Sunday, June 4, 2023

ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್..


ಈ ಪುಸ್ತಕವನ್ನು ಪಡೆಯುವ ಬಗೆ

ಇದು ನನ್ನ ಹೊಸ ಪುಸ್ತಕ. ಭಾರತ ಜನತೆಯಲ್ಲಿ ಅದರಲ್ಲಿಯೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಅವರು ಮತಮೌಢ್ಯಗಳಿಂದ ದೂರವಾಗಿ ಅವರಿವರ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಉದ್ದೇಶದ ಒಟ್ಟು 30 ಲೇಖನಗಳು ಇದರಲ್ಲಿವೆ. ಈ ಪುಸ್ತಕವು 176 ಪುಟಗಳನ್ನು ಹೊಂದಿದ್ದು 180 ರೂ ಮುಖಬೆಲೆ ಹೊಂದಿದೆ. ವೈಯಕ್ತಿಕ ಬಳಕೆಗಾಗಿ ಅಂಚೆ ಮೂಲಕ ತರಿಸಿಕೊಳ್ಳುವವರು ಅಂಚೆ ವೆಚ್ಚ ರೂ. 20ನ್ನು ಸೇರಿಸಿ ಒಟ್ಟು ರೂ. 200 ನ್ನು ನನ್ನ 9481504080 (Rajendra Buradikatti) ನಂಬರಿಗೆ PhonePay ಮಾಡಿ ಅದರ ಸ್ಕ್ರೀನ್ ಶಾಟ್ ಮತ್ತು ತಮ್ಮ ವಿಳಾಸವನ್ನು ವಾಟ್ಸಪ್ ಮೂಲಕ 8310938434 ನಂಬರಿಗೆ ಕಳಿಸಿದರೆ ನೋಂದಾಯಿತ ಅಂಚೆ ಮೂಲಕ ಪುಸ್ತಕವನ್ನು ಕಳಿಸಿಕೊಡಲಾಗುವುದು.

ಪುಸ್ತಕ ಮಾರಾಟಗಾರರು ಸಗಟು ಖರೀದಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ – 577204 ದೂ:9449886390, 9916197291 email: geethanjalipusthakaprakashana@gmail.com

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು


ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು  ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ.ಮಾಡಿ ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ ಪಿ.ಹೆಚ್.ಡಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದರು. ನಂತರ ಹೈಸ್ಕೂಲಿಗೆ ಬಡ್ತಿ ಹೊಂದಿದರು. ಪುಸ್ತಕಗಳನ್ನು ಪ್ರಕಟಿಸಿದ್ದು ಕಡಿಮೆ. 'ಕೆಮ್ಮುಗಿಲು' 'ಗುಲಾಬಿ ಮುಳ್ಳು' ಎಂಬ ಎರಡು ಕವನ ಸಂಕಲನಗಳು, 'ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು' (ಪಿಹೆಚ್ ಡಿ ಮಹಾಪ್ರಬಂಧ) ಮತ್ತು ಇತ್ತೀಚೆಗೆ ಪ್ರಕಟಿಸಿದ 'ಕಪ್ಪು ಬುರ್ಖಾ ಮತ್ತು ಕೇಸರಿ ಶಾಲ್ ' ಎಂಬ ಲೇಖನ ಸಂಕಲನ. ಇವಿಷ್ಟೇ ಇವರ ಕೃತಿಗಳು.

         ಬುದ್ಧಿ ಬಂದಾಗಿನಿಂದ ವೈಚಾರಿಕ ಚಿಂತನೆಯಲ್ಲಿ ನಂಬಿಕೆಯಿಟ್ಟು ಆ ಪ್ರಕಾರ ನಡೆಯುತ್ತಾ ಬಂದವರು ರಾಜೇಂದ್ರ ಬುರಡಿಕಟ್ಟಿಯವರು. ತಳಬುಡವಿಲ್ಲದ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳುವುದರಿಂದ ಸಾಮಾಜಿಕ ಪ್ರಗತಿ  ಕುಂಠಿತವಾಗುತ್ತದೆ ಎಂದು ಹೇಳುತ್ತಲೇ ಬಂದವರು. ಪುರೋಹಿತಶಾಹಿಯಿಂದ ಜನರಿಗಾಗುವ ಅನ್ಯಾಯವನ್ನು ಖಂಡಿಸುವ ನಿಟ್ಟಿನಲ್ಲಿ ಕುವೆಂಪು ಪ್ರಣೀತ 'ಮಂತ್ರಮಾಂಗಲ್ಯ' ರೀತಿಯಲ್ಲಿ ಶಶಿಕಲಾ ಅವರನ್ನು ಮದುವೆಯಾದವರು. ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಗೆ ಯಾವುದೇ ಮುಹೂರ್ತ-ಗಳಿಗೆಗಳನ್ನು ನೋಡುವ ಅಗತ್ಯವಿಲ್ಲ, ಬದಲಾಗಿ ಗುರು-ಹಿರಿಯರ, ಬಂಧು-ಮಿತ್ರರ ಶುಭಹಾರೈಕೆಗಳಿದ್ದರೆ ಸಾಕು ಎಂದು ವಾದಿಸಿ ಆ ಪ್ರಕಾರ ಮಾಡಿ  ಸಾಧಿಸಿದವರು. ಅವರು ಬರೆದು ಕೃತಿಗಳೂ ಇವೇ ಆದರ್ಶವನ್ನು ಹಿಡಿದಿವೆ.

