Friday, September 29, 2017

ಎಲ್.ಇ.ಡಿ. ಸೀರೆ ಮತ್ತು ಡುಮ್ಮಿ ಟಿ.ವಿ.

ಇದು ಎಲ್.ಇ.ಡಿ. ಸೀರೆಯಂತೆ! ಏಳು ಸೆಕೆಂಡಿನ ಈ ವಿಡಿಯೋವನ್ನು ಆಮೇಲೆ ಗಮನಿಸಿ. ಹೊಸದಾಗಿ ಮದುವೆಯಾದಾಗ ಇಪ್ಪತ್ತು ವರ್ಷಗಳ ಹಿಂದೆ ನಾನು ನನ್ನ ಹೆಂಡತಿ ಹೋಗಿ ತಂದಿದ್ದ ಒನಿಡಾ ಡುಮ್ಮಿ ಟಿವಿನೇ ಇನ್ನೂ ನಾವು ಎಲ್.ಇ.ಡಿ.ಗೆ ಬದಲಿ ಮಾಡಿಕೊಂಡಿಲ್ಲ. ಅಷ್ಟರೊಳಗೇ ಸೀರೆಯೂ ಎಲ್.ಇ.ಡಿ. ಬಂತಾ?

ಎಲ್ಲ ಹೆಂಗಸರೇ (ಸಹೋದರಿಯರೇ, ಗೆಳತಿಯರೇ, ಮಾತೆಯರೇ ಹಿಂಗೆಲ್ಲ ಏನೇ ಪದ ಬಳಸಿದರೂ ಒಂದಿಷ್ಟು ಜನ ಆ ಪದದ ವ್ಯಾಪ್ತಿಯಿಂದ ಹೊರಗೆ ಉಳಿಯುವುದರಿಂದ ಹೀಗನ್ನುತ್ತಿರುವೆ ಅಷ್ಟೇ, ಒರಟೆನಿಸಿದರೆ ಸಹಿಸಿಕೊಂಡು ಕ್ಷಮಿಸಿ) ಹೇಗಿದ್ದರೂ `ನಿಮ್ಮ’ ಗಂಡಸರೆಲ್ಲ ಇವತ್ತು ವಿಜಯದಶಮಿ ಹಬ್ಬ ಅಂತ ಮನೆಯಲ್ಲಿಯೇ ಇರ್ತಾರೆ. “ಮೈಸೂರು ದಸರಾ ಎಷ್ಟೊಂದು ಸುಂದರಾ” ಎಂದು ಮಂಜುಳಾ ರಾಜಕುಮಾರನ ಜೊತೆಗೆ ಕುಣಿಯುವ ಹಾಡನ್ನು ಟಿವಿಯವರು ತೋರಿಸುವುದನ್ನು ನೋಡ್ತಾ ಒಂದ್ತರಾ ಹ್ಯಾಪಿ ಮೂಡಿನಲ್ಲಿ ಇರ್ತಾರೆ. ಅವರು ಈ ಹಬ್ಬಕ್ಕೆ ಹೊಸ ಸೀರೆ ಕೊಡಿಸಿದರೇನು ಬಿಟ್ಟರೇನು ನೀವು ಮಾತ್ರ ಪೂಜೆ ಪುನಸ್ಕಾರ ಮಾಡುವುದರಲ್ಲಿಯಾಗಲಿ ಸಿಹಿ ಅಡುಗೆ ಮಾಡುವುದರಲ್ಲಾಗಲೀ ಏನೂ ಕಡಿಮೆ ಮಾಡದೇ ಏನೇನು ಮಾಡಬೇಕೋ ಅದೆಲ್ಲ ಮಾಡಿ ಅವರ ಮನಸ್ಸನ್ನು ಗೆದ್ದಿರ್ತಿರಾ.

ಈ ಸಮಯದಲ್ಲಿ ಗಂಡಸರಿಗೆ ನಿಮ್ಮ ಬಗ್ಗೆ ಒಂದು ಗುಡ್ ವಿಲ್ ಇದ್ದೇ ಇರ್ತದೆ. ಇದೇ ಒಳ್ಳೇ ಟೈಮು. ಗಂಡಸರು ಊಟಮಾಡುವಾಗ `ಸಾರು ತುಂಬಾ ಚೆನ್ನಾಗಿದೆ’ `ಪಾಯಸ ತುಂಬಾ ಟೇಸ್ಟಿದೆ’ ಎನ್ನುವ ಮಾತು ಅವರ ಬಾಯಿಂದ ಹೊರಬರುವ ಸಮಯ ನೋಡಿ, ಅವರು ತುತ್ತು ನೆತ್ತಿಗೆ ಹತ್ತದ ಹಾಗೆ ನೈಸಾಗಿ ಅವರ ಕಿವಿಗೆ ಈ ಸೀರೆ ಬಗ್ಗೆ ಒಂದು ಮಾತು ಹಾಕಿಡಿ. ತಗಳ್ಳುವುದೋ ಬಿಡೋದೋ ಆಮೇಲೆ ನೋಡಿದರಾಯಿತು.ಯಾವುದಕ್ಕೂ ದೀಪಾವಳಿ ಇನ್ನೂ ಒಂದು ತಿಂಗಳಿದೆಯಲ್ಲ! ಇಂತಹ ಹ್ಯಾಪಿ ಮೂಡಿನಲ್ಲಿರುವಾಗ ಈ ಸೀರೆಯನ್ನು ಕೊಡಿಸುವ ಬಗ್ಗೆ ಎಲ್ಲ ಗಂಡಸರೂ `ಭರವಸೆ’ ಕೊಟ್ಟೇಕೊಡ್ತಾರೆ. ಭರವಸೆ ಕೊಡದಿದ್ದರೆ ಕೊನೆಯ ಪಕ್ಷ `ಆಸ್ವಾಸನೆ’ಯನ್ನಾದರೂ ಕೊಡದಿದ್ದರೆ ಅವರ ಗಂಡಸುತನಕ್ಕೆ ಅವಮಾನವಾಗುವುದರಿಂದ ನಿಮ್ಮ ಪ್ರಯತ್ನ ಹುಸಿಹೋಗಲಿಕ್ಕಿಲ್ಲ!

ಮನೆಯಲ್ಲಿರುವ ಮಹಿಳೆಯರು ಸೀರೆಗಾಗಿ ಗಂಡಸರನ್ನು ಗೋಗರೆಯುವುದು ಭಾರತದಲ್ಲಿ ಸಾಮಾನ್ಯ ಬಿಡಿ. ಆದರೆ ಹೊರಗಡೆ ಹೋಗಿ ದುಡಿಯುವ ಬಹಳಷ್ಟು ಮಹಿಳೆಯವರು ಕೂಡ ತಮ್ಮ ದುಡಿಮೆಯ ಹಣದಲ್ಲಿಯೇ ಒಂದು ಹೊಸಸೀರೆಯನ್ನು ತೆಗೆದುಕೊಳ್ಳುವಾಗಲೂ ತಮ್ಮ ಗಂಡಂದಿರಿಗೆ `ಒಂದುಮಾತು ಹೇಳಿ ತಗೊಳ್ಳುವುದು’ ಅವರು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ! ಆ ಮೂಲಕ `ನಾನು ಈ ಮನೆಯ ಯಜಮಾನ ಅಲ್ಲ’ ಎಂಬ ಅಸುರಕ್ಷತೆಯ ಭಾವ ಗಂಡಸರಲ್ಲಿ ಮೂಡದಂತೆ ಅವರುನ್ನು ಕಾಪಾಡಿಕೊಂಡು ಅವರು ಬರುತ್ತಿದ್ದಾರೆ. ಅದು ಅವರ ದೊಡ್ಡಗುಣವೋ ಇರಬಹುದು ಅಸಹಾಯಕತೆಯೂ ಎಂಥದಾದರೂ ಇರ್ಲಿಬಿಡಿ. ಅದನ್ನ ಕಟ್ಟಿಕೊಂಡು ಆಗಬೇಕಾಗಿದ್ದಾದರೂ ಏನು? ಒಟ್ಟಿನಲ್ಲಿ “ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು…. ಬದುಕು ಹಗುರ ಎನ್ನುತಿರಲು ಪ್ರೇಮವೆನಲು ಹಾಸ್ಯವೇ’’ ಎಂಬ ಕವಿವಾಣಿಯಂತೆ ನೋಡೋಕೆ ಚೆನ್ನಾಗಿ ಕಾಣುವಂತೆ ಬದುಕುತ್ತಾರಲ್ಲ ಅಷ್ಟು ಸಾಕು.

ಗಂಡುಹೆಣ್ಣಿನ ಪ್ರೀತಿಗೂ ಇಂತಹ ಸೀರೆಗಳಿಗೂ ಎಂತೆಂಥದೋ ಸಂಬಂಧಗಳು ಇರುತ್ತವೆ. ಅವನ್ನೆಲ್ಲ ಹೇಳೋದು ಕಷ್ಟ. `ಪ್ರೀತಿ’ `ಪ್ರೇಮ’ ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕವಾಗಿ ಮಾತನಾಡಲು ನಮ್ಮ ಹಿಂದಿನ ತಲೆಮಾರಿನ ಜನ ಮುಜುಗರಪಡುತ್ತಿದ್ದರು. `ಮೈಸೂರು ಮಲ್ಲಿಗೆ’ ಕೃತಿಯ ಪ್ರೇಮಗೀತೆಗಳ ಮೂಲಕ ಕನ್ನಡ ಜನಮಾನಸದಲ್ಲಿ `ಪ್ರೇಮಕವಿ’ ಎಂದೇ ಹೆಸರಾದ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ಗೀತೆಗಳನ್ನು ಯಾರಾದರೂ `ಪ್ರೇಮಗೀತೆಗಳು’ ಎಂದದ್ದು ತಮ್ಮ ಕಿವಿಗೆ ಬಿದ್ದರೆ, `ಅವು ಪ್ರೇಮಗೀತೆಗಳಲ್ಲ ದಾಂಪತ್ಯಗೀತೆಗಳು’ ಎಂದು ತಿದ್ದಿ ಹೇಳುತ್ತಿದ್ದರಂತೆ! ಬಹುಶಃ ದಾಂಪತ್ಯದಲ್ಲಿರುವ `ಪತ್ಯ’ದ ಕಾರಣಕ್ಕೆ ಅವರು ಹಾಗೆ ತಿದ್ದುತ್ತಿರಬಹುದು. ಆ ಕಾಲದ ದಾಂಪತ್ಯದ್ದು ಈ ಕಥೆಯಾದರೆ ಇನ್ನು ಈ ಕಾಲದ ಇತ್ತೀಚಿನ ಜೋಡಿಗಳು, ಅಂದರೆ ಮದುವೆಯಾದ ಅಥವಾ ಆಗದೆಯೂ ಆದವರಂತೆ ಜೊತೆಯಾಗಿ ಬದುಕುತ್ತಿರುವ ಪ್ರೀತಿ ಪ್ರೇಮದ ಹುಡುಗ ಹುಡುಗಿಯರ ಜೋಡಿಗಳಿಗೆ ಈ ಸೀರೆ ಬೇಕಾಗಿಲ್ಲ. ಅವರು ಒಂದು ರೀತಿಯಲ್ಲಿ `ಜಿನ್ಪ್ ಪ್ಯಾಂಟ್ ಟೀ ಶರ್ಟ್ ಜೋಡಿ’ಗಳು. ಅವರಿಗೆ ಗಂಡಸರ ಬಟ್ಟೆ ಹೆಂಗಸರ ಬಟ್ಟೆ ಇವುಗಳ ನಡುವೆ ವ್ಯತ್ಯಾಸ ಏನೂ ಇರಬೇಕಾಗಿಲ್ಲ. ಎಲ್ಲಿಗಾದರು ಹೊರಟರೆ ಎರಡು ಜಿನ್ ಪ್ಯಾಂಟು ಎರಡು ಟೀ ಶರ್ಟ್ ಬ್ಯಾಗಿನಲ್ಲಿ ತುರುಕಿಕೊಂಡರೆ ಮುಗಿಯಿತು. ಇಬ್ಬರಿಗೂ ಆಗುತ್ತೆ. ಅಷ್ಟೇ ಅಲ್ಲ  ಕವಿ ಬೇಂದ್ರೆ ಅವರ `ಬಳಸಿಕೊಂಡೆವು ನಾವು ಅದನೆ ಅದಕು ಇದಕು ಎದಕು’ ಎನ್ನುವ ಸಾಲಿನಂತೆ ಹಗಲು ತಿರುಗಲಿಕ್ಕೆ ರಾತ್ರಿ ಮಲಗಲಿಕ್ಕೆ ಎಲ್ಲದಕ್ಕೂ ಆಗುತ್ತೆ. ಅವರಿಗೂ ಈ ಸೀರೆಗೂ ಸಂಬಂಧನೇ ಇಲ್ಲದ್ದರಿಂದ ಅವರ ಉಸಾಬರಿ ನಮಗೆ ಬೇಡ!

ಹೆಂಗಸರಿಗೆ ಸೀರೆ ಕೊಡಿಸುವ ವಿಚಾರದಲ್ಲಿ ಗಂಡಸರು ಹೆಂಗೆಂಗೋ ವರ್ತಿಸುತ್ತಾರೆ. ಕೆಲವು ಗಂಡಸರು ಹೆಂಗಸರಿಗಿಂತಲೂ ಹೆಚ್ಚಾಗಿ ಸೀರಿಯಸ್ಸಾಗಿ ಅಂಗಡಿಗಳಲ್ಲಿ ಅವರಿಗಿಂತಲೂ ಹೆಚ್ಚು ಸೀರೆ ಕಿತ್ತುಹಾಕಿಸಿ ಅವರಿಗಿಂತಲೂ ಹೆಚ್ಚಾಗಿ ಎತ್ತಿಕೊಳ್ಳೊದು ಮತ್ತೆ ವಾವಸ್ಸು ಕೊಡೋದು ಬದಲಿ ಮಾಡಿಕೊಳ್ಳೋದು ಮಾಡುವುದುಂಟು. ಆದರೆ ಇಂಥವರ ಸಂಖ್ಯೆ ಬಹಳ ಕಡಿಮೆ. ನಾನು ಕಂಡಂತೆ ನಮ್ಮ ಲಂಕೇಶ್ ಅವರಂಥ ಗಂಡಸರೇ ಹೆಚ್ಚು. ಲಂಕೇಶ್ ಹೆಸರು ಹೇಳಿದೆನಲ್ಲ, ಅವರ ಕಥೆ ಕೇಳಿ: ಲಂಕೇಶ್ ಸೀರೆ ಕೊಡಿಸಲೆಂದು ಅವರ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗನ್ನುವುದಕ್ಕಿಂತ ಅವರ ಹೆಂಡತಿಯೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಎನ್ನುವುದು ಹೆಚ್ಚು ಸರಿಯಾಗುವ ಮಾತು ಆಗಬಹುದು. ಹಾಗೆ ಹೋದ ಲಂಕೇಶ್ ಹೆಂಡತಿಯನ್ನು ಬಟ್ಟೆ ಅಂಗಡಿ ಒಳಗೆ ಕಳಿಸಿ ಹೊರಗಡೆ ನಿಂತು ಒಂದು ಸಿಗರೇಟು ಹಚ್ಚುತ್ತಿದ್ದರಂತೆ. ಆ ಸಿಗರೇಟು ಮುಗಿದು ಅದರ ತುಂಡನ್ನು ಅವರು ನೆಲಕ್ಕೆ ಎಸೆದು ಹೊಸಕಿಹಾಕುವುದರೊಳಗೆ ಹೆಂಡತಿ ಸೀರೆ ಸೆಲೆಕ್ಟ್ ಮಾಡಿಕೊಂಡು ಬರಬೇಕಾಗಿತ್ತಂತೆ. ಅಷ್ಟರೊಳಗೆ ಒಂದು ವೇಳೆ ಅವರು ಬರದಿದ್ದರೆ, “ನೀನೇನು ಜೀವನಪೂರ್ತಿ ಒಂದೇ ಸೀರೆ ಉಡ್ತೀಯಾ?” ಎಂದು ಜೋರು ಮಾಡುತ್ತಿದ್ದರಂತೆ!

