Thursday, December 26, 2024

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ: ನನಸಾಗದ ಕನಸೋ ಅಥವಾ ಚಿಗುರಿದ ಕನಸೋ ?

 

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ:

ನನಸಾಗದ ಕನಸೋ ಅಥವಾ ಚಿಗುರಿದ ಕನಸೋ ?

ಮಂಡ್ಯದ ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಷ್ಟೆ ತೆರೆಬಿದ್ದಿದೆ. ನಿಗಧಿತ ಮತ್ತು ಅಧಿಕೃತ ಗೋಷ್ಠಿಗಳಿಗಿಂತ ನಿಗಧಿತವಲ್ಲದ ಮತ್ತು ಅನಧಿಕೃತವಾದ ಒಂದೊಂದು ಸಂಗತಿಗಳು ಒಂದೊಂದು ಸಮ್ಮೇಳನಗಳಲ್ಲಿ ಮುಂದೆ ಬಂದು ವ್ಯಾಪಕ ಪ್ರಚಾರ ಪಡೆಯುತ್ತಿರುವುದು ಈ ಕನ್ನಡ ಸಾಹಿತ್ಯ ಸಮ್ಮೇಳನದ ಇತ್ತೀಚೆಗಿನ ಒಂದು ವೈಶಿಷ್ಟ್ಯವೇ ಆಗುತ್ತಿದೆ.  ಹಾಗೆ ಈ ಸಲ ಮುನ್ನೆಲೆಗೆ ಬಂದು ವ್ಯಾಪಕವಾಗಿ ಪ್ರಚಾರ ಪಡೆದುಕೊಂಡದ್ದು ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಆಗಬೇಕು ಎಂಬ ವಿಚಾರ. ಸಮ್ಮೇಳನದ ಸಂದರ್ಭದಲ್ಲಿ ಇದು ಹುಟ್ಟಿದ್ದು ಹೇಗೆ, ಬೆಳೆದದ್ದು ಹೇಗೆ, ಕೊನೆಗೆ ಬಂದು ನಿಂತದ್ದು ಎಲ್ಲಿಗೆ ಮತ್ತು ಇದರ ಮುಂದಿನ ನಡೆ ಏನಾಗಬಹುದು ಎಂಬುದನ್ನು ಒಂದಿಷ್ಟು ವಿವರವಾಗಿ ಚರ್ಚಿಸುವುದು ಈ ಲೇಖನದ ಉದ್ದೇಶ.

ಮೊಟ್ಟ ಮೊದಲನೆಯದಾಗಿ ಈ ಯೋಚನೆ ಯಾರ ತಲೆಗೆ ಹೊಳೆಯಿತೋ ತಿಳಿಯದು. ಸಮ್ಮೇಳನದ ಮಳಿಗೆಗಳನ್ನು ಪಡೆಯುವವರು ಪಾಲಿಸಬೇಕಾದ ನಿಯಮಗಳೆಂದು ಕೆಲವು ʼನಿಯಮʼಗಳನ್ನು ರೂಪಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಮಳಿಗೆಗಳಲ್ಲಿ ಮದ್ಯಪಾನ, ಗುಟಕಾ ಸೇವನೆ ಮಾಂಸಾಹಾರ ತಯಾರಿಕೆ ಇತ್ಯಾದಿಗಳಿಗೆ ಅವಕಾಶವಿಲ್ಲವೆಂದು ಒಂದು ನಿಯಮ ಸೇರಿಸದರೆಂದೂ ಅದನ್ನು ಪ್ರತಿಭಟಿಸುವ ಭರಾಟೆಯಲ್ಲಿ ಈ ಮಾಂಸಾಹಾರದ ಚರ್ಚೆ ಹುಟ್ಟಿ ಮುನ್ನೆಲೆಗೆ ಬಂತೆಂದೂ ನಾವು ಮೇಲ್ನೋಟಕ್ಕೆ ಇದರ ಹುಟ್ಟಿನ ಸ್ಥಳ ಮತ್ತು ಕಾರಣಗಳನ್ನು ಗುರುತಿಸಬಹುದು. ಮಾಂಸಾಹಾರದ ಚರ್ಚೆ ಮುನ್ನೆಲೆಗೆ ಬಂದಂತೆ ಗುಟಕಾ ಪ್ರಿಯರು, ಮದ್ಯಮಿತ್ರರು ಈ ನಿಯಮವನ್ನು ಅಷ್ಟೊಂದು ಗಂಭಿರವಾಗಿ ತೆಗೆದುಕೊಳ್ಳಲಿಲ್ಲವಾದ್ದರಿಂದ ಅವುಗಳ ಚರ್ಚೆ ಮುಂದಕ್ಕೆ ಬರಲಿಲ್ಲ.

ಆರಂಭದಲ್ಲಿ ಮಾಂಸಾಹಾರ ಸೇವನೆಯನ್ನು ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೆಲವು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್‌ ಗಳನ್ನು ಹಾಕುವ ಮೂಲಕ ಈ ಚರ್ಚೆ ಶುರುವಾಯಿತು. ಇಲ್ಲೊಂದು ಸಣ್ಣ ಸಂಗತಿಯನ್ನು ಗಮನಿಸಬೇಕು. ಮಳಿಗೆಗಳಲ್ಲಿ ಮಾಂಸಾಹಾರ ತಯಾರಿಕೆಯನ್ನು ನಿಷೇಧಿಸಲಾಗಿತ್ತೇ ಹೊರತು ಅದರ ಸೇವನೆಯನ್ನಲ್ಲ; ಹಾಗಾಗಿ ಹೊರಗಿನಿಂದ ತೆಗೆದುಕೊಂಡು ಹೋದ ಮಾಂಸಾಹಾರವನ್ನು ಸೇವಿಸುವುದನ್ನು ಅದು ನಿರ್ಬಂಧಿಸುವುದಿಲ್ಲ ಎಂದು ಒಬ್ಬ ವಿದ್ವಾಂಸರು ತಮ್ಮ ಪೋಸ್ಟ್‌ ಒಂದರಲ್ಲಿ ಸ್ಪಷ್ಟೀಕರಿಸಿದರು. ಆದರೆ ಅದನ್ನು ಅನೇಕರು ಗಮನಿಸಲಿಲ್ಲ. ಅದಕ್ಕೂ ಮುಖ್ಯ ಸಂಗತಿ ಎಂದರೆ ಸಾಹಿತ್ಯ ಪರಿಷತ್ತಿನ ಅ‍‍ಧ್ಯಕ್ಷರು ಅಂತಹ ಒಂದು ನಿಯಮವನ್ನು ಮಾಡುವ ಅವಶ್ಯಕತೆಯೇ ಇರಲಿಲ್ಲ. ಆದರೂ ಮಾಡಿದರು. ಇದು ಅನೇಕರನ್ನು ಕೆರಳಿಸಿತು. ಅದನ್ನು ದಿಕ್ಕರಿಸಬೇಕು ಎಂದು ಅವರಿಗೆ ಅನ್ನಿಸಿತು. ಅಷ್ಟೇ ಆಗಿದ್ದರೆ ಆ ನಿಯಮವನ್ನು ವಾಪಸ್ಸು ತೆಗೆದುಕೊಳ್ಳಬೇಕು ಆಹಾರದ ಸೇವನೆಯನ್ನು ಅವರವರ ಇಷ್ಟಕ್ಕೆ ಬಿಡಬೇಕು ಎಂಬ ಬೇಡಿಕೆ ಮಾತ್ರ ಬರುತ್ತಿತ್ತು. ಪರಿಷತ್ತು ಅದನ್ನು ಮರಳಿ ಪಡೆಯುವ ಸಾಧ್ಯತೆ ಇತ್ತು. ಅಲ್ಲಿಗೆ ಆ ವಿಷಯ ಮುಗಿಯುತ್ತಿತ್ತು.

ಆದರೆ ಇದನ್ನು ಮುಗಿಸಲು ಕೆಲವರಿಗೆ ಇಷ್ಟವಿರಲಿಲ್ಲವೇನೋ.  ಪರಿಷತ್ತಿನ ಅಧ್ಯಕ್ಷರು ಮಾಡಿದ ಈ ಅನವಶ್ಯಕ ನಿಯಮವನ್ನು ಹಿಂತೆಗೆದುಕೊಳ್ಳಲು ಒತ್ತಡ ತರುವುದಕ್ಕೆ ಬದಲಾಗಿ ಅದನ್ನೊಂದು ʻಸದವಕಾಶʼವಾಗಿ ಬಳಸಿಕೊಂಡು ಇದು ʼಮಾಂಸಾಹಾರಿಗಳೆಲ್ಲರಿಗೂ ಮಾಡಿದ ಅಪಮಾನʼ ಎಂಬಂತೆ ಅದನ್ನು ಬಿಂಬಿಸಿ ಸಮ್ಮೇಳನದಲ್ಲಿ ನೀಡಲಾಗುವ ಆಹಾರದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವೂ ಇರಬೇಕು ಎಂಬ ಹೊಸ ಬೇಡಿಕೆಯೊಂದನ್ನು ಮುಂದಿಟ್ಟರು. ಈ ಬೇಡಿಕೆ ಆರಂಭದಲ್ಲಿ ಕೆಲವರಿಂದ ಕೆಲವು ಕಡೆ ತಮಾಸೆಗೆ ಒಳಗಾದಾಗ, ಇದು ಕೇವಲ ಮಾಂಸಾಹಾರದ ಸೇವನೆಯ ಚಪಲಕ್ಕೆ ಮಾಡುತ್ತಿರುವ ಹೋರಾಟವಲ್ಲವೆಂದೂ ಆಹಾರ ಸಂಸ್ಕೃತಿಯಲ್ಲಿನ ತರತಮಭಾವನೆಯನ್ನು ಹೋಗಲಾಡಿಸುವುದಕ್ಕಾಗಿ, ಸಾರ್ವಜನಿಕ ಆಹಾರ ನೀಡಿಕೆಯಲ್ಲಿ ಬ್ರಾಹ್ಮಣೀಕರಣದ ಮೇಲಾಳ್ವಿಕೆಯನ್ನು ಕೊನೆಗಾಣಿಸಲು ಮಾಡುತ್ತಿರುವ ಹೋರಾಟವೆಂದೂ ಸ್ಪಷ್ಟೀಕರಣವನ್ನು ಇವರು ನೀಡತೊಡಗಿದರು. ಇದು ʻಆಹಾರಕ್ರಾಂತಿ’ಯ ಹೋರಾಟʼ ಇದಕ್ಕೆ ಕೈಜೊಡಿಸಿ ಎಂದು ಇವರು ಸಾರ್ವಜನಿಕರಲ್ಲಿ ಮನವಿಯನ್ನೂ ಮಾಡತೊಡಗಿದರು. (ಕುವೆಂಪು ಸುಮಾರು ಒಂದು ನೂರು ವರ್ಷಗಳ ಹಿಂದೆ ಇದೇ ಭಾಗದಲ್ಲಿ ʻವಿಚಾರಕ್ರಾಂತಿʼಗೆ ಆಹ್ವಾನವನ್ನು ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.) ನಂತರದ ದಿನಗಳಲ್ಲಿ ಇದಕ್ಕೆ ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ಧರ್ಮ ಇತ್ಯಾದಿ ಸುತ್ತಿಕೊಂಡು ಅದನ್ನು ಒಂದು ʻಸಾಮಾಜಿಕ ಸಮಸ್ಯೆʼಯನ್ನಾಗಿ ರೂಪಿಸಿದವು.

ಇದರ ಪರಿಣಾಮ ಏನಾಯಿತು ಎಂದರೆ ಸಮ್ಮೇಳನದ ಆರಂಭಕ್ಕೂ ಮುನ್ನ ಸುಮಾರು ಹತ್ತು ಹದಿನೈದು ದಿನಗಳಲ್ಲಿ ಪತ್ರಿಕೆಗಳಲ್ಲಿ ಸಮ್ಮೇಳನದಲ್ಲಿ ಯಾವ ಯಾವ ಗೋಷ್ಠಿಗಳು ನಡೆಯುತ್ತವೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಯಾವ ತಂಡಗಳು ಭಾಗವಹಿಸುತ್ತವೆ, ಪುಸ್ತಕ ಮಳಿಗೆಗಳ ವ್ಯವಸ್ಥೆ ಹೇಗಾಗಿದೆ ಎಂಬ ಬಹುಮುಖ್ಯ ಮಾಹಿತಿಗಿಂತ ಈ ಮಾಂಸಾಹಾರದ ಚರ್ಚೆಯೇ ವ್ಯಾಪಕವಾಗಿ ನಡೆಯಿತು.  ಈ ಹೋರಾಟಕ್ಕೆ ಒಂದು ಸಾಂಘಿಕ ಬಲ ಬರಲೆಂದು ಕೆಲವು ʻಮಾಂಕಮಿʼಗಳು (ಮಾಂಸಾಹಾರಿಗಳೆಂದು ಕರೆಯಲ್ಪಡುವ ಮಿಶ್ರಾಹಾರಿಗಳು) ಒಂದು ʻಬಾಬʼ (ಬಾಡೂಟ ಬಳಗ) ರಚಿಸಿಕೊಂಡು ಹೋರಾಟಕ್ಕೆ ಚಳವಳಿಯ ಮೆರಗನ್ನು ನೀಡಿದರು. ಸ್ವಾಗತ ಸಮಿತಿಗೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಸಲ್ಲಿಸುವುದು, ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯೆದುರು ಕೂತು ಬಾಡೂಟ ಸೇವಿಸುವುದು, ಸಂಬಂಧ ಪಟ್ಟವರು ಮನವಿಗೆ ಸ್ಪಂದಿಸದಿದ್ದರೆ ತಾವೇ ವೈಯಕ್ತಿಕ ನೆಲೆಯಲ್ಲಿ ಬಾಡೂಟ ಕೊಡುವ ವ್ಯವಸ್ಥೆ ಮಾಡುವುದಾಗಿ ಒತ್ತಡ ತರುವುದೂ ಎಲ್ಲವೂ ನಡೆದವು.

 ಈ ಸಂದರ್ಭದಲ್ಲಿ ಮುನ್ನೆಲೆಗೆ ತಂದ ಬಹುಮುಖ್ಯ ಸಂಗತಿ ಎಂದರೆ ಶತಶತಮಾನಗಳಿಂದಲೂ ಸಸ್ಯಾಹಾರ ಮತ್ತು ಮಾಂಸಾಹಾರಗಳ ನಡುವೆ ತರತಮ ಭಾವನೆಯಿದೆ. ʻಸಸ್ಯಾಹಾರ ಮೇಲು, ಮಾಂಸಾಹಾರ ಕೀಳುʼ ಎಂಬ ಭಾವನೆಯಿದ್ದು ಇದು ಸರಿಯಲ್ಲ. ಇದು ಹೋಗಬೇಕು. ಇದು ಮಂಡ್ಯದಿಂದಲೇ ಆರಂಭವಾಗಲಿ ಎಂಬುದು. ಈ ಹಿನ್ನಲೆಯಲ್ಲಿ ಮಂಡ್ಯದ ಅನನ್ಯತೆಯ ಸಂಕೇತಗಳೆಂದು ಭಾವಿಸಿ ಸಿಂಹಾಸನದ ಮೇಲೆ ಕೂರಿಸಲಾಗಿದ್ದ ʼಸಕ್ಕರೆʼ ಮತ್ತು ʼಬೆಲ್ಲʼ ಇವುಗಳನ್ನು ಪಕ್ಕಕ್ಕೆ ದಬ್ಬಿ ಅಲ್ಲಿಗೆ ʻಬಾಡುʼ ಬಂದು ಕುಳಿತುಕೊಂಡಿತು.  ಆದರೆ ಮಂಡ್ಯ ನಗರದ ಪ್ರವೇಶದಲ್ಲಿ ಹಾಕಾಲಾಗಿದ್ದ ʻಸಕ್ಕರೆ ನಾಡಿಗೆ ಸ್ವಾಗತʼ ಎಂಬ ಫಲಕ ಮಾತ್ರ ಸಧ್ಯಕ್ಕೆ ʼಬಾಡಿನ ನಾಡಿಗೆ ಸ್ವಾಗತʼ ಎಂದು ಬದಲಾವಣೆ ಆಗದೇ ಹಾಗೇ ಉಳಿದುಕೊಂಡಿತು!

ಮಂಡ್ಯದಲ್ಲಿ ಇಪ್ಪತ್ತು ಮೂವತ್ತು ಜನರು ಭೌತಿಕವಾಗಿ ಈ ಹೋರಾಟ ಮಾಡುತ್ತಿದ್ದರೆ ಕೆಲವು ಹಿರಿಯ ಚಿಂತಕರು, ವಿಚಾರವಾದಿ ಸ್ನೇಹಿತರು ದೂರದಿಂದಲೇ ಈ ಹೋರಾಟಕ್ಕೆ ತಾತ್ವಿಕವಾಗಿ ಬೆಂಬಲ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕತೊಡಗಿದರು. ಇನ್ನು ಕೆಲವರು ಈ ತಾತ್ವಿಕತೆ ಅದು ಇದು ಏನೂ ತಿಳಿಯದೆ ಇದ್ದರೂ ʼಬಾಡೂಟʼದ ಸಂಭ್ರಮವನ್ನು ನೆನಪುಮಾಡಿಕೊಂಡು ಇದನ್ನು ಬೆಂಬಲಿಸತೊಡಗಿದರು! ಇದರಿಂದ ಉತ್ತೇಜನಗೊಂಡು ಈ ಬಾಬ ಈ ಸಮ್ಮೇಳನದಲ್ಲಿ ಏನಾದರೂ ಮಾಡಿ ಬಾಡೂಟ ಕೊಡಿಸಲೇಬೇಕು ಎಂಬ ಹಟಕ್ಕೆ ಬಿದ್ದು ʼಬಾಡೇ ನಮ್ಮ ಗಾಡುʼ ಎಂಬ ಘೋಷವಾಕ್ಯ ರಚಿಸಿಕೊಂಡು ಹೋರಾಟವನ್ನು ತೀರ್ವಗೊಳಿಸಿತು. ಆದರೂ ಇದು ಸ್ಥಳೀಯವಾಗಿ ನಿರೀಕ್ಷಿಸಿದಷ್ಟು ಜನಮಾನ್ಯತೆಯನ್ನು ಪಡೆಯಲಿಲ್ಲ. ಮಾಂಸ ಊಟ ಮಾಡುವ ಬಹುಸಂಖ್ಯಾತ ಜನರು ಕೂಡ ಸುಮ್ಮನ್ನೆ ಏನಾಗುತ್ತೋ ಆಗಲಿ ಎಂದು ಕಾದುನೋಡುವ ತಂತ್ರ ಅನುಸರಿಸಿದರು. ಏಕೆಂದರೆ ಅವರಿಗೆ ಮಾಂಸಾಹಾರವನ್ನು ʻಕೊಟ್ಟರೆ ಕಷ್ಟವಲ್ಲ; ಕೊಡದಿದ್ದರೆ ನಷ್ಟವೂ ಅಲ್ಲ. ಮೂಳೆ ಸಿಗದಿದ್ದರೇನು ಹೋಳಿಗೆ ಇರುತ್ತಲ್ಲ ಎಂಬ ಧೋರಣೆ ಅವರದು.

