Thursday, April 22, 2021


ಜೂನ್ ಬರ್ತ್ & ಟಾಪ್ ಟೆನ್

ಜೂನ್ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಳ್ಳುವವರಲ್ಲಿ ಶೇಕಡಾ ಎಂಬತ್ತರಷ್ಟು ಜನರ ಜನ್ಮದಿನಗಳು ಅವರ ನಿಜವಾದ ಜನ್ಮದಿನಗಳಲ್ಲ. ಈಗ ಐವತ್ತು ಅರವತ್ತು ವರ್ಷ ವಯಸ್ಸಾಗಿರುವವರ ವಿಷಯದಲ್ಲಂತೂ ಇದು ಶೇ 90 ರಷ್ಟು ಸರಿ. ಹೀಗಾಗಿ ಅವರ ಜನ್ಮದಿನಗಳೆಲ್ಲ‘ನಿಜವಜನ್ಮದಿನ’ಗಳಾಗಿರದೇ ‘ಒಪ್ಪಿತ ಜನ್ಮದಿನ’ ಅಥವಾ ‘ಸರ್ಕಾರಿಜನ್ಮದಿನ’ಗಳಾಗಿರುತ್ತವೆ. ಇದಕ್ಕೆ `ಜೂನ್ ಹುಟ್ಟು’ (June Birth) ಎಂದು ಕರೆಯಬಹುದು. ಏನು ಈ ಜೂನ್ ಹುಟ್ಟು? ಈ ಜೂನ್ ಹುಟ್ಟಿಗೆ ಕಾರಣವೇನು ಎಂಬುದನ್ನು ತುಸು ನೋಡೋಣ. ಈಗ ಐವತ್ತರ ಆಸುಪಾಸಿನಲ್ಲಿರುವವರಲ್ಲಿ ಶಾಲೆಗೆ ಸೇರುವ ಹಿಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು ಇರಲಿಲ್ಲ. ಹಾಗಾಗಿ ಜನ್ಮದಿನವನ್ನು ಬರೆದಿಡುವ ಪದ್ಧತಿಯೇ ಬಹಳಷ್ಟು ಕುಟುಂಬದಲ್ಲಿ ಇರಲಿಲ್ಲ. ಆ ಕಾಲದಲ್ಲಿ ಊರ ಗೌಡರೊಬ್ಬರ ಮನೆಯಲ್ಲಿ ಒಂದು ಕ್ಯಾಲೆಂಡರ್ರು, ಒಂದು ಹಳೆಯಕಾಲದ ಗಡಿಯಾರ ಇರುತ್ತಿದ್ದರೆ ಹೆಚ್ಚು. ಗೌಡರ ಮಾತು ಹೇಗೆ ಊರಿಗೆ ವೇದವಾಕ್ಯವಾಗಿತ್ತೋ ಹಾಗೆ ಅವರ ಮನೆಯ ಕ್ಯಾಲೆಂಡರ್ ತೋರಿಸಿದ್ದೇ ದಿನದಿನಾಂಕಗಳು ಅವರ ಗಡಿಯಾರ ತೋರಿಸಿದ್ದೇ ಟೈಮು!!

ಹಾಗಾಗಿ ಶಾಲೆಗೆ ಸೇರಿಸುವ ವಯಸ್ಸನ್ನು ಲೆಕ್ಕಹಾಕಲು ಒಂದಿಷ್ಟು ಅಂದಾಜುಲೆಕ್ಕದ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಆಗ ಶಿಕ್ಷಣ ಇಲಾಖೆಯಲ್ಲಿಯೇ ಶಾಲೆಗೆ ಮಕ್ಕಳನ್ನು ಸೇರಿಸುವ ವಿಷಯದಲ್ಲಿ ವಯಸ್ಸಿನ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಂದಾಜುಲೆಕ್ಕದ ಇಂತಹ ಕೆಲವು ನಿಯಮಗಳೇ ಇದ್ದವು. ಆ ನಿಯಮಗಳ ಪ್ರಕಾರ ಪಾಲಕರಿಗೆ ಮಗುವಿನ ಹುಟ್ಟಿದ ವರ್ಷ ತಿಂಗಳು ಗೊತ್ತಿದ್ದು ದಿನಾಂಕ ಗೊತ್ತಿಲ್ಲದಿದ್ದರೆ ಆ ತಿಂಗಳ ಒಂದನೆಯ ತಾರೀಖನ್ನು ಹುಟ್ಟಿದ ದಿನವಾಗಿ ಪರಿಗಣಿಸಬೇಕಾಗಿತ್ತು. ಒಂದು ವೇಳೆ ವರ್ಷ ಮಾತ್ರ ಗೊತ್ತಿದ್ದು ತಿಂಗಳು, ದಿನಾಂಕ ಎರಡೂ ಗೊತ್ತಿಲ್ಲದಿದ್ದರೆ, ಆ ವರ್ಷದ ಜೂನ್ ಒಂದನ್ನು ಜನ್ಮದಿನಾಂಕವಾಗಿ ಪರಿಗಣಿಸಬೇಕಾಗಿತ್ತು. ವರ್ಷ ತಿಂಗಳು, ದಿನಾಂಕ ಏನೂ ಗೊತ್ತಿಲ್ಲದಿದ್ದರೆ ತಲೆಮೇಲೆ ಕೈಹಾಕಿ ಪಕ್ಕದ ದಿಕ್ಕಿನ ಕಿವಿಯನ್ನು ಮುಟ್ಟಿಸಿ ವರ್ಷವನ್ನು ನಿರ್ಧರಿಸಿ ಆ ವರ್ಷದ ಜೂನ್ ತಿಂಗಳ ಯಾವುದಾದರೂ ಒಂದು ದಿನಾಂಕವನ್ನು ಶಿಕ್ಷಕರು ಬರೆಯುತ್ತಿದ್ದರು. ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟಂಬರ್, ಅಷ್ಟೇ ಏಕೆ ಅಕ್ಟೋಬರ್ ತಿಂಗಳವರೆಗೂ ಹುಟ್ಟಿದವರನ್ನೆಲ್ಲ ಜೂನ್ ತಿಂಗಳಿಗೆ ಹಿಂದಕ್ಕೆ ಎಳೆದುಕೊಂಡು ಶಾಲೆಗೆ ಸೇರಿಸಲಾಗುತ್ತಿತ್ತು. ಬಿಟ್ಟರೆ ಮುಂದಿನ ವರ್ಷಕ್ಕೆ ಶಾಲೆಗೆ ಸೇರಿಸುವುದು ತುಂಬಾ ಲೇಟಾಗುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಈಗ ಮಧ್ಯವಯಸ್ಸಿನಲ್ಲಿರುವವರಲ್ಲಿ ‘ಜೂನ್ ತಿಂಗಳಲ್ಲಿ ಹುಟ್ಟಿದವರು’ ಉಳಿದ ತಿಂಗಳುಗಳಲ್ಲಿ ಹುಟ್ಟಿದವರಿಗಿಂತ ಸಹಜವಾಗಿಯೇ ಹೆಚ್ಚಾಗಿರುತ್ತಾರೆ. ಇದೇ ‘ಜೂನ್ ಹುಟ್ಟು’!

ಹೀಗೆ ಜೂನ್ ಹುಟ್ಟಿನ ಪ್ರವಾಹದಲ್ಲಿ ಹುಟ್ಟಿದವರಲ್ಲಿ ನಾನೂ ಒಬ್ಬ. ಜೂನ್ ಇಪ್ಪತ್ತು ನನ್ನ ಸರ್ಕಾರಿಜನ್ಮದಿನ ಅಥವಾ ಒಪ್ಪಿತ ಜನ್ಮದಿನ. ಪ್ರತಿವರ್ಷ ಜನ್ಮದಿನ ಆಚರಿಸಿಕೊಳ್ಳುವ ಅಭ್ಯಾಸ ನನಗೆ ಇಲ್ಲ. ಹುಟ್ಟಿದಾಗ ಒಂದು ‘ನಾಮಕರಣ’ ಸತ್ತಾಗ ಒಂದು ‘ತಿಥಿ’ ಅಷ್ಟೇ ನಮ್ಮ ಹಿಂದಿನವರು ಮಾಡುತ್ತಿದ್ದದ್ದು. ನಾನೂ ಅದಕ್ಕೇ ಒಗ್ಗಿಕೊಂಡಿರುವೆ. ಆದರೂ ಬಹಳಷ್ಟು ಜನ ನನಗೆ ಶುಭಕೋರಿದಾಗ ಕನಿಷ್ಠ ‘ಧನ್ಯವಾದಗಳು’ ಎಂದಾದರೂ ಹೇಳುವಷ್ಟು ಆಧುನಿಕತೆಗೆ ಹೊಂದಿಕೊಂಡಿದ್ದೇನೆ. ಜೊತೆಗೆ ಈ ದಿನವನ್ನು ನೆಪಮಾಡಿಕೊಂಡು ಪ್ರತಿವರ್ಷ,ಬಹಳಷ್ಟು ಜನರಿಗೆ ಇಷ್ಟವಾಗದಿದ್ದರೂ ನಾನು ನನ್ನ ಜೀವನದಲ್ಲಿ ಬಹಳ ಜತನದಿಂದ ಕಾಪಾಡಿಕೊಂಡು ಬಂದಿರುವ ನನ್ನ ಹತ್ತು ಮೇಲ್ಸಾಲಿನ (Top-Ten) ಗುಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಾ ಬಂದಿದ್ದೇನೆ. ಈ ಗುಣಗಳನ್ನು ನೋಡಿ ಕೆಲವರು ನನ್ನ ಸ್ನೇಹಿತರಾಗುತ್ತಾರೆ. ಮತ್ತೆ ಕೆಲವರು ಇವನ ಸಹವಾಸವೇ ಬೇಡ ಎಂದು ದೂರಸರಿಯುತ್ತಾರೆ. ಇದರಿಂದ ಅವರಿಗೂ ಅನುಕೂಲವಾಗಿದೆ; ನನಗೂ ಅನುಕೂಲವಾಗಿದೆ. ಹೊಸದಾಗಿ ನನ್ನ ಸಂಪರ್ಕಕ್ಕೆ ಬರುವವರಿಗೆ ಗೊತ್ತಿರಲಿ ಅಂತ ಇಂತಹ ಕೆಲಸ ಪ್ರತಿವರ್ಷ ಮಾಡುತ್ತೇನೆ. ಅಂತೆಯೇ ಈ ವರ್ಷಕೂಡ ಆ ನನ್ನ ಹತ್ತು ಗುಣಗಳನ್ನು ಪ್ರಕಟಿಸುತ್ತಿದ್ದೇನೆ. ಅವು ಹೀಗಿವೆ. (ಟೈಮಿದ್ದರೆ ಆಸಕ್ತಿ ಇದ್ದರೆ ಮಾತ್ರ ಓದಿ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳಬೇಡಿ)

- ರಾಬು 

ಬಹಳಷ್ಟು ಜನ ಮೆಚ್ಚದಿರುವ, ಆದರೂ ನಾನು ಜೋಪಾನವಾಗಿ ಕಾಯ್ದಿಟ್ಟುಕೊಂಡಿರುವ  ನನ್ನ ಮೇಲ್ಸಾಲಿನ ಹತ್ತು (Top-Ten) ಗುಣಗಳು!! 

1.       ಪ್ರಾಮಾಣಿಕ ದುಡಿಮೆಯ ಶ್ರಮದಿಂದ ಬರುವ ಆದಾಯದ ಹೊರತು ಅಪಮಾರ್ಗದಿಂದ   ಬರುವ ಯಾವುದೇ ನಗದು, ವಸ್ತು ಅಥವಾ ಇನ್ನಾವುದೇ ಬಗೆಯ ಆದಾಯಗಳನ್ನು ಸ್ಪಷ್ಟವಾಗಿ ನಿರಾಕರಿಸುವ ಗುಣವಿದೆ. ‘ಪುಗಸಟ್ಟೆ ಬರುವುದನ್ನು ಯಾಕೆ ಬಿಡಬೇಕು’ ಎಂಬುದಕ್ಕೆ ವಿರುದ್ಧವಾಗಿ ‘ಪುಗಸಟ್ಟೆ ಬರುವುದನ್ನು ಯಾಕೆ ತೆಗೆದುಕೊಳ್ಳಬೇಕು’ ಎಂಬ ಸ್ವಾಭಿಮಾನದ ಧಿಮಾಕು ನನ್ನದು!

2.       ನನಗೆ ಗೊತ್ತಿಲ್ಲದ ವಿಷಯದಲ್ಲಿ ಚಿಕ್ಕಮಗುವಿನಿಂದ ಬುದ್ದಿಹೇಳಿಸಿಕೊಳ್ಳಲೂ ನನಗೆ ನಾಚಿಕೆಯಾಗುವುದಿಲ್ಲ; ಅದು ಅವಮಾನ ಅನ್ನಿಸುವುದಿಲ್ಲ. ಆದರೆ ನನಗೆ ಗೊತ್ತಿರುವ ವಿಷಯದಲ್ಲಿ ತಪ್ಪುಮಾಡಿ ಬೇರೆಯವರಿಂದ ಬುದ್ದಿಹೇಳಿಸಿಕೊಳ್ಳಲು ತುಂಬಾ ನಾಚಿಕೆಯಾಗುತ್ತದೆ ಮತ್ತು ತುಂಬಾ ಮುಜುಗರ ಮತ್ತು ಅವಮಾನಗೊಂಡಂತೆ ಆಗುತ್ತದೆ.

3.       ನನಗೆ ಒಳಗೊಂದು ಹೊರಗೊಂದು ವ್ಯಕ್ತಿತ್ವವಿಲ್ಲ. ನನಗೆ ಅನ್ನಿಸಿದ್ದನ್ನು ಕೇಳುವವರಿಗೆ ತುಸು ನೋವಾದರೂ ನೇರವಾಗಿ ಹೇಳಿಬಿಡುವ ಗುಣವಿದೆ. ಇದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನನ್ನ ನಿಲುವು. ಇದರಿಂದ ಮಾನವ ಸಂಬಂಧಗಳ ನಡುವೆ ಸಂಶಯ, ಅನುಮಾನಗಳಿಗೆ ಅವಕಾಶ ಇರುವುದಿಲ್ಲವಾಗಿ ಕೇಳುವವರಿಗೆ ಆ ಕ್ಷಣದಲ್ಲಿ ತುಸು ಬೇಸರವಾದರೂ ಧೀರ್ಘಾವಧಿಯಲ್ಲಿ ಇದು ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಹೀಗಾಗಿ ಇತರರು  ತಮ್ಮ ಬಗ್ಗೆ ನನ್ನ ಭಾವನೆಯನ್ನು ತಿಳಿದುಕೊಳ್ಳಲು ಕಷ್ಟಪಡಬೇಕಾಗಿಲ್ಲ.

4.       ನಾನೊಬ್ಬ ನಂಬಿಗಸ್ಥ ಪ್ರೇಮಿ. (Faithful Lover). ಒಂದು ಸಲ ನನಗೆ ಯಾರ ಮೇಲೆಯಾದರೂ ಪ್ರೀತಿ ಹುಟ್ಟಿತು ಎಂದರೆ  ಅವರ ಮೇಲೆ ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಸಿಟ್ಟು, ರೋಷ ಹುಟ್ಟಬಹುದೇ ಹೊರತು ಮತ್ತೆಂದಿಗೂ ದ್ವೇಷ  ಹುಟ್ಟುವುದಿಲ್ಲ; ಅವರು ನನ್ನನ್ನು ಪ್ರೀತಿಸಲಿ; ಬಿಡಲಿ; ನಿರಾಕರಿಸಲಿ; ಅಷ್ಟೇ ಏಕೆ ದ್ವೇಷಿಸಿದರೂ ಕೂಡ!

5.      
ನನಗೆ ಯಾರಿಗೂ ಮೋಸ-ವಂಚನೆ ಮಾಡುವ  ಗುಣವಿಲ್ಲ. ಯಾರಿಗೂ ತೊಂದರೆ ಕೊಡದಂತೆ ಆದಷ್ಟೂ ಬೇರೆಯವರಿಗೆ ಸಹಾಯಮಾಡಿ ಬದುಕುವ ಗುಣವಿದೆ.

6.       ಬೇರೆಯವರ ಸಹಾಯ ಮತ್ತು ಸೇವೆಗಳನ್ನು ನನ್ನ ಅಸಹಾಯಕ ಸ್ಥಿತಿಯಲ್ಲಿ ಮತ್ತು ತೀರಾ  ಅನಿವಾರ್ಯ ಎನಿಸುವ  ಸಂದರ್ಭಗಳಲ್ಲಿ ಮಾತ್ರ ಅದೂ ಎಷ್ಟುಸಾಧ್ಯವೋ ಅಷ್ಟೂ ಕಡಿಮೆ ಮಟ್ಟದಲ್ಲಿ ಬಳಸಿಕೊಳ್ಳುವ ಗುಣವಿದೆ. ಮಾಡುವವರು ಸಿಕ್ಕರೆ ಏನೆಲ್ಲ ಸೇವೆ ಮಾಡಿಸಿಕೊಳ್ಳುವ ಗುಣವಿಲ್ಲ.

7.       ಹಾಲಲ್ಲಿ ಜೇನಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವ ಗುಣ ನನಗಿಲ್ಲ. ಅಂದರೆ ಪರಿಸ್ಥಿತಿಗೆ ತಕ್ಕಂತೆ ಒಳ್ಳೆಯವರ ಜೊತೆಗೆ ಒಳ್ಳೆಯವನಾಗಿ, ಕೆಟ್ಟವರ ಜೊತೆಗೆ ಕೆಟ್ಟವನಾಗಿ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸಮಯಸಾಧಕತನವಿಲ್ಲ!

ಉದ್ದೇಶಪೂರ್ವಕವಾಗಿ ಅನ್ಯಾಯ, ಪಾಪಕಾರ್ಯಗಳಲ್ಲಿ ಪಾಲ್ಗೋಳ್ಳುವುದೇ ಇಲ್ಲ. ಇಂತಹ ಚಟುವಟಿಕೆಗಳು ಕಂಡರೆ ಸುಮ್ಮನೆ, ‘ಏನಾದರೂ ಮಾಡಿಕೊಳ್ಳಲಿ ನನಗೇನು’ ಎಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಅನ್ಯಾಯ ಮಾಡುವವರ ಜೊತೆಗೆ ಅದನ್ನು ಕಂಡೂ ಸುಮ್ಮನಿರುವವರೂ ಆ ಕಾರ್ಯದ ಪಾಲುದಾರರೇ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಇಂತಹ ಘಟನೆಗಳು ನನಗೆ ಕಂಡುಬಂದಾಗೆಲ್ಲ ಮೊದಲ ಹಂತದಲ್ಲಿ ಅವನ್ನು ಸರಿಪಡಿಸಲು ನನ್ನ ಇತಿಮಿತಿಗಳಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ  ಮಾಡುತ್ತೇನೆ. ಆಗದಿದ್ದಾಗ ಅನಿವಾರ್ಯವಾಗಿ ಅಂತಹ ಚಟುವಟಿಕೆಗಳಿಂದ ಅದನ್ನು ಮಾಡುವವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತೇನೆ.

8.       ತಪ್ಪುಮಾಡುವವರ ಬಗ್ಗೆ ನನಗೆ ಸಿಟ್ಟು ಬರುತ್ತದೆಯೇ ಹೊರತು ಅವರ ಬಗ್ಗೆ ದ್ವೇಷಹುಟ್ಟುವುದಿಲ್ಲ. ತಪ್ಪುಮಾಡುವವರು ಅಜ್ಞಾನದಿಂದ ಮಾಡುತ್ತಾರೆ. ಅಜ್ಞಾನಕ್ಕೆಶಿಕ್ಷಣಪರಿಹಾರವೇ ಹೊರತುಶಿಕ್ಷೆಯಲ್ಲವೆಂಬುದನ್ನು ನಾನು  ಅರ್ಥಮಾಡಿಕೊಂಡಿದ್ದೇನೆ. ಇನ್ನು ನೂರು ವರ್ಷಕ್ಕೆ ಈ ಸಮಾಜ ಸರಿಯಾಗುವುದಾದರೂ ಅದಕ್ಕೆ ಇರುವ ಏಕೈಕ ದಾರಿ ಎಂದರೆ ಶಿಕ್ಷಣ! ಹಾಗಾಗಿ ಯಾರು ಕೆಟ್ಟರೂ ಶಿಕ್ಷಕರಂತೂ ಕೆಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಶಿಕ್ಷಕರು ಮಾಡುವ ಸಣ್ಣತಪ್ಪುಗಳೂ ನನಗೆ ಬಹಳ ದೊಡ್ಡವಾಗಿ ಕಾಣುತ್ತವೆ!! ಏಕೆಂದರೆ ಈ ಸಮಾಜ ಒಂದು ಬಸ್ ಇದ್ದಂತೆ. ಬಸ್ಸಿನಲ್ಲಿ 49 ಜನ ನಿದ್ದೆಮಾಡಿದರೂ ನಡೆಯುತ್ತದೆ. ಆದರೆ ಒಬ್ಬ ಮಾತ್ರ ನಿದ್ದೆ ಮಾಡಲೇ ಕೂಡದು. ಅವನೇ ಚಾಲಕ.  ಅವನು ಒಂದು ಕ್ಷಣ ಕಣ್ಣುಮುಚ್ಚಿದರೆ ಉಳಿದ 49 ಜನ ಶಾಶ್ವತವಾಗಿ ಕಣ್ಣುಮುಚ್ಚಬೇಕಾಗುತ್ತದೆ! ಸಮಾಜ ಎಂಬ ಬಸ್ಸಿನ ಚಾಲಕ ಸ್ಥಾನದಲ್ಲಿ ಕುಳಿತವರೇ ಶಿಕ್ಷಕರು ಅದಕ್ಕಾಗಿ ಈ ಕಾಳಜಿ ಅಷ್ಟೆ.

9.       ದೇವರು ಧರ್ಮ ಇಂಥವುಗಳ ಬಗ್ಗೆ ನಂಬಿಕೆ  ವಿಶ್ವಾಸಗಳಿಲ್ಲ;  ಆದರೆ ಅವನ್ನು ಪ್ರಾಮಾಣಿಕವಾಗಿ ನಂಬಿಕೊಂಡವರ ಬಗ್ಗೆ ದ್ವೇಷವಿಲ್ಲ. ಆದರೆ ಅವುಗಳನ್ನು ಜನರಲ್ಲಿ ಮೌಢ್ಯಬಿತ್ತಲು, ಜನರನ್ನು ಜಾತಿ-ಧರ್ಮ-ಜನಾಂಗಗಳಾಗಿ ವಿಭಜಿಸಿ ಅವರಲ್ಲಿ ದ್ವೇಷಾಸೂಯೆಗಳನ್ನು ಬಿತ್ತಲು ಬಳಸಿಕೊಳ್ಳುವವರ ಬಗ್ಗೆ ನನಗೆ ಸಾತ್ವಿಕ ಸಿಟ್ಟಿದೆ. ಅದು ಸಹಜವಾಗಿ ನನ್ನ ಬರೆಹ-ಭಾಷಣಗಳಲ್ಲಿ ಎದ್ದು ಕಾಣುವಂತಿರುತ್ತದೆ.

10.  


ಮನುಷ್ಯರು, ಮನುಷ್ಯತ್ವ ಮಾನವೀಯತೆ ಇವುಗಳ ಬಗ್ಗೆ ನನಗೆ ಬಹಳಷ್ಟು ವಿಶ್ವಾಸವಿದೆ.  ಹೀಗಾಗಿ ನನ್ನ ಎದುರಿಗೆ ಬರುವ ಮನುಷ್ಯನೊಬ್ಬ ನನಗೆ ಹಿಂದೂ ಆಗಿ ಮುಸಲ್ಮಾನನಾಗಿ ಕ್ರೈಸ್ತನಾಗಿ ಇನ್ನೇನೋ ಆಗಿ ಹೋಳು ಹೋಳಾಗಿ ಒಡೆದು ಕಾಣುವುದಿಲ್ಲ. ಅವನು ಒಬ್ಬ ಮನುಷ್ಯನಾಗಿಯೇ ನನಗೆ ಕಾಣುತ್ತಾನೆ. ಮನುಷ್ಯರನ್ನು ಜಾತಿ-ಮತ-ಜನಾಂಗಗಳ ಆಧಾರದ ಮೇಲೆಒಳ್ಳೆಯವರು’ಕೆಟ್ಟವರು’ ಎಂದು ಪರಿಗಣಿಸುವ ಗುಣನನಗೆ ಇಲ್ಲವೇ ಇಲ್ಲ. ಪ್ರಪಂಚದ ಎಲ್ಲ ಜನರೂ ಜಾತಿ-ಮತ-ಲಿಂಗ-ಪ್ರದೇಶ ಇವುಗಳ ಕೆಸರುಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವ ಬಗ್ಗೆ ಮರುಕವಿದ್ದು ಅವರೆಲ್ಲರೂ ಇವುಗಳ ಬಂಧನಗಳಿಂದ ಹೊರಬಂದು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸುಖ-ಸಂತೋಷ ಮತ್ತು ನೆಮ್ಮದಿಗಳಿಂದ ಬದುಕಬೇಂಬ ಅಪೇಕ್ಷೆಯಿದ್ದು ಬಗ್ಗೆ ನನ್ನ ಮಿತಿಯಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುವ ಗುಣವಿದೆ.

*****

(ರಾಜೇಂದ್ರ ಬುರಡಿಕಟ್ಟಿ)

22-04-2021

*****

(ಇದನ್ನು ಓದುವುದಾಗಲೀ ಇದಕ್ಕೆ ಪ್ರತಿಕ್ರಿಯಿಸುವುದಾಗಲೀ ಕಡ್ಡಾಯವಲ್ಲ. ಆದರೆ ಪುರಸೊತ್ತು ಮತ್ತು ಇಂಟ್ರೆಸ್ಟು ಇದ್ದವರು ಪ್ರತಿಕ್ರಿಯಿಸಬಹುದು. ಹಿಮ್ಮಾಹಿತಿಯಾಗಿ ಬರುವ ಎಲ್ಲ ಅಭಿಪ್ರಾಯಗಳನ್ನು ವಿಶೇಷವಾಗಿ ಭಿನ್ನಾಭಿಪ್ರಾಯಗಳನ್ನು ಸಕಲ ಮರ್ಯಾದೆಯಿಂದ ಸ್ವಾಗತ ಮಾಡಲಾಗುವುದು!!ರಾಬು)

No comments:

Post a Comment