ಲಂಕೇಶ್ ಅವರ ಕಥೆ ಹಂಗಾಯ್ತಲ್ಲ, ಅದು ಒಂದುಕಡೆ ಇರ್ಲಿ. ಗಂಡಸರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಲ್ಕು ಮಾತು: ಅಂದಹಾಗೆ ಈ ಸೀರೆ ಬೆಲೆ ಎಷ್ಟು ಅಂತ ಇನ್ನೂ ಗೊತ್ತಿಲ್ಲ. ಆದರೆ ಇದನ್ನು ಉಟ್ಟುಕೊಂಡು ಬಳುಕಾಡುತ್ತಾ, ಬೆಳಕುಬೀರುತ್ತಾ ಹೆಂಗಸರು ನಡೆಯುವುದು ಯಾವುದೇ ಗಂಡಸರಿಗಾದರೂ ಪುಳಕವನ್ನುಂಟುಮಾಡುವ ಸಂಗತಿಯಾದೀತು. ಸ್ವತಃ ಹೆಂಗಸರಿಗೂ ಇದು ಸಂತೋಷವನ್ನುಂಟು ಮಾಡೀತು. ಮನೆಯಲ್ಲಿ ಸ್ವಲ್ಪಹೊತ್ತು ಕರೆಂಟು ಹೋದರೂ ನಡೆದೀತು. ರಸ್ತೆಯಲ್ಲಿ ಬೀದಿದೀಪ ಇಲ್ಲದಿದ್ದರೂ ಆದೀತು. ಆದರೆ ಇಂತಹ ಈ ಸೀರೆ ಉಟ್ಟುಕೊಂಡ ಹೆಂಗಸರ ಮೈಮುಟ್ಟಿದರೆ ಪ್ರೀತಿಪ್ರೇಮದ, ಅನುರಾಗದ ಭಾವನೆ ಉಂಟಾಗುತ್ತದೆಯೋ ಅಥವಾ ಕರೆಂಟ್ ಹೊಡೆಸಿಕೊಂಡ ಅನುಭವ ಆಗುತ್ತದೆಯೋ ಇನ್ನೂ ಗಂಡಸರಿಗೆ ಗೊತ್ತಿಲ್ಲ. ಹತ್ತಿರ ಹೋದರೆ ಗ್ರೌಂಡಿಂಗ್ ಆಗಿ ಶಾಕ್ ಹೊಡೆಯುವ ಚಾನ್ಸ್ ಕೂಡ ಇರಬಹುದು. ಯಾವುದಕ್ಕೂ `ಹತ್ತಿರವಿದ್ದರೂ ಹತ್ತಿಕೊಂಡಿರುವುದನ್ನು ತಪ್ಪಿಸುವುದು’ ಆ ಮೂಲಕ `ಸುರಕ್ಷಿತ ಅಂತರ’ ಅಂದರೆ `Comfortable Distance’ ಮೇಂಟೇನ್ ಮಾಡೋದು ಒಳ್ಳೆಯದೇನೋ ಅಲ್ವಾ?

ನನ್ನ ಕಥೆ ಕೇಳಿ. ನಾನಂತು ಈ ಸೀರೆ ಕೊಡಿಸುವ ಸಂದರ್ಭ ಬರ್ಲಿಕ್ಕಿಲ್ಲ ಅಂದ್ಕೊಂಡಿದ್ದೇನೆ. ಯಾಕೆಂದರೆ ನನ್ನ ಹೆಂಡತಿ ಅದನ್ನು ಉಟ್ಟುಕೊಂಡು ಬಳ್ಳಿಯಂತೆ ಬಳುಕಾಡಿ ನಡೆದಾಡುವಷ್ಟು ತೆಳ್ಳಗೂ ಇಲ್ಲ. ಕ್ಯಾಟ್ ವಾಕ್ ಮಾಡಿ ನನ್ನನ್ನು ಖುಷಿಪಡಿಸುವ ವಯಸ್ಸೂ ಅವಳದಲ್ಲ! ನನಗೂ ನನ್ನ ಹೆಂಡ್ತಿಗೂ ನಮ್ಮ ಮನೆಯ ಡುಮ್ಮಿ ಟಿವಿಗೂ ಹೇಳಿಮಾಡಿಸಿದ ಜೋಡಿ! ಮೇಡ್ ಫಾರ್ ಈಚ್ ಅದರ್ ಅಂತನೋ ಏನೋ ಹೇಳ್ತಾರಲ್ಲ ಹಂಗೆ. ನಮ್ಮ ಕವಿ ಜಿ.ಪಿ. ರಾಜರತ್ನಂ ಅವರ ರತ್ನ ಹೇಳುವಂತೆ, `ನಮ್ಮಷ್ಟಕ್ ನಾವಾಗಿ, ಇದ್ದದ್ರಲ್ಲಿ ಹಾಯಾಗಿ’ ಅದೀವಿ. ನೀವು ಯಾರಾದ್ರು ಬೇಕಾದರೆ ಕೊಡಿಸಿ ಉಡಿಸಿ ನೋಡಿ ಸಂತೋಷ ಪಡಿರಪ್ಪ. ನಾವೆಲ್ಲ ದೂರದಿಂದ ನೋಡಿ ಸಂತೋಷ ಪಡ್ತೀವಿ. ಕೊನೆಯಲ್ಲಿ ನಾಲ್ಕು ಸಾಲಿನ ಒಂದು ಪದ್ಯ:

ಬಂದಿತು ನೋಡಿ ಎಲ್ಇಡಿ ಸೀರೆ
ಜಗಮಗ ಜಗಮಗ ಬೆಳಕಿನ ಧಾರೆ
ಉಟ್ಟುನಡೆದರೆ ಬಳುಕುತ ನೀರೆ
ನಿಂತು ನೋಡೀತು ಊರಿಗೆ ಊರೆ


·         ರಾಜೇಂದ್ರ ಬುರಡಿಕಟ್ಟಿ

Friday, September 22, 2017

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್
ಮೊನ್ನೆ ನಮ್ಮ ಬಿ.ವಿ. ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಪುಸ್ತಕ ಬಿಡುಗಡೆ ಮಾಡಲು ಶೂದ್ರ ಸಭೆ ಏರ್ಪಡಿಸಿದ್ದ ಸಂದರ್ಭ. ಶರ್ಮರ ಭಾಷಣ, ಕಿ.ರಂ. ನಾಗರಾಜನ ವಿಮರ್ಶೆ, ಮತ್ತು ವೀರಭದ್ರಪ್ಪನವರ ಒಂದೆರಡು ಮಾತುಗಳು. ನಮ್ಮ ಜನ ಇತ್ತೀಚೆಗೆ ಏನನ್ನು ಹೇಳಲೂ ಹಿಂಜರಿಯುತ್ತಿದ್ದಾರೆ; ಅವರು ಹಿಂಜರಿಯಲು ಕಾರಣಗಳಿವೆ. ಇಲ್ಲಿಯ ಕಂದಾಚಾರ, ಜಾತೀಯತೆ, ಮೂಢನಂಬಿಕೆಯ ವಿರುದ್ಧ ಸದಾ ಪ್ರತಿಭಟಿಸುವ ಒಂದು ಗುಂಪಿತ್ತು. ಅದರಲ್ಲಿ ದಲಿತರು, ಬಂಡಾಯದವರು, ಸಮಾಜವಾದಿಗಳು, ಕಮ್ಯುನಿಷ್ಟರು ಇದ್ದರು. ಇವರು ತುಂಬಾ ಉಗ್ರವಾಗಿ ಪ್ರತಿಭಟಿಸುತ್ತ ಇದ್ದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ; ಇಲ್ಲಿ ಸಮಾಜವಾದಿ ಸರ್ಕಾರ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗ್ಯಾರಂಟಿಯಾಗಿದ್ದಾಗ, ಈ ಪ್ರತಿಭಟನಾಕಾರರು ಪೂಜ್ಯರೂ ಪುನೀತರೂ ಆಗುವ ಸಂಭವವೇ ಇಲ್ಲ ಎಂಬುದು ನಿಶ್ಚಿತವಾಗಿದ್ದಾಗ…


ಆಮೇಲೇನಾಯಿತು ಅಂದರೆ, ಇವರಲ್ಲಿ ಅನೇಕರು ಸಾಂಪ್ರದಾಯಿಕ ಮದುವೆ ಮಾಡಿಕೊಂಡರು, ಕೆಲವರು ಪ್ರೇಮವಿವಾಹವಾಗಿ ವಿಚ್ಛೇದನಗೊಂಡರು. ಗುಟ್ಟಾಗಿ ವರದಕ್ಷಿಣೆ ತೆಗೆದುಕೊಂಡರು, ಜಗದ್ಗುರುಗಳ ನೇತೃತ್ವದ ಕಾಲೇಜಿನಲ್ಲಿ ಕೆಲಸಕ್ಕಾಗಿ ಜಗದ್ಗುರು ಮತ್ತು ಮ್ಯಾನೇಜ್ಮೆಂಟಿನ ಕಾಲಿಗೆ ಎರಗಿದರು. ಜನತಾದಳ, ಜನತಾ ಸರ್ಕಾರದಲ್ಲಿ ಸಾಕಷ್ಟು ತಿಂದು ಕೆಟ್ಟರು. ಕಾಂಗೈಗಳೊಂದಿಗೆ ಹೊಂದಾಣಿಕೆ ನಡೆಸಿಕೊಂಡು ಕೃತಾರ್ಥರಾದರು. ಇವರೆಲ್ಲರ ಪ್ರತಿಭಟನೆ ಸ್ಫೂರ್ತಿ ಕಳೆದುಕೊಂಡು ಶಿವಪೂಜೆಯ ಗುಣ ಪಡೆಯತೊಡಗಿತು. ಇದೊಂದು ವ್ಯರ್ಥವಾಗಿ ಹಾರಾಡುವವರ ಗುಂಪಾಗಿ ಜನ ಪರಿಗಣಿಸಿದರು.

ಆದ್ದರಿಂದಲೇ ವೀರಭದ್ರಪ್ಪ ತಮ್ಮೆಲ್ಲ ಕಷ್ಟಗಳ ನಡುವೆ, ಒತ್ತಡಗಳ ನಡುವೆ ನಮ್ಮ ತರುಣ ಜನಾಂಗಕ್ಕೆ ಉಪಯುಕ್ತವಾಗಬಲ್ಲ ಲೇಖನಗಳನ್ನು ಬರೆದಾಗ ಅವನ್ನೆಲ್ಲ ಸೇರಿಸಿ ಪುಸ್ತಕ ಮಾಡಿದೆವು. ಇವತ್ತು ಹೊಸ ಜನಾಂಗ, ಹೊಸ ಸ್ಫೂರ್ತಿಯಿಂದ, ಕಟ್ಟಕಡೆಯವರೆಗೆ ಇರಬಲ್ಲ ಕನಿಷ್ಠ ಕಾಳಜಿಯಿಂದ, ಬದುಕುವ ರೀತಿಯ ಅಂಗವಾಗಿಯೇ ಪ್ರತಿಭಟಿಸುವುದನ್ನು, ವೈಚಾರಿಕ ಪ್ರಶ್ನೆ ಕೇಳುವುದನ್ನು ಕಲಿಯಬೇಕಾಗಿದೆ. ಎಂದಿಗಿಂತ ಇವತ್ತು ವೈಚಾರಿಕತೆಯ ಅವಶ್ಯಕತೆ ಇದೆ. ವೈಚಾರಿಕತೆ ಎಂದರೆ ಕೇವಲ ತರ್ಕವಲ್ಲ, ಒಣವಾದವಲ್ಲ. ವೈಚಾರಿಕತೆ ಎಂದರೆ ನಮ್ಮ ಪಂಚೇಂದ್ರಿಯ ಮತ್ತು ಅಂತರಾಳಕ್ಕೆ ಗೋಚರಿಸುವ ಸತ್ಯಗಳ ಬಗ್ಗೆ ನಿಷ್ಠರಾಗಿರುವುದು, ನಮ್ಮಂತೆಯೇ ಅನುಭವಿಸುವ ಎಲ್ಲರೊಂದಿಗೆ ಆ ಸತ್ಯಗಳನ್ನು ಹಂಚಿಕೊಳ್ಳುವುದು. ಕಣ್ಣೆದುರು ಕಾಣುವ ಅನ್ಯಾಯ, ಅನಾಚಾರ, ಮೌಢ್ಯ, ಸ್ವಾರ್ಥದ ವಿರುದ್ಧ ಸೊಲ್ಲೆತ್ತುವ ದಿಟ್ಟತನ, ಸ್ಪಷ್ಟತೆ ಬೆಳಸಿಕೊಳ್ಳುವುದು.



ಮಾರ್ಕ್ಸ್ ತೀರಿಕೊಂಡಿರುವುದಾಗಿ ಲೋಹಿಯಾ, ಜೆ.ಪಿ, ಗಾಂಧಿಗಳೆಲ್ಲ ಕಣ್ಮರೆಯಾಗಿರುವುದಾಗಿ ಬೀಗುತ್ತಿರುವ ಕೊಳಕರಾದ ಹುಂಬರು ಈ ಪ್ರತಿಭಟನೆಯ ಅರ್ಥ ತಿಳಿದುಕೊಳ್ಳದಿದ್ದರೆ ಮಣ್ಣುಮುಕ್ಕುತ್ತಾರೆ. ಭಾರತದ ಬಂಡವಾಳಶಾಹಿ ಮತ್ತು ಸಮಾಜವಾದ, ಸಮತಾವಾದಗಳೆಲ್ಲ ಕ್ಲೀಷೆಗಳಾಗಿವೆಯೇ ಹೊರತು ಸತ್ತುಹೋಗಿಲ್ಲ. ಇವಕ್ಕೆಲ್ಲ ಹೊಸ ಅರ್ಥ ಮತ್ತು ಚಾಲನೆ ಬರಬೇಕಾದರೆ ಚಿಂತನೆ ಮತ್ತು ಕ್ರಿಯೆಗೆ ಜೀವ ಬರಬೇಕಾಗಿದೆ.
*****

ಇದು ನಿನ್ನೆ - 21-09-2017- ನಮ್ಮ ಭೌತಿಕ ಜಗತ್ತಿನಿಂದ ಕಳಚಿಕೊಂಡ ನಾಡಿನ ವೈಚಾರಿಕ ಸಾಹಿತ್ಯದ ಪ್ರಮುಖ ಕೊಂಡಿ, ಕನ್ನಡದ ಆಚೆಗೆ ಹೋಗಿ ತೆಲುಗು ಇಂಗ್ಲಿಷ್ ಭಾಷೆಗಳಿಗೂ ಅನುವಾದ ಗೊಂಡಿದ್ದ ಬಹುಮುಖ್ಯ ವೈಚಾರಿಕ ಕೃತಿಗಳ ಲೇಖಕ ಪ್ರೊ.ಬಿ.ವಿ.ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಇಪ್ಪತ್ತೈದು ವರ್ಷಗಳ ಹಿಂದೆ (1991-92) ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ನೆಪಮಾಡಿಕೊಂಡು ಆಗಿನ ಬಹುಮುಖ್ಯ ಲೇಖಕ ಪಿ.ಲಂಕೇಶ್ ತಮ್ಮ `ಲಂಕೇಶ್ ಪತ್ರಿಕೆ’ಯಲ್ಲಿ ಆ ಕಾಲದ ವೈಚಾರಿಕ ಸಾಹಿತ್ಯ ಕ್ಷೇತ್ರದ ಸೂಕ್ಷ್ಮ ಒಳನೋಟವನ್ನು ಕೊಡುತ್ತಾ ಬರೆದ ಲೇಖನ - ಎತ್ತಿಕೊಟ್ಟದ್ದು: ರಾಜೇಂದ್ರ ಬುರಡಿಕಟ್ಟಿ)

Friday, September 15, 2017

ಕುವೆಂಪು - ಲಂಕಿಣಿ - ಗೌರಿ

ಕುವೆಂಪು - ಲಂಕಿಣಿ - ಗೌರಿ

ಒಂದು ನಾಡಿನ-ದೇಶದ ಕಲೆ, ಸಾಹಿತ್ಯ ಸಂಸ್ಕೃತಿಗಳನ್ನು ಆ ದೇಶದ ಮಕ್ಕಳಿಗೆ ಯುವಜನತೆಗೆ ಸರಿಯಾದ ರೀತಿಯಲ್ಲಿ ಪರಿಚಯ ಮಾಡಿಕೊಡದೆ ಅವರ ತಲೆಗೆ ಮತಧರ್ಮಗಳ ಲದ್ಧಿಯನ್ನು ತುಂಬಿದರೆ ಏನಾಗುತ್ತದೆ ಎಂಬುದಕ್ಕೆ ಈ ದೇಶದ ವರ್ತಮಾನ ಮತ್ತು ಭವಿಷ್ಯವನ್ನು ಹೆಗಲಮೇಲೆ ಹೊತ್ತುಕೊಂಡಿರುವ ಯುವ ಸಮುದಾಯದ ಒಂದು ಭಾಗ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭವನ್ನು ಸಂಭ್ರಮಾಚರಣೆಯನ್ನಾಗಿ ಸ್ವೀಕರಿಸುವಂತಹ ವಿಕೃತ ಮನಸ್ಥಿತಿಗೆ ಇಳಿದ ಘಟನೆ ಸೂಕ್ಷ್ಮವಾಗಿ ಸೂಚಿಸುತ್ತದೆ.

