ಪುಟ್ಟಪ್ಪ ಕೈ ಎತ್ತಿದರೆ………
”ಕನ್ನಡಕ್ಕಾಗಿ ಕೈ
ಎತ್ತು
ಮುಗಿಯುವವರಿಗೆ
ನವೆಂಬರ್ ಮೂವತ್ತು”
ಇದು ಯಾರೋ ತಮಾಸೆಗಾಗಿ `ನವೆಂಬರ್ ಕನ್ನಡ ಪ್ರೇಮ’ವನ್ನು
ಟೀಕಿಸಲು ಬರೆದ ಒಂದು ವ್ಯಂಗ್ಯೋಕ್ತಿಪದ್ಯ. ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣ ಇಂದು ನವೆಂಬರ್ ಮೂವತ್ತು.
ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಪ್ರಾಮಾಣಿಕವೋ ನಾಟಕೀಯವೋ ಒಟ್ಟಿನಲ್ಲಿ ನಮ್ಮ ಕನ್ನಡ ರಾಜ್ಯೋತ್ಸವದ
ಸಂಭ್ರಮಾಚರಣೆಗಳು ಈ ವರ್ಷದ ಮಟ್ಟಿಗೆ ನಿಲ್ಲುವ ದಿವಸ. ಈ ವರ್ಷದ ನವೆಂಬರ್ ತಿಂಗಳಲ್ಲಿ ಕಳೆದ ಒಂದನೇ
ತಾರೀಖಿನಿಂದ ಇಂದಿನವರೆಗೆ `ಇಂದಿನ ನುಡಿ’ ಎಂಬ ಶಿರೋನಾಮೆಯಲ್ಲಿ ನಾನು ಏಕೀಕರಣದ ಇತಿಹಾಸದ ಬಹಳಷ್ಟು
ಅಪರಿಚಿತವಾದ ಆದರೆ ಮಹತ್ವದ ಅನೇಕ ಸಂಗತಿಗಳನ್ನು ಹಾಗೇ ನಮ್ಮ ನುಡಿಯ ಬಗ್ಗೆ ನಾಡಿನ ಬಗ್ಗೆ ಗತಕಾಲೀನ
ಮತ್ತು ಸಮಕಾಲೀನ ವಿದ್ವಾಂಸರ ಮಹತ್ವದ ಹೇಳಿಕೆಗಳನ್ನು ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ
ಮಾಡುತ್ತ ಬಂದು ಇಂದು ಕುವೆಂಪು ಅವರ ನುಡಿಯೊಂದರೊಂದಿಗೆ ಈ ಸರಣಿಯನ್ನು ಮುಗಿಸುತ್ತಿರುವೆ. `ಕನ್ನಡಕ್ಕಾಗಿ
ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಹೇಳಿದ ಕುವೆಂಪು ಕಾಲದಲ್ಲಿ ಕೇವಲ ಕನ್ನಡಕ್ಕೆ
ಮಾತ್ರವಲ್ಲ ತಮಗೆ ಬೇಕಾದ ಯಾವುದಕ್ಕೆ ಆದರೂ ಯಾರಾದರೂ ಕೈಯೆತ್ತಿದರೆ ಎತ್ತಿದ ಅವರ ಕೈ ಕಲ್ಪವೃಕ್ಷವಾಗದಿದ್ದರೂ
ಕತ್ತರಿಸಿ ಹೋಗುತ್ತಿರಲಿಲ್ಲ ಎಂಬುದಂತೂ ಸತ್ಯ. ಆದರೆ ನಾವು ಇಂದು ಆ ಕಾಲಘಟ್ಟದಲ್ಲಿಲ್ಲ. ನಮಗೆ ಇಷ್ಟಬಂದ ಯಾವುದಕ್ಕಾದರೂ ನಾವು ಈಗ ಕೈಯೆತ್ತುವಾಗ
ಎರಡೆರಡು ಬಾರಿ ಯೋಚಿಸಬೇಕಾದ ಕಾಲದಲ್ಲಿದ್ದೇವೆ. ಏಕೆಂದರೆ `ಕೈಯೆತ್ತಿದರೆ ನಿಮ್ಮ ಕೈ ಕತ್ತರಿಸುತ್ತೇವೆ’
ಎಂಬ ಮಾತುಗಳು ಕಿವಿಗೆ ಅಪ್ಪಳಿಸಿ ಆತಂಕವನ್ನುಂಟುಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ
ಏಕೀಕರಣದ ಇತಿಹಾಸದ ಬಹಳಷ್ಟು ಪ್ರಸಿದ್ಧವಲ್ಲದ ಆದರೆ ಬಹುಮುಖ್ಯವಾದ ಕೆಲವು ಸಂಗತಿಗಳನ್ನು ಅದರಲ್ಲಿಯೂ
ವಿಶೇಷವಾಗಿ ಕುವೆಂಪು ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ನೆನಪು ಮಾಡಿಕೊಳ್ಳವುದು ಈ ಲೇಖನದ ಉದ್ದೇಶ.
ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ನಡೆದ ಬಹುಮುಖ್ಯವಾದ
ಎರಡು ಚಳವಳಿಗಳೆಂದರೆ ಅವು ಒಂದು ಸ್ವಾತಂತ್ರ್ಯ ಚಳವಳಿ ಮತ್ತೊಂದು ಕರ್ನಾಟಕ ಏಕೀಕರಣ ಚಳವಳಿ ಎಂಬುದನ್ನು
ಎಲ್ಲರೂ ಬಲ್ಲರು. ಕರ್ನಾಟಕದ ಮಟ್ಟಿಗೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಏಕೀಕರಣ ಚಳವಳಿಯ
ಹೋರಾಟಗಾರರೂ ಆಗಿದ್ದು ತೀರಾ ಸಾಮಾನ್ಯ ಸಂಗತಿಯೇ ಆಗಿತ್ತು ಎಂಬುದು ನಿಜ. ಈಗಿನ ಕರ್ನಾಟಕದ ಬಹುಭಾಗ
ಹಿಂದೆ ಅನೇಕ ರಾಜವಂಶಗಳ ಆಳ್ವಿಕೆಯನ್ನು ಅನುಭವಿಸಿದ್ದು ನಿಜವಾದರೂ ಮೇಲಿನ ಆಳ್ವಿಕೆ ಬದಲಾಗುತ್ತಿತ್ತೇ
ಹೊರತು ಸಾಮಾನ್ಯ ಜನಜೀವನದಲ್ಲಿ ತೀವ್ರತರವಾದ ಬದಲಾವಣೆಗಳೇನೂ ಆಗುತ್ತಿರಲಿಲ್ಲ. ಯಾರು ರಾಜರಾದರೂ ಬಹಳಕಾಲ
ಕನ್ನಡಿಗರು ಬೇರೆ ಬೇರೆ ಆಡಳಿತಗಳಿಗೆ ಸೇರಬೇಕಾದ ಪರಿಸ್ಥಿತಿ ಉಂಟಾಗಲಿಲ್ಲ. ಆದರೆ ಯಾವಾಗ ವಿಜಯನಗರ ಸಾಮ್ರಾಜ್ಯದ ಪತನಗೊಂಡಿತೋ ಕನ್ನಡ ಮಾತನಾಡುವ ಜನ
ಮೊಟ್ಟಮೊದಲ ಬಾರಿಗೆ ಬೇರ್ಪಡುವಿಕೆಯ ಬಿಸಿಯನ್ನು ಅನುಭವಿಸುವಂತಾಯಿತು. ಈ ಬಿಸಿ ಆಗ ಅಷ್ಟೇನೂ ದೊಡ್ಡಮಟ್ಟದಲ್ಲಿ ಆಗಲಿಲ್ಲ; ಆದರೆ
ಯಾವಾಗ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣವನ್ನಪ್ಪಿದನೋ ಕನ್ನಡಿಗರ ಪಾಲಿಗೆ ದುರ್ದೆಸೆ
ಆರಂಭವಾಗಿ ಆ ಘಟನೆ ಕನ್ನಡಿಗರ ಪಾಲಿಗೆ ಕರಾಳ ಅಧ್ಯಾಯವನ್ನೇ ಆರಂಭಿಸಿತು ಎನ್ನಬೇಕು.
ಟಿಪ್ಪುವಿನ ಮರಣದ ನಂತರ ಕನ್ನಡ ಮಾತನಾಡುವ ಜನರು
ಮುಂಬೈ, ಹೈದರಾಬಾದು, ಮದ್ರಾಸ್, ಮೈಸೂರು, ಕೊಡಗು ಹೀಗೆ ವಿವಿಧ ಆಡಳಿತ ಭಾಗಗಳಿಗೆ ಹರಿದು ಹಂಚಿಹೋದ
ಕಾರಣ ಅಗಲಿಕೆಯ ನೋವು ತೀವ್ರಗೊಂಡಿತು. ಮುಂಬೈಗೆ ಸೇರಿದವರು ಮರಾಠಿಗರಿಗೆ, ಹೈದರಾಬಾದಿಗೆ ಸೇರಿದವರು
ಉರ್ದು ಭಾಷಿಕರಿಗೆ, ಮದ್ರಾಸಿಗೆ ಸೇರಿದವರು ತಮಿಳರಿಗೆ ಅಡಿಯಾಳಾಗಿ ಬದುಕುವ ದುರ್ದೆಸೆಗೀಡಾದರು ಮಾತ್ರವಲ್ಲ
ಕನ್ನಡ ಭಾಷೆ ಈ ಭಾಷೆಗಳ ತೊತ್ತಾಗಿ ಬದುಕಬೇಕಾಯಿತು. ಇದ್ದದ್ದರಲ್ಲಿ ಪರಮಸುಖಿಗಳಾಗಿದ್ದವರೆಂದರೆ ಆಗಿನ
ಹಳೇಮೈಸೂರು ಸಂಸ್ಥಾನಕ್ಕೆ ಸೇರಿದ ಈಗಿನ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ರಾಮನಗರ, ತುಮಕೂರು,
ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಎಂಟೊಂಬತ್ತು
ಜಿಲ್ಲೆಗಳ ಜನ ಅನ್ನಬೇಕು. ಏಕೆಂದರೆ ಈ ಭಾಗದ ಜನಕ್ಕೆ ಪರಕೀಯತೆಯ, ಅಥವಾ ಕೀಳರಿಮೆಯ ಭಾವನೆ ಉಂಟಾಗುವ
ಸಂದರ್ಭವೇ ನಿರ್ಮಾಣವಾಗಲಿಲ್ಲ. ಮೊದಲೂ ಅವರನ್ನು ಮೈಸೂರು ರಾಜರೇ ಆಳಿದರು. ಟಿಪ್ಪುವಿನ ಮರಣದ ನಂತರವೂ
ಅವರನ್ನು ಮೈಸೂರು ಅರಸರೇ ಆಳಿದರು. ಮೈಸೂರು ಅರಸರು ಸ್ವತಃ ಪ್ರಜಾಕಂಟಕರಾಗಿದ್ದಿಲ್ಲವಾದ್ದರಿಂದ, ಎಲ್ಲರಿಗೂ
ರಾಜರಾಗುವ ಅವಕಾಶ ಇರಲಿಲ್ಲ ಅನ್ನುವುದನ್ನು ಬಿಟ್ಟರೆ ಪ್ರಜೆಗಳು ಸುಖವಾಗಿಯೇ ಇದ್ದರು.
