Friday, April 30, 2021

 ತಟ್ಟೆಲೋಟ ಬಡಿತವೂ ತಜ್ಞವೈದ್ಯರ ಸಲಹೆಯೂ.......

(ಹುಚ್ಚಾಟ ಬಿಟ್ಟು ಎಚ್ಚರಾಗುವ ಪರಿ)

ಕಳೆದ ವರ್ಷದ ಯುಗಾದಿ ಹಬ್ಬದ ಹಿಂದಿನ ಎರಡು ಮೂರು ದಿನಗಳನ್ನು ನೆನಪಿಸಿಕಳ್ಳೋಣ. ಕೊರೋನಾ ಬಗ್ಗೆ ಸಾರ್ವಜನಿಕರಿಗಾಗಲೀ ನಮ್ಮನ್ನಾಳುವವರಿಗಾಗಲೀ ಸ್ಪಷ್ಟವಾದ ತಿಳಿವಳಿಕೆ ಇನ್ನೂ ಇರಲಿಲ್ಲ. ತಿಳಿವಳಿಕೆ ಇದ್ದ ತಜ್ಞವೈದ್ಯರಿದ್ದರಾದರೂ ಅವರ ಮಾತು ಸಲಹೆ ಕೇಳಿ ಮುಂದುವರೆಯಬೇಕು ಎಂಬ ವಿವೇಕವೂ ನಮ್ಮನಾಳುವವರಿಗೆ ಇದ್ದಂತಿರಲಿಲ್ಲ.

ದೇಶಕ್ಕೆ ದೇಶವೇ ಗಂಟೆ-ಜಾಗಟೆಗಳ ಜೊತೆಗೆ ತಟ್ಟೆ-ಲೋಟ, ಗಂಗಾಳ-ಚರಿಗೆ, ಕೈಗೆ ಏನು ಸಿಗುತ್ತೋ ಅದನ್ನು ಬಡಿಯುತ್ತಾ ಬೀದಿಬೀದಿಗಳಲ್ಲಿ ಕುಣಿದಾಡಿ ಕೊರೊನಾ ಓಡಿಸಲು ಹುಚ್ಚಾಟದಲ್ಲಿ ತೊಡಗಿ ಅಪಹಾಸ್ಯಕ್ಕೆ ಈಡಾದ ದಿನಗಳವು.

ಆಗ ನಮ್ಮ ನಾಯಕರು ಜನರಿಗೆ ಕೊಡುವ ಕರೆಗಳು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಬರುತ್ತಿದ್ದವು. ಅವುಗಳಲ್ಲಿ ಒಂದು ಮಾತು, ಇಪ್ಪತ್ತೆರಡೋ ಇಪ್ಪತ್ತನಾಲ್ಕೋ ಗಂಟೆಗಳು "ಎಲ್ಲರೂ ಮನೆಯೊಳಗಿದ್ದು ಜನಾತಾ ಕರ್ಪ್ಯೂ ಆಚರಿಸಿದರೆ . ನಾಳೆಯಿಂದ ಕೊರೊನಾ ಭಯವೇ ನಮಗೆ ಇರುವುದಿಲ್ಲ. ನಾಳೆ ಇಷ್ಟೊತ್ತಿಗೆ ಕೊರೋನಾ ನಮ್ಮ ದೇಶದಲ್ಲಿ ಇರುವುದೇ ಇಲ್ಲ" ಎಂಬುದು.  ಸರಿ ಜನರೆಲ್ಲ ಜನನಾಯಕರ ಮಾತಿಗೆ ತಕ್ಕ ಗೌರವಕೊಟ್ಟು ಜನತಾ ಕರ್ಫ್ಯೂ ಆಚರಿದರು. ಆದರೆ ಈ ಮಾತನ್ನು ನಂಬಿ ಮರುದಿನ ಕೊರೋನಾವನ್ನು ದೇಶದಿಂದಲೇ ಹೊರಗೆ ಓಡಿಸಿದವರೆಂತೆ ಯಾವುದೇ ಭಯ ಆತಂಕಗಳಿಲ್ಲದೆ ಸಂಭ್ರಮದಿಂದ ಯುಗಾದಿ ಶಾಪಿಂಗ್ ಮಾಡತೊಡಗಿದರು!!

ದೇಶದ ಜನರಿಗೆ ದೊರೆತ ತಪ್ಪುಸಂದೇಶ ಮತ್ತು ಜನರ ಹುಚ್ಚಾಟದ ಈ ಸಂದರ್ಭದಲ್ಲಯೇ ಅಂತರರಾಷ್ಟ್ರೀಯ ಮಟ್ಟದ ಭಾರತದ ಕೆಲವೇ ತಜ್ಞವೈದ್ಯರಲ್ಲಿ ಒಬ್ಬರಾದ ಡಾ. ದೇವಿಪ್ರಸಾದ ಶೆಟ್ಟಿ ಅವರ ಚಿಕ್ಕ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಎಂಬಂತೆ ಪ್ರಸಾರವಾಯಿತು. ಆ ವಿಡಿಯೋದಲ್ಲಿ ದೇಶದ ಜನರ ಹುಚ್ಚಾಟವನ್ನು ಅದಕ್ಕೆ ಕಾರಣವಾದ ತಪ್ಪುಮಾರ್ಗದರ್ಶನವನ್ನೂ ಪರೋಕ್ಷವಾಗಿ ಟೀಕಿಸಿದ ಅವರು ಜನರು ಹೀಗೆ ಹುಚ್ಚಾಟದಲ್ಲಿ ತೊಡಗಿದರೆ ದೇಶ ಯಾವ ಸ್ಥಿತಿಗೆ ಹೋಗಬಹುದು ಎಂಬುದನ್ನು ಅತ್ಯಂತ ಸಮರ್ಪಕ ಸಾಕ್ಷಾಧಾರಗಳೊಂದಿಗೆ ಎಚ್ಚರಿಸಿದ್ದರು. ಅವರ ಈ ವಿಡಿಯೋ ವೈರಲ್ ಆದ ನಂತರ ಅದೆಷ್ಟೋ ಜನರಿಗೆ, ಜನನಾಯಕರಿಗೆ ಕೊರೋನಾದ ಭೀಕರತೆಯ ಅರಿವಾಗಿ ಹುಚ್ಚಾಟದ ಕ್ರಮಗಳು ತುಸು ಕಡಿಮೆಯಾಗಿ ಒಂದಿಷ್ಟು 'ಎಚ್ಚರದ ಕ್ರಮಗಳು' ಜಾರಿಗೆ ಬಂದವು.

ಕೊರೋನಾ ಎರಡನೆಯ ಅಲೆಯ ಜೊತೆಗೆ ಎರಡನೆಯ ಹಂತದ ಹುಚ್ಚಾಟಗಳೂ ಶುರುವಾಗಿವೆ. ಕಿವಿಗೋ, ಮೂಗಿಗೋ ನಿಂಬೆಹಣ್ಣನ್ನೂ ಹುಣಿಸಿಹಣ್ಣನ್ನೋ ಹಿಂಡಿಕೊಂಡರೆ ಕೊರಾನ ಬರಲ್ಲವೆಂದು ಯಾರಾದರೂ ಒಂದು ಸಂದೇಶವನ್ನು (ಇಂತಹ ಸಂದೇಶ ಹಾಕುವವರು ಬಹಳಷ್ಟುವೇಳೆ ಆ ವಿಷಯದಲ್ಲಿ ಪರಿಣಿತರಾಗಿರುವುದಿಲ್ಲ) ಹಾಕಿದರೆ ಅದನ್ನು ಹಿಂದೆಮುಂದೆ ನೋಡದೆ ನಮ್ಮ ವಾಟ್ಸಪ್ ವಿಶ್ವವಿದ್ಯಾಲಯದ ಪದವಿಧರರು ಅವುಗಳನ್ನು ತಮಗೆ ಗೊತ್ತಿರುವ ಎಲ್ಲರಿಗೂ ತಳ್ಳುತ್ತಿದ್ದಾರೆ. ಆ ಮೇಲೆ ಆ ರೀತಿ ಮಾಡಿ ಯಾರಾದರೂ ಸತ್ತರೆ ಅವರ ಫೋಟೋಗಳನ್ನೂ ಇವರು ಅದೇ ರೀತಿ ಹಿಂದಿನಿಂದ ನಮಗೆ ಕಳಿಸಿಕೊಡುತ್ತಾರೆ!!