ಈ ಯುವಕರಲ್ಲಿ ಕೆಲವರು ಗೌರಿಯವರನ್ನು ಟೀಕಿಸುವ ಭರಾಟೆಯಲ್ಲಿ ಅವರನ್ನು `ಲಂಕಿಣಿ’ `ಲಂಕಿಣಿ’ ಎಂದು ಕರೆದು ಕುಣಿದು ಕುಪ್ಪಳಿಸಿದರು. (ಹೀಗೆ ಸಂಭ್ರಮಾಚರಣೆಯನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಆಚರಿಸಿದ ಒಬ್ಬಾತನನ್ನು ಪೋಲೀಸರು ಬಂಧಿಸಿದ್ದೂ ಈಗಾಗಲೇ ನಡೆದಿದೆ. ಆ ದಾರಿ ಒಂದು ಕಡೆ ಇರಲಿ) ಗೌರಿಯನ್ನು `ಲಂಕಿಣಿ’ ಎಂದು ಕರೆಯುವ ಮೂಲಕ ಅವರನ್ನು ತೆಗಳುತ್ತಿದ್ದೇವೆಯೋ ಹೊಗಳುತ್ತಿದ್ದೇವೆಯೋ ಎಂಬ ಪರಿಜ್ಞಾನವೂ ಇಲ್ಲದ ಖಾಲಿಕೊಡಗಳಾಗಿ ಈ ಯುವಕರು ವರ್ತಿಸಿದ್ದು ಮಾತ್ರ ದುಃಖದಲ್ಲೂ ತಮಾಸೆಯಾಗಿ ಕಾಣುವ ವ್ಯಂಗವಾಗಿತ್ತು!

ಗೌರಿ ಲಂಕೇಶ್ ಯಾರು ಏನು ಎಂಬುದನ್ನು ಇಂದು ಇಡೀ ಜಗತ್ತು ಹೇಳುತ್ತಿದೆ. ಅವರ ಹತ್ಯೆಗೆ ಹೊರದೇಶಗಳಿಂದ ಬಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನಾ ಪ್ರತಿಕ್ರಿಯೆ ನನಗೆ ಗೊತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಬೇರಾವ ಕನ್ನಡಿಗರಿಗೂ ಬಂದಂತಿಲ್ಲ. ಅವರ ಹತ್ಯೆಯನ್ನು ಖಂಡಿಸಿ ವಿಶ್ವಸಂಸ್ಥೆ ಖಂಡನಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪ್ರಪಂಚದ ಬೇರೆಬೇರೆ ರಾಷ್ಟ್ರಗಳ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಮಾಡುವ ಮೂಲಕ ಇದು ಜಾಗತಿಕ ಮಟ್ಟದ ಸುದ್ಧಿಯಾಯಿತು! ಆ ಮೂಲಕ ಭಾರತ ‘ಸಹಿಷ್ಣುತೆಯ ದೇಶ’ ಮತ್ತು ಅದರ ಭಾಗವಾದ ಕರ್ನಾಟಕ `ಸರ್ವಜನಾಂಗದ ಶಾಂತಿಯ ತೋಟ’ ಎಂಬಿತ್ಯಾದಿ ಭಾವನಾತ್ಮಕ ಹೇಳಿಕೆಗಳು ಮರುಪರಿಶೀಲನೆಗೆ ಒಳಪಡುವಂತಾಯಿತು ಕೂಡ. ಈ ಘಟನೆಯಿಂದಾಗಿ ರಾಜ್ಯದ ಮತ್ತು ಆ ಮೂಲಕ ದೇಶದ ಮರ್ಯಾದೆಯನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಹರಾಜು ಹಾಕಿದಂತಾಗಿದ್ದೂ ಸುಳ್ಳಲ್ಲ.

ಗೌರಿಯವರನ್ನು `ಅವಳು ಅಂಥವಳು’ `ಅವಳು ಇಂಥವಳು’ `ಅವಳು ನಕ್ಷಲೀಯಳು’ `ಅವಳು ಸೈನಿಕರನ್ನು ಅವಮಾನಿಸುತ್ತಿದ್ದಳು’ `ಅವಳು ರಾಷ್ಟ್ರದ್ರೋಹಿಯಾಗಿದ್ದಳು’ ಎಂಬಿತ್ಯಾದಿ ನಮ್ಮ ರಾಷ್ಟ್ರಭಕ್ತರ `ಭಜನೆ’ಗೆ ಜಾಗತಿಕ ಸಮುದಾಯ ಕಿವಿಗೊಡದೇ ಒಬ್ಬ ದಿಟ್ಟಪತ್ರಕರ್ತೆಗೆ, ವಿಚಾರವಾದಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿತು.

ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ಘನತೆಯನ್ನು ತಿಳಿದುಕೊಳ್ಳುವ ಯೋಗ್ಯತೆ ಅಥವಾ ಇಚ್ಚೆ `ಸಂಗ್ತಿಸವಾಸ’ದಿಂದಾಗಿ ಇವರಿಗೆಲ್ಲ ಇಲ್ಲದಿರಬಹುದು. ಅದು ಸಹಜ ಕೂಡ. ಆದರೆ ಮಾತೆತ್ತಿದರೆ ತಮ್ಮನ್ನು ಈ ದೇಶದ ಧರ್ಮ ಮತ್ತು ಸಂಸ್ಕೃತಿಗಳ ಅಧಿಕೃತ ವಾರಸುದಾರರು ಎಂದು ಬಿಂಬಿಸಿಕೊಳ್ಳುವ ಇವರ `ದೇಶಪ್ರೇಮಿ’ ಗುರುಗಳು ಇವರಿಗೆ ಕೊನೆಯ ಪಕ್ಷ, ತಾವು ಈ ದೇಶದ ಸಂಸ್ಕೃತಿಯ ಪ್ರತೀಕಗಳೆಂದು ಸಾರಲಾಗುತ್ತಿರುವ ರಾಮಾಯಣ, ಮಹಾಭಾರತ ಅವುಗಳ ಅಂಗಗಳಾದ ರಾಮ, ಸೀತೆ, ಅಯೋಧ್ಯೆ, ರಾವಣ, ಲಂಕೆ, ಲಂಕಿಣಿ, ಪಾಂಡವರು, ಕೌರವರು ಇಂತಹ ಸಂಗತಿಗಳಲ್ಲಿಯಾದರೂ ಒಂದು ಮಟ್ಟದ ಪಾಠವನ್ನೂ ಹೇಳಿಕೊಡದಿದ್ದರೆ ಹೇಗೆ?

ಇಂತಹ ದಾರಿತಪ್ಪಿಸುವ ಗುರುಗಳ ಸಹವಾಸ ಬಿಟ್ಟು ದಾರಿತೋರಿಸುವ ಗುರುಗಳಾದ ಸಾಹಿತಿ-ಸಂಸ್ಕೃತಿ ಚಿಂತಕರ ಕಡೆ ಬಂದು ನಿಮ್ಮ ವ್ಯಕ್ತಿತ್ವವನ್ನು ಪೂರ್ಣಪ್ರಮಾಣದಲ್ಲಿ ಬೆಳಸಿಕೊಳ್ಳಿ ಎಂದು ಈ ದಾರಿಬಿಡುತ್ತಿರುವ ಯುವಜನತೆಗೆ ಪ್ರೀತಿಪೂರ್ವಕ ವಿನಂತಿ ಮಾಡಿಕೊಳ್ಳುತ್ತಾ ಲಂಕಿಣಿ ಯಾರು ಎಂಬುದನ್ನು ನಮ್ಮ ಕನ್ನಡ ಸಂಸ್ಕೃತಿ ಕಂಡ ಬಗೆಯ ಒಂದು ಉದಾಹರಣೆಯನ್ನು ಕೊಡುತ್ತೇನೆ ಗಮನಿಸಿ:

ಕನ್ನಡದ ಮಹಾಕವಿ ಕುವೆಂಪು ಅವರು ತಮ್ಮ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕೊಡುವ ಲಂಕಿಣಿಯ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಾಡಿನ ಮಧ್ಯೆ ಹೆಂಡತಿಯನ್ನು ಕಳೆದುಕೊಂಡ ರಾಮ ಅಕ್ಷರಶಃ ಅಲೆಮಾರಿ ಗಾಯಕನಾಗಿಬಿಡುತ್ತಾನೆ. ದೇವರ ಅವತಾರ ಎಂದು ನಾವೆಲ್ಲ ತಿಳಿದುಕೊಂಡಿರುವ ಈ ರಾಮ ಬುದ್ಧಿಸ್ಥಿಮಿತ ಕಳೆದುಕೊಂಡ ಸಾಮಾನ್ಯ ಮನುಷ್ಯನಂತೆ (ಮರಗಿಡಗಳನ್ನೆಲ್ಲ ನನ್ನ ಹೆಂಡತಿಯನ್ನು ಕಂಡಿರಾ ಕಂಡಿರಾ ಹೇಳಿರಿ ಹೇಳಿರಿ ಎಂದು ಕೇಳುತ್ತಾ) ಅಲೆದಾಡುವ ಸಂದರ್ಭ ನಿರ್ಮಾಣವಾಗಿ ಈ ದೇವಮಾನವ ಕಳೆದುಹೋದ ತನ್ನ ಸ್ವಂತ ಹೆಂಡತಿಯನ್ನೂ ಸ್ವಶಕ್ತಿಯಿಂದ ಹುಡುಕಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿಬಿಡುತ್ತಾನೆ!

ಕೊನೆಗೆ ಮನುಷ್ಯರಿಗಿಂತ ಅಂತಸ್ತಿನಲ್ಲಿ ಒಂದು ಹೆಜ್ಜೆ ಕೆಳಗೆ ಎಂದು ಗುರುತಿಸಲ್ಪಟ್ಟಿದ್ದ ಸುಗ್ರೀವನ ಸಹಾಯವನ್ನು ಅವನು ಪಡೆಯುವಂತಾಗಿಬಿಡುತ್ತದೆ! ಕಂಗಾಲಾಗಿ ಅಂಗಲಾಚುವ ಸ್ಥಿತಿಯಲ್ಲಿದ್ದ ರಾಮಲಕ್ಷ್ಮಣರಿಗೆ ಈ ಸುಗ್ರೀವಸಖ್ಯದಿಂದಾಗಿಯೇ ಸೀತೆಯನ್ನು ಹುಡುಕಲು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಈ ಯೋಜನೆಯ ಪ್ರಕಾರ ಲಂಕೆಗೆ ಹೋದ ಹನುಮಂತನಿಗೆ ಲಂಕೆಯ ಪ್ರವೇಶದ್ವಾರದಲ್ಲಿ ಮೊದಲಿಗೆ ಸಿಗುವವಳೇ ಈ ಲಂಕಿಣಿ. ಅವಳು ತನ್ನನ್ನು ‘ದಶಶಿರ ಕಲಕಲಕ್ಷ್ಮಿ, ಲಂಕಾದೇವಿ, ಲಂಕಿಣಿಯೆನಾಂ’ ಎಂದು ಹನುಮಂತನಿಗೆ ಪರಿಚಯಿಸಿಕೊಳ್ಳುತ್ತಾಳೆ. ಅವಳು ಇಡೀ ಲಂಕಾ ಸಾಮ್ರಾಜ್ಯವನ್ನು ರಕ್ಷಿಸುವ ಲಂಕೆಯ ಅಧಿದೇವತೆ! ವೈರಿಪಾಳೆಯದಿಂದ ಬಂದ ಹನುಮಂತನನ್ನು ಆರಂಭದಲ್ಲಿ ಒಳಗೆ ಬಿಡಲು ಒಪ್ಪದ ಇವಳು ನಂತರ ಹನುಮಂತನ ಜೊತೆ ದೀರ್ಘಚರ್ಚೆಮಾಡಿ ಸಾವಧಾನದಿಂದ ಅವನ ಮಾತುಗಳನ್ನು ಆಲಿಸಿ ಅವನು ಬಂದ ಸದುದ್ದೇಶವನ್ನು ತಿಳಿದುಕೊಳ್ಳುತ್ತಾಳೆ.

ಕಾಡಿನಿಂದಲೇ ಬಂದಿದ್ದ ಸ್ವತಃ ಕಾಡುಮನುಷ್ಯನೇ ಆಗಿದ್ದ (ನಮ್ಮಲ್ಲಿ `ಹಳ್ಳಿಗಮಾರ’ ಅನ್ನುವ ನಿಂದನಾಪದ ಇದೆಯಲ್ಲ! ) ಹನುಮಂತ ಆಧುನಿಕತೆಯ ಅವತಾರವಾಗಿರುವ ಭವ್ಯನಗರವಾದ ಲಂಕೆಯ ವೈಭವವನ್ನು ಕಂಡು ಕೀಳರಿಮೆಯಿಂದ ಕುಗ್ಗಿಹೋಗುತ್ತಾನೆ. ಹಳ್ಳಿಯಿಂದ ಹೊಸದಾಗಿ ನಗರಕ್ಕೆ ಹೋದ ವ್ಯಕ್ತಿಯೊಬ್ಬ ಅಲ್ಲಿನ ನಯನಾಜೂಕುಗಳಿಗೆ ಹೊಂದಿಕೊಳ್ಳಲಾಗದೆ ಅನುಭವಿಸುವ ಹಿಂಸೆ ಕೀಳರಿಮೆಗಳನ್ನೆಲ್ಲ ಈ ಹನುಮಂತ ಅನುಭವಿಸುತ್ತಾನೆ.

ಆದರೆ ಬಹುಚಾಣಾಕ್ಷಮತಿಯಾದ ಲಂಕಿಣಿ ಅವನ `ಹಳ್ಳಿತನ’ದಲ್ಲಿರುವ `ಒಳ್ಳೆಯತನ’ವನ್ನು ಸೂಕ್ಷ್ಮವಾಗಿ ಗುರುತಿಸುತ್ತಾಳೆ. ಒಂದು ಹಂತದಲ್ಲಿ ಹನುಮಂತನೇ ಅವಳಿಗೆ, `ಮನ್ನಿಸೆನ್ನೊರಟುತನಮಂ’ ಎಂದು ಕ್ಷಮೆ ಕೇಳಿ ದೊಡ್ಡವನಾಗುತ್ತಾನೆ. ಆದರೆ ಒಳ್ಳೆಯತನ ತೋರಿಸುವಲ್ಲಿ ಅವನಿಗೂ ಒಂದು ಹೆಜ್ಜೆ ಮುಂದೆ ಹೋಗುವ ಈ ಲಂಕಿಣಿ, `ಸೋಲೊಪ್ಪಿದೆನ್! ನಿನಗೆ ವಶಳಾದೆನ್’ ಎಂದು ಹೇಳುವ ಮೂಲಕ ಅವನಿಗಿಂತಲೂ ದೊಡ್ಡವಳಾಗಿಬಿಡುತ್ತಾಳೆ! ಹನುಮಂತನ ಹೇಳಿಕೆ ಮತ್ತು ರಾವಣನ ಕಾರ್ಯ ಎರಡನ್ನೂ ಕೂಲಂಕಷವಾಗಿ ವಿಚಾರಿಸಿನೋಡಿ ಕೊನೆಗೆ ಈ ಹನುಮಂತನನ್ನು ಲಂಕೆಯ ಒಳಗೆ ಹೋಗಲು ಬಿಟ್ಟುಬಿಡುತ್ತಾಳೆ!!

