Sunday, January 30, 2022

ರಾಷ್ಟ್ರಪಿತ ದಿವಂಗತ! ಅದೃಷ್ಟಹೀನ ಭಾರತ!

(ಗಾಂಧೀಜಿಯನ್ನು ಕೊಂದಾಗ ರಾಷ್ಟ್ರಕವಿ ಕುವೆಂಪು ಮಾಡಿದ ಆಕಾಶವಾಣಿ ಪ್ರಸಾರ ಭಾಷಣ)

ರಾಷ್ಟ್ರಪಿತ ದಿವಂಗತ ಉನ್ಮತ್ತ ಹಸ್ತ ಹತ!

ನರಹೃದಯದ ವಿಷವಾರ್ಧಿಗೆ  ಜೀವಾಮೃತ ಸಮರ್ಪಿತಃ

ಕ್ಷಮಿಸು ಓ ಜಗತ್ ಪಿತಃ ಅದೃಷ್ಟಹೀನ ಭಾರತ!

ನಮ್ಮ ರಾಷ್ಟ್ರದ ಪಿತಾಮಹನು ರಣರಂಗದ ಮಧ್ಯೆ ಶರಶಯ್ಯೆಯಲ್ಲಿ ಅಸ್ತಂಗತನಾದನು. ನಮ್ಮ ಸಾಕ್ರೆಟೀಸನಿಗೆ ವಿಷಪಾನ ಮಾಡಿಸಿಯಾಯಿತು. ನಮ್ಮ ಯೇಸುಕ್ರಿಸ್ತನು ಶಿಲುಬೆಗೇರಿದನು. ಜಗದ್ವಂದ್ಯ ಲೋಕಗುರು ಪೂಜ್ಯ ಮಹಾತ್ಮಾಗಾಂಧಿ ತಲೆಕೆಟ್ಟ ಕೊಲೆಗಾರನೊಬ್ಬನ ಕ್ರೂರ ಹಸ್ತದಿಂದ ಪ್ರಾರ್ಥನಾ ಸಭೆಯ ವೇದಿಕೆಯ ಮೇಲೆ, ತಮ್ಮಿಬ್ಬರು ಮೊಮ್ಮಕ್ಕಳ ಪ್ರೇಮ ಬಾಹುಗಳ ನಡುವೆ ನಿಂತು, ತಮ್ಮನ್ನು ಸ್ವಾಗತಿಸುತ್ತಿದ್ದ ವಿಪುಲಜನವೃಂದಕ್ಕೆ ತಮ್ಮೆರಡು ಕೈಗಳನ್ನೂ ಹಣೆಗೆತ್ತಿ ನಮಸ್ಕರಿಸುತ್ತಿದ್ದಾಗಲೇ ಮೃತ್ಯುರಾಹುವಿಗೆ ತುತ್ತಾದರು. ವೇದಿಕೆಯ ಮೇಲೆ ಅತೀ ಸಮೀಪದಲ್ಲಿ ಕುಳಿತ ಹಿಂದೂ ಯುವಕನೊಬ್ಬನು ಚಿಮ್ಮಿ ನಿಂತು ಅವರ ತೆರೆದೆದೆಗೆ ಗುಂಡಿಟ್ಟು ಕೊಂದನಂತೆ. ಹಿಂದೆಂದೂ ಭರತಖಂಡದಲ್ಲಿ ನಡೆಯದಂತಹ ಇಂತಹ ಅಸಹ್ಯವಾದ ಘೋರ ಪಾತಕವನ್ನು ಇಂದು ನಡೆಸಿ ನಮ್ಮ ದೇಶಕ್ಕೆ ದೇಶವೇ ಜಗತ್ತಿನ ಮುಂದೆ ಮಹಾಪರಾಧಿಯಾಗಿದೆ; ಅವಮಾನಿತವಾಗಿದೆ. ನಾವು ತಲೆಯೆತ್ತಿ ನಡೆಯದಂತಾಗಿದೆ. ನಮ್ಮ ದೇಶ ತಿರಸ್ಕಾರಕ್ಕೂ ಶಾಪಕ್ಕೂ ಪಕ್ಕಾಗಿದೆ. ಈ ಪಾಪಕಾರ್ಯಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ನಮಗೆ ಯೇಸುಕ್ರಿಸ್ತನನ್ನು ಮೊಳೆಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೇನೋ ಎಂದು ಹೆದರಿಕೆಯಾಗುತ್ತಿದೆ.

ಮತ್ತೇನಿದ್ದೀತು ನಾವು ಕೈಕೊಳ್ಳುವ ಆ ಪ್ರಾಯಶ್ಚಿತ್ತ? ಯಾವ ಮಹಾಪುರುಷನ ಪ್ರೇಮಮಯ ಹೃದಯವು ಗುಂಡು ತಗುಲಿ ಬಿರಿಯಿತೋ ಆ ಹೃದಯದ ಆಶೆ ಆಕಾಂಕ್ಷೆ ಆದರ್ಶಗಳನ್ನು ಅಚಂಚಲವಾದ ದೃಢತೆಯಿಂದ ಆಚರಿಸಿ ಸಾಧಿಸುವುದೊಂದೇ ನಮಗೆ ಮುಂದಿರುವ ಶ್ರೇಯೋಮಾರ್ಗ. ಶಿಲುಬೆರೇರಿದ ಯೇಸು ಕ್ರಿಸ್ತನಿಗೆ, ‘ಕ್ಷಮಿಸು ತಂದೆ!’ ಎಂದು ಮಾನವರ ಪರವಾಗಿ ಭಗವಂತನನ್ನು ಬೇಡಲು ಸ್ವಲ್ಪ ಪ್ರಜ್ಞೆಯಾದರೂ ಇತ್ತಂತೆ. ನಿನ್ನೆ ಮಡಿದ ನಮ್ಮ ಕ್ರಿಸ್ತನಿಗೆ ಅಷ್ಟಕ್ಕೂ ಅವಕಾಶ ಕೊಡದಷ್ಟು ಬೇಗನೆ ಪ್ರಜ್ಞೆ ಹೋಯಿತಂತೆ. ಆದರೂ ಆತನ ಮುಖಮುದ್ರೆ ಪ್ರಶಾಂತವಾಗಿ, ಕ್ಷಮಾಶೀಲವಾಗಿ, ಧ್ಯಾನಪೂರ್ಣ ಶಾಂತಿಯಿಂದ ತುಂಬಿ, ‘ಕ್ಷಮಿಸು ತಂದೆ!’ ಎನ್ನುವಂತಿತ್ತೆಂದು ಆ ವರ್ಣನೆಯನ್ನು ಕೇಳಿದವರೆಲ್ಲರಿಗೂ ವೇದ್ಯವಾಗಿರುಬೇಕು. ಮೃತಸ್ಥಿತಿಯಲ್ಲಿಯೂ ಅಮೃತವನ್ನೇ ಪ್ರೋಕ್ಷಿಸುತ್ತಿದ್ದ ಮುಖಮುದ್ರೆಯ ಸಂದೇಶ-ಕ್ಷಮೆ, ಪ್ರೇಮ, ಸತ್ಯ, ಅಹಿಂಸೆ ಇವು ನಮಗೆ ರಕ್ಷಾಮಂತ್ರಗಳಾಗಬೇಕು. ಹಾಗಾದರೆ ಮಾತ್ರವೇ ನಮ್ಮ ದೇಶದ ಸದ್ಯೋಜಾತ ಸ್ವಾತಂತ್ರ್ಯಕ್ಕೆ ರಕ್ಷಾಯಂತ್ರ ಸಿದ್ಧವಾಗುತ್ತದೆ.

ಎಷ್ಟು ಅನಿರೀಕ್ಷಿತ, ಎಷ್ಟು ಆಕಸ್ಮಿಕ, ಎಷ್ಟು ಭಯಂಕರವಾಗಿತ್ತು ನಿನ್ನೆ ಬಂದ ಆ ಘೋರವಾರ್ತೆ! ಮೊನ್ನೆತಾನೆ ಆಮರಣ ಪರ್ಯಂತ ಕೈಕೊಂಡ ಉಪವಾಸ ವ್ರತದಿಂದ ದೆಹಲಿಯ ವಿಷಸಮುದ್ರವನ್ನೂ ಕ್ಷೀರಸಾಗರವಾಗಿ ಪರಿವರ್ತಿಸಿ, ಲೋಕದ ಪ್ರಶಂಸೆಗೂ ಪೂಜೆಗೂ ಕೃತಜ್ಞತೆಗೂ ಪಾತ್ರರಾಗಿದ್ದರು. ಅಲ್ಲದೇ ನಮ್ಮೆಲ್ಲರಲ್ಲಿ ಮತ್ತೊಂದು ಹೊಸ ಆಶೆಯನ್ನೂ ಪ್ರಚೋದಿಸಿದ್ದರು. ನೂರಿಪ್ಪತ್ತೈದು ವರ್ಷದ ಹೊಂಗನಸು ಎಪ್ಪತೆಂಟಕ್ಕೇ ಬಿರಿಯುವಂತೆ ಮಾಡಿದ ಈಶ್ವರೇಚ್ಛೆಯ ಕಟುಲೀಲೆಗೆ ಏನು ಹೇಳುವುದು? ತಲೆಬಾಗಿ ಮೂಖರಾಗುವುದೊಂದೇ ದಾರಿ. ಆ ವಾರ್ತೆ ಕಿವಿಗೆ ಬಿದ್ದಾಗ ಜನ ನಕ್ಕುಬಿಟ್ಟರು. ಅದನ್ನು ತಿಳಿಸಿದವರಿಗೆ ಛಿಃ ಮಾಡಿದರು. ಸತ್ತರೆಂದು ನಂಬುವುದಾದರೂ ಎಂತು? ಗುಂಡು ಬಿದ್ದು ಸತ್ತರೆಂದಾಗಲೂ ಯಾರೂ ನಂಬದೆಹೋದರು. ಏನು?  ಗಾಂಧೀಜಿಗೆ? ಗುಂಡಿನೇಟು? ಅಸಾಧ್ಯ! ಅಸಂಭವ! ಅವಿವೇಕ! ಸುಳ್ಳು! ಖಂಡಿತಾ ಸುಳ್ಳು! 

