Wednesday, May 21, 2025

ಮಾದರಿ ಮಹಾಕಾವ್ಯಮಂದಿರ ʻತುಳಸಿ ಭವನʼ

 ಮಾದರಿ ಮಹಾಕಾವ್ಯಮಂದಿರ ʻತುಳಸಿ ಭವನʼ


ಇಡೀ ಉತ್ತರ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿರುವ ರಾಮಾಯಣವೆಂದರೆ ಅದು ತುಳಸಿ ರಾಮಾಯಣ ಎಂದು ಕರೆಯಲ್ಪಡುವ ʻಶ್ರೀ ರಾಮಚರಿತ ಮಾನಸʼ. ತಮ್ಮ ಇಡೀ ಮಹಾಕಾವ್ಯದಲ್ಲಿ ರಾಮನ ಅವತಾರದ ಬಗ್ಗೆ ಅವನ ಅತಿಮಾನುಷ ಶಕ್ತಿಯ ಬಗ್ಗೆ ಮನಸೋ ಇಚ್ಚೆ ವರ್ಣಿಸುವ ತುಳಸಿದಾಸರಿಗೆ ಕೊನೆಗೂ ತೃಪ್ತಿಯಾಗದೇ ʻರಾಮಪ್ರಭುವಿನ ಅತಿಮಾನುಷ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ನನ್ನಿಂದ ವರ್ಣಿಸಲು ಸಾಧ್ಯವಾಗಿಲ್ಲ; ಅದು ನನ್ನಿಂದ ಆಗದ ಕೆಲಸʼ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.


ಈ ಕಾವ್ಯದ ಒಂದು ಘಟನೆಯನ್ನು ನೆನಪು ಮಾಡಿಕೊಳ್ಳುವುದಾದರೆ ರಾಮ ಇನ್ನೂ ಚಿಕ್ಕಕೂಸು. ಕೌಸಲ್ಯೆ ಆ ಕೂಸನ್ನು ತೊಟ್ಟಿಲಲ್ಲಿ ಹಾಕಿರುತ್ತಾಳೆ. ಆ ಕಡೆ ಪೂಜೆ ಮಾಡಿ ದೇವರ ಮನೆಯಲ್ಲಿ ದೇವರಿಗೆ ನೈವೇದ್ಯವನ್ನು ಇಟ್ಟಿರುತ್ತಾಳೆ. ತುಸು ಹೊತ್ತಿನ ನಂತರ ದೇವರ ಮನೆಗೆ ಹೋಗಿ ಅವಳು ನೋಡಿದರೆ ತೊಟ್ಟಿಲ ಕೂಸು ಅಲ್ಲಿಗೆ ಬಂದು ನೈವೇದ್ಯವನ್ನು ತಿನ್ನುತ್ತಿರುತ್ತದೆ. ಆಶ್ಚರ್ಯದಿಂದ ಅವಳು ತೊಟ್ಟಿಲಿಗೆ ಬಂದು ನೋಡುತ್ತಾಳೆ. ಕೂಸು ಅಲ್ಲಿಯೂ ಇದೆ. ಒಂದೇ ಕೂಸು ಎರಡು ಕಡೆ ಇದೆ! ಇದರಿಂದ ಅವಕ್ಕಾದ ಕೌಸಲ್ಯೆಗೆ ಕೂಸೇ ಸಮಾಧಾನ ಮಾಡುತ್ತದೆ. ತನ್ನ ದಿವ್ಯದರ್ಶನ ಮಾಡುತ್ತದೆ. ದೇವರನ್ನೇ ಮಗುವಾಗಿ ಪಡೆದದ್ದಕ್ಕೆ ಕೌಸಲ್ಯೆಗೆ ಏಕಕಾಲಕ್ಕೆ ಹೆಮ್ಮೆಯೂ ಒಂದು ರೀತಿಯ ಕೀಳರಿಮೆಯೂ ಸಹಜವಾಗಿ ಆಗುತ್ತವೆ. ʻಅಯ್ಯೋ ದೇವ, ಮೂರು ಲೋಕವನ್ನೂ ಸಲಹುವ ನಿನ್ನನ್ನೇ ಸಲಹುವ ಕೆಲಸ ನನಗೆ ಬಂತೇ?ʼ ಎಂದು ಅವಳು ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಾಮ ತನ್ನ ದಿವ್ಯದರ್ಶನ ತೋರಿಸಿ ತಾನು ದೇವರ ಅವತಾರಿ ಎಂಬುದನ್ನು ಯಾರಿಗೂ ಹೇಳಬೇಡ ಎಂದು ಕೌಸಲ್ಯೆಗೆ ಹೇಳುತ್ತಾನೆ. ಅವಳು ʼಆಗಲಿ ಪ್ರಭುʼ ಎಂದು ನಮಸ್ಕರಿಸುತ್ತಾಳೆ.


ಹೀಗೆ ಇಡೀ ಕಾವ್ಯದ ತುಂಬ ರಾಮನ ಅವತಾರದ ಗುಣಗಾನ ಮಾಡುವ ತುಳಸಿದಾಸರ ಮಹಾಕಾವ್ಯ ತನ್ನ ಕಾವ್ಯ ಸೌಂದರ್ಯಕ್ಕಾಗಿ, ವರ್ಣನೆಗಳಿಗಾಗಿ ನಮ್ಮ ಮನಸ್ಸನ್ನು ಸೆಳೆಯುವುದು ನಿಜವಾದರೂ ತಾತ್ವಿಕವಾಗಿ ಅದು ನನ್ನಂಥವರಿಗೆ ಅಷ್ಟೇನೂ ಖುಷಿಕೊಡುವ ಕಾವ್ಯವಲ್ಲ. ಏಕೆಂದರೆ ರಾಮಾವತಾರ ಏತಕ್ಕಾಗಿ ಆಯಿತು ಎಂದು ಹೇಳುವಾಗ ತುಳಸಿದಾಸರು, ಧೇನು ಮತ್ತು ಬ್ರಾಹ್ಮಣರ ಉದ್ಧಾರಕ್ಕಾಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮತ್ತು ಇಡೀ ಕಾವ್ಯದಲ್ಲಿ ಅದೇ ಕೆಲಸವನ್ನು ಅವರು ರಾಮನಿಂದ ಮಾಡಿಸುತ್ತಾರೆ. ತಾತ್ವಿಕವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಒಂದು ಸಾಹಿತ್ಯ ಕೃತಿಯಾಗಿ ಓದುವ ಖುಷಿಯನ್ನು ತುಳಸಿ ರಾಮಾಯಣ ಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ರಾಮಚರಿತ ಮಾನಸದ ತುಳಸಿದಾಸರಿಗೂ ವಾರಣಾಸಿಗೂ ಬಿಡದ ಸಂಬಂಧ. ಈ ಕಾರಣದಿಂದಲೋ ಏನೋ ವಾರಣಾಸಿ(ಕಾಶಿ)ಯಲ್ಲಿ ಅವರಿಗೆ ಮತ್ತು ಅವರ ಕಾವ್ಯಕ್ಕೆ ಎಂದೇ ಒಂದು ಬೃಹತ್‌ ಮಂದಿರ ನಿರ್ಮಾಣವಾಗಿದೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಪ್ರವಾಸದಲ್ಲಿದ್ದ ನಾನು ಈ ಮಂದಿರವನ್ನು ನೋಡಲು ಹೋಗಿದ್ದೆ. ಎರಡು ಅಂತಸ್ತಿನ ಈ ಮಂದಿರದ ವಿಶೇಷತೆ ಎಂದರೆ ಎರಡೂ ಅಂತಸ್ತಿನ ಸುತ್ತಲ ಇಡೀ ಕಟ್ಟಡದ ಒಳಭಾಗದ ಗೋಡೆಗಳನ್ನು ಅಮೃತಶಿಲೆಯಲ್ಲಿ ರಾಮಚರಿತ ಮಾನಸ ಮಹಾಕಾವ್ಯದ ಮೂಲ ಕಾವ್ಯದ ಎಲ್ಲ ಶ್ಲೋಕಗಳು ಮತ್ತು ಅವುಗಳ ಸರಳ ಅರ್ಥವನ್ನು ಕೆತ್ತಿಸಿ ಹಾಕಿರುವುದು. ಕವಿಗಳ ಕಾವ್ಯಗಳ ಕೆಲವು ಮುಖ್ಯ ಭಾಗಗಳನ್ನು ಗೋಡೆಗಳ ಮೇಲೆ ಹಾಕಿಸುವುದು ಸಾಮಾನ್ಯ ಸಂಗತಿ. ಕುಪ್ಪಳಿಯಲ್ಲಿ ಕುವೆಂಪು ಸ್ಮಾರಕ ಭವನದಲ್ಲಿ ಕೂಡ ಹೀಗೆ ಕಲ್ಲಿನಲ್ಲಿ ಕವಿಯ ಕಾವ್ಯಸೂಕ್ತಿಗಳನ್ನು ಕೆತ್ತಿಸಿ ಹಾಕಲಾಗಿದೆ. ಆದರೆ ಒಬ್ಬ ಕವಿಯ ಇಡೀ ಮಹಾಕಾವ್ಯವನ್ನೇ ಅದರಲ್ಲೂ ಅರ್ಥದ ಸಮೇತ ಹೀಗೆ ಕಲ್ಲಿನಲ್ಲಿ ಕೆತ್ತಿಸಿ ಹಾಕಿರುವುದು ಅಪರೂಪ. ಇದು ನಾನು ಕಂಡ ಏಕೈಕ ಉದಾಹರಣೆ. ಸಮಯ ವಿದ್ದವರು ಈ ಮಂದಿರದಲ್ಲಿ ನಿಂತು ಕುಂತು ಇಡೀ ಕಾವ್ಯವನ್ನೇ ಓದಬಹುದು!

ಹೀಗೆ ಇಡೀ ಕಾವ್ಯವನ್ನು ಗೋಡೆಗಳಲ್ಲಿ ಕೆತ್ತಿರುವುದರ ಜೊತೆಗೆ ಕೆಳ ಅಂತಸ್ತಿನಲ್ಲಿ ಸ್ವತಃ ಕಾವ್ಯವನ್ನು ತುಳಸೀದಾಸರು ಓದಿಹೇಳುತ್ತಿರುವಂತೆ ತಂತ್ರಜ್ಞಾನಬಳಸಿ ಹಾವ ಭಾವ ಧ್ವನಿ ಇವುಗಳನ್ನೊಳಗೊಂಡ ತುಳಸೀದಾಸರ ಪ್ರತಿಕೃತಿ ಮಾಡಿದ್ದಾರೆ. ಆ ಮೂರ್ತಿಯ ಮುಂದೆ ಹೋಗಿ ನಿಂತರೆ ಅವರು ನಮಗೆ ಮಹಾಕಾವ್ಯದ ಹಾಳೆಗಳನ್ನು ತಿರುವುತ್ತಾ ತಮ್ಮ ಕಾವ್ಯವ
ನ್ನು ನಮಗೆ ಓದಿ ಹೇಳುತ್ತಿರುವ ಮತ್ತು ನಾವು ಆಸ್ವಾದಿಸುತ್ತಿರುವ ಅನುಭವವಾಗುತ್ತದೆ.


ಕಟ್ಟಡದ ಮೇಲಂತಸ್ತಿನಲ್ಲಿ ತುಳಸಿ ರಾಮಾಯಣದಲ್ಲಿ ಬರುವ ಪ್ರಮುಖ ಘಟನೆಗಳ ಚಲನಶೀಲ ಗೊಂಬೆಗಳ ದೃಶ್ಯಾವಳಿಗಳನ್ನು ನಿರ್ಮಿಸಿದ್ದಾರೆ. ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಅತ್ರಿಮುನಿಗಳ ದರ್ಶನ, ಅಹಲ್ಯಾ ಪ್ರಕರಣ, ಸೀತಾಪರಹಣ, ರಾಮರಾವಣರ ಯುದ್ಧ ಹೀಗೆ ಅನೇಕ ಚಿತ್ರಾವಳಿಗಳು ದೃಶ್ಯಾವಳಿಗಳಾಗಿ ಇಲ್ಲಿ ರೂಪುಗೊಂಡು ಇಡೀ ರಾಮಾಯಣ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿವೆ. ಓದಲು ಆಗದವರು ಇವನ್ನು ನೋಡಿ ಆನಂದಿಸಬಹುದು.


ತುಳಸಿದಾಸರ ಕಾವ್ಯದ ತಾತ್ವಿಕತೆಯ ಬಗ್ಗೆ ನಮಗೆ ವಿರೋಧವಿದ್ದರೂ ಒಂದು ಕಾವ್ಯವನ್ನು ಹೇಗೆಲ್ಲ ಜನರಿಗೆ ಮುಟ್ಟಿಸಬಹುದು ಎಂಬುದಕ್ಕೆ ಈ ಮಂದಿರ ಒಂದು ಉತ್ತಮ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಳ ಒಳ್ಳೆಯ ಪ್ರಯತ್ನ. ಮತ್ತು ಇತರೆ ಭಾಷೆಗಳ ದೊಡ್ಡ ಕವಿಗಳ ಹೆಸರಲ್ಲಿರುವ ಟ್ರಸ್ಟ್‌ ಗಳೂ ತಮ್ಮ ತಮ್ಮ ಕವಿಗಳ ಬಗ್ಗೆ ಇಂಥದ್ದೇನನ್ನಾದರೂ ಮಾಡಬಹುದೇ ಎಂದು ಆಲೋಚಿಸಲು ಇದು ಒಂದು ಮಾದರಿ ಆಗಿರುವುದಂತೂ ಸತ್ಯ!


ಡಾ. ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫

Monday, May 19, 2025

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಯುದ್ಧತುರಿಕೆಯ ಹೊತ್ತಲ್ಲಿ ಬುದ್ಧನಾಡಲ್ಲಿ ಪಯಣ

ಡಾ. ರಾಜೇಂದ್ರ ಬುರಡಿಕಟ್ಟಿ

ಸುಜನಾ ಅವರ ʻಯುಗಸಂಧ್ಯಾʼ ಎಂಬ ಮಹಾಕಾವ್ಯ ಮಹಾಭಾರತದ ಯುದ್ಧಾನಂತರದ ಸಾವು ನೋವುಗಳ ಧಾರುಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನೀಡಿ ಯುದ್ಧದ ಪರಿಣಾಮಗಳ ಭೀಕರತೆಯನ್ನು ಮನದಟ್ಟುಮಾಡಿಸುತ್ತದೆ. ಕುವೆಂಪು ಅವರ ʻಸ್ಮಶಾನ ಕುರುಕ್ಷೇತ್ರಂʼ ನಾಟಕವಂತೂ ಈ ಯುದ್ಧಗಳು ಉಂಟುಮಾಡುವ ಕಷ್ಟನಷ್ಟಗಳು, ದುಕ್ಕ ದುಮ್ಮಾನಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತದೆ. ಸಾರಾ ಅಬೂಬಕ್ಕರ್‌ ಅವರ ʼಯುದ್ಧʼ ಕಥೆ ಈ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡ ಸಾಮಾನ್ಯ ಕುಟುಂಬವೊಂದರ ಸಂಕಟವನ್ನು ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಡುತ್ತದೆ ಮತ್ತು ವೈರತ್ವದ ಗಡಿರೇಖೆಗಳನ್ನೂ ಮೀರಿ ಮಾನವೀಯತೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಎತ್ತಿತೋರಿಸುತ್ತದೆ. ಇಂತಹ ಸಾಹಿತ್ಯ ಕೃತಿಗಳನ್ನು ಓದಿಕೊಂಡವರು ಹಾಗಲ್ಲದಿದ್ದರೂ ಕೊನೆಯ ಪಕ್ಷ ಅವನ್ನು ಕೇಳಿ ತಿಳಿದವರು, ಅವುಗಳಿಂದ ಪ್ರಭಾವಿತರಾದವರು ಯುದ್ಧದ ಕರಾಳತೆಯನ್ನು ಚೆನ್ನಾಗಿಯೇ ಯೋಚಿಸಬಲ್ಲರು. ಹೀಗಾಗಿಯೇ ಭಾರತ ಪಾಕಿಸ್ತಾನಗಳು ಇತ್ತೀಚೆಗೆ ತುದಿಗಾಲಿನಲ್ಲಿ ಯುದ್ದಕ್ಕೆ ನಿಂತಿರುವ ಸಂದರ್ಭದಲ್ಲಿ ಅವರು ಭಾರತ ಯುದ್ದಕ್ಕೆ ಮುನ್ನುಗ್ಗುವುದನ್ನು ಬೆಂಬಲಿಸಲಿಲ್ಲ. ಹಾಗಾಗಿ ಅವರೆಲ್ಲ ʻಯುದ್ಧ ಬೇಡʼ ಎಂದೇ ಹೇಳಿದರು.

ಆದರೆ ಅಂಥವರನ್ನೆಲ್ಲ ʻಹೇಡಿಗಳುʼ ಎಂದೋ ʼದೇಶ ವಿರೋಧಿಗಳುʼ ಎಂದೋ ಬಿಂಬಿಸಿ ಹಳಿಯುವ ದೊಡ್ಡ ʻದೇಶಭಕ್ತ ಜನವರ್ಗʼವೊಂದು ನಮ್ಮಲ್ಲಿ ಸಕ್ರಿಯವಾಗಿದೆ. ಈ ಜನವರ್ಗವನ್ನು ಒಂದು ದೇಶಪ್ರೇಮಿ ವರ್ಗ ಅನ್ನುವುದಕ್ಕಿಂತ ʻರಾಜಕೀಯ ಪ್ರೇರಿತ ಜನವರ್ಗʼ ಎನ್ನುವುದೇ ಸರಿ. ಏಕೆಂದರೆ ಈ ವರ್ಗದವರ ಆಲೋಚನೆಯಲ್ಲಿ ಒಂದು ದೃಢತೆಯಾಗಲೀ ಸ್ಪಷ್ಟತೆಯಾಗಲೀ ಇದ್ದಂತಿಲ್ಲ. ವಿಚಾರವಾದಿಗಳು ʻಯುದ್ಧ ಬೇಡʼ ಎನ್ನುವಲ್ಲಿ ಅವರಿಗೆ ತಮ್ಮ ಆಲೋಚನೆಯ ಬಗ್ಗೆ ಒಂದು ದೃಢತೆ ಮತ್ತು ಸ್ಪಷ್ಟತೆ ಇದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ ಇವರು ಯಾವಾಗಲೂ ʻಯುದ್ಧ ಬೇಕುʼ ಎನ್ನುವ ವಾದಕ್ಕೆ ಅಂಟಿಕೊಳ್ಳಲಿಲ್ಲ. ಇವರು ಒಪ್ಪಿಕೊಂಡಿರುವ ಜನನಾಯಕರು ಯುದ್ಧಕ್ಕೆ ಮುಂದಾದಾಗ ಇವರೆಲ್ಲ ʻಅದೇ ಸರಿʼ ಎಂದು ವಾದಮಾಡಿದರೆ ಅವರು ಯುದ್ಧದಿಂದ ಹಿಂದಕ್ಕೆ ಹೆಜ್ಜೆ ಇಟ್ಟಾಗ ʻಇದೇ ಸರಿʼ ಎಂದು ಪ್ಲೇಟು ಬದಲಿಸಿ ವಾದಮಾಡಿದರು! ʻಅದು ಒಂದು ತಂತ್ರʼ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಹಾಗೆ ಬಂದರೆ ಹಾಗೆ; ಹೀಗೆ ಬಂದರೆ ಹೀಗೆ! ಇವರೆಲ್ಲ ಮಳೆ ಬಂದ ಕಡೆ ಕೊಡೆ ಹಿಡಿಯುವವರು!



ಯುದ್ಧ ವಾಸ್ತವವಾಗಿ ಗಡಿಯಲ್ಲಿ ನಡೆಯಿತೋ ಇಲ್ಲವೋ ಆದರೆ ನಮ್ಮ ಕೆಲವು ಟಿವಿ ಚಾನೆಲ್‌ ಗಳಂತೂ ಈ ವಿಷಯವನ್ನು ಹಿಡಿದುಕೊಂಡು ದಿನಗಟ್ಟಲೆ ತೌಡುಕುಟ್ಟುತ್ತಾ ತಾವೇ ಸ್ವತಃ ರಣರಂಗದಲ್ಲಿ ನಿಂತು ವರದಿಮಾಡುತ್ತಿರುವಂತೆ ಫೋಜುಕೊಡುತ್ತಾ ಜನರಲ್ಲಿ ಅನಗತ್ಯವಾದ ದ್ವೇಷ ಅಸೂಯೆ, ಕೋಪಗಳಂತಹ ನಕಾರಾತ್ಮಕ ಭಾವನೆಗಳು ಉದ್ಧೀಪನವಾಗುವಂತೆ ಮಾಡಿ ನಮ್ಮ ನಮ್ಮಲ್ಲಿಯೇ ʻಮೌಖಿಕಯುದ್ಧʼಮಾಡಿಸಿದವು! ಇನ್ನು ನಮ್ಮ ಜನ ಸಾಮಾಜಿಕ ಜಾಲತಾಣದಲ್ಲಿಯಂತೂ ಕಳೆದ ಮೂರುನಾಲ್ಕು ವಾರಗಳ ಕಾಲ ʻಅಕ್ಷರಯುದ್ಧʼ ಮಾಡಿ ಈಗ ಪ್ರಕ್ಷುಬ್ಧ ಸಾಗರವು ಶಾಂತವಾಗುವಂತೆ ಆಗಿದ್ದಾರೆ. ಅದರಲ್ಲಿ ನಮ್ಮ ಕೆಲವು ʻದೇಶಭಕ್ತʼರಂತೂ ತಾವೇ ಈಗ ಯುದ್ಧಭೂಮಿಗೆ ಹೊರಡಲು ಸಿದ್ಧರಿರುವವರಂತೆ ತೊಡೆತಟ್ಟಿ ವೀರಾವೇಶ ತೋರುತ್ತಿದ್ದದ್ಧಂತೂ ಬಹಳ ತಮಾಸೆಯಾಗಿ ಕಾಣುತ್ತಿತ್ತು. ಬಹುಶಃ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಅಂಗವಾಗಿರುವ ದೇಶದ ಪ್ರಜೆಗಳಿಗೆ ಹಾಗೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಲು ಆಗುವುದಿಲ್ಲವೆಂಬ ಖಾತರಿಯಿಂದಲೇ ಇವರು ಹೀಗೆಲ್ಲ ಮಾಡಿದ್ದೂ ಇದ್ದೀತು! ಇವರೆಲ್ಲರದೂ ಯುದ್ಧಪ್ರೇರಿತ ರಾಷ್ಟ್ರಭಕ್ತಿ. ಯುದ್ಧರಂಗದಿಂದ ಸಾಕಷ್ಟು ದೂರದಲ್ಲಿ ಸುರಕ್ಷಿತ ಅಂತರದಲ್ಲಿ ನಿಂತುಕೊಂಡು ಈ ಯುದ್ಧಪ್ರೇರಿತ ದೇಶಭಕ್ತಿಯನ್ನು ಮೈಮೇಲೆ ಆವಾಹಿಸಿಕೊಂಡು ನಾವು ಯುದ್ಧಹುಮ್ಮಸ್ಸನ್ನು ತೋರುವುದು ಬೇರೆ; ಯುದ್ಧರಂಗದಲ್ಲಿ ಸಿಕ್ಕಿಹಾಕಿಕೊಂಡು ನಮ್ಮದಲ್ಲದ ತಪ್ಪಿಗಾಗಿ ನಾವು ನರಳಾಡುವುದು ಬೇರೆ. ಬಹುತೇಕ ಯುದ್ಧಗಳು ನಡೆದಾಗ ಅವುಗಳಿಂದ ಸಂಕಷ್ಟಕ್ಕೆ ಈಡಾಗುವ ಬಹುತೇಕ ಜನ ಯುದ್ಧಕ್ಕೆ ಯಾವರೀತಿಯಿಂದಲೂ ಕಾರಣವಲ್ಲದ ಅಮಾಯಕರೇ ಆಗಿರುತ್ತಾರೆ; ಅದು ಯಾವ ಕಡೆಗೇ ಆಗಲಿ. ಆದರೆ ಯುದ್ಧಪ್ರೇರಿತ ರಾಷ್ಟ್ರಭಕ್ತಿಯ ಸಾಮಾನ್ಯ ಲಕ್ಷಣ ಎಂದರೆ ಹೀಗೆ ತಮ್ಮದಲ್ಲದ ತಪ್ಪಿನಿಂದ ಯುದ್ಧಕ್ಕೆ ಸಿಲುಕಿಕೊಂಡು ಸಾವುನೋವುಗಳನ್ನು ಅನುಭವಿಸುವ ಅಮಾಯಕರ ಬಗೆಗೆ ನಮ್ಮ ಅಂತರಾಳದಲ್ಲಿ ಸಹಜವಾಗಿ ಇರುವ ʻಮಿಡಿಯುವ ಮಾನವೀಯತೆʼಯನ್ನು ಕೊಂದುಹಾಕುವುದು! ಮತ್ತು ʻದೇಶಭಕ್ತಿʼಯ ಹೆಸರಿನಲ್ಲಿ ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಕ್ರೂರಿಗಳನ್ನಾಗಿ ಮಾಡುವುದು!