ಲಂಕೆಯನ್ನು ಕಾಯಲು ಇದ್ದ ಲಂಕಿಣಿ ಹೀಗೆ ವೈರಿ ಪಾಳೆಯದಿಂದ ಬಂದ ಹನುಮಂತನನ್ನು ಲಂಕೆಯ ಒಳಗೆ ಬಿಟ್ಟದ್ದು ಅವಳ ಕರ್ತವ್ಯಲೋಪ ಆದಂತಾಗಲಿಲ್ಲವೇ ಎಂದು ಅವಳ ನಿರ್ಧಾರದಿಂದ ನಮಗೆ ಅನ್ನಿಸಬಹುದು. ಅವಳಿಗೂ ಈ ಪ್ರಶ್ನೆ ಆರಂಭದಲ್ಲಿ ಕಾಡುತ್ತದೆ. ಆಗ ಅವಳ ಮುಂದೆ ಎರಡು ಆಯ್ಕೆಗಳಿದ್ದವು. ಒಂದು: ಹನುಮಂತನಿಗೆ ಲಂಕಾಪ್ರವೇಶಕ್ಕೆ ಅನುಮತಿ ಕೊಡುವುದು. ಇನ್ನೊಂದು ಅವನಿಗೆ ಪ್ರವೇಶ ನಿರಾಕರಿಸುವುದು: ಮೊದಲ ಆಯ್ಕೆಯನ್ನು ಅವಳು ಮಾಡಿಕೊಂಡು ಅವನನ್ನು ಒಳಗೆ ಬಿಟ್ಟರೆ ನ್ಯಾಯಕ್ಕೆ ಬೆಂಬಲಕೊಟ್ಟಂತಾಗುತ್ತದೆ ನಿಜ; ಆದರೆ ಅದು ತನ್ನೊಡೆಯನಾದ ಲಂಕೇಶ ರಾವಣನಿಗೆ ದ್ರೋಹಬಗೆದಂತಾಗುತ್ತದೆ! ಎರಡನೆಯದನ್ನು ಆಯ್ದುಕೊಂಡು ಅವನಿಗೆ ಲಂಕಾಪ್ರವೇಶವನ್ನು ನಿರಾಕರಿಸಿದರೆ ತನ್ನೊಡೆಯ ರಾವಣನಿಗೆ `ಸ್ವಾಮಿನಿಷ್ಠೆ’ ತೋರಿಸಿದಂತಾಗುತ್ತದೆ ನಿಜ; ಆದರೆ ಅದು ಅನ್ಯಾಯಕ್ಕೆ ಬೆಂಬಲವನ್ನು ಕೊಟ್ಟಂತಾಗುತ್ತದೆ. ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಬಗ್ಗೆ ಅವಳು ತೀವ್ರ ಗೊಂದಲಕ್ಕೆ ಬೀಳುತ್ತಾಳೆ. `ನನ್ನವಳಿಯಲ್ ಅತ್ತಲುಮ್ ಇತ್ತಲುಮ್ ಕತ್ತರಿಪುದಿರ್ಬಾಯ ಖಡ್ಗದೋಲ್’ ಎನ್ನುವ ಅವಳು ಮಾತು ಎರಡು ಅಲಗಿನ ಕತ್ತಿಗೆ ಸಿಕ್ಕು ಒದ್ದಾಡುವ ಅವಳ ಮನಸ್ಸುನ್ನು ಬಿಂಬಿಸುತ್ತದೆ.

ಹೀಗಿದ್ದೂ ಅವಳು ಅಂತಿಮವಾಗಿ ಆಯ್ಕೆಮಾಡಿಕೊಳ್ಳುವುದು ಹನುಮಂತನನ್ನು ಒಳಗೆ ಬಿಡುವ ಮೊದಲನೇ ಆಯ್ಕೆಯನ್ನೇ! ಇಲ್ಲಿ ಸಮಸ್ಯೆಯನ್ನು ಮೇಲ್ನೋಟದಲ್ಲಿ ಅಲ್ಲದೆ ಅಮೂಲಾಗ್ರವಾಗಿ ಗ್ರಹಿಸಿ ಅದರ ನಿವಾರಣೆ ಹೇಗೆ ಮಾಡಬಹುದೆಂದು ತೀರ್ಮಾನಿಸಿಯೇ ವೈರಿಪಾಳೆಯದ ಹನುಮಂತನನ್ನು ಒಳಗೆ ಬಿಡುವ ನಿರ್ಧಾರಕ್ಕೆ ಅವಳು ಬರುತ್ತಾಳೆ. ಆ ಮೂಲಕ ಬಹಳ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷೆಯಾಗಿ ನಮಗೆ ತೋರುತ್ತಾಳೆ. ಅವಳು ಯಾವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಳು ಎಂಬುದನ್ನು ಅವಳು ಹನುಮಂತನಿಗೆ ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ: ‘ಸೀತಾನ್ವೇಷಣಂ ನಿನಗೆ; ನನಗದಂ ಕೂಡಿ, ಲಂಕಾಕ್ಷೇಮ ಚಿಂತನಂ’

ಗಮನಿಸಿ: ಹನುಮಂತ `ನನಗೆ ಸೀತೆಯನ್ನು ಹುಡುಕುವುದು ಚಿಂತೆ’ ಎಂದಾಗ ಸಾಮಾನ್ಯ ಹೆಣ್ಣಾಗಿದ್ದರೆ ಅವಳು `ನನಗೆ ಲಂಕೆಯನ್ನು ಕಾಯುವುದು ಚಿಂತೆ’ ಎಂದು ಹೇಳಿಬಿಡುತ್ತಿದ್ದಳು. ಅವಳು ಹಾಗೆ ಹೇಳದೆ `ಸೀತೆಯ ಕ್ಷೇಮ ಮತ್ತು ಲಂಕೆಯ ಕ್ಷೇಮ ಎರಡನ್ನೂ ಮಾಡುವುದು ಹೇಗೆ ಎಂಬುದು ನನ್ನ ಚಿಂತನೆ’ ಎಂಬ ಅದ್ಭುತವಾದ ಮಾತನ್ನು ಹೇಳುತ್ತಾಳೆ. ಅವಳ ನಿರ್ಧಾರದಿಂದ ಆಗಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪುತ್ತದೆ.

`ಮಾತುಕತೆಯ ಮೂಲಕ ಅಂದರೆ ಚರ್ಚೆಯ ಮೂಲಕ ಎಂತಹ ಸಮಸ್ಯೆಯನ್ನಾದರೂ ನಾವು ಬಗೆಹರಿಸಿಕೊಳ್ಳಬಹುದು’ `ವೈರಿಗಳಲ್ಲಿಯೂ ಇರುವ ಒಳ್ಳೆಯತನವನ್ನು ನಾವು ಗೌರವಿಸಬೇಕು’ ಎನ್ನುವ ಎರಡು ಮುಖ್ಯ ತತ್ವಗಳನ್ನು ಪ್ರತಿಪಾದಿಸುವ ಲಂಕಿಣಿ ಇವುಗಳ ಜೊತೆಗೆ ಇವೆರಡಕ್ಕೂ ಮುಖ್ಯವಾದ ಇನ್ನೊಂದು ಮಹತ್ವದ ತತ್ವವನ್ನು ಪ್ರತಿಪಾದಿಸುತ್ತಾಳೆ. ಅದೆಂದರೆ `ನಾವು ಕೇವಲ ನಮ್ಮವರ ಯೋಗಕ್ಷೇಮವನ್ನಲ್ಲ ನಮ್ಮ ವೈರಿಗಳ ಯೋಗಕ್ಷೇಮವನ್ನೂ ಬಯಸುವ ಮೂಲಕ ಇಡೀ ನಾಡಿನ ಯೋಗಕ್ಷೇಮವನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು’

ವೈರಿಗಳ ಯೋಗಕ್ಷೇಮವನ್ನೂ, ಇಡೀ ನಾಡಿನ ಯೋಗಕ್ಷೇಮವನ್ನೂ ಬಯಸಿದ ಕುಶಲಮತಿ ಮತ್ತು ವಿಶಾಲಮತಿ ಎರಡೂ ಆದ `ಲಂಕಿಣಿ’ಗೆ ನಮ್ಮ ಗೌರಿಯನ್ನು ಹೋಲಿಸಿ ಟೀಕಿಸುತ್ತಿದ್ದಾರೆ ನಮ್ಮ ಈ ಯುವಕರು! ಬಹುಶಃ ಗೌರಿ ಅವರಂತಹ ವಿಶಿಷ್ಟವೂ ಸಂಕೀರ್ಣವೂ ಆದ ವ್ಯಕ್ತಿತ್ವಗಳಿಗೆ ಮಾತ್ರ ಹೀಗೆ `ಬುದ್ಧಿಜೀವಿ’ಗಳಿಂದ ಪ್ರಜ್ಞಾಪೂರ್ವಕವಾಗಿ ಮತ್ತು `ಬುದ್ಧಿಗೇಡಿ’ಗಳಿಂದ ಅಪ್ರಜ್ಞಾಪೂರ್ವಕವಾಗಿ ಒಟ್ಟಿನಲ್ಲಿ ಎರಡೂ ವರ್ಗಗಳಿಂದಲೂ ಗೌರವಪಡೆಯಲು ಸಾಧ್ಯವೇನೋ!!

ಡಾ, ರಾಜೇಂದ್ರ ಬುರಡಿಕಟ್ಟಿ
15-09- 2017

Thursday, September 7, 2017

ಗೌರಿ ಲಂಕೇಶ್ : ಯೌವನದ ಹೊಳೆಯಲ್ಲಿ - ಪ್ರೀತಿಯ ಸುಳಿಯಲ್ಲಿ, ಮದುವೆಯ ಬಲೆಯಲ್ಲಿ – ಉದ್ಯೋಗದ ನೆಲೆಯಲ್ಲಿ




·         ಪಿ.ಯು.ಸಿ.ಯಲ್ಲಿ ಓದುತ್ತಿದ್ದ ನಮ್ಮ ಮಗಳು ಗೌರಿ ಯಾರೋ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಅಂತ ನನ್ನ ಸ್ನೇಹಿತೆ ರಾಣಿ ನನಗೆ ಹೇಳಿದಳು. ಕಾಲೇಜಿನಲ್ಲಿ ಗೌರಿಗಿಂತ ಎರಡು ವರ್ಷ ಸೀನಿಯರ್ ಆಗಿದ್ದ ಅವನ ಹೆಸರು ಚಿದಾನಂದ ರಾಜಘಟ್ಟ. ಒಮ್ಮೆ ಆತ ಗಾಂಧಿಬಜಾರ್ ನಲ್ಲಿರುವ ಗಣೇಶ ಬೇಕರಿಗೆ ಬಂದಿದ್ದಾಗ ಗೌರಿ ಆತನನ್ನು ಪರಿಚಯಿಸಿದ್ದಳು. ಆತ ಕಪ್ಪಗೆ, ಸಣ್ಣಗೆ, ಎತ್ತರಕ್ಕೆ ಇದ್ದ. ನವಿಲಿನಂತಿದ್ದ ನನ್ನ ಮಗಳು ಕೆಂಬೂತದಂತಿರುವ ಈತನನ್ನು ಹೇಗೆ ಇಷ್ಟಪಟ್ಟಳು ಎಂದು ನನಗೆ ಅಚ್ಚರಿ ಆಯಿತು.

·         ಅದೂ ಅಲ್ಲದೆ ಆಗ ಅವರಿಬ್ಬರೂ ಇನ್ನೂ ಚಿಕ್ಕ ವಯಸ್ಸಿನವರು. ನೆಟ್ಟಗೆ ಓದಬೇಕಾದ ವಯಸ್ಸು. ಇದರ ಬಗ್ಗೆ ಲಂಕೇಶರಿಗೆ ಹೇಳಿದೆ. ಅವರು “ಆ ಹುಡುಗನನ್ನು ಕರೆಸು, ನಾನು ಅವನೊಂದಿಗೆ ಮಾತನಾಡುತ್ತೇನೆ” ಅಂದರು. ಆತ ಮನೆಗೆ ಬಂದಾಗ ಅವನಿಗೆ ಬುದ್ಧಿಹೇಳಿದರು. ವಿದ್ಯಾಭ್ಯಾಸ ಮುಖ್ಯ ಎಂದೆಲ್ಲ ವಿವರಿಸಿದರು. ಅವನು ಸುಮ್ಮನೆ ಕೇಳಿಸಿಕೊಂಡು ಕೂತಿದ್ದು ಹೋದ. ಗೌರಿ ಕೂಡ ಇನ್ನು ಮುಂದೆ ಅವನನ್ನು ಮೀಟ್ ಮಾಡುವುದಿಲ್ಲ, ಓದಿನ ಕಡೆ ಗಮನ ಕೊಡುತ್ತೇನೆ ಅಂದಳು. ಆಗ ನಾನು ಸುಮ್ಮನಾದೆ. ಒಂದು ವರ್ಷದ ನಂತರ ಗೌರಿ ಕಾಲೇಜಿಗೆ ಚಕ್ಕರ್ ಹೊಡೆದು ಚಿದಾನಂದನೊಂದಿಗೆ ಯಾವುದೋ ಸಿನಿಮಾಕ್ಕೆ ಹೋಗಿದ್ದಾಗ ಮತ್ತೆ ಅದೇ ರಾಣಿ ಕೈಯಲ್ಲಿ ಸಿಕ್ಕಿಹಾಕಿಕೊಂಡಳು.

·         ಈ ಮಧ್ಯೆ ಗೌರಿಗೆ ಇಬ್ಬರು ಡಾಕ್ಟರ್ ವರಗಳಿಂದ ಪ್ರಪೋಸಲ್ ಬಂದವು. ಇಬ್ಬರೂ ನಮ್ಮ ಪರಿಚಿತರೇ. ಒಬ್ಬ ಇದ್ದಕ್ಕಿದ್ದಂತೆ ಹೇಳದೆ ಕೇಳದೆ ನಮ್ಮ ಮನೆಗೆ ಬಂದೇಬಿಟ್ಟ. ಗೌರಿ ತನ್ನ ರೂಮಿನ ಬಾಗಿಲು ಹಾಕಿಕೊಂಡು ಕೂತವಳು ಆತನನ್ನು ನೋಡಲು ಹೊರಗೆ ಬರಲೇ ಇಲ್ಲ. ಅದಾದ ಕೆಲವು ದಿನಗಳ ನಂತರ ಅವಳು ಯಾರಿಗೂ ಹೇಳದೇ ಕೇಳದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಸೊಂಟದ ತನಕ ಇದ್ದ ತನ್ನ ತಲೆಕೂದಲನ್ನು ಕತ್ತರಿಸಿ ಬಾಬ್ ಕಟ್ ಮಾಡಿಸಿಕೊಂಡು ಬಂದಳು. ಅವಳ ಪ್ರಕಾರ ಆ ಹುಡುಗನ ಮನೆಯವರು ಸಂಪ್ರದಾಯಸ್ಥರಾಗಿದ್ದರಿಂದ ಬಾಬ್ ಕಟ್ ಹುಡುಗಿಯನ್ನು ಒಪ್ಪುವುದಿಲ್ಲ ಎಂದಾಗಿತ್ತು. ಅದ ಸರಿಯೂ ಆಯಿತು. ಆಕೆಯ ಹೊಸ ಅವತಾರವನ್ನು ನೋಡಿದ ನನ್ನ ತಮ್ಮ ಶಿವು ಗೌರಿಗೆ ಎರಡು ಬಿಗಿದ. ಆಕೆ ಸುಮ್ಮನೇ ಕೂತಿದ್ದಳು.

·         ಇನ್ನೊಬ್ಬ ಡಾಕ್ಟರ್ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದ. ಅವನೂ ಒಂದು ದಿನ ತನ್ನ ತಂದೆಯೊಂದಿಗೆ ನಮ್ಮ ಮನೆಗೆ ಬಂದ. ಗೌರಿಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆಕೆ ಮನೆಯಲ್ಲಿ ತೊಟ್ಟಿದ್ದ ಬಟ್ಟೆಯಲ್ಲೇ ಅವರ ಮುಂದೆ ಕೂತಳು. ಹುಡುಗ ಸ್ವಲ್ಪ ಕುಳ್ಳ. ಹೊಟ್ಟೆ ಕೂಡ ಇತ್ತು. ಆತ ಹೋದ ನಂತರ “ಹುಡುಗಿ ಏನಂದಳು” ಎಂದು ಎರಡು ಪತ್ರ ಬರೆದ. ಗೌರಿ ಸುತಾರಾಂ ಒಪ್ಪಲಿಲ್ಲ.

·         “ನನಗೆ ಈಗಲೇ ಮದುವೆ ಬೇಡ. ನಾನು ಓದುತ್ತೇನೆ” ಎಂದು ಗೌರಿ ಹಟಹಿಡಿದಳು. ಆಗ ಲಂಕೇಶರು ತಮ್ಮ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ ತೊಡಗಿದ್ದರಿಂದ ಇದೆಲ್ಲದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ “ಅಮ್ಮನಿಗೆ ಬೇಜಾರಾಗದಂತೆ ನಡೆದುಕೋ” ಎಂದಷ್ಟೇ ತಮ್ಮ ಮಗಳಿಗೆ ಹೇಳಿ ಶೂಟಿಂಗ್ ಜಾಗದಿಂದಲೇ ಪತ್ರ ಬರೆದಿದ್ದರು.

·         ನನಗೂ ನನ್ನ ಮಕ್ಕಳು ಚೆನ್ನಾಗಿ ಓದಬೇಕು, ಅವರೆಲ್ಲ ಡಾಕ್ಟ್ರರ್, ಇಂಜಿನಿಯರ್ ಆಗಬೇಕಂತ ಆಸೆ. ನಮ್ಮ ಮಕ್ಕಳು ಯಾರೂ ರಾಂಕ್ ಸ್ಟುಡೆಂಟ್ಸ್ ಅಲ್ಲ. ಆದರೆ ಬುದ್ಧಿವಂತರು. ಯಾರೂ ಹಗಲು ರಾತ್ರಿ ಓದುತ್ತಿರಲಿಲ್ಲ. ಆದರೂ ಒಳ್ಳೆಯ ಮಾರ್ಕ್ಸ್ ಅನ್ನು ಪಡೆಯುತ್ತಿದ್ದರು. ಅಜಿತ್ (ಇಂದಿನ ಇಂದ್ರಜಿತ್ ಲಂಕೇಶ್) ಅಂತೂ ಬರೀ ಕ್ರಿಕೆಟ್ ನಲ್ಲೇ ಕಾಲ ಕಳೆಯುತ್ತಿದ್ದ. ಆದರೂ ಎಸ್.ಎಸ್.ಎಲ್.ಸಿನಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ.