ಆಕಾಶವಾಣಿ ಲೋಕವಾರ್ತೆಯನ್ನು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದಾಗ ನಂಬಲೇಬೇಕಾಗಿ ಬಂತು. ಆಗಂತೂ ಜನರಲ್ಲುಂಟಾದ ಕಳವಳ, ಭೀತಿ, ನಿರಾಶೆ, ಸಂಕಟ ಇವುಗಳನ್ನು ಹೇಳತೀರದು. ಬದುಕಿನ ಅರ್ಥವೇ ಇದ್ದಕ್ಕಿದ್ದಂತೆ ಶೂನ್ಯವಾದಂತಾಯಿತು. ಜೀವನದ ಪ್ರಯೋಜನವೇ ಕೊನೆಮುಟ್ಟಿದಂತೆ ತೋರಿತು. ಗಾಂಧಿ ಇಲ್ಲದ ಜಗತ್ತು! ತೆಗೆ ತೆಗೆ ಅದೆಲ್ಲಿಯ ಮಾತು! ಎರಡು ತಲೆಮಾರುಗಳಿಂದ ಪ್ರಪಂಚದ, ಅದರಲ್ಲಿಯೂ ಭರತಖಂಡದ ಬಾಳನ್ನೆಲ್ಲ ಆವರಿಸಿ, ಉಸಿರನ್ನೆಲ್ಲ ತುಂಬಿ ಚೇತನಕ್ಕೆ ಶಕ್ತಿಯಾಗಿ, ಕಣ್ಣಿಗೆ ಬೆಳಕಾಗಿ, ದಾರಿಗೆ ಸಂಗಾತಿಯಾಗಿ, ಕೆಳೆಯನಾಗಿ, ನಾಯಕನಾಗಿ, ಸುಧಾರಕನಾಗಿ, ಮಾರ್ಗದರ್ಶಿಯೂ ಗುರುವೂ ಆಗಿದ್ದ ಗಾಂಧಿ ಇಲ್ಲದ ಜಗತ್ತು ಜಗತ್ತೆ? ಅದೊಂದು ಅಮಂಗಲ ವಿಪತ್ತು! ಉಳಿದವರ ಮಾತಿರಲಿ! ನೆಹರು, ಪಟೇಲ್, ಆಜಾದ್ ಅಂಥವರಿಗೂ ಏನಾಯಿತೆಂಬುದನ್ನು ರೇಡಿಯೋದಿಂದ ಕೇಳಿದ್ದೇವೆ. ಭಾರತದ ಪ್ರಧಾನಿ ಮತ್ತು ಉಪಪ್ರಧಾನಿ ಇಬ್ಬರೂ ದೆಹಲಿಯಿಂದ ಮಾಡಿದ ಪ್ರಸಾರ ಭಾಷಣಗಳಲ್ಲಿ ತಮ್ಮ ತಮ್ಮ ಸಹಜ ಧೈರ್ಯವನ್ನೂ ಒತ್ತಿ ಮೀರಿಬಂದ ದುಃಖಾತಿಶಯಕ್ಕೆ ಗದ್ಗದ ಧ್ವನಿ ನೀಡಿದುದನ್ನು ನಾವೆಲ್ಲರೂ ಆಲಿಸಿ ಮರುಗಿದ್ದೇವೆ.

 

ನಿಜ, ನಮ್ಮ ದುಖಃಕ್ಕೆ ತೀರವಿಲ್ಲ; ನಮ್ಮ ನಷ್ಟಕ್ಕೆ ಅಳತೆಯಿಲ್ಲ. ಎಂದೆಂದಿಗೂ ಪಡೆಯಲಾಗದ ಒಡವೆ ಚ್ಯುತವಾಗಿದೆ. ನಮ್ಮ ಆಧ್ಯಾತ್ಮಿಕ ರಿಕ್ತತೆಯೋ ಪಾತಾಳದಂತೆ ಗಂಭೀರವಾಗಿದೆ; ಆಕಾಶದಂತೆ ವಿಸ್ತಾರವಾಗಿದೆ. ನಿನ್ನೆ ಸರ್ವದೇಶಗಳನ್ನೂ ನಗುವಂತೆ ಶ್ರೀಮಂತರಾಗಿದ್ದವರು ಇಂದು ಎಲ್ಲ ನಾಡುಗಳೂ ನಗುವಂತೆ ದಟ್ಟದರಿದ್ರರಾಗಿದ್ದೇವೆ. ಆದರೂ, ಪಂಡಿತ ನೆಹರು ತಮ್ಮ ಭಾಷಣದಲ್ಲಿ ಹೇಳಿದಂತೆ, ಕ್ಲೈಬ್ಯಕ್ಕಿದು ಕಾಲವಲ್ಲ; ಅಧೈರ್ಯಕ್ಕಿದು ಅಪಕಾಶವಲ್ಲ; ಅಸ್ಥಿರತೆಗೆ ಸಮಯವಲ್ಲ. ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತ ಕೂರುವುದು ಅವಿವೇಕವೇ. ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊಟ್ಟಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀರಾಮಚಂದ್ರನಿಗೆ ಕೊನೆ ಬಂದ ಪರಿಯನ್ನೂ ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. 

ನಮಗೆ ಅನರ್ಥವಾಗಿರುವುದು ಈಶ್ವರನ ಸಮದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮರೇ


ಹೇಳುತ್ತಿದ್ದರು: ‘ನನ್ನನ್ನು ಕೊಲ್ಲುವ ಸಾಮರ್ಥ್ಯ ಈಶ್ವರನಿಗೊಬ್ಬನಿಗೇ ಇದೆ’ ಎಂದು. ಕೊಂದವನು ಯಃಕಶ್ಚಿತ್ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು. ಸರ್ವಮಂಗಲ ನಿಧಿಯಾದ ಭಗವಂತನ ಇಚ್ಛೆಯಲ್ಲಿ ಶ್ರದ್ಧೆಯಿಟ್ಟು ಸಮಾಧಾನ ತಂದುಕೊಂಡು ಮುಂದಿನ ಕಾರ್ಯಕ್ಕೆ ಸೊಂಟಕಟ್ಟಿ ನಿಲ್ಲಬೇಕು. ಆತ್ಮದ ಅಮೃತತ್ವದಲ್ಲಿಯೂ ಅವತಾರಗಳಲ್ಲಿಯೂ ಜನ್ಮಾಂತರ ಮತ್ತು ಪುನರ್ಜನ್ಮಗಳಲ್ಲಿಯೂ ಶ್ರದ್ಧಾಳುಗಳಾದ ನಮಗೆ ಪೂಜ್ಯ ಗಾಂಧೀಜಿಯ ದೇಹಾವಸಾನವು ಪುರರುತ್ಥಾನಕ್ಕೆ ಪ್ರಚೋದನವಾಗಬೇಕು. ಸ್ಥಿತಿಪ್ರಜ್ಞರಾದ ಗಾಂಧೀಜಿ ಮೃತರಾದರು ಎಂಬುದು ಲೋಕೋಪಚಾರದ ಮಾತು. ನಿಜವಾದ ನಿಜವಲ್ಲ. ಏಕ ದೇಹಸ್ಥವಾಗಿದ್ದ ಚೇತನ ಈಗ ಸರ್ವತ್ರವಾಗಿದೆ. ಆ ಶಕ್ತಿಗೆ ಅಂತ್ಯವಿಲ್ಲ. ಕಾಲ ಕಳೆದಂತೆಲ್ಲ ಅದು ಬಹುಗುಣಿತವಾಗುತ್ತಾ ಹೋಗುತ್ತದೆ. ಭಕ್ತಿಸೂತ್ರಗಳು ಹೇಳುವಂತೆ ಅಂತಹ ವಿಭೂತಿಗಳ ಅವಿರ್ಭಾವದಿಂದ, ‘ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾಚೇಯಂ ಭೂರ್ಭವತಿ’: ‘ಪಿತೃಗಳು ನಲಿಯುತ್ತಾರೆ; ದೇವತೆಗಳು ಕುಣಿಯುತ್ತಾರೆ. ನಮ್ಮೀ ಪೃಥ್ವಿ ಸನಾಥಳಾಗುತ್ತಾಳೆ.’ ಗಾಂಧೀಜಿಯನ್ನು ಹೆತ್ತ ನಮ್ಮೀ ಪೃಥ್ವಿ ಎಂದೆಂದಿಗೂ ಅನಾಥೆಯಲ್ಲ, ನಿತ್ಯ ಸನಾಥೆ! ಆ ಪೂಜ್ಯ ಮಹಾತ್ಮನು ನಮ್ಮನ್ನು ಕ್ಷಮಿಸಲಿ; ಆತನ ಕೃಪೆ ನಮ್ಮನ್ನು ಕೈಬಿಡದೆ ಕಾಯಲಿ; ಆ ದೇವಮಾನವನ ದಿವ್ಯಸ್ಮೃತಿ ಕಂಗೆಡುತ್ತಿರುವ ನಮ್ಮ ಜನತೆಯ ಮುನ್ನಡೆಗೆ ಗಗನೋನ್ನತ ದೀಪಸ್ತಂಭವಾಗಲಿ!

 

ಮಹಾತ್ಮಾ ಗಾಂಧೀಕಿ ಜೈ!

ಜಯ್ ಹಿಂದ್!

******

(ಇದು ಮಹಾತ್ಮಾಗಾಂಧೀಜಿಯವರು ಕೊಲೆಯಾದ ಮರುದಿನ ದಿನ (31-01-1948) ರಾಷ್ಟ್ರಕವಿ ಕುವೆಂಪು ಅವರು ಮೈಸೂರು ಆಕಾಶವಾಣಿಯಿಂದ ಮಾಡಿದ ಪ್ರಸಾರ ಭಾಷಣ. ಖಾತ್ರಿಗಾಗಿ ನೋಡಿ: ಕುವೆಂಪು ಸಮಗ್ರ ಗದ್ಯ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ಪುಟ ಸಂಖ್ಯೆ:328-330. ಈ ಭಾಷಣವನ್ನು ಕುವೆಂಪು ಅವರ ಬರೆಹಗಳ ಸಂಗ್ರಹದಿಂದ ಎತ್ತಿ ಕೊಟ್ಟಿದ್ದು: ಡಾ. ರಾಜೇಂದ್ರ ಬುರಡಿಕಟ್ಟಿ)

 

 

 

Monday, January 24, 2022

ಅಂಗೈ ಎಂಬುದೇ ಆಕಾಶವಾದಾಗ…..

 

ಅಂಗೈ ಎಂಬುದೇ ಆಕಾಶವಾದಾಗ…..

