ಎಸ್.ಎಸ್.ಎಲ್.ಸಿ:
ಶಾಲೆಗೆ ಹೋಗುವವರಿಗೇಕೆ ‘ಶಾಲೆಬಿಡುವ’
ಪತ್ರ!?
- ಡಾ. ರಾಜೇಂದ್ರ ಬುರಡಿಕಟ್ಟಿ
- ಡಾ. ರಾಜೇಂದ್ರ ಬುರಡಿಕಟ್ಟಿ
ರೋಗದ ವೇಗದ ಗಾಳಿಗೆ ಹರಿಯದೆ
ವಾದವಿವಾದದ ಸುಳಿಯಲಿ
ಮುಳುಗದೆ
ಮೆಲ್ಲನೆ ತೇಲುತ
ದಡವನು ಸೇರಿತು
ಶಾಲೆಗೆ
ಹೋಗುವ ಮಗುವಿಗೆ ನೀಡುವ
ಶಾಲೆ
ಬಿಡುವ ಪತ್ರ!
ಇವು
ಮೊನ್ನೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದಾಗ ಹುಟ್ಟಿಬಂದ ಕವಿತೆಯೊಂದರ ಸಾಲುಗಳು. ಇಡೀ ಜಗತ್ತನ್ನು
ತಲ್ಲಣಗೊಳಿಸಿ ಅದರ ಕಾರ್ಯವೈಖರಿಯನ್ನೇ ಬದಲಿಸಿದ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತದಲ್ಲಿ ಅತಿಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಗಾದ ಕ್ಷೇತ್ರಗಳು
ಮೂರು. ಮೊದಲನೆಯದು ಆರೋಗ್ಯ. ಎರಡನೆಯದಾಗಿ ವಲಸೆ ಕಾರ್ಮಿಕರ ಸಮಸ್ಯೆ. ಮೂರನೆಯದು ಶಿಕ್ಷಣ. ಮೊದಲೆರಡಸು
ಕ್ಷೇತ್ರಗಳ ಚರ್ಚೆಗಳು ಒಂದು ಹಂತವನ್ನು ತಲುಪಿದ ನಂತರ ಶಿಕ್ಷಣದ ಚರ್ಚೆಯ ಮುನ್ನೆಲೆಗೆ ಬಂತು. ಈ ಚರ್ಚೆಯಲ್ಲಿ
ಮುಖ್ಯವಾಗಿ ಎರಡು ಅಂಶಗಳು ಪ್ರಾಮುಖ್ಯತೆ ಪಡೆದುಕೊಂಡವು. ಒಂದು ಮುಗಿದು ಹೋಗಿರುವ ಕಳೆದ ಸಾಲಿನ ಉಳಿದುಕೊಂಡ
ಪರೀಕ್ಷೆಯ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆ ಇನ್ನೊಂದು ಆರಂಭವಾಗುತ್ತಿರುವ ಹೊಸ ವರ್ಷದ ಶೈಕ್ಷಣಿಕ
ಚಟುವಟಿಕೆಗಳ ನಿರ್ವಹಣೆ.
ಕರ್ನಾಟಕದಲ್ಲಿ
ಈ ಶೈಕ್ಷಣಿಕ ಚರ್ಚೆಯ ಮುಂದಿನ ಸಾಲಿನಲ್ಲಿ ನಿಂತು ಆದ್ಯತೆಯ ವಿಷಯವಾಗಿ ತನ್ನನ್ನು ಚರ್ಚೆಗೆ ಒಳಪಡಿಸಿಕೊಂಡದ್ದು
ಎಸ್.ಎಸ್.ಎಲ್.ಸಿ. ಪರೀಕ್ಷೆ. ಅದು ಎಷ್ಟರ ಮಟ್ಟಿಗೆ ಚರ್ಚೆಗೆ ಒಳಗಾಯಿತು ಎಂದರೆ ಉಳಿದೆಲ್ಲ ಶೈಕ್ಷಣಿಕ
ಚರ್ಚೆಯ ವಿಷಯ ಒಂದು ತೂಕವಾದರೆ ಅದೊಂದೇ ಒಂದು ತೂಕ ಅನ್ನುವಷ್ಟರ ಮಟ್ಟಿಗೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಅದು ನಮ್ಮ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಡೆಯುವ ಮೊದಲ ಕೇಂದ್ರೀಕೃತ ಪರೀಕ್ಷೆ. ಚಿಕ್ಕಮಕ್ಕಳು
ಬರೆಯುವ ಪರೀಕ್ಷೆ. ಜೊತೆಗೆ ಭಾವಹಿಸಿಸುವವ ಅಭ್ಯರ್ಥಿಗಳ ಸಂಖ್ಯಾದೃಷ್ಟಿಯಿಂದ ರಾಜ್ಯದ ಅತಿದೊಡ್ಡ ಪರೀಕ್ಷೆ
ಕೂಡ. ಹಾಗಾಗಿಯೇ ಈ ಪರೀಕ್ಷೆ ಸಾರ್ವಜನಿಕ ಗಮನವನ್ನು ಅತಿಹೆಚ್ಚು ಪಡೆಯುವುದು ಸಹಜವೇ. ಈ ಪರೀಕ್ಷೆಯನ್ನು
ನಡೆಸಬೇಕೆ ಅಥವಾ ಬೇಡವೇ ಎಂಬ ಚರ್ಚೆ ನಮ್ಮಲ್ಲಿ ಬಿರುಸಿನಿಂದಲೇ ನಡೆಯಿತು ಎಂಬುದು ಎಲ್ಲರಿಗೂ ತಿಳಿದಿರುವ
ಸಂಗತಿ.
