು ಎತ್ತಿರುವ ಪ್ರಶ್ನೆಗಳಿಗೆ ಇದುವರೆಗೂ ಯಾವ ಪುಣ್ಯಾತ್ಮನೂ ಸರಿಯಾದ ಉತ್ತರ ಕೊಡಲು ಆಗಿಲ್ಲ. ಯಾರು ಯಾರನ್ನೆಲ್ಲ ದೇವಮಾನವರು, ಮಹಾನ್ ಸಂತರು, ಮಠಾಧೀಶರು ಅಂತೆಲ್ಲ ಇವರು ಪರಿಗಣಿಸುತ್ತಾರೋ ಅವರನ್ನೆಲ್ಲ ಒಂದೆಡೆ ಕೂರಿಸಿ `ಚಿಂತನ-ಮಂಥನ’ ಮಾಡಿಸಿ ಅಂಬೇಡ್ಕರ್ ಅವರ ಅಂದಿನ ಈ ಒಗಟುಗಳಿಗೆ ಇಂದಾದರೂ ಉತ್ತರ ಕೊಡಲಿಕ್ಕೆ ಆಗುತ್ತಾ ಅಂಥಾ ನೋಡಬೇಕು. ಇದು ನಮ್ಮ ಯುವಜನಾಂಗಕ್ಕೆ ಇವರು ಮಾಡಬಹುದಾದ ದೊಡ್ಡ ಕೊಡುಗೆ ಆದೀತು. ನಮ್ಮ ಯುವ ಜನಾಂಗ ಕೂಡ ಅಂಬೇಡ್ಕರ್ ಅವರ ಈ ಪುಸ್ತಕವನ್ನು ಅವಶ್ಯವಾಗಿ ಓದಬೇಕು. ಆ ಪ್ರಶ್ನೆಗಳು ಆಗ ತಮ್ಮ ಪ್ರಶ್ನೆಗಳೂ ಹೌದು ಅನ್ನಿಸಿದರೆ ಮತಧರ್ಮಗಳ ಕೆಸರನ್ನು ತಮ್ಮ ತಲೆಗೆ ತುಂಬಲು ಬರುವ ಹುಂಬರಿಗೆ ಈ ಪ್ರಶ್ನೆಗಳನ್ನು ಅವರೂ ಕೇಳಿಯೇ ಕೇಳುತ್ತಾರೆ. ಆ ಮೂಲಕ ಯುವಕರು ನಿಜಾರ್ಥದಲ್ಲಿ ತಮ್ಮ ಸ್ವಂತ ಅರಿವಿನ ಮೂಲಕ ಅಭಿಪ್ರಾಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕೊನೆ ಟಿಪ್ಪಣಿ: ನಾನು ಮುಂಬೈಗೆ ಹೋದಾಗಲೆಲ್ಲ ತಪ್ಪದೇ ಭೇಟಿ ನೀಡುವ ಸ್ಥಳವೆಂದರೆ ದಾದರ್ನ ಅರಬ್ಬೀ ಸಮುದ್ರದ ದಂಡೆಯಲ್ಲಿರುವ `ಚೈತ್ಯಭೂಮಿ’ ಅಂಬೇಡ್ಕರ್ ಅವರು ಭೌತಿಕವಾಗಿ ನಮ್ಮನ್ನಗಲಿದಾಗ ನಮಗೆ ಪ್ರೇರಣೆ ಕೊಡಲು ನಿರ್ಮಿತವಾದ ಅವರ ಸ್ಮಾರಕ. ಮುಂಬೈನ ಪ್ರಸಿದ್ಧ ಸ್ಥಳಗಳೆಲ್ಲವನ್ನೂ, ಚಲನಚಿತ್ರತಾರೆಯರು, ಕ್ರಿಕೇಟಿಗರ ಮನೆಗಳನ್ನೂ ವಾಹನ ನಿಲ್ಲಿಸಿ ಪ್ರವಾಸಿಗರಿಗೆ ತೋರಿಸುವ ಅಲ್ಲಿನ ಪ್ರವಾಸಿ ವಾಹನಗಳವರು ಈ ಜಗತ್ಪ್ರಸಿದ್ಧ ವ್ಯಕ್ತಿಯೊಬ್ಬರ ಸ್ಮಾರಕದ ಪಕ್ಕದಲ್ಲಿಯೇ ತಮ್ಮ ವಾಹನಗಳು ಹಾದು ಹೋದರೂ ಅದರ ಪ್ರಸ್ತಾಪ ಮಾಡುವುದಿಲ್ಲ! ನಾನಂತೂ ಎಷ್ಟುಸಾರಿ ಹೋದರೂ ಅಲ್ಲಿಗೆ ಹೋಗಿ ಪ್ರಶಾಂತವಾಗಿರುವ ಬುದ್ಧ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳ ಹತ್ತಿರ ಒಂದಿಷ್ಟು ಹೊತ್ತು ಕುಳಿತು ಬರದಿದ್ದರೆ ನನ್ನ ಮುಂಬೈ ಪ್ರವಾಸ ಅಪೂರ್ಣವೆಂದೇ ಬಗೆಯುವೆ. ಇನ್ನೂ ಒಂದು ಕುತೂಹಲಕಾರಿ ಅಂಶವೆಂದರೆ ಅಂಬೇಡ್ಕರ್ ವಿಚಾರಧಾರೆಗೆ ಸಂಪೂರ್ಣವಾಗಿ ವಿರುದ್ಧವಾದ ವಿಚಾರಧಾರೆಯ ನಾಯಕರಾಗಿದ್ದ ಬಾಳಾ ಠಾಕ್ರೆ ಅವರ ಸಮಾಧಿ ಇರುವುದು ಕೂಡ ಇಲ್ಲಿಯೇ ಅಂಬೇಡ್ಕರ್ ಸ್ಮಾರಕದಿಂದ ಕೂಗಳತೆಯ ದೂರದಲ್ಲಿರುವ ಶಿವಾಜಿ ಪಾರ್ಕಿನಲ್ಲಿ! ನಾನು ಇತ್ತೀಚೆಗೆ ಮುಂಬೈಗೆ ಹೋದಾಗಿನ ಚೈತ್ಯಭೂಮಿಯ ಫೋಟೋ ತಮಗಾಗಿ.
LikeShow more reactions
Comment

Saturday, April 22, 2017

ಲಿಂಗಾಯತ ಮುಖಂಡ ಎಸ್ ನಿಜಲಿಂಗಪ್ಪನವರು ಡಾ.ಅಂಬೇಡ್ಕರ್ ಅವರನ್ನು ಭೇಟಿಯಾಗಿ ಮತಾಂತರವಾಗುವದೇ ಖಚಿತವಾದರೆ ಲಿಂಗಾಯತ ಧರ್ಮ ಸ್ವೀಕರಿಸುವಂತೆ ಮನವಿ ಮಾಡಿಕೊಂಡಾಗ , ಮಿ. ನಿಜಲಿಂಗಪ್ಪನವರೇ , ನಾನು ಬಸವಣ್ಣನವರ ಮತ್ತು ಲಿಂಗಾಯತ ಧರ್ಮದ ಬಗೆಗಿನ ವಿಷಯದಲ್ಲಿ ಅಧ್ಯಯನ ಮಾಡಿದಂತೆ ಲಿಂಗಾಯತ ಧರ್ಮ ಜಗತ್ತಿನ ಅತ್ಯಂತ ಸರ್ವ ಶ್ರೇಷ್ಠ ಧರ್ಮವಾಗಿದೆ. ಆದರೆ ಲಿಂಗಾಯತರೆಂದು ಹೇಳಿಕೊಳ್ಳುವವರು ಧರ್ಮವನ್ನು ಧರ್ಮವನ್ನಾಗಿ ಬೆಳೆಯಲು ಬಿಡದೆ ಜಾತಿಯನ್ನಾಗಿ ಪರಿವರ್ತಿಸಿ ತಮ್ಮ ಜೇಬುಗಳಲ್ಲಿ ಬಂಧಿಸಿಡುವ ಮೂಲಕ ಲಿಂಗಾಯತರೂ ಸಹ ಹಿಂದೂ ಧರ್ಮೀಯರೂ ನಾಚುವಂತೆ ಅಸ್ಪೃಶ್ಯತೆ ಆಚರಿಸುವಲ್ಲಿ ಹಾಗೂ ಜಾತಿ ತಾರತಮ್ಯ ಮಾಡುವಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದಾರೆ.