ಹೀಗೆ ಒಂದು ವ್ಯವಸ್ಥೆಯೆಲ್ಲ ಯುದ್ಧದ ತುರಿಕೆ ಹಚ್ಚಿಕೊಂಡು ಮೈಕೈ ಕೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಯುದ್ಧದ ಕಾರಣದಿಂದಲೇ, ʻಯುದ್ಧ ಬೇಡʼ ಎಂದದ್ದಕ್ಕೇ ಮನೆಬಿಡಬೇಕಾಗಿ ಬಂದ ಮತ್ತು ಆ ಮೂಲಕ ತನ್ನ ದೀರ್ಘ ತಪಸ್ಸಿನ ಮೂಲಕ ಈ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೇವರ ಸಹಾಯವಿಲ್ಲದೇ ಮನುಷ್ಯರಾದ ನಾವೇ ನಮ್ಮ ತಿಳಿವಳಿಕೆ ಮತ್ತು ಪರಿಶ್ರಮ ಪೂರ್ಣ ಕಾರ್ಯಗಳಿಂದ ಬಗೆಹರಿಸಿಕೊಳ್ಳಬಹುದು ಮಾತ್ರವಲ್ಲ ಬಗೆಹರಿಸಿಕೊಳ್ಳಬೇಕುʼ ಎಂಬ ಅಭೂತಪೂರ್ವ ಸಂದೇಶವನ್ನು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಸಾರಿ ಹೇಳಿದ ಜಗತ್ತುಕಂಡ ಮಹಾನ್‌ ಚಿಂತಕ, ದಾರ್ಶನಿಕ ಗೌತಮ ಬುದ್ಧನ ನಾಡಿನಲ್ಲಿ ನಾನು ಮತ್ತು ನನ್ನ ಹೆಂಡತಿ ತಿರುಗಾಡುತ್ತಿದ್ದೆವು. ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಸಿದ್ಧಾರ್ಥನಿಗೆ ಜ್ಞಾನೋದಯವಾಗಿ ಬುದ್ಧನಾದ ಎಂದು ಹೇಳಲಾಗುವ ಬಿಹಾರ ರಾಜ್ಯದ ಗಯಾ ಜಿಲ್ಲೆಯ ಬೋಧಗಯಾದ ಭೋಧಿವೃಕ್ಷ ಸ್ಥಳಕ್ಕೆ (ಮಹಾಬೋಧಿ ವಿಹಾರ) ಹೋಗಿದ್ದೆವು. ಅಲ್ಲಿಗೆ ಬರುವುದಕ್ಕೂ ಹಿಂದಿನ ದಿನ ಬುದ್ಧನು ಮೊಟ್ಟಮೊದಲು ತನ್ನ ಬೋಧನೆಯನ್ನು ಆರಂಭ ಮಾಡಿದ ಉತ್ತರ ಪ್ರದೇಶದ ವಾರಣಾಸಿ ಬಳಿಯ ಸಾರಾನಾಥಕ್ಕೂ ಹೋಗಿ ಅಲ್ಲಿನ ದೇವಾಲಯಗಳು ಸ್ಥೂಪ ಮತ್ತು ನವೀಕೃತ ಕೃತಕ ಅಶೋಕಸ್ಥಂಭ ಇವುಗಳ ದರ್ಶನ ಮಾಡಿಕೊಂಡು ಬಂದಿದ್ದೆವು.

ನಾವು ಬೆಳಿಗ್ಗೆ ಗಯಾದಿಂದ ಬೋಧಗಯಾಕ್ಕೆ ಹೋಗಬೇಕಾಗಿತ್ತು. ಗಯಾದಿಂದ ಸುಮಾರು ಹದಿನೈದು ಕಿಲೋ ಮೀಟರ್‌ ದೂರದಲ್ಲಿರುವ ಬೋಧಗಯಾಕ್ಕೆ ಹೋಗಲಿಕ್ಕೆ ಬಸ್ಸುಗಳ ಮತ್ತು ಸವಾರಿ ಆಟೋಗಳ ವ್ಯವಸ್ಥೆ ಇದೆಯಾದರೂ ಅವು ನಮ್ಮ ಅನುಕೂಲಕ್ಕೆ ಹೊಂದಿಕೆ ಆಗದಿದ್ದಕ್ಕೆಇಡೀ ದಿನಕ್ಕೆ ಒಂದೂವರೆ ಸಾವಿರ ಕೊಟ್ಟು ಒಂದು ಆಟೋ ಗೊತ್ತುಮಾಡಿಕೊಂಡು ಹೊರಟೆವು. ಬೋಧಗಯಾಕ್ಕೆ ಹೋದಾಗ ಬೆಳಿಗ್ಗೆ ಎಂಟುಗಂಟೆಯಾಗಿತ್ತಾದರೂ ನಮ್ಮಲ್ಲಿ ಮಧ್ಯಾಹ್ನ ಹನ್ನೆರಡು-ಒಂದು ಗಂಟೆಯ ವೇಳೆ ಇರುವ ಬಿಸಿಲು ಇತ್ತು. ಬುದ್ಧಪೂರ್ಣಿಮೆಯ ದಿನವನ್ನು ಆಚರಿಸಲು ಇಡೀ ಬೋಧಗಯಾ ಅಲಂಕೃತಗೊಂಡಿತ್ತು.

ನಾವು ಬೋಧಗಯಾದಲ್ಲಿ ಮೊದಲು ಹೋದದ್ದು ಬೃಹತ್‌ ಬುದ್ಧನ ವಿಗ್ರಹವನ್ನು. ಈ ವಿಗ್ರಹ ಇಡೀ ಬೋಧಗಯಾದ ಒಂದು ಮಹತ್ವದ ಆಕರ್ಷಣ ಸ್ಥಳ. ೧೯೮೯ ರಲ್ಲಿ ಜಪಾನಿನ ದಾನಿಯೊಬ್ಬರು ಈ ವಿಗ್ರಹವನ್ನು ಮಾಡಿಸಿದ್ದಾರೆ. ಹಣಕಾಸಿನ ಖರ್ಚು ಅವರದ್ದಾದರೂ ಅದನ್ನು ಕೆತ್ತಿದವರು ನಮ್ಮ ಉತ್ತರ ಪ್ರದೇಶದ ಶಿಲ್ಪಿಗಳು. ಉದ್ಘಾಟಿಸಿದ್ದು ದಲಾಯಿಲಾಮ. ಈ ಬೃಹತ್‌ ಬುದ್ಧನ ವಿಗ್ರಹದ ಪಕ್ಕದಲ್ಲಿಯೇ ಆತನ ಪ್ರಥಮ ಹಂತದ ಐದು ಜನ ಶಿಷ್ಯರ ಶಿಲಾಮೂರ್ತಿಗಳನ್ನೂ ಕೆತ್ತಲಾಗಿದೆ. ಅವೂ ಸಾಕಷ್ಟು ದೊಡ್ಡ ಮೂರ್ತಿಗಳೇ ಆದರೂ ಬುದ್ಧನ ಮೂರ್ತಿ ಅತ್ಯಂತ ದೊಡ್ಡದಿರುವುದರಿಂದ ಅದರ ಪಕ್ಕ ಅವು ತುಸು ಚಿಕ್ಕವಾಗಿ ಕಾಣುತ್ತವೆ ಅಷ್ಟೆ. ನಾವು ಹೋದಾಗ ಈ ಬೃಹತ್‌ ಬುದ್ಧನ ಮೂರ್ತಿಗೆ ಏನೋ ರಿಪೇರಿ ಕೆಲಸವೋ ಅಥವಾ ಹೆಚ್ಚುವರಿ ನಿರ್ವಹಣೆಯ ಕೆಲಸವೋ ನಡೆಯುತ್ತಿತ್ತಾದ್ದರಿಂದ ಅದರ ಎದುರು ನಿಂತು ಫೋಟೋ ತೆಗೆಸಿಕೊಳ್ಳುವ ನಮ್ಮ ಚಿಕ್ಕ ಆಸೆಗೆ ಆರಂಭದಲ್ಲಿ ತಣ್ಣೀರೆರಚಿದಂತೆ ಆಯಿತಾದರೂ ಅದು ತಕ್ಷಣವೇ ಬರೆಹರಿಯಿತು. ಅಲ್ಲಿಯೇ ಇದ್ದ ವೃತ್ತಿಛಾಯಾಗ್ರಾಹಕನೊಬ್ಬನ ಸಹಾಯವನ್ನು ಕೇಳಿದಾಗ ಅವನು ನಾನು ಮತ್ತು ನನ್ನ ಹೆಂಡತಿಯನ್ನು ಅದೇ ಮೂರ್ತಿಯ ಎದುರು ನಿಲ್ಲಿಸಿ ಆ ಕಂಬಿಗಳು ಬರದಂತೆಯೋ ಅಥವಾ ಮೊದಲೇ ತೆಗೆದಿದ್ದ ಬುದ್ಧನ ಮೂರ್ತಿಗೆ ನಮ್ಮ ಫೋಟೋ ಜೋಡಿಸಿಯೋ ಒಟ್ಟಿನಲ್ಲಿ ಹತ್ತು ನಿಮಿಷಗಳಲ್ಲಿ ನಮಗೆ ಎಂತಹ ಫೋಟೋ ಬೇಕಿತ್ತೋ ಅಂಥದ್ದನ್ನು ಮಾಡಿಕೊಟ್ಟ! ಅವನ ಕೈಗೆ ಎರಡು ನೂರು ರೂಪಾಯಿ ಇಟ್ಟು ಫೋಟೋ ತೆಗೆದುಕೊಂಡು ಮುಂದೆ ಹೊರಟೆವು.

ಬೋಧಗಯಾದಲ್ಲಿ ಸುತ್ತಾಡುವುದು ಅಂದರೆ ಬೌದ್ಧದರ್ಮದ ಪ್ರಭಾವವಿರುವ ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನೆಲ್ಲ ಒಂದು ಸುತ್ತುಹಾಕಿಕೊಂಡು ಬಂದ ಸಣ್ಣ ಅನುಭವವಾಗುತ್ತದೆ. ಇಲ್ಲಿ ಭೂತಾನ್‌, ಜಪಾನ್‌, ಮೈನ್ಮಾರ್‌, ಟಿಬೇಟ್‌, ಥೈಲ್ಯಾಂಡ್‌, ಕೋರಿಯಾ, ಚೀನಾ, ಶ್ರೀಲಂಕಾ ಒಳಗೊಂಡಂತೆ ಅನೇಕ ದೇಶಗಳ ಜನರು ಸೇರುತ್ತಾರೆ. ಆ ದೇಶಗಳಲ್ಲಿ ಕೆಲವು ದೇಶಗಳ ಮಾಂಟೇಸರಿಗಳೂ ಇಲ್ಲಿವೆ. ಆಯಾ ದೇಶಗಳ ಸಂಸ್ಕೃತಿಯನ್ನು ಅನುಸರಿಸಿ ಇವು ಅಲ್ಪಸ್ವಲ್ಪ ಭಿನ್ನವಾಗಿ ರಚಿತವಾಗಿವೆಯಾದರೂ ಒಟ್ಟಾರೆಯಾಗಿ ನೋಡಿದರೆ ಬಹಳಷ್ಟು ವ್ಯತ್ಯಾಸವೇನೂ ಕಾಣುವುದಿಲ್ಲ. ಅಲ್ಲೆಲ್ಲ ಆಯಾ ದೇಶಗಳಲ್ಲಿನ ಬೌದ್ಧಧರ್ಮೀಯ ಆಚರಣೆಗಳು ನಡೆಯುತ್ತವೆ.


ಆಯಾ ದೇಶಗಳು ಧರ್ಮಗುರುಗಳು ಜೊತೆಗೆ ಒಂದಿಷ್ಟು ಜನ ನಮಗೆ ನೋಡಲು ಮತ್ತು ಮಾತನಾಡಲು ಸಿಗುತ್ತಾರೆ. ಇವುಗಳಲ್ಲಿ ಒಂದಂತೂ ಬಹಳಷ್ಟು ಗಮನ ಸೆಳೆಯಿತು. ಅದರಲ್ಲಿ ಬುದ್ಧನ ವಿವಿಧ ಭಂಗಿಗಳ ಒಂದು ಸಾವಿರ ಮೂರ್ತಿಗಳನ್ನು ಕಟ್ಟಡದ ಒಳಗೋಡೆಗೆ ಜೋಡಿಸಿದ್ದಾರೆ. ಈ ಸಾವಿರ ಬುದ್ಧಮೂರ್ತಿಗಳೂ ಒಂದರಂತೆ ಇನ್ನೊಂದಿಲ್ಲ. ತುಸುವಾಧರೂ ಭಿನ್ನವಾಗಿವೆ; ಅನನ್ಯವಾಗಿವೆ! ನಾವು ಹೀಗೆ ವಿವಿಧ ರಾಷ್ಟ್ರಗಳ ಮಾಂಟೇಸರಿಗಳನ್ನು ನೋಡಿಕೊಂಡು ಎಲೆಲ್ಲೂ ಇರುವ ಬೃಹತ್‌ ಗಾತ್ರದ ಬುದ್ಧನ ಮೂರ್ತಿಗಳಿಗೆ ಒಂದೊಂದು ನಮಸ್ಕಾರ ಮಾಡಿ ಅಲ್ಲೆಲ್ಲ ಒಂದಿಷ್ಟು ಹೊತ್ತು ಕೂತೆದ್ದು ಬಂದೆವು.

ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳು ಬೆಳಿಗ್ಗೆ ಆರರಿಂದಲೇ ಆರಂಭವಾಗಿದ್ದವು  ಮತ್ತು ಇಡೀ ದಿನ ಅವು ನಡೆಯಲಿದ್ದವು. ನಾವು ವಿವಿಧ ಮಾಂಟೇಸರಿಗಳು ದೇವಾಲಯಗಳು ಎಲ್ಲ ಸುತ್ತಾಡಿ ಬೋಧಿವೃಕ್ಷವಿರುವ ಮಹಾವಿಹಾರ ಸ್ಥಳಕ್ಕೆ ಬರುತ್ತಿದ್ದಂತೆಯೇ ಬಿಹಾರದ ರಾಜ್ಯಪಾಲರು ಕಾರ್ಯಕ್ರಮ ಮುಗಿಸಿ ಹೊರಟರು. ಮೆರವಣಿಗೆಗಾಗಿ ಥೈಲ್ಯಾಂಡ್‌ ದೇಶದವರು ಸಿದ್ಧಗೊಳಿಸಲಾಗಿದ್ದ ಅಲಂಕೃತ ಸಾರೋಟಿನಲ್ಲಿನ ಬುದ್ಧನ ಎದುರು ನಿಂತು ಒಂದು ಫೋಟೋ ತೆಗೆದುಕೊಂಡು ಬೋಧಿವೃಕ್ಷದ ಹತ್ತಿರ ಬಂದೆವು. ಬೋಧಿವೃಕ್ಷದ ಮುಂದೆ ಇರುವ ಪುರಾತನ ಕಾಲದ ದೇವಾಲಯದಲ್ಲಿರುವ ಬುದ್ಧನ ಮೂರ್ತಿಯನ್ನು ನೋಡಲು ಬೇರೆ ಬೇರೆ ದೇಶಗಳಿಂದ ಬಂದು ನಿಂತ ಜನರ ಸಾಲು ಸುಮಾರು ಅರ್ಧ ಕಿಲೋಮೀಟರ್‌ ಗಿಂತ ದೊಡ್ಡದಾಗಿತ್ತು. ನಾವು ಬೇರೆ ಹೊರಗಡೆ ಚಪ್ಪಲಿಬಿಟ್ಟು ಹೋಗಿದ್ದೆವು.

ಮೇ ಬಿಸಿಲು ಬೆಂಕಿಯಂತೆ ಸುರಿಯುತ್ತಿತ್ತು. ಕಾಲಿಟ್ಟರೆ ಅದು ಕಲ್ಲೋ ಅಥವಾ ಅಗ್ನಿಕುಂಡವೋ ಎನ್ನುವ ಅನುಭವ. ಇಂಥದ್ದರಲ್ಲಿ ಜನ ಹಾಗೂ ಹೀಗೂ ಮಾಡಿ ಬುದ್ಧದರ್ಶನಕ್ಕಾಗಿ ಕಾದಿದ್ದರು. ನನಗಂತೂ ಈ ಸಾಲಿನಲ್ಲಿ ನಿಲ್ಲುವುದು ಸಾಧ್ಯವೇ ಇಲ್ಲವೆನ್ನಿಸಿ ಕೆಲವರು ಚಪ್ಪಲಿ, ಶೂ ಸಮೇತ ಇದ್ದದ್ದನ್ನು ನೋಡಿ ಹೊರಗೆ ಹೋಗಿ ಪಾದರಕ್ಷೆಗಳನ್ನು ಹಾಕಿಕೊಂಡಾದರೂ ಬಂದರೆ ನೋಡಬಹುದೇನೋ ಅನ್ನಿಸಿತು. ಆದರೆ ಮುಖ್ಯಧ್ವಾರದಿಂದ ಬಹಳಷ್ಟು ಸಾಗಿ ಬಂದಾಗಿತ್ತು. ಅದರಲ್ಲಿ ಬೇರೆ ಅದು ಒಮ್ಮುಖ ಹಾದಿ ಒಳಬರಲಷ್ಟೇ ಅಲ್ಲಿ ಅವಕಾಶ. ಏನು ಮಾಡುವುದೆಂದು ತಿಳಿಯದೇ ಪರದಾಟ ಶುರುವಾಯಿತು. ಒಳಗೆ ಹೋಗದೆ ಹೋದರೆ ದೊಡ್ಡ ನಷ್ಟವೇನಿಲ್ಲ ಅನ್ನಿಸಿತು. ಆದರೆ ಇಲ್ಲಿಯ ತನಕ ಬಂದು ಹಾಗೇ ಹೋಗುವುದೂ ಸರಿಯಲ್ಲವೆಂದೂ ಅನ್ನಿಸಿತು. ಏನು ಮಾಡುವುದೆಂದು ಯೋಚಿಸುತ್ತಾ ಸಾಲಿನ ಬದಿಯಿಂದ ಈ ಬೃಹತ್‌ ದೇವಾಲಯದ ಹಿಂಭಾಗದಲ್ಲಿರುವ ಶಾಂತವಾದ ಉದ್ಯಾನಕ್ಕೆ ಬಂದು ನೋಡಿದರೆ ನಾವು ಕುತೂಹಲದಿಂದ ನೋಡಲು ಬಂದ ಬೋಧಿವೃಕ್ಷ ಅಲ್ಲಿಯೇ ಇದೆ! ನಾವು ನೋಡಬೇಕಾದದ್ದು ಬುದ್ಧನ ಮೂರ್ತಿಯಾಗಿರಲಿಲ್ಲ. ಅದನ್ನು ಎಲ್ಲ ಮಾಂಟೇಸರಿಗಳಲ್ಲಿ ಮಾತ್ರವಲ್ಲದೇ ಜಪಾನಿನ ದಾನಿಯೊಬ್ಬರು ನಿರ್ಮಿಸಿದ ಈಗಾಗಲೇ ತಿಳಿಸಿದಂತೆ ನೋಡಿಯಾಗಿತ್ತು. ಬೋಧಿವೃಕ್ಷವನ್ನುನೋಡಬೇಕಾಗಿತ್ತು. ಅದು ಸಿಕ್ಕೇಬಿಟ್ಟಿತು! ಒಮ್ಮೊಮ್ಮೆ ತಲೆಕೆಟ್ಟಾಗ ತಲೆಗೆ ಒಳ್ಳೆಯ ವಿಚಾರ ಅದು ಸಣ್ಣದಿದ್ದರೂ ಹೊಳೆಯುವುದಿಲ್ಲ. ಜನರ ಉದ್ದದ ಸಾಲು ನೋಡಿ ನಾವು ಕಂಗಾಗಲಾದದ್ದು ನಿಜವಾದರೂ ಬೋಧೀವೃಕ್ಷವನ್ನು ದೇವಸ್ಥಾನದ ಒಳಗೆ ಇಟ್ಟಿರಲು ಸಾಧ್ಯವಿಲ್ಲ ಅದು ಹೊರಗೇ ಇರಬಹುದು ಎಂಬ ಚಿಕ್ಕವಿಚಾರಕ ಕೂಡ ಆಗ ತಕ್ಷಣಕ್ಕೆ ಹೊಳೆಯಲಿಲ್ಲ. ತಲೆಮೇಲಿನ ಬೆಂಕಿಬಿಸಿಲು ತಲೆಕೆಲಸ ಮಾಡದಂತೆ ಮಾಡಿತ್ತೇನೋ! ಅಂತೂ ಸಾಲಿನಲ್ಲಿ ನಿಲ್ಲದೇ ಬೋಧಿವೃಕ್ಷದ ಹತ್ತಿರ ಬಂದಾಯಿತು.