ಕನ್ನಡದ ಸಾಹಿತ್ಯದಲ್ಲಿನ ಇತ್ತೀಚೆಗಿನ ಒಂದು ವಿದ್ಯಮಾನವೆಂದರೆ ಸಂಶೋಧನೆ ವಿಮರ್ಶೆಯಂಥಹಬೌದ್ಧಿಕ ಬರೆಹಗಳಲ್ಲಿಯೇ ತಮ್ಮನ್ನು ಗಾಢವಾಗಿ ತೊಡಗಿಸಿಕೊಂಡ ಕೆಲವು ಲೇಖಕರು ಲೋಹಿಯಾ ಅವರರಾಜಕೀಯದ ಮಧ್ಯೆ ಬಿಡುವುರೀತಿಯಲ್ಲಿ ಒಂದೆರಡು ಭಾವನಾತ್ಮಕ ಸ್ಪರ್ಶದಹಗುರ ತೂಕ ಕೃತಿಗಳನ್ನು ಪ್ರಕಟಿಸುತ್ತಿರುವುದು. ಹೀಗೆಲಲತವಹಬರೆಹಗಳನ್ನು ಬರೆಯುವವರೇ ಅಲ್ಲ ಎಂದು ಓದುಗ ವರ್ಗ ಭಾವಿಸಿದಂತಹ ಲೇಖಕರೂ ಇದರಲ್ಲಿ ಸೇರಿದ್ದಾರೆ. ಡಾ ರಹಮತ್ ತರೀಕೆರೆ ಅವರಹಿತ್ತಲ ಜಗತ್ತುಇಂತಹ ಮಾದರಿಗೆ ಒಂದು ಉದಾಹರಣೆ. ಮಾದರಿಯ ಬರೆವಣಿಗೆಗೆ ಸೇರಬಹುದಾದ ಮತ್ತೊಂದು ಕೃತಿ ಇತ್ತೀಚೆಗೆ ಪ್ರಕಟವಾಗಿರುವ ಡಾ. ಎಲ್. ಸಿ. ಸುಮಿತ್ರಾ ಅವರಅಂಗೈ ಅಗಲದ ಆಕಾಶ’.

ಡಾ. ಎಲ್.ಸಿ. ಸುಮಿತ್ರಾ ಅವರನ್ನು ಬಹಳಷ್ಟು ಜನವಿಮರ್ಶಕಿಎಂದು ಕರೆಯುವುದುಂಟು. ಹೀಗೆ ಸಾಹಿತ್ಯ ಪ್ರಕಾರವೊಂದಕ್ಕೆ ಲೇಖಕರನ್ನು ಲೇಬಲ್ ಮಾಡುವುದು ಎಷ್ಟು ಸರಿಯೋ ತಿಳಿಯದು. ಏಕೆಂದರೆ ಡಾ. ಎಸ್. ಎಲ್. ಭೈರಪ್ಪನವರಂಥ ಕೆಲವರನ್ನು ಬಿಟ್ಟರೆ ಹೊಸಗನ್ನಡದ ಬಹುತೇಕ ಲೇಖಕರು ಒಂದೇ ಪ್ರಕಾರಕ್ಕೆ ಅಂಟಿಕೊಂಡವರಲ್ಲ. ಸುಮಿತ್ರಾ ಅವರನ್ನೇ ನೋಡುವುದಾದರೆ ಅವರು ವಿಮರ್ಶಕಿ ಎಂದು ಗುರುತಿಸಲ್ಪಟ್ಟರೂ ಅವರು ವಿಮರ್ಶೆಗಿಂತ ಇತರೆ ಬರೆಹಗಳನ್ನು ಬರೆದದ್ದೇ ಹೆಚ್ಚು. ಕುವೆಂಪು ಮತ್ತು ಕಾರಂತರ ಕಾದಂಬರಿಗಳಲ್ಲಿ ಪರಿಸರವನ್ನು ಕುರಿತು ಅವರು ಸಂಶೋಧನೆ ಮಾಡಿ ಬರೆದಿರುವಕಾಡು ಕಡಲುಕೃತಿಯನ್ನು ಒಳಗೊಂಡಂತೆ ಅವರ ಇತರೆ ವಿಮರ್ಶಾ ಕೃತಿಗಳೆಂದರೆವಿಭಾವ’ ‘ನಿರುಕ್ತಮತ್ತುಓದಿನ ಸುಖ’. ಇದರಾಚೆ ಅವರು ಬರೆದಿರುವಬಕುಲದ ದಾರಿ’ ‘ತುಂಬೆಹೂಎಂಬ ಕವನ ಸಂಕಲನಗಳು, ‘ಗುಬ್ಬಿಹಳ್ಳದ ಸಾಕ್ಷಿಯಲ್ಲಿಎಂಬ ಕಥಾಸಂಕಲನ, ‘ಗದ್ದೆಯಂಚಿನ ದಾರಿಪ್ರಬಂಧ ಸಂಕಲನ, ಅಮೃತಾ ಪ್ರೀತಂ ಅವರ ಬಹು ಚರ್ಚಿತ ಕೃತಿಪಿಂಜರ್ ಅನುವಾದ ಅವರನ್ನುವಿಮರ್ಶಕಿಎಂಬನಾಮಬಂಧನ’ದಿಂದ ಬಿಡಿಸಬಹುದಾದ ಸಶಕ್ತ ಸೃಷ್ಟಿಶೀಲ ಬರೆಹಗಳು.

ಇತ್ತೀಚಿನ ಪ್ರಕಟವಾಗಿರುವ ಅವರ ಕೃತಿಅಂಗೈ ಅಗಲದ ಆಕಾಶಪುಟ್ಟ ಮತ್ತು ಮಧ್ಯಮ ಗಾತ್ರದ  ಹದಿನೇಳು ಲೇಖನಗಳಿರುವ ಒಂದು ಸಂಗ್ರಹ. ಯುವಲೇಖಕ ಮಂಡ್ಯದ ರಾಜೇಂದ್ರ ಪ್ರಸಾದ್ ಅವರು ಪುಸ್ತಕವನ್ನು ತಮ್ಮಸಂಕಥನ ಮೂಲಕ ಪ್ರಕಟಿಸಿದ್ದಾರೆ. ಇದಕ್ಕೆ ಡಾ. ರಹಮತ್ ತರೀಕೆರೆ ಅವರ ಮುನ್ನುಡಿ ಉಷಾ ಪಿ. ರೈ ಅವರ ಬೆನ್ನುಡಿಗಳಿವೆ. ಲಲಿತ ಪ್ರಬಂಧಗಳ ಸ್ವರೂಪಕ್ಕೆ ಹತ್ತಿರ ಹತ್ತಿರ ಇರುವ ಇವುಗಳಲ್ಲಿ ಲೇಖಕರು ಕಡ್ಡಾಯವಾಗಿ ಪಾಲ್ಗೊಳ್ಳುವ ಕಾರಣ ಅವು ಆತ್ಮಕಥಾ ಸ್ವರೂಪವನ್ನು ಪಡೆದುಕೊಂಡಿವೆ. ಹಾಗಾಗಿಸ್ಮೃತಿ ಚಿತ್ರಗಳುಎಂದು ಕರೆಯಲ್ಪಟ್ಟಿವೆ.

ಇಲ್ಲಿನ ಲೇಖನಗಳ ಬಗ್ಗೆ ಹೇಳುವ ಮೊದಲು ಲೇಖಕರ ಬಗ್ಗೆ ಎರಡು ಮಾತು. ಮೂಲತಃ ಮಲೆನಾಡಿಗನಲ್ಲದಿದ್ದರೂ ಬಹಳಷ್ಟು ವರ್ಷಗಳ ಕಾಲ ಮಲೆನಾಡಿನ ಪರಿಸರದಲ್ಲಿ ಉದ್ಯೋಗದ ಕಾರಣಕ್ಕಾಗಿ ವಾಸಗಾಗಿದ್ದ ನನ್ನ ಅನುಭವದ ಮಿತಿಯಲ್ಲಿ ಹೇಳುವುದಾದರೆ ಮಲೆನಾಡಿನ ವಿದ್ಯಾವಂತರು ಉದ್ಯೋಗಕ್ಕಾಗಿ ಅನಿವಾರ್ಯ ಎನಿಸುವ ಪರಿಸ್ಥಿತಿ ಉಂಟಾದರೆ ಮಾತ್ರ ಮಲೆನಾಡನ್ನು ಬಿಟ್ಟು ಹೋಗಲು ತಯಾರಾಗುತ್ತಾರೆ. ಆಯ್ಕೆಗಳಿದ್ದರಂತೂ ಅವರು ಹೊಸ ಅನುಭವಕ್ಕಾಗಿ ಇತರರಂತೆ ಬೇರೆಯ ಪರಿಸರಕ್ಕೆ ಹೋಗುವುದನ್ನು ಮೊದಲ ಆಯ್ಕೆಯಾಗಿ ಸ್ವೀಕರಿಸುವುದಿಲ್ಲ. ಅದಕ್ಕೆ ಬದಲಾಗಿ ತಮ್ಮೂರಿನ ತೋಟ ತುಡಿಕೆಗಳಲ್ಲಿಯೇ ಉಳಿದುಕೊಳ್ಳಲು ಇಚ್ಚಿಸುತ್ತಾರೆ. ಸುಮಿತ್ರಾ ಅವರ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಮೈಸೂರು ಕಡೆ ಒಂದೆರಡು ವರ್ಷ ಹೋಗಿಬಂದದ್ದು ಬಿಟ್ಟರೆ ಅವರ ತಮ್ಮ ಉಳಿದೆಲ್ಲ ಬದುಕನ್ನು ಬದುಕಿದ್ದು ಬದುಕುತ್ತಿರುವುದು ಮಲೆನಾಡಿನಲ್ಲಿಯೇ.

ಕಾರಣದಿಂದಲೇ ಇಲ್ಲಿನ ಬರೆಹಗಳೆಲ್ಲವೂ ಮಲೆನಾಡಿನ ಬದುಕನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುವ  ಮಲೆನಾಡಿನ ಚಿತ್ರಗಳೇಆಗಿವೆ. ಇದೇ ಪರಿಸರದ ಲೇಖಕರರ ಕೃತಿಗಳಾದ ಕುವೆಂಪು ಅವರಮಲೆನಾಡಿನ ಚಿತ್ರಗಳುತೇಜಸ್ವಿಯವರಪರಿಸರದ ಕತೆಶಿವಾನಂದ ಕರ್ಕಿ ಅವರಖಾನೇಷುಮಾರಿ   ನೆಂಪೇ ದೇವರಾಜ್ ಅವರಆದ್ರಿ ಮಳೆಯಲ್ಲಿ ಆದವ್ನೆ ಗಂಡಮುಂತಾದ ಕೃತಿಗಳನ್ನು ನೆಪಿಸುವ ಕೃತಿ ಕಳೆದ ಶತಮಾನದ ಉತ್ತರಾರ್ಧದ ಮಲೆನಾಡಿನ ಬದುಕಿನ ವೈವಿದ್ಯಮಯ ಚಿತ್ರಣಗಳನ್ನು ಕಟ್ಟಿಕೊಡುವ ಕೃತಿ. ಇಲ್ಲಿನ ಕೆಲವು ಬರೆಹಗಳನ್ನು ನೋಡಬಹುದು.

ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರುಹೆಣ್ಣು ಮಾತ್ರ ಬರೆಯಬಹುದಾದವುಎಂದು ಹೇಳಿ ನಿದರ್ಶನಕ್ಕೆ ಕೊಡುವಲಂಗದ ಕಥೆಎಂಬ ಕೃತಿಯ ಮೊದಲನೆಯ ಲೇಖನವನ್ನೇ ಮೊದಲು ನೋಡೋಣ. ಈಗಲೆಹಂಗಾಆಗಿ ಪ್ರಸಿದ್ಧಿ ಪಡೆದಿರುವ ಹುಡುಗಿಯರ ಹಳೆಯ ಕಾಲದ ಸಾಮಾನ್ಯ ಉಡುಗೆಯಾದ ಲಂಗದ ಸುತ್ತಾ ತನ್ನ ಬಾಲ್ಯ ಮತ್ತು ತಾರುಣ್ಯದ ಅನುಭವಗಳನ್ನು ಕಟ್ಟಿಕೊಡಲು ಇಲ್ಲಿ ಲೇಖಕಿ ಪ್ರಯತ್ನಿಸಿದ್ದಾರೆ. ಬಾಲಕಿಯರಾಗಿದ್ದಾಗ ಹೊಸಲಂಗ ಉಟ್ಟು ಸಂಭ್ರಮಿಸುತ್ತಿದ್ದ ಸಂದರ್ಭಗಳು,


ಲಂಗಗಳು ಮಾಡುತ್ತಿದ್ದ ಅವಾಂತರಗಳು ಇವುಗಳನ್ನು ಹೇಳುತ್ತಲೇ ಕಳೆದು ಹೋಗುತ್ತಿರುವ ಉಡುಪಿನ ಸಂಸ್ಕೃತಿಯೊಂದರ ಬಗ್ಗೆ ಕಂಡೂಕಾಣದಷ್ಟಿರುವ ಸಣ್ಣಪ್ರಮಾಣದ ಅಸಮಾಧಾನದ ಜೊತೆಗೆ ಹೊಸದಾಗಿ ಟೈಟ್ ಜಿನ್ ಪ್ಯಾಂಟ್ ಹಾಕಿಕೊಂಡು ಯಾರುಯಾರನ್ನೋ ಖುಷಿಪಡಿಸಲು ಹೋಗಿ ದೇಹದ ಆಕಾರವನ್ನು ಒತ್ತಾಯಪೂರ್ವಕ ಪ್ರಯತ್ನಗಳಿಂದವಿಕಾರಗೊಳಿಸುತ್ತಿರುವ ಹುಡುಗಿಯರ ಬಗೆಗಿನ ಮರುಕ ಕೂಡ ಇದೆ. ಬರೆಹವನ್ನು ನೆಹರು ಮರಣದಂತಹ ಒಂದು ಐತಿಹಾಸಿಕ ಘಟನೆಯೊಂದಿಗೆ ತಳುಕುಕಾಗಿರುವುದರಿಂದ ಸಹಜವಾಗಿ ಅದು ಯಾವ ಕಾಲಘಟ್ಟದ ಮಲೆನಾಡಿನ ವಿದ್ಯಮಾನ ಎಂಬುದನ್ನು ಅರಿಯಲು ಸಹಾಯವಾಗಿದೆ. ಅಪ್ಪನ ನೆನಪಿನ ಆರ್ದತೆಯೊಂದಿಗೆ ಲೇಖನ ಪೂರ್ಣಗೊಳ್ಳುವಾಗ ಓದುಗರಿಗೆ ಅದರಲ್ಲೂ ಲಂಗದೊಂದಿಗೆ ನಿಕಟವಾಗಿರುವ ಮಹಿಳೆಯರಿಗಂತೂ ತಮ್ಮ ತಮ್ಮ ಅಪ್ಪಂದಿರ ನೆನಪು ಬರದೇ ಇರಲಾರದು.

ಮಾತಾಡಿಸ್ಕೊಂಡು ಬರೋದುಎಂಬ ಪುಟ್ಟ ಲೇಖನ ಕೊರೋನಾ ಕಾಲಘಟ್ಟದ ಮಾನವ ಸಂಬಂಧಗಳ ಬಂಧನ ಮತ್ತು ಸಡಿಲಿಕೆಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಈಗಿನಂತೆ ಸಂಪರ್ಕ ಸಾಧನಗಳು ಇಲ್ಲದಿದ್ದ ಆಗಿನ ಸಂದರ್ಭದಲ್ಲಿ ಕಾಯಿಲೆ ಬಿದ್ದವರನ್ನು ಮಾತನಾಡಿಸಿಕೊಂಡು ಹೋಗಲೆಂದೇ ಬಂಧು ಬಳಗದವರು ಬರುತ್ತಿದ್ದುದು, ಉಳಿದು ಹೋಗುತ್ತಿದ್ದುದು ಮಾನವ ಸಂಬಂಧಗಳನ್ನು ಹೇಗೆ ಗಟ್ಟಿಗೊಳಿಸುತ್ತಿತ್ತು ಎನ್ನುವುದನ್ನು ಇದು ಸೊಗಸಾಗಿ ಕಟ್ಟಿಕೊಡುತ್ತದೆ. ಇವತ್ತು ಮೊಬೈಲ್ ಫೋನುಗಳಂತಹ ಸಾಧನಗಳು ಬಂದಮೇಲೆ ದೂರದೂರ ಇದ್ದವರೆಲ್ಲ ಹತ್ತಿರವಾಗಿದ್ದೇವೆ ಎಂಬುದು ಎಷ್ಟು ಸತ್ಯವೋ ಹತ್ತಿರ ಹತ್ತಿರ ಇದ್ದವರು ದೂರ ಆಗಿದ್ದೇವೆ ಎಂಬುದೂ ಅಷ್ಟೇ ಸತ್ಯ! ಮೊದಲನೆಯದು ತಾನಾಗಿಯೇ ಎದ್ದು ಕಾಣುತ್ತದೆ. ಎರಡನೆಯದು ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುತ್ತದೆ.

ಹಿಂದೆ ಯಾರಾದರೂ ಬಂಧುಗಳು ಸ್ನೇಹಿತರು ಮೂರು ತಿಂಗಳೋ ಆರು ತಿಂಗಳೋ ಬಿಟ್ಟು ಮನೆಗೆ ಬಂದರೆ ಇಡೀ ರಾತ್ರಿ ಮಾತನಾಡಿದರೂ ಮಾತು ಮುಗಿಯುತ್ತಿರಲಿಲ್ಲ. ಆದರೆ ಇವತ್ತು ಎಷ್ಟೋ ವರ್ಷಗಳ ನಂತರ ಮನೆಗೆ ಬಂದವರ ಜೊತೆಗೆ ಕೂಡ ನಮ್ಮ ಮಾತುಗಳು ಹತ್ತಿಪ್ಪತ್ತು ನಿಮಿಷಗಳೂ ಮುಂದುವರೆಯುವುದಿಲ್ಲ. ಒಂದೆರಡು ಮಾತುಗಳು ಆದ ಮೇಲೆ ಮಾತು ನಿಂತು ಬಿಡುತ್ತವೆ. ಅನಿವಾರ್ಯವಾಗಿ ಟಿವಿ ಸ್ವಿಚ್ ಹಾಕಿಬಿಡುತ್ತೇವೆ. ಯಾವಾಗ ಬೇಕೋ ಆವಾಗ ಯಾರೊಂದಿಗೆ ಬೇಕೋ ಆವರೊಂದಿಗೆ ಹೇಗೆ ಬೇಕೋ ಹಾಗೆ ಮಾತನಾಡುವ ಅವಕಾಶಗಳಿರುವ ಸಂದರ್ಭದಲ್ಲಿ ಆಡಲೆಂದೂ

ಮಾತುಗಳನ್ನು ಕೂಡಿಟ್ಟುಕೊಳ್ಳಲಾರೆವು. ಕೂಡಿಟ್ಟ ಮಾತೆಲ್ಲವನ್ನೂ ಏಕಕಾಲಕ್ಕೆ ಹೊರಹಾಕಿದಾಗ ಉಂಟಾಗಬಹುದಾದಸುಮ್ಮನೆ ಮಾತನಾಡುವ ಆನಂದವನ್ನು ಅನುಭವಿಸಲೂ ಆರೆವು.  ಎಲ್ಲ ಸಂಬಂಧಗಳೂ ಇಂದು ವ್ಯವಹಾರಿಕವಾಗಿರುವ ಸಂದರ್ಭದಲ್ಲಿ ನಮ್ಮ ಮಾತುಗಳೂ ಕೂಡ ಭಾವತೀರ್ವತೆಯನ್ನು ಕಳೆದುಕೊಂಡು ಶುಷ್ಕವಾದದ್ದರಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಲೇಖನ ಅಗತ್ಯವಾಗಿ ನೆನಪುಮಾಡಿಕೊಡುತ್ತದೆ.