   ಪ್ರಸ್ತುತ ' ಕಪ್ಪುಬುರ್ಖಾ ಮತ್ತು ಕೇಸರಿ ಶಾಲು ' ಕೃತಿಯಲ್ಲಿ ಮೂವತ್ತು ಲೇಖನಗಳಿವೆ. ಎಲ್ಲವೂ ವೈಚಾರಿಕ ಚಿಂತನೆಯ ಮೇಲೆ ಒತ್ತು ಹಾಕಿದ ಲೇಖನಗಳು. ವರ್ತಮಾನದ ಘಟನೆಗಳಿಗೆ ಸಂಬಂಧಿಸಿ ಸಮಯೋಚಿತವಾಗಿ ಸರಿ-ತಪ್ಪುಗಳ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು, ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು ಇಲ್ಲಿವೆ. ಏಳೆಂಟು ಲೇಖನಗಳಷ್ಟೇ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದವು ಒಂದೆರಡು ಪುಟಗಳ ಪುಟ್ಟ ಬರಹಗಳು.

   ಮುಖ್ಯವಾಗಿ ಇಲ್ಲಿ ಹಲವು ಲೇಖನಗಳಲ್ಲಿ ತಮ್ಮ ಧರ್ಮದ ಸಿದ್ಧಾಂತಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಹಿಂಸೆ-ದೊಂಬಿಗಿಳಿದು ಸಾಮಾಜಿಕ ಶಾಂತಿಯನ್ನು ಹಾಳುಗೆಡಹುವ ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಕ್ರೈಸ್ತರಾಗಲಿ- ಎಲ್ಲರ ಅಜ್ಞಾನದ ಬಗ್ಗೆ ಲೇಖಕರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬರ ಧಾರ್ಮಿಕ  ನಂಬಿಕೆಗಳನ್ನು ಹೀಗಳೆದು ಗೇಲಿ ಮಾಡುವುದು ಯಾವ ಧರ್ಮದ ಲಕ್ಷಣವೂ ಅಲ್ಲವೆನ್ನುತ್ತಾರೆ.  ನಮ್ಮ ಧರ್ಮವೇ ಸರ್ವಶ್ರೇಷ್ಠ, ಅದು ಪ್ರಪಂಚದ ಎಲ್ಲರೂ ಅನುಸರಿಸುವ ಧರ್ಮವಾಗಬೇಕೆಂದು ಹೇಳುತ್ತಾ  ಅದಕ್ಕಾಗಿ ಹಿಂಸಾಮಾರ್ಗಕ್ಕಿಳಿಯುವುದು ಅಮಾನುಷ ಅನ್ನುತ್ತಾರೆ. ನಮ್ಮದೇ ಸರಿಯೆಂದು ವಾದಿಸುವವರು ಸ್ವಲ್ಪ ತಾಳ್ಮೆ ವಹಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ  ಕೊಡುತ್ತಾರೆ.  ಎಲ್ಲ ಧರ್ಮಗಳ ಅನುಯಾಯಿಗಳಲ್ಲೂ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡವರಿಂದಾಗಿ  ಒಳ್ಳೆಯ ಮನಸ್ಸಿನ ಮುಗ್ಧರು ತೊಂದರೆ ಅನುಭವಿಸುವಂತಾಗುತ್ತದೆ ಅನ್ನುತ್ತಾರೆ. ಈ ರೀತಿ ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಲೇಖಕರು ಎಲ್ಲ ಪ್ರಮುಖ  ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ನಿಷ್ಪಕ್ಷವಾಗಿ  ಅಲ್ಲಿಂದ  ಸಂಬಂಧಪಟ್ಟ ಸಾಲುಗಳನ್ನು  ಉದಾಹರಿಸುತ್ತಾರೆ. ಇದು ಅವರ ಸೂಕ್ಷ್ಮ ವಿವೇಚನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. 