ಹಾಗೆ ನೋಡಿದರೆ ಬೋಧಗಯಾದಲ್ಲಿ ಇದೊಂದೇ ಅರಳಿಮರವಿಲ್ಲ. ಬೋಧಗಯಾ ಮತ್ತು ಗಯಾದಲ್ಲಿ ಎಲ್ಲೆಂದರಲ್ಲಿ ನಮ್ಮಲ್ಲಿ ಮಾವು ಬೇವಿನ ಮರಗಳಂತೆ ಈ ಅರಳಿಮರಗಳು ನೋಡಲು ಸಿಗುತ್ತವೆ. ಹಾಗಿದ್ದೂಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ರಾಜಕುಮಾರ ಸಿದ್ಧರ್ಥನಿಗೆ ಈ ವೃಕ್ಷದ ಕೆಳಗೆ ಧ್ಯಾನಾಸಕ್ತನಾಗಿದ್ದಾಗಲೇ ಜ್ಞಾನೋದಯವಾಯಿತು ಎಂಬುದು. ಈ ಬೋಧಿವೃಕ್ಷದ ಕಟ್ಟೆಯ ಸುತ್ತ ತಡೆಬೇಲಿಯೊಂದನ್ನು ಕಟ್ಟಿ ಅದರ ಬುಡದ ಭಾಗಕ್ಕೆ ಜನ ನುಗ್ಗದಂತೆ ಆ ಮರವನ್ನು ಹತ್ತದಂತೆ ಯಾವುದ್ಯಾವುದೋ ಶೈಲಿಯಲ್ಲಿ ನಿಂತು ಸೆಲ್ಫಿತೆಗೆದುಕೊಳ್ಳುತ್ತಾ ಉಳಿದ ಜನರಿಗೆ ಕಿರಿಕಿರಿಮಾಡದಂತೆ ಮಾಡಿ ಅದರ ಸಂಘಟಕರು ಉಪಕಾರ ಮಾಡಿದ್ದಾರೆ. ವಿಶೇಷ ದಿನವಾಗಿದ್ದರಿಂದ ಬೋಧಿವೃಕ್ಷದ ಬುಡದಲ್ಲಿ ದೊಡ್ಡಪ್ರಮಾಣದ ಹೂವಿನ ರಾಶಿಯೇ ನಿರ್ಮಾಣವಾಗಿತ್ತು. ಆ ವೃಕ್ಷ ಮತ್ತು ಅದರ ಜೊತೆಗಿರುವ ವೃಕ್ಷಗಳು ಸೇರಿ ಇಡೀ ವಾತಾವರಣವನ್ನು ಪ್ರಶಾಂತಗೊಳಿಸಿದ್ದವು.


ಈ ವೃಕ್ಷದ ಮುಂದಿನ ಹಸಿರು ಮರಗಳ ಉದ್ಯಾನದಲ್ಲಿಯೇ ಈ ವರ್ಷದ ಬುದ್ಧಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳ ಚಿಕ್ಕ ಮತ್ತು ಸರಳ ವೇದಿಕೆ ಹಾಕಲಾಗಿತ್ತು. ಜನರಿಗೆ ಕುಳಿತುಕೊಳ್ಳಲು ಕುರ್ಚಿಯ ಬದಲು ಚಾಪೆಗಳನ್ನು ಹಾಕಲಾಗಿತ್ತು. ಬೌದ್ಧದರ್ಮ ದೇವರ ಧರ್ಮವಲ್ಲ; ಅದು ಮಾನವ ಧರ್ಮ; ಅದರಲ್ಲಿಯೂ ಸಾಮಾನ್ಯ ಜನರ ಧರ್ಮ. ಅದು ಇಲ್ಲಿ ಆಚರಣೆಯಲ್ಲಿಯೂ ಕಾಣುತ್ತಿತ್ತು. ಈ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದವರೆಲ್ಲರೂ ಬುದ್ಧರಾಗುವುದಿಲ್ಲವೆಂಬುದು ನಿಜವಾದರೂ ಅಲ್ಲಿಯ ತನಕ ಹೋಗಿ ಹೀಗೆ ಮಾಡದಿದ್ದರೆ ಹೇಗೆ?  ನಾನೂ ನನ್ನ ಹೆಂಡತಿಯೂ ತುಸುಹೊತ್ತು ಈ ವೃಕ್ಷದ ಕೆಳಗೆ ಕುಳಿತು ಧ್ಯಾನದಲ್ಲಿದ್ದೆವು. ಅದುವರೆಗೂ ಬೆಂಕಿಯಂಥ ಬಿಸಿಲಿನಲ್ಲಿ ಬೆಂದುಹೋಗಿದ್ದ ಮೈ ಮನಸ್ಸುಗಳಿಗೆ ಆವರಿಸಿದ್ದ ದಣಿವೆಲ್ಲವೂ ಕರಗಿಹೋಯಿತು. ಎಷ್ಟರ ಮಟ್ಟಿಗೆ ಎಂದರೆ ಸುಮಾರು ಅರ್ಧಗಂಟೆಯಾದರೂ ನನ್ನ ಹೆಂಡತಿ ಅಲ್ಲಿಂದ ಹೊರಡಲು ತಯಾರಿರಲಿಲ್ಲ. ನಾನೇ ಮತ್ತಿಷ್ಟು ಹೊತ್ತು ಸಮಯನೀಡಿ ಆಕೆಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಡಿಸಿಕೊಂಡು ಹೊರಡಬೇಕಾಯಿತು.

ಮುಖ್ಯಧ್ವಾರಕ್ಕೆ ಮರಳಿ ಬಂದು ಲಾಕರ್‌ ಗಳಿಂದ ನಮ್ಮ ಮೊಬೈಲು ಬ್ಯಾಗು ವಾಪಸ್ಸು ಪಡೆದು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದ ಉದ್ಯಾನದಲ್ಲಿ ಎರಡು ಕಡೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ʻತೆಗೆದುಕೊಳ್ಳೋಣವೇʼ ಎನ್ನುವಂತೆ ನನ್ನ ಹೆಂಡತಿ ನನ್ಜ ಕಡೆ ನೋಡಿದಾಗ ನಾನು ʻಸರಿʼ ಎಂದೆ. ಆಕೆ ಹಾಗೆ ಕೇಳಲು ಕಾರಣವಿತ್ತು. ಈ ʻತೀರ್ಥ-ಪ್ರಸಾದʼಗಳ ಬಗ್ಗೆ ನನಗೆ ಇರುವ ಅಲರ್ಜಿ ಇದಕ್ಕೆ ಕಾರಣ. ನಾನು ಸಾಮಾನ್ಯವಾಗಿ ಪ್ರಸಿದ್ಧ ದೇವಾಲಯಗಳಿಗೆ ಹೋದಾಗ ಈ ʼಪ್ರಸಾದʼ ತೆಗೆದುಕೊಳ್ಳುವುದಿಲ್ಲ. ಆರಂಭಿಕ ವರ್ಷಗಳಲ್ಲಿ ಒಂದೆರಡು ಕಡೆ ದೇವರ ದರ್ಶನದ ಬಗ್ಗೆ ವಿಶ್ವಾಸವಿಲ್ಲದ ಕಾರಣ ದರ್ಶನ ಮಾಡದೆ ನೇರವಾಗಿ ಪ್ರಸಾದದ ಹಾಲಿಗೆ ಹೋಗಿ ಊಟಮಾಡುತ್ತಿದ್ದದ್ದು ಉಂಟು. ಆದರೆ ಒಂದು ಸಲ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಾನು ನೇರವಾಗಿ ಊಟದ ಹಾಲಿಗೆ ಹೋಗಲಿಕ್ಕೆ ದಾರಿ ಇರಲಿಲ್ಲ. ಅಮ್ಮನವರ ದರ್ಶನಕ್ಕೆ ಹೋಗಿ ಅಲ್ಲಿಂದ ಸಾಲಿನಲ್ಲಿ ಪ್ರಸಾದದ ಹಾಲಿಗೆ ಹೋಗುವಂತೆ ದಾರಿ ಇತ್ತು. ಅಂದರೆ ದೇವರ ದರ್ಶನ ಮಾಡಿಯೇ ಪ್ರಸಾದಕ್ಕೆ ಹೋಗಬೇಕು ಎನ್ನುವಂತೆ ಅದು ಇತ್ತು. ಇದನ್ನು ನೋಡಿ ನನಗೆ ಅವರು ಮಾಡಿದ್ದು ಸರಿ ಅನ್ನಿಸಿತು. ನನಗೂ ಈ ಬಗ್ಗೆ ಜ್ಞಾನೋದಯವಾಯಿತು!

ಹೌದು, ದರ್ಶನ-ಪೂಜೆ-ಪ್ರಸಾದ ಇವೆಲ್ಲ ಒಂದಕ್ಕೊಂದು ಸಂಬಂಧ ಇರುವಂಥವು. ಒಂದು ಪ್ಯಾಕೇಜಿನಲ್ಲಿ ಬರುವಂಥವು; ಒಂದನ್ನು ಬಿಟ್ಟು ಇನ್ನೊಂದನ್ನು ಪಡೆಯಲು ಅವಕಾಶವಿಲ್ಲ; ಇದ್ದರೂ ಅದನ್ನು ಪಡೆಯುವುದು ಸಲ್ಲ. ಇದೇ ನನಗೆ ಅಂದು ಆದ ಜ್ಞಾನೋದಯ! ಹೀಗಾಗಿ ಯಾರು ದೇವರ ದರ್ಶನವನ್ನು ಭಕ್ತಿ ಮತ್ತು ಶ್ರದ್ಧೆಗಳಿಂದ ಮಾಡುತ್ತಾರೋ ಅವು ಮಾತ್ರ ಅಲ್ಲಿನ ಉಚಿತ ಪ್ರಸಾದ ಸ್ವೀಕರಿಸುವುದು ಸರಿಯಾದ ಕ್ರಮ; ದೇವರ ಬಗ್ಗೆ ಅಷ್ಟೊಂದು ಸರಿಯಾದ ಶ್ರದ್ಧೆ ಇಲ್ಲದ ನಾನು ಅಲ್ಲಿನ ಪ್ರಸಾದವನ್ನು ಸ್ವೀಕರಿಸುವುದು ಸರಿಯಾದ ಕ್ರಮವಲ್ಲ ಎನ್ನಿಸಿ ಅಂದಿನಿಂದ ಯಾರನ್ನಾದರೂ ಇಂತಹ ದೇವಾಲಯಗಳಿಗೆ ನಾನು ಕರೆದುಕೊಂಡು ಹೋದರೆ ಅವರು ಒಳಗೆ ಹೋಗಿ ದರ್ಶನ ಪ್ರಸಾದ ಇತ್ಯಾದಿ ಮುಗಿಸಿ ಬರುವವರೆಗೆ ನಾನು ದೇವಾಲಯದ ಹೊರಾಂಗಣದಲ್ಲಿ ತಿರುಗಾಡುತ್ತಾ ಅಲ್ಲಿನ ಗೋಡೆಗಳ ಶಿಲ್ಪಗಳು ಇತ್ಯಾದಿಗಳನ್ನು ನೋಡಿ ಆನಂದಿಸುವುದು, ದೇವಾಲಯದ ಅಕ್ಕಪಕ್ಕ ಇರುವ ಕ್ಯಾಂಟೀನುಗಳಿಗೆ ಹೋಗಿ ತಿಂಡಿನೋ ಊಟನೋ ಮಾಡುವುದು ವಾಡಿಕೆಯಾಗಿದೆ.

ಅಷ್ಟೇ ಏಕೆ ನಾವು ಇಂತಹ ಪ್ರಸಿದ್ಧ ದೇವಾಲಯಗಳಿಗೆ ಹೋದರೂ ಅಲ್ಲಿಂದ ಮನೆಗೆಂದೋ ಅಕ್ಕಪಕ್ಕದವರಿಗೆ ಹಂಚಲಿಕ್ಕೆ ಎಂದೋ ಈ ರೀತಿ ಪ್ರಸಾದ ತರುವುದೂ ಇಲ್ಲವೆನ್ನುವಷ್ಟು ಕಡಿಮೆ. ನಾನಂತೂ ಎಂದೂ ತರುತ್ತಲೇ ಇರಲಿಲ್ಲ. ಆದರೆ ನನ್ನ ಹೆಂಡತಿಗೆ ಈ ಬಗ್ಗೆ ಸ್ಪಲ್ಪ ನಂಬಿಕೆ ಇದ್ದದ್ದು ನಿಜ. ಆದರೆ ಮೊನ್ನೆ ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮ (ಕುಂಭಮೇಳ ನಡೆಯುವ ಸ್ಥಳ)ಕ್ಕೆ ದೋಣಿಯಲ್ಲಿ ಕರೆದೊಯ್ದಾಗ ಅಲ್ಲಿ ಮತ್ತು ವಾರಣಾಸಿ (ಕಾಶಿ)ಯ ಗಂಗಾನದಿಯಲ್ಲಿ ಜನ ಒಬ್ಬರು ಗಲೀಜು ಮಾಡುವ ನೀರನ್ನು ಇನ್ನೊಬ್ಬರು ತೀರ್ಥ ಎಂದು ಕುಡಿಯುವುದು, ಕ್ಯಾನುಗಳಲ್ಲಿ ತುಂಬಿಕೊಂಡು ಊರುಗಳಿಗೆ ಒಯ್ಯವುದು ನೋಡಿದಾಗ ಆಕೆಗೂ ಆ ನಂಬಿಕೆ ಹೊರಟು ಹೋಯಿತು ಅನ್ನಿಸುತ್ತದೆ. ನಮ್ಮ ಮನೆಗೆ ಯಾರಾದರೂ ತೀರ್ಥ ಕ್ಷೇತ್ರಗಳಿಗೆ ಹೋಗಿಬಂದವರು ಇಂತಹ ತೀರ್ಥ ಪ್ರಸಾದಗಳನ್ನು ತಂದುಕೊಡುವುದುಂಟು. ಬೇಡ ಅಂದರೆ ಅವರಿಗೆ ಬೇಸರವಾಗುತ್ತದೆ ಎಂದು ಅವನ್ನು ನಾವು ಪಡೆಯುವುದು ನಿಜವಾದರೂ ಬಳಸುವುದು ಕಡಿಮೆ. ಏಕೆಂದರೆ ʻನೂರಾರು ಜನ ಮುಳಿಗಿ ಏಳುವ, ಸ್ನಾನಮಾಡುವ ಸ್ಥಳದಲ್ಲಿ ಒಬ್ಬರೂ ಮಲವನ್ನಲ್ಲದಿದ್ದರೂ ಮೂತ್ರವನ್ನೂ ವಿಸರ್ಜಿಸುವುದಿಲ್ಲ; ಒಂದು ವೇಳೆ ವಿಸರ್ಜಿಸಿದರೂ ಅದು ನಾವು ತೆಗೆದುಕೊಳ್ಳುವ ತೀರ್ಥದಲ್ಲಿ ಬರುವುದಿಲ್ಲʼ ಎಂಭ ಗಾಢ ನಂಬಿಕೆ ಇದಕ್ಕೆ ಬೇಕಾಗುತ್ತದೆ. ಅಂತಹ ಗಾಢ ನಂಬಿಕೆ ನಮ್ಮಲ್ಲಿ ಇಲ್ಲ!

ಆದರೆ ಇಲ್ಲಿ ಪ್ರಸಾದ ಸ್ವೀಕರಿಸಲು ಹೋಗಲಿಕ್ಕೆ ನಮಗೆ ಮುಜುಗರ ಆಗಲಿಲ್ಲ. ಏಕೆಂದರೆ ನಾನು ಗೌತಮ ಬುದ್ಧನ ವಿಚಾರಗಳಿಂದ ಬಹಳಷ್ಟು ಪ್ರಭಾವಿತನಾದವನು. ಆತನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡವನು. ಇವತ್ತು ಬುದ್ಧಪೂರ್ಣಿಮೆಯ ಆಚರಣೆಯಲ್ಲಿ ಪಾಲ್ಗೊಳ್ಳಲೆಂದು ದೂರದ ಕರ್ನಾಟಕದಿಂದ ಬಂದವನು. ಇಲ್ಲಿ ಬಹಳಷ್ಟು ಶ್ರದ್ಧೆಯಿಂದ ಬೋಧಿವೃಕ್ಷ ಮತ್ತು ಬುದ್ಧನ ದರ್ಶನ ಮಾಡಿ ನನ್ನ ಶ್ರದ್ಧಾಭಕ್ತಿಯನ್ನು ತೋರಿಸಿದ್ದವನು. ಆದರೆ ಸಾಲಿನಲ್ಲಿ ನಿಂತ ನಮಗೆ ಮುಂದಿದ್ದ ನನ್ನ ಹೆಂಡತಿ ಪಾತ್ರೆಯ ಹತ್ತಿರ ಬರುವಷ್ಟು ಹೊತ್ತಿಗೆ ಸರಿಯಾಗಿ ದಾಲ್‌ ಪೂರ್ತಿ ಖಾಲಿಯಾಗಿತ್ತು. ಅನ್ನದ ಪಾತ್ರೆಯಲ್ಲಿ ತಳಕ್ಕೆ ಹತ್ತಿದ್ದ ಒಂದಿಷ್ಟು ಅನ್ನ ಮಾತ್ರ ಅವಳಿಗೆ ಸಿಕ್ಕಿತು. ನನಗೆ ಅದೂ ಸಿಗಲಿಲ್ಲ. ಬೇಸರ ಆಗಲಿಲ್ಲ. ಸುತ್ತ ಕಣ್ಣಾಡಿಸಿದಾಗ ಅಲ್ಲಿ ದೂರದಲ್ಲಿ ಇನ್ನೊಂದು ಸಾಲು ಕಂಡಿತು. ಅಲ್ಲಿಗೆ ಹೋಗಿ ನಿಂತೆ. ಅಲ್ಲಿ ನನ್ನ ಸರದಿ ಬಂದಾಗ ಕೌಂಟರಿನಲ್ಲಿದ್ದ ಯುವತಿಯೊಬ್ಬಳು ನಗುಮುಖದಿಂದಲೇ ನನಗೆ ಒಂದು ಬೋಗುಣಿಗೆ ಒಂದಿಷ್ಟು  ಪಾಯಸ ಹಾಕಿಕೊಟ್ಟಳು. ಆ ಯುವತಿ ಥೈಲ್ಯಾಂಡ್‌ ದೇಶದಿಂದ ಬಂದಿದ್ದಳು! ಇಡೀ ಕೌಂಟರ್‌ ನ ಉಸ್ತುವಾರಿಯನ್ನು ಅವರ ದೇಶದ ಜನರೊಂದಿಗೆ ಅವಳು ಮಾಡುತ್ತಿದ್ದಳು. ʻನಮಸ್ಕಾರʼ ʼಧನ್ಯವಾದʼ ಎಂದು ನಾನು ತಲೆಮಾತ್ರ ಬಗ್ಗಿಸಿ ಹೇಳಿದ್ದಕ್ಕೆ ಆಕೆ ತನ್ನ ಇಡೀ ದೇಹವನ್ನೇ ಬಗ್ಗಿಸಿ ಕೈಮುಗಿದು ನಮಸ್ಕರಿಸಿ ನಾನು ತೋರಿಸಿದ ವಿನಯವನ್ನು ಬಡ್ಡಿಸಮೇತ ತೀರಿಸಿದಳು!!

ಪ್ರಸಾದ ಪಡೆದು ಹೊರಟ ನಾವು ಬೇರೆ ಬೇರೆ ಕಾರ್ಯಕ್ರಮಗಳಿಗೆ ಉಡುಗೊರೆ ಕೊಡಲಿಕ್ಕೆ ಎಂದು ಬುದ್ಧನಿಗೆ ಸಂಬಂಧಿಸಿದ ಬೇರೆ ಬೇರೆ ಎತ್ತರ ಮತ್ತು ಗಾತ್ರಗಳ ಕೆಲವು ಅಶೋಕಸ್ಥಂಭಗಳು, ಕೆಲವು ಕೀ ಚೈನುಗಳು, ಪೆನ್ನುಗಳು, ಒಂಕಾರ ಧ್ವನಿಯನ್ನು ಹೊರಡಿಸುವ ಒಂದು ಬೋಗುಣಿ ಆಕಾರದ ಪಾತ್ರೆ, ಇತ್ಯಾದಿ ಖರೀದಿಸಿದೆವು. ನಮ್ಮ ಆಟೋ ನಿಂತ ಸ್ಥಳದಲ್ಲಿಯೇ ದೊಡ್ಡದಾಗಿ ʻಐ ಲವ್‌ ಬೋದಗಯಾʼ ಎಂಬ ಫಲಕ ಮತ್ತು ಬೃಹತ್‌ ಆದ ಅಂಬೇಡ್ಕರ್‌ ಅವರ ಮೂರ್ತಿ ಕಂಡಿತು. ಸುರಿವ ಬಿಸಿಲಲ್ಲೂ ತಂಪು ನೀಡಿದ ಸಂಗತಿ ಇದಾಗಿತ್ತು. ಬುದ್ಧನ ನಂತರ ಬಸವ ಅನಂತರ ಅಂಬೇಡ್ಕರ್‌ ನನ್ನನ್ನು ಬಹಳಷ್ಟು ಪ್ರಭಾವಿಸಿದವರು. ಒಂದು ಫೋಟೋ ತೆಗೆದುಕೊಂಡು ಭಾರತದ ಭಾಗ್ಯವಿಧಾತನಿಗೆ ನಮಸ್ಕರಿಸಿ ಆಟೋ ಹತ್ತಿದೆವು.

