ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗುಂಡಾಭಕ್ತರ ಹೇಡಿಕೃತ್ಯವೂ
ಡಾ. ರಾಜೇಂದ್ರ ಬುರಡಿಕಟ್ಟಿ
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||
ಇವು
ಮಹಾಭಾರತದದ ಭಾಗವೆಂದು ಹೇಳಲಾಗುವ ಭಗವದ್ಗೀತೆಯ ಆರಂಭದ ಸಾಲುಗಳು. ಅಂದರೆ ಭಗವದ್ಗೀತೆ ಆರಂಭವಾಗುವುದೇ ಈ ಸಾಲುಗಳಿಂದ. “ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ದಾಪೇಕ್ಷಿಗಳಾಗಿ ನೆರೆದಿರುವ ನನ್ನ ಮತ್ತು ಪಾಂಡುವಿನ ಮಕ್ಕಳು ಏನು ಮಾಡಿದರು?” ಎಂಬ ಈ ಮಾತು ಜನ್ಮತಃ ಕುರುಡನಾಗಿ ಬೇರೆಯವರ ನೆರವಿಲ್ಲದೆ ಯುದ್ಧವಿವರಗಳನ್ನು ತಿಳಿಯಲಾರದ ಅಸಹಾಯ ಸ್ಥಿತಿಯಲ್ಲಿರುವ ದೃತರಾಷ್ಟ್ರ ಯುದ್ಧವಿವರಗಳನ್ನು ತಿಳಿಯಲು ತಾನು ಆಶ್ರಯಿಸಿರುವ ಸಂಜಯನಿಗೆ ಕೇಳುವ ಮಾತಿದು.
ಗೀತೆಯ ಈ ಶ್ಲೋಕದಲ್ಲಿ ಬರುವ ʼಧರ್ಮಕ್ಷೇತ್ರೇ ಕುರುಕ್ಷೇತ್ರೇ…ʼ ಎಂಬ ಮಾತನ್ನು ʼಕುರುಕ್ಷೇತ್ರೇ ಧರ್ಮಕ್ಷೇತ್ರೇ… ಎಂದು ತುಸು ಬದಲಿಸಿಕೊಂಡರೆ ಇಡೀ ಶ್ಲೋಕ ಇಂದಿನ ಧರ್ಮಸ್ಥಳದ ವಿದ್ಯಮಾನಕ್ಕೆ ಸರಿಯಾಗಿಯೇ ಹೊಂದಿಕೊಳ್ಳುತ್ತದೆ. ಏಕೆಂದರೆ ʼಧರ್ಮಕ್ಷೇತ್ರವಾದ ಕುರುಕ್ಷೇತ್ರʼ ಹುಟ್ಟುಕುರುಡನಾದ ಧೃತರಾಷ್ಟ್ರನ ಎದುರಿಗೆ ಇದ್ದರೆ ʼಕುರುಕ್ಷೇತ್ರವಾದ ಧರ್ಮಕ್ಷೇತ್ರʼ ಇಂದು ಇನ್ನೊಂದು ರೀತಿಯಲ್ಲಿ ಕುರುಡರಾಗಿರುವ ನಮ್ಮೆದುರಿಗೆ ಇದೆ. ಅಲ್ಲಿ ಯುದ್ಧವಿವರಗಳನ್ನು ತಿಳಿಯಲು ಧೃತರಾಷ್ಟ್ರ ಸಂಜಯನನ್ನು ಅವಲಂಬಿಸಿದ್ದರೆ ಇಲ್ಲಿ ನಾವು
ʼಮಾಧ್ಯಮʼವನ್ನು ಅವಲಂಬಿಸಿದ್ದೇವೆ.
ಇಂತಹ ಮಾಧ್ಯಮದ ಪ್ರತಿನಿಧಿಗಳ ಮೇಲೆ ಮೊನ್ನೆ ಧರ್ಮಸ್ಥಳದ ಪಾಂಗಳದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನು ಯಾರು ಮಾಡಿರಬಹುದು ಮತ್ತು ಮಾಡಿಸಿರಬಹುದು ಎಂಬುದನ್ನು ಎಳೆಯ ಮಕ್ಕಳೂ ಕೂಡ ಊಹಿಸಿಕೊಳ್ಳುವಷ್ಟು ಅದು ಸರಳವಾಗಿದೆ ಮತ್ತು ನೇರವಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯೊಬ್ಬ ಮಾಧ್ಯಮದವರು ತಮ್ಮ ಬಗ್ಗೆ ವರದಿಮಾಡದಂತೆ ನ್ಯಾಯಾಲಯದಿಂದ ತಂದಿದ್ದ ತಡೆಯಾಜ್ಞೆಯೊಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಬಿದ್ದುಹೋದ ದಿನವೇ ಈ ಘಟನೆ ನಡೆದಿದೆ. ʻಕೈಲಾಗದವರು ಮೈಪರಚಿಕೊಂಡರುʼ ಎಂಬಂತೆ ವಾದ ವಿವಾದದ ಮೂಲಕ ಎದುರಾಳಿಯನ್ನು ಎದುರಿಸಲಾರದ ಹೇಡಿಗಳು ಮಾತ್ರ ಇಂತಹ ಹಲ್ಲೆಯ ಕೆಲಸಗಳಿಗೆ ಕೈಹಾಕುತ್ತಾರೆ ಆ ಮೂಲಕ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.
ಒಳಗಿನ ನಡುಕ!
ಎಲ್ಲರಿಗೂ ಗೊತ್ತಿರುವಂತೆ ಈಗ ಧರ್ಮಸ್ಥಳದಲ್ಲಿ ಎಷ್ಟೋ ವರ್ಷಗಳಿಂದ
ನಡೆಯುತ್ತಲೇ ಇದೆ ಎಂದು ಹೇಳಲಾಗುತ್ತಿರುವ ಸರಣಿ ಹತ್ಯೆಗಳನ್ನು ಕುರಿತ ತನಿಖೆ ನಡೆಯುತ್ತಿದೆ. ಈ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಅದು ತನ್ನ ಕಾರ್ಯವನ್ನು ದಿನದಿನಕ್ಕೂ ಚುರುಕುಗೊಳಿಸುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬ ತನ್ನ ವಕೀಲರ ಮೂಲಕ ಪೋಲೀಸರಿಗೆ ಮಾಹಿತಿನೀಡುವ ಹಾಗೂ ಕಾನೂನುಬದ್ಧವಾಗಿ ಸಂಬಂಭಪಟ್ಟ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಪತ್ರ ಸಲ್ಲಿಸುವ ಮೂಲಕ ಕೆಲವು ದಿನಗಳ ಧರ್ಮಕ್ಷೇತ್ರವಾದ ಧರ್ಮಸ್ಥಳದಲ್ಲಿ ಕುರುಕ್ಷೇತ್ರ ಯುದ್ಧದ ಬೀಜ ಬಿತ್ತಲಾಯಿತು. ಹಿಂದೆ ತಾನು ನೂರಾರು ಶವಗಳನ್ನು ಯಾರದೋ ಅಣತಿ ಮೇರೆಗೆ ಅಲ್ಲಿನ ಪರಿಸರದಲ್ಲಿ ಹೂತುಹಾಕಿರುವುದಾಗಿ ಆತ ಹೇಳಿದ್ದು ಇಡೀ ನಾಡು ಮಾತ್ರವಲ್ಲ ದೇಶ ವಿದೇಶಗಳಲ್ಲಿ ಜನರಗಮನವನ್ನು ಸೆಳೆಯಿತು.
ಆದರೆ ಈ ಮಾಹಿತಿಯನ್ನು ಆತ ಪೋಲಿಸರಿಗೆ ನೀಡಿ ಒಂದು ವಾರ ಕಳೆದರೂ ಪೋಲೀಸರ ಕಡೆಯಿಂದ ಹೇಳಿಕೊಳ್ಳುವಂತಹ ಕ್ರಮಗಳು ಆರಂಭದಲ್ಲಿ ಬಿರುಸಿನಿಂದ ನಡೆಯಲೇ ಇಲ್ಲ. ಇದು ಸಹಜವಾಗಿ ಕೆಲವೇ ಜನರಲ್ಲಿದ್ದ ಸಂಶಯವನ್ನು ಬಹಳಷ್ಟು ಜನರಿಗೆ ವಿಸ್ತರಿಸಿತು. ಅದರ ಮುಂದಿನ ಭಾಗವಾಗಿ ವಿಶೇಷ ತನಿಖಾ ತಂಡ ರಚನೆಗೆ ಸಾರ್ವಜನಿಕ ಒತ್ತಡ ಹೆಚ್ಚಿತು. ಆರಂಭದಲ್ಲಿ ಈ ಬಗ್ಗೆ ಅಷ್ಟೇನೂ ಒಲವು ತೋರಿಸದಿದ್ದ ಸರ್ಕಾರ ಕೂಡ ಈ ವಿಶೇಷ ತನಿಖಾ ತಂಡವನ್ನು ರಚಿಸಲೇಬೇಕಾಯಿತು.
