Saturday, August 14, 2021

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

 

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

(ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಸಮಾರಂಭ ಹೇಗೆ ನಡೆಯಿತು? ಆಗಸ್ಟ್ ಹದಿನೈದೇ ಏಕೆ ನಿಗಧಿಯಾಯಿತು? ಹದಿನೈದರ ಬದಲು ಹದಿನಾಲ್ಕರ ರಾತ್ರಿ ಸಮಾರಂಭ ಏಕೆ ಆರಂಭವಾಯಿತು?  ಸಮಾರಂಭದಲ್ಲಿ ಆದ ಎಡವಟ್ಟುಗಳೇನು? ಇಂತಹ ಕೆಲವು ಕುತೂಹಲಕಾರಿ ಅಂಶಗಳಿಗಾಗಿ ಈ ಲೇಖನವನ್ನು ಗಮನಿಸಿ – ಡಾ. ರಾಜೇಂದ್ರ ಬುರಡಿಕಟ್ಟಿ)

*****


1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ದೇಶಭಕ್ತ ಭಾರತೀಯರು ಇದಕ್ಕೂ ಹದಿನೇಳು ವರ್ಷ ಮುಂಚೆಯೇ ಪ್ರಥಮ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದರು……. 1930 ರ ಜನವರಿಯ ಕೊನೆಯ ಭಾನುವಾರ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕೆಂದು ಗೊತ್ತುಪಡಿಸುವ ಠರಾವನ್ನು ಲಾಹೋರ್ ನಗರದಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಪಾಸು ಮಾಡಲಾಯಿತು. ಇಲ್ಲಿಯೇ ಜವಾಹರ ಲಾಲ್ ನೆಹರು ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದದ್ದು……..

ಮಧ್ಯರಾತ್ರಿಯೇಕೆ?

1930ರ ನಂತರ, ಪ್ರತಿವರ್ಷ ಕಾಂಗ್ರೆಸ್ ಮನೋಧರ್ಮದ ಭಾರತೀಯರು ಜನವರಿ 26ರಂದು ಸ್ವಾತಂತ್ರ್ಯದಿನ ಆಚರಿಸಿದರು. ಬ್ರಿಟೀಷರು ಆಖೈರಾಗಿ ಉಪಖಂಡ ತ್ಯಜಿಸಿ ಹೋದಾಗ, ಅವರು ಅಧಿಕಾರ ಹಸ್ತಾಂತರಿಸಲು 1947 ಆಗಸ್ಟ್ 15 ರ ದಿನಾಂಕವನ್ನು ಆಯ್ಕೆಮಾಡಿಕೊಂಡರು. ಈ ತಾರೀಖನ್ನು ಆಯ್ಕೆ ಮಾಡಿದ್ದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಅದು, ಎರಡನೆಯ ಮಹಾಯುದ್ಧದಲ್ಲಿ ಜಪಾನಿಗಳು ಮಿತ್ರರಾಷ್ಟ್ರಗಳ ಪಡೆಗಳಿಗೆ ಶರಣಾಗತಿಯಾದುದರ ಎರಡನೆಯ ವಾರ್ಷಿಕ ದಿನವಾಗಿತ್ತು. ಇನ್ನು ಕೆಲವರು 1948ರ ಜನವರಿ 26 ರಂದು ಅಧಿಕಾರ ಹಸ್ತಾಂತರವಾಗಬೇಕೆಂದು ಬಯಸಿದರು. ಆದರೆ ಮೌಂಟ್ ಬ್ಯಾಟನ್ ಮತ್ತು ಅಧಿಕಾರ ಸ್ವೀಕಾರಕ್ಕೆ ಕಾಯುತ್ತಿದ್ದ ರಾಜಕಾರಣಿಗಳು ಅಧಿಕಾರ ಹಸ್ತಾಂತರವನ್ನು ವಿಳಂಬಗೊಳಿಸಲು ಒಪ್ಪಲಿಲ್ಲ.

ಹೀಗೆ, ರಾಷ್ಟ್ರೀಯ ಭಾವನೆಗಿಂತ, ಸಾಮ್ರಾಜ್ಯಶಾಹಿಯ ಹಮ್ಮು-ಪ್ರತಿಷ್ಠೆಗಳನ್ನು ಅನುರಣಿಸಿದ ದಿನ ಸ್ವಾತಂತ್ರ್ಯ ಕೊನೆಗೂ ಬಂತು. ಆಗಸ್ಟ್ 15 ಮಂಗಳಕರ ದಿನವಲ್ಲವೆಂದು ಜ್ಯೋತಿಷಿಗಳು ಕಟ್ಟಳೆ ಮಾಡಿದ್ದರು. ಆದ್ದರಿಂದ 14ರಂದೇ


ಸಂಭ್ರಮಾಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಹೊಸ ಸಂವಿಧಾನ ರಚಿಸಲು ಭಾರತೀಯ ಪ್ರತಿನಿಧಿಗಳನ್ನೊಳಗೊಂಡಿದ್ದ ಸಂವಿಧಾನ ರಚನಾ ಸಭೆಯ ವಿಶೇಷ ಅಧಿವೇಶನವನ್ನು 14ರಂದೇ ನಡೆಸುವುದರೊಂದಿಗೆ ಸ್ವಾತಂತ್ರ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

ಹಿಂದಿನ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಲೆಜಿಸ್ಲೆಟಿವ್ ಕೌನ್ಸಿಲ್ ಅಧಿವೇಶನ ನಡೆಯುತ್ತಿದ್ದ ಎತ್ತರದ ಗುಮ್ಮಟದ ಸಭಾಂಗಣದಲ್ಲಿ ಸಮಾರಂಭ ಏರ್ಪಾಡಾಗಿತ್ತು. ಉಜ್ವಲ ದೀಪಗಳಿಂದ ಬೆಳಗುತ್ತಿದ್ದ ಸಭಾಂಗಣ ಬಾವುಟಗಳಿಂದ ಅಲಂಕೃತಗೊಂಡಿತ್ತು. ಹಿಂದಿನ ವಾರ ಬ್ರಿಟಿಷ್ ವೈಸ್ ರಾಯ್ ಗಳ ಭಾವಚಿತ್ರಗಳಿದ್ದ ಫೋಟೋ ಫ್ರೇಮ್ ಗಳಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ರಾಷ್ಟ್ರಭಕ್ತಿಗೀತೆ ‘ವಂದೇ ಮಾತರಂ’ ಗಾಯನದೊಂದಿಗೆ ರಾತ್ರಿ 11 ಗಂಟೆಗೆ ಸಮಾರಂಭದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾರತದೊಳಗೆ ಹಾಗೂ ಬೇರೆಡೆ ಪ್ರಾಣಾರ್ಪಣೆ ಮಾಡಿದವರಿಗೆ” ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಭಾರತೀಯ ನಾರಿಯರ ಪರವಾಗಿ ರಾಷ್ಟ್ರಧ್ವಜವನ್ನು ಪ್ರದಾನಮಾಡುವುದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು….