ಬರುವಾಗ ನಮ್ಮ ರಾಮಾಯಣದಲ್ಲಿ ಉಲ್ಲೇಖವಾಗಿರುವ ಗಯಾ ಪಟ್ಟಣದ ಪಕ್ಕದಲ್ಲಿ ಹರಿಯುವ ʻನಿರಂಜನ ನದಿʼ ಎಂದೂ ಕರೆಯಲ್ಪಡುವ ʻಫಾಲ್ಗೂʼ ನದಿ ದಂಟೆಯ ಆ ಕಡೆ ಮತ್ತು ಈ ಕಡೆ ಇರುವ ಎರಡು ಧಾರ್ಮಿಕ ಸ್ಥಳಗಳಾದ ʻಸೀತಾಕುಂಡ' ಮತ್ತು ʻವಿಷ್ಣುಪಾದ ದೇವಿʼ ದೇವಸ್ಥಾನಗಳನ್ನು ನೋಡುವುದನ್ನು ಮರೆಯಲಿಲ್ಲ. ನಾವು ಭಾರತದ ಯಾವ ಮೂಲೆಗೆ ಹೋದರೂ ಯಾವ ಊರಿಗೆ ಹೋದರು ಅಲ್ಲಿನ ಜನ ಇಲ್ಲಿ ರಾಮ ಬಂದಿದ್ದ, ಇಲ್ಲಿ ಸೀತೆ ಸ್ನಾನಮಾಡಿದ್ದಳು, ಇಲ್ಲಿ ಸೀತೆಗಾಗಿ ರಾಮ ಬಾಣಬಿಟ್ಟು ನೀರು ಚಿಮ್ಮಿಸಿದ್ದ, ಎಂದು ಕೆಲವು ಸ್ಥಳಗಳನ್ನು ತೋರಿಸುತ್ತಾರೆ. ಇದರರ್ಥ ರಾಮಾಯಣವನ್ನು ವಾಲ್ಮೀಕಿ ಮಾತ್ರ ಬರೆದಿಲ್ಲ. ಇಡೀ ಭಾರತದ ಜನಸಮುದಾಯವೇ ರಾಮಾಯಣವನ್ನು ತಮ್ಮದೇ ಆದ ಕಥೆಯಾಗಿ ಕಟ್ಟಿಕೊಂಡಿದದ್ದಾರೆ ಎಂಬುದು. ಇಲ್ಲಿಯೂ ಕೂಡ ಅಂತಹ ಒಂದು ಸ್ಥಳವಿದೆ. ಅದೇ ಸೀತಾಕುಂಡ.  ರಾಮ ಲಕ್ಷ್ಮಣರ ವನವಾಸ ಕಾಲದಲ್ಲಿ ಸೀತೆಯ ಬಾಯಾರಿಕೆ ನೀಗಿಸಲೆಂದು ರಾಮ ಬಾಣಬಿಟ್ಟು ಭೂಮಿಯಿಂದ ನೀರು ತೆಗೆಸಿ ಸೀತೆಯ ಬಾಯಾರಿಕೆಯನ್ನು ನೀಗಿಸಿದನೆಂದೂ ಸೀತೆ ತನ್ನ ಮಾವ ದಶರಥ ಮತ್ತು ಆತನ ಪೂರ್ವಜರಿಗೆ ಪಿಂಡದಾನ ಮಾಡಿದಳೆಂದೂ ಕರೆಯಲ್ಪಡುವ ಸ್ಥಳವೇ ಈ ಸೀತಾಕುಂಡ.  ಇಲ್ಲಿ ಅದನ್ನು ತಿಳಿಸುವ ಶಿಲಾಮೂರ್ತಿಗಳಿವೆ. ಅದರ ಜೊತೆ ರಾಮಲಕ್ಷ್ಮಣರ ಹೆಜ್ಜೆಗುರುತುಗಳೆಂದು ಕರೆಯಲ್ಪಡುವ ಶಿಲಾ ರಚನೆಗಳೂ ಇವೆ.

ನಿರಂಜನ ನದಿ ಸಂಪೂರ್ಣ ಬತ್ತಿಹೋಗಿತ್ತು. ಸೀತಾಕುಂಡದಲ್ಲಿ ಕುಂಡದ ಹತ್ತಿರ ಮಾತ್ರ ಒಂದು ಗುಂಡಿಯ ತಳದಲ್ಲಿ ಸ್ವಲ್ಪವೇ ನೀರಿತ್ತು. ಅದನ್ನು ನೋಡಿಕೊಂಡು ನಾವು ಮತ್ತು ನದಿಯ ಈ ಕಡೆ ಇರುವ ಇನ್ನೊಂದು ಸ್ಥಳವಾದ ವಿಷ್ಣುಪಾದ ದೇವಸ್ಥಾನಕ್ಕೆ ಬಂದೆವು. ವಿಷ್ಣುಪಾದ ದೇವಸ್ಥಾನ ಹೆಸರೇ ಹೇಳುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ದೇವಾಲಯ. ಈ ದೇವಾಲಯವು ಬ್ರಾಹ್ಮಣ ಪರಂಪರೆಯಲ್ಲಿ ಪಿಂಡದಾನಕ್ಕೆ ಪ್ರಸಿದ್ಧವಾಗಿದೆ.  ಇಲ್ಲಿ ಒಳಗೆ ಹೋಗಿ ನೋಡಿದರೆ ಎಲ್ಲ ದೇವಾಲಯಗಳಂತೆ ಭಕ್ತರು ಅಲ್ಲಿರುವ ವಿಷ್ಣುವಿನ ಪಾದಕ್ಕೆ ಪೂವು ಕಾಯಿ ಇತ್ಯಾದಿ ನೈವೇದ್ಯವೆಂದು ಅರ್ಪಿಸುವುದು ಮತ್ತು ಅಲ್ಲಿದ್ದವುಗಳನ್ನು ತೆಗೆದುಕೊಂಡು ಪ್ರಸಾದವೆಂದು ಒಯ್ಯುತ್ತಿದ್ದುದು ಮಾಡುತ್ತಿದ್ದರು. ಸೀತೆ ತನ್ನ ಮಾವನ ಮನೆಯ ಪೂರ್ವಜರಿಗೆ ಪಿಂಡದಾನ ಮಾಡಿದ ಸೀತಾಕುಂಡ ಮತ್ತು ವಿಷ್ಣುಪಾದ ದೇವಾಲಯಗಳೆರಡರ ಕಾರಣ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜನ ಇಲ್ಲಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡಲಿಕ್ಕೆ ಬರುತ್ತಾರೆ ಎಂಬುದು ಅಲ್ಲಿಗೆ ಹೋದ ಮೇಲೆ ನನಗೆ ತಿಳಿಯಿತು.

ಹಿಂದಿನ ದಿನ ನಾನು ವಾರಣಾಸಿಯಿಂದ ಗಯಾಕ್ಕೆ ವಂದೇ ಭಾರತ್‌ ರೈಲಿನಲ್ಲಿ ಬರುವಾಗ ಇಬ್ಬರು ಮಹಿಳೆಯರು ಕನ್ನಡದಲ್ಲಿ ಮಾತನಾಡುತ್ತಿದ್ದದ್ದನ್ನು ಗಮನಿಸಿ ಅವರೂ ಗಯಾದಲ್ಲಿಯೇ ನಮ್ಮ ಜೊತೆ ರೈಲಿನಿಂದ ಇಳಿಯುವಾಗ ಪರಿಚಯ ಮಾಡಿಕೊಂಡು ಅವರೊಡನೆ ಮಾತನಾಡುವಾಗ ಅವರು ಪಿಂಡದಾನ ಮಾಡುವುದಕ್ಕಾಗಿಯೇ ಗಯಾಕ್ಕೆ ಬಂದಿದ್ದೇವೆಂದು ಹೇಳಿದ್ದರು. ನನಗೆ ಪಿಂಡದಾನ ಅಂದರೇನು ಎಂದೇ ಗೊತ್ತಿರಲಿಲ್ಲ ಹಾಗಾಗಿ ಗಯಾ ಅದಕ್ಕೆ ಪ್ರಸಿದ್ಧವಾಗಿರುವುದು ತಿಳಿದಿರುವ ಸಾಧ್ಯತೆ ಇರಲಿಲ್ಲ. ಅವರಲ್ಲಿ ಒಬ್ಬ ಮಹಿಳೆಯೇ 'ಪಿಂಡದಾನಕ್ಕೆ ಇಡೀ ದೇಶದಲ್ಲಿ ಗಯಾವೇ ಶ್ರೇಷ್ಠವಾದದ್ದು ನಿಮಗೆ ಗೊತ್ತಿಲ್ಲ ಅಷ್ಟೇʼ ಎಂದು ಆತ್ಮೀಯವಾಗಿಯೇ ಆ ಬಗೆಗಿನ ನನ್ನ ಅಜ್ಞಾನವನ್ನು ಮನವರಿಕೆ ಮಾಡಿಕೊಟ್ಟಿದ್ದಳು! ಈಗ ಅದು ಗೊತ್ತಾಯಿತು.

ಈ ದೇವಸ್ಥಾನದಿಂದ ಹೊರಗೆ ಬಂದು ನಾನು ಚಪ್ಪಲಿ ಮೆಟ್ಟಿಕೊಳ್ಳುವಾಗ ಅಕಸ್ಮಾತ್‌ ಆಗಿ ದೇವಸ್ಥಾನದ ಗೋಡೆಯ ಮೇಲೆ ಇದ್ದ ಸೂಚನೆಯ ಬರೆಹವೊಂದನ್ನು ನೋಡಿ ಅವಕ್ಕಾದೆ. ಇಂಗ್ಲಿಷ್‌, ಹಿಂದಿ, ಬಂಗಾಲಿ ಮತ್ತು ಉರ್ದು ಹೀಗೆ ನಾಲ್ಕೂ ಭಾಷೆಯಲ್ಲಿ ಇದ್ದ ಈ ಸೂಚನೆಯಲ್ಲಿ ʻಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲʼ ಎಂದು ಬರೆಯಲಾಗಿತ್ತು.


ಸಾಮಾನ್ಯವಾಗಿ ಇಂತಹ ಪೂಜಾಸ್ಥಳಗಳ ಒಳಗೆ ನಾನು ಹೋಗುವುದಿಲ್ಲ
. ಆದರೆ ಇಲ್ಲಿ ಒಳಗೆ ಹೋಗಿ ಬಂದುಬಿಟ್ಟೆ! ಆ ಸೂಚನೆ ಹಾಕಿದ ದೇವಸ್ಥಾನದವರಾದರೂ ಪ್ರವೇಶದ್ವಾರದಲ್ಲಿ ಒಳಗೆ ಬರುವವರು ಹಿಂದುಗಳು ಹೌದೋ ಅಲ್ಲವೋ ಎಂದು ಪರೀಕ್ಷಿಸಿ ನೋಡುವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಪೋಲಿಸರು ಇದ್ದರಾದರೂ ಅವರು ಉಳಿದ ದೇವಾಲಯಗಳಲ್ಲಿ ಮಾಡುವಂತೆ ನಮ್ಮನ್ನು ಕೈ ಮೇಲೆತ್ತಲು ಹೇಳಿ ಮೈಮೇಲೆ ಕೈಯಾಡಿಸಿ ʼಚೆಕ್‌ʼ ಮಾಡುವ ಶಾಸ್ತ್ರಮಾಡಿ ಒಳಗೆ ಬಿಟ್ಟರು ಅಷ್ಟೆ. ನಾವು ಹಿಂದೂಗಳು ಹೌದೋ ಅಲ್ಲವೋ ಎಂದು ಕೇಳಲೂ ಇಲ್ಲ; ಪರೀಕ್ಷಿಸಲೂ ಇಲ್ಲ.  ಮೊದಲೇ ಆ ಸೂಚನಾ ಫಲಕ ನನ್ನ ಕಣ್ಣಿಗೆ ಬಿದ್ದಿದ್ದರೆ ಖಂಡಿತಾ ನಾನು ಒಳಗೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ. ಏಕೆಂದರೆ ಹೀಗೆ ಯಾವುದಾದರೂ ಜನವನ್ನೋ ಜನಾಂಗವನ್ನೋ ನಿರಾಕರಿಸುವ ಪೂಜಾಸ್ಥಳಗಳಿಗೆ ಅವು ಯಾವ ಧರ್ಮದವೇ ಆಗಿರಲಿ ನಾನು ಹೋಗುವುದಿಲ್ಲ. ಎಲ್ಲರನ್ನು ಒಳಗೊಳ್ಳುವ ದೇವಾಲಯಗಳು ಮತ್ತು ದೇವರುಗಳು ಇದ್ದಲ್ಲಿ ಮಾತ್ರ ನಾನು ಹೋಗುವುದು. ಈ ಘಟನೆಯಿಂದ ದೇವಸ್ಥಾನಕ್ಕೆ ಮೈಲಿಗೆ ಆಯಿತೋ ಇಲ್ಲವೋ ಗೊತ್ತಿಲ್ಲ; ನನಗಂತೂ ಅಂತಹ ದೇವಸ್ಥಾನದ ಒಳಗೆ ಹೋಗಿದ ಬಂದದ್ದಕ್ಕೆ ಮೈಲಿಗೆಯ ಭಾವ ಅಂಟಿಕೊಂಡಿತು! ಮೈಲಿಗೆಯನ್ನು ತೊಳೆದುಕೊಳ್ಳಲು ನಿರಂಜನ ನದಿಯಲ್ಲಿ ನೀರೂ ಇರಲಿಲ್ಲವಲ್ಲ. ಅದಕ್ಕೆ ಸೀತೆಯ ಶಾಪ ಬೇರೆ ಇದೆಯಂತೆ. ಹಾಗಾಗಿ ಅದು ಒಣಗಿಹೋಗಿಬಿಟ್ಟಿದೆ!

ಇಡೀ ಜಗತ್ತಿನ ಜನರ ನೋವು ಕಷ್ಟಗಳನ್ನು ಪರಿಹರಿಸುವ ಸರಳ ಸೂತ್ರಗಳನ್ನುಮನುಷ್ಯರಲ್ಲಿ ಯಾವುದೇ ಬಗೆಯ ಭೇದಭಾವ ಮಾಡದೆ ಜಗತ್ತಿಗೆ ನೀಡಿ, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ತನ್ನ ಅನುಯಾಯಿಗಳನ್ನು ಹೊಂದಿದ ಮತ್ತು ಸುಮಾರು ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ವಿಶೇಷ ಸ್ಥಾನಮಾನಕ್ಕೆ ಅರ್ಹವಾಗಿರುವ ಬೌದ್ಧಧರ್ಮದ ಜನಕ ಮಹಾತ್ಮ ಗೌತಮನ ವಿಶಾಲ ದೃಷ್ಟಿಯ ಒಳಗೊಳ್ಳುವಿಕೆಯ ಆಲೋಚನೆಯ ಮುಂದೆ ಇಂತಹ ಕ್ಷುಲ್ಲಕ ಭಾವನೆಗಳೇ ಇಂದು ಈ ಧರ್ಮದ ಜನ ತಮ್ಮ ಧರ್ಮವನ್ನು ಇರುವ ಒಂದು ದೇಶದಲ್ಲಿ ಉಳಿಸಿಕೊಳ್ಳಲು ಒದ್ದಾಡಬೇಕಾದ ಸ್ಥಿತಿಯನ್ನು ಉಂಟುಮಾಡಿವೆ ಅನ್ನಿಸಿ  ಮನಸ್ಸಿಗೆ ಕಿರಿಕಿರಿ ಅನ್ನಿಸಿ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯಲೆಂದು ನನ್ನ ಕೊಠಡಿಗೆ ಹೊರಟೆ.


ʼಕೊಂದವರುಳಿವರೇ ಕೂಡಲಸಂಗಮದೇವʼ ಎಂಬುದು ಬಸವಣ್ಣನವರ ವಚನದಲ್ಲಿ ಬರುವ ಒಂದು ಸಾಲು. ವೈದಿಕರು ಬೌದ್ಧಧರ್ಮವನ್ನು ಕೊಲ್ಲಲು ಹೋದಾಗ ಅದು ಕೊಲ್ಲಲ್ಪಡಲಿಲ್ಲ; ಬದಲಾಗಿ ಕಂಸನಿಗೆ ಕೈಕೊಟ್ಟು ಬಾಲಕೃಷ್ಣ ಹೊರನಡೆದು ಹೋಗಿ ಬೇರೆಲ್ಲೋ ಬೆಳೆದಂತೆ ಭಾರತವನ್ನು ಬಿಟ್ಟು ಹೊರಗೆ ಹೋಗಿ ಬೇರೆ ಬೇರೆ ದೇಶಗಳಲ್ಲಿ ಸಂಪದ್ಭರಿತವಾಗಿ ಬೆಳೆಯಿತು. ಅದನ್ನು ಕೊಲ್ಲಲು ಹೋದ ಧರ್ಮ ಇಂದು ಬಸವಣ್ಣ ಹೇಳಿದಂತೆ ಬದುಕಲು ಪರದಾಡುತ್ತಿದೆ. ಭಾರತದ ಯಾವುದೇ ಭಾಗದಲ್ಲಿ ರಾಮನನ್ನೋ ಕೃಷ್ಣನನ್ನೋ ಹುಡುಕಲು ನೆಲವನ್ನು ಅಗೆದಾಗ ಈಗಲೂ ಸಿಗುತ್ತಿರುವುದು ಬುದ್ಧದ ಮೂರ್ತಿಗಳು! ಯುದ್ಧದ ಸಾವು ನೋವುಗಳನ್ನು ಅರ್ಥಮಾಡಿಕೊಳ್ಳಬಲ್ಲ ಭಾರತದ ಯುವಜನತೆ ಮತ್ತೆ ಬುದ್ಧನ ಚಿಂತನೆಗಳನ್ನು ಹಂತಹಂತವಾಗಿ ಸಣ್ಣಸಂಖ್ಯೆಯಲ್ಲಿಯಾದರೂ ಮೆಚ್ಚಿ ಮೈಗೂಡಿಸಿಕೊಳ್ಳುತ್ತಿರುವುದನ್ನು ನೋಡಿದರೆ ಇಲ್ಲಿಂದ ಹೊರಹಾಕಲ್ಪಟ್ಟು ವಿದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಬೌದ್ಧಧರ್ಮ ಮತ್ತೆ ತಾನು ಹುಟ್ಟಿದ ಭಾರತಕ್ಕೆ ಬಂದು ಯುದ್ಧದ ತುರಿಕೆ ಹತ್ತಿಸಿಕೊಂಡ ನಮ್ಮ ಜನರಿಗೆ ಶಾಂತಿಯ ಮುಲಾಮು ಸವರಬಹುದಾದ ಸಂದರ್ಭ ತಡವಾಗಿಯಾದರೂ ಬಂದೇ ಬರುತ್ತದೆ ಅನ್ನಿಸುತ್ತದೆ. ಅದು ಎಷ್ಟು ಸಾಧ್ಯವೋ ಅಷ್ಟು ಬೇಗ ಆಗಲಿ ಎಂದು ಆಶಿಸೋಣ! ಈ ಜಗತ್ತಿನಲ್ಲಿ ʼಒಳ್ಳೆಯ ಯುದ್ಧ ಮತ್ತು ಕೆಟ್ಟ ಶಾಂತಿʼ ಎಂಬುವು ಹಿಂದೆ ಯಾವ ಕಾಲದಲ್ಲಿಯೂ ಇರಲಿಲ್ಲಈಗಲೂ ಇಲ್ಲ ಮತ್ತೆ ಮುಂದೆಯೂ ಇರಲು ಸಾಧ್ಯವಿಲ್ಲ ಎಂಬ ವಿಶ್ವಸತ್ಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳೋಣ. ಪರಸ್ಪರ ದ್ವೇಷಾಸೂಯೆಗಳನ್ನು ತೊರೆದು ಪ್ರೀತಿ ನೆಮ್ಮದಿಯ ಬದುಕು ಬದುಕೋಣ.

*****

೧೫-೦೫-೨೦೨೫

Saturday, May 17, 2025

ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?

 ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?