ಕಡುಬು ಏನು ಕಡಿಮೆಮತ್ತುಕಾಫಿ ಆಯ್ತಾ?’ ಎಂಬ ಲೇಖನಗಳು ಮಲೆನಾಡಿನ ಪ್ರಮುಖ ಆಹಾರ ಮತ್ತು ಪಾನೀಯ ಪದ್ಧತಿಗಳ ಸುತ್ತ ಇರುವ ಬರೆಹಗಳು. ಇವು ಕೇವಲ ವ್ಯಕ್ತಿಗತ ಖಾಸಗೀ ವಿವರಗಳಾಗಿರದೇ ಸಾಮಾಜಿಕ ಆಯಾಮ ಪಡೆದುಕೊಂಡಿರುವುದು ನಮ್ಮ ಸಾಮಾಜಿಕ ರೀತಿ ರಿವಾಜುಗಳಿಗಾಗಿ. ನಮ್ಮಲ್ಲಿ ಆಹಾರದ ಆಧಾರದ ಮೇಲೆ ಜನರನ್ನುಮೇಲು ಕೀಳುಎಂದು ವರ್ಗೀಕರಿಸುವ ಕ್ರಮವೊಂದು ಇದೆ. ಮಾಂಸಾಹಾರಿಗಳು ಕನಿಷ್ಠ, ಸಸ್ಯಾಹಾರಿಗಳು ಶ್ರೇಷ್ಠ ಎಂದು ಪರಿಗಣಿಸುವ ಹಾಗೆ ಸಸ್ಯಾಹಾರದಲ್ಲಿಯೇ ಮೇಲ್ಕುಲದವರೆಂದು ಕರೆಯಲ್ಪಡುವವರ ಮನೆಯಲ್ಲಿ ತಯಾರಾಗುವ ಆಹಾರಗಳು ಶ್ರೇಷ್ಠವೆಂದೂ ಉಳಿದವರ ಮನೆಗಳಲ್ಲಿ ತಯಾರಾಗುವ ಆಹಾರಗಳು ಅವು ಮೊದಲನೆಯವಕ್ಕಿಂತ ಆರೋಗ್ಯಕರವಾಗಿದ್ದರೂ ತುಚ್ಛವೆಂದು ಪರಿಗಣಿಸಲ್ಪಡುವ ಮೂಲಕ ಅವನ್ನು ಸ್ವೀಕರಿಸುವವರನ್ನು ಕನಿಷ್ಠವೆಂದು ಕಾಣುವ ರೀತಿಯನ್ನುಕಡುಬು ಏನು ಕಡಿಮೆಲೇಖನ ಸೂಕ್ಷ್ಮವಾಗಿ ದಾಖಲಿಸುತ್ತದೆ. ಮಲೆನಾಡಿನ ಹುಡುಗಿಯರು ಮನೆಯಲ್ಲಿ ಮಾಡುವ ಕಡುಬನ್ನು ಕಾಲೇಜಿಗೆ ಒಯ್ಯಲು ಹಿಂಜರಿಯುವ, ಒಯ್ದರೂ ಯಾರಿಗೂ ಕಾಣದಂತೆ ಕದ್ದು ತಿನ್ನಬೇಕಾದ ಸ್ಥಿತಿಯನ್ನೂ, ಅಧ್ಯಾಪಕರೊಬ್ಬರು ಕಡುಬನ್ನುಪಿಂಡಕ್ಕೆ ಹೋಲಿಸುವ ದುರುಳತನವನ್ನೂ ಲೇಖನ ಸೊಗಸಾಗಿ ಕಟ್ಟಿಕೊಟ್ಟಿದೆ.

ಕಾಫಿ ಆಯ್ತಾ?’ ಲೇಖನ ಕಾಫಿ ಮಲೆನಾಡಿನ ಪಾನೀಯ ಮಾತ್ರವಾಗಿರದೆ ಅದು ಪರಸ್ಪರ ಕುಶಲೋಪಹರಿಯ ಸಾಧನವೂ ಹೇಗೆ ಆಗಿತ್ತು ಎಂಬುದನ್ನು ಹೇಳುತ್ತದೆ. ಇದನ್ನು ಅನಂತಮೂರ್ತಿ ಅವರು ತಮ್ಮ ಆತ್ಮಕತೆಸುರಗಿಯಲ್ಲಿ ಕಾಫಿಯ ಬಗ್ಗೆ


ಬರೆದಿರುವ  ದೀರ್ಘವಾದ ಟಿಪ್ಪಣಿಯೊಂದಿಗೆ ಹೋಲಿಸಿ ನೋಡಬಹುದು. ಸುಮಿತ್ರಾ ಅವರಿಗೆ ಕಾಫಿಯನ್ನು ಮಾಡುವ ವಿಧಾನ, ಅದು ಕಂಡ ಸುಧಾರಣೆ, ಅದು ಹೇಗೆ ಮಾತಿನ ಮಾಧ್ಯಮ ಆಗಿ ಕೆಲಸ ಮಾಡುತ್ತಿತ್ತು ಎಂಬುದನ್ನು ಹೇಳುವುದು ಮುಖ್ಯವಾದಂತೆ ಅನಂತಮೂರ್ತಿ ಅವರಿಗೆ ಮನೆಯಲ್ಲಿ ಎಲ್ಲರಿಗೂ ಉತ್ತಮ ಕಾಫಿ ಮಾಡಿಕೊಡುವಷ್ಟು ಅನುಕೂಲಗಳಿಲ್ಲದ ಕುಟುಂಬಗಳಲ್ಲಿ ಮನೆಯಲ್ಲಿ ಯಾರುಯಾರಿಗೆಒರಿಜಿಲನ್ ಕಾಫಿಮತ್ತೆ ಯಾರು ಯಾರಿಗೆಚರಟದ ಕಾಫಿಕೊಡಲಾಗುತ್ತಿತ್ತು ಎಂಬುದನ್ನುಹೇಳುವ ಮೂಲಕ ಅಲ್ಲಿನ ಬಡತನವನ್ನು ದಾಖಲಿಸುವುದು ಮುಖ್ಯವಾದಂತೆ ಕಾಣುತ್ತದೆ.

ಎಲ್ಲಿತ್ತುಕಸ?’ ‘ಸಂಕ್ರಮಣಈ ಎರಡು ಲೇಖನಗಳು ನಾವು ನಮ್ಮೊಳಗೆ ಮತ್ತು ಹೊರಗೆ ಮಾಡಿಕೊಳ್ಳುತ್ತಿರುವ ಮಾಲಿನ್ಯದ ಬಗ್ಗೆ ಬೆಳಕು ಚೆಲ್ಲುವು ಲೇಖನಗಳು. ‘ಎಲ್ಲಿತ್ತುಕಸ ಲೇಖನದ ಶೀರ್ಷಿಕೆಯಲ್ಲಿರುವಧ್ವನಿಪೂರ್ಣವಾಗಿದೆ. ಅದನ್ನುಇದುಎಂದೂ ಓದಿಕೊಳ್ಳಬಹುದು. ‘ಇಲೆಕ್ಟ್ರಾನಿಕ್ಎಂದೂ ಓದಿಕೊಳ್ಳಬಹುದು. ಹಿಂದೆ ತುಂಬಾ ಸರಳವೂ ಸೊಗಸಾಗಿಯೂ ಇದ್ದ ನಮ್ಮ ಬದುಕನ್ನು ನಾವು ದಿನದಿನಕ್ಕೂ ಕೊಳ್ಳುಬಾಕ ಸಂಸ್ಕೃತಿಗೆ ಸಿಲುಕಿಕೊಂಡು ಎಷ್ಟು ಜಟಿಲಗೊಳಿಸಿಕೊಂಡಿದ್ದೇವೆ ಎಂಬುದನ್ನು ಇದು ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಲೇಖನವನ್ನು ಓದುವಾಗ ಸವಿತಾ ನಾಗಭೂಷಣ ಅವರು ಬರೆದ, ನಮಗೆ ಬೇಕೋ ಬೇಡವೋ ಎಂಬುದನ್ನೂ ಸರಿಯಾಗಿ ಆಲೋಚಿಸದೇ ಬಳಸಿ ಬೀಸಾಡಿಗಳನ್ನು ಮನೆಗೆ ತಂದು ತುಂಬಿಕೊಂಡು ಅವುಗಳ ಮಧ್ಯೆ ನಾವೇ ಕಳೆದುಹೋಗುತ್ತಿರುವುವದನ್ನು ಹೇಳುವ, ಕವಿತೆಯೊಂದು ನೆನಪಾಯಿತುಇದು ನಮ್ಮ ಹೊರಗಿನ ಕಸವನ್ನು ಕುರಿತು ಹೇಳುವ ಲೇಖನವಾದರೆ ಯಾರು ಯಾರುದೋ ಆಚರಣೆಗಳನ್ನು ನಾವು -ವಿಶೇಷವಾಗಿ ವೈದಿಕರ ಆಚರಣೆಗಳನ್ನು ಉಳಿದವರು - ಅಗತ್ಯವಿಲ್ಲದೇ ಅನುಸರಿಸಿ ನಮ್ಮ ಮನಸ್ಸು ಹೃದಯಗಳೊಳಗೆ ತುಂಬಿಕೊಳ್ಳುವ ಕಸವನ್ನು ಕುರಿತು ‘ಸಂಕ್ರಮಣ’ ಮಾತನಾಡುತ್ತದೆ. 

ಉಳಿದಂತೆಗಾಡಿಯ ಪ್ರಯಾಣ’ ‘ಬಾವಿಯ ಆಳದಿಂದ’ ‘ಮಳೆ ಎಂದರೆ’ ‘ಊರಿನ ನೆನಪುಗಳು’ ಮುಂತಾದ ಲೇಖನಗಳು ಮಲೆನಾಡಿನ ಒಂದು ಕಾಲಘಟ್ಟದ ಬದುಕನ್ನು ಹಿಡಿದಿಡಲು ಮಾಡಿದ ಯಶಸ್ವಿ ಪ್ರಯತ್ನಗಳಾಗಿವೆ. ‘ಗಾಡಿ ಎಂದರೆ ಬರಿಯ ಸವಾರಿಯಲ್ಲಎಂಬ ವಾಕ್ಯದಿಂದ ಪ್ರಾರಂಭವಾಗುವ ಲೇಖನವನ್ನು ಓದುಗನೊಬ್ಬಗಾಡಿ ಎಂದರೆ ಅನುಭವಗಳ ಆಗರಎಂದೂ ಮುಗಿಸಿಕೊಳ್ಳಬಹುದು. ಮನುಷ್ಯರಿಗೆ ನೋವಾದರೆನೇ ಅಯ್ಯೋ ಅನ್ನಲಾರದ ಸ್ಥಿತಿ ತಲುಪಿರುವ ನಾವೆಲ್ಲ ಮಕ್ಕಳಿದ್ದಾಗ ಮನೆಯ ಎತ್ತಿನ ಕಾಲಿಗೆ ಗಾಯವಾದಾಗ ಎಷ್ಟೊಂದು ಸಂಕಟಪಡುತ್ತಿದ್ದೆವು; ಅವನ್ನು ಮಾರುವಾಗ ಎಷ್ಟು ಸಂಕಟಪಡುತ್ತಿದ್ದೆವು ಎಂಬುದನ್ನು ನೆನೆಸಿಕೊಂಡರೆ ನಾವು ದೊಡ್ಡವರಾದಂತೆ ಹೇಗೆಲ್ಲ ಮನುಷ್ಯತ್ವದ ಗುಣಗಳಿಂದ ದೂರವಾಗುತ್ತಿದ್ದೇವೆ ಎಂಬುದನ್ನು ನೆನಪುಮಾಡಿಕೊಡುತ್ತದೆ. ಬಾಲ್ಯದ ಅನೇಕ ನೆನಪುಗಳನ್ನು ಮಧುರವಾಗಿಸುವಬಾವಿಯ ಆಳದಿಂದಲೇಖನ ಜೀವಜಲವನ್ನು ಕೊಡುವ ಬಾವಿಯೇ ಜೀವವನ್ನು ತೆಗೆಯಬಲ್ಲ ಘಟನೆಗಳಿಗೂ

ಹೇಗೆ ಸಾಧನವಾಗುತ್ತಿತ್ತು ಎಂಬುದನ್ನೂ ಹೇಳುತ್ತದೆ. ‘ಊರಿನ ನೆನಪುಗಳು’ ಇದ್ದದ್ದರಲ್ಲಿಯೇ ಉದ್ದನೆಯ ಲೇಖನ. ತೀರ್ಥಹಳ್ಳಿಯಂತಹ ಮಲೆನಾಡುಮಧ್ಯದ ಲಕ್ಷ್ಮೀಪುರ-ಬಸವಾನಿ ಪ್ರದೇಶದ ಜನಜೀವನದ ಸಹಜಚಲನೆಯ ಹಾದಿಯಲ್ಲಿನ ಭೌತಿಕ ಬದಲಾವಣೆ-ಸುಧಾರಣೆಗಳ ನಡುವೆಯೇ ಅನೇಕ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವಗಳನ್ನು ದಾಖಲಿಸುತ್ತದೆ. 

