ಅಂಗೈ ಎಂಬುದೇ ಆಕಾಶವಾದಾಗ…..
ಕನ್ನಡದ ಸಾಹಿತ್ಯದಲ್ಲಿನ ಇತ್ತೀಚೆಗಿನ ಒಂದು ವಿದ್ಯಮಾನವೆಂದರೆ ಸಂಶೋಧನೆ ವಿಮರ್ಶೆಯಂಥಹ ‘ಬೌದ್ಧಿಕ ಬರೆಹ’ಗಳಲ್ಲಿಯೇ ತಮ್ಮನ್ನು ಗಾಢವಾಗಿ ತೊಡಗಿಸಿಕೊಂಡ ಕೆಲವು ಲೇಖಕರು ಲೋಹಿಯಾ ಅವರ ‘ರಾಜಕೀಯದ ಮಧ್ಯೆ ಬಿಡುವು’ ರೀತಿಯಲ್ಲಿ ಒಂದೆರಡು ಭಾವನಾತ್ಮಕ ಸ್ಪರ್ಶದ ‘ಹಗುರ ತೂಕ’ದ ಕೃತಿಗಳನ್ನು ಪ್ರಕಟಿಸುತ್ತಿರುವುದು. ಹೀಗೆ ‘ಲಲತವಹ’ ಬರೆಹಗಳನ್ನು ಬರೆಯುವವರೇ ಅಲ್ಲ ಎಂದು ಓದುಗ ವರ್ಗ ಭಾವಿಸಿದಂತಹ ಲೇಖಕರೂ ಇದರಲ್ಲಿ ಸೇರಿದ್ದಾರೆ. ಡಾ ರಹಮತ್ ತರೀಕೆರೆ ಅವರ ‘ಹಿತ್ತಲ ಜಗತ್ತು’ ಇಂತಹ ಮಾದರಿಗೆ ಒಂದು ಉದಾಹರಣೆ. ಈ ಮಾದರಿಯ ಬರೆವಣಿಗೆಗೆ ಸೇರಬಹುದಾದ ಮತ್ತೊಂದು ಕೃತಿ ಇತ್ತೀಚೆಗೆ ಪ್ರಕಟವಾಗಿರುವ ಡಾ. ಎಲ್. ಸಿ. ಸುಮಿತ್ರಾ ಅವರ ‘ಅಂಗೈ ಅಗಲದ ಆಕಾಶ’.
ಡಾ. ಎಲ್.ಸಿ. ಸುಮಿತ್ರಾ ಅವರನ್ನು ಬಹಳಷ್ಟು ಜನ ‘ವಿಮರ್ಶಕಿ’ ಎಂದು ಕರೆಯುವುದುಂಟು. ಹೀಗೆ ಸಾಹಿತ್ಯ ಪ್ರಕಾರವೊಂದಕ್ಕೆ ಲೇಖಕರನ್ನು ಲೇಬಲ್ ಮಾಡುವುದು ಎಷ್ಟು ಸರಿಯೋ ತಿಳಿಯದು. ಏಕೆಂದರೆ ಡಾ. ಎಸ್. ಎಲ್. ಭೈರಪ್ಪನವರಂಥ ಕೆಲವರನ್ನು ಬಿಟ್ಟರೆ ಹೊಸಗನ್ನಡದ ಬಹುತೇಕ ಲೇಖಕರು ಒಂದೇ ಪ್ರಕಾರಕ್ಕೆ ಅಂಟಿಕೊಂಡವರಲ್ಲ. ಸುಮಿತ್ರಾ ಅವರನ್ನೇ ನೋಡುವುದಾದರೆ ಅವರು ವಿಮರ್ಶಕಿ ಎಂದು ಗುರುತಿಸಲ್ಪಟ್ಟರೂ ಅವರು ವಿಮರ್ಶೆಗಿಂತ ಇತರೆ ಬರೆಹಗಳನ್ನು ಬರೆದದ್ದೇ ಹೆಚ್ಚು. ಕುವೆಂಪು ಮತ್ತು ಕಾರಂತರ ಕಾದಂಬರಿಗಳಲ್ಲಿ ಪರಿಸರವನ್ನು ಕುರಿತು ಅವರು ಸಂಶೋಧನೆ ಮಾಡಿ ಬರೆದಿರುವ ‘ಕಾಡು ಕಡಲು’ ಕೃತಿಯನ್ನು ಒಳಗೊಂಡಂತೆ ಅವರ ಇತರೆ ವಿಮರ್ಶಾ ಕೃತಿಗಳೆಂದರೆ ‘ವಿಭಾವ’ ‘ನಿರುಕ್ತ’ ಮತ್ತು ‘ಓದಿನ ಸುಖ’. ಇದರಾಚೆ ಅವರು ಬರೆದಿರುವ ‘ಬಕುಲದ ದಾರಿ’ ‘ತುಂಬೆಹೂ’ ಎಂಬ ಕವನ ಸಂಕಲನಗಳು, ‘ಗುಬ್ಬಿಹಳ್ಳದ ಸಾಕ್ಷಿಯಲ್ಲಿ’ ಎಂಬ ಕಥಾಸಂಕಲನ, ‘ಗದ್ದೆಯಂಚಿನ ದಾರಿ’ ಪ್ರಬಂಧ ಸಂಕಲನ, ಅಮೃತಾ ಪ್ರೀತಂ ಅವರ ಬಹು ಚರ್ಚಿತ ಕೃತಿ ‘ಪಿಂಜರ್’ ದ ಅನುವಾದ ಅವರನ್ನು ‘ವಿಮರ್ಶಕಿ’ ಎಂಬ ‘ನಾಮಬಂಧನ’ದಿಂದ ಬಿಡಿಸಬಹುದಾದ ಸಶಕ್ತ ಸೃಷ್ಟಿಶೀಲ ಬರೆಹಗಳು.
ಇತ್ತೀಚಿನ ಪ್ರಕಟವಾಗಿರುವ ಅವರ ಕೃತಿ ‘ಅಂಗೈ ಅಗಲದ ಆಕಾಶ’ ಪುಟ್ಟ ಮತ್ತು ಮಧ್ಯಮ ಗಾತ್ರದ ಹದಿನೇಳು ಲೇಖನಗಳಿರುವ ಒಂದು ಸಂಗ್ರಹ. ಯುವಲೇಖಕ ಮಂಡ್ಯದ ರಾಜೇಂದ್ರ ಪ್ರಸಾದ್ ಅವರು ಈ ಪುಸ್ತಕವನ್ನು ತಮ್ಮ ‘ಸಂಕಥನ’ದ ಮೂಲಕ ಪ್ರಕಟಿಸಿದ್ದಾರೆ. ಇದಕ್ಕೆ ಡಾ. ರಹಮತ್ ತರೀಕೆರೆ ಅವರ ಮುನ್ನುಡಿ ಉಷಾ ಪಿ. ರೈ ಅವರ ಬೆನ್ನುಡಿಗಳಿವೆ. ಲಲಿತ ಪ್ರಬಂಧಗಳ ಸ್ವರೂಪಕ್ಕೆ ಹತ್ತಿರ ಹತ್ತಿರ ಇರುವ ಇವುಗಳಲ್ಲಿ ಲೇಖಕರು ಕಡ್ಡಾಯವಾಗಿ ಪಾಲ್ಗೊಳ್ಳುವ ಕಾರಣ ಅವು ಆತ್ಮಕಥಾ ಸ್ವರೂಪವನ್ನು ಪಡೆದುಕೊಂಡಿವೆ. ಹಾಗಾಗಿ ‘ಸ್ಮೃತಿ ಚಿತ್ರಗಳು’ ಎಂದು ಕರೆಯಲ್ಪಟ್ಟಿವೆ.
ಇಲ್ಲಿನ ಲೇಖನಗಳ ಬಗ್ಗೆ ಹೇಳುವ ಮೊದಲು ಲೇಖಕರ ಬಗ್ಗೆ ಎರಡು ಮಾತು. ಮೂಲತಃ ಮಲೆನಾಡಿಗನಲ್ಲದಿದ್ದರೂ ಬಹಳಷ್ಟು ವರ್ಷಗಳ ಕಾಲ ಮಲೆನಾಡಿನ ಪರಿಸರದಲ್ಲಿ ಉದ್ಯೋಗದ ಕಾರಣಕ್ಕಾಗಿ ವಾಸಗಾಗಿದ್ದ ನನ್ನ ಅನುಭವದ ಮಿತಿಯಲ್ಲಿ ಹೇಳುವುದಾದರೆ ಮಲೆನಾಡಿನ ವಿದ್ಯಾವಂತರು ಉದ್ಯೋಗಕ್ಕಾಗಿ ಅನಿವಾರ್ಯ ಎನಿಸುವ ಪರಿಸ್ಥಿತಿ ಉಂಟಾದರೆ ಮಾತ್ರ ಮಲೆನಾಡನ್ನು ಬಿಟ್ಟು ಹೋಗಲು ತಯಾರಾಗುತ್ತಾರೆ. ಆಯ್ಕೆಗಳಿದ್ದರಂತೂ ಅವರು ಹೊಸ ಅನುಭವಕ್ಕಾಗಿ ಇತರರಂತೆ ಬೇರೆಯ ಪರಿಸರಕ್ಕೆ ಹೋಗುವುದನ್ನು ಮೊದಲ ಆಯ್ಕೆಯಾಗಿ ಸ್ವೀಕರಿಸುವುದಿಲ್ಲ. ಅದಕ್ಕೆ ಬದಲಾಗಿ ತಮ್ಮೂರಿನ ತೋಟ ತುಡಿಕೆಗಳಲ್ಲಿಯೇ ಉಳಿದುಕೊಳ್ಳಲು ಇಚ್ಚಿಸುತ್ತಾರೆ. ಸುಮಿತ್ರಾ ಅವರ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಮೈಸೂರು ಕಡೆ ಒಂದೆರಡು ವರ್ಷ ಹೋಗಿಬಂದದ್ದು ಬಿಟ್ಟರೆ ಅವರ ತಮ್ಮ ಉಳಿದೆಲ್ಲ ಬದುಕನ್ನು ಬದುಕಿದ್ದು ಬದುಕುತ್ತಿರುವುದು ಮಲೆನಾಡಿನಲ್ಲಿಯೇ.ಈ ಕಾರಣದಿಂದಲೇ ಇಲ್ಲಿನ ಬರೆಹಗಳೆಲ್ಲವೂ ಮಲೆನಾಡಿನ ಬದುಕನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುವ ‘ಮಲೆನಾಡಿನ ಚಿತ್ರಗಳೇ’ ಆಗಿವೆ. ಇದೇ ಪರಿಸರದ ಲೇಖಕರರ ಕೃತಿಗಳಾದ ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’ ತೇಜಸ್ವಿಯವರ ‘ಪರಿಸರದ ಕತೆ’ ಶಿವಾನಂದ ಕರ್ಕಿ ಅವರ “ಖಾನೇಷುಮಾರಿ” ನೆಂಪೇ ದೇವರಾಜ್ ಅವರ ‘ಆದ್ರಿ ಮಳೆಯಲ್ಲಿ ಆದವ್ನೆ ಗಂಡ’ ಮುಂತಾದ ಕೃತಿಗಳನ್ನು ನೆಪಿಸುವ ಈ ಕೃತಿ ಕಳೆದ ಶತಮಾನದ ಉತ್ತರಾರ್ಧದ ಮಲೆನಾಡಿನ ಬದುಕಿನ ವೈವಿದ್ಯಮಯ ಚಿತ್ರಣಗಳನ್ನು ಕಟ್ಟಿಕೊಡುವ ಕೃತಿ. ಇಲ್ಲಿನ ಕೆಲವು ಬರೆಹಗಳನ್ನು ನೋಡಬಹುದು.
ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ‘ಹೆಣ್ಣು ಮಾತ್ರ ಬರೆಯಬಹುದಾದವು’ ಎಂದು ಹೇಳಿ ನಿದರ್ಶನಕ್ಕೆ ಕೊಡುವ ‘ಲಂಗದ ಕಥೆ’ ಎಂಬ ಕೃತಿಯ ಮೊದಲನೆಯ ಲೇಖನವನ್ನೇ ಮೊದಲು ನೋಡೋಣ. ಈಗ ‘ಲೆಹಂಗಾ’ ಆಗಿ ಪ್ರಸಿದ್ಧಿ ಪಡೆದಿರುವ ಹುಡುಗಿಯರ ಹಳೆಯ ಕಾಲದ ಸಾಮಾನ್ಯ ಉಡುಗೆಯಾದ ಲಂಗದ ಸುತ್ತಾ ತನ್ನ ಬಾಲ್ಯ ಮತ್ತು ತಾರುಣ್ಯದ ಅನುಭವಗಳನ್ನು ಕಟ್ಟಿಕೊಡಲು ಇಲ್ಲಿ ಲೇಖಕಿ ಪ್ರಯತ್ನಿಸಿದ್ದಾರೆ. ಬಾಲಕಿಯರಾಗಿದ್ದಾಗ ಹೊಸಲಂಗ ಉಟ್ಟು ಸಂಭ್ರಮಿಸುತ್ತಿದ್ದ ಸಂದರ್ಭಗಳು, ಈ
ಲಂಗಗಳು ಮಾಡುತ್ತಿದ್ದ ಅವಾಂತರಗಳು ಇವುಗಳನ್ನು ಹೇಳುತ್ತಲೇ ಕಳೆದು ಹೋಗುತ್ತಿರುವ ಉಡುಪಿನ ಸಂಸ್ಕೃತಿಯೊಂದರ ಬಗ್ಗೆ ಕಂಡೂಕಾಣದಷ್ಟಿರುವ ಸಣ್ಣಪ್ರಮಾಣದ ಅಸಮಾಧಾನದ ಜೊತೆಗೆ ಹೊಸದಾಗಿ ಟೈಟ್ ಜಿನ್ ಪ್ಯಾಂಟ್ ಹಾಕಿಕೊಂಡು ಯಾರುಯಾರನ್ನೋ ಖುಷಿಪಡಿಸಲು ಹೋಗಿ ದೇಹದ ಆಕಾರವನ್ನು ಒತ್ತಾಯಪೂರ್ವಕ ಪ್ರಯತ್ನಗಳಿಂದ ‘ವಿಕಾರ’ಗೊಳಿಸುತ್ತಿರುವ ಹುಡುಗಿಯರ ಬಗೆಗಿನ ಮರುಕ ಕೂಡ ಇದೆ. ಈ ಬರೆಹವನ್ನು ನೆಹರು ಮರಣದಂತಹ ಒಂದು ಐತಿಹಾಸಿಕ ಘಟನೆಯೊಂದಿಗೆ ತಳುಕುಕಾಗಿರುವುದರಿಂದ ಸಹಜವಾಗಿ ಅದು ಯಾವ ಕಾಲಘಟ್ಟದ ಮಲೆನಾಡಿನ ವಿದ್ಯಮಾನ ಎಂಬುದನ್ನು ಅರಿಯಲು ಸಹಾಯವಾಗಿದೆ. ಅಪ್ಪನ ನೆನಪಿನ ಆರ್ದತೆಯೊಂದಿಗೆ ಲೇಖನ ಪೂರ್ಣಗೊಳ್ಳುವಾಗ ಓದುಗರಿಗೆ ಅದರಲ್ಲೂ ಲಂಗದೊಂದಿಗೆ ನಿಕಟವಾಗಿರುವ ಮಹಿಳೆಯರಿಗಂತೂ ತಮ್ಮ ತಮ್ಮ ಅಪ್ಪಂದಿರ ನೆನಪು ಬರದೇ ಇರಲಾರದು.
‘ಮಾತಾಡಿಸ್ಕೊಂಡು ಬರೋದು’ ಎಂಬ ಪುಟ್ಟ
ಲೇಖನ ಕೊರೋನಾ ಕಾಲಘಟ್ಟದ ಮಾನವ
ಸಂಬಂಧಗಳ ಬಂಧನ ಮತ್ತು ಸಡಿಲಿಕೆಗಳನ್ನು
ಸೂಕ್ಷ್ಮವಾಗಿ ದಾಖಲಿಸುತ್ತದೆ. ಈಗಿನಂತೆ ಸಂಪರ್ಕ ಸಾಧನಗಳು
ಇಲ್ಲದಿದ್ದ ಆಗಿನ ಸಂದರ್ಭದಲ್ಲಿ ಕಾಯಿಲೆ
ಬಿದ್ದವರನ್ನು ಮಾತನಾಡಿಸಿಕೊಂಡು ಹೋಗಲೆಂದೇ ಬಂಧು ಬಳಗದವರು ಬರುತ್ತಿದ್ದುದು,
ಉಳಿದು ಹೋಗುತ್ತಿದ್ದುದು ಮಾನವ ಸಂಬಂಧಗಳನ್ನು ಹೇಗೆ
ಗಟ್ಟಿಗೊಳಿಸುತ್ತಿತ್ತು ಎನ್ನುವುದನ್ನು ಇದು ಸೊಗಸಾಗಿ ಕಟ್ಟಿಕೊಡುತ್ತದೆ.
ಇವತ್ತು ಮೊಬೈಲ್ ಫೋನುಗಳಂತಹ ಸಾಧನಗಳು
ಬಂದಮೇಲೆ ದೂರದೂರ ಇದ್ದವರೆಲ್ಲ ಹತ್ತಿರವಾಗಿದ್ದೇವೆ
ಎಂಬುದು ಎಷ್ಟು ಸತ್ಯವೋ ಹತ್ತಿರ
ಹತ್ತಿರ ಇದ್ದವರು ದೂರ ಆಗಿದ್ದೇವೆ
ಎಂಬುದೂ ಅಷ್ಟೇ ಸತ್ಯ! ಮೊದಲನೆಯದು
ತಾನಾಗಿಯೇ ಎದ್ದು ಕಾಣುತ್ತದೆ. ಎರಡನೆಯದು
ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುತ್ತದೆ.
ಹಿಂದೆ ಯಾರಾದರೂ ಬಂಧುಗಳು ಸ್ನೇಹಿತರು ಮೂರು ತಿಂಗಳೋ ಆರು ತಿಂಗಳೋ ಬಿಟ್ಟು ಮನೆಗೆ ಬಂದರೆ ಇಡೀ ರಾತ್ರಿ ಮಾತನಾಡಿದರೂ ಮಾತು ಮುಗಿಯುತ್ತಿರಲಿಲ್ಲ. ಆದರೆ ಇವತ್ತು ಎಷ್ಟೋ ವರ್ಷಗಳ ನಂತರ ಮನೆಗೆ ಬಂದವರ ಜೊತೆಗೆ ಕೂಡ ನಮ್ಮ ಮಾತುಗಳು ಹತ್ತಿಪ್ಪತ್ತು ನಿಮಿಷಗಳೂ ಮುಂದುವರೆಯುವುದಿಲ್ಲ. ಒಂದೆರಡು ಮಾತುಗಳು ಆದ ಮೇಲೆ ಮಾತು ನಿಂತು ಬಿಡುತ್ತವೆ. ಅನಿವಾರ್ಯವಾಗಿ ಟಿವಿ ಸ್ವಿಚ್ ಹಾಕಿಬಿಡುತ್ತೇವೆ. ಯಾವಾಗ ಬೇಕೋ ಆವಾಗ ಯಾರೊಂದಿಗೆ ಬೇಕೋ ಆವರೊಂದಿಗೆ ಹೇಗೆ ಬೇಕೋ ಹಾಗೆ ಮಾತನಾಡುವ ಅವಕಾಶಗಳಿರುವ ಈ ಸಂದರ್ಭದಲ್ಲಿ ಆಡಲೆಂದೂ
ಮಾತುಗಳನ್ನು ಕೂಡಿಟ್ಟುಕೊಳ್ಳಲಾರೆವು. ಕೂಡಿಟ್ಟ ಮಾತೆಲ್ಲವನ್ನೂ ಏಕಕಾಲಕ್ಕೆ ಹೊರಹಾಕಿದಾಗ ಉಂಟಾಗಬಹುದಾದ ‘ಸುಮ್ಮನೆ ಮಾತನಾಡುವ ಆನಂದ’ವನ್ನು ಅನುಭವಿಸಲೂ ಆರೆವು. ಎಲ್ಲ ಸಂಬಂಧಗಳೂ ಇಂದು ವ್ಯವಹಾರಿಕವಾಗಿರುವ ಸಂದರ್ಭದಲ್ಲಿ ನಮ್ಮ ಮಾತುಗಳೂ ಕೂಡ ಭಾವತೀರ್ವತೆಯನ್ನು ಕಳೆದುಕೊಂಡು ಶುಷ್ಕವಾದದ್ದರಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಈ ಲೇಖನ ಅಗತ್ಯವಾಗಿ ನೆನಪುಮಾಡಿಕೊಡುತ್ತದೆ.‘ಕಡುಬು ಏನು ಕಡಿಮೆ’ ಮತ್ತು ‘ಕಾಫಿ ಆಯ್ತಾ?’ ಎಂಬ ಲೇಖನಗಳು ಮಲೆನಾಡಿನ ಪ್ರಮುಖ ಆಹಾರ ಮತ್ತು ಪಾನೀಯ ಪದ್ಧತಿಗಳ ಸುತ್ತ ಇರುವ ಬರೆಹಗಳು. ಇವು ಕೇವಲ ವ್ಯಕ್ತಿಗತ ಖಾಸಗೀ ವಿವರಗಳಾಗಿರದೇ ಸಾಮಾಜಿಕ ಆಯಾಮ ಪಡೆದುಕೊಂಡಿರುವುದು ನಮ್ಮ ಸಾಮಾಜಿಕ ರೀತಿ ರಿವಾಜುಗಳಿಗಾಗಿ. ನಮ್ಮಲ್ಲಿ ಆಹಾರದ ಆಧಾರದ ಮೇಲೆ ಜನರನ್ನು ‘ಮೇಲು ಕೀಳು’ ಎಂದು ವರ್ಗೀಕರಿಸುವ ಕ್ರಮವೊಂದು ಇದೆ. ಮಾಂಸಾಹಾರಿಗಳು ಕನಿಷ್ಠ, ಸಸ್ಯಾಹಾರಿಗಳು ಶ್ರೇಷ್ಠ ಎಂದು ಪರಿಗಣಿಸುವ ಹಾಗೆ ಸಸ್ಯಾಹಾರದಲ್ಲಿಯೇ ಮೇಲ್ಕುಲದವರೆಂದು ಕರೆಯಲ್ಪಡುವವರ ಮನೆಯಲ್ಲಿ ತಯಾರಾಗುವ ಆಹಾರಗಳು ಶ್ರೇಷ್ಠವೆಂದೂ ಉಳಿದವರ ಮನೆಗಳಲ್ಲಿ ತಯಾರಾಗುವ ಆಹಾರಗಳು ಅವು ಮೊದಲನೆಯವಕ್ಕಿಂತ ಆರೋಗ್ಯಕರವಾಗಿದ್ದರೂ ತುಚ್ಛವೆಂದು ಪರಿಗಣಿಸಲ್ಪಡುವ ಆ ಮೂಲಕ ಅವನ್ನು ಸ್ವೀಕರಿಸುವವರನ್ನು ಕನಿಷ್ಠವೆಂದು ಕಾಣುವ ರೀತಿಯನ್ನು ‘ಕಡುಬು ಏನು ಕಡಿಮೆ’ ಲೇಖನ ಸೂಕ್ಷ್ಮವಾಗಿ ದಾಖಲಿಸುತ್ತದೆ. ಮಲೆನಾಡಿನ ಹುಡುಗಿಯರು ಮನೆಯಲ್ಲಿ ಮಾಡುವ ಕಡುಬನ್ನು ಕಾಲೇಜಿಗೆ ಒಯ್ಯಲು ಹಿಂಜರಿಯುವ, ಒಯ್ದರೂ ಯಾರಿಗೂ ಕಾಣದಂತೆ ಕದ್ದು ತಿನ್ನಬೇಕಾದ ಸ್ಥಿತಿಯನ್ನೂ, ಅಧ್ಯಾಪಕರೊಬ್ಬರು ಕಡುಬನ್ನು ‘ಪಿಂಡ’ಕ್ಕೆ ಹೋಲಿಸುವ ದುರುಳತನವನ್ನೂ ಈ ಲೇಖನ ಸೊಗಸಾಗಿ ಕಟ್ಟಿಕೊಟ್ಟಿದೆ.
“ಕಾಫಿ ಆಯ್ತಾ?’ ಲೇಖನ ಕಾಫಿ ಮಲೆನಾಡಿನ ಪಾನೀಯ ಮಾತ್ರವಾಗಿರದೆ ಅದು ಪರಸ್ಪರ ಕುಶಲೋಪಹರಿಯ ಸಾಧನವೂ ಹೇಗೆ ಆಗಿತ್ತು ಎಂಬುದನ್ನು ಹೇಳುತ್ತದೆ. ಇದನ್ನು ಅನಂತಮೂರ್ತಿ ಅವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ಈ ಕಾಫಿಯ ಬಗ್ಗೆ
ಬರೆದಿರುವ ದೀರ್ಘವಾದ ಟಿಪ್ಪಣಿಯೊಂದಿಗೆ ಹೋಲಿಸಿ ನೋಡಬಹುದು. ಸುಮಿತ್ರಾ ಅವರಿಗೆ ಕಾಫಿಯನ್ನು ಮಾಡುವ ವಿಧಾನ, ಅದು ಕಂಡ ಸುಧಾರಣೆ, ಅದು ಹೇಗೆ ಮಾತಿನ ಮಾಧ್ಯಮ ಆಗಿ ಕೆಲಸ ಮಾಡುತ್ತಿತ್ತು ಎಂಬುದನ್ನು ಹೇಳುವುದು ಮುಖ್ಯವಾದಂತೆ ಅನಂತಮೂರ್ತಿ ಅವರಿಗೆ ಮನೆಯಲ್ಲಿ ಎಲ್ಲರಿಗೂ ಉತ್ತಮ ಕಾಫಿ ಮಾಡಿಕೊಡುವಷ್ಟು ಅನುಕೂಲಗಳಿಲ್ಲದ ಕುಟುಂಬಗಳಲ್ಲಿ ಮನೆಯಲ್ಲಿ ಯಾರುಯಾರಿಗೆ ‘ಒರಿಜಿಲನ್ ಕಾಫಿ’ ಮತ್ತೆ ಯಾರು ಯಾರಿಗೆ ‘ಚರಟದ ಕಾಫಿ’ ಕೊಡಲಾಗುತ್ತಿತ್ತು ಎಂಬುದನ್ನುಹೇಳುವ ಮೂಲಕ ಅಲ್ಲಿನ ಬಡತನವನ್ನು ದಾಖಲಿಸುವುದು ಮುಖ್ಯವಾದಂತೆ ಕಾಣುತ್ತದೆ.
‘ಎಲ್ಲಿತ್ತು ‘ಈ’ ಕಸ?’ ‘ಸಂಕ್ರಮಣ’ಈ ಎರಡು ಲೇಖನಗಳು ನಾವು
ನಮ್ಮೊಳಗೆ ಮತ್ತು ಹೊರಗೆ ಮಾಡಿಕೊಳ್ಳುತ್ತಿರುವ
ಮಾಲಿನ್ಯದ ಬಗ್ಗೆ ಬೆಳಕು ಚೆಲ್ಲುವು
ಲೇಖನಗಳು. ‘ಎಲ್ಲಿತ್ತು ‘ಈ’ ಕಸ ಲೇಖನದ
ಶೀರ್ಷಿಕೆಯಲ್ಲಿರುವ ‘ಈ’ ಧ್ವನಿಪೂರ್ಣವಾಗಿದೆ. ಅದನ್ನು
‘ಇದು’ ಎಂದೂ ಓದಿಕೊಳ್ಳಬಹುದು. ‘ಇಲೆಕ್ಟ್ರಾನಿಕ್’
ಎಂದೂ ಓದಿಕೊಳ್ಳಬಹುದು. ಹಿಂದೆ ತುಂಬಾ ಸರಳವೂ
ಸೊಗಸಾಗಿಯೂ ಇದ್ದ ನಮ್ಮ ಬದುಕನ್ನು
ನಾವು ದಿನದಿನಕ್ಕೂ ಕೊಳ್ಳುಬಾಕ ಸಂಸ್ಕೃತಿಗೆ ಸಿಲುಕಿಕೊಂಡು ಎಷ್ಟು ಜಟಿಲಗೊಳಿಸಿಕೊಂಡಿದ್ದೇವೆ ಎಂಬುದನ್ನು ಇದು
ಚಿಂತನೆಗೆ ಹಚ್ಚುವಂತೆ ಮಾಡುತ್ತದೆ.ಈ ಲೇಖನವನ್ನು ಓದುವಾಗ
ಸವಿತಾ ನಾಗಭೂಷಣ ಅವರು ಬರೆದ,
ನಮಗೆ ಬೇಕೋ ಬೇಡವೋ ಎಂಬುದನ್ನೂ
ಸರಿಯಾಗಿ ಆಲೋಚಿಸದೇ ಈ ‘ಬಳಸಿ ಬೀಸಾಡಿ’ಗಳನ್ನು ಮನೆಗೆ ತಂದು
ತುಂಬಿಕೊಂಡು ಅವುಗಳ ಮಧ್ಯೆ ನಾವೇ
ಕಳೆದುಹೋಗುತ್ತಿರುವುವದನ್ನು ಹೇಳುವ, ಕವಿತೆಯೊಂದು ನೆನಪಾಯಿತು.
ಉಳಿದಂತೆ ‘ಗಾಡಿಯ ಪ್ರಯಾಣ’ ‘ಬಾವಿಯ ಆಳದಿಂದ’ ‘ಮಳೆ ಎಂದರೆ’ ‘ಊರಿನ ನೆನಪುಗಳು’ ಮುಂತಾದ ಲೇಖನಗಳು ಮಲೆನಾಡಿನ ಒಂದು ಕಾಲಘಟ್ಟದ ಬದುಕನ್ನು ಹಿಡಿದಿಡಲು ಮಾಡಿದ ಯಶಸ್ವಿ ಪ್ರಯತ್ನಗಳಾಗಿವೆ. ‘ಗಾಡಿ ಎಂದರೆ ಬರಿಯ ಸವಾರಿಯಲ್ಲ’ ಎಂಬ ವಾಕ್ಯದಿಂದ ಪ್ರಾರಂಭವಾಗುವ ಲೇಖನವನ್ನು ಓದುಗನೊಬ್ಬ ‘ಗಾಡಿ ಎಂದರೆ ಅನುಭವಗಳ ಆಗರ’ ಎಂದೂ ಮುಗಿಸಿಕೊಳ್ಳಬಹುದು. ಮನುಷ್ಯರಿಗೆ ನೋವಾದರೆನೇ ಅಯ್ಯೋ ಅನ್ನಲಾರದ ಸ್ಥಿತಿ ತಲುಪಿರುವ ನಾವೆಲ್ಲ ಮಕ್ಕಳಿದ್ದಾಗ ಮನೆಯ ಎತ್ತಿನ ಕಾಲಿಗೆ ಗಾಯವಾದಾಗ ಎಷ್ಟೊಂದು ಸಂಕಟಪಡುತ್ತಿದ್ದೆವು; ಅವನ್ನು ಮಾರುವಾಗ ಎಷ್ಟು ಸಂಕಟಪಡುತ್ತಿದ್ದೆವು ಎಂಬುದನ್ನು ನೆನೆಸಿಕೊಂಡರೆ ನಾವು ದೊಡ್ಡವರಾದಂತೆ ಹೇಗೆಲ್ಲ ಮನುಷ್ಯತ್ವದ ಗುಣಗಳಿಂದ ದೂರವಾಗುತ್ತಿದ್ದೇವೆ ಎಂಬುದನ್ನು ನೆನಪುಮಾಡಿಕೊಡುತ್ತದೆ. ಬಾಲ್ಯದ ಅನೇಕ ನೆನಪುಗಳನ್ನು ಮಧುರವಾಗಿಸುವ ‘ಬಾವಿಯ ಆಳದಿಂದ’ ಲೇಖನ ಜೀವಜಲವನ್ನು ಕೊಡುವ ಬಾವಿಯೇ ಜೀವವನ್ನು ತೆಗೆಯಬಲ್ಲ ಘಟನೆಗಳಿಗೂ
ಹೇಗೆ ಸಾಧನವಾಗುತ್ತಿತ್ತು ಎಂಬುದನ್ನೂ ಹೇಳುತ್ತದೆ. ‘ಊರಿನ ನೆನಪುಗಳು’ ಇದ್ದದ್ದರಲ್ಲಿಯೇ ಉದ್ದನೆಯ ಲೇಖನ. ತೀರ್ಥಹಳ್ಳಿಯಂತಹ ಮಲೆನಾಡುಮಧ್ಯದ ಲಕ್ಷ್ಮೀಪುರ-ಬಸವಾನಿ ಪ್ರದೇಶದ ಜನಜೀವನದ ಸಹಜಚಲನೆಯ ಹಾದಿಯಲ್ಲಿನ ಭೌತಿಕ ಬದಲಾವಣೆ-ಸುಧಾರಣೆಗಳ ನಡುವೆಯೇ ಅನೇಕ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವಗಳನ್ನು ದಾಖಲಿಸುತ್ತದೆ.ಸುಮಿತ್ರಾ ಅವರ ‘ಅಂಗೈ ಅಗಲದ
ಆಕಾಶ’ ಕೃತಿಯ ಎಲ್ಲ ಬರೆಹಗಳನ್ನೂ
ಗಮನದಲ್ಲಿಟ್ಟುಕೊಂಡು ಕೆಲವು ಮಾತುಗಳನ್ನು ಹೇಳುವುದಾದರೆ
ಇವು
ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ
ಬೇರೆ ಉದ್ದೇಶಕ್ಕಾಗಿ ಬರೆದ ಲೇಖನಗಳಾಗಿದ್ದರಿಂದ ಲೇಖನಗಳ
ಗಾತ್ರಗಳ ಭಿನ್ನತೆ, ಒಂದೆರಡು ಕಡೆ ಪುನರುಕ್ತಿ
ಸಹಜವಾಗಿವೆ. ಮೊದಲೇ ಹೇಳಿದಂತೆ ಇವು
ಒಂದು ರೀತಿಯ ‘ಹಗುರ’ (ಲೈಟ್
ವೇಯಿಟ್) ಬರೆಹಗಳು. ಹಾಗಂದ ಮಾತ್ರಕ್ಕೆ ಹಾಸ್ಯಕ್ಕೆ ಹಾರಿಹೋಗುವಷ್ಟು
ತೆಳುವಾಗಿಯೂ ಅವಿಲ್ಲ. ಯಾವುದೇ
ಗಂಭೀರ ವಿಷಯಗಳನ್ನು ಪ್ರಯತ್ನಪೂರ್ವಕವಾಗಿ ಹೇಳಹೋಗದೆ ತಮ್ಮ ಜೀವನಾನುಭವಗಳನ್ನು ಸರಳವಾಗಿ
ತಣ್ಣನೆಯ ಶೈಲಿಯಲ್ಲಿ ಅವರು ಹೇಳುತ್ತಾ ಹೋಗಿದ್ದಾರೆ.
ಆದಾಗ್ಯು ಅವು ಪಡೆಯಬೇಕಾಲ್ಲಿ ಪಡೆಯಬೇಕಾದಷ್ಟು
ಗಾಂಭೀರ್ಯವನ್ನು ಪಡೆದುಕೊಂಡಿವೆ ಎಂಬುದು ಗಮನಿಸಬೇಕಾದ ಅಂಶ. ಅವರೇ ತಮ್ಮ ಮಾತುಗಳಲ್ಲಿ ಹೇಳಿಕೊಂಡಿರುವಂತೆ
ಅವರು ಇಲ್ಲಿ ತಮ್ಮ ಪರಿಸರದ
ಸಂಘರ್ಷಗಳನ್ನೂ ನೇತ್ಯಾತ್ಮಕ ಸಂಗತಿಗಳನ್ನು ಬರೆದಿಲ್ಲ. ಈ ಮಿತಿಯ ಕಾರಣವನ್ನೂ
ಅವರು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿ ಬಂದಿರುವ
ಲೇಖನಗಳನ್ನು ಅವರೊಳಗಿನ ಜವಾಬ್ದಾರಿಯುತ ಲೇಖಕಿ ಕೇವಲ ಶುಷ್ಕವರದಿಗಳಾಗದಂತೆ
ನೋಡಿಕೊಂಡಿದ್ದಾರೆ. ‘ಅಂಗೈ ಅಗಲದ ಆಕಾಶ’
ಹೆಸರಿನಲ್ಲಿರುವ ‘ಅಂಗೈ’ ಪದವು ‘ಸನಿಹ’
ಮತ್ತು ‘ಸಾಮಿಪ್ಯ’ಗಳ ಜೊತೆಗೆ
ಸಣ್ಣದು ನೀಡುವ ಸಂತೋಷವನ್ನು ಧ್ವನಿಸಿದರೆ
ಅಲ್ಲಿರುವ ‘ಆಕಾಶ’ ಪದವು ಈ
‘ಅಂಗೈ’ ಎಂಬುದು ‘ಸಣ್ಣತನ’ ‘ಕುಬ್ಜತೆ’
ಮತ್ತು ‘ಕೂಪ ಮಂಡೂಕತನ’ ಆಗದೆ
ನಮ್ಮತನವನ್ನು ಸಾಮಾಜಿಕವಾಗಿ ವಿಸ್ತರಿಸಿಕೊಳ್ಳುವ ಎತ್ತರ ಮತ್ತು ಬಿತ್ತರಗಳನ್ನು
ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇದು ಒಂದು ರೀತಿಯಲ್ಲಿ ತಾನು ನಿಂತ ನೆಲಕ್ಕೆ ಕಾಲುಗಳನ್ನು
ಗಟ್ಟಿಯಾಗಿ ಊರಿಕೊಂಡು ತಲೆಯನ್ನು ಆಕಾಶದ ಕಡೆಗೆ ಎತ್ತಿ ನೋಡುವ ಪ್ರಯತ್ನ.
ಅನಕೃ ಕಾಲಘಟ್ಟದಲ್ಲಿ ಜನಪ್ರಿಯ ಸಾಹಿತ್ಯದ ‘ಓದುಗ’ರಾಗಿದ್ದು ನಂತರದ ಕಾಲಘಟ್ಟದಲ್ಲಿ ಟಿವಿ ‘ನೋಡುಗ’ರಾಗಿ ಬದಲಾದ ಒಂದು ದೊಡ್ಡ ಜನಸಮುದಾಯವೊಂದು ಈಗ ಎಂದೆಂದೂ ಮುಗಿಯದ ರೇಜಿಗೆ ಅನ್ನಿಸುವ ಧಾರಾವಾಹಿಗಳಿಂದ, ಯಾವುದೇ ತಿಳಿವಳಿಕೆಯನ್ನು ಕೊಡದ, ಅರಿವನ್ನು ವಿಸ್ತರಿಸದ, ಹಾಳುಹರಟೆಯ ರಿಯಾಲಿಟಿ ಷೋ ಗಳಿಂದ ಬೇಸತ್ತು ಮತ್ತೆ ಬೇರೆ ಆಯ್ಕೆಗಳ ಕಡೆ ನೋಡುತ್ತಿದೆ ಅನ್ನಿಸುತ್ತಿರುವ ಈ ಸಂದರ್ಭದಲ್ಲಿ ಆ ದೊಡ್ಡ ಜನಸಮೂಹವನ್ನು ಮತ್ತೆ ಸಾಹಿತ್ಯದ ಕಡೆ ಕರೆತರಲು ಸಾಧ್ಯವೇನಾದರೂ ಆಗುವಂತಿದ್ದರೆ ಅದು ಇಂತಹ ‘ಲಲಿತವಹ’ ಬರೆಹಗಳಿಂದ ಮಾತ್ರ ವೇನೋ ಅನ್ನಿಸುತ್ತಿದೆ. ಹೀಗೆ ಅವರನ್ನು ಮತ್ತೆ ಮರಳಿ ಸಾಹಿತ್ಯಕ್ಕೆ ಕರೆತರುವ ಮಹತ್ವದ ಕೆಲಸವೊಂದನ್ನು ಕನ್ನಡದ ಅನೇಕ ಪ್ರಮುಖ ಲೇಖಕರು ಕೈಗೆತ್ತಿಕೊಂಡಿದ್ದಾರೆ. ಅದೇ ಕೆಲಸವನ್ನು ಡಾ. ಎಲ್.ಸಿ. ಸುಮಿತ್ರಾ ಕೂಡ ಈ ಕೃತಿಯ ಮೂಲಕ ಮಾಡಿದ್ದಾರೆ.
ಡಾ. ರಾಜೇಂದ್ರ ಬುರಡಿಕಟ್ಟಿ
24.01.2022
No comments:
Post a Comment