ವಿವಾದದ ಸುಳಿಯಲ್ಲಿಯೂ ಈಜಿ ದಡಸೇರಿದ ಪರೀಕ್ಷೆ
ರಾಜ್ಯದ
ಅನೇಕ ಶಿಕ್ಷಣ ತಜ್ಞರು, ಸಂಸ್ಕೃತಿ ಚಿಂತಕರು ಇಂತಹ ಸಾಂಕ್ರಾಮಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು
ನಡೆಸದೆಯೇ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ರೀರ್ಣಗೊಳಿಸುವ ಸಲಹೆಯನ್ನು ನೀಡಿದರು. ಕೆಲವರು ಈ ವರ್ಷವನ್ನು
ಶೂನ್ಯವರ್ಷವೆಂದು ಪರಿಗಣಿಸಲು ಸೂಚಿಸಿದರು. ಸರ್ಕಾರ ಈ ಹಂತದಲ್ಲಿ ಭಾಗೀದಾರರ ಸಲಹೆ ಕೇಳುವ ನಿರ್ಧಾರವನ್ನು
ಪ್ರಕಟಿಸಿತು. ಎಲ್ಲ ಶಾಲೆಗಳಿಂದ ಮಕ್ಕಳ ಪಾಲಕರು, ಎಸ್.ಡಿ.ಎಂ.ಸಿಯವರು ಇವರ ಅಭಿಪ್ರಾಯವನ್ನು ಕೇಳಿ
ಮುಂದುವರೆಯುವುದಾಗಿ ಭರವಸೆ ನೀಡಿತು ಮತ್ತು ಆ ಕಾರ್ಯಕ್ಕೆ ಮುಂದಾಯಿತು ಕೂಡ. ಕರ್ನಾಟಕದಲ್ಲಿ ಈ ಚರ್ಚೆ
ಹೀಗೆ ತೂಗುಯ್ಯಾಲೆಯಲ್ಲಿ ತೂಗುತ್ತಿರಬೇಕಾದರೆ ಅಕ್ಕಪಕ್ಕದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ
ಮುಖ್ಯಮಂತ್ರಿಗಳು ಪರೀಕ್ಷೆ ನಡೆಸದೆಯೇ ಅಲ್ಲಿನ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ತೀರ್ಣಗೊಳಿಸುವ
ತಮ್ಮ ಸರ್ಕಾರಗಳ ನಿರ್ಧಾರಗಳನ್ನು ಪ್ರಕಟಿಸಿದರು. ಇದರಿಂದಾಗಿ ಕರ್ನಾಟಕದಲ್ಲಿ ಪರೀಕ್ಷೆ ಬೇಡ ಎನ್ನುವವರಿಗೆ ಒಂದಿಷ್ಟು
ಬೆಂಬಲವೂ ಸಿಕ್ಕಂತಾಗಿ ಅವರು ತಮ್ಮ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದರು. ಸರ್ಕಾರ ತಮಗೆ ಸ್ಪಂದಿಸುತ್ತಿದೆ
ಎಂಬ ಭರವಸೆ ಇಲ್ಲವಾಗಿ ಈ ಪ್ರಕರಣ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿಗೂ ಹೋಯಿತು.