·         ನಾವಿನ್ನೂ ಗಾಂಧಿಬಜಾರಿನ ಮನೆಯಲ್ಲಿ ಇದ್ದಾಗಲೇ ನಮ್ಮ ದೊಡ್ಡ ಮಗಳು ಗೌರಿ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯ ಆಗತಾನೆ ಪ್ರಾರಂಭಿಸಿದ್ದ ಬಿಎ ಪತ್ರಿಕೋದ್ಯಮ ಕೋರ್ಸ್ ಸೇರಿದಳು. ಅದೇ ಹೊತ್ತಿಗೆ ಚಿದಾನಂದ ರಾಜಘಟ್ಟ ಕೂಡ ಡಿಗ್ರಿ ಮುಗಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಸೇರಿದ್ದ. ಅವರಿಬ್ಬರ ಸ್ನೇಹ ಮುಂದುವರೆದಿತ್ತು. ಗೌರಿ ಮತ್ತು ಚಿದು ಒಬ್ಬರನ್ನೊಬ್ಬರು ಬಿಟ್ಟು ಇರುವುದಿಲ್ಲ ಎಂದು ನನಗೆ ಖಾತರಿ ಆಗಿ ಅದರ ಬಗ್ಗೆ ಚಕಾರವೆತ್ತದೆ ಸುಮ್ಮನಾದೆ.

·         ಚಿದು ನಮ್ಮ ಮನೆಯವರಿಗೆ ಹತ್ತಿರವಾದ. ಟೆನ್ನಿಸ್ ಅಥವಾ ಕ್ರಿಕೆಟ್ ಟೆಸ್ಟ್ ಮ್ಯಾಚ್ಗಳಿದ್ದರಂತೂ ಲಂಕೇಶರು, ಅಜಿತು ಮತ್ತು ಚಿದು ದಿನಗಟ್ಟಲೆ ಆಗಿನ ಬ್ಲಾಕ್ ಆಂಡ್ ವೈಟ್ ಟಿವಿ ಮುಂದೆ ಕೂತು ಆಟವನ್ನು ನೋಡುತ್ತಿದ್ದರು.

·         ಡಿಗ್ರಿ ಮುಗಿಸಿದ ನಂತರ ಗೌರಿ ದೆಹಲಿಯಲ್ಲಿರುವ ಐಐಎಂಸಿ ಎಂಬ ಸಂಸ್ಥೆಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದಲು ಒಬ್ಬಳೇ ಹೋದಳು. ನಮ್ಮ ಮಗುವೊಂದು ಪ್ರಥಮ ಬಾರಿಗೆ ಮನೆ ಬಿಟ್ಟು ಅಷ್ಟು ದೂರ, ಅಷ್ಟು ದಿನ ಒಬ್ಬಳೇ ಹೋದದ್ದು ಅದೇ ಮೊದಲು. ಆಕೆಯನ್ನು ಬೆಂಗಳೂರಿನ ನಿಲ್ದಾಣದಲ್ಲಿ ಟ್ರೈನ್ ಹತ್ತಿಸಿದಾಗ ನನ್ನ ಕಣ್ಣಲ್ಲಿ ಸಹಜವಾಗಿಯೇ ಕಣ್ಣೀರು.

·         ಲಂಕೇಶರಿಗೂ ಒಂದು ತರಹದ ಆತಂಕ. ಗೌರಿ ಮನೆಯಲ್ಲಿದ್ದಾಗ ಆಕೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದಿದ್ದ ಅವರು ಆಕೆ ದೆಹಲಿಯಲ್ಲಿದ್ದಾಗ ಪ್ರತಿದಿನ ಟಿವಿಯಲ್ಲಿ ನ್ಯೂಸ್ ನೋಡುವಾಗ ದೆಹಲಿಯ ಹವಾಮಾನ ಹೇಗಿದೆ ಎಂದು ವಿಶೇಷವಾಗಿ ಗಮನವಿಟ್ಟು ನೋಡುತ್ತಿದ್ದರು; ತಮ್ಮ ಮಗಳು ದೆಹಲಿಯ ಶೆಖೆಯಿಂದಲೋ, ಚಳಿಯಿಂದಲೋ ಕಷ್ಟ ಅನುಭವಿಸುವುದು ಬೇಡ ಎಂಬ ಕಾಳಜಿಯಿಂದ. ಆಕೆ ದೆಹಲಿಯಲ್ಲಿದ್ದಾಗ ಚಿದಾನಂದ ಬೆಂಗಳೂರಿನಲ್ಲಿ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಾಗಿದ್ದ.

·         ನಾನು ಬಯಸಿದಂತೆ ನನ್ನ ಮೊದಲ ಮಗಳು ಡಾಕ್ಟರೂ ಆಗಲಿಲ್ಲ, ಇಂಜನಿಯರ್ ಕೂಡ ಆಗಲಿಲ್ಲ. ಬದಲಾಗಿ ಆಕೆ ಇಂಗ್ಲಿಷ್ ಪತ್ರಿಕೋದ್ಯಮ ಸೇರುವುದು ಗ್ಯಾರಂಟಿ ಆಗಿತ್ತು.

·         ದೆಹಲಿಯಲ್ಲಿ ಕೋರ್ಸ್ ಮುಗಿಸಿಕೊಂಡು ಒಂದು ವರ್ಷದ ನಂತರ ಬೆಂಗಳೂರಿಗೆ ವಾಪಸ್ ಬಂದ ಗೌರಿ ಆಗತಾನೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಳು. ಚಿದಾನಂದ ಕೂಡ ಪತ್ರಿಕೋಧ್ಯಮದಲ್ಲಿ ಹೆಸರು ಗಳಿಸಲಾರಂಭಿಸಿದ್ದ. “ಇನ್ನು ನೀವಿಬ್ಬರೂ ಹೀಗೆ ಓಡಾಡಿದ್ದು ಸಾಕು. ಮದುವೆ ಮಾಡಿಕೊಳ್ಳಿ. ಇಲ್ಲವೆಂದರೆ ಒಟ್ಟಿಗೆ ಓಡಾಡುವುದನ್ನು ನಿಲ್ಲಿಸಿ” ಎಂದು ನಾನು ಹಟ ಮಾಡಿದೆ. ಹೇಗಿದ್ದರೂ ನನ್ನ ಮಗಳು ಓದಿದ್ದಾಳೆ, ಈಗ ಕೆಲಸ ಪಡೆದು ತನ್ನ ಕಾಲ ಮೇಲೆ ನಿಂತಿದ್ದಾಳೆ ಎಂಬ ವಿಶ್ವಾಸ ನನಗೆ ಬಂದಿತ್ತು.

·         ಒಂದು ದಿನ ಲಂಕೇಶರು ನಮ್ಮನ್ನೆಲ್ಲ ಎಂಜಿ ರಸ್ತೆಯಲ್ಲಿರುವ ಹೋಟೆಲ್ಲಿಗೆ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾಗ ಗೌರಿ “ನಾನು ಮತ್ತು ಚಿದು ಮುಂದಿನ ತಿಂಗಳು ಮದುವೆ ಆಗುತ್ತೇವೆ. ನಮ್ಮಿಬ್ಬರ ಹೆಸರುಗಳನ್ನು ರಿಜಿಸ್ಟ್ರಾರ್ ಆಫೀಸಿನಲ್ಲಿ ನಮೂದಿಸಿ ಬಂದಿದ್ದೇವೆ” ಎಂದಳು. ಅದನ್ನು ಕೇಳಿ “ಇದೆಂತಹ ಮದುವೆ?” ಎಂದೆ ನಾನು. ಆದರೆ ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಂತೋಷವಾಯಿತು. ಯಾಕೆಂದರೆ ಗೌರಿ ಯಾವ ಸಂಪ್ರದಾಯ ಇತ್ಯಾದಿಗಳಿಲ್ಲದೆ ಸರಳವಾಗಿ ರಿಜಿಸ್ಟರ್ ಮದುವೆಯಾಗಲು ನಿಶ್ಚಯಿಸಿದ್ದಳು. ಆಕೆ “ನನ್ನ ಮದುವೆಗೆ ಖರ್ಚಾಗುವುದು ಕೇವಲ ಹಿನೈದು ರೂಪಾಯಿ ಐವತ್ತು ಪೈಸೆ” ಎಂದಾಗ ಲಂಕೇಶರು ಹೆಮ್ಮೆಯಿಂದ ನಕ್ಕಿದ್ದರು. ಯಾಕೆಂದರೆ ಅವರೂ ಇಂತಹ ಸರಳ ಮದುವೆಗಳಲ್ಲಿ ನಂಬಿಕೆ ಇಟ್ಟಿದ್ದವರು ಮತ್ತು ಪ್ರೋತ್ಸಾಹಿಸುತ್ತಿದ್ದವರು.

·         ಒಂದು ದಿನ ಆಫೀಸಿನಿಂದ ಮನೆಗೆ ಬಂದ ಗೌರಿ “ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಆಗುತ್ತಿದ್ದೇನೆ” ಎಂದಳು. ಆಕೆಯ ಅಪ್ಪ ಇನ್ನೂ ಆಫೀಸಿನಿಂದ ಬಂದಿರಲಿಲ್ಲವಾದ್ದರಿಂದ ಅವರ ಆಫೀಸಿಗೆ ಫೋನ್ ಮಾಡಿ ತನ್ನ ಅಪ್ಪನಿಗೆ ಹೇಳಿದಳು.

·         ಮಾರನೆಯ ದಿನ ಅಂಗಡಿಯನ್ನು ತೆರೆದ ನಂತರ, ಅದರ ಜವಾಬ್ದಾರಿಯನ್ನು ಶಾಂತಾಳಿಗೆ ವಹಿಸಿ ಲಂಕೇಶರೊಂದಿಗೆ ನಾನು ರಿಜಿಸ್ಟ್ರಾರ್ ಆಫೀಸಿಗೆ ಹೋದೆ. ಅಲ್ಲಿಗೆ ಗೌರಿ ಮತ್ತು ಚಿದು ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಚಿದು ತಂದೆ ಡಾ. ರಾಜಣ್ಣ ಮತ್ತು ತಾಯಿ ಉಮಾ ಕೂಡ ಬಂದರು. ಅವರಿಬ್ಬರಿಗೆ ಈ ಕಾನೂನು ಮದುವೆ ಒಂದಿಷ್ಟೂ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ನಮ್ಮ ಮಗಳಂತೆ ಚಿದು ತನ್ನ ಹೆತ್ತವರಿಗೆ ಮದುವೆ ಆಗುತ್ತಿರುವ ಬಗ್ಗೆ ಮುಂಚಿತವಾಗಿ ಹೇಳದೇ ಅದೇ ದಿನ ಬೆಳಗ್ಗೆ ಹೇಳಿ ರಿಜಿಸ್ಟರ್ ಕಚೇರಿಗೆ ಆತ ಬಂದಿದ್ದರಿಮದ ಸಹಜವಾಗಿಯೇ ಅವರು ತಳಮಳಗೊಂಡಿದ್ದರು.

·         ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮುಗಿದು ಎಲ್ಲರೂ ಹೊರಬಂದ ನಂತರ ಉಮಾ ಅವರು “ಇದೆಂತಹ ಮದುವೆ, ಸಂಪ್ರದಾಯವಾಗಿ ಮದುವೆ ಆಗಬೇಕು. ನಾವು ನಮ್ಮ ಸಂಬಂಧಿಕರನ್ನು, ಹತ್ತಿರದವರನ್ನು ಕರೆಯಬೇಕು” ಎಂದು ಹಟಹಿಡಿದರು. ಗೌರಿ ಅದಕ್ಕೆ ಒಪ್ಪಲಿಲ್ಲ. “ಸಂಪ್ರದಾಯದ ಹೆಸರಲ್ಲಿ ಹುಡುಗಿ ಮನೆಯವರಿಂದ ಗಂಡಿನ ಕಡೆಯವರು ಅನಗತ್ಯವಾಗಿ ಹಣ ವೆಚ್ಚ ಮಾಡಿಸುತ್ತಾರೆ. ನನಗೆ ಅದು ಬೇಕಿಲ್ಲ. ನನ್ನ ಅಪ್ಪ ಅಮ್ಮ ನನಗೆ ವಿದ್ಯೆ ಕೊಡಿಸಿದ್ದಾರೆ. ಅಷ್ಟೇ ಸಾಕು” ಎಂದಳು. ಲಂಕೇಶರು ಏನೂ ಹೇಳದೆ ಸಿಗರೇಟು ಸೇದುತ್ತಾ ನಿಂತಿದ್ದರು.

·         ಕೊನೆಗೆ ಗೌರಿಗೆ ಹಟ ಮಾಡಬೇಡ ಎಂದು ಹೇಳಿದ ನಾನು “ನಮ್ಮ ಮನೆಯಲ್ಲೇ ಸರಳವಾದ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳೋಣ ಎರಡೂ ಕಡೆಯವರಿಂದ ಇಪ್ಪತ್ತು ಇಪ್ಪತ್ತೈದು ಜನರನ್ನು ಕರೆಯೋಣ” ಅಂದೆ. ಅದೂ ಲಂಕೇಶರು ಪ್ರತಿಪಾದಿಸುತ್ತಿದ್ದ ಸರಳ ಮದುವೆಯಂತಿದ್ದರಿಂದ ಅವರೂ ಒಪ್ಪಿದರು. ಅವಳ ಅಪ್ಪ ಒಪ್ಪಿದ ಮೇಲೆ ವಿಧಿ ಇಲ್ಲದೆ ಗೌರಿ ಸುಮ್ಮನಾದಳು.

·         ಇದಾದ ಐದಾರು ದಿನಗಳ ನಂತರ ಒಂದು ಭಾನುವಾರ ನಮ್ಮ ಮನೆಯಲ್ಲೇ ಒಂದು ಚಿಕ್ಕ ಕಾರ್ಯಕ್ರಮ ಇಟ್ಟುಕೊಂಡೆವು. ತುರಾತುರಿಯಲ್ಲಿ ನಾನು ಎಲ್ಲ ವ್ಯವಸ್ಥೆಯನ್ನು ಮಾಡಿ ಮುಗಿಸಿದೆ. ಅಪ್ಪಯ್ಯ, ಶಿವು, ವಿಮಲಾ ಶಿವಮೊಗ್ಗೆಯಿಂದ ಬಂದರು. ಲಂಕೇಶರ ಅಣ್ಣ ಶಿವರುದ್ರಪ್ಪ ಮತ್ತು ಅವರ ಮಕ್ಕಳು ಬಂದರು. ಚಿದು ಮನೆಕಡೆಯಿಂದ ಸುಮಾರು ಐವತ್ತು ಜನ ಬಂದರು. ಆದರೆ ಈ ಕಾರ್ಯಕ್ರಮಕ್ಕೆ ಗೌರಿಯಾಗಲಿ, ಚಿದು ಆಗಲಿ ತಮ್ಮ ಯಾವ ಸ್ನೇಹಿತರನ್ನೂ ಕರೆಯದೆ ಇಂತಹ ಸಂಪ್ರದಾಯ ಮದುವೆಯ ವಿರುದ್ಧ ತಮ್ಮ ಬಂಡಾಯವನ್ನು ಮುಂದುವರೆಸಿದರು. ನನ್ನ ತಮ್ಮ ಶಿವು ಗೌರಿಯನ್ನು ಧಾರೆ ಎರೆದು ಕೊಟ್ಟ.

·         ನಮ್ಮ ಮನೆಯ ಡೈನಿಂಗ್ ರೂಮಿನಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದರೆ ಲಂಕೇಶರು ಎಂದಿನಂತೆ ಎಲ್ಲವನ್ನೂ ತಮ್ಮ ಸ್ಟಡಿ ರೂಮಿನಲ್ಲಿ ಕೂತು ನೋಡುತ್ತಿದ್ದರು. ಕೊನೆಗೆ “ಗಂಡು ಹೆಣ್ಣಿನ ಮೇಲೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಬನ್ನಿ” ಎಂದು ಯಾರೋ ಲಂಕೇಶರನ್ನು ಕರೆದಾಗ ಅವರು “ಅದೆಲ್ಲ ಬೇಡ. ನನ್ನ ಆಶೀರ್ವಾದ ಸದಾ ನನ್ನ ಮಗಳಿಗೆ ಇದ್ದೇ ಇರುತ್ತದೆ” ಎಂದರು. ಆದರೆ ಇತರರೂ ಒತ್ತಾಯ ಮಾಡಿದಾಗ ಲಂಕೇಶರು ಕೆಳಗೆ ಬಂದು ಮಗಳು ಮತ್ತು ಅಳಿಯನ ಮೇಲೆ ಅಕ್ಷತೆ ಹಾಕಿ ಇಬ್ಬರನ್ನೂ ಹಾರೈಸಿದರು.