ಅತ್ತ ಜವಾಬ್ದಾರಿಯಿಲ್ಲದ ವಿದ್ಯಾವಂತರ ಸ್ಥಿತಿ ಹೀಗಾದರೆ ಇತ್ತ ರಾಜಕೀಯ ನಾಯಕರ ಅಂಧಾಭಿಮಾನಿಗಳ ಸ್ಥಿತಿ ಇನ್ನೊಂದು ರೀತಿಯದ್ದು. ಸಾವಿನ ಮನೆಯಲ್ಲಿಯೂ ನಾಯಕಭಜನೆ ಮಾಡುವ, ದೇಶದ ಜನ ಎಷ್ಟುಸತ್ತರೂ ತಮ್ಮ ನಾಯಕನ ವರ್ಚಸ್ಸಿಗೆ ಮಾತ್ರ ಧಕ್ಕೆಯಾಗಬಾರದೆಂದು ಹಟಕ್ಕೆ ನಿಂತಿರುವ ಅಂಧಾಭಿಮಾನಿಗಳು ಈಗಲೂ ಆಮ್ಲಜನಕ ಸಿಗದೆಯೋ ಹಾಸಿಗೆ ಸಿಗದೆಯೋ ಸತ್ತ ರೋಗಿಗಳ ಸುದ್ಧಗಳೇನಾದರೂ ಒಂದಿಷ್ಟು ಹೆಚ್ಚು ಪ್ರಸಾರವಾದರೆ, "ಇದು ಸಂದರ್ಭದ ದುರುಪಯೋಗ ಮಾಡಿಕೊಂಡು ನೆಗಿಟಿವಿಟಿ ಕ್ರಿಯೇಟ್ ಮಾಡುತ್ತಿರುವ ದೇಶದ್ರೋಹಿಗಳ ಕೆಲಸ" ಎಂದೇ ಹೇಳುತ್ತಾರೆ. ಹಿಂದೆ ಎಪ್ಪತ್ತು ವರ್ಷ ಎಲ್ಲ ಸರಿಯಾಗಿಯೇ ಇತ್ತೇ? ಎಂದು ಕೇಳಲೂ ಅವರು ಹಿಂಜರಿಯುವುದಿಲ್ಲ. ಒಂದು ಸಲ ವ್ಯಕ್ತಿಪೂಜೆಗೆ ಇಳಿದರೆ ನಮ್ಮೆಲ್ಲರ ಸ್ಥಿತಿಯೂ ಹೀಗೆಯೇ ಆಗುವುದು. 

ಆದಾಗ್ಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾವು ಬಹಳ ಸುಧಾರಿಸಿದ್ದೇವೆ ಎಂದೇ ಹೇಳಬೇಕು. ಈ ವರ್ಷ ನಾವು ಯಾರೂ ತಟ್ಟೆ ಲೋಟ ಬಡಿಯುವ ಮಾತಾಡದೆ ಲಸಿಕೆ ಔಷಧಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ನಮಗೆಲ್ಲ ಹುಚ್ಚು ವಾಸಿಯಾಗಿದೆ ಎಂಬುದೇ ಸಮಾಧಾನದ ಸಂಗತಿ.

ಈಗಲೂ ನಮ್ಮನಾಳುವವರಿಗೆ 'ಧನ್ವಂತರಿ ಹೋಮ ಮಾಡಿಸಿ' 'ವಿಶೇಷ ಪೂಜೆ ಮಾಡಿಸಿ' ಎಂದು ತಲೆತಿಕ್ಕುವ ಧಾರ್ಮಿಕ ನಾಯಕರು ಇದ್ದರೂ ಅವರ ಮಾತಿನ ಮೇಲೆ ಅವರಿಗೂ ನಂಬಿಕೆ ಇದ್ದಂತಿಲ್ಲ! ಅವರ ದೇವರ ಶಕ್ತಿ ಯಾವ ಮಟ್ಟದ್ದು ಎಂಬುದು ಜನರಿಗೆ ಕಳೆದವರ್ಷ ಗೊತ್ತಾಗಿದ್ದು ಅವರಿಗು ಗೊತ್ತಾಗಿದೆ.

ರಾಜಕೀಯ ನಾಯಕರು ಹುಚ್ಚರಾದರೆ ಅವರನ್ನು ಬದಲಿಸಿ ಬೇರೆಯವರನ್ನು ನಾಯಕರನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಜನರೇ ಹುಚ್ಚರಾಗಿಬಿಟ್ಟರೆ ಎಚ್ಚರಾಗುವುದನ್ನು ಬಿಟ್ಟು ಬೇರೆ ಮಾರ್ಗಗಳೇ ಇರುವುದಿಲ್ಲ. ಹಾಗಾಗಿ ನಾವೆಲ್ಲ ಹುಚ್ಚರಾಗದೆ ಎಚ್ಚಾರಾಗೋಣ.

ಕೊರೋನಾ ನಮ್ಮನ್ನು ಇನ್ನೂ ಯಾವಹಂತಕ್ಕೆ ಒಯ್ಯಬಹುದು ಎಂಬುದನ್ನು ಅದೇ ದೇವಿ ಪ್ರಸಾದ ಶೆಟ್ಟಿ ಮತ್ತೊಮ್ಮೆ ಎಚ್ಚರಿಸಿದ್ದಾರೆ. ನಿಯಂತ್ರಣಕ್ಕೆ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದ್ದಾರೆ. ಯಾರುಯಾರದೋ ಮಾತು ಕೇಳಿ ತಾವೂ ಹಾಳಾಗಿ ದೇಶವನ್ನೂ ಹಾಳುಮಾಡುವುದಕ್ಕಿಂತ ಇಂತಹ ತಜ್ಞ ವೈದ್ಯರ ಮಾತನ್ನು ಕೇಳುವ ವಿವೇಕ ಸಂಬಂಧಪಟ್ಟವರಿಗೆ ಬರಲಿ.

ರಾಬು

30-04-2021

No comments:

Post a Comment