ಆದರೆ ಮೇಲೆ ಉಲ್ಲೇಖಿಸಿದ ಇತರ ಭಾಷಿಕರ ಅಧೀನಕ್ಕೆ
ಹೋದ ಕನ್ನಡಿಗರ ಪಾಡು ಈಗ `ನಾಯಿಪಾಡು’ ಅಂಥಾರಲ್ಲ ಹಾಗೇ ಆಯಿತು ಅನ್ನಬೇಕು. ದಕ್ಷಿಣ ಮಹಾರಾಷ್ಟ್ರ
ಎಂದು ಕರೆಯಲ್ಪಡುತ್ತಿದ್ದ ಈಗಿನ ವಿಜಯಪುರ, ಬಾಗಲಕೋಟೆ, ಬೆಳಗಾಗಿ, ಉತ್ತರ ಕನ್ನಡ, ಗದಗ, ಹಾವೇರಿ,
ಧಾರವಾಡ ಜಿಲ್ಲೆಗಳಲ್ಲಿ ಕನ್ನಡದ ಸ್ಥಾನ ನೆಲಕಚ್ಚಿ ಮರಾಠಿ ಮೆರೆಯತೊಡಗಿತು. ಇಲ್ಲಿನ ಪ್ರತಿಭಾವಂತರು
ಉನ್ನತ ವ್ಯಾಸಂಗಕ್ಕಾಗಿ ದೂರದ ಪುಣೆಗೆ ಹೋಗಬೇಕಾಯಿತು. ಹೀಗೆ ಪುಣೆಗೆ ಉನ್ನತ ವ್ಯಾಸಂಗಕ್ಕೆ ಹೋದ ಈ
ಭಾಗದ ಆ ಕಾಲದ ತರುಣರನ್ನು `ಕಾನಾಡಿಯಪ್ಪ’ ಎಂದು ತುಚ್ಚೀಕರಿಸಿ ಅಲ್ಲಿನವರು ಮಾತನಾಡಿಸಿ ವಿಕೃತ ಆನಂದವನ್ನು
ಪಡೆಯತೊಡಗಿದರು. `ಎಲ್ಲಿ ದಮನ ಹೆಚ್ಚಾಗುತ್ತದೆಯೋ ಅಲ್ಲಿಯೇ ಅದನ್ನುಪ್ರತಿಭಟಿಸುವ ಕೆಚ್ಚೂ ಹುಟ್ಟಿಕೊಳ್ಳುತ್ತದೆ’
ಎನ್ನುವಂತೆ ಹೀಗೆ ತಿರಸ್ಕಾರಕ್ಕೊಳಗಾದ ಈ `ಕಾನಾಡಿಯಪ್ಪ’ಗಳೇ ಕರ್ನಾಟಕದ ಏಕೀಕರಣಕ್ಕೆ ಬೀಜಹಾಕಿದ ಮೊದಲಿಗರು ಎನ್ನಬಹುದು.
ರಾ.ಹಾ. ದೇಶಪಾಂಡೆ, ವೆಂಕಟರಂಗೋಕಿಟ್ಟಿ, ಆಲೂರು ವೆಂಕಟರಾಯ, ಅಂದಾನಪ್ಪ ಮೇಟಿ, ತುರುಮುರಿ ಶೇಷಗಿರಿರಾಯರು
ಇಂತಹ ಹಲವು ನಾಯಕರು ಆ ಕಾಲದಲ್ಲಿ ಏಕೀಕರಣಕ್ಕೆ ಹಾಕಿದ ಮೊದಲ ಹೋರಾಟದ ಹೆಜ್ಜೆಗಳು ಅವಿಸ್ಮರಣೀಯವಾದಂಥವು.
ಆರಂಭದ ಕಾಲಘಟ್ಟದಲ್ಲಿ ಕರ್ನಾಟಕ ಏಕೀಕರಣ ಕುರಿತ
ಚಳವಳಿ ಸಭೆ, ಸಮಾರಂಭ, ಹರತಾಳ, ಪ್ರತಿಭಟನೆ ಎಲ್ಲವೂ ನಡೆದದ್ದು ಈಗಿನ ಉತ್ತರ ಕರ್ನಾಟಕ ಭಾಗದಲ್ಲಿಯೇ.
ಮೊದಲು ಕಿತ್ತೂರು ಕರ್ನಾಟಕ ಭಾಗದಲ್ಲಿ ಇದು ವ್ಯಾಪಕವಾಗಿ ಬೆಳೆಯಿತಾದರೂ ನಂತರ ಕಲ್ಯಾಣ ಕರ್ನಾಟಕದ
ಭಾಗಕ್ಕೂ ವಿಸ್ತರಿಸಿ ಚಳವಳಿಯು ತನ್ನ ತೆಕ್ಕೆಗೆ ಆ ಪ್ರದೇಶವನ್ನು ಕೂಡ ತೆಗೆದುಕೊಂಡಿತು. ಹೀಗೆ ಉತ್ತರ
ಕರ್ನಾಟಕ ಭಾಗದಲ್ಲಿ ಕನ್ನಡ ಮಾತನಾಡುವ ಜನರೆಲ್ಲ ಒಂದಾಗಬೇಕು ಎಂದು ಚಳವಳಿ ಅಷ್ಟೊಂದು ಪ್ರಮಾಣದಲ್ಲಿ
ನಡೆಯುತ್ತಿರುವಾಗ ಈಗಿನ ದಕ್ಷಿಣ ಕರ್ನಾಟಕದ ಭಾಗದ ಜನ, ಜನ ಅನ್ನುವುದಕ್ಕಿಂತ ರಾಜಕೀಯ ಮತ್ತು ಸಾಂಸ್ಕೃತಿಕ
ನಾಯಕರು ಹೇಗೆ ಸ್ಪಂದಿಸಿದರು ಎಂಬುದು ಅಧ್ಯಯನ ದೃಷ್ಟಿಯಿಂದ ಕುತೂಹಲ ಹುಟ್ಟಿಸುವ ಸಂಗತಿಯಾಗಿದೆ. ಸೂಕ್ಷ್ಮವಾಗಿ
ನೋಡಿದರೆ ಕರ್ನಾಟಕದ ಏಕೀಕರಣದ ಬಹುಪಾಲು ಕೀರ್ತಿ ಹೋಗಬೇಕಾದದ್ದು ಈಗಿನ ಹ`ಳೈಮೈಸೂರು ಪ್ರಾಂತ್ಯ’ದ
ಹೊರಗಿನವರಿಗೇ ಎನ್ನಬೇಕು. ಹಳೇಮೈಸರೂರು ಭಾಗದವರು ಏಕೀಕರಣಕ್ಕೆ ಹೋರಾಡುವುದಿರಲಿ ಹೊಸದಾಗಿ ರಚಿಸಲು
ಶ್ರಮಿಸುತ್ತಿರುವ ರಾಜ್ಯದಲ್ಲಿ ಸೇರಿಕೊಳ್ಳುತ್ತೇವೆಯೊ ಇಲ್ಲವೋ ಎಂಬುದನ್ನು ಹೇಳಲಿಕ್ಕೂ ಕೂಡ ಎಷ್ಟೋ
ವರ್ಷ ತೆಗೆದುಕೊಂಡರು! ಕೊನೆಗೂ `ನಾವೂ ಹೊಸರಾಜ್ಯದಲ್ಲಿ ಸೇರಿಕೊಳ್ಳುತ್ತೇವೆ’ ಎಂದು ಹೇಳಿದ್ದೇ ಈ
ಕಡೆಯ ದೊಡ್ಡ ಸಾಧನೆ ಎಂದು ಹೇಳಬಹುದು.