ಸ್ತೋತ್ರಗೀತೆ ಮತ್ತು ರಾಷ್ಟ್ರಧ್ವಜ ಪ್ರದಾನಗಳ ಮಧ್ಯೆ ಭಾಷಣಗಳಾದವು. ಆ ರಾತ್ರಿ ಮೂವರು ಪ್ರಮುಖರು ಭಾಷಣ ಮಾಡಿದರು. ಒಬ್ಬರು, ಚೌಧುರಿ ಖಲೀಕ್ ಉಸ್ಮಾನ್, ಭಾರತದ ಮುಸ್ಲಿಮರ ಪ್ರತಿನಿಧಿಯಾಗಿ ಇವರನ್ನು ಆರಿಸಲಾಗಿತ್ತು. ಇವರು ಹೊಸದಾಗಿ ಸ್ವಾತಂತ್ರ್ಯಗೊಂಡ ಭಾರತ ದೇಶಕ್ಕೆ ಅಲ್ಪಸಂಖ್ಯಾತರ ನಿಷ್ಠೆಯನ್ನು ಯಥೋಚಿತವಾಗಿ ಘೋಷಿಸಿದರು. ಎರಡನೆಯವರು ತತ್ವಶಾಸ್ತ್ರಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್. ವಾಕ್ ಶಕ್ತಿ, ಪ್ರಾವೀಣ್ಯತೆ ಹಾಗೂ ಪೂರ್ವ-ಪಶ್ವಿಮಗಳನ್ನು ಹತ್ತಿರ ತರುವ ಗ್ರಂಥದ ಕರ್ತೃವಾದ್ದರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಡಚ್ಚರು ಇಂಡೋನೇಷ್ಯಾದಲ್ಲೆ ಉಳಿದಿದ್ದು, ಫ್ರೆಂಚರು ಇಂಡೋ ಚೀನಾದಿಂದ ಕಾಲ್ತೆಗೆಯಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ, ಭಾರತ ತ್ಯಜಿಸುವುದನ್ನು ಆಯ್ಕೆ ಮಾಡಿಕೊಂಡ ಬ್ರಿಟನ್ನಿನ ರಾಜಕೀಯ ವ್ಯವಹಾರಿಕ ವಿವೇಕ ಮತ್ತು ಎದೆಗಾರಿಕೆಯನ್ನು ರಾಧಾಕೃಷ್ಣನ್ ಪ್ರಶಂಸಿಸಿದರು.

ಅಂದಿನ ಭಾಷಣಕಾರರಲ್ಲಿ ತಾರಾ ಆಕರ್ಷಣೆಯೆಂದರೆ ಸ್ವತಂತ್ರ  ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್


ನೆಹರೂ.  ನೆಹರೂ ಆ ರಾತ್ರಿ ಭಾಷಣಕಾರರಲ್ಲಿ ಧ್ರುವತಾರೆಯಾಗಿದ್ದರು. ಅವರ ಭಾಷಣ ಭಾವತೀವ್ರತೆಯಿಂದಲೂ ವಾಗ್ಮಯ ಕಲೆಯಿಂದಲೂ ತುಂಬಿ ಶ್ರೀಮಂತವಾಗಿತ್ತು. ಆ ರಾತ್ರಿ ಅವರು ಆಡಿದ, “ಮಧ್ಯರಾತ್ರಿಯ ಘಂಟಾನಾದದ ಈ ಮುಹೂರ್ತದಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಜೀವಚೈತನ್ಯಕ್ಕೆ-ಸ್ವಾತಂತ್ರ್ಯಕ್ಕೆ ಕಣ್ತೆರೆಯುತ್ತಿದೆ.” ಈ ಮಾತುಗಳು ಅಂದಿನಿಂದ ವ್ಯಾಪಕವಾಗಿ ಉಲ್ಲೇಖಗೊಂಡವು. “ಈ ಮುಹೂರ್ತ ಇತಿಹಾಸದ ಅತ್ಯಪೂರ್ವ ಕ್ಷಣ, ನಾವು ಹಳೆಯದರಿಂದ ಹೊಸತಿಗೆ ಪಾದಾರ್ಪಣ ಮಾಡುತ್ತಿದ್ದೇವೆ, ರಾಷ್ಟ್ರಾತ್ಮ ಸುದೀರ್ಘಕಾಲ ತುಳಿತಕ್ಕೊಳಗಾಗಿದ್ದ ಯುಗಾಂತ್ಯಗೊಂಡು ವಾಕ್ ಶಕ್ತಿ ಪಡೆಯುತ್ತಿರುವ ಮುಹೂರ್ತವಿದು” ಎಂದು ನೆಹರೂ ಹೇಳಿದ್ದರು.

ಸಮಾರಂಭದಲ್ಲಾದ ಎಡವಟ್ಟು!

ಭಾರತದಲ್ಲಿ ಯಾವುದೇ ಒಂದು ಮಹತ್ವದ ಸಮಾರಂಭವೂ ಎಡವಟ್ಟು-ಅಚಾತುರ್ಯಗಳಿಲ್ಲದೆ ಮುಗಿಯುವುದಿಲ್ಲ. ಈ ಸಂದರ್ಭದಲ್ಲಿ ಆದ ಅಚಾತುರ್ಯ ಹೋಲಿಕೆಯಿಂದ ಸಣ್ಣದು. ಮಧ್ಯರಾತ್ರಿಯ ಅಧಿವೇಶನದ ನಂತರ ಜವಹರಲಾಲ್ ನೆಹರೂ ಅವರು ಗೌರ್ನರ್ ಜನರಲ್ ಅವರಿಗೆ ತಮ್ಮ ಸಂಪುಟದ ಸಚಿವರ ಪಟ್ಟಿ ಸಲ್ಲಿಸಲು ಧಾವಿಸಿದರು. ಅವರು ಗೌರ್ನರ್ ಜನರಲ್ ಅವರಿಗೆ ಖಾಲಿ ಲಕೋಟೆಯೊಂದನ್ನು ನೀಡಿದ್ದರು! ಆದರೆ ಪ್ರಮಾಣವಚನ ಸ್ವೀಕಾರದ ವೇಳೆಗೆ ಕಳೆದುಹೋಗಿದ್ದ ಕಾಗದದ ಚೂರು ಸಿಕ್ಕಿತು. ಪ್ರಧಾನಮಂತ್ರಿಯಲ್ಲದೆ, ಸಂಪುಟದಲ್ಲಿ ಹದಿಮೂರು ಮಂದಿ ಇತರೆ ಸಚಿವರುಗಳಿದ್ದರು. ಅವರಲ್ಲಿ ವಲ್ಲಭಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಆಜಾದ್ ರಂಥ ರಾಷ್ಟ್ರೀಯ ಅತಿರಥ ಮಹಾರಥ ನಾಯಕರುಗಳಿದ್ದರು. ಅಲ್ಲದೆ ಯುವ ಜನಾಂಗದ ನಾಲ್ವರು ಕಾಂಗ್ರೆಸ್ ರಾಜಕಾರಣಿಗಳೂ ಸೇರಿದ್ದರು.