ಸುಮಿತ್ರಾ ಅವರಅಂಗೈ ಅಗಲದ ಆಕಾಶಕೃತಿಯ ಎಲ್ಲ ಬರೆಹಗಳನ್ನೂ ಗಮನದಲ್ಲಿಟ್ಟುಕೊಂಡು ಕೆಲವು ಮಾತುಗಳನ್ನು ಹೇಳುವುದಾದರೆ  ಇವು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದೇಶಕ್ಕಾಗಿ ಬರೆದ ಲೇಖನಗಳಾಗಿದ್ದರಿಂದ ಲೇಖನಗಳ ಗಾತ್ರಗಳ ಭಿನ್ನತೆ, ಒಂದೆರಡು ಕಡೆ ಪುನರುಕ್ತಿ ಸಹಜವಾಗಿವೆ. ಮೊದಲೇ ಹೇಳಿದಂತೆ ಇವು ಒಂದು ರೀತಿಯಹಗುರ’ (ಲೈಟ್ ವೇಯಿಟ್) ಬರೆಹಗಳು. ಹಾಗಂದ ಮಾತ್ರಕ್ಕೆ ಹಾಸ್ಯಕ್ಕೆ ಹಾರಿಹೋಗುವಷ್ಟು ತೆಳುವಾಗಿಯೂ ಅವಿಲ್ಲ. ಯಾವುದೇ ಗಂಭೀರ ವಿಷಯಗಳನ್ನು ಪ್ರಯತ್ನಪೂರ್ವಕವಾಗಿ ಹೇಳಹೋಗದೆ ತಮ್ಮ ಜೀವನಾನುಭವಗಳನ್ನು ಸರಳವಾಗಿ ತಣ್ಣನೆಯ ಶೈಲಿಯಲ್ಲಿ ಅವರು ಹೇಳುತ್ತಾ ಹೋಗಿದ್ದಾರೆ. ಆದಾಗ್ಯು ಅವು ಪಡೆಯಬೇಕಾಲ್ಲಿ ಪಡೆಯಬೇಕಾದಷ್ಟು ಗಾಂಭೀರ್ಯವನ್ನು ಪಡೆದುಕೊಂಡಿವೆ ಎಂಬುದು ಗಮನಿಸಬೇಕಾದ ಅಂಶ. ಅವರೇ ತಮ್ಮ ಮಾತುಗಳಲ್ಲಿ ಹೇಳಿಕೊಂಡಿರುವಂತೆ ಅವರು ಇಲ್ಲಿ ತಮ್ಮ ಪರಿಸರದ ಸಂಘರ್ಷಗಳನ್ನೂ ನೇತ್ಯಾತ್ಮಕ ಸಂಗತಿಗಳನ್ನು ಬರೆದಿಲ್ಲ. ಮಿತಿಯ ಕಾರಣವನ್ನೂ ಅವರು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿ ಬಂದಿರುವ ಲೇಖನಗಳನ್ನು ಅವರೊಳಗಿನ ಜವಾಬ್ದಾರಿಯುತ ಲೇಖಕಿ ಕೇವಲ ಶುಷ್ಕವರದಿಗಳಾಗದಂತೆ ನೋಡಿಕೊಂಡಿದ್ದಾರೆ. ‘ಅಂಗೈ ಅಗಲದ ಆಕಾಶಹೆಸರಿನಲ್ಲಿರುವಅಂಗೈಪದವುಸನಿಹಮತ್ತುಸಾಮಿಪ್ಯಗಳ ಜೊತೆಗೆ ಸಣ್ಣದು ನೀಡುವ ಸಂತೋಷವನ್ನು ಧ್ವನಿಸಿದರೆ ಅಲ್ಲಿರುವಆಕಾಶಪದವು ಅಂಗೈಎಂಬುದುಸಣ್ಣತನ’ ‘ಕುಬ್ಜತೆಮತ್ತುಕೂಪ ಮಂಡೂಕತನಆಗದೆ ನಮ್ಮತನವನ್ನು ಸಾಮಾಜಿಕವಾಗಿ ವಿಸ್ತರಿಸಿಕೊಳ್ಳುವ ಎತ್ತರ ಮತ್ತು ಬಿತ್ತರಗಳನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇದು ಒಂದು ರೀತಿಯಲ್ಲಿ ತಾನು ನಿಂತ ನೆಲಕ್ಕೆ ಕಾಲುಗಳನ್ನು ಗಟ್ಟಿಯಾಗಿ ಊರಿಕೊಂಡು ತಲೆಯನ್ನು ಆಕಾಶದ ಕಡೆಗೆ ಎತ್ತಿ ನೋಡುವ ಪ್ರಯತ್ನ. ಅಂಗೈ ಎಂಬುದೇ ಆಕಾಶವಾದಾಗ ಅವಕಾಶಕ್ಕಾಗಿ ಹಪಹಪಿಸುವ ಚಪಲ ತಪ್ಪಿ ಉಂಟಾಗುವ ಒಂದು ರೀತಿಯ ಆತ್ಮತೃಪ್ತಿ, ನಿರಾಳ ಭಾವನೆ ತಂದುಕೊಡುವ ನೆಮ್ಮದಿಗೆ ಬೆಲೆಕಟ್ಟಲಾದೀತೆ?


ಅನಕೃ ಕಾಲಘಟ್ಟದಲ್ಲಿ ಜನಪ್ರಿಯ ಸಾಹಿತ್ಯದಓದುಗ’ರಾಗಿದ್ದು ನಂತರದ ಕಾಲಘಟ್ಟದಲ್ಲಿ ಟಿವಿನೋಡುಗ’ರಾಗಿ ಬದಲಾದ ಒಂದು ದೊಡ್ಡ ಜನಸಮುದಾಯವೊಂದು ಈಗ ಎಂದೆಂದೂ ಮುಗಿಯದ ರೇಜಿಗೆ ಅನ್ನಿಸುವ ಧಾರಾವಾಹಿಗಳಿಂದ, ಯಾವುದೇ ತಿಳಿವಳಿಕೆಯನ್ನು ಕೊಡದ, ಅರಿವನ್ನು ವಿಸ್ತರಿಸದ, ಹಾಳುಹರಟೆಯ ರಿಯಾಲಿಟಿ ಷೋ ಗಳಿಂದ  ಬೇಸತ್ತು ಮತ್ತೆ ಬೇರೆ ಆಯ್ಕೆಗಳ ಕಡೆ ನೋಡುತ್ತಿದೆ ಅನ್ನಿಸುತ್ತಿರುವ ಸಂದರ್ಭದಲ್ಲಿ ದೊಡ್ಡ ಜನಸಮೂಹವನ್ನು ಮತ್ತೆ ಸಾಹಿತ್ಯದ ಕಡೆ ಕರೆತರಲು ಸಾಧ್ಯವೇನಾದರೂ ಆಗುವಂತಿದ್ದರೆ ಅದು  ಇಂತಹಲಲಿತವಹಬರೆಹಗಳಿಂದ ಮಾತ್ರ ವೇನೋ ಅನ್ನಿಸುತ್ತಿದೆ. ಹೀಗೆ ಅವರನ್ನು ಮತ್ತೆ ಮರಳಿ ಸಾಹಿತ್ಯಕ್ಕೆ ಕರೆತರುವ ಮಹತ್ವದ ಕೆಲಸವೊಂದನ್ನು ಕನ್ನಡದ  ಅನೇಕ ಪ್ರಮುಖ ಲೇಖಕರು ಕೈಗೆತ್ತಿಕೊಂಡಿದ್ದಾರೆ. ಅದೇ ಕೆಲಸವನ್ನು ಡಾ. ಎಲ್.ಸಿ. ಸುಮಿತ್ರಾ ಕೂಡ ಕೃತಿಯ ಮೂಲಕ ಮಾಡಿದ್ದಾರೆ.

ಡಾ. ರಾಜೇಂದ್ರ ಬುರಡಿಕಟ್ಟಿ

24.01.2022

 

Thursday, January 13, 2022

 

ಮಕರ ಸಂಕ್ರಾಂತಿಯು ಉತ್ತರಾಯಣ ಪುಣ್ಯಕಾಲವೇ?

ಪ್ರಶ್ನೆಗೆಅಲ್ಲಎಂದವರನ್ನುಅವಿವೇಕಿಗಳು’ ‘ಹುಚ್ಚರುಎಂದು ಕರೆಯುವ ಕಾಲಘಟ್ಟದಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂಬುದು ಸುಳ್ಳಲ್ಲ. ಆದರೆ ಬಹಳಷ್ಟು ಜನ ‘ಅವಿವೇಕ’ ‘ಹುಚ್ಚು’ ಎಂದ ಮಾತ್ರಕ್ಕೆ ಒಂದು ಸಂಗತಿ ಅವಿವೇಕದ್ದಾಗುವುದಿಲ್ಲ ಮತ್ತು ಅದನ್ನು ಪ್ರತಿಪಾದಿಸುವವನು ಅವಿವೇಕಿ ಆಗುವುದಿಲ್ಲ ಎಂಬುದೂ ಸುಳ್ಳಲ್ಲ. ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಸಂಭ್ರಮಿಸುವ ಘಟನೆಯ ವಿಶ್ಲೇಷಣೆಗೆ ತೊಡಗುವ ಮುನ್ನ ಇಂಥದ್ದೊಂದು ತಿಳಿವಳಿಕೆ ನಮಗಿರಬೇಕೆಂಬ ಕಾರಣದಿಂದ ಈ ಪ್ರಸ್ತಾಪಮಾಡಿದೆನಷ್ಟೆ.

ಪ್ರತಿವರ್ಷದಂತೆ ಇವತ್ತು ಜನವರಿ ಹದಿನಾಲ್ಕು. ಮಕರ ಸಂಕ್ರಾತಿ ದಿನ. ಇದನ್ನು ‘ಉತ್ತರಾಯಣಪುಣ್ಯಕಾಲ’ವೆಂದು ಅದನ್ನು ಹಬ್ಬವಾಗಿ ಜನ ಆಚರಿಸುತ್ತಿದ್ದಾರೆ. ಬಹಳಷ್ಟು ಜನ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಿರಬೇಕಾದರೆ ಇಂಥದ್ದೊಂದು ಪ್ರಶ್ನೆಯನ್ನು ಎತ್ತಿದರೆ ಅದು ಅವರಿಗೆ ಕಿಡಿಗೇಡಿ ಪ್ರಶ್ನೆಯಾಗಿ ತೋರುವುದು ತೀರಾ ಸಹಜವಾದದ್ದು. ಏಕೆಂದರೆ ನಮ್ಮದು ಭಾವಜೀವಿಗಳ ದೇಶ. ಇಲ್ಲಿ ಬುದ್ಧಿವಿಕಸನಕ್ಕಾಗಿ ಎತ್ತುವ ಬಹಳಷ್ಟು ಪ್ರಶ್ನೆಗಳು ಅವರಿಗೆ ‘ಭಾವನೆಗಳಿಗೆ ಧಕ್ಕೆ ತರುವ ಅಂಶಗಳಾಗಿಬಿಡುತ್ತವೆ. ಕೆಲವರು ಇವನ್ನು ಅಲಕ್ಷಿಸಿದರೆ ಹಲವರು ಸೀರಿಯಸ್ ಆಗಿ ತೆಗೆದುಕೊಂಡು ವಾಗ್ವಾದಕ್ಕೆ ನಿಲ್ಲುತ್ತಾರೆ. ಈ ಕಾರಣವೇ ಇರಬೇಕು ಇವತ್ತು ನನಗೆ ಮಕರ ಸಂಕ್ರಾಂತಿಯ ಶುಭಾಶಯ ಹೇಳಲು ಫೋನ್ ಮಾಡಿದ ಗೆಳತಿಯೊಬ್ಬಳಿಗೆ, “ಇವತ್ತು ಉತ್ತರಾಯಣ ಪುಣ್ಯಕಾಲ ಅಲ್ಲ ಕಣೆ, ನೀನು ಅದನ್ನು ಆಚರಿಸಿದರೆ ಅದರ ತಿಥಿ ಮಾಡಿದಂತೆ ಆಗುತ್ತೆ’ ಎಂದು ಹೇಳಿದ್ದಕ್ಕೆ ಅವಳು, ‘ಸುಮ್ಮನಿರು ಮಾರಾಯಾ, ಇಂಥದ್ದೆಲ್ಲ ಮಾತಾಡಿ ನಮಗೆ ಸಿಗೋ ಒಂದು ರಜಾಕ್ಕೂ ಕಲ್ಲ ಹಾಕ್ಬೇಡ’ ಎಂದಳು.

ಯಾರಾದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ, ಅದು ಚರ್ಚೆ ಹುಟ್ಟುಹಾಕಿದರೆ, ಯಾವುದೋ ಹಂತದಲ್ಲಿ ಅದು ಸರಿ ಅನ್ನಿಸಿ ಆಡಳಿತ ಮಾಡುವವರ ಹಂತಕ್ಕೆ ಹೋಗಿಬಿಟ್ಟರೆ ಈ ಸಂಬಂಧ ಕೊಡುತ್ತಿರುವ ಒಂದು ರಜೆಯೂ ಇಲ್ಲವಾಗುತ್ತದೆ ಎಂಬುದು ಅವಳ ಆತಂಕವಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಚಿಂತೆ! “ಚಿಂತೆ ಮಾಡ್ಬೇಡ. ಯಾರೂ ಈ ಮಾತುಗಳನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ತೆಗೆದುಕೊಂಡರೂ ರಜೆ ಕ್ಯಾನ್ಸಲ್ ಆಗಲ್ಲ.ಇವತ್ತಿನ ಬದಲು ಇನ್ನೊಂದು ದಿನ ರಜೆ ಸಿಗುತ್ತೆ” ಎಂದು ಸಮಾಧಾನ ಹೇಳಿದಾಗ “ಹಂಗಿದ್ರೆ ಓಕೆ” ಎಂದು ಸಿಟ್ಟುಮಾಡಿಕೊಳ್ಳದೆ ಫೋನಿಟ್ಟಳು.

ನಾನು ಹೀಗೆ ಹೇಳಲು ಕಾರಣವಾಗಿದ್ದು ಕನ್ನಡದವರೇ ಆದ ಖ್ಯಾತ ವಿಜ್ಞಾನಿ ಜಿ.ಟಿ. ನಾರಾಯಣ ರಾವ್ ಅವರು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಅಂದರೆ ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಬರೆದ ಒಂದು ವೈಜ್ಞಾನಿಕ ಲೇಖನ. ಅವರು ತಮ್ಮ ಲೇಖನದಲ್ಲಿ ಸಾವಿರಾರು ವರ್ಷಗಳ ಸೂರ್ಯನ ಚಲವವಲನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಮತ್ತು ತಮಗಿಂತ ಹಿಂದಿನ ಹಿರಿಯ ವಿಜ್ಞಾನಿಗಳ ಮಾಡಿದ ಸಂಶೋಧನೆಗಳ ಅನುಭವವನ್ನು ಬಳಸಿಕೊಂಡು, ಜನವರಿಯಲ್ಲಿ 14 ರಂದು ಬರುವ (ಕೆಲವು ಸಲ 13 ಅಥವಾ 15) ಮಕರ ಸಂಕ್ರಾಂತಿ ಒಂದು ಕಾಲದಲ್ಲಿ ಉತ್ತರಾಯಣ ಪುಣ್ಯಕಾಲವಾಗಿದ್ದು ನಿಜ. ಆದರೆ ಈಗ ಅದು ಹಾಗೆಯೇ ಉಳಿದಿಲ್ಲ.ಈಗ ಉತ್ತರಾಯಣ ಪುಣ್ಯಕಾಲ ಜನವರಿ 14 ಕ್ಕೆ ಬದಲಾಗಿ ಡಿಸೆಂಬರ್ 21ಕ್ಕೆ ಸಂಭವಿಸುತ್ತದೆ. ಹಾಗಾಗಿ ಜನವರಿ 14ನ್ನು ವಿಶೇಷದಿನವಾಗಿ ಹಬ್ಬದಂತೆ ಆಚರಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ವಾದಿಸಿದ್ದರು.

1970ಕ್ಕಿಂತ ಹಿಂದಿನ ಸರ್ಕಾರದ ವಾರ್ಷಿಕ ಪಟ್ಟಿಯಲ್ಲಿ “ಜನವರಿ 14 ಉತ್ತರಾಯಣ ಪುಣ್ಯಕಾಲ” ಎಂದು ಪ್ರಕಟವಾಗುತ್ತಿತ್ತಂತೆ. ಆದರೆ ನಂತರ ದಿನಗಳಲ್ಲಿ ಇದು ಸ್ವಲ್ಪ ವೇಷ ಬದಲಿಮಾಡಿಕೊಂಡು “ಮಕರ ಸಂಕ್ರಾಂತಿ” ಎಂದು ಪ್ರಕಟವಾಗುತ್ತಿದೆ. ಇದು ವಿಶೇಷ ದಿನ. ಹಬ್ಬ. ಹಾಗಾಗಿ ರಜೆ!

ಪ್ರತಿವರ್ಷವೂ ಜನವರಿಯಲ್ಲಿ ಬರುವ ಈ ಮಕರ ಸಂಕ್ರಮಣ ಇಷ್ಟು ಮಹತ್ವ ಪಡೆದುದರ ಕಾರಣವೇನು? ಭಾರತೀಯರಾದ ನಾವು ಭೂಮಿಯ ಉತ್ತರಾರ್ಧಗೋಳದ ನಿವಾಸಿಗಳು. ನಮ್ಮ ಪೂರ್ವಜ ಆದಿಮಾನವನಿಗೆ ಸೂರ್ಯ ಕಂಡ ದೃಶ್ಯವನ್ನು ವೈಜ್ಞಾನಿಕ ವಾಗಿ ಪಟ್ಟಿ ಮತ್ತು ನಕ್ಷೆಗಳ ಮೂಲಕ ಜಿಟಿ ನಾರಾಯಣ ರಾವ್ ನಿರೂಪಿಸಿದ್ದಾರೆ. (ಜೊತೆಗೆ ಇರುವ ಪಟ್ಟಿ, ಅದರ ವಿವರಣೆ, ಮತ್ತು ನಕ್ಷೆಗಳನ್ನು ಗಮನಿಸಿ.).

ಅದರ ಪ್ರಕಾರ ಪ್ರಮುಖವಾದ ನಾಲ್ಕು ಸಂಕ್ರಮಣಗಳು ಸಂಭವಿಸುವಿಕೆಯ ಮುಖ್ಯಾಂಶಗಳು ಹೀಗಿವೆ:

1.      ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಮಕರ ಸಂಕ್ರಮಣವು ಇಂದು ಡಿಸೆಂಬರ್ 21 ರಂದು ಸಂಭವಿಸುತ್ತಿದೆ.

2.     ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಮೇಷ ಸಂಕ್ರಮಣವು ಈಗ ಮಾರ್ಚ್ 21 ರಂದು ಸಂಭವಿಸುತ್ತಿದೆ.

3.     ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಕರ್ಕಟಕ ಸಂಕ್ರಮಣವು ಈಗ ಜೂನ್ 22 ರಂದು ಸಂಭವಿಸುತ್ತಿದೆ.

4.    ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ತುಲಾ ಸಂಕ್ರಮಣವು ಈಗ ಸೆಪ್ಟಂಬರ್ 23 ರಂದು ಸಂಭವಿಸುತ್ತಿದೆ.

·         ಜನವರಿ 14 ಮಕರ ಸಂಕ್ರಮಣ. ಇದು ಉತ್ತರಾಯಣಾರಂಭವನ್ನು ಪ್ರತ್ಯೇಕಿಸುತ್ತದೆ. ಸಂತೋಷ ಸಂಭ್ರಮಗಳ ಆಗಮನದ ಹರಿಕಾರ. ಎಂದೇ ಪುಣ್ಯಕಾಲ.