    ಧರ್ಮ ಮಾತ್ರವಲ್ಲದೆ ಇಂದಿನ ಶಿಕ್ಷಣ ಕ್ರಮ, ಸಂಸ್ಕೃತಿ-ಕಲೆಗಳ ಬಗೆಗೂ ಇಲ್ಲಿ ಲೇಖನಗಳಿವೆ. ಅಲ್ಲಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ಕೊಡುತ್ತಾ ತಮ್ಮ ನಿಲುವುಗಳನ್ನು ಲೇಖಕರು ಮಂಡಿಸುತ್ತಾರೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಅನೇಕ ಉತ್ತಮ ಕೃತಿಗಳನ್ನು ಚೆನ್ನಾಗಿ ಓದಿಕೊಂಡ ಅವರು ಅಲ್ಲಿಂದ ಆಯ್ದ ಸಾಲುಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸುತ್ತಾರೆ.  ಲೇಖನಗಳಿಗೆ ಅವರು ಕೊಡುವ ಶೀರ್ಷಿಕೆಗಳು  ( ಒಂದಾಗಲು ಬಿಡದ 'ವಂದೇ ಮಾತರಂ',  ಮಂಗನಬ್ಯಾಟೆ ಮತ್ತು ಮಂಗಚೇಷ್ಟೆ,  ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ, ಖಾಲಿ ಕುರ್ಚಿ ಮತ್ತು ಪೋಲಿ ಪತ್ರಕರ್ತ,  ಮಂಗಳೂರಿನ ಕೆಂಪು ಮತ್ತು ಕಲಬುರ್ಗಿಯ ಕಂಪು ಇತ್ಯಾದಿ) ಆಕರ್ಷಕವಾಗಿದ್ದು ಗಮನ ಸೆಳೆಯುತ್ತವೆ. ದೋಷಮುಕ್ತ ವಾದ ಸರಳ ಸುಂದರ ಬರವಣಿಗೆಯ ಶೈಲಿಯು ಅವರ ಕೃತಿಗೆ ಮೆರುಗನ್ನೂ ಗಾಂಭೀರ್ಯವನ್ನೂ ಇತ್ತಿದೆ. 

- ಡಾ. ಪಾರ್ವತಿ ಜಿ. ಐತಾಳ್

ಲೇಖನವನ್ನುಅವಧಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿರಿ.

http://bitly.ws/G4TE



 ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದ ಬರಹಗಳು


ಕಳೆದ ಭಾನುವಾರ(21 -5- 2023 )ಶಿವಮೊಗ್ಗ ಹೊರವಲಯದ ರತ್ನಗಿರಿ ನಗರದಲ್ಲಿ ಒ0ದು ಖಾಸಗಿ ಕಾರ್ಯಕ್ರಮದ ಭಾಗವಾಗಿ ಪುಸ್ತಕ ವೊ0ದು ಬಿಡುಗಡೆಯಾಯಿತು.ಅದ್ಯಾಕೋ ಯಾವ ಮಾಧ್ಯಮಗಳಲ್ಲಿಯೂ ಅದು ಸುದ್ದಿಯಾಗಲೇ ಇಲ್ಲ.

