Tuesday, October 31, 2017

`ಬಲಿ’ ತೆಗೆದುಕೊಳ್ಳದೆ `ಬಲ’ ತರಲಿ ಪ್ರಶಸ್ತಿ

`ಬಲಿ’ ತೆಗೆದುಕೊಳ್ಳದೆ `ಬಲ’ ತರಲಿ ಪ್ರಶಸ್ತಿ


ಇವರು ನಮ್ಮ ಕಡಿದಾಳ್ ಶಾಮಣ್ಣ. ಲಂಕೇಶ್ ಅವರ `ಗಡ್ಡದ ಶಾಮಣ್ಣ’. ರಾಜ್ಯೋತ್ಸವದ ಪ್ರಶಸ್ತಿ ಪ್ರಕಟವಾದಾಗ ಮತ್ತು ದಸರಾ ಉದ್ಘಾಟಕರ ಹೆಸರು ಪ್ರಕಟವಾದಾಗ ಪ್ರತಿವರ್ಷ ನನಗೆ ಒಂದು ಕ್ಷಣ ನೆನಪಿಗೆ ಬಂದು ಹೋಗುವ ಹೆಸರು ಮತ್ತು ಚಿತ್ರ. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಕಷ್ಟು ಘನತೆಯಿಂದ ಕೂಡಿದೆ ಎಂದು ಸ್ನೇಹಿತರೊಬ್ಬರು ಬರೆದದ್ದನ್ನು ನೋಡಿದೆ. ಇರಬಹುದು ಅನ್ನಿಸಿತು. ಈ ಬಾರಿ 62 ಪ್ರಶಸ್ತಿಗಾಗಿ ಒಂದು ಸಾವಿರಕ್ಕೂ ಮಿಕ್ಕಿ ಅರ್ಜಿ ಬಂದಿದ್ದವಂತೆ! ಆಯ್ಕೆಯಾದ ಹೆಸರುಗಳನ್ನು ನೋಡಿದರೆ ಅವರಲ್ಲಿ ಯಾವ ಕಾರಣಕ್ಕೂ ಅರ್ಜಿ ಹಾಕುವ ಮನಸ್ಥಿತಿಯವರು ಅಲ್ಲದವರು ಹಲವರು ಇದ್ದಾರೆ.  ಅರ್ಜಿಹಾಕದಿದ್ದರೂ, ನಿಜವಾದ ರೀತಿಯಲ್ಲಿ ಹೇಗೆ ಈ ಆಯ್ಕೆ ನಡೆಯಬೇಕೋ ಆ ರೀತಿಗೆ ಆದ್ಯತೆ ನೀಡಿ, `ಸಮಯಸಾಧಕ’ರನ್ನು ನಿರ್ಲಕ್ಷಿಸಿ ಅಥವಾ ತಿರಸ್ಕರಿಸಿ `ನೈಜಸಾಧಕ’ರನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಸಂಬಂಧಪಟ್ಟವರಿಗೆಲ್ಲ ಧನ್ಯವಾದಗಳು ಮತ್ತು ಆಯ್ಕೆಯಾದ ಇಂತಹ ನೈಜಸಾಧಕರಿಗೆ ಅಭಿನಂದನೆಗಳು.

ಅಂದಹಾಗೆ ನಮ್ಮ ಶಾಮಣ್ಣನನ್ನು ಆರಂಭದಲ್ಲಿ ನೆನಸಿಕೊಂಡದ್ದು ಏಕೆ ಎಂದರೆ ಹಿಂದೊಮ್ಮೆ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ನೇತೃತ್ವದ ಆಯ್ಕೆ ಸಮಿತಿ ಈ ನಮ್ಮ ಶಾಮಣ್ಣನವರನ್ನು ಇದೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಿತ್ತು. ಆಗ, “ಏ.. ಈ ಪ್ರಶಸ್ತಿ ಗಿಸಸ್ತಿ ನಮ್ಮಂಥೋರಿಗೆಲ್ಲ ಸರಿಯಾಗಲ್ಲ” ಎಂದು ಅವರು ಅದನ್ನು ತಲೆಕೊಡವಿ ತಿರಸ್ಕರಿಸಿದ್ದರು. ಹಾಗೆ ರಾಜ್ಯದ ಇನ್ನೊಂದು `ಪ್ರತಿಷ್ಠಿತ’ ಗೌರವ ಎಂದು ಭಾವಿಸಲಾಗುವ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ 2005ರಲ್ಲಿ ಇವರನ್ನು ಆಯ್ಕೆಮಾಡಿತ್ತು. ಆಗ ಆ `ಗೌರವ’ವನ್ನು ತಿರಸ್ಕರಿಸುತ್ತಾ ಅವರು ಹೇಳಿದ್ದ, “ವಿಧಾನಸೌಧ ಕಸಗುಡಿಸಲಿಕ್ಕೆ ಬೇಕಾದ್ರೆ ಹೋಗ್ತೀನಿ, ದಸರಾ ಉದ್ಘಾಟನೆಗೆ ಮಾತ್ರ ಹೋಗಲ್ಲ” ಎಂಬ ಮಾತು ಒಂದಿಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು.

ತಾನು ಹೋರಾಡುವ ಹೋರಾಟವನ್ನು `ಒಳಗೆಹಾಕಿಕೊಳ್ಳುವ ಪ್ರಭುತ್ವದ ಕ್ರಮ’ ಎಂದೋ ಅಥವಾ ಇಂತಹ ಉಪಾದಿಗಳು ಹೋರಾಟಗಾರನ ಕಾಲನ್ನು ಕಟ್ಟಬಹುದಾದ ಹಗ್ಗಗಳೋ, ಬಾಯಿಗೆ ತುರುಕಬಹುದಾದ ಬಟ್ಟೆಗಳೋ ಆಗಬಹುದೆಂದು ಶಾಮಣ್ಣ ಹಾಗೆ ಮಾಡಿರಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ತನ್ನಿಷ್ಟದ ಸಂಗಾತಿಗಳೊಂದಿಗೆ ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಅದಿಲ್ಲದ ವೇಳೆ ತನ್ನಿಷ್ಟದ ಸರೋದ್ ಮೇಲೆ ಬೆರಳಾಡಿಸುತ್ತಾ ಬಾಯಲ್ಲಿ ತನ್ನದೇ ಆದ ಶೈಲಿಯಲ್ಲಿ ಹಾಡು ಗುನುಗುತ್ತಾ ಇರುವುದು ಶಾಮಣ್ಣನವರಿಗೆ ಮೇಲಿನ ಅವರಿಂದ ತಿರಸ್ಕೃತಗೊಂಡಿರುವ ಪ್ರತಿಷ್ಠಿತ ಗೌರವಗಳಿಗಿಂತ ಹೆಚ್ಚು ಸಂತೋಷಕೊಡುವ ಸಂಗತಿಯಾಗಿರಬಹುದು ಅಂದುಕೊಳ್ಳುತ್ತೇನೆ.
 
ಅಂದಹಾಗೆ ಶಾಮಣ್ಣನವರ ಉದಾಹರಣೆ ಕೊಡುವ ಮೂಲಕ ಈಗ ಪ್ರಶಸ್ತಿಗೆ ಆಯ್ಕೆಯಾಗಿರುವ ಹೋರಾಟ ಮನಸ್ಥಿತಿಯ ಸಾಧಕರು ಶಾಮಣ್ಣನವರ ಮಾರ್ಗವನ್ನೇ ಅನುಸರಿಸಬೇಕು ಎಂದು ಪರೋಕ್ಷವಾಗಿ ಹೇಳುವುದು ನನ್ನ ಉದ್ದೇಶವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಅವರೆಲ್ಲರೂ ಈ ಗೌರವವನ್ನು ಸ್ವೀಕರಿಸಬೇಕು; ಸ್ವೀಕರಿಸಿಯೂ ತಾವು ಈ ಗೌರವಕ್ಕೆ `ಬಲಿ’ಯಾಗದೇ `ಬಲ’ ತರಬೇಕು. ನಾಡು-ನುಡಿಯ ಘನತೆ ಗೌರವದ ಪ್ರಶ್ನೆಬಂದಾಗ ಅವರೊಳಗಿನ ಹೋರಾಟಗಾರನ ಬಾಯನ್ನು ಈ ಗೌರವ ಕಟ್ಟದಿದ್ದರೆ ಅಷ್ಟೇ ಸಾಕು. ಆಗ ಪ್ರಶಸ್ತಿಗೂ ಅವರಿಗೂ ಗೌರವ ನಿಜಾರ್ಥದಲ್ಲಿ ಸಲ್ಲುತ್ತದೆ. ಹಾಗಾಲೆಂದು ಹಾರೈಸೋಣ.



Friday, October 27, 2017

Thursday, October 26, 2017

ಇಬ್ಬರು ಗಾಂಧಿಗಳಿಂದ ನೆಗ್ಗಿ ಮುರುಟಿದ ಬದುಕು

ಇಬ್ಬರು ಗಾಂಧಿಗಳಿಂದ ನೆಗ್ಗಿ ಮುರುಟಿದ ಬದುಕು

ಅಕ್ಟೋಬರ್ ತಿಂಗಳು ವಸಾಹತು ಮತ್ತು ವಸಾಹತೋತ್ತರ ಭಾರತದ ಮೂವರು ಮಹಾನ್ ನಾಯಕರು ಹುಟ್ಟಿದ ತಿಂಗಳು. ಈ ಮೂವರಲ್ಲಿ ಮಹಾತ್ಮಾ ಗಾಂಧಿ ಹುಟ್ಟಿದ ದಿನ ರಾಷ್ಟ್ರೀಯ ಹಬ್ಬವಾಗಿ ಆಚರಿಸಲ್ಪಡುವುದರಿಂದ ಖ್ಯಾತವಾಗಿದೆ. ಗಾಂಧಿಯವರಷ್ಟಲ್ಲದಿದ್ದರೂ ತಮ್ಮ ಸರಳ ಸಜ್ಜನಿಕೆಯಿಂದ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನವೂ ಗಾಂಧಿಯ ಜನ್ಮದಿನದಂದೇ ಬರುವುದರಿಂದ ಅದು ಗಾಂಧಿಜಯಂತಿಯಲ್ಲಿ ಒಂದರ್ಥದಲ್ಲಿ ಲೀನವಾಗಿಬಿಟ್ಟಿದೆ. ಬಹಳ ದಿನಗಳಿಂದ ನಾವು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದ್ದ `ಗಾಂಧಿಜಯಂತಿ’ ಇತ್ತೀಚಿನ ದಿನಗಳಲ್ಲಿ `ಗಾಂಧಿ-ಶಾಸ್ತ್ರೀ ಜಯಂತಿ’ ಎಂದು ಹೆಸರು ಬದಲಿಸಿಕೊಂಡಿರುವುದು ನಿಜವಾದರೂ ಶಾಸ್ತ್ರೀಯವರಿಗೆ ಸಿಗಬೇಕಾದ ಮಾನ್ಯತೆ ಆಧ್ಯತೆಗಳು ಸಿಗುತ್ತಿಲ್ಲವೆಂದೇ ಹೇಳಬೇಕು. ಅಂದು ಮಾತನಾಡುವ ಭಾಷಣಕಾರರೆಲ್ಲ ಗಾಂಧಿಯವರ ಬಗ್ಗೆ ಮಾತಾಡಿಯಾದ ಮೇಲೆ ನೆನಪಾದರೆ ಶಾಸ್ತ್ರೀಯವರ ಬಗ್ಗೆಯೂ ಕೊನೆಯಲ್ಲಿ ಸಮಾರೋಪದ ರೀತಿಯಲ್ಲಿ ಒಂದೆರಡು ಮಾತುಗಳನ್ನು ಸೇರಿಸಿ ಹೇಳಿ ಮಾತು ಮುಗಿಸುವುದನ್ನೂ ಇನ್ನು ಕೆಲವರು ಗಾಂಧಿ ಬಗ್ಗೆ ಮಾತಾಡುತ್ತಾ ಮಾತಾಡುತ್ತಾ ಕೊನೆಯಲ್ಲಿ ಶಾಸ್ತ್ರೀಯವರ ಹೆಸರನ್ನು ಪ್ರಸ್ತಾಪಿಸುವುದನ್ನೇ ಮರೆತು ಭಾಷಣ ಮುಗಿಸಿ, ಕೊನೆಗೆ ನೆನಪಾಗಿ ಏನೋ ಅಪರಾಧ ಮಾಡಿದವರಂತೆ ಕೈಕೈ ಹಿಚುಕಿಕೊಳ್ಳುವುದನ್ನೂ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಇದೇ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಇನ್ನೊಬ್ಬ ಮಹಾನ್ ನಾಯಕ `ಆಗಸ್ಟ್ ಕ್ರಾಂತಿಯ ವೀರ’ `ಲೋಕನಾಯಕ’ ಎಂಬ ಅಭಿಧಾನಗಳಿಗೆ ಪಾತ್ರವಾಗಿರುವ ಜೆಪಿ ಎಂದೇ ಪ್ರಖ್ಯಾತರಾದ ಜಯಪ್ರಕಾಶ್ ನಾರಾಯಣ ಅವರು. ಗಾಂಧೀಜಿಯ ಕೊಲೆಯ ನಂತರ ಅವರ ಸರ್ವೋದಯ ತಾತ್ವಿಕತೆ ಬಹುಕಾಲ ಸಾಯದಂತೆ ನೋಡಿಕೊಂಡ ಹಿರಿಮೆ ಜೆಪಿಯವರಿಗೆ ಸಲ್ಲುತ್ತದೆ. ಗಾಂಧೀಜಿಯ `ಗ್ರಾಮಸ್ವರಾಜ್ಯ’ ಕಲ್ಪನೆಯ ಮುಂದುವರೆದ ಭಾಗವಾಗಿ ಅವರು ಪ್ರತಿಪಾದಿಸಿದ `ಸಂಪೂರ್ಣಕ್ರಾಂತಿ’ ಆಧುನಿಕ ಭಾರತದ ಸಮಾಜೋರಾಜಕೀಯ ಇತಿಹಾಸದಲ್ಲಿ ಬಹುಮುಖ್ಯವಾದ ಅಧ್ಯಾಯವೇ ಆಗಿದೆ. ಅಕ್ಟೋಬರ್ ಹನ್ನೊಂದು ಅವರ ಜನ್ಮದಿನ. 1902ರಲ್ಲಿ ಹುಟ್ಟಿದ್ದ ಅವರು ಬದುಕಿದ್ದರೆ ಅವರಿಗೆ ಈಗ ನೂರಾ ಹದಿನೈದು ವರ್ಷಗಳಾಗುತ್ತಿತ್ತು. ಅಕ್ಟೋಬರ್ ಅವರು ತೀರಿಕೊಂಡ ತಿಂಗಳು ಕೂಡ ಹೌದು. 1979ರ ಅಕ್ಟೋಬರ್ ಏಳರಂದು ನಮ್ಮನ್ನಗಲಿದ ಜೆಪಿ ಒಟ್ಟು ಬದುಕಿದ್ದು ಒಟ್ಟು ಎಪ್ಪತ್ತೇಳು ವರ್ಷಗಳು. ನಮ್ಮ ಕುವೆಂಪು ಕಾರಂತರ ಸಮಕಾಲೀನರಾಗಿದ್ದ ಜೆಪಿ, ಕಾರಂತರು ಹುಟ್ಟಿದ ವರ್ಷವೇ ಹುಟ್ಟಿದವರು ಕೂಡ.
ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಮುಂತಾದ ನಾಯಕರಿಗೆ ಸಿಗದ ಒಂದು ಅವಕಾಶ ಜೆಪಿಯವರಿಗೆ ತಮ್ಮ ಜೀವಿತಾವಧಿಯಲ್ಲಿ ಸಿಕ್ಕಿತು. ಅದೆಂದರೆ ಯಾವ ಸ್ವಾತಂತ್ರ್ಯಕ್ಕಾಗಿ ತಮ್ಮ ಮಾನ ಮತ್ತು ಪ್ರಾಣಹಾನಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಗುಂಡಿಗೆ ಗುಂಡಿಗೆಕೊಟ್ಟು ಅವರೆಲ್ಲ ಅಹೋರಾತ್ರಿ ಹೋರಾಡಿದರೋ ಆ ಸ್ವಾತಂತ್ರ್ಯ ಹೇಗಿರುತ್ತದೆ ಎಂದು ಬಹಳ ವರ್ಷ ನೋಡುವ ಅವಕಾಶ ಗಾಂಧಿ ಮುಂತಾದವರಿಗೆ ದೊರೆಯಲಿಲ್ಲ. ಸ್ವಾತಂತ್ರ್ಯ ಸಿಗುವ ಮತ್ತು ಸಿಕ್ಕ ಆಸುಪಾಸಿನ ವರ್ಷಗಳಲ್ಲಿಯೇ ಅವರೆಲ್ಲ ನಮ್ಮನ್ನಗಲಿದರು. ಆದರೆ ಜಯಪ್ರಕಾಶರಿಗೆ ಮಾತ್ರ ಆ ಅವಕಾಶ ಸಿಕ್ಕಿತು. ಅದನ್ನು `ಅವಕಾಶ’ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆಯೋ ತಿಳಿಯದು. ಏಕೆಂದರೆ ಒಟ್ಟು ಬದುಕಿದ ಎಪ್ಪತ್ತೇಳು ವರ್ಷಗಳಲ್ಲಿ ಆರಂಭಿಕ ಬಾಲ್ಯ ಸ್ನಾತಕಗಳ ಅವಧಿಯ ಸುಮಾರು ಇಪ್ಪತ್ತೇಳು ವರ್ಷಗಳನ್ನು ಬಿಟ್ಟರೆ ಉಳಿದ ಐವತ್ತು ವರ್ಷಗಳನ್ನು ಜೆಪಿ ಸಾರ್ವಜನಿಕ ಹಿತಕ್ಕಾಗಿಯೇ ಬದುಕಿದರು. ಈ ಐವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಮೊದಲ ಹದಿನೆಂ ಟು ವರ್ಷಗಳನ್ನು ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಬಳಸಿದರೆ ಉಳಿದ ಮೂವತ್ತೆರಡು ವರ್ಷಗಳನ್ನು ಗಳಿಸಿಕೊಂಡ ಸ್ವಾತಂತ್ರ್ಯವನ್ನು ನಮ್ಮವರಿಂದಲೇ ಉಳಿಸಿಕೊಳ್ಳುವ ಹೋರಾಟಕ್ಕೆ ಬಳಸಿದರು! ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಂದ ಅನುಭವಿಸಿದ್ದಕ್ಕಿಂತ ದೊಡ್ಡಮಟ್ಟದ ಚಿತ್ರಹಿಂಸೆಯನ್ನು ಅನುಭವಿಸಿ ನರಳಿ ನರಳಿ ಅವರು ಪ್ರಾಣಬಿಡಬೇಕಾಯಿತು.
ಬೆಳೆವ ಸಿರಿಯ ಮೊಳಕೆ
ಪ್ರಾಚೀನ ಕಾಲದಿಂದಲೂ ಬಿಹಾರ ಬಹಳಷ್ಟು ಕಾರಣಕ್ಕಾಗಿ ಈ ದೇಶದ ಚರಿತ್ರೆಯಲ್ಲಿ ಗಮನಸೆಳೆಯುವ ಪ್ರದೇಶವಾಗಿ ಗುರುತಿಸಿಕೊಳ್ಳುತ್ತಲೇ ಬಂದಿದೆ. ಪೌರಾಣಿಕ ಅಂಶಗಳನ್ನು ಬಿಟ್ಟು ಕೇವಲ ಐತಿಹಾಸಿಕ ಅಂಶಗಳಿಂದಲೇ ಆರಂಭಿಸುವುದಾದರೂ ಏಷ್ಯಾದ ಬೆಳಕು ಎಂದು ಕರೆಯಲ್ಪಡುವ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ, ಜೈನ ಮತಸ್ಥಾಪಕ ಮಹಾವೀರ ಹುಟ್ಟಿದ ನಾಡು. ಭಾರತದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯದ ಕಾರ್ಯಕ್ಷೇತ್ರ. ಅಶೋಕನ ರಾಜಧಾನಿಯಾಗಿ ಮೆರೆದ ಈಗಿನ ಪಾಟ್ನಾ ಅಥವಾ ಆಗಿನ ಪಾಟಲೀಪುತ್ರ. ಸ್ವತಂತ್ರ್ಯಪೂರ್ವ ಮತ್ತು ಸ್ವತಂತ್ರ್ಯೋತ್ತರ ಭಾರತದ ಮಹಾನ್ ಇನ್ನೊಬ್ಬ ಮಹಾನ್ ನಾಯಕ ಡಾ. ರಾಮಮನೋಹರ ಲೋಹಿಯಾ ಇವರ ಜನ್ಮಸ್ಥಳ ಅವುಗಳನ್ನು ಹೆಸರಿಸಬಹುದಾದ ಕೆಲವು ಮುಖ್ಯಸಂಗತಿಗಳು.
ಇಂತಹ ಬಿಹಾರದ ಸರಯೂ ಮತ್ತು ಜಾಹ್ನವಿ ನದಿಗಳ ಮಧ್ಯದ ಸಿತಾಬ್ ದಿಯಾರಾ ಎಂಬ ಹಳ್ಳಿ ಜೆಪಿಯವರ ಹುಟ್ಟೂರು. ಅವರ ತಂದೆ ತಾಯಿಯವರಾದ ಹರಸೂದ್ ಪಾಲ್ ಮತ್ತು ಪೂಲ್ ರಾನಿ ದೇವಿಯವರಿಗೆ ಇವರು ನಾಲ್ಕನೆಯ ಮಗ. ನಾವೆಲ್ಲ ಸಾಮಾನ್ಯ ಜನರು. ನಮ್ಮ ಪೂರ್ವಜರು ಕೊನೆಯ ಪಕ್ಷ ಮನೆಯಲ್ಲಿಯಾದರೂ ಹುಟ್ಟುತ್ತಿದ್ದರು. ನಾವು ಆ ಭಾಗ್ಯವನ್ನೂ ಈಗ ಇಟ್ಟುಕೊಂಡಿಲ್ಲ. ಈಗಿನ ಮಕ್ಕಳೆಲ್ಲ ಆಸ್ಪತ್ರೆಯಲ್ಲಿ ಹುಟ್ಟುವವರು. ಆದರೆ ಲೋಕಕ್ಕೆ ಬೆಳಕಾಗುವ ಬಹಳಷ್ಟು ವ್ಯಕ್ತಿಗಳು ಅನನುಕೂಲಕರ ಪರಿಸ್ಥಿತಿಯಲ್ಲೋ ನಡುಬೀದಿಯಲ್ಲೋ ಹುಟ್ಟುತ್ತಾರೆ! ಕ್ರಿಸ್ತ ಕುರಿಕೊಟ್ಟಿಗೆಯಲ್ಲಿ ಹುಟ್ಟಿದ, ಬುದ್ಧ ಲುಂಬಿನಿವನದಲ್ಲಿ ಮರದ ಕೆಳಗೆ ಹುಟ್ಟಿದ. ಜೆಪಿಯವರು ಕೂಡ ಹುಟ್ಟಿದ್ದು ತಮ್ಮ ಊರಿನಿಂದ ದೂರದಲ್ಲಿ ಅವರ ಪಾಲಕರು ಪ್ಲೇಗ್ ಮಾರಿಯಿಂದ ಮತ್ತು ಜೀವಕಂಟಕವಾಗಿ ಹರಿಯುತ್ತಿದ್ದ ನಮ್ಮೂರಿನ ನದಿಗಳ ಪ್ರವಾಹದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಹಾಕಿಕೊಂಡಿದ್ದ ತಾತ್ಕಾಲಿಕ ಮನೆ ಎನ್ನಬಹುದಾದ ಡೇರೆಯೊಂದರಲ್ಲಿ. ಹೀಗೆ ಒಂದರ್ಥದಲ್ಲಿ ಇವರೂ ನಡುಬೀದಿಯಲ್ಲಿ ಹುಟ್ಟಿದವರೇ!
ಬಾಲಕ ಜಯಪ್ರಕಾಶ ತಮ್ಮ ಆರಂಭಿಕ ಜೀವನವನ್ನು ತಮ್ಮ ಪರಿಸರದಲ್ಲಿ, ಪಾಟ್ನಾದಲ್ಲಿ ಪೂರೈಸಿದವರು. ಬಾಲ್ಯದಲ್ಲಿಯೇ ಪಶುಪಕ್ಷಿಗಳೊಂದಿಗೆ ಸಂತೋಷದಿಂದ ಕಾಲಕಳೆಯುತ್ತಿದ್ದ ಜೆಪಿ ಮನುಷ್ಯರನ್ನು ಗೌರವಿಸುವುದು ಮಾತ್ರವಲ್ಲ ಸಹಜೀವಿಗಳ ಜೀವನವನ್ನು ಗೌರವಿಸುವ ಕಲೆ ಕೂಡ ಆಗಿನಿಂದಲೇ ರೂಢಿಸಿಕೊಂಡವರು. ಅಂತೆಯೇ ಅನ್ಯಾಯದ ವಿರುದ್ಧ ಪ್ರತಿಭಟಿಸುವುದನ್ನು ಕೂಡ ಅಲ್ಲಿಂದಲೇ ರೂಢಿಸಿಕೊಂಡವರು. ಹಿಂದೂಧರ್ಮದ ಹಬ್ಬದ ದಿನದಿಂಲೇ ತಮ್ಮ ಪರೀಕ್ಷೆಯನ್ನು ಗೊತ್ತುಮಾಡಿದ್ದ ತನ್ನ ಶಾಲೆಯ ಬ್ರಿಟೀಷ್ ಮುಖ್ಯೋಪಾಧ್ಯಾಯನ ಕ್ರಮವನ್ನು ವಿರೋಧಿಸಿ ತನ್ನ ಮಿತ್ರರೊಂದಿಗೆ ಪರೀಕ್ಷೆಯನ್ನೇ ಬಹಿಷ್ಕರಿಸುವ ಎದೆಗಾರಿಕೆಯನ್ನು ತೋರಿದ್ದವರು! ಜಗದೀಶ್ಚಂದ್ರ ಭೋಸ್ ಅವರಂತೆ ವಿಜ್ಞಾನಿಯಾಗಬೇಕೆಂದು ವಿಜ್ಞಾನ ವಿಷಯವನ್ನು ತೆಗೆದುಕೊಂಡು ಅಧ್ಯಯನ ಆರಂಭಿಸಿದರೂ ಅವರು ಆದದ್ದು ಮಾತ್ರ ರಾಜಕೀಯ ಮುತ್ಸದ್ಧಿ ಮತ್ತು ಸಮಾಜಸೇವಕ!
ಅಮೇರಿಕೆಯಲ್ಲಿ ರೂಪುಗೊಂಡ ಹೋರಾಟಗಾರ
ಜೆಪಿಯವರು ಇಂಟರ್ ಮುಗಿಸುತ್ತಿದ್ದಂತೆಯೇ ಅವರಿಗೆ 1922 ರಲ್ಲಿ ಮದುವೆಯಾಗುತ್ತದೆಯಾದರೂ ಅವರು ಹೆಂಡತಿಯನ್ನು ಭಾರತದಲ್ಲಿಯೇ ಬಿಟ್ಟು ಅಮೇರಿಕಕ್ಕೆ ಹೋಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಅಮೇರಿಕೆಯಲ್ಲಿ ಜೆಪಿ ಕಳೆದ ಸುಮಾರು ಏಳು ವರ್ಷಗಳ ಬದುಕು ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತು ಎನ್ನಬಹುದು. ಗಾಂಧಿ ಹೇಗೆ ದಕ್ಷಿಣ ಆಫ್ರಿಕದಲ್ಲಿ ಹೋರಾಟಗಾರರಾಗಿ ರೂಪಿಸಲ್ಪಟ್ಟರೋ ಅದೇ ರೀತಿ ಜೆಪಿ ಅಮೇರಿಕದಲ್ಲಿ ರೂಪಿಸಲ್ಪಟ್ಟರು. ಅವರು ಅಮೇರಿಕೆಗೆ ಹೋಗುವ ಮೊದಲೇ ಹದಿನೆಂಟು ವರ್ಷದ ಯುವಕನಾಗಿದ್ದಾಗಲೇ ಸುಮಾರು 1920ರ ವೇಳೆಗೆ ಗಾಂಧಿ ಸೇರಿದಂತೆ ಭಾರತದ ಬಹುಮುಖ್ಯ ಸ್ವಾತಂತ್ರ್ಯ ಹೋರಾಟಗಾರ ಸಂಪರ್ಕಕ್ಕೆ ಬಂದು, ಅಸಹಾಕರ ಚಳುವಳಿಯ ತೀವ್ರತೆಯ ಆ ಕಾಲದಲ್ಲಿ ಮೌಲಾನ್ ಅಬ್ದುಲ್ ಕಲಾಮ್ ಮತ್ತು ನೆಹರೂ ಅವರ ಭಾಷಣಗಳನ್ನು ಆಲಿಸಿ ತೀವ್ರವಾಗಿ ರಾಷ್ಟ್ರಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿ, ಮುಂಬರುವ ಇಂಟರ್ ಮಿಡಿಯೇಟ್ ಪರೀಕ್ಷೆಯನ್ನು ಲೆಕ್ಕಿಸಿದೇ ಕಾಲೇಜ್ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡದ್ದೂ ಚೌರಿಚೌರಾ ಘಟನೆಯ ಹಿನ್ನಲೆಯಲ್ಲಿ ಗಾಂಧೀಜಿ ಅಸಹಾಕಾರ ಚಳುವಳಿಯನ್ನು ಹಿಂತೆಗೆದುಕೊಂಡಾಗ ಮುಂದೇನು ಮಾಡಬೇಕೆಂದು ತೋರದೆ ಹೀಗೆ ರಾಷ್ಟ್ರಭಕ್ತರಿಗಾಗಿಯೇ ಇದ್ದ ಬಿಹಾರ ವಿದ್ಯಾಪೀಠವನ್ನು ಸೇರಿ ಇಂಟರ್ ಮುಂದುವರೆಸಿ ಪಾಸಾಗಿದ್ದೂ ಮುಂತಾದ ಘಟನೆಗಳು ಅವರಲ್ಲಿ ಹೋರಾಟದ ಬೀಜಗಳನ್ನು ಬಿತ್ತಿದ್ದವು ನಿಜ. ಆದರೆ ಆ ಬೀಜಗಳು ಮೊಳಕೆಯೊಡೆದು ಎಳೆಯ ಸಸಿಯಾಗಿ ನಳನಳಿಸಿ ಅವರು ಭಾರತಕ್ಕೆ ಬರುವ ವೇಳೆಗೆ ಒಂದಿಷ್ಟು ಗಡುಸಾದ ಗಿಡಗಳಾಗಿ ಪ್ರತಿರೋಧವನ್ನು ತಡೆದುಕೊಲ್ಳುವಂತೆ ಆದದ್ದು ಮಾತ್ರ ಅಮೇರಿಕದಲ್ಲಿಯೇ ಎನ್ನಬೇಕು.