ಇದಕ್ಕೆ ಕಾರಣವೇನೆಂದರೆ ಆ ಕಾಲದ ಮೈಸೂರು ಕಾಂಗ್ರೆಸ್ಸಿನಲ್ಲಿ
ಮುಖ್ಯವಾಗಿ ಎರಡು ಗುಂಪುಗಳಿದ್ದವು. ಅವು ಮುಖ್ಯವಾಗಿ ಕೆ.ಸಿ.ರೆಡ್ಡಿ ಗುಂಪು ಮತ್ತು ಕೆಂಗಲ್ ಹನುಮಂತಯ್ಯ
ಗುಂಪು. ಈ ಎರಡೂ ಗುಂಪುಗಳು ಎಷ್ಟು ಬಲಿಷ್ಠವಾಗಿದ್ದವು ಎಂದರೆ ಯಾರು ಅಧಿಕಾರಕ್ಕೆ ಏರಿದರೂ ಅವರು ಸದಾ
ಹೆದರುತ್ತಿದ್ದುದು ವಿರೋಧ ಪಕ್ಷಕ್ಕಲ್ಲ; ಬದಲಾಗಿ ತಮ್ಮದೇ ಪಕ್ಷದ ಇನ್ನೊಂದು ಗುಂಪಿಗೆ! ಈ ಎರಡು ಗುಂಪುಗಳಲ್ಲಿ
ಕೆ.ಸಿ. ರೆಡ್ಡಿ ಗುಂಪು ಏಕೀಕರಣವನ್ನು ಪ್ರಬಲವಾಗಿ ವಿರೋಧಿಸುತ್ತಿತ್ತು. ಕೆಂಗಲ್ ಗುಂಪು ಏಕೀಕರಣವನ್ನು
ಬೆಂಬಲಿಸುತ್ತಿತ್ತು. ಏಕೀಕರಣ ಬೆಂಬಲಿಸುವ ಗುಂಪು ಕನ್ನಡ ಮಾತನಾಡುವ ಜನರೆಲ್ಲ ಒಂದು ಆಡಳಿತಕ್ಕೆ ಸೇರಬೇಕು
ಎಂಬ ಮೈಸೂರು ಹೊರಭಾಗದ ಚಳವಳಿಗಾರರ ನಿಲುವನ್ನು ಹೊಂದಿತ್ತು. ಏಕೀಕರಣ ವಿರೋಧಿಸುವ ಗುಂಪು ಬಹುಮುಖ್ಯವಾಗಿ
ಎರಡು ಕಾರಣಗಳಿಗಾಗಿ ಏಕೀಕರಣವನ್ನು ವಿರೋಧಿಸುತ್ತಿತ್ತು. ಮೊದಲನೇ ಕಾರಣ ಮೈಸೂರು ರಾಜ್ಯ ಅಲ್ಲಿನ ರಾಜರು
ಮತ್ತು ದಿವಾನರುಗಳ ಕಾರಣದಿಂದ ಆಗಲೇ ಎಲ್ಲ ವಿಷಯಗಳಲ್ಲು ಸಮೃದ್ಧವಾಗಿದ್ದು `ಮಾದರಿರಾಜ್ಯ’ ಎಂಬ ಕೀರ್ತಿಗೆ
ಪಾತ್ರವಾಗಿತ್ತು. ಮಹಾತ್ಮಾಗಾಂಧಿ ಕೂಡ ಈ ರಾಜ್ಯವನ್ನು ಇತರ ರಾಜ್ಯಗಳಿಗೆ ಮಾದರಿಯಾಗಿ ತೋರಿಸುತ್ತಿದ್ದರು.
ಇಂತಹ ಮಾದರಿರಾಜ್ಯದಲ್ಲಿ ಸುಖವಾಗಿರುವ ತಾವು ಆ ಕಡೆಯವರೊಂದಿಗೆ ಕೂಡಿಕೊಂಡರೆ ಅವರ ಬಡತನವನ್ನು ಹಂಚಿಕೊಳ್ಳಬೇಕಾಗುತ್ತದೆ
ಎಂಬುದು. ಎರಡನೆಯದು ಉತ್ತರ ಭಾಗದಲ್ಲಿ ಲಿಂಗಾಯತ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದು, ಅವರನ್ನೆಲ್ಲ
ಸೇರಿಸಿಕೊಂಡು ರಾಜ್ಯ ರಚಿಸಿಕೊಂಡರೆ, ಬಹುತೇಕ ಅಧಿಕಾರದ ಸ್ಥಾನಮಾನಗಳು ಅವರ ವಶವಾಗುತ್ತವೆ ಎಂಬುದು
ಈ ಭಾಗದ ಬಹುಸಂಖ್ಯಾತರಾದ ಗೌಡ ಮುಂತಾದ ಸಮುದಾಯದ ನಾಯಕರುಗಳಲ್ಲಿ ಮೂಡಿದ್ದ ಆತಂಕ! ಹೀಗಾಗಿ ಏಕೀಕರಣ
ಬೆಂಬಲಿತ ಚಳವಳಿಯಂತೆ ಏಕೀಕರಣ ವಿರೋಧಿ ಚಳವಳಿ ಕೂಡ ನಡೆದು ಮಂಡ್ಯದಲ್ಲಿ `ಏಕೀಕರಣ ವಿರೋಧಿ ಸಮಾವೇಶ’
ಕೂಡ ನಡೆದೇಬಿಟ್ಟಿತು.
ಈ ತಿಕ್ಕಾಟ ತೀವ್ರತರವಾಗಿ ನಡೆಯುತ್ತಲೇ ಇತ್ತು.
1947ರಲ್ಲಿ ದೇಶ ಸ್ವಾತಂತ್ಯವಾದರೂ ಮೈಸೂರು ಸಂಸ್ಥಾನದಲ್ಲಿ ನಮ್ಮ ರಾಷ್ಟ್ರೀಯಧ್ವಜ ಹಾರಲಿಲ್ಲ! ಅದಕ್ಕೆ
ಕಾರಣ ಹೊಸದಾಗಿ ರಚನೆಯಾಗುತ್ತಿರುವ ಭಾರತ ದೇಶದಲ್ಲಿ ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಮೊದಲು ಒಪ್ಪಿಕೊಂಡಿದ್ದ
ಮೈಸೂರು ಮಹಾರಾಜರು ಕೊನೆಗಳಿಗೆಯಲ್ಲಿ ತಮ್ಮ ನಿಲುವು ಬದಲಿಸಿ ಉಲ್ಟಾಹೊಡೆದದ್ದು! ಜನ ಸುಮ್ಮನಿರಲಿಲ್ಲ.