ತ್ರಿಭಾಷಾ ಸೂತ್ತ ಉತ್ತರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರುತ್ತದೆ. ನಾವು ಅಂದರೆ ದಕ್ಷಿಣದವರು ಹಿಂದಿಗೆ ಕೊಡುವ ಕಾಲುಭಾಗ ಗೌರವ ಮಾನ್ಯತೆಗಳನ್ನೂ ಅಲ್ಲಿ ಉತ್ತರದಲ್ಲಿ ಕೊಡುವುದಿಲ್ಲ. ಅವರ ಅಲ್ಪಸ್ವಲ್ಪ ಗೌರವ ಏನಾದರೂ ಇದ್ದರೆ ಅದು ತಮಿಳುನಾಡು ಬಗ್ಗೆ ಮತ್ತು ತಮಿಳು ಭಾಷೆಯ ಬಗ್ಗೆ. ಕನ್ನಡವಂತೂ ಅವರಿಗೆ ಲೆಕ್ಕಕ್ಕೆ ಇಲ್ಲ.
ಈ ಧೋರಣೆ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಊರುಫಲಕಗಳನ್ನು ಗಮನಿಸಿ. ದಕ್ಷಿಣ ಭಾರತದ ರೈಲ್ವೇನಿಲ್ದಾಣಗಳ ಹೆಸರುಗಳು ಪ್ರಾದೇಶಿಕ ಭಾಷೆ, ಭಾರತದ ಬಹುಜನರ ಭಾಷೆಯಾದ ಹಿಂದಿ, ಮತ್ತು ಜಾಗತಿಕ ಭಾಷೆಯ ಮಾನ್ಯತೆ ಪಡೆದಿರುವ ಇಂಗ್ಲಿಷ್‌ ಈ ಮೂರರಲ್ಲಿ ಇರುತ್ತವೆ. ಹಾಗಾದರೆ ಪ್ರಾದೇಶಿಕ ಭಾಷೆ ಮತ್ತು ಭಾರತದ ಬಹುಜನರ ಭಾಷೆ ಒಂದೇ ಆಗಿರುವ ಹಿಂದಿ ಪ್ರದೇಶಗಳಲ್ಲಿ ಅವರು ಮೂರನೆ ಭಾಷೆಯನ್ನಾಗಿ ಯಾವುದನ್ನು ಸೇರಿಸುತ್ತಾರೆ? ಉರ್ದು. ಉತ್ತರ ಭಾರತದ ನಿಲ್ದಾಣಗಳ ಬಹುತೇಕ ಹೆಸರುಗಳು ಇರುವುದು ಹಿಂದಿ, ಉರ್ದು ಮತ್ತು ಇಂಗ್ಲಿಷ್‌ ನಲ್ಲಿ. ಒಟ್ಟಿನಲ್ಲಿ ಮೂರು ಭಾಷೆ ಮಾಡಲು ಉರ್ದು ಸೇರಿಸಿದ್ದಾರೆ. ಉರ್ದು ಸೇರಿಸಿಕೊಳ್ಳಲು ಒಂದು ನಿರ್ದಿಷ್ಠ ಮಾನದಂಡ ಅನುಸರಿಸಿದಂತಿಲ್ಲ. ಏಕೆಂದರೆ ಉರ್ದು ಭಾಷಿಕರು ಕೇವಲ ಉತ್ತರ ಭಾರತದಲ್ಲಿಲ್ಲ ದಕ್ಷಿಣದಲ್ಲೂ ಇದ್ದಾರೆ. ಹಾಗೆ ನೋಡಿದರೆ ಉರ್ದು ಹುಟ್ಟಿದ್ದೇ ದಕ್ಷಿಣದಲ್ಲಿ ಉತ್ತರದಲ್ಲಿ ಅಲ್ಲ!
ಇನ್ನು ದೇಶದ ಬಹಳಷ್ಟು ಜನ ಬರುವ ತೀರ್ಥಕ್ಷೇತ್ರಗಳಲ್ಲಿ ಸ್ಥಳಗಳ ಹೆಸರುಗಳನ್ನು ಭಾರತದ ಎಲ್ಲ ಅಧಿಕೃತ ಭಾಷೆಗಳಲ್ಲಿ ಬರೆಯುವ ಕೆಲಸವನ್ನು ಕೆಲವು ಕಡೆ ಮಾಡಲಾಗಿದೆ. ಅಯೋಧ್ಯೆಯ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಕನ್ನಡ ಬಿಟ್ಟು ಉಳಿದ ದಕ್ಷಿಣ ಭಾಷೆಗಳಲ್ಲಿ ಅಲ್ಲಿನ ಹೆಸರನ್ನು ಬರೆದಿದ್ದಾರೆ. ಹಾಗೆ ನೋಡಿದರೆ ರಾಮನನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವರು, ರಾಮನ ಹೆಸರಿನಲ್ಲಿ ಗಲಾಟೆ ಮಾಡುವವರು ಕೇರಳ, ತಮಿಳುನಾಡುಗಳಿಗಿಂತ ಕರ್ನಾಟಕದಲ್ಲಿಯೇ ಹೆಚ್ಚು ಇರುವುದು. ಕನ್ನಡಿಗರೆಲ್ಲರಿಗೆ ಅಲ್ಲದಿದ್ದರೂ ಈ ʻಉದ್ರಿಕ್ತ ರಾಮಭಕ್ತʼರಿಗೆ ಗೌರವ ಕೊಡಲಿಕ್ಕಾದರೂ ಈ ಅಯೋಧ್ಯೆಯವರು ಕನ್ನಡ ವನ್ನು ಬಳಸಬೇಕಿತ್ತಲ್ಲವೇ? ಇದು ಅವರಿಗೆ ಅವಮರ್ಯಾದೆ ಮಾಡಿದಂತೆ ಅಲ್ಲವೆ? ಕರ್ನಾಟಕದವರು ಅಯೋಧ್ಯೆಗೆ ಹೋಗುವುದು ಬೇಡವೇ? ಅಯೋಧ್ಯೆಯ ಸಂಧಿಮೂಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನೂ ನಾನು ಸುತ್ತಾಡಿ ನೋಡಿದೆ. ಎಲ್ಲಕಡೆಯೂ ಇದೇ ಕಥೆ. ಕರ್ನಾಟಕದ ಹನುಮಂತ ಅಲ್ಲಿ ಬೀದಿಬೀದಿಯಲ್ಲಿದ್ದಾನೆ; ಕನ್ನಡ ಇಲ್ಲ!
ಮೊನ್ನೆ ಪ್ರಯಾಗರಾಜ್‌ ನಲ್ಲಿ ಕುಂಭ ಮೇಳ ನಡೆದ ತ್ರಿಮೇಣಿ ಸಂಗಮದಲ್ಲಿ ಸುತ್ತಾಡಿ ದೋಣಿವಿಹಾರ ಮಾಡಿ ಜನ ಮುಳುಗಿ ಏಳುತ್ತಿದ್ದ ಸ್ಥಳಕ್ಕೆ ದೋಣಿಯಲ್ಲಿಯೇ ಹೋಗಿ ಅವರು ಮುಳುಗಿ ಏಳುವುದನ್ನೂ ಒಬ್ಬರು ಗಲೀಜು ಮಾಡಿದ ನೀರನ್ನು ಇನ್ನೊಬ್ಬರು ತೀರ್ಥವೆಂದು ಕುಡಿಯುವುದನ್ನೂ ಕ್ಯಾನುಗಳಿಗೆ ತುಂಬಿಕೊಂಡು ಹೋಗುವುದನ್ನು ಹತ್ತಿರದಿಂದ ನೋಡಿ ನಾನು ಅವೆರಡನ್ನೂ ಮಾಡದೆ ನೀರಿನಲ್ಲಿ ಗಲೀಜು ಹೆಕ್ಕಿ ತೆಗೆಯುತ್ತಿದ್ದ ಉತ್ತರ ಪ್ರದೇಶ ಸರ್ಕಾರದ ವಾಹನ ಚಾಲಕನನ್ನು ಮಾತಾಡಿಸಿ ತೇಲುವ ಮುಳುಗುವ ತೆಂಗಿನಕಾಯಿಗಳು ಪ್ಲಾಸ್ಟಿಕ್‌ ಬ್ಯಾಗುಗಳು, ಹೂವುಗಳು ಇತ್ಯಾದಿ ನೋಡುತ್ತಾ ದೋಣಿ ಇಳಿದು ಯಮುನಾ ನದಿ ದಂಡೆಯ ಮೇಲೆಯೇ ಇದ್ದ ಈಗ ಬಹುಪಾಲು ನಮ್ಮ ಸೇನೆಯ ವಶದಲ್ಲಿರುವ ಅಕ್ಬರನ ಅಲಹಾಬಾದ್‌ ಕೋಟೆ, ಅದಕ್ಕೆ ಹೊಂದಿಕೊಂಡೇ ಇರುವ ಇತಿಹಾಸ ಪ್ರಸಿದ್ಧ ಪಾತಾಳಪುರಿ, ಶ್ರೀರಾಮಚಂದ್ರನ ವನವಾಸದ ಆರಂಭದಲ್ಲಿ ಅವನು ತಮ್ಮ ಮತ್ತು ಹೆಂಡತಿಯೊಂದಿಗೆ ಪ್ರಯಾಗರಾಜ್‌ ಗೆ ಬಂದಾಗ ಅವನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣುವಂತೆ ಹೇಳಿದ ಭಾರಧ್ವಜ ಮುನಿಯ ಆಶ್ರಮ ನೋಡಿಕೊಂಡು ಬರುತ್ತಿದ್ದೆ.
ದಾರಿಯಲ್ಲಿಯೇ ಇರುವ ʻಅಲೋಪಶಂಕರಿ ದೇವಸ್ಥಾನʼದ ಹತ್ತಿರ ಗಾಡಿ ನಿಲ್ಲಿಸಿದ ನನ್ನ ಡ್ರೈವರ್‌ ಒಳಗೆ ಹೋಗಿ ಬರಲು ಸಲಹೆ ಮಾಡಿದ. ʻಇಂತಹ ನೂರಾರು ದೇವಸ್ಥಾನಗಳು ನಮ್ಮ ಊರುಗಳಲ್ಲಿಯೇ ಇವೆ ಬಿಡಪ್ಪ ಇವನ್ನು ನೋಡಲಿಕ್ಕೆ ಇಲ್ಲಿಗೆ ಬರಬೇಕಾ?ʼ ಎಂಬ ಉದಾಶೀನತೆಯಿಂದಲೇ ನಾನು ಗಾಡಿ ಇಳಿದು ಒಳಗೆ ಹೋದೆ. ಸಂತೋಷಕ್ಕೆ ತಪ್ಪುತಪ್ಪಾಗಿಯಾದರೂ ʻಕುಡಿಯುವ ನೀರುʼ ಎಂದು ಉಳಿದ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಫಲಕವನ್ನು ಬರೆದದ್ದನ್ನು ನೋಡಿ ನೀರು ಕುಡಿದಷ್ಟೇ ಸಮಾಧಾನವಾಯಿತು.
ಹಾಗೇ ಒಳಗೆ ಹೋಗಿ ದೇವರನ್ನು ಒಂದು ಸುತ್ತು ಹಾಕಿಕೊಂಡು ಬರೋಣವೆಂದು ಹೋಗಿ ಸುತ್ತು ಹೊಡೆಯುವಾಗ ನನಗೆ ಆಶ್ಚರ್ಯವೆಂಬಂತೆ ಬೇರೆ ಯಾವ ಭಾಷೆಯಲ್ಲೂ ಇಲ್ಲದ ಶುದ್ಧವಾಗಿ ಕೈಯಲ್ಲಿ ಬರೆದು ಹಾಕಿದ ಒಂದು ಸೂಚನಾ ಫಲಕವಿತ್ತು. ಅದನ್ನು ಕುತೂಹಲದಿಂದ ಓದಿದೆ: ಅದು ಹೀಗಿತ್ತು: “ದೇವಸ್ಥಾನದ ಆವರಣದಲ್ಲಿ ಕಳ್ಳರಿದ್ದಾರೆ ಜಾಗ್ರತೆ. ತಮ್ಮ ಅಮೂಲ್ಯ ವಸ್ತುಗಳಿಗೆ ತಾವೇ ಜವಾಬ್ದಾರರು. ಕಳ್ಳರಿದ್ದಾರೆ ಎಚ್ಚರಿಕೆ.”
ಇಂತಹ ಬೋರ್ಡುಗಳನ್ನು ನೋಡಿಯೇ ನನಗೆ ದೇವರ ಮೇಲಿದ್ದ ನಂಬಿಕೆ ಹೊರಟುಹೋದದ್ದು. ಒಮ್ಮೆ ಧರ್ಮಸ್ಥಳಕ್ಕೆ ಯಾರನ್ನೋ ಭಕ್ತರನ್ನು ಕರೆದುಕೊಂಡು ಡ್ರೈವರ್‌ ಆಗಿ ಹೋದಾಗ ಅವರು ಮಂಜುನಾಥ ಸ್ವಾಮಿಯ ದರ್ಶನ ಮತ್ತು ಪ್ರಸಾದಕ್ಕೆಂದು ಒಳಗೆ ಹೋದಾಗ ಅಲ್ಲಿನ ದೇವಸ್ಥಾನದ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದೆ. ಅಲ್ಲಿಯೂ ಇಂಥದ್ದೇ ಸೂಚನಾ ಫಲಕವಿತ್ತು. ಅದನ್ನು ನೋಡಿ ದೇವರು ಇಡೀ ಜಗತ್ತನ್ನು ಕಾಯುತ್ತಾನೆ ನಮ್ಮನ್ನೂ ನಮ್ಮ ವಸ್ತುಗಳನ್ನೂ ಕಾಯುತ್ತಾನೆ ಎಂದು ಜನ ಇಲ್ಲಿಗೆ ಬಂದರೆ ಇವರು ನೋಡಿದರೆ ಹೀಗೆ ಬೋರ್ಡು ಹಾಕಿದ್ದಾರಲ್ಲ ಎಂದು ಆಶ್ಚರ್ಯಪಟ್ಟಿದ್ದೆ.


ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತೀ ಅವರನ್ನು ಅವರ ಪಾಲಕರು ಚಿಕ್ಕಮಗುವಿದ್ದಾಗ ಒಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ದೇವರ ಮೂರ್ತಿಯ ಮೇಲೆ ಇಲಿ ಓಡಾಡಿದ್ದನ್ನು ನೋಡಿದ ಬಾಲಕ ದಯಾನಂದ ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ,” ತನ್ನ ಮೈಮೇಲಿನ ಇಲಿಗಳನ್ನೇ ಓಡಿಸಿಕೊಳ್ಳಲಾರದ ದೇವರು ಜಗತ್ತಿನ ಜನರ ಸಮಸ್ಯೆಗಳನ್ನು ಹೇಗೆ ಓಡಿಸುತ್ತಾನೆ?” ಎಂಬುದು. ಆದರೂ ಜನರ ನಂಬಿಕೆ ಅನ್ನುವುದು ಬಹಳಷ್ಟು ಗಟ್ಟಿಯಾದದ್ದು!
ಇಂತಹ ಬೋರ್ಡುಗಳು ಈಗ ಎಲ್ಲ ದೇವಸ್ಥಾನಗಳಲ್ಲಿಯೂ ಸಾಮಾನ್ಯವಾಗಿವೆ. ನಮ್ಮ ವಸ್ತುಗಳನ್ನು ನಾವೇ ಕಾಯ್ದುಕೊಳ್ಳುವುದಾದರೆ , ಅವನ್ನು ಕದ್ದವರು ರಕ್ತಕಾರಿ ಸಾಯುವಂತೆ ಮಾಡದಿದ್ದರೆ ಅದು ನಮ್ಮಂಥ ಪರಮಭಕ್ತರಿಗೆ ದೇವರು ಮಾಡುವ ಅವಮಾನವಲ್ಲವೇ? ಎಂದು ಯಾರೂ ಅಂದುಕೊಳ್ಳುವ ಪಾಪ ಮಾಡಲಾರರು. ಅವರ ಶ್ರದ್ಧೆ, ನಂಬಿಕೆ ಅಷ್ಟರ ಮಟ್ಟಿಗೆ ಅಚಲವಾಗಿರುತ್ತದೆ.
ಆದರೆ ಈ ಅಲೋಪಶಂಕರಿ ದೇವಸ್ಥಾನದ ಈ ಬೋರ್ಡನ್ನು ನೋಡಿ ನನಗೆ ಆಶ್ಚರ್ಯವಾದದ್ದು ಏಕೆಂದರೆ ಕುಡಿಯುವ ನೀರಿನ ಸೂಚನೆಯಂತೆ ಇಲ್ಲಿ ಕನ್ನಡದ ಜೊತೆಗೆ ಇತರ ಯಾವುದೇ ಭಾಷೆಗಳಿರಲಿಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಈ ಕಳ್ಳರ ಸೂಚನೆಯ ಫಲಕ ಇದ್ದದ್ದು ಏಕೆ ಎಂದು. ಸುತ್ತಮುತ್ತ ಕಣ್ಣಾಡಿಸಿದೆ. ಬೇರೆ ಯಾವ ಭಾಷೆಗಳಲ್ಲಿಯೂ ಈ ಕಳ್ಳರ ಎಚ್ಚರಿಕೆಯ ಫಲಕಗಳು ಇರಲಿಲ್ಲ. ನನ್ನಲ್ಲಿ ಮೂಡಿದ ಪ್ರಶ್ನೆಗಳು ಇವು: ಕನ್ನಡಿಗರು ತೀರಾ ಕಡಿಮೆ ಸಂಖ್ಯೆಯಲ್ಲಿ ಬರುವ ಉತ್ತರ ಪ್ರದೇಶದಲ್ಲಿನ ಈ ದೇವಸ್ಥಾನದಲ್ಲಿ ಕಳ್ಳರ ಸೂಚನೆಯ ಬಗ್ಗೆ ದೂರದ ಕರ್ನಾಟಕದ ಭಾಷೆ ಕನ್ನಡದಲ್ಲಿ ಸೂಚನೆ ಹಾಕಲು ಏನು ಕಾರಣವಿರಬಹುದು? ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?
*****
ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫

Thursday, May 15, 2025

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ತೀರ್ಥಕ್ಷೇತ್ರಗಳಿಗೆ  ಹೋಗುವವರಲ್ಲಿ ಎರಡು ರೀತಿಯ ಜನರಿರುತ್ತಾರೆ. ಪವಿತ್ರ ದಿನ ಎಂದು ಅವರು ಭಾವಿಸುವ ದಿನಗಳಂದೇ ಅದು ಎಷ್ಟೆಲ್ಲ ಕಷ್ಟ ತಮಗೆ ಮತ್ತು ಇತರರಿಗೆ ಆದರೂ ಸರಿ ಅಂದೇ ಅಲ್ಲಿಗೆ ಹೋಗಿ ದಟ್ಟಣೆಯನ್ನು ಉಂಟು ಮಾಡುವವರು ಒಂದು ಬಗೆಯವರಾದರೆ ಧಾರ್ಮಿಕ ಆಚರಣೆಗಳಲ್ಲಿ ಅಷ್ಟಾಗಿ ನಂಬಿಕೆ ಇರದಿದ್ದರೂ ಯಾವಾಗಲೋ ಸಮಯ ಸಿಕ್ಕಾಗ ಇಂತಹ ಸ್ಥಳಗಳಿಗೆ ಹೋಗಿ ಒಂದು ಸುತ್ತು ಹೊಡೆದು ಅಲ್ಲಿನ ಪರಿಸರಸೌಂದರ್ಯ, ಜನವರ್ತನೆ ಇತ್ಯಾದಿಗಳನ್ನು ನೋಡಿಕೊಂಡು ಬರುವಂತಹ ನನ್ನಂಥವರು ಇನ್ನೊಂದು ಬಗೆಯವರು. 

ನಿನ್ನೆ ಮಹಾ ಕುಂಭಮೇಳ ನಡೆದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮಕ್ಕೆ ಹಿಂಗೇ ಹೋಗಿದ್ದೆ. ಬಹಳ ದಟ್ಟಣೆ ಇರದಿದ್ದರೂ ಜನ ಇದ್ದರು. ದೋಣಿ ವಿಹಾರ ಮಾಡಿ ಅಲ್ಲಿನ ನಿಸರ್ಗ ಸೌಂದರ್ಯ ಸವಿದೆ. ನದಿ ಕೂಡುವಲ್ಲಿ ನಾನು ಮುಳುಗಿ ಏಳದಿದ್ದದ್ದು ಮತ್ತು ಗಂಗಾಪೂಜೆ ಮಾಡದೇ ಇದ್ದದ್ದು ನನ್ನ ದೋಣಿಯವನಿಗೆ ಸಹಜವಾಗಿಯೇ ಆಶ್ಚರ್ಯ ಉಂಟುಮಾಡಿತು. 'ಇಂತಹವರು ಇಲ್ಲಿಗೆ ಬರುವುದಾದರೂ ಏತಕ್ಕೆ' ಎಂದು ಅವನಿಗೆ ಅನ್ನಿಸಿರಲೂಬ‌ಹುದು. ಭಕ್ತರು ಗಂಗಾ ಯಮುನಾ ಸರಸ್ವತಿ ಮೂರೂ ನದಿ ಮಾತೆಯರಿಗೆ ಎಂದು ಮೂರು ಮೂರು ತೆಂಗಿನಕಾಯಿ ತೆಗೆದುಕೊಂಡು ಪೂಜೆ ಸಲ್ಲಿಸಿ ನದಿಗೆ ಅವುಗಳನ್ನು ತಂದ ಪ್ಲಾಸ್ಟಿಕ್ ಚೀಲದೊಂದಿಗೆ ಹಾಕುತ್ತಿದ್ದರು. ಉತ್ತರ ಪ್ರದೇಶ ಸರ್ಕಾರದ ವಾಹನವೊಂದು ಇವುಗಳನ್ನು ಎತ್ತುತ್ತಾ ನೀರು ಶುದ್ಧೀಕರಣ ಮಾಡುತ್ತಲೇ ಇತ್ತು. ಕುಂಭಮೇಳ ನಡೆದು ಇಷ್ಟು ದಿನ ಆದರೂ ಅದರ ಪಳೆಯುಳಿಕೆಗಳು ಕಿಲೋಮೀಟರ್ ಗಟ್ಟಲೆ ಅಗಲವಾಗಿರುವ ಗಂಗೆಯ ಅಂಗಳದಲ್ಲಿ ಇನ್ನೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನಸ್ಸು ಸ್ವಚ್ಛ ಆಗದೆ ನದಿಗಳು ಸ್ವಚ್ಛ ಹೋಗುವುದಾದರೂ ಹೇಗೆ?

ಇವೆಲ್ಲ ನೋಡಿಕೊಂಡು ನನ್ನ ದೋಣಿಗೆ ಹುಟ್ಟುಹಾಕಿದ ಬಿಹಾರಿವಾಲಾಗೆ ನಿಗದಿಯಾದ ಹಣಕ್ಕಿಂತ ತುಸು ಹೆಚ್ಚೇ ಹಣವನ್ನು ಕೈಗಿಟ್ಟೆ. ಪೂಜೆ ಮಾಡಿಸದ ಕಾರಣಕ್ಕೆ ನನ್ನನ್ನು ತುಸು ಅನುಮಾನದಿಂದ ನೋಡಿದ್ದ ಅವನಿಗೆ ಈಗ ಬಡತನವನ್ನು ಭಕ್ತರಿಗಿಂತ ನನ್ನಂತಹ ನಾಸ್ತಿಕರೇ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಹಾಯ ಹಸ್ತ ಚಾಚುತ್ತಾರೆ ಅನ್ನಿಸಿರಬೇಕು. ಕೃತಜ್ಞತೆಯಿಂದ ಕೈ ಮುಗಿದ.