ಸಂಪುಟದ ಸಚಿವರುಗಳ ಹೆಸರುಗಳಲ್ಲಿ ತುಂಬಾ ಗಮನಾರ್ಹವಾದವು ಕಾಂಗ್ರೆಸ್ ಪಕ್ಷದವರದಾಗಿರಲಿಲ್ಲ. ಸಂಪುಟದಲ್ಲಿ ವಾಣಿಜ್ಯ ಪ್ರಪಂಚ ಹಾಗೂ ಸಿಖ್ಖರ ಪ್ರತಿನಿಧಿಗಳಿದ್ದರು. ಉಳಿದ ಮೂವರು ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದವರು. ಇವರು, ಭಾರತದ ಅತ್ಯುತ್ತಮ ವಿತ್ತೀಯ ಬುದ್ಧಿವಂತರೆನ್ನಿಸಿಕೊಂಡ ಮದ್ರಾಸಿನ ವಣಿಕ ಮಹಾಶಯರಾದ ಆರ್. ಕೆ. ಷಣ್ಮುಖಂ ಚೆಟ್ಟಿ, ನ್ಯಾಯಶಾಸ್ತ್ರದ ಮೇಧಾವಿಗಳೂ ಜಾತಿಯಿಂದ ಅಸ್ಪೃಶ್ಯರೂ ಆದ ಬಿ.ಆರ್. ಅಂಬೇಡ್ಕರ್ ಮತ್ತು ಹಿಂದೂ ಮಹಾಸಭಾಗೆ ಸೇರಿದ ಬಂಗಾಳದ ಪ್ರಮುಖ ರಾಜಕಾರಣಿ ಶ್ಯಾಮ್ ಪ್ರಸಾದ್ ಮುಖರ್ಜಿ. ಕಾಂಗ್ರೇಸ್ಸಿಗರು ಬ್ರಿಟೀಷರ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಆಡಳಿತಗಾರರೊಂದಿಗೆ ಕೈಜೋಡಿಸಿದವರೂ ಇದ್ದರು. ಆದರೆ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಈಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬುದ್ಧಿವಂತಿಕೆಯಿಂದ ಪಕ್ಕಕ್ಕೆ ದೂಡಿದ್ದರು. ‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ, ಕ್ರಾಂಗ್ರೆಸ್ಸಿಗೆ ಅಲ್ಲ’ ಎಂಬುದನ್ನು ನೆನಪಿಸುವ ಮೂಲಕ ಗಾಂಧೀಜಿಯವರು, ಪಕ್ಷಭೇದ ಮರೆತು ಸಮರ್ಥರನ್ನೊಳಗೊಂಡ ಸಂಪುಟವನ್ನು ಬರಚಿಸಬೇಕೆಂದು ಆಗ್ರಹಪಡಿಸಿದ್ದರು.

ಮೊದಲ ಮಂತ್ರಿಮಂಡಲ ರಾಜಕೀಯವಾಗಿಯಷ್ಟೇ ಅಲ್ಲದೆ, ಬೇರೆ ರೀತಿಯಿಂದಲೂ ವ್ಯಾಪಕ ಪ್ರಾತಿನಿಧ್ಯದಿಂದ ಕೂಡಿತ್ತು. ಮಂತ್ರಿಮಂಡಲದಲ್ಲಿ ಐದು ಪ್ರಮುಖ ಧರ್ಮಗಳವರಿದ್ದರು (ಸಾಕಷ್ಟು ಪ್ರಮಾಣದಲ್ಲಿ ನಿರೀಶ್ವರವಾದಿಗಳೂ ಇದ್ದರು) ಹಾಗೂ ಭಾರತದ ಎಲ್ಲ ಭಾಗಗಳವರೂ ಇದ್ದರು. ಇಬ್ಬರು ಅಸ್ಪೃಶ್ಯರಲ್ಲದೆ ಮಹಿಳಾ ಪ್ರತಿನಿಧಿಯೆಂಬಂತೆ ರಾಜಕುಮಾರಿ ಅಮೃತ ಕೌರ್ ಅವರೂ ಇದ್ದರು.

ಸಮಾರಂಭದ ಕಾರ್ಯಸೂಚಿ!

ಆಗಸ್ಟ್ 15 ರ ಕಾರ್ಯಸೂಚಿಯ ಮೊದಲ ವಿಷಯ, ಗೌರ್ನರ್ ಜನರಲ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಪ್ರಮಾಣವಚನ ಸ್ವೀಕಾರ. ಇವರು ಹಿಂದಿನ ರಾತ್ರಿಯವರೆಗೆ ಬ್ರಿಟಿಷರ ಕೊನೆಯ ವೈಸರಾಯ್ ಆಗಿದ್ದವರು. ಆ ದಿನ ಉಳಿದ ಕಾರ್ಯಕ್ರಮದ ಪಟ್ಟಿ ಹೀಗಿತ್ತು:

ಬೆಳಿಗ್ಗೆ 8.30 ಸರ್ಕಾರಿ ಭವನದಲ್ಲಿ ಗೌರ್ನರ್ ಜನರಲ್ ಹಾಗೂ ಸಚಿವರಿಂದ ಪ್ರಮಾಣ ವಚನ ಸ್ವೀಕಾರ.

ಬೆಳಿಗ್ಗೆ 9.40 – ಸಂವಿಧಾನ ರಚನಾ ಸಭೆಗೆ ಸಚಿವರ ಮೆರವಣಿಗೆ.

ಬೆಳಿಗ್ಗೆ 9.50 – ಸಂವಿಧಾನ ರಚನಾ ಸಭೆಗೆ ಗೌರ್ನರ್ ಜನರಲ್ ಆಗಮನ.