ತಾನು
ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಪರೀಕ್ಷೆ ನಡೆಸುವುದಾಗಿ ಭರವಸೆ ಕೊಟ್ಟದ್ದರಿಂದ ಹೈಕೋರ್ಟು
ಸರ್ಕಾರಕ್ಕೆ ಪರೀಕ್ಷೆ ನಡೆಸಲು ಅನುವುಮಾಡಿಕೊಟ್ಟಿತು. ಪ್ರಕರಣ ಸುಪ್ರೀಂ ಕೋರ್ಟಿಗೆ ಹೋದಾಗ ಸುಪ್ರೀಂ
ಕೋರ್ಟು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದಾಗ ಕಾರಣ ಪರೀಕ್ಷೆ ನಡೆಯುವುದು ಬಹುತೇಕ
ಖಾತ್ರಿಯಾಯಿತು. ಈ ಹಂತದಲ್ಲಿ ಕರ್ನಾಟಕದ ಈ ಪರೀಕ್ಷೆಯ
ಮೇಲೆ ಇಡೀ ದೇಶದ ಕಣ್ಣು ನೆಟ್ಟಿತು. ಏಕೆಂದರೆ ದಿನದಿನಕ್ಕೂ ಹೆಚ್ಚುತ್ತಿರುವ ಸಾಂಕ್ರಾಮಿಕ ಸೋಂಕಿನ
ಅಪಾಯಕಾರಿ ಸಂದರ್ಭದಲ್ಲಿಯೇ ಸರ್ಕಾರ ಚಿಕ್ಕಮಕ್ಕಳ ಈ ಪರೀಕ್ಷೆಯನ್ನು ನಡೆಸಲು ಮುನ್ನುಗ್ಗುತ್ತಿತ್ತು.
ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಬೇಡಿ ಎಂದು ಹೇಳುವವರು ಕೋರ್ಟಿನ ತೀರ್ಪಿನಿಂದಾಗಿ ಸುಮ್ಮನಾಗಬೇಕಾಯಿತು.
ಸರ್ಕಾರದ ಜವಾಬ್ದಾರಿ ಹೆಚ್ಚಾಯಿತು. ಕೊಟ್ಟ ಭರವಸೆಯಂತೆ ಪರೀಕ್ಷೆಯನ್ನು ಮಕ್ಕಳಿಗೆ ಯಾವ ತೊಂದರೆಯೂ
ಆಗದಂತೆ ನಡೆಸಲು ಅದು ತೀವ್ರಗಮನ ಕೊಡಬೇಕಾಯಿತು.

ಪರೀಕ್ಷೆ
ಹತ್ತಿರವಾಗುತ್ತಿದ್ದರೂ ಸುಪ್ರೀಂ ಕೋರ್ಟಿನಿಂದ ಹಸಿರು ನಿಶಾನೆ ಸಿಕ್ಕರೂ ವಿವಾದ ಸಂಪೂರ್ಣವಾಗಿ ಮುಗಿದಿರಲಿಲ್ಲ.
ಈ ಮಧ್ಯೆ ‘ಸರ್ಕಾರ ಖಾಸಗೀ ಶಾಲೆಗಳ ಒತ್ತಡಗಳಿಗೆ ಮಣಿದು ಈ ಪರೀಕ್ಷೆಯನ್ನು ಮಕ್ಕಳ ಜೀವವನ್ನು ಅಪಾಯಕ್ಕೆ
ಒಡ್ಡಿ ಪ್ರತಿಷ್ಠೆಗಾಗಿ ನಡೆಸುತ್ತಿದೆ’ ಎಂದು ಕೆಲವರು ಭಿನ್ನಾಭಿಪ್ರಾಯವನ್ನು ಎತ್ತಿದ್ದರು. ಆಗ “ಸರ್ಕಾರ
ಯಾರ ಒತ್ತಡಕ್ಕೂ ಮಣಿದಿಲ್ಲ ಪರೀಕ್ಷೆಯನ್ನು ಯಾರ ಪ್ರತಿಷ್ಠೆಗೂ ನಡೆಸುತ್ತಿಲ್ಲ. ಮಕ್ಕಳ ಭವಿಷ್ಯಕ್ಕಾಗಿ
ನಡೆಸುತ್ತೇವೆ. ಮತ್ತು ಇದನ್ನು ಮಕ್ಕಳ ಸುರಕ್ಷತೆಗೆ ಆಧ್ಯತೆ ನೀಡಿಯೇ ನಡೆಸುತ್ತೇವೆ” ಎಂದು ಶಿಕ್ಷಣ
ಸಚಿವರು ಸ್ಪಷ್ಟವಾಗಿ ಹೇಳಿ ಪರೀಕ್ಷೆ ನಡೆಸುವ ತಮ್ಮ ಬದ್ಧತೆಯನ್ನು ಸಮರ್ಥಿಸಿಕೊಂಡರು. ಅದು ಸರಿಯೂ
ಇರಬಹುದು. ಆದರೆ ಪರೀಕ್ಷೆಯನ್ನು ವಿರೋಧಿಸುವವರನ್ನು ವಿರೋಧಿಸುವಲ್ಲಿ ಅವರು ಇನ್ನಷ್ಟು ಪ್ರಬುದ್ಧತೆಯನ್ನು
ತೋರಬಿಕಿತ್ತೇನೋ. ಏಕೆಂದರೆ ಅವರ ಕಾಳಜಿಯೂ ಕೂಡ ತಮ್ಮಂತೆಯೇ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯವೇ ಆಗಿತ್ತೇ
ಹೊರತು ಬೇರೇನೂ ಆಗಿರಲಿಲ್ಲ. ಎರಡೂ ಕಡೆಯವರ ಗುರಿ ಕಾಳಜಿಗಳು ಒಂದೇ ಇದ್ದರೂ ಮಾರ್ಗಮಾತ್ರ ಭಿನ್ನವಾದಂತಹವುಗಳು
ಎಂಬುದನ್ನು ಗ್ರಹಿಸುವಲ್ಲಿ ವ್ಯವಸ್ಥೆಗೆ ಸಾಧ್ಯವಾದಾಗ ಹಾಗೆ ಸೈದ್ಧಾಂತಿಕವಾಗಿ ವಿರೋಧಿಸುವವರು ಕಿಡಿಗೇಡಿಗಳಂತೆ,
ಸಮಾಜಘಾತುಕರಂತೆ ಕಂಡುಬರುವುದಿಲ್ಲ; ಅವರ ವಿಚಾರವನ್ನು ಒಪ್ಪಿಕೊಳ್ಳಲು ಆಗದಿದ್ದರೂ ಕೂಡ!
