Sunday, June 4, 2023


 ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದ ಬರಹಗಳು


ಕಳೆದ ಭಾನುವಾರ(21 -5- 2023 )ಶಿವಮೊಗ್ಗ ಹೊರವಲಯದ ರತ್ನಗಿರಿ ನಗರದಲ್ಲಿ ಒ0ದು ಖಾಸಗಿ ಕಾರ್ಯಕ್ರಮದ ಭಾಗವಾಗಿ ಪುಸ್ತಕ ವೊ0ದು ಬಿಡುಗಡೆಯಾಯಿತು.ಅದ್ಯಾಕೋ ಯಾವ ಮಾಧ್ಯಮಗಳಲ್ಲಿಯೂ ಅದು ಸುದ್ದಿಯಾಗಲೇ ಇಲ್ಲ.

.ಅ0ದು ಲೋಕಾರ್ಪಣೆಯಾದ ಕೃತಿ ನಮ್ಮ ನಡುವಿನ ಶಿಕ್ಷಕ ಪ್ರಗತಿಪರ ಚಿಂತಕ ಮತ್ತು ಲೇಖಕರಾದ ಡಾ.ರಾಜೇಂದ್ರ ಬುರಡಿಕಟ್ಟಿ ಅವರ ಕಪ್ಪು ಬುರ್ಖಾ ಮತ್ತು ಕೇಸರಿ ಶಾಲು ಎಂಬ ವೈಚಾರಿಕ ಲೇಖನಗಳ ಸಂಗ್ರಹ. ವಿಚಾರವಂತರ ಸಂಖ್ಯೆ ನಮ್ಮಲ್ಲಿ ಕಡಿಮೆ.ವೈಚಾರಿಕ ಸಾಹಿತ್ಯ ರಚನೆ ಓದು ಎಲ್ಲವೂ ಕಡಿಮೆಯೇ.ಇ0ಥ ಸಂದರ್ಭದಲ್ಲಿ ಬೆಳಕು ಕಾಣುತ್ತಿರುವ ಕೃತಿಯೊ0ದು ಅಜ್ಞಾತವಾಗಿ ಉಳಿಯಬಾರದೆ0ಬ ಕಾರಣಕ್ಕೆ ಬಿಡುಗಡೆಗೊಳಿಸಿದ ನಾನೇ ಬಿಡೆ ಬಿಟ್ಟು ಪುಸ್ತಕವನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸುತ್ತಿದ್ದೇನೆ.
ಮೂಲತ: ಕವಿಪ್ರತಿಭೆಯ ಬುರಡಿಕಟ್ಟಿಯವರ ಎರಡನೆಯ ಗದ್ಯಕೃತಿ ಇದು .ಆಧುನಿಕ ಕನ್ನಡದ ಹತ್ತು ಮಹಾಕಾವ್ಯಗಳ ಕುರಿತು ಮೌಲಿಕ ಸಂಶೋಧನೆ ನಡೆಸಿ ಪ್ರಕಟಗೊಳಿಸಿದ ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು ಎ0ಬುದು ಮೊದಲ ಬೃಹದ್ಗದ್ಯಗ್ರಂಥ.
ಕಪ್ಪುಬೂರ್ಖಾ ಮತ್ತು ಕೇಸರಿ ಶಾಲು ಎ0ಬ ಪುಸ್ತಕದ ಹೆಸರು ನಮ್ಮ ಸಮಾಜದ ಸದ್ಯದ ವಿದ್ಯಮಾನಗಳ ನಡುವೆ ಧಾರ್ಮಿಕ ಸಂವಾದ,ಸಂಘರ್ಷಕ್ಕೆ ಆಹ್ವಾನ ನೀಡುವ ಅಥವ ಪ್ರಚೋದಿಸು ಬಗೆಯಲ್ಲಿದೆ ಎನಿಸಿದರೂ ವಾಸ್ತವದಲ್ಲಿ ಹಾಗಿಲ್ಲ.ಪುಸ್ತಕದ ಕೊನೆಯಲ್ಲಿರುವ ಈ ಪ್ರಬಂಧ ಶೈಕ್ಷಣಿಕ ದೃಷ್ಟಿಯಿಂದ ವಸ್ತುವನ್ನು ವಿಶ್ಲೇಷಿಸುತ್ತದೆ.ಭಿನ್ನ ಬಗೆಯ ವಸ್ತ್ರಗಳನ್ನು ತೊಟ್ಟು ವಿದ್ಯಾರ್ಥಿಗಳು ತರಗತಿಯಲ್ಲಿ ಕೂರುವುದರಿ0ದ ಪಾಠ ಪ್ರವಚನಕ್ಕೆ ಕಲಿಕೆಗೆ ಆಗುವ ಅಡೆತಡೆಗಳ ಕಡೆ ಬೆಳಕು ಚೆಲ್ಲುತ್ತದೆ.ಇಲ್ಲಿ ಪೋಷಕರ ಪಾತ್ರವನ್ನು ಗುರುತಿಸುತ್ತದೆ.

ಸುಮಾರು ಮೂವತ್ತು ಸಣ್ಣ ದೊಡ್ಡ ಲೇಖನಗಳನ್ನೊಳಗೊ0ಡ ಈ ವೈಚಾರಿಕ ಪ್ರಬಂಧ ಸಂಕಲನದ ಇತರ ಬರಹಗಳು ರಾಜಕಾರಣಿಗಳ ಧಾರ್ಮಿಕ ನಾಯಕರ ಸಾಹಿತಿಗಳ ಸಾ0ದರ್ಭಿಕ ಹೇಳಿಕೆ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಗಳ ರೂಪದಲ್ಲಿ ಹೊಮ್ಮಿಬಂದವು.ಅವು ಸಾರ್ವಕಾಲಿಕ ಮತ್ತುಸಾರ್ವತ್ರಿಕವಾಗಿಯೂ ಸಲ್ಲುತ್ತವೆ.ಇವು ಸಮಾಜದ ಮುಖ್ಯವಾಹಿನಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರತಿಪಾದಿಸುತ್ತ ವಾದರೂ ಅವೆಲ್ಲೂ ಆವೇಶವನ್ನೊಳಗೊ0ಡ ಕೆಳಮಟ್ಟದ ಕೆಟ್ಟ ಭಾಷೆಯನ್ನು ಬಳಸಿದ ಸಂಘರ್ಷವನ್ನು ಪ್ರೇರೇಪಿಸುವ ಬರಹಗಳಾಗುವುದಿಲ್ಲ.ಬದಲಿಗೆ ಶುದ್ಧ ಸುಂದರ ನೇರ ಸರಳ ಸ್ಪಷ್ಟ ತರ್ಕಬದ್ಧ ವಾದಸರಣಿಯಿ0ದ ವಿಚಾರವನ್ನು ಮನದಟ್ಟು ಮೂಡಿಸುತ್ತವೆ.ಅವರೇ ಹೇಳಿಕೊಂಡಿರುವಂತೆ ಬುರಡಿಕಟ್ಟಿಯವರದು ಮನವರಿಕೆಯ ತಂತ್ರ(convincing approch) ವಿಷಯ ವಿರೋಧಿಗಳಿಗೂ ಓದೋದುತ್ತ ಅಹುದಹುದೆನಿಸಿಬಿಡುವಂತ ನಿಶ್ಕಲ್ಮಷ ಸಮರ್ಥ ಶೈಲಿ.ಅನುಭವವೇದ್ಯ ಘಟನೆಗಳ ಮಾಹಿತಿ ಸಾಹಿತಿ ದಾರ್ಶನಿಕರ ಸಾಲುಗಳ ಉದಾಹರಣೆಗಳನ್ನು ನಡು ನಡುವೆ ಹೊ0ದಿ ಹೃದ್ಯವಾಗುವ ಬರಹ.ಈಚಿನ ದಿನಗಳಲ್ಲಿ ನಮ್ಮ ಶೈಕ್ಷಣಿಕ ಧಾರ್ಮಿಕ ರಾಜಕೀಯ ನೆಮ್ಮದಿಯನ್ನು ಕಲಕಿದ ಬಹುತೇಕ ಸಂದರ್ಭಗಳು ಈ ಕೃತಿಯಲ್ಲಿ ಪ್ರಸ್ತಾಪಿತವಾಗಿವೆ.ಧ್ವನಿಪೂರ್ಣ ಶೀರ್ಷಿಕೆಗಳು ತಾವೇ ಠಂಕಿಸಿದ ಕೆಲವು ನುಡಿಗಟ್ಟುಗಳಿಂದ ಕೂಡಿ ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದೆ ಇಲ್ಲಿನ ಬರಹಗಳು ಸರಾಗವಾಗಿ ಓದಿಸಿಕೊ0ಡು ಹೋಗುತ್ತವೆ.

ಒಟ್ಟಿನಲ್ಲಿ ಪುಸ್ತಕದ ಬರಹಗಳ ಉದ್ದೇಶ ಸಮಾಜದ ಸಾಮರಸ್ಯ ,ಶೈಕ್ಷಣಿಕ ಉನ್ನತಿ ,ಮೌಢ್ಯದ ವಿರುದ್ಧ ಹೋರಾಟ. ಲೇಖಕರ ಧ್ಯೇಯ ದೋರಣೆಯ ದ್ಯೋತಕವಾಗಿ ಪುಸ್ತಕದ ಹಿಂಭಾಗ ಅಚ್ಚಾಗಿರುವ ಒ0ದು ವಾಕ್ಯವನ್ನು ಉಲ್ಲೇಖಿಸಿ ಮುಗಿಸುತ್ತೇನೆ.
" ಸೂರ್ಯನಿಗೋ ಚಂದ್ರನಿಗೋ ಗ್ರಹಣ ಹಿಡಿದರೆ ಅದು ಅಸಹಜವೂ ಅಲ್ಲ ಅಪಾಯಕಾರಿಯೂ ಅಲ್ಲ.ಆದರೆ ಮನುಷ್ಯನ ಮನಸ್ಸಿಗೆ ಗ್ರಹಣ ಹಿಡಿದುಬಿಟ್ಟರೆ ಅದು ಅಸಹಜ ಮಾತ್ರವಲ್ಲ ಅಪಾಯಕಾರಿಯೂ ಹೌದು."
ಕನ್ನಡ ವೈಚಾರಿಕ ಸಾಹಿತ್ಯರಾಶಿಗೆ ಇದೊಂದು ಒಳ್ಳೆಯ ಸೇರ್ಪಡೆ.ರಚನಾಕಾರ ರಾಜೇಂದ್ರ ಬುರಡಿಕಟ್ಟಿ ಅವರಿಗೆ ಅಭಿನಂದನೆಗಳು.
ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನದವ ರು ಅಚ್ಚುಕಟ್ಟಾಗಿ ಪುಸ್ತಕ ಹೊರತಂದಿದ್ದಾರೆ.ಉಭಯತ್ರರನ್ನೂ ಪ್ರೋತ್ಸಾಹಿಸೋಣ ವೈಚಾರಿಕತೆಯನ್ನು ಉಳಿಸಿ ಬೆಳೆಸೋಣ.
ಡಾ.ಜೆ.ಕೆ.ರಮೇಶ.

No comments:

Post a Comment