ಬೆಳಿಗ್ಗೆ 9.55 – ಗೌರ್ನರ್ ಜನರಲ್ ಅವರಿಗೆ ರಾಜೋಚಿತ ಗೌರವ ವಂದನೆ.

ಬೆಳಿಗ್ಗೆ 10.30 – ಸಂವಿಧಾನ ರಚನಾ ಸಭೆಯಲ್ಲಿ ಧ್ವಜಾರೋಹಣ

ಬೆಳಿಗ್ಗೆ 10.35 – ಸರ್ಕಾರಿ ಭವನಕ್ಕೆ ಗೌರ್ನರ್ ಜನರಲ್ ನಿರ್ಗಮನ.

ಸಂಜೆ 6.00 – ಇಂಡಿಯಾ ಗೇಟಿನಲ್ಲಿ ಧ್ವಜಾರೋಹಣ.

ಸಂಜೆ 7.00 – ದೀಪೋತ್ಸವ.

ಸಂಜೆ 7.45 – ಬಾಣ ಬಿರುಸುಗಳ ಪ್ರದರ್ಶನ.

ಸಂಜೆ 8.45 – ಸರ್ಕಾರಿ ಭವನದಲ್ಲಿ ಅಧಿಕೃತ ಭೋಜನಕೂಟ.

ರಾತ್ರಿ 10.15 – ಸರ್ಕಾರಿ ಭವನದಲ್ಲಿ ಉತ್ಸವ.

ನಿರ್ಗಮಿಸಿದ ಪ್ರಭುಗಳಂತೆ ಭಾರತೀಯರಿಗೂ ಅದ್ಧೂರಿ-ಆಡಂಬರದ ಸಮಾರಂಭಗಳು ಪ್ರಿಯವಾಗಿರುವಂತೆ ತೋರುತ್ತದೆ. ದೆಹಲಿ ಉದ್ದಗಲಗಳಲ್ಲಿ ಹಾಗೂ ಭಾರತದ ಇತರ ಭಾಗಗಳಲ್ಲಿ ಸರ್ಕಾರ ಮತ್ತು ಪ್ರಜೆಗಳು ಸ್ವಾತಂತ್ರ್ಯಾಗಮನವನ್ನು ಹರ್ಷೋಲ್ಲಾಸಗಳಿಂದ ಆಚರಿಸಿದರು. ರಾಜಧಾನಿಯೊಂದರಲ್ಲೇ ಮುನ್ನೂರು ಧ್ವಜಾರೋಹಣ ಸಮಾರಂಭಗಳು ನಡೆದುದಾಗಿ ವರದಿಯಾಗಿದೆ. ರಾಷ್ಟ್ರದ ವಾಣಿಜ್ಯ ಕೇಂದ್ರವಾದ ಮುಂಬಯಿಯಲ್ಲಿ ನಗರದ ಮೇಯರ್ ಭವ್ಯ ತಾಜ್ ಮಹಲ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸಿದ್ದರು. ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಕಾಶಿಯಲ್ಲಿ ದೇವಾಲಯವೊಂದರಲ್ಲಿ, ಗಮನಾರ್ಹವಾಗಿ ಮುಸ್ಲಿಮನೊಬ್ಬನಿಂದ ರಾಷ್ಟ್ರಧ್ವಜಾರೋಹಣ ನಡೆಯಿತು. …….

ಶಿಸ್ತಿನಿಂದ ಅಶಿಸ್ತಿನ ಕಡೆಗೆ…

1930ರ ಜನವರಿ 26 ರಂದು ಅದ್ಭುತವಾಗಿ ಆಚರಿಸಲಾದ ಮೊದಲ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ, ನೆಹರೂ ಹೇಳಿರುವಂತೆ, ಭಾಗವಹಿಸಿದವರು ಶಿಸ್ತುಗಾಂಭೀರ್ಯಗಳಿಂದ ಆಜ್ಞಾನುವರ್ತಿಗಳಾಗಿದ್ದರು. ಆದರೆ 1947ರಲ್ಲಿ, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂದಾಗ ಭಾವನೆಗಳ ಅಭಿವ್ಯಕ್ತಿ, ಪ್ರದರ್ಶನಗಳು ಅತ್ಯಂತ ಸಹಜವಾಗಿದ್ದವು. ವಿದೇಶಿಯೊಬ್ಬರನ್ನು ಉಲ್ಲೇಖಿಸಿ ಹೇಳುವುದಾದರೆ, “ ನಗರಗಳ ನಂತರ ನಗರಗಳಲ್ಲಿ ಉತ್ಸಾಹಭರಿತ ಜನಸಮುದಾಯ, ಅನೇಕ ವರ್ಷಗಳಿಂದ ಅದುಮಿಟ್ಟಿದ್ದ ಹತಾಶೆಗಳು ಕಟ್ಟೆಯೊಡೆದು ಬಂದಂತೆ ಮೋಜಿನಿಂದ, ಆಮೋದ-ಪ್ರಮೋದಗಳಿಂದ ಆಚರಿಸಿತು….. ಮನೆಗಳ ಮೇಲೆ ಕಟ್ಟಡಗಳ ಮೇಲೆ ಸಾಲು ಸಾಲಾಗಿ ನಿಶಾನೆಗಳು ಹಾರಾಡಿದವು. ಕಾರುಗಳ ಮೇಲೆ ಬೈಸಿಕಲ್ಲುಗಳ ಮೇಲೆ, ಮಕ್ಕಳು, ಹಾಲು ಹಸುಳೆಗಳ ಕೈಗಳಲ್ಲಿ ನಿಶಾನೆಗಳು ಹಾರಾಡಿದವು……

ಈ ಮಧ್ಯೆ ಸರ್ಕಾರಿ ಭವನದಲ್ಲಿ ಹೊಸ ಭಾರತೀಯ ಗೌರ್ನರ್ ನ ಪ್ರಮಾಣವಚನ ಸ್ವೀಕಾರ ನಡೆದಿತ್ತು…. “ಅರಮನೆಯ ತುಂಬ ಅನಧಿಕೃತ ವ್ಯಕ್ತಿಗಳೇ ತುಂಬಿದ್ದು, ಸಮಾರಂಭವು ಬ್ರಿಟೀಷರು ಭಾರತವನ್ನು ತ್ಯಜಿಸಿದ ನಂತರ ಭವಿಷ್ಯದ ದಿನಗಳಲ್ಲಿ ಬರಲಿರುವುದರ ಮುನ್ಸೂಚನೆಯಂತಿತ್ತು.”….