ಪ್ರಯಾಗ್ ರಾಜ್ ಅಂದರೆ ಬರೀ ಕುಂಭಮೇಳ ಮಾತ್ರ ಅಲ್ಲ. ಅಲ್ಲಿ ನಾವು ನೋಡಬೇಕಾದ ಅನೇಕ ಮಹತ್ವದ ಸ್ಥಳಗಳಿವೆ. ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಬ್ರಿಟೀಷರೊಂದಿಗಿನ ಕಾಳಗದಲ್ಲಿ ಜೀವತ್ಯಾಗ ಮಾಡಿದ ಸ್ಥಳವನ್ನು ಸ್ಮಾರಕ ಉದ್ಯಾನವಾಗಿ ಮಾಡಿದ್ದಾರೆ. ಅಲ್ಲಿಗೆ ಕಾಲಿಟ್ಟರೆ ಸಾಕು ಹೆಮ್ಮೆ ಗೌರವದ ಭಾವನೆ ಮೂಡುತ್ತದೆ. ಅದರ ಪಕ್ಕದಲ್ಲಿ ಇರುವ ಬೃಹತ್ತಾದ ಮತ್ತು ಮಹತ್ವದ 'ಅಲಹಾಬಾದ್ ಮ್ಯೂಸಿಯಂ ಇದೆ. ಇಲ್ಲಿನ ಮೂರನೆಯ ಅಂತಸ್ತಿನ ನೆಹರೂ ಗ್ಯಾಲರಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಒಂದು ಉಡುಗೊರೆ ಇದೆ. 1956 ರಲ್ಲಿ ವಿಶಾಲವಾದ ಕರ್ನಾಟಕ ರಚನೆಯಾದ ಸಂದರ್ಭದಲ್ಲಿ ನೆಹರೂ ಅವರಿಗೆ ನೀಡಿದ ಬೃಹತ್ ಆದ 'ಗೀತಾಬೋಧನೆ' ಕಾಷ್ಠ ಕೆತ್ತನೆಯಯ ಶಿಲ್ಪ ವೇ ಆ ಉಡುಗೊರೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಶಲಕರ್ಮಿಯೊಬ್ಬರು ಅದನ್ನು ಕೆತ್ತಿದ್ದಾರೆ. ಅಕ್ಬರ್ ಕಟ್ಟಿಸಿದ ಕೋಟೆ, ಹೂಯೆನ್ ತ್ಸಾಂಗ್ ಉಲ್ಲೇಖಿಸಿದ ಹರ್ಷವರ್ಧನ ಕಾಲದ ಸಾಮ್ರಾಟ್ ಅಶೋಕ ಗೆ ಸಂಬಂಧಿಸಿದ ನೆಲದೊಳಗೇ ಇರುವ 'ಪಾತಾಳಪುರಿ' ವನವಾಸ ಕಾಲದಲ್ಲಿ ಶ್ರೀರಾಮನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣಲು ಹೇಳಿದ ಭಾರಧ್ವಾಜ ಮುನಿಯ ಆಶ್ರಮ ಇವೆಲ್ಲವೂ ನೋಡತಕ್ಕ ಸ್ಥಳಗಳೆ.


ಮತ್ತೆ ಇಷ್ಟೆಲ್ಲ ನೋಡಿ ಭಾರತದ ರಾಜಕಾರಣದಲ್ಲಿ ಬಹಳಷ್ಟು ಮಹತ್ವದ ಚರ್ಚೆ ಮತ್ತು ತೀರ್ಮಾನಗಳು ನಡೆದ ಜವಾಹರ್ ಲಾಲ್ ಅವರು ತಂದೆ ಮೋತಿಲಾಲ್ ನೆಹರೂ ಅವರ ಮನೆ ನೋಡದೆ ಬರಲು ಸಾಧ್ಯವೇ! ಅಲ್ಲೆಲ್ಲಾ ಸುತ್ತಾಡಿ ಅವರು ತಮ್ಮ ಮೊಮ್ಮಗಳು ಇಂದಿರಾ ಪ್ರಿಯದರ್ಶಿನಿಯನ್ನು ಫಿರೋಜ್ ಗಾಂಧಿಗೆ ಮದುವೆ ಮಾಡಿಕೊಟ್ಟ ಅವರು ಮನೆಯಂಗಳದ ವೇದಿಕೆ ರೀತಿಯ ಕಟ್ಟೆಯ ಮೇಲೆ ತುಸು ಹೊತ್ತು ಕೂತೆದ್ದು ಬಂದೆವು. ಒಟ್ಟಾರೆ ಪ್ರಯಾಗ್ ರಾಜ್ ಭೇಟಿ ಖುಷಿ ಕೊಟ್ಟಿತು.

ಕೆಲವು ಫೋಟೋಗಳು ನಿಮಗಾಗಿ..

ರಾಬು

೦೯-೦೫-೨೦೨೫.


Sunday, May 11, 2025

ಎರಡು ರಾಜ್ಯಗಳ ವಿಚಿತ್ರಕೂಟ ಈ ಚಿತ್ರಕೂಟ

ʻ

ಚಿತ್ರಕೂಟʼ ಕನ್ನಡಿಗರಿಗೆ ಮಾತ್ರವಲ್ಲ ಭಾರತೀಯರಿಗೆಲ್ಲ ಬಹುತೇಕ ಚಿರಪರಿಚಿತʼ ಹೆಸರು. ಅಪ್ಪನ ಮಾತು ನಡೆಸಿಕೊಡುವುದಕ್ಕಾಗಿ ಏನೂ ತಪ್ಪು ಮಾಡದ ರಾಮ, ಅವನ ಹೆಂಡತಿ ʻಸತಿ ಶಿರೋಮಣಿʼ ಸೀತಾ ಮತ್ತು ರಾಮನ ಹಿಂಬಾಲಕ ತಮ್ಮ ಲಕ್ಷ್ಮಣ ಇವರೆಲ್ಲ ಅಷ್ಟೇನೂ ಸಾಮಾಜಿಕ ಮಹತ್ವವಲ್ಲದ ಕೌಟಂಬಿಕ ಬಿಕ್ಕಟ್ಟನ್ನು ನಿವಾರಿಸಲೋಸುಗ ಹನ್ನೆರಡು ವರ್ಷಗಳ ಕಾಲ ವನವಾಸ ಮಾಡಿದ ಕಥೆಯನ್ನು ವಾಲ್ಮೀಕಿ ರಾಮಾಯಣ ಸೇರಿದಂತೆ ಬಹುತೇಕ ರಾಮಾಯಣಗಳು ಹೇಳುತ್ತವೆ.

ಈ ರಾಮಾಯಣಗಳ ಪ್ರಕಾರ ಅವರು ಈ ವನವಾಸವನ್ನು ಕಳೆದದ್ದು ಇಂದಿನ ವಿಂಧ್ಯಪರ್ವತ ಶ್ರೇಣಿಯಲ್ಲಿ ಬರುವ ʻಚಿತ್ರಕೂಟʼ ಎಂಬ ಪ್ರದೇಶದಲ್ಲಿ. ಕನ್ನಡದಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ ಮೊಯಿಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯಗಳು ಈ ಚಿತ್ರಕೂಟದಲ್ಲಿ ರಾಮ ಪರಿವಾರ ಕಳೆದ ದಿನಗಳ ವಿವರಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿವೆ. ಲಕ್ಷ್ಮಣ ತಂದುಕೊಡುವ ಹಸಿಕಟ್ಟಿಗೆಯನ್ನು ಒಲೆಗೆಹಾಕಿ ಅಡುಗೆಮಾಡಲು ಕಣ್ಣಲ್ಲಿ ಹೊಗೆ ತುಂಬಿಕೊಂಡು ಗೋಳಾಡುವ ಮತ್ತು ಅದಕ್ಕಾಗಿ ಮೈದುನನ ಮೇಲೆ ಹುಸಿಮುನಿಸಿನ ಕೋಪ ತೋರಿ ಅವನನ್ನು ತರಾಟೆಗೆ ತೆಗೆದುಕೊಳ್ಳುವ ಚಿತ್ರಣವನ್ನು ಕುವೆಂಪು ತಮ್ಮ ರಾಮಾಯಣದಲ್ಲಿ ವರ್ಣಿಸಿದ್ದನ್ನು ಆ ಕಾವ್ಯ ಓದಿಯೇ ಆನಂದಿಸಬೇಕು!  ಅತ್ರಿ, ಮಾರ್ಕಂಡೇಯ ಸೇರಿದಂತೆ ಬಹಳಷ್ಟು ಋಷಿಮುನಿಗಳ ವಾಸಸ್ಥಾನವಾಗಿತ್ತೆನ್ನುವ ಈ ಪ್ರದೇಶದ ಬಗ್ಗೆ ವಾಲ್ಮಕಿ ಭಾರದ್ವಾಜ ಮುನಿ ಸೇರಿದಂತೆ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ

ಈ ಚಿತ್ರಕೂಟ ಪ್ರದೇಶದಲ್ಲಿ ಸುತ್ತಾಡಲೆಂದು ಮೊನ್ನೆ ಹೋಗಿದ್ದೆ. ಈಗಿನ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆ ಮತ್ತು ಮಧ್ಯಪ್ರದೇಶದ ಸತ್ನಾ ಜಿಲ್ಲೆ ಇವುಗಳಲ್ಲಿ ಹರಡಿಕೊಂಡಿರುವ ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಈ ಚಿತ್ರಕೂಟ ಒಂದು ರೀತಿಯಲ್ಲಿ ಎರಡೂ ರಾಜ್ಯಗಳ ವಿಚಿತ್ರಕೂಟವೆಂದೇ ಹೇಳಬೇಕು. ಚಿತ್ರಕೂಟಕ್ಕೆ ಸಂಬಂಧಿಸಿದ ಪೌರಾಣಿಕ ಐತಿಹ್ಯದ ಸ್ಥಳಗಳು ಈ ಎರಡೂ ರಾಜ್ಯಗಳ್ಳಿ ಹಂಚಿಕೊಂಡಿವೆ ಅಷ್ಟೇ ಅಲ್ಲ ರಾಮಘಾಟ್‌ನ ಬಳಿಯ ಒಂದು ಊರಿನ ಮಧ್ಯೆಯೇ ಈ ರಾಜ್ಯವಿಭಜನ ರೇಖೆ ಇದ್ದು ಒಂದು ಮನೆ ಉತ್ತರಪ್ರದೇಶಕ್ಕೆಸೇರಿದರೆ ಅದರ ಮುಂದಿನ ಮನೆ ಮಧ್ಯಪ್ರದೇಶಕ್ಕೆ ಸೇರಿದೆ!

ಉತ್ತರ ಪ್ರದೇಶ ರಾಜ್ಯದಲ್ಲಿ ಬರುವ ಚಿತ್ರಕೂಟಧಾಮ ರೈಲ್ವೇಸ್ಟೇಷನ್ನಿನಲ್ಲಿ ಬೆಳಿಗ್ಗೆ ಇಳಿದಾಗ ಬೆಳಿಗ್ಗೆ ಹನ್ನೊಂದಾಗಿತ್ತು ಮೇ ಬಿಸಿಲು ಬಡಿಯುತ್ತಿತ್ತು. ಕಾಡು ಪ್ರದೇಶ ಅಷ್ಟೇನೂ ಬಿಸಿಲು ತಟ್ಟಲಿಕ್ಕಿಲ್ಲ ಅನ್ನಿಸಿದ್ದು ಸುಳ್ಳಾಗಿತ್ತು.  ರೈಲು ಇಳಿದು ಹೆಂಡತಿಯೊಂದಿಗ ಒಂದು ಆಟೋ ತೆಗೆದುಕೊಂಡು ಹೊರಟ ನನ್ನ ಹತ್ತಿರ ಇದ್ದದ್ದು ಒಟ್ಟು ಐದುಗಂಟೆಗಳ ಸಮಯ ಮಾತ್ರ ಮತ್ತೆ ಸಂಜೆ ನಾಲ್ಕುಗಂಟೆಗೆ ಮರಳಿ ಇದೇ ಸ್ಟೇಷನ್ನಿನ್ನಿಗೆ ಬಂದು ನಾನು  ಕಾಶಿಗೆ ಹೋಗುವ ರೈಲು ಹತ್ತಬೇಕಿತ್ತು. ಅಪರಿಚಿತ ಪ್ರದೇಶಕ್ಕೆ ಪ್ರವಾಸ ಹೋಗುವ ನಮಗೆ ಒಂದೊಂದು ಸಲ ಟ್ರ್ಯಾಕ್ಸಿ, ಆಟೊ ಡ್ರೈವರ್ ಗಳು ಬಹಳ ಒಳ್ಳೆಯವರು ಸಿಗುತ್ತಾರೆ ಕೆಲವು ಸಲ ತಲೆ ತಿನ್ನುವವರು ಸಿಗುತ್ತಾರೆ. ಆದರೆ ಇಲ್ಲಿ ಸಿಕ್ಕ ಡ್ರೈವರ್‌ ಬಹಳ ಒಳ್ಳೆಯವನಾಗಿದ್ದು ನನ್ನ ತಿರುಗಾಟ ಚೆನ್ನಾಗಿ ಆಯಿತು.

ನಾವು ಮೊದಲು ಹೋದದ್ದು ವನವಾಸ ಕಾಲದಲ್ಲಿ ರಾಮನ ಪರಿವಾರ ಗುಡಿಸಲು ಕಟ್ಟಿಕೊಂಡು ಬಹಳಷ್ಟು ವರ್ಷಗಳ ಕಾಲ ವಾಸವಾಗಿತ್ತು ಎಂದು ಜನ ನಂಬಿಕೊಂಡಿರುವ ಚಿತ್ರಕೂಟ ಪ್ರದೇಶದ ಹನುಮಾನ್‌ ಗರಿ ಎಂಬ ಪರ್ವತಕ್ಕೆ. ಇದು ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಒಂದು ಬೆಟ್ಟ. ಈಗ ಮಧ್ಯಪ್ರದೇಶ ಭಾಗದಲ್ಲಿ ಬರುತ್ತದೆ. ದೊಡ್ಡದಾದ ಈ ಬೆಟ್ಟವನ್ನು ಹತ್ತಲು ಈಗ ಮೆಟ್ಟಿಲುಗಳ ಜೊತೆಗೆ ʼರೋಪ್‌ ವೇʼ ವ್ಯವಸ್ಥೆ ಕೂಡ ಇದೆ. ಮೈಯಲ್ಲಿ ಶಕ್ತಿ ಇದ್ದವರು ಬೆಳಗಿನ ಸಮಯವಾದರೆ ಬೆಟ್ಟವನ್ನು ಹತ್ತಿಕೊಂಡೇ ಹೋಗಿ ಆನಂದಿಸಬಹುದು. ಇಲ್ಲವಾದರೆ ರೋಪ್‌ ವೇ ಮೂಲಕ ಬೆಟ್ಟದ ಮೇಲೆ ಹೋಗಬಹುದು. ಅಲ್ಲಿ ಹೋದ ತಕ್ಷಣ ನಮಗೆ ಸಿಗುವುದು ಆಂಜನೇಯನ ಮೂರ್ತಿ ಇರುವ ಒಂದು ಕಲ್ಲುಗುಡಿ. ಅದನ್ನು ನೋಡಿಕೊಂಡು ಅಲ್ಲಿಂದ ಮತ್ತೆ ನೂರು ಇನ್ನೂರು ಮೆಟ್ಟಿಲು ಹತ್ತಿಹೋದರೆ ಅಲ್ಲಿ ಸೀತೆಯ ಅಡುಗೆ ಮನೆ ʻಸೀತಾ ಕಿ ರಸೋಯಿʼ ಸಿಗುತ್ತದೆ. ಇಲ್ಲಿ ಸೀತೆ ಅಡುಗೆ ಮಾಡುತ್ತಿದ್ದಳು ಎಂದು ಬಣ್ಣದಲ್ಲಿ ಕಚ್ಚಾರೀತಿ ಬರೆದಿರುವ ಒಂದು ಚಿಕ್ಕ ಗುಡಿ ರೂಪದ ರಚನೆ ಇದೆ.  ಇದರ ಜೊತೆಗೆ ನಮ್ಮ ವಿವಿಧ ಪುರಾಣಗಳಲ್ಲಿ ಬರುವ ಯಾವುದ್ಯಾವುದೋ ದೇವಿಯರ ಮುನಿಗಳ ಮೂರ್ತಿಗಳಿರುವ ಚಿಕ್ಕಚಿಕ್ಕ ಗುಡಿಸಲುಗಳು ಇವೆ. ಇಲ್ಲೆಲ್ಲ ʻಹತ್ತುರೂಪಾಯಿನ ದಾನಮಾಡಿʼ ʻಇಪ್ಪತ್ತು ರೂಪಾಯಿನದಾನ ಮಾಡಿʼ ಎಂದು ತಲೆ ತಿನ್ನುವ ಜನ ತಟ್ಟೆಹಿಡಿದುಕೊಂಡು ಕಿರಿಕಿರಿಮಾಡುವುದು ಹಿಂಸೆಯಾಗುತ್ತದೆಯಾದರೂ ಅವನ್ನೆಲ್ಲ ತುಸು ಸಮಾಧಾನದಿಂದ ಸಹಿಸಿಕೊಂಡು ಮುನ್ನೆಡದರೆ ಹನುಮಂತನ ಅವತಾರ ವಾದ ಮಂಗಗಳು ಇಲ್ಲಿ ಬಹಳಷ್ಟು ಇರುತ್ತವೆ. ಇವಕ್ಕೆ ನೀವು ಕಾಳು ಇತ್ಯಾದಿ ಆಹಾರ ನೀಡಿ ಧನ್ಯರಾಗುವುದಾದರೆ ಹತ್ತಿಪ್ಪತ್ತು ರೂಪಾಯಿ ತೆಗೆದುಕೊಂಡು ಈ ಮಂಗಗಳಿಗೆ ಆಹಾರವನ್ನು ನಿಮಗೆ ಕೊಡಲು ಇಲ್ಲಿ ಸಾಕಷ್ಟು ಜನ ಇದ್ದಾರೆ.

ಬೆಟ್ಟದ ಮೇಲೆ ಹೋಗಿ ನಿಂತು ನೋಡಿದರೆ ಕೆಳಗಿನ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಬಹುತೇಕ ಕಾಡು ಈಗ ಕೃಷಿಭೂಮಿಯಾಗಿ ರಸ್ತೆ ಕಟ್ಟಡಗಳಾಗಿ ಬದಲಾಗಿದೆ. ಕಾಡಿನ ಭಯಂಕರತೆ ಇಲ್ಲವಾಗಿದೆ. ಈಗ ಅಲೆಮಾರಿಗಳು ಬೆಟ್ಟವಾಸಿ ಜನರ ವಾಸಸ್ಥಾನಗಳಾಗಿರುವ, ಅವರು ನಮ್ಮನ್ನು ತಮ್ಮ ಹೊಟ್ಟೆಪಾಡಿಗಾಗಿ ಕಾಡಿಬೇಡಿ ಜೀವನ ನಡೆಸುವ ತಾಣವಾಗಿರುವ ಇದು ಆ ಕಾಲದಲ್ಲಿ ರಾಮಲಕ್ಷ್ಮಣರೂ ಬೀಡು ಬಿಟ್ಟಿರಲೂ ಬಹುದು ಅನ್ನಿಸುವ ಸ್ಥಳವಾಗಿದೆ.

ಅಲ್ಲಿಂದ ಮುಂದೆ ತುಸು ದೂರದಲ್ಲಿ ʻಜಾನಕಿಕುಂಡʼವಿದೆ. ಅದನ್ನು ನೋಡಿಕೊಂಡು ಇನ್ನೂ ತುಸು ದೂರಹೋದರೆ ʻಸ್ಪಟಿಕಶಿಲಾʼ ಸಿಗುತ್ತದೆ. ಇವೆಲ್ಲ ಕಾಡಿನಲ್ಲಿ ಹರಿಯುವ ಒಂದು ಚಿಕ್ಕನದಿಯ ದಂಡೆಯಲ್ಲಿಯೇ ಇದ್ದು ಈಗಲು ತಕ್ಕಮಟ್ಟಿನ ಪ್ರೌಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿವೆ. ಇವುಗಳನ್ನು ನೋಡಿಕೊಂಡು ನಾನು ʻರಾಮದರ್ಶನʼ ಎಂದು ಕರೆಯಲ್ಪಡುವ ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಕ್ಕೆ ಹೋದೆ. ಇದು ಮಧ್ಯಪ್ರದೇಶ ಸರ್ಕಾರದ ಒಂದು ಸಂಗ್ರಹಾಲಯ. ಇದರಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ವಿವಿಧ ಘಟನಾವಳಿಗಳ ಸುಂದರವಾದ ಪೇಯಿಂಟಿಗ್ ಗಳನ್ನು ಸಂಗ್ರಹಿಸಲಾಗಿದೆ. ಕೈಕೆಯಿಯ ವರಕೇಳುವಿಕೆ, ವಿಶ್ವಾಮಿತ್ರ ಅರಣ್ಯಕ್ಕೆ ರಾಮಲಕ್ಷ್ಮಣರನ್ನು ಒಯ್ಯುವಿಕೆ, ಸೀತಾ ಸ್ವಯಂವರ, ಅಹಲ್ಯಾ ಪ್ರಕರಣ, ತಾಟಕಿ ಸಂಹಾರ, ಸೀತಾಪರಣ, ವಾಲಿಯ ಕೊಲೆ, ಶೂರ್ಪನಖಿ ಪ್ರಕರಣ, ಸೀತಾ ಅಗ್ನಿಪ್ರವೇಶ ಹೀಗೆ ಮುಖ್ಯಘಟನೆಗಳ ಚಿತ್ರಾವಳಿಗಳು ಕಣ್ಮನ ಸೆಳೆಯುತ್ತವೆ. ಕೇವಲ ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ನಮ್ಮ ರಾಮಾಯಣ ಕಥೆಯನ್ನು ಹೇಗೆಲ್ಲ ಜನ ಗ್ರಹಿಸಿದ್ದಾರೆ ಎಂಬುದನ್ನು ತೋರಿಸುವ ಜನರ ಮುಖವಾಡಗಳು, ಆಯುಧಗಳು, ಪರಿಕರಗಳು ಚಿತ್ರಪಟಗಳು ಇವುಗಳ ಸಂಗ್ರಹ ಮತ್ತು ಆ ದೇಶಗಳ ರಾಮಾಯಣಗಳ ಬಗ್ಗೆ ಪೇಯಿಂಟಿಂಗ್‌ ಗಳನ್ನು ಸಂಗ್ರಹಿಸಿದ್ದು ಇಲ್ಲಿನ ವಿಶೇಷ. ರಾಮದರ್ಶನ ಎಂಬ ಹೆಸರನ್ನು ಸಾರ್ಥಕಗೊಳಿಸುವಂತೆ ತನ್ನ ಎದೆ ಬಗೆದು ರಾಮನನ್ನು ತೋರಿಸುವ ಹನುಮಂತನ ಬೃಹತ್‌ ಮೂರ್ತಿಯೊಂದು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.

ಈ ಸಂಗ್ರಹಾಲಯದ ಎದುರಿಗೇ ಮಹಾತ್ಮಾಗಾಂಧಿ ಚಿತ್ರಕೂಟ ಗ್ರಾಮೋದ್ಯೋಗ ವಿಶ್ವವಿದ್ಯಾಲಯವಿದೆ. ಅದರ ಒಳಗೆ ಹೋಗಲು ಸಮಯವಿರಲಿಲ್ಲವಾದ ಕಾರಣ ಹೊರಗಿನಿಂದಲೇ ಒಂದು ಫೋಟೋ ಹೊಡೆದುಕೊಂಡು ನಾನು ಹೊರಡಬೇಕಾಯಿತು.