·         ಜುಲೈ 14 ಕರ್ಕಾಟಕ ಸಂಕ್ರಮಣ. ಇದು ದಕ್ಷಿಣಾಯಣಾರಂಭವನ್ನು ಪ್ರತ್ಯೇಕಿಸುತ್ತದೆ. ಹಬ್ಬ ಹರಿದಿನಗಳು ಮುಗಿದು ಕಷ್ಟಕೋಟಲೆಗಳು ಆರಂಭವಾಗುವುದರ ಸೂಚನೆ. ಎಂದೇ ಪ್ರಶಸ್ತ ದಿನವಲ್ಲ.

 

ನಾರಾಯಣ ರಾವ್ ಅವರು ಹೇಳುವ ಪ್ರಕಾರ ಆಗಿನ ಕಾಲದಲ್ಲಿ ಉತ್ತರಾಯಣ ಪುಣ್ಯಕಾಲವು ಮಕರ ಸಂಕ್ರಮಣದ ದಿನದಂದು ಸಂಭವಿಸುತ್ತಿದ್ದುದು ನಿಜ. ಆಗ ಅದನ್ನು ಹಬ್ಬದಂತೆ ಆಚರಿಸತೊಡಗಿದ್ದೂ ತಪ್ಪಲ್ಲ. ಆದರೆ ಉತ್ತರಾಯಣ ಪುಣ್ಯಕಾಲ ಈಗ ಹಿಂದಿನಂತೆ ಮಕರ ಸಂಕ್ರಮಣ ದಿನದಂದು ಸಂಭವಿಸುತ್ತಿಲ್ಲ. ಹಾಗಾಗಿ ಈಗಲೂ ಅದನ್ನು ಹಬ್ಬದಂತೆ ಆಚರಿಸುವುದರಲ್ಲಿ ಅರ್ಥವಿಲ್ಲ. ಅವರು ಅದನ್ನು ರೂಪಕದ ಮೂಲಕ ವಿವರಿಸುತ್ತಾರೆ.  “ಸೂರ್ಯರಾಜ ಹಳೆಯ ಸಿಂಹಾಸನವನ್ನು (ಜನವರಿ 14) ಬಿಟ್ಟು ಹೊಸ ಸಿಂಹಾಸನಕ್ಕೆ (ಡಿಸೆಂಬರ್ 21)ಹೋಗಿ ಕುಳಿತರೂ ನಮ್ಮ ಜನ ಹಳೆಯ ಸಿಂಹಾಸಕ್ಕೆ ನಮಸ್ಕಾರ ಮಾಡುತ್ತಿದ್ದಾರೆ!”

ನಾರಾಯಣರಾಯರು ತಮ್ಮ ಲೇಖನವನ್ನು ಮುಗಿಸುವುದು ಈ ಮಾತುಗಳಿಂದ: “ ;ನಮ್ಮ ಜೀವನ ವರ್ತಮಾನ ಕಾಲದಲ್ಲಿ ಅರ್ಥಪೂರ್ಣವಾಗಿ ಕ್ರಿಯಾಶೀಲವಾಗಿರಬೇಕಾದರೆ ನಾವು ಅನುಸರಿಸಬಹುದಾದ ಮಾರ್ಗ ಒಂದೇ. ಜಡ್ಡುಗಟ್ಟಿದ ಪರಂಪರೆಯನ್ನೂ ಕಿಲುಬುಹಿಡಿದ ಸಂಪ್ರದಾಯವನ್ನೂ ತಿರಸ್ಕರಿಸಿ ವಾಸ್ತವತೆಗೆ ಶರಣಾಗಿ ಡಿಸೆಂಬರ್ 21ನ್ನು ಉತ್ತರಾಯಣಾರಂಭವನ್ನು, ಬೇಕಾದರೆ ಪುಣ್ಯಕಾಲವೆಂಬ ಕಾರಣಕ್ಕಾಗಿ ಹಬ್ಬವೆಂದು ಕೂಡ, ಆಚರಿಸತಕ್ಕದ್ದು. ಮತ್ತು ಮಕರ ಸಂಕ್ರಮಣದ ಕೃತಕ ಪ್ರತಿಷ್ಠೆಯನ್ನು ನಿವಾರಿಸಿ ಅದನ್ನು ಇತರ ಹನ್ನೊಂದು ಸಂಕ್ರಮಣಗಳಂತೆ ಅದರ ಪಾಡಿಗೆ ಅದನ್ನು ಸ್ವಸ್ಥವಾಗಿ ಇರಲು ಬಿಡತಕ್ಕದ್ದು, ಅರಸ ತೊರೆದ ಆಸನಕ್ಕೆ ನಜರು ಒಪ್ಪಿಸುವುದಲ್ಲ! “ಉಣ್ಣದ ಲಿಂಗಕ್ಕೆ ಬೋನ ಹಿಡಿ ಎಂಬರಯ್ಯ.”

****

ನಾರಾಯಣ ರಾಯರ ಲೇಖನದ ಕೊನೆಯ ಪ್ಯಾರಾವೇ ನಾನು ಹೇಳಬೇಕಾದ ಬಹಳಷ್ಟು ಅಂಶಗಳನ್ನು ಹೇಳಿಬಿಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಪಂಚದ ವಿಜ್ಞಾನ ಸಾಧಕ ದೇಶಗಳ ಪಟ್ಟಿಯೊಂದನ್ನು ಗಮನಿಸಿದೆ. ಭಾರತದಂತಹ ಒಂದು ದೊಡ್ಡ ದೇಶ ಪ್ರಪಂಚನ ಗ್ಲೋಬನ್ನು ತಿರುಗಿಸಿದರೆ ಕಣ್ಣಿಗೇ ಕಾಣದಷ್ಟು ಚಿಕ್ಕವಿರುವ ಅನೇಕ ರಾಷ್ಟ್ರಗಳಿಗಿಂತ ಕೆಳಗಿದೆ. ಕಾರಣವೂ ಸ್ಪಷ್ಟವಿದೆ. ನಮ್ಮ ಸಂಶೋಧನೆಗಳು ಗೋಮೂತ್ರ, ಆಕಳ ಸಗಣಿ ಇಲ್ಲಿಯೇ ಗಿರಿಕಿಹೊಡೆಯುತ್ತಿವೆ. ಇಲ್ಲಿಯೇ ಎಲ್ಲದೂ ಇದೆ. ನಮ್ಮ ಪ್ರಾಚೀನರಿಗೆ ‘ಎಲ್ಲವೂ’ ಗೊತ್ತಿತ್ತು. ನಾವು ಯಾವ ದೇಶದಿಂದಲೂ ಏನನ್ನೂ ಕಲಿಯುವ ಅವಶ್ಯಕತೆಯಿಲ್ಲ. ಎಂಬ ಸ್ವಪ್ರತಿಷ್ಠೆಯಿಂದ ನೆಲಕೆದರುವಲ್ಲಿಯೇ ನಿಂತಿವೆ. ಪ್ರಪಂಚದ ಯಾರೂ ಹೇಳದಿದ್ದರೂ ನಮ್ಮ ದೇಶವು ವಿಶ್ವಗುರು ಆಗುತ್ತದೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಈ ದೃಷ್ಟಿಕೋನ ಬದಲಾಗದಿದ್ದರೆ ಆಗುವ ನಷ್ಟ ವಿಜ್ಞಾನಕ್ಕಲ್ಲ. ನಮ್ಮ ದೇಶಕ್ಕೆ.

ಸಂಕ್ರಮಣದಂತಹ ಒಂದು ಘಟನೆ ಸ್ಪಷ್ಟವಾಗಿ ವಿಜ್ಞಾನಕ್ಕೆ ಅದರಲ್ಲಿಯೂ ಖಗೋಲ ವಿಜ್ಞಾನಕ್ಕೆ ಸಂಬಂಧಿಸಿದ ಘಟನೆಯಾದರೂ ನಮ್ಮ ಜನ ಈ ವಿಷಯದಲ್ಲಿ ವಿಜ್ಞಾನಿಗಳ ಮಾತನ್ನು ಕೇಳುವುದಕ್ಕಿಂತ ಧರ್ಮಗುರುಗಳು, ‘ಪಂಚಾಂಗಪುರುಷರ’ ಮಾತನ್ನು ಕೇಳುವುದೇ ಹೆಚ್ಚು. ಅದರಲ್ಲಿಯೂ ದೇಶದ ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ವಿಜ್ಞಾನಿಗಳು, ಸಂಶೋಧಕರು, ವಿಜ್ಞಾನವನ್ನು ಶಾಲಾ ಕಾಲೋಜುಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು ಇವರೆಲ್ಲರೂ ದೇವರು ಧರ್ಮಗಳ ವಿಷಯದಲ್ಲಿ ಧರ್ಮಗುರುಗಳ ಮಾತುಗಳಲ್ಲಿ ತೋರುತ್ತಿರುವ ‘ಪ್ರಶ್ನಾತೀತ ಶ್ರದ್ಧೆ’ ವಿಜ್ಞಾನದ ಬಗ್ಗೆ ಅವರಿಗಿರಬೇಕಾಗಿದ್ದ “ಪ್ರಶ್ನಾರ್ಹ ಭರವಸೆ’ ಗಿಂತ ತೀವ್ರಗೊಳ್ಳುತ್ತಿರುವುದು ದೇಶದ ವೈಜ್ಞಾನಿಕ ಭವಿಷ್ಯವನ್ನು ಮತ್ತಷ್ಟು ಕಳವಳಕಾರಿಗೊಳಿಸಿವೆ. ಹೀಗಾಗಿ ನಮ್ಮ ಯುವ ಜನತೆಗೆ ಈ ವಿಷಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡುವವರ ಕೊರತೆ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ನಮ್ಮ ಯುವ ಜನತೆ ತಮ್ಮ ಸ್ವಯಂ ಅಧ್ಯಯನದಿಂದಲಾದರೂ, ಇಂತಹ ವೈಜ್ಞಾನಿಕ ಸಂಗತಿಗಳನ್ನು ಅವೈಜ್ಞಾನಿಕವಾಗಿ ನಂಬದೇ ವೈಜ್ಞಾನಿಕವಾಗಿಯೇ ಅಭ್ಯಾಸಮಾಡಿ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳುವತ್ತ ಗಮನ ಹರಿಸಿದರೆ ಮಾತ್ರ ಈ ದೇಶ ಮೌಢ್ಯಕ್ಕೆ ಬೆನ್ನುಮಾಡಬಹುದು. ಅದೇ ನನ್ನಂಥವರಿಗೆ ಇರುವ ಭರವಸೆಯ ಬೆಳಕು.

*****

ಡಾ. ರಾಜೇಂದ್ರ ಬುರಡಿಕಟ್ಟಿ

14-01-2021 (ಮಕರ ಸಂಕ್ರಾಂತಿ ದಿನ)