ರಾಜಸತ್ತೆಯ ವಿರುದ್ಧ ಸಿಡಿದೆದ್ದು `ಮೈಸೂರು ಚಲೋ’ ಚಳವಳಿ ಆರಂಭಿಸಿದರು. ಈ ಚಳವಳಿ ತೀರ್ವಗೊಂಡು ಅನೇಕ
ಸಾವುನೋವು ಸಂಭವಿಸುವ ಹಂತಕ್ಕೆ ಹೋದಾಗ ಅನಿವಾರ್ಯವಾಗಿ ಒತ್ತಡಕ್ಕೆ ಮಣಿದ ಮೈಸೂರು ಮಹಾರಾಜರು ತಮ್ಮ
ರಾಜ್ಯವನ್ನು ಭಾರತ ಗಣರಾಜ್ಯದಲ್ಲಿ ವಿಲೀನಗೊಳಿಸಲು ಒಪ್ಪಿಕೊಳ್ಳಲೇಬೇಕಾಯಿತು. ತತ್ಪರಿಣಾಮವಾಗಿ
1948ರ ಅಕ್ಟೋಬರ್ ತಿಂಗಳಲ್ಲಿ (ವಿಜಯದಶಮಿಯಂದು) ಮೈಸೂರು ಭಾಗದಲ್ಲಿ ಮೊದಲಬಾರಿ ಜವಾಬ್ದಾರಿಯುತ ಸರ್ಕಾರ
ರಚನೆಯಾಗಿ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾದರು.
ವಿಶೇಷತೆಯೆಂದರೆ ಭಾರತ ಸಂವಿಧಾನ ರಚನೆಯಾಗಿ ಜಾರಿಗೆ
ಬರುವ ಮೊದಲೇ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದದ್ದು! ಅದು ಹೇಗೆ ಎಂದರೆ ಆ ಕಾಲದಲ್ಲಿ ಭಾರತ
ಸಂವಿಧಾನ ರಚಿಸುವ ಪ್ರಕ್ರಿಯೆ ದೆಹಲಿಮಟ್ಟದಲ್ಲಿ ನಡೆಯುತ್ತಿದ್ದಂತೆ ಮೈಸೂರಲ್ಲಿ ಮೈಸೂರು ರಾಜ್ಯಕ್ಕೊಂದು
ಸಂವಿದಾನ ರಚಿಸಲು ಸಮಿತಿಯೊಂದು ನೇಮಕವಾಗಿತ್ತು. ದೇಶದ ವಿದ್ಯಮಾನಗಳ ಕಾರಣದಿಂದ ಈ ಸಮಿತಿಯಲ್ಲಿ ಅಭಿಪ್ರಾಯಭೇದ
ಉಂಟಾಗಿ ಸಮಿತಿ ಹೋಳಾಯಿತು. ಒಂದು ಗುಂಪು `ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಇರಬೇಕು’ ಎಂದು
ವಾದಿಸತೊಡಗಿದರೆ ಇನ್ನೊಂದು ಗುಂಪು `ಅದರ ಅವಶ್ಯಕತೆಯಿಲ್ಲ; ಸಧ್ಯದಲ್ಲಿ ಭಾರತದೇಶಕ್ಕೇ ಅನ್ವಯವಾಗುವ
ಸಂವಿಧಾನ ಜಾರಿಗೆ ಬರಲಿದ್ದು ಅದೇ ಸಂವಿಧಾನ ಮೈಸೂರಿಗೂ ಅನ್ವಯಿಸತಕ್ಕದ್ದು’ ಎಂದು ವಾದಿಸತೊಡಗಿತು.
ಎರಡನೇ ಗುಂಪು ದೊಡ್ಡದಾಗಿದ್ದ ಕಾರಣ ಮೈಸೂರು ಸಂವಿಧಾನ ರಚನೆ ಪ್ರಸ್ತಾಪ ಬಿದ್ದುಹೋಗಿ ಭಾರತ ಸಂವಿಧಾನವನ್ನೇ
ಒಪ್ಪಿಕೊಳ್ಳುವುದೆಂದು ತೀರ್ಮಾನವಾಯಿತು. ಈ ಮೈಸೂರು ಸಂವಿಧಾನ ರಚನೆಗಾಗಿ ನೇಮಿಸಲಾಗಿದ್ದ ಸಮಿತಿಯನ್ನೇ
ಮೈಸೂರು ರಾಜರು ಆದೇಶ ಹೊರಡಿಸುವ ಮೂಲಕ `ಮೈಸೂರು ವಿಧಾನಸಭೆ’ಯಾಗಿ ತಾತ್ಕಾಲಿಕವಾಗಿ (ಹೊಸ ಸಂವಿಧಾನ
ಜಾರಿಗೆ ಬರುವವರೆಗೆ) ಅಸ್ತಿತ್ವಕ್ಕೆ ತಂದರು!
ಹೀಗೆ ದೇಶ ಸ್ವಾತಂತ್ರ್ಯಗಳಿಸಿದ ಎರಡೇ ತಿಂಗಳಲ್ಲಿ
ಪ್ರಜಾಪ್ರಭುತ್ವ ಮಾದರಿಯ ಚಿಕ್ಕಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತಾದರು ಏಕೀಕರಣಕ್ಕೆ ತೀವ್ರತರದ
ಹಿನ್ನಡೆಯಾಯಿತು. ಅದಕ್ಕೆ ಮುಖ್ಯಕಾರಣ ಏಕೀಕರಣವನ್ನು ವಿರೋಧಿಸುತ್ತಿದ್ದ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದುದು.