ಒಂದು ವೇಳೆ ನನ್ನ ಜನಾಂಗ ಲಿಂಗಾಯತ ಧರ್ಮ ಸ್ವೀಕರಿಸಿದ್ದೇ ಆದಲ್ಲಿ ಅವರ ಬದುಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಬರಲು ಸಾಧ್ಯವಿಲ್ಲ.
ಇನ್ನಾದರೂ ಜಾತಿಯ ಸಂಕೋಲೆಯಿಂದ ಹೊರಬಂದು ಬಸವಣ್ಣನವರ ಕನಸಿನ ಅನುಭವ ಮಂಟಪ ಮತ್ತೊಮ್ಮೆ ಕಟ್ಟುವ ನಿಟ್ಟಿನಲ್ಲಿ ಧರ್ಮ ಧರ್ಮವನ್ನಾಗಿ ಬೆಳೆಯಲು ಬಿಡಿ ಎಂದು ಡಾ.ಅಂಬೇಡ್ಕರ್ ರವರು ಹೇಳಿದ್ದರಂತೆ.

Friday, April 21, 2017

ಕರ್ನಾಟಕದ ವಿಶ್ವವಿದ್ಯಾಲಯಗಳ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯಿಂದ ಆರಂಭವಾದ ಕನ್ನಡ ವಿ.ವಿ.ಯ ಮತ್ತೊಂದು ನುಡಿಹಬ್ಬ ಇಂದು ನಡೆಯುತ್ತಿದೆ. ಇದು ನನಗೆ ಕಳೆದ ವರ್ಷದ ಒಂದು ಕಹಿನೆನಪನ್ನು ತರುತ್ತಿದೆ. ಕಳೆದ ಬಾರಿ ನುಡಿಹಬ್ಬದ ವಿಶೇಷ ಭಾಷಣಕ್ಕಾಗಿ ದೂರದ ದೆಹಲಿಯಿಂದ ಬಂದಿದ್ದ ಹಿರಿಯ ಭಾಷಾವಿಜ್ಞಾನಿ, ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಭಾಷಣವನ್ನು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದನ್ನು ಮೊಟಕುಗೊಳಿಸಲು ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲರು ಸೂಚನೆ ನೀಡಿ ಕಾರ್ಯಕ್ರಮಕ್ಕೆ ಮಾತ್ರವಲ್ಲ ಇಡೀ ವಿದ್ವತ್ ವಲಯಕ್ಕೇ ಅವಮಾನಮಾಡಿದ್ದರು. ಇದರಿಂದ ಬಿಳಿಮಲೆಯವರಿಗೆ ಉಂಟಾದ ಅವಮಾನ, ಅವರನ್ನು ಕರೆಸಿಕೊಂಡವರಿಗೆ ಆದ ಮುಜುಗರ ಇವನ್ನೆಲ್ಲ ತಕ್ಕಮಟ್ಟಿಗೆ ಸರಿಪಡಿಸಲೆಂಬಂತೆಯೋ ಏನೋ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅವರು ಬಿಳಿಮಲೆಯವರನ್ನು ವಿ.ವಿ. ಇನ್ನೊಂದು ಕಾರ್ಯಕ್ರಮಕ್ಕೆ ಕರೆಸಿಕೊಂಡು ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಾಯಿತು!.