ಯಾವಾಗ ವಿಶೇಷ ತನಿಖಾ ತಂಡ ರಚನೆಯಾಯಿತೋ ಆವಾಗ ಸಹಜವಾಗಿ ಅಪರಾಧ ಕೃತ್ಯಗಳನ್ನು ಮಾಡಿದವರ ಎದೆಯಲ್ಲಿ ಸಣ್ಣ ನಡುಕ ಶುರುವಾಗಿರಬೇಕು. ಏಕೆಂದರೆ ನಾವು ಎಷ್ಟೇ ರಾಜಕೀಯ ಪ್ರಭಾವಿಗಳಾಗಿರಲಿ, ಹಣಬಲವುಳ್ಳವರಾಗಿರಲಿ, ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿರಲಿ, ನಮ್ಮ ಅಪರಾಧಗಳನ್ನು ಮುಚ್ಚಿಹಾಕಬಲ್ಲೆವೆಂಬ ವಿಶ್ವಾಸ ಹೊಂದಿದವರಾಗಿರಲಿ, ನಾವು ಅಪರಾಧ ಮಾಡಿದ್ದು ನಿಜವಾಗಿದ್ದರೆ ಇವು ಯಾವೂ ನಮ್ಮೆದೆಯೊಳಗಿನ ಹೆದರಿಕೆಯ ಅಂಶವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವೆಲ್ಲವೂ ಒಂದು ಹಂತದವರೆಗೆ ಮಾತ್ರ ನಮ್ಮನ್ನು ಕಾಪಾಡಬಲ್ಲವು. ಅಲ್ಲಿಂದ ಮುಂದೆ ನಾವು ಏಕಾಂಗಿಗಳಾಗಬೇಕಾಗುತ್ತದೆ. ಹೊರಗಿನಿಂದ ಉಂಟಾಗುವ ನಡುಕವನ್ನು ತಡೆಯುವುದು ಸುಲಭ; ಆದರೆ ಒಳಗಿನಿಂದ ಹುಟ್ಟುವ ನಡುಕವನ್ನು ತಡೆಯುವುದು ಅಷ್ಟು ಸುಲಭವಲ್ಲ.
ಧರ್ಮಸ್ಥಳ ಭಾಗದಲ್ಲಿ ನೂರಾರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆಗಳು ನಡೆದಿವೆ ಎಂಬುದು ಇಲ್ಲಿನ ವಿವಾದದಲ್ಲಿ ಎದ್ದು ಕಾಣುವ ಅಂಶ. ಆದರೆ ಅವಷ್ಟೇ ಅಲ್ಲದೆ ದೊಡ್ಡಮಟ್ಟದ ಭೂ ಮಾಫಿಯಾ, ಅದಕ್ಕಾಗಿ ಬಡಜನರ ಒಕ್ಕಲೆಬ್ಬಿಸುವಿಕೆ, ಒಪ್ಪದಿದ್ದರೆ ಗಂಡಸರು ಹೆಂಗಸರು, ಮಕ್ಕಳೆನ್ನದೆ ಅವರ ಹತ್ಯೆ ಇವೆಲ್ಲ ನಡೆದಿವೆ ಎಂಬುದು ಇದಕ್ಕೆ ಹೊಂದಿಕೊಂಡಿರುವ ಅಂಶ. ಇವೆಲ್ಲವನ್ನೂ ನಾವು ಬೇರೆಬೇರೆಯಾಗಿ ನೋಡಬೇಕಾಗಿಲ್ಲ. ಏಕೆಂದರೆ ಇವೆಲ್ಲವೂ ಯಾವುದೇ ಇಂತಹ ಅಪರಾಧ ಕೃತ್ಯಗಳಲ್ಲಿ ಒಂದಕ್ಕೊಂದು ತಳುಕುಹಾಕಿಕೊಂಡೇ ಕೆಲಸಮಾಡುತ್ತಿರುತ್ತವೆ.
ಪದ್ಮಲತಾ ಸೌಜನ್ಯ ಪ್ರಕರಣಗಳು
ಧರ್ಮಕ್ಷೇತ್ರದಲ್ಲಿ ನಡೆದಿವೆ ಎನ್ನಲಾದ ಈ ಅಪರಾಧಿ ಕೃತ್ಯಗಳು ಈಗಷ್ಟೇ ಬೆಳಕಿಗೆ ಬಂದಿವೆ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ಸರಿಯಾದ ಮಾತೇನೂ ಅಲ್ಲ. ಈ ವಿವಾದವನ್ನು ಮೂರು ನಾಲ್ಕು ಹಂತಗಳಲ್ಲಿ ಗುರುತಿಸಬಹುದು. ನನಗೆ ತಿಳಿದಿರುವಂತೆ ಧರ್ಮಸ್ಥಳ ಭಾಗದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬುದು ಮೊದಲ ಬಾರಿಗೆ ಸಾರ್ವಜನಿಕ ವಿಷಯವಾಗಿ ಬೆಳಕಿಗೆ ಬಂದದ್ದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ʻಪದ್ಮಲತಾ ಪ್ರಕರಣʼದಿಂದ. ಆ ಕಾಲದ ʼಜಾಣಜಾಣೆಯರ ಪತ್ರಿಕೆʼ ಎಂದೇ ಹೆಸರಾದ ʼಲಂಕೇಶ್ ಪತ್ರಿಕೆʼಯಲ್ಲಿ ಈ ಬಗ್ಗೆ ಲೇಖನವೊಂದು ಪ್ರಕಟವಾದಾಗ ಮೊದಲಬಾರಿಗೆ ಇಡೀ ನಾಡಿನ ಪ್ರಜ್ಞಾವಂತ ಜನರೆಲ್ಲ ಹೌಹಾರಿ ಮೂಗಿನ ಮೇಲೆ ಬೆರಳಿಟ್ಟರು. ಇದು ಆರಂಭದ ಹಂತವಾದರ ಈ ವಿವಾದವನ್ನು ದೊಡ್ಡಮಟ್ಟದಲ್ಲಿ
ಜನಮಾನಸಕ್ಕೆ ಮುಟ್ಟಿಸಿದ್ದು ಹದಿಮೂರು ಹದಿನಾಲ್ಕು ವರ್ಷಗಳ ಹಿಂದೆ ನಡೆದ ʼಸೌಜನ್ಯ ಪ್ರಕರಣ. ಕ್ಲೈಮ್ಯಾಕ್ಸ್ ಹಂತಕ್ಕೆ ತಂದದ್ದು ಈಗ ಹೂತುಹಾಕಿರುವ
ಹೆಣ ತೋರಿಸುತ್ತೇನೆ ಎಂದು ಬಂದಿರುವ ಅನಾಮಿಕ ತನ್ನ ತಪ್ಪೊಪ್ಪಿಗೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದಾಗ.
ಬೇರೆ ಕ್ಷೇತ್ರಗಳಲ್ಲಿ ನಡೆಯುವ ಅಪರಾಧ ಕೃತ್ಯಗಳಿಗಿಂತ ಧರ್ಮಕ್ಷೇತ್ರಗಳಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು
ಕಷ್ಟ; ಮುಚ್ಚಿಹಾಕುವುದು ಸುಲಭ. ಇದಕ್ಕೆ ಬಹುಮುಖ್ಯ ಕಾರಣ ಆ ಪ್ರದೇಶಕ್ಕೆ ಒಂದು ಧಾರ್ಮಿಕ ಪ್ರಭಾವಳಿ ಇರುತ್ತದೆ ಮತ್ತು ಈ ಪ್ರಭಾವಳಿಯ ಮುಸುಕಿನಲ್ಲಿಯೇ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ ಎಂಬುದು. ಈ ಧಾರ್ಮಿಕ ಪ್ರಭಾವಳಿ ಇಂತಹ ಅಪರಾಧಿ ಕೃತ್ಯಗಳಿಗೆ ರಕ್ಷಾಕವಚವಾಗಿ ಕೆಲಸಮಾಡುತ್ತಿರುತ್ತದೆ. ಈ ಪ್ರಭಾವಳಿಯನ್ನು ಭೇದಿಸುವುದು ಅಷ್ಟು ಸುಲಭವಲ್ಲ ಮತ್ತು ಇದು ಕೇವಲ ಧರ್ಮಸ್ಥಳಕ್ಕೆ ಮಾತ್ರ ಮೀಸಲಾದ ಅಂಶವೂ ಅಲ್ಲ.
ಈ ಧಾರ್ಮಿಕ ಪ್ರಭಾವಳಿಯನ್ನು ಇಂತಹ ಸ್ಥಳಗಳಲ್ಲಿ ಅಪರಾಧಿ ಕೃತ್ಯಗಳನ್ನು ಮಾಡುವಂಥವರು ಬಹಳ ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿಯೇ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುವ ಈ ಅಪರಾಧಿಕೃತ್ಯಗಳು ಕೂಡ ಜನರ ಮನಸ್ಸನ್ನು ಅಷ್ಟಾಗಿ ಕಾಡಲಿಲ್ಲ. ಆರಂಭದಲ್ಲಿಯೇ ʻಲಂಕೇಶ್ ಪತ್ರಿಕೆʼ ಮಾಡಿದ ವರದಿ ಒಂದಿಷ್ಟು ಜಾಣಜಾಣೆಯರನ್ನು ಕಂಗೆಡಿಸಿದ್ದು ನಿಜವಾದರೂ ಈ ಜಾಣಜಾಣೆಯರ ಸಂಖ್ಯೆ ಕ್ಷೇತ್ರದ ʻಭಕ್ತʼರ ಸಂಖ್ಯೆಗೆ ಹೋಲಿಸಿದರೆ ಏನೇನೂ ಅಲ್ಲ ಅನ್ನುವಂತೆ ಇದ್ದದ್ದರಿಂದ ಅದು ಸ್ವಲ್ಪಹೊತ್ತು ಉರಿದು ನಂದಿಹೋದ ದೀಪವಾಯಿತು. ಹಾಗೆ ನೋಡಿದರೆ ಈ ಪ್ರಕರಣ ಒಂದು
ಘೋರವಾದ ಪರಿಣಾಮವನ್ನೇ ಬೀರಿತು. ಆ ವರದಿಯನ್ನು ಬರೆದ ವ್ಯಕ್ತಿ ಜೀವವನ್ನೇ ಬಿಡಬೇಕಾಯಿತು!