ಸಮಿತಿಯ ನಿರಾಕರಣೆ ಮತ್ತು ಅಸಮಾಧಾನದ ಹೊರಹೊಮ್ಮುವಿಕೆ

ಸಮ್ಮೇಳನಕ್ಕೆ ಒಂದೆರಡು ದಿನಗಳ ಮೊದಲು ಆಹಾರ ಸಮಿತಿ ತಾನು ಸಮ್ಮೇಳನದಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಪದಾರ್ಥಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು. ಈ ಬಾಬ ಅಷ್ಟೊಂದು ಪ್ರಯತ್ನಮಾಡಿದ್ದರೂ, ಈ ಪಟ್ಟಿಯಲ್ಲಿ ಅದರ ಬೇಡಿಕೆಯನ್ನು ನಿರಾಕರಿಸಲಾಗಿತ್ತು. ಬಹಳಷ್ಟು ಐಟಂಗಳು ಅಲ್ಲಿದ್ದರೂ ಮಾಂಸಾಹಾರವೆಂದು ಭಾವಿಸುವ ಯಾವ ಒಂದು ಐಟಂ ಕೂಡ ಆ ಪಟ್ಟಿಯಲ್ಲಿ ಇರಲಿಲ್ಲ. ಇದನ್ನು ಸಹಜವಾಗಿ ಈ ಬಾಬದ ಹೋರಾಟಗಾರರು ತಮಗೆ ಮಾಡಲಾದ ಅವಮಾನ ಎಂಬಂತೆ ತೆಗೆದುಕೊಂಡರು ಅನ್ನಿಸುತ್ತದೆ. (ಆ ರೀತಿ ಯಾವುದೇ ಸಸ್ಯಾಹಾರಿಗಳು ಅಥವಾ ಸಂಘಟಕರು ಅವರನ್ನು ಅವಮಾನ ಮಾಡದಿದ್ದರೂ). ಹೀಗಾಗಿ ಅದುವರೆಗೂ ಪ್ರಜಾಸತ್ತಾತ್ಮಕವಾಗಿ ಹಳಿಯ ಮೇಲೆ ನಡೆಯುತ್ತಿದ್ದ ತಮ್ಮ ಹೋರಾಟವನ್ನು, ʻಮಾಡು ಇಲ್ಲವೆ ಮಡಿʼ ಎಂಬಂತೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಹಳಿತಪ್ಪಿಸಿ ಒಂದಿಷ್ಟು ಸಲ್ಲದ ನಡೆಗಳ ಕಡೆ ತಿರುಗಿಸಿದರು.

ಈ ಸಲ್ಲದ ನಡೆಗಳಲ್ಲಿ ಮೊದಲನೆಯದು ಅಂದರೆ ತಮಗೆ ಬಾಡೂಟ ಸಿಗುವುದಿಲ್ಲ ಎಂಬುದು ಖಚಿತವಾದ ತಕ್ಷಣ ತಮಗೆ ಉಂಟಾದ ಬೇಸರ ಮತ್ತು ಸಿಟ್ಟನ್ನು ಸಮ್ಮೇಳನದಲ್ಲಿ ಏನೇನು ಕುಂದುಕೊರತೆಗಳು ಇವೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಹೊರಹಾಕತೊಡಗಿದ್ದು. ಇದರಲ್ಲಿ ಬಹಳಷ್ಟು ತಿಳಿದವರೂ ಇದ್ದರು. ಎರಡು ಸಂಗತಿಗಳನ್ನು ಗಮನಿಸಿ. ಒಬ್ಬ ಹಿರಿಯ ಮಹಿಳಾ ಸಾಹಿತಿ ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಬೇಕಾಗಿದ್ದ ತನ್ನನ್ನು ವೇದಿಕೆಗೆ ಪೋಲಿಸರು ಬಿಡಲು ಸತಾಯಿಸಿದರು, ರಾಜಕಾರಣಿಗಳು ಸ್ವಾಮಿಗಳು ಇವರನ್ನು ಐಡಿ ಕೇಳದೆ ಬಿಟ್ಟರು. ನನ್ನನ್ನು ಮಾತ್ರ ತಡೆದರುʼ ಎಂದು ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ವೇದಿಕೆ ಮೇಲೆ ಹೋಗುವಾಗ ಪೋಲೀಸರು ಐಡಿ ಕೇಳುವುದು ಒಂದು ಸಾಮಾನ್ಯ ಪ್ರಕ್ರಿಯೆ. ಅದಕ್ಕೆ ನಾವು ಹೊಂದಿಕೊಳ್ಳಬೇಕು. ಎಲ್ಲೆಲ್ಲಿಂದಲೋ ಬಂದು ಕರ್ತವ್ಯದಲ್ಲಿ ತೊಡಗಿರುವ ಪೋಲೀಸರಿಗೆ ಸಾಮಾನ್ಯವಾಗಿ ಪ್ರಮುಖ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಗೊತ್ತಿರುತ್ತಾರೆ. ಹಾಗಾಗಿ ಅವರನ್ನು ಐಡಿ ಇಲ್ಲದೆಯೂ ಅವರು ಬಿಡುತ್ತಾರೆ. ಆದರೆ ಸಾಹಿತಿಗಳ ಪರಿಚಯ ಅವರಿಗೆ ಸರಿಯಾಗಿ ಇರುವುದಿಲ್ಲ. ಆದ್ದರಿಂದ ಅವರು ಅನುಮಾನ ಪಡುತ್ತಾರೆ ಅಷ್ಟೆ. ಈ ಅನುಮಾನವನ್ನೇ ಅವಮಾನವೆಂದು ಆವಾಹಿಸಿಕೊಳ್ಳುವ, ಒಂದು ಸಣ್ಣ ತೊಂದರೆಯನ್ನೂ ಸಹಿಸಿಕೊಳ್ಳಲಾಗದವರು ಇಂತಹ ಲಕ್ಷಾಂತರ ಜನ ಸೇರುವ ಸಮ್ಮೇಳನಕ್ಕೆ ಬರಲು ಒಪ್ಪಿಕೊಳ್ಳುವುದಾದರೂ ಏತಕ್ಕೆ? ಈ ಅನುಮಾನವನ್ನು ಇವರಷ್ಟೇ ಎದುರಿಸಿದ್ದಲ್ಲ. ರಾಷ್ಟ್ರಕವಿ ಜಿ ಎಸ್‌ ಶಿವರುದ್ರಪ್ಪನವರಂಥವರನ್ನೇ ಒಂದು ಸಮ್ಮೇಳನದಲ್ಲಿ ಪೋಲೀಸರು ತಡೆದು ನಿಲ್ಲಿಸಿದ್ದರಂತೆ. ಆದರೆ ಶಿವರುದ್ರಪ್ಪನವರು ದೊಡ್ಡವರು. ಅವರು ಈ ವಿಷಯವನ್ನು ಬಹಿರಂಗವಾಗಿ ಹೇಳಿ ದೊಡ್ಡದು ಮಾಡುವ ಸಣ್ಣತನ ತೋರಲಿಲ್ಲ. ನಾವು ಸಾಹಿತಿಗಳು. ಶಿವರುದ್ದರಪ್ಪನವರು ತೋರಿಸಿದ ದೊಡ್ಡತನವನ್ನು ತೋರಿಸುವುದನ್ನು ಕಲಿಯಬೇಕು. ಅವರೇ ಇನ್ನೊಂದು ಕಡೆ ನನಗೆ ಊಟವನ್ನು ಪಡೆಯುವುದೇ ಕಷ್ಟವಾಯಿತು. ಮಾಂಸಾಹಾರದ ವ್ಯವಸ್ಥೆಯನ್ನೂ ಮಾಡಿದ್ದರೆ ಈ ನೂಕು ನುಗ್ಗಲು ಇರುತ್ತಿರಲಿಲ್ಲ ಎಂದು ನನಗೆ ಅನ್ನಿಸಿತು ಎಂದೂ ಬರೆದರು. ಹೀಗೆ ಬರೆಯಲಿಕ್ಕಾಗಿಯೇ ಇವರು ಸಾರ್ವಜನಿಕರ ಊಟದ ಮನೆಗೆ ಹೋದರೋ ಏನೋ? ಏಕೆಂದರೆ ಈ ನೂಕು ನುಗ್ಗಲು ತಪ್ಪಿಸಲೆಂದೇ ಸಂಘಟಕರು ಅತಿಥಿಗಳಿಗೆ ಮತ್ತು ನೋಂದಾಯಿತ ಪ್ರತಿನಿಧಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದರು. ಸುಮಾರು ಎಂಟುಹತ್ತು ಸಾವಿರಕ್ಕೂ ಮಿಕ್ಕಿದ ನೋಂದಾಯಿತ ಪ್ರತಿನಿಧಿಗಳ ಊಟದ ಮನೆಯಲ್ಲಿಯೇ ಯಾವ ದಿನವೂ ನೂಕುನುಗ್ಗಲು ಆಗಲಿಲ್ಲ. ಇನ್ನು ಅದಕ್ಕಿಂತ ಅತ್ಯಂತ ಕಡಿಮೆ ಇರುವ ವಿಶೇಷ ಅತಿಥಿಗಳ ಊಟದ ಮನೆಯಲ್ಲಿ ನೂಕು ನುಗ್ಗಲು ಇರುತ್ತದೆಯೇ?

ಇನ್ನೊಬ್ಬ ಸ್ನೇಹಿತರು “ಅಷ್ಟು ಕೋಟಿ ಹಣ ಖರ್ಚುಮಾಡಿದರೂ ಸಮ್ಮೇಳನದಲ್ಲಿ ಕುಡಿಯುವ ನೀರಿಗಾಗಿ ಪರದಾಟ ತಪ್ಪಲಿಲ್ಲ” ಎಂದು ಬರೆದರು. ನನಗೆ ಪರಿಚಯವಿದ್ದ ಅವರಿಗೆ ನಾನು ತಕ್ಷಣ ಫೋನ್‌ ಮಾಡಿ, “ಸಮ್ಮೇಳನದ ಎಲ್ಲಕಡೆಗೂ ಸಾಕಷ್ಟು ಶುದ್ಧಕುಡಿಯುವ ನೀರಿನ ವ್ಯವಸ್ಥೆಮಾಡಿದ್ದಾರೆ. ನಾನು ಕಳೆದ ಮೂವತ್ತು ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು ಕುಡಿಯುವ ನೀರಿನ ವಿಷಯದಲ್ಲಿ ಇಷ್ಟೊಂದು ಚೆನ್ನಾಗಿ ಎಲ್ಲಿಯೂ ವ್ಯವಸ್ಥೆ ಮಾಡಿದ್ದನ್ನು ನೋಡಿಲ್ಲ. ನೀವು ಎಲ್ಲಿ ಇದ್ದೀರಿ. ನಿಮಗೆ ಕುಡಿಯುವ ನೀರಿಗಾಗಿ ಪರದಾಟ ಮಾಡುವ ಸ್ಥಿತಿ ಎಲ್ಲಿ ಆಯಿತು?” ಎಂದು ಕೇಳಿದೆ. ಅದಕ್ಕವರು, ನಾನು ಮಂಡ್ಯಕ್ಕೆ ಬಂದಿಲ್ಲ ಊರಲ್ಲಿ ಇದ್ದೇನೆ” ಅಂದರು. ಮತ್ತೆ ಇಲ್ಲಿ ನೀರಿನ ಪರದಾಟ ಇರುವುದು ನಿಮಗೆ ಹೇಗೆ ಗೊತ್ತಾಯಿತು?” ಎಂದದ್ದಕ್ಕೆ ಅಲ್ಲಿಗೆ ಹೋಗಿರುವ ನನ್ನ ಫ್ರೆಂಡು ಒಬ್ರು ಹಾಗೆ ಹೇಳಿದ್ರು” ಎಂದರು!!

ʻಬಾಬʼದ ಎರಡನೆಯ ಸಲ್ಲದ ನಡೆ ಎಂದರೆ ಸಮ್ಮೇಳನದ ಸಂಘಟಕರು ವ್ಯವಸ್ಥೆಮಾಡಿದ್ದ ಊಟದ ಸ್ಥಳಕ್ಕೆ ಹೋಗಿ ಅಲ್ಲಿ ತಾವು ಮನೆಯಿಂದ ತಂದಿದ್ದ ಮಾಂಸದ ಆಹಾರವನ್ನು ಊಟಮಾಡಿ, ತಾವು ಊಟಮಾಡುತ್ತಿರುವ ಫೋಟೋ ಹೊಡೆದುಕೊಂಡು ಅದನ್ನು ʼಬಾಡೂಟವನ್ನು ಎತ್ತಿಹಿಡಿದ ಸಮ್ಮೇಳನʼ ಎಂಬ ಟಿಪ್ಪಣಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದು. ಸಮ್ಮೇಳನದಲ್ಲಿ ಮಾಂಸಾಹಾರವನ್ನು ನೀಡಿ ಎಂದು ಕೇಳಿದ್ದು ತಪ್ಪಲ್ಲ. ಆ ಬಗ್ಗೆ ಹೋರಾಟ ಮಾಡಿದ್ದೂ ತಪ್ಪಲ್ಲ. ಆದರೆ ತಮ್ಮ ಹೋರಾಟ ಯಶಸ್ಸು ಕಾಣಲಿಲ್ಲವೆಂದು ತಾವೇ ಹೋಗಿ ಹೊರಗಿಂದ ಆಹಾರ ಒಯ್ದು ಅಲ್ಲಿ ಊಟಮಾಡಲು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಇವರಿಗೆ ಅಧಿಕಾರವಿತ್ತೆ? ಇದು ಉದ್ಧಟತನ ಅನ್ನಿಸುವುದಿಲ್ಲವೇ?  ಕಾನೂನು ನಮಗೆ ಸಹಾಯ ಮಾಡಲಿಲ್ಲವೆಂದು   ನಾವೇ ಕಾನೂನನ್ನು ಕೈಗೆ ತೆಗೆದುಕೊಳ್ಳುವಂಥ ನಡೆ ಇದಾಗುವುದಿಲ್ಲವೇ?  ಊಟದ ವ್ಯವಸ್ಥೆ ಮಾಡಲು ಅಲ್ಲಿ ಒಂದು ಸಮಿತಿ ಅಂತ ಇರುತ್ತದೆ. ಅದರ ಮೇಲೆ ಒತ್ತಡ ತರುವುದು ಮತ್ತು ನಮ್ಮ ಬೇಡಿಕೆಗಳನ್ನು ಆ ಸಮಿತಿಯ ಮೂಲಕವೇ ಈಡೇರಿಸಿಕೊಳ್ಳುವಂತೆ ಮಾಡುವುದು ಮಾತ್ರ ಪ್ರಜಾತಾಂತ್ರಿಕವಾಗಿ ಒಪ್ಪುವ ನಡೆಯಾಗುತ್ತದೆ.  ಹೀಗೆ ಕಳ್ಳರಂತೆ ಒಳಗೆ ಮಾಂಸಾಹಾರ ಕದ್ದೊಯ್ದು ಯಾರಿಗೂ ಕಾಣದಂತೆ ಉಂಡು ನಾಯಕರಂತೆ ಫೋಟೋ ಹಾಕುವುದು ಶೌರ್ಯದ ಕೆಲಸವಾಗುವುದಿಲ್ಲ.  ನಾಳೆ ಇವರನ್ನು ಅನುಸರಿಸಿ ಇನ್ಯಾರೋ ಒಂದು ಬಾಟಲಿ ಒಳಗೆ ಒಯ್ದು ಎಣ್ಣೆ ಕುಡಿದು ಬಾಟಲಿಯೊಂದರ ಫೋಟೋ ಹಾಕಿ ʼಎಣ್ಣೆಯ ಮಹತ್ವವನ್ನು ಎತ್ತಿಹಿಡಿದ ಸಮ್ಮೇಳನʼ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವುದು ಏನೂ ಕಷ್ಟವಲ್ಲ.