.ಅ0ದು ಲೋಕಾರ್ಪಣೆಯಾದ ಕೃತಿ ನಮ್ಮ ನಡುವಿನ ಶಿಕ್ಷಕ ಪ್ರಗತಿಪರ ಚಿಂತಕ ಮತ್ತು ಲೇಖಕರಾದ ಡಾ.ರಾಜೇಂದ್ರ ಬುರಡಿಕಟ್ಟಿ ಅವರ ಕಪ್ಪು ಬುರ್ಖಾ ಮತ್ತು ಕೇಸರಿ ಶಾಲು ಎಂಬ ವೈಚಾರಿಕ ಲೇಖನಗಳ ಸಂಗ್ರಹ. ವಿಚಾರವಂತರ ಸಂಖ್ಯೆ ನಮ್ಮಲ್ಲಿ ಕಡಿಮೆ.ವೈಚಾರಿಕ ಸಾಹಿತ್ಯ ರಚನೆ ಓದು ಎಲ್ಲವೂ ಕಡಿಮೆಯೇ.ಇ0ಥ ಸಂದರ್ಭದಲ್ಲಿ ಬೆಳಕು ಕಾಣುತ್ತಿರುವ ಕೃತಿಯೊ0ದು ಅಜ್ಞಾತವಾಗಿ ಉಳಿಯಬಾರದೆ0ಬ ಕಾರಣಕ್ಕೆ ಬಿಡುಗಡೆಗೊಳಿಸಿದ ನಾನೇ ಬಿಡೆ ಬಿಟ್ಟು ಪುಸ್ತಕವನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸುತ್ತಿದ್ದೇನೆ.
ಮೂಲತ: ಕವಿಪ್ರತಿಭೆಯ ಬುರಡಿಕಟ್ಟಿಯವರ ಎರಡನೆಯ ಗದ್ಯಕೃತಿ ಇದು .ಆಧುನಿಕ ಕನ್ನಡದ ಹತ್ತು ಮಹಾಕಾವ್ಯಗಳ ಕುರಿತು ಮೌಲಿಕ ಸಂಶೋಧನೆ ನಡೆಸಿ ಪ್ರಕಟಗೊಳಿಸಿದ ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು ಎ0ಬುದು ಮೊದಲ ಬೃಹದ್ಗದ್ಯಗ್ರಂಥ.
ಕಪ್ಪುಬೂರ್ಖಾ ಮತ್ತು ಕೇಸರಿ ಶಾಲು ಎ0ಬ ಪುಸ್ತಕದ ಹೆಸರು ನಮ್ಮ ಸಮಾಜದ ಸದ್ಯದ ವಿದ್ಯಮಾನಗಳ ನಡುವೆ ಧಾರ್ಮಿಕ ಸಂವಾದ,ಸಂಘರ್ಷಕ್ಕೆ ಆಹ್ವಾನ ನೀಡುವ ಅಥವ ಪ್ರಚೋದಿಸು ಬಗೆಯಲ್ಲಿದೆ ಎನಿಸಿದರೂ ವಾಸ್ತವದಲ್ಲಿ ಹಾಗಿಲ್ಲ.ಪುಸ್ತಕದ ಕೊನೆಯಲ್ಲಿರುವ ಈ ಪ್ರಬಂಧ ಶೈಕ್ಷಣಿಕ ದೃಷ್ಟಿಯಿಂದ ವಸ್ತುವನ್ನು ವಿಶ್ಲೇಷಿಸುತ್ತದೆ.ಭಿನ್ನ ಬಗೆಯ ವಸ್ತ್ರಗಳನ್ನು ತೊಟ್ಟು ವಿದ್ಯಾರ್ಥಿಗಳು ತರಗತಿಯಲ್ಲಿ ಕೂರುವುದರಿ0ದ ಪಾಠ ಪ್ರವಚನಕ್ಕೆ ಕಲಿಕೆಗೆ ಆಗುವ ಅಡೆತಡೆಗಳ ಕಡೆ ಬೆಳಕು ಚೆಲ್ಲುತ್ತದೆ.ಇಲ್ಲಿ ಪೋಷಕರ ಪಾತ್ರವನ್ನು ಗುರುತಿಸುತ್ತದೆ.