ಸ್ವಭಾವತಃ ಸ್ವಾಭಿಮಾನಿಯಾಗಿದ್ದ ಜೆಪಿ ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ಯಾರಲ್ಲಿಯೂ ಕೈಯೊಡ್ಡದೇ ಅಮೇರಿಕದಲ್ಲಿದ್ದ ಏಳು ವರ್ಷಗಳೂ ಅಲ್ಲಿನ ತೋಟಗಳಲ್ಲಿ ಅಲ್ಲಿನ ಕೂಲಿಕಾರರ ಜೊತೆ ಕಷ್ಟಪಟ್ಟು ದುಡಿದರು. ಹೀಗೆ ತನ್ನ ದುಡಿಮೆಯಿಂದ ವಿಶ್ವವಿದ್ಯಾಲಯದ ಶುಲ್ಕವನ್ನು ಹೇಗೋ ನಿಭಾಯಿಸುತ್ತಿದ್ದ ಜೆಪಿ ಒಮ್ಮೆ ತಾನು ಓದುತ್ತಿದ್ದ ವಿವಿಯು ಶುಲ್ಕವನ್ನು ದುಪ್ಪಟ್ಟುಮಾಡಿದಾಗ ಅದನ್ನು ಭರಿಸಲು ಸಾಧ್ಯವೇ ಇಲ್ಲದಂತಾಗಿ ಕಡಿಮೆ ಶುಲ್ಕವಿರುವ ವಿಶ್ವವಿದ್ಯಾಲಯವನ್ನು ಹುಡುಕಿ ಅಲ್ಲಿಗೆ ವರ್ಗಾವಣೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಗಮನಿಸಿದರೆ ಅವರ ಆಗಿನ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದು ನಮಗೆ ಅರ್ಥವಾಗುತ್ತದೆ. ಈ ದುಡಿಮ ಅವರಿಗೆ ಹಣಕಾಸಿನ ನೆರವನ್ನು ನೀಡಿದ್ದು ಸಣ್ಣ ಲಾಭವಾದರೆ, ದುಡಿವ ವರ್ಗವಾದ ತಳಸಮುದಾಯ ಜನರೊಂದಿಗೆ ಬೆರೆಯುವ ಅವಕಾಶವನ್ನು ಮಾಡಿಕೊಟ್ಟು ಅವರ ಕಷ್ಟಕಾರ್ಪಣ್ಯಗಳನ್ನು ಬಲು ಹತ್ತಿರದಿಂದ ಕಂಡುಕೊಂಡು ಅವರ ಕಷ್ಞಗಳಿಗೆ ಸ್ಪಂದಿಸುವ ಗುಣವನ್ನು ಕಲಿಸಿಕೊಟ್ಟದ್ದು ಅವರಿಗೆ ದೊರೆತ ದೊಡ್ಡ ಲಾಭವಾಯಿತು. ಆ ಕಾಲಘಟ್ಟದಲ್ಲಿ ಉಂಟಾದ ಅಮೇರಿಕೆಯ ಕಾರ್ಮಿಕ ಚಳುವಳಿ ಅದಕ್ಕೆ ಪ್ರೇರಣೆಯಾದ ಮಾರ್ಕ್ಸ್ ವಾದ ಅವರ ವ್ಯಕ್ತಿತ್ವವನ್ನು ಬಹುವಾಗಿ ಪ್ರಭಾವಿಸಿದವು. ಮಾರ್ಕ್ಸ್ ವಾದದ `ಡಿಗ್ನಿಟಿ ಆಫ್ ಲೇಬರ್’ (ಶ್ರಮಗೌರವ) ತತ್ವವೇ ಬಹುಶಃ ಅವರನ್ನು ಗ್ಯಾರೇಜಿನಲ್ಲಿ ಮೆಕಾನಿಕ್ ಆಗಿ, ಹೊಟೆಲ್ಲಿನಲ್ಲಿ ಪರಿಚಾರಕನಾಗಿ ಅಷ್ಟೇ ಏಕೆ ಬೂಟ್ ಪಾಲೀಸ್ ಮಾಡುವ ಕೆಲಸವನ್ನು ಕೂಡ ಗೌರವದಿಂದಲೇ ಮಾಡಲು ಹಚ್ಚಿತು!
ಹೋರಾಟದ ಮೊದಲ ಘಟ್ಟ : ಹೊರಗಿನವರೊಂದಿಗೆ
1929ರಲ್ಲಿ ಭಾರತಕ್ಕೆ ಬರುವ ವೇಳೆಗಾಗಲೇ ಜೆಪಿ ಸ್ಪಷ್ಟವಾಗಿ ಒಬ್ಬ ರಾಷ್ಟ್ರಸೇವೆಗೆ ಸಿದ್ಧವಾದ ಹೋರಾಟಗಾರರಾಗಿ ರೂಪುಗೊಂಡಿದ್ದರು. ಅಮೇರಿಕೆಯಿಂದ ರಷ್ಯಾಕ್ಕೆ ಹೋಗಿ ಮಾರ್ಕ್ಸ್ ವಾದದ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು ಎಂಬ ಆಸೆಯಿದ್ದರೂ ತಾಯಿಯ ಅನಾರೋಗ್ಯ ಮತ್ತಿತರ ಕಾರಣಗಳಿಗಾಗಿ ಭಾರತಕ್ಕೆ ಮರಳಿಬಂದ ಜೆಪಿ ರಾಷ್ಟ್ರೀಯ ಚಳುವಳಿಯಲ್ಲಿ ನೇರವಾಗಿ ಧುಮಿಕಿದರು. `ಪೂರ್ಣಸ್ವರಾಜ್ಯ’ವನ್ನು ಘೋಷಿಸಿದ 1929ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಅನೇಕ ರಾಷ್ಟ್ರೀಯ ಹೋರಾಟಗಾರರ ಮಾತು ಕೇಳಿದ ಜೆಪಿ ತನ್ನ ಮುಂದಿನ ದಾರಿ ದೇಶಸೇವೆಯೇ ಎಂದು ಸ್ಪಷ್ಟವಾಗಿ ನಿರ್ಧರಿಸುತ್ತಾರೆ. ಗಾಂಧೀಜಿಯವರು ಖುದ್ಧಾಗಿ ಜೆಪಿಯವರನ್ನು ನೆಹರೂ ಅವರಿಗೆ ಪರಿಚಯಿಸಿಕೊಟ್ಟದ್ದು ಇದೇ ಅಧಿವೇಶನದಲ್ಲಿ.
ದೇಶಸೇವೆ ಮಾಡುವುದೇನೋ ಸರಿ. ಅದನ್ನು ಬರಿಹೊಟ್ಟೆಯಲ್ಲಿ ಮಾಡಲಾದೀತೆ? ತಂದೆಗೆ ಪಾರ್ಶ್ವವಾಯು ಬಡಿದು ಇಡೀ ಕುಟುಂಬ ಆರ್ಥಿಕ ದುಸ್ಥಿತಿಗೆ ತಲುಪಿದಾಗ ಜೆಪಿ ಅನ್ನದ ಮಾರ್ಗವನ್ನೂ ಹುಡುಕುವುದು ಅನಿವಾರ್ಯವಾಗುತ್ತದೆ. ಜೆಪಿಯ ಕಷ್ಟವನ್ನು ನೋಡಿದ ಗಾಂಧಿ ಬಿರ್ಲಾಗೆ ಪತ್ರಬರೆದು ಜೆಪಿಗೆ ಅವರ ಕಾಲೇಜಿನಲ್ಲಿ ಯಾವುದಾದರೊಂದು ಕೆಲಸವನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ. ಜೆಪಿಯಂಥ ಕ್ರಾಂತಿಕಾರಿಗೆ ಕೆಲಸಕೊಡುವುದು ಅಂದರೆ ಸರ್ಕಾರದ ವಿರೋಧವನ್ನು ಕಟ್ಟಿಕೊಳ್ಳುವುದು ಎಂದರ್ಥ. ಬಿರ್ಲಾಗೆ ಇದು ನುಂಗಲಾರದ ಬಿಸಿತುಪ್ಪವಾಗುತ್ತದೆ. ಕೆಲಸ ಕೊಡದಿದ್ದರೆ ಗಾಂಧಿಗೆ ಬೇಸರವಾಗುತ್ತದೆ; ಕೊಟ್ಟರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕೊನೆಗೆ ಬಿರ್ಲಾ ಜೆಪಿಯವರನ್ನು ತಮ್ಮ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುತ್ತಾರೆಯಾದರೂ ಅಮೇರಿಕೆಯಲ್ಲಿ ತಳಸಮುದಾಯದ ದುಡಿವ ವರ್ಗದ ಮಧ್ಯೆ ಹೋರಾಟಗಾರರಾಗಿ ಬೆಳೆದ ಜೆಪಿ ಬಿರ್ಲಾರಂಥ ಬಂಡವಾಳಶಾಹಿಯಲ್ಲಿ ಕೆಲಸಮಾಡಲು ಹೇಗೆತಾನೆ ಸಾಧ್ಯವಾಗುತ್ತದೆ? ಒಂದು ವರ್ಷವೂ ಅವರಿಗೆ ಈ ವಾತಾವರಣದಲ್ಲಿ ಮುಂದುವರೆಯಲು ಸಾಧ್ಯವಾಗದೇ ಆ ಕೆಲಸವನ್ನೂ ಬಿಡುತ್ತಾರೆ.
ನೆಹರೂ ಅವರೊಂದಿಗೆ ಕೆಲಸಕ್ಕೆ ತೊಡಗಿದ ಮಹಾಮುತ್ಸದ್ಧಿಯಾಗಿದ್ದ ಜೆಪಿ ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಕಾಂಗ್ರೆಸ್ ನ `ಥಿಂಕ್ ಟ್ಯಾಂಕ್’ ಆಗಿ ಕೆಲಸ ಮಾಡಿದರು. ನೆಹರು ಅವರನ್ನು ಬ್ರಿಟೀಷ್ ಸರ್ಕಾರ ದಸ್ತಗಿರಿ ಮಾಡುವ ಸಂದರ್ಭದಲ್ಲಿ ಅವರಲ್ಲಿದ್ದ ಪ್ರಮುಖ ಕಾಗದಪತ್ರಗಳನ್ನು ತೆಗೆದುಕೊಂಡು ಸರೋಜಿನಿ ನಾಯ್ಡು ಅವರಿಗೆ ತಲುಪಿಸಿದ್ದಕ್ಕೋ ಏನೋ ಬ್ರಿಟೀಷ್ ಸರ್ಕಾರ ಜೆಪಿಯವರನ್ನೂ ದಸ್ತಗಿರಿಮಾಡಿಬಿಡುತ್ತದೆಯಾದರೂ ಈ ಬಂಧನ ಜೆಪಿಯವರ ಪಾಲಿಗೆ ವರದಾನವೇ ಆಯಿತೇನೋ. ಕಾರಾಗೃಹದಲ್ಲಿ ಅಚ್ಯುತ ಪಟವರ್ಧನ್ ಸೇರಿದಂತೆ ಹತ್ತು ಹಲವು ರಾಷ್ಟ್ರೀಯ ನಾಯಕರ ನಿಕಟಸಂಪರ್ಕ ಇದರಿಂದ ಸಾಧ್ಯವಾಗಿ ಮುಂದೊಂದು ದಿನ ಭಾರತದ ರಾಜಕಾರಣದಲ್ಲಿ ಸಮಾಜವಾದಿ ಅಲೆ ಬೀಸಲು ಕಾರಣವಾಗುತ್ತದೆ.
ಸ್ವತಂತ್ರ್ಯಚಳುವಳಿಯ ಇತಿಹಾಸದಲ್ಲಿ ಗಾಂಧಿಯ ವ್ಯಕ್ತಿತ್ವದ ಘನತೆಗೆ ಧಕ್ಕೆ ತಂದ ಬಹುಮುಖ್ಯ ಘಟನೆ 1939ರ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ. ಆ ಚುನಾವಣೆಯಲ್ಲಿ ನೇರ ಸ್ಪರ್ಧೆಯಲ್ಲಿದ್ದವರು ಪಟ್ಟಾಭಿ ಸೀತಾರಾಮಯ್ಯ ಮತ್ತು ನೇತಾಜಿ ಸುಭಾಶ್ಚಂದ್ರ ಭೋಸ್. ಗಾಂಧೀಜಿ ಪಟ್ಟಾಭಿಯವರಿಗೆ ಬೆಂಬಲ ಘೋಷಿಸಿದರು. ಉಳಿದ ಅನೇಕ ಮುಖಂಡರು ಗಾಂಧಿಯನ್ನು ಅನುಸರಿಸಿದರು. ನೇತಾಜಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಿದರು. ಗಾಂಧೀಜಿಗೆ ಅವಮಾನವಾಗುವಂತೆ ಫಲಿತಾಂಶ ಬಂದು ಸುಭಾಶ್ಚಂದ್ರ ಭೋಸ್ ಆಯ್ಕೆಯಾದರು. ಇಂತಹ ಸಂದರ್ಭದಲ್ಲಿ ಗಾಂಧೀಜಿ ತೆಳೆದ ನಿಲುವು ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತೆ ಮಾಡಿತು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸುಭಾಶ್ಚಂದ್ರರಿಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಸಹಕಾರ ಕೊಡುವುದನ್ನು ಬಿಟ್ಟು ಅನೇಕ ಸದಸ್ಯರನ್ನು ರಾಜಿನಾಮೆ ಕೊಡಲು ಗಾಂಧಿ ಪ್ರಚೋದಿಸುತ್ತಾರೆ. ಗಾಂಧಿಯ ಈ ವರ್ತನೆಯಿಂದ ಬೇಸತ್ತು ಗೆದ್ದರೂ ಅಧ್ಯಕ್ಷರಾಗಿ ಮುಂದುವರೆಯಲು ಇಚ್ಚಿಸದ ನೇತಾಜಿ ಕೊನೆಗೆ ರಾಜಿನಾಮೆ ನೀಡಿ ತಮ್ಮದೇ ಆದ ಹೊಸ ಸಂಘಟನೆ ಕಟ್ಟಿ ಹೋರಾಟ ಮುಂದುವರೆಸುತ್ತಾರೆ. ಈ ಚುನಾವಣೆಯಲ್ಲಿ ಈ ದುರಂತ ಸಂಭವಿಸದಂತೆ ಜೆಪಿ ಪಟ್ಟಾಭಿ ಮತ್ತು ನೇತಾಜಿ ಮಧ್ಯೆ ಸಂಧಾನ ಏರ್ಪಡಿಸಲು ಬಹಳಷ್ಟು ಪ್ರಯತ್ನಮಾಡುತ್ತಾರಾದರೂ ಬಹುಶಃ ಗಾಂಧಿಯ ಕಾರಣಕ್ಕೆ ಅದು ಸಫಲವಾಗುವುದಿಲ್ಲ. ಗಾಂಧಿಯ ಬಗ್ಗೆ ಅಪಾರ ಗೌರವವಿದ್ದರೂ ಅವರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿ ಜೆಪಿಯವರಿಗೆ ಸರಿಕಾಣಲಿಲ್ಲ.
`ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯೊಂದಿಗೆ ಗಾಂಧೀಜಿಯ ನೇತೃತ್ವದಲ್ಲಿ 1942ರಲ್ಲಿ ಆರಂಭವಾದ `ಕ್ವಿಟ್ ಇಂಡಿಯಾ ಚಳುವಳಿ’ ಜೆಪಿಯವರನ್ನು ಭಾರತದ ಅಗ್ರಗಣ್ಯನಾಯಕನನ್ನಾಗಿ ರೂಪಿಸಿದ ಚಳುವಳಿ. ಈ ಚಳುವಳಿ ಆರಂಭವಾಗುವ ಒಂದು ವರ್ಷ ಮೊದಲೆ ವಿದ್ಯಾರ್ಥಿಗಳನ್ನು ಪ್ರಭುತ್ವದ ವಿರುದ್ಧ ಹುರುದುಂಬಿಸಿದರು ಎಂಬ ಕಾರಣದಿಂದ ಅವರನ್ನು ಸರ್ಕಾರ ಬಂಧಿಸಿ ಸೆರೆಯಲ್ಲಿಟ್ಟಿರುತ್ತದೆ. ಇಷ್ಟೊಂದು ದೊಡ್ಡ ಚಳುವಳಿ ನಡೆಯುತ್ತಿರುವಾಗ ಸೆರೆಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಈ ವ್ಯಕ್ತಿಗೆ ಸಾಧ್ಯವಾಗುವುದಾದರು ಹೇಗೆ? ಸರಿ, ಧೈರ್ಯಮಾಡಿ ತನ್ನ ಜೊತೆ ನಾಲ್ಕೈದು ಸ್ನೇಹಿತರೊಂದಿಗೆ ಸೆರೆಮನೆಯ ಗೋಡೆಹಾರಿ ತಪ್ಪಿಸಿಕೊಂಡೇ ಬಿಟ್ಟರು. ವೇಷಮರೆಸಿಕೊಂಡು ಚಳುವಳಿಯಲ್ಲಿ ಪಾಲ್ಗೊಂಡರು. ಈ ಚಳುವಳಿಯಲ್ಲಿ ಗಾಂಧಿಯ ದಸ್ತಗಿರಿಯಾದಾಗ, ಡಾ. ರಾಮಮನೋಹರ ಲೋಹಿಯಾ, ಅಚ್ಯುತ ಪಟವರ್ಧನ್, ಕಮಲಾದೇವಿ ಚಟುಪಾಧ್ಯಾಯ ಮುಂತಾದವರು ಚಳುವಳಿಯನ್ನು ಮುನ್ನಡೆಸುತ್ತಿದ್ದರು. ಆ ಕಡೆ ಸಿಂಗಪುರದಿಂದಲೇ ನೇತಾಜಿ ಹೋರಾಟಕ್ಕೆ ಪ್ರಚೋದನೆ ನೀಡುತ್ತಿದ್ದರು.
ಈ ಹೋರಾಟದಲ್ಲಿ ಪಾಲ್ಗೊಂಡ ಜೆಪಿ ಹೋರಾಟ ಸಾಕಷ್ಟು ಉಗ್ರವಾಗುವಂತೆ ನೋಡಿಕೊಂಡರು. ಇವರ ತಪ್ಪಿಸಿಕೊಳ್ಳುವಿಕೆಯಿಂದ ಸಿಟ್ಟಿಗೆದ್ದ ಸರ್ಕಾರ ಇವರ ಸುಳಿವು ನೀಡಿದವರಿಗೆ ಆರಂಭದಲ್ಲಿ ಹಣದ ಬಹುಮಾನ ಕೊಡಲು ಘೋಷಣೆಮಾಡಿತ್ತು. ಕೊನೆಗೆ ಬಹಳದಿನ ಸಿಗದೇ ಇದ್ದಾಗ ಇನ್ನೂ ರೊಚ್ಚಿಗೆದ್ದು ಇವರ ವಿರುದ್ಧ `ಕಂಡಲ್ಲಿ ಗುಂಡಿಕ್ಕು’(Shoot at Sight) ಆದೇಶವನ್ನೇ ಹರಡಿಸಿಬಿಟ್ಟಿತು! ಕಾಶ್ಮೀರದಲ್ಲಿ ಉಗ್ರ ಚಳುವಳಿ ನಡೆಸಿ ಪಂಜಾಬಿನ ಕಡೆ ಬರುತ್ತಿದ್ದಾಗ ಕೊನೆಗೂ ಸರ್ಕಾರ 1943ರಲ್ಲಿ ಜೆಪಿಯವರನ್ನು ಮತ್ತೆ ಹಿಡಿಯುವಲ್ಲಿ ಯಶಸ್ವಿಯಾಗಿಬಿಡುತ್ತದೆ. ಮತ್ತೆ ಮೂರುವರ್ಷ ಸೆರೆವಾಸ, ಅಲ್ಲಿ ನೀಡಿದ ವಿಚಿತ್ರ ಹಿಂಸೆಯೆಲ್ಲವನ್ನೂ ಅನುಭವಿಸಿ ದೇಶ ಸ್ವಾತಂತ್ರ್ಯ ಪಡೆಯುವ ಹಿಂದಿನ ವರ್ಷ ಅಂದರೆ 1946ರಲ್ಲಿ ಬಿಡುಗಡೆಯಾಗುತ್ತಾರೆ. ಅವರ ಮೇಲೆ ಕೊಲೆ ಆರೋಪ ಹೊರಿಸಿ ಮೊಕದ್ದಮೆ ಹೂಡುವ ಸಂಚನ್ನು ಸರ್ಕಾರ ಮಾಡುತ್ತದೆಯಾದರೂ ಜೆಪಿಯವರಿಗಿದ್ದ ಜನಪ್ರಿಯತೆ ಮತ್ತು ಅದರಿಂದ ಎದುರಿಸಬೇಕಾದ ಪ್ರತಿರೋಧಕ್ಕೆ ಹೆದರಿ ಆ ಸಾಹಸಕ್ಕೆ ಕೈಹಾಕದೆ ಬಿಡುಗಡೆಮಾಡಿಬಿಡುತ್ತದೆ. ಅವರು ಜೈಲಿನಿಂದ ಬಿಡುಗಡೆಯಾದ ಈ ಸಂದರ್ಭಕ್ಕೇ ಅವರು `ಆಗಸ್ಟ್ ಕ್ರಾಂತಿಯ ವೀರ’ ಎನಿಸಿ ರಾಷ್ಟ್ರದ ಅಗ್ರಪಂಕ್ತಿಯ ನಾಯಕನ ಸ್ಥಾನಕ್ಕೆ ಏರಿದರು.
ಹೋರಾಟದ ಎರಡನೇ ಘಟ್ಟ: ಒಳಗಿನವರೊಂದಿಗೆ
ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಜೆಪಿಯವರ ಹೋರಾಟದ ಎರಡನೆಯ ಘಟ್ಟ ಪ್ರಾರಂಭವಾಗುತ್ತದೆ. ಸ್ವಾತಂತ್ರ್ಯ ದೊರೆಯುವ ವೇಳೆಗೆ ಗಾಂಧೀಜಿಯೇ ಮೂಲೆಗುಂಪಾಗುವ ಸ್ಥಿತಿ ನಿರ್ಮಾಣವಾಗಿತ್ತು. ಗಾಂಧಿ ಸೂಚಿಸಿದರೂ ನೆಹರೂ ಬಿಡುಗಡೆಮಾಡಿದ ಹೊಸಮಂತ್ರಿಮಂಡಳದ ಪಟ್ಟಿಯಲ್ಲಿ ಜೆಪಿಯ ಹೆಸರು ಸೇರಲಿಲ್ಲ! ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಸಕಲವನ್ನೂ ಸಮರ್ಪಿಸಿ ದುಡಿದಿದ್ದ ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್ ನ `ಬುದ್ಧಿಕುಂಡ’ವೇ ಆಗಿದ್ದ ಜೆಪಿಯವರ ಅಪಾರ ಅನುಭವವನ್ನು ಸ್ವತಂತ್ರ ಭಾರತ ಪಡೆಯುವಲ್ಲಿ ವಿಫಲವಾಯಿತು. ಇದರಿಂದ ಜೆಪಿ ಬಹಳ ಬೇಸರಮಾಡಿಕೊಳ್ಳಲಿಲ್ಲ. ಅವರು ಗಾಂಧೀಜಿಯ ದಾರಿಯನ್ನೇ ತುಳಿದರು. ಅಧಿಕಾರಕ್ಕೆ ಆಸೆಪಡೆಯದೇ ಸರ್ವೋದಯ ಸಾಧಿಸಲೆಂದು ವಿನೋಬಾ ಭಾವೆ ಆರಂಭಿಸಿದ್ದ ಭೂದಾನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಸ್ತಿಗಳ ಮರುಹಂಚಿಕೆಯ ಮಹತ್ಕಾರ್ಯವನ್ನು ಮಾಡಿದರು.
ನೆಹರು ನೇತೃತ್ವದಲ್ಲಿ ಬಂದ ಹೊಸ ಸರ್ಕಾರ ಗಾಂಧಿಮಾರ್ಗದಿಂದ ಬಹುದೂರ ಸರಿಯಿತು. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆ ಹಳ್ಳಹಿಡಿಯಿತು. ಬಂಡವಾಳಶಾಹಿಗಳು ಅಧಿಕಾರದ ಪರೋಕ್ಷ ಆಡಳಿತ ಸೂತ್ರಹಿಡಿದರು. ಸಮಾಜವಾದ ಹಿನ್ನಡೆಗೆ ಸರಿದು ಬಂಡವಾಳಶಾಹಿ ವ್ಯವಸ್ಥೆ ಪ್ರಬಲವಾಯಿತು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ನಡೆಯಿತು. ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ಬಡವರು ಮತ್ತಷ್ಟು ಬಡವರಾದರು. “ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗೂ ನಿರಂಕುಶ ದರೋಡೆಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟರೆ ತುಂಡು ಬ್ರೆಡ್ಡಾಗಲೀ, ಸೀಸೆ ನೀರಾಗಲೀ ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ ತಮ್ಮತಮ್ಮೊಳಗಿನ ಕಾದಾಟದಿಂದ ಅವರು ಭವ್ಯ ಭಾರತವನ್ನು ಕಳೆದುಕೊಳ್ಳುತ್ತಾರೆ” ಎಂದು ಸ್ವಾತಂತ್ರ್ಯ ಗಳಿಸಿಕೊಳ್ಳುವಾಗ ಅದನ್ನು ಬಹಳ ವಿರೋಧಿಸಿದ್ದ ಬ್ರಿಟೀಷ್ ಪ್ರಧಾನಿ ಚರ್ಚಿಲ್ ಹೇಳಿದ ಮಾತ್ರ ಸಂಪೂರ್ಣ ಸುಳ್ಳಾಗಲಿಲ್ಲ. ಇಂತಹ ಸ್ಥಿತಿಯನ್ನು ನೋಡಲು ಗಾಂಧೀಜಿಯೇನೋ ಕಣ್ಣುಮುಚ್ಚಿದ್ದರು. ಆದರೆ ಜೆಪಿ ಬದುಕಿದ್ದರು. ಸರ್ಕಾರ ದಾರಿತಪ್ಪುವುದನ್ನು ತಪ್ಪಿಸಲು ಸರ್ಕಾರಕ್ಕೆ ಅನೇಕಬಾರಿ ಅವರು ಪತ್ರಬರೆದರು. ಸುಧಾರಣೆಗೆ ಸಲಹೆ ನೀಡಿದರು. ಆದರೆ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರುತಾನೆ ಇದ್ದರು?
ಹಾಗಂತ ಜೆಪಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಸುಮಾರು ಹದಿನೆಂಟು ವರ್ಷ ಬ್ರಿಟೀಷ್ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಗಳಿಸಿಕೊಳ್ಳಲು ಪ್ರಬಲ ಹೋರಾಟನ್ನು ಮಾಡಿದ್ದ ಅವರು ಈಗ ಪಡೆದ ಸ್ವಾತಂತ್ರ್ಯವನ್ನು ನಮ್ಮವರಿಂದಲೇ ಉಳಿಸಿಕೊಳ್ಳಲು ಶ್ರೀಸಾಮಾನ್ಯನ ಉದ್ಧಾರವನ್ನು ಉಸಿರಾಗಿಟ್ಟುಕೊಂಡು ಎರಡನೇ ಹಂತದ ಹೋರಾಟವನ್ನು ಆರಂಭಿಸಿದರು. ಹೋರಾಟದ ಹಾದಿಯಲ್ಲಿ `ಸರ್ವೋದಯ’ದ ಈ ವೀರನಿಗೆ ತನ್ನ ರಾಜ್ಯದವರೇ ಆದ `ಸಮಾಜವಾದಿ’ ಲೋಹಿಯಾ ಜೊತೆಯಾದರು. `ಪ್ರಜಾಸಮಾಜವಾದಿ ಪಕ್ಷ’ ಸ್ಥಾಪನೆಯಾಯಿತು. ಬಿಹಾರ ಭಾಗದಲ್ಲಿ ಹಳ್ಳಿಹಳ್ಳಿಗೆ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ, ಮತ್ತು ನೆಹರು ಆಡಳಿತಕ್ಕೆ ಸೆಡ್ಡುಹೊಡೆಯುವ ಹಂತಕ್ಕೆ ಪ್ರಜಾಸಮಾಜವಾದಿ ಪಕ್ಷ ಬೆಳೆಯ ತೊಡಗಿದಾಗ ಸಹಜವಾಗಿಯೇ ‘ಒಳಹಾಕಿಕೊಳ್ಳುವ’ ಪ್ರಯತ್ನಗಳೂ ಆರಂಭವಾದವು. 1947ರಲ್ಲಿ ಗಾಂಧಿ ಹೇಳಿದರೂ `ಅವರಿಗಿಂತಲೂ ಹಿರಿಯರಿದ್ದಾರಲ್ಲ’ ಎಂಬ ಕಾರಣ ನೀಡಿ ಜೆಪಿಯವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳದಿದ್ದ ನೆಹರು ಈಗ ಪ್ರಜಾಸಮಾಜವಾದಿ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ಸಹಕಾರ ಕೊಡುವಂತೆ ಕೇಳಿಕೊಂಡು ತಮ್ಮೊಡನೆ ಸಚಿವಸಂಪುಟ ಸೇರಿಕೊಳ್ಳಲು ಕೇಳಿಕೊಳ್ಳುತ್ತಾರೆ. ಆದರೆ ಅಧಿಕಾರಕ್ಕೆ ಎಂದೂ ಆಸೆಪಡದ ಜೆಪಿ ಭಾರತದ ಬಡವರ ಉದ್ಧಾರ, ಹಳ್ಳಿಗಳ ಉದ್ಧಾರ ಮಾಡುವಂತಹ ಕೆಲವು ಕನಿಷ್ಠ ಕಾರ್ಯಕ್ರಮಗಳನ್ನು ಸರ್ಕಾರ ಒಪ್ಪಿಕೊಳ್ಳುವುದಾದರೆ ಸರ್ಕಾರ ಸೇರುವುದಾಗಿ ಷರತ್ತು ಹಾಕುತ್ತಾರೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಇಷ್ಟವಿಲ್ಲದ ನೆಹರೂ ಸರ್ಕಾರ ಇದಕ್ಕೆ ಒಪ್ಪಲಿಲ್ಲ; ಜೆಪಿ ಸರ್ಕಾರ ಸೇರಲಿಲ್ಲ! ಹೋರಾಟ ಮುಂದುವರಿಯಿತು.
ಜೆಪಿಯವರ ಸ್ವತಂತ್ರ ಉಳಿಸಿಕೊಳ್ಳುವ ಹೋರಾಟ ನಡೆದದ್ದು ಮುಖ್ಯವಾಗಿ ಇಬ್ಬರು ಪ್ರಧಾನಿಗಳ ಆಡಳಿತದಲ್ಲಿ. ಮೊದಲನೆಯವರು ನೆಹರೂ. ಈ ಕಾಲಘಟ್ಟದ ನಂತರ ಅವರ ಹೋರಾಟ ನಡೆದದ್ದು ಅವರ ಮಗಳ ಕಾಲದಲ್ಲಿ. ಇವೆರಡಕ್ಕೂ ಹೋಲಿಸಿದಲ್ಲಿ ಅವರು ಅತ್ಯಂತ ಹಿಂಸೆ ಅನುಭವಿಸಿದ್ದು ಅಪ್ಪನಿಗಿಂತ ಮಗಳ ಕಾಲದಲ್ಲಿಯೇ ಎನ್ನಬೇಕು. ಸಾಮಾನ್ಯ ಜನರ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ಸರ್ಕಾರ ವಿಫಲವಾದಾಗ ಅದನ್ನು ಕೈಗೆತ್ತಿಕೊಂಡು ಹೋರಾಟವನ್ನು ತೀವ್ರಗೊಳಿಸಿದ ಜೆಪಿಯ ಹೋರಾಟ ನೆಹರೂ ಕಾಲಘಟ್ಟಕ್ಕಿಂತ ಅವರ ಮಗಳ ಕಾಲದಲ್ಲಿ ಸಹಜವಾಗಿಯೇ ತೀವ್ರವಾಯಿತು. ಇದಕ್ಕೆ ಕಾರಣ ಅಪ್ಪನಿಗಿಂತ ಮಗಳ ಆಡಳಿತ ಜನರಿಂದ ಹೆಚ್ಚು ದೂರವಾದದ್ದು. ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾವೇ ಮುಂದಾಗಬೇಕು ಎಂದು ಕರೆನೀಡಿದ ಜೆಪಿ. ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ, ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮುಂತಾದ ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮುಂದುವರೆಸಿದರು. ಇವೆಲ್ಲವುಗಳಲ್ಲಿನ ಸುಧಾರಣೆಗಳನ್ನೊಳಗೊಂಡ `ಸಂಪೂರ್ಣಕ್ರಾಂತಿ’ಯನ್ನು ಘೋಷಿಸಿ ಆಡಳಿತಕ್ಕೆ ಸವಾಲಾದರು.
ತುರ್ತುಪರಿಸ್ಥಿಯ ಚಿತ್ರಹಿಂಸೆ