ʼಮನೆಗೊಂದು ಕೋಳಿ; ಊರಿಗೊಂದು ಕುರಿʼ ಯೋಜನೆ

ಮೂರನೆಯದಾಗಿ ತಾವು ಏನೇ ಒತ್ತಡ ತಂದರೂ ಈ ಸಮ್ಮೇಳನದಲ್ಲಿ ಮಾಂಸಾಹಾರ ನೀಡುವುದಿಲ್ಲ ಎಂದು ಖಚಿತವಾದಾಗ ಇವರೆಲ್ಲ ತಾಳ್ಮೆ ಕಳೆದುಕೊಂಡು ಹತಾಶರಾದರೆಂದು ಕಾಣುತ್ತದೆ. ಹಾಗಾಗಿ ಈ ʻಬಾಬʼದವರು ತಾವೇ ತಮ್ಮ ಹಂತದಲ್ಲಿ ಮಾಂಸಾಹಾರ ನೀಡುತ್ತೇವೆ ಎಂದು ತಾವೇ ತಂದಿದ್ದ ಮಾಂಸಾಹಾರದೊಂದಿಗೆ ಸಮ್ಮೇಳನದ ಕೆಲವು ಊಟದ ಕೌಂಟರ್‌ಗಳಿಗೆ ಬಲಾತ್ಕಾರವಾಗಿ ಮುನ್ನುಗ್ಗಿ ಮಾಂಸಾಹಾರವನ್ನು ವಿತರಿಸಲು ಮುಂದಾದರು ಎಂದು ಪತ್ರಿಕೆಯಲ್ಲಿ ಸುದ್ಧಿಬಂತು. ಇದು ನಡೆದದ್ದೇ ನಿಜವೇ ಆಗಿದ್ದರೆ ಇದು ಖಂಡನೀಯ. ಮೇಲಿನ ನಡೆ ಹೇಡಿತನದ್ದಾದರೆ ಇದು ಪುಂಡಾಟಿಕೆಯಾಗುತ್ತದೆ. ಇಷ್ಟೆಲ್ಲ ಇವರು ಸ್ವಾತಂತ್ರ್ಯ ಹೋರಾಟಗಾರರಂತೆ ನುಗ್ಗಿ ಮಾಂಸಾಹಾರವನ್ನು ಕೊಡಲು ಮುಂದಾಗಲು ಅಲ್ಲಿ ಯಾರೂ ಇವರ ಮಾಂಸಾಹಾರಕ್ಕಾಗಿ ಬಾಯಿ ತೆಗೆದುಕೊಂಡು ಉಪವಾಸ ಕುಳಿತಿರಲಿಲ್ಲ. ಇವರೇ ಕೊಡುವುದು ಇವರೇ ತೆಗೆದುಕೊಳ್ಳುವುದೂ ಮಾಡಿ ಸಾರ್ವಜನಿಕರು ಮತ್ತು ಕ್ಯಾಮರಾ ಮಾಧ್ಯಮಗಳ ಗಮನ ಸೆಳೆಯಲು ಮಾತ್ರ ಇದು ಸಹಾಯವಾಗಬಲ್ಲದು.

 ಇದರ ಜೊತೆಗೆ ಇವರು ಹಾದಿ ಬೀದಿಯಲ್ಲಿ ಮಾಂಸಾಹಾರ ನೀಡಿ ಒಟ್ಟಾರೆ ತಮ್ಮ ಹೋರಾಟ ಯಶಸ್ವಿಯಾಯಿತು ಎಂದು ತೋರಿಸಿಕೊಳ್ಳಲು ಹರಸಾಹಸ ಮಾಡಿದ್ದು ಅಯ್ಯೋ ಅನ್ನಿಸುವಂತಿತ್ತು. ಈ ಮೊದಲು ಸಮಿತಿಯ ನಿರ್ಧಾರಕ್ಕೆ ಪ್ರತಿಯಾಗಿ ಅವರು ʼಮನೆಗೊಂದು ಕೋಳಿ; ಊರಿಗೊಂದು ಕುರಿʼ ಎಂಬ ಯೋಜನೆಯನ್ನು ರೂಪಿಸಿ ಜನರಿಗೆ ತಾವೇ ಬಾಡೂಟ ನೀಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ನಾಲ್ಕಾರು ಕುರಿ ಕೋಳಿಗಳನ್ನು ಹಿಡಿದುಕೊಂಡ ಫೋಟೋ ಪತ್ರಿಕೆಯಲ್ಲಿ ಬರುವಂತೆ ಕೂಡ ಇವರು ನೋಡಿಕೊಂಡಿದ್ದರು. ಆದರೆ ಈ ಯೋಜನೆ ಯಶಸ್ವಿಯಾದಂತೆ ಕಾಣಲಿಲ್ಲ. ಕೊನೆಗೆ ʻಕೊಟ್ಟಮಾತಿಗೆ ತಪ್ಪಿದರೆ ಕೆಟ್ಟಮಾತು ಬರುತ್ತದೆʼ ಎಂದು ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ʼಬದ್ಧತೆʼ ತೋರ್ಪಡಿಸುವುದಕ್ಕಾಗಿ ಒಂದಿಷ್ಟು ಮಾಂಸಾಹಾರ ಬಡಿಸಿ ಮಾನ ಮರ್ಯಾದೆ ಉಳಿಸಿಕೊಳ್ಳೋಣ ಎಂದು ರಸ್ತೆಗಳಲ್ಲಿ ಬಾಡೂಟ ಬಡಿಸಿದರಂತೆ.  ಅದನ್ನು ಕೆಲವರು ಊಟಮಾಡುತ್ತಿರುವ ಫೋಟೋಗಳೂ ಪತ್ರಿಕೆಯಲ್ಲಿ ಬಂದವು. ಕೋಳಿಸಂಗ್ರಹ ಆಗದೆ ಸಾಂಕೇತಿಕವಾಗಿ ಮೊಟ್ಟೆ ಸಂಗ್ರಹಿಸಿ ವಿತರಿಸಬೇಕಾಯಿತು.

ಸಮಿತಿ ತಮ್ಮ ಬೇಡಿಕೆನ್ನು ಮಾನ್ಯಮಾಡದಿದ್ದಾಗ ಈ ಹೋರಾಟಗಾರರಿಗೆ ಮಹೇಶಜೋಶಿ ವಿಲನ್‌ ಆಗಿ ತೋರತೊಡಗಿದ್ದರು. ಅವರ ಮೇಲೆ ನಿರಂತರವಾಗಿ ಅಕ್ಷರಬಾಣ ಬಿಡುತ್ತಲೇ ಇದ್ದರು. ಮಹೇಶ ಜೋಶಿ ಅವರನ್ನು ಟೀಕಿಸಲು ಅನೇಕ ಕಾರಣಗಳಿದ್ದವು ಎಂಬುದು ನಿಜ. ಆದರೆ ಆಹಾರ ನೀಡಿಕೆಯಲ್ಲಿ ಅವರ ಪಾತ್ರ ಇಲ್ಲವೆನ್ನುವಷ್ಟು ಕಡಿಮೆ! ಅದೂ ಇವರಿಗೆ ಗೊತ್ತಿಲ್ಲ.  ವಾಸ್ತವವಾಗಿ ಪ್ರತಿನಿಧಿಗಳಿಗೆ ಊಟ ವಸತಿ ವ್ಯವಸ್ಥೆಯನ್ನು ಮಾಡುವುದು ಪರಿಷತ್ತು ಅಲ್ಲ; ಬದಲಾಗಿ ಅಲ್ಲಲ್ಲಿನ ಸ್ವಾಗತ ಸಮಿತಿಗಳು. ಈ ಸಮಿತಿ ಮಾಂಸಾಹಾರವನ್ನು ಕೊಡಲು ಒಪ್ಪಲಿಲ್ಲ ಎನ್ನುವುದನ್ನು ಬಿಟ್ಟರೆ ತಾನು ನೀಡಲು ಉದ್ದೇಶಿಸಿದ್ದ ಆಹಾರ ಪದಾರ್ಥಗಳ ವಿತರಣೆಯಲ್ಲಿ ಯಾವುದೇ ಭೇದಭಾವ ಮಾಡಲಿಲ್ಲ. ಸಮ್ಮೇಳನದ ಮೂರೂ ದಿನಗಳು ತಾನು ನಿಗಧಿಪಡಿಸಿದ ಆಹಾರ ಪದಾರ್ಥಗಳನ್ನೇ ಎಲ್ಲ ಕೌಂಟರ್‌ಗಳಲ್ಲಿ ಯಾವುದೇ ಭೇದಭಾವ ಮಾಡದೆ ನೀಡಿತು. ವಿಶೇಷ ಅತಿಥಿಗಳು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಇತ್ಯಾದಿಯಾಗಿ ಊಟದ ಮನೆಗಳು ಬೇರೆ ಬೇರೆ ಇದ್ದರೂ ಕೇವಲ ನೂಕು ನುಗ್ಗಲನ್ನು ತಡೆಯುವ ಕ್ರಮವಾಗಿ ಅವನ್ನು ಮಾಡಲಾಗಿತ್ತೇ ಹೊರತು ಆಹಾರ ನೀಡಿಕೆಯಲ್ಲಿ ಭೇದಭಾವ ಮಾಡಲು ಅಲ್ಲ.

ಬಾಡೂಟವನ್ನು ಸಮ್ಮೇಳನ ಎತ್ತಿಹಿಡಿದದ್ದು ನಿಜವೇ?

ಸಮ್ಮೇಳನದ ಮಧ್ಯದ ದಿನ ಸಮ್ಮೇಳನದ ಮುಖ್ಯ ವೇದಿಕೆಯ ಮುಂಭಾಗ ಸುಮಾರು ಹತ್ತು ಹದಿನೈದು ಜನರು ʻನಮ್ಮ ಆಹಾರ ನಮ್ಮ ಹಕ್ಕುʼ ಎಂದು ಬರೆಯಲ್ಪಟ್ಟ ಪ್ಲೇಕರ್ಡ್‌ ಗಳನ್ನು ಹಿಡಿದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ಇದೊಂದು ಭಿನ್ನ ರುಚಿಯ ಸುದ್ಧಿಯಾಗುವುದರಿಂದ ಈ ಪ್ಲೇಕರ್ಡ್‌ ಹಿಡಿದು ಪ್ರತಿಭಟಿಸುವರ ಸಂಖ್ಯೆಯ ಎರಡರಷ್ಟು ಸಂಖ್ಯೆಯಲ್ಲಿ ಕ್ಯಾಮರಾ ಸಮೇತ ಸೇರಿದ್ದ ಡಿಜಿಟಲ್‌ ಮತ್ತು ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಅದನ್ನು ವಿಶೇಷವೆಂದು ಪರಿಗಣಿಸಿ ಸುದ್ಧಿಮಾಡಿದರು. ಆದರೆ ಹಾಗೆ ಸುದ್ಧಿಮಾಡುವಾಗ ಅವರು ಮಾಡಿದ ಚಿಕ್ಕ ಲೋಪವೆಂದರೆ ಇವರು ಅಲ್ಲಲ್ಲಿ ಹೀಗೆ ವೈಯಕ್ತಿಕ ನೆಲೆಯಲ್ಲಿ ಮಾಂಸಾಹಾರ ಹಂಚಿದ್ದನ್ನು, ʻಮಾಂಸಾಹಾರಕ್ಕೆ ಮುನ್ನುಡಿ ಬರೆದ ಸಮ್ಮೇಳನʼ ʼಬಾಡೂಟವನ್ನು ಎತ್ತಿಹಿಡಿದ ಸಮ್ಮೇಳನʼ ಎಂದು ವರದಿ ಮಾಡಿದ್ದು. ಈ ವರದಿ ಪ್ರಕಟವಾದಾಗ ವಾಸ್ತವವಾಗಿ ಪ್ರತಿಭಟನಕಾರರು ಬಾಡೂಟ ಬೇಕೆಂದು ಪ್ಲೇಕಾರ್ಡ್‌ ಎತ್ತಿಹಿಡಿದಿದ್ದರೆ ಹೊರತು ಸಮ್ಮೇಳನ ಇವರ ಬೇಡಿಕೆಯನ್ನು ಮಾನ್ಯಮಾಡಿ ಬಾಡೂಟವನ್ನು ಎತ್ತಿ ಹಿಡಿದಿರಲಿಲ್ಲ; ಬದಲಾಗಿ ತಳ್ಳಿಹಾಕಿತ್ತು!

ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿರಬೇಕಾದರೆ ಸಮ್ಮೇಳನದ ಕೊನೆಯ ದಿನ ರಾತ್ರಿ ಹತ್ತುಗಂಟೆ ಹೊತ್ತಿಗೆ ದಿಢೀರನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಒಂದು ವಿಡಿಯೋ ತುಣುಕು ಹಂಚಲ್ಪಟ್ಟಿತು. ಅದು ಸಮ್ಮೇಳನದ ಊಟದ ಕೌಂಟರ್‌ ಗಳಲ್ಲಿ ಮೊಟ್ಟೆಯನ್ನು ಕೊಡುತ್ತಿರುವ ದೃಶ್ಯವನ್ನು ಒಳಗೊಂಡಿತ್ತು. ಇದನ್ನು ಹಾಕಿಕೊಂಡು  ಎಲ್ಲರೂ ಇದನ್ನು ಸಂಭ್ರಮಿಸಿ ದೊಡ್ಡ ಯುದ್ಧವನ್ನು ಗೆದ್ದ ʻರಾಜಸಂತೋಷʼವನ್ನು ಪರಸ್ಪರ ಹಂಚಿಕೊಳ್ಳತೊಡಗಿದರು.  ಕಳೆದ ಮೂರು ದಿನಗಳಿಂದ ಸ್ವಾಗತ ಸಮಿತಿಯ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಹಾಕುತ್ತಿದ್ದವರೆಲ್ಲ ದಿಢೀರನೆ ಯೂ ಟರ್ನ್‌ ತೆಗೆದುಕೊಂಡು ಸ್ವಾಗತ ಸಮಿತಿಯನ್ನು ಅಭಿನಂಧಿಸಿ ಹೂವಿನ ಮಳೆಗರೆಯತೊಡಗಿದರು!

ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಿದರೆ ಕೆಲವು ಸಂಗತಿಗಳು ವೇದ್ಯವಾಗುತ್ತವೆ. ಮಾಂಸಾಹಾರವನ್ನು ಕೊಡುವ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಈ ಹೋರಾಟಗಾರರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಮೇಲೆ ಅಕ್ಷರಬಾಣ ಬಿಡುತ್ತಿರುವುದರ ಜೊತೆಗೆ ಸತತವಾಗಿ ಸ್ವಾಗತಸಮಿತಿಯ ಮೇಲೆ ಕೂಡ ಒತ್ತಡವನ್ನು ತರುತ್ತಲೇ ಇದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಚತುರರಾದ ಚಲುವರಾಯಸ್ವಾಮಿ ಒಂದು ʻರಾಜತಂತ್ರʼವನ್ನು ಬಳಸಿದರೆಂದು ತೋರುತ್ತದೆ. ʼಕಾಡಿ ಬೇಡಿ ಊಟ ಪಡೆಯುವ ಇವರ ಕಾಟವನ್ನು ತಾಳಲಾರದೆ, ಸಾಮಾನ್ಯವಾಗಿ ಸಮ್ಮೇಳನಕ್ಕೆ ಬಂದವರ ಪೈಕಿ ಶೇಕಡಾ ಎಂಬತ್ತು ತೊಂಬತ್ತರಷ್ಟು ಜನರು ಜಾಗ ಖಾಲಿಮಾಡಿ ಊರಿಗೆ ಹೊರಟುಹೋದ ಮೇಲೆ ಕೊನೆಯ ದಿನದ ರಾತ್ರಿ ಊಟಕ್ಕೆ ಬೇಯಿಸಿದ ಮೊಟ್ಟೆಯನ್ನು ನೀಡುವ ವ್ಯವಸ್ಥೆಮಾಡಿದರೆಂದು ತೋರುತ್ತದೆ. ಇದನ್ನೇ ʻಹೋರಾಟದ ಅಪ್ರತಿಮ ಜಯʼವೆಂದು ಇವರೆಲ್ಲ ತಮ್ಮ ವಿಜಯೋತ್ಸವ ಆಚರಿಸತೊಡಗಿದರು. ಈ ಆಹಾರ ವಿತರಣೆಯನ್ನು ಹಲವು ಪತ್ರಿಕೆಗಳು ಹಲವು ರೀತಿ ಬರೆದವು. ಈ ಮೊಟ್ಟೆ ವಿತರಣೆ ಸಮ್ಮೇಳನದ ಸ್ವಾಗತ ಸಮಿತಿಯ ಅಧಿಕೃತ ಕೌಂಟರ್‌ ಗಳಲ್ಲಿಯೇ ಆಯಿತಾದ್ದರಿಂದ ಇದನ್ನು ಸಮಿತಿಯ ʼಆಫಿಸಿಯಲ್‌ ಲಂಚ್‌ʼ ಎಂದೇ ಒಂದು ಪ್ರಸಿದ್ಧ ಇಂಗ್ಲಿಷ್‌ ಪತ್ರಿಕೆ ವರದಿಮಾಡಿತು. ಆದರೆ ಈ ʼಅಧಿಕೃತ ಮಾಂಸಾಹಾರ ನೀಡಿಕೆʼ ಎಷ್ಟರಮಟ್ಟಿಗೆ ಅಧಿಕೃತವಾಗಿತ್ತು ಎನ್ನುವುದನ್ನೂ ನಾವು ಅವಲೋಕಿಸಬೇಕು.