ರಾಮಘಾಟ್‌ ಎಂಬ ಸ್ಥಳ ಕೂಡ ಬಹಳಷ್ಟು ಸುಂದರಾಗಿದೆ. ಇದರ ಒಂದು ಭಾಗ ಮಧ್ಯಪ್ರದೇಶಕ್ಕೆ ಸೇರಿದರೆ ಇನ್ನೊಂದು ಭಾಗ ಉತ್ತರಪ್ರದೇಶಕ್ಕೆ ಸೇರಿದೆ. ನಾನು ಹೋಗಿದ್ದು ಮೇ ತಿಂಗಳಾದ ಕಾರಣ ನದಿಯಲ್ಲಿ ನೀರು ತಳಮಟ್ಟದಲ್ಲಿದ್ದು ಕೊಳಕಾಗಿ ಕಾಣುತ್ತಿತ್ತು. ದೋಣಿವಿವಾರಕ್ಕೆ ಇಲ್ಲಿ ಅಲಂಕೃತ ದೋಡಿಗಳ ದಂಡೇ ಇದ್ದು ಬಹುಶಃ ನದಿಯಲ್ಲಿ ನೀರು ಹೆಚ್ಚು ಇರುವ ಸಮಯದಲ್ಲಿ ವಿಹಾರ ಮನಸ್ಸಿಗೆ ಬಹಳ ಮುದನೀಡಬಹುದೇನೋ.

ಈ ಚಿತ್ರಕೂಟದಲ್ಲಿ ಕೆಲವು ಧಾರ್ಮಿಕ ದೇವಾಲಯಗಳು ಇರುವುದು ನಿಜವಾದರೂ ನಾವು ಪೌರಾಣಿಕ ಮಹತ್ವದ ಸತಿ ಅನಸೂಯ ದೇವಾಲಯಕ್ಕೆ ಹೋಗಲೇಬೇಕು. ವಿಂದ್ಯಪರ್ವತ ಶ್ರೇಣಿಯಲ್ಲಿ ಬರುವ ಮಹೇಂದ್ರ ಪರ್ವತ ಎಂಬ ಎತ್ತರವಾದ ಬೆಟ್ಟದ ಬುಡದಲ್ಲಿ ಬೆಟ್ಟದ ಬೆನ್ನಿಗೇ ಹತ್ತಿಕೊಂಡು ನಿರ್ಮಿಸಿರುವ ಈ ದೇವಾಲಯ ಪ್ರಕೃತಿ ಮಧ್ಯೆ ಬಹಳಷ್ಟು ಚೆಂದವಾಗಿ ಕಾಣುತ್ತದೆ. ಸುತ್ತಬೆಟ್ಟಕಾಡುಗಳಿಂದ ಆವೃತವಾಗಿರುವ ಈ ಸ್ಥಳದಲ್ಲಿ ಅತ್ರಿಮುನಿಗಳು ತಮ್ಮ ಹೆಂಡತಿ ಅನಸೂಯಾಳೊಂದಿಗೆ ವಾಸವಾಗಿದ್ದರು ಎನ್ನಲಾಗುತ್ತಿದೆ. ಈಗ ಪರಮಹಂಸರೊಬ್ಬರ ಆಶ್ರಮವಾಗಿರುವ ಈ ಸ್ಥಳವನ್ನು ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಯವಾಗಿ ಈಗ ರೂಪಿಸಲಾಗಿದೆ.

ರಾಮ ಪರಿವಾರ ಪ್ರಯಾಗ್‌ ರಾಜ್‌ ನಲ್ಲಿದ್ದ ಭಾರದ್ವಾಜ ಮುನಿಗಳನ್ನು ಭೇಟಿಮಾಡಿ ಅವರ ಸಲಹೆ ಮೇರೆಗೆ ಚಿತ್ರಕೂಟಕ್ಕೆ ಬಂದು ಇಲ್ಲಿ ಅತ್ರಿಮುನಿಗಳನ್ನು ಭೇಟಿಯಾದನೆಂದು ಹೇಳಲಾಗುತ್ತದೆ. ರಾಮ ಮುನಿಯನ್ನು ಭೇಟಿ ಆಗುವ ಮತ್ತು ಸೀತೆಗೆ ಸತಿ ಅನಸೂಯ ಹದಿಬದೆಯ ಧರ್ಮವನ್ನು ಬೋಧಿಸುವ ಭಾಗ ರಾಮಾಯಣದಲ್ಲಿ ಬಹಳ ಪ್ರಸಿದ್ಧವಾಗಿದೆ. ಅವುಗಳನ್ನು ಇಲ್ಲಿ ಗೊಂಬೆದೃಶ್ಯಗಳಾಗಿ ರೂಪಿಸಲಾಗಿದೆ. ಇವುಗಳ ಜೊತೆಗೆ ರಾಮಾಯಣ ಸೇರಿದಂತೆ ನಮ್ಮ ಪುರಾಣಗಳಲ್ಲಿ ಬರುವ ಅನೇಕ ಘಟನೆಗಳನ್ನು ಇಲ್ಲಿ ದೃಶ್ಯಾವಳಿಗಳಾಗಿ ರೂಪಿಸಲಾಗಿದೆ.

ಈ ಸತಿ ಅನುಸೂಯಾ ದೇವಾಲಯ ಅಂದರೆ ಅತ್ರಿಮುನಿ ಆಶ್ರಮವೇ ಮಂದಾಕಿನಿ ನದಿಯ ಉಗಮಸ್ಥಾನ. ಇಲ್ಲಿ ಬೆಟ್ಟದ ಬುಡದಿಂದ ಪ್ರತ್ಯಕ್ಷವಾಗುವ ಮಂದಾಕಿನ ನದಿ ಜಾನಕಿಕುಂಡ, ಸ್ಪಟಿಕಶಿಲಾ ರಾಮಘಾಟ್‌ ಸೇರಿದಂತೆ ಇಡೀ ಚಿತ್ರಕೂಟದ ಈ ಪೌರಾಣಿಕ ಸ್ಥಳಗಳಲ್ಲಿ ಹರಿದು ಮುಂದೆ ರಾಮಚರಿತ ಮಾನಸ ಬರೆದ ತುಳಸಿದಾಸರ ಜನ್ಮಸ್ಥಳವಾದ ರಾಯಪುರದಲ್ಲಿ ಯಮುನಾನದಿಯನ್ನು ಸೇರಿಕೊಳ್ಳುತ್ತದೆ. ಈ ನದಿ ಇಡೀ ಚಿತ್ರಕೂಟದ ಈ ಎಲ್ಲ ಸ್ಥಳಗಳಿಗೆ ಒಂದು ಜೀವನಾಡಿಯಾಗಿ ಹರಿದಿದೆ ಮಾತ್ರವಲ್ಲ ಈ ಪರಿಸರಕ್ಕೆ ಒಂದು ವಿಶೇಷ ಕಳೆಯನ್ನೂ ಕಟ್ಟಿದೆ.

ರಾಮಾಯಣ ಪೌರಾಣಿಕ ಕಟ್ಟುಕಥೆಯೇ ಅಥವಾ ವಾಸ್ತವವಾಗಿ ನಡೆದ ಚರಿತ್ರೆಯೇ ಎಂಬುದು ವಾದಗ್ರಸ್ತ ಸಂಗತಿ. ಪುರಾಣವನ್ನು ಇತಿಹಾಸ ಮಾಡುವ ಮತ್ತು ಇತಿಹಾಸವನ್ನು ಪುರಾಣವಾಗಿ ಮಾಡುವ ಕೆಲಸಗಳು ಎಲ್ಲ ದೇಶಗಳ ಎಲ್ಲ ಸಮುದಾಯಗಳಲ್ಲಿ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುವುದು ಸಾಮಾನ್ಯ ಸಂಗತಿಯಾದರೂ ಭಾರತದಲ್ಲಿ ಈ ಕೆಲಸಗಳು ತುಸು ಹೆಚ್ಚೇ ಅನ್ನಬೇಕು. ಅದು ಏನೇ ಇರಲಿ ನೀವು ಧಾರ್ಮಿಕ ನಂಬಿಕೆಯುಳ್ಳ ಶ್ರದ್ಧಾವಂತರಾದರೆ ಈ ಸ್ಥಳಗಳ ವೀಕ್ಷಣೆ ನಿಮಗೆ ಹೆಚ್ಚು ಭಾವುಕರನ್ನಾಗಿ ಮಾಡಬಹುದು. ಅದರೆ ಆ ಶ್ರದ್ಧಾವಂತಿಕೆ ಇಲ್ಲದೇ ಇರುವವರನ್ನೂ ಈ ಚಿತ್ರಕೂಟ ನಿರಾಶೆಗೊಳಿಸುವುದಿಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ, ಬದಲಾದ ಪರಿಸರ, ಇತ್ಯಾದಿಗಳು ನಮ್ಮ ಮನಸ್ಸಿಗೆ ಮುದನೀಡುತ್ತವೆ ಮಾತ್ರವಲ್ಲ ನಮ್ಮ ಸಂಶೋಧನಾ ಬುದ್ಧಿಯನ್ನು ತುಸು ಚುರುಕುಗೊಳಿಸುತ್ತವೆ. ಆಸಕ್ತಿ ಇದ್ದರೆ ಅವಕಾಶವಾದರೆ ಒಮ್ಮೆ ಹೋಗಿಬನ್ನಿ ಚೆನ್ನಾಗಿರುತ್ತದೆ.

ರಾಬು

೧೧-೦೫-೨೦೨೫

 

 

 

Tuesday, April 15, 2025

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 


ಭಾರತ ಸಂವಿಧಾನದ ಮೂರನೆಯ ಮತ್ತು ಅಂತಿಮ ಕರುಡು ವಾಚನವನ್ನು ಅಂಬೇಡ್ಕರ್‌ ಅವರು ೧೯೪೯ರ ನವೆಂಬರ್‌ ೧೭ ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದರು.  ಅದರ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರನೇಕರು ತಮ್ಮ ʻವಂದನಾರ್ಪಣಾ ಭಾಷಣʼ (Concluding Speech) ಮಾಡಿದರು. ಅದುವರೆಗೆ ಸಂವಿಧಾನದ ಕರುಡಿನ ಮೇಲೆ  ಅನೇಕ ದಿನಗಳು ದೀರ್ಘವಾದ ಚರ್ಚೆ ಸಂವಾದಗಳು ನಡೆದಿದ್ದವು. ಕೆಲವು ವಿಧಿಗಳ ಬಗ್ಗೆ ಅತ್ಯಂತ ಬಿರುಸಿನ ವಾಗ್ವಾದಗಳೂ ನಡೆದಿದ್ದವು. ಬಹಳಷ್ಟು ಜನ ಸಂಪ್ರದಾಯವಾದಿಗಳೇ ಇದ್ದ ಸಂವಿಧಾನ ರಚನಾ ಸಭೆಯು ಅಷ್ಟು ಸುಲಭವಾಗಿ ಅಂಬೇಡ್ಕರ್‌ ಅವರ ಪ್ರಗತಿಶೀಲತೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಮಹಿಳೆಯರಿಗೆ ಪುರುಷರಂತೆ ಸಮಾನತೆ ನೀಡುವುದು, ಎಲ್ಲ ಜಾತಿ ಧರ್ಮಗಳವರನ್ನು ಸಮಾನವಾಗಿ ಕಾಣುವುದು ಇಂತಹುಗಳನ್ನು ಅವರೆಲ್ಲ ಹೇಗೆ ತಾನೆ ಒಪ್ಪಿಕೊಳ್ಳಲು ಸಾಧ್ಯ? ಅವರು ತಕರಾರು ತೆಗೆದಾಗಲೆಲ್ಲ ಅಂಬೇಡ್ಕರ್‌ ಅದಕ್ಕೆ ತಮ್ಮ ಅಪಾರ ಪಾಂಡಿತ್ಯ ಮತ್ತು ತುಳಿತಕ್ಕೊಳಗಾದವರ ಬಗೆಗಿನ ತಾಯ್ತನದ ಭಾವನೆ ಇವುಗಳಿಂದಾಗಿ ಸಮರ್ಪಕವಾಗಿ ಉತ್ತರ ಕೊಟ್ಟು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೂ ಶೇಕಡಾ ನೂರರಷ್ಟು ಅವರು ತಮ್ಮ ಕೆಲಸಗಳನ್ನು ಮಾಡಲು ಇವರು ಬಿಡಲಿಲ್ಲ. ಕೆಲವಕ್ಕೆ ಒಪ್ಪಿಕೊಂಡರು. ಮತ್ತೆ ಕೆಲವಕ್ಕೆ ಮೊಂಡಾಟ ಮಾಡಿ ತೆಗೆದು ಹಾಕಲು ಅದಾಗದಿದ್ದರೆ ಕೊನೆಪಕ್ಷ ತಿದ್ದುಪಡಿ ತರಲು ಸಮರ್ಥರಾದರು. ಇವರ ಮೊಂಡಾಟಕ್ಕೆ ಅಂಬೇಡ್ಕರ್‌ ಕೂಡ ಕೆಲವು ಸಲ ಅನಿವಾರ್ಯವಾಗಿ ಮಣಿದು ಸಂವಿಧಾನದ ಕೆಲವು ಅತ್ಯಂತ ಪ್ರಗತಿಪರ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಯಿತು.

ಅಂಬೇಡ್ಕರ್‌ ಅವರ ಅಂತಿಮ ಓದಿಗೆ ಪ್ರಮುಖ ಸದಸ್ಯರು ಮಾಡಿದ ವಂದನಾರ್ಪಣಾ ನುಡಿಗಳಲ್ಲಿ ಅಂಬೇಡ್ಕರ್‌ ಅವರೊಂದಿಗಿನ ಅದುವರೆಗಿನ ಭಿನ್ನಾಭಿಪ್ರಾಯಗಳೇನೇ ಇದ್ದರೂ ಮತ್ತು ಸಂವಿಧಾನದ ಕೆಲವು ಪ್ರಗತಿಪರ ವಿಧಿಗಳ ಬಗ್ಗೆ ಅವರಿಗೆ ಈಗಲೂ ಅಸಮಾಧಾನವಿದ್ದರೂ ಅವೆಲ್ಲವನ್ನು ಮರೆತು ಅವರು ಸಂವಿಧಾನ ರಚನೆಯ ಕಾರ್ಯದಲ್ಲಿ ಅಂಬೇಡ್ಕರ್‌ ಅವರ ಅಪಾರ ಪರಿಶ್ರಮದ ಕೊಡುಗೆಯನ್ನು ಕೊಂಡಾಡಿ ಮಾತನಾಡಿದರು. ಕರಡು ಸಮಿತಿಯಲ್ಲಿನ ಉಳಿದ ಸದಸ್ಯರೆಲ್ಲ ಏನೇನೋ ಕಾರಣಗಳಿಂದ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೆ ಕರಡು ರಚನೆಯ ಶೇ ತೊಂಬತ್ತರಷ್ಟು ಕೆಲಸವನ್ನು ಅಂಬೇಡ್ಕರ್‌ ಅವರೊಬ್ಬರೇ ಮಾಡಿದ್ದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಅವರು ಅಂಬೇಡ್ಕರ್‌ ಅವರನ್ನು ಹೊಗಳಿ ಮಾತನಾಡಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ.

 ಸಂವಿಧಾನ ಕರುಡು ರಚನೆ ಮತ್ತು ಅದರ ಚರ್ಚೆ ನಡೆಯುತ್ತಿರುವಾಗ ಅಂಬೇಡ್ಕರ್‌ ತಮ್ಮ ಮೇಲಿನ ಅಪಾರವಾದ ಜವಾಬ್ದಾರಿಯನ್ನು ನಿರ್ವಹಿಸಲು ವಾಸ್ತವದಲ್ಲಿ ದೈಹಿಕವಾಗಿ ಅಷ್ಟು ಸಮರ್ಥರಾಗಿರಲಿಲ್ಲ. ಹಗಲು ರಾತ್ರಿ ಎನ್ನದೆ ಊಟ ನಿದ್ರೆಗಳನ್ನೂ ಲೆಕ್ಕಿಸದೇ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳ ಅಧ್ಯಯನ ಮತ್ತು ಅವುಗಳ ವಿಧಿಗಳ ಆಯ್ಕೆ ಮತ್ತು ನಮ್ಮ ಸಂವಿಧಾನದ ಕರುಡು ರಚನೆ ಇಂತಹ ಕೆಲಸದಲ್ಲಿ ಮುಳುಗಿಹೋಗಿದ್ದರು. ಇದರಿಂದ ಸಹಜವಾಗಿ ಅವರ ಆರೋಗ್ಯ ಹದಗೆಟ್ಟೆತು. ಸಕ್ಕರೆ ಕಾಯಿಲೆ ಅವರನ್ನು ಅಪಾರವಾಗಿ ಭಾದಿಸುತ್ತಿತ್ತು. ಒಂದು ಸಲವಂತೂ ಕುಂಡಿಯ ಮೇಲೆ ಕುರು ಆಗಿ ಅನೇಕ ದಿನಗಳು ಖುರ್ಚಿಯ ಮೇಲೆ ಕೂರಲೂ ಆಗದಂತೆ ಅಪಾರ ಹಿಂಸೆಯನ್ನು ಅನುಭವಿಸಿದರು. ಅವರ ಅನಾರೋಗ್ಯದ ಕಾರಣಕ್ಕಾಗಿ ಸಂವಿಧಾನ ರಚನಾ ಸಭೆಯಲ್ಲಿ ಅವರು ಕುಳಿತುಕೊಳ್ಳುವುದಕ್ಕಾಗಿಯೇ ಅನುಕೂಲಕರವಾದ ಒಂದು ವಿಶೇಷ ಖುರ್ಚಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

 ಈ ಎಲ್ಲ ನೋವು ಸಂಕಟಗಳನ್ನು ಇಟ್ಟುಕೊಂಡೇ ಅವರು ಆ ಸಭೆಯಲ್ಲಿ ಕರುಡಿನ ಮೇಲಿನ ಭಿನ್ನಾಭಿಪ್ರಾಯಗಳಿಗೆ ತಕ್ಕುದಾದ ಉತ್ತರ ಕೊಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ಅವರು ತಮ್ಮ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಬೆನ್ನುಹಾಕದೆ ಮುಖಾಮುಖಿಯಾಗಿಯೇ ಕೆಲಸ ಮಾಡಿದರು. ಹೀಗೆ ಕಣ್ಣಿಗೆ ಕಾಣುವ ಅವರ ನೋವು ಕಾಣದೇ ಇರುವ ಈ ದೇಶದ ಕೋಟಿ ಕೋಟಿ ತುಳಿತಕ್ಕೊಳಗಾದವರ ಬಾಳಿಗೆ ಆಶಾಕಿರಣವಾಗಿ ರೂಪುಗೊಂಡ ನಮ್ಮ ಸಂವಿಧಾನ ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ತುʼ ಅನ್ನುವ ಹಾಗೆ ಅಂತಿಮ ಹಂತ ತಲುಪಿತ್ತು.

ಅಂಬೇಡ್ಕರ್‌ ಅವರು ರಚಿಸಿದ ನಮ್ಮ ಸಂವಿಧಾನದ ಬಗ್ಗೆ ಬಂದ ಬಹಳಷ್ಟು ತಕರಾರುಗಳಲ್ಲಿ ಬಹುಮುಖ್ಯವಾದ ಎರಡು ತಕರಾರುಗಳೆಂದರೆ ಮೊದಲನೆಯದು ನಮ್ಮ ಸಂವಿಧಾನ ಗಾಂಧಿತತ್ವ ಹೇಳುವ ಅಧಿಕಾರ ವಿಕೇಂದ್ರಿಕರಣವನ್ನು ಬೆಂಬಲಿಸುವ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಕಡೆಗಣಿಸಿ ಅಧಿಕಾರದ ಕೇಂದ್ರೀಕರಣವನ್ನು ಬೆಂಬಲಿಸುತ್ತದೆ ಎಂಬುದು. ಇದಕ್ಕೆ ಅಂಬೇಡ್ಕರ್‌ ಅವರ ಉತ್ತರ ಆ ರೀತಿ ಪಂಚಾಯತಿಗಳಿಗೆ ಹಳ್ಳಿಮಟ್ಟದಲ್ಲಿ ಅಧಿಕಾರ ಸಿಕ್ಕರೆ ಅಲ್ಲಿನ ಮೇಲ್ವರ್ಗದವರು ಸಹಜವಾಗಿ ಅಧಿಕಾರ ಹಿಡಿಯುತ್ತಾರೆ ಮತ್ತು ಹಿಂದುಳಿದವರು ದಲಿತರು ಇವರ ಮೇಲೆ ಅವರು ಇದುವರೆಗೂ ಮಾಡುತ್ತಿರುವವ ಶೋಷಣೆ ಇನ್ನಷ್ಟು ಬಲಪಡೆದು ಮುಂದುವರೆಯುತ್ತದೆ ಎಂಬುದಾಗಿತ್ತು. (ಮುಂದೆ ದಮನಿತರ ಶಿಕ್ಷಣ ಮುಂತಾದವುಗಳಿಂದ ಪರಿಸ್ಥಿತಿ ಸುಧಾರಿಸಿದ ಮೇಲೆ ಪಂಚಾಯತ್‌ ವ್ಯವಸ್ಥೆ ಸಂವಿಧಾನದ ತಿದ್ದುಪಡಿಯ ಮೂಲಕ ಜಾರಿಗೆ ಬಂತು.)