ಆದರೆ ಮೈಸೂರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಏಕೀಕರಣದ ಪರವಾಗಿದ್ದ ಕೆಂಗಲ್ ಹನುಮಂತಯ್ಯ
ಇದ್ದರು. ಅವರೂ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದರು. ಸರ್ಕಾರ ಅವರ ಹೇಳಿಕೆಗಳನ್ನು ವೈಯಕ್ತಿಕ
ಹೇಳಿಕೆಗಳು ಎಂದು ತಿರಸ್ಕರಿಸುತ್ತಿತ್ತು! ಹೀಗೆ ಏಕೀಕರಣದ ಬಗ್ಗೆ ಈ ಭಾಗದಲ್ಲಿ ರಾಜಕೀಯ ನಾಯಕರಲ್ಲಿ
ನಡೆಯುತ್ತಿದ್ದ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಹೋಯಿತು. ಆದರೆ 1950ರಲ್ಲಿ ಸಂವಿಧಾನ ಜಾರಿಗೆ ಬಂದಮೇಲೆ
ಅದರ ಅನ್ವಯ 1952 ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಏಕೀಕರಣ
ಪರವಾಗಿದ್ದ ಕೆಂಗಲ್ ಮುಖ್ಯಮಂತ್ರಿಯಾದ್ದರಿಂದ ಮತ್ತು ಕೆ.ಸಿ.ರೆಡ್ಡಿ ಕೇಂದ್ರದ ಮಂತ್ರಿಯಾಗಿ ರಾಷ್ಟ್ರರಾಜಕಾರಣಕ್ಕೆ
ಹೋಗುವ ಮೂಲಕ ಬೇರೆದಾರಿ ಕಂಡುಕೊಂಡದ್ದರಿಂದ ಏಕೀಕರಣಕ್ಕೆ ಒಂದಿಷ್ಟು ಮುನ್ನಡೆಯಾಯಿತಾದರು ಕೆ.ಸಿ.ರೆಡ್ಡಿ
ಗುಂಪು ಕಾಲೆಳೆಯುತ್ತಲೇ ಇತ್ತು.
ಸುಮಾರು ಎಂಟೊಂಬತ್ತು ವರುಷಗಳ ಕಾಲ ನಡೆದ ರಾಜಕೀಯ
ನಾಯಕರ ಈ ಹಗ್ಗ ಜಗ್ಗಾಟದಿಂದ ಜನರೋಷಿಹೋದರು. ಆಗ ಶಿವಮೊಗ್ಗ ಜಿಲ್ಲೆಯ ಮೂಲಕ ಮೂವರು ನಾಯಕರು ಮೈಸೂರಿನ
ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖರಾಗಿದ್ದರು. ಅವರಲ್ಲಿ ರಾಜಕೀಯ ಕ್ಷೇತ್ರಕ್ಕೆ
ಸೇರಿದವರು ಇಬ್ಬರು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇರಿದವರು ಒಬ್ಬರು. ಮೊದಲ ಇಬ್ಬರು ಕಡಿದಾಳ್ ಮಂಜಪ್ಪ
ಮತ್ತು ಶಾಂತವೇರಿ ಗೋಪಾಲಗೌಡ. ಕೊನೆಯ ಒಬ್ಬರು ಕುವೆಂಪು. ಈ ಮೂವರು ಮೂರು ರೀತಿಯ ಕರ್ನಾಟಕವನ್ನು ಪ್ರತಿಪಾದಿಸಿದರು!
ಕಡಿದಾಳ್ ಮಂಜಪ್ಪ `ತುಂಡು ಕರ್ನಾಟಕ’ (ಎರಡು ಕರ್ನಾಟಕ ರಚನೆ) ವನ್ನು ಪ್ರತಿಪಾದಿಸಿದರು. (ಕಡಿದಾಳ್
ಅವರ ಈ ನಿಲುವನ್ನು ತೀರ್ವವಾಗಿ ಖಂಡಿಸಿದ ಆ ಕಾಲದ ಪ್ರಮುಖ ಏಕೀಕರಣ ಹೋರಾಟಗಾರ ಪಾಟೀಲ ಪುಟ್ಟಪ್ಪ ಕಡಿದಾಳ್
ಮಂಜಪ್ಪ ಅವರನ್ನು `ಕಡಿದು ಆಳುವ ಮಂಜಪ್ಪ’ ಎಂದು ಟೀಕಿಸಿ ಲೇಖನ ಕೂಡ ಬರೆದರು) ಶಾಂತವೇರಿ ಗೋಪಾಲಗೌಡ
`ಅಖಂಡ ಕರ್ನಾಟಕ’ವನ್ನು ಪ್ರತಿಪಾದಿಸಿದರು. ಕುವೆಂಪು ಇವೆರಡಕ್ಕೂ ಭಿನ್ನವಾದ `ಸಾಂಸ್ಕೃತಿಕ ಕರ್ನಾಟಕ’ವನ್ನು
ಪ್ರತಿಪಾದಿಸಿದರು. ಅದನ್ನು ಬೆಂಬಲಿಸುವುದಕ್ಕಾಗಿ ಹುಟ್ಟಿದ್ದು ಅವರ `ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪ್ರಸಿದ್ಧ ಗೀತೆ.
ಮೈಸೂರು ರಾಜಕಾರಣಿಗಳಲ್ಲಿ ಏಕೀಕರಣದ ಬಗ್ಗೆ ಈ ರೀತಿ
ದ್ವಂದ್ವ ನಿಲುವು ಇದ್ದದ್ದು ನಿಜವಾದರೂ ಸಾಂಸ್ಕೃತಿಕ ನಾಯಕರಲ್ಲಿ ಈ ದ್ವಂದ್ವ ಇರದೇ ಬಹುತೇಕ ಎಲ್ಲರೂ
ಮೈಸೂರು ರಾಜ್ಯದಾಚೆಗಿನ ಸಾಹಿತಿಗಳಂತೆಯೇ ಏಕೀಕರಣದ ಪರವಾಗಿದ್ದರು ಎಂಬುದನ್ನು ನಾವು ಗಮನಿಸಬೇಕು.