ಸುಮಾರು ಮೂವತ್ತು ಸಣ್ಣ ದೊಡ್ಡ ಲೇಖನಗಳನ್ನೊಳಗೊ0ಡ ಈ ವೈಚಾರಿಕ ಪ್ರಬಂಧ ಸಂಕಲನದ ಇತರ ಬರಹಗಳು ರಾಜಕಾರಣಿಗಳ ಧಾರ್ಮಿಕ ನಾಯಕರ ಸಾಹಿತಿಗಳ ಸಾ0ದರ್ಭಿಕ ಹೇಳಿಕೆ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಗಳ ರೂಪದಲ್ಲಿ ಹೊಮ್ಮಿಬಂದವು.ಅವು ಸಾರ್ವಕಾಲಿಕ ಮತ್ತುಸಾರ್ವತ್ರಿಕವಾಗಿಯೂ ಸಲ್ಲುತ್ತವೆ.ಇವು ಸಮಾಜದ ಮುಖ್ಯವಾಹಿನಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರತಿಪಾದಿಸುತ್ತ ವಾದರೂ ಅವೆಲ್ಲೂ ಆವೇಶವನ್ನೊಳಗೊ0ಡ ಕೆಳಮಟ್ಟದ ಕೆಟ್ಟ ಭಾಷೆಯನ್ನು ಬಳಸಿದ ಸಂಘರ್ಷವನ್ನು ಪ್ರೇರೇಪಿಸುವ ಬರಹಗಳಾಗುವುದಿಲ್ಲ.ಬದಲಿಗೆ ಶುದ್ಧ ಸುಂದರ ನೇರ ಸರಳ ಸ್ಪಷ್ಟ ತರ್ಕಬದ್ಧ ವಾದಸರಣಿಯಿ0ದ ವಿಚಾರವನ್ನು ಮನದಟ್ಟು ಮೂಡಿಸುತ್ತವೆ.ಅವರೇ ಹೇಳಿಕೊಂಡಿರುವಂತೆ ಬುರಡಿಕಟ್ಟಿಯವರದು ಮನವರಿಕೆಯ ತಂತ್ರ(convincing approch) ವಿಷಯ ವಿರೋಧಿಗಳಿಗೂ ಓದೋದುತ್ತ ಅಹುದಹುದೆನಿಸಿಬಿಡುವಂತ ನಿಶ್ಕಲ್ಮಷ ಸಮರ್ಥ ಶೈಲಿ.ಅನುಭವವೇದ್ಯ ಘಟನೆಗಳ ಮಾಹಿತಿ ಸಾಹಿತಿ ದಾರ್ಶನಿಕರ ಸಾಲುಗಳ ಉದಾಹರಣೆಗಳನ್ನು ನಡು ನಡುವೆ ಹೊ0ದಿ ಹೃದ್ಯವಾಗುವ ಬರಹ.ಈಚಿನ ದಿನಗಳಲ್ಲಿ ನಮ್ಮ ಶೈಕ್ಷಣಿಕ ಧಾರ್ಮಿಕ ರಾಜಕೀಯ ನೆಮ್ಮದಿಯನ್ನು ಕಲಕಿದ ಬಹುತೇಕ ಸಂದರ್ಭಗಳು ಈ ಕೃತಿಯಲ್ಲಿ ಪ್ರಸ್ತಾಪಿತವಾಗಿವೆ.ಧ್ವನಿಪೂರ್ಣ ಶೀರ್ಷಿಕೆಗಳು ತಾವೇ ಠಂಕಿಸಿದ ಕೆಲವು ನುಡಿಗಟ್ಟುಗಳಿಂದ ಕೂಡಿ ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದೆ ಇಲ್ಲಿನ ಬರಹಗಳು ಸರಾಗವಾಗಿ ಓದಿಸಿಕೊ0ಡು ಹೋಗುತ್ತವೆ.

ಒಟ್ಟಿನಲ್ಲಿ ಪುಸ್ತಕದ ಬರಹಗಳ ಉದ್ದೇಶ ಸಮಾಜದ ಸಾಮರಸ್ಯ ,ಶೈಕ್ಷಣಿಕ ಉನ್ನತಿ ,ಮೌಢ್ಯದ ವಿರುದ್ಧ ಹೋರಾಟ. ಲೇಖಕರ ಧ್ಯೇಯ ದೋರಣೆಯ ದ್ಯೋತಕವಾಗಿ ಪುಸ್ತಕದ ಹಿಂಭಾಗ ಅಚ್ಚಾಗಿರುವ ಒ0ದು ವಾಕ್ಯವನ್ನು ಉಲ್ಲೇಖಿಸಿ ಮುಗಿಸುತ್ತೇನೆ.
" ಸೂರ್ಯನಿಗೋ ಚಂದ್ರನಿಗೋ ಗ್ರಹಣ ಹಿಡಿದರೆ ಅದು ಅಸಹಜವೂ ಅಲ್ಲ ಅಪಾಯಕಾರಿಯೂ ಅಲ್ಲ.ಆದರೆ ಮನುಷ್ಯನ ಮನಸ್ಸಿಗೆ ಗ್ರಹಣ ಹಿಡಿದುಬಿಟ್ಟರೆ ಅದು ಅಸಹಜ ಮಾತ್ರವಲ್ಲ ಅಪಾಯಕಾರಿಯೂ ಹೌದು."
ಕನ್ನಡ ವೈಚಾರಿಕ ಸಾಹಿತ್ಯರಾಶಿಗೆ ಇದೊಂದು ಒಳ್ಳೆಯ ಸೇರ್ಪಡೆ.ರಚನಾಕಾರ ರಾಜೇಂದ್ರ ಬುರಡಿಕಟ್ಟಿ ಅವರಿಗೆ ಅಭಿನಂದನೆಗಳು.
ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನದವ ರು ಅಚ್ಚುಕಟ್ಟಾಗಿ ಪುಸ್ತಕ ಹೊರತಂದಿದ್ದಾರೆ.ಉಭಯತ್ರರನ್ನೂ ಪ್ರೋತ್ಸಾಹಿಸೋಣ ವೈಚಾರಿಕತೆಯನ್ನು ಉಳಿಸಿ ಬೆಳೆಸೋಣ.
ಡಾ.ಜೆ.ಕೆ.ರಮೇಶ.