ರಾಜ್ಯದ ಅನೇಕ ತರುಣ ವಿದ್ವಾಂಸರು ಕಷ್ಟಪಟ್ಟು ಅಧ್ಯಯನ ಮಾಡಿ ಪದವಿಪಡೆಯಲಿರುವ ಈ ಅತಿಮುಖ್ಯ ಕಾರ್ಯಕ್ರಮ ಇತ್ತೀಚಿನ ಕುಲಾಧಿಪತಿಗಳಿಗೆ ಎಂಥದೋ ಒಂದು ಜುಜುಬಿ ಕಾರ್ಯಕ್ರಮವಾಗಿ ತೋರುತ್ತಿದೆಯೋ ಏನೋ! ಅನೇಕ ವಿ.ವಿ. ಘಟಿಕೋತ್ಸವಗಳು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನಡೆಯುವುದು ಇತ್ತಿಚೆಗೆ ಸಾಮಾನ್ಯವಾಗಿದೆ. ಅವರ ಸಮಯ ಗೊತ್ತುಪಡಿಸಿಕೊಂಡೇ ಘಟಿಕೋತ್ಸವಗಳು ಏರ್ಪಡುತ್ತವೆಯಾದರೂ ಹೀಗಾಗುತ್ತಿವೆ. ಆಗೆಲ್ಲ ಸಿಗುವ ಕಾರಣ ಅವರ ಅನಾರೋಗ್ಯ. ಒಂದು ವೇಳೆ ಬಂದರೂ ಅವಸರ. ಬೆಂಗಳೂರಿನ ಯಾವುದ್ಯಾವುದೋ ಚಿಕ್ಕಪುಟ್ಟ ಸಂಘ-ಸಂಸ್ಥೆಗಳ ಕೆಲಸಕ್ಕೆ ಬಾರದ ಕಾರ್ಯಕ್ರಮಗಳಿಗೆ ಲಭ್ಯವಾಗುವ ನಮ್ಮ ರಾಜ್ಯಪಾಲರುಗಳ ಉಪಸ್ಥಿತಿ ವಿವಿಗಳ ಘಟಿಕೋತ್ಸವಗಳಂತಹ ಬಹುಮುಖ್ಯ ಕಾರ್ಯಕ್ರಮಗಳಿಗೆ ಲಭ್ಯವಾಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಕುಲಾಧಿಪತಿಗಳ ಅನಾರೋಗ್ಯ ಅಥವಾ ಅವಸರ ನಮ್ಮ ವಿ.ವಿಗಳ ಆರೋಗ್ಯವನ್ನೂ ವಿದ್ವತ್ ವಲಯದ ಉತ್ಸಾಹವನ್ನೂ ಹಾಳುಮಾಡದಿರಲಿ.
ಹಂಪಿ ಕನ್ನಡ ವಿವಿಯ ಕಳೆದ ವರ್ಷದ ಘಟನೆಯನ್ನು ವಿವರಿಸಿ ಹೀಗಾಗದಂತೆ ನೋಡಿಕೊಳ್ಳಲು ಎಲ್ಲಾ ರಾಜ್ಯಪಾಲರುಗಳಿಗೆ ಸೂಚನೆ ನೀಡಿ ಎಂದು ನಾನು ಗೌರವಾನ್ವಿತ ರಾಷ್ತ್ರಪತಿಗಳಿಗೆ ಒಂದು ಪತ್ರವನ್ನು ಇ-ಮೇಲ್ ಮೂಲಕ ಕಳಿಸಿದ್ದೆ. ಅದು ಎಂಥ ಆಯಿತೋ ಗೊತ್ತಾಗಲಿಲ್ಲ. ಆ ಪತ್ರವನ್ನು ನಿಮ್ಮ ಗಮನಕ್ಕೆ ತರೋಣ ಅಂಥ ಹುಡುಕಿದರೆ ಅದು ಕಂಪ್ಯೂಟರ್‍ನಲ್ಲಿ ಎಲ್ಲಿ ಸೇರಿಕೊಂಡಿದೆಯೋ ಸಿಗುತ್ತಿಲ್ಲ. ಹಂಪಿಯಲ್ಲಿ ಕಳೆದ ವರ್ಷ ಬಿಳಿಮಲೆಯವರಿಗೆ ಆದ ಅವಮಾನ ಈ ವರ್ಷದ ಅಲ್ಲಿನ ಘಟಿಕೋತ್ಸವ ಭಾಷಣಕಾರರಿಗೆ ಮಾತ್ರವಲ್ಲ ಯಾವುದೇ ವಿವಿಯ ಘಟಿಕೋತ್ಸವದ ಯಾವುದೇ ಭಾಷಣಕಾರರಿಗೆ ಯಾವುದೇ ವರ್ಷ ಆಗದಿರಲಿ - ಡಾ. ರಾಜೇಂದ್ರ ಬುರಡಿಕಟ್ಟಿ

ಪಾರ್ಲಿಮೆಂಟಿನಲ್ಲಿ ಗೋವಿಗೆ 33% ರಿಜರ್ವೇಶನ್ ಕೊಡಬೇಕಂತೆ. ಹಾಗೆ ಕೊಡುವುದರಿಂದ ಆಗುವ ಲಾಭಗಳನ್ನು ವಿವರಿಸಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅವನ್ನು ಎಂ.ಪಿ ಗಳನ್ನಾಗಿ ಹಾಗೇ ರಾಜ್ಯಗಳ ವಿಧಾನಮಂಡಲಗಳಲ್ಲಿ ಗೋವುಗಳನ್ನು ಎಂ.ಎಲ್.ಎ. ಮತ್ತು ಎಂ.ಎಲ್.ಸಿ. ಮಾಡಲು ಒತ್ತಾಯ ಮಾಡಿ ಬರೆದ ಒಂದು ಲೇಖನ ಇಲ್ಲಿದೆ. ಇಂಗ್ಲಿಷ್ ಸಮಸ್ಯೆಯಾಗದ ಸ್ನೇಹಿತರು ಓದಿನೋಡಿ. ರಾಬು

A herd will have a calming effect on parliamentary proceedings

India’s recent success in securing the human rights of cows is a historic achievement that deserves all our kudos. We may still have a patchy record in protecting the human rights of humans. But who says progress has to be linear? Sometimes, like the traffic in Bengaluru, a country may have to traverse several diversions on the road to greatness. In India’s case, it so happens that the diversions are strewn with cow dung.