ಯಾವುದೇ ಧರ್ಮಕ್ಷೇತ್ರಗಳಲ್ಲಿ ಅಪರಾಧ ಕೃತ್ಯಗಳನ್ನು ಮಾಡುವವರು ತಮ್ಮ ಅಪರಾಧ ಕೃತ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಬಹಳ ಗೋಳಾಡುವ ಅವಶ್ಯಕತೆಯೇ ಬರುವುದಿಲ್ಲ. ಏಕೆಂದರೆ ತಾವು ಹೇಳಿದ್ದನ್ನು ವೇದವಾಕ್ಯವೆಂದು ನಂಬುವ, ತಾವು ಮಾಡುವ ಪಾಪಕೃತ್ಯಗಳನ್ನು ಕಾಣಲಾರದ ಒಂದಿಷ್ಟು ʻಅಂಧಭಕ್ತರʼ ದಂಡು ಅವರ ಜೊತೆಗೆ ಇರುತ್ತದೆ. ಇವರನ್ನು ಇಟ್ಟುಕೊಂಡು ಅವರು ಕ್ಷೇತ್ರಗಳ ಶ್ರದ್ಧಾವಂತ ಭಕ್ತರ ಕಣ್ಣಿಗೆ ಮಣ್ಣು ಎರಚುತ್ತಿರುತ್ತಾರೆ. ಇದಕ್ಕಾಗಿ ಬೇರೆ ಬೇರೆಯ ಸಂದರ್ಭಗಳಲ್ಲಿ ಬೇರೆ ಬೇರೆಯದೇ ಆದ ತಂತ್ರಗಳನ್ನು ಅವರು ಬಳಸುತ್ತಿರುತ್ತಾರೆ.
ಪದ್ಮಲತಾ ಪ್ರಕರಣವನ್ನೇ ನೋಡಿ. ಪದ್ಮಲತಾ ತಂದೆ ಕಮ್ಯೂನಿಸ್ಟ್ ಚಿಂತನೆಗೆ ಸೇರಿದವರು. ಅವರು ಸರ್ವಾಧಿಕಾರದ ಕಡೆಗೆ ತಿರುಗುತ್ತಿದ್ದ ಧರ್ಮಸ್ಥಳವನ್ನು ಪ್ರಜಾಪ್ರಭುತ್ವದ ಕಡೆಗೆ ತರಲು ಪ್ರಯತ್ನಿಸಿದ್ದರ ಪ್ರತಿಫಲವಾಗಿ ತಮ್ಮ ಮಗಳನ್ನು ಕಳೆದುಕೊಳ್ಳಬೇಕಾಯಿತು. ಕಾಣೆಯಾದ ಪದ್ಮಲತಾ ಎಷ್ಟೋ ದಿನಗಳ ನಂತರ ಹೆಣವಾಗಿ ದೊರೆತಳು! ಆಗ ದೂರು ದಾಖಲಾಗಿ ತನಿಖೆ ನಡೆದು ಇನ್ನೇನು ಕೆಲವು ಪ್ರಭಾವಿಗಳ ಕೈಗೆ ಕೊಳ ಬೀಳುತ್ತದೆ ಎನ್ನುವ ಹಂತ ತಲುಪಿದಾಗ ತನಿಖಾಧಿಕಾರಿ ವರ್ಗವಾದರು! ಬೇರೊಬ್ಬ ತನಿಖಾಧಿಕಾರಿ ಬಂದು ಅದಕ್ಕೆ ಈ ಪ್ರಕರಣಕ್ಕೆ ʻಸಿ ರಿಪೋರ್ಟ್ʼ (ಆರೋಪಿ ತಪ್ಪಿಸಿಕೊಂಡಿದ್ದಾನೆ) ಬರೆದುಬಿಟ್ಟರು. ಕಾನೂನಾತ್ಮಕವಾಗಿ ಒಳಗೆ ಇಷ್ಟು ಆದರೆ ಹೊರಗೆ ಜನಾಕ್ರೋಶವೂ ಹುಟ್ಟಲಿಲ್ಲ. ಅದು ಹುಟ್ಟದಂತೆ ಆಗ ಬಳಸಿದ ತಂತ್ರವೆಂದರೆ ʻಇದು ಕಮ್ಯೂನಿಸ್ಟರು ಮಾಡಿದ ಪಿತೂರಿ. ಅವರಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲ. ಆದ್ದರಿಂದ ಧರ್ಮಸ್ಥಳಕ್ಕೆ ಕೆಟ್ಟಹೆಸರು ತರಲು ಇದನ್ನು ಮಾಡಿದ್ದಾರೆʼ ಎಂಬ ಸುದ್ಧಿಯನ್ನು ಹಬ್ಬಿಸಿದ್ದು. ಅವರ ಈ ತಂತ್ರ ಸರಿಯಾದ ಮತ್ತು ನಿರೀಕ್ಷಿತ ಪರಿಣಾಮವನ್ನು ಬೀರಿತು. ಜನ ನಂಬಿದರು; ಪ್ರಕರಣ ಪದ್ಮಲತಾಳ ಹೆಣದೊಂದಿಗೆ
ನೆಲದಲ್ಲಿ ಹೂತುಹೋಯಿತು!
ಆನಂತರದ ದಿನಗಳಲ್ಲಿ ನಡೆದ ಜೋಡಿಮಾವುತರ ಕೊಲೆ ಸೇರಿದಂತೆ ಯಾವ ಕೊಲೆಗಳೂ ಸರಿಯಾಧ ತನಿಖೆ ನಡೆದು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿಲ್ಲ. ಕರ್ನಾಟಕ ಪೋಲೀಸ್
ಇಡೀ ದೇಶದಲ್ಲಿಯ ದಕ್ಷ ಪೋಲೀಸ್ ಗಳಲ್ಲಿ ಒಂದೆಂದು ಕೇಳಿದ್ದೇವೆ. ಅದು ನಮಗೆ ಹೆಮ್ಮೆ ತರುವ ಸಂಗತಿ.
ಇಂತಹ ಪೋಲಿಸ್ ಇರುವಾಗಲೂ ಧರ್ಮಸ್ಥಳ ಭಾಗದಲ್ಲಿ ಅನೇಕ ಸಂಶಯಾಸ್ಪದ ಘಟನೆಗಳು ನಡೆದವು. ನಮ್ಮ ಪೋಲೀಸರು
ಎಷ್ಟೇ ಸಮರ್ಥವಾಗಿ ಕೆಲಸ ಮಾಡಿದರೂ ಅಲ್ಲಲ್ಲಿ ಒಂದೆರಡು ಪ್ರಕರಣಗಳಲ್ಲಿ ಎಷ್ಟೇ ಹುಡುಕಿದರೂ ಅಪರಾಧಿಗಳು
ಸಿಗದೇ ಇರಬಹುದು. ಅದನ್ನು ಪೋಲೀಸ್ ವೈಫಲ್ಯ ಎಂದು ಕರೆಯಲು ಬರುವುದಿಲ್ಲ. ಹೀಗೆ ಅಪರಾಧಿಗಳು ಸಿಗದೇ
ಇರುವ ಪ್ರಕರಣಗಳಲ್ಲಿ ʻಸಿʼ ರೀಪೋರ್ಟ್ ಹಾಕುವುದು ಸಾಮಾನ್ಯ. ಆದರೆ ಎಂತೆಂಥ ದೊಡ್ಡ ಅಪರಾಧ
ಕೃತ್ಯಗಳಲ್ಲಿ ತಮ್ಮ ಚಾಣಾಕ್ಷತನದಿಂದ ಅಪರಾಧಿಗಳನ್ನು ಹಿಡಿಯುವ ನಮ್ಮ ಪೋಲೀಸರಿಗೆ ಧರ್ಮಸ್ಥಳ ಭಾಗದಲ್ಲಿ
ಮಾತ್ರ ಏಕೆ ಹೆಚ್ಚಿನ ಪ್ರಮಾಣದಲ್ಲಿ ʼಸಿʼ ರಿಪೋರ್ಟ್ ಬರೆಯಬೇಕಾಗುತ್ತದೆ ಎಂಬುದು ಇಂತಹ ಸಂಶಯಗಳಲ್ಲಿ
ಮುಖ್ಯವಾದದ್ದು.