1975 ಜೂನ್ 25 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯ ಪ್ರಾರಂಭವಾದ ದಿನ. ದೇಶಾದ್ಯಂತ ಜೆಪಿ ನೇತೃತ್ವದಲ್ಲಿ ಪ್ರಬಲಗೊಳ್ಳುತ್ತಿದ್ದ ಜನಪರ ಚಳುವಳಿ, ಗುಜರಾತ್ ಚುನಾವಣೆಯ್ಲಲಿ ಜನತಾರಂಗದ ಎದುರು ಕಾಂಗ್ರೆಸ್ ಸೋಲು, ತನ್ನ ಆಯ್ಕೆಯನ್ನೇ ಅಸಿಂಧು ಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಈ ಮೂರು ಕಾರಣಗಳಿಂದ ಕಂಗಾಲಾದ ಇಂದಿರಾಗಾಂಧಿ ಇಡೀ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿ ನಾಗರಿಕ ಹಕ್ಕುಗಳ ದಮನಕ್ಕೆ ನಾಂದಿಹಾಡಿದ ದಿನವದು. ಆಗ ಜೆಪಿ, ಅಧ್ವಾನಿ, ವಾಜಪೇಯಿ, ಸೇರಿದಂತೆ ಅನೇಕ ವಿರೋಧಿ ಪಕ್ಷಗಳ ನಾಯಕರು, ಇಂದಿರಾಗಾಂಧಿಯವರ ಈ ದೌರ್ಜನ್ಯವನ್ನು ಟೀಕಿಸಿದ ಕಾಂಗ್ರೆಸ್ಸಿನ ನಾಯಕರೂ ಸೇರಿದಂತೆ ಸುಮಾರು ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ನಾಗರಿಕರ ಮೂಲಭೂತ ಹಕ್ಕುಗಳನ್ನು ನಿಷ್ಕ್ರೀಯಗೊಳಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು. ಈ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಹೋರಾಟ ಬುಗಿಲೆದ್ದಿತು.
ಕರ್ನಾಟಕ ಪ್ರದೇಶದಲ್ಲಿಯೂ ಇದರ ಪರಿಣಾಮವಾಗಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವರು ಬಂಧಿಸಲ್ಪಟ್ಟರು. ಹಿರಿಯ ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಲವರು ಇಂದಿರಾಗಾಂಧಿಗೆ ಪತ್ರ ಬರೆದು ಈ ಅಮಾನವೀಯ ಕ್ರಮವನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿದರು. ಹಿರಿಯ ಸಾಹಿತಿ ಡಾ. ಕೆ. ಶಿವರಾಮ ಕಾರಂತ ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಪ್ರತಿಭಟನಾ ಸೂಚಕವಾಗಿ ಹಿಂತಿರುಗಿಸಿದರು. ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಬಂಧನಕ್ಕೊಳಗಾಗಿ ಜೈಲು ಸೇರಿದರು. (ಮುಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ತೀವ್ರಗೊಂಡ ದಲಿತ ಬಂಡಾಯ ಸಾಹಿತ್ಯ ಚಳುವಳಿ ಈ ಸರ್ವಾಧಿಕಾರ ಧೋರಣೆಗೆ ತೀವ್ರವಾಗಿ ಪ್ರತಿಕ್ರಿಯಿಸಿತು. `ತುರ್ತು ಪರಿಸ್ಥಿತಿಯ ಕರಾಳ ರಾಣಿಯ ಕಥೆಯನ್ನ ಹೇಳ್ತೀವಿ’ ಎಂಬ ಸಿದ್ಧಲಿಂಗಯ್ಯನವರ ಒಂದು ಹಾಡು ಇಡೀ ಕರ್ನಾಟಕದ ಬೀದಿಬೀದಿಗಳಲ್ಲಿ ಮೊಳಗಿತು.)
ಜೆಪಿಯ ಪಾಲಿಗೆ ತುರ್ತು ಪರಿಸ್ಥಿತಿ ಯಮಯಾತನೆಯಾಯಿತು. ತುರ್ತುಪರಿಸ್ಥಿತಿ ಘೋಷಣೆಯಾದ ಮರುದಿನವೇ ಬಂಧಿಸಲ್ಪಟ್ಟ ಜೆಪಿಯವರನ್ನು ಇಂದಿರಾಗಾಂಧಿ ಸರ್ಕಾರ 1975ರ ಡಿಸೆಂಬರ್ 4 ರವರೆಗೆ ಸೆರೆಮನೆಯಲ್ಲಿಟ್ಟು ಚಿತ್ರಹಿಂಸೆಯನ್ನು ಕೊಟ್ಟಿತು. ಜಯಪ್ರಕಾಶ್ ಅವರು ಜೈಲಿನಲ್ಲಿದ್ದ ಅವಧಿಯಲ್ಲಿ ಬರೆದ ಅವರ ದಿನಚರಿವೊಂದರ ಮಾತು, ಈ ನಾಯಕನ ಆಗಿನ ಮನಸ್ಥಿತಿಯನ್ನು ಬಿಂಬಿಸುತ್ತದೆ: “ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಕೇಂದ್ರ ಮೀಸಲು ಪಡೆಯ ಅಶ್ರುವಾಯುವಿಗೆ ಮತ್ತು ಲಾಠಿಗೆ ಬಲಿಯಾಗಬೇಕಾಗಿ ಬಂದ, ಅಲ್ಲದೆ ಸೆರೆವಾಸವನ್ನೂ ಅನುಭವಿಸಬೇಕಾಗಿ ಬಂದ ಆಳ್ವಿಕೆ ಇದು. ಬ್ರಿಟಿಷರ ಕಾಲದಲ್ಲಿ 1946ರ ಏಪ್ರಿಲ್ ನಲ್ಲಿ ಆಗ್ರಾ ಕೇಂದ್ರ ಸೆರೆಮನೆಯಿಂದ ನನ್ನ ಬಿಡುಗಡೆಯಾಧ ನಂತರ ಮತ್ತೆ ನನ್ನನ್ನೆಂದೂ ಬಂಧಿಸಿರಲಿಲ್ಲ ಮತ್ತು ಸೆರೆಯಲ್ಲಿಟ್ಟಿರಲಿಲ್ಲ.”
ಸೆರೆಮನೆಯಲ್ಲಿ ಹಿಂಸೆ ಪಡುತ್ತಾ ಇದ್ದರೂ ಅವರ ಮನಸ್ಸು ಸಮಾಜಸೇವೆಗೆ ತುಡಿಯುತ್ತಲೇ ಇತ್ತು. ಆ ಕಾಲದಲ್ಲಿ ಬಿಹಾರದಲ್ಲಿ ಉಂಟಾದ ಬೀಕರ ಪ್ರವಾಹದಲ್ಲಿ ತೊಂದರೆಗೀಡಾದವರ ಸೇವೆಸಲ್ಲಿಸಲು ಒಂದು ತಿಂಗಳ ಕಾಲ ಸೆರೆಮನೆಯಿಂದ ಬಿಡುಗಡೆ ಮಾಡಿ ಅವಕಾಶ ಕೊಡಲು ಅವರು ಸರ್ಕಾರಕ್ಕೆ ಪತ್ರಬರೆದು ಕೇಳಿಕೊಂಡರೂ ಸರ್ಕಾರ ಅವರನ್ನು ಬಿಡುಗಡೆಮಾಡಲಿಲ್ಲ. ಅಸಹಾಯಕರಾಗಿ ಅವರು ತಮ್ಮ ದಿನಚರಿಯಲ್ಲಿ ಬರೆದ ಸಾಲು ಹೀಗಿದೆ: “ …ಪಾಟ್ನಾದಲ್ಲಿನ ಪ್ರವಾಹ ಪರಿಸ್ಥಿತಿ ಅಷ್ಟೊಂದು ಭೀಕರವಾಗಿದೆ ಎಂದು ನನಗೆ ತಿಳಿದೇ ಇರಲಿಲ್ಲ ಇಂದು ಮುಂಜಾನೆಯ ಹಿಂದೂಸ್ಥಾನ್ ಟೈಮ್ಸ್ ಎದೆ ನಡುಗಿಸುವ ವಿವರಗಳನ್ನು ಕೊಟ್ಟಿದೆ. ಅಲ್ಲಿನ ಜನ ಎಂದೆಂದಿಗೂ ಕಾಣದ ಇಂತಹ ಅನಾಹುತದಲ್ಲಿ ಸಿಕ್ಕಿ ನರಳುತ್ತಿರುವಾಗ ನಾನಿಲ್ಲಿ ಸುಮ್ಮನೆ ಕೈಕಟ್ಟಿ ಕುಳಿತಿರುವ ಬಗ್ಗೆ ನನಗೆ ಬಹಳ ಅಸಹ್ಯವೆನಿಸಿದೆ. ನಾನು ನಿಸ್ಸಹಾಯಕನಾಗಿದ್ದೇನೆ.”
ಜೆಪಿಯ ಕೊನೆಯ ದಿನಗಳು ಅವರಿಗೆ ನರಳಾಟದ ದಿನಗಳಾದವು. ಸೆರಮೆನೆವಾಸದ ಚಿತ್ರಹಿಂಸೆಯಿಂದ ಆರೋಗ್ಯ ತೀವ್ರ ಕುಸಿದು ಎರಡೂ ಮೂತ್ರಪಿಂಡಗಳು ಕೆಲಸ ನಿಲ್ಲಿಸಿದವು. ಓಡಾಡಲಾರದ ಸ್ಥಿತಿ ನಿರ್ಮಾಣವಾಯಿತು. ಬದುಕು ಸಾಕೆನಿಸುವ ಹಂತಕ್ಕೆ ತಲುಪಿದರು. ದೇಹದ ಮೇಲೆ ಇಂತಹ ಕೆಟ್ಟ ಪರಿಣಾಮದ ನೋವು ಉಂಟಾದರೆ ಅದಕ್ಕೂ ಬಲವಾದ ಮಾನಸಿಕ ನೋವನ್ನು ಅವರು ಅನುಭವಿಸಿದ್ದು ತಮ್ಮ ಜೀವನದ ಮೊದಲ ಘಟ್ಟದ ಹೋರಾಟ ಮತ್ತು ಎರಡನೇ ಘಟ್ಟದ ಹೋರಾಟ ಎರಡರಲ್ಲೂ ಏನನ್ನು ವಿರೋಧಿಸುತ್ತಾ ಬಂದಿದ್ದರೋ ಮತ್ತು ಯಾವುದರ ವಿರುದ್ಧ ತಮ್ಮ ಜೀವನವನ್ನೇ ಸವೆಸಿದ್ದರೋ ಅಂತಹ ತತ್ವಗಳಿಗೆ ತಾವೇ ಕಟ್ಟಿ ಬೆಳಸಿದ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ವಾಲಿಕೊಂಡದ್ದರಿಂದ. ಅತ್ಯಂತ ಕಷ್ಟಪಟ್ಟು ಕಟ್ಟಿದ್ದ ಜನತಾ ಪಕ್ಷವನ್ನು ಅಷ್ಟೇ ಕಷ್ಟಪಟ್ಟು ಬೆಳಸಿ ಮೊಟ್ಟಮೊದಲ ಕಾಂಗ್ರೇಸ್ಸೇತರ ಸರ್ಕಾರ ಕೇಂದ್ರದಲ್ಲಿ ಸ್ಥಾಪನೆಯಾಗಲು ಕಾರಣರಾಗಿದ್ದ ಜೆಪಿ. ಯಾವುದನ್ನು ಇಂದಿರಾ ಸರ್ಕಾರದಲ್ಲಿ ವಿರೋಧಿಸಿದ್ದರೋ ಮತ್ತು ದೆಹಲಿಯ ರಾಜಘಾಟಿನಲ್ಲಿರುವ ಗಾಂಧಿ ಸಮಾಧಿಬಳಿ ಜನತಾ ಸರ್ಕಾರ ನಡೆಸುವವರೆಲ್ಲರಿಂದ ತಮ್ಮ ನೇತೃತ್ವದಲ್ಲಿಯೇ ಜನತೆಯ ಪರವಾದ ಲೋಕಕಲ್ಯಾಣದ ಆಡಳಿತ ನೀಡುವುದಾಗಿ ಪ್ರಮಾಣ ಮಾಡಿಸಿಕೊಂಡಿದ್ದರೋ ಅಂತಹ ಜನತಾ ಪಕ್ಷದ ತಮ್ಮ ಅನುಯಾಯಿಗಳೂ ಕೂಡ ದಾರಿತಪ್ಪಿದ್ದು ಅವರಿಗೆ ತೀವ್ರ ನೋವನ್ನುಂಟುಮಾಡಿತ್ತು. ತಾವು ಕಟ್ಟಿ ಬೆಳೆಸಿದ್ದ ಜನತಾಪಕ್ಷ ಕೂಡ ಮೊರಾರ್ಜಿ ದೇಸಾಯಿ ಮತ್ತು ಚೌದರಿ ಚರಣಸಿಂಗ್ ನೇತೃತ್ವದ ಗುಂಪುಗಳಾಗಿ ಪಕ್ಷದ ಧ್ಯೇಯೋದ್ಧೇಶಕ್ಕೆ ತಿಲಾಂಜಲಿ ಇಟ್ಟದ್ದನ್ನು ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಇಂತಹ ನೋವುಗಳ ಕೊರಗಿನಲ್ಲಿಯೇ ಜೆಪಿ 1979ರಲ್ಲಿ ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ ನಮ್ಮನ್ನಗಲಿದರು.
ಕರುಳ ಕುಡಿ ಚಿಗುರುವುದನ್ನೂ ತಡೆದ ಮಹಾತ್ಮ
ಜೆಪಿಯ ಸಾರ್ವಜನಿಕ ಹೋರಾಟದ ಬದುಕನ್ನು ತಿಳಿದುಕೊಂಡ ನಾವು ಅವರ ವೈಯಕ್ತಿಕ ಸಂಸಾರಿಕ ಜೀವನದ ಬಗ್ಗೆ ನೆನಪು ಮಾಡಿಕೊಳ್ಳದಿದ್ದರೇ ಅನ್ಯಾಯವೇ ಆದೀತು. ಆ ನೆನಪು ಅವರು ಜೀವನ ಪರ್ಯಂತ ಮಕ್ಕಳನ್ನು ಮಾಡಿಕೊಳ್ಳದೇ ಉಳಿಯುವಂತಾದ ಘಟನೆಗೆ ಸಂಬಂಧಿಸಿದ್ದು. ನಾವು ಬಹಳ ಪ್ರೀತಿಸುವ ಮತ್ತು ಗೌರವಿಸುವ ಗಾಂಧೀಜಿ ಅನೇಕ ವಿಷಯಗಳಲ್ಲಿ ಅಸಹಜವಾದ ಮೂಡನಂಬಿಕೆ ಅನ್ನಬಹುದಾದ ನಂಬಿಕೆಗಳನ್ನು ಇಟ್ಟುಕೊಂಡಿದ್ದರು ಎಂಬುದು ಸುಳ್ಳಲ್ಲ. ಹೀಗೆ ಹೇಳಿದರೆ ಅವರನ್ನು ಅಗೌರವಿಸಿದಂತೇನೂ ಆಗುವುದಿಲ್ಲ. ಅಂತಹ ಅಂಶಗಳಲ್ಲಿ ಒಂದು ಮನುಷ್ಯನ ಲೈಂಗಿಕ ಜೀವನದ ಬಗ್ಗೆ ಅವರು ತಾಳಿದ್ದ ನಿಲುವು. ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಗಾಂಧೀಜಿ ಮೂವತ್ತು ವರ್ಷದೊಳಗೇ ಮೂರು ಮಕ್ಕಳ ತಂದೆಯಾಗಿ ಹೆಚ್ಚೂ ಕಡಿಮೆ ಈಗ ಬಹುತೇಕ ಮಂದಿ ಮದುವೆಯಾಗಿ ಹೆಂಡತಿಯೊಂದಿಗೆ ಸಹಶಯ್ಯೆಗೆ ತೊಡಗುವ ವಯಸ್ಸಿಗೇ ಅವರು ಹೆಂಡತಿಯೊಂದಿಗೆ ಮಲಗುವುದನ್ನು ಬಿಟ್ಟವರು!! ತಮ್ಮ ಆತ್ಮಚರಿತ್ರೆಯಲ್ಲಿ ಅವರು ಕೊಡುವ ವಿವರ ನೋಡಿದರೆ ಮನುಷ್ಯನ ಲೈಂಗಿಕತೆ ಬಗ್ಗೆ ಅವರು ತಳೆದಿದ್ದ ಅಸ್ವಾಭಾವಿಕ ನಿಲುವು ಅರ್ಥವಾಗುತ್ತದೆ. `ಬ್ರಹ್ಮಚರ್ಯ ಶ್ರೇಷ್ಠ ಸಾಂಸಾರಿಕ ಜೀವನ ಕನಿಷ್ಠ’ ಎಂದು ಭಾವಿಸಿದ್ದ ಅವರು ತಮ್ಮ ಮೇಲೆ ತಾವೇ ಒತ್ತಡ ತಂದುಕೊಂಡು ಬ್ರಹ್ಮಚರ್ಯೆ ದೀಕ್ಷೆ ಪಡೆಯುತ್ತಾರೆ. ಅದಕ್ಕಾಗಿ ಕಠಿಣ ಆಹಾರದ ನಿಯಮಗಳನ್ನು ವಿಧಿಸಿಕೊಳ್ಳುತ್ತಾರೆ. ಮನುಷ್ಯನ ಲೈಂಗಿಕತೆ ಎಂಬುದು ಒಂದು ಅತ್ಯಂತ ಸ್ವಾಭಾವಿಕ ಜೈವಿಕ ಅಗತ್ಯವೆಂದೂ ಅದನ್ನು ಅನುಭವಿಸುವಲ್ಲಿ ಯಾವುದೇ ತಪ್ಪುಗಳಿಲ್ಲವೆಂದೂ ಅದಕ್ಕೂ ದೇಶಸೇವೆ ಮಾಡುವುದಕ್ಕೂ ಸಂಬಂಧವಿಲ್ಲವೆಂದು ಅವರಿಗೆ ಅನ್ನಿಸಲೇ ಇಲ್ಲ.
ಅವರ ಈ ತಪ್ಪು ತಿಳಿವಳಿಕೆ ಕೆಟ್ಟಪರಿಣಾಮ ಬೀರಿದ್ದು ಜೆಪಿ ದಂಪತಿಗಳ ಮೇಲೆ. ಈ ಲೇಖನದಲ್ಲಿ ಮೊದಲೇ ಉಲ್ಲೇಖವಾದಂತೆ ಜೆಪಿ ಅಮೇರಿಕಕ್ಕೆ ಓದಲು ಹೊರಡುವ ಮೊದಲು ಅವರಿಗೆ ಮದುವೆಯಾಗುತ್ತದೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವನ್ನು ನೀಡಿದ್ದ ಆಗಿನ ಚಂಪಾರಣ್ಯ ಸತ್ಯಾಗ್ರಹದ ರೂವಾರಿ ವಜ್ರಕಿಶೋರ ಬಾಬು, ತಮ್ಮ ಮೊದಲನೇ ಮಗಳಾದ ವಿದ್ಯಾವತಿಯನ್ನು ಡಾ.ಬಾಬು ರಾಜೇಂದ್ರ ಪ್ರಸಾದರ ಮಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ತರುಣ ಜಯಪ್ರಕಾಶ್ ಅವರ ತೇಜಸ್ಸು ಓಜಸ್ಸುಗಳಿಗೆ ಮಾರುಹೋಗಿ ಅವರು ತಮ್ಮ ಎರಡನೇ ಮಗಳಾದ ಪ್ರಭಾವತಿಯನ್ನು ಜಯಪ್ರಕಾಶರಿಗೆ ಮದುವೆಮಾಡಿಕೊಡುತ್ತಾರೆ. ಹೀಗೆ 1922 ರಲ್ಲಿ ಜೆಪಿ ಮದುವೆಯಾಗಿ ಸಂಸಾರಿಯಾಗುತ್ತಾರೆ. ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಮದುವೆಯಾದ ಹೆಂಡತಿಯನ್ನು ಅವಳ ತವರುಮನೆ ಅಥವಾ ಅವಳ ಬಂಧುಬಳಗದವರ ಮನೆಯಲ್ಲಿ ಬಿಟ್ಟು ಹುಡುಗರು ತಮ್ಮ ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ, ಬೇರೆ ದೇಶಗಳಿಗೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು. ಜೆಪಿಯವರ ಜೀವನದಲ್ಲೂ ಇಂತಹದ್ದೇ ಘಟನೆ ನಡೆಯುತ್ತದೆ. ಜೆಪಿ ಮದುವೆಯಾದ ತಕ್ಷಣ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಗೆ ಪ್ರಯಾಣ ಬೆಳಸುತ್ತಾರೆ. ಕಸ್ತೂರಿ ಬಾ ಅವರ ಅನುಯಾಯಿಯಾಗಿದ್ದ ಪ್ರಭಾವತಿ ದೇವಿ ಗಾಂಧಿಯವರ ಸಾಬರಮತಿ ಆಶ್ರಮ ಸೇರುತ್ತಾರೆ. ನೆಹರೂ ಪತ್ನಿ ಕಮಲಾ ನೆಹರೂ ಅವರೊಂದಿಗೆ ಸಂಪರ್ಕದಲ್ಲಿದ್ದ ಪ್ರಭಾವತಿ ತಮ್ಮದೇ ಆದ ರೀತಿಯಲ್ಲಿ ತಾವೂ ದೇಶಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ.
ಹೊಸದಾಗಿ ಮದುವೆಯಾದರೂ ಗಂಡನ ಸಖ್ಯವಿಲ್ಲದೇ ಏಕಾಂಗಿಯಾಗಿ ಆಶ್ರಮವಾಸಿಯಾಗಿ ರಾಮಾಯಣದ ಲಕ್ಷ್ಮಣನ ಹೆಂಡತಿ ಊರ್ಮಿಳೆಯಂತೆ ಸನ್ಯಾಸಿನಿಯ ಬದುಕನ್ನು ಎಳೆಯಬೇಕಾದ ಸ್ಥಿತಿ ತರುಣೆ ಪ್ರಭಾವತಿಗೆ ಒದಗುತ್ತದೆ. ಹೋಗಲಿ ಜೆಪಿ ವಿದೇಶದಿಂದ ಮರಳಿ ಬಂದ ಮೇಲಾದಾದರೂ ಅವರ ಸುಂದರ ದಾಂಪತ್ಯ ಮುಂದುವರೆಯುವುದಿಲ್ಲ. ಅದಕ್ಕೆ ಕಾರಣವಾಗಿದ್ದು ಗಾಂಧಿ! ಆಶ್ರಮವಾಸಿಯಾಗಿದ್ದ ಇನ್ನೂ ಪ್ರೀತಿಪ್ರೇಮಕಾಮಗಳ ಬದುಕನ್ನು ಬದುಕಬೇಕಾದ ವಯಸ್ಸಿನಲ್ಲಿ ಪ್ರಭಾವತಿಯವರಲ್ಲಿ ಗಾಂಧಿ ವೈರಾಗ್ಯವನ್ನು ತುಂಬಿ ಅವರು ಸಂಸಾರಿಕ ಜೀವನದಿಂದ ವಿಮುಖವಾಗುವಂತೆ ಮಾಡಿಬಿಡುತ್ತಾರೆ! ಅವರ ಬೋಧನೆಯಿಂದ ಪ್ರಭಾವಿತರಾದ ಪ್ರಭಾವತಿ ಅಮೇರಿಕೆಯಿಂದ ಇನ್ನೇನು ಗಂಡ ಮರಳಿ ಬರಬೇಕು ಅನ್ನುವಷ್ಟರಲ್ಲಿ ಅವರಿಗೆ ಅಲ್ಲಿಗೇ ಒಂದು ಪತ್ರ ಬರೆದು `ದೇಶ ಸೇವೆಗಾಗಿ ನಾವು ಬ್ರಹ್ಮಚರ್ಯ ಆಚರಿಸೋಣ’ ಎಂದು ತಿಳಿಸಿಬಿಡುತ್ತಾರೆ. ಜೆಪಿ ಸ್ವದೇಶಕ್ಕೆ ಬಂದ ತಕ್ಷಣ ಹೆಂಡತಿಯೊಂದಿಗೆ ಗಾಂಧಿ ಆಶ್ರಮಕ್ಕೆ ಅವರ ಆಶೀರ್ವಾದವನ್ನು ಪಡೆಯಲು ಹೋದಾಗ ಈ ತರುಣ ದಂಪತಿಗಳಿಗೆ ದೇಶಸೇವೆಗೆ ತೊಡಗಿಕೊಳ್ಳಲು ತಾವು ನಂಬಿದ್ದ ಬ್ರಹ್ಮಚರ್ಯೆಯ ಉಪದೇಶ ಮಾಡಿಬಿಡುತ್ತಾರೆ! ಗಾಂಧಿಯ ಮೇಲೆ ಅಪಾರ ಗೌರವಹೊಂದಿದ್ದ ಈ ದಂಪತಿಗಳು ಒಟ್ಟಾಗಿ ಬದುಕುವ ಪ್ರೀತಿಪ್ರೇಮಕಾಮದ ಸಹಜ ಸೌಂದರ್ಯದ ಖಾಸಗೀ ಬದುಕನ್ನು ತ್ಯಜಿಸಿ ದೇಶಸೇವೆಗೆ ತಮ್ಮ ಇಡೀ ಬದುಕನ್ನು ಮುಡುಪಾಗಿ ಹೋರಾಡುತ್ತಾರೆ. ಈ ಘಟನೆಯನ್ನು ನೋಡಿದರೆ ಅವರು ಮದುವೆಯಾದದ್ದಾದರೂ ಏತಕ್ಕೆ ಎಂಬ ಭಾವ ನಮ್ಮಲ್ಲಿ ಸಹಜವಾಗಿಯೇ ಉಂಟಾಗುತ್ತದೆ.
ಗಾಂಧೀಜಿ ಜೀವನದಲ್ಲಿ ಅನೇಕ ಬಾರಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದರು. ತಮ್ಮ ಆಲೋಚನಾ ಕ್ರಮವನ್ನು ಬದಲಿಸಿಕೊಂಡಿದ್ದರು. ಆರಂಭದಲ್ಲಿ ಅಂತರ್ಜಾತಿಯ ವಿವಾಹಗಳನ್ನು ಬಹಳಷ್ಟು ವಿರೋಧಿಸುತ್ತಿದ್ದ ಅವರು ಮುಂದೆ ಎಷ್ಟು ಬದಲಾದರು ಎಂದರೆ ಕೇವಲ ಅಂತರ್ಜಾತಿಯ ವಿವಾಹಗಳಿಗೆ ಮಾತ್ರ ಭಾಗವಹಿಸುವ ನಿರ್ಧಾರವನ್ನು ಮಾಡಿದರು. ಹೀಗೆ ಬಹಳಷ್ಟು ವಿಷಯಗಳಲ್ಲಿ ಬದಲಾವಣೆಹೊಂದಿದ್ದ ಅವರು ಗಂಡುಹೆಣ್ಣಿನ ಸಂಬಂಧದ ಬಗ್ಗೆ ಮಾತ್ರ ತಮ್ಮ ನಿಲುವನ್ನು ಬದಲಿಸಿಕೊಳ್ಳಲೇ ಇಲ್ಲ. `ನಾನಿನಗೆ ನೀನನಗೆ ಜೇನಾಗುವ’ ಎಂದು ಗಂಡು ಹೆಣ್ಣಿನ ನಡುವೆ ಸಹಜವಾಗಿ ಹುಟ್ಟುವ ಮಾನವನ ವಯೋಸಹಜ ಅನುರಾಗದ ಎಳೆಸಸಿಯನ್ನು ತಕ್ಷಣ, `ರತಿರೂಪಿ ಭಗವತಿಗೆ ಮುಡಿಪಾಗುವ’ ಎಂದು `ಅಧ್ಯಾತ್ಮದ ಗೂಟಕ್ಕೆ ಬಿಗಿದು ಕಟ್ಟುವ ಕುವೆಂಪು ಈ ಸಂಬಧವನ್ನು ದೈವತ್ವಕ್ಕೆ ಏರಿಸುತ್ತಾರೆ ಬಿಟ್ಟರೆ ಅದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ಗಂಡಹೆಂಡತಿ ಲೈಂಗಿಕಚಟುವಟಿಕೆಗಳಲ್ಲಿ ತೊಡಗುವುದು ಕೂಡ ದೇವತಾಕಾರ್ಯ!!. ಆದರೆ ಗಾಂಧಿ ಮಾತ್ರ ಈ ವಿಷಯದಲ್ಲಿ ಬಹಳ ಒರಟಾದ ಒಣವೇದಾಂತಿಯಾಗಿದ್ದರು. ಗಂಡುಹೆಣ್ಣಿನ ಸಂಬಂಧಕ್ಕೆ ಬಹುಮುಖ್ಯವಾಗಿ ಎರಡು ಆಯಾಮಗಳಿರುತ್ತವೆ. ಒಂದು `ಲೈಂಗಿಕಸುಖ’. ಇನ್ನೊಂದು `ಸಂತಾನೋತ್ಪತ್ತಿ’. ಗಾಂಧಿ ಮೊದಲನೆಯದನ್ನು ಅಲಕ್ಷಿಸಿದರು; ಎರಡನೆಯದನ್ನು ಮಾತ್ರ ಪುರಸ್ಕರಿಸಿದರು. ಹೀಗಾಗಿಯೇ ಹರೆಯದ ವಯಸ್ಸಿನಲ್ಲಿ ವಯೋಸಹಜವಾಗಿ ತಮ್ಮ ಹೆಂಡತಿಯೊಂದಿಗೆ ಕೂಡುವ ಬಯಕೆಯಯಾಗುವುದನ್ನೂ ಅವರು `ಕೆಟ್ಟ ಆಲೋಚನೆ’ ಅನ್ನುವ ಅತಿರೇಕಕ್ಕೆ ಹೋದರು. “ಗಂಡಹೆಂಡತಿ ಸೇರಬೇಕಾದದ್ದು ಈ ಪ್ರಪಂಚವನ್ನು ಮುನ್ನಡೆಸಲು ಅವಶ್ಯವಾಗಿ ಬೇಕಾಗಿರುವ ಸಂತಾನವನ್ನು ಪಡೆಯುವುದಕ್ಕೆ ಮಾತ್ರ” ಎಂಬ ನಿಲುವಿಗೆ ಅಂಟಿಕೊಂಡುಬಿಟ್ಟರು. ನಮ್ಮ ಶಿವರಾಮ ಕಾರಂತರಂತೆ “ಗಂಡು-ಹೆಣ್ಣಿನ ಸೇರುವಿಕೆಯ ಲೈಂಗಿಕ ಸುಖ ಮಾನವನ ಬದುಕು ನಮಗೆ ನೀಡುವ ಅಮೂಲ್ಯವಾದ ಸುಖ, ಅದರಿಂದ ಯಾರೂ ವಂಚಿತವಾಗಬಾರದು” ಎಂಬ ನಿಲುವಿಗೆ ಗಾಂಧಿ ಕೊನೆಗೂ ಬರಲೇ ಇಲ್ಲ.
ಗಾಂಧೀಜಿಯವರ ಈ ಅರ್ಥರಹಿತವೂ ಜೀವವಿರೋಧಿಯೂ ಆದ ಹಟಮಾರಿಸ್ವಭಾವದ ಒಣವೇದಾಂತಕ್ಕೆ ಬಲಿಯಾಗಿದ್ದು ಅವರ ಬದುಕಲ್ಲ! ಬದಲಾಗಿ ಜೆಪಿ ಮತ್ತು ಪ್ರಭಾವತಿ ಎಂಬ ಈ ತರುಣ ಜೋಡಿಯ ಬದುಕು. ಇದರ ಪರಿಣಾಮವಾಗಿ ಗಾಂಧಿ ಇಡೀ ದೇಶಕ್ಕೆ ತಂದೆಯಾದರೂ ಜೆಪಿ ಮತ್ತು ಅವರ ಹೆಂಡತಿ ತಮ್ಮ ಕರುಳ ಕುಡಿಗೂ ತಂದೆತಾಯಿಯಾಗಲಾಗಲಿಲ್ಲ! ಇದು ಹೋಗಲಿ, ತಮ್ಮ ಖಾಸಗೀ ಬದುಕನ್ನು ಒಣಗಿಸಿಕೊಂಡು ಅದರ ಸುಖ ಸಂತೋಷಗಳನ್ನು ತ್ಯಾಗಮಾಡಿ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನೂ ತಡೆದು ಏನೊಂದೂ ಆಸ್ತಿಯನ್ನೂ ಮಾಡದೇ ಹಗಲಿರುಳು ದೇಶಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟುಕೊಂಡು ಹೋರಾಡಿದ ಮಹಾನ್ ನಾಯಕ ಜಯಪ್ರಕಾಶ್ ನಾರಾಯಣ ಅವರಿಗೆ ನಮ್ಮ ಸರ್ಕಾರಗಳು ನೀಡಿದ ಸನ್ಮಾನವಾದರೂ ಏನು? ಅವರಿಗೆ ಬ್ರಿಟೀಷ್ ಸರ್ಕಾರ ಕೊಟ್ಟದ್ದಕ್ಕಿಂತ ಹೆಚ್ಚಿನ ಚಿತ್ರಹಿಂಸೆಕೊಟ್ಟು ಅವರು ನರಳಿ ನರಳಿ ಸಾಯುವಂತೆ ಮಾಡಿದ್ದು!! ಒಟ್ಟಿನಲ್ಲಿ ಇಬ್ಬರು ಗಾಂಧಿಗಳಿಂದ ಜೆಪಿ ಬದುಕು ನೆಗ್ಗಿ ನುಜ್ಜುಗುಜ್ಜಾಗಿ ಮುರುಟಿಹೋಯಿತು ಎನ್ನುವುದಂತು ಸತ್ಯ. ಅವರ ಸಾರ್ವಜನಿಕ ಬದುಕು ಮುರುಟಿಹೋಗಲು ಕಾರಣವಾದ ಇಂದಿರಾಗಾಂಧಿ ಮಾಡಿದ ದೌರ್ಜನ್ಯ `ಕರುಣೆಯಿಲ್ಲದ ಕ್ರೌರ್ಯ’. ಅದನ್ನು ದೇಶಕ್ಕೆ ದೇಶವೇ ಹೇಳಿತು. ಆದರೆ ಅವರ ಖಾಸಗೀ ಬದುಕು ಮುರುಟಲು ಕಾರಣವಾದ ಮಹಾತ್ಮಾ ಗಾಂಧಿ ಮಾಡಿದ್ದು ಏನು? ಬಹುಶಃ ರಹಮತ್ ಅವರು ಕುವೆಂಪು ಸಾಹಿತ್ಯ ಚರ್ಚಿಸುತ್ತಾ ಬಳಸುವ `ಕರುಣೆಯೊಳಗಿನ ಕ್ರೌರ್ಯ’ ಅನ್ನಬಹುದೇನೋ!!
*****
ಡಾ. ರಾಜೇಂದ್ರ ಬುರಡಿಕಟ್ಟಿ
23-10-2017
*****
(ಕೃತಜ್ಞತೆ: ಈ ಲೇಖನಕ್ಕೆ ನಾನು ಹಲವಾರು ಮೂಲಗಳನ್ನು ಆಶ್ರಯಿಸಿರುವೆನಾದರೂ ವಿಶೇಷವಾಗಿ ಬಹಳಷ್ಟು ಮಾಹಿತಿಯನ್ನು ಜ.ಹೋ. ನಾರಾಯಣ ಸ್ವಾಮಿ ಅವರ ಜೆಪಿ ಕುರಿತ ಪುಸ್ತಕದಿಂದ ಪಡೆದಿದ್ದೇನೆ. ಈ ಕಾರಣಕ್ಕೆ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. – ರಾಬು)


