ಮಂದಿರ ನಿರ್ಮಾಣಗಳ ಬಗ್ಗೆ ಕುವೆಂಪು ಹೇಳುವುದೇನು? https://youtu.be/cSh-TcgaoWo?feature=shared
Saturday, February 17, 2024
Sunday, June 4, 2023
ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್..
ಈ ಪುಸ್ತಕವನ್ನು ಪಡೆಯುವ
ಬಗೆ
ಇದು ನನ್ನ ಹೊಸ ಪುಸ್ತಕ. ಭಾರತ ಜನತೆಯಲ್ಲಿ ಅದರಲ್ಲಿಯೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಅವರು ಮತಮೌಢ್ಯಗಳಿಂದ ದೂರವಾಗಿ ಅವರಿವರ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಉದ್ದೇಶದ ಒಟ್ಟು 30 ಲೇಖನಗಳು ಇದರಲ್ಲಿವೆ. ಈ ಪುಸ್ತಕವು 176 ಪುಟಗಳನ್ನು ಹೊಂದಿದ್ದು 180 ರೂ ಮುಖಬೆಲೆ ಹೊಂದಿದೆ. ವೈಯಕ್ತಿಕ ಬಳಕೆಗಾಗಿ ಅಂಚೆ ಮೂಲಕ ತರಿಸಿಕೊಳ್ಳುವವರು ಅಂಚೆ ವೆಚ್ಚ ರೂ. 20ನ್ನು ಸೇರಿಸಿ ಒಟ್ಟು ರೂ. 200 ನ್ನು ನನ್ನ 9481504080 (Rajendra Buradikatti) ನಂಬರಿಗೆ PhonePay ಮಾಡಿ ಅದರ ಸ್ಕ್ರೀನ್ ಶಾಟ್ ಮತ್ತು ತಮ್ಮ ವಿಳಾಸವನ್ನು ವಾಟ್ಸಪ್ ಮೂಲಕ 8310938434 ಈ ನಂಬರಿಗೆ ಕಳಿಸಿದರೆ ನೋಂದಾಯಿತ ಅಂಚೆ ಮೂಲಕ ಪುಸ್ತಕವನ್ನು ಕಳಿಸಿಕೊಡಲಾಗುವುದು.
ಪುಸ್ತಕ ಮಾರಾಟಗಾರರು ಸಗಟು ಖರೀದಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ – 577204 ದೂ:9449886390, 9916197291 email: geethanjalipusthakaprakashana@gmail.com
ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು
ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು
ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ.ಮಾಡಿ ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ ಪಿ.ಹೆಚ್.ಡಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದರು. ನಂತರ ಹೈಸ್ಕೂಲಿಗೆ ಬಡ್ತಿ ಹೊಂದಿದರು. ಪುಸ್ತಕಗಳನ್ನು ಪ್ರಕಟಿಸಿದ್ದು ಕಡಿಮೆ. 'ಕೆಮ್ಮುಗಿಲು' 'ಗುಲಾಬಿ ಮುಳ್ಳು' ಎಂಬ ಎರಡು ಕವನ ಸಂಕಲನಗಳು, 'ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು' (ಪಿಹೆಚ್ ಡಿ ಮಹಾಪ್ರಬಂಧ) ಮತ್ತು ಇತ್ತೀಚೆಗೆ ಪ್ರಕಟಿಸಿದ 'ಕಪ್ಪು ಬುರ್ಖಾ ಮತ್ತು ಕೇಸರಿ ಶಾಲ್ ' ಎಂಬ ಲೇಖನ ಸಂಕಲನ. ಇವಿಷ್ಟೇ ಇವರ ಕೃತಿಗಳು.
ಬುದ್ಧಿ ಬಂದಾಗಿನಿಂದ ವೈಚಾರಿಕ ಚಿಂತನೆಯಲ್ಲಿ ನಂಬಿಕೆಯಿಟ್ಟು ಆ ಪ್ರಕಾರ ನಡೆಯುತ್ತಾ ಬಂದವರು ರಾಜೇಂದ್ರ ಬುರಡಿಕಟ್ಟಿಯವರು. ತಳಬುಡವಿಲ್ಲದ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳುವುದರಿಂದ ಸಾಮಾಜಿಕ ಪ್ರಗತಿ ಕುಂಠಿತವಾಗುತ್ತದೆ ಎಂದು ಹೇಳುತ್ತಲೇ ಬಂದವರು. ಪುರೋಹಿತಶಾಹಿಯಿಂದ ಜನರಿಗಾಗುವ ಅನ್ಯಾಯವನ್ನು ಖಂಡಿಸುವ ನಿಟ್ಟಿನಲ್ಲಿ ಕುವೆಂಪು ಪ್ರಣೀತ 'ಮಂತ್ರಮಾಂಗಲ್ಯ' ರೀತಿಯಲ್ಲಿ ಶಶಿಕಲಾ ಅವರನ್ನು ಮದುವೆಯಾದವರು. ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಗೆ ಯಾವುದೇ ಮುಹೂರ್ತ-ಗಳಿಗೆಗಳನ್ನು ನೋಡುವ ಅಗತ್ಯವಿಲ್ಲ, ಬದಲಾಗಿ ಗುರು-ಹಿರಿಯರ, ಬಂಧು-ಮಿತ್ರರ ಶುಭಹಾರೈಕೆಗಳಿದ್ದರೆ ಸಾಕು ಎಂದು ವಾದಿಸಿ ಆ ಪ್ರಕಾರ ಮಾಡಿ ಸಾಧಿಸಿದವರು. ಅವರು ಬರೆದು ಕೃತಿಗಳೂ ಇವೇ ಆದರ್ಶವನ್ನು ಹಿಡಿದಿವೆ.