*****

ಡಾ. ರಾಜೇಂದ್ರ ಬುರಡಿಕಟ್ಟಿ

15-08-2021

{ಮೇಲಿನ ಲೇಖನವು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ India After Gandhi ಕೃತಿಯ ಕನ್ನಡ ಅನುವಾದವಾದ ‘ಬಾಪು ನಂತರದ ಭಾರತ’ (ಅನು:ಜಿ.ಎನ್. ರಂಗನಾಥ ರಾವ್) ಕೃತಿಯ ಮೊದಲ ಅಧ್ಯಾಯವಾದ  ‘ಸ್ವಾತಂತ್ರ್ಯ ಮತ್ತು ಪಿತೃಹತ್ಯೆ’ಯ ಆಯ್ದ ಈ ಭಾಗವಾಗಿದ್ದು ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದ ಓದಿಗಾಗಿ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಮೂಲ ಲೇಖಕರಿಗೆ ಮತ್ತು ಅನುವಾದಕರಿಗೆ ಕೃತಜ್ಞನಾಗಿದ್ದೇನೆ. – ರಾಬು}

 

Friday, August 13, 2021

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

 

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

ನಮ್ಮಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಕೆಲವು ಆಚರಣೆಗಳ ದಿನಗಳು ಎರಡೆರಡಾಗಿ ಆಚರಿಸಲ್ಪಡುತ್ತಿವೆ. ಅವೆಂದರೆ ಶಿಕ್ಷಕ ದಿನ, ವಿಜ್ಞಾನ ದಿನ ಇತ್ಯಾದಿ. ಅವುಗಳಂತೆಯೇ ‘ಅಂಗಾಂಗ ದಾನದ ದಿನ’ ಕೂಡ ನಮ್ಮಲ್ಲಿ ಎರಡು ದಿನ ಆಚರಿಸಲ್ಪಡುವ ದಿನವಾಗಿದೆ. ಮೊದಲನೆಯದಾಗಿ ಪ್ರತಿವರ್ಷ ಆಗಸ್ಟ್ 13ನ್ನು ‘ವಿಶ್ವ ಅಂಗಾಂಗ ದಾನದ ದಿನ’ (World Organ Donation Day) ಎಂದು ಆಚರಿಸಿದರೆ ಇದೇ ದಿನವನ್ನು ನಮ್ಮ ದೇಶದ ಮಟ್ಟದಲ್ಲಿ ಪ್ರತಿವರ್ಷ ನವೆಂಬರ್ 27 ರಂದು ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಅಂಗಾಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಮಾಡುವುದು ಈ ಆಚರಣೆಗಳ ಮುಖ್ಯವಾದ ಉದ್ದೇಶ. ಕಳೆದ ವರ್ಷ ಸರ್ಕಾರ “ನಿಮ್ಮ ಅಂಗಾಂಗಗಳನ್ನು ನಿಮ್ಮೊಂದಿಗೆ ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅವಶ್ಯಕತೆ ಇಲ್ಲಿಯೇ ಇದೆ ಎಂಬುದು ದೇವರಿಗೆ ಗೊತ್ತಿದೆ” ಎಂಬ ಧ್ಯೇಯವಾಕ್ಯದೊಂದಿಗೆ ಜನರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಂಗಾಂಗ ಕಸಿ (Organ Transplantation) ಯ ಇತಿಹಾಸ

ಆಧುನಿಕ ಪ್ರಪಂಚದಲ್ಲಿ ಅಂಗಾಗ ಕಸಿಯ ಮೂಲಕ ವೈಜ್ಞಾನಿಕವಾಗಿ ನಮ್ಮ ಜಗತ್ತು ಒಂದು ಮಹತ್ವದ ಮೈಲುಗಲ್ಲನ್ನು


ಮುಟ್ಟಿದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ. 1954 ರಲ್ಲಿ ಅಮೇರಿಕೆಯ ವೈದ್ಯವಿಜ್ಞಾನಿ ಡಾ. ಜೊಸೆಫ್ ಮೂರಿಯು ಮೊಟ್ಟಮೊದಲು ರಿಚರ್ಡ್ ಹ್ಯಾರಿಕ್ ಮತ್ತು ರೊನಾಲ್ಡ್ ಹ್ಯಾರಿಕ್ ಎಂಬ ಇಬ್ಬರು ಅವಳಿಗಳ ನಡುವೆ ಮೂತ್ರಕೋಶದ ಯಶಸ್ವಿ ಕಸಿಮಾಡುವುದರೊಂದಿಗೆ ಅಂಗಾಂಗ ಕಸಿಗೆ ವೈದ್ಯವಿಜ್ಞಾನದಲ್ಲಿ ಒಂದು ಮಹತ್ವದ ಅಡಿಗಲ್ಲು ಹಾಕಿದ. ಮನಶ್ಶಾಸ್ತ್ರದಲ್ಲಿ ಅನೇಕ ಮಹತ್ವದ ಜಾಗತಿಕ ಮಟ್ಟದ ಕೃತಿಗಳನ್ನೂ ಬರೆದಿರುವ ಈ ವಿಜ್ಞಾನಿಗೆ ಮುಂದೆ 1990 ರಲ್ಲಿ ಪ್ರತಿಷ್ಠಿತ ನೊಬೆಲ್ ಬಹುಮಾನವನ್ನು ನೀಡುವ ಮೂಲಕ ಜಗತ್ತು ಗೌರವಿಸಿತು. ಮೂರಿ ಮಾಡಿದ ಈ ಸಾಧನೆಯಿಂದಾಗಿ ಇಂದು ಜಗತ್ತಿನಾದ್ಯಂತ ಅಂಗಾಂಗ ಕಸಿ ವಿಭಿನ್ನ ಆಯಾಮಗಳಲ್ಲಿ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಅಂಗಾಗ ಕಸಿ