Saturday, October 21, 2017

ಕತ್ತಲಲ್ಲಿ ಕೈಯಾಡಿಸಲು ಹೋದಾಗ …..

ಕತ್ತಲಲ್ಲಿ ಕೈಯಾಡಿಸಲು ಹೋದಾಗ …..
ಹಗೆಯ ಸಂತೆಯಲ್ಲಿ ಹುಡುಕಿ
ಒಲುಮೆ ತಂದೆನು
ಹಂಚಿದಷ್ಟು ಬೆಳೆಯುತಿಹುದು
ಪ್ರೀತಿ ಅಳಿಯದು
ಕವಿಮಿತ್ರ ಮಾರುತಿ ದಾಸಣ್ಣನವರ ಈ ಪದ್ಯಸಾಲುಗಳು ನಮ್ಮ ದೇಶ ಇಂದು ಹಗೆಯ ಸಂತೆಯಾಗಿರುವುದನ್ನೂ ಅದರಲ್ಲಿ ಪ್ರೀತಿಯನ್ನು ನಾವು ಕೊಳೆತ ತರಕಾರಿಗಳ ನಡುವೆ ಒಳ್ಳೆಯ ತರಕಾರಿಗಳನ್ನು ಆರಿಸುವಂತೆ ಆರಿಸಿಕೊಂಡು ಬಂದು ಅವುಗಳನ್ನು ತಿನ್ನುವುದಷ್ಟೇ ಅಲ್ಲ ಅವುಗಳ ಬೀಜಗಳನ್ನು ನೆಟ್ಟು ಬೆಳೆಸಬೇಕಾದ ಅವಶ್ಯಕತೆಯನ್ನೂ ತುಂಬಾ ಸೊಗಸಾಗಿ ಕಟ್ಟಿಕೊಡುತ್ತವೆ.

ಪೇಜಾವರ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಲಿಂಗಾಯತ ಧರ್ಮದ ಸ್ವಾಯತ್ತತೆಗೆ ಸಂಬಂಧಿಸಿದಂತೆ ಮತ್ತೆ ಹೇಳಿಕೆ ನೀಡಿ ತಮ್ಮ ಸಂಕಟವನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ. `ಮತ್ತೆ’ ಎಂಬ ಪದ ಬಳಸುತ್ತಿರುವುದು ಏಕೆ ಎಂದರೆ ಅವರು ಈ ಬಗ್ಗೆ ಈಗಾಗಲೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಗಳನ್ನು ನೀಡಿದಾಗಲೆಲ್ಲ ಬಹಳಷ್ಟು ಸಂದರ್ಭದಲ್ಲಿ ಅವರು ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ನಿರ್ಲಕ್ಷಕ್ಕೀಡಾಗಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಬಹುತೇಕ ಎಲ್ಲ ನಾಯಕರೂ `ನಿಮ್ಮ ಸಲಹೆ ನಮಗೆ ಬೇಕಿಲ್ಲ’ ಎಂದು ದಕ್ಷಿಣ ಕರ್ನಾಟಕದ ಸೌಮ್ಯಶೈಲಿಯಲ್ಲಿಯೂ `ನಮ್ಮ ಉಸಾಬರಿಗೆ ಬರಬೇಡಿ’ ಎಂದು ಉತ್ತರ ಕರ್ನಾಟಕದ ಖಡಕ್ ಶೈಲಿಯಲ್ಲಿಯೂ ಉತ್ತರ ಕೊಟ್ಟರೂ ಸಲಹೆಕೊಡುವ ಕಸುಬನ್ನು ಅವರು ಬಿಟ್ಟಂತಿಲ್ಲ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸುಮ್ಮನಿದ್ದು ಇರುವ ಗೌರವವನ್ನು ಅವರು ಉಳಿಸಿಕೊಳ್ಳಬಹುದಿತ್ತೇನೋ. ಆದರೆ ಅದು ಅವರಿಗೆ ಏಕೋ ಸಾಧ್ಯವಾಗುತ್ತಿಲ್ಲ.




ದೀಪಾವಳಿ ಹಬ್ಬದ ಮುಂದೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಲಿಂಗಾಯತ ಧರ್ಮ ಸ್ವಾಯತ್ತತೆಗೆ ಸಂಬಂಧಿಸಿದಂತೆ, ಈ ಹಿಂದಿನಂತೆಯೇ ತಿರಸ್ಕಾರಕ್ಕೆ ಅರ್ಹವಾದ ಕೆಲವು ಮಾತುಗಳನ್ನು ಆಡಿ ಮತ್ತೊಮ್ಮೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಪತ್ರಿಕಾ ಗೋಷ್ಠಿಯಲ್ಲಿ ಅವರು ಒಂದಕ್ಕೊಂದು ತಾಳೆಯಾಗದ, ಸ್ಪಷ್ಟವಾಗಿ ಅವರ ನಿಲುವನ್ನೂ ತಿಳಿಸಲು ಆಗದ ಗೊಂದಲದ ಹಲವು ಮಾತುಗಳನ್ನು ಆಡಿದ್ದಾರೆ. ಆ ಮಾತುಗಳು ಸೈದ್ದಾಂತಿಕವಾಗಿ ಒಂದಿಷ್ಟು ಮಹತ್ವ ಪಡೆದಿರುವುದರಿಂದ ಅವುಗಳಲ್ಲಿ ಕೆಲವನ್ನು ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಳ್ಳಲಾಗಿದೆ. ಪತ್ರಿಕೆಗಳಲ್ಲಿ ವರದಿಯಾದಂತೆ ಅವರ ಒಂದು ಮಾತು ಹೀಗಿದೆ: “ಲಿಂಗಾಯತರಲ್ಲಿ ಎರಡು ತರಹದ ಸಂಪ್ರದಾಯ, ಭಿನ್ನಾಭಿಪ್ರಾಯಗಳಿದ್ದರೂ ಎರಡೂ ಬೇರೆ ಬೇರೆ ಧರ್ಮಗಳಲ್ಲ, ಲಿಂಗಾಯತ, ವೀರಶೈವ ಎರಡು ಪ್ರಭೇದಗಳು ಎನ್ನಬಹುದು. ಹೇಗೆ ಧ್ವೈತ ಅಧ್ವೈತಗಳಲ್ಲಿ ಮೂಲಭೂತವಾದ ತಾತ್ವಿಕ ಭಿನ್ನಾಭಿಪ್ರಯಗಳಿದ್ದರೂ ಒಂದೇ ವೈದಿಕ ಧರ್ಮದ ಪ್ರಭೇದಗಳೋ, ಅದೇ ರೀತಿ ಅವುಗಳಿಗಿಂತ ಅತ್ಯಲ್ಪ ಭಿನ್ನತೆ ಇರುವ ಶಿವನೇ ಪರದೈವ ಎನ್ನುವ ಈ ಎರಡೂ ಸಂಪ್ರದಾಯಗಳು ಬೇರೆ ಬೇರೆ ಆಗಿರುವ ಸಾಧ್ಯತೆ ಇಲ್ಲ”

ಪೇಜಾವವರ ಮೇಲಿನ ಮಾತು ಕೆಲವು ಬಹಳಷ್ಟು ಅಸ್ಪಷ್ಟವಾಗಿದ್ದರೂ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಅಸ್ಪಷ್ಟ ಏಕೆ ಎಂದರೆ ಅವರು ಕೆಲವು ಧರ್ಮಗಳನ್ನು `ಮೂಲ’ ಎಂದೂ ಮತ್ತೆ ಕೆಲವನ್ನು `ಪ್ರಭೇದ’ ಎಂದು ಅವರು ಗುರುತಿಸುವಲ್ಲಿ ಸ್ಪಷ್ಟತೆ ಇಲ್ಲ. `ವೀರಶೈವ’ ಮತ್ತು `ಲಿಂಗಾಯತ’ ಗಳನ್ನು ಪ್ರಭೇದಗಳು ಎಂದು ಹೆಸರಿಸುವ ಅವರು ಇವೆರಡಕ್ಕೆ ಯಾವುದು ಮೂಲ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೂ ಆ ಮಾತಿನ ಹಿಂದೆ ಮತ್ತು ಮುಂದೆ ಇರುವ ಅವರ ಮಾತುಗಳನ್ನು ಗಮನಿಸಿದರೆ ಅವರೆಡಕ್ಕೂ `ಹಿಂದೂಧರ್ಮ’ ಎಂಬುದು ಮೂಲ ಎಂದು ಅವರು ಹೇಳುತ್ತಿದ್ದಂತೆ ತೋರುತ್ತದೆ. ಆದರೆ  ಹೋಲಿಕೆ ಕೊಡಲು ಅವರು ಬಳಸುವ `ಧ್ವೈತ’ ಮತ್ತು `ಅಧ್ವೈತ’ ಗಳನ್ನು ಪ್ರಭೇದಗಳು ಎಂದು ಹೇಳುವಾಗ ಅವುಗಳಿಗೆ `ವೈದಿಕಧರ್ಮ’ವನ್ನು ಮೂಲವಾಗಿ ಸ್ಪಷ್ಟವಾಗಿ ಗುರುತಿಸುತ್ತಾರೆ. ಅಂದರೆ ಮೂಲಧರ್ಮಗಳ ಪಟ್ಟಿಯಲ್ಲಿ `ಹಿಂದೂ’ ಜೊತೆ `ವೈದಿಕ’ವನ್ನೂ ಸೇರಿಸುವ ಪೇಜಾವರರ ಈ ವಿವರಣೆ ಪ್ರಕಾರ `ವೈದಿಕ’ ಮತ್ತು `ಹಿಂದೂ’  ಇವೆರಡೂ ಬೇರೆ ಬೇರೆ ಎಂಬುದಂತೂ ಸ್ಪಷ್ಟ. ಹಾಗಾದರೆ ಇವುಗಳ ನಡುವಿನ ಸಂಬಂಧ ಎಂಥದ್ದು? ನಾವು ತಿಳಿದುಕೊಂಡಂತೆ ತಾಯಿ- ಮಗುವಿನ ಸಂಬಂಧವಾಗುವುದಿಲ್ಲ. ಹಾಗಾದರೆ ಅವು ಸಹೋದರ ಸಂಬಂಧಿಗಳೇ? ಹೌದೆನ್ನುವುದಾದರೆ ಇವೆರಡಕ್ಕೂ ಮೂಲ ಇನ್ಯಾವುದು? ವಾಸ್ತವ ಏನೆಂದರೆ ಯಾವನ್ನು ಪೇಜಾವರರು ಪ್ರಭೇದಗಳು ಎಂದು ಗುರುತಿಸುತ್ತಾರೋ ಅಂತಹ ವೀರಶೈವ, ಲಿಂಗಾಯತ, ಹಾಗೂ ಅವರು ಧ್ವೈತ ಅಧ್ವೈತ ಗಳಿಗೆ ಮೂಲವೆಂದು ಗುರುತಿಸುವ ವೈಷ್ಣವ ಇವೇ ಸ್ವತಂತ್ರ ಧರ್ಮಗಳು. ಇವೆಲ್ಲವುಗಳನ್ನು ಒಳಗೊಂಡ ಇವೆಲ್ಲದರ ಮೂಲವೆಂದು ಕರೆಯಲ್ಪಡುವ `ಹಿಂದೂಧರ್ಮ’ ಎನ್ನುವುದು ಒಂದು `ಕಾಲ್ಪನಿಕ ಕವಚ’ವೇ ಹೊರತು ಅದು ಧರ್ಮವಲ್ಲ. ಹಿಂದೂ ಎಂಬುದನ್ನು ಧರ್ಮವೆಂದು ಕರೆಯದೆ ಅದನ್ನು ಜೀವನ ವಿಧಾನ (Way of Life) ಎಂದು ಕರೆಯುವುದೇ ಸೂಕ್ತ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹಾಗಾಗಿ  ಪ್ರಪಂಚದ ಇತರ ಧರ್ಮಗಳಾದ ಸಿಖ್, ಜೈನ, ಭೌದ್ಧ ಇಂತಹ ಧರ್ಮಗಳ ಜೊತೆಗಿಟ್ಟು ಚರ್ಚಿಸಬೇಕಾದಂಥವು ಈ ಲಿಂಗಾಯತ, ವೀರಶೈವ, ವೈಷ್ಣವ, ಇತ್ಯಾದಿಗಳೇ ಹೊರತು ಅವೆಲ್ಲದರ `ಕಾಲ್ಪನಿಕ ಕವಚ’ವಾದಂತಹ ಕಲ್ಪಿತ `ಹಿಂದೂಧರ್ಮ’ವಲ್ಲ. ಅದನ್ನು ಪೇಜಾವರರಂಥವರು ಒಪ್ಪುವುದು ಕಷ್ಟ.

ಈ ಮಾತಿನಲ್ಲಿರುವ ಇನ್ನೊಂದು ಅಂಶ ಲಿಂಗಾಯತ ಮತ್ತು ವೀರಶೈವ ಎರಡೂ ಸಂಪ್ರದಾಯಗಳು ಶಿವನನ್ನೇ ಪರದೈವ ಎನ್ನುವ ಕಾರಣಕ್ಕೆ ಇವೆರಡೂ ಬೇರೆ ಆಗುವ ಸಾಧ್ಯತೆಯಿಲ್ಲ ಎನ್ನುವುದು. ಪೇಜಾವರರಿಗೆ ಲಿಂಗಾಯತರು ಶಿವನ ಆರಾಧಕರಲ್ಲ ಎನ್ನುವ ಅಂಶ ಗೊತ್ತಿಲ್ಲ ಎಂಬುದನ್ನು ಅವರ ಈ ಮಾತು ತಿಳಿಸುತ್ತದೆ. ಎಲ್ಲ ಹಿಂದೂಗಳು ಶಿವನ ಆರಾಧಕರಲ್ಲ ಎಂಬುದು ಹೇಗೆ ಸತ್ಯವೋ ಶಿವನ ಆರಾಧಕರೆಲ್ಲ ಹಿಂದೂಗಳಲ್ಲ ಎನ್ನುವುದು ಅಷ್ಟೇ ಸತ್ಯ.  ಶಿವನನ್ನು ಪೂಜಿಸುವವರನ್ನು ಶೈವರೆಂದೂ, ಸ್ಥಾವರ ಲಿಂಗವನ್ನು ಪೂಜಿಸುವವರನ್ನು ವೀರಶೈವರೆಂದೂ, ಇಷ್ಟಲಿಂಗವನ್ನು ಪೂಜಿಸುವವರನ್ನು `ಲಿಂಗಾಯತ’ರೆಂದೂ ಸ್ಥೂಲವಾಗಿ ವಿಭಾಗಿಸಬಹುದಾದರೂ ಪೂಜಾವಿಧಾನದಲ್ಲಿ ಅಷ್ಟೇನೂ ಕಟ್ಟುನಿಟ್ಟುಗಳನ್ನು ಈ ಧರ್ಮೀಯರು ಸೇರಿದಂತೆ ಭಾರತದಲ್ಲಿ ಯಾವ ಧರ್ಮೀಯರೂ ಆಚರಿಸಕೊಂಡುಬಂದಿಲ್ಲ ಎಂಬುದು ಸತ್ಯ. ಹಾಗೆ ನೋಡಿದರೆ ಲಿಂಗಾಯತರು ಕೇವಲ ಪೇಜಾವರರು ಹೇಳುವಂತೆ ಶಿವನ ಆರಾಧಕರು ಮಾತ್ರವಲ್ಲ. ಪುರೋಹಿತಶಾಹಿಯ ಮತ್ತು ವೈದಿಕ ಪ್ರಭಾವದಿಂದಾಗಿ ವಿಷ್ಣುವನ್ನೂ ಅವನ ವಿವಿಧ ಅವತಾರಗಳೆಂದು ಕರೆಯಲಾಗುವ ಕೃಷ್ಣ ಮುಂತಾದವರನ್ನೂ ಪೂಜಿಸುವವರು ಇದ್ದಾರೆ. ನಮ್ಮ ಪುರಾಣಗಳಲ್ಲಿ `ಶಿವ’ ಮತ್ತು `ವಿಷ್ಣು’ ಇವರ ನಡುವೆ ದೊಡ್ಡ ಕಾಳಗಗಳನ್ನೇ ನಮ್ಮ ಪುರೋಹಿತಶಾಹಿ ನಡೆಸಿದೆ. ಅವರಿಬ್ಬರಲ್ಲಿ ಒಬ್ಬನು ಇನ್ನೊಬ್ಬನಿಗಿಂತ ಮೇಲು ಎಂದು ತೋರಿಸಲು ಎಷ್ಟೊಂದು ಪುರಾಣಗಳನ್ನು ಬರೆದಿದ್ದಾರೆ ಎಂಬುದು ಪೇಜಾವರರಂಥ ಯತಿಗಳಿಗೆ ತಿಳಿಯದ ಸಂಗತಿಯಲ್ಲ. ಸಂಸ್ಕೃತಿಯ ಸರದಾರರಾಗಿ  ಬಹುಕಾಲ ಮೆರೆದ ವೈದಿಕರ ಪ್ರಭಾವದಿಂದ ಅವರ ಈ ಆಚರಣೆಗಳು ಉಳಿದೆಲ್ಲ ವೈದಿಕೇತರರ ಜೀವನವಿಧಾನಗಳಲ್ಲಿ ಬಹಳಷ್ಟು ಮಟ್ಟಿಗೆ ಬೆರೆತಿರುವಂತೆ ಅವು ಲಿಂಗಾಯತದಲ್ಲಿಯೂ ಬೆರತಿವೆ ಅಷ್ಟೆ.  ಆದರೆ ಅವು ಲಿಂಗಾಯತದ ಮೂಲ ಚಹರೆಗಳಲ್ಲ; ಇದು ಪೇಜಾವರರಿಗೆ ಬಹುಶಃ ಗೊತ್ತಿಲ್ಲ.

ಅವರು ಮುಂದುವರೆಸಿದ ಮಾತಿನಲ್ಲಿ, “ಶಿವನೇ ಪರದೈವ ಎಂದು ಭಾವಿಸುವ, ಶಿವ ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವ ಲಿಂಗಾಯತರಾಗಲೀ ಅಥವಾ ವೀರಶೈವರಾಗಲೀ, ಹಿಂದೂಧರ್ಮದಿಂದ ಬೇರೆ ಆಗುವುದು ಹೇಗೆ ಎಂದು ನಾನು ಕೇಳಿದ ಪ್ರಶ್ನೆಗೆ ಈವರೆಗೆ ಯಾರೂ ಉತ್ತರ ಕೊಟ್ಟಿಲ್ಲ. ಜಾತಿ ವ್ಯವಸ್ಥೆಯನ್ನು ಒಪ್ಪದ ಲಿಂಗಾಯತ ಧರ್ಮವು ಹಿಂದೂಧರ್ಮದಿಂದ ಬೇರೆಯಾದರೆ  ಜಾತಿ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ರಾಮಕೃಷ್ಣಾಶ್ರಮ, ಆರ್ಯಸಮಾಜ, ಹಿಂದೂ ಧರ್ಮದಿಂದ ಬೇರೆಯೇ, ಜಾತಿಪದ್ಧತಿಯನ್ನು ಒಪ್ಪದ ಅನೇಕ ವೈಷ್ಣವ ಧರ್ಮಗಳು ಮತ್ತು ಶೈವಧರ್ಮಗಳು ಹಿಂದೂಧರ್ಮದಿಂದ ಬೇರೆಯೇ, ಎಂಬ ಪ್ರಶ್ನೆಗೂ ಯಾರೂ ಉತ್ತರ ನೀಡಿಲ್ಲ” ಎಂದು ಹೇಳಿದ್ದಾರೆ.