ಪ್ರಸ್ತುತ ' ಕಪ್ಪುಬುರ್ಖಾ ಮತ್ತು ಕೇಸರಿ ಶಾಲು ' ಕೃತಿಯಲ್ಲಿ ಮೂವತ್ತು ಲೇಖನಗಳಿವೆ. ಎಲ್ಲವೂ ವೈಚಾರಿಕ ಚಿಂತನೆಯ ಮೇಲೆ ಒತ್ತು ಹಾಕಿದ ಲೇಖನಗಳು. ವರ್ತಮಾನದ ಘಟನೆಗಳಿಗೆ ಸಂಬಂಧಿಸಿ ಸಮಯೋಚಿತವಾಗಿ ಸರಿ-ತಪ್ಪುಗಳ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು, ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು ಇಲ್ಲಿವೆ. ಏಳೆಂಟು ಲೇಖನಗಳಷ್ಟೇ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದವು ಒಂದೆರಡು ಪುಟಗಳ ಪುಟ್ಟ ಬರಹಗಳು.ಮುಖ್ಯವಾಗಿ ಇಲ್ಲಿ ಹಲವು ಲೇಖನಗಳಲ್ಲಿ ತಮ್ಮ ಧರ್ಮದ ಸಿದ್ಧಾಂತಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಹಿಂಸೆ-ದೊಂಬಿಗಿಳಿದು ಸಾಮಾಜಿಕ ಶಾಂತಿಯನ್ನು ಹಾಳುಗೆಡಹುವ ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಕ್ರೈಸ್ತರಾಗಲಿ- ಎಲ್ಲರ ಅಜ್ಞಾನದ ಬಗ್ಗೆ ಲೇಖಕರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬರ ಧಾರ್ಮಿಕ ನಂಬಿಕೆಗಳನ್ನು ಹೀಗಳೆದು ಗೇಲಿ ಮಾಡುವುದು ಯಾವ ಧರ್ಮದ ಲಕ್ಷಣವೂ ಅಲ್ಲವೆನ್ನುತ್ತಾರೆ. ನಮ್ಮ ಧರ್ಮವೇ ಸರ್ವಶ್ರೇಷ್ಠ, ಅದು ಪ್ರಪಂಚದ ಎಲ್ಲರೂ ಅನುಸರಿಸುವ ಧರ್ಮವಾಗಬೇಕೆಂದು ಹೇಳುತ್ತಾ ಅದಕ್ಕಾಗಿ ಹಿಂಸಾಮಾರ್ಗಕ್ಕಿಳಿಯುವುದು ಅಮಾನುಷ ಅನ್ನುತ್ತಾರೆ. ನಮ್ಮದೇ ಸರಿಯೆಂದು ವಾದಿಸುವವರು ಸ್ವಲ್ಪ ತಾಳ್ಮೆ ವಹಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ ಕೊಡುತ್ತಾರೆ. ಎಲ್ಲ ಧರ್ಮಗಳ ಅನುಯಾಯಿಗಳಲ್ಲೂ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡವರಿಂದಾಗಿ ಒಳ್ಳೆಯ ಮನಸ್ಸಿನ ಮುಗ್ಧರು ತೊಂದರೆ ಅನುಭವಿಸುವಂತಾಗುತ್ತದೆ ಅನ್ನುತ್ತಾರೆ. ಈ ರೀತಿ ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಲೇಖಕರು ಎಲ್ಲ ಪ್ರಮುಖ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ನಿಷ್ಪಕ್ಷವಾಗಿ ಅಲ್ಲಿಂದ ಸಂಬಂಧಪಟ್ಟ ಸಾಲುಗಳನ್ನು ಉದಾಹರಿಸುತ್ತಾರೆ. ಇದು ಅವರ ಸೂಕ್ಷ್ಮ ವಿವೇಚನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಧರ್ಮ ಮಾತ್ರವಲ್ಲದೆ ಇಂದಿನ ಶಿಕ್ಷಣ ಕ್ರಮ, ಸಂಸ್ಕೃತಿ-ಕಲೆಗಳ ಬಗೆಗೂ ಇಲ್ಲಿ ಲೇಖನಗಳಿವೆ. ಅಲ್ಲಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ಕೊಡುತ್ತಾ ತಮ್ಮ ನಿಲುವುಗಳನ್ನು ಲೇಖಕರು ಮಂಡಿಸುತ್ತಾರೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಅನೇಕ ಉತ್ತಮ ಕೃತಿಗಳನ್ನು ಚೆನ್ನಾಗಿ ಓದಿಕೊಂಡ ಅವರು ಅಲ್ಲಿಂದ ಆಯ್ದ ಸಾಲುಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸುತ್ತಾರೆ. ಲೇಖನಗಳಿಗೆ ಅವರು ಕೊಡುವ ಶೀರ್ಷಿಕೆಗಳು ( ಒಂದಾಗಲು ಬಿಡದ 'ವಂದೇ ಮಾತರಂ', ಮಂಗನಬ್ಯಾಟೆ ಮತ್ತು ಮಂಗಚೇಷ್ಟೆ, ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ, ಖಾಲಿ ಕುರ್ಚಿ ಮತ್ತು ಪೋಲಿ ಪತ್ರಕರ್ತ, ಮಂಗಳೂರಿನ ಕೆಂಪು ಮತ್ತು ಕಲಬುರ್ಗಿಯ ಕಂಪು ಇತ್ಯಾದಿ) ಆಕರ್ಷಕವಾಗಿದ್ದು ಗಮನ ಸೆಳೆಯುತ್ತವೆ. ದೋಷಮುಕ್ತ ವಾದ ಸರಳ ಸುಂದರ ಬರವಣಿಗೆಯ ಶೈಲಿಯು ಅವರ ಕೃತಿಗೆ ಮೆರುಗನ್ನೂ ಗಾಂಭೀರ್ಯವನ್ನೂ ಇತ್ತಿದೆ.- ಡಾ. ಪಾರ್ವತಿ ಜಿ. ಐತಾಳ್
ಈ ಲೇಖನವನ್ನು ‘ಅವಧಿ’ಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿರಿ.
ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದ ಬರಹಗಳು
ಕಳೆದ ಭಾನುವಾರ(21 -5- 2023 )ಶಿವಮೊಗ್ಗ ಹೊರವಲಯದ ರತ್ನಗಿರಿ ನಗರದಲ್ಲಿ ಒ0ದು ಖಾಸಗಿ ಕಾರ್ಯಕ್ರಮದ ಭಾಗವಾಗಿ ಪುಸ್ತಕ ವೊ0ದು ಬಿಡುಗಡೆಯಾಯಿತು.ಅದ್ಯಾಕೋ ಯಾವ ಮಾಧ್ಯಮಗಳಲ್ಲಿಯೂ ಅದು ಸುದ್ದಿಯಾಗಲೇ ಇಲ್ಲ.
Monday, February 27, 2023
ರಾಷ್ಟ್ರೀಯವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:
ಸ್ನೇಹಿತರೆ, ಮತ್ತೊಂದು
ವಿಜ್ಞಾನದ ದಿನದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ.
ಸುಮಾರು ನೂರು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಆಡಿದ ಈ ಮಾತುಗಳನ್ನು
ಗಮನಿಸಿ. ಇಂದೋ ನಿನ್ನೆಯೋ ಆಡಿದ ಮಾತುಗಳಂತೆ ಇವೆ. ಕುವೆಂಪು ಅವರ ಈ ಮಾತುಗಳು ಅವರ ಒಂದು ಪುಸ್ತಕ
ಓದದಿದ್ದರೂ ಅವರ ಭಜನೆಮಾಡುವ ನಮ್ಮ ರಾಜಕಾರಣಿಗಳ ಅದಕ್ಕಿಂತಲೂ ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ
ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಗುರುತರ ಜವಾಬ್ದಾರಿ ಹೊತ್ತಿರುವ ವಿವಿಧ ಹಂತದ ಶಿಕ್ಷಕರ
ಕಣ್ಣುತೆರೆಸಲಿ. ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುವ ಬದಲು ಅಥವಾ ಜೊತೆಗೆ ತಮ್ಮ ಅಜ್ಞಾನ
ಮತ್ತು ಮೌಢ್ಯವನ್ನು ಧಾರೆಯೆರೆದು ಅವರನ್ನು ಅಂಧಕಾರದ ಕೂಪಕ್ಕೆ ತಳ್ಳುವ ಪಾಪಕಾರ್ಯದಲ್ಲಿ ಮಗ್ನರಾಗಿರುವ
ಶಿಕ್ಷಕರನ್ನು ಅವರ ಪಾಪಕಾರ್ಯದಿಂದ ಬಿಡಿಸಿ ವಿಚಾರವಂತರನ್ನಾಗಿ ಮಾಡಿ ಅವರು ಮಕ್ಕಳಲ್ಲಿ ವೈಚಾರಿಕತೆ
ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಕಾರ್ಯದಲ್ಲಿ ತೊಡಗುವಂತೆ ಕುವೆಂಪು ಅವರ ಈ ನುಡಿಗಳು
ಮಾಡಲಿ… (ರಾಬು, 27-02-2023)
*****
· “ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಙಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.”