ಇಲ್ಲಿ
ಖಾಸಗೀ ಶಾಲೆಗಳ ಒತ್ತಡಕ್ಕೆ ಸರ್ಕಾರ ಮಣಿಯದಿರಬಹುದು. ಆದರೆ ಅಂಥದೊಂದು ಒತ್ತಡ ಯಾವುದೇ ಸರ್ಕಾರಕ್ಕೆ
ಇದ್ದೇ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಬಹುತೇಕ ಖಾಸಗೀ ಶಾಲೆಗಳವರು ‘ಪರೀಕ್ಷೆ ನಡೆಸಬೇಕು’
ಎನ್ನುವ ಕಡೆಗೆ ಇರುವವರು. ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾದರೆ ಅವರಿಗೆ ಎಷ್ಟೆಷ್ಟು ಅಂಕಗಳನ್ನು
ಪಡೆದವರಿಗೆ ಎಷ್ಟೆಷ್ಟು ಡೊನೇಶನ್ನು ಎಂಬುದನ್ನು ಫಿಕ್ಸ್ ಮಾಡಲು ಅನುಕೂಲ. ಶೇಕಡಾ ತೊಂಬತ್ತರ ಮೇಲೆ
ಅಂಕಪಡೆದ ಶೇ.10 ರಷ್ಟು ಮಕ್ಕಳಿಗೆ ಫೀ, ಡೊನೇಶನ್ನು ಎಲ್ಲವನ್ನೂ ಫ್ರೀ’ ಎಂದು ಘೋಷಣೆ ಮಾಡಿ ಆ ವಿದ್ಯಾರ್ಥಿಗಳ
ಫೋಟೋಗಳನ್ನು ತಮ್ಮ ಶಾಲೆ ಕಾಲೇಜು ಪ್ರವೇಶದ್ವಾರದಲ್ಲಿ ಫ್ಲೆಕ್ಸ್ ಮಾಡಿ ಹಾಕಿ ಅದನ್ನು ನೋಡಿ ಒಳಬರುವ
ಶೇ. 90ಕ್ಕಿಂತ ಕಡಿಮೆ ಅಂಕದ ಶೇ. 90 ರಷ್ಟು ವಿದ್ಯಾರ್ಥಿಗಳಿಗೆ ಒಂದೊಂದೇ ಸಾವಿರ ಡೊನೇಶನ್ ಹೆಚ್ಚಿಗೆ
ಮಾಡಿದರೂ ಅವರಿಗೆ ಭರ್ಜರಿ ಲಾಭವೇ ಆಗುತ್ತದೆ. ಎಲ್ಲರನ್ನೂ ಪಾಸುಮಾಡಿದರೆ ಅವರಿಗೆ ಅವರ ವ್ಯವಹಾರಕ್ಕೆ
ಗೊಂದಲವುಂಟಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಪರೀಕ್ಷೆ ನಡೆಸಲು ಅವರ ಒತ್ತಡ ಇರುವುದು ಸಹಜವೆ.