·         ಮದುವೆಯಾದ ನಂತರ ಗೌರಿ ಮತ್ತು ಚಿದು ನಮ್ಮ ಮನೆಯ ಹತ್ತಿರವೇ ಬಾಡಿಗೆಮನೆ ಹಿಡಿದಿದ್ದರು. ಇದರ ಬಗ್ಗೆ ಚಿದುನ ಅಪ್ಪ ಮತ್ತು ಅಮ್ಮನಿಗೆ ಬೇಸರವಾಗಿದ್ದರೂ ತಾನು ತನ್ನ ಅಪ್ಪ-ಅಮ್ಮ-ತಂಗಿ-ತಮ್ಮನ ಹತ್ತಿರ ಇದ್ದಿದ್ದರಿಂದ ಗೌರಿಗೆ ನೆಮ್ಮದಿ ಇತ್ತು.  ಲಂಕೇಶರು ಬೆಳಗ್ಗೆ ವಾಕಿಂಗ್ ಹೋದಾಗ ಕೆಲವೊಮ್ಮೆ ಮಗಳು ಮತ್ತು ಅಳಿಯನ ಮನೆಗೆ ಭೇಟಿ ನೀಡುತ್ತಿದ್ದರು. ಆಗ ಅವರಿಬ್ಬರದ್ದು ಹೊಸ ಸಂಸಾರವಾದ್ದರಿಂದ ಮನೆಯಲ್ಲಿ ಅಗತ್ಯವಾದ ಎಲ್ಲ ಸಾಮಾನುಗಳು ಇರಲಿಲ್ಲ. ಇಬ್ಬರೂ ನೆಲದಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದರು.

·         ಒಮ್ಮೆ ಲಂಕೇಶರು “ಆಫೀಸಿಗೆ ಹೋಗುವಾಗ ನಿನ್ನ ಮನೆಯ ಬೀಗದ ಕೀಅನ್ನು ನನ್ನ ಆಫೀಸಿನಲ್ಲಿ ಬಿಟ್ಟುಹೋಗು” ಎಂದು ಗೌರಿಗೆ ಹೇಳಿದರು. “ಯಾಕೆ?” ಎಂದು ಆಕೆ ಕೇಳಿದಾಗ “ಸುಮ್ಮನೆ ಕೊಟ್ಟುಹೋಗು” ಅಂದರು ಆಕೆಯ ಅಪ್ಪ. ಗೌರಿ ಮತ್ತು ಚಿದು ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವ ಮುನ್ನ ಲಂಕೇಶರ ಆಫೀಸಿಗೆ ಹೋಗಿ ತಮ್ಮ ಮನೆಯ ಕೀಅನ್ನು ಪಡೆದು ಬಂದು ನೋಡಿದರೆ, ಮನೆಯ ಹಾಲ್ ನಲ್ಲಿ ಎರಡು ಹೊಸ ಮಂಚಗಳು ಇದ್ದವು. ಏನಾಗಿತ್ತೆಂದರೆ ಲಂಕೇಶರು ತಮ್ಮ ಸಹಾಯಕರಿಗೆ ದುಡ್ಡುಕೊಟ್ಟು, ಮಂಚಗಳನ್ನು ಖರೀದಿಸಿ, ಗೌರಿಯ ಮನೆಯಲ್ಲಿ ಅದನ್ನು ಇಟ್ಟುಬರಲು ಹೇಳಿದ್ದರು. ಅವರು ಹಾಗೆಯೇ ಮಾಡಿದ್ದರು. ಮರುದಿನ ಮಗಳ ಮನೆಗೆ ಹೋದ ಲಂಕೇಶರು ಸುಮ್ಮನೇ “ಮೀಯಾಂವ್” (ಬಹಳ ಸಂತೋಷವಾದಾಗ ಲಂಕೇಶ್ ಅವರ ಬಾಯಿಂದ ಹೊರಡುತ್ತಿದ್ದ ಶಬ್ದವಿದು) ಎಂದು ವಾಪಸ್ ಬಂದಿದ್ದರು.

·         ಲಂಕೇಶರಿಗೆ ಸ್ಟ್ರೋಕ್ ಆದಾಗ ನಮ್ಮ ಹಿರಿ ಮಗಳು ಗೌರಿ ಫ್ರಾನ್ಸ್ ದೇಶದಿಂದ ಪತ್ರಿಕೋದ್ಯಮದ ಸ್ಕಾಲರ್ ಶಿಪ್ ಪಡೆದು ಆ ದೇಶದ ರಾಜಧಾನಿ ಪ್ಯಾರಿಸ್ ನಲ್ಲಿ ವಾಸಿಸುತ್ತಿದ್ದಳು. ಆಗ ನಮ್ಮ ಮೂವರು ಮಕ್ಕಳಲ್ಲಿ ತಮ್ಮ ಅಪ್ಪನೊಂದಿಗೆ ತುಂಬಾ ಭಾವುಕವಾದ ಸಂಬಂಧ ಹೊಂದಿದ್ದವಳು ಆಕೆಯೇ. ಲಂಕೇಶರಿಗೆ ಸ್ಟ್ರೋಕ್ ಆಗಿರುವ ಬಗ್ಗೆ ಗೌರಿಗೆ ಗೊತ್ತಾದರೆ ಆಕೆ ಪ್ಯಾರಿಸ್ಅನ್ನು ತೊರೆದು ನಿಂತ ಕಾಲಲ್ಲೇ ಬೆಂಗಳೂರಿಗೆ ಬರುತ್ತಾಳೆಂದು ನಮಗೆ ಗೊತ್ತಿತ್ತು. ಆ ಕಾರಣಕ್ಕೆ ಲಂಕೇಶರ ಆರೋಗ್ಯ ಕೆಟ್ಟದ್ದರ ಬಗ್ಗೆ ಆಕೆಗೆ ಹೇಳುವುದೇ ಬೇಡವೆಂದು ನಿರ್ಧರಿಸಿದೆವು.

·         ಗೌರಿ ಸಾಮಾನ್ಯವಾಗಿ ವಾರಕ್ಕೊಮ್ಮೆ ಮನೆಗೆ ಫೋನ್ ಮಾಡಿ ನನ್ನ, ಬೇಬಿ ಹಾಗು ಅಜಿತು ಜೊತೆ ಮಾತನಾಡುತ್ತಿದ್ದಳು. ಲಂಕೇಶರಿಗೆ ಫೋನ್ ಎಂದರೇ ಒಂದು ರೀತಿಯ ಅಲರ್ಜಿ ಇದ್ದಿದ್ದರಿಂದ ಅವರೊಂದಿಗೆ ಪತ್ರಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ ಗೌರಿ ಆಗೊಮ್ಮೆ, ಈಗೊಮ್ಮೆ ಮಾತ್ರ ಅಪ್ಪನನ್ನು ಫೋನ್ ನಲ್ಲಿ ಮಾತನಾಡಿಸುತ್ತಿದ್ದಳು.

·         ಆದರೆ ಇದಾದ ನಾಲ್ಕೈದು ವಾರಗಳಲ್ಲಿ ಮಾರ್ಚ್ 8 ರಂದು ಲಂಕೇಶರ ಹುಟ್ಟುಹಬ್ಬ ಬಂದೇಬಿಟ್ಟಿತು. ಅವತ್ತು ಗೌರಿ ತನ್ನ ಅಪ್ಪನ ಆಫೀಸಿಗೆ ಫೋನ್ ಮಾಡಿ “ಹ್ಯಾಪಿ ಬರ್ತಡೇ ಅಪ್ಪಾ, ಹೇಗಿದ್ದೀಯಾ?” ಎಂದು ಕೇಳಿದ್ದಾಳೆ. ಆಗ ಲಂಕೇಶರು “ಐ ಯಾಮ್ ಫೈನ್. ಸ್ಟ್ರೋಕ್ ನಿಂದ ಸಂಪೂರ್ಣವಾಗಿ ರಿಕವರ್ ಆಗಿದ್ದೇನೆ” ಎಂದಿದ್ದಾರೆ. ಅದನ್ನು ಕೇಳಿ ಗೌರಿಗೆ ಶಾಕ್ ಆಗಿದೆ. “ಏನು ಸ್ಟ್ರೋಕ್” ಎಂದು ಆಕೆ ಕೇಳಿದ್ದಾಳೆ. ಆಗ ಆಕೆಗೆ ಏನೆಂದು ಉತ್ತರ ಕೊಡುವುದೆಂದು ಲಂಕೇಶರಿಗೆ ಗೊತ್ತಾಗದೆ ಅವರು ಇದ್ದಕ್ಕಿದ್ದಂತೆ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಇನ್ನಷ್ಟು ಕಂಗಾಲಾದ ಗೌರಿ ನನ್ನ ಅಂಗಡಿಗೆ ಪೋನ್ ಮಾಡಿ “ಅಪ್ಪನಿಗೆ ಯಾವಾಗ ಸ್ಟ್ರೋಕ್ ಆಯಿತು. ನನಗ್ಯಾಕೆ ಅದರ ಬಗ್ಗೆ ಹೇಳಲಿಲ್ಲ” ಎಂದೆಲ್ಲ ಕಿರುಚಾಡಿದಳು. …..ನಾನು ಅಪ್ಪನಿಗೆ ಸಣ್ಣದಾದ ಸ್ಟ್ರೋಕ್ ಆಗಿತ್ತು. ಈಗ ಅಪ್ಪ ಚೆನ್ನಾಗಿದೆ. ನೀನು ಯೋಚನೆ ಮಾಡಬೇಡ” ಎಂದೆಲ್ಲ ಹೇಳಿದೆ. ಆದರೂ ಆಕೆ “ನನ್ನಿಂದ ಇದನ್ನು ಯಾಕೆ ಮುಚ್ಚಿಟ್ಟೆ. ನಾನು ನಿನ್ನನ್ನು ನಂಬೋದಿಲ್ಲ ನಾನು ಈಗಲೇ ಬೆಂಗಳೂರಿಗೆ ವಾಪಸ್ ಬರ್ತೀನಿ” ಎಂದು ಹಟ ಹಿಡಿದಳು.

·         ನಮ್ಮ ಹಿರಿ ಮಗಳು ಗೌರಿ ಪತ್ರಕರ್ತೆಯಾಗಿ ನೆಲೆಕಂಡುಕೊಂಡಿದ್ದಳು. ಹಾಗೆಯೇ ಕಿರಿ ಮಗಳು ಕವಿತಾ ಜಾಹೀರಾತು ಏಜನ್ಸಿ ತೆರೆದು ಕೈತುಂಬ ದುಡಿಯುತ್ತಿದ್ದಳು ಜೊತೆಗೆ ಕೆಲವು ಕಾರ್ಪೋರೇಟ್ ಸಿನಿಮಾಗಳನ್ನು ಆನಂತರ ಹಲವಾರು ಸಾಕ್ಷ್ಯಚಿತ್ರಗಳನ್ನೂ ಮಾಡಿದ ಕವಿತಾ ಎಲ್ಲರಿಂದಲೂ ಸೈ ಎನಿಸಿಕೊಂಡಳು.

·         …ನಮ್ಮ ಮೂವರು ಮಕ್ಕಳು ಲಂಕೇಶರ ಆರೋಗ್ಯದ ವಿವಿಧ ಆಯಾಮಗಳ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದರು. ಗೌರಿ ಅಪ್ಪನ ಡಯಾಬಿಟಿಸ್ ಮೇಲೆ ನಿಗಾ ಇಟ್ಟಿದ್ದರೆ, ಬೇಬಿ ಅವರ ಲಿವರ್ ಕುರಿತ ೆಲ್ಲ ಬದಲಾವಣೆಗಳನ್ನು ಗಮನಿಸುತ್ತಿದ್ದಳು. ಅಜಿತು ಪ್ರತಿದಿನ ಬ್ಲಡ್ ಪ್ರೆಶರ್ ಅನ್ನು ಚೆಕ್ ಮಾಡುತ್ತಿದ್ದ.

·         ದೆಹಲಿಯಲ್ಲಿ ಈಟಿವಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದ ಗೌರಿ ವಿವಿಧ ಕಡೆ ಸುತ್ತಾಡುತ್ತಿದ್ದಳು.  ಆದರೆ  ಆಕೆ ದೆಹಲಿಯಿಂದ ಎಲ್ಲಿಗೇ ಹೋದರೂ ಮುಂಚಿತವಾಗಿಯೇ ಹೇಳುತ್ತಿದ್ದಳಲ್ಲದೇ ಆಕೆ ಬೇರೆ ಊರನ್ನು ತಲುಪಿದ ಕೂಡಲೇ ಅಲ್ಲಿನ ಫೋನ್ ನಂಬರ್ ಅನ್ನು ಕೊಡುತ್ತಿದ್ದಳು. ಎರಡು ಮೂರು ದಿನಕ್ಕೊಮ್ಮೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಳು. ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದಳು.

*******

(ಇವು ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “ಹುಳಿಮಾವು ಮತ್ತು ನಾನು” ಕೃತಿಯಿಂದ ಆಯ್ದ ಭಾಗಗಳು. ಗೌರಿ ಅವರ ವೈಚಾರಿಕತೆ, ಸಾರ್ವಜನಿಕ ಬದುಕು ಎಲ್ಲದರ ಬಗ್ಗೆ ಅನೇಕ ಗೆಳೆಯರು ಮಹತ್ವದ ಅಂಶಗಳನ್ನಿಟ್ಟುಕೊಂಡು ಚರ್ಚಿಸುತ್ತಿದ್ದಾರೆ. ಅವುಗಳ ಮಧ‍್ಯೆ ಇಂತಹ ಭಾವಪೂರ್ಣ ಅಂಶಗಳೂ ನಮ್ಮನ್ನು ಕಲಕಬಹುದು ಎಂದು ಇವನ್ನು ಇಲ್ಲಿ ಎತ್ತಿಕೊಡುತ್ತಿದ್ದೇನೆ. ಈಗಾಗಲೇ ಮೊದಲ ಭಾಗದಲ್ಲಿ ನಾನು ಗೌರಿಯವರ ಜನನ ಬಾಲ್ಯಗಳ ಬಗೆಗಿನ ತಾಯಿಯ ಮಾತುಗಳನ್ನು ಮೊದಲ ಭಾಗದಲ್ಲಿ ನೀಡಿದ್ದೆ. ಇದು ಅದರ ಮುಂದುವರೆದ ಅಂದರೆ ಎರಡನೇ ಮತ್ತು ಅಂತಿಮ ಭಾಗ – ಡಾ. ರಾಜೇಂದ್ರ ಬುರಡಿಕಟ್ಟಿ.)

Wednesday, September 6, 2017



·      ಜನವರಿ 29 ರ ಬೆಳಿಗ್ಗೆ 6.55ಕ್ಕೆ ನನಗೆ ಡೆಲಿವರಿ ಆಯಿತು. ಹೆಣ್ಣು ಮಗು. ಒಂಭತ್ತು ಪೌಂಡ್ ತೂಗುತ್ತಿದ್ದಳು. ಮಗುವನ್ನು ನನಗೆ ತೋರಿಸಿದರು. ಅವಳು ಎಷ್ಟು ಮುದ್ದಾಗಿದ್ದಳು ಅಂದರೆ ಅಷ್ಟು ಚೆಂದದ ಮಗುವನ್ನು ನಾನೆಲ್ಲೂ ನೋಡಿಲ್ಲವೇನೋ ಅನ್ನಿಸಿತು. ನನ್ನ ಮಗುವಿನ ಮುಖ ನೋಡಿದ ತಕ್ಷಣ ನಾನು ಅನುಭವಿಸಿದ ನೋವಿನ ನೆನಪೂ ಇಲ್ಲದಂತೆ ಮಾಯವಾಯಿತು. ನನ್ನನ್ನು ವಾರ್ಡ್‍ಗೆ ಶಿಫ್ಟ್ ಮಾಡಿದರು. ಲಂಕೇಶರು ಆಗ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರಿಂದ (ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್) ನನಗೆ ಉಚಿತ ಸ್ಪೆಷಲ್ ವಾರ್ಡ್ನ  ಅನುಕೂಲವಿತ್ತು

        ಲಂಕೇಶರು ನಮ್ಮ ಮೊದಲ ಮಗುವನ್ನು ನೋಡಲು ಬಂದರು.  ಲಂಕೇಶರು ತಮ್ಮ ಮಗಳನ್ನು ಎಷ್ಟೋ ಹೊತ್ತು ಹಾಗೆಯೇ ನೋಡುತ್ತಾ ಕುಳಿತರು. ಆವತ್ತು ಅವರ ಕಣ್ಣಿನಲ್ಲಿ ಇದ್ದ ಸಂತೋಷವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

·         ನನ್ನ ಅತ್ತೆ ದೇವಿರಮ್ಮ ಮತ್ತು ಮಾವ ನಂದಿಬಸಪ್ಪ ಬಂದರು. ಹೆಣ್ಣು ಮಗುವನ್ನು ನೋಡಿ ನನ್ನ ಅತ್ತೆ, “ಹೆಣ್ಣಾ? ಮನೆಯಲ್ಲಿ ಇರುವ ಹೆಣ್ಣುಗಳು ಸಾಲದಿತ್ತಾ, ಈಗ ಇನ್ನೊಂದು” ಎಂದರು.