· “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆಡ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೇ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ. ವಿಜ್ಞಾನದ ಪಾಠ ಹೇಳಿಕೊಡುವ ಅಧ್ಯಾಪಕನೆ ತನ್ನ ಸ್ವಂತ ಬದುಕಿನಲ್ಲಿ ರಾಹುಕಾಲ ಪಂಚಾಂಗ ವಾರಭವಿಷ್ಯ ಇತ್ಯಾದಿ ಮೂಢ ನಂಬಿಕೆಗಳಿಂದ ಮೂರುಹೊತ್ತೂ ಮತ ಮೂರ್ಖನಾಗಿದ್ದರೆ ವಿದ್ಯಾರ್ಥಿಗಳಿಗೆ ಹೇಗೆತಾನೆ ಸಿದ್ಧಿಸೀತು ವಿಚಾರದೃಷ್ಟಿ.”
· “"ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ.”
· ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೌಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ.
·
ದೇವಾಲಯಗಳಿಗೆ
ಹೋಗುವುದನ್ನು ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ,
ಸಂಸ್ಕೃತಿಯಲ್ಲಿ ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು
ಮುರಿಯಬೇಕು.
*****
(ಮೇಲಿನ
ಮಾತುಗಳು ರಾಷ್ಟ್ರಕವಿ ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪ್ರಸಿದ್ಧ ಉಪನ್ಯಾಸ
ಮತ್ತು ಅದರ ಮುದ್ರಣರೂಪಕ ಕೃತಿಗೆ ಅವರು ಬರೆದ ಮುನ್ನುಡಿಯಿಂದ ಆಯ್ದಭಾಗಗಳಾಗಿವೆ. ಆಯ್ಕೆಮಾಡಿ ಇಲ್ಲಿ
ಕೊಟ್ಟಿದ್ದು: ಡಾ ರಾಜೇಂದ್ರ ಬುರಡಿಕಟ್ಟಿ)
Monday, January 30, 2023
ಗಾಂಧೀಜಿಯನ್ನು ಹತ್ಯೆಮಾಡಿದ ದಿನ ಕುವೆಂಪು ಮಾಡಿದ ಭಾಷಣ
ರಾಷ್ಟ್ರಪಿತ ದಿವಂಗತ! ಅದೃಷ್ಟಹೀನ ಭಾರತ!
(ಗಾಂಧೀಜಿಯನ್ನು ಕೊಂದಾಗ ರಾಷ್ಟ್ರಕವಿ ಕುವೆಂಪು ಮಾಡಿದ ಆಕಾಶವಾಣಿ ಪ್ರಸಾರ ಭಾಷಣ)
ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತ ಹತ!
ನರಹೃದಯದ ವಿಷವಾರ್ಧಿಗೆ
ಜೀವಾಮೃತ ಸಮರ್ಪಿತಃ
ಕ್ಷಮಿಸು ಓ ಜಗತ್ ಪಿತಃ
ಅದೃಷ್ಟಹೀನ ಭಾರತ!
ನಮ್ಮ ರಾಷ್ಟ್ರದ ಪಿತಾಮಹನು ರಣರಂಗದ ಮಧ್ಯೆ ಶರಶಯ್ಯೆಯಲ್ಲಿ ಅಸ್ತಂಗತನಾದನು. ನಮ್ಮ ಸಾಕ್ರೆಟೀಸನಿಗೆ ವಿಷಪಾನ ಮಾಡಿಸಿಯಾಯಿತು.
ನಮ್ಮ ಯೇಸುಕ್ರಿಸ್ತನು
ಶಿಲುಬೆಗೇರಿದನು. ಜಗದ್ವಂದ್ಯ ಲೋಕಗುರು ಪೂಜ್ಯ ಮಹಾತ್ಮಾಗಾಂಧಿ
ತಲೆಕೆಟ್ಟ ಕೊಲೆಗಾರನೊಬ್ಬನ
ಕ್ರೂರ ಹಸ್ತದಿಂದ ಪ್ರಾರ್ಥನಾ ಸಭೆಯ ವೇದಿಕೆಯ ಮೇಲೆ, ತಮ್ಮಿಬ್ಬರು ಮೊಮ್ಮಕ್ಕಳ ಪ್ರೇಮ ಬಾಹುಗಳ ನಡುವೆ ನಿಂತು, ತಮ್ಮನ್ನು ಸ್ವಾಗತಿಸುತ್ತಿದ್ದ
ವಿಪುಲಜನವೃಂದಕ್ಕೆ ತಮ್ಮೆರಡು ಕೈಗಳನ್ನೂ ಹಣೆಗೆತ್ತಿ ನಮಸ್ಕರಿಸುತ್ತಿದ್ದಾಗಲೇ ಮೃತ್ಯುರಾಹುವಿಗೆ ತುತ್ತಾದರು. ವೇದಿಕೆಯ ಮೇಲೆ ಅತೀ ಸಮೀಪದಲ್ಲಿ ಕುಳಿತ ಹಿಂದೂ ಯುವಕನೊಬ್ಬನು ಚಿಮ್ಮಿ ನಿಂತು ಅವರ ತೆರೆದೆದೆಗೆ ಗುಂಡಿಟ್ಟು ಕೊಂದನಂತೆ. ಹಿಂದೆಂದೂ ಭರತಖಂಡದಲ್ಲಿ ನಡೆಯದಂತಹ ಇಂತಹ ಅಸಹ್ಯವಾದ ಘೋರ ಪಾತಕವನ್ನು ಇಂದು ನಡೆಸಿ ನಮ್ಮ ದೇಶಕ್ಕೆ ದೇಶವೇ ಜಗತ್ತಿನ ಮುಂದೆ ಮಹಾಪರಾಧಿಯಾಗಿದೆ; ಅವಮಾನಿತವಾಗಿದೆ.
ನಾವು ತಲೆಯೆತ್ತಿ ನಡೆಯದಂತಾಗಿದೆ. ನಮ್ಮ ದೇಶ ತಿರಸ್ಕಾರಕ್ಕೂ ಶಾಪಕ್ಕೂ ಪಕ್ಕಾಗಿದೆ. ಈ ಪಾಪಕಾರ್ಯಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ
ಮಾಡಿಕೊಳ್ಳದಿದ್ದರೆ ನಮಗೆ ಯೇಸುಕ್ರಿಸ್ತನನ್ನು ಮೊಳೆಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೇನೋ
ಎಂದು ಹೆದರಿಕೆಯಾಗುತ್ತಿದೆ.
ಮತ್ತೇನಿದ್ದೀತು ನಾವು ಕೈಕೊಳ್ಳುವ ಆ ಪ್ರಾಯಶ್ಚಿತ್ತ?
ಯಾವ ಮಹಾಪುರುಷನ ಪ್ರೇಮಮಯ ಹೃದಯವು ಗುಂಡು ತಗುಲಿ ಬಿರಿಯಿತೋ ಆ ಹೃದಯದ ಆಶೆ ಆಕಾಂಕ್ಷೆ ಆದರ್ಶಗಳನ್ನು ಅಚಂಚಲವಾದ ದೃಢತೆಯಿಂದ ಆಚರಿಸಿ ಸಾಧಿಸುವುದೊಂದೇ ನಮಗೆ ಮುಂದಿರುವ ಶ್ರೇಯೋಮಾರ್ಗ. ಶಿಲುಬೆರೇರಿದ
ಯೇಸು ಕ್ರಿಸ್ತನಿಗೆ,
‘ಕ್ಷಮಿಸು ತಂದೆ!’ ಎಂದು ಮಾನವರ ಪರವಾಗಿ ಭಗವಂತನನ್ನು ಬೇಡಲು ಸ್ವಲ್ಪ ಪ್ರಜ್ಞೆಯಾದರೂ ಇತ್ತಂತೆ. ನಿನ್ನೆ ಮಡಿದ ನಮ್ಮ ಕ್ರಿಸ್ತನಿಗೆ
ಅಷ್ಟಕ್ಕೂ ಅವಕಾಶ ಕೊಡದಷ್ಟು ಬೇಗನೆ ಪ್ರಜ್ಞೆ ಹೋಯಿತಂತೆ. ಆದರೂ ಆತನ ಮುಖಮುದ್ರೆ ಪ್ರಶಾಂತವಾಗಿ, ಕ್ಷಮಾಶೀಲವಾಗಿ,
ಧ್ಯಾನಪೂರ್ಣ ಶಾಂತಿಯಿಂದ ತುಂಬಿ, ‘ಕ್ಷಮಿಸು ತಂದೆ!’ ಎನ್ನುವಂತಿತ್ತೆಂದು ಆ ವರ್ಣನೆಯನ್ನು
ಕೇಳಿದವರೆಲ್ಲರಿಗೂ ವೇದ್ಯವಾಗಿರುಬೇಕು.
ಮೃತಸ್ಥಿತಿಯಲ್ಲಿಯೂ ಅಮೃತವನ್ನೇ ಪ್ರೋಕ್ಷಿಸುತ್ತಿದ್ದ ಮುಖಮುದ್ರೆಯ ಸಂದೇಶ-ಕ್ಷಮೆ, ಪ್ರೇಮ, ಸತ್ಯ, ಅಹಿಂಸೆ ಇವು ನಮಗೆ ರಕ್ಷಾಮಂತ್ರಗಳಾಗಬೇಕು. ಹಾಗಾದರೆ ಮಾತ್ರವೇ ನಮ್ಮ ದೇಶದ ಸದ್ಯೋಜಾತ ಸ್ವಾತಂತ್ರ್ಯಕ್ಕೆ
ರಕ್ಷಾಯಂತ್ರ ಸಿದ್ಧವಾಗುತ್ತದೆ.
ಎಷ್ಟು ಅನಿರೀಕ್ಷಿತ, ಎಷ್ಟು ಆಕಸ್ಮಿಕ, ಎಷ್ಟು ಭಯಂಕರವಾಗಿತ್ತು ನಿನ್ನೆ ಬಂದ ಆ ಘೋರವಾರ್ತೆ! ಮೊನ್ನೆತಾನೆ ಆಮರಣ ಪರ್ಯಂತ ಕೈಕೊಂಡ ಉಪವಾಸ ವ್ರತದಿಂದ ದೆಹಲಿಯ ವಿಷಸಮುದ್ರವನ್ನೂ ಕ್ಷೀರಸಾಗರವಾಗಿ ಪರಿವರ್ತಿಸಿ, ಲೋಕದ ಪ್ರಶಂಸೆಗೂ ಪೂಜೆಗೂ ಕೃತಜ್ಞತೆಗೂ ಪಾತ್ರರಾಗಿದ್ದರು. ಅಲ್ಲದೇ ನಮ್ಮೆಲ್ಲರಲ್ಲಿ ಮತ್ತೊಂದು ಹೊಸ ಆಶೆಯನ್ನೂ ಪ್ರಚೋದಿಸಿದ್ದರು. ನೂರಿಪ್ಪತ್ತೈದು
ವರ್ಷದ ಹೊಂಗನಸು ಎಪ್ಪತೆಂಟಕ್ಕೇ ಬಿರಿಯುವಂತೆ ಮಾಡಿದ ಈಶ್ವರೇಚ್ಛೆಯ ಕಟುಲೀಲೆಗೆ ಏನು ಹೇಳುವುದು? ತಲೆಬಾಗಿ ಮೂಖರಾಗುವುದೊಂದೇ
ದಾರಿ. ಆ ವಾರ್ತೆ ಕಿವಿಗೆ ಬಿದ್ದಾಗ ಜನ ನಕ್ಕುಬಿಟ್ಟರು. ಅದನ್ನು ತಿಳಿಸಿದವರಿಗೆ ಛಿಃ ಮಾಡಿದರು. ಸತ್ತರೆಂದು ನಂಬುವುದಾದರೂ ಎಂತು? ಗುಂಡು ಬಿದ್ದು ಸತ್ತರೆಂದಾಗಲೂ
ಯಾರೂ ನಂಬದೆಹೋದರು. ಏನು? ಗಾಂಧೀಜಿಗೆ? ಗುಂಡಿನೇಟು? ಅಸಾಧ್ಯ! ಅಸಂಭವ! ಅವಿವೇಕ! ಸುಳ್ಳು! ಖಂಡಿತಾ ಸುಳ್ಳು! ಆಕಾಶವಾಣಿ ಲೋಕವಾರ್ತೆಯನ್ನು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದಾಗ ನಂಬಲೇಬೇಕಾಗಿ ಬಂತು.
ಆಗಂತೂ ಜನರಲ್ಲುಂಟಾದ
ಕಳವಳ, ಭೀತಿ, ನಿರಾಶೆ, ಸಂಕಟ ಇವುಗಳನ್ನು ಹೇಳತೀರದು. ಬದುಕಿನ ಅರ್ಥವೇ ಇದ್ದಕ್ಕಿದ್ದಂತೆ ಶೂನ್ಯವಾದಂತಾಯಿತು. ಜೀವನದ ಪ್ರಯೋಜನವೇ ಕೊನೆಮುಟ್ಟಿದಂತೆ ತೋರಿತು. ಗಾಂಧಿ ಇಲ್ಲದ ಜಗತ್ತು! ತೆಗೆ ತೆಗೆ ಅದೆಲ್ಲಿಯ ಮಾತು! ಎರಡು ತಲೆಮಾರುಗಳಿಂದ
ಪ್ರಪಂಚದ, ಅದರಲ್ಲಿಯೂ ಭರತಖಂಡದ ಬಾಳನ್ನೆಲ್ಲ ಆವರಿಸಿ, ಉಸಿರನ್ನೆಲ್ಲ ತುಂಬಿ ಚೇತನಕ್ಕೆ ಶಕ್ತಿಯಾಗಿ, ಕಣ್ಣಿಗೆ ಬೆಳಕಾಗಿ, ದಾರಿಗೆ ಸಂಗಾತಿಯಾಗಿ, ಕೆಳೆಯನಾಗಿ, ನಾಯಕನಾಗಿ, ಸುಧಾರಕನಾಗಿ, ಮಾರ್ಗದರ್ಶಿಯೂ
ಗುರುವೂ ಆಗಿದ್ದ ಗಾಂಧಿ ಇಲ್ಲದ ಜಗತ್ತು ಜಗತ್ತೆ? ಅದೊಂದು ಅಮಂಗಲ ವಿಪತ್ತು! ಉಳಿದವರ ಮಾತಿರಲಿ! ನೆಹರು, ಪಟೇಲ್, ಆಜಾದ್ ಅಂಥವರಿಗೂ ಏನಾಯಿತೆಂಬುದನ್ನು ರೇಡಿಯೋದಿಂದ ಕೇಳಿದ್ದೇವೆ. ಭಾರತದ ಪ್ರಧಾನಿ ಮತ್ತು ಉಪಪ್ರಧಾನಿ ಇಬ್ಬರೂ ದೆಹಲಿಯಿಂದ ಮಾಡಿದ ಪ್ರಸಾರ ಭಾಷಣಗಳಲ್ಲಿ ತಮ್ಮ ತಮ್ಮ ಸಹಜ ಧೈರ್ಯವನ್ನೂ ಒತ್ತಿ ಮೀರಿಬಂದ ದುಃಖಾತಿಶಯಕ್ಕೆ ಗದ್ಗದ ಧ್ವನಿ ನೀಡಿದುದನ್ನು ನಾವೆಲ್ಲರೂ ಆಲಿಸಿ ಮರುಗಿದ್ದೇವೆ.
ನಿಜ, ನಮ್ಮ ದುಖಃಕ್ಕೆ ತೀರವಿಲ್ಲ; ನಮ್ಮ ನಷ್ಟಕ್ಕೆ ಅಳತೆಯಿಲ್ಲ. ಎಂದೆಂದಿಗೂ ಪಡೆಯಲಾಗದ ಒಡವೆ ಚ್ಯುತವಾಗಿದೆ.
ನಮ್ಮ ಆಧ್ಯಾತ್ಮಿಕ ರಿಕ್ತತೆಯೋ ಪಾತಾಳದಂತೆ ಗಂಭೀರವಾಗಿದೆ;
ಆಕಾಶದಂತೆ ವಿಸ್ತಾರವಾಗಿದೆ.
ನಿನ್ನೆ ಸರ್ವದೇಶಗಳನ್ನೂ
ನಗುವಂತೆ ಶ್ರೀಮಂತರಾಗಿದ್ದವರು ಇಂದು ಎಲ್ಲ ನಾಡುಗಳೂ ನಗುವಂತೆ ದಟ್ಟದರಿದ್ರರಾಗಿದ್ದೇವೆ. ಆದರೂ, ಪಂಡಿತ ನೆಹರು ತಮ್ಮ ಭಾಷಣದಲ್ಲಿ ಹೇಳಿದಂತೆ, ಕ್ಲೈಬ್ಯಕ್ಕಿದು ಕಾಲವಲ್ಲ; ಅಧೈರ್ಯಕ್ಕಿದು ಅಪಕಾಶವಲ್ಲ; ಅಸ್ಥಿರತೆಗೆ ಸಮಯವಲ್ಲ. ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತ ಕೂರುವುದು ಅವಿವೇಕವೇ.
ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊಟ್ಟಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು
ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ.
ಶ್ರೀರಾಮಚಂದ್ರನಿಗೆ ಕೊನೆ ಬಂದ ಪರಿಯನ್ನೂ ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ.
ನಮಗೆ ಅನರ್ಥವಾಗಿರುವುದು
ಈಶ್ವರನ ಸಮದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು?
ಮಹಾತ್ಮರೇ ಹೇಳುತ್ತಿದ್ದರು:
‘ನನ್ನನ್ನು ಕೊಲ್ಲುವ ಸಾಮರ್ಥ್ಯ ಈಶ್ವರನಿಗೊಬ್ಬನಿಗೇ ಇದೆ’ ಎಂದು. ಕೊಂದವನು ಯಃಕಶ್ಚಿತ್ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು. ಸರ್ವಮಂಗಲ ನಿಧಿಯಾದ ಭಗವಂತನ ಇಚ್ಛೆಯಲ್ಲಿ ಶ್ರದ್ಧೆಯಿಟ್ಟು ಸಮಾಧಾನ ತಂದುಕೊಂಡು ಮುಂದಿನ ಕಾರ್ಯಕ್ಕೆ ಸೊಂಟಕಟ್ಟಿ ನಿಲ್ಲಬೇಕು.
ಆತ್ಮದ ಅಮೃತತ್ವದಲ್ಲಿಯೂ
ಅವತಾರಗಳಲ್ಲಿಯೂ ಜನ್ಮಾಂತರ ಮತ್ತು ಪುನರ್ಜನ್ಮಗಳಲ್ಲಿಯೂ ಶ್ರದ್ಧಾಳುಗಳಾದ
ನಮಗೆ ಪೂಜ್ಯ ಗಾಂಧೀಜಿಯ ದೇಹಾವಸಾನವು ಪುರರುತ್ಥಾನಕ್ಕೆ
ಪ್ರಚೋದನವಾಗಬೇಕು. ಸ್ಥಿತಿಪ್ರಜ್ಞರಾದ
ಗಾಂಧೀಜಿ ಮೃತರಾದರು ಎಂಬುದು ಲೋಕೋಪಚಾರದ ಮಾತು. ನಿಜವಾದ ನಿಜವಲ್ಲ. ಏಕ ದೇಹಸ್ಥವಾಗಿದ್ದ ಚೇತನ ಈಗ ಸರ್ವತ್ರವಾಗಿದೆ. ಆ ಶಕ್ತಿಗೆ ಅಂತ್ಯವಿಲ್ಲ. ಕಾಲ ಕಳೆದಂತೆಲ್ಲ ಅದು ಬಹುಗುಣಿತವಾಗುತ್ತಾ ಹೋಗುತ್ತದೆ. ಭಕ್ತಿಸೂತ್ರಗಳು ಹೇಳುವಂತೆ ಅಂತಹ ವಿಭೂತಿಗಳ ಅವಿರ್ಭಾವದಿಂದ, ‘ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾಚೇಯಂ ಭೂರ್ಭವತಿ’: ‘ಪಿತೃಗಳು ನಲಿಯುತ್ತಾರೆ; ದೇವತೆಗಳು ಕುಣಿಯುತ್ತಾರೆ.
ನಮ್ಮೀ ಪೃಥ್ವಿ ಸನಾಥಳಾಗುತ್ತಾಳೆ.’ ಗಾಂಧೀಜಿಯನ್ನು ಹೆತ್ತ ನಮ್ಮೀ ಪೃಥ್ವಿ ಎಂದೆಂದಿಗೂ ಅನಾಥೆಯಲ್ಲ, ನಿತ್ಯ ಸನಾಥೆ! ಆ ಪೂಜ್ಯ ಮಹಾತ್ಮನು ನಮ್ಮನ್ನು ಕ್ಷಮಿಸಲಿ; ಆತನ ಕೃಪೆ ನಮ್ಮನ್ನು ಕೈಬಿಡದೆ ಕಾಯಲಿ; ಆ ದೇವಮಾನವನ ದಿವ್ಯಸ್ಮೃತಿ ಕಂಗೆಡುತ್ತಿರುವ ನಮ್ಮ ಜನತೆಯ ಮುನ್ನಡೆಗೆ ಗಗನೋನ್ನತ ದೀಪಸ್ತಂಭವಾಗಲಿ!
ಮಹಾತ್ಮಾ ಗಾಂಧೀಕಿ ಜೈ!
ಜಯ್ ಹಿಂದ್!
******
(ಇದು ಮಹಾತ್ಮಾಗಾಂಧೀಜಿಯವರು ಕೊಲೆಯಾದ ಮರುದಿನ ದಿನ (31-01-1948) ರಾಷ್ಟ್ರಕವಿ ಕುವೆಂಪು ಅವರು ಮೈಸೂರು ಆಕಾಶವಾಣಿಯಿಂದ
ಮಾಡಿದ ಪ್ರಸಾರ ಭಾಷಣ. ಈ ಭಾಷಣವನ್ನು ಕುವೆಂಪು ಅವರ ಬರೆಹಗಳ ಸಂಗ್ರಹದಿಂದ ಎತ್ತಿ ಕೊಟ್ಟಿದ್ದು: ಡಾ. ರಾಜೇಂದ್ರ ಬುರಡಿಕಟ್ಟಿ)





