Tuesday, April 15, 2025

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 


ಭಾರತ ಸಂವಿಧಾನದ ಮೂರನೆಯ ಮತ್ತು ಅಂತಿಮ ಕರುಡು ವಾಚನವನ್ನು ಅಂಬೇಡ್ಕರ್‌ ಅವರು ೧೯೪೯ರ ನವೆಂಬರ್‌ ೧೭ ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದರು.  ಅದರ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರನೇಕರು ತಮ್ಮ ʻವಂದನಾರ್ಪಣಾ ಭಾಷಣʼ (Concluding Speech) ಮಾಡಿದರು. ಅದುವರೆಗೆ ಸಂವಿಧಾನದ ಕರುಡಿನ ಮೇಲೆ  ಅನೇಕ ದಿನಗಳು ದೀರ್ಘವಾದ ಚರ್ಚೆ ಸಂವಾದಗಳು ನಡೆದಿದ್ದವು. ಕೆಲವು ವಿಧಿಗಳ ಬಗ್ಗೆ ಅತ್ಯಂತ ಬಿರುಸಿನ ವಾಗ್ವಾದಗಳೂ ನಡೆದಿದ್ದವು. ಬಹಳಷ್ಟು ಜನ ಸಂಪ್ರದಾಯವಾದಿಗಳೇ ಇದ್ದ ಸಂವಿಧಾನ ರಚನಾ ಸಭೆಯು ಅಷ್ಟು ಸುಲಭವಾಗಿ ಅಂಬೇಡ್ಕರ್‌ ಅವರ ಪ್ರಗತಿಶೀಲತೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಮಹಿಳೆಯರಿಗೆ ಪುರುಷರಂತೆ ಸಮಾನತೆ ನೀಡುವುದು, ಎಲ್ಲ ಜಾತಿ ಧರ್ಮಗಳವರನ್ನು ಸಮಾನವಾಗಿ ಕಾಣುವುದು ಇಂತಹುಗಳನ್ನು ಅವರೆಲ್ಲ ಹೇಗೆ ತಾನೆ ಒಪ್ಪಿಕೊಳ್ಳಲು ಸಾಧ್ಯ? ಅವರು ತಕರಾರು ತೆಗೆದಾಗಲೆಲ್ಲ ಅಂಬೇಡ್ಕರ್‌ ಅದಕ್ಕೆ ತಮ್ಮ ಅಪಾರ ಪಾಂಡಿತ್ಯ ಮತ್ತು ತುಳಿತಕ್ಕೊಳಗಾದವರ ಬಗೆಗಿನ ತಾಯ್ತನದ ಭಾವನೆ ಇವುಗಳಿಂದಾಗಿ ಸಮರ್ಪಕವಾಗಿ ಉತ್ತರ ಕೊಟ್ಟು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೂ ಶೇಕಡಾ ನೂರರಷ್ಟು ಅವರು ತಮ್ಮ ಕೆಲಸಗಳನ್ನು ಮಾಡಲು ಇವರು ಬಿಡಲಿಲ್ಲ. ಕೆಲವಕ್ಕೆ ಒಪ್ಪಿಕೊಂಡರು. ಮತ್ತೆ ಕೆಲವಕ್ಕೆ ಮೊಂಡಾಟ ಮಾಡಿ ತೆಗೆದು ಹಾಕಲು ಅದಾಗದಿದ್ದರೆ ಕೊನೆಪಕ್ಷ ತಿದ್ದುಪಡಿ ತರಲು ಸಮರ್ಥರಾದರು. ಇವರ ಮೊಂಡಾಟಕ್ಕೆ ಅಂಬೇಡ್ಕರ್‌ ಕೂಡ ಕೆಲವು ಸಲ ಅನಿವಾರ್ಯವಾಗಿ ಮಣಿದು ಸಂವಿಧಾನದ ಕೆಲವು ಅತ್ಯಂತ ಪ್ರಗತಿಪರ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಯಿತು.

ಅಂಬೇಡ್ಕರ್‌ ಅವರ ಅಂತಿಮ ಓದಿಗೆ ಪ್ರಮುಖ ಸದಸ್ಯರು ಮಾಡಿದ ವಂದನಾರ್ಪಣಾ ನುಡಿಗಳಲ್ಲಿ ಅಂಬೇಡ್ಕರ್‌ ಅವರೊಂದಿಗಿನ ಅದುವರೆಗಿನ ಭಿನ್ನಾಭಿಪ್ರಾಯಗಳೇನೇ ಇದ್ದರೂ ಮತ್ತು ಸಂವಿಧಾನದ ಕೆಲವು ಪ್ರಗತಿಪರ ವಿಧಿಗಳ ಬಗ್ಗೆ ಅವರಿಗೆ ಈಗಲೂ ಅಸಮಾಧಾನವಿದ್ದರೂ ಅವೆಲ್ಲವನ್ನು ಮರೆತು ಅವರು ಸಂವಿಧಾನ ರಚನೆಯ ಕಾರ್ಯದಲ್ಲಿ ಅಂಬೇಡ್ಕರ್‌ ಅವರ ಅಪಾರ ಪರಿಶ್ರಮದ ಕೊಡುಗೆಯನ್ನು ಕೊಂಡಾಡಿ ಮಾತನಾಡಿದರು. ಕರಡು ಸಮಿತಿಯಲ್ಲಿನ ಉಳಿದ ಸದಸ್ಯರೆಲ್ಲ ಏನೇನೋ ಕಾರಣಗಳಿಂದ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೆ ಕರಡು ರಚನೆಯ ಶೇ ತೊಂಬತ್ತರಷ್ಟು ಕೆಲಸವನ್ನು ಅಂಬೇಡ್ಕರ್‌ ಅವರೊಬ್ಬರೇ ಮಾಡಿದ್ದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಅವರು ಅಂಬೇಡ್ಕರ್‌ ಅವರನ್ನು ಹೊಗಳಿ ಮಾತನಾಡಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ.

 ಸಂವಿಧಾನ ಕರುಡು ರಚನೆ ಮತ್ತು ಅದರ ಚರ್ಚೆ ನಡೆಯುತ್ತಿರುವಾಗ ಅಂಬೇಡ್ಕರ್‌ ತಮ್ಮ ಮೇಲಿನ ಅಪಾರವಾದ ಜವಾಬ್ದಾರಿಯನ್ನು ನಿರ್ವಹಿಸಲು ವಾಸ್ತವದಲ್ಲಿ ದೈಹಿಕವಾಗಿ ಅಷ್ಟು ಸಮರ್ಥರಾಗಿರಲಿಲ್ಲ. ಹಗಲು ರಾತ್ರಿ ಎನ್ನದೆ ಊಟ ನಿದ್ರೆಗಳನ್ನೂ ಲೆಕ್ಕಿಸದೇ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳ ಅಧ್ಯಯನ ಮತ್ತು ಅವುಗಳ ವಿಧಿಗಳ ಆಯ್ಕೆ ಮತ್ತು ನಮ್ಮ ಸಂವಿಧಾನದ ಕರುಡು ರಚನೆ ಇಂತಹ ಕೆಲಸದಲ್ಲಿ ಮುಳುಗಿಹೋಗಿದ್ದರು. ಇದರಿಂದ ಸಹಜವಾಗಿ ಅವರ ಆರೋಗ್ಯ ಹದಗೆಟ್ಟೆತು. ಸಕ್ಕರೆ ಕಾಯಿಲೆ ಅವರನ್ನು ಅಪಾರವಾಗಿ ಭಾದಿಸುತ್ತಿತ್ತು. ಒಂದು ಸಲವಂತೂ ಕುಂಡಿಯ ಮೇಲೆ ಕುರು ಆಗಿ ಅನೇಕ ದಿನಗಳು ಖುರ್ಚಿಯ ಮೇಲೆ ಕೂರಲೂ ಆಗದಂತೆ ಅಪಾರ ಹಿಂಸೆಯನ್ನು ಅನುಭವಿಸಿದರು. ಅವರ ಅನಾರೋಗ್ಯದ ಕಾರಣಕ್ಕಾಗಿ ಸಂವಿಧಾನ ರಚನಾ ಸಭೆಯಲ್ಲಿ ಅವರು ಕುಳಿತುಕೊಳ್ಳುವುದಕ್ಕಾಗಿಯೇ ಅನುಕೂಲಕರವಾದ ಒಂದು ವಿಶೇಷ ಖುರ್ಚಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

 ಈ ಎಲ್ಲ ನೋವು ಸಂಕಟಗಳನ್ನು ಇಟ್ಟುಕೊಂಡೇ ಅವರು ಆ ಸಭೆಯಲ್ಲಿ ಕರುಡಿನ ಮೇಲಿನ ಭಿನ್ನಾಭಿಪ್ರಾಯಗಳಿಗೆ ತಕ್ಕುದಾದ ಉತ್ತರ ಕೊಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ಅವರು ತಮ್ಮ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಬೆನ್ನುಹಾಕದೆ ಮುಖಾಮುಖಿಯಾಗಿಯೇ ಕೆಲಸ ಮಾಡಿದರು. ಹೀಗೆ ಕಣ್ಣಿಗೆ ಕಾಣುವ ಅವರ ನೋವು ಕಾಣದೇ ಇರುವ ಈ ದೇಶದ ಕೋಟಿ ಕೋಟಿ ತುಳಿತಕ್ಕೊಳಗಾದವರ ಬಾಳಿಗೆ ಆಶಾಕಿರಣವಾಗಿ ರೂಪುಗೊಂಡ ನಮ್ಮ ಸಂವಿಧಾನ ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ತುʼ ಅನ್ನುವ ಹಾಗೆ ಅಂತಿಮ ಹಂತ ತಲುಪಿತ್ತು.

ಅಂಬೇಡ್ಕರ್‌ ಅವರು ರಚಿಸಿದ ನಮ್ಮ ಸಂವಿಧಾನದ ಬಗ್ಗೆ ಬಂದ ಬಹಳಷ್ಟು ತಕರಾರುಗಳಲ್ಲಿ ಬಹುಮುಖ್ಯವಾದ ಎರಡು ತಕರಾರುಗಳೆಂದರೆ ಮೊದಲನೆಯದು ನಮ್ಮ ಸಂವಿಧಾನ ಗಾಂಧಿತತ್ವ ಹೇಳುವ ಅಧಿಕಾರ ವಿಕೇಂದ್ರಿಕರಣವನ್ನು ಬೆಂಬಲಿಸುವ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಕಡೆಗಣಿಸಿ ಅಧಿಕಾರದ ಕೇಂದ್ರೀಕರಣವನ್ನು ಬೆಂಬಲಿಸುತ್ತದೆ ಎಂಬುದು. ಇದಕ್ಕೆ ಅಂಬೇಡ್ಕರ್‌ ಅವರ ಉತ್ತರ ಆ ರೀತಿ ಪಂಚಾಯತಿಗಳಿಗೆ ಹಳ್ಳಿಮಟ್ಟದಲ್ಲಿ ಅಧಿಕಾರ ಸಿಕ್ಕರೆ ಅಲ್ಲಿನ ಮೇಲ್ವರ್ಗದವರು ಸಹಜವಾಗಿ ಅಧಿಕಾರ ಹಿಡಿಯುತ್ತಾರೆ ಮತ್ತು ಹಿಂದುಳಿದವರು ದಲಿತರು ಇವರ ಮೇಲೆ ಅವರು ಇದುವರೆಗೂ ಮಾಡುತ್ತಿರುವವ ಶೋಷಣೆ ಇನ್ನಷ್ಟು ಬಲಪಡೆದು ಮುಂದುವರೆಯುತ್ತದೆ ಎಂಬುದಾಗಿತ್ತು. (ಮುಂದೆ ದಮನಿತರ ಶಿಕ್ಷಣ ಮುಂತಾದವುಗಳಿಂದ ಪರಿಸ್ಥಿತಿ ಸುಧಾರಿಸಿದ ಮೇಲೆ ಪಂಚಾಯತ್‌ ವ್ಯವಸ್ಥೆ ಸಂವಿಧಾನದ ತಿದ್ದುಪಡಿಯ ಮೂಲಕ ಜಾರಿಗೆ ಬಂತು.)

ಎರಡನೆಯದು ನಮ್ಮ ಸಂವಿಧಾನದ ಮೇಲೆ ʻವಿದೇಶಿ ಸಂವಿಧಾನಗಳ ಪ್ರಭಾವ ಅತಿ ಹೆಚ್ಚಾಯಿತು ಮತ್ತು ಅದು ನಮ್ಮ ಪ್ರಾಚೀನ ಧಾರ್ಮಿಕ ಪಠ್ಯಗಳು ಹೇಳುವ ತತ್ವಗಳನ್ನು ಕಡೆಗಣಿಸಿದೆʼ ಎಂಬುದಾಗಿತ್ತು. ಅದು ನಿಜವೂ ಇತ್ತು; ಅದಕ್ಕೆ ಕಾರಣವೂ ಇತ್ತು. ಅಂಬೇಡ್ಕರ್‌ ಅವರಿಗೆ ಅದು ಅನಿವಾರ್ಯವೂ ಆಗಿತ್ತು. ನಮ್ಮ ಧಾರ್ಮಿಕ ಪಠ್ಯಗಳು ಏನೇ ಹೇಳಿದರೂ ಅವು ಸುತ್ತೂ ಬಳಸಿ ಕೊನೆಗೆ ಅಂತಿಮವಾಗಿ ಮನುಷ್ಯನನ್ನು ಸಮಾನವಾಗಿ ಕಾಣುವುದಕ್ಕೆ ವಿರುದ್ಧವಾಗಿಯೇ ನಿಲ್ಲುತ್ತಿದ್ದವು. ಅವು ಹೇಳುವ ʼಧರ್ಮʼ ಅದು ವರ್ಣಾಶ್ರಮ ಧರ್ಮವೇ ಆಗಿತ್ತು. ಅಂಬೇಡ್ಕರ್‌  ಅವರು ಅದನ್ನು ತಮ್ಮ ಅಪಾರ ಪರಿಶ್ರಮದಿಂದ ಓದಿ ಅರ್ಥೈಸಿಕೊಂಡಿದ್ದರು. ಹಾಗಾಗಿ ಅವರು ನಮ್ಮ ಸಂವಿಧಾನದ ಪ್ರಧಾನ ಆಶಯಗಳಾದ ಸಹೋದರೆ, ಸಮಾನತೆ, ಅಧಿಕಾರ ಮತ್ತು ಅವಕಾಶಗಳ ಸಮಾನತೆ, ಮನುಷ್ಯನ ವ್ಯಕ್ತಿತ್ವದ ಘನತೆ ಇಂತಹುಗಳಿಗಾಗಿ ವಿದೇಶಿ ಸಂವಿಧಾನಗಳನ್ನು ಆಶ್ರಯಿಸಬೇಕಾಯಿತು!

ಅಂಬೇಡ್ಕರ್‌  ಸಂವಿಧಾನದ ಅಂತಿಮ ಕರುಡನ್ನು ಓದಿದ ಮೂರು ದಿನಗಳ ನಂತರ ಅಂದರೆ ೧೯೪೯ರ ನವೆಂಬರ್‌ ೨೦ ರಂದು ಇಲ್ಲಿರುವ ವ್ಯಂಗಚಿತ್ರ ಆಗಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಈ ಚಿತ್ರದಲ್ಲಿ ಅಂಬೇಡ್ಕರ್‌ ಅವರನ್ನುʼಕಲಿಯುಗ ಭೀಮʼ ಎಂದು ಕರೆದು ಅಡುಗೆಭಟ್ಟನನ್ನಾಗಿ ಚಿತ್ರಿಸಲಾಗಿದೆ. (ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿರುವಾಗ ವಿರಾಟ ರಾಜನ ಆಶ್ರಯದಲ್ಲಿರುವಾಗ ʼಭೀಮ ಅಲ್ಲಿ ಅಡುಗೆಭಟ್ಟ ಆಗಿದ್ದನ್ನು ನೆನಪಿಸಿಕೊಳ್ಳಿ. ಅವನು ದ್ವಾಪರಯುತದ ಭೀಮನಾದರೆ ಇವನು ಕಲಿಯುಗದ ಭೀಮʼ ಎಂಬುದನ್ನು ಇದು ಧ್ವನಿಸುತ್ತದೆ.) ಮತ್ತು ಅಂಬೇಡ್ಕರ್‌ ನಿರ್ವಹಿಸಿದ ಸಂವಿಧಾನ ರಚನೆ ಯ ಕಾರ್ಯವನ್ನು ಆ ಅಡುಗೆಭಟ್ಟ ಮಾಡಿದ ಅಡುಗೆಗೆ ಹೋಲಿಸಿ ಚಿತ್ರಿಸಲಾಗಿದೆ. ಸಂವಿಧಾನ ರಚನಾ ಸಭೆಯ ಸದಸ್ಯರು ಎತ್ತಿದ ತಕರಾರುಗಳನ್ನು ಇಲ್ಲಿಅಡುಗೆಯ ಬಗ್ಗೆ ಎತ್ತಿದ ತಕರಾರುಗಳಾಗಿ ತೋರಿಸಲಾಗಿದೆ. ಒಬ್ಬರು ʻಹಲ್ವಾ ಎಲ್ಲಿ?ʼ ಎಂದು ಕೇಳುತ್ತಿದ್ದರೆ ಇನ್ನೊಬ್ಬರು ʻಉಪ್ಪು  ಹೆಚ್ಚಾಯಿತುʼ ಎಂದೂ ಮತ್ತೊಬ್ಬರು ʻಖಾರ ಕಡಿಮೆ ಆಯಿತುʼ ಎಂದೂ ಹೇಳುತ್ತಿದ್ದಾರೆ.  ಕೆಲವರು ಅಡುಗೆ ʻಸರಿಯಾಗಿ ಬೆಂದಿಲ್ಲʼವೆಂದರೆ ಮತ್ತೆ ಕೆಲವರು ಸಾಕಷ್ಟು ತರಕಾರಿ ಹಾಕಿಲ್ಲʼ ಎಂದು ಟೀಕಿಸುತ್ತಿದ್ದಾರೆ. ʼಮೀನು ಇಲ್ವಾಎಂದು ಕೇಳಿದವರೂ ಇದ್ದಾರೆ. ಕೊನೆಯ ಕಾರ್ಡ್‌ಬೋರ್ಡಿನ ತಕರಾರನ್ನು ಸೂಕ್ಷ್ಮವಾಗಿ ನೋಡಿ. ʼನೀವು ವನಸ್ಪತಿಯನ್ನು ಏಕೆ ಬಳಸುವುದಿಲ್ಲ” ಎಂದು ಕೇಳಲಾಗಿದೆ. ಇಲ್ಲಿ ʼವನಸ್ಪತಿʼ ಎಂದರೆ ʼಭಾರತೀಯತೆʼ ಎಂದೇ ಅರ್ಥ!

ಡಾ. ರಾಜೇಂದ್ರ ಬುರಡಿಕಟ್ಟಿ

16-04-2025

 

 

Monday, April 14, 2025

ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ  ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎರಡು ವರ್ಷ ಮಾತ್ರ ಆಗಿತ್ತು. 1949ರ ಏಪ್ರಿಲ್‌ 14 ರಂದು ʼಹೈದರಾಬಾದ್‌ ರಾಜ್ಯ ಪರಿಶಿಷ್ಠ ಜಾತಿಗಳ ಒಕ್ಕೂಟʼ ಅಂಬೇಡ್ಕರ್‌ ಅವರ ಜನ್ಮದಿನದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದನ್ನು ಉದ್ದೇಶಿಸಿ ಅಂಬೇಡ್ಕರ್‌ ಹೀಗೆ ಹೇಳಿದ್ದರು: “ಭಾರತದಲ್ಲಿ ರಾಜಕೀಯ ನಾಯಕರನ್ನು ಪ್ರವಾದಿಗಳ ಸ್ಥಾನದಲ್ಲಿರಿಸುವುದು ಒಂದು ಖೇಧದ ಸಂಗತಿಯಾಗಿದೆ. ಬೇರೆ ದೇಶಗಳಲ್ಲಿ ಪ್ರವಾದಿಗಳ ಜನ್ಮದಿನಗಳನ್ನು ಮಾತ್ರ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರ ಪ್ರವಾದಿಗಳು ಮತ್ತು ರಾಜಕೀಯ ನಾಯಕರ ಜನ್ಮದಿನಗಳನ್ನು ಆಚರಿಸಲಾಗುತ್ತದೆ. ನಾನು ನನ್ನ ಜನ್ಮದಿನವನ್ನು ಆಚರಿಸುವುದನ್ನು ಇಷ್ಟಪಡುವುದಿಲ್ಲ. ನಾನು ಪ್ರಜಾಪ್ರಭುತ್ವವಾದಿ ಮತ್ತು ಇಂತಹ ವ್ಯಕ್ತಿಪೂಜೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯು ಹಳಿತಪ್ಪುವಂತೆ ಮಾಡುತ್ತವೆಯಾದ್ದರಿಂದ ಇವು ಇರಬಾರದು ಎಂಬ ಆಲೋಚನೆಯವನು. ರಾಜಕೀಯ ನಾಯಕರ ಮತ್ತು ಅವರ ಅನುಯಾಯಿಗಳ ಬಗ್ಗೆ, ಅವರು ಅರ್ಹರಾಗಿದ್ದರೆ, ಪ್ರೀತಿ, ವಿಶ್ವಾಸ, ಗೌರವ ಇವುಗಳನ್ನು ಜನ ಇಟ್ಟುಕೊಳ್ಳಬಹುದು. ಆದರೆ ಇಂತಹ ವ್ಯಕ್ತಿಪೂಜೆಗಳು ಅದನ್ನು ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಇಬ್ಬರನ್ನೂ ನೈತಿಕ ಅಧಪತನಕ್ಕೆ ಈಡುಮಾಡುತ್ತವೆ. ಏಕೆಂದರೆ ಒಂದು ಸಾರೆ ರಾಜಕೀಯ ನಾಯಕನೊಬ್ಬನನ್ನು ಪ್ರವಾದಿಯ ಸ್ಥಾನದಲ್ಲಿರಿಸಿದರೆ ಆನಂತರ ಅವನು ಪ್ರವಾದಿಯ ಪಾತ್ರವಹಿಸಿಕೊಂಡು ಪ್ರವಾದಿಗಳಂತೆ ಸಂದೇಶ ನೀಡಬೇಕಾಗುತ್ತದೆ.”

ಹೀಗೆ ಹೇಳಿದ ವ್ಯಕ್ತಿಯ ಜನ್ಮದಿನವನ್ನೇ ನಾವು ಇಂದು ಆಚರಿಸುತ್ತಿದ್ದೇವೆ. ಇದು ತಪ್ಪಲ್ಲ. ಆದರೆ ಅದನ್ನು ಹೇಗೆ ಆಚರಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಭಾರತದ ಶೇಕಡಾ ತೊಂಬತ್ತರಷ್ಟು ಜನರು ಇಂದು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವಂತಾದದ್ದು ಡಾ ಅಂಬೇಡ್ಕರ್‌ ಅವರ ದೂರದೃಷ್ಟಿಯ ಸಂವಿಧಾನದಿಂದ. ಅವರಷ್ಟು ಓದಿಕೊಂಡ ವ್ಯಕ್ತಿ ಈ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಆ ಕಾಲದಲ್ಲಂತೂ ಇರಲೇ ಇಲ್ಲ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ಎಂದು ನಾವೆಲ್ಲರೂ ಭಾವಿಸುವ ಅನೇಕ ಜ್ಞಾನಶಿಸ್ತುಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಪಾರವಾದದ್ದು. ಆ ಪಾಂಡಿತ್ಯವನ್ನು ಅವರು ಈ ದೇಶದ ಜನರ ಬದುಕು ಹಸನಾಗುವಂತೆ ಮಾಡಲು ಬಳಸಿದ್ದು ಅವರ ಸಾಧನೆ. ಭಾರತದ ಜನನಾಯಕರಲ್ಲಿಯೇ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಸತ್ತನಂತರವೂ ನಿತ್ಯ ಬೆಳೆಯುತ್ತಿರುವ ವ್ಯಕ್ತಿ ಅಂದರೆ ಅದು ಅಂಬೇಡ್ಕರ್‌ ಮಾತ್ರ.

ಇಂತಹ ಒಬ್ಬ ಮಹಾನಾಯಕನ ದಿನವನ್ನು ಬಹಳ ಕಡೆ ಹೇಗೆಲ್ಲ ಆಚರಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಖೇಧವೆನಿಸುತ್ತದೆ. ಇದನ್ನು ಸರ್ಕಾರಗಳು ಅಧಿಕೃತವಾಗಿ ಆಚರಿಸುವ ಮೊದಲು ಅಭಿಮಾನದಿಂದ ಕೆಲವು ಸಂಘಟನೆಗಳು ಆಚರಿಸುವಾಗ ಅದರ ಕಿಮ್ಮತ್ತೇ ಬೇರೆ ಇತ್ತು. ಈಗ ಇದು ಸರ್ಕಾರಿ ಆಚರಣೆ ಆಗಿರುವುದರಿಂದ ಅನೇಕ ಕಛೇರಿಗಳಲ್ಲಿ ಕಾಟಾಚಾರದ ʻಫೋಟೋ ಆಚರಣೆʼ ಆಗಿರುವುದೇ ಹೆಚ್ಚು. ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದರ ಉದ್ದೇಶ ಆ ವ್ಯಕ್ತಿಯ ಬದುಕು ಸಾಧನೆಗಳಿಂದ ನಾವು ಪ್ರೇರಣೆ ಪಡೆಯುವುದೇ ಆಗಿದೆ. ಆ ವ್ಯಕ್ತಿಯ ಬದುಕು, ಸಾಧನೆ ಬರೆಹ ಇವುಗಳನ್ನು ಕುರಿತು ಬಹುಮುಖ್ಯವಾಗಿ ಉಪನ್ಯಾಸ, ಚರ್ಚೆ, ಸಂವಾದ ಇಂಥವು ನಡೆದರೇನೇ ಅದು ಅರ್ಥಪೂರ್ಣ. ಅಂಬೇಡ್ಕರ್‌ ಅವರಂಥ ಮೇಧಾವಿಗಳ ವಿಷಯದಲ್ಲಂತೂ ಇದು ಆಗಲೇ ಬೇಕಾಗಿರುವ ಅತ್ಯಗತ್ಯ ಕೆಲಸ. ಉಳಿದ ಕಛೇರಿಗಳಿಗಿಂತ ಈ ಕೆಲಸ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಬೇಕು.

ಆದರೆ ವಾಸ್ತವ ಬಹಳ ಕೆಟ್ಟದ್ದಾಗಿದೆ. ಈ ದಿನಾಚರಣೆ ಬರುವ ಏಪ್ರಿಲ್‌ ಹದಿನಾಲ್ಕು ರಾಜ್ಯದ ಬಹುತೇಕ ಕೆಳಹಂತದ ಶಾಲೆಗಳಿಗೆ ರಜೆ ಇರುತ್ತದೆ. ರಜೆಯಿದ್ದರೂ ಅಂಬೇಡ್ಕರ್‌ ಜಯಂತಿಗೆ ಸ್ವಯಂ ಇಚ್ಚೆಯಿಂದ ಬರುವಂತೆ ಮಾಡುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಇನ್ನು ಶಿಕ್ಷಕರು. ಅವರಾದರೂ ತಾವೇ ಒಂದಿಷ್ಟುಹೊತ್ತು ಅಂಬೇಡ್ಕರ್‌ ಅವರ ಜೀವನ ಸಾಧನೆಗಳು, ಅವರ ವಿಚಾರಧಾರೆ ಕುರಿತು ಚಿಂತನ-ಮಂಥನ ಮಾಡಿ ಅದನ್ನು ಇದ್ದದ್ದರಲ್ಲಿಯೇ ಅರ್ಥಪೂರ್ಣಗೊಳಿಸಲು ಸಾಧ್ಯವಿದೆ. ಆದರೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಮ್ಮ ಮೇಲಿರುವ ಅಂಬೇಡ್ಕರ್‌ ಅವರ ಋಣ ತೀರಿಸಲು ಬರುವವರಿಗಿಂತ ʼಕಡ್ಡಾಯʼ ಎಂಬ ಕಾರಣಕ್ಕೆ ಸಂಕಟದಿಂದ ಬರುವವರೇ ಹೆಚ್ಚು. ಬರುಬರುತ್ತಿದ್ದಂತೆಯೇ ಅವರು ಹೊರಡುವ ಆತುರದಲ್ಲಿರುತ್ತಾರೆ! ಇವರೆಲ್ಲ ಸೇರಿ ಮಾಡುವ ಆಚರಣೆ ಎಷ್ಟು ಅರ್ಥಹೀನವಾಗಿರುತ್ತದೆ ಎಂದರೆ ಅದು ʻಸರಸ್ವತಿ ಪೂಜೆʼಯ ಕಾರ್ಯಕ್ರಮವೋ ಅಥವಾ ʻಸತ್ಯನಾರಾಯಣ ವ್ರತʼವೋ ಆಗುವುದೇ ಹೆಚ್ಚು. ಅಂಬೇಡ್ಕರ್‌ ಅವರ ಫೋಟೋ ಇಟ್ಟು ಅದಕ್ಕೆ ಕಾಯಿ ಒಡೆದು ಕರ್ಪೂರ ಬೆಳಗಿ ಕೊಬ್ಬರಿ ತಿಂದು ಅದರ ಆಚೆ ಈಚೆ ನಿಂತು ಮದುವೆ ರಿಶಪ್ಶನ್‌ ನಂತೆ ʻಹಾಜರಿಫೋಟೋʼ ಹೊಡೆಸಿಕೊಂಡರೆ ಅದೇ ಅಂಬೇಡ್ಕರ್‌ ದಿನಾಚರಣೆ!

ಸರ್ಕಾರ ಹೀಗೆ ಮಾಡಲಿಕ್ಕೆಂದು ಅವರ ಜಯಂತಿಯನ್ನು ಮಾಡಿದೆಯೇ? ಹೀಗೆ ʻಪೂಜೆ-ಪ್ರಸಾದʼವೇ ಪ್ರಧಾನವಾದ ಆಚರಣೆ ಮಾಡುವುದಾದರೆ ಅದನ್ನು ಮನೆಯಲ್ಲೋ ದೇವಸ್ಥಾನದಲ್ಲಿಯೋ ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ? ಅಂಬೇಡ್ಕರ್‌ ಪೋಟೋದೊಂದಿದೆ ಮನೆಯಲ್ಸೆಲಿಯೇ ಸೆಲ್ಪಿ ಹೊಡೆದುಕೊಂಡು ಕಳಿಸಬೇಕಾದವರಿಗೆ ಕಳಿಸಿದರೆ ಏನು ತಪ್ಪಾಗುತ್ತದೆ? ಶಾಲೆ-ಕಾಲೇಜು, ಕಛೇರಿಗಳಲ್ಲಿ ಎಲ್ಲ ಜಾತಿಧರ್ಮದ ಜನ ಸೇರಿ ಮಾಡುವ ಮಹಾವ್ಯಕ್ತಿಗಳ ಜಯಂತಿಗಳ ಮುಖ್ಯ ಉದ್ದೇಶವೇ ಅವರ ಕುರಿತು ವಿಚಾರ ಮಂಥನ. ಅದೇ ಮಾಯವಾದರೆ ಹೇಗೆ? ಹೀಗೆ ಮಾಡುವುದು ಅಂಬೇಡ್ಕರ್‌ ಅಂತಹ ಮೇಧಾವಿಗೆ ಮಾಡುವ ಅಪಚಾರವಲ್ಲದೆ ಮತ್ತೇನು? ಬೇರೆ ಕಛೇರಿಗಳಲ್ಲಿ ಆಗದಿದ್ದರೆ ದೇಶದ ಭಾವೀ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಶಾಲೆ ಕಾಲೇಜುಗಳಲ್ಲಿಯಾದರೂ ಇದು ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳದಿದ್ದರೆ ಹೇಗೆ?

ಇದಕ್ಕೆ ಮುಖ್ಯವಾಗಿ ನಮ್ಮ ಶಿಕ್ಷಕ ಸಮುದಾಯ ಮನಸ್ಸು ಮಾಡಬೇಕು ಅದಕ್ಕೆ ಪೂರಕವಾಗಿ ಅವರಿಗೆ ಸಹಾಯ ಆಗುವಂತೆ ಇಲಾಖೆ ಮಾಡಬೇಕಾದ ಕೆಲಸವೆಂದರೆ ಏಪ್ರಿಲ್‌ ಹನ್ನೊಂದರಿಂದ ಕೊಡುತ್ತಿರುವ ಬೇಸಿಗೆ ರಜೆಯನ್ನು ನಾಲ್ಕು ದಿನ ಮುಂದಕ್ಕೆ ಹಾಕಿ ಏಪ್ರಿಲ್‌ ಹದಿನೈದರಿಂದ ಕೊಟ್ಟು ಶಾಲಾ ಪುನರಾರಂಭವನ್ನು ಕೂಡ ನಾಲ್ಕುದಿನ ತಡವಾಗಿ ಮಾಡಬೇಕು. ಮತ್ತು ಇಂತಹ ದಿನಾಚರಣೆಗಳಿಗೆ ಕನಿಷ್ಠ ಒಂದೆರಡಾದರೂ ಗಂಟೆಗಳ ಕಾಲವನ್ನಾದರೂ ಬಳಸುವುದನ್ನು ನಿಗಧಿಪಡಿಸಿ ಅದನ್ನು ಹೇಗೆಲ್ಲ ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕು. ಕೊನೆಯ ಪಕ್ಷ ಇಷ್ಟಾದರೂ ಮಾಡದಿದ್ದರೆ ಈ ಆಚರಣೆ ಇನ್ನೂ ಹಳ್ಳ ಹಿಡಿಯುವುದು ನಿಶ್ಚಿತ. ಈ ವರ್ಷದ ಅಕ್ಟೋಬರ್‌ ನಲ್ಲಿ ಬರುವ ಮಹಾತ್ಮಾ ಗಾಂಧಿ ಜಯಂತಿ ಕೂಡ ದಸರಾ ರಜೆಯ ಮಧ್ಯೆ ಬರುವಂತೆ ಶಾಲಾ ಕಾಲೇಜುಗಳ ಕ್ಯಾಲೆಂಡರ್‌ ಪ್ರಕಟವಾಗಿದ್ದನ್ನು ನೋಡಿದರೆ ಅಂಬೇಡ್ಕರ್‌ ಜಯಂತಿಗೆ ಬಂದ ಗತಿಯೇ ರಾಷ್ಟ್ರಪಿತನ ಜಯಂತಿಗೂ ಬರುವುದು ಗ್ಯಾರಂಟಿ. ಇದು ಈ ಮಹಾವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಸಂಬಂಧಪಟ್ಟ ಎಲ್ಲರೂ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಒಂದು ಕವಿತೆಯ ನಾಲ್ಕು ಸಾಲುಗಳಿಂದ ಈ ಟಿಪ್ಪಣಿ ಮುಗಿಸುತ್ತೇನೆ.

ಅದೇ ಫೋಟೋ ಅದೇ ಹಾರ
ನಿನ್ನ ಆಚರಣೆಯಲ್ಲಿ ಉಳಿದಿಲ್ಲ ಸಾರ
ಮಣಭಾರವಿದ್ದರೂ ತಲೆಮೇಲೆ ನಿನ್ನ ಋಣ
ಆತ್ಮಸಾಕ್ಷಿಯು ಸತ್ತ ಹೊಣೆಗೇಡಿಗಳು ನಾವು….

ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail̤com
14-04-2025