ಎಲ್ಲದಕ್ಕೂ ಒಂದು ಅಂತ್ಯ
ಆದರೆ ಎಲ್ಲದಕ್ಕೂ ಒಂದು ಅಂತ್ಯ ಎಂಬುದು ಇದ್ದೇ ಇರುತ್ತದೆ. ಅದು ಸಮೀಪಿಸಿದಾಗ ಯಾರೂ ಅದನ್ನು ತಡೆಯಲು ಆಗುವುದಿಲ್ಲ. ಈ ಕೃತ್ಯಗಳ ಬಗ್ಗೆ ತೀವ್ರತರವಾಗಿ ಸಾರ್ವಜನಿಕರ ಗಮನ ಸೆಳೆದದ್ದು ʻಸೌಜನ್ಯ ಪ್ರಕರಣʼ ಯಾವುದ್ಯಾವುದೋ ಭೂಕಬಳಿಕೆಯ ದುರಾಸೆಯಲ್ಲಿ ಯಾವುದೋ ಹುಡುಗಿಯನ್ನು ಅಪಹರಿಸಲು ಹೋದ ಕಿಡಿಗೇಡಿಗಳ ಕೈಗೆ ಅಕಸ್ಮಾತ್ ಆಗಿ ಈ ಹುಡುಗಿ ಸಿಕ್ಕಿಹಾಕಿಕೊಂಡು ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದಳು ಎನ್ನಲಾಗುತ್ತದೆ. ಪಿಯೂಸಿ ಓದುವ ಒಬ್ಬ ಅಮಾಯಕ ಹುಡುಗಿಯ ಈ ಧಾರುಣ ಅಂತ್ಯ ಮನುಷ್ಯತ್ವ ಇರುವ ಹತ್ತು ಹಲವರ ಹೃದಯವನ್ನು ತಲ್ಲಣಗೊಳಿಸಿತು. ಸೌಜನ್ಯಪರ ಹೋರಾಟಗಳು ಹುಟ್ಟಿಕೊಂಡವು. ಅನೇಕ ಪ್ರಗತಿಪರ ವ್ಯಕ್ತಿಗಳು, ಸಂಘಟನೆಗಳು ಈ ಸಾವಿಗೆ ನ್ಯಾಯ ದೊರಕಿಸಿಕೊಡಲು ಬಲಿಷ್ಠ ಹೋರಾಟಗಳನ್ನು ಕಟ್ಟಿ ಮುನ್ನೆಡಸಿದರು. ಯಾವುದೋ ಗುಡ್ಡದ ಬುಡದಲ್ಲಿ ದೇವರ ಮೂರ್ತಿಯ ಪಾದದಡಿಯಲ್ಲಿ ಹುಟ್ಟಿಕೊಳ್ಳುವ ನೀರಿನ ಝರಿಯೊಂದಕ್ಕೆ ಮಾರ್ಗಮಧ್ಯದಲ್ಲಿ ಅನೇಕ ಹಳ್ಳಕೊಳ್ಳಗಳು ಸೇರಿ ಅದು ಸಮುದ್ರ ಸೇರುವಾಗ ದೊಡ್ಡ ನದಿಯಾಗುವಂತೆ ಈ ಹೋರಾಟವೂ ಇಂದು ಬೃಹತ್ ಆಗಿ ಬೆಳೆದುನಿಂತಿದೆ. ಆ ಮೂಲಕ ಈ ಅಪರಾಧ ಕೃತ್ಯಗಳಿಗೆ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸಲೆಂದು ಪಣತೊಟ್ಟಿದೆ.
ಈ ಸೌಜನ್ಯ ಪ್ರಕರಣ ಕಳೆದು ಹತ್ತು ಹನ್ನೆರಡು ವರ್ಷಗಳಿಂದ ಸುದ್ಧಿ ಮಾಡುತ್ತಲೇ ಇತ್ತಾದರೂ ಅದು ಪ್ರಗತಿಪರರ ಒಂದು ಚಿಕ್ಕ ವರ್ತುಲದ ಹೊರಗೆ ಹೋಗಲು ಅದಕ್ಕೆ ಸಾಧ್ಯವಾಗಿರಲಿಲ್ಲ ಎಂಬುದು ಕೂಡ ಸತ್ಯವಾದ ಮಾತು. ಈ ಪ್ರಕರಣವನ್ನು ಈ ವರ್ತುಲದಾಚೆಗೆ ದಾಟಿಸುವ ಎರಡು ಮುಖ್ಯ ಪ್ರಕರಣಗಳು ಇತ್ತೀಚೆಗೆ ನಡೆದದ್ದನ್ನು ನಾವು ಗಮನಿಸಬೇಕು. ಒಂದು: ಈ ಸೌಜನ್ಯ ಪ್ರಕರಣದಲ್ಲಿ ʻಅಪರಾಧಿʼ ಎಂದು ʻಫಿಕ್ಸ್ʼ ಮಾಡಲಾಗಿದ್ದ ಸಂತೋಷ ರಾವ್ ಎಂಬ ವ್ಯಕ್ತಿಯನ್ನು ನ್ಯಾಯಾಲಯ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಹೊರಗೆ ಬಿಟ್ಟದ್ದು. ಇನ್ನೊಂದು ಸಮೀರ್ ಎಂಬ ಯುವಕನೊಬ್ಬ ತನ್ನ ಯ್ಯೂಟೂಬ್ ಚಾನೆಲ್ ನಲ್ಲಿ ಧರ್ಮಸ್ಥಳದ ಈ ಕೃತ್ಯಗಳನ್ನು ಕುರಿತು ಮಾಡಿದ ವಿಡಿಯೋವೊಂದು ವ್ಯಾಪಕವಾಗಿ ವೀಕ್ಷಣೆಗೊಳಗಾಗಿದ್ದು.

ನ್ಯಾಯಾಲಯ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಹೊರಗೆ ಬಿಟ್ಟದ್ದು ಬಹುಮುಖ್ಯವಾದ ಪ್ರಶ್ನೆಯೊಂದನ್ನು ಹುಟ್ಟುಹಾಕಿತು. ಹುಡುಗಿಯ ಅತ್ಯಾಚಾರ ಮತ್ತು ಕೊಲೆಯಾಗಿದ್ದು ನಿಜವೆಂಬುದು ಆಗಲೇ ಧೃಡವಾಗಿತ್ತು. ಅಪರಾಧ ಕೃತ್ಯ ನಡೆದದ್ದು ನಿಜ ಎಂದು ಆದ ಮೇಲೆ ಅದನ್ನು ಮಾಡಿದವರು ಯಾರಾದರೂ ಇರಲೇಬೇಕಲ್ಲವೇ? ಎಂಬುದೇ ಆ ಪ್ರಶ್ನೆ. ಸಂತೋಷ ರಾವ್ ಅಲ್ಲದಿದ್ದರೆ ಮತ್ಯಾರು ಆ ವ್ಯಕ್ತಿ ಅಥವಾ ವ್ಯಕ್ತಿಗಳು? ಈ ಒಂದು ದೊಡ್ಡ ಪ್ರಶ್ನೆ ಪ್ರಕರಣವನ್ನು ಸಾರ್ವಜನಿಕರಲ್ಲಿ ಹತ್ತು ಹಲವು ಸಂಶಯಗಳನ್ನು ಮೂಡಿಸಿತು. ಇಲ್ಲೊಂದು ಸೂಕ್ಷ್ಮ ವಿಷಯವನ್ನು ನಾವು ಗಮನಿಸಬೇಕು. ಇತ್ತೀಚೆಗೆ ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಯೊಂದಕ್ಕೆ ಬೆಳ್ತಂಗಡಿ ಪೋಲೀಸರಿಂದ ಬಂದ ಉತ್ತರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಮಾಹಿತಿಯ ಪ್ರಕಾರ 2023ರ ನವೆಂಬರ್ ವರೆಗಿನ ಅಸಹಜ ಸಾವುಗಳ ಎಲ್ಲ ದಾಖಲೆಗಳನ್ನು ಪೋಲೀಸರು ವಿಲೇವಾರಿ ಮಾಡಿ ಅಳಿಸಿಹಾಕಿದ್ದಾರಂತೆ. ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ನ್ಯಾಯಾಲಯ ಹೊರಗೆ ಬಿಟ್ಟದ್ದು ಕೂಡ 2023ರ ಜುಲೈನಲ್ಲಿ. ಅಂದರೆ ನ್ಯಾಯಾಲಯದ ತೀರ್ಪು ಹೊರಬಂದು ಸಾರ್ವಜನಿಕವಾಗಿ ದೊಡ್ಡ ಪ್ರಶ್ನೆಯೊಂದು ಹುಟ್ಟಿಕೊಂಡ ಮೂರು ನಾಲ್ಕು ತಿಂಗಳಲ್ಲಿಯೇ ಎಲ್ಲ ಅಸಹಜ ಸಾವುಗಳ ದಾಖಲೆಗಳು ವಿಲೇವಾರಿ ಆಗಿವೆ. ಇವೆರಡಕ್ಕೂ ಸಂಬಂಧ ಇದ್ದೇ ಇದೆ ಎಂಬುದು ನನ್ನ ವಾದವಲ್ಲ. ಆದರೆ ಅವನ್ನು ಹೋಲಿಸಿ ನೋಡಿ ತನಿಖೆಮಾಡಲು ಸಕಾರಣವಿದೆ ಎಂದು ಹೇಳಿದೆ ಅಷ್ಟೆ.