ಸರ್ಕಾರ
ಎಲ್ಲ ಶಾಲೆಗಳಿಂದ ಪಾಲಕರಿಂದ ಅಭಿಪ್ರಾಯ ಕೇಳಿ ಬಹುಪಾಲು ಜನ ಹೇಳುವಂತೆ ಮಾಡುತ್ತೇವೆ ಎಂದು ಹೇಳಿದ್ದೇನೋ
ನಿಜ. ಶಾಲೆಗಳಿಂದ ಅಭಿಪ್ರಾಯ ತರಿಸಿಕೊಂಡದ್ದೂ ನಿಜ. ಆದರೆ ಯಾವ ಶಾಲೆಗಳ ಪಾಲಕರು ಏನು ಹೇಳಿದರು ಎಂದು
ಉಳಿದವರಿಗೆ ಗೊತ್ತಾಗಲಿಲ್ಲ. ರಾಜ್ಯದ ಬಹುಪಾಲು ಪಾಲಕರು ಏನು ಹೇಳಿದರು, ಒಟ್ಟಾರೆ ಈ ಪರೀಕ್ಷೆಯ ಬಗ್ಗೆ
ಭಾಗಿದಾರರಿಂದ ಬಂದ ಬಹುಮತದ ಅಭಿಪ್ರಾಯ ಏನಾಗಿತ್ತು ಎಂಬುದು ಸಾರ್ವಜನಿಕವಾಗಿ ಪ್ರಕಟವಾದಂತಿಲ್ಲ. ಸುಪ್ರೀಂ
ಕೋರ್ಟಿನ ರಹದಾರಿ ಸಿಕ್ಕದ್ದರಿಂದ ಈ ಜನಾಭಿಪ್ರಾಯದ ಕಡೆ ಯಾರ ಗಮನವೂ ಹೋಗಲಿಲ್ಲ. ಒಟ್ಟಿನಲ್ಲಿ ಪರೀಕ್ಷೆ
ಮುಗಿದು ಯಾವುದೋ ಯುದ್ಧವೊಂದನ್ನು ಗೆದ್ದ, ಮಹಾಕಂಟಕವೊಂದನ್ನು ದಾಟಿಬಂಧ ಭಾವ ಇಂದು ಶೈಕ್ಷಣಿಕ ವಲಯದಲ್ಲಿ
ಮತ್ತು ಅದರ ಭಾಗಿದಾರರೆಲ್ಲರಲ್ಲೂ ಆವರಿಸಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಶಾಲೆಗೆ ಹೋಗುವವರಿಗೇಕೆ ಶಾಲೆ ಬಿಡುವ ಪ್ರಮಾಣ ಪತ್ರ?
ಇಷ್ಟೆಲ್ಲ
ದೊಡ್ಡಮಟ್ಟದ ಆಡಳಿತ ವ್ಯವಸ್ಥೆಯನ್ನು ಜನಮಾನಸದ ಮನಸ್ಸನ್ನು ತನ್ನೆಡೆಗೆ ಕೇಂದ್ರೀಕಿಸಿಕೊಳ್ಳುವ ಈ
ಎಸ್.ಎಸ್.ಎಲ್.ಸಿ. ಪರೀಕ್ಷೆ ನಿಜಕ್ಕೂ ವಾಸ್ತವದಲ್ಲಿ ಈಗ ಅಷ್ಟು ಮಹತ್ವದ್ದೆ, ಅದಕ್ಕೆ ನಾವು ಅಗತ್ಯಕ್ಕಿಂತ
ಹೆಚ್ಚು ಆದ್ಯತೆ ನೀಡಿದ್ದೇವೆಯೆ ಎಂಬುದನ್ನು ನಾವಿಂದು ಪರಿಶೀಲಿಸಿಕೊಳ್ಳಬೇಕಾಗಿದೆ. ಎಸ್.ಎಸ್.ಎಲ್.ಸಿ.
ಎಂಬ ಪ್ರಥಮಾಕ್ಷರಗಳಿಂದ ಕರೆಯಲ್ಪಡುವ ಈ ಪರೀಕ್ಷೆಯ ವಿಸ್ತೃತ ರೂಪ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್’
ಎಂಬುದು. ಇದರಲ್ಲಿನ `ಸ್ಕೂಲ್ ಲಿಂವಿಂಗ್ ಸರ್ಟಿಫಿಕೇಟ್’ ಪದಪುಂಜವು ಕೆಲವರಿಗಾದರೂ ಏಕೆ ಸೇರಿಕೊಂಡಿದೆ
ಎಂಬ ಕುತೂಹಲವನ್ನು ಹುಟ್ಟಿಸೀತು. ನಾವು ಆ ಹಂತದ ಶಿಕ್ಷಣವನ್ನು ಮುಗಿಸಿದ ಮಕ್ಕಳಿಗೆ ಶಾಲೆಯನ್ನು ಮುಂದುವರೆಸುವ
ಅರ್ಹತಾ ಪ್ರಮಾಣಪತ್ರವನ್ನು ಕೊಡುವ ಬದಲು ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುತ್ತಿದ್ದೇವಲ್ಲ ಅನ್ನಿಸದಿರದು.