ಸ್ವಾಗತ ಸಮಿತಿಯ ಅಧ್ಯಕ್ಷರಾದ  ಚಲುವರಾಯಸ್ವಾಮಿಯವರು ಈ ಹೋರಾಟಗಾರರೊಂದಿಗೆ ಚರ್ಚೆ ನಡೆಸಿ ಬಾಡೂಟಕ್ಕೆ ಬದಲಾಗಿ ಬೇಯಿಸಿದ ಮೊಟ್ಟೆಯನ್ನು ಕೊಡುವ ವ್ಯವಸ್ಥೆಯನ್ನು ಮಾಡಿ ಅದನ್ನೂ ಬಹುತೇಕ ಸಮ್ಮೇಳನಕ್ಕೆ ಬಂದವರು ಹೊರಟುಹೋದ ಮೇಲೆ ಕೊನೆಗೆ ಕೊಡಲು ಮಾಡಿದ್ದು ಬಹುಶಃ ಸಮ್ಮೇಳನದ ಸಮಿತಿಯ ಸಾಮೂಹಿಕ ನಿರ್ಣಯವಾಗಿರದೇ, ಅನವಶ್ಯಕ ಗಲಾಟೆಯನ್ನು ತಪ್ಪಿಸಿಕೊಳ್ಳಲು ಮತ್ತು ಒಟ್ಟಿನಲ್ಲಿ ಎಲ್ಲರನ್ನೂ ಸಮಾಧಾನದಿಂದ ಸಾಗುಹಾಕಲು ಅವರು ತಮ್ಮ ಸ್ಥಾನಬಲದಿಂದ ಮಾಡಿದ ಒಂದು ಏರ್ಪಾಡು ಆಗಿತ್ತು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಹೋರಾಟಗಾರರು ಕೂಡ ಆಗಲೇ ಹೋರಾಡಿ ಹೋರಾಡಿ ಸುಸ್ತಾಗಿದ್ದರು. ಮೊದಮೊದಲು ಬಾಡೂಟವೇ ಬೇಕು ಎಂದು ಇವರು ಹಟಮಾಡಿದ್ದರು. ನಂತರದಲ್ಲಿ ಒಂದೊಂದು ಕಬಾಬ್‌ ಪೀಸ್‌ ಕೊಟ್ಟರೆ ಸಾಕು ಎಂಬಲ್ಲಿಗೆ ಬಂದರು. ಕೊನೆಕೊನೆಗಂತೂ ಒಂದು ಮೊಟ್ಟೆಕೊಟ್ಟರೂ ಸಾಕು ಎನ್ನುವ ಹಂತ ತಲುಪಿದ್ದರು! ಹಾಗಾಗಿ ಮೊಟ್ಟೆ ಸಿಕ್ಕತಕ್ಷಣ ಧನ್ಯತೆಯ ಭಾವ ಆವರಿಸಿತು.  ಅಂತೂ ಸಮ್ಮೇಳನ ಮುಗಿಯಿತು. ಹೋರಾಟಗಾರರಿಗೆ ಎಲ್ಲೇಲ್ಲೋ ಇರುವ ʻನಾಡಬಾಂಧವರುʼ ಅದರಲ್ಲಿಯೂ ವಿಶೇಷವಾಗಿ ʻಬಾಡುಬಾಂಧವರುʼ ಶುಭಕೋರಿ ಅಭಿನಂದನೆಗಳ ಮಹಾಪೂರವನ್ನೇ ಹರಸಿದರು. ಶತಶತಮಾನಗಳಿಂದ ನಡೆದು ಬಂದ ಅಸಮಾನತೆಗೆ ಸೆಡ್ಡು ಹೊಡೆದು ಹೋರಾಡಿ ಯಶಸ್ವಿಯಾಗಿ ಸಮಾನತೆಗೆ ಮುನ್ನುಡಿ ಬರೆದ ಕೀರ್ತಿಗೆ ಈ ಬಾಬದವರು ಪಾತ್ರರಾದರು. ಇಲ್ಲಿಗೀಕಥೆ ಮುಗಿಯಿತು.

ಎಳೆಗರುಂ ಎತ್ತಾಗದೇ? ಮೊಟ್ಟೆ ಮರಿಯಾಗದೇ?

ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತುʼ ಅನ್ನುವಂತೆ ಮಂಡ್ಯ ಸಮ್ಮೇಳನದಲ್ಲಿ ಬಾಡೂಟವಲ್ಲದಿದ್ದರೂ ಮೊಟ್ಟೆ ಸಿಕ್ಕಿತು ಎನ್ನುವುದಂತೂ ಸತ್ಯ. ಇದನ್ನು ಇಡೀ ಸಮ್ಮೇಳನದಲ್ಲಿಯೇ ಯಶಸ್ವಿಯಾಗಿ ಜರುಗಿದ ಗೋಷ್ಠಿ ಎಂದು ಹಿರಿಯ ಚಿಂತಕರೊಬ್ಬರು ಬಣ್ಣಿಸಿದ್ದಾರೆ. ಇನ್ನೊಬ್ಬ ಹಿರಿಯರು, ಈ ವರ್ಷ ಮೊಟ್ಟೆ ಮುಂದಿನ ವರ್ಷ ಅದರ ಅಮ್ಮ” ಎಂದು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬುದು ಬಹಳಷ್ಟು ಸಲ ಚರ್ಚೆಗೆ ಬಂದಿದ್ದರೂ ಅಂತಿಮ ತೀರ್ಪು ಬಂದಂತೆ ತೋರುವುದಿಲ್ಲ. ಸಧ್ಯಕ್ಕೆ ಈ ಮೊಟ್ಟೆ ಸಸ್ಯಾಹಾರ ಮತ್ತು ಮಾಂಸಾಹಾರ ಇವುಗಳ ಮಧ್ಯದಲ್ಲಿದೆ. ಮಾಂಸಹಾರವನ್ನು ಸೇವಿಸದ ಅನೇಕರು ಮೊಟ್ಟೆಯನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅವರೆಲ್ಲ ಮೊಟ್ಟೆಯನ್ನು ಸಸ್ಯಾಹಾರವೆಂದೇ ಹೇಳುವುದುಂಟು. ಮಾಂಸಾಹಾರ ಸೇವಿಸುವವರಿಗೆ ಇದನ್ನು ಒರೆಗೆ ಹಚ್ಚಿ ನೋಡುವ ಅವಶ್ಯಕತೆಯೇ ಬರುವುದಿಲ್ಲ.  ಶಾಲೆಗಳಲ್ಲಿ ಅಪೌಷ್ಟಿಕತೆಯ ನಿವಾರಣೆಗೆಂದು ಈಗಾಗಲೇ ಮೊಟ್ಟೆಯನ್ನು ಕೊಡುವ ಕ್ರಮವೂ ಇದೆ. ಇದಕ್ಕೆ ಒಂದಿಷ್ಟು ವಿರೋಧ ಬಂದರೂ ಈಗ ಎಲ್ಲರೂ ಅದಕ್ಕೆ ಹೊಂದಿಕೊಂಡಿದ್ದಾರೆ.  ಅದನ್ನು ಮಾಂಸಾಹಾರ ಎಂದು ಪರಿಗಣಿಸುವವರ ಸಂಖ್ಯೆ ಕೂಡ ಈಗ ಬಹಳಷ್ಟು ಕಡಿಮೆ ಆಗಿದೆ. ಹೀಗಿರುವಾಗ ಮೊಟ್ಟೆಯನ್ನು ಮಾಂಸಾಹಾರವೆಂದೇ ಈ ಹೋರಾಟಗಾರರು ತಮ್ಮಕಡೆಗೆ ಎಳೆದುಕೊಂಡು ಸಂಭ್ರಮಿಸಿದ್ದಾರೆ. ತಮ್ಮ ʻಹೋರಾಟ ಯಶಸ್ವಿಯಾಯಿತುʼ ಅನ್ನಿಸಿಕೊಳ್ಳಲು ಈ ಹಂತದಲ್ಲಿ ಇದು ಅವರಿಗೆ ತೀರಾ ಅವಶ್ಯಕವೂ ಆಗಿದೆ. ಹಾಗಾಗಿ ಅದನ್ನು ಬಾಡೂಟಕ್ಕೆ ಮುನ್ನುಡಿ ಎಂದೇ ಬಣ್ಣಿಸಲಾಗಿದೆ. ಸಸ್ಯಾಹಾರದಿಂದ ಮಾಂಸಾಹಾರಕ್ಕೆ ಶಿಫ್ಟ್‌ ಆಗುವವರು ಮೊದಲು ಸೇವಿಸುವುದು ಮೊಟ್ಟೆಯೇ ಆದ್ದರಿಂದ ಇವರ ತರ್ಕಕ್ಕೂ ಒಂದು ಅರ್ಥವಿರುವುದನ್ನು ತಳ್ಳಿಹಾಕಲಿಕ್ಕೆ ಆಗುವುದಿಲ್ಲ.

ನಡುಗನ್ನಡದ ಪ್ರಸಿದ್ಧ ಕವಿ ಪುಲಿಗೆರೆಯ ಸೋಮನಾಥ ತನ್ನ ಸೋಮೇಶ್ವರ ಶತಕದ ಪದ್ಯವೊಂದರಲ್ಲಿ ʼಎಳೆಗರುಂ ಎತ್ತಾಗದೇ?ʼ ಎಂದು ಕೇಳುತ್ತಾನೆ. ಅದೇ ರೀತಿ ಈ ಬಾಬದವರು ʼಮೊಟ್ಟೆ ಮರಿಯಾಗದೇ?ʼ ಎಂದು ಕೇಳುತ್ತಿದ್ದಾರೆ. ಇಂದಿನ ಕರು ನಾಳೆ ಎತ್ತಾಗಿ ಬೆಳದೇ ಬೆಳೆಯುತ್ತದೆ ಎನ್ನುವುದು ಸೋಮನಾಥನ ವಿ‍ಶ್ವಾಸ. ಅದೇ ರೀತಿ ಮಂಡ್ಯದಲ್ಲಿ ಕೊಡಲ್ಪಟ್ಟ ಮೊಟ್ಟೆ ಬಳ್ಳಾರಿಯ ಸಮ್ಮೇಳನದ ವೇಳೆಗೆ ಮರಿಯಾಗಿ ಏಕೆ ಪೊಗದಸ್ತಾದ ಕೋಳಿಯಾಗಿಯೇ ಸಿಗುತ್ತದೆ ಎನ್ನುವುದು ಈ ಬಾಬಾದವರ ಮತ್ತು ಕೆಲವು ಮಾಂಕಮಿಗಳ ಅಚಲ ವಿಶ್ವಾಸ.  ಆದರೆ ಈ ಮೊಟ್ಟೆಯ ವಿಶೇಷತೆ ಎಂದರೆ ಅದಕ್ಕೆ ಒಳಗಿನಿಂದ ಒತ್ತಡ ಉಂಟಾದರೆ ಒಡೆದು ಮರಿಯಾಗಿ ಕೋಳಿಯಾಗಿ ಬೆಳೆದು ಜೀವವೊಂದರ ಉಗಮವಾಗುತ್ತದೆ. ಅದೇ ಒತ್ತಡ ಹೊರಗಿನಿಂದ ಬಿದ್ದರೆ ಅದು ಅದು ಒಡೆದು ಜೀವವೊಂದರ ನಾಶವಾಗುತ್ತದೆ.  ಹಾಗಾಗಿ ಈ ಒತ್ತಡ ಯಾವ ಕಡೆಯಿಂದ ಬೀಳುತ್ತದೆ ಅನ್ನುವುದರ ಮೇಲೆ ಈ ಸಮ್ಮೇಳನದ ಮೊಟ್ಟೆ ಮುಂದಿನ ಸಮ್ಮೇಳನದ ವೇಳೆಗೆ ಕೋಳಿಯಾಗುತ್ತದೆಯೋ ಇಲ್ಲವೇ ಸುಮ್ಮನೆ ಹೋಳಾಗುತ್ತದೆಯೋ ಎಂಬುದು ನಿಂತಿದೆ.

ಯಾರು ಏನೇ ಹೋರಾಡಲಿ, ಒತ್ತಡ ತರಲಿ ಸಾಹಿತ್ಯ ಸಮ್ಮೇಳಗಳಲ್ಲಿ ಊಟದಲ್ಲಿ ಏನನ್ನು ಕೊಡಬೇಕು ಮತ್ತು ಏನನ್ನು ಕೊಡಬಾರದು ಎಂಬುದನ್ನು ಅಂತಿಮವಾಗಿ ನಿರ್ಧರಿಸುವಂಥವು ಆಯಾ ಸಮ್ಮೇಳನಗಳ ಸ್ವಾಗತ ಸಮಿತಿಗಳು. ಎಲ್ಲರಿಗೂ ತಿಳಿದಿರುವಂತೆ ಮಂಡ್ಯ ಬಹುಜನ ಮಾಂಕಮಿಗಳು ಇರುವ ನಾಡು. ಅಲ್ಲಿಯೇ ಈ ಬಾಡೂಟದ ಬೇಡಿಕೆ ಸರಿಯಾಗಿ ಈಡೇರಲಿಲ್ಲ ಎಂದರೆ ಮಾಂಸಾಹಾರವನ್ನು ನಿಷಿದ್ಧ, ವರ್ಜ್ಯ, ತ್ಯಾಜ್ಯ ಎಂದು ಭಾವಿಸುವ ಜನಸಮುದಾಯಗಳು ಹೆಚ್ಚಿರುವ ಮತ್ತು ಈ ಸಮುದಾಯಗಳ ನಾಯಕರು, ಸ್ವಾಮಿಗಳು ಇಂಥವರೇ ಸ್ವಾಗತ ಸಮಿತಿಯ ಆಯಕಟ್ಟಿನ ಸ್ಥಳಗಳಲ್ಲಿ ಸಹಜವಾಗಿ ಇರಬಹುದಾದ ಬಳ್ಳಾರಿಯಲ್ಲಿ  ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವ ವ್ಯವಸ್ಥೆಆಗುತ್ತದೆ ಎಂಬುದನ್ನು ನಿರೀಕ್ಷಿಸುವುದು ಕಷ್ಟ. ಮಂಡ್ಯದಲ್ಲಿ ನಡೆದ ಈ ಆಹಾರ ಸಂಸ್ಕೃತಿ ಚರ್ಚೆ ಒಮ್ಮುಖವಾಗಿತ್ತು. ಇಬ್ಬರೋ ಮೂವರೋ ಬಿಟ್ಟರೆ ಈ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲ ಹೋರಾಟಗಾರರೂ ಚಿಂತಕರೂ ಮಾಂಕಮಿಗಳೆ!  ಮಾಂಸಾಹಾರ ನಿಷಿದ್ಧವೆಂದು ಭಾವಿಸುವ ಜನಸಮುದಾಯಗಳ ಯಾವ ನಾಯಕರೂ, ಮಠಗಳ ಸ್ವಾಮಿಗಳೂ ಚಿಂತಕರೂ ಇಲ್ಲಿ ಪ್ರವೇಶ ಪಡೆಯಲಿಲ್ಲ. ಆದರೆ ಇದೇ ರೀತಿ ಬಳ್ಳಾರಿಯಲ್ಲೂ ಆಗುತ್ತದೆ ಎಂದು ಹೇಳುವುದು ಕಷ್ಟ. ನಿಜವಾದ ಹೋರಾಟ-ತಾಕಲಾಟ ಅಲ್ಲಿ ನಡೆಯಬಹುದು. ಹಾಗಾಗಿ ಮಂಡ್ಯದ ಮೊಟ್ಟೆ ಅಲ್ಲಿ ಮರಿಯಾಗದೆ ಬಾಡೂಟದ ಕನಸು ನನಸಾಗದೇ ಹೋಗಬಹುದು; ಮಂಡ್ಯದಲ್ಲಿ ʻಚಿಗುರಿದ ಕನಸುʼ ಬಳ್ಳಾರಿಯ ಬಿಸಿಲಿಗೆ ʻಕಮರಿದ ಕನಸುʼ ಆಗಿಯೂ ಬಿಡಬಹುದು. ಅಥವಾ ಮೊಟ್ಟೆ ಕೋಳಿಯಾಗಿ ಬೆಳೆಯುವ, ಅಥವಾ ಒಡೆದು ಹಾಳಾಗುವ ಎರಡೂ ಆಯ್ಕೆಗಳು ನಿರಾಕರಿಸಲ್ಪಟ್ಟು ಮೊಟ್ಟೆ ಮೊಟ್ಟೆಯಾಗಿಯೇ ಮುಂದುವರೆಯಲೂ ಬಹುದು. ಯಾವುದಕ್ಕೂ ಅದನ್ನು ನೋಡಲು ಮುಂದಿನ ಸಮ್ಮೇಳನ ಬರುವವರೆಗೂ ಕಾಯಬೇಕು ಅಷ್ಟೆ.

ಮಾಂಸಾಹಾರದ ಬೇಡಿಕೆ ಅಗತ್ಯವೇ? ಅಥವಾ ಅಪೇಕ್ಷೆಯೇ

ಮಂಡ್ಯದಲ್ಲಿ ಕೆಲವು ಮಾಂಕಮಿಗಳು ಸೇರಿ ರಚಿಸಿಕೊಂಡ ಬಾಬ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಇರಿಸಿದ್ದ ಬೇಡಿಕೆ ಒಂದು ಅಗತ್ಯವಾಗಿತ್ತೇ ಅಥವಾ ಅಪೇಕ್ಷೆಯಾಗಿತ್ತೇ ಎಂಬುದನ್ನು ನಾವು ಗಮನಿಸಬೇಕು. ನಾನು ಈಗಾಗಲೇ ಈ ಸಂಬಂಧದ ಬರೆಯಲಾದ ಇನ್ನೊಂದು ಲೇಖನದಲ್ಲಿ ಈ ಬಗ್ಗೆ ವಿವರವಾಗಿ ಚರ್ಚೆಮಾಡಿದಂತೆ ಮನುಷ್ಯರಲ್ಲಿ ಮಾಂಸಹಾರಿಗಳು ಎಂಬುವವರು ಇಲ್ಲವೇ ಇಲ್ಲ. ಇರುವವರು ಸಸ್ಯಾಹಾರಿಗಳು ಮತ್ತು ಮಿಶ್ರಾಹಾರಿಗಳು ಮಾತ್ರ. ಸಸ್ಯಾಹಾರಿಗಳಿಗೆ ಸಸ್ಯಾಹಾರ ಅಗತ್ಯ ಮತ್ತು ಅನಿವಾರ್ಯ. ಆದರೆ ತಮ್ಮನ್ನು ಮಾಂಸಾಹಾರಿಗಳೆಂದು ಕರೆದುಕೊಳ್ಳುವ ವಾಸ್ತವದಲ್ಲಿ ಮಿಶ್ರಾಹಾರಿಗಳಾಗಿರುವ ಮಾಂಕಮಿಗಳಿಗೆ ಮಾಂಸಾಹಾರ ಅಗತ್ಯ ಮತ್ತು ಅನಿವಾರ್ಯವಲ್ಲ. ಅದು ಕೇವಲ ಅವರ ಅಪೇಕ್ಷೆ. ಸಸ್ಯಾಹಾರವಿಲ್ಲದಿದ್ದರೆ ಸಸ್ಯಾಹಾರಿ ತೊಂದರೆಗೊಳಗಾಗುವಂತೆ ಇವರು ಮಾಂಸಾಹಾರವಿಲ್ಲದಿದ್ದರೆ ತೊಂದರೆಗೆ ಒಳಗಾಗುವುದಿಲ್ಲ. ತಕ್ಷಣ ಸಸ್ಯಾಹಾರಕ್ಕೆ ಹೊರಳಿಕೊಳ್ಳಲು ಅವರಿಗೆ ಅವಕಾಶಗಳಿರುತ್ತವೆ. ಇದೇ ಕಾರಣದಿಂದ ಇವರ ಬೇಡಿಕೆ ಸಾರ್ವಜನಿಕ ಮಾನ್ಯತೆ ಪಡೆಯುವಲ್ಲಿ ಸಾಕಷ್ಡು ಸಲ ವಿಫಲವಾಗುತ್ತದೆ. ಇವರ ಅಪೇಕ್ಷೆಯು ಬಾಯಿ ಚಪಲಕ್ಕೆ ಹಾಗೆ ಮಾಡುತ್ತಾರೆ ಎಂಬ ಉಪೇಕ್ಷೆಗೂ ಒಳಗಾಗುವುದುಂಟು.