ಈ ಮಾತೂ ಎಷ್ಟು ಗೊಂದಲದಿಂದ ಕೂಡಿದೆ ಗಮನಿಸಿ. ಜಾತಿವ್ಯವಸ್ಥೆಯನ್ನು ಒಪ್ಪದ ವೈಷ್ಣವ ಧರ್ಮಗಳು ಮತ್ತು ಶೈವಧರ್ಮಗಳು ಎನ್ನುವಾಗ ಜಾತಿ ಮತ್ತು ಧರ್ಮಗಳಿಗಿರುವ ಸ್ಪಷ್ಟತೆ ಅವರಿಗೆ ಇದ್ದಂತಿಲ್ಲ. ರಾಮಕೃಷ್ಣಾಶ್ರಮವನ್ನೂ ಧರ್ಮವೆಂದು ಪರಿಗಣಿಸುತ್ತಾರೆ! ಈ ಗೊಂದಲಗಳು ಇರಲಿ. ಅವರು ಕೇಳಿರುವ `ಇದುವರೆಗೂ ಯಾರೂ ಉತ್ತರ ನೀಡದ ಪ್ರಶ್ನೆಗಳ ಕಡೆ ಗಮನಕೊಡೋಣ. ಈ ಪ್ರಶ್ನೆಗಳೇ ಸರಿಯಿಲ್ಲದಿದ್ದರಿಂದ ಅವರಿಗೆ ನೇರವಾಗಿ ಯಾರೂ ಉತ್ತರ ಕೊಟ್ಟಿಲ್ಲದಿರಬಹುದು. ಆದರೆ ಅವು ಬಹಳಷ್ಟು ಸಂಕೀರ್ಣವಾದ ಮತ್ತು ಉತ್ತರಿಸಲು ತತ್ತರಿಸುವ ಪ್ರಶ್ನೆಗಳಂತೂ ಅಲ್ಲ. ಈ ಪ್ರಶ್ನೆಗಳಿಗೆ ಉತ್ತರವೆನಿಸುವ ಅನೇಕ ವಿವರಗಳನ್ನು ಈಗಾಗಲೇ ಅನೇಕ ವಿದ್ವಾಂಸರು, ಸಾರ್ವಜನಿಕವಾಗಿ ನೀಡಿದ್ದಾರೆ. ಅವುಗಳನ್ನು ಪೇಜಾವರರು ಗಮನಿಸುವ ಔದಾರ್ಯ ತೋರಿದಂತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆಯನ್ನು `ಮುಕ್ತ’ವಾಗಿ ಗಮನಿಸಲು ಅವರಿಗೆ ಸಾಧ್ಯವಾದರೆ ಅವರ ಪ್ರಶ್ನೆಗಳ ಅಪ್ರಸ್ತುತತೆ ಅವರಿಗೆ ಅರ್ಥವಾಗುತ್ತದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿರುವುದರಿಂದ  ಆ ನಿಟ್ಟಿನಲ್ಲಿ ಇಲ್ಲಿ ಚರ್ಚೆಯನ್ನು ಬೆಳಸುವ ಅವಶ್ಯಕತೆಯಿಲ್ಲ.

ಪೇಜಾವರರ ಈ ಸುದ್ಧಿಗೋಷ್ಠಿಯಲ್ಲಿ ಅವರ ಒಳ ಉದ್ದೇಶವನ್ನು ಹೊರಹಾಕುವ ಮಾತುಗಳು ತಮಾಸೆಯ ಸಂಗತಿಯಂತೆ ಕೊನೆಯಲ್ಲಿ ಅವರ ಬಾಯಿಯಿಂದ ಬಂದಿವೆ. ಆ ಮಾತುಗಳು ಹೀಗಿವೆ: “ವೈಷ್ಣವ ಸಂಪ್ರದಾಯದಲ್ಲಿರುವ ನನಗೆ ಇದರ ಬಗ್ಗೆ (ಲಿಂಗಾಯತ-ವೀರಶೈವ ಸಮಸ್ಯೆಯ ಬಗ್ಗೆ) ಮಾತನಾಡಲು ಅಧಿಕಾರ ಏನು ಎಂದು ಕೆಲವರು ಕೇಳಿತ್ತಾರೆ. ಸಹೋದರ ಮನೆಬಿಟ್ಟು ಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವೇ?.. ನಮ್ಮೊಂದಿಗೆ ಇದ್ದು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಪ್ರಯತ್ನಿಸಬೇಕು….ಹೇಗೆ ಮುಸಲ್ಮಾನರೆಲ್ಲ ಅನ್ಯೋನ್ಯರಾಗಿರಬೇಕೋ ಅದೇ ರೀತಿ ಹಿಂದೂಗಳೂ ಇರಬೇಕು….ವೀರಶೈವ–ಲಿಂಗಾಯತ ಧರ್ಮಗಳ ಆಂತರಿಕ ವಿಷಯವಾಗಿರುವುದರಿಂದ ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ.”

ಮೊದಲು ತಮಾಸೆಯ ಸಂಗತಿಯನ್ನು ಹೇಳಿಬಿಡುತ್ತೇನೆ. ಲಿಂಗಾಯತರು ಎಂದು ಸ್ವತಂತ್ರಧರ್ಮ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟವನ್ನು ಆರಂಭಿಸಿದರೋ, ಎಂದು ಅವರೆಲ್ಲ ತಮ್ಮ ಕಪಿಮುಷ್ಟಿಯಿಂದ ಕಳಚಿಕೊಳ್ಳುತ್ತಿದ್ದಾರೆ ಎಂಬ ಆತಂಕ ಪೇಜಾವರರು ಪ್ರತಿನಿಧಿಸುವ `ಕಲ್ಪಿತಹಿಂದೂ’ ಪಾಳಯದಲ್ಲಿ ಶುರುವಾಯಿತೋ ಅಂದಿನಿಂದಲೇ ಪೇಜಾವರರು `ವೀರಶೈವ-ಲಿಂಗಾಯತ’ ಧರ್ಮದ ವಿಷಯದಲ್ಲಿ ಮೂಗು ತೂರಿಸುತ್ತಲೇ ಬಂದಿದ್ದಾರೆ. ಮೂಗು ಮುರಿಯುವಂತೆ ಎದುರು ಪಾಳೆಯದಿಂದ ವಾಗ್ದಾಳಿಗೆ ತುತ್ತಾಗುತ್ತಲೇ ಬಂದಿದ್ದಾರೆ. ಇದೊಂದು ಸುದ್ದಿಗೋಷ್ಠಿಯಲ್ಲಿಯೇ ಆ ಧರ್ಮಗಳ ಬಗ್ಗೆ ಇಷ್ಡೊಂದು ಮೂಗು ತೂರಿಸಿ ಮಾತನಾಡಿದ್ದಾರೆ. ಆದರೂ `ನಾನು ಮೂಗು ತೂರಿಸುವುದಿಲ್ಲ’ ಎನ್ನುತ್ತಿದ್ದಾರೆ. ಇವರ ದೃಷ್ಟಿಯಲ್ಲಿ ಮೂಗನ್ನು ಎಷ್ಟು ಉದ್ದ ಒಳಗೆ ತಳ್ಳಿದರೆ ಮೂಗು ತೂರಿಸಿದಂತೆ ಆಗುತ್ತದೆಯೋ ಗೊತ್ತಿಲ್ಲ.

“ಸಹೋದರ ಮನೆಬಿಟ್ಟುಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವೇ?” ಎಂದು ಕೇಳುವ ಅವರ ಪ್ರಶ್ನೆಯಂತೂ ಅವರಿಗೆ ಮನೆಯನ್ನು ಒಗ್ಗಟ್ಟಾಗಿಟ್ಟುಕೊಳ್ಳಬೇಕು ಎಂಬ ಕಾಳಜಿ ಎಷ್ಟಿದೆಯಲ್ಲ ಎಂದು ಒಂದು ಕ್ಷಣ ಅಪಾರವಾದ ಗೌರವ ಅವರ ಮೇಲೆ ಉಕ್ಕುವಂತೆ ಮಾಡುತ್ತದೆ. ಆದರೆ ಅವರ ಈ ಸಹೋದರ ಪ್ರೇಮ ವಿಶ್ವಾಸಾರ್ಹವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹೌದು, ಸಹೋದರ ಮನೆಬಿಟ್ಟು ಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವಲ್ಲ. ಆದರೆ ಆ ಸಹೋದರ ಮೆನಬಿಟ್ಟು ಏಕೆ ಹೊರಟ ಎಂಬುದು ಮನೆಯ ಹಿರಿಯನಿಗೆ ಅಥವಾ ಅವನನ್ನು `ಸಹೋದರ’ ಎಂದು ಕರೆಯುವವರಿಗೆ ಗೊತ್ತಿಲ್ಲದಿದ್ದರೆ ಹೇಗೆ? ಯಾವುದಾದರು ಸಹೋದರ ಮನೆಬಿಟ್ಟು ಹೊರಡುವ ನಿರ್ಧಾರಕ್ಕೆ ಬರುತ್ತಾನೆ ಎಂದರೆ ಅದು ಧಿಡೀರನೆ ತೆಗೆದುಕೊಳ್ಳುವ ನಿರ್ಧಾರವಾಗಿರುವುದಿಲ್ಲ. ಸಣ್ಣಪುಟ್ಟ ಮನಸ್ತಾಪಗಳಿಗೆಲ್ಲ ಮನೆಬಿಡುವ ನಿರ್ಧಾರವನ್ನು ಯಾವ ಜವಾಬ್ದಾರಿಯುತ ಸಹೋದರನೂ ತೆಗೆದುಕೊಳ್ಳುವುದಿಲ್ಲ. ಅದರ ಹಿಂದೆ ಹೊಂದಿಕೊಂಡಿರುವ ಅನೇಕ ಪ್ರಯತ್ನಗಳು ನಡೆದಿರುತ್ತವೆ. ಆ ಎಲ್ಲ ಪ್ರಯತ್ನಗಳು ವಿಫಲವಾದಾಗ ಮಾತ್ರ ಮನೆಬಿಡುವ ಅಂತಿಮ ನಿರ್ಧಾರಕ್ಕೆ ಯಾವುದೇ ಸಹೋದರ ಬರುತ್ತಾನೆ. ಇದು ವಾಸ್ತವ. ಆದರೆ ಅವನು ಮನೆಯಲ್ಲಿ ಸಂಕಟಪಡಲು ಕಾರಣರಾದವರು, ಅಥವಾ ಕಾರಣರಾಗದಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯರು ಅವನ ಸಂಕಟವನ್ನು ಆಲಿಸಿ ಸಮಾಧಾನಮಾಡುವ, ಅವನಿಗೆ ಕಿರುಕುಳ ತಪ್ಪುವಂತೆ ಮಾಡುವ, ಅವನನ್ನು ಪ್ರೀತಿಯಿಂದ ಕಾಣುವ ಕೆಲಸವನ್ನು ಮಾಡಬೇಕಾಗುತ್ತದೆ. ಅದ್ಯಾವುದನ್ನೂ ಮಾಡದೇ ಅವನು ಉಸಿರುಕಟ್ಟಿದ ವಾತಾವರಣದಿಂದ ದೂರವಾಗಲು ಅಂತಿಮ ನಿರ್ಧಾರವನ್ನು ತೆಗೆದುಕೊಂಡು ಗಂಟು ಮೂಟೆ ಕಟ್ಟಿಕೊಂಡು ಮನೆಯ ಹೊರನಡೆಯುತ್ತಿರುವಾಗ ಹೊರಬಾಗಿಲಿನ ಹೊಸ್ತಿಲ ಹತ್ತಿರ ಅವನನ್ನು ತಡೆಯಹೋಗುವುದರಲ್ಲಿ ಅರ್ಥವಿಲ್ಲ. ಈ ದೃಷ್ಟಿಯಿಂದ ಪೇಜಾವರರ ಒತ್ತಾಯ ಅಪರಾಧವಲ್ಲ ನಿಜ; ಉಪಯೋಗವಿಲ್ಲ ಎಂಬುದೂ ನಿಜ.

ಲಿಂಗಾಯತ – ವೀರಶೈವರದ್ದೂ ಅದೇ ಕಥೆ. `ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂಬ ಕವಿ ನಿಸಾರ್ ಅಹಮದ್ ಅವರ ಕವಿತೆಯ ಸಾಲಿನಂತೆ ಒಂದು ಮನೆಯಲ್ಲಿದ್ದೂ ಒಂದಾಗದೇ ಉಳಿದ, ಬಹುತೇಕ ವೈದಿಕೇತರರು ವೈದಿಕರ ಊಳಿಗವನ್ನು ಶತಮಾನಗಳಿಂದ ಮಾಡಿಮಾಡಿ ಬೇಸತ್ತು ರೋಸಿಹೋಗಿ ಆಗಾಗ ಕೆಲವರು ಮನೆಬಿಟ್ಟು ಹೋಗಿ ಬೇರೆ ಮನೆಮಾಡಿಕೊಂಡು ಸುಖವಾಗಿಯಲ್ಲದಿದ್ದರೂ ನೆಮ್ಮದಿಯಿಂದ ಇದ್ದಾರೆ. ಆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಈಗ ಈ ವೀರಶೈವ-ಲಿಂಗಾಯತರು ಬಿಡುಗಡೆ ಬಯಸಿ ಹೊರಟಿದ್ದಾರೆ. ಯಾರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆಯೋ ಮತ್ತು ಯಾವ ಜೀವನಕ್ರಮ ಆಚಾರ ವಿಚಾರಗಳನ್ನು `ಹಿಂದೂ ಜೀವನಕ್ರಮ’ ಮತ್ತು `ಹಿಂದೂ ಆಚಾರ ವಿಚಾರಗಳು’ ಎಂದು ಬಿಂಬಿಸಿ ನಂಬಿಸಲಾಗುತ್ತಿದೆಯೋ ಅವೆಲ್ಲ ಈ ವಿಶಾಲ ಹಿಂದೂವಿನ ಒಂದಂಗವಾದ `ವೈದಿಕಶಾಹಿಯ ಜೀವನ ಕ್ರಮ’ ಮತ್ತು `ವೈದಿಕಶಾಹಿಯ ಆಚಾರ ವಿಚಾರಗಳು’ ಎಂಬುದರ ಅರಿವು ಆಗುತ್ತಿರುವುದರ ಪ್ರತಿಫಲ ಈ ನಡೆಗಳ ಹಿಂದಿರುವ ಕಾರಣ. ಈ `ವೈದಿಕ ಬಂಧನ’ ಎಂಬುದು ಒಂದು ರೀತಿಯಲ್ಲಿ `ದೃತರಾಷ್ಟ್ರ ಬಂಧನ’, ಎಳ್ಳಷ್ಟೂ ಪ್ರೀತಿ ಅದರೊಳಗಿಲ್ಲ, ನಾವು ಹೆಸರು ಮಾಡುವುದಿರಲಿ ಉಸಿರಾಡುವುದೂ ಅದಕ್ಕೆ ಇಷ್ಟವಿಲ್ಲ ಎಂಬುದನ್ನು ತಮ್ಮ ಅರಿವಿನ ಮೂಲಕ ಅವರೆಲ್ಲ ತಿಳಿದುಕೊಂಡಿದ್ದಾರೆ. “ಸ್ವಲ್ಪದೂರ ಸರಿದು ನಿಲ್ಲು ಉಸಿರನಾಡುವೆ/ ಕತ್ತನೆತ್ತಿ ಮೇಲಕೊಮ್ಮೆ ಮುಗಿಲ ನೋಡುವೆ” ಎಂದು ಪುರೋಹಿತಶಾಹಿಯ ಸರ್ಪಬಂಧನದಿಂದ ಬಿಡಿಸಿಕೊಳ್ಳುವ ಆತುರದಲ್ಲಿದ್ದಾರೆ. ಈ ಹಂತದಲ್ಲಿ ಅವರನ್ನು ತಡೆಯುವ ಬದಲು ಶುಭಹಾರೈಸಿ ಕಳಿಸುವುದೇ ಒಳಿತು. ಇಲ್ಲದಿದ್ದರೆ ತಡೆಯಹೋಗುವವರನ್ನು ತಳ್ಳಿ ಕೆಡವಿ ಅವರು ಮುನ್ನಡೆಯುತ್ತಾರೆ!

ಪೇಜಾವರರು ಶ್ರೀಕೃಷ್ಣನ ಪರಮ ಭಕ್ತರು. ಮಹಾಭಾರತದಲ್ಲಿ ಕರ್ಣನನ್ನು ಪಾಂಡವರ ಕಡೆ ಒಲಿಸಿಕೊಳ್ಳುವ ಉದ್ದೇಶದಿಂದ ಶ್ರೀಕೃಷ್ಣ ಅವನನ್ನು ಭೇಟಿಮಾಡಿ, “ನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ, ಕೌರವರು ಪಾಂಡವರು ನಿನ್ನ ಎಡಬಲದಲ್ಲಿ ನಿಂತು ನಿನಗೆ ಸಲಾಮು ಹೊಡೆಯುವಂತೆ ಮಾಡುತ್ತೇನೆ, ಕೌರವ ಪಾಂಡವರೆಲ್ಲ ನಿನ್ನ ಕಿಂಕರರಾಗಿ ಸೇವೆ ಮಾಡುತ್ತಾರೆ, ನೀನು ಅವರ ಮಧ್ಯೆ ಕುಳಿತು ಧರ್ಪದಿಂದ ರಾಜ್ಯಭಾರ ಮಾಡುತ್ತಾ ಮೆರೆಯಬಹುದು, ನಮ್ಮಕಡೆಗೇ ಇರು ಆ ಕಡೆ ಹೋಗಬೇಡ” ಎಂದು ಆಮಿಷ ತೋರುತ್ತಾನೆ. ಅವನ ಮಾತೆಲ್ಲವನ್ನೂ ಸಮಾಧಾನದಿಂದ ಆಲಿಸಿಕೊಂಡ ಕರ್ಣ ಅತ್ಯಂತ ದೃಢಚಿತ್ತದಿಂದ ತನ್ನ ನಿರ್ಧಾರವನ್ನು “`ಮರುಳು ಮಾಧವ’ (ಹುಚ್ಚ ಕೃಷ್ಣ) ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ/ ಕೌಂತೇಯರು ಸುಯೋಧನರು ಬೆಸಕೈವಲ್ಲಿ ಮನವಿಲ್ಲ” ಎಂದು ಎದೆಗೆ ಹೊಡೆದಂತೆ ಹೇಳಿ ಕಳಿಸುತ್ತಾನೆ. ಕೃಷ್ಣ ಕರ್ಣನಿಂದ ಹೇಳಿಸಿಕೊಂಡ ಮಾತನ್ನೇ ಪೇಜಾವರರು ಲಿಂಗಾಯತ ಧರ್ಮದ ಪ್ರತಿಪಾದಕರಿಂದ ಹೇಳಿಸಿಕೊಳ್ಳಬಾರದು. ಅನ್ನುವುದಾದರೆ ತಮಗೆ ಗೊತ್ತಿಲ್ಲದ ವಿಷಯದಲ್ಲಿ ಅವರು ಸುಮ್ಮನಿರುವುದೇ ಕ್ಷೇಮ.
 
ಅವರ ಮಾತಿನಲ್ಲಿರುವ ಇನ್ನೊಂದು  ಬಹಳ ಮುಖ್ಯವಾದ ಅಂಶ ಹಿಂದೂ ಮುಸಲ್ಮಾನರ ಭಾವೈಕ್ಯತೆಗೆ ಸಂಬಂಧಿಸಿದ್ದು. “ಮುಸಲ್ಮಾನರು ಹೇಗೆ ಅನ್ಯೂನ್ಯತೆಯಿಂದ ಬಾಳಬೇಕೋ ಹಿಂದೂಗಳೂ ಹಾಗೇ ಅನ್ಯೂನ್ನತೆಯಿಂದ ಬಾಳಬೇಕು” ಎಂಬ ಮಾತು ಏನನ್ನು ಧ್ವನಿಸುತ್ತದೆ. ಮೇಲು ನೋಟಕ್ಕೆ ಹಿಂದೂಗಳೆಲ್ಲರೂ ಒಟ್ಟಾಗಿರಬೇಕು ಎಂದು ಒಂದು ಒಳ್ಳೆಯ ಸಂದೇಶವನ್ನು ನೀಡಿದಂತೆ ಅದು ತೋರುತ್ತದೆ. ಅದೇ ಕಾಲಕ್ಕೆ ಸೂಕ್ಷ್ಮನೋಟಕ್ಕೆ ಅದು ಮುಸಲ್ಮಾನರು ಹಿಂದೂಗಳಿಗಿಂತ ಭಿನ್ನ, ಹಾಗಾಗಿ ಅವರೊಂದು ಗುಂಪು ನಾವೊಂದು ಗುಂಪು ಆಗೋಣ ಎಂದು ಹೇಳಿದಂತೆ ಕೂಡ ಆಗುತ್ತದೆ. ಏಕೆ ಹಿಂದೂಗಳು ಮುಸಲ್ಮಾನರು ಪರಸ್ಪರ ಅನ್ಯೋನ್ಯತೆಯಿಂದ ಬಾಳಿದರೆ ಏನಾಗುತ್ತದೆ? ಅವರಿಬ್ಬರ ನಡುವೆ ಒಂದು ಕಂದಕ ಇರಬೇಕು ಎಂಬುದೇ ಇವರ ಅಪೇಕ್ಷೆಯೇ? ಇಡೀ ದೇಶ ಇವತ್ತು ಹಿಂದೂಗಳ ನಡುವಿನ ಒಡಕಿನಿಂದಾಗಲೀ ಮುಸ್ಲಿಮರ ನಡುವಿನ ಒಡಕಿನಿಂದಾಗಲೀ ತತ್ತರಿಸುತ್ತಿಲ್ಲ; ಬದಲಾಗಿ ಅದು ತತ್ತರಿಸುತ್ತಿರುವುದು ಹಿಂದೂ ಮತ್ತು ಮುಸ್ಲಿಮರ ನಡುವಿನ ಒಡಕಿನಿಂದ ಅಥವಾ ನ್ಯೋನತೆಯಿಂದ.  ಅದನ್ನು ಬೆಸೆಯುವ ಕೆಲಸ ಎಲ್ಲರೂ ಮಾಡಬೇಕಾಗಿರುವ ತುರ್ತು ಕಾರ್ಯವಲ್ಲವೇ?

ಪೇಜಾವರರು ಭಾವಿಸುವಂತೆ ಹಿಂದೂ ಧರ್ಮರಕ್ಷಣೆಯಾಗಲೀ ಇಸ್ಲಾಂ ಧರ್ಮ ರಕ್ಷಣೆಯಾಗಲೀ ಇಂದು ಆದ್ಯತೆಯ ವಿಷಯಗಳಲ್ಲ. ಈ ಧರ್ಮ ಜಾಗೃತಿ ಎಂಬುದು ಇಂದು ಎಲ್ಲ ಧರ್ಮಗಳಲ್ಲಿಯೂ ಯಾವ ಮಟ್ಟದಲ್ಲಿ ಆಗಿಬಿಟ್ಟಿದೆ ಎಂದರೆ ಈ ಜಾಗೃತಿಯೇ ಇಂದು ದೇಶಕ್ಕೆ ಅಪಾಯವಾಗುವ ಹಂತ ತಲುಪಿಬಿಟ್ಟಿದೆ! ಏಕೆಂದರೆ ಧರ್ಮಾಧಾರಿತ ರಾಷ್ಟ್ರಗಳಲ್ಲಿ ಧರ್ಮರಕ್ಷಣೆಯೇ ದೇಶರಕ್ಷಣೆಯೂ ಆಗಿರುತ್ತದೆ. ಅಂತಹ ರಾಷ್ಟ್ರಗಳಲ್ಲಿ ಧರ್ಮಜಾಗೃತಿ ಅಥವಾ ಧರ್ಮರಕ್ಷಣೆ ಎಂದರೆ ದೇಶರಕ್ಷಣೆಯೇ ಆಗಿಬಿಡುತ್ತದೆ. ಆದರೆ ಭಾರತದಂತಹ ಹತ್ತು ಹಲವು ಧರ್ಮಗಳನ್ನು ಹೊಂದಿರುವ `ಧರ್ಮನಿರಪೇಕ್ಷ’ (ಸೆಕ್ಯುಲರ್) ಆಡಳಿತ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಧರ್ಮಜಾಗೃತಿ ಅಥವಾ ಧರ್ಮರಕ್ಷಣೆ ಎಂದರೆ ದೇಶರಕ್ಷಣೆಯಲ್ಲ.`ಧರ್ಮ’ ಮತ್ತು `ದೇಶ’ ಇಲ್ಲಿ ಸ್ಪಷ್ಟವಾಗಿ ಬೇರೆ ಬೇರೆಯೇ ಆದ ಸಂಗತಿಗಳು. ಇಂತಹ ರಾಷ್ಟ್ರಗಳಲ್ಲಿ ಯಾವುದೇ ಧರ್ಮದ ಜಾಗೃತಿ (ಅಥವಾ ಅತಿಜಾಗೃತಿ) ಉಳಿದವರಲ್ಲಿ ಭಯ ಆತಂಕಗಳನ್ನು ಹುಟ್ಟಿಸುವ ಮೂಲಕ ದೇಶದ ಅಭದ್ರತೆಯನ್ನು ಉಂಟುಮಾಡುವ ಅಂಶವಾಗುತ್ತದೆ. ಹಿಂದೂ, ಇಸ್ಲಾಂ, ಕ್ರೈಸ್ತ, ಭೌದ್ಧ, ಜೈನ ಹೀಗೆ ಯಾವುದೇ ಧರ್ಮಗಳಿಗೂ ಅನ್ವಯಿಸುವ ಮಾತಿದು.  ಇಡೀ ದೇಶವ್ಯಾಪಿ ಪ್ರಭಾವ ಇರುವಂಥವರು ಎಂದು ಹೇಳಲಾಗುವ ಪೇಜಾವರರಂತಹ ವ್ಯಕ್ತಿಗಳು ತೀರಾ ಸಂಕುಚಿತವಾದ `ಅಗ್ರಹಾರಾಲೋಚನೆ’ಯಿಂದ ಹೊರಬಂದು ವಿಶಾಲವಾಗಿ ಆಲೋಚನೆ ಮಾಡಬೇಕಾಗುತ್ತದೆ. ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ಅನ್ಯೋನ್ಯತೆಯಿಂದ ಬಾಳಬೇಕು ಎಂದು ಅವರು ಹೇಳಬೇಕಾಗುತ್ತದೆ. ಹಾಗಾದಾಗ ಮಾತ್ರ ಅವರ ವ್ಯಕ್ತಿತ್ವಕ್ಕೆ ಅಖಿಲಭಾರತೀಯ ವ್ಯಕ್ತಿತ್ವದ ಘನತೆ ಪ್ರಾಪ್ತವಾಗುತ್ತದೆ.

ಪೇಜಾವರರು ಇಂದು ಮಾಡಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಲಿಂಗಾಯತರು ಮತ್ತು ವೀರಶೈವರು ಒಂದೋ ಬೇರೆ ಬೇರೆಯೋ ಎಂಬದರ ಬಗ್ಗೆ ಸಲಹೆಕೊಡುವುದಲ್ಲ. ಅದನ್ನು ಅವರವರು ನೋಡಿಕೊಳ್ಳುತ್ತಾರೆ. ಇವರ ಅವಶ್ಯಕತೆ ಅಲ್ಲಿ ಇಲ್ಲವೂ ಇಲ್ಲ. ಇನ್ನು ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಹೇಳುತ್ತಾ ಕೂರುವುದೂ ಅವರ ಕೆಲಸ ಅಲ್ಲ. ಏಕೆಂದರೆ ವೈದಿಕ ಧರ್ಮದಲ್ಲಿ ಅವರಿಗೆ ಅಪಾರ ತಿಳಿವಳಿಕೆ ಇರುವುದು ನಿಜವಾದರೂ ಲಿಂಗಾಯತ ಧರ್ಮದ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ ಎಂಬುದನ್ನು ಅವರ ಇದುವರೆಗಿನ ಅವರ ಹೇಳಿಕೆಗಳು ತೋರಿಸಿಕೊಟ್ಟಿವೆ. ಹಾಗಾಗಿ ಇವೆರಡೂ ಕೆಲಸವನ್ನು ಬಿಟ್ಟು ಅವರು ಅತ್ಯಂತ ಅವಶ್ಯವಾಗಿ ಮಾಡಬೇಕಾಗಿರುವ ಕೆಲಸವೊಂದಿದೆ, ಅದರ ಕಡೆ ಗಮನ ಕೊಡಬೇಕು. ಅದೆಂದರೆ `ಹಿಂದೂಧರ್ಮ’ ಎಂಬುದರ ಬಗ್ಗೆ ಇರುವ ಗೊಂದಲ ಮತ್ತು ಗೋಜಲುಗಳನ್ನು ಬಿಡಿಸುವ ಕೆಲಸ.

`ಲಿಂಗಾಯತ-ವೀರಶೈವಗಳು ಹಿಂದೂವಿನಿಂದ ಹೇಗೆ ಭಿನ್ನ’ ಎಂದು ತಮ್ಮ ಪ್ರಶ್ನೆಗೆ ಉತ್ತರವನ್ನು ಯಾರೂ ನೀಡಿಲ್ಲ ಎಂಬುದಕ್ಕೆ ತಾಯಿರೂಪದ ಪ್ರಶ್ನೆಯೊಂದಿದೆ. ಅದೆಂದರೆ `ಹಿಂದೂಧರ್ಮ’ ಅಂದರೇನು; ಅದು ಪ್ರತಿಪಾದಿಸುವ ಮುಖ್ಯವಾದ ತತ್ವಗಳೇನು? ಎಂಬ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವನ್ನು ಕೊಡುವ ಕೆಲಸವನ್ನು ಅವರು ಮಾಡಬೇಕು. ಮೊದಲು ಪ್ರಪಂಚದ ಇತರ ಧರ್ಮಗಳಿಗಿಂತ `ಹಿಂದೂಧರ್ಮ’ವನ್ನು ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುವುದು ಮತ್ತು ಒಬ್ಬ ನಿಷ್ಠಾವಂತ ಹಿಂದೂ ಆದವನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕಾದ ಒಂದೈದಾರು ತತ್ವಗಳನ್ನಾದರೂ ಪಟ್ಟಿಮಾಡಿ ಹೇಳುವುದು ಇವು ಪೇಜಾವರರು ಮಾಡಬೇಕಾಗಿರುವ ಬಹುಳ ಮುಖ್ಯವಾದ ಕೆಲಸಗಳು. ಅದರ ಜೊತೆಗೆ ಲಿಂಗಾಯತ – ವೀರಶೈವ, ಧ್ವೈತ, ಅಧ್ವೈತ ಹೀಗೆ ಇವೆಲ್ಲವೂ ಹಿಂದೂ ಧರ್ಮದ ಅಂಗಗಳು ಅನ್ನುವ ಅವರು ಇವೆಲ್ಲವನ್ನೂ ಒಂದು ಎಂದು ಪರಿಗಣಿಸಲು ಅವೆಲ್ಲವುಗಳಲ್ಲಿರುವ ಸಾಮಾನ್ಯವಾದ ಅಂಶಗಳು ಯಾವವು, ಅಂದರೆ ಅವೆಲ್ಲವನ್ನೂ ಬಂಧಿಸುವ ಸೂತ್ರ ಯಾವುದು ಎಂದುದನ್ನು ಸ್ಪಷ್ಟಪಡಿಸುವ ಕೆಲಸವನ್ನೂ ಮಾಡಬೇಕು.