ನಮ್ಮಲ್ಲಿ ಅನೇಕ ಹೆಸರುಗಳನ್ನು ನಾವು ಪಳೆಯುಳಿಕೆಯ ರೀತಿ ಇಟ್ಟುಕೊಂಡೇ ಮುಂದುವರೆಯುತ್ತೇವೆ. ಅವುಗಳಲ್ಲಿ
ಇದು ಕೂಡ ಒಂದು.
ಹಿಂದೆ
ಬ್ರಿಟೀಷರು ಭಾರತದಲ್ಲಿ ಇಂಗ್ಲಿಷ್ ಮತ್ತು ವರ್ನಾಕುಲರ್ ಶಿಕ್ಷಣವನ್ನು ಆರಂಭಿಸಿದ ದಿನಗಳಲ್ಲಿ ತಮ್ಮ
ಆಡಳಿತಕ್ಕೆ ಗುಮಾಸ್ತರನ್ನು ತಯಾರು ಮಾಡುವುದೇ ಅವರ ಉದ್ದೇಶವಾಗಿತ್ತು. ಆ ಕಾರಣದಿಂದ ಅವರು ಭಾರತದಲ್ಲಿ
ಆರಂಭಿಸಿದ ಶಾಲಾ ವ್ಯವಸ್ಥೆಯಲ್ಲಿ ಬಹಳ ದಿನಗಳವರೆಗೆ ಪ್ರೌಢಶಿಕ್ಷಣವೇ ಲಭ್ಯವಿರುವ ಉನ್ನತ ಶಿಕ್ಷಣವಾಗಿತ್ತು.
ಇಡೀ ಜಿಲ್ಲೆಗೆ ಒಂದೇ ಒಂದು ಪ್ರೌಢಶಾಲೆ ಜಿಲ್ಲಾಕೇಂದ್ರದಲ್ಲಿರುತ್ತಿತ್ತು. ಒಂದು ಕಾಲಘಟ್ಟದಲ್ಲಿ
ಇಡೀ ಒಂದು ಜಿಲ್ಲೆಯಲ್ಲಿ ಇಬ್ಬರೇ ಇಬ್ಬರು `ಹಸಿರುಮಸಿ’ ಅಧಿಕಾರಿಗಳು ಇರುತ್ತಿದ್ದರು. ಅವರೆಂದರೆ
ಒಬ್ಬ ಆ ಜಿಲ್ಲೆಯ ಕಲೆಕ್ಟರ್ ಅಂದರೆ ಜಿಲ್ಲಾಧಿಕಾರಿ. ಇನ್ನೊಬ್ಬ ಆ ಜಿಲ್ಲೆಯ ಹೈಸ್ಕೂಲ್ ಹೆಡ್ ಮಾಸ್ಟರ್!
ಈ ಹೈಸ್ಕೂಲ್ ಹೆಡ್ ಮಾಸ್ಟರ್ ಹುದ್ದೆ ಎಂತಹ ಘನತೆ ಹೊಂದಿತ್ತು ಎಂದರೆ ಜಿಲ್ಲಾಧಿಕಾರಿಯು ಜಿಲ್ಲೆಯಿಂದ
ಹೊರಗೆ ಹೋಗಬೇಕಾದಾಗಲೆಲ್ಲ ಜಿಲ್ಲಾಧಿಕಾರಿಯ ಚಾರ್ಜಿನಲ್ಲಿ ಇರುತ್ತಿದ್ದದ್ದು ಈ ಹೈಸ್ಕೂಲ್ ಹೆಡ್ ಮಾಸ್ಟರ್!!
ಕನ್ನಡ ನವೋದಯ ಕಾಲಘಟ್ಟದ ಪ್ರಮುಖ ಲೇಖಕರಾದ `ನಾಗರಹಾವಿನ’ ಪಂಜೆ ಮಂಗೇಶರಾಯರು ಕೊಡಿಗಿನ ಜಿಲ್ಲಾಧಿಕಾರಿಯಾಗಿ
ಆಗಾಗ ಕೆಲಸ ಮಾಡುತ್ತಿದ್ದದು ಈ ರೀತಿ ಅವರು ಮಡಿಕೇರಿ ಗೌರ್ಮೆಂಟ್ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರಿಂದಲೇ!
ಈ
ಎಲ್ಲ ಕಾರಣಗಳಿಂದ ಆಗಿನ ಪ್ರೌಢಶಿಕ್ಷಣಕ್ಕೆ ಈಗಿನ ವಿಶ್ವಿವಿದ್ಯಾಲಯ ಹಂತದ ಶಿಕ್ಷಣದ ಘನತೆಯಿತ್ತು.
