Thursday, November 16, 2017

ಟಿಪ್ಪು ಶೃಂಗೇರಿ ಮಠಕ್ಕೆ ಬರೆದ ಪತ್ರಗಳ ಆಯ್ದ ಭಾಗಗಳು

ಟಿಪ್ಪು ಶೃಂಗೇರಿ ಮಠಕ್ಕೆ ಬರೆದ ಪತ್ರಗಳ ಆಯ್ದ ಭಾಗಗಳು
ಎಲ್ಲ ಪತ್ರಗಳ ಆರಂಭವು ಸಾಮಾನ್ಯವಾಗಿ ಹೀಗಾಗುತ್ತದೆ:

"ಶ್ರೀ ಮತ್ಪರಮಹಂಸಾದಿ ಯಥೋಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಟೀಪು ಸುಲ್ತಾನ ಬಾದಶಹಾರವರ ಸಲಾಂ ಅದಾಗಿ . . . . ."
ಕೆಲವು ಪತ್ರಗಳ ಆಯ್ದಭಾಗಗಳು:
ಪತ್ರ 1
“ನೀವು ದೊಡ್ಡವರು, ತಪಸ್ವಿಗಳು; ಬಹುಜನ ಕ್ಷೇಮ, ಚಿಂತಿಸುವಂಥಾದು ನಿಮಗೆ ವಿಹಿತಧರ್ಮವಾದ ಕಾರನ ಶತ್ರುಗಳು ಯಾವತ್ತೂ ಪರಾಜಿತರಾಗಿ ಪಲಾಯನವಾಗುವ ಹಾಗೂ ಸ್ವದೇಶದ ಯಾವತ್ತೂ ಜನವೂ ಕ್ಷೇಮದಿಂದ ಇರುವ ಹಾಗೂ ನೀವು, ನಿಮ್ಮ ಬ್ರಾಹ್ಮಣರು ಸಹಿತವಾಗಿ ಈಶ್ವರ ಪ್ರಾರ್ಥನೆ ಮಾಡಿ ಸಕಲರೂ ಸುರಕ್ಷಿತವಾಗಿ ಇರುವ ಹಾಗೆ ಆಶೀರ್ವಾದ ಮಾಡಿಸಬೇಕು.”


ಪತ್ರ 2
“ಕಳುಹಿಸಿದ ಪತ್ರಿಕೆಯಿಂದ ಸಕಲಾಭಿಪ್ರಾಯವು ತಿಳಿಯಲಾಯಿತು. ಮರಾಟೇರ ಕಡೆ ಕುದುರೆಯವರು ಬಂದು ಶೃಂಗೇರಿಯಲ್ಲಿ ಇದ್ದ ಬ್ರಾಹ್ಮಣರು ಮುಂತಾದವರನ್ನು ಬಹಳ ಘಾತಪಾತಗಳ ಮಾಡಿ, ಶಾರದಾ ಅಮ್ಮನವರನ್ನು ಕಿತ್ತುಹಾಕಿ, ಮಠದಲ್ಲಿ ಇದ್ದ ಯಾವತ್ತೂ ಸಾಮಾನು ತೆಗೆದುಕೊಂಡು ಹೋದ ಕಾರಣ, ನಾಲ್ಕು ಜನ ಶಿಷ್ಯರು ಸಹ ಕಾರಕಳಕ್ಕೆ ಬಂದು ಇರುವುದರಿಂದ ಶಾರದಾ ಅಮ್ಮನವರು ಯುಗಾಂತರದಲ್ಲಿ ಪ್ರತಿಷ್ಠೆ ಆದದ್ದೇ ಹೊರತು ಮತ್ತೊಂದಲ್ಲ. ಈ ದೇವರ ಪ್ರತಿಷ್ಠೆ ಆಗಬೇಕಾದರೆ ಸರಕಾರದಿಂದ ಕುಮ್ಮಕ್ಕು ಆಗಿ ದೇವರ ಪ್ರತಿಷ್ಠೆ ಮಾಡಿಸಿದಲ್ಲಿ ಸೂರ್ಯಚಂದ್ರರು ಉಳ್ಳ ಪರಿಯಂತರ ಕೀರ್ತಿ ನಿಲ್ಲುತ್ತಾ ಇದ್ದೀತು. ಈ ಬಗೆ ದವಸ, ಜಿನಸು, ಸಹ ಕೊಡುವ ಹಾಗೆ ಅಪ್ಪಣೆ ಆದಲ್ಲಿ ಸಂತರ್ಪಣೆ ಮಾಡಿಸಿ, ಪ್ರತಿಷ್ಠೆ ಮಾಡಿಸುವುದಾಗಿ ಬರೆದು ಇದ್ದುದು ಸರಿಯಷ್ಟೆ. ಅಂಥಾ ಸ್ಥಳಕ್ಕೆ ಈಗ್ಗೆ ದ್ರೋಹಿತನಾ ಮಾಡಿದ ಮೇಲೆ ಕಲಿಯುಗದಲ್ಲಿ ಮಾಡಿದ್ದನ್ನು ತ್ವರೆಯಿಂದಲೇ ಅವರು ನುಭವಿಸಬೇಕಾದೀತು. ಗುರುದ್ರೋಹ ಮಾಡಿದ್ದಕ್ಕೆ ವಂಶ ನಾಶ ಆಗುವುದರಲ್ಲಿ ಸಂದೇಹವಿಲ್ಲ. ಈ ತುಂಟ ಜನರು ಪ್ರಜೆಗಳು ಮುಂತಾದವರಿಗೆ ಸಂಕಟಪಡಿಸುವರು ನೀವು ಪ್ರತ್ಯಕ್ಷ ನೋಡಿಯೇ ಇದ್ದೀರಿ. ಇದಕ್ಕೆ ಅವರು ಯಾವ ಪ್ರಕಾರ ಕ್ಷೀಣಗತಿ ಆಗಬೇಕೋ ಆ ಮೇರೆಗೆ ಆಶೀರ್ವಾದ ಮಾಡುವುದು.”
“ಪ್ರಕೃತ ಶಾರದಾ ಅಮ್ಮನವರ ಪ್ರತಿಷ್ಠೆ ಬಗ್ಗೆ ನಗದೂನು ಇನ್ನೂರು ರಹತಿ, ದವಸಾನೂ ಇನ್ನೂರು ರಹತಿ, ಉಭಯಂ ನಾನೂರು ರಹತಿ ಸರಕಾರದಿಂದ ಕೊಡುವ ಹಾಗೂ ಇದು ಹೊರತು ಇನ್ನೂ ಏನು ಜಿನಿಸು ಬೇಕಾದರೂ ಕ್ರಯಕ್ಕೆ ಕೊಡಿಸುವ ಹಾಗೆ ಸಹ ನಗರದ ಅಸಫನಿಗೆ ಮನಷೂರ್ ಮಲಪೂಫಿ ಮಾಡಿ ಕಳುಹಿಸಿ ಇದ್ದೀತು. ಮನಷೂರನ್ನು ಅಸಫನ ಬಳಿಗೆ ಕಳುಹಿಸಿ, ನಗದು –ದವಸ ಸಹ ತರಿಸಿಕೊಂಡು, ಸಂತರ್ಪಣೆ ಮಾಡಿಸಿ, ಶಾರದಾ ಅಮ್ಮನವರ ಪ್ರತಿಷ್ಠೆ ಮಾಡಿಸಿ, ದೇವರ ಸೇವೆಯು ನಡೆಯುವಂತೆ ಮಾಡಿಸುತ್ತಾ, ನಮ್ಮ ಶ್ರೇಯಸ್ಸು ಅಭಿವೃದ್ಧಿ ಆಗುವ ಹಾಗೂ ಶತ್ರುನಾಶ ಆಗುವ ಪ್ರಕಾರಕ್ಕೆ (ಸಹ) ತಪಸ್ಸು ಮಾಡಿಕೊಂಡು, ಸ್ವಸ್ಥದಲ್ಲಿ ಇರುವಂತೆ ಮಾಡಿಸುವುದು.”
ಪತ್ರ 3
“ತಮ್ಮ ಸ್ವಾರಿ ಬಗ್ಗೆ ಒಂದು ಪಾಲಕಿ, ಅದರ ಸರಂಜಾವು ಸುದಾ ಕೊಡಿಸುವ ಹಾಗೆ ನಗರದ ಅಸಫನಿಗೆ ಬರೆಯಲಾಗಿದೆ.” . . . .”ಶತ್ರುನಾಶ ಆಗುವ ಪ್ರಕಾರ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಮೇರೆಗೆ ಆಶೀರ್ವಾದ ಮಾಡುತ್ತಾ ಬರಬೇಕು.”
“ರಾಜದ್ರೋಹ ಮಾಡಿದವರಿಗೆ ನಾಶವಾಗುವಂತೆ ಸಹ ಈಶ್ವರ ಧ್ಯಾನವನ್ನು ಮಾಡುವುದು. ಈಶ್ವರನ ಕಟಾಕ್ಷದಿಂದಲೂ ನಿಮ್ಮ ಆಶೀರ್ವಾದದಿಂದಲೂ ಲೋಕಕ್ಕೆ ಉಪದ್ರವ ಶೀಘ್ರ ಪರಿಹಾರವಾದೀತು.”.. “ಈಶ್ವರ ಧ್ಯಾನ ಏಕನಿಷ್ಠೆಯಿಂದ ಮಾಡುವ ಸಮಯದಲ್ಲಿ ಸರಕಾರ ಅಹಮ್ಮದಿಗೋಸ್ಕರ ಸಕಲ ಮನೋರಥ ಸಿದ್ಧಿ ಆಗುವಂತೆ ಆಶೀರ್ವಾದ ಮಾಡುವುದು.”
ಪತ್ರ 5
“ದಿನೇ ದಿನೇ ಜಯವಾಗುವ ಹಾಗೂ ಲೋಕಾರಿಷ್ಟ ಪರಿಹಾರವಾಗುವ ಹಾಗೂ, ಜನರು ಸೌಖ್ಯವಾಗಿರುವಂತೆಯೂ, ಗುರುದ್ರೋಹ ಮೊದಲಾದ ದ್ರೋಹಗಳ ಮಾಡಿದವರು ನಾಶ ಹೊಂದುವಂತೆ ಸಹ ಈಶ್ವರಧ್ಯಾನವನ್ನು ಏಕನಿಷ್ಠೆಯಿಂದ ಮಾಡುತ್ತಾ ಬರುವುದು.”
ಪತ್ರ 6
“ರಾಜಕ್ಷೋಭೆ ಪರಿಹಾರವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಬಗ್ಗೆ ಸರ್ಕಾರದ ಶ್ರೇಯೋಭಿವೃದ್ಧಿ ಆಗಿ, ಶತ್ರುನಾಶ ಾಗಬೇಕೆಂದು ತಮ್ಮ ಚಿತ್ತಕ್ಕೆ ತಂದು, ಸಹಸ್ರ ಚಂಡಿ ಜಪ ಮಾಡಿಸಬೇಕೆಂದು ಬರೆಸಿ ಕಳುಹಿಸಿದ್ದು ನೋಡಿ, ಸಂತೋಷವಾಯಿತು. ಅದೇ ಪ್ರಕಾರ ಜಪ ಮಾಡತಕ್ಕ ಬಗ್ಗೆ ಬೇಕಾದ ಸಾಮಾನು ಯಾವತ್ತು ತರಿಸಿಕೊಡುವ ಹಾಗೆ ಹುಕುಂನಾಮೆ ಬರೆಸಿ, ಖಾಸ್ ದಸಕತ್ ಮೊಹರ ಮಾಡಿ, ಅಸಫನ ಬಳಿಗೆ ಕಳುಹಿಸಿ ಇದ್ದೀತು.”
ಪತ್ರ: 7
“ವಿದ್ಯುಕ್ತವಾಗಿ ಜಪವನ್ನು ಮಾಡಿಸುತ್ತಾ, ಬ್ರಾಹ್ಮಣರಿಗೆ ದಕ್ಷಿಣೆ ಮುಂತಾಗಿ ಕೊಡಿಸಿ, ನಿತ್ಯದಲ್ಲೂ ಸಹಸ್ರ ಬ್ರಾಹ್ಮಣರು ಭೋಜನವನ್ನು ಆಗುವ ಹಾಗೆ ಮಾಡಿಸಿ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಹಾಗೂ ಶತ್ರುನಾಶವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಪ್ರಕಾರ ಜಪ ಮಾಡುವಂತೆ ಮಾಡಿಸುವುದು”. . . “ಈಶ್ವರ ಪ್ರಾರ್ಥನೆ ಮಾಡಿ ಸರ್ವದಾ ಆಶೀರ್ವಾದ ಮಾಡುವಂತೆ ಮಾಡಿಸುವುದು.”
ಪತ್ರ 8
ಜಪವನ್ನು ಸಾಂಗವಾಗಿ ನೆರವೇರಿಸಲು ತುಂಟರು ಬಂದು ಮಠಾಧಿಕಾರಿಗಳಿಗೆ ತೊಂದರೆ ಮಾಡದಂತೆ ಬಂದೋಬಸ್ತ್ ಮಾಡುವ ಹಾಗೆ ಮಹಮದ್ ರಜಾಗೆ ಪರವಾನೆ ಕಳುಹಿಸಿರುವುದಾಗಿ ತಿಳಿಸುತ್ತದೆ.
ಪತ್ರ 9
“ಮಠದಿಂದ ಅರವತ್ತು ಲಕ್ಷ ರೂಪಾಯಿ ಸಾಮಾನು ಲೂಟಿಸಿ ಹೋಗಿ ಇರುವುದು ಕೊಟ್ಟು ಕಳುಹಿಸಿದ್ದೀರಷ್ಟೆ. ಈ ತಾಕೀತಿ ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು, ಎಂಬುದಾಗಿ ಕೇಳುವುದು. ಸಾಮಾನು ಕೊಟ್ಟರೆ ಸರಿ; ಇಲ್ಲವಾದರೆ ತಾಕೀತಿ ಹಿಂದಕ್ಕೆ ತೆಗೆದುಕೊಂಡು, ಸಾಬೀತು ಅಪ್ಪಣೆ ಕೊಡಿಸಿ ಇರುವ ಮೇರೆಗೆ ಮುಂದೆ ಸಾಹಿ ಹೋಗುವ ಹಾಗೆ ಸಹ ಬರೆದು ಕಳುಹಿಸುವುದು”
*****
ಮೂಲ: ನಮ್ಮ ಹಿಂದಿನ ತಲೆಮಾರಿನ ಬಹುಮುಖ್ಯ ಪತ್ರಕರ್ತರೂ ಸಾಹಿತಿಗಳೂ ಆಗಿದ್ದ ತಿ.ತಾ.ಶರ್ಮ ಅವರು 1962-63ರಲ್ಲಿ ಹೊತ್ತಿಗೆ `ಕರ್ಮವೀರ’ ಪತ್ರಿಕೆಯಲ್ಲಿ ಬರೆದ ಲೇಖನ ಸರಣಿ “ಮೈಸೂರು ಇತಿಹಾಸದ ಹಳೆಯ ಪುಟಗಳು’ ಕೃತಿ.
ಮೋದಲ ಸಂಗ್ರಹ: ವಿಶ್ರಾಂತ ನ್ಯಾಯಮೂರ್ತಿಗಳೂ ಹಿರಿಯ ಸಾಹಿತಿಗಳೂ ಆದ ಕೋ. ಚೆನ್ನಬಸಪ್ಪ ಅವರು.
ನಂತರದ ಸಂಗ್ರಹ: ಡಾ. ರಾಜೇಂದ್ರ ಬುರಡಿಕಟ್ಟಿ
ಗಮನಿಸಿ:ತಿರುಮಲೆ ತಾತಾಚಾರ್ಯ ಶರ್ಮಾ ಅವರು ಹಿಂದೂಧರ್ಮವನ್ನು ಉದ್ಧಾರ ಮಾಡಲೆಂದೇ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ ರಾಜ ಪುರೋಹಿತರ ವಂಶಸ್ಥರು. ಹಿಂದೂಧರ್ಮದ ಬಗ್ಗೆ ಅಪಾರವಾದ ಶ್ರದ್ಧೆ ಇಟ್ಟುಕೋಂಡಿದ್ಗ ಮಹಾನ್ ವಿದ್ವಾಂಸರು. ಇತಿಹಾಸ ಸಂಶೋಧಕರೂ ಆಗಿದ್ದ ಅವರು ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಹಲವು ವರ್ಷ ಕೆಲಸಮಾಡಿ ಈ ಬಗ್ಗೆ ಅನುಭವ ಪಡೆದವರು. ಕಾಸರಗೋಡು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಮಹನೀಯರು. ಅವರು ಮೊಟ್ಟಮೊದಲು ಸಾರ್ವಜನಿಕಗೋಳಿಸಿದ ಟಿಪ್ಪುವಿನ ಈ ಪತ್ರಗಳು ಕನ್ನಡದಲ್ಲಿಯೇ ಬರೆಯಲ್ಲಪಟ್ಟಿವೆ. ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇವಲ್ಲದೇ ಇನ್ನೂ ಮುಖ್ಯವಾದ ಪತ್ರಗಳೂ ಇವೆ.
*****
ಡಾ. ರಾಜೇಂದ್ರ ಬುರಡಿಕಟ್ಟಿ
09-11-2017

No comments:

Post a Comment