ಭಾರತದಲ್ಲಿ ಅಂಗಾಗ ಕಸಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ನಡೆದಿಲ್ಲವೆನ್ನಬಹುದು. ಅಂಗಾಗ ಕಸಿಯ ಸಾಧ್ಯತೆಯನ್ನು ನಾವು ಆರಂಭದಲ್ಲಿ ದುರುಪಯೋಗಪಡಿಸಿಕೊಂಡದ್ದೇ ಹೆಚ್ಚು. ಅನೇಕ ‘ಕಿಡ್ನಿವ್ಯಾಪಾರಗಳು’ ನಡೆಯತೊಡಗಿದಾಗ ಇದಕ್ಕೊಂದು ವ್ಯವಸ್ಥಿತ ಸಂಘಟಿತ ರೂಪರೇಷೆಗಳನ್ನು, ಕಾನೂನಾತ್ಮಕ ಚೌಕಟ್ಟನ್ನು ರೂಪಿಸುವ ಕೆಲಸಗಳು ನಮ್ಮಲದಲಿ ಆರಂಭವಾದವು.  ಈ ನಿಟ್ಟಿನಲ್ಲಿ ಭಾರತ ಸರ್ಕಾರವು 2011 ರಲ್ಲಿ ಜಾರಿಗೆ ತಂದ ಮಾನವ ಅಂಗಾಗ ಕಸಿ (ತಿದ್ದುಪಡಿ)ವಿಧೇಯಕ (Transplantation of Human Organ (Amendment) Bill 2011) ಒಂದು ಮಹತ್ವದ ಹೆಜ್ಜೆಯಾಯಿತು. ಈಗ ಈ ಕಾಯ್ದೆಯ ಅನ್ವಯ ಭಾರತದಲ್ಲಿಯ ಅಂಗಾಗ ಕಸಿಯ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರಮಟ್ಟದ


ಸಂಸ್ಥೆ ‘ನೊಟ್ಟೊ’ (National Organ and Tissue Transplant Organization –NOTTO) ಹೊತ್ತಿದೆ. ಈ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 1995 ರಿಂದ 2010 ವರೆಗಿನ 15 ವರ್ಷಗಳಲ್ಲಿ ಅಂಗಾಗಕಸಿಯ ಪ್ರಕರಣಗಳು ಯಾವ ವರ್ಷವೂ ಒಂದು ಸಾವಿರವನ್ನು ದಾಟಿಲ್ಲ! 2011 ರಲ್ಲಿ ಮೊಟ್ಟ ಮೊದಲ ಬಾರಿ ಸಾವಿರ ಗಡಿಯನ್ನು ದಾಟಿ ಇತ್ತೀಚೆಗೆ ಹೆಚ್ಚಾಗುತ್ತಿವೆಯಾದರೂ ಹೇಳಿಕೊಳ್ಳುವಂಥ ಪ್ರಗತಿ ಆಗಿಲ್ಲ. ಇನ್ನೊಂದು ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಕೇವಲ ಶೇ. 3 ರಷ್ಟು ಮಾತ್ರ ಅಂಗಾಗ ದಾನಿಗಳಿದ್ದಾರೆ! ಭಾರತದಲ್ಲಿ ಅದರ ಭಾಗವಾದ ಕರ್ನಾಟಕದಲ್ಲಿ ಕೂಡ ಅಂಗಾಗ ಕಸಿಗೆ ಬೇಡಿಕೆ ಸಲ್ಲಿಸಿ ಕಾಯುತ್ತಿರುವವರಲ್ಲಿ ಅತೀ ಹೆಚ್ಚು ಜನ ಮೂತ್ರಕೋಶಕ್ಕೆ ಬೇಡಿಕೆ ಸಲ್ಲಿಸಿದವರಿದ್ದರೆ ಎರಡನೆಯ ಸ್ಥಾನದಲ್ಲಿ ಲಿವರ್ ಗಾಗಿ ಬೇಡಿಕೆ ಸಲ್ಲಿಸಿದವರಿದ್ದಾರೆ. ಮೂರನೆಯ ಸ್ಥಾನದಲ್ಲಿ ಹೃದಯದವರಿದ್ದಾರೆ. ಕಸಿಮಾಡುವಿಕೆಯಲ್ಲಿಯೂ ಇವೇ ಮೂರು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವರೆಲ್ಲ ಕಾಯುವಿಕೆಯ ಸಾಲಿನಲ್ಲಿ ಹಾಗೇ ಇದ್ದಾರೆ…

ಇದಕ್ಕೆ ಕಾರಣ ಭಾರತೀಯರಾದ ನಮ್ಮ ಆಲೋಚನಾ ಕ್ರಮ. ಸತ್ತಮೇಲಿನ ಬದುಕಿನ ಬಗ್ಗೆ ಎಲ್ಲ ದೇಶಗಳಲ್ಲಿಯೂ ಎಲ್ಲ ಸಮಾಜಗಳಲ್ಲಿಯೂ ಹತ್ತು ಹಲವು ನಂಬಿಕೆಗಳಿವೆ. ಹಲವು ಧರ್ಮಗಳ ನಾಡಾಗಿರುವ  ಭಾರತದಲ್ಲಿ ಇವು ತುಸು ಹೆಚ್ಚೇ ಇವೆ. ಸತ್ತಮೇಲೆ ಶವವನ್ನು ಹೂಳಬೇಕೋ ಸುಡಬೇಕೋ ಇತ್ಯಾದಿ ಚರ್ಚೆಗಳು ನಮ್ಮಲ್ಲಿ ಮಹತ್ವ ಪಡೆದುಕೊಂಡಂತೆ ಇವೆರಡಕ್ಕಿಂತ ಭಿನ್ನವಾಗಿ ಯಾರಿಗಾದರೂ ಉಪಯುಕ್ತವಾದದ್ದನ್ನು ಏನನ್ನಾದರೂ  ಮಾಡಬಹುದೇ ಎಂಬ ಚರ್ಚೆ ನಡೆಯುವುದು ಅಪರೂಪ. ಈ ಕಾರಣದಿಂದ ನಮ್ಮಲ್ಲಿ ಅಂಗಾಗ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ತುಂಬಾ ಕಡಿಮೆ. ನಮ್ಮ ದೇಶದಲ್ಲಿ ಅಪಘಾತ ಮತ್ತಿತರ ಕಾರಣಗಳಿಂದ ಸಾಯುತ್ತಿರುವ ಎಲ್ಲರ ಅಂಗಾಂಗಗಳನ್ನು ಪಡೆಯಲು ಸಾಧ್ಯವಾಗುವುದಾದರೆ ಅಂಗಾಗಗಳ ವೈಫಲ್ಯದಿಂದ ನರಳುತ್ತಿರುವ ಪ್ರಕರಣಗಳೇ ಇರುವುದಿಲ್ಲ. ಆದರೆ ಬಹಳಷ್ಟು ಜನರು ತಮ್ಮ ಧಾರ್ಮಿಕ ನಂಬಿಕೆಗಳಿಂದ ಹೊರಬಂದು ಒಂದಿಷ್ಟು ವೈಚಾರಿಕವಾಗಿ ವಿಚಾರಿಸಲು ತೊಡಗುತ್ತಿಲ್ಲವಾದ್ದರಿಂದ ಇದು ಇಂದಿಗೂ ಸಾಧ್ಯವಾಗಿಲ್ಲ.