ಏಕೆಂದರೆ ಇವತ್ತು ಭೌದ್ಧ, ಜೈನ, ಇಸ್ಲಾಂ, ಹೀಗೆ ಯಾವುದೇ ಧರ್ಮಗಳ ಬಗ್ಗೆ ಇಂತಹ ಪ್ರಶ್ನೆ ಕೇಳವು ಅವಶ್ಯಕತೆಯಿಲ್ಲ. ಒಬ್ಬ ಮುಸ್ಲಿಮನನ್ನು ನೀನೇಕ ಮುಸ್ಮಿಮ್ ಎಂದರೆ ಅವನು ತಕ್ಷಣ ತಡವರಿಸದಂತೆ, “ನಾನು ನಮಾಜು ಮಾಡುತ್ತೇನೆ, ಕುರಾನ್ ತಾತ್ವಿಕತೆ ನನ್ನ ಧರ್ಮಗ್ರಂಥ, ಪ್ರವಾದಿ ಮಹಮದ್ ನನ್ನ ಧರ್ಮಗುರು, ನನ್ನ ಧರ್ಮದ ಪ್ರಕಾರ ನಾವು ಇಂತಿಂಥ ಕೆಲಸಗಳನ್ನು ಮಾಡುವುದು ಸರಿ, ಇಂತಿಂಥ ಕೆಲಸಗಳನ್ನು ಮಾಡುವುದು ತಪ್ಪು” ಹೀಗೆ ಏನಾದರೂ ನಾಲ್ಕು ಮಾತು ಹೇಳಬಲ್ಲ. ಬೇರೆ ಧರ್ಮೀಯರಿಗೂ ಇದು ಸಾಧ್ಯ. ಆದರೆ ಒಬ್ಬ ಹಿಂದೂ ಧರ್ಮೀಯನನ್ನು ನೀನೇಕೆ ಹಿಂದೂ? ನಿನ್ನ ಧರ್ಮದ ಪ್ರಮುಖ ತತ್ವಗಳೇನು ಎಂದು ಯಾರಾದರೂ ಕೇಳಿದರೆ ಅವನು ಏನು ಹೇಳಬಲ್ಲ? ತಡವರಿಸುವುದು ಅವನಿಗೆ ಅನಿವಾರ್ಯ. ಇಷ್ಟೊಂದು ಯತಿಗಳು ಧರ್ಮಗುರುಗಳು ಬಂದುಹೋಗಿದ್ದರೂ ಅವನು ತಡವರಿಸದಂತೆ ಉತ್ತರಿಸುವ ಒಂದು ತಾತ್ವಿಕತೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ತನ್ನ ಧರ್ಮದ ತತ್ವಗಳೇನು  ತನ್ನ ಧರ್ಮದ ಪ್ರಕಾರ ಏನು ಮಾಡಿದರೆ ತಪ್ಪು, ಏನು ಮಾಡಿದರೆ ಸರಿ ಎಂಬ ವಿಧಿನಿಷೇಧಗಳ ಬಗ್ಗೆ ಅವನಿಗೆ ಸ್ಪಷ್ಟತೆ ಮೂಡಿಸಲು ಸಾಧ್ಯವಾಗಿಲ್ಲ. 

ಸಾಮಾನ್ಯ ಜನರು ಕೇವಲ ಮರಣದಾಚೆಗಿನ ಸ್ವರ್ಗ, ನರಕ ಇತ್ಯಾದಿಗಳ ಬಗ್ಗೆ ತಿಳಿಯಲು ಮಾತ್ರ ಧರ್ಮವನ್ನು ಆಶ್ರಯಿಸುವುದಿಲ್ಲ; ಬದಲಾಗಿ ತಮ್ಮ ದೈನಂದಿನ ಜೀವನದ ವ್ಯವಹಾರಗಳ ನಿರ್ವಹಣೆಯಲ್ಲಿ ಮಾರ್ಗದರ್ಶನಕ್ಕಾಗಿಯೂ ಅವರು ಧರ್ಮದ ಕಡೆ ನೋಡುತ್ತಾರೆ. ಹಾಗೆ ನೋಡಿದರೇ ಈ ಕಾರಣಕ್ಕೇ ಅವರು ಧರ್ಮಗಳನ್ನು ಹೆಚ್ಚಾಗಿ ಆಶ್ರಯಿಸುವುದು. ಹೀಗೆ ತನ್ನನ್ನು ಆಶ್ರಯಿಸಿಬಂದ ಭಕ್ತರಿಗೆ ಅವರ ಸಮಸ್ಯೆಯನ್ನು ಬಗೆಹರಿಸಲು ಆಗದಿದ್ದರೂ ಕೊನೇಪಕ್ಷ ಅವರಿಗೆ ಸಮಾಧಾನ ಆಗುವಂತಹ ಮಾರ್ಗದರ್ಶನವನ್ನಾದರೂ ಯಾವುದೇ ಧರ್ಮವಿರಲಿ ಮಾಡಬೇಕಾಗುತ್ತದೆ. ಮನುಷ್ಯಗೆ ಸಾಮಾನ್ಯವಾಗಿ ಯಾರೊಂದಿಗೂ ಹೇಳಿಕೊಳ್ಳಲಾಗದ ಸಂದರ್ಭಗಳಲ್ಲಿ ಧರ್ಮಸೂಕ್ಷ್ಮಗಳು ಹೆಚ್ಚಾಗಿ ಕಾಡುತ್ತವೆ. ಉದಾಹರಣೆಗೆ  ಒಬ್ಬ ಅಧಿಕಾರಿಗೆ ಲಂಚತೆಗೆದುಕೊಳ್ಳುವಾಗ ತಾನು ಮಾಡುವುದು ಸರಿಯೋ ತಪ್ಪೋ ಎಂಬ ಧರ್ಮಸೂಕ್ಷ್ಮ ಕಾಡಬಹುದು. ಒಬ್ಬ ವ್ಯಕ್ತಿ ಪ್ರಾಣಿಯೊಂದನ್ನು ಕಡಿಯುವ ಸಂದರ್ಭದಲ್ಲಿ ತಾನು ಮಾಡುವುದು ತಪ್ಪೋ ಸರಿಯೋ ಎಂಬ ಈ ಧರ್ಮಸೂಕ್ಷ್ಮ ಎದುರಾಗಬಹುದು. ಒಬ್ಬ ಗೃಹಿಣಿಗೆ ವಿವಾಹದಿಂದ ಹೊರಗಿನ ಗಂಡಸಿನ ಸಂಬಂಧ ಇಟ್ಟುಕೊಳ್ಳುವ ಸಂದರ್ಭ ನಿರ್ಮಾಣವಾದಾಗ ತಾನು ಮಾಡುವುದು ತಪ್ಪೋ ಸರಿಯೋ ಎಂಬ ಧರ್ಮಸೂಕ್ಷ್ಮ ಕಾಡಬಹುದು. ಒಬ್ಬ ಯುವಕನಿಗೆ ಒಬ್ಬ ಹುಡುಗಿಯನ್ನು ಹಂಟಸಂಭೋಗಕ್ಕೆ ಎಳೆದೊಯ್ಯುವಾಗ ತಾನು ಮಾಡುತ್ತಿರುವುದು ತಪ್ಪೋ ಸರಿಯೋ ಎಂಬ ಧರ್ಮಸೂಕ್ಷ್ಮ ಕಾಡಬಹುದು.

ಇಂತಹ ಸಂದರ್ಭಗಳಲ್ಲಿ ಅವರಿಗೆ ಮಾರ್ಗದರ್ಶನವನ್ನು ನೀಡದಿರುವ ಧರ್ಮ ಅವರ ಪಾಲಿಗೆ ಇದ್ದರೂ ಒಂದೇ ಇರದಿದ್ದರೂ ಒಂದೇ. ಮೇಲಿನ ಪ್ರಕರಣಗಳಲ್ಲಿ ಲಂಚತೆಗೆದುಕೊಳ್ಳುವ ಅಧಿಕಾರಿ ಲಿಂಗಾಯತ ಧರ್ಮಾವಲಂಬಿ ಎಂದಿಟ್ಟುಕೊಂಡರೆ ಅವನಿಗೆ ಅವನ ಧರ್ಮದ ಕಾಯಕತತ್ವ ನೆನಪಾಗಿ `ದುಡಿಮೆ ಪ್ರತಿಫಲವಲ್ಲದೇ ಬೇರೆ ರೀತಿಯ ಹಣವನ್ನು ಸ್ವೀಕರಿಸುವುದು ಕಳ್ಳತನಕ್ಕೆ ಸಮಾನ’ ಎಂಬ ಎಚ್ಚರಿಗೆ ಉಂಟಾಗಿ ಅವನು ಮಾಡಹೊರಟಿರುವ ಕೆಟ್ಟಕೆಲಸದಿಂದ ಹಿಂದೆ ಸರಿಯಬಹುದು. ಪ್ರಾಣಿಯನ್ನು ಕೊಲ್ಲುವ ಮೇಲಿನ ಇನ್ನೊಂದು ಪ್ರಕರಣದಲ್ಲಿ ಅವನು ಜೈನಧರ್ಮಾವಲಂಬಿಯಾಗಿದ್ದರೆ ಅವನಿಗೆ ಅವನ ಧರ್ಮದ ಅಹಿಂಸಾತತ್ವ ನೆನಪಾಗಿ ಅವನಿಗೆ ಕೊಲ್ಲಬಾರದು ಎಂಬ ಮಾರ್ಗದರ್ಶನ ದೊರೆಯಬಹುದು. ಹಾಗೇ ಉಳಿದೆರಡು ಪ್ರಕರಣಗಳಿಗೂ ಬೇರೆ ಬೇರೆ ಧರ್ಮಾವಲಂಬಿಗಳಿಗೆ ಅವರವರ ಧರ್ಮಗಳು ಏನೋ ಒಂದು ಮಾರ್ಗದರ್ಶನ ಮಾಡುತ್ತವೆ. ಇಂತಹ ಪ್ರಕರಣಗಳಲ್ಲಿ ಅವನು ತನ್ನನ್ನೊಬ್ಬ `ಹಿಂದೂಧರ್ಮಾವಲಂಬಿ’ ಅಂದುಕೊಂಡರೆ ಅವನಿಗೆ ಎಲ್ಲಿಂದ ಮತ್ತು ಯಾರಿಂದ ಯಾವರೀತಿಯಿಂದ ಮಾರ್ಗದರ್ಶನ ಸಿಗುತ್ತದೆ? ಖಂಡಿತಾ ಸಿಗಲಾರದು. ಏಕೆಂದರೆ ಮೇಲೆ ಉದಾಹರಿಸಿದ ಕೆಲಸಗಳನ್ನು ಮಾಡುವುದು ತಪ್ಪು ಎಂದು ಕೆಲವು ಧರ್ಮಗ್ರಂಥಗಳ ಆಧಾರಗಳಿಂದ ನಿರೂಪಿಸಬಹುದಾದರೆ ಮತ್ತೆ ಕೆಲವು ಧರ್ಮಗ್ರಂಥಗಳಿಂದಲೇ ಅವನ್ನು ಮಾಡುವುದು ತಪ್ಪಲ್ಲ ಎಂಬುದನ್ನೂ ನಿರೂಪಿಸಬಹುದು! ಅರವತ್ನಾಲ್ಕು ವಿದ್ಯೆಗಳಲ್ಲಿ ಚೋರವಿದ್ಯೆ (ಕಳ್ಳತನ ಮಾಡುವುದನ್ನು ಕಲಿಸುವ ವಿದ್ಯೆ) ಕೂಡ ಸೇರಿದೆ!

ನನಗೆ ಗೊತ್ತಿರುವಂತೆ ಹಿಂದೂ ಧರ್ಮದ ಒಗಟುಗಳು ಎಂದು ಸುಮಾರು ಹದಿನಾಲ್ಕು ಹದಿನೈದು ಒಗಟುಗಳನ್ನು ಅಂಬೇಡ್ಕರ್ ಪಟ್ಟಿಮಾಡಿಕೊಟ್ಟು ಅವುಗಳಿಗೆ ಉತ್ತರ ಹೇಳಲು ಪೇಜಾವರರಂತಹ ಯತಿಗಳಿಗೆ ಕೇಳಿಕೊಂಡು ಬಹಳಷ್ಟು ವರ್ಷಗಳೇ ಆದವು. ಅವುಗಳಲ್ಲಿ ಒಂದು ಪ್ರಶ್ನೆಗೂ `ಹಿಂದುತ್ವ’ ಪ್ರತಿಪಾದಕರಲ್ಲಿ ಯಾರಿಗೂ ಇನ್ನೂ ಉತ್ತರವನ್ನು ಕೊಡಲು ಸಾಧ್ಯವಾಗಿಲ್ಲ! ಅದು ಪೇಜಾವರರಿಗೂ ಗೊತ್ತಿರಬಹುದು. ಧರ್ಮ, ಸಂಪ್ರದಾಯ, ಮತ, ಮೂಲಧರ್ಮ, ಪ್ರಭೇದಗಳು ಈ ಸಂಗತಿಗಳಲ್ಲಿ ಒಂದು ಸ್ಪಷ್ಟತೆಯನ್ನು ನಾವು ಹೊಂದದೇ ಇಂತಹ ವಿಚಾರಗಳನ್ನು ಮಾತನಾಡುತ್ತಾ ಹೋಗುವುದು ಜನರ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇವುಗಳ ಗೊಂದಲವನ್ನು ಇಟ್ಟುಕೊಂಡೇ `ಹಿಂದೂಧರ್ಮ’ `ಹಿಂದೂಧರ್ಮ’ ಎಂದು ಕೂಗಾಡುವುದಾಗಲೀ ಆ ಧರ್ಮದ ಜಾಗೃತಿ ಮಾಡಲು ಜನರನ್ನು ಒಟ್ಟುಗೂಡಿಸಲು ಹೋಗುವುದಾಗಲೀ ಈಗಾಗಲೇ ಹಲವರು ಅಭಿಪ್ರಾಯಪಟ್ಟಂತೆ ಕತ್ತಲಲ್ಲಿ ಕೈಯಾಡಿಸಿದಂತೆ ಆಗುತ್ತದೆ. ಪೇಜಾವರರಂತಹ ಹಿರಿಯರು ಕತ್ತಲಲ್ಲಿ ಕೈಯಾಡಿಸುವುದಕ್ಕಿಂತ ಬೆಳಕನ್ನು ಬೀರುವ ಕಡೆ ಗಮನಹರಿಸುವುದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಏಕೆಂದರೆ ಕತ್ತಲೆಯಲ್ಲಿ ಕೈಯಾಡಿಸಲು ಹೋದಾಗ ಕೈ ಯಾವುದಕ್ಕೆ ತಾಗುತ್ತದೆ ಯಾರಿಗೆ ತಾಗುತ್ತದೆ, ಅದರಿಂದ ಏನೆಲ್ಲ ಅನಾಹುತಗಳು ಸಂಭವಿಸುತ್ತವೆ  ಎಂಬುದನ್ನು ಹೇಳುವುದು ಕಷ್ಟ.

ಕವಿಮಿತ್ರ ರಂಜಾನ್ ದರ್ಗಾ ಅವರು ಕೆಳಗಿನ ಪದ್ಯಸಾಲುಗಳ ಮೂಲಕ ಮಾಡುತ್ತೇನೆ ಎಂದು ಹೇಳುವುದನ್ನೇ ಮಾಡೋಣ:
ಹಿಂದೂ ಮುಸ್ಲಿಂ ಸಿಖ್ಖರ ಮಧ್ಯೆ
ಮನುಷ್ಯರನ್ನು ಹುಡುಕಿಕೊಳ್ಳುತ್ತೇನೆ
*****
·         ಡಾ. ರಾಜೇಂದ್ರ ಬುರಡಿಕಟ್ಟಿ
21-10-2017


Friday, October 20, 2017

ಅರ್ತ ಆಗ್ದಿದ್ರು ಸಿಕ್ದಂಗ ಅನ್ನಾದ್ ಚಂದ್ರನ್ ಮಕ್ಕ್ ಉಗದಂಗೆ

ಅರ್ತ ಆಗ್ದಿದ್ರು ಸಿಕ್ದಂಗ ಅನ್ನಾದ್ ಚಂದ್ರನ್ ಮಕ್ಕ್ ಉಗದಂಗೆ

ನಾನು ನಾಲ್ಕು ವರ್ಷಗಳ ಹಿಂದೆ ದೆಹಲಿಯಿಂದ ಆಗ್ರಾಕ್ಕೆ ಬಂದು ಅಲ್ಲಿನ ವಿಶ್ವವಿಖ್ಯಾತ ತಾಜ್ ಮಹಲ್ ನೋಡಲು ಹೋಗಿದ್ದಾಗ ಅಲ್ಲಿ ಸೇರಿದ್ದ ಪ್ರವಾಸಿಗರನ್ನು ಕುತೂಹಲಕ್ಕೆ ಮಾತನಾಡಿಸಿದೆ. ನಾನು ಮಾತನಾಡಿಸಿದವರಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಗಂಡಸರು, ಹೆಂಗಸರೂ ಶಾಲಾ ಮಕ್ಕಳೂ ಸೇರಿದ್ದರು. ಅವರಲ್ಲಿ ಹಾಗೆ ನೋಡಿದರೆ ಮುಸ್ಲಿಮರು ಹೆಚ್ಚಿದ್ದಾರೆ ಅನ್ನಿಸಲಿಲ್ಲ. ಅವರೆಲ್ಲ ಆ ಕಟ್ಟಡದ ಸೌಂದರ್ಯಕ್ಕೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರಲ್ಲಿ ಯಾರೂ ನನಗೆ ಅದು ಮುಸ್ಲಿಮರ ಕಟ್ಟಡ ಎಂಬ ವಕ್ರದೃಷ್ಟಿಯನ್ನು ಇಟ್ಟುಕೊಂಡಂತೆ ಕಾಣಲಿಲ್ಲ. ಅವರೆಲ್ಲ ಅದರ ಸೌಂದರ್ಯವನ್ನು ಮನಸ್ಸು ತುಂಬಿ ಆಸ್ವಾದಿಸುತ್ತಿದ್ದರು. ಆ ಕಟ್ಟಡ ನಮ್ಮ ದೇಶದ ಹೆಮ್ಮೆ ಎಂಬಂತೆಯೇ ಅವರೆಲ್ಲ ಮಾತನಾಡಿದರು.


ನಾನು ಇಡೀ ಕಟ್ಟಡವನ್ನು ಹೊರಗಿನಿಂದ ಸುತ್ತುವರೆದು ಆ ದೊಡ್ಡ ಕಂಬಗಳನ್ನು ಮುಟ್ಟಿನೋಡಿ ಆನಂದಿಸಿದೆ. ಒಳಗೆ ಹೋಗಿ ಎಲ್ಲಕಡೆಗೂ ಹೋಗಿ ತಿರುಗಾಡಿ ಬಂದೆ. ಯಾರೂ ನನ್ನನ್ನು ಎಲ್ಲಿಯವನು ಹಿಂದೂವೋ ಮುಸ್ಲಿಮನೋ ಎಂದು ಕೇಳಲಿಲ್ಲ. ನನ್ನನ್ನು ತಡೆಯಲಿಲ್ಲ. ಆ ಕ್ಷಣ ನನಗೆ ಅತ್ಯಂತ ಸಂತೋಷವಾಯಿತು. ಏಕೆಂದರೆ ನಮ್ಮ ರಾಜ್ಯದ ಪ್ರಸಿದ್ಧ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮೊದಲಾದ ದೇವಾಲಯಗಳಿಗೆ ನಾನು ಅನೇಕ ಬಾರಿ ಹೋಗಿರುವೆನಾದರೂ ಒಂದು ಬಾರಿಯೂ ದೇವರ ಮುಖ ನೋಡಿಲ್ಲ. `ಅಂಗಿಬಿಚ್ಚಲು’ ಅಲ್ಲಿನವರು ಹೇಳುವುದು ಇದಕ್ಕೆ ಕಾರಣ. ಇಲ್ಲಿ ಅಂಗಿ ಪ್ಯಾಂಟು ಏನೂ ಬಿಚ್ಚದೇ ನೋಡಲು ಬಿಟ್ಟದ್ದು ನನಗೆ ಸಂತೋಷ ತರದೇ ಇರುತ್ತದೆಯೇ?

ಉತ್ತರ ಪ್ರದೇಶದ ಆಡಳಿತ ವ್ಯವಸ್ಥೆ ಮಾಡುತ್ತಿರುವ ಅವಾಂತರ ನೋಡಿದರೆ ಇನ್ನು ಮುಂದೆ ಕಲೆ, ವಾಸ್ತುಶಿಲ್ಪಗಳ ಸೌಂದರ್ಯವನ್ನು ಆಸ್ವಾದಿಸುವುದಕ್ಕೂ ಮತಧರ್ಮಗಳ ಕಳಕು ಮೆತ್ತಿಕೊಳ್ಳುತ್ತಿರುವ ಲಕ್ಷಣ ಕಂಡುಬರುತ್ತಿದೆ. ದೇಶದ ಕಲೆ ಸಾಹಿತ್ಯ ವಾಸ್ತುಶಿಲ್ಪಗಳ ಕನಿಷ್ಠ ತಿಳಿವಳಿಕೆಯೂ ಇಲ್ಲದವರು, ಅದನ್ನು ಅರ್ಥ ಮಾಡಿಕೊಂಡು ಮಾತನಾಡಲಾರದವರು ಇದಕ್ಕಿಂತ ಹೆಚ್ಚೇನೂ ಮಾಡಲಾರರು. ಆದರೆ ಯಾರು ಏನು ಅಂದರೂ ಏನು ಮಾಡಿದರೂ ಅದು ಅವರ ಅಜ್ಞಾನ ಮತ್ತು ಅವಜ್ಞೆಗಳನ್ನು ಎತ್ತಿ ತೋರಿಸಬಲ್ಲುದೇ ಹೊರತು ಮಾಡಿದರೂ ತಾಜ್ ಸೌಂದರ್ಯವನ್ನೂ ಅದರ ಖ್ಯಾತಿಯನ್ನೂ ಕಡಿಮೆಮಾಡಲಾಗುವುದಿಲ್ಲ. ತಿಳಿದು ಮಾತನಾಡುವುದು ತಿಳಿಯದೇ ಮಾತನಾಡುವುದು ಇವುಗಳ ವ್ಯತ್ಯಾಸ ಹೇಗಿರುತ್ತದೆ ಎನ್ನುವುದಕ್ಕೆ ಕನ್ನಡದ ಕವಿ ಜಿ.ಪಿ. ರಾಜರತ್ನಂ ಅವರು ಹೆಂಡ್ಗುಡುಕ್ ರತ್ನನ ಬಾಯಿಯಿಂದ ಹೇಳಿಸುವ ಮಾತು ಕೇಳಿ:
 
ಅರ್ತ ಮಾಡ್ಕಂಡ್ ಇಂಗಲ್ ಇಂಗೆ
ಅನ್ನೋರ್ ಮಾತು ಗಂಗೆ!
ಅರ್ತ ಆಗ್ದಿದ್ರು ಸಿಕ್ದಂಗ ಅನ್ನಾದ್
ಚಂದ್ರನ್ ಮಕ್ಕ್ ಉಗದಂಗೆ

ಚಂದ್ರನ ಮುಖಕ್ಕೆ ಉಗಿಯುವುದು ಅಂದರೆ ನಮ್ಮ ಉಗುಳನ್ನು ನಮ್ಮ ಮುಖಕ್ಕೆ ಹಾಕಿಕೊಳ್ಳುವುದು ಎಂದು ಬೇರೆ ವಿಸ್ತರಿಸಿ ಹೇಳಬೇಕಾಗಿಲ್ಲ. ನಾನು ಯಮುನಾ ನದಿಯ ದಂಡೆಯ ಮೇಲೆಯೇ ಇರುವ ಆಗ್ರಾದ ಪ್ರಸಿದ್ಧ ಮೊಗಲ್ ಅರಮನೆಯ ಮೇಲ್ ಮಹಡಿಯಲ್ಲಿ ನಿಂತು ಅಲ್ಲಿನ ಕಿಡಕಿಯಿಂದ ದೂರದಲ್ಲಿ ಕಾಣುವ ತಾಜ್ ಮಹಲ್ ನ್ನು ನೋಡಿ ತೆಗೆದ ಫೋಟೋ ಮತ್ತು ತಾಜ್ ಮುಂದುಗಡೆ ನಿಂತು ತೆಗೆಸಿಕೊಂಡ ಎರಡು ಫೋಟೋ ತಮ್ಮ ಸಾಂದರ್ಭಿಕ ನೋಟಕ್ಕಾಗಿ.

 - ರಾಬು

 20-10-2017

Saturday, October 14, 2017

ಘಂಟಿ ಮಾತು: `ಪರಂಪರೆಯ ಪಿಸುಮಾತು’

ಘಂಟಿ ಮಾತು: `ಪರಂಪರೆಯ ಪಿಸುಮಾತು’


ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿಯವರಿಗೆ ಹೈಕೋರ್ಟ್, `ವೇದಿಕೆಗಳಲ್ಲಿ ಎಚ್ಚರಿಕೆಯಿಂದ ಮಾತನಾಡಿ’ ಎಂದು ಎಚ್ಚರಿಸಿದ್ದು ಇಂದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಅವರು ಕುವೆಂಪು ವಿವಿ ಯ ಕುಲಸಚಿವರಾಗಿದ್ದಾಗ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, `ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂದು ಘಂಟಿ ಆಡಿದ್ದರು ಎನ್ನಲಾದ ಮಾತಿಗೆ ಪ್ರತಿಹೇಳಿಕೆಯಾಗಿ ಶಂಕರಗೌಡ ಎಂಬುವವರು ಖಾಸಗೀ ಟಿವಿ ಚಾನಲ್ ಒಂದರಲ್ಲಿ ಪ್ರತಿಹೇಳಿಕೆ ನೀಡುವಾಗ `ನನ್ನ ವಿರುದ್ಧ ಶಂಕರಗೌಡ ಅವರು ಅಸಹ್ಯಕರ ಮತ್ತು ಅಸಭ್ಯ ಪದಗಳನ್ನು ಬಳಸಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಭದ್ರಾವತಿ ಪೋಲೀಸ್ ಠಾಣೆಗೆ ಮಲ್ಲಿಕಾ ಘಂಟಿಯವರು ದೂರು ಸಲ್ಲಿಸಿದ್ದರಂತೆ. ದೂರಿನ ವಿಚಾರಣೆಯ ಭಾಗವಾಗಿ ತಮ್ಮ ಮೇಲೆ ಪೋಲೀಸರು ಭದ್ರಾವತಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಶಂಕರಗೌಡ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡುತ್ತಾ ಈ  ಎಚ್ಚರಿಕೆಯನ್ನು ನೀಡಿರುವುದಾಗಿ ಈ ವರದಿ ಹೇಳುತ್ತದೆ.

ನ್ಯಾಯಮೂರ್ತಿಗಳುಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು ಎಂದು ವರದಿಯಾಗಿರುವ ಅವರ ಎರಡು ಮಾತು ಮಾಧ್ಯಮಗಳಲ್ಲಿ ಹೀಗೆ ವರದಿಯಾಗಿವೆ, ಒಂದು: “ಮಲ್ಲಿಕಾ ಘಂಟಿಯವರು ಬಳಸಿರುವ ಪದಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹೀಗೆಂದರೆ ಏನರ್ಥ. ರಾಮಾಯಣ ಮತ್ತು ಮಹಾಭಾರತ ಓದಿದವರೆಲ್ಲಾ ದೌರ್ಜನ್ಯ ಎಸಗುತ್ತಾರೆಯೇ. ಅವರೇನು ದೋಷಿಗಳೇ. ಇಂತಹ ಮಾತುಗಳನ್ನು ಆಡುವುದು ತರವಲ್ಲ. ಪ್ರತಿಯೊಬ್ಬರೂ ಬೇರೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು.” ಎರಡು: “ಮಲ್ಲಿಕಾ ಘಂಟಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಕಡಿಮೆ ಮಾತನಾಡಬೇಕು. ಒಂದೊಮ್ಮೆ ಮಾತನಾಡಿದರೂ ಜವಾಬ್ದಾರಿಯಿಂದ ನುಡಿಯಬೇಕಾಗುತ್ತದೆ. ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅದರಲ್ಲೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಮಾಜದ ಸಾಮರಸ್ಯಕ್ಕೆ ಪೆಟ್ಟು ಬೀಳುವಂತಹ ಹೇಳಿಕೆ ನೀಡಬಾರದು.”