ಎರಡನೆಯದು ನಮ್ಮ ಸಂವಿಧಾನದ ಮೇಲೆ ʻವಿದೇಶಿ ಸಂವಿಧಾನಗಳ ಪ್ರಭಾವ ಅತಿ ಹೆಚ್ಚಾಯಿತು ಮತ್ತು ಅದು ನಮ್ಮ ಪ್ರಾಚೀನ ಧಾರ್ಮಿಕ ಪಠ್ಯಗಳು ಹೇಳುವ ತತ್ವಗಳನ್ನು ಕಡೆಗಣಿಸಿದೆʼ ಎಂಬುದಾಗಿತ್ತು. ಅದು ನಿಜವೂ ಇತ್ತು; ಅದಕ್ಕೆ ಕಾರಣವೂ ಇತ್ತು. ಅಂಬೇಡ್ಕರ್‌ ಅವರಿಗೆ ಅದು ಅನಿವಾರ್ಯವೂ ಆಗಿತ್ತು. ನಮ್ಮ ಧಾರ್ಮಿಕ ಪಠ್ಯಗಳು ಏನೇ ಹೇಳಿದರೂ ಅವು ಸುತ್ತೂ ಬಳಸಿ ಕೊನೆಗೆ ಅಂತಿಮವಾಗಿ ಮನುಷ್ಯನನ್ನು ಸಮಾನವಾಗಿ ಕಾಣುವುದಕ್ಕೆ ವಿರುದ್ಧವಾಗಿಯೇ ನಿಲ್ಲುತ್ತಿದ್ದವು. ಅವು ಹೇಳುವ ʼಧರ್ಮʼ ಅದು ವರ್ಣಾಶ್ರಮ ಧರ್ಮವೇ ಆಗಿತ್ತು. ಅಂಬೇಡ್ಕರ್‌  ಅವರು ಅದನ್ನು ತಮ್ಮ ಅಪಾರ ಪರಿಶ್ರಮದಿಂದ ಓದಿ ಅರ್ಥೈಸಿಕೊಂಡಿದ್ದರು. ಹಾಗಾಗಿ ಅವರು ನಮ್ಮ ಸಂವಿಧಾನದ ಪ್ರಧಾನ ಆಶಯಗಳಾದ ಸಹೋದರೆ, ಸಮಾನತೆ, ಅಧಿಕಾರ ಮತ್ತು ಅವಕಾಶಗಳ ಸಮಾನತೆ, ಮನುಷ್ಯನ ವ್ಯಕ್ತಿತ್ವದ ಘನತೆ ಇಂತಹುಗಳಿಗಾಗಿ ವಿದೇಶಿ ಸಂವಿಧಾನಗಳನ್ನು ಆಶ್ರಯಿಸಬೇಕಾಯಿತು!

ಅಂಬೇಡ್ಕರ್‌  ಸಂವಿಧಾನದ ಅಂತಿಮ ಕರುಡನ್ನು ಓದಿದ ಮೂರು ದಿನಗಳ ನಂತರ ಅಂದರೆ ೧೯೪೯ರ ನವೆಂಬರ್‌ ೨೦ ರಂದು ಇಲ್ಲಿರುವ ವ್ಯಂಗಚಿತ್ರ ಆಗಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಈ ಚಿತ್ರದಲ್ಲಿ ಅಂಬೇಡ್ಕರ್‌ ಅವರನ್ನುʼಕಲಿಯುಗ ಭೀಮʼ ಎಂದು ಕರೆದು ಅಡುಗೆಭಟ್ಟನನ್ನಾಗಿ ಚಿತ್ರಿಸಲಾಗಿದೆ. (ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿರುವಾಗ ವಿರಾಟ ರಾಜನ ಆಶ್ರಯದಲ್ಲಿರುವಾಗ ʼಭೀಮ ಅಲ್ಲಿ ಅಡುಗೆಭಟ್ಟ ಆಗಿದ್ದನ್ನು ನೆನಪಿಸಿಕೊಳ್ಳಿ. ಅವನು ದ್ವಾಪರಯುತದ ಭೀಮನಾದರೆ ಇವನು ಕಲಿಯುಗದ ಭೀಮʼ ಎಂಬುದನ್ನು ಇದು ಧ್ವನಿಸುತ್ತದೆ.) ಮತ್ತು ಅಂಬೇಡ್ಕರ್‌ ನಿರ್ವಹಿಸಿದ ಸಂವಿಧಾನ ರಚನೆ ಯ ಕಾರ್ಯವನ್ನು ಆ ಅಡುಗೆಭಟ್ಟ ಮಾಡಿದ ಅಡುಗೆಗೆ ಹೋಲಿಸಿ ಚಿತ್ರಿಸಲಾಗಿದೆ. ಸಂವಿಧಾನ ರಚನಾ ಸಭೆಯ ಸದಸ್ಯರು ಎತ್ತಿದ ತಕರಾರುಗಳನ್ನು ಇಲ್ಲಿಅಡುಗೆಯ ಬಗ್ಗೆ ಎತ್ತಿದ ತಕರಾರುಗಳಾಗಿ ತೋರಿಸಲಾಗಿದೆ. ಒಬ್ಬರು ʻಹಲ್ವಾ ಎಲ್ಲಿ?ʼ ಎಂದು ಕೇಳುತ್ತಿದ್ದರೆ ಇನ್ನೊಬ್ಬರು ʻಉಪ್ಪು  ಹೆಚ್ಚಾಯಿತುʼ ಎಂದೂ ಮತ್ತೊಬ್ಬರು ʻಖಾರ ಕಡಿಮೆ ಆಯಿತುʼ ಎಂದೂ ಹೇಳುತ್ತಿದ್ದಾರೆ.  ಕೆಲವರು ಅಡುಗೆ ʻಸರಿಯಾಗಿ ಬೆಂದಿಲ್ಲʼವೆಂದರೆ ಮತ್ತೆ ಕೆಲವರು ಸಾಕಷ್ಟು ತರಕಾರಿ ಹಾಕಿಲ್ಲʼ ಎಂದು ಟೀಕಿಸುತ್ತಿದ್ದಾರೆ. ʼಮೀನು ಇಲ್ವಾಎಂದು ಕೇಳಿದವರೂ ಇದ್ದಾರೆ. ಕೊನೆಯ ಕಾರ್ಡ್‌ಬೋರ್ಡಿನ ತಕರಾರನ್ನು ಸೂಕ್ಷ್ಮವಾಗಿ ನೋಡಿ. ʼನೀವು ವನಸ್ಪತಿಯನ್ನು ಏಕೆ ಬಳಸುವುದಿಲ್ಲ” ಎಂದು ಕೇಳಲಾಗಿದೆ. ಇಲ್ಲಿ ʼವನಸ್ಪತಿʼ ಎಂದರೆ ʼಭಾರತೀಯತೆʼ ಎಂದೇ ಅರ್ಥ!

ಡಾ. ರಾಜೇಂದ್ರ ಬುರಡಿಕಟ್ಟಿ

16-04-2025

 

 

Monday, April 14, 2025

ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ  ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎರಡು ವರ್ಷ ಮಾತ್ರ ಆಗಿತ್ತು. 1949ರ ಏಪ್ರಿಲ್‌ 14 ರಂದು ʼಹೈದರಾಬಾದ್‌ ರಾಜ್ಯ ಪರಿಶಿಷ್ಠ ಜಾತಿಗಳ ಒಕ್ಕೂಟʼ ಅಂಬೇಡ್ಕರ್‌ ಅವರ ಜನ್ಮದಿನದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದನ್ನು ಉದ್ದೇಶಿಸಿ ಅಂಬೇಡ್ಕರ್‌ ಹೀಗೆ ಹೇಳಿದ್ದರು: “ಭಾರತದಲ್ಲಿ ರಾಜಕೀಯ ನಾಯಕರನ್ನು ಪ್ರವಾದಿಗಳ ಸ್ಥಾನದಲ್ಲಿರಿಸುವುದು ಒಂದು ಖೇಧದ ಸಂಗತಿಯಾಗಿದೆ. ಬೇರೆ ದೇಶಗಳಲ್ಲಿ ಪ್ರವಾದಿಗಳ ಜನ್ಮದಿನಗಳನ್ನು ಮಾತ್ರ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರ ಪ್ರವಾದಿಗಳು ಮತ್ತು ರಾಜಕೀಯ ನಾಯಕರ ಜನ್ಮದಿನಗಳನ್ನು ಆಚರಿಸಲಾಗುತ್ತದೆ. ನಾನು ನನ್ನ ಜನ್ಮದಿನವನ್ನು ಆಚರಿಸುವುದನ್ನು ಇಷ್ಟಪಡುವುದಿಲ್ಲ. ನಾನು ಪ್ರಜಾಪ್ರಭುತ್ವವಾದಿ ಮತ್ತು ಇಂತಹ ವ್ಯಕ್ತಿಪೂಜೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯು ಹಳಿತಪ್ಪುವಂತೆ ಮಾಡುತ್ತವೆಯಾದ್ದರಿಂದ ಇವು ಇರಬಾರದು ಎಂಬ ಆಲೋಚನೆಯವನು. ರಾಜಕೀಯ ನಾಯಕರ ಮತ್ತು ಅವರ ಅನುಯಾಯಿಗಳ ಬಗ್ಗೆ, ಅವರು ಅರ್ಹರಾಗಿದ್ದರೆ, ಪ್ರೀತಿ, ವಿಶ್ವಾಸ, ಗೌರವ ಇವುಗಳನ್ನು ಜನ ಇಟ್ಟುಕೊಳ್ಳಬಹುದು. ಆದರೆ ಇಂತಹ ವ್ಯಕ್ತಿಪೂಜೆಗಳು ಅದನ್ನು ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಇಬ್ಬರನ್ನೂ ನೈತಿಕ ಅಧಪತನಕ್ಕೆ ಈಡುಮಾಡುತ್ತವೆ. ಏಕೆಂದರೆ ಒಂದು ಸಾರೆ ರಾಜಕೀಯ ನಾಯಕನೊಬ್ಬನನ್ನು ಪ್ರವಾದಿಯ ಸ್ಥಾನದಲ್ಲಿರಿಸಿದರೆ ಆನಂತರ ಅವನು ಪ್ರವಾದಿಯ ಪಾತ್ರವಹಿಸಿಕೊಂಡು ಪ್ರವಾದಿಗಳಂತೆ ಸಂದೇಶ ನೀಡಬೇಕಾಗುತ್ತದೆ.”

ಹೀಗೆ ಹೇಳಿದ ವ್ಯಕ್ತಿಯ ಜನ್ಮದಿನವನ್ನೇ ನಾವು ಇಂದು ಆಚರಿಸುತ್ತಿದ್ದೇವೆ. ಇದು ತಪ್ಪಲ್ಲ. ಆದರೆ ಅದನ್ನು ಹೇಗೆ ಆಚರಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಭಾರತದ ಶೇಕಡಾ ತೊಂಬತ್ತರಷ್ಟು ಜನರು ಇಂದು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವಂತಾದದ್ದು ಡಾ ಅಂಬೇಡ್ಕರ್‌ ಅವರ ದೂರದೃಷ್ಟಿಯ ಸಂವಿಧಾನದಿಂದ. ಅವರಷ್ಟು ಓದಿಕೊಂಡ ವ್ಯಕ್ತಿ ಈ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಆ ಕಾಲದಲ್ಲಂತೂ ಇರಲೇ ಇಲ್ಲ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ಎಂದು ನಾವೆಲ್ಲರೂ ಭಾವಿಸುವ ಅನೇಕ ಜ್ಞಾನಶಿಸ್ತುಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಪಾರವಾದದ್ದು. ಆ ಪಾಂಡಿತ್ಯವನ್ನು ಅವರು ಈ ದೇಶದ ಜನರ ಬದುಕು ಹಸನಾಗುವಂತೆ ಮಾಡಲು ಬಳಸಿದ್ದು ಅವರ ಸಾಧನೆ. ಭಾರತದ ಜನನಾಯಕರಲ್ಲಿಯೇ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಸತ್ತನಂತರವೂ ನಿತ್ಯ ಬೆಳೆಯುತ್ತಿರುವ ವ್ಯಕ್ತಿ ಅಂದರೆ ಅದು ಅಂಬೇಡ್ಕರ್‌ ಮಾತ್ರ.

ಇಂತಹ ಒಬ್ಬ ಮಹಾನಾಯಕನ ದಿನವನ್ನು ಬಹಳ ಕಡೆ ಹೇಗೆಲ್ಲ ಆಚರಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಖೇಧವೆನಿಸುತ್ತದೆ. ಇದನ್ನು ಸರ್ಕಾರಗಳು ಅಧಿಕೃತವಾಗಿ ಆಚರಿಸುವ ಮೊದಲು ಅಭಿಮಾನದಿಂದ ಕೆಲವು ಸಂಘಟನೆಗಳು ಆಚರಿಸುವಾಗ ಅದರ ಕಿಮ್ಮತ್ತೇ ಬೇರೆ ಇತ್ತು. ಈಗ ಇದು ಸರ್ಕಾರಿ ಆಚರಣೆ ಆಗಿರುವುದರಿಂದ ಅನೇಕ ಕಛೇರಿಗಳಲ್ಲಿ ಕಾಟಾಚಾರದ ʻಫೋಟೋ ಆಚರಣೆʼ ಆಗಿರುವುದೇ ಹೆಚ್ಚು. ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದರ ಉದ್ದೇಶ ಆ ವ್ಯಕ್ತಿಯ ಬದುಕು ಸಾಧನೆಗಳಿಂದ ನಾವು ಪ್ರೇರಣೆ ಪಡೆಯುವುದೇ ಆಗಿದೆ. ಆ ವ್ಯಕ್ತಿಯ ಬದುಕು, ಸಾಧನೆ ಬರೆಹ ಇವುಗಳನ್ನು ಕುರಿತು ಬಹುಮುಖ್ಯವಾಗಿ ಉಪನ್ಯಾಸ, ಚರ್ಚೆ, ಸಂವಾದ ಇಂಥವು ನಡೆದರೇನೇ ಅದು ಅರ್ಥಪೂರ್ಣ. ಅಂಬೇಡ್ಕರ್‌ ಅವರಂಥ ಮೇಧಾವಿಗಳ ವಿಷಯದಲ್ಲಂತೂ ಇದು ಆಗಲೇ ಬೇಕಾಗಿರುವ ಅತ್ಯಗತ್ಯ ಕೆಲಸ. ಉಳಿದ ಕಛೇರಿಗಳಿಗಿಂತ ಈ ಕೆಲಸ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಬೇಕು.

ಆದರೆ ವಾಸ್ತವ ಬಹಳ ಕೆಟ್ಟದ್ದಾಗಿದೆ. ಈ ದಿನಾಚರಣೆ ಬರುವ ಏಪ್ರಿಲ್‌ ಹದಿನಾಲ್ಕು ರಾಜ್ಯದ ಬಹುತೇಕ ಕೆಳಹಂತದ ಶಾಲೆಗಳಿಗೆ ರಜೆ ಇರುತ್ತದೆ. ರಜೆಯಿದ್ದರೂ ಅಂಬೇಡ್ಕರ್‌ ಜಯಂತಿಗೆ ಸ್ವಯಂ ಇಚ್ಚೆಯಿಂದ ಬರುವಂತೆ ಮಾಡುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಇನ್ನು ಶಿಕ್ಷಕರು. ಅವರಾದರೂ ತಾವೇ ಒಂದಿಷ್ಟುಹೊತ್ತು ಅಂಬೇಡ್ಕರ್‌ ಅವರ ಜೀವನ ಸಾಧನೆಗಳು, ಅವರ ವಿಚಾರಧಾರೆ ಕುರಿತು ಚಿಂತನ-ಮಂಥನ ಮಾಡಿ ಅದನ್ನು ಇದ್ದದ್ದರಲ್ಲಿಯೇ ಅರ್ಥಪೂರ್ಣಗೊಳಿಸಲು ಸಾಧ್ಯವಿದೆ. ಆದರೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಮ್ಮ ಮೇಲಿರುವ ಅಂಬೇಡ್ಕರ್‌ ಅವರ ಋಣ ತೀರಿಸಲು ಬರುವವರಿಗಿಂತ ʼಕಡ್ಡಾಯʼ ಎಂಬ ಕಾರಣಕ್ಕೆ ಸಂಕಟದಿಂದ ಬರುವವರೇ ಹೆಚ್ಚು. ಬರುಬರುತ್ತಿದ್ದಂತೆಯೇ ಅವರು ಹೊರಡುವ ಆತುರದಲ್ಲಿರುತ್ತಾರೆ! ಇವರೆಲ್ಲ ಸೇರಿ ಮಾಡುವ ಆಚರಣೆ ಎಷ್ಟು ಅರ್ಥಹೀನವಾಗಿರುತ್ತದೆ ಎಂದರೆ ಅದು ʻಸರಸ್ವತಿ ಪೂಜೆʼಯ ಕಾರ್ಯಕ್ರಮವೋ ಅಥವಾ ʻಸತ್ಯನಾರಾಯಣ ವ್ರತʼವೋ ಆಗುವುದೇ ಹೆಚ್ಚು. ಅಂಬೇಡ್ಕರ್‌ ಅವರ ಫೋಟೋ ಇಟ್ಟು ಅದಕ್ಕೆ ಕಾಯಿ ಒಡೆದು ಕರ್ಪೂರ ಬೆಳಗಿ ಕೊಬ್ಬರಿ ತಿಂದು ಅದರ ಆಚೆ ಈಚೆ ನಿಂತು ಮದುವೆ ರಿಶಪ್ಶನ್‌ ನಂತೆ ʻಹಾಜರಿಫೋಟೋʼ ಹೊಡೆಸಿಕೊಂಡರೆ ಅದೇ ಅಂಬೇಡ್ಕರ್‌ ದಿನಾಚರಣೆ!

ಸರ್ಕಾರ ಹೀಗೆ ಮಾಡಲಿಕ್ಕೆಂದು ಅವರ ಜಯಂತಿಯನ್ನು ಮಾಡಿದೆಯೇ? ಹೀಗೆ ʻಪೂಜೆ-ಪ್ರಸಾದʼವೇ ಪ್ರಧಾನವಾದ ಆಚರಣೆ ಮಾಡುವುದಾದರೆ ಅದನ್ನು ಮನೆಯಲ್ಲೋ ದೇವಸ್ಥಾನದಲ್ಲಿಯೋ ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ? ಅಂಬೇಡ್ಕರ್‌ ಪೋಟೋದೊಂದಿದೆ ಮನೆಯಲ್ಸೆಲಿಯೇ ಸೆಲ್ಪಿ ಹೊಡೆದುಕೊಂಡು ಕಳಿಸಬೇಕಾದವರಿಗೆ ಕಳಿಸಿದರೆ ಏನು ತಪ್ಪಾಗುತ್ತದೆ? ಶಾಲೆ-ಕಾಲೇಜು, ಕಛೇರಿಗಳಲ್ಲಿ ಎಲ್ಲ ಜಾತಿಧರ್ಮದ ಜನ ಸೇರಿ ಮಾಡುವ ಮಹಾವ್ಯಕ್ತಿಗಳ ಜಯಂತಿಗಳ ಮುಖ್ಯ ಉದ್ದೇಶವೇ ಅವರ ಕುರಿತು ವಿಚಾರ ಮಂಥನ. ಅದೇ ಮಾಯವಾದರೆ ಹೇಗೆ? ಹೀಗೆ ಮಾಡುವುದು ಅಂಬೇಡ್ಕರ್‌ ಅಂತಹ ಮೇಧಾವಿಗೆ ಮಾಡುವ ಅಪಚಾರವಲ್ಲದೆ ಮತ್ತೇನು? ಬೇರೆ ಕಛೇರಿಗಳಲ್ಲಿ ಆಗದಿದ್ದರೆ ದೇಶದ ಭಾವೀ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಶಾಲೆ ಕಾಲೇಜುಗಳಲ್ಲಿಯಾದರೂ ಇದು ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳದಿದ್ದರೆ ಹೇಗೆ?

ಇದಕ್ಕೆ ಮುಖ್ಯವಾಗಿ ನಮ್ಮ ಶಿಕ್ಷಕ ಸಮುದಾಯ ಮನಸ್ಸು ಮಾಡಬೇಕು ಅದಕ್ಕೆ ಪೂರಕವಾಗಿ ಅವರಿಗೆ ಸಹಾಯ ಆಗುವಂತೆ ಇಲಾಖೆ ಮಾಡಬೇಕಾದ ಕೆಲಸವೆಂದರೆ ಏಪ್ರಿಲ್‌ ಹನ್ನೊಂದರಿಂದ ಕೊಡುತ್ತಿರುವ ಬೇಸಿಗೆ ರಜೆಯನ್ನು ನಾಲ್ಕು ದಿನ ಮುಂದಕ್ಕೆ ಹಾಕಿ ಏಪ್ರಿಲ್‌ ಹದಿನೈದರಿಂದ ಕೊಟ್ಟು ಶಾಲಾ ಪುನರಾರಂಭವನ್ನು ಕೂಡ ನಾಲ್ಕುದಿನ ತಡವಾಗಿ ಮಾಡಬೇಕು. ಮತ್ತು ಇಂತಹ ದಿನಾಚರಣೆಗಳಿಗೆ ಕನಿಷ್ಠ ಒಂದೆರಡಾದರೂ ಗಂಟೆಗಳ ಕಾಲವನ್ನಾದರೂ ಬಳಸುವುದನ್ನು ನಿಗಧಿಪಡಿಸಿ ಅದನ್ನು ಹೇಗೆಲ್ಲ ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕು. ಕೊನೆಯ ಪಕ್ಷ ಇಷ್ಟಾದರೂ ಮಾಡದಿದ್ದರೆ ಈ ಆಚರಣೆ ಇನ್ನೂ ಹಳ್ಳ ಹಿಡಿಯುವುದು ನಿಶ್ಚಿತ. ಈ ವರ್ಷದ ಅಕ್ಟೋಬರ್‌ ನಲ್ಲಿ ಬರುವ ಮಹಾತ್ಮಾ ಗಾಂಧಿ ಜಯಂತಿ ಕೂಡ ದಸರಾ ರಜೆಯ ಮಧ್ಯೆ ಬರುವಂತೆ ಶಾಲಾ ಕಾಲೇಜುಗಳ ಕ್ಯಾಲೆಂಡರ್‌ ಪ್ರಕಟವಾಗಿದ್ದನ್ನು ನೋಡಿದರೆ ಅಂಬೇಡ್ಕರ್‌ ಜಯಂತಿಗೆ ಬಂದ ಗತಿಯೇ ರಾಷ್ಟ್ರಪಿತನ ಜಯಂತಿಗೂ ಬರುವುದು ಗ್ಯಾರಂಟಿ. ಇದು ಈ ಮಹಾವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಸಂಬಂಧಪಟ್ಟ ಎಲ್ಲರೂ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಒಂದು ಕವಿತೆಯ ನಾಲ್ಕು ಸಾಲುಗಳಿಂದ ಈ ಟಿಪ್ಪಣಿ ಮುಗಿಸುತ್ತೇನೆ.

ಅದೇ ಫೋಟೋ ಅದೇ ಹಾರ
ನಿನ್ನ ಆಚರಣೆಯಲ್ಲಿ ಉಳಿದಿಲ್ಲ ಸಾರ
ಮಣಭಾರವಿದ್ದರೂ ತಲೆಮೇಲೆ ನಿನ್ನ ಋಣ
ಆತ್ಮಸಾಕ್ಷಿಯು ಸತ್ತ ಹೊಣೆಗೇಡಿಗಳು ನಾವು….

ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail̤com
14-04-2025