·         ಲಂಕೇಶರು ಅಂಗಡಿಗೆ ಹೋಗಿ ಮಗಳಿಗೆ ಪ್ರಾಕ್,  ಜುಬ್ಬಾ ಎಲ್ಲಾ ತೆಗೆದುಕೊಂಡು ಬಂದು ಮಗುವಿಗೆ ಹಾಕಲು ಹೇಳಿದರು. ನನ್ನ ಅಜ್ಜಿ ಚೆನ್ನಮ್ಮ “ಹಾಗೆಲ್ಲ ಹೊಸ ಕೂಸಿಗೆ ಹೊಸಬಟ್ಟೆ ಹಾಕಬಾರದು. ಮೊದಲು ಬೇರೆ ಮಕ್ಕಳ ಹಳೆಬಟ್ಟೆ ಹಾಕಬೇಕು” ಎಂದರೂ ಇವರು ಕೇಳಲಿಲ್ಲ. “ ಈ ಬಟ್ಟೆಗಳನ್ನು ಮಗೂಗೆ ಹಾಕಿ, ನಾನು ನನ್ನ ಮಗಳನ್ನು ಈ ಬಟ್ಟೆಯಲ್ಲಿ ನೋಡಬೇಕು.” ಎಂದು ಹಠಹಿಡಿದರು. ಆಗ ಚೆನ್ನವಜ್ಜಿ ವಿಧಿಯಿಲ್ಲದೆ ಆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಆಸ್ಪತ್ರೆಯ ಆವರಣದಲ್ಲಿದ್ದ ಒಂದು ಹಸುವಿನ ಮೇಲೆ ಹಾಕಿ ಆ ಮೇಲೆ ಅದನ್ನು ನನ್ನ ಮಗಳಿಗೆ ತೊಡಿಸಿದರು.

·         ಹೆರಿಗೆ ಆದ ಹದಿನೈದು ದಿನಗಳ ನಂತರ ನನ್ನ ಅಜ್ಜಿ ಚೆನ್ನವಜ್ಜಿ “ಮನೆ ಮತ್ತು ಇಬ್ಬರು ಬಾಣಂತಿಯರ ಕೆಲಸಗಳನ್ನು ನಾನೊಬ್ಬಳೇ ಮಾಡಲಾಗುವುದಿಲ್ಲ ಎಂದು ನನ್ನನ್ನೂ ಮತ್ತು ನನ್ನ ಅಕ್ಕನನ್ನೂ ತಮ್ಮ ಮಕ್ಕಳೊಂದಿಗೆ ತಮ್ಮ ಕೊಕ್ಕನೂರಿಗೆ ಅಂದರೆ ನನ್ನ ತಾಯಿಯ ತವರುಮನೆಗೆ (ಹರಿಹರ ತಾಲ್ಲೂಕು ಮಲೇಬೆನ್ನೂರ ಸಮೀಪದ ಹಳ್ಳಿ) ಕರೆದುಕೊಂಡು ಹೋದರು. ಲಂಕೇಶರು ಪ್ರತಿ ಶನಿವಾರ ಕಾಲೇಜ್ ಮುಗಿದ ನಂತರ ಸ್ಕೂಟರ್ ನಲ್ಲಿ ಶಿವಮೊಗ್ಗದಿಂದ 68 ಕಿ.ಮೀ. ದೂರದ ಕೊಕ್ಕನೂರಿಗೆ ಬಂದು ಮತ್ತೆ ಸೋಮವಾರ ಬೆಳಗ್ಗೆ ಆರೂವರೆಗೆ ಶಿವಮೊಗ್ಗಕ್ಕೆ ಹೊರಡುತ್ತಿದ್ದರು.

·         ನಮ್ಮ ಮಗಳಿಗೆ ಗೌರಿ ಎಂದು ಹೆಸರಿಟ್ಟೆವು. ಅದು ನನ್ನ ತಾಯಿಯ ಹೆಸರು. ನನ್ನ ಮಗಳಿಗೆ ಎರಡೂವರೆ ತಿಂಗಳಾದ ನಂತರ ನಾನು ಶಿವಮೊಗ್ಗೆಯ ನಮ್ಮ ಮನೆಗೆ ವಾಪಸ್ ಬಂದೆ. ನಾನಿನ್ನೂ ಮಗಳನ್ನು ಎತ್ತಿಕೊಂಡು ಮನೆಯ ಒಳಗೆ ಹೋಗುತ್ತಿರುವಾಗ ಮನೆಯ ಮುಂದೆ ಒಂದು ಸ್ಕೂಟರ್ ಬಂದು ನಿಂತಿತು. ಯಾರು ಅಂತ ನೋಡಿದೆ. ಒಳ್ಳೆ ಅಜಾನುಬಾಹು ವ್ಯಕ್ತಿ. “ ಇವರು ತೇಜಸ್ವಿ ಅಂತ” ಎಂದು ಲಂಕೇಶರು ಪರಿಚರು ಮಾಡಿಸಿದರು.

lMkEಕೇಶರು ಹಸಿರು ಬಣ್ಣದ ಹೊಸ ತೊಟ್ಟಿಲನ್ನು ತಂದು, ಅದರೊಳಗೆ ಹಾಸಿಗೆ ದಿಂಬು ಎಲ್ಲಾ ಇಟ್ಟು ಅದನ್ನು ಮಗಳಿಗೆ ರೆಡಿ ಮಾಡಿಟ್ಟಿದ್ದರು. ಅದೇ ತೊಟ್ಟಿಲಿನಲ್ಲಿ ನಮ್ಮ ಇನ್ನೂ ಇಬ್ಬರು ಮಕ್ಕಳು ಬೆಳೆದರು. ಈಗಲೂ ಆ ತೊಟ್ಟಿಲು ಮರುಳಸಿದ್ಧಪ್ಪನವರ (ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಅಳಿಯರೂ ಆದ ಹಿರಿಯ ಲೇಖಕರು) ಮನೆಯಲ್ಲಿದೆ. ಅವರ ಮಗ ಚೈತನ್ಯ ಮಾತ್ರವಲ್ಲ ಚೈತನ್ಯನ ಮಗು ಕೂಡ ಆ ತೊಟ್ಟಿಲಿನಲ್ಲೇ ಬೆಳೆದಿದ್ದಾರೆ.

·         ಒಂದು ದಿನ ಲಂಕೇಶರು, ನಾನು, ನನ್ನ ಮುತ್ತಜ್ಜಿ ಮತ್ತು ನಮ್ಮ ಪುಟ್ಟ ಮಗಳೂ ಜೋಗ್‍ಗೆ ಹೊರಟೆವು. ಲಂಕೇಶರಿಗೆ ಮತ್ತು ನನಗೆ ಪಾಲ್ಸ್ ಕೆಳಗೆ ಇಳಿದು ನೋಡಬೇಕೆನ್ನಿಸಿತು. ನನ್ನ ಮುತ್ತಜ್ಜಿ “ ನೀವು ಹೋಗಿ ಬನ್ನಿ. ನಾನು ಮಗುವನ್ನು ಇಟ್ಟುಕೊಂಡು ಕುಳಿತಿರುತ್ತೇನೆ” ಎಂದು ನಮ್ಮನ್ನು ಕಳುಹಿಸಿದರು. ನಾನು ಮಗುವಿಗೆ ಹಾಲುಕುಡಿಸಿ ಹೊರಟೆ. ….ನಾವಿಬ್ಬರೂ…. ಮೇಲೆ ಹತ್ತಿ ಬರುವ ಹೊತ್ತಿಗೆ ಸಂಜೆಯಾಗಿತ್ತು. ನನ್ನ ಮಗಳಿಗೆ ಹಸಿವಾಗಿ ಅಳಲಾರಂಭಿಸಿದಾಗ ನನ್ನ ಮುತ್ತಜ್ಜಿ ತನ್ನ ಬತ್ತಿದ ಎದೆಯನ್ನೆ ಆಕೆಗೆ ಕೊಟ್ಟು ಚೀಪಿಸುತ್ತಾ ಕುಳಿತಿದ್ದರು. ನಾನು ಬಂದು ಆಕೆಗೆ ಹಾಲು ಕುಡಿಸಿದೆ. ನಾವು ಶಿವಮೊಗ್ಗಕ್ಕೆ ಬಂದಾಗ ಎಲ್ಲರೂ “ಮಗುವಾಗಿ ಇನ್ನು ಮೂರು ತಿಂಗಳೂ ಸರಿಯಾಗಿ ಆಗಿಲ್ಲ. ಆಗಲೇ ಫಾಲ್ಸ್ ಇಳಿದು ಹೋಗಿದ್ದೀಯ” ಅಂತ ಬೈದರು.

·         ಗೌರಿ ಎಂಟು ತಿಂಗಳ ಮಗುವಾಗಿದ್ದಾಗ ಲಂಕೇಶರಿಗೆ ಬೆಂಗಳೂರಿಗೆ ಟ್ರಾನ್ಸ್‍ಫರ್‍ ಆಯಿತು. ಲಂಕೇಶರು ರಾಜಾಜಿನಗರದಲ್ಲಿ ಒಂದು ಮನೆ ನೋಡಿದ್ದರು. ನನ್ನನ್ನು ಮನೆ ತೋರಿಸಲು ಕರೆದುಕೊಂಡು ಹೋದರು…..ನಮ್ಮ ಹೊಸ ಸಂಸಾರ ಆ ಮನೆಯಲ್ಲಿ ಶುರುವಾಯಿತು.

·         ಗೌರಿಗೆ ಎರಡು ವರ್ಷ ಎರಡು ತಿಂಗಳಾದಾಗ ನಾನು ಮತ್ತೆ ಗರ್ಭಿಣಿ ಆದೆ. ಇಷ್ಟು ಬೇಗ ಇನ್ನೊಂದು ಮಗು ಬೇಡವೆಂದು ಏನೇನೋ ಪ್ಲಾನ್ ಮಾಡಿದ್ಧರೂ ಮತ್ತೆ ಮಗು ಹೊತ್ತಿದ್ದೆ… ಆಗ  ಲಂಕೇಶರಿಗೆ ಮೊದಲಿನಂತೆ ಜಾಸ್ತಿ ಬಿಡುವ ಸಿಗುತ್ತಿರಲಿಲ್ಲ. ಪ್ರತಿದಿನ ಮನೆಗೆ ಸ್ವಲ್ಪ ತಡವಾಗಿ ಬರಲು ಶುರು ಮಾಡಿದರು. ಈ ಮಧ್ಯೆ ನಮ್ಮ ವಾಸ್ವ್ಯವನ್ನು ಜಯನಗರದಿಂದ ಜರ್ನಲಿಸ್ಟ್ ಕಾಲೋನಿಗೆ ಬದಲಾಯಿಸಿದ್ದೆವು.

·         ನನ್ನ ಮೊದಲ ಮಗಳು ಗೌರಿಯನ್ನು ಗಾಂಧಿಬಜಾರಿನಲ್ಲಿದ್ದ ದಿ ಹೋಮ್ ಸ್ಕೂಲ್‍ಗೆ ಸೇರಿಸಿದೆವು.  ಆಗಿನ ಕಾಲದಲ್ಲಿ ಅದು ತುಂಬಾ ಒಳ್ಳೆಯ ಮತ್ತು ದುಬಾರಿ ಶಾಲೆ ಅಂತ ಹೆಸರು ಪಡೆದಿತ್ತು. ಜರ್ನಲಿಸ್ಟ್ ಕಾಲೋನಿಯಿಂದ ಸ್ಕೂಲ್‍ಗೆ ಗೌರಿ ಜಟಕಾ ಗಾಡಿಯಲ್ಲಿ ಹೋಗಿ ಬರುತ್ತಿದ್ದಳು… ಒಮ್ಮೆ ಸ್ಪೋರ್ಟ್ಸ ಡೇ ಇತ್ತು. ನಾನು ಮತ್ತು ಲಂಕೇಶರು ನಮ್ಮ ಮಗಳು ಸ್ಪೋರ್ಟ್ಸ್‍ನಲ್ಲಿ ಫಸ್ಟ್ ಬರುತ್ತಾಳೆ ಎಂಬ ಉಮೇದಿನಿಂದ ಹೋದೆವು. ಆದರೆ ನಮ್ಮ ಮಗಳು ಲಾಸ್ಟ್ ಬಂದಳು. ಅವಳು ತುಂಬಾ ಸಾಫ್ಟ್ ಆಗಿದ್ದಳು, ಆಗ.

·         ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಅವರನ್ನು ಕರೆದುಕೊಂಡು ಶಿವಮೊಗ್ಗ, ಕೊನಗವಳ್ಳಿ, ಎರಗನಾಳು, ಕೊಕ್ಕನೂರು ಎಂದು ಲಂಕೇಶರ ಮತ್ತು ನನ್ನ ಅಪ್ಪಯ್ಯ ಮತ್ತು ಅಜ್ಜಿಯ ಊರುಗಳಿಗೆ ಹೋಗುತ್ತಿದ್ದೆ. ಅದಕ್ಕೆಂದು ಲಂಕೇಶರು ನನಗೆ ಎಂಟು ಅಥವಾ ಹತ್ತು ದಿನಗಳ ಟೈಮ್ ಕೊಡುತ್ತಿದ್ದರು. ಒಂದೊಂದು ಊರಿನಲ್ಲಿ ಎರಡೆರಡು ದಿನ ಮಾತ್ರ ಇರುತ್ತಿದ್ದೆ. ಅಕಸ್ಮಾತ್ 11ನೇ ದಿನಕ್ಕೆ ನಾನು ಬೆಂಗಳೂರಿಗೆ ವಾಪಸ್ ಬರಲಿಲ್ಲ ಎಂದರೆ ಲಂಕೇಶರು ಟಿಲಿಗ್ರಾಮ್ ಕಳುಹಿಸುತ್ತಿದ್ದರು. ಆ ಟೆಲಿಗ್ರಾಮ್‍ನಲ್ಲಿ `Start immediately’ ಎಂಥಲೋ, ‘ನಿನಗೇನು ಮನೆ ಬಗ್ಗೆ ಯೋಚನೆ ಇಲ್ಲವೇ?’ ಎಂಥಲೋ ಆಜ್ಞೆ ಮಾಡುತ್ತಿದ್ದರು. ಅದನ್ನು ಕಂಡಕೂಡಲೆ ನಾನು ಮಕ್ಕಳನ್ನು ಕರೆದುಕೊಂಡು ಪಾಪಸ್ ಬರುತ್ತಿದ್ದೆ.

·         ಇನ್ನು ನಾನು ಅಪರೇಷನ್ ಮಾಡಿಸಿಕೊಳ್ಳುವ ವಿಷಯ (ಮೂರು ಮಕ್ಕಳಾದ ಮೇಲೆ) ಲಂಕೇಶರ ಅಣ್ಣ ಶಿವರುದ್ರಪ್ಪನವರಿಗೆ ತಿಳಿದಾಗ ಅವರು, “ಅವಳು ಹಡೆಯಲಾರದವಳು, ಅವನು ದುಡಿಯಲಾರದವನು. ಅದಕ್ಕೇ ಮಾಡಿಸಿಕೊಳ್ಳುತ್ತಿದ್ದಾಳೆ”  ಎಂದು  ವ್ಯಂಗವಾಡಿದ್ದರು.

·         ನಮ್ಮ ಮೂವರು ಮಕ್ಕಳು ಶಿವಮೊಗ್ಗೆಯ ಮೆಗ್ಗನ್ ಆಸ್ಪತ್ರೆಯಲ್ಲೇ ಹುಟ್ಟಿದ್ದು. ಗೌರಿ ಹುಟ್ಟಿದಾಗ ಒಟ್ಟು 70 ರೂಪಾಯಿ ಖರ್ಚಾಗಿದ್ದರೆ, ಬೇಬಿ ಹುಟ್ಟಿದಾಗ 40 ರೂಪಾಯಿ ಖರ್ಚಾಗಿತ್ತು. ಆದರೆ ಮೂರನೇ ಹೆರಿಗೆ ಆದ ನಂತರ ಆಪರೇಶನ್ ಮಾಡಿಸಿಕೊಂಡಿದ್ದರಿಂದ ಆಸ್ಪತ್ರೆಯವರೇ ನನಗೆ 240 ರೂಪಾಯಿ ಕೊಟ್ಟಿದ್ದರು. ಅಂದರೆ ನಮ್ಮ ಮೂವರ ಮಕ್ಕಳ ಹೆರಿಗೆಗೆ ನಾನು ಆಸ್ಪತ್ರೆಗೆ ಒಟ್ಟು 110 ರೂಪಾಯಿ ಕೊಟ್ಟಿದ್ದರೆ ಅವರೇ ನನಗೆ 130 ರೂಪಾಯಿ ಹೆಚ್ಚಿಗೆ ಕೊಟ್ಟು ಕಳುಹಿಸಿದ್ದರು.