ನ್ಯಾಯಾಲಯದ ವಾದ-ವಿವಾದ, ಅದರ ಪ್ರತಿಫಲವಾಗಿ ಬರುವ ತೀರ್ಪು ಇಂತಹ ಕಾನೂನಾತ್ಮಕ ಅಂಶಗಳ ಹೊರತು ಈ ಪ್ರಕರಣ ಎತ್ತುತ್ತಿರುವ ಕೆಲವು ಸೈದ್ಧಾಂತಿಕ ಪ್ರಶ್ನೆಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ನ್ಯಾಯಾಲಯದ ಮೇಲೆ ನಾವು ಹೊಂದಿರಲೇಬೇಕಾಗಿರುವ ಗೌರವವನ್ನು ಇಟ್ಟುಕೊಂಡೇ ಈ ಸಮಸ್ಯೆಗಳನ್ನು ಚರ್ಚಿಸುವುದು ನಾಡಿನ ಸಾಂಸ್ಕೃತಿಕ ವೈಚಾರಿಕತೆಯ ಬೆಳವಣಿಗೆಯ ದೃಷ್ಟಿಯಿಂದ ಬಹುಮುಖ್ಯ ಸಂಗತಿಯಾದುದರಿಂದ ಅದನ್ನು ಇಲ್ಲಿ ಆದ್ಯತೆ ನೀಡಿ ಕೈಗೆತ್ತಿಕೊಳ್ಳಲಾಗುತ್ತಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳುವ ಮೊದಲ ಮತ್ತು ಬಹುಮುಖ್ಯ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತಗಳಂತಹ ಅದರಲ್ಲಿಯೂ ಬಹಳಷ್ಟು ಭಿನ್ನ ವ್ಯಾಖ್ಯಾನಗಳನ್ನು ಹೊಂದಿರುವ ಸಾಂಸ್ಕೃತಿಕ ಪಠ್ಯಗಳ ಮೇಲೆ ಮಾತನಾಡುವಾಗ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗದಂತೆ ಮಾತನಾಡುವುದು ವಾಸ್ತವದಲ್ಲಿ ಸಾಧ್ಯವಿದೆಯೇ ಎಂಬುದು. ವೈಯಕ್ತಿಕ ಚಾರಿತ್ರ್ಯವಧೆ, ಮಾನಹಾನಿ, ವ್ಯಕ್ತಿತ್ವ ಘನತೆ ಇಂತಹ ವಿಷಯಗಳಲ್ಲಿ ಬೇರೆಯವರ ಭಾವನೆಗಳಿಗೆ ಧಕ್ಕೆ ಯಾಗದಂತೆ ನಡೆದುಕೊಳ್ಳಲು ಎಲ್ಲರಿಗೂ ಸಾಧ್ಯವಿದೆ. ಹಾಗೆ ನಡೆದುಕೊಳ್ಳಬೇಕು ಕೂಡ. ಆದರೆ ಇದು ಸಾಂಸ್ಕೃತಿಕ ಪಠ್ಯಗಳ ಚರ್ಚೆಯ ಸಂದರ್ಭದಲ್ಲಿ ಪಾಲಿಸಲು ಅಸಾಧ್ಯವಾದ ಸಂಗತಿ ಎಂಬುದನ್ನು ನಾವು ಗಮನಿಸಬೇಕು. ಅದರಲ್ಲೂ ರಾಮಾಯಣ ಮತ್ತು ಮಹಾಭಾರತಗಳಂತಹ ಬಹು ವಿವಾದಾತ್ಮಕ ಕೃತಿಗಳ ಬಗ್ಗೆ ಹೇಳುವಾಗ ಯಾರಿಗೂ ಬೇಸರವಾಗದಂತೆ ಅಥವಾ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ಮಾತನಾಡುವುದು ಹೇಗೆ ಸಾಧ್ಯ? ಈ ಬಗ್ಗೆ ಸಹಜವಾಗಿ ಉಂಟಾಗುವ ಅಭಿಪ್ರಾಯಭೇಧಗಳನ್ನೇ ಅನಗತ್ಯವಾಗಿ ವಿವಾದವನ್ನಾಗಿ ಪರಿವರ್ತಿಸುವವರನ್ನು ತಡೆಯುವುದು ಈ ರೀತಿಯಲ್ಲಿ ಸಾಧ್ಯವೇ? ಒಂದು ವೇಳೆ ಆಡಳಿತ ವ್ಯವಸ್ಥೆಯು ಕೆಲವು ಪುಸ್ತಕಗಳನ್ನು ಪಟ್ಟಿಮಾಡಿ ಅವುಗಳ ಬಗ್ಗೆ `ಏನನ್ನೂ ಮಾತನಾಡಕೂಡದು’ ಎಂದೋ ಅಥವಾ ಅವುಗಳ ಬಗ್ಗೆ ಇಂಥದ್ದೇ ಅಭಿಪ್ರಾಯ `ಅಧಿಕೃತ’ ಮತ್ತು ಆ ಅಭಿಪ್ರಾಯವನ್ನು ಹೊರತು ಪಡಿಸಿದ ಇತರ ಅಭಿಪ್ರಾಯಗಳನ್ನು `ಅನಧಿಕೃತ’ ಎಂದು ಘೋಷಿಸಿಯೋ ಶಾಸನವನ್ನೇನಾದರೂ ಮಾಡಿದರೆ ಇಂತಹ ವಿವಾದಗಳನ್ನು ತಡೆಯಬಹುದೇನೋ. ವಾಸ್ತವದಲ್ಲಿ ಅವೆಲ್ಲ ಸಾಧ್ಯವಿಲ್ಲದ ಸಂಗತಿಗಳು.  

ಸರಿ, ಇಂತಹ ಪಠ್ಯಗಳ ಬಗ್ಗೆ ಯಾರಾದರೂ ಏನಾದರೂ ಮಾತನಾಡಿದಾಗ ಕೆಲವರ ಭಾವನೆಗಳಿಗೆ ಏಕೆ ಧಕ್ಕೆಯಾಗಬೇಕು? ಅವರ ಭಾವನೆಗಳಿಗೆ ಧಕ್ಕೆ ಎಂಬ ಕಾರಣಕ್ಕೆ ಅವುಗಳ ಮೇಲೆ ಅವರು ಒಪ್ಪುವ ಅಭಿಪ್ರಾಯವನ್ನೇ ಎಲ್ಲರೂ ಹೊಂದಿರಲು ಸಾಧ್ಯವಿದೆಯೇ? ಅಷ್ಟಕ್ಕೂ ಆ ಪಠ್ಯಗಳು ಹೀಗೆ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಅಹವಾಲು ಸಲ್ಲಿಸುವವರ ಖಾಸಗೀ ಆಸ್ತಿಗಳೇನಲ್ಲ. ಅವು ಈ ನಾಡಿನ ಸಮಸ್ತ ಜನರ ಕೂಡುಆಸ್ತಿಗಳು. ಆ ಆಸ್ತಿಗಳ ಮೇಲಿನ ಜವಾಬ್ದಾರಿ, ಹಕ್ಕು, ಅವುಗಳ ಬಗೆಗಿನ ಜಗಳ ಎಲ್ಲವೂ ಸಾಮೂಹಿಕವಾಗಿಯೇ ಇರುತ್ತವೆಯೆಂದು ನಾವು ತಿಳಿಯಬೇಕಾಗುತ್ತದೆ. ಆ ಕೃತಿಗಳನ್ನು ಹೊಗಳುವ ಹಕ್ಕು ಇದೆ ತೆಗಳುವ ಹಕ್ಕು ಇಲ್ಲ ಎನ್ನುವುದಾದರೆ ಅವನ್ನು ಹೊಗಳುವವರ ಖಾಸಗೀ ಆಸ್ತಿಯಾಗಿ ಪರಿಗಣಿಸದಂತಾಗುವುದಿಲ್ಲವೇ? ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳ ವಿಷಯದಲ್ಲಿ ವಿವಾದ ಉಂಟಾಗಲು ಬಹುಮುಖ್ಯ ಕಾರಣ ಈ ಕೃತಿಗಳಿಗೆ ಧಾರ್ಮಿಕ ಆಯಾಮ ಇರುವುದಾಗಿದೆ. ಕೆಲವರು ಈ ಕೃತಿಗಳ ಬಗ್ಗೆ `ಪೂಜ್ಯ’ಭಾವನೆ ಬೆಳಸಿಕೊಂಡಿರುತ್ತಾರೆ.  ನಾವು ಯಾವುದಾದರೂ ಒಂದು ಗ್ರಂಥದ ಬಗ್ಗೆ ಹೀಗೆ `ಪೂಜ್ಯ’ ಭಾವನೆ ಬೆಳಸಿಕೊಂಡರೆ ಆ ಗ್ರಂಥದ ಬಗ್ಗೆ ಟೀಕೆ ಇರಲಿ ಕನಿಷ್ಠ ವಿಮರ್ಶೆಯನ್ನೂ ಆಲಿಸುವ ಸೌಜನ್ಯ ತೋರದ ಹಟಮಾರಿಗಳಾಗಿಬಿಡುತ್ತೇವೆ.

ಕುವೆಂಪು ಹಾಗಾಗಿಯೇ, “ಯಾವೊಂದು ಗ್ರಂಥವೂ ಪೂಜನೀಯವಾಗಬಾರದು. ಎಲ್ಲರೂ ಎಲ್ಲ ಒಳ್ಳೆಯ ಗ್ರಂಥಗಳಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ತಮ್ಮದೇ ವಿಚಾರವನ್ನು ಕಟ್ಟಿಕೊಳ್ಳಬೇಕು” ಎಂಬ ಅಭಿಪ್ರಾಯವನ್ನು ಎಂದು ತಮ್ಮ ಕೊನೆಗಾಲದ ವಿಶ್ವಮಾನವ ಸಂದೇಶದಲ್ಲಿ ಹೇಳಿದ್ದಾರೆ. `ಧರ್ಮವು ಗುಂಪು ಕಟ್ಟುವ ವಿಷಯವಾಗಬಾರದು’ ಎಂಬ ಅವರ ವಿಚಾರಧಾರೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ನಮ್ಮ ಇಂದಿನ ಸಮಾಜಕ್ಕೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದನ್ನು ನಾವಿಂದು ಆಲೋಚಿಸಬೇಕಿದೆ. ಈ ರಾಮಾಯಣ ಮಹಾಭಾರತ ನಮ್ಮ ಬಹುಮುಖ್ಯ ಸಾಂಸ್ಕೃತಿಕ ಪಠ್ಯಗಳಾಗಿರುವುದರಿಂದ ಅವುಗಳನ್ನು ಓದುವ, ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವ, ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕಾದದ್ದು ಅತ್ಯಂತ ಅವಶ್ಯ. ಇದು ಅಭಿಪ್ರಾಯ ವ್ಯಕ್ತಪಡಿಸುವವರ ಸ್ವಾತಂತ್ರ್ಯ ಮಾತ್ರವಲ್ಲ ಕೃತಿಗಳ ಸ್ವಾತಂತ್ರ್ಯ ಕೂಡ ಹೌದು. ಏಕೆಂದರೆ ಇವೆಲ್ಲ ಬೌದ್ಧಿಕ ಚರ್ಚೆಯ ಸಂಗತಿಗಳು. ಬೌದ್ಧಿಕ ಚರ್ಚೆಗಳಲ್ಲಿ ವೈಚಾರಿಕ ಸಂಘರ್ಷ ಎಂಬುದು ಅತ್ಯಂತ ಸಾಮಾನ್ಯ ಸಂಗತಿ. ಆ ಸಂಘರ್ಷಗಳು ಆ ಕೃತಿಗಳನ್ನು ಒರೆಗೆ ಹಚ್ಚುವ ಮೂಲಕ ಅವುಗಳು ನಮ್ಮ ಕಾಲಕ್ಕೆ ಔಟ್ ಡೇಟೆಡ್ ಆಗದಂತೆ ಜೀವಂತವಾಗಿಟ್ಟುಕೊಳ್ಳುವ ಬಹುಮುಖ್ಯ ಕಾರ್ಯಗಳೂ ಆಗಿರುತ್ತವೆ.

ಹಾಗಾಗಿ ಇಲ್ಲಿ ನಾವು ಭಾವನೆಗಳಿಗೆಂತ ಸಹನೆಗೆ ಆದ್ಯತೆ ನೀಡಬೇಕಾಗುತ್ತದೆ. ಇಂತಹ ವಿಷಯಗಳಲ್ಲಿ ಯಾರಿಗೇ ಆಗಲಿ ತನ್ನಾಭಿಪ್ರಾಯದೊಂದಿಗೆ ಭಿನ್ನಾಭಿಪ್ರಾಯವನ್ನೂ ಕೇಳುವ ಸಹನೆ ಇಲ್ಲದಿದ್ದರೆ ವಿವಾದವಾಗುವುದು ಅತ್ಯಂತ ಸಹಜವಾದದ್ದು.  ಈ ಕೃತಿಗಳನ್ನು ತೆಗಳುವವರನ್ನು ಕಂಡು ಅವನ್ನು ಹೊಗಳುವವರ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಹೊಗಳುವವರನ್ನು ಕಂಡು ತೆಗಳುವವರ ಭಾವನೆಗಳಿಗೂ ಧಕ್ಕೆಯಾಗುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಆದ್ದರಿಂದ ಹೊಗಳುವವರು ಮತ್ತು ತೆಗಳುವವರು ಇಬ್ಬರೂ ಪರಸ್ಪರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದಿದ್ದರೂ ಆಲಿಸುವ, ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದೊಂದೆ ಇದಕ್ಕಿರುವ ಸಮರ್ಪಕ ಪರಿಹಾರ.

ಇನ್ನು ಎರಡನೆಯ ಪ್ರಶ್ನೆ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಹಿಂಸೆಯನ್ನು ಪ್ರಚೋದಿಸುವ ಕೃತಿಗಳಾಗಿಲ್ಲವೇ ಎಂಬುದು. ಇದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ನಮಗೆ ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಎರಡು ಅಂಶಗಳು ಸ್ಪಷ್ಟವಾಗುತ್ತಿವೆ: 1) ಇದು ರಾಮಾಯಣ ಮಹಾಭಾರತಗಳಂತಹ ಬಹಳಷ್ಟು ವೈವಿಧ್ಯಮಯವೂ ಪರಸ್ಪರ ವಿರುದ್ಧ ವ್ಯಾಖ್ಯಾನಗಳೂ ಗುರಿಯಾಗಿರುವ ಸಾಂಸ್ಕೃತಿಕ ಪಠ್ಯಗಳ ಮೇಲಿನ ವಿದ್ವಾಂಸರೊಬ್ಬರ ಅಭಿಪ್ರಾಯಕ್ಕೆ ಸಂಬಂಧಿಸಿದ ಪ್ರಕರಣ. 2) `ಅವುಗಳನ್ನು (ರಾಮಾಯಣ ಮತ್ತು ಮಹಾಭಾರತ) ಓದುವವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂಬ ಮಲ್ಲಿಕಾ ಘಂಟಿ ಅವರ ಹೇಳಿಕೆಯಲ್ಲಿ ಇಲ್ಲದ `ಎಲ್ಲರೂ’ ಎಂದು ಅರ್ಥಕೊಡುವ ಪದ ನ್ಯಾಯಮೂರ್ತಿಗಳ ಈ ಬಗೆಗಿನ ಅಭಿಪ್ರಾಯದಲ್ಲಿ ಸೇರಿಕೊಂಡಿದೆ. (ಓದಿದವರೆಲ್ಲಾ). ಹೀಗಾಗಿ ಘಂಟಿಯವರ ಹೇಳಿಕೆ `ಈ ಕಾವ್ಯಗಳು ಹಿಂಸೆಯನ್ನು ಪ್ರಚೋದಿಸುತ್ತವೆ’ ಎಂಬ ಸಾಮಾನ್ಯ ಹೇಳಿಕೆಯಾಗಿರಬಹುದೇ ಹೊರತು `ಅವನ್ನು ಓದಿದ ಎಲ್ಲರೂ ಹಿಂಸಾ ಪ್ರವೃತ್ತಿ ಬೆಳಸಿಕೊಳ್ಳುತ್ತಾರೆ’ ಎಂದಿರಲಾರದು ಎಂಬುದು ನನ್ನ ಅನಿಸಿಕೆ.

ಹೀಗೆ ನನ್ನ ಅನಿಸಿಕೆಯಂತೆ ಅವರ ಹೇಳಿಕೆಯ ಹಿಂದಿನ ಧ್ವನಿ, `ರಾಮಾಯಣ ಮಹಾಭಾರತಗಳು ಹಿಂಸೆಯನ್ನು ಪ್ರತಿನಿಧಿಸುತ್ತವೆ’ ಎಂಬುದೇ ಆಗಿದ್ದಲ್ಲಿ ಅದನ್ನು ಸುಳ್ಳು ಎನ್ನುವ ಧೈರ್ಯ ಯಾರಿಗೆ ಇದೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ.  ರಾಮಾಯಣ ಮತ್ತು ಮಹಾಭಾರತ ಎರಡೂ ಹೇಳಿ ಕೇಳಿ ಯುದ್ಧಕಾವ್ಯಗಳು. ಭಗವದ್ಗೀತೆ ಯುದ್ದಕ್ಕೆ ಹೆದರಿದ ಅರ್ಜುನನನ್ನು ಕರ್ತವ್ಯದ ಹೆಸರಿನಲ್ಲಿ ಯುದ್ಧಮಾಡಲು ಹುರುದುಂಬಿಸಿ ಬಂಧುಬಳಗವನ್ನು ಕೊಲ್ಲಲು ಹಚ್ಚಿದ ಕೃತಿ. ಭಾರತದ ಮಾತ್ರವಲ್ಲ ಜಗತ್ತಿನ ಬಹುತೇಕ ಮಹಾಕಾವ್ಯಗಳ ಪ್ರಧಾನ ರಸ ಎರಡೇ ಎಂಬುದು ಬಹಳಷ್ಟು ಜನ ವಿದ್ವಾಂಸರ ಅಭಿಪ್ರಾಯ. ಅವೆಂದರೆ ಒಂದು ಶೃಂಗಾರ ಇನ್ನೊಂದು ವೀರ! `ವೀರ’ಎಂಬುದನ್ನು ಸಾಭೀತುಮಾಡುತ್ತಿದ್ದಂತಹ ಸಂಗಂತಿಗಳೇ `ಕೊಲೆ ಮತ್ತು ಹಿಂಸೆ’ಗಳು. ಇವೇ ಆಗ ಈ `ವೀರತ್ವ’ಕ್ಕೆ ಮಾನದಂಡಗಳಾಗಿದ್ದವು.  ಆ ಕಾಲಘಟ್ಟ ಯುದ್ಧಪ್ರಧಾನವಾದ ಕಾಲಘಟ್ಟ. ಹಾಗಾಗಿ ಕೊಲೆ ಮತ್ತು ಹಿಂಸೆ ಅಲ್ಲಿ ಅಪರಾಧವಾಗಿರಲಿಲ್ಲ. ಹೆಚ್ಚೆಚ್ಚು ಜನರನ್ನು ಕೊಂದ ರಾಜನನ್ನು ನಾವು ಮಹಾರಾಜ ವೀರಾಧಿವೀರ ಎಂದು ಹೊಗಳಿ ಗೌರವಿಸುತ್ತಲೇ ಬಂದಿದ್ದೇವೆ. ಅದು ಆ ಕಾಲಘಟ್ಟದ ಒಪ್ಪಿತ ವಿಚಾರಧಾರೆ!  ಈಗ ನಾವು `ಕೊಲೆ’ ಮತ್ತು `ಹಿಂಸೆ’ಗಳು `ಅಪರಾಧ’ ಎಂದು ಪರಿಗಣಿತವಾಗುತ್ತಿರುವ `ಪ್ರಜಾಪ್ರಭುತ್ವ’ದ ಕಾಲಘಟ್ಟದಲ್ಲಿದ್ದೇವೆ. ತೇಜಸ್ವಿ ಯಾವುದೋ ಒಂದು ಸಂದರ್ಶನದಲ್ಲಿ ಹೇಳಿದಂತೆ, “ಯಾವುದೋ ಕಾಲಘಟ್ಟದ ಮೌಲ್ಯಗಳನ್ನು ಪ್ರತಿಪಾದಿಸಲು ರಚನೆಯಾದ ಕೃತಿಗಳನ್ನು ಇನ್ನಾವುದೋ ಕಾಲಘಟ್ಟದಲ್ಲಿ ಯಥಾವತ್ತಾಗಿ ಸ್ವೀಕರಿಸುವುದು ಮೂರ್ಖತನ” ಆಗಬಹುದು. ಇವೆಲ್ಲ ದೇಶ ಕಾಲಗಳ ಪಲ್ಲಟದಲ್ಲಿ ಕೃತಿಯೊಂದರ ಮೌಲ್ಯವಿವೇಚನೆಯ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು.

ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಹಿಂಸೆಯನ್ನು ಪ್ರಚೋಧಿಸುವ ಭಾಗಗಳು ಎಷ್ಟೊಂದು ದೊಡ್ಡ ಮಟ್ಟದಲ್ಲಿವೆ ಎಂಬುದನ್ನು ಅವುಗಳನ್ನು ಒಂದುಬಾರಿ ಓದಿದವರೂ ಕೂಡ ಅವುಗಳ ಬಾಹುಳ್ಯವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಹೀಗಿದ್ದೂ ಅವನ್ನು `ಅಹಿಂಸೆಯನ್ನು ಪ್ರತಿಪಾದಿಸುವ ಕೃತಿಗಳು’ ಎಂದು ಯಾರಾದರೂ ಕರೆದರೆ ಅದು ಆ ಕೃತಿಗಳ ಆಶಯಕ್ಕೆ ಮಾಡುವ ಅವಮಾನವೇ ಆದೀತು. ವಾಲ್ಮೀಕಿ ರಾಮಾಯಣವನ್ನೇ ಉದಾಹರಿಸುವುದಾದರೆ ಅದು ಪ್ರತಿಪಾದಿಸುವ ಹಿಂಸೆಗೆ ತತ್ತರಿಸಿಹೋದ ಕವಿ ಕುವೆಂಪು ಇಡೀ ರಾಮಾಯಣವನ್ನು ಅಹಿಂಸೆಯ ಪ್ರತಿಪಾದನೆಯ ಮಹಾಕಾವ್ಯವನ್ನಾಗಿ ರೂಪಿಸಲು ಎಷ್ಟೆಲ್ಲ ಹೆಣಗಿದರು ಎಂಬುದನ್ನು ಗಮನಿಸಬೇಕು. ತಮ್ಮ ಕಾವ್ಯದ ಆರಂಭದಲ್ಲಿಯೇ ಕ್ರೌಂಚಪಕ್ಷಿಯನ್ನು ಬಾಣಬಿಟ್ಟು ಹೊಡೆದುರುಳಿಸಿದ ನಿಷಾದನಿಗೆ, `ಮಾಣ್ ನಿಷಾದನೆ ಮಾಣ್/ ಕೊಲೆ ಸಾಲ್ಗುಮಯ್ಯೋ ಮಾಣ್’’ ಎಂದು ಅವನಿಗೆ `ಶಿಕ್ಷೆ’ ಕೊಡದೇ `ಶಿಕ್ಷಣ’ವನ್ನು ಕೊಟ್ಟು ಆ ಹಕ್ಕಿಯನ್ನು ಆರೈಕೆಮಾಡಿ ಬದುಕಿಸುವ ಮೂಲಕ ತನ್ನದು ಭಿನ್ನ ನಡೆ ಎಂದು ತೋರಿಸುವ ಕುವೆಂಪು,  “ಕೊಲೆಯ ಸಾಹಸದ ಕಥೆ ಜನರಿಗೆ ಸಹಜವಾಗಿ ರುಚಿಸುತ್ತದೆ ಆದರೆ ಕೊಲೆಯ ಕಥೆ ಬದಲು ರಾಮನ ಮನದ ಕಲೆಯ ಕಥೆಯನ್ನು ರುಚಿಸುವಂತೆ ಕೃತಿರಚಿಸುವ ಸಾಮರ್ಥ್ಯವನ್ನು ಕೊಡು” ಎಂದು ಸರಸ್ವತಿಯಲ್ಲಿ ಯಾಕೆ ಬೇಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಂಡರೆ ವಾಲ್ಮೀಕಿ ರಾಮಾಯಣದಲ್ಲಿನ ಹಿಂಸೆಯ ಬಾಹುಳ್ಯ ನಮ್ಮ ಅರಿವಿಗೆ ಬಾರದೇ ಇರದು.

ಹೀಗೆ ಹಿಂಸೆಯ ವಾಲ್ಮೀಕಿ ರಾಮಾಯಣವನ್ನು ಅಹಿಂಸೆಯ ರಾಮಾಯಣವನ್ನಾಗಿ ಮುರಿದು ಕಟ್ಟುವ ಸಾಹಸ ಮಾಡಿದ  ಕುವೆಂಪು ಅವರಿಗೆ  ಕೂಡ ತಮ್ಮ ಕಾವ್ಯದಲ್ಲಿ ಯುದ್ಧವನ್ನು ವರ್ಜಿಸಲು ಅವರಿಗೆ  ಆಗಲಿಲ್ಲ ಎಂಬ ಸಂಗತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಯುದ್ಧವನ್ನು ತಮ್ಮ ಕಾವ್ಯದಿಂದಲೇ ವರ್ಜಿಸಿ ಕುವೆಂಪು ಅಹಿಂಸೆಯ ಪ್ರತಿಪಾದನೆ ಮಾಡಬೇಕಿತ್ತು ಎಂದು ಯಾವ ಓದುಗನಿಗೂ ಅಲ್ಲಿ ಅನ್ನಿಸುವುದಿಲ್ಲ. ಹಾಗೇ ಮಾಡಿದ್ದರೆ ಅದು ರಾಮಾಯಣವಾಗದೇ ಇನ್ನಾವುದೋ ಕಾವ್ಯವಾಗುತ್ತಿತ್ತು. ಈ ಮಾತು ಯಾಕೆ ಎಂದರೆ ಹಿಂಸೆಯನ್ನು ರಾಮಾಯಣ ಮಹಾಭಾರತಗಳಿಂದ ತೆಗೆಯುವುದು ಎಂದರೆ ಅವುಗಳ ಜೀವತೆಗೆದಂತೆ! ಏಕೆಂದರೆ ರಕ್ತ ಹರಿಯದ ರಾಮಾಯಣ ಮತ್ತು ಮಾಂಸ ಸುರಿಯದ ಮಹಾಭಾರತ ಎರಡೂ ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿಗಳು!! ಕುವೆಂಪು ಒಬ್ಬ ಅಸಾಮಾನ್ಯ ಪ್ರತಿಭಾಶಾಲಿ ಕವಿಯಾದ ಕಾರಣ ತಮ್ಮ ಕಾವ್ಯದಲ್ಲಿ ಸಾವಿರಾರು ಸಾವು ನೋವುಗಳನ್ನು ತೋರಿಸಿಯೂ, ಈ ಹರಿದ ರಕ್ತವನ್ನೇ ನೀರಾಗಿ ಸುರಿದ ಮಾಂಸದ ಮುದ್ದೆಯನ್ನೇ ಗೊಬ್ಬರ ಮಾಡಿಕೊಂಡು, ಈ `ರಕ್ತ ಹರಿಯುವಿಕೆ’ ಮತ್ತು `ಮಾಂಸ ಸುರಿಯುವಿಕೆ’ಯ ಭಯಂಕರತೆಯ ವಿರೋಧಿ ಅರಿವಿನ ಸಸಿಗಳು ಬೆಳೆಯುವಂತೆ ಮಾಡಿ ಕಾವ್ಯವನ್ನು ಮುರಿದುಕಟ್ಟುವಲ್ಲಿ ಯಶಸ್ವಿಯಾದರು. ಇಂಥದೇ ಅನೇಕ ಉದಾಹರಣೆಗಳನ್ನು ನಾವು ಮಹಾಭಾರತದ ಬಗ್ಗೆಯೂ ಕೊಡಬಹುದಾಗಿದೆ. ಈ ಸತ್ಯವನ್ನು ಸಂಬಂಧಪಟ್ಟವರೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಘಂಟಿಯವರ ಈ ಪ್ರಕರಣದಲ್ಲಿ `ರಾಮಾಯಣ’ ಮತ್ತು `ಮಹಾಭಾರತ’ ಎಂಬ ಪದಗಳನ್ನು ಪ್ರಸ್ತಾಪಿಸಲಾಗಿದೆ. ಯಾವ ರಾಮಾಯಣ ಯಾವ ಮಹಾಭಾರತ ಎಂದು ಉಲ್ಲೇಖಿಸಲ್ಪಟ್ಟಿರಲಿಕ್ಕಿಲ್ಲ. ಹಾಗಿದ್ದರೆ ಯಾವ ರಾಮಾಯಣ ಮತ್ತು ಯಾವ ಮಹಾಭಾರತ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಂಡೇ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನಮಗೆ ರಾಮಾಯಣ ಎಂಬುದು ಒಂದಿಲ್ಲ. ಮಹಾಭಾರತ ಎಂಬುದೂ ಒಂದಿಲ್ಲ. ನೂರಾರು ರಾಮಾಯಣಗಳೂ ಬಹುದೊಡ್ಡ ಸಂಖ್ಯೆಯ ಮಹಾಭಾರತಗಳೂ ನಮ್ಮಲ್ಲಿವೆ. ರಾಮಾಯಣದ ವಿಚಾರದಲ್ಲಿ ಬೌದ್ಧ ರಾಮಾಯಣಗಳು, ಜೈನರಾಮಾಯಣಗಳು, ವೈದಿಕ ರಾಮಾಯಣಗಳು ಮತ್ತು ಜನಪದ ರಾಮಾಯಣಗಳು ಎಂದು ಬಹುಮುಖ್ಯವಾಗಿ ನಾಲ್ಕು ಧಾರೆಯಲ್ಲಿ ವಿಭಾಗಿಸಬಹುದಾದ ಈ ರಾಮಾಯಣಗಳ ಗಾತ್ರ, ಪಾತ್ರ, ಕಥೆ, ಪ್ರತಿಪಾದಿಸುವ ಮೌಲ್ಯ ಇವುಗಳ ನಡುಗೆ ಆಡು-ಆನೆಯಷ್ಟು ಅಂತರವಿದೆ. ಅನೇಕ ಕಡೆ ಇವು ಪ್ರತಿಪಾದಿಸುವ ಮೌಲ್ಯಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿಯೂ ಇವೆ. ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ರಾಮ ಸೀತೆ ಅಣ್ಣ ತಂಗಿಯರು ಎಂದು ಹೇಳುವು ರಾಮಾಯಣಗಳೂ ನಮ್ಮಲ್ಲಿವೆ! ಜೈನ ರಾಮಾಯಣವೊಂದರಲ್ಲಿ ರಾಮ, ಲಕ್ಷ್ಮಣ, ರಾವಣ ಇವರೆಲ್ಲ ನೆಂಟರು! ಸೀತೆ ರಾವಣನ ಪತ್ನಿ ಮಂಡೋದರಿಯ ಗರ್ಭಸಂಜಾತೆ! ರಾವಣನನ್ನು ಕೊಲ್ಲುವವ ಲಕ್ಷ್ಮಣನೇ ಹೊರತು ರಾಮನಲ್ಲ!! ಮಹಾಭಾರತದ ಬಗ್ಗೆ ಇಷ್ಟು ವೈವಿಧ್ಯತೆ ಇಲ್ಲದಿದ್ದರೂ ಕಥೆಯ ಭಿನ್ನರೂಪಗಳ ಅನೇಕ ಪ್ರತಿಗಳು ದೊರೆತಿರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ.