Narrow-minded liberals may like to keep quoting the Constitution till the cows come home. But now that the home has been notified as a cattle shed, they must shut up. What these annoying spawn of Macaulay, who hold forth on secularism one day and Sauvignon Blanc the next, don’t realise is that India is not just a country. It is an ancient civilisation that predates the Constitution by several millennia. This civilisation was a Vedic democracy founded by the cows, of the cows, and for the cows. Humans occupied their dharmic place in this society — as servants of the cow.
Then bad things happened, and humans began eating the cows. Now, after centuries of struggle, that practice has been stopped, more or less. India is on the verge of reclaiming its rightful global status as the mother of human civilisation and the gau mata of any advanced alien civilisation that inter-galactic probes may discover in times to come. But it needs to do one more thing to keep its tryst with cosmic greatness: introduce 33% reservation for cows in Parliament.
Thanks to tireless campaigning by cow-protection activists, today everyone in India agrees that cows and ordinary Indians enjoy the same constitutional rights — the only exception being black people from south India, who are entitled to nothing more than a masala dosa and a vat of sambar.
So it is only fair that cows, like their fair human counterparts, get guaranteed political representation in our democracy. Besides upholding the spirit of the Constitution, such a move will have many positive side effects.
First of all, given that all corrupt politicians are humans and cows are incorruptible, it would, in one stroke, reduce corruption by 33%. Second, since cows are typically female, it is a big step towards gender equality. Third, it would lower the human capital costs of keeping the democratic machinery running. The cost to the country (CTC) of one bovine Member of Parliament is estimated to be one-thousandth the CTC of a human MP. Multiply that by 180 (33% of 545) and you get an idea of the astronomical savings that would accrue to the exchequer from the Lok Sabha alone. Do this calculation for the Rajya Sabha and all the State Assemblies, and you’re looking at thousands of crores in savings.
The amount thus saved could be used to provide free medical care, affordable housing in a state-of-the-art gaushala, and a universal basic income to all Indian cows so that they no longer suffer the indignity of foraging in garbage dumps alongside human ragpickers.
Furthermore, all cows are vegetarian by birth. Plus they don’t consume alcohol, not even mocktails. This would raise the aggregate sattvik profile of our elected representatives, while reducing the per capita cost of keeping them well-fed. Given that cows are peace-loving, sweet-tempered, soft-spoken, and decent by nature, a herd of bovine MPs is bound to have a calming effect on parliamentary proceedings, which have tended to be stormy in recent times. I’d bet my Aadhaar card that no cow would ever try to make a point by rushing to the Well of the House — not unless you fill it with water and add hay.
Unlike human MPs, many of whom have criminal charges against them, cows are law-abiding by nature. Most human MPs are crorepatis, and have little in common with the average Indian, making them less empathetic to their problems. Cows, by contrast, are known for simple living and high thinking. As some of you may have learnt in biology class at school, they are experts in rumination — a vital skill set for any parliamentarian but one that is sadly missing in our current crop of human MPs.
And lastly, if you are an airline staff, your chances of being beaten with chappals would diminish by 33%. In view of all these benefits, the government should pass the cow reservation bill without further delay. As a proud Indian, I can’t wait for the day when a cow will address the nation from the ramparts of the Red Fort.