ಖ್ಯಾತನಾಮರ ನಡೆಯ ಪ್ರಭಾವ

ಈ ನಿಟ್ಟಿನಲ್ಲಿ ಜನಪ್ರಿಯ ವ್ಯಕ್ತಿಗಳು (ಸೆಲಿಬ್ರಿಟಿಗಳು) ಅಂಗಾಗ ದಾನಕ್ಕೆ ಮುಂದೆ ಬಂದಾಗ ಅವು ವಿಪರೀತ ಸುದ್ಧಿಯಾಗಿ ಒಂದಿಷ್ಟು ಧನಾತ್ಮಕ ಪರಿಣಾಮ ಬೀರುವುದುಂಟು. ನಮ್ಮಲ್ಲಿ ರಾಷ್ಟ್ರಮಟ್ಟದ ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕರು ಅಂಗಾಗ ದಾನಮಾಡುವ ಮೂಲಕ ದಾನದ ವಾಗ್ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರಲ್ಲಿ ಹಲವು ಕ್ಷೇತ್ರಗಳ ಖ್ಯಾತನಾಮರಿದ್ದಾರೆ. ಡಾ. ಮನಮೋಹನ್ ಸಿಂಗ್, ಅಮೀರ್ ಖಾನ್, ಐಶ್ವರ್ಯ ಬಚನ್, ಗೌತಮ್ ಗಂಭೀರ್, ನವಜ್ಯೋತ್ ಸಿಂಗ್ ಸಿದೂ, ರಜನಿಕಾಂತ್ ಜಯಪ್ರದಾ… ಹೀಗೆ ಒಂದಿಷ್ಟು ಹೆಸರುಗಳನ್ನು ಪಟ್ಟಿಮಾಡಬಹುದು. 


ಕರ್ನಾಟಕದಲ್ಲಿ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿ ಮೆದುಳು ನಿಷ್ಕ್ರೀಯಗೊಂಡು ನಮ್ಮನ್ನಗಲಿದ ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ವಿಷಯವು ಅನೇಕ ಪತ್ರಿಕೆಗಳ ಮುಖಪುಟ ಸುದ್ಧಿಯಾಗಿ ಪ್ರಕಟವಾದಾಗ ಕರ್ನಾಟಕದಲ್ಲಿ ಅಂಗಾಂಗದಾನದಲ್ಲಿ ಒಂದಿಷ್ಟು ಅರಿವು ಉಂಟಾಯಿತು. ಅವರ ಕುಟುಂಬ ಅಂಗಾಂಗ ದಾನಕ್ಕೆ ತ್ವರಿತವಾಗಿ ಮಾಡಿದ ನಿರ್ಧಾರದಿಂದಾಗಿ ಕೆಲವರಿಗೆ ಜೀವಕೆಲಸ ಮಾನವೀಯ ಕೆಲಸವಾಯಿತು ಮಾತ್ರವಲ್ಲ ಅದು ಅಂಗಾಗ ದಾನದ ಅರಿವನ್ನು ವಿಸ್ತರಿಸಲೂ ನೆರವಾಯಿತು. ಸಂಚಾರಿ ವಿಜಯ್ ಅವರ ಪ್ರಕರಣದಿಂದಾಗಿ ಆ ಸಂದರ್ಭದಲ್ಲಿ ಕೇವಲ 20 ದಿನಗಳ ಅವಧಿಯಲ್ಲಿ ಸುಮಾರು 230 ಜನ ತಮ್ಮ ಅಂಗಾಂಗ ದಾನದ ಘೋಷಣೆಮಾಡಿ ನೋಂದಾಯಿಸಿಕೊಂಡಿದ್ದಾರೆಂಬುದು ಕರ್ನಾಟಕದಲ್ಲಿ ಅಂಗಾಗಕಸಿಯ ವ್ಯವಸ್ಥಿತಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯದ ಸೊಟ್ಟೊ (State Organ Transplant and Tissue Organization) ನ ಹೇಳಿಕೆ.

ಅಂಗಾಗ ಕಸಿ ಮತ್ತು ದಾನದ ಅರಿವಿನ ವಿಸ್ತಾರದ ಅಗತ್ಯ

ಅಂಗಾಗ ಕಸಿ ಎಂಬುದು ಆಧುನಿಕ ವೈದ್ಯವಿಜ್ಞಾನ ನಮಗೆ ನೀಡಿದ ಒಂದು ವರದಾನ. ಒಬ್ಬ ವ್ಯಕ್ತಿ ತನ್ನ ಸಾವಿನ ನಂತರ ತನಗೆ ಉಪಯೋಗಕ್ಕೆ ಬಾರದ ಆದರೆ ಇತರರಿಗೆ ಜೀವ ನೀಡಬಲ್ಲ ತನ್ನ ಅಂಗಳನ್ನು ಸುಟ್ಟುಹಾಕುವ ಮೂಲಕವೋ ಹೂತುಹಾಕುವ ಮೂಲಕವೋ ಅವನ್ನು ನಾಶಮಾಡದೆ ಅವನ್ನು ಇತರರಿಗೆ ದಾನಮಾಡುವ ಔದಾರ್ಯವನ್ನು ಬೆಳಸಿಕೊಳ್ಳಬೇಕು. ಇದರಿಂದ ಎಷ್ಟೋ ಜೀವಿಗಳಿಗೆ ನಾವು ಸತ್ತಮೇಲೆಯೂ ಉಪಕಾರ ಮಾಡಿದಂತಾಗುತ್ತದೆ. ಮೂತ್ರಕೋಶ ಮತ್ತು ಲಿವರ್ ಹೊರತು ಉಳಿದೆಲ್ಲ ಅಂಗಗಳ ದಾನವನ್ನು ವ್ಯಕ್ತಿಯ ಮರಣಾನಂತರವಷ್ಟೇ ಪಡೆಯಲಾಗುವುದರಿಂದ ನಮ್ಮ ಜನರು ತಮ್ಮ ಧಾರ್ಮಿಕ ನಂಬಿಕೆಗಳಾಚೆಗೆ ಬಂದು ಮಾನವೀಯ ನೆಲೆಯಲ್ಲಿ ಆಲೋಚಿಸಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈ ಬಗ್ಗೆ ಅರಿವಿನ ವಿಸ್ತಾರ ಇಂದಿನ ತುರ್ತು ಅಗತ್ಯ. ಇದ್ದಾಗ ಯಾರು ಯಾರಿಗೆ ಎಷ್ಟು ಸಹಾಯಮಾಡಲು ಸಾಧ್ಯವಾಗುತ್ತದೆಯೋ. ಆದರೆ ಸತ್ತಮೇಲಂತೂ ಈ ಅಂಗಾಗ ದಾನದ ಮೂಲಕ ನಾವು ಖಂಡಿತಾ ಇತರರಿಗೆ ಅವರು ಮರೆಯಲಾರದಂತ ಸಹಾಯಮಾಡಬಹುದು.ಆ ಮೂಲಕ ನಮ್ಮ ಬದುಕ ಸಾರ್ಥಕತೆ ಪಡೆಯಬಹುದು. ಈ ಬಗ್ಗೆ ನಾವೆಲ್ಲರೂ ಆಲೋಚಿಸೋಣ.  