ಪ್ರೌಢಶಿಕ್ಷಣದ ನಂತರದ ಶಿಕ್ಷಣವನ್ನು ಪಡೆಯಬೇಕಾದರೆ ಬೇರೆ ಬೇರೆ ದೇಶಗಳಿಗೆ ಹೋಗಬೇಕಾಗಿತ್ತು ಬೇರೆ
ದೇಶಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೋಗುವವರು ಬೆರಳೆಣಿಕೆಯಲ್ಲಿರುತ್ತಿದ್ದರು. ಉಳಿದಂತೆ ಬಹುಪಾಲು
ಎಲ್ಲರೂ ಪ್ರೌಢಹಂತ ಮುಗಿಸಿ ಶಿಕ್ಷಣವನ್ನು ಬಿಡುತ್ತಿದ್ದರು. ಬಿಡುವಾಗ ಈ `ಲಿವಿಂಗ್ ಸರ್ಟಿಫಿಕೇಟ್’
ಅಥವಾ ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುವ ಕ್ರಮ ಸರಿಯಾಗಿಯೇ ಇತ್ತು. ಆ ಹಂತದ ಶಿಕ್ಷಣ ಮುಗಿಸಿದವರಿಗೆ
ಈಗಿನ ಸಿ ದರ್ಜೆಯ ಹಂತದ ಹುದ್ದೆಗಳು ದೊರೆಯುತ್ತಿದ್ದವು. ಹಾಗಾಗಿ ಈ ಎಸ್.ಎಸ್.ಎಲ್.ಸಿ. ಲಿವಿಂಗ್
ಸರ್ಟಿಫಿಕೇಟಿಗೆ ಈಗಿನ ಪದವಿ ಪ್ರಮಾಣಪತ್ರಕ್ಕಿಂತ ಹೆಚ್ಚಿನ ಬೆಲೆಯಿತ್ತು!
ಈಗ
ಪರಿಸ್ಥಿತಿ ಹಾಗಿದೆಯೇ? ಇಲ್ಲ. ಅದಕ್ಕೆ ವಿರುದ್ಧವಾದ ಸ್ಥಿತಿಯಲ್ಲಿದೆ. ಹಳ್ಳಿಹಳ್ಳಿಗೂ ಶಾಲೆ ಕಾಲೇಜುಗಳು
ವಿಸ್ತರಣೆಯಾಗಿವೆ. ಈಗ ಎಸ್.ಎಸ್.ಎಲ್.ಸಿ. ಎಂದು ಕರೆಯಲಾಗುವ ಹತ್ತನೆಯ ತರಗತಿ ಕೂಡ ಉಳಿದ ಎಲ್ಲ ತರಗತಿಗಳಂತೆ
ಒಂದು ಸಾಮಾನ್ಯ ತರಗತಿಯಾಗಿದೆ. ಹೀಗಾಗಿ ಈ ಪರೀಕ್ಷೆಯೂ ಈಗ ವಾಸ್ತವದಲ್ಲಿ ಅಷ್ಟೇನೂ ಮಹತ್ವದ ಪರೀಕ್ಷೆಯಾಗಿ
ಉಳಿದಿಲ್ಲ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ, ಉದ್ಯೋಗ ಮತ್ತಿತರ ಅವಕಾಶಗಳ ಹಿನ್ನಲೆಯಲ್ಲಿ ಹೇಳುವುದಾದರೆ
ಅದನ್ನು ಕನಿಷ್ಠ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣವಾಗುವ ವಿದ್ಯಾರ್ಥಿಗೂ ಉತ್ರೀರ್ಣವಾಗದ ವಿದ್ಯಾರ್ಥಿಗೂ
ಅಷ್ಟೇನೂ ಅಂತರ ಇರುವುದಿಲ್ಲ. ಚಿಕ್ಕಪುಟ್ಟ ನೌಕರಿ ಪಡೆಯಲಿಕ್ಕೂ ಈಗ ಪಿ.ಯು.ಸಿ. ಕನಿಷ್ಠ ಅರ್ಹತೆಯಾಗಿದೆ.
ಈಗ ಅದು ಬಹುಪಾಲು `ಪ್ರತಿಷ್ಠಿತ’ ಕಾಲೇಜುಗಳಿಗೆ `ಪ್ರತಿಭಾವಂತರನ್ನ’ ಆಯ್ಕೆಮಾಡಿಕೊಡುವ ಮಾನದಂಡವಾಗಿ
ಕೆಲಸವನ್ನು ಮಾಡುತ್ತಿರುವಂತೆ ಕಾಣುತ್ತಿದೆ.