ಇನ್ನು ಎರಡನೆಯದು ಸಮೀರ್ ವಿಡಿಯೋ ಪ್ರಕರಣ. ಸಮೀರ್ ಮಾಡಿದ ವಿಡಿಯೋ ಸುಮಾರು ನಲವತ್ತು ನಿಮಿಷ ಇದೆ. ಇದನ್ನು ನಾನು ನೋಡಿದಾಗ ಸಮೀರ್ ಇದರಲ್ಲಿ ಹೊಸದೇನೂ ಹೇಳಿಲ್ಲ ಅನ್ನಿಸಿತು. ನಮಗೆ ಗೊತ್ತಿರುವ ವಿಷಯವನ್ನೇ ಆತ ಅದರಲ್ಲಿ ಹೇಳಿದ್ದರು. ಆದರೂ ಅದು ವಿಶೇಷ ಪ್ರಭಾವ ಬೀರಿತು ಏಕೆಂದರೆ ಅದರಲ್ಲಿ ಹೇಳಿದ ವಿಷಯ ಹೊಸದಲ್ಲದಿದ್ದರೂ ಅದು ತಲುಪಿದ್ದು ಹೊಸ ಜನರನ್ನು! ಅದುವರೆಗೂ ಈ ಕೃತ್ಯಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಸಾವಿರಾರು ಜನರನ್ನು ಅದು ತಲುಪಿ ಅವರನ್ನು ತುಸು ಯೋಚಿಸುವಂತೆ ಮಾಡಿತು. ಅವರೆಲ್ಲರೂ ತಕ್ಷಣ ಆ ವಿಡಿಯೋವನ್ನು ಒಪ್ಪಿಕೊಳ್ಳಲಿಲ್ಲ ನಿಜ. ಹಾಗೆ ಒಪ್ಪಿಕೊಂಡುಬಿಡುತ್ತಾರೆ ಎಂದು ನಿರೀಕ್ಷೆ ಮಾಡಲಿಕ್ಕೂ ಬರುವುದಿಲ್ಲ. ಆದರೆ ಅದು ಬಹಳಷ್ಟು ಜನರನ್ನು ವಿಚಾರ ಮಾಡಲು ಹಚ್ಚುವಲ್ಲಿ ಮಾತ್ರ ಯಶಸ್ವಿಯಾಗಿದ್ದು ಸುಳ್ಳಲ್ಲ.
ಆದರೆ ಪದ್ಮಲತಾ ಪ್ರಕರಣವನ್ನು ʻಕಮ್ಯೂನಿಸ್ಟ್ʼ ಎಂಬ ಗಾಳಿಸುದ್ಧಿಯಲ್ಲಿ ಮುಚ್ಚಿಹಾಕಲು ಪ್ರಯತ್ನಿಸಿದ ಒಂದು ವರ್ಗವೇ ಇಲ್ಲಿ ʻಮುಸ್ಲಿಮ್ʼ ದಾಳವನ್ನು ಉರುಳಿಸಿತು. ಹಾಗೆ ನೋಡಿದರೆ ಈ ಪ್ರಕರಣವನ್ನು ಹಾದಿಬೀದಿಯಲ್ಲಿ ಅನೇಕ ವೇದಿಕೆಗಳಲ್ಲಿ ಸಾಕ್ಷಾಧಾರಗಳ ಸಮೇತ ಜನರ ಮುಂದಿಟ್ಟು ಅರಿವು ಮೂಡಿಸುತ್ತಿದ್ದವರು ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ತಿಮರೋಡಿ ಅಂಥವರು. ಆದರೆ ಈ ವಂದಿಮಾಗಧರು ಅವರನ್ನು ಬಿಟ್ಟು ಸಮೀರನನ್ನು ಹಿಡಿದುಕೊಂಡರು. ಏಕೆಂದರೆ ಅದು, ಅವನನ್ನು ಮುಸ್ಲಿಮ್ ಎಂದು ಬಿಂಬಿಸಿ ಹಿಂದೂ ಧರ್ಮದ ವಿರೋಧಿ ಚಟುವಟಿಕೆ ಎಂದು ಜನರನ್ನು ಒಪ್ಪಿಸಲು ಬಹಳ ಸಹಾಯ ಮಾಡುವಂತಿತ್ತು!
ಆದರೆ ಜಗತ್ಪ್ರಸಿದ್ಧ ಹೇಳಿಕೆಹೊಂದಿದೆ. ಅದೇನೆಂದರೆ ನಾವು ಒಬ್ಬ ವ್ಯಕ್ತಿಯನ್ನು ಶಾಶ್ವತವಾಗಿ ಅಂಧಕಾರದಲ್ಲಿಟ್ಟು ಮೋಸಗೊಳಿಸಲು ಸಾಧ್ಯವಿದೆಯಂತೆ. ಅದೇ ರೀತಿ ಎಲ್ಲರನ್ನೂ ಒಂದು ಕ್ಷಣ ಅಂಧಕಾರದಲ್ಲಿಟ್ಟು ಮೋಸಗೊಳಿಸಲೂ ಸಾಧ್ಯವಿದೆಯಂತೆ. ಆದರೆ ಎಲ್ಲರನ್ನೂ ಎಲ್ಲಕಾಲದಲ್ಲಿಯೂ ಶಾಶ್ವತವಾಗಿ ಮೋಸಗೊಳಿಸಲು ಸಾಧ್ಯವಿಲ್ಲವಂತೆ. ಇಲ್ಲಿ ಆಗುತ್ತಿರುವುದೂ ಅದೇ ಏನೋ ಅನ್ನಿಸುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬನ ತಪ್ಪೊಪ್ಪಿಗೆ ಪತ್ರದ ನಂತರ ಎಸ್ ಐ ಟಿ ರಚನೆಯಾಗಿ ಅದು ಧರ್ಮಸ್ಥಳದಲ್ಲಿ ನೆಲಬಗೆಯುವ ಕೆಲಸ ಆರಂಭಿಸಿದ ಮೇಲೆ ಅಲ್ಲಿನ ಕಾರ್ಮಿಕರು
ನೆಲಕ್ಕೆ ಹಾಕುತ್ತಿರುವ ಗುದ್ದಲಿ ಕೆಲವರ ಎದೆಗೇ ಬಿದ್ದಂತೆ ಆಗುತ್ತಿದ್ದರೆ ಅದು ಅಸಹಜವೇನಲ್ಲ. ಅನಾಮಿಕ ತೋರಿಸಿದಂತೆ ತನಿಖಾ ತಂಡ ಗುರುತುಮಾಡಿದ ಬಹುತೇಕ ಸ್ಥಳಗಳಲ್ಲಿ
ಅವಶೇಷ ಸಿಕ್ಕಿಲ್ಲವೆಂದು ಕೆಲವು ವರದಿಗಳು ಬರುತ್ತಿವೆ. ಆದರೆ ವಿಶೇಷ ತನಿಖಾತಂಡ ಈ ಬಗ್ಗೆ ಅಧಿಕೃತವಾಗಿ
ಏನೂ ಹೇಳಿಲ್ಲವಾದ್ದರಿಂದ ಈ ಬಗ್ಗೆ ಈಗಲೇ ಏನೂ ಹೇಳಲಾಗದು. ಆದರೆ ಅಪರಾಧಿಗಳನ್ನು ರಕ್ಷಿಸಲು ಪಣತೊಟ್ಟ
ವರ್ಗ ಇದನ್ನೇ ದೊಡ್ಡದಾಗಿ ಬಿಂಬಿಸಿ ʻಇದು ತಳಬುಡವಿಲ್ಲದ ಪಿತೂರಿʼ ಎಂದು ತಿಪ್ಪೇಸಾರಿಸಿ ಪ್ರಕರಣವನ್ನು ಸಮಾಧಿಮಾಡಲು
ಪ್ರಯತ್ನಿಸುತ್ತಿದೆ. ಆದರೆ ನನಗೆ ತಿಳಿದ ಮಟ್ಟಿಗೆ ಅವನು ತೋರಿಸಿದ ಯಾವ ಸ್ಥಳದಲ್ಲಿ ಒಂದೇ ಒಂದು ಮೂಳೆ
ಸಿಗದಿದ್ದರೂ ಈ ತನಿಖೆ ನಿಲ್ಲಲಾರದು. ಏಕೆಂದರೆ ಶವದ ಅವಶೇಷ ಹುಡುಕುವುದು ತನಿಖೆಯ ಒಂದು ಭಾಗವಷ್ಟೇ.
ಅದೇ ಏಕೈಕ ಮಾರ್ಗವಲ್ಲ. ಅಲ್ಲಿ ಏನೂ ಸಿಗದಿದ್ದರೂ ಇನ್ಯಾವುದೋ ಮಾರ್ಗದಿಂದ ತನಿಖೆ ನಡೆಯುತ್ತದೆ.
ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾದದ್ದು. ನಾನು ಮೊದಲೇ ಹೇಳಿದ ಹಾಗೆ ಇಂತಹ ಕ್ಷೇತ್ರಗಳಲ್ಲಿ ಒಂದಿಷ್ಟು ʼಅಂಧಭಕ್ತರುʼ (ನಿಜಭಕ್ತರು ಇವರ ಜೊತೆ ಇರುವುದಿಲ್ಲ. ಅವರು ದೇವರಕಡೆ ಇರುತ್ತಾರೆ) ಇಂತಹ ಪಾಪಕೃತ್ಯಗಳ ನಡೆಸುವ ಕೈಗಳ ಜೊತೆಗೆ ಇರುತ್ತಾರೆ. ಅದು ತೀರಾ ಸಹಜವಾದದ್ದು. ಅದರ ಜೊತೆಗೆ ಅವರಿಂದ ʻಪ್ರಸಾದʼ ಪಡೆದ ಕೆಲವು ಅಧಿಕಾರಿಗಳು ಪ್ರಕರಣಗಳನ್ನು ಹಳ್ಳಹಿಡಿಸಲು ಬೇಕಾದ ಕೆಲಸವನ್ನು ಮಾಡುವುದೂ ಹಾಗೆಯೇ ಕೆಲವು ʻಕಾರ್ಯಮರೆತ ಪತ್ರಕರ್ತರುʼ ಜನರಲ್ಲಿ ಜಾಗೃತಿ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುವುದೂ ನಡೆದೇ ಇರುತ್ತದೆ.
ಈ ಕಾರ್ಯಮರೆತ ಪತ್ರಕರ್ತರು, ʻಇದು ಹಿಂದೂ ಧರ್ಮವನ್ನು ಅವಮಾನ ಮಾಡಲಿಕ್ಕೆಂದು ರೂಪಿಸಿದ ಸಂಚು, ಇದರ ಹಿಂದೆ ಯಾವುದ್ಯಾವುದೋ ಕಮ್ಯೂನಿಸ್ಟ್ ಸರ್ಕಾರಗಳಿವೆʼ ʼಇದು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲಿಕ್ಕೆಂದೇ ಮಾಡುತ್ತಿರುವ ಹುನ್ನಾರʼ ʻಇದರಲ್ಲಿ ಇಸ್ಲಾಂ , ಕ್ರೈಸ್ತ ಧರ್ಮಗಳ ಕೈವಾಡವಿದೆʼ ʼಈ ಅನಾಮಿಕನನ್ನು ಯಾರೋ ಕಳಿಸಿಕೊಟ್ಟು ಈ ಕೆಲಸಗಳನ್ನು ಮಾಡಿಸುತ್ತಿದ್ದಾರೆʼ ಇತ್ಯಾದಿ ಕೇಳಿಕೇಳಿ ಕಿವಿದಣಿದ, ಹೇಳಿಹೇಳಿ ಬಾಯಿಸೋತ ಸವಕಳಿ ಮಾತುಗಳನ್ನೇ ಹೇಳಿ ಜನರನ್ನು ಅಪರಾಧಿಕೃತ್ಯಗಳ ವಿರುದ್ಧ ಏಳದಂತೆ ತಮ್ಮ ಶಕ್ತಿಮೀರಿ ಕೆಲಸ ಮಾಡಿದರು. ಆದರೂ ಅವು ಈ ತನಿಖಾ ಕಾರ್ಯವನ್ನು ತಡೆಯುವಲ್ಲಿ ನಿರೀಕ್ಷಿತ ಫಲ ಕೊಡಲಿಲ್ಲ. ಇದೆಲ್ಲದರಿಂದ ಹತಾಶರಾದ ಅಪರಾಧಿಗಳು ತಮ್ಮ ಕೊನೆಯ ಅಸ್ತ್ರವಾಗಿ ಈ ವಿಷಯದದಲ್ಲಿ ತನಿಖೆಯ ವಿವರಗಳನ್ನು ನಾಡಿನ ಜನತೆಯ ಮುಂದೆ ಇಡುತ್ತಿರುವ ನಿಜವಾದ ʼಕಾರ್ಯನಿರತ ಪತ್ರಕರ್ತರʼ ಮೇಲೆ ಹಲ್ಲೆಮಾಡುವ ಹಂತಕ್ಕೆ ತಲುಪಿದರು ಅನಿಸುತ್ತದೆ. ಈ ಕೆಲಸವನ್ನು ʻಅಂಧಭಕ್ತರುʼ ಮಾಡಲು ಸಾಧ್ಯವಿಲ್ಲ. ಇದು ʼಗುಂಡಾಭಕ್ತರುʼ ಮಾಡಬಹುದಾದ ಕೆಲಸ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಹಂಪನಾ: ಬಿ ಎಲ್ ಶಂಕರ್
ಈ ಮಧ್ಯೆ ಕನ್ನಡದ ಮೇರು ಸಾಹಿತಿಗಳಿಬ್ಬರ ಒಡನಾಟ ಹೊಂದಿದ್ದ ಇಬ್ಬರು ಪ್ರಮುಖರು ಧರ್ಮಸ್ಥಳದ ವಿದ್ಯಮಾನದ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಅಲ್ಲಿನ ಆರೋಪ ಎದುರಿಸುತ್ತಿರುವವವರ ಪರವಾಗಿ ಮಾತನಾಡಿದ್ದಾರೆಂದು ವರದಿಯಾಗಿದೆ. ಅವರೆಂದರೆ ಒಬ್ಬರು ಹಂಪನಾ ಮತ್ತು ಇನ್ನೊಬ್ಬರು ಬಿ ಎಲ್ ಶಂಕರ್. ಮೊದಲನೆಯವರು ಕುವೆಂಪು ಅವರ ನೇರ ಶಿಷ್ಯರು ಮತ್ತು ಬಹಳಷ್ಟು ವರ್ಷಗಳ ಕಾಲ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದವರಾದರು. ಎರಡನೆಯವರು ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯರು ಮತ್ತು ಅವರ ಮರಣಾನಂತರ ಅವರ ಹೆಸರಿನ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು ಮತ್ತು ಕುವೆಂಪು ಗೀತೆಯನ್ನು ತಿರುಚಿದ ರೋಹಿತ್ ಚಕ್ರತೀರ್ಥ ಅವರ ಮೇಲೆ ಸರ್ಕಾರ ಕ್ರಮಕೈಗೊಳ್ಳದಿರುವುದನ್ನು ವಿರೋಧಿಸಿ ಹಂಪನಾ ರಾಜಿನಾಮೆ ಸಲ್ಲಿಸಿದಾಗ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಬಂದು ಈಗ ಅದೇ ಸ್ಥಾನದಲ್ಲಿ ಇರುವವರು. ಇವರು ನಡೆಸಿದ ಪತ್ರಿಕಾಗೋಷ್ಠಿಯ ವಿವರಗಳೆಲ್ಲವೂ ನನ್ನ ಗಮನಕ್ಕೆ ಬಂದಿಲ್ಲವಾದರೂ ಈ ಬಗ್ಗೆ ಅವರ ನಿಲುವನ್ನು ಹೇಳಲು ನನಗೆ ಕಷ್ಟವಾಗುವುದಿಲ್ಲ. ಈ ಮಧ್ಯೆ ಬಿ ಎಲ್ ಶಂಕರ್ ಅವರು ಯಾವುದೋ ʻಧರ್ಮದರ್ಶನʼದಲ್ಲಿ ಮಾತನಾಡಿದ ವಿಡಿಯೋ ತುಣುಕೊಂದು ಹರಿದಾಡುತ್ತಾ ನನ್ನ ಹತ್ತಿರ ಬಂದಿದೆ. ಈ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ಪ್ರಕಟವಾಗಿವೆ. ಬಗ್ಗೆ ತುಸು ನೋಡೋಣ ಬನ್ನಿ:

ಮೊದಲು ಹಂಪನಾ. ಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ಅದರ ಬಹುಮುಖ್ಯ ಭಾಗವಾದ ಸಂಶೋಧನಾ ಕ್ಷೇತ್ರದಲ್ಲಿ ಹಂಪನಾ ಅವರದ್ದು ಬಹುದೊಡ್ಡ ಹೆಸರು. ಅವರ ಸಂಶೋಧನಾ ಸಾಮರ್ಥ್ಯವನ್ನಾಗಲೀ ಆ ಬಗೆಗಿನ ಅವರ ಶ್ರದ್ಧೆ ಮತ್ತು ವಿದ್ವತ್ತುಗಳನ್ನಾಗಲೀ ನಾವು ಸಂಶಯದಿಂದ ಕಾಣಬೇಕಾದದ್ದು ಏನೂ ಇಲ್ಲ. ಅವರು ನಿಜಾರ್ಥದಲ್ಲಿಯೇ ಬಹುದೊಡ್ಡ ವಿದ್ವಾಂಸರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವಿದ್ವತ್ತಿನ ಬಗ್ಗೆ ಇಟ್ಟುಕೊಳ್ಳಬೇಕಾದ ಗೌರವವನ್ನು ಇಟ್ಟುಕೊಂಡೇ ಹೇಳಬಹುದಾದ ಕೆಲವು ಮಾತುಗಳೆಂದರೆ ಅವರು ತಮ್ಮ ಸಂಶೋಧನೆಗಳಿಂದ ದೊರೆತ ಅಪಾರ ಪ್ರಮಾಣದ ಜ್ಞಾನವನ್ನು ಈ ನಾಡಿನ ಜನರ ಬದುಕನ್ನು ಹಸನುಗೊಳಿಸಲಿಕ್ಕೆ, ಇಲ್ಲಿರುವ ಧಮನಿತರ ಬದುಕನ್ನು ಎತ್ತರಿಸಲಿಕ್ಕೆ, ಇಲ್ಲಿರುವ ತರತಮಗಳನ್ನು ಸರಿಪಡಿಸುವುದಕ್ಕೆ ಬಳಸಿಕೊಂಡದ್ದು ಮಾತ್ರ ಇಲ್ಲವೆನ್ನುವಷ್ಟು ಕಡಿಮೆಯೇ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರ್ಕಾರದ ಮಟ್ಟದಲ್ಲಿ ಅವರ ಮಾತು ನಡೆಯುತ್ತದೆ. ಏಕೆಂದರೆ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಿದ್ದಾಗ ಅವರನ್ನು ʼಆಧುನಿಕ ಬಸವಣ್ಣʼ ಎಂದು ಕೀರ್ತಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಿದ್ದಾಗ, ʻಕನ್ನಡದ ರಾಮಯ್ಯʼ ಎಂದು ಕೀರ್ತಿಸಬಲ್ಲರು! ಈ ಅರ್ಥದಲ್ಲಿ ಅವರು ʼಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು, ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಹಾಯಾಗಿರುವʼ ವಿದ್ವಾಂಸರು. ಇದು ಬಹಳಷ್ಟು ಜನ ಸಾಹಿತಿಗಳಿಗೆ ಸಾಧ್ಯವಾಗುವುದಿಲ್ಲ
ಹಂಪನಾ ಅವರ ಬಗ್ಗೆ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಕನ್ನಡದ ನೆಲದಲ್ಲಿ ಇಂದು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವಂಥದ್ದು ಈ ನಾಡಿನಲ್ಲಿರುವ ಪ್ರಗತಿಪರ ಚಳವಳಿಗಳು ಮೂಡಿಸಿದ ಅರಿವು. ಈ ಎಲ್ಲ ಚಳವಳಿಗಳಿಗೆ ಮೂಲವಾದದ್ದು ಎಪ್ಪತ್ತರ ದಶಕದಲ್ಲಿ ಮೊದಲಬಾರಿ ಚಿಗುರೊಡೆದ ಬಂಡಾಯ ಸಾಹಿತ್ಯ ಸಂಘಟನೆ. ಈ ಬಂಡಾಯ ಸಾಹಿತ್ಯ ಚಳವಳಿ ಮೊಟ್ಟೆ ಒಡೆದು ಮರಿಯಾದ್ದುಇದೇ ಹಂಪನಾ ಕಾರಣದಿಂದ
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ! ಅದೂ ಇದೇ ಧರ್ಮಸ್ಥಳದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಎಂಬುದು ಇತ್ತೀಚಿಗೆ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ. ೧೯೭೯ ರಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳದಲ್ಲಿ ದಲಿತ ಸಾಹಿತ್ಯಕ್ಕೆ ಒಂದು ಪ್ರತ್ಯೇಕ ಗೋಷ್ಠಿ ಏರ್ಪಡಿಸಬೇಕು ಎಂಬ ಬೇಡಿಕೆ ಎದ್ದಾಗ ಅದನ್ನು ʻಸಾಹಿತ್ಯದಲ್ಲಿ ದಲಿತ ಬಲಿತ ಎಂದು ಏನೂ ಇಲ್ಲʼ ಎಂದು ಆ ಪ್ರಸ್ತಾವನೆಯನ್ನು ತಳ್ಳಿಹಾಕಿದ ಈ ಹಂಪನಾ ನಿಲುವಿನಿಂದಲೇ ಆಗ ಪರ್ಯಾಯ ಸಾಹಿತ್ಯ ಸಮ್ಮೇಳನವೊಂದು ಮೊಟ್ಟಮೊದಲು ನಡೆಯುವಂತಾಗಿ ಅದು ಮುಂದಿನ ಅನೇಕ ಚಳವಳಿಗಳಿಗೆ ಅಡಿಪಾಯ ಹಾಕಿದ್ದು ಇಂದು ಇತಿಹಾಸ.
ಈ ಹಂಪನಾ ಅವರಿಗೆ ಕನ್ನಡ ಸಾಹಿತ್ಯದಲ್ಲಿ ತಾನೊಂದು ಮೈಲುಗಲ್ಲಾಗಬೇಕು ಎಂಬ ಅತಿಯಾಸೆಯೊಂದು ಯಾವಾಗ ಹುಟ್ಟಿಕೊಂಡೋ ಗೊತ್ತಿಲ್ಲ. ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ (ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ) ಬಹುದೊಡ್ಡ ವಿದ್ವಾಂಸರಿದ್ದ ವೇದಿಕೆಯೊಂದರಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ʻಪಂಪನಿಂದ ಕುವೆಂಪುವರೆಗೆʼ ಎಂದು ಪ್ರಚಲಿತವಿರುವ ಸಾಹಿತ್ಯವಲಯದ ಪ್ರಸಿದ್ಧ ಹೇಳಿಕೆಯೊಂದನ್ನು ತಿರುಚಿ ʻಪಂಪನಿಂದ ಹಂಪನಾವರೆಗೆʼ ಎಂದು ಹೇಳಿ ಅಲ್ಲಿದ್ದವರನ್ನೆಲ್ಲ ಮುಜುಗರಕ್ಕೀಡುಮಾಡಿದ್ದರಂತೆ. ಕನ್ನಡದ ಯಾವುದೇ ಪ್ರಗತಿಪರ ಚಳವಳಿಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳದ, ಈ ನಾಡಿನ ಜನರ ಸುಖದುಃಖಗಲ್ಲಿ ಸುಖಕ್ಕೆ ಮಾತ್ರ ಭಾಗಿಯಾಗುವ ಹಂಪನಾ ಅವರು ಜನರ ದುಃಖದ ಸಂದರ್ಭದಲ್ಲಿ ಎಂದೂ ಅವರೊಂದಿಗೆ ಇದ್ದವರಲ್ಲ. ಕಲಬುರ್ಗಿ ಅವರ ಹತ್ಯೆ ನಡೆದಾಗ ಇಡೀ ಸಾಹಿತ್ಯಲೋಕ ಮರುಕಪಡುತ್ತಿರುವಾಗ ಈ ಹಂಪನಾ, ʻಇದು ಸಂಶೋಧಕರಿಗೆ ನೀಡಿದ ಎಚ್ಚರಿಕೆʼ ಎಂದು ಹೇಳಿಕೆ ನೀಡಿ ತಮ್ಮ ಸಣ್ಣತನವನ್ನು ತೋರಿಸಿದ್ದರು. ಇದೇ ಕಾರಣಕ್ಕೋ ಏನೋ ಚಂಪಾ ಅವರು ಬೆಂಗಳೂರಿನಲ್ಲಿ ಪ್ರಗತಿಪರ ಸಾಹಿತ್ಯ ಚಟುವಟಿಕೆಗಳಿಗೆ ಅಡ್ಡಿಮಾಡುವ ಪ್ರಮುಖರಲ್ಲಿ ʻಹಂಪನಾ-ಕಂಪನಾʼ ಜೋಡಿಯನ್ನು ಹೆಸರಿಸುತ್ತಿದ್ದರು. ಹಾಗಾಗಿ ಇಂತಹ ವಿಷಯಗಳಲ್ಲಿ ಹಂಪನಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಯಾವ ಅಗತ್ಯವೂ ಇಲ್ಲ.
ಇನ್ನು ಬಿ.ಎಲ್. ಶಂಕರ್ ಅವರು. ಕರ್ನಾಟಕದ ಸಜ್ಜನ ರಾಜಕಾರಣಿಗಳನ್ನು ಹೆಸರಿಸುವಾಗ ವೈ ಎಸ್. ವಿ ದತ್ತಾ ಮುಂತಾದವರ ಹೆಸರಿನ ಜೊತೆ ಸೇರಿಕೊಳ್ಳುವ ಹೆಸರು ಈ ಬಿ. ಎಲ್. ಶಂಕರ್ ಅವರದ್ದು.
ಕನ್ನಡ ಸಾಹಿತ್ಯದೊಂದಿಗೆ, ಸಾಹಿತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದವರು ಎಂಬ ಕಾರಣಕ್ಕೆ ಮತ್ತು ವೇದಿಕೆಗಳಲ್ಲಿ ಕನ್ನಡ ಸಾಹಿತ್ಯವನ್ನು ಬೆನ್ನಿಗಿಟ್ಟುಕೊಂಡೇ ತುಂಬಾ ನಯವಾಗಿ ವಿನಯದಿಂದ ಮಾತನಾಡುವ ಕಾರಣಕ್ಕೆ ಅವರಿಗೆ ಈ ಹೆಸರು ಬಂದಿರಲೂಬಹುದು. ಅವರು ಮಾತನಾಡಿದ ವಿಡಿಯೋ ತುಣುಕಿನಲ್ಲಿ ಕೆಲವೇ ಮಾತುಗಳಿದ್ದು ಅದರಲ್ಲಿ ಅವರು ತಮ್ಮ ಎಂದಿನ ಶೈಲಿಯಂತೆ ಯಾವುದನ್ನೂ ಖಚಿತವಾಗಿ ಹೇಳದೇ ಮಾರ್ಮಿಕವಾಗಿಯೇ ಮಾತನಾಡಿದ್ದಾರೆ. ತೇಜಸ್ವಿ ಸಾಹಿತ್ಯ ಹೇಗೆ ʼವಿಸ್ಮಯʼವೋ ಹಾಗೆ ಈ ಶಂಕರ್ ಅವರ ಮಾತು ಕೂಡ ʼವಿಸ್ಮಯʼವೇ. ನೀವು ಅದನ್ನು ಹಾಗೂ ಅರ್ಥಮಾಡಿಕೊಳ್ಳಬಹುದು. ಹೀಗೂ ಅರ್ಥಮಾಡಿಕೊಳ್ಳಬಹುದು. ನಾನು ಅರ್ಥಮಾಡಿಕೊಂಡಂತೆ ಅವರ ಮಾತಿನ ಮುಖ್ಯಾಂಶವೆಂದರೆ ʻವೀರೇಂದ್ರ ಹೆಗಡೆಯವರು ತಪ್ಪುಮಾಡಿಲ್ಲ; ಧರ್ಮಸ್ಥಳದಲ್ಲಿ ತಪ್ಪು ನಡೆದಿಲ್ಲʼ ಎಂಬುದು.

ಇದರಲ್ಲಿ ಮೊದಲನೆಯದು ಸರಿ ಇದ್ದೀತು. ಎರಡನೆಯದು ಸರಿಯಿರಲಿಕ್ಕಿಲ್ಲ.
ವೀರೇಂದ್ರ ಹೆಗಡೆಯವರು ತಪ್ಪುಮಾಡಿದ್ದಾರೆಂದು ಅಲ್ಲಿ ಈಗಲೇ ಯಾರು ಹೇಳಿದ್ದಾರೆ? ಯಾರಾದರೂ ಹೇಳಿದ್ದರೆ ಅದಕ್ಕೆ ಇವರೆಲ್ಲ ಏಕೆ ಅಷ್ಟು ಬೆಲೆಕೊಡಬೇಕು? ಅವೆಲ್ಲ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಅಂಶಗಳಲ್ಲವೇ? ಇನ್ನೊಂದು ಧರ್ಮಸ್ಥಳಗಳಲ್ಲಿ ತಪ್ಪು ನಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ತಪ್ಪು ನಡೆದಿವೆ, ಅಪರಾಧಗಳಾಗಿವೆ ಎಂಬುದು ಸರ್ಕಾರಿ ದಾಖಲೆಗಳಿಂದಲೇ ಈಗಾಗಲೇ ಜಗಜ್ಜಾಹೀರಾಗಿದೆ. ಹೀಗಿದ್ದೂ ಈ ಶಂಕರ್ ಅವರ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಮ್ಮಲ್ಲಿ ಪೂರ್ವಾಶ್ರಮದ ವಾಸನೆ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂಬ ಮಾತಿದೆ. ಬಿ ಎಲ್ ಶಂಕರ್ ಧರ್ಮಸ್ಥಳದ ಕಾಲೇಜಿನಲ್ಲಿಯೇ ಕಾನೂನು ಪದವಿ ಓದಿದವರು ಸರಿ. ಅದಕ್ಕೆ ಅವರು ಅದರೊಡನೆ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲವೇನೋ. ಕೊನೆಯ ಪಕ್ಷ ತಾವು ಈಗ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಕಾರಣಕ್ಕಾದರೂ ಅವರು ಒಂದಿಷ್ಟು ಅಂತರ ಕಾಯ್ದುಕೊಳ್ಳಬೇಕಾಗಿತ್ತು; ಆದರೆ ಅವರು
ಆ ಕೆಲಸವನ್ನು ಮಾಡಲಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ತಿದ್ದಿಕೊಳ್ಳುವುದು ಅಥವಾ ಆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಈ ಎರಡರಲ್ಲಿ ಒಂದನ್ನು ಆಯ್ದುಕೊಂಡರೆ ಅವರ ʼಸಜ್ಜನಿಕೆʼಗೆ ನಿಜಾರ್ಥದಲ್ಲಿ ಗೌರವ ಸಲ್ಲುತ್ತದೆ.
ನಾವೆಲ್ಲರೂ ಮಾಡಬೇಕಾದ ಕೆಲಸ:
ಇದುವರೆಗೂ ಧರ್ಮಸ್ಥಳದ ಹತ್ಯೆಗಳ ಬಗ್ಗೆ ಹೋರಾಡುತ್ತಿರುವ ಯಾವ ಹೋರಾಟಗಾರರೂ ಮಂಜುನಾಥ ಸ್ವಾಮಿಗೆ ಅಗೌರವ ಆಗುವ ಯಾವ ಮಾತನ್ನೂ ಆಡಿದ್ದನ್ನು ನಾನು ಕೇಳಿಲ್ಲ. ಆದರೆ ಕೆಲವು ʼಭಕ್ತʼರು ಅಪರಾಧ ಕೃತ್ಯಗಳ ಬಗೆಗಿನ ವಿರೋಧವನ್ನು ಕ್ಷೇತ್ರದ ಬಗೆಗಿನ ವಿರೋಧವೆಂದು ಅಲ್ಲಿನ ಗಣ್ಯವ್ಯಕ್ತಿಗಳ ತೇಜೋವಧೆ ಮಾಡುವ ಹುನ್ನಾರವೆಂದು ಬಿಂಬಿಸಲು ಹೊರಟಾಗ ಅವರು ʻನಾವು ಮಂಜುನಾಥ ಸ್ವಾಮಿಯ ಪರಮ ಭಕ್ತರು; ದೇವರಿಗೆ ಕ್ಷೇತ್ರಕ್ಕೆ ಕಳಂಕ ತರುವ ಉದ್ದೇಶ ನಮಗಿಲ್ಲವೆಂದೂ ಅಲ್ಲಿನ ಕೆಲವು ವ್ಯಕ್ತಿಗಳ ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುವುದು ಮಾತ್ರ ನಮ್ಮ ಉದ್ದೇಶವೆಂದೂ ಅನೇಕ ಸಲ ಸಾರ್ವಜನಿಕ ಸ್ಪಷ್ಟನೆ ನೀಡಿದ್ದಾರೆ. ಆದರೂ ಈ ಅಪರಾಧ ಕೃತ್ಯಗಳ ಬಗೆಗಿನ ವಿರೋಧವನ್ನು ಕ್ಷೇತ್ರಕ್ಕೆ ತಗಲುಹಾಕಿ ಇದು ಇಡೀ ಧರ್ಮಸ್ಥಳಕ್ಕೇ ಕಳಂಕ ತರುವ ಕೃತ್ಯವೆಂದು ಬಿಂಬಿಸಹೊರಟಿರುವುದು ನಡದೇ ಇದೆ.
ವ್ಯಕ್ತಿಯೊಬ್ಬನ ಮೇಲಿನ ಆಪಾದನೆಯು ಕ್ಷೇತ್ರವೊಂದರ ಮೇಲಿನ ಆಪಾದನೆ ಆಗುವುದಿಲ್ಲವೆಂಬುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಅತಿಮುಖ್ಯವಾಗಿ ನಾವು ಧರ್ಮಸ್ಥಳದ ದೇವಸ್ಥಾನವನ್ನು ಅಪರಾಧ ಕೃತ್ಯಗಳೊಂದಿಗೆ ಸಮೀಕರಸದೇ ಅವೆರಡನ್ನೂ ಪ್ರತ್ಯೇಕವಾಗಿ ನೋಡಬೇಕಾಗುತ್ತದೆ.
ಮಾಧ್ಯಮದ ಮೇಲಿನವರ ಹಲ್ಲೆಯ ಪ್ರಕರಣದಲ್ಲಿ ಇಂಥವರೆಲ್ಲ ಕೊಡುತ್ತಿರುವ ಕಾರಣವೊಂದೇ. ಇವರು ಸುಳ್ಳುಸುದ್ಧಿ ಹರಡುತ್ತಿದ್ದಾರೆ ಎಂದು. ಅದು ನಿಜವೇ ಆಗಿದ್ದರೆ ಅದಕ್ಕೆ ಇವರೆಲ್ಲ ಅವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತೇ ಹೊರತು ಹಲ್ಲೆಮಾಡುವ ಪುಂಡಾಟಿಕೆಯನ್ನಲ್ಲ. ಇಂತಹ ಚಟುವಟಿಕೆಗಳು ಸಮಸ್ಯೆಯನ್ನು ಸರಳವಾಗಿಸದೇ ಇನ್ನಷ್ಟು ಕಗ್ಗಂಟಾಗಿಸುತ್ತವೆ. ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಹತ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾತಂಡದಿಂದ ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಮಾಡಬೇಕಾದ ಕೆಲಸವೆಂದರೆ ತನಿಖೆಗೆ ಯಾವುದೇ ರೀತಿ ಅಡ್ಡಿಪಡಿಸದೇ ತನಿಖೆಗೆ ಸಹಕಾರಕೊಡುವುದು. ಧರ್ಮಸ್ಥಳ ಅಂದ ತಕ್ಷಣ ಮೈಮೇಲೆ ಗಣಬಂದವರ ಹಾಗೆ ಉನ್ಮಾದಕ್ಕೆ ಒಳಗಾಗದೆ ನಮಗೆ ಗೊತ್ತಿರುವ ಸಂಗತಿಗಳನ್ನು ತನಿಖಾತಂಡಕ್ಕೆ ನೀಡುವುದು ಆಮೂಲಕ ತನಿಖೆ ಪಾರದರ್ಶಕವಾಗಿ ನಡೆದು ನಿಜವಾದ ಅಪರಾಧಿಗಳು ಯಾರೆಂಬುದು ಪತ್ತೆಯಾಗಿ ಅವರು ಕಾನೂನಿನನ್ವಯ ಶಿಕ್ಷೆಗೆ ಒಳಗಾಗುವಂತೆ ನೋಡಿಕೊಳ್ಳುವುದು. ಈ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾಗಿ ಕೊಲೆಯಾದವರ ಪ್ರಾಣಕ್ಕಿಂತ ನಮಗೆ ದೊಡ್ಡವರ ಘನತೆ ಗೌರವಗಳೇ ಮುಖ್ಯವಾಗಬಾರದು. ಬಿ ಎಲ್ ಶಂಕರ್ ಅವರ ವಿಡಿಯೋದಲ್ಲಿ ಇರುವ ಒಂದು ಮಾತಿನಿಂದಲೇ ಈ ಲೇಖನ ಮುಗಿಸುತ್ತೇನೆ. “ಸತ್ಯ ಒಮ್ಮೆ ಬಾಗಿಲು ದಾಟಿ ಹೊರಬಂದರೆ ಮುಗಿಯಿತು. ನೂರು ಸುಳ್ಳು ಎದುರಾದರೂ ಸತ್ಯ ಸತ್ಯವೇ ಸುಳ್ಳು ಸುಳ್ಳೇ”
ಡಾ. ರಾಜೇಂದ್ರ ಬುರಡಿಕಟ್ಟಿ
08-08-2025
******
ಈ ಲೇಖನವನ್ನೂ ನೀವು ಓದಬಹುದು:
ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:
https://buradikatti.blogspot.com/2025/08/blog-post_9.html