(ಅಂಗಾಂಗ ದಾನ ಮಾಡಲಿಚ್ಚಿಸುವವರು ಕರ್ನಾಟಕದಲ್ಲಿ ಸಂಪರ್ಕಿಸಬೇಕಾದ ಎರಡು ವೆಬ್ ವಿಳಾಸಗಳು:

1) NOTTO: https://notto.gov.in

2) SOTTO: https://www.jeevasarthakathe.karnataka.gov.in/Website/Home.aspx

*****

ಈ ದಿನದ ವಿಶೇಷ ಓದಿಗಾಗಿ ಅಂಗಾಂಗ ದಾನದ ಮಹತ್ವವನ್ನು ಸಾರುವ ನನ್ನ ಒಂದು ಗೀತೆ:

ಉಯಿಲು

ನನ್ನ ದೇಹವ ನೀವು ಸುಟ್ಟುಹಾಕಲು ಬೇಡಿ

ಸಾಯುವವು ಮರವೆರಡು ನನ್ನ ಚಿತೆಗೆ

ಹೂತುಹಾಕಲುಬೇಡಿ ನನ್ನನ್ನು ಭುವಿಯೊಳಗೆ

ಕೊಳೆತು ಹೋಗುವುದೆಲ್ಲ ನನ್ನ ಜೊತೆಗೆ


ಕಿತ್ತುಕೊಡಿ ಕುರುಡಂಗೆ ನನ್ನೆರಡು ಕಣ್ಣುಗಳ

ಕತ್ತಲೆಯ ಬದುಕಿಂಗೆ ಬೆಳಕು ಬರಲಿ

ಸುತ್ತುತ್ತ ಊರುಗಳ ಕರ್ಣದೋಷದ ಕಿವುಡ

ಹುಡುಕುತ್ತ ಬರಬಹುದು ಕಿವಿಗಳಿರಲಿ


ನಿಂತ ಹೃದಯವನೆ ನಡೆಸುವವರು ಬಂದಾರು

ನಿಂತ ಗಡಿಯಾರವನು ನಡೆಸುವಂತೆ

ಸಾಯುವವನೆದೆಯೊಳಗೆ ನನ್ನ ಹೃದಯವನಿಟ್ಟು

ಮಾಡಿಬಿಡಿ ಅವನುಸಿರು ಆಡುವಂತೆ


ಮುತ್ತುಗಳ ಬೆಲೆಯಂತೆ ಮೂತ್ರಕೋಶಗಳಿಂಗೆ

ಯಾತ್ರೆ ಮುಗಿದಿರಲವು ನನಗದೇಕೆ?

ಎತ್ತಿಹಾಕಿರಿ ಅವನು ಹಾಸಿಗೆಯಲಿರುವಂಗೆ

ಎದ್ದು ಬರಲಿ ಅವನು ನರಳಲೇಕೆ?


ಸತ್ತ ಕೂಡಲೆ ನೀವು ಮರೆತುಬಿಡಿ ನನ್ನನ್ನು

ಕಟ್ಟಹೋಗಲು ಬೇಡಿ ಗೋರಿ ನನಗೆ

ಗೋರಿಗಳ ಊರಲ್ಲಿ ದಾರಿ ಹುಡುಕುವುದು ಹೇಗೆ

ಬದುಕಿ ಬಾಳುವ ಜನರ ಪ್ರೀತಿ ಮನೆಗೆ


ಬರುವುದೆಲ್ಲವ ಬಳಸಿ ಉಳಿದುದನು ಬದಿಗಿರಿಸಿ

ಕೂಗಿ ಕರೆಯಿರಿ ಪ್ರಾಣಿ ಪಕ್ಷಿಗಳನು

ತಿಂದು ಸಂತಸ ಪಡಲಿ ಒಂದು ದಿನ ಅವು ಎಲ್ಲ

ಸಾರ್ಥಕವು ಆದೀತು ನನ್ನ ಬದುಕು!

*****

ಡಾ. ರಾಜೇಂದ್ರ ಬುರಡಿಕಟ್ಟಿ

(ವಿಶ್ವ ಅಂಗಾಂಗ ದಾನದ  ದಿನದ ಓದಿಗಾಗಿ ಹಿಂದೆಂದೋ ಬರೆದ ಒಂದು ಗೀತೆ…)

13-08-2021 (World Organ Donation Day)

 

Sunday, August 8, 2021

. ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!

ಈ ವಾರದ ಭಾವಗೀತೆ….. 

ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!








ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ

ಅಕ್ಕಪಕ್ಕ ಕುಳಿತುಕೊಂಡರು ಮಾತನಾಡದಾದೆವು




ಎಲ್ಲೊ ದೂರ ಕಂಡರೂ ಮುಖವು ಅರಳುತಿದ್ದವು

ಮಾತುಗಳನು ಕೇಳಲು ಮನಸು ಕಾಯುತಿದ್ದವು

ಒಂದು ದಿವಸ ಕಾಣದಿದ್ದರೆ ಮಾತುಗಳನು ಆಡದಿದ್ದರೆ

ಮನಸು ಕುದಿಯುತಿದ್ದವು ನಮ್ಮ ಮನಸು ಕುದಿಯುತಿದ್ದವು…

ಎಂಥ ದಿವಸ ಬಂದುಬಿಟ್ಟವು..

 

ಈಗ ಎದುರು ಬಂದರೂ ಕಣ್ಣು ಕಣ್ಣು ಸೇರವು

ಮುಖದಿ ನಗೆಯ ಸೂಸಿ ನಾವು ಸುಖವ ಪಡೆಯದಾದೆವು

ಮಾತಿನಲ್ಲಿ ಸುರಿಯುತಿದ್ದ ಜೇನು ಬತ್ತಿತು

ಮಧ್ಯೆ ಬೆಟ್ಟ ಬೆಳೆಯಿತು ಮೌನದ ಬೆಟ್ಟ ಬೆಳೆಯಿತು

ಎಂಥ ದಿವಸ ಬಂದುಬಿಟ್ಟವು..

*****

ರಾಬು (08082021)