Tuesday, April 21, 2020

ಅಂಬೇಡ್ಕರ್ ಬರೆಹಗಳು ಮತ್ತು ವೈಚಾರಿಕೆ ಪ್ರಜ್ಞೆ…..
ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಯಾರನ್ನು ಓದದಿದ್ದರೂ ನಡೆದೀತು ಆದರೆ ಅಂಬೇಡ್ಕರ್ ಅವರನ್ನು ಓದದಿದ್ದರೆ ನಡೆಯುವುದಿಲ್ಲ ಅನ್ನುವಷ್ಟರ ಮಟ್ಟಿಗೆ ದೇಶದ ಇತಿಹಾಸಸಮಾಜ, ದೇವರು-ಧರ್ಮ, ರಾಜಕಾರಣ, ತತ್ವಶಾಸ್ತ್ರ, ಆರ್ಥಿಕತೆ, ಹೀಗೆ ಬಹುಮುಖ್ಯವಾದ ಎಲ್ಲ ಮಗ್ಗಲುಗಳನ್ನು ಆಳವಾಗಿ ಅಧ್ಯಯನಮಾಡಿ ಕರಾರುವಕ್ಕಾಗಿ ತಮ್ಮ ವಿಚಾರಗಳನ್ನು ಪ್ರಬುದ್ಧವಾಗಿ ಮಂಡಿಸಿದ ಅಂಬೇಡ್ಕರ್ ಅವರಂಥ ಮತ್ತೊಬ್ಬ ವಿದ್ವಾಂಸ ಬಹುಶಃ  ಭಾರತದಲ್ಲಿ ನಮಗೆ ದೊರೆಯಲಾರನೇನೊ.
ಜಾತಿಯ ಕಾರಣಕ್ಕೆ ಎಲ್ಲ ಬಗೆಯ ಸಾಮಾಜಿಕ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತನಾಗಿ, ಪಡಬಾರದ ಕಷ್ಟಗಳನ್ನೆಲ್ಲ ಪಟ್ಟು, ಎಲ್ಲ ಬಗೆಯ ದೌರ್ಜನ್ಯಗಳನ್ನು ಎದುರಿಸಿ ಬೆಳೆದ ದಲಿತ ಹುಡುಗನೊಬ್ಬ ಕಾಲದ ಎಲ್ಲ ಸೌಲಭ್ಯಗಳನ್ನು ಜಾತಿಯ ಕಾರಣದಿಂದಲೇ ಪಡೆಯುತ್ತಿದ್ದ ಯಾವೊಬ್ಬ ಸವರ್ಣಿಯನೂ ಬೆಳೆಯಲಾಗದಷ್ಟು ಎತ್ತರಕ್ಕೆ ಬೆಳೆದದ್ದು ಸಣ್ಣ ಸಂಗತಿಯೇನಲ್ಲ. ಆಧುನಿಕ ವಿದ್ಯಾಭ್ಯಾಸದ ಅತ್ಯುನ್ನತ ಪದವಿಗಳಾದ ಪಿಎಚ್.ಡಿ, ಡಿ.ಎಸ್ಸಿ.ಯಂಥವುಗಳನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ತಮ್ಮ ನಿಷ್ಠೆ, ಶ್ರದ್ಧೆ, ಪರಿಶ್ರಮಗಳಿಂದ ಕಷ್ಟಪಟ್ಟು, ಆಳವಾದ ಅಧ್ಯಯನ ಮತ್ತು ಮೊನಚು ವಿಶ್ಲೇಷಣೆಗಳಿಂದ ಗಳಿಸಿಕೊಂಡ ಅಪಾರವಾದ ಜ್ಞಾನವನ್ನು  ಸಮಾಜೋದ್ಧಾರಕ್ಕಾಗಿ ಅವರಷ್ಟು ಬಳಸಿಕೊಂಡವರೂ ವಿರಳ. ಅಂಬೇಡ್ಕರ್ ಅವರ ವಿದ್ವತ್ತನ್ನು ಜಗತ್ತು ಇಂದು ಸರಿಯಾಗಿಯೇ ಗುರುತಿಸಿ ದೊಡ್ಡಮಟ್ಟದಲ್ಲಿ ಗೌರವಿಸುತ್ತಿದೆ. ಅವರ ಜನ್ಮದಿನವನ್ನು ಅನೇಕ ಕಡೆ ʼಜ್ಞಾನದಿನ'ವನ್ನಾಗಿ ಆಚರಿಸುತ್ತಿರುವುದು ಇದರ ಒಂದು ಉದಾಹರಣೆ ಮಾತ್ರ.
ಇಂತಹ ಮಹಾನ್ ಮೇಧಾವಿಗೆ ಭಾರತೀಯರಾದ ನಾವು ಏನು ಮಾಡಿದ್ದೇವೆ ಎಂಬುದನ್ನು ಕೇಳಿಕೊಂಡರೆ ಒಂದಿಷ್ಟು ನಾಚಿಕೆಯಾದೀತು. ಏಕೆಂದರೆ ಈಗಲೂ ಭಾರತದಲ್ಲಿ ಬಹುಪಾಲು ಜನರಿಗೆ 'ಅಂಬೇಡ್ಕರ್' ಅಂದ ತಕ್ಷಣಕ್ಕೆ ನೆನಪಿಗೆ ಬರುವುದು ಅವರ 'ಜಾತಿ'ಯೇ ಹೊರತು 'ಜ್ಣಾನ'ವಲ್ಲ! ಒಂದು ರಾಜ್ಯದ ಸೇನಾಕಾರ್ಯದರ್ಶಿ ಅಂತಹ ದೊಡ್ಡ ಹುದ್ದೆಯಲ್ಲಿದ್ದರೂ ದಲಿತನೆಂಬ ಕಾರಣಕ್ಕೆ ಅವರಿಗೆ ವಾಸಿಸಲು ಒಂದು ಬಾಡಿಗೆ ಮನೆ ನಮ್ಮ ದೇಶದಲ್ಲಿ ಸಿಗಲಿಲ್ಲ! ಅವರೇ ಬರೆದ ಸಂವಿಧಾನದ ಪ್ರಕಾರವೆ ನಡೆದ ಮೊದಲ ಚುನಾವಣೆಯಲ್ಲಿಯೇ ಅವರನ್ನು ಸೋಲಿಸಿದ 'ಭವ್ಯಭಾರತ ನಮ್ಮದು!
ಅಂಬೇಡ್ಕರ್ ಅಂದರೆ ಏನು ಅವರ ವಿದ್ವತ್ತು ಯಾವ ಮಟ್ಟದ್ದು ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಏನು ಎಂಬುದು ಇಂದಿಗೂ ನಮ್ಮಲ್ಲಿ ಬಹುಜನಕ್ಕೆ ಗೊತ್ತಿಲ್ಲ. ಅವರನ್ನು ಸದಾ ತೆಗಳುವ ವರ್ಗವೊಂದುಕಡೆ ಇದ್ದರೆ ಅದಕ್ಕೆ ವಿರುದ್ಧವಾಗಿ ಅವರನ್ನು ಆರಾಧಿಸುವ ವರ್ಗವೊಂದು ಕಾಲದ ಅಗತ್ಯವಾಗಿ ಬೆಳೆದುಬಂತು. ಅವರನ್ನು ವಿರೋಧಿಸುವವರಿರಲಿ, ಆರಾಧಿಸುವವರಲ್ಲಿ ಕೂಡ ಬಹಳ ಜನ ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಳ್ಳಲಿಲ್ಲ ಎಂಬುದು ವಾಸ್ತವ ಸಂಗತಿ.
ಇದಕ್ಕೆ ಅವರ ಬರಹಗಳ ಅಲಭ್ಯತೆಯೂ ಒಂದು ದೊಡ್ಡ ಕಾರಣವಾಗಿತ್ತು. ಅಂಬೇಡ್ಕರ್ ತೀರಿಕೊಂಡ ಮೇಲೆ ಬಹಳಷ್ಟು ದೊಡ್ಡ ಲೇಖಕರ ಬೌದ್ಧಿಕ ಆಸ್ತಿಗಳಂತೆ ಅಂಬೇಡ್ಕರ್ ಅವರ ಬರೆಹಗಳು ಕೂಡ ಕುಟುಂಬದ ಆಸ್ತಿವಿವಾದಕ್ಕೆ ತುತ್ತಾದವು. ಈ ಕೊರತೆಯನ್ನು ನೀಗಿಸುವ ಪ್ರಯತ್ನವೊಂದು ಮೊಟ್ಟಮೊದಲು ಮೂವತ್ತು ವರ್ಷಗಳ ಹಿಂದೆ ಆರಂಭವಾಯಿತು. ಆದರೆ ಒಂದು ರಾಜ್ಯ ಸರ್ಕಾರದ ಸತತ ಮತ್ತು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೊನೆಗೂ ಅಂಬೇಡ್ಕರ್ ಅವರ ಬಹುಮುಖ್ಯ ಬರಹಗಳು ಸಾರ್ವಜನಿಕರಿಗೆ ದೊರೆಯುವಂತಾಯಿತು. ಅಂತಹ ಮಹತ್ವದ ಕೆಲಸವೊಂದನ್ನು ಸುಮಾರು  ನಲವತ್ತೈದು ವರ್ಷಗಳ ಹಿಂದೆ ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದದ್ದು ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ.
ಬಹುತೇಕ ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಅಲ್ಲಲ್ಲಿ ಬಿಡಿಬಿಡಿಯಾಗಿದ್ದ ಮತ್ತು ಅಳಿವಿನ ಅಂಚಿಗೆ ಸಾಗುತ್ತಿದ್ದ ಅವರ ಬರೆಹ ಮತ್ತು ಭಾಷಣಗಳನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಯೋಜನೆಯೊಂದನ್ನು ೧೯೭೬ರಲ್ಲಿ ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಮ್ಮಿಕೊಂಡು ಅದಕ್ಕೆ ಸಂಬಂಧಿಸಿದ ವಾರಸುದಾರರಿಂದ ಅನುಮತಿ ಪಡೆದುಕೊಂಡು ಕಾರ್ಯಪ್ರವೃತ್ತವಾದದ್ದು ಭಾರತೀಯ ವೈಚಾರಿಕ ಸಾಹಿತ್ಯದ ಚರಿತ್ರೆಯಲ್ಲಿ ಒಂದು ಮಹತ್ವದ ಹೆಜ್ಜೆ ಎನ್ನಬೇಕು. ಸಮಿತಿಯ ಪ್ರಾಮಾಣಿಕ ಪರಿಶ್ರಮದಿಂದಾಗಿ ೧೯೭೯ರಲ್ಲಿ ಅಂಬೇಡ್ಕರ್ ಅವರ ಬರೆಹ-ಭಾಷಣಗಳ ಮೊದಲ ಸಂಪುಟ ಹೊರಬರುವ ಮೂಲಕ ಯೋಜನೆಗೆ ಚಾಲನೆ ಸಿಕ್ಕು ೧೯೮೨ ಮತ್ತು ೧೯೮೭ರಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸಂಪುಟಗಳು ಯಾವುದೇ ಸಮಸ್ಯೆಗಳು ಇಲ್ಲದೆ ಬಿಡುಗಡೆಯಾದವಾದರೂ ೧೯೮೭ರಲ್ಲಿಯೇ ಬಿಡುಗಡೆಯಾದ ನಾಲ್ಕನೇ ಸಂಪುಟ ವಿವಾದದ ಬಿರುಗಾಳಿಯನ್ನೆಬ್ಬಿಸಿತು!
 'The Riddles of Hinduism’ (ಈಗ 'ಹಿಂದೂ ಧರ್ಮದ ಒಗಟುಗಳು’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಲಭ್ಯವಿರುವ) ಎಂಬ ಅವರ ಅತ್ಯಂತ ಮಹತ್ವದ ಪುಸ್ತಕವನ್ನು ಸಂಪುಟ ಒಳಗೊಂಡಿದ್ದು ಕೆಲವು ಸ್ವಯಂ ಘೋಷಿತ ಧಾರ್ಮಿಕ ನಾಯಕರು ಅನಗತ್ಯ ವಿವಾದವೆಬ್ಬಿಸಿದ್ದು ಗ್ರಂಥಗಳ ಹೊರಬರುವಿಕೆಗೆ ತಾತ್ಕಾಲಿಕ ತಡೆಯೊಡ್ಡಿತು. ಅಂಬೇಡ್ಕರ್ ಅವರ ಆ ಪುಸ್ತಕದಲ್ಲಿ 'ಹಿಂದೂ ಧರ್ಮದ ಒಗಟುಗಳು' ಎಂದು ಕರೆದು ಸಮಂಜಸ ವಿವರಣೆಗೆ ಆಹ್ವಾನ ನೀಡಲಾಗಿದ್ದ ಒಟ್ಟು ಇಪ್ಪತ್ನಾಲ್ಕು ಸವಾಲುಗಳಿದ್ದವು. ಇವುಗಳಲ್ಲಿ ಹದಿನೈದು ಒಗಟುಗಳು ಧಾರ್ಮಿಕ ವಿಷಯಕ್ಕೆ, ಐದು ಒಗಟುಗಳು ಸಾಮಾಜಿಕ ವಿಷಯಯಕ್ಕೆ ಸೇರಿದ್ದರೆ ಉಳಿದ ನಾಲ್ಕು ಒಗಟುಗಳು ರಾಜಕೀಯಕ್ಕೆ ಸಂಬಂಧಿಸಿದ್ದವು. ಹಿಂದೂ ಧರ್ಮದ ಆಧಾರ ಗ್ರಂಥಗಳೆಂದು ಕರೆಯಲಾಗುವ, ವೇದಗಳು, ಉಪನ್ನಿಷತ್ತುಗಳು, ಪುರಾಣಗಳು, ಹಾಗೇ ಮನುವಿನ ಸಿದ್ಧಾಂತ ಇಂಥವುಗಳನ್ನು ಅಂಬೇಡ್ಕರ್ ಅವರು ಎಷ್ಟೊಂದು ಆಳವಾಗಿ ಅಧ್ಯಯನ ಮಾಡಿದ್ದರು ಎಂಬುದು ಅವರು ಸಿದ್ಧಪಡಿಸಿದ ಒಗಟುಗಳನ್ನು ನೋಡಿದರೆ ಯಾರಿಗಾದರೂ ಗೊತ್ತಾಗುತ್ತದೆ. ಅವರ ಒಗಟುಗಳನ್ನು ಬಿಡಿಸಬೇಕಾದರೆ ಅವರಿಗಿಂತ ಹೆಚ್ಚು ಅಲ್ಲದಿದ್ದರೂ ಅವರಷ್ಟಾದರೂ ಅವನ್ನು ಓದಿಕೊಳ್ಳಬೇಕಾಗುತ್ತದೆ. ಆದರೆ ಅವರ ಸಂಖ್ಯೆ ಎಷ್ಟಿದೆ ನಮ್ಮಲ್ಲಿ? ಅವರು ಅಂದು ಕೇಳಿರುವ ಈ ಒಗಟುಗಳನ್ನು ಇದುವರೆಗೂ ಯಾವ ಮಹಾತ್ಮನಿಗೂ ಉತ್ತರಿಸಲು ಆಗಿಲ್ಲ! ಹೀಗಿರುವಾಗ ಕಾಲದಲ್ಲಿ ಅವರ ಸವಾಲುಗಳು ಕೆಲವರನ್ನು ಕೆರಳಿಸಿದ್ದರಲ್ಲಿ ಆಶ್ಚರ್ಯವಿರಲಾರದು! ಅಂಬೇಡ್ಕರ್ ಹೇಳುವುದನ್ನು ಒಪ್ಪಿಕೊಳ್ಳಲೂ ಅಗದೇ ಅವರ ವಾದವನ್ನು ಸಮಂಜಸ ಪ್ರತಿ ವಾದಗಳೊಂದಿಗೆ  ಅಲ್ಲಗಳೆಯಲೂ ಆಗದೇ ಹೋದಾಗ ಅವರಿಗೆಲ್ಲ ಸಿಟ್ಟುಮಾಡಿಕೊಂಡು ವಿವಾದಮಾಡುವುದನ್ನು ಬಿಟ್ಟು ಇನ್ಯಾವ ಆಯ್ಕೆಗಳಿದ್ದವು?
ಆದರೆ ಒಳ್ಳೆಯ ಪುಸ್ತಕವೊಂದರ ಪ್ರಕಟಣೆ ಮತ್ತು ಪ್ರಚಾರವನ್ನು ಕೆಟ್ಟ ಉದ್ದೇಶದಿಂದ ತಡೆಯುವ ಪ್ರಯತ್ನಗಳು ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಂಡರೂ ಅಂತಿಮವಾಗಿ ಅವು ಕಾಣುವುದು ಸೋಲನ್ನೇ ಹೊರತು ಗೆಲುವನ್ನಲ್ಲಇಲ್ಲಿಯೂ ಆದದ್ದು ಅದೇ. ಅಂಬೇಡ್ಕರ್ ಅವರ ಆಳವಾದ ಅಧ್ಯಯನ ತರ್ಕಬದ್ಧವಾದ ವಾದಗಳ ಎದುರು ಜೊಳ್ಳು ತರಲೆಗಳೆಲ್ಲ ತರಗೆಲೆಗಳಂತೆ ಹಾರಿಹೋಗಿ ಕೊನೆಗೂ ಸಂಪುಟವೂ ಸೇರಿದಂತೆ ಒಟ್ಟು ಹದಿನಾಲ್ಕು ಸಂಪುಟಗಳು ಹೊರಬಂದು ಅಂಬೇಡ್ಕರ್ ಅಂದರೆ ಏನು ಎಂಬುದು ಕೊನೆಗೂ ಜಗತ್ತಿಗೆ ಗೊತ್ತಾಗಿಬಿಟ್ಟಿತು!
ಮಹಾರಾಷ್ಟ್ರ ಸರ್ಕಾರ ಹೊರತಂದ ಅಂಬೇಡ್ಕರ್ ಅವರ ಈ ಸಮಗ್ರ ಸಾಹಿತ್ಯ ಪ್ರಕಟವಾದದ್ದು ಇಂಗ್ಲಿಷಿನಲ್ಲಿ. 'ಇಂಗ್ಲಿಷ್ ಕಾಲುವೆ' ಮೂಲಕ ಅಂಬೇಡ್ಕರ್ ಸಾಹಿತ್ಯ ಜಗತ್ತಿನ ಎಲ್ಲಭಾಷೆಗಳ, ದೇಶಗಳ ಜನರನ್ನು ತಲುಪಲು ಸಾಧ್ಯವಾಯಿತು ಎಂಬುದು ಮಹತ್ವದ ಸಂಗತಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಷ್ಟಕ್ಕೆ ನಿಂತರೆ ಅದು ಸಾಕಾಗುತ್ತಿರಲಿಲ್ಲ. ಏಕೆಂದರೆ ಅದರೊಂದಿಗೆ ಇಂಗ್ಲಿಷ್ ಬಲ್ಲವರು ಮಾತ್ರ ಅವನ್ನು ಓದಬಹುದಾದ ಮಿತಿಯೊಂದು ನಿರ್ಮಾಣವಾಯಿತು. ಮಿತಿಯನ್ನು ಮೀರಬೇಕಾದ ಏಕೈಕ ದಾರಿಯೆಂದರೆ ಅವರ ಎಲ್ಲ ಬರೆಹ ಮತ್ತು ಭಾಷಣಗಳ ಸಂಪುಟಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವುದು. ಅವಶ್ಯಕತೆಯನ್ನು ಮೊಟ್ಟಮೊದಲು ಮನಗಂಡು ಕಾರ್ಯಪ್ರವೃತ್ತವಾದ ರಾಜ್ಯವೆಂದರೆ ಕರ್ನಾಟಕ ಎಂಬುದು ನಾವೆಲ್ಲ  ಹೆಮ್ಮೆಪಡುವ ಸಂಗತಿ.
ಮಹಾರಾಷ್ಟ್ರ ಸರ್ಕಾರ ಸಂಪುಟ ತರುತ್ತಿರುವಾಗಲೇ, ಅದರಲ್ಲೂ ಯೋಜನೆಯ ನಾಲ್ಕನೇ ಸಂಪುಟ ವಿವಾದಕ್ಕೆ ಗುರಿಯಾದ ದಿನಗಳಲ್ಲಿಯೆ ಅಂದರೆ ೧೯೮೮ ರಲ್ಲಿಯೇ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರ ಅಂಬೇಡ್ಕರ್ ಅವರ ಬಹು ಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಕನ್ನಡಕ್ಕೆ ತರಲು ಮಹತ್ವದ ನಿರ್ಣಯವೊಂದನ್ನು ಕೈಗೊಂಡಿತು. ಇದಕ್ಕಾಗಿ ಹಿರಿಯ ವಿದ್ವಾಂಸ ಡಾ..ಎಂ. ರಾಜಶೇಖರಯ್ಯ, ಕವಿ ಡಾ.ಸಿದ್ಧಲಿಂಗಯ್ಯ ಮತ್ತು ಚಿಂತಕ ದೇವನೂರು ಮಹಾದೇವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನೊಳಗೊಂಡ ನಾಲ್ಕುಜನರ ಸಮಿತಿಯೊಂದು ರಚನೆಯಾಯಿತು.
ಸಮಿತಿ ಮಾಡಿದ ಮಹತ್ವದ ಕೆಲಸವೆಂದರೆ ಅಂಬೇಡ್ಕರ್ ಅವರ ಸುಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಮಾತ್ರ ಅನುವಾದ ಮಾಡದೇ ಮಹಾರಾಷ್ಟ್ರ ಸರ್ಕಾರದ ಯೋಜನೆಯಂತೆ ಪ್ರಕಟವಾಗುತ್ತಿರುವ ಎಲ್ಲ ಸಂಪುಟಗಳನ್ನೂ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡು ಭಾಷಾಂತರಿಸಬೇಕೆಂದು ನಿರ್ಣಯ ಮಾಡಿದ್ದು. ಸಮಿತಿಯ ನಿರ್ಣಯವನ್ನು ಗೌರವಿಸಿದ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಲೆ ಅನುಮತಿ ಕೋರಿ ಬರೆದ ಪತ್ರಕ್ಕೆ ಅಲ್ಲಿನ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿ ೧೯೮೯ರಲ್ಲಿ ಅನುಮತಿ ನೀಡಿದ್ದು ಕನ್ನಡದಲ್ಲಿ ಬಾಬಾಸಾಹೇಬರ ಕೃತಿಗಳು ವ್ಯವಸ್ಥಿತವಾಗಿ ಭಾಷಾಂತರವಾಗಿ ಬೆಳಕುಕಾಣಲು ಕಾರಣವಾಯಿತು ಎನ್ನಬೇಕು.
ಹೀಗೆ ಮೂವತ್ತು ವರ್ಷಗಳ ಹಿಂದೆ ಆರಂಭವಾದ  ಅನುವಾದ ಕಾರ್ಯದಲ್ಲಿ ಕನ್ನಡದ ಅನೇಕ ವಿದ್ವಾಂಸರು ಭಾಗವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದರು. ಅಂಬೇಡ್ಕರ್ ಅವರ ಇಂಗ್ಲಿಷ್ ಭಾಷೆಯ ಪ್ರೌಢಿಮೆ, ಮತ್ತು ಕ್ಲಿಷ್ಟತೆಗಳನ್ನು ನಿವಾರಿಸಿಕೊಳ್ಳಲು, ಅನುವಾದಿತ ಕೃತಿಗಳ ಪರಿಶೀಲನೆಗಾಗಿ ಡಾ. ಆರ್. ಸಿ. ಹಿರೇಮಠ, ಡಾ. ದೇ. ಜವರೇಗೌಡ ಅವರಂಥ ಹಿರಿಯರ ನೆರವನ್ನೂ ಪಡೆಯಲಾಯಿತು. ಆರಂಭಿಕ ಹಂತದಲ್ಲಿ ಈ ಅನುವಾದಕರು, ಸಂಪಾದಕರು, ಪರೀಶೀಲಕರು ಮಾಡಿದ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾದದ್ದುರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಆರಂಭಿಸಿದ ಯೋಜನೆಗೆ ಮುಂದೆ ಬಂದ ಸರ್ಕಾರಗಳೂ ಸಕಾರಾತ್ಮಕ ಬೆಂಬಲ ನೀಡಿದ್ದರಿಂದ, ವೀರಪ್ಪ ಮೊಯಿಲಿಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್‌, ಎಸ್.ಎಂ. ಕೃಷ್ಣ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗಿನ ಅವಧಿಯಲ್ಲಿ ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯದ ಬಹಳಷ್ಟು ಸಂಪುಟಗಳು ಹೊಸದಾಗಿ ಮತ್ತು ಮರುಮುದ್ರಣವಾಗಿ ಕಡಿಮೆ ಬೆಲೆಯಲ್ಲಿ ಹೊರಬಂದು ಕನ್ನಡ ಓದುಗರಿಗೆ ದೊರೆಯಲು ಸಾಧ್ಯವಾಯಿತು.

ಸಂಪುಟಗಳು ಕನ್ನಡ ಓದುಗರನ್ನು ವೈಚಾರಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಎತ್ತರಿಸುವಲ್ಲಿ ಸಫಲವಾದವೇ ಎಂಬುದು ಹೆಚ್ಚು ಚರ್ಚೆಯನ್ನು ನಿರೀಕ್ಷಿಸುವ ಅಂಶ. ಆದರೆ ಎಲ್ಲ ಸಂಪುಟಗಳು ಖರ್ಚಾದದ್ದು ನಿಜ. ಬಹಳಷ್ಟು ಸುಂದರವಾಗಿಯೂ ಪ್ರಕಟವಾಗಿದ್ದ ಬೃಹತ್ ಗಾತ್ರದ ಸಂಪುಟಗಳ ಬೆಲೆ ಅತ್ಯಂತ ಕಡಿಮೆ ಇದ್ದದ್ದರಿಂದ ಓದಲಾಗದವರೂ, ಓದಲೊಲ್ಲದವರೂ 'ಮನೆಯಲ್ಲಿ ಇರಲಿ' ಎಂಬ ಗೌರವದ ಭಾವನೆಯಿಂದ ಒಯ್ದದ್ದೂ ಇದೆ. ಇದರಿಂದಾಗಿ ನಿಜವಾದ ಓದುಗರಿಗೆ ಇವು ಸಿಗದಂತಾದದ್ದೂ ಇದೆ. ನಿಜವಾದ ಓದುಗರು ಸಂಪುಟಗಳ ಮರುಮುದ್ರಫಲವಾಗಿ ಒತ್ತಾಯ ತರುತ್ತಾ ಅವುಗಳನ್ನು ಪಡೆಯಲು ಜಾತಕ ಪಕ್ಷಿಗಳಂತೆ ಕಾದದ್ದಂತೂ ಸುಳ್ಳಲ್ಲ.
ಇಂತಹವರಿಗೆಲ್ಲ ಸಂತೋಷದ ಸಂಗತಿಯಾಗಿ ಕಳೆದ ಬಾರಿ ಸಿದ್ರಾಮಯ್ಯ ನೇತೃತ್ವದ ಸರ್ಕಾರ ಅಂಬೇಡ್ಕರ್ ಅವರ ಸಾಹಿತ್ಯವನ್ನು ಮರುಮುದ್ರಣ ಮಾಡಿ ಸುಲಭ ಬೆಲೆಗೆ ವಿತರಿಸುವ ನಿರ್ಣಯ ಕೈಗೊಂಡ ಫಲವಾಗಿ ಸಮಗ್ರ ಸಾಹಿತ್ಯದ ಇಪ್ಪತ್ತೆರಡು ಬೃಹತ್ ಸಂಪುಟಗಳು ಬಹಳ ಒಳ್ಳೆಯಗುಣಮಟ್ಟದ ಹಾಳೆಗಳಲ್ಲಿ ಮುದ್ರಣಗೊಂಡು ಅಷ್ಟೇ ಉತ್ತಮ ಬೈಂಡಿಂಗ್ ಒಂದಿಗೆ ಆಕರ್ಷಕವಾದ ಹೊಸ ವಿನ್ಯಾಸದಲ್ಲಿ ಹೊರಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಇವುಗಳನ್ನು ಹೊರತರುವ ಕಾರ್ಯವನ್ನು ಮಾಡಿರುವ 'ಕುವೆಂಪು ಭಾಷಾಭಾರತಿ' ಕಾರ್ಯ ನಿಜಕ್ಕೂ ಅಭಿನಂದನೀಯ.


ಭಾರತದ ಬಹಳಷ್ಟು ಜನ ಇಂದು ಬುದ್ಧಿವಂತರಾಗುವುದಕ್ಕಿಂತ ಭಾವಜೀವಿಗಳಾಗುತ್ತಿದ್ದಾರೆ. ಅವರನ್ನು ಕೆಲವು ಆಳುವ ಉಡಾಳರು ದಾಳಗಳನ್ನಾಗಿ ಮಾಡಿಕೊಂಡು ಅಧಿಕಾರದ ಆಟವಾಡುತ್ತಿದ್ದಾರೆ. ದೇವರ ಧರ್ಮಗಳಂತಹ ಭಾವನಾತ್ಮಕ ವಿಷಯಗಳಲ್ಲಿ ಜನರನ್ನು ಉನ್ಮಾದಗೊಳಿಸುವ ಚಟುವಟಿಕೆಗಳು ತೀವ್ರಗೊಂಡು ನಮ್ಮಜನ ನಮ್ಮ ಸಮಾಜದ ಮೂಲಗುಣವಾದ `ಸಹನೆ’ಯನ್ನು ಕಳೆದುಕೊಳ್ಳುತ್ತಿದ್ದಾರೆ. ಭಾರತವನ್ನು ಭದ್ರವಾಗಿ ಕಟ್ಟಿರುವ ಬಹುಸಂಸ್ಕೃತಿಯ ಬಂಧನ ಸಡಿಲಗೊಳ್ಳುತ್ತಿದೆ. ವಿವಿಧ ಜನಸಮುದಾಯಗಳ ನಡುವಿನ ಸೌಹಾರ್ದತೆ ದಿನದಿನಕ್ಕೂ ಕಡಿಮೆಯಾಗುತ್ತಾ ಹೋಗುತ್ತಿದ್ದು ಪರಸ್ಪರರಲ್ಲಿ ಅಸಹನೆ, ಅಪನಂಬಿಕೆಗಳು ಬೆಳೆಯುತ್ತಿವೆ. ಇವೆಲ್ಲ ಸಮಸ್ಯೆಗಳನ್ನು ಭಾರತ ಗಂಭೀರವಾಗಿ ಎದುರಿಸುತ್ತಿದ್ದರೂ ಅವೆಲ್ಲವನ್ನೂ ಮರೆಮಾಚಿ ದೇಶ ಬಲಿಷ್ಠಗೊಳ್ಳುತ್ತಿದೆಯೆಂದೂ, ಇಡೀ ಪ್ರಪಂಚಕ್ಕೆ ಬುದ್ಧಿಹೇಳುವ ಸ್ಥಾನಕ್ಕೆ ಭಾರತ ನಡೆಯುತ್ತಿದೆಯೆಂದೂ, ಜನರನ್ನು ಮರುಳುಗೊಳಿಸಲಾಗುತ್ತಿದೆ. ಇಂತಹ ಮೋಡಿಗೊಳಗಾಗುತ್ತಿರುವ ಜನರಲ್ಲಿ ಯುವಜನತೆಯೇ ಹೆಚ್ಚಿರುವುದು ಆತಂಕದ ಸಂಗತಿಯಾಗಿದೆ.
ಇಂತಹ ಹೊತ್ತಿನಲ್ಲಿ ಭಾರತದ ಜನಸಮೂದಾಯದ ಅದರಲ್ಲಿಯೂ ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವಜನತೆಯ ವೈಚಾರಿಕೆ ಶಕ್ತಿಯನ್ನು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಯಾರದೋ ತಾಳಕ್ಕೆ ಕುಣಿಯುವ ಗೊಂಬೆಗಳಾಗದೇ ಅವರು ಸ್ವತಂತ್ರ ಆಲೋಚನಾಶಕ್ತಿಯನ್ನು ರೂಪಿಸಿಕೊಂಡರೆ ಮಾತ್ರ ಈ ದೇಶಕ್ಕೆ ಭವಿಷ್ಯ. ಈ ಭವಿಷ್ಯ ರೂಪುಗೊಳ್ಳಬೇಕಾದರೆ ನಾವೆಲ್ಲ ಅಂಬೇಡ್ಕರ್ ಅವರ ಬರೆಹಗಳನ್ನು ಓದುವುದು ಮತ್ತು ನಮ್ಮ ಯುವಸಮುದಾಯಕ್ಕೆ ಓದಿಸುವುದು ಅವಶ್ಯ. ಏಕೆಂದರೆ ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಿದಂತೆ ಅಂಬೇಡ್ಕರ್ ಅವರನ್ನು ಓದುವುದು ಅಂದರೆ ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಎಂದೇ ಅರ್ಥ.
*****
ಡಾ. ರಾಜೇಂದ್ರ ಬುರಡಿಕಟ್ಟಿ
14-07-2019

No comments:

Post a Comment