·         ಒಂದು ದಿನ ನನ್ನ ಮಗಳು ಗೌರಿ ಸೌತ್ ಎಂಡ್ ಸರ್ಕಲ್‍ನಲ್ಲಿ ಪಾನಿಪುರಿ ತಿಂದು ಮನೆಗೆ ಬಂದಳು. ಅವತ್ತು ರಾತ್ರಿ ಅವಳಿಗೆ ತುಂಬಾ ಜ್ವರ. ಆಕೆಯ ಮೈಮುಟ್ಟಿದರೆ ಕೆಂಡದಂತೆ ಸುಡುತ್ತಿತ್ತು. ಆಕೆ ಏನೇನೋ ಮಾತಾಡಲು ಶುರುಮಾಡಿದಳು. ಒಂದೂ ಅರ್ಥವಾಗುತ್ತಿರಲಿಲ್ಲ. ಇದು ಸಾಮಾನ್ಯ ಜ್ವರ ಅಲ್ಲ ಎಂದು ಗೊತ್ತಾಗಿ ರಾತ್ರಿ 11ರ ಹೊತ್ತಿಗೆ ಗಾಂಧಿಬಜಾರಿನಲ್ಲಿದ್ದ ಪಾಂಡು ನರ್ಸಿಂಗ್ ಹೋಂಗೆ ನಾನು ಮತ್ತು ಲಂಕೇಶರು ಕರೆದುಕೊಂಡು ಹೋದೆವು.

·         ಅಷ್ಟು ಹೊತ್ತಿಗೆ ಗೌರಿಗೆ ಪ್ರಜ್ಞೆ ತಪ್ಪಿತ್ತು. ಆದರೂ ಆಗೀಗ ಎಚ್ಚರಗೊಂಡು ಕಿರುಚಾಡುತ್ತಿದ್ದಳು. ಆಕೆಯನ್ನು ನೋಡಿದ ಡಾಕ್ಟರ್ “ನಿಮ್ಮ ಮಗುವನ್ನು ನೀವು ಸರಿಯಾಗಿ ಬೆಳಸಿಲ್ಲ. ಆಮೇಲೆ ಬಂದು ಅವಳನ್ನು ನೋಡುತ್ತೇನೆ ಎಂದು ಹೇಳಿ ಹೋದವರು 12 ಗಂಟೆಯಾದರೂ ವಾಪಸ್ ಬರಲಿಲ್ಲ. ನರ್ಸಿಂಗ್ ಹೋಂನಲ್ಲಿದ್ದ ನರ್ಸ್‍ಳನ್ನು ಕೇಳಿದರೆ ಆಕೆ “ಡಾಕ್ಟರ್ ಮತ್ತೆ ಬೆಳಗ್ಗೆ ಬರುತ್ತಾರೆ” ಎಂದಳು.

·         ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಿಟ್ಟು ಬಂತು. ಮಗಳನ್ನು ಎತ್ತಿಕೊಂಡು ಅಲ್ಲಿಂದ ಹೊರಟರು. ಅವರನ್ನು ತಡೆಯಲು ನರ್ಸ್ ಪ್ರಯತ್ನಿಸಿದಳು, “ಡಾಕ್ಟರ್ ಅನುಮತಿ ಇಲ್ಲದೆ ಮಗುವನ್ನು ತೆಗೆದುಕೊಂಡು ಹೋಗುವಂತಿಲ್ಲ” ಎಂದಳು. ಆಗ ಲಂಕೇಶರು “ನಿಮ್ಮ ನರ್ಸಿಂಗ್ ಹೋಂನ ಗಾಜುಗಳಲ್ಲಿ ಒಂದೂ ಇರದಂತೆ ಎಲ್ಲವನ್ನು ಚಿಂದಿಮಾಡುತ್ತೇನೆ. ನಮ್ಮ ಮಗುವಿಗೆ ಜ್ವರ ಬಂದು ನರಳಾಡುತ್ತಿದ್ದರೆ ನಾವು ನಮ್ಮ ಮಗಳನ್ನು ಸರಿಯಾಗಿ ಸಾಕಿಲ್ಲ ಎನ್ನುತ್ತೀರಾ? ನಿಮ್ಮನ್ನು ನೋಡಿಕೊಳ್ಳುತ್ತೇನೆ” ಎಂದು ರೇಗಿದರು.

·         ನಾವಿಬ್ಬರೂ ಗೌರಿಯನ್ನು ಎತ್ತಿಕೊಂಡು ಆಟೋದಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಹೋದೆವು. ಮಳೆ ಜೋರಾಗಿ ಸುರಿಯುತ್ತಿತ್ತು. ಅಷ್ಟು ಹೊತ್ತಿಗೆ ಮರುಳಸಿದ್ಧಪ್ಪ ಅವರಿಗೆ ಲಂಕೇಶ್ ಫೋನ್ ಮಾಡಿದ್ದರಿಂದ ಅವರೂ ಮಾರ್ಥಾಸ್ ಆಸ್ಪತ್ರೆಗೆ ಬಂದರು. ನಮ್ಮ ಮಗಳ ಸ್ಥಿತಿಯನ್ನು ನೋಡಿದ ಆ ಆಸ್ಪತ್ರೆಯ ಡಾಕ್ಟರ್‍ಗಳು ಆಕೆಯನ್ನು ಕೂಡಲೇ ಅಡ್ಮಿಟ್ ಮಾಡಿಕೊಂಡರು.

·         ಗೌರಿಗೆ ಮೆದುಳಿನ ಜ್ವರ ಆಗಿದೆ ಎಂದು ಹೇಳಿ ಆಕೆಗೆ ಟ್ರೀಟ್‍ಮೆಂಟ್ ಶುರುಮಾಡಿದರು. ಆಕೆಯ ಬೆನ್ನಿನ ಮೂಳೆಯ ರಕ್ತನಾಳದಿಂದ ದ್ರವ ತೆಗೆಯಬೇಕೆಂದು ವೈದ್ಯರು ಹೇಳಿದರು. ಗೌರಿಗೆ ತಾನೆಲ್ಲಿದ್ದೇನೆ, ತನಗೆ ಏನಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಆಕೆಗೆ ಪ್ರಜ್ಞೆ ಇಲ್ಲದಿದ್ದರೂ ಚೀರಾಡುತ್ತಿದ್ದಳು. ಆಕೆಯನ್ನು ಹಿಡಿದಿದ್ದವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಳು. ಆಗ ಆಕೆಯನ್ನು ನಾಲ್ಕುಜನ ಬಿಗಿಯಾಗಿ ಹಿಡಿದ ನಂತರವೇ ಆಕೆಯ ಬೆನ್ನು ಮೂಳೆಗೆ ಇಂಜೆಕ್ಷನ್ನಿನ ಸೂಜಿ ಚುಚ್ಚಿ ದ್ರವವನ್ನು ತೆಗೆಯಬೇಕಾಯಿತು.

·         ಗೌರಿಯನ್ನು ಪರೀಕ್ಷಿಸಿದ ನಂತರ ವೈದ್ಯರು “ನಿಮ್ಮ ಮಗಳಿಗೆ 42 ಗಂಟೆಯ ಒಳಗೆ ಪ್ರಜ್ಞೆ ಬರಬೇಕು. ಇಲ್ಲವೆಂದರೆ ಅವಳು ಬದುಕುತ್ತಾಳೆ ಎಂದು ಗ್ಯಾರಂಟಿ ಕೊಡಲಾಗುವುದಿಲ್ಲ. ಆಕೆಗೆ ಪ್ರಜ್ಞೆ ಬಂದರೂ ಆಕೆ ಕುರುಡಿಯಾದರೂ ಆಗಬಹುದು” ಎಂದರು. ಅದನ್ನು ಕೇಳಿ ನಾವಿಬ್ಬರೂ ದಂಗಾಗಿ ಹೋದೆವು. ನನ್ನ ಮಗಳ ಕಣ್ಣುಗಳು ಅವಳ ಅಪ್ಪನ ಕಣ್ಣಿನಷ್ಟೇ ಚೆನ್ನ. “ನನ್ನ ಮಗಳ ಕಣ್ಣುಗಳ ಮುಂದೆ ಹೇಮಾಮಾಲಿನಿಯ ಕಣ್ಣು ಯಾವ ಲೆಕ್ಕಕ್ಕೂ ಇಲ್ಲ” ಎನ್ನುತ್ತಿದ್ದೆ ನಾನು. ಅಂತಹ ಮಗಳು ಕುರುಡಿಯಾದರೆ ಎಂಬ ಚಿಂತೆ ಆಯಿತು.

·         ನನ್ನ ಕಷ್ಟದ ದಿನಗಳು ಶುರುವಾದವು. ನನ್ನ ತಲೆ ಸಂಪೂರ್ಣ ಖಾಲಿಯಾಗಿತ್ತು. ಆಸ್ಪತ್ರೆಯಲ್ಲಿ ನನ್ನ ಮಗಳನ್ನೇ ನೋಡುತ್ತಾ ಕುಳಿತೆ. ಐದು ನಿಮಿಷಕ್ಕೊಮ್ಮೆ ಗಡಿಯಾರ ನೋಡುತ್ತಾ ಆದಷ್ಟು ಬೇಗೆ ಪ್ರಜ್ಞೆ ಪಡೆಯಲಿ ಎಂದು ಆಶಿಸುತ್ತಿದ್ದೆ. ಹಾಸಿಗೆಯ ಮೇಲೆ ಕಣ್ಣುಮುಚ್ಚಿ ಮಲಗಿದ್ದ ಗೌರಿ ಯಾವುದೇ ರೀತಿಯ ಚಲನೆ ಇಲ್ಲದೆ ಹಾಗೇ ಮಲಗಿದ್ದಳು. ಆಕೆ ಪ್ರಜ್ಞೆ ಕಳೆದುಕೊಂಡು 36 ಗಂಟೆಗಳ ನಂತರ ಸಣ್ಣಗೆ ಕೈ ಕಾಲು ಆಡಿಸಿದಳು ಆದರೆ ಕಣ್ಣು ಬಿಡಲಿಲ್ಲ. ಕೊನೆಗೆ 38 ಗಂಟೆಗೆ ಕಣ್ಣುಬಿಟ್ಟಳು.

·         ನನಗೆ ಹೋದ ಜೀವ ಬಂದಂತಾಯಿತು. ಆಕೆಗೆ ಕಣ್ಣು ಕಾಣಿಸುತ್ತಿತ್ತು. ಜ್ವರ ಬಂದ ನಾಲ್ಕೈದು ದಿನಗಳಲ್ಲಿ ಗೌರಿಯ ಕೈಕಾಲು ಬತ್ತಿಹೋಗಿದ್ದವು. ಆಕೆಗೆ ನಿಲ್ಲಲೂ ಶಕ್ತಿ ಇರಲಿಲ್ಲ ಆಕೆಯನ್ನು ಹಿಡಿದು ನಿಲ್ಲಿಸಿದರೆ ಬೀಳುತ್ತಿದ್ದಳು. ಅವಳನ್ನು ಕೆಲವು ದಿನಗಳ ಕಾಲ ಐಸಿಯುನಲ್ಲೇ ಇಟ್ಟಿದ್ದರು.

·         ಕೆಲದಿನಗಳ ನಂತರ ಗೌರಿಯನ್ನು ವಾರ್ಡ್‍ಗೆ ಶಿಫ್ಟ್ ಮಾಡಿದರು. ಆದರೂ ಆಕೆ ಚೇತರಿಸಿಕೊಳ್ಳಲು ಬಹಳ ದಿನಗಳೇ ಬೇಕಾದವು. ಅವತ್ತು ನಾವು ಗೌರಿಯನ್ನು ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರದಿದ್ದರೆ ಅವಳು ಖಂಡಿತಾ ಬದುಕುಳಿಯುತ್ತಿರಲಿಲ್ಲ.

·         ಗೌರಿಹಬ್ಬದ ದಿನದಂತ ನಮ್ಮ ಮಗಳು ಗೌರಿಯನ್ನು ಆಸ್ಪತ್ರೆಯಿಂದ ಮನಗೆ ಕರೆದುಕೊಂಡು ಬಂದೆವು. ಒಂದು ವರ್ಷದಲ್ಲಿ ಇಷ್ಟೆಲ್ಲ ನಡೆಯಿತು.

·         ಗೌರಿಗೆ ಬ್ರೈನ್ ಫೀವರ್ ಆದಾಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಹಿಡಿದಿದ್ದರಿಂದ ಆಕೆ  ಬಹಳಷ್ಟು ದಿನ ಶಾಲೆಯಿಂದ  ಹೊರಗೇ ಉಳಿದಿದ್ದಳು. ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಏಳನೇ ತರಗತಿಯ ಪರೀಕ್ಷೆಗಳು ಒಂದು ಮುಖ್ಯಘಟ್ಟ. ಅದರಲ್ಲಿ ಚೆನ್ನಾಗಿ ಮಾರ್ಕ್ಸ್ ತೆಗೆದುಕೊಂಡರೆ ಉತ್ತಮ ಹೈಸ್ಕೂಲಿನಲ್ಲಿ ಪ್ರವೇಶ ಸಿಗುತ್ತದೆ. ಆದರೆ  ಬಹಳಷ್ಟು ಕ್ಲಾಸ್‍ಗಳನ್ನು ಗೌರಿ ಮಿಸ್ ಮಾಡಿಕೊಂಡಿದ್ದರಿಂದ ಆಕೆಯನ್ನು ಆ ವರ್ಷ ಪರೀಕ್ಷೆಗಳಿಗೆ ಕಳುಹಿಸುವುದು ಬೇಡವೆಂದು ನಾನು ಮತ್ತು ಲಂಕೇಶರು ನಿರ್ಧರಿಸಿದೆವು. ಆದರೆ ಗೌರಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ನಿರ್ಧರಿಸಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಕೂಡ ಆದಳು.
*******
(ಇವು ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “ಹುಳಿಮಾವು ಮತ್ತು ನಾನು” ಕೃತಿಯಿಂದ ಆಯ್ದ ಭಾಗಗಳು. ಗೌರಿ ಅವರ ವೈಚಾರಿಕತೆ, ಸಾರ್ವಜನಿಕ ಬದುಕು ಎಲ್ಲದರ ಬಗ್ಗೆ ಅನೇಕ ಗೆಳೆಯರು ಮಹತ್ವದ ಅಂಶಗಳನ್ನಿಟ್ಟುಕೊಂಡು ಚರ್ಚಿಸುತ್ತಿದ್ದಾರೆ. ಅವುಗಳ ಮಧ‍್ಯೆ ಇಂತಹ ಭಾವಪೂರ್ಣ ಅಂಶಗಳೂ ಸಂಬಂಧಪಟ್ಟವರನ್ನು ಕಲಕಬಹುದು ಎಂದು ಇವನ್ನು ಇಲ್ಲಿ ಎತ್ತಿಕೊಡುತ್ತಿದ್ದೇನೆ. ಇವು ಅವರ ಜನನ ಬಾಲ್ಯ ಕುರಿತಾದ ವಿವರಗಳು ಮಾತ್ರ. ಅದರ ಮುಂದಿನ ಭಾಗವಾದ ಯೌವನ, ಮದುವೆ, ಉದ್ಯೋಗ, ಇತ್ಯಾದಿಗಳನ್ನು ಸಧ್ಯದಲ್ಲಿ ಭಾಗ-2 ರಲ್ಲಿ ಕೊಡುವೆ. – ಡಾ. ರಾಜೇಂದ್ರ ಬುರಡಿಕಟ್ಟಿ.)

(ನಮ್ಮ ನಾಡಿನ ವೈಚಾರಿಕತೆಯ ದೊಡ್ಡಧ್ವನಿಯೊಂದನ್ನು ಅಡಗಿಸಿದ ಪಾತಕಿಗಳಿಗೆ, ಈ ಹೇಯ ಕೃತ್ಯವನ್ನು ಮಹತ್ವವಾದ ಸಾಧನೆಯೆಂದು ಅಂದುಕೊಂಡು ಅವರ ಸಾವನ್ನು ಸಂಭ್ರಮಿಸುತ್ತಿರುವ ಪರಮನೀಚರಿಗೆ  ಇಡೀ ನಾಡಿನ ಜನತೆಯ ಎದೆಯ ಉರಿ ತಟ್ಟಲಿ.
*******