ಕುವೆಂಪು ಅವರ ಮೇಲಿನ ನಿಲುವನ್ನು ನೋಡಿದ್ದೇವೆ. 1956 ಏಕೀಕರಣದ ಹಿಂದಿನ ವರ್ಷ ಮೈಸೂರಿನಲ್ಲಿ ನಡೆದ
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ಶಿವರಾಮ ಕಾರಂತ ಮೈಸೂರು ಪ್ರಾಂತ್ಯದಲ್ಲಿನ
ಏಕೀಕರಣ ವಿರೋಧಿ ಗುಂಪಿನ ನಿಲುವನ್ನು ತೀವ್ರವಾಗಿ ಖಂಡಿಸಿ ಏಕೀಕರಣಪರವಾಗಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ
ಧ್ವನಿಯೆತ್ತಿದರು. ಈ ಎಲ್ಲ ಘಟನೆಗಳ ಪರಿಣಾಮದಿಂದ ಅಂತೂ ಇಂತೂ ಹಳೇಮೈಸೂರು ರಾಜ್ಯ ತನ್ನ ಅಸ್ತಿತ್ವವನ್ನು
ಕಳೆದುಕೊಂಡು 1956ರಲ್ಲಿ ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿಕೊಂಡಿತಾದರೂ ಯಾರು ಏಕೀಕರಣದ ಮುಂಚೂಣಿಯಲ್ಲಿ
ನಿಂತು ಹೋರಾಟಮಾಡಿದ್ದರೋ ಯಾರೂ ಏಕೀಕರಣಕ್ಕಾಗಿ ತಮ್ಮ ಜೀವವನ್ನೆಲ್ಲ ತ್ಯಾಗಮಾಡಿದ್ದರೋ ಅವರೆಲ್ಲರಿಗೂ
ಅಂದರೆ ಮೈಸೂರಾಚೆಯ ಜನನಾಯಕರಿಗೆ ಅಸಮಾಧಾನವಾಗುವಂತೆಯೇ ರಾಜ್ಯೋದಯವಾಯಿತು.
ಹಂಪಿ ರಾಜಧಾನಿಯಾಗಲಿಲ್ಲ;
ದುರ್ಗಾದೇವಿ/ ಬನಶಂಕರಿ ನಾಡದೇವಿಯಾಗಲಿಲ್ಲ; ರಾಜ್ಯ ಕರ್ನಾಟಕ ಎಂದು ಹೆಸರು ಪಡೆಯಲಿಲ್ಲ. ರಾಜ್ಯಕ್ಕೆ
ಮೈಸೂರು ಎಂದು ಹೆಸರಿಡಲಾಯಿತು (ಮೈಸೂರಿಗರು ತಮ್ಮ ಚಿಕ್ಕರಾಜ್ಯವನ್ನು ಏಕೀಕರಣವಾಗಿ ಹುಟ್ಟಲಿರುವ ಹೊಸರಾಜ್ಯದಲ್ಲಿ
ವಿಲೀನಗೊಳಿಸಲು ಒಪ್ಪಿಕೊಂಡ ಕಾರಣಕ್ಕೆ ಅವರನ್ನು ಖುಷಿಪಡಿಸಲು). ರಾಜ್ಯಪಾಲರಾಗಿ ಮೈಸೂರು ರಾಜರೇ ಆಯ್ಕೆಯಾದರು
(ರಾಜಪದವಿಯನ್ನು ಬಿಟ್ಟುಕೊಟ್ಟದ್ದಕ್ಕೆ). ಬೆಂಗಳೂರೇ ರಾಜಧಾನಿಯಾಯಿತು. ಭುವನೇಶ್ವರಿಯೇ ನಾಡದೇವಿಯಾದಳು!
ಎಲ್ಲವೂ ಮೈಸೂರುಮಯವಾಗಿಬಿಟ್ಟಿತು! ಮೈಸೂರಿನ ಹೊರಗಿನವರಿಗೆ ಉಸಿರಾಡುವಷ್ಟು ಸಮಾಧಾನ ತಂದುಕೊಟ್ಟ ಸಂಗತಿಯೆಂದರೆ
ಮೈಸೂರು ಭಾಗದ ಹೊರಗಿನ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದ ಒಂದೇ ಒಂದು ಸಂಗತಿ. ಆದರೆ ಅವರ ಅಸಮಾಧಾನದ
ಅಗಾಧತೆಯನ್ನು ಈ ಚಿಕ್ಕ ಅಂಶ ಶಮನಗೊಳಿಸಲು ಆಗಲಿಲ್ಲ. ಅವರ ಅಸಮಾಧಾನವನ್ನು ಅಭಿವ್ಯಕ್ತಗೊಳಿಸಿದ ಎರಡು
ಪ್ರಮುಖ ನಿದರ್ಶನಗಳು ಇತಹಾಸದಲ್ಲಿ ದಾಖಲಾಗಿವೆ. ಅವೆಂದರೆ ಒಂದು: ಏಕೀಕರಣದ ದಿನ ಕರ್ನಾಟಕ ಕುಲಪುರೋಹಿತರೆಂದು
ಖ್ಯಾತರಾಗಿದ್ದ ಆಲೂರು ವೆಂಕಟರಾಯರು ನೀಡಿದ, “ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಕರೆಯಲ್ಪಟ್ಟಿರುವ
ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ…” ಎಂದು ನೀಡಿದ `ಅಸಮಾಧಾನ ಶುಭಸಂದೇಶ’. ಇನ್ನೊಂದು ಆಗಿನ ಮೈಸೂರೇತರ
ಏಕೀಕರಣ ನಾಯಕರು ಸೋಲಿನ ದನಿಯಲ್ಲಿ ಪರಸ್ಪರರು ಮಾತಾಡಿಕೊಂಡ, “ಈಗ ಆದದ್ದು ಕರ್ನಾಟಕದ ಏಕೀಕರಣವಲ್ಲ;
ಬದಲಾಗಿ ಮೈಸೂರಿನ ವಿಸ್ತರಣೆ” (Not the Unification of Karnataka but the Extention of
Mysore) ಎಂಬ ಮಾತು. `ಮೈಸೂರಿಗರು ನಮ್ಮನ್ನು ಸೋಲಿಸಿ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು’ ಎಂಬ
ಅವರ ನೋವಿನ ನುಡಿ.
ಕರ್ನಾಟಕ ಏಕೀಕರಣ ಕುರಿತು ಕುವೆಂಪು ಅವರ ನಿಲುವು
ಏನಿತ್ತು ಎಂಬ ಸಂಗತಿ ಈ ಮೊದಲೇ ಬಂದಿದೆ. ಅವರ ನಿಲುವು ಮತ್ತು ಅದಕ್ಕಾಗಿ ಅವರ ಬದ್ಧತೆ ಹೇಗಿತ್ತು
ಎಂಬುದನ್ನು ತೋರಿಸುವ ಅವರ ಜೀವನದ ಒಂದು ಘಟನೆಯನ್ನು ನೆನಪಿಸಿಕೊಂಡು ಈ ಲೇಖನವನ್ನು ಮುಗಿಸುತ್ತೇನೆ.
ಆ ಘಟನೆ ಹೀಗಿದೆ: ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಕಾಲ. ಮೈಸೂರಿನಲ್ಲಿ ಕುವೆಂಪು ಪ್ರಾಧ್ಯಾಪಕರಾಗಿದ್ದರು.
ಏಕೀಕರಣ ಚಳವಳಿ ತೀವ್ರಗೊಂಡಿತ್ತು. ಮುಖ್ಯಮಂತ್ರಿ ಏಕೀಕರಣ ವಿರೋಧಿ. ಕುವೆಂಪು ಅದರ ಪರವಾದಿ. ಕುವೆಂಪು
ಏಕೀಕರಣದ ಪರವಾಗಿ ಅನೇಕ ಕಡೆ ಭಾಷಣಮಾಡುತ್ತಿದ್ದರು. ಕವಿತೆ ಬರೆಯುತ್ತಿದ್ದರು. ಅವರ ಈ ನಡವಳಿಕೆ ಸರ್ಕಾರದ
ಕೆಂಗಣ್ಣಿಗೆ ಗುರಿಯಾಯಿತು. ಸರಿ. ಕೆ.ಸಿ. ರೆಡ್ಡಿ ಸರ್ಕಾರ ಅವರಿಗೆ ನೋಟೀಸ್ ಜಾರಿಮಾಡಿತು. `ಸರ್ಕಾರದ
ಸೇವೆಯಲ್ಲಿರುವ ನೀವು ಸರ್ಕಾರದ ನಿಲುವಿಗೆ ವಿರೋಧವಾಗಿ ಏಕೀಕರಣವನ್ನು ಬೆಂಬಲಿಸುತ್ತಿರುವುದಕ್ಕೆ ಕಾರಣಕೊಡಿ’
ಎಂಬುದು ನೋಟೀಸಿನ ಸಾರಾಂಶ. ಕುವೆಂಪು ಈ ನೋಟಿಸ್ಸಿಗೆ ಉತ್ತರವಾಗಿ ಒಂದು ದೊಡ್ಡ ಪದ್ಯವನ್ನೇ ಬರೆದು
ಸರ್ಕಾರದ ಮುಖಕ್ಕೆ ಎಸೆದರು. ಆ ಪದ್ಯದ ಕೆಲವು ಸಾಲುಗಳು ಹೀಗಿದ್ದವು: “ನೃಪತುಂಗನೆ ಚಕ್ರವರ್ತಿ/ ಪಂಪನಿಲ್ಲಿ
ಮುಖ್ಯಮಂತ್ರಿ/ ರನ್ನ ಜನ್ನ ನಾಗವರ್ಮ/ ರಾಘವಾಂಕ ಹರಿಹರ/ ಬಸವೇಶ್ವರ ನಾರಾಣಪ್ಪ/ ಸರ್ವಜ್ಞ ಷಡಕ್ಷರ/
ಸರಸ್ವತಿಯೆ ರಚಿಸಿದೊಂದು/ ನಿತ್ಯಸಚಿವ ಮಂಡಲ/ ತನಗೆ ರುಚಿರ ಕುಂಡಲ/ ಅಖಂಡ ಕರ್ನಾಟಕ/ ಅಲ್ತೊ ನಮ್ಮ
ಕೀರ್ತಿಶನಿಯ ರಾಜಕೀಯ ನಾಟಕ”
ಕುವೆಂಪು ಬರೆದ ಈ ಪದ್ಯರೂಪದ ಉತ್ತರ ಕೆ.ಸಿ.ರೆಡ್ಡಿಯವರ
ಸರ್ಕಾರವನ್ನು ಮತ್ತಷ್ಟು ಕೆರಳಿಸುತ್ತದೆ. ಆಗ ಕುವೆಂಪು ಅವರನ್ನು ಏನು ಮಾಡಬಹುದೆಂದು ಸರ್ಕಾರ ನಿಟ್ಟೂರು
ನಿಟ್ಟೂರು ಶ್ರೀನಿವಾಸರಾಯರನ್ನು ಸಲಹೆ ಕೇಳುತ್ತದೆ. ನಿಟ್ಟೂರು ಶ್ರೀನಿವಾಸರಾಯರು ಆ ಕಾಲದ ಬಹುದೊಡ್ಡ ಕಾನೂನು
ಪಂಡಿತರು. ಮೈಸೂರು ರಾಜ್ಯದ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿದ್ದವರು. ಮುಂದೆ ನೆಹರೂ ನೇತೃತ್ವದ
ಮೊದಲ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಆ ಸರ್ಕಾರ ರಚಿಸಿದ ಕೇಂದ್ರ ವಿಚಕ್ಷಣಾ ಆಯೋಗ
(Central Vigilance Commission) ದ ಮೊದಲ ಮುಖ್ಯಸ್ಥರಾಗುವ ಗೌರವಕ್ಕೆ ಪಾತ್ರರಾದವರು. ಕಾನೂನಿನ
ವಿಷಯದಲ್ಲಿ ಹೀಗೆ ಪ್ರಕಾಂಡ ಪಂಡಿತರಾಗಿದ್ದ ನಿಟ್ಟೂರು ಶ್ರೀನಿವಾರಾಯರು ಕೇವಲ ಕಾನೂನಿನ ದೃಷ್ಟಿಕೋನದಿಂದಷ್ಟೇ
ನೋಡದೇ ಎಲ್ಲಕಡೆಯಿಂದಲೂ ಸಮಸ್ಯೆಯನ್ನು ನೋಡಿ ಪರಿಶೀಲಿಸಿ ಅಂತಿಮವಾಗಿ ಸರ್ಕಾರಕ್ಕೆ ಕೊಟ್ಟ ಸಲಹೆ ಹೀಗಿತ್ತು:
“ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಆದ್ದರಿಂದ ಸರ್ಕಾರ ಅವರಿಗೆ ನೀಡಿದ ನೋಟಿಸನ್ನು
ವಾಪಸ್ಸು ಪಡೆಯುವುದು ಒಳ್ಳೆಯದು.”
******
ಡಾ. ರಾಜೇಂದ್ರ ಬುರಡಿಕಟ್ಟಿ
2017, ನವೆಂಬರ್ 30