ಈ
ಹಂತದಲ್ಲಿಯಾದರೂ ಎಸ್.ಎಸ್.ಎಲ್.ಸಿ.ಗೆ ಇರುವ ಹುಸಿಘನತೆಯನ್ನು ನಾವು ಬಿಟ್ಟುಹಾಕಬೇಕಿದೆ. ಹೊಸ ಶಿಕ್ಷಣ
ನೀತಿಯನ್ವಯ ಶಾಲಾಹಂತದ ಪುನರ್ ರಚನಾ ಪ್ರಕ್ರಿಯೆ ತ್ವರಿತಗೊಂಡರೆ ಇದು ಸರಿಯಾಗಬಹುದು. ಉದ್ದೇಶಿತ ಒಂಬತ್ತರಿಂದ
ಹನ್ನೆರಡನೆಯ ತರಗತಿಯವರೆಗೆ ಎರಡು ಹಂತದ ಮಾಧ್ಯಮಿಕ ಶಿಕ್ಷಣಕ್ರಮ ಜಾರಿಯಾದರೆ ಈಗ ಕೇಂದ್ರೀಯ ಕ್ರಮದಂತೆ
ಹತ್ತನೆಯ ತರಗತಿ ಉಳಿದ ತರಗತಿಗಳಂತೆ ಒಂದು ಸಾಮಾನ್ಯ ತರಗತಿಯಾಗುತ್ತದೆ. ಅದಕ್ಕಿರುವ ಮಹತ್ವ ಹನ್ನೆರಡನೆ
ತರಗತಿಗೆ ಸಹಜವಾಗಿ ವರ್ಗಾವಣೆಯಾಗುತ್ತದೆ. ಆದರೆ ಅದನ್ನು ಮಾಡಿಕೊಳ್ಳಲು ಸಧ್ಯಕ್ಕೆ ಆಗದಿದ್ದರೆ ಕೊನೆಯ
ಪಕ್ಷ ಎಸ್.ಎಸ್.ಎಲ್.ಸಿ. ಎಂದು ಅದಕ್ಕಿರುವ ಹೆಸರನ್ನಾದರೂ ಬದಲಿಸಿಕೊಳ್ಳಬೇಕು ಎಂದು ನಮಗೆ ಅನ್ನಿಸಬೇಕು.
ಏಕೆಂದರೆ ಅದನ್ನು ಮುಗಿಸಿದ ಬಹುಪಾಲು ಮಕ್ಕಳು ಈಗ ಶಾಲೆ ಬಿಡುತ್ತಿಲ್ಲ. ಮುಂದಿನ ವ್ಯಾಸಂಗಕ್ಕೆ ಹೋಗುತ್ತಿದ್ದಾರೆ.
ಹೀಗೆ ಶಾಲೆಗೆ ಹೋಗಬೇಕಾದ ಮತ್ತು ಹೋಗಲು ತಯಾರಾಗಿರುವ ಮಕ್ಕಳಿಗೆ ನಾವಿನ್ನೂ ಆ ಹಳೆಯ ಕಾಲದ `ಶಾಲೆಯನ್ನು
ಬಿಡುವ’ ಹೆಸರಿನ ಪ್ರಮಾಣಪತ್ರವನ್ನೇ ಕೊಡುತ್ತಿದ್ದೇವೆ! ಇದು ಎಷ್ಟರ ಮಟ್ಟಿಗೆ ಸರಿ? ಅದರ ಬದಲು ಪ್ರೌಢಹಂತವನ್ನು
`ಪೂರೈಸಿರುವ’ `ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿರುವ’ ಇತ್ಯಾದಿ ಅರ್ಥಗಳು ಬರುವಂತೆ ಅದನ್ನು ಬದಲಿಸುವುದು
ಉಚಿತವಲ್ಲವೆ?
`ಹೆಸರಿನಲ್ಲಿ
ಏನಿದೆ’ ಎಂದು ಕೆಲವರು ಕೇಳಬಹುದು. ಆದರೆ `ಹೆಸರಿನಲ್ಲಿ ಏನಿಲ್ಲ ಹೇಳಿ?’ ಕನ್ನಡದ ಹಿರಿಯ ಕವಿ ಕೆ.ಎಸ್.
ನರಸಿಂಹಸ್ವಾಮಿ ಅವರ ಪದ್ಯದ ನಾಲ್ಕು ಸಾಲು ನಮ್ಮ ನಿಲುವು ದೋರಣೆಗಳನ್ನು ಹೇಳುವುದು ಹೀಗೆ:
ಅಪ್ಪ
ನೆಟ್ಟ ಆಲದ ಗಿಡ
ಮಗನ
ಕಾಲಕ್ಕೆ ಬರಿ ಬುಡ
ಮೊಮ್ಮಗನಿಗಿಲ್ಲ
ಅದರ ಕಲ್ಪನೆ ಕೂಡ
ಹೀಗೇ
ಬೆಳೆದಿದ್ದೇವೆ ನಾವು
*****
ಡಾ. ರಾಜೇಂದ್ರ ಬುರಡಿಕಟ್ಟಿ
Wednesday, July 08, 2020
No comments:
Post a Comment