ಇವರು ಈ ಸಂಬಂಧ ಮುಂದುಮಾಡಿರುವ ತಾತ್ವಿಕತೆಯನ್ನೂ ವಿಮರ್ಶೆಗೆ ಒಳಪಡಿಸಿದರೆ ಈ ತಾತ್ವಿಕತೆಯೂ ಹೊರಗೆ ಗಟ್ಟಿಯಾಗಿರುವಂತೆ ಕಂಡರೂ ಒಳಗೆ ಟೊಳ್ಳಾಗಿರುವುದನ್ನು ನಾವು ಕಂಡುಕೊಳ್ಳಬಹುದು. ʻಸಸ್ಯಾಹಾರಿಗಳು ಮಾಂಸಾಹಾರವನ್ನು ತುಚ್ಚವಾಗಿ ಕಾಣುತ್ತಾರೆ. ಅದು ನಮಗೆ ಮಾಡುವ ಅವಮಾನʼ ಎಂಬ ಇವರ ಆರೋಪವನ್ನು ಮೊದಲು ನೋಡಬಹುದು. ಹೌದು ತಾತ್ವಿಕವಾಗಿ ಯಾವ ಆಹಾರವನ್ನೂ ಯಾರೂ ತುಚ್ಛವಾಗಿ ಕಾಣಬಾರದು ಎಂಬುದು ನಾವೆಲ್ಲ ರೂಢಿಸಿಕೊಳ್ಳಬೇಕಾಗಿರುವ ಒಂದು ಆದರ್ಶ. ಆದರೆ ವಾಸ್ತವ ಬೇರೆಯೇ ಆಗಿದೆ. ಕೇವಲ ಸಸ್ಯಾಹಾರಿಗಳು ಮಾತ್ರವಲ್ಲ ಮಾಂಸಾಹಾರಿಗಳೂ ಕೂಡ ಕೆಲವು ಪದಾರ್ಥಗಳನ್ನು ʼತಾಜ್ಯʼ ʼವರ್ಜ್ಯʼ ʼನಿಷೇಧಿತʼ ಎಂದು ಪರಿಗಣಿಸುತ್ತಾರೆ ಮತ್ತು ಅವುಗಳ ಜೊತೆಗೆ ತಮ್ಮ ಆಹಾರವನ್ನು ಇಟ್ಟುಕೊಂಡು ಸೇವಿಸುವುದಕ್ಕೆ ನಿರಾಕರಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಒಂದು ವೇಳೆ ಸಸ್ಯಾಹಾರಿಗಳು ಮಾಂಸಾಹಾರವನ್ನು ತುಚ್ಛವಾಗಿ ಕಾಣುತ್ತಾರೆ ಎಂಬುದನ್ನು ವಾದಕ್ಕೆ ಒಪ್ಪಿಕೊಂಡರೂ, ಮಾಂಸಾಹಾರವನ್ನು ಎಂದೂ ಆಹಾರವೆಂದು ಪರಿಗಣಿಸದ ಸಸ್ಯಾಹಾರಿಗಳು ಮಾಂಸಾಹಾರದ ಬಗ್ಗೆ ತುಚ್ಛ ಭಾವನೆ ಇಟ್ಟುಕೊಂಡಿರುವುದು ದೊಡ್ಡ ತಪ್ಪಾಗುತ್ತದೆಯೇ ಅಥವಾ ತಾವು ಊಟಮಾಡುವ ಎರಡು ಆಹಾರಗಳಲ್ಲಿ ಒಂದಾದ ಮಾಂಸಾಹಾರದ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ಇನ್ನೊಂದಾದ ಸಸ್ಯಾಹಾರವನ್ನು ತುಚ್ಛವೆಂದು ಈ ಮಾಂಕಮಿಗಳು ಪರಿಗಣಿಸುವುದು ದೊಡ್ಡ ತಪ್ಪಾಗುತ್ತದೆಯೇ? ತಾವು ಯಾವ ಆಹಾರವನ್ನೂ ತುಚ್ಛವೆಂದು ಪರಿಗಣಿಸುವುದಿಲ್ಲವೆಂದು ಈ ಮಾಂಕಮಿಗಳು ಹೇಳಬಹುದು. ಆದರೆ ಅವರ ಈ ಮಾತು ನಂಬಿಕೆಗೆ ಅರ್ಹವಲ್ಲ. ಏಕೆಂದರೆ ತಾವು ವರ್ಷದಲ್ಲಿ ಸೇವಿಸುವ ಒಟ್ಟು ಆಹಾರದಲ್ಲಿ ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಹೆಚ್ಚು ಇದ್ದರೂ, ಅಂತಹ ಸಸ್ಯಾಹಾರದ ಶ್ರೇಷ್ಠಗುಣಮಟ್ಟದ ಆಹಾರವನ್ನು ಕೊಡುವ ವ್ಯವಸ್ಥೆಮಾಡಲಾಗಿದ್ದರೂ ಅದನ್ನು ನಿರಾಕರಿಸಿ ಅಲ್ಲಿ ಇಲ್ಲದ ಮತ್ತು ಇವರು ಆವಾಗ ಈವಾಗ ಸ್ವೀಕರಿಸುವ ಮಾಂಸಾಹಾರಕ್ಕೆ ಬೇಡಿಕೆ ಇಡುವ ಅಗತ್ಯವಾದರೂ ಏನಿರುತ್ತದೆ? ಹಾಗಾಗಿ ಈ ವಿಷಯದಲ್ಲಿ ಸಸ್ಯಾಹಾರಿಗಳನ್ನು ದೂರುವ ಮೊದಲು ಇವರು ತಮ್ಮ ಆಲೋಚನೆಯನ್ನು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ.

ಇದರ ಜೊತೆಗೆ ಈ ಮಾಂಕಮಿಗಳ ಇನ್ನೊಂದು ಸಮಸ್ಯೆ ಎಂದರೆ ತಾವು ಊಟಮಾಡುವ ಮಾಂಸಾಹಾರದ ಬಗ್ಗೆಯೂ ಆತ್ಮಪೂರ್ವಕವಾದ ಗೌರವ ಇಟ್ಟುಕೊಳ್ಳದಿರುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೊಡುವ ಆಹಾರಗಳಲ್ಲಿ ಇವರಿಗೆ ಮಾಂಸಾಹಾರ ಬೇಕು. ಸಸ್ಯಾಹಾರ ಇವರಿಗೆ ಕನಿಷ್ಠ. ಆದರೆ ಮನೆಗಳಲ್ಲಿ ಇವರ ವರ್ತನೆ ಇದಕ್ಕೆ ವಿರುದ್ಧವಾಗಿರುವುದೇ ಹೆಚ್ಚು. ಅನೇಕ ಮಾಂಕಮಿಗಳು ಶ್ರಾವಣ, ಮತ್ತು ಅವರು ʼಪವಿತ್ರʼವೆಂದು ಭಾವಿಸುವ ಕೆಲವು ದಿನ ಮಾಂಸಾಹಾರವನ್ನು ಸೇವಿಸದಿರುವುದು, ಸೇವಿಸುವುದಾದರೂ ಮನೆಯ ಹೊರಗೆ ಹೋಗಿ ಅದನ್ನು ಬೇಯಿಸಿಕೊಳ್ಳುವುದು ಇದೆ. ಈ ನಡೆವಳಿಕೆ ಇವರ ಇಬ್ಬಂಗಿತನವನ್ನು ತೋರಿಸುವುದಿಲ್ಲವೇ? ತಾವು ಹೋರಾಟ ಮಾಡಿ ಕೇಳುವ ಮಾಂಸಾಹಾರವನ್ನು ತಾವೇ ಕನಿಷ್ಠ ಎಂದು ಒಪ್ಪಿಕೊಂಡಂತೆ ಇದು ಆಗುವುದಿಲ್ಲವೇ? ಇವೆಲ್ಲವನ್ನೂ ನೋಡಿದಾಗ ನಮಗೆ ವೇದ್ಯವಾಗುವ ಸಂಗತಿ ಎಂದರೆ ಮಾಂಸಾಹಾರ ಇವರ ಅನನ್ಯತೆಯೂ ಅಲ್ಲ. ಅಭಿಮಾನದ ಸಂಗತಿಯೂ ಅಲ್ಲ. ಅದು ಕೇವಲ ಬಾಯಿಚಪಲಕ್ಕಾಗಿನ ಇವರ ಬೇಡಿಕೆ ಮಾತ್ರ. ಜನರ ಚಪಲವನ್ನು ಈಡೇರಿಸುವುದು ಸಂಘಟಕರಿಗೆ ಕಷ್ಟವಾದ್ದರಿಂದ ಇವರ ಬೇಡಿಕೆ ಅಷ್ಟುಸುಲಭವಾಗಿ ಮಾನ್ಯತೆ ಪಡೆಯುವುದಿಲ್ಲ. ಅವರು ಅನಗತ್ಯವಾಗಿ ಅದಕ್ಕೆ ʼಆಹಾರ ಸಂಸ್ಕೃತಿʼ ʼಆಹಾರಕ್ರಾಂತಿʼ ʼಬ್ರಾಹ್ಮಣೀಕರಣದ ನಿರಾಕರಣೆʼ ʼತಳಸಮುದಾಯದ ಅನನ್ಯತೆʼ ಇತ್ಯಾದಿ ಭಾರವಾದ ಪದಪುಂಜಗಳನ್ನು ಬಳಸಿ ಸಮಸ್ಯೆಯೇ ಅಲ್ಲದ ಒಂದು ಚಿಕ್ಕ ಸಂಗತಿಯನ್ನು ದೊಡ್ಡ ಸಮಸ್ಯೆಯಾಗಿ ಮಾಡುವುದು ಸರಿಯಲ್ಲ.

ಇವರು ಬಳಕೆಗೆ ತಂದ ʼನಮ್ಮ ಆಹಾರ ನಮ್ಮ ಹಕ್ಕುʼ ಎಂಬ ಹೇಳಿಕೆಗೆ ಇಲ್ಲಿ ಏನು ಅರ್ಥವಿದೆ?  ಹಕ್ಕಿನ ಪ್ರಶ್ನೆ ಬರುವುದು ಯಾರದರೂ ನೀವು ಮಾಂಸಾಹಾರವನ್ನು ಸೇವಿಸಕೂಡದುʼ ಎಂದು ಮಾಂಸಾಹಾರಿಗಳ ಮೇಲೆ ಒತ್ತಡ ತಂದಾಗ ಮಾತ್ರ. ಅದನ್ನು ಯಾರೂ ಮಾಡುತ್ತಿಲ್ಲವಾದ್ದರಿಂದ ಅದು ಇಲ್ಲಿ ಅಪ್ರಸ್ತುತ. ಸಮ್ಮೇಳನದ ಸಂಘಟಕರು ಮಾಂಸಾಹಾರನ್ನು ಕೊಡಲೇ ಬೇಕು ಎಂದು ಕೇಳುವುದು ಇವರ ಹಕ್ಕಾಗುವುದಿಲ್ಲ. ನಾವು ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ನಮ್ಮ ತೆರಿಗೆ ಹಣವನ್ನು ಸರ್ಕಾರ ಸಮ್ಮೇಳನಕ್ಕೆ ಕೊಡುತ್ತದೆ ಹಾಗಾಗಿ ನಮಗೆ ಅದನ್ನು ಕೇಳುವ ಹಕ್ಕು ಇದೆ ಎಂದು ಕೆಲವರು ವಾದಿಸಬಹುದು. ಎಲ್ಲದಕ್ಕೂ ನಾವು ಕೊಡುವ ತೆರಿಗೆಯನ್ನು ಮುಂದುಮಾಡಿ ಕೇಳಲು ಬರುವುದಿಲ್ಲ. ಹಾಗೆ ಮಾಡಲು ಬರುತ್ತದೆ ಎನ್ನುವುದಾದರೆ ಸರ್ಕಾರದ ಅನುದಾನವನ್ನು ಪಡೆಯುವ ಮುಜರಾಯಿ ಇಲಾಖೆಗಳ ದೇವಸ್ಥಾನಗಳಲ್ಲಿ ಕೂಡ ಎರಡೂ ಬಗೆಯ ಆಹಾರ ಇರಬೇಕು ಎಂದು ನಾವು ವಾದಿಸಬಹುದು. ಅಷ್ಟೇ ಏಕೆ ಸರಾಯಿ ಕುಡಿಯುವವರು (ಅವರು ನಮ್ಮನ್ನು ʻಕುಡುಕರುʼ ಎನ್ನಕೂಡದು, ʼಮದ್ಯಪ್ರಿಯರುʼ ಎನ್ನಬೇಕು ಎಂದು ಈಗಾಗಲೇ ತಾಕೀತು ಮಾಡಿದ್ದಾರೆ) ʼನಿಮ್ಮೆಲ್ಲರಿಗಿಂತಲೂ ಸರ್ಕಾರಕ್ಕೆ ಹೆಚ್ಚು ತೆರಿಗೆ ಕೊಡುವವರು ನಾವು. ನಮ್ಮಿಂದಲೇ ಸರ್ಕಾರಗಳು ನಡೆಯುವುದು, ಹಾಗಾಗಿ ನಮ್ಮ ಬೇಡಿಕೆಗಳಿಗೂ ಮಾನ್ಯತೆಯನ್ನು ಸಮ್ಮೇಳನ ನೀಡಿ ಸಮ್ಮೇಳನದಲ್ಲಿ, ʼಎಣ್ಣೆʼಕೊಡುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೆ ಇಟ್ಟರೆ ಅದನ್ನು ಕುಚೋದ್ಯದ ಬೇಡಿಕೆ ಎಂದು ತಳ್ಳಿಹಾಕಲು ಬರುತ್ತದೆಯೇ? ಅವರ ಬೇಡಿಕೆಗೂ ಮಾನ್ಯತೆ ಸಿಕ್ಕರೆ ಸಮ್ಮೇಳನ ನಿಜಾರ್ಥದಲ್ಲಿ ʻರಂಗಾಗುʼವುದಿಲ್ಲವೇ? ಹಾರಾಟದ ಜೊತೆಗೆ ತೂರಾಟವೂ ಸೇರಿಕೊಳ್ಳುವುದಿಲ್ಲವೇ? ಹಾಗಾಗಿ ನಾವು ಕೊಡುವ ತೆರಿಗೆಯನ್ನು ಮುಂದುಮಾಡಿ ಇದನ್ನು ಹಕ್ಕಾಗಿ ಪ್ರತಿಪಾದಿಸಬಾರದು.

ಎರಡೂಟವೆಂಬುದು ಇಬ್ಬಾಗ ಮಾಡದೇ?

