Friday, October 18, 2024

ತಾಜ್‌ ಮಹಲ್‌ ಮತ್ತು ದೊಡ್ಡವರ ಪ್ರೀತಿ

 


ತಾಜ್‌ ಮಹಲ್‌ ಮತ್ತು ದೊಡ್ಡವರ ಪ್ರೀತಿ

ತಾಜ್‌ ಮಹಲನ್ನು ಕಂಡ ಬಹುತೇಕ ಎಲ್ಲ ಭಾಷೆಗಳ ಕವಿಗಳೂ ಅದರ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ. ಕನ್ನಡದ ಕೆಲವು ದೊಡ್ಡ ಕವಿಗಳೂ ಅದರ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ.  ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅದನ್ನು ʼಚಿರ ಬಂಧುರ ಭದ್ರಾಕೃತಿʼ  ʼದೇವಶಿಲ್ಪ ಮಾಟʼ ಎಂದಿದ್ದಾರೆ.  
ʼದೇವಲೋಕದ ಕಲೆಯೇ ವಿಶ್ರಾಂತಿಗೆಂದು ಇಲ್ಲಿ ಬಂದು ನಿಂತಿದೆʼ ಎಂದು ಅದರ ಸೌಂದರ್ಯವನ್ನು   ಹೊಗಳುವ ಅವರು ಅದರ ಹೊರಮುಖದ ಸೌಂದರ್ಯಕ್ಕೆ ಮಾತ್ರ ಮನಸೋಲದೆ ಅದರ ಒಳಮುಖವನ್ನೂ ಶೋಧಿಸಿ ಅದನ್ನು ʼಪ್ರಿಯ ವಿರಹದ ಧವಳದೀಪʼ ಎಂದೂ ಹೇಳುತ್ತಾರೆ. ʼಧವಳ ದೀಪʼ ಮನಸ್ಸಿಗೆ ಖುಷಿಕೊಡುವ ಸಂಗತಿಯಾಗದರೂ ʼವಿರಹʼ ಖುಷಿಕೊಡುವ ಸಂಗತಿಯಲ್ಲವಲ್ಲ!  ʼಷಹಜಾನನೆದೆಯ ಕೊರೆದು ಬಿಡಿಸಿದ ಸಂತಾಪʼ ಎನ್ನುವಲ್ಲಿ ಈ ಮಡುಗಟ್ಟಿದ ದುಃಖದ ಅರಿವು ಒಡಮೂಡಿದೆ. ಒಟ್ಟಾರೆ ಅದು ಸಂತೋಷ ಮತ್ತು ನೋವುಗಳೆರಡರ ಸಮ್ಮಿಶ್ರ ಸ್ಮಾರಕ ಎನ್ನುವ ಭಾವವನ್ನು ಅವರ ʼಕಂಬನಿಗಳ ಚೆಂಬೆಳಕೊಳು ಬೆಳಗುವ ಮಣಿದೀಪʼ ಎನ್ನುವ ಕಾವ್ಯಸಾಲುಗಳು ಅದ್ಭುತವಾಗಿ ಕಟ್ಟಿಕೊಡುತ್ತವೆ.

ಕನ್ನಡದ ಇನ್ನೊಬ್ಬ ದೊಡ್ಡಕವಿ ಬೇಂದ್ರೆ “ತಾಜಮಹಲನು ಕಟ್ಟಿ ಷಹಜಾನನು ಮಮತಾಜಳ ದುಃಖವನು ಮರೆಯಬಹುದೆ?” ಎಂದು ಪ್ರಶ್ನಿಸುತ್ತಾರೆ.  ಹೌದು ನಾವು ನಮ್ಮ ಪ್ರೀತಿ ಪಾತ್ರರನ್ನು
ಇನ್ನೆಂದೂ ಅವರು ನಮಗೆ ದೊರೆಯದಂತೆ ಕಳೆದುಕೊಂಡಾಗ ಅವರ ನೆನಪಿಗೆ ನಿರ್ಮಿಸುವ ಸ್ಮಾರಕಗಳು ನಮಗೆ ಸಂತೋಷದ ಬದಲು ಮತ್ತಷ್ಟು ದುಃಖವನ್ನೇ ತರುತ್ತವೆ!! ಏಕೆಂದರೆ ಮರೆಯುವುದೊಂದೇ ಪರಿಹಾರವಾಗಿರುವ ಸಮಸ್ಯೆಗೆ ಮರೆವು ಆಗದಂತೆ ಈ ಸ್ಮಾರಕಗಳು ನೆನಪು ಮರುಕಳಿಸುವಂತೆ ಮಾಡುತ್ತವೆ. ಅದನ್ನೇ ಬೇಂದ್ರೆ ಅತ್ಯಂತ ಸೂಕ್ಷ್ಮವಾಗಿ ಇಲ್ಲಿ ಹೇಳುತ್ತಾರೆ.

ತಾಜಮಹಲಿನ ಬಗ್ಗೆ  ನಮ್ಮ ಜಿ ಎಸ್.‌ ಶಿವರುದ್ರಪ್ಪನವರ ಸಮಕಾಲೀನರೇ ಆದ ಖ್ಯಾತ ಉರ್ದುಕವಿ ಸಾಹಿರ್‌ ಲೂದಿಯಾನ್ವಿ ಅವರು ಬರೆದ ಕವಿತೆಯೊಂದು ಬಹಳ ಭಿನ್ನ ವಿಚಾರವೊಂದನ್ನು ಮುನ್ನೆಲೆಗೆ ತರುತ್ತದೆ. ತಾಜಮಹಲ್‌ ಅವರಿಗೆ ಭವ್ಯಕಟ್ಟಡವಾಗಿ ಕಾಣದೆ ʼಬಂಧೀಖಾನೆʼಯಾಗಿ ಕಂಡಿದೆ!  ʼಬಡವರ
ಪ್ರೀತಿ ಲೆಕ್ಕಕ್ಕೆ ಬರುವುದಿಲ್ಲ. ಶ್ರೀಮಂತರ ಪ್ರೀತಿ ಮಾತ್ರ ಲೆಕ್ಕಕ್ಕೆ ಬರುತ್ತದೆʼ ಎಂದು ಖಿನ್ನರಾಗುವ ಅವರು ʼಬಾ ಈ ಸದ್ದುಗದ್ಧಲದಿಂದ ದೂರಹೋಗಿ ಯಾರೂ ಇಲ್ಲದ ಸ್ಥಳದಲ್ಲಿ ನಾವು ಪ್ರೀತಿಸೋಣʼ ಎಂದು ಸಂಗಾತಿಯನ್ನು ಕರೆಯುವ ಸಾಲನ್ನು ಬರೆಯುತ್ತಾರೆ.

ಹೀಗೆ ತಾಜಮಹಲ್‌ ಕೆಲವರಿಗೆ ಪ್ರೇಮದ ಭವ್ಯ ಸಂಕೇತವಾಗಿ ಕಂಡರೆ ಮತ್ತೆ ಕೆಲವರಿಗೆ ಪ್ರೀತಿಯ ಆಡಂಬರದ ಸಂಕೇತವಾಗಿ ಕಂಡಿದೆ. ಷಹಜಾನ್‌ ಏನೋ ಮಮತಾಜಳ ಮೇಲಿನ ತನ್ನ ಪ್ರೀತಿಯ ಸಂಕೇತವಾಗಿ ತಾಜಮಹಲನ್ನು ಕಟ್ಟಿಸಿದ. ಆದರೆ ನಾವು ಅತ್ಯಂತ ಅವಶ್ಯವಾಗಿ ಗಮನಿಸಬಹುದಾದ ಸಂಗತಿ ಎಂದರೆ ತಾಜಮಹಲನ್ನು ಕಟ್ಟಿದ ಸಾವಿರಾರು ಕೂಲಿಕಾರ್ಮಿಕರೂ ಕೂಡ ತಮ್ಮ ತಮ್ಮ ಹೆಂಡತಿಯರನ್ನು ಷಹಜಾನ್‌ ಮಮತಾಜಳನ್ನು ಪ್ರೀತಿಸಿದ್ದಷ್ಟೇ ಅಥವಾ ಅದಕ್ಕಿಂತ ತುಸು ದೊಡ್ಡಮಟ್ಟದಲ್ಲಿಯೇ ಪ್ರೀತಿಸುತ್ತಿದ್ದಿರಬಹುದಲ್ಲವೇ?  ಆದರೆ ಅವರ ಪ್ರೀತಿ ಷಹಜಾನನ ಪ್ರೀತಿಯಂತೆ ಲೆಕ್ಕಕ್ಕೆ ಬರುವುದಿಲ್ಲ.  ಏಕೆಂದರೆ ಲೂದಿಯಾನ್ವಿ ಹೇಳುವಂತೆ ಅನೇಕ ಸಂದರ್ಭಗಳಲ್ಲಿ “ಶ್ರೀಮಂತರ ಪ್ರೀತಿ ಲೆಕ್ಕಕ್ಕೆ ಬರುತ್ತದೆ. ಬಡವರ, ಶ್ರೀಸಾಮಾನ್ಯರ ಪ್ರೀತಿ ಲೆಕ್ಕಕ್ಕೆ ಬರುವುದೇ ಇಲ್ಲ!

 

ನಾನು ತಾಜಮಹಲಿನ ಸುತ್ತ ಅನೇಕ ಸಲ ಸುತ್ತಿದ್ದೇನೆ. ತಾಜಮಹಲಿನ ಬುಡದಲ್ಲಿ, ಅದಕ್ಕೆ ಅಂಟಿಕೊಂಡೇ ಹರಿಯುವ ಪ್ರಶಾಂತ ಯಮುನೆಯ ದಡದಲ್ಲಿ ನಾನು ಸುತ್ತಾಡುವಾಗೆಲ್ಲ ಈ ಸಂಗತಿಗಳು ಒಂದು ಸಲ ಮನಸ್ಸಿನಲ್ಲಿ ಹಾದುಹೋಗುತ್ತವೆ. ಮೊನ್ನೆ ಮಕ್ಕಳಿಗೆ ತಾಜಮಹಲ್‌ ತೋರಿಸಲು ಹೋದಾಗಿನ ಕೆಲವವು ಚಿತ್ರ ನಿಮಗಾಗಿ

ರಾಬು

೧೯-೧೦-೨೦೨೪



No comments:

Post a Comment