ಹೀಗೆ ವೈವಿಧ್ಯತೆ ಮತ್ತು ಹತ್ತು ಹಲವು ವಿಷಯಗಳಲ್ಲಿ ಅನಿರ್ಧಿಷ್ಟತೆಯನ್ನು ಒಳಗೊಂಡ ಈ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯಾವ ಯಾವ ರಾಮಾಯಣ ಮತ್ತು ಮಹಾಭಾರತವಗಳನ್ನು ಕೇಂದ್ರೀಕರಿಸಿ ಈ ಪ್ರಕರಣದಲ್ಲಿ ಚರ್ಚೆ ನಡೆಯುತ್ತಿದೆಯೋ ಗೊತ್ತಿಲ್ಲ. ದೂರದಿಂದ ನೋಡಿ ಊಹಿಸುವುದಾದರೆ ಇದು ವೈದಿಕ ರಾಮಾಯಣಗಳ ಗುಂಪಿನಲ್ಲಿ ಬರುವ `ವಾಲ್ಮೀಕಿ ರಾಮಾಯಣ’ವನ್ನೂ ಮತ್ತು `ವ್ಯಾಸಮಹಾಭಾರತ’ವನ್ನೂ ಕೇಂದ್ರೀಕರಿಸಿ ನಡೆಯುತ್ತಿರುವಂತೆ ತೋರುತ್ತಿದೆ. ಹೀಗಾಗಿ ಈ ಕೃತಿಗಳ ಬಗ್ಗೆಯಾದರೂ ನಮ್ಮಲ್ಲಿ ಒಂದು ನಿರ್ಧಿಷ್ಟತೆ ಇದೆಯೇನೋ ಅಂದರೆ ಅದೂ ಇದ್ದಂತಿಲ್ಲ. ಅವುಗಳ ಗಾತ್ರ ಕಾಲಗಳ ಬಗ್ಗೆ ರಚನಾಕಾರರ ಬಗ್ಗೆ ಬಹುದೊಡ್ಡ ವಿದ್ವಾಂಸರೇ ನಾವು ಆಶ್ಚರ್ಯಪಡುವ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಗಮನಿಸಬಹುದು:

ವಿಶ್ವಕವಿ ರವೀಂದ್ರ ನಾಥ ಟ್ಯಾಗೋರ್ ಅವರು, “ನಿಜವಾಗಿಯೂ `ವ್ಯಾಸ’ ಅಥವಾ `ವಾಲ್ಮೀಕಿ’ ಎಂಬುದು ಯಾರ ಹೆಸರೂ ಆಗಿರಲಿಲ್ಲ” ಎಂದು ಹೇಳುತ್ತಾರೆ. `ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಪ್ರಕಾರ ಈ ಎರಡು ಮಹಾಕಾವ್ಯಗಳ ಅನುಕ್ರಮಿಕ ವಿಕಾಸವನ್ನೂ ಅವು ಬೆಳೆದುನಿಂತ ಬೃಹದ್ಗಾತ್ರವನ್ನೂ ನೋಡಿದ ಯಾರಿಗಾದರೂ “ಮೂಡುವ ಮೊದಲ ಅಭಿಪ್ರಾಯವೆಂದರೆ ಅದು ಒಬ್ಬ ಬರೆದ ಬರಹ ಅಲ್ಲ; ಅಷ್ಟೇ ಅಲ್ಲ ಒಂದು ತಲೆಮಾರಿನ ಬರಹಗಾರರದೂ ಅಲ್ಲ ಎಂಬುದು; ಬೇರೆ ಬೇರೆ ಪ್ರಮಾಣದ ಶಕ್ತಿಯುಳ್ಳ  ಅನೇಕ ಬರಹಗಾರರ ಕಲಬೆರಕೆ ಅದು ಎಂದೂ ಗೊತ್ತಾಗುತ್ತದೆ.” ನಮ್ಮ ಇನ್ನೊಬ್ಬ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು `ವಾಲ್ಮೀಕಿ’ ಮತ್ತು `ವ್ಯಾಸ’ ಎಂಬವು ನಿಜವಾಗಿಯೂ ಯಾರ ಹೆಸರೂ ಆಗಿರಲಿಲ್ಲ ಎಂಬ ಟ್ಯಾಗೋರರ ಮಾತನ್ನು ಅನುಮೋದಿಸಿ, ಈ ರೀತಿ ಅಭಿಪ್ರಾಯಪಡುತ್ತಾರೆ: “`ವಾಲ್ಮೀಕಿ’ ಎಂಬುದು ಒಂದು ಸಂಕೇತ; ಹುತ್ತಗಟ್ಟಿಕೊಂಡ ಚಿತ್ತದ ಸಂಕೇತ. `ವಾಲ್ಮೀಕಿ’ ಕೂತಲ್ಲೇ ಹುತ್ತ ಬೆಳೆಯಿತು ಎಂದರೆ, ಅದು ಆ ವ್ಯಕ್ತಿತ್ವದ ಏಕಾಗ್ರತೆಯ ಸ್ಥಿರತೆಯ ಸಂಕೇತ. ಇಂಥ ಏಕಾಗ್ರತೆಯಿಲ್ಲದೆ ರಾಮಾಯಣದಂತಹ ಮಹಾಕೃತಿ ರಚನೆಯಾಗುವುದು ಸಾಧ್ಯವಿಲ್ಲ. ಹಾಗೆಯೇ `ವ್ಯಾಸ’ ಎಂದರೆ ವಿಸ್ತಾರ; ಮಹಾಭಾರತವನ್ನೂ ಅದರ ವಿಷಯ ವಿಪುಲತೆಯನ್ನೂ ನೋಡಿದರೆ, ಜಗತ್ತಿನಲ್ಲಿ ಏನೆಲ್ಲ ಇದೆಯೋ ಅದೆಲ್ಲವೂ ಮಹಾಭಾರತದಲ್ಲಿ ಇದೆ ಎನ್ನಿಸುತ್ತದೆ. ಹೀಗಾಗಿ ಲೋಕಾನುಭವದ ಸಮಸ್ತವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಸಾಮರ್ಥ್ಯಕ್ಕೆ `ವ್ಯಾಸ’ ಎಂಬುದು ಒಂದು ಸಂಕೇತ. ಅಷ್ಟೇ ಅಲ್ಲ “ಇದೊಂದು (ರಾಮಾಯಣ) ಆರ್ಯ ದ್ರಾವಿಡರ ಸಮರದ ಕಥೆ; ಆರ್ಯರು ದಕ್ಷಿಣ ಭಾರತವನ್ನು ನಿರ್ನಾಮಗೊಳಿಸಲು ಕೈಗೊಂಡ ಸಾಹಸಯಾತ್ರೆ” ಎಂದು ಹೇಳಿದ ವಿದ್ವಾಂಸರೂ ಇದ್ದಾರೆ. ಇನ್ನು “ರಾಮಾಯಣದ ಕಥೆ ತುಂಬಾ ಚಿಕ್ಕದು ಜೊತೆಗೆ ಅದು ಸರಳವಾದ ಕತೆ ಹಾಗೂ ಅದರಲ್ಲಿ ಭಾವೋದ್ರೇಕಕಾರಿಯಾದದ್ದು ಏನೂ ಇಲ್ಲ” ಎನ್ನುವ ಅಂಬೇಡ್ಕರ್, “ಈ ಕಥೆಯಲ್ಲಿ ರಾಮನನ್ನು ಆರಾಧಿಸಲು ಪ್ರೇರೇಪಿಸುವಂಥ ಯಾವ ಅಂಶಗಳೂ ಕಾಣವು. ಅವನೊಬ್ಬ ಕರ್ತವ್ಯಪಾಲಕ ಮಗ ಅಷ್ಟೇ.” ಎಂದು ಹೇಳಿ ಭಾವನೆಗಳಿಗೆ ಧಕ್ಕೆ ಯಾಗುವ ಅಂಶಗಳನ್ನೇ ನಿರಾಕರಿಸುತ್ತಾರೆ.

ಮಹಾಭಾರತದ ಬಗ್ಗೆಯೂ ಅದರ ರಚನೆ, ಗಾತ್ರ, ಪ್ರಕ್ಷೇಪಗಳು, ಅದು ಪ್ರತಿಪಾದಿಸುವ ಮೌಲ್ಯಗಳು ಇವುಗಳನ್ನು ಕುರಿತು ಈ ರೀತಿಯ ಅನೇಕ ವಿವಾದಗಳು, ಗೊಂದಲಗಳು ಇವೆ. ಒಂದೆರಡನ್ನು  ಪ್ರಸ್ತಾಪಿಸುವುದಾದರೆ ಅದರ ರಚನೆಯ ಕಾಲ ಮತ್ತು ರಾಮಾಯಣ ಮತ್ತು ಮಹಾಭಾರತ ಇವುಗಳ ಗಾತ್ರಗಳ ಬಗ್ಗೆ ಇರುವ ಗೊಂದಲವನ್ನು ನೋಡಬಹುದು. ಆರಂಭದಲ್ಲಿ ಕೇವಲ ಎಂಟು ಸಾವಿರ ಶ್ಲೋಕಗಳಿದ್ದ `ಜಯ’ ಎಂಬ ಕೃತಿ ಅನೇಕ ಕಾಲಘಟ್ಟಗಳಲ್ಲಿ ಅನೇಕರು ಸೇರಿಸಿದ ಶ್ಲೋಕಗಳಿಂದಾಗಿ ಇಂದು ಒಂದು ಲಕ್ಷ ಶ್ಲೋಕಗಳ ಗಾತ್ರ ಮುಟ್ಟಿದೆಯಂತೆ! ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿ ಯಾವುದು ಮೊದಲು ರಚಿತವಾಯಿತು ಯಾವುದು ಅನಂತರ ರಚಿತವಾಯಿತು ಮತ್ತು ಯಾವುದು ಚಿಕ್ಕದು ಯಾವುದು ದೊಡ್ಡದು ಎಂಬುದರ ಬಗ್ಗೆ ಕೂಡ ವಿದ್ವಾಂಸರಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಇರುವ ಹತ್ತು ಹಲವು ಗೊಂದಲಮಯ ಹೇಳಿಕೆಗಳನ್ನೂ ಆಧಾರಗಳನ್ನೂ ಆಳವಾಗಿ ಅಧ್ಯಯನ ನಡೆಸಿದ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಎ. ಆರ್. ಕೃಷ್ಣಶಾಸ್ತ್ರೀ ಅವರು “ರಾಮನ ಕಥೆ ಪ್ರಾಚೀನವಾದದ್ದು. ಆದರೆ ‘ರಾಮಾಯಣ’ವು ಮಾತ್ರ `ಭಾರತವು’ ಹುಟ್ಟಿ `ಮಹಾಭಾರತ’ವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಮಧ್ಯೆ ಯಾವಾಗಲೋ ಹುಟ್ಟಿರಬೇಕೆಂದೂ ರಾಮಾಯಣವು ಹುಟ್ಟಿದ ಮೇಲೆ ಭಾರತದ ಬೆಳವಣಿಗೆ ಮುಗಿದು ಅದು ಇಂದಿನ ರೂಪವನ್ನು ತಾಳಿತೆಂದೂ ಸಾಧಾರಣವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ರಾಮಾಯಣಕ್ಕಿಂತ ಭಾರತ ಹಳೆಯದು. ಭಾರತಕ್ಕಿಂತ ರಾಮಾಯಣ ಹಳೆಯದು” ಎಂದು ತಮಾಸೆ ಎನಿಸಬಹುದಾದ ಆದರೆ ವಾಸ್ತವದ ಅಭಿಪ್ರಾಯವನ್ನು ಬರೆಯುತ್ತಾರೆ.

ಇನ್ನು ಅದು ಪ್ರತಿಪಾದಿಸುವ ಮೌಲ್ಯದ ಬಗ್ಗೆ ಇರುವ ಒಂದು ಅಭಿಪ್ರಾಯವನ್ನು ನೋಡುವುದಾದರೆ, ಅದರ ಪಾತ್ರವೊಂದರ ಬಗ್ಗೆ ಸ್ವತಂತ್ರೋತ್ತರ ಭಾರತದ ಮಹಾನ್ ಚಿಂತಕ ಡಾ. ರಾಮ ಮನೋಹರ್ ಲೋಹಿಯಾ ಮಾಡುವ ಕಠಿಣ ವಿಮರ್ಶೆಯ ಈ ಮಾತುಗಳನ್ನು ನೋಡಬಹುದು: “ಕೃಷ್ಣ ಕಳ್ಳನಾಗಿದ್ದ, ಸುಳ್ಳುಗಾರನಾಗಿದ್ದ, ಕೊಲೆಗಾರನಾಗಿದ್ದ. ಇವುಗಳನ್ನೂ ಇನ್ನಿತರ ಪಾತಕಗಳನ್ನೂ, ಕಿಂಚತ್ ಪಶ್ಚಾತ್ತಾಪವೂ ಇಲ್ಲದೇ ಮಾಡಿದ. ತನ್ನ ಸಾಕು ತಾಯಿಯಲ್ಲಿ ಬೆಣ್ಣೆ ಕದಿಯುವುದರಿಂದ ಪ್ರಾರಂಭಿಸಿ ಮತ್ತೊಬ್ಬನ ಹೆಂಡತಿಯನ್ನು ಕದಿಯುವ ಹಂತಕ್ಕೆ ಏರಿದ.”

ಮಹಾನ್ ವಿದ್ವಾಂಸರುಗಳ ನಡುವೆಯೇ ಇಷ್ಟೊಂದು ಗೊಂದಲಗಳು ಸಂದೇಹಗಳು ಅವುಗಳ ಮೌಲ್ಯಗಳ ಬಗ್ಗೆ ಪರಸ್ಪರ ವಿರುದ್ಧಾಭಿಪ್ರಾಯಗಳು, ಇರುವ ಇಂತಹ ಪ್ರಾಚೀನ ಕೃತಿಗಳ ಬಗ್ಗೆ ಈಗಿನ ಯಾವುದೇ ವಿದ್ವಾಂಸರು ಹೇಗೆ ತಾನೆ ಒಂದೇ ರೀತಿಯ ಯಾರಿಗೂ ಬೇಸರವಾಗದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿದೆ ಎಂಬುದು ಅರ್ಥವಾಗುತ್ತಿಲ್ಲ. ಘಂಟಿ ಹೇಳಿದ ಮಾತು ಲೋಹಿಯಾ ಮಾತಿಗಿಂತ ಉಗ್ರವಾಗಿರುವಂತೆ ಏನೂ ಕಾಣುವುದಿಲ್ಲ.

ಮೂರನೆಯ ಮತ್ತು ಕೊನೆಯ ಪ್ರಶ್ನೆ ಸಾಂಸ್ಕೃತಿಕ ಪಠ್ಯವೊಂದನ್ನು ಧಾರ್ಮಿಕ ಭಾವನೆಗಳ ಪರೀಧಿಯಲ್ಲಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು. ಇತ್ತೀಚಿನ ದಿನಗಳ ವಿದ್ಯಮಾನಗಳನ್ನು ನೋಡಿದರೆ ನಾವು ಸಂವಿಧಾನವು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ವಿಶ್ಲೇಷಿಸಿಕೊಳ್ಳುವಲ್ಲಿ ಎಡವಿದ್ದೇವೆಯೇನೋ ಎನಿಸುತ್ತಿದೆ. ಒಂದು ಉದಾಹರಣೆಯ ಮೂಲಕ ಇದನ್ನು ನಾವು ವಿಸ್ತರಿಸಿಕೊಳ್ಳಬಹುದು: ಉದಾಹರಣೆಗೆ ಒಬ್ಬ ವ್ಯಕ್ತಿ ಯಾವುದೋ ಸಾರ್ವಜನಿಕ ಸ್ಥಳದಲ್ಲಿರುವ ಅವನ ಖಾಸಗೀ ಆಸ್ತಿಯಲ್ಲದ ಒಂದು ದೇವರ ಮೂರ್ತಿಯನ್ನು `ಪೂಜಿಸುತ್ತಾನೆ’ ಎಂದಿಟ್ಟುಕೊಳ್ಳೋಣ. ಇನ್ನೊಬ್ಬ ಯಾರೋ ಆ ಮೂರ್ತಿಯ ಮೇಲೆ `ಕಾಲಿಡುತ್ತಾನೆ’, ಎಂದಿಟ್ಟುಕೊಳ್ಳೋಣ. ಆಗ ಮೂರ್ತಿಯನ್ನು ಪೂಜಿಸುತ್ತಿದ್ದವನು ಸಾಮಾನ್ಯವಾಗಿ `ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ನ್ಯಾಯಾಲಯದ ಮೆಟ್ಟಿಲೇರಿದರೆ ಏನಾಗಬಹುದು ಎಂಬುದು ನಮಗೆ ಗೊತ್ತಿದೆ. ಬಹುತೇಕವಾಗಿ ಅವನ ಅಹವಾಲು ಮಾನ್ಯಮಾಡಲ್ಪಡುತ್ತದೆ. ಬಹುಶಃ ಮೂರ್ತಿಯನ್ನು ಈ ರೀತಿ `ಅಪಮಾನ’ ಮಾಡಿದ್ದಕ್ಕಾಗಿ ಅವನ ಎದುರು ಪಾರ್ಟಿಗೆ ಅಂದರೆ `ಕಾಲಿಟ್ಟವನಿಗೆ’ ಶಿಕ್ಷೆಯಾದರೂ ಆಗಬಹುದು.

ಆದರೆ “ಇಂತಹ ಮೂರ್ತಿಯನ್ನು ಪೂಜೆ ಮಾಡುವುದರಿಂದ ಮೂಡನಂಬಿಕೆ ಬೆಳೆಯುತ್ತದೆ; ದೇವರ ಮೇಲೆ ಗೌರವ ಹೆಚ್ಚಾಗಿ ಮನುಷ್ಯನ ಮೇಲೆ ಗೌರವ ಕಡಿಮೆಯಾಗುತ್ತದೆ. ಹೀಗಾಗಿ ‘ಪೂಜೆಮಾಡುವುದರಿಂದ ನನ್ನ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ಹೀಗೆ ಆ ಮೂರ್ತಿಯನ್ನು `ಪೂಜಿಸುವವನ’ ವಿರುದ್ಧ ಕಾಲಲ್ಲಿ ತುಳಿಯುವವನು ನ್ಯಾಯಾಲಯದ ಮೆಟ್ಟಿಲನ್ನು ಏರಿದರೆ ತೀರ್ಪು ಏನೆಂದು ಬರಬಹುದು?  ಗೊತ್ತಿಲ್ಲ. ಯಾರೂ ಹೀಗೆ ನ್ಯಾಯಾಲಯದ ಮೊರೆಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅಂಥದ್ದೇನಾದರೂ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದರೆ “ಆ ಮೂರ್ತಿ ನಿಮ್ಮೊಬ್ಬರಲ್ಲಿ ಯಾರ ಖಾಸಗೀ ಆಸ್ತಿಯೂ ಅಲ್ಲ. ಪೂಜೆಮಾಡುವವರು ಪೂಜೆ ಮಾಡಿ; ತುಳಿಯುವವರು ತುಳಿಯಿರಿ’ ಅದು ನಿಮ್ಮ ನಿಮ್ಮ ಸ್ವಾತಂತ್ಯ. ನಿಮ್ಮ ನಿಮ್ಮ ಸ್ವಾತಂತ್ರ್ಯವನ್ನು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ ಅಷ್ಟೇ” ಎಂಬ ತೀರ್ಪು ಬರಬೇಕು ಎಂಬುದು ನಮ್ಮಂಥವರ ಅಪೇಕ್ಷೆ. ಏಕೆಂದರೆ `ಪೂಜ್ಯ’ಕ್ಕೂ `ತ್ಯಾಜ್ಯ’ಕ್ಕೂ ಸಮಾನವಾದ ಮಾನ್ಯತೆ ಇದ್ದಾಗ ಮಾತ್ರ `ಸ್ವಾತಂತ್ರ್ಯ’ ಎಂಬುದಕ್ಕೆ ಅರ್ಥ ಬರುತ್ತದೆ.

ಹೀಗೆ ಸಂವಿಧಾನ ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನೇರವಾಗಿ ಧಾರ್ಮಿಕ ಸಂಗತಿಗಳಲ್ಲಿಯೇ ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿರುವ ನಾವು ಈ ಸ್ವಾತಂತ್ರ್ಯವನ್ನು ರಾಮಾಯಣ ಮಹಾಭಾರತಗಳಂತಹ ಸಾಹಿತ್ಯ ಕೃತಿಗಳಿಗೆ ತಗಲುಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಕು. ಈ ಬಗ್ಗೆ ಕುವೆಂಪು ಅವರ ಇನ್ನೊಂದು ಉಲ್ಲೇಖವನ್ನು ಕೊಡುವುದಾದರೆ ರಾಮಾಯಣದಲ್ಲಿನ ಹಿಂಸೆಯೂ ಸೇರಿದಂತೆ ಅನೇಕ ಸಂಗತಿಗಳನ್ನು ಒಪ್ಪದೇ ಅವೆಲ್ಲವನ್ನೂ ಬದಲಿಸುವ ಸಂಕಲ್ಪಮಾಡಿ ಹೊಸದಾದ ರಾಮಾಯಣವನ್ನು ಬರೆಯುವ ಸಂಕಲ್ಪ ಮಾಡುವ ಮೊದಲು ಅವರು ಕೂಡ ವಾಲ್ಮೀಕಿ ರಾಮಾಯಣವನ್ನು ಬಹಳ ಮೆಚ್ಚಿಕೊಂಡಿದ್ದರು. ಅದರಲ್ಲಿರುವ ಹಿಂಸೆ ಮತ್ತು ಕ್ರೌರ್ಯವನ್ನು ಗುರುತಿಸದೇ ಅದರ ರಸಮಾಧುರ್ಯಕ್ಕೆ ಮಾರುಹೋಗಿದ್ದರು: ಆ ಕಾಲಘಟ್ಟದಲ್ಲಿ ಆ ಕಾವ್ಯವನ್ನು ಕುರಿತು ಹೇಳುವಾಗಲೂ ಅವರು ಅದಕ್ಕೆ ಧಾರ್ಮಿಕತೆಯ ತಳುಕುಹಾಕಲಿಲ್ಲ ಎಂಬುದನ್ನು ನಾವು ಮರೆಯಬಾರದು ``ವಾಲ್ಮೀಕಿಯ ಮಹಾಕೃತಿ ಚರಿತ್ರೆಯಲ್ಲ; ಕಾವ್ಯ; ಆ ಚರಿತ್ರೆ ಕವಿಯ ಚಿದ್ರಂಗದಲ್ಲಿ ನಡೆದದ್ದು’ ಎನ್ನುವ ಅವರು ರಾಮಾಯಣವು ಕೇವಲ ಕವಿಯ ಕಲ್ಪನೆ ಮಾತ್ರ. ಹಾಗಾಗಿ ಅದನ್ನು `ಸಾಹಿತ್ಯ ಕೃತಿ’ಯಾಗಿ ಮಾತ್ರ ನೋಡಬೇಕೆ ಹೊರತು `ಇತಿಹಾಸದ ಪುಸ್ತಕ’ವಾಗಿ ಅಲ್ಲ ಎನ್ನುವ ತಿಳಿವಳಿಕೆಯನ್ನು ನಮಗೆ ನೀಡುತ್ತಾರೆ. ಈ ಬಗ್ಗೆ  ಇನ್ನೂ ಮುಂದುವರೆದು ಮಾತನಾಡುವ ಅವರು ವಾಲ್ಮೀಕಿಯ ಈ ರಾಮಾಯಣವನ್ನು ಕಬ್ಬಿನಕೋಲಿಗೆ ಹೋಲಿಸಿ “ಕಬ್ಬಿನ ಕೋಲಿನಲ್ಲಿ ದೊಣ್ಣೆಯತನ ಇಲ್ಲ ಎಂದಲ್ಲ. ಅದನ್ನು ಎಮ್ಮೆ ಹೊಡೆಯಲಿಕ್ಕೆ ಉಪಯೋಗಿಸಲು ಸಾಧ್ಯವಿಲ್ಲ ಎಂದೂ ಅಲ್ಲ. ಆದರೆ ಕಬ್ಬಿನ ಪ್ರಧಾನೋದ್ದೇಶ ರಸಮಾಧುರ್ಯ. ಅದರ ಮುಖ್ಯ ಸತ್ವವೂ ಅದರ ಸಹಿಯಲ್ಲಿಯೇ ನಿಷ್ಠಿತ. ಬೆಲ್ಲವೇ ಅದರ ಸತ್ಯಸ್ಯ ಸತ್ಯ” ಎನ್ನುತ್ತಾರೆ. ಅವರು ಹೇಳುವಂತೆ ರಾಮಾಯಣ ಮತ್ತು ಮಹಾಭಾರತ ಎಂಬ ಕಬ್ಬಿನ ಕೋಲನ್ನು ನಾವು ಎಮ್ಮೆ ಹೊಡೆಯಲು ಬಳಸಿಕೊಳ್ಳುವ ದಡ್ಡತನಕ್ಕೆ ಇಳಿಯಬಾರದು. ಕುವೆಂಪು ಅವರ ಈ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳುವುದಾದರೆ ಕಾವ್ಯಕೃತಿಯಾದ ರಾಮಾಯಣ, ಮಹಾಭಾರತ ಮಾತ್ರವಲ್ಲ ಯಾವುದೇ ಕೃತಿಯನ್ನು ನಾವು ಸಾಹಿತ್ಯ ಕೃತಿಯಾಗಿ ನೋಡಬೇಕೆ ಹೊರತು ಅದಕ್ಕೆ `ದೈವತ್ವ’ವನ್ನು ಆರೋಪಿಸಿ ರಂಪಮಾಡಬಾರದು.

ಕೊನೆಯ ಮಾತು: ನ್ಯಾಯಾಲಯದ ತೀರ್ವು ತಾಂತ್ರಿಕವಾಗಿ ಏನೋ ಆಗಬಹುದು ಅದು ಬೇರೆ ವಿಷಯ. ತಾತ್ವಿಕವಾಗಿ ನೋಡುವುದಾದರೆ ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಇನ್ನೊಂದು ಕಡೆ, ಈ ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಬರುವ ಮಾತುಗಳನ್ನು ಕುರಿತು ಅವು ಒಬ್ಬ ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜನರ ಮಾತುಗಳಾಗಿರದೇ “ಒಂದು ಪರಂಪರೆಯ ಮಾತುಗಳು” ಎಂಬ ಬಹುಮುಖ್ಯವಾದ ಮಾತನ್ನು ಹೇಳುತ್ತಾರೆ. ಟ್ಯಾಗೋರರ ಈ ಮಾತಿನ ಚುಂಗನ್ನು ಹಿಡಿದೆಳೆದು ಮಾತನ್ನು ಮುಂದುವರಿಸಿ ಹೇಳಬಹುದಾದರೆ, ಮಲ್ಲಿಕಾ ಘಂಟಿ ಅವರು ಆಡಿದ ಮಾತು ಕೂಡ ಅವರೊಬ್ಬರ ಮಾತಲ್ಲ; ಅದೂ ಕೂಡ ಈ `ಪರಂಪರೆಯ ಮಾತೇ’. ಆ ಮಾತು ತಾಂತ್ರಿಕವಾಗಿ ಘಂಟಿಯವರ ಗಂಟಲಿನಿಂದ ಘಂಟಾಘೋಷವಾಗಿ ಹೊರಬಂದದ್ದು ನಿಜವಾದರೂ ಅದು ಅವರೊಬ್ಬರ ಮಾತಲ್ಲ; ಬದಲಾಗಿ ಅದು ನಮ್ಮ `ಪರಂಪರೆಯ ಪಿಸುಮಾತು’.  ಅದು ಇಡೀ ಭಾರತೀಯ ಸಾಹಿತ್ಯ ಪರಂಪರೆ ಮತ್ತು ಅದರ ಭಾಗವಾದ ಕನ್ನಡ ಸಾಹಿತ್ಯ ಪರಂಪರೆ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರೂಢಿಸಿಕೊಂಡ ವೈಚಾರಿಕತೆಯ ಪರಿಣಾಮವಾಗಿ ರೂಪುಗೊಂಡ ಸಾಮೂಹದ ಒಮ್ಮಾತು. ಹಾಗಾಗಿ ಈ ಮಾತಿನ ಹೊಣೆಗಾರಿಕೆ ಘಂಟಿಯವರದ್ದು ಮಾತ್ರವಲ್ಲ; ಇಡೀ ಪರಂಪರೆಯದ್ದು; ಅದನ್ನು ಪ್ರತಿನಿಧಿಸುವ ಎಲ್ಲರದ್ದು!
********
ಡಾ. ರಾಜೇಂದ್ರ ಬುರಡಿಕಟ್ಟಿ

14-10-2017