ಕೆಲವರು ಸಮ್ಮೇಳನಗಳಲ್ಲಿ ಸಸ್ಯಾಹಾರ ಮಾಂಸಾಹಾರ ಎರಡೂ ಇರಬೇಕು. ಬೇಕಾದವರು ಬೇಕಾದದ್ದನ್ನು ಹಾಕಿಸಿಕೊಂಡು ಊಟ ಮಾಡಲು ಅವಕಾಶ ಇರಬೇಕು ಎಂಬ ಸಲಹೆ ನೀಡಿದ್ದಾರೆ. ʻನಾವೇನೂ ಸಸ್ಯಾಹಾರ ಇರಲೇಕೂಡದು ಎಂದು ಕೇಳುತ್ತಿಲ್ಲ. ಸಸ್ಯಾಹಾರದ ಜೊತೆಗೆ ಮಾಂಸಾಹಾರವೂ ಇರಲಿʼ ಎಂದು ಕೇಳುತ್ತಿದ್ದೇವೆ ಎಂದು ಈ ಬಾಬದವರೂ ಹೇಳುತ್ತಿದ್ದಾರೆ. ಹೀಗೆ ಎರಡೂ ಬಗೆಯ ಊಟವಿರಲಿ ಎನ್ನುವಲ್ಲಿ ಕೆಲವರಿಗೆ, ಯಾರಿಗೂ ವಿಶೇಷವಾಗಿ ಸಸ್ಯಾಹಾರಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾಳಜಿಯೂ ಇರಬಹುದು. ಇನ್ನು ಕೆಲವರಿಗೆ ʻಅವರಿಗೆ ಒಂದು ಸಿಕ್ಕರೆ ನಮಗೆ ಎರಡೂ ಸಿಗುತ್ತದೆʼ ಎಂಬ ಒಳ ಆಸೆಯೂ ಇರಬಹುದು. ಅದು ಏನೇ ಇರಲಿ, ಈ ಎರಡೂಟದ ಸಲಹೆ ಎರಡು ಕಾರಣಕ್ಕೆ ಪುರಸ್ಕಾರಯೋಗ್ಯವಲ್ಲ. ಮೊದಲನೆಯದು ಆರ್ಥಿಕ ಹೊರೆ.  ಸಂಘಟನೆಯ ಸಮಸ್ಯೆ. ಈ ಸಲಹೆ ಕೊಡುವುದು ಸುಲಭ. ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಲ್ಲ. ಲಕ್ಷಾಂತರ ಜನ ಸೇರುವ ಈ ಸಮ್ಮೇಳನದಲ್ಲಿ ಬಂದವರಿಗೆ ಒಂದು ತರಹದ ಅಡುಗೆ ಮಾಡಿ ಬಡಿಸಿ ಕಳಿಸುವುದರಲ್ಲಿಯೇ ಸ್ವಾಗತ ಸಮಿತಿಗಳು ಹೈರಾಣಾಗಿಬಿಡುತ್ತವೆ. ಇನ್ನು ಎರಡಾದರೆ ಅವುಗಳ ಗತಿಯೇನು? ನಾನು ಗಮನಿಸಿದಂತೆ ಈ ಹೋರಾಟ ಮಾಡಿದವರಲ್ಲಿ ಬಹಳಷ್ಟು ಜನ ದೊಡ್ಡ ದೊಡ್ಡ ಸಮ್ಮೇಳನಗಳನ್ನು ಸಂಘಟಿಸಿದವರಲ್ಲ. ಅಷ್ಟೇ ಏಕೆ ಸಮ್ಮೇಳನದ ವೇದಿಕೆ ಮೇಲೆ ತಮ್ಮ ಭಾಷಣವೋ ಇನ್ನೇನೋ ಇದ್ದರೆ ಮಾತ್ರ ಸಮ್ಮೇಳನಕ್ಕೆ ಹೋಗುವವರು. ಹೋಗಿಯೂ ಕೂಡ ಅಲ್ಲಿನ ಲೋಪದೋಷಗಳನ್ನೇ ಒತ್ತುಕೊಟ್ಟು ಎತ್ತಿಕೊಡುವಂಥವರು.  ಸಂಘಟನೆಯ ಕಷ್ಟ ಅರಿತವರಲ್ಲ. ತಮ್ಮ ಮನೆಯಲ್ಲಿ ಒಂದು ಮದುವೆಯನ್ನೋ ಒಂದು ಗೃಹಪ್ರವೇಶವನ್ನೋ ಮಾಡಿ ಒಂದಿಷ್ಟು ಜನರಿಗೆ ಊಟಹಾಕಿದ ವ್ಯಕ್ತಿ ಬೇರೆ ಮನೆಗೆ ಊಟಕ್ಕೆ ಹೋದಾಗ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಹೇಳುವುದು, ಅದು ಬೇಕು ಇದು ಬೇಕು ಎಂದು ಕೇಳುವುದು ಮಾಡುವುದಿಲ್ಲ. ಆದರೆ ತನ್ನ ಮನೆಯಲ್ಲಿ ಎಂದೂ ಒಂದು ಕಾರ್ಯಕ್ರಮ ಮಾಡದೆ ಬರೀ ಬೇರೆಯವರ ಮನೆಗೆ ಊಟಕ್ಕೆ ಹೋಗಿ ಬರುವವನ ಬೇಡಿಕೆಗಳು ಅನಂತವಾಗಿರುತ್ತವೆ ಮತ್ತು ಕೆಲವು ವೇಳೆ ವಿಚಿತ್ರವೂ ಆಗಿರುತ್ತವೆ.

ಇನ್ನೊಂದು, ಈ ಎರಡೂಟದ ಸಲಹೆ ಮೇಲ್ನೋಟಕ್ಕೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವ ಸಲಹೆಯಾಗಿ ಕಾಣುತ್ತದೆಯಾದರೂ ತನ್ನೊಳಗೆ ಜನರನ್ನು ವಿಭಾಗಿಸುವ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವಾಗ ʼಎರಡು ದೇಶʼಗಳ ಬೇಡಿಕೆ ಹುಟ್ಟಿಕೊಂಡಿತು. ಅದು ಈಡೇರಿತು. ಜನರನ್ನು ವಿಭಾಗಿಸಿತು. ರಾಜ್ಯದ ಏಕೀಕರಣ ಆಗುವಾಗ ಕೂಡ ʼಎರಡು ರಾಜ್ಯʼ ನಿರ್ಮಾಣದ ಸಲಹೆ ಮುನ್ನೆಲೆಗೆ ಬಂತು. ಆದರೆ ಅದು ಈಡೇರಲಿಲ್ಲವಾಗಿ ಕರ್ನಾಟಕದ ಜನ ಒಂದಾಗಿಯೇ ಉಳಿದರು. ಆ ಕಾಲದಲ್ಲಿ ಈ ಎರಡು ರಾಜ್ಯಗಳ ಸಲಹೆ ಮುಂದಿಟ್ಟ ಕಡಿದಾಳು ಮಂಜಪ್ಪನವರನ್ನು ʻಕನ್ನಡಿಗರನ್ನು ಕಡಿದು ಆಳುವ ಮಂಜಪ್ಪʼ ಎಂದು ಪಾಟೀಲ್‌ ಪುಟ್ಟಪ್ಪನವರು ಒಂದು ಲೇಖನವನ್ನೇ ಬರೆದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಹೀಗೆ ಇದು ದೇಶವಿರಲಿ, ರಾಜ್ಯವಿರಲಿ, ಆಟವಿರಲಿ, ಊಟವಿರಲಿ, ಎರಡೆಂಬುದು ಜನರನ್ನು ಇಬ್ಬಾಗಿಸುವ ಕೆಲಸವನ್ನೇ ಮಾಡುತ್ತದೆಯೇ ಹೊರತು ಒಂದಾಗಿಸುವ ಕೆಲಸವನ್ನು ಮಾಡುವುದಿಲ್ಲ. ಅದಕ್ಕಾಗಿ ಇದು ಒಳ್ಳೆಯದಲ್ಲ.

ಬಾಡೂಟವನ್ನು ವಿತರಿಸುವ ಕ್ರಮದ ಬಗ್ಗೆಯೂ ತರಹೇವಾರಿ ಸಲಹೆಗಳು ಬಂದಿವೆ. ಕೆಲವರು ಈ ಬಗ್ಗೆ ಎರಡು ಪ್ರತ್ಯೇಕ ಆಹಾರ ಮನೆಗಳಿರಬೇಕೆಂದು ಸಲಹೆ ನೀಡಿದರೆ ಇನ್ನು ಕೆಲವರು ಇದರಿಂದ ಮಾಂಸಾಹಾರವನ್ನು ʼಅಸ್ಪೃಶ್ಯʼಎಂದು ಕಂಡಂತೆ ಆಗುತ್ತದೆಯಾದ್ದರಿಂದ ಅದಕ್ಕೆ ಅವಕಾಶ ಇರಕೂಡದು ಎರಡನ್ನೂ ಒಂದೇ ಕಡೆ ವಿತರಿಸಬೇಕು ಬೇಕಾದವರು ಬೇಕಾದದ್ದನ್ನು ಪಡೆದು ಊಟಮಾಡಲಿ ಎಂದು ಸಲಹೆ ಮಾಡಿದ್ದಾರೆ.  ತಾವು ʼನಿಷಿದ್ಧʼ ಎಂದು ಪರಿಗಣಿಸಿರುವ ಮಾಂಸಾಹಾರದ ಜೊತೆಗೇ ಸಸ್ಯಾಹಾರಿಗಳು ಊಟಮಾಡಬೇಕು ಎಂಬುದು ಇವರ ಸಲಹೆ. ಇದು ಕ್ರೌರ್ಯವಲ್ಲದೆ ಇನ್ನೇನು?  ಮೇಲ್ನೋಟಕ್ಕೆ ಇದು ಸಮಾನತೆಯನ್ನು ಸಾರುವ ಉದಾತ್ತ ಆದರ್ಶವಾಗಿ ಕಂಡರೂ ಒಳಗೆ ಶತ್ರುವಿನ ಸೊಕ್ಕಡಗಿಸುವ ಉದ್ದೇಶ ಹೊಂದಿರುವಂಥದ್ದು. ಮಾಂಕಮಿಗಳಿಗೆ ಇದರಿಂದ ಯಾವುದೇ ಮುಜುಗರವಿಲ್ಲ. ಏಕೆಂದರೆ ಅವರಿಗೆ ಯಾವುದೂ ತ್ಯಾಜ್ಯವಲ್ಲ. ಆದರೆ ಸಸ್ಯಾಹಾರಿಗಳಿಗೆ? ಅವರಿಗೆ ಮುಜುಗರ ಮಾಡುವುದೇ ಇವರ ಉದ್ದೇಶವೇ? ಅಥವಾ ಅವರು ಮುಜುಗರ ಪಟ್ಟುಕೊಳ್ಳುವುದೇ ತಪ್ಪು ಎಂಬುದು ಇವರ ಭಾವನೆಯೇ?

ನನಗೆ ಮಂಡ್ಯದಲ್ಲಿ ಆದ ಎರಡು ಅನುಭವಗಳೊಂದಿಗೆ ಈ ಲೇಖನ ಮುಗಿಸುತ್ತೇನೆ. ನಾನು ಉಳಿದುಕೊಂಡಿದ್ದ ಕೊಠಡಿಯ ರೂಮ್‌ ಬಾಯ್‌ ಒಬ್ಬ ಬಂದು ನನಗೆ ರೂಮ್‌ ಸಿದ್ಧಪಡಿಸಿಕೊಡುವಾಗ ನಾನು ಏತಕ್ಕೆ ಮಂಡ್ಯಕ್ಕೆ ಬಂದಿದ್ದು ಎಂದು ಕೇಳಿದ. ನಾನು ಸಾಹಿತ್ಯ ಸಮ್ಮೇಳನಕ್ಕೆ ಬಂದ ವಿಷಯವನ್ನು ಆತನಿಗೆ ಹೇಳಿದೆ. ಅವನು ತಕ್ಷಣ ಎಲ್ಲವನ್ನೂ ಬಿಟ್ಟು, “ಅದೇನೋ ಚಿಕನ್ನು ಮಟನ್ನು ಕೊಡಬೇಕು ಅಂತ ಎಂಥದೋ ಸ್ಟ್ರೈಕ್‌ ನಡಿತಿದೆಯಂತಲ್ಲ ಸರ್?” ಎಂದ. ನಾನು, “ಹೌದು ಕೆಲವರು ಸಾಹಿತ್ಯ ಸಮ್ಮೇಳನದಲ್ಲಿ ಅದನ್ನೆಲ್ಲ ಕೊಡಬೇಕು ಅಂತ ಹಟ ಮಾಡ್ತಿದಾರಪ್ಪ” ಎಂದೆ. ತಕ್ಷಣ ಅವನು, “ಅಷ್ಟೊಂದು ಜನ ಕೂಡಿ ಊಟಮಾಡುವಾಗ ಅದು ಹೇಗೆ ಸರಿಯಾಗುತ್ತೆ ಸರ್?” ಎಂದ.  ಈ ಸಮ್ಮೇಳನದ ಸಂದರ್ಭದಲ್ಲಿಯೇ ಹಳ್ಳಿಯಿಂದ ಬಂದಿದ್ದ ಎಂಥದೋ ಮಾರುತ್ತಿದ್ದ ಒಬ್ಬ ಅಜ್ಜಿಯನ್ನು ನಾನೇ ಮುಂದಾಗಿ ಮಾತನಾಡಿಸಿ, “ಅಜ್ಜಿ ಇಲ್ಲಿ ಸಿಹಿ ಊಟ ಖಾರದ ಊಟ (ಮಾಂಸಾಹಾರಕ್ಕೆ ಖಾರದ ಊಟ ಎಂದೂ ಕರೆಯುತ್ತಾರೆ) ಎರಡೂ ಇದೆಯಂಥಲ್ಲ. ನಿಂದು ಯಾವ್ದು?” ಎಂದು ಕೇಳಿದೆ. ಅದಕ್ಕೆ ಆ ಅಜ್ಜಿ, “ಅಯ್ಯೋ ಯಾವುದೋ ಒಂದು ಉಂಡರಾಯ್ತು ಬಿಡಪ್ಪ ಅದೇನು ದೊಡ್ಡ ವಿಷ್ಯ. ಪಾಪಿ ಹೊಟ್ಟೆ ಹಸ್ದಾಗ ಎಂಥದೋ ಒಂದು ತುಂಬಿಕೊ ಬೇಕು ಅಷ್ಟೆ.” ಎಂದಿತು.  ನಮ್ಮ ಜನಸಾಮಾನ್ಯರು ಬಹುತೇಕವಾಗಿ ಆಲೋಚಿಸುವುದು ಹೀಗೆಯೇ. ಆ ಹುಡುಗ ಈ ಅಜ್ಜಿ ಇಬ್ಬರೂ ಮಾಂಸಾಹಾರನ್ನು ಊಟಮಾಡುವವರೇ ಆಗಿದ್ದರು. ಇಬ್ಬರದೂ ಪ್ರಾಥಮಿಕ ಶಿಕ್ಷಣವೂ ಪೂರ್ಣವಾಗಿರದ ಓದು. ಅವರ ಮಾತನ್ನು ಕೇಳಿ ಇಂತಹ ʻಸಣ್ಣʼವರಿಗೆ ಇರುವ ವಿವೇಕವೂ ಬಹಳಷ್ಟು ಓದಿಕೊಂಡ ನಮ್ಮಂತಹ ದೊಡ್ಡವರಿಗೂ ಅನೇಕ ಸಲ ಇರುವುದಿಲ್ಲ ಅನ್ನಿಸಿತು. ಸಮ್ಮೇಳನದಗಳಂಥ ಬಹಳಷ್ಟು ಜನ ಸೇರುವಲ್ಲಿ ಸಸ್ಯಾಹಾರವನ್ನು ಕೊಡುವುದು ಅದು ಮಾಂಸಾಹಾರಕ್ಶ್ರೇಕಿಂತ ಶ್ರೇಷ್ಠ ಎಂಬ ಕಾರಣಕ್ಕಲ್ಲ; ಬದಲಾಗಿ ಅದು ಮಾಂಸಾಹಾರಕ್ಒಂಕೆ ಹೋಲಿಸಿದರೆ ಒಂದಿಷ್ಟು ಅಗ್ಗ ಮತ್ತು ಎಲ್ಲರೂ ಭೇದಭಾವ ಇಲ್ಲದೆ ಜೊತೆಕೂತು ಊಟಮಾಡಬಹುದಾದ ಆಹಾರʼ ಎಂಬ ಕಾರಣಕ್ಕೆ ಎಂಬುದನ್ನು ಇಂತಹವರಿಂದ ನಾವು ಕಲಿಯಬೇಕಿದೆ.

*****

ಡಾ. ರಾಜೇಂದ್ರ ಬುರಡಿಕಟ್ಟಿ

೨೬-೧೨-೨೦೨೪

Friday, December 13, 2024

ಯಾರೇನಂದರೂ ದೇವನೂರು ದೇವನೂರೇ.....

 ಯಾರೇನಂದರೂ ದೇವನೂರು ದೇವನೂರೇ.....



ದೇವನೂರು ಮಹಾದೇವ ತಮ್ಮ ಬರೆಹ ಮಾತ್ರವಲ್ಲ ಬದುಕಿನಿಂದಲೂ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು. ದೇವನೂರು ʼಭಯಂಕರ ಭಾಷಣಕಾರʼ ಅಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಮಾಡಿಕೊಂಡ ಟಿಪ್ಪಣಿ ಕಳೆದುಕೊಂಡರೆ ಅವರಿಗೆ ವೇದಿಕೆ ಮೇಲೆ ಹತ್ತು ನಿಮಿಷ ಮಾತನಾಡಲಿಕ್ಕೂ ಆಗುವುದಿಲ್ಲ. ಇದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಅವರೇ ವೇದಿಕೆಯ ಮೇಲೆ ಹೇಳಿಕೊಂಡಿದ್ದೂ ಇದೆ. ಹೀಗಿದ್ದೂ ಅವರನ್ನು ಜನ ನಮ್ಮ ಅನೇಕ ʼಭೀಕರ ಭಾಷಣಕಾರʼರಿಗಿಂತ ಹೆಚ್ಚಾಗಿ ಹಚ್ಚಿಕೊಂಡಿರುವುದು ಒಂದು ಕುತೂಹಲದ ಸಂಗತಿಯೇ ಆಗಿದೆ. ಇದು ಕೇವಲ ಅವರ ಬರೆವಣಿಗೆಯ ಕಾರಣಕ್ಕಲ್ಲ; ಬದಲಾಗಿ ಆಡಂಬರವಿಲ್ಲದ ತಮ್ಮ ಸರಳಾತಿಸರಳ ಬದುಕಿಗಾಗಿ ಮತ್ತು ತಮ್ಮ ಬರೆಹಗಳ ಹಿಂದಿನ ತಾತ್ವಿಕ ಬದ್ಧತೆಗಾಗಿ. ಅವರ ಬದ್ಧತೆ ಎಂಥದ್ದು ಎಂದರೆ ತಮ್ಮ ತಾತ್ವಿಕ ಬದ್ಧತೆಗಾಗಿ (ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸು ಸಂಕಲ್ಪವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿಲ್ಲದ ಕಾರಣಕ್ಕಾಗಿ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (ಶ್ರವಣಬೆಳಗೊಳ) ಸರ್ವಾಧ್ಯಕ್ಷ ಸ್ಥಾನವನ್ನೇ ನಿರಾಕರಿಸಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸಿದರು. ಏಕೆಂದರೆ ಈ ಘಟನೆ ನೂರು ವರ್ಷಕ್ಕೂ ಮಿಗಿಲಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಏಕೈಕ ಘಟನೆಯಾಗಿತ್ತು ಮಾತ್ರವಲ್ಲ; ಭಾರತದ ಉಳಿದ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಇತಿಹಾಸದಲ್ಲಿಯೂ ಒಂದು ಅಪರೂಪದ ಘಟನೆಯಾಗಿತ್ತು!

ಧಾರವಾಡದಲ್ಲಿ ಮಾತೃಭಾಷೆಗಳ ರಾಷ್ಟ್ರೀಯ ವಿಚಾರ ಸಂಕಿರಣವೊಂದು ನಡೆದಿತ್ತು. ಕಲಬುರ್ಗಿ ಅವರೂ ಅಲ್ಲಿಗೆ ಬಂದಿದ್ದರು. ಈ ವಿಚಾರ ಸಂಕಿರಣವನ್ನು ಉದ್ಘಾಟಿಸಲು ಕವಿ ಸಿದ್ಧಲಿಂಗಯ್ಯ ಬಂದಿದ್ದರು. ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ಮಾತನಾಡುತ್ತಾ ಅವರು ಕಾರ್ಯಕ್ರಮದ ಸಂಘಟಕರನ್ನು ಕುರಿತು ತಮಾಸೆಗೆ ಎಂಬಂತೆ ಹೀಗೆ ಹೇಳಿದರು: "ನೀವು ಈ ಕಾರ್ಯಕ್ರಮದ ಉದ್ಘಾಟನೆಗೆ ದೇವನೂರು ಅವರನ್ನು ಕರೆದಿರುತ್ತೀರಿ. ಅವರು ಬರುವುದಿಲ್ಲ ಅಂದಿರುತ್ತಾರೆ. ಅದಕ್ಕೆ ನೀವು ನನ್ನನ್ನು ಕರೆದಿದ್ದೀರಿ ಅಂದುಕೊಂಡಿದ್ದೆ. ಇಲ್ಲಿ ಬಂದು ನೋಡಿದರೆ ದೇವನೂರು ಸಭಾಂಗಣದಲ್ಲಿ ಮುಂದಿನ ಸಾಲಿನಲ್ಲಿ ನನ್ನ ಎದುರಿಗೇ ಕುಳಿತಿದ್ದಾರೆ. ಒಮ್ಮೇಲೆ ಅವರನ್ನು ನೋಡಿ ನನಗೆ ದಿಗಿಲಾಗಿ ಒಂದು ಕ್ಷಣ ಆತಂಕಕ್ಕೆ ಒಳಗಾದೆ." ಈ ಮಾತನ್ನು ಅವರು ಹೇಳಿದ್ದು ಏಕೆಂದರೆ ಕೆಲವೇ ತಿಂಗಳುಗಳ ಹಿಂದೆ ದೇವನೂರು ಅವರು ಕರ್ನಾಟಕದ ಭಾಷೆ ಶಿಕ್ಷಣದಂತಹ ಅತ್ಯಂತ ಮಹತ್ವದ
ಸಾಮಾಜಿಕ ಆಯಾಮದ ತಾತ್ವಿಕ ಕಾರಣವನ್ನು ನೀಡಿ ತಮಗೆ ಒಲಿದು ಬಂದಿದ್ದ ‍ ಶ್ರವಣಬೆಳಗೊಳದ ಸಮ್ಮೇಳನಾಧ್ಯಕ್ಷತೆ ತಿರಸ್ಕರಿಸಿದಾಗ ಎರಡನೆಯ ಆಯ್ಕೆಯಾಗಿ ಪರಿಷತ್ತು ಈ ಸಿದ್ಧಲಿಂಗಯ್ಯನವರು ಆಯ್ಕೆಮಾಡಲಾಗಿತ್ತು! ಸಿದ್ಧಲಿಂಗಯ್ಯ ಅದನ್ನು ಒಪ್ಪಿಕೊಂಡು ಅಧ್ಯಕ್ಷತೆವಹಿಸಿದ್ದರು. ಈ ಸಮ್ಮೇಳನವು ಸರ್ವಾಧ್ಯಕ್ಷರಿಲ್ಲದ ಸಮ್ಮೇಳನವಾಗಿಯೇ ನಡೆಯಬೇಕು; ಇದರಿಂದ ಪ್ರತಿ ಸಮ್ಮೇಳನದ ಹೊತ್ತಿಗೆ ಬಿಡುಗಡೆ ಆಗುವ ಹಿಂದಿನ ಸಮ್ಮೇಳನಾಧ್ಯಕ್ಷರ ದೀರ್ಘವಾದ ಪಟ್ಟಿಯಲ್ಲಿ ದಾಖಲಾಗುವ ಈ ಖಾಲಿಜಾಗ ಪ್ರತಿಬಾರಿಯೂ ಸಮ್ಮೇಳನ ನಡೆಯುವಾಗ ಈ ಘಟನೆ ಅನುರಣನಗೊಳ್ಳುವಂತೆ ಮಾಡಲಿ ಎಂಬುದು ನಮ್ಮಂಥ ಕೆಲವರ ಅಪೇಕ್ಷೆ ಆಗಿತ್ತು. ಆದರೆ ಈ ಸಿದ್ಧಲಿಂಗಯ್ಯ ಆ ಎರಡನೆಯ ಆಯ್ಕೆಯನ್ನು ಒಪ್ಪಿಕೊಂಡು ಈ ಘಟನೆ ಮುಂದಿನವರಿಗೆ ನೆನಪಾಗದಂತೆ ಮಾಡಿಬಿಟ್ಟಿದ್ದರು. ಈ ಬಗ್ಗೆ ದೇವನೂರು ಏನೂ ಹೇಳಿರಲಿಲ್ಲವಾದರೂ ಈ ಸಿದ್ಧಲಿಂಗಯ್ಯನವರಿಗೆ ಮಾತ್ರ ಈ ವಿಷಯದಲ್ಲಿ ತಪ್ಪುಮಾಡಿದೆ ಎಂಬ ಆತಂಕ ಒಳಗೆ ಇದ್ದೇ ಇತ್ತು ಅಂತ ಕಾಣುತ್ತದೆ. ಹಾಗಾಗಿಯೇ ಅವರಿಗೆ ಇಲ್ಲಿ ಆತಂಕ, ದಿಗಿಲು ಆಗಿದ್ದು. ಹೀಗೆ ಮಾತಿನಿಂದ ಮಾತ್ರವಲ್ಲ ಮೌನಕೃತಿಯಿಂದಲೂ ತಪ್ಪುಮಾಡುವಂಥವರಿಗೆ ಆತಂಕ, ದಿಗಿಲು ಮತ್ತು ಭೀತಿಯನ್ನುಂಟುಮಾಡುವ ಶಕ್ತಿ ಈ ದೇವನೂರು ಅವರಿಗೆ ಇದೆ.



ಕೆಲ ತಿಂಗಳ ಹಿಂದೆ ಯಾರೋ ಅವರ ತಾತ್ವಿಕ ಬದ್ಧತೆಯನ್ನು ತೋರಿಸುವ ಇನ್ನೊಂದು ಘಟನೆಯನ್ನು ನೆನಪಿಸಿಕೊಂಡಿದ್ದರು. ದೇವನೂರು ಅವರು ರೈಲು ನಿಲ್ದಾಣವೊಂದರಲ್ಲಿ ಕೆಳಹಂತದ ಭೋಗಿಯಿಂದ ಇಳಿಯುವುದನ್ನು ನೋಡಿದ ಅವರು ಆಶ್ಚರ್ಯದಿಂದ, ದೇವನೂರು ಅವರನ್ನು ಸಮೀಪಿಸಿ, "ಸರ್‌ ತಮಗೆ ಕೇಂದ್ರ ಸರ್ಕಾರ ಪ್ರಥಮ ದರ್ಜೆಯ ಭೋಗಿಯಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ನೀಡಿದೆಯಲ್ಲ. ಆದರೂ ತಾವು ಈ ಭೋಗಿಯಲ್ಲಿ ಏಕೆ ಪ್ರಯಾಣ ಮಾಡಿದ್ದು?" ಎಂದು ಕೇಳಿದರಂತೆ. ಅದಕ್ಕೆ ದೇವನೂರು ಅವರು ಬಹಳ ಮೆಲುದನಿಯಲ್ಲಿ ಹೇಳಿದರಂತೆ: "ಹೌದು. ಆದರೆ ನಾನು ಆ ಸೌಲಭ್ಯ ನೀಡಿದ್ದ ಪ್ರಶಸ್ತಿಯನ್ನು ಮರಳಿಕೊಟ್ಟಿದ್ದೇನೆ. ಪ್ರಶಸ್ತಿಯನ್ನು ಮರಳಿಸಿದ ಮೇಲೆ ಪ್ರಶಸ್ತಿಯೊಂದಿಗೆ ಬಂದ ಆ ಸೌಲಭ್ಯವನ್ನು ಬಳಸಿಕೊಳ್ಳುವುದು ಸರಿಯಲ್ಲವಲ್ಲ. ಅದಕ್ಕೆ". ದೇವನೂರು ಅವರಿಗೆ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿ ನೀಡಿತ್ತು. ಅದನ್ನು ಅವರು ತಾತ್ವಿಕ ಕಾರಣವೊಂದನ್ನು ಮುಂದುಮಾಡಿ (ಬಹುಶಃ ಕಲಬುರ್ಗಿ ಅವರ ಕೊಲೆ ಎಂದು ಕಾಣುತ್ತದೆ) ಹಿಂದಿರುಗಿಸಿದ್ದರು. ಸರ್ಕಾರ ಪ್ರಶಸ್ತಿಯೊಂದಿಗೆ ನೀಡಿದ್ದ ರೈಲು ಪ್ರಯಾಣದ ಸೌಲಭ್ಯವನ್ನು ಮರಳಿ ಪಡೆದಿರಲಿಲ್ಲವಾದರೂ ಅದನ್ನು ಅವರು ಬಳಸಿಕೊಳ್ಳಬಹುದಾಗಿದ್ದರೂ ಅವರು ತಮ್ಮಷ್ಟಕ್ಕೇ ತಾವು ಅದು ಸರಿಯಲ್ಲವೆಂದು ಅದನ್ನು ಬಳಸಿಕೊಳ್ಳುವುದನ್ನೇ ಬಿಟ್ಟರು.

ದೇವನೂರು ಅವರ ಬಗ್ಗೆ ಕೆಲವು ಸ್ವಾರಸ್ಯಕರ ಕಥೆಗಳಿವೆ. ಅವರ ಸರಳತೆ ಎಂಥದ್ದು ಎಂದರೆ ಅವರಿಗೆ ಹಂಪಿ ಕನ್ನಡ ವಿವಿ ತನ್ನ ಪರಮೋಚ್ಛ ಗೌರವವಾದ ʼನಾಡೋಜʼ ಪ್ರಶಸ್ತಿಯನ್ನು ನೀಡಲೆಂದು ಕರೆಸಿಕೊಂಡಾಗ ವಿವಿಯ ಆಗಿನ ಕುಲಪತಿಗಳು ಅವರಿಗೆ ತಂಗಲು ವಿಶೇಷ ಹವಾನಿಯಂತ್ರಿತ ಕೊಠಡಿಯ ವ್ಯವಸ್ಥೆ ಮಾಡಿದ್ದರಂತೆ. ಅಲ್ಲಿಗೆ ಹೋಗಿ ಅದನ್ನು ನೋಡಿದ ದೇವನೂರು ʼಇದೆಲ್ಲ ನನಗೆ ಬೇಡ ಯಾವುದಾದರೂ ಸಾದಾ ರೂಮಿದ್ರೆ ಕೊಡಪ್ಪʼ ಎಂದು ಕೇಳಿದರಂತೆ. ತಮ್ಮ ಮಿತಿಮೀರಿದ ಸರಳತೆಗಾಗಿ ಈ ದೇವನೂರು ಅನೇಕ ಸಲ ಪೇಚಿಗೆ ಸಿಕ್ಕಿಹಾಕಿಕೊಳ್ಳುವುದೂ ಇದೆ. ಒಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೇವನೂರು ಅವರನ್ನು ಭೇಟಿ ಮಾಡಲು ಮೈಸೂರಿನ ಇವರ ಮನೆಗೆ ಹೋಗಿದ್ದರಂತೆ. ಆಗ ದೇವನೂರು ಅವರು ತಮ್ಮ ಸ್ಕೂಟಿ ತೆಗೆದುಕೊಂಡು ಎಲ್ಲೋ ತಿರುಗಾಡಲು ಹೋಗಿದ್ದಾರೆ. ಅವರು ಮರಳಿ ಮನೆಗೆ ಬರುವ ಹೊತ್ತಿಗೆ ಅವರ ಮನೆಗೆ ಹೋಗುವ ಎಲ್ಲ ದಾರಿಗಳನ್ನೂ ಪೋಲೀಸರು (ಆ ಭಾಗದಲ್ಲಿ ಮುಖ್ಯಮಂತ್ರಿ ಇರುವುದರಿಂದ) ಬಂದ್‌ ಮಾಡಿದ್ದರಂತೆ. ಯಾವ ಪೋಲೀಸರು ಇವರನ್ನು ಬಿಡಲು ತಯಾರಿರಲಿಲ್ಲವಂತೆ. ಇತ್ತ ಮುಖ್ಯಂತ್ರಿಗಳು ದೇವನೂರರ ಮನೆಯಲ್ಲಿ ದೇವನೂರು ಈಗ ಬರ್ತಾರೆ ಆಗ ಬರ್ತಾರೆ ಅಂತ ಕಾಯುತ್ತಿದ್ದಾರೆ. ಅತ್ತ ದೇವನೂರು ತಮ್ಮ ಮನೆಗೆ ಸೇರಲು ಪರದಾಡುತ್ತಿದ್ದಾರೆ. ಪೋಲೀಸರು ಅವರನ್ನು ಮನೆಗೆ ಹೋಗಲು ಬಿಡುತ್ತಿಲ್ಲ ಅವರು ಹೋಗಿ ಮುಖ್ಯಮಂತ್ರಿಗಳನ್ನು ಮಾತನಾಡಿಸುವುದಾದರೂ ಹೇಗೆ?....

ಕಳೆದ ಹತ್ತು ವರ್ಷಗಳಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಭಾರತದ ಒಬ್ಬ ಪ್ರಮುಖ ಸಾಹಿತಿಯನ್ನು ಗುರುತಿಸಿ ʼಕುವೆಂಪು ರಾಷ್ಟ್ರೀಯ ಪುರಸ್ಕಾರʼವನ್ನು ಕೊಡಮಾಡುತ್ತಿದೆ. ಇದನ್ನು ಈಗಾಗಲೇ ಪಡೆದಿರುವ ಹಿಂದಿ, ಮರಾಠಿ, ಮಲೆಯಾಳಂ, ತಮಿಳು, ತೆಲುಗು, ಓರಿಯಾ, ಅಸ್ಸಾಮಿ, ಉರ್ದು, ಹೀಗೆ ಬೇರೆ ಬೇರೆ ಭಾಷೆಗಳ ಸಾಹಿತಿಗಳ ಪಟ್ಟಿಯಲ್ಲಿ ಆ ಗೌರವವನ್ನು ಪಡೆದ ಏಕೈಕ ಕನ್ನಡ ಸಾಹಿತಿ ಎಂದರೆ ಅದು ನಮ್ಮ ದೇವನೂರು ಅವರು. ತಮ್ಮ ಆಲೋಚನಾ ಕ್ರಮಕ್ಕೆ ತಕ್ಕುದಾದರೆ ಅದು ಎಷ್ಟೇ ಚಿಕ್ಕದಾದರೂ ಆ ಪ್ರಶಸ್ತಿ ಗೌರವವನ್ನು ಅತ್ಯಂತ ಪ್ರೀತಿಯಿಂದ ಒಪ್ಪಿಕೊಳ್ಳುವುದು, ತಮ್ಮ ಆಲೋಚನಾ ಕ್ರಮಕ್ಕೆ, ತಾವು ಒಪ್ಪಿಕೊಂಡ ತಾತ್ವಿಕತೆಗೆ ವಿರುದ್ಧವಿರುವುದಾದರೆ ಅದು ಎಷ್ಟೇ ದೊಡ್ಡ ಪ್ರಶಸ್ತಿ, ಸನ್ಮಾನ-ಗೌರವವಿರಲಿ ಹುಲ್ಲುಕಡ್ಡಿಯಂತೆ ತಳ್ಳಿಬಿಡುವುದು ದೇವನೂರು ಅಂಥ ತಾತ್ವಿಕ ಬದ್ಧತೆಯಿರುವ ಸಾಹಿತಿಗೆ ಮಾತ್ರ ಸಾಧ್ಯವಾಗುವಂಥದ್ದು.



ಇಂತಹ ಹೆಮ್ಮೆಯ ಸಾಹಿತಿ ದೇವನೂರು ಅವರಿಗೆ ಅವರ ತಾತ್ವಿಕತೆಕೆ ಪೂರಕವಾದ ವೈಕಂ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ. ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದಿಂದ ʼಆಗ್ನೇಯ ಭಾರತದ ಸಾಕ್ರೆಟಿಸ್‌ʼ ಎಂದು ಹೊಗಳಲ್ಪಟ್ಟ ಭಾರತದ ಮಹಾನ್‌ ವೈಚಾರಿಕ ಚಿಂತಕ ಪೆರಿಯಾರ್‌ ಅವರಿಗೆ ಸಂಬಂಧಿಸಿದ್ದು. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿ ನೋಡಿದರೆ ದಕ್ಷಿಣ ಭಾರತದ ರಾಜ್ಯಗಳು ಜನರಲ್ಲಿ ವೈಚಾರಿಕತೆ ಬಿತ್ತುವಲ್ಲಿ ಯಾವಾಗಲು ತುಸು ಮುಂದೆಯೇ ಇವೆ. ಇವುಗಳ ಹಿಂದೆ ಕರ್ನಾಟಕದ ಬಸವಣ್ಣ ಮತ್ತು ಶರಣರು, ಕೇರಳದ ನಾರಾಯಣ ಗುರು, ತಮಿಳುನಾಡಿನ ಪೆರಿಯಾರ್‌ ಇಂಥವರ ಕೊಡುಗೆ ಅಪಾರ. ಹೀಗಾಗಿ ಈ ರಾಜ್ಯಗಳಲ್ಲಿ ದೇವರು ಧರ್ಮಗಳನ್ನು ಗುರಾಣಿ ಮಾಡಿಕೊಂಡು ಜನರ ಕಣ್ಣಿಗೆ ಮಂಕುಬೂದಿ ಎರಚುವ ʼಅಂಧಭಕ್ತರʼ ಆಟ ಅಷ್ಟಾಗಿ ನಡೆಯುವುದಿಲ್ಲ. ಇಂತಹ ಹಿನ್ನೆಲೆಯ ಪ್ರಶಸ್ತಿ ಪಡೆಯುವುದು ದೇವನೂರು ಅವರಿಗೂ ಸಂತೋಷವನ್ನು ನೀಡಿರಬಹುದು.

ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ತಮ್ಮೆರಡೂ ರಾಜ್ಯಗಳಿಗೆ ಸೇರದ ಸಾಹಿತಿಯೋರ್ವನಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಇದೇ ದೇವನೂರು ಅವರ ವೈಶಿಷ್ಟ್ಯ.

ಡಾ. ರಾಜೇಂದ್ರ ಬುರಡಿಕಟ್ಟಿ
೧೨-೧೨-೨೦೨೪

Tuesday, December 10, 2024

ಸಾಹಿತ್ಯ ಸಮ್ಮೇಳನ ಮತ್ತು ಬಾಡೂಟದ ಮಹಿಮೆ!

 

ಸಾಹಿತ್ಯ ಸಮ್ಮೇಳನ ಮತ್ತು ಬಾಡೂಟದ ಮಹಿಮೆ!


ಇನ್ನೇನು ನಾವು ಊಟ ಸೆಳೆಯಬೇಕು ಅನ್ನುವಷ್ಟರಲ್ಲಿ ಗಂಡಿನ ಕಡೆಯ ದಢೂತಿಯೊಬ್ಬ ಖ್ಯಾತೆ ತೆಗೆದೇಬಿಟ್ಟ. ʼಏನೋ ಇದು ಬಿರ್ಯಾನಿ ನೋಡಿದ್ರೆ, ʼಮೊಘಲೇ ಆಜಂʼ (ಬೀಫ್)ದು ಇದ್ದಂಗಿದೆ. ಥೂ ಥೂ ನಾವು ಇದೆಲ್ಲಾ ತಿನ್ನೋದಿಲ್ಲಪ್ಫ!ʼ ಎಂದುಬಿಟ್ಟ. ..ಹುಡುಗಿಯ ಅಣ್ಣ ಈ ಮಾತು ಕೇಳಿ ಫುಲ್‌ ಗರಂ ಆಗಿಬಿಟ್ಟ. ʼಏನಂದಲೇ ಮಗನೇ, ನಾಲ್ಕು ಕುರಿ ಕೊಯ್ಸಿದ್ಧೀನಿ! ಕಷ್ಟಬಿದ್ದು ಸಾಲಸೋಲ ಮಾಡಿ ಕುರಿ ಮಟನ್‌ ಮಾಡ್ಸಿದ್ರೆ ದನದ ಮಾಂಸ ಅಂತ ಜರಿತೀಯಾ. ನಿಮ್ಮಪ್ಪ ದನಕ್ಕೆ ದುಡ್ಡು ಎಣಿಸಿ ಕೊಟ್ಟಿದ್ನೇನೋ ಲೌಡಿಮಗನೆʼ ಎಂದವನೇ ಆವೇಶದಿಂದ ಕೈಯಲ್ಲಿದ್ದ ಕುದಿಯುತ್ತಿದ್ದ ದಾಲ್ಚವನ್ನು (ಬೇಳೆಸಾರು) ಅವನ ತಲೆಮೇಲೆ ಸುರಿದುಬಿಟ್ಟ. ನಂತರ ಶುರುವಾಯಿತು ನೋಡಿ ಮಾರಾಮಾರಿ!

ಯಾರು ಯಾರಿಗೆ ಹೊಡಿಯುತ್ತಿದ್ದಾರೆ ಅನ್ನೋದೆ ತಿಳಿಯದಂಗೆ ಭಾರಿ ಯುದ್ಧವೇ ಶುರುವಾಗಿ ಬಿಟ್ಟಿತು. ಹಾಕಿದ್ದ ಟೇಬಲ್‌, ಕುರ್ಚಿಗಳೆಲ್ಲಾ ಚೆಲ್ಲಾಪಿಲ್ಲಿ. ಖುಷ್ಕ, ದಾಲ್‌, ಬಿರ್ಯಾನಿ ತುಂಬಿದ ತಟ್ಟೆ, ಗಟ್ಟಿ ಪಾಯಸದ ಬಟ್ಟಲುಗಳೆಲ್ಲಾ ಸಮರ ಸಾಮಗ್ರಿಯಾಗಿ ಬಿಟ್ಟವು. ಎಲ್ಲರೂ ತಮಗೆ ಸಿಕ್ಕ ಶಸ್ತ್ರಾಸ್ತ್ರಗಳನ್ನು ಆಯ್ದುಕೊಂಡರು. ಅದರಲ್ಲಿ ಒಬ್ಬ ಸ್ಥೂಲಕಾಯದ ಆಸಾಮಿ ನೆಟ್ಟಿದ್ದ ಶಾಮಿಯಾನದ ಬೊಂಬನ್ನೇ ಹೊಡೆಯಲೆಂದು ಎಳೆದುಕೊಂಡ.  ಸಪೋರ್ಟಿಗೆ ಇಟ್ಟಿದ್ದ ಆ ಬೊಂಬು ತೆಗೆಯುತ್ತಲೇ ಅಯೋಮಯವಾದ ಶಾಮಿಯಾನು ಆಯತಪ್ಪಿ ʼಧೋʼ ಎಂದು ಕಳಚಿ ಕೆಳಗಿದ್ದವರ ಮೇಲೆ ಬಿದ್ದು ಹೋಯಿತು. ಅದರಡಿಯಲ್ಲಿದ್ದ ಎಲ್ಲರಿಗೂ ತಕ್ಷಣ ಕತ್ತಲು ಕವಿದಂತಾಗಿ ಅಬ್ಬಬ್ಬೋ ಎಂದು ಕಿರಿಚಾಡತೊಡಗಿದರು. ಕೆಲ ಹೆಂಗಸರಂತೂ … ಕಿರಿಚಿಕೊಂಡರು.

ಯಾರೋ ಬಂದು ಪರದೆಯಾಗಿದ್ದ ಶಾಮಿಯಾನವನ್ನು ಎಳೆದು ಹಾಕಿದರು. ನಂತರ ಸಿಕ್ಕಸಿಕ್ಕವರು ಎದುರಿಗೆ ದಕ್ಕಿದವರ ಮುಖಮೂತಿ ನೋಡದೆ ಎಲ್ಲೆಂದರಲ್ಲಿ ಬಾರಿಸತೊಡಗಿದವರು. ದೂರ ದೂರ ಇದ್ದವರೆಲ್ಲಾ ಈ ಅನಾಹುತ ನೋಡಲು ಬಂದು ತಾವೂ ಸಿಕ್ಕ ಸಿಕ್ಕವರನ್ನೆಲ್ಲಾ ಚಚ್ಚಿದರು. ಯಾರು ಯಾರಿಗೆ ಹೊಡೆಯುತ್ತಿದ್ದಾರೆ, ಯಾರು ಹೊಡೆತ ತಿನ್ನುತ್ತಿದ್ದಾರೆ? ಅನ್ನೋದೆ ಗೊತ್ತಾಗದಷ್ಟು ಗೊಂದಲದ ಗೂಡಾಯಿತು…. ʼನಮ್ಮ ಹುಡುಗಿ ಮದ್ವೆ ನಿಂತುಹೋದ್ರೂ ಪರ್ವಾಗಿಲ್ಲ. ನಮ್ಮ ಬಿರ್ಯಾನಿ ದನದ್ದು ಅಂದನಲ್ಲ ಅವನ ಜೀವ ಮಾತ್ರ ಇವತ್ತು ತೆಗೀದೆ ಬಿಡಬೇಡಿʼ ಎಂದು ಫರ್ಮಾನು ಹೊರಡಿಸಿದ. ಮತ್ತೊಬ್ಬ, ʼಗಂಡಿನ ಕಡೆ ಒಬ್ಬರನ್ನೂ ಜೀವ ಸಹಿತ ಬಿಡಬೇಡಿ. ಅವರ ತಿಥಿ ಇಲ್ಲೇ ಆಗಲಿʼ ಎಂದು ಆಜ್ಞಾಪಿಸಿದ. ಸರಿ ಆಮೇಲೆ ಬಿದ್ದವು ನೋಡಿ ಗೂಸದ ಮೇಲೆ ಗೂಸಗಳು. ಮದುವೆ ಊಟ ಎಂದು ಚಪ್ಪರಿಸಲು ಬಂದವರಿಗೆಲ್ಲ ಏಟಿನ ಹಬ್ಬದೂಟ! ಎದ್ದೆವೋ ಬಿದ್ದೆವೋ ಎಂದು ಮದುವೆಗೆ ಬಂದಿದ್ದ ಅತಿಥಿಗಳೆಲ್ಲಾ ಜೀವ ಉಳಿಸಿಕೊಂಡು ಓಡತೊಡಗಿದರು. ಅಂತಿಮವಾಗಿ ಮದುವೆಯೇ ನಿಂತುಹೋಯಿತು.

*****

ಇದು ಲೇಖನಿ ಮಿತ್ರ ಕಲೀಮ್ ಉಲ್ಲಾ ಅವರ ʼಬಾಡೂಟದ ಮಹಿಮೆʼ ಪ್ರಬಂಧ ಸಂಕಲನದಲ್ಲಿ ಬರುವ ಅದೇ ಹೆಸರಿನ ಲೇಖನದಲ್ಲಿ ಬರುವ ವಿವರಣೆ. ಮದುವೆ ಮನೆಯೊಂದರಲ್ಲಿ ಬಾಡೂಟದ ಸಂಬಂಧ ಹುಟ್ಟಿಕೊಳ್ಳುವ ಒಂದು ಜಗಳ ಎಷ್ಟು ದೊಡ್ಡದಾಗಿ ಬೆಳೆದು ಏನೆಲ್ಲ ಅನಾಹುತ ಮಾಡಿತು ಎಂಬುದನ್ನು ತುಂಬಾ ಹಾಸ್ಯಮಯವಾಗಿ ದಾಖಲಿಸುವ ಈ ಘಟನೆ ಮಂಡ್ಯದಲ್ಲಿ ಈ ತಿಂಗಳು ನಡೆಯಲಿರುವ ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾಂಸಾಹಾರವನ್ನು ನೀಡಬೇಕು ಎಂದು ಕೆಲವರು ಒಂದು ರೀತಿಯ ʼಹಕ್ಕೊತ್ತಾಯʼ ಮಾಡುತ್ತಿರುವ ಈ ಸಂದರ್ಭದಲ್ಲಿ ತಕ್ಷಣಕ್ಕೆ ನೆನಪಿಗೆ ಬಂತು. ಮೇಲಿನ ಘಟನೆ ಯಾವುದೋ ಒಂದು ಮನೆಯಲ್ಲಿ ನಡೆದಿರಬಹುದಾದ, ಸಾರ್ವತ್ರಿಕ ಮಹತ್ವ ಹೊಂದಿರದ, ಅಲಕ್ಷಿಸಬೇಕಾದ ಒಂದು ಘಟನೆ ಮಾತ್ರ ಆಗಿದ್ದರೆ ಬಹುಶಃ ಆ ಲೇಖಕ ಅದನ್ನು ಅಲ್ಲಿ ದಾಖಲಿಸುತ್ತಿರಲಿಲ್ಲ; ಈ ಲೇಖಕ ಅದನ್ನು ಇಲ್ಲಿ ಉಲ್ಲೇಖಿಸುತ್ತಲೂ ಇರಲಿಲ್ಲ. ಈ ಬಾಡೂಟದ ಸಂಬಂಧ ಇಂತಹ ಅನೇಕ ಘಟನೆಗಳು ನಡೆದದ್ದನ್ನು ನಾನು ಅನೇಕ ಲೇಖಕರ ಬರೆಹಗಳಲ್ಲಿ ಓದಿದ್ದೇನೆ; ಹಾಗೇ ಅನೇಕರಿಂದ ಕೇಳಿದ್ದೇನೆ; ಅಷ್ಟುಮಾತ್ರವಲ್ಲ ಅಂತಹ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಇದು ನಿಜಕ್ಕೂ ಬಾಡೂಟದ ಮಹಿಮೆಯೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.

ಮಂಡ್ಯದ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕು ಎನ್ನುವ ಒತ್ತಾಯದ ಹಿಂದೆ ಎರೆಡು ಕಾರಣವಿರಲಿಕ್ಕೆ ಸಾಧ್ಯವಿದೆ. ಒಂದು ʻಬಾಡೂಟದ ಸಂಭ್ರಮʼ ಸವಿಯುವ ಅಪೇಕ್ಷೆ. ಇನ್ನೊಂದು ʼಸಸ್ಯಾಹಾರʼ ಮತ್ತು ʼಮಾಂಸಾಹಾರʼ ಇವುಗಳ ನಡುವೆ ನಮ್ಮ ಸಮಾಜದಲ್ಲಿ ಅನಗತ್ಯವಾಗಿ ನಡೆದುಕೊಂಡು ಬಂದಿರುವ ತರತಮದ ಭಾವನೆಯನ್ನು ಕಿತ್ತೊಗೆಯಬೇಕೆಂಬ ಹಂಬಲ. ಮೊದಲಿಗೆ ಬಾಡೂಟದ ಸಂಭ್ರಮದ ಬಗ್ಗೆ ನೋಡೋಣ. ತಮ್ಮಲ್ಲಿ ಅನೇಕರಿಗೆ ಗೊತ್ತಿರಬಹುದು. ಈ ಬಾಡೂಟ ಮಾಡುವವರು ಆ ಊಟಕ್ಕೆ ಎಷ್ಟೊಂದು ಮಹತ್ವಕೊಟ್ಟಿರುತ್ತಾರೆ ಎಂಬುದು. ಯಾವುದಾದರೂ ಊಟದ ಮನೆಗೆ ಕರೆಯಿದ್ದರೆ ಅದು ಸಿಹಿ ಊಟವಾದರೆ ಇವರು ಹೋಗಬಹುದು ಅಥವಾ ಬಿಡಬಹುದು. ಆದರೆ ಅದು ಬಾಡೂಟವಾದರೆ ಮಾತ್ರ ಮಿಸ್‌ ಮಾಡುವುದು ಬಹಳ ಅಪರೂಪ. ಅದು ಎಷ್ಟೇ ಕಷ್ಟವಾಗಲೀ ಎಷ್ಟೇ ದೂರವಾಗಲಿ ಅವರು ಹೋಗಿಯೇ ಹೋಗುತ್ತಾರೆ. ಸಸ್ಯಾಹಾರದ ಯಾವುದೇ ಪದಾರ್ಥ ಅದು ಎಷ್ಟೇ ಉತ್ಕೃಷ್ಟ ರುಚಿಯದ್ದಾಗಿದ್ದರೂ ಅವರಿಗೆ ಅದು ಬಾಡೂಟಕ್ಕೆ ಸರಿಸಮವಾಗಲಾರದು. ʼಎಷ್ಟು ಕಳಪೆಯಿದ್ದರೂ ಈ ನಮ್ಮ ಬಾಡು / ಸರಿಗಟ್ಟಬಲ್ಲುದೆ  ಅದ ನಿನ್ನ ಲಾಡುʼ ಎನ್ನುವುದೇ ಅವರ ಧೋರಣೆಯಾಗಿರುತ್ತದೆ. ಹೀಗಾಗಿಯೇ ಅವರು ಸಸ್ಯಾಹಾರವನ್ನು ಊಟಮಾಡುವಾಗಲೂ ಸಾರಿನಲ್ಲಿ ಬರುವ ತರಕಾರಿ ಹೋಳುಗಳಿಗೆ ಅಪೇಕ್ಷೆ ಪಡುವಾಗಲೂ ಒಂದೆರೆಡು ʼಪೀಸ್‌ ಹಾಕಿʼ  ʼತುಂಡು ಬರಲೇ ಇಲ್ಲʼ ಎಂದು ಮಾತನಾಡುತ್ತಿರುತ್ತಾರೆ. ಅಂದರೆ ಭೌತಿಕವಾಗಿ ಅವರು ಸಸ್ಯಾಹಾರವನ್ನು ಊಟಮಾಡುವಾಗಲೂ ಮಾನಸಿಕವಾಗಿ ಬಾಡೂಟವನ್ನೇ ಮಾಡುತ್ತಿರುತ್ತಾರೆ. ಇದು ತೀರಾ ಸಹಜವಲ್ಲ. ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ತರಕಾರಿ ಹೋಳು ಬಿದ್ದಾಗ ʼತುಂಡುʼ ನೆನಪಾದಂತೆ ಇವರಿಗೆ  ತಟ್ಟೆಗೆ ಮಾಂಸದ ತುಂಡು ಬಿದ್ದಾಗ ತರಕಾರಿ ಹೋಳು ನೆನಪಾಗುವುದಿಲ್ಲ. ಇವರ ಪಾಲಿಗೆ ಬಾಡಿನ ತುಂಡು ಯಾವಾಗಲೂ ʼಉಪಮಾನʼವಾಗಿರುತ್ತದೆಯೇ ಹೊರತು ಅಪ್ಪಿತಪ್ಪಿಯೂ ʼಉಪಮೇಯʼ ಆಗುವುದೇ ಇಲ್ಲ. ಮಂಡ್ಯದ ಸಮ್ಮೇಳನದಲ್ಲಿ ಮಾಂಸಾಹಾರದ ಊಟ ಇರಬೇಕು ಎನ್ನುವವರಲ್ಲಿ ಇಂಥವರೇ ಇದ್ದಾರೆ ಎನ್ನುವುದು ತಪ್ಪಾಗಬಹುದು; ಆದರೆ ಇಲ್ಲವೇ ಇಲ್ಲ ಎನ್ನೂವುದೂ ತಪ್ಪಾದೀತು.

ಆಹಾರ ಪದ್ಧತಿಯಲ್ಲಿ ಭೇದಭಾವ

ಇನ್ನು ಎರಡನೆಯ ಕಾರಣ, ʼಸಸ್ಯಾಹಾರʼ ಮತ್ತು ʼಮಾಂಸಾಹಾರʼ ಇವುಗಳ ನಡುವೆ ನಮ್ಮ ಸಮಾಜದಲ್ಲಿ ಅನಗತ್ಯವಾಗಿ ನಡೆದುಕೊಂಡು ಬಂದಿರುವ ತರತಮದ ಭಾವನೆಯನ್ನು ಕಿತ್ತೊಗೆಯಬೇಕೆಂಬ ