Thursday, May 15, 2025

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ತೀರ್ಥಕ್ಷೇತ್ರಗಳಿಗೆ  ಹೋಗುವವರಲ್ಲಿ ಎರಡು ರೀತಿಯ ಜನರಿರುತ್ತಾರೆ. ಪವಿತ್ರ ದಿನ ಎಂದು ಅವರು ಭಾವಿಸುವ ದಿನಗಳಂದೇ ಅದು ಎಷ್ಟೆಲ್ಲ ಕಷ್ಟ ತಮಗೆ ಮತ್ತು ಇತರರಿಗೆ ಆದರೂ ಸರಿ ಅಂದೇ ಅಲ್ಲಿಗೆ ಹೋಗಿ ದಟ್ಟಣೆಯನ್ನು ಉಂಟು ಮಾಡುವವರು ಒಂದು ಬಗೆಯವರಾದರೆ ಧಾರ್ಮಿಕ ಆಚರಣೆಗಳಲ್ಲಿ ಅಷ್ಟಾಗಿ ನಂಬಿಕೆ ಇರದಿದ್ದರೂ ಯಾವಾಗಲೋ ಸಮಯ ಸಿಕ್ಕಾಗ ಇಂತಹ ಸ್ಥಳಗಳಿಗೆ ಹೋಗಿ ಒಂದು ಸುತ್ತು ಹೊಡೆದು ಅಲ್ಲಿನ ಪರಿಸರಸೌಂದರ್ಯ, ಜನವರ್ತನೆ ಇತ್ಯಾದಿಗಳನ್ನು ನೋಡಿಕೊಂಡು ಬರುವಂತಹ ನನ್ನಂಥವರು ಇನ್ನೊಂದು ಬಗೆಯವರು. 

ನಿನ್ನೆ ಮಹಾ ಕುಂಭಮೇಳ ನಡೆದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮಕ್ಕೆ ಹಿಂಗೇ ಹೋಗಿದ್ದೆ. ಬಹಳ ದಟ್ಟಣೆ ಇರದಿದ್ದರೂ ಜನ ಇದ್ದರು. ದೋಣಿ ವಿಹಾರ ಮಾಡಿ ಅಲ್ಲಿನ ನಿಸರ್ಗ ಸೌಂದರ್ಯ ಸವಿದೆ. ನದಿ ಕೂಡುವಲ್ಲಿ ನಾನು ಮುಳುಗಿ ಏಳದಿದ್ದದ್ದು ಮತ್ತು ಗಂಗಾಪೂಜೆ ಮಾಡದೇ ಇದ್ದದ್ದು ನನ್ನ ದೋಣಿಯವನಿಗೆ ಸಹಜವಾಗಿಯೇ ಆಶ್ಚರ್ಯ ಉಂಟುಮಾಡಿತು. 'ಇಂತಹವರು ಇಲ್ಲಿಗೆ ಬರುವುದಾದರೂ ಏತಕ್ಕೆ' ಎಂದು ಅವನಿಗೆ ಅನ್ನಿಸಿರಲೂಬ‌ಹುದು. ಭಕ್ತರು ಗಂಗಾ ಯಮುನಾ ಸರಸ್ವತಿ ಮೂರೂ ನದಿ ಮಾತೆಯರಿಗೆ ಎಂದು ಮೂರು ಮೂರು ತೆಂಗಿನಕಾಯಿ ತೆಗೆದುಕೊಂಡು ಪೂಜೆ ಸಲ್ಲಿಸಿ ನದಿಗೆ ಅವುಗಳನ್ನು ತಂದ ಪ್ಲಾಸ್ಟಿಕ್ ಚೀಲದೊಂದಿಗೆ ಹಾಕುತ್ತಿದ್ದರು. ಉತ್ತರ ಪ್ರದೇಶ ಸರ್ಕಾರದ ವಾಹನವೊಂದು ಇವುಗಳನ್ನು ಎತ್ತುತ್ತಾ ನೀರು ಶುದ್ಧೀಕರಣ ಮಾಡುತ್ತಲೇ ಇತ್ತು. ಕುಂಭಮೇಳ ನಡೆದು ಇಷ್ಟು ದಿನ ಆದರೂ ಅದರ ಪಳೆಯುಳಿಕೆಗಳು ಕಿಲೋಮೀಟರ್ ಗಟ್ಟಲೆ ಅಗಲವಾಗಿರುವ ಗಂಗೆಯ ಅಂಗಳದಲ್ಲಿ ಇನ್ನೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನಸ್ಸು ಸ್ವಚ್ಛ ಆಗದೆ ನದಿಗಳು ಸ್ವಚ್ಛ ಹೋಗುವುದಾದರೂ ಹೇಗೆ?

ಇವೆಲ್ಲ ನೋಡಿಕೊಂಡು ನನ್ನ ದೋಣಿಗೆ ಹುಟ್ಟುಹಾಕಿದ ಬಿಹಾರಿವಾಲಾಗೆ ನಿಗದಿಯಾದ ಹಣಕ್ಕಿಂತ ತುಸು ಹೆಚ್ಚೇ ಹಣವನ್ನು ಕೈಗಿಟ್ಟೆ. ಪೂಜೆ ಮಾಡಿಸದ ಕಾರಣಕ್ಕೆ ನನ್ನನ್ನು ತುಸು ಅನುಮಾನದಿಂದ ನೋಡಿದ್ದ ಅವನಿಗೆ ಈಗ ಬಡತನವನ್ನು ಭಕ್ತರಿಗಿಂತ ನನ್ನಂತಹ ನಾಸ್ತಿಕರೇ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಹಾಯ ಹಸ್ತ ಚಾಚುತ್ತಾರೆ ಅನ್ನಿಸಿರಬೇಕು. ಕೃತಜ್ಞತೆಯಿಂದ ಕೈ ಮುಗಿದ.

ಪ್ರಯಾಗ್ ರಾಜ್ ಅಂದರೆ ಬರೀ ಕುಂಭಮೇಳ ಮಾತ್ರ ಅಲ್ಲ. ಅಲ್ಲಿ ನಾವು ನೋಡಬೇಕಾದ ಅನೇಕ ಮಹತ್ವದ ಸ್ಥಳಗಳಿವೆ. ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಬ್ರಿಟೀಷರೊಂದಿಗಿನ ಕಾಳಗದಲ್ಲಿ ಜೀವತ್ಯಾಗ ಮಾಡಿದ ಸ್ಥಳವನ್ನು ಸ್ಮಾರಕ ಉದ್ಯಾನವಾಗಿ ಮಾಡಿದ್ದಾರೆ. ಅಲ್ಲಿಗೆ ಕಾಲಿಟ್ಟರೆ ಸಾಕು ಹೆಮ್ಮೆ ಗೌರವದ ಭಾವನೆ ಮೂಡುತ್ತದೆ. ಅದರ ಪಕ್ಕದಲ್ಲಿ ಇರುವ ಬೃಹತ್ತಾದ ಮತ್ತು ಮಹತ್ವದ 'ಅಲಹಾಬಾದ್ ಮ್ಯೂಸಿಯಂ ಇದೆ. ಇಲ್ಲಿನ ಮೂರನೆಯ ಅಂತಸ್ತಿನ ನೆಹರೂ ಗ್ಯಾಲರಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಒಂದು ಉಡುಗೊರೆ ಇದೆ. 1956 ರಲ್ಲಿ ವಿಶಾಲವಾದ ಕರ್ನಾಟಕ ರಚನೆಯಾದ ಸಂದರ್ಭದಲ್ಲಿ ನೆಹರೂ ಅವರಿಗೆ ನೀಡಿದ ಬೃಹತ್ ಆದ 'ಗೀತಾಬೋಧನೆ' ಕಾಷ್ಠ ಕೆತ್ತನೆಯಯ ಶಿಲ್ಪ ವೇ ಆ ಉಡುಗೊರೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಶಲಕರ್ಮಿಯೊಬ್ಬರು ಅದನ್ನು ಕೆತ್ತಿದ್ದಾರೆ. ಅಕ್ಬರ್ ಕಟ್ಟಿಸಿದ ಕೋಟೆ, ಹೂಯೆನ್ ತ್ಸಾಂಗ್ ಉಲ್ಲೇಖಿಸಿದ ಹರ್ಷವರ್ಧನ ಕಾಲದ ಸಾಮ್ರಾಟ್ ಅಶೋಕ ಗೆ ಸಂಬಂಧಿಸಿದ ನೆಲದೊಳಗೇ ಇರುವ 'ಪಾತಾಳಪುರಿ' ವನವಾಸ ಕಾಲದಲ್ಲಿ ಶ್ರೀರಾಮನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣಲು ಹೇಳಿದ ಭಾರಧ್ವಾಜ ಮುನಿಯ ಆಶ್ರಮ ಇವೆಲ್ಲವೂ ನೋಡತಕ್ಕ ಸ್ಥಳಗಳೆ.


ಮತ್ತೆ ಇಷ್ಟೆಲ್ಲ ನೋಡಿ ಭಾರತದ ರಾಜಕಾರಣದಲ್ಲಿ ಬಹಳಷ್ಟು ಮಹತ್ವದ ಚರ್ಚೆ ಮತ್ತು ತೀರ್ಮಾನಗಳು ನಡೆದ ಜವಾಹರ್ ಲಾಲ್ ಅವರು ತಂದೆ ಮೋತಿಲಾಲ್ ನೆಹರೂ ಅವರ ಮನೆ ನೋಡದೆ ಬರಲು ಸಾಧ್ಯವೇ! ಅಲ್ಲೆಲ್ಲಾ ಸುತ್ತಾಡಿ ಅವರು ತಮ್ಮ ಮೊಮ್ಮಗಳು ಇಂದಿರಾ ಪ್ರಿಯದರ್ಶಿನಿಯನ್ನು ಫಿರೋಜ್ ಗಾಂಧಿಗೆ ಮದುವೆ ಮಾಡಿಕೊಟ್ಟ ಅವರು ಮನೆಯಂಗಳದ ವೇದಿಕೆ ರೀತಿಯ ಕಟ್ಟೆಯ ಮೇಲೆ ತುಸು ಹೊತ್ತು ಕೂತೆದ್ದು ಬಂದೆವು. ಒಟ್ಟಾರೆ ಪ್ರಯಾಗ್ ರಾಜ್ ಭೇಟಿ ಖುಷಿ ಕೊಟ್ಟಿತು.

ಕೆಲವು ಫೋಟೋಗಳು ನಿಮಗಾಗಿ..

ರಾಬು

೦೯-೦೫-೨೦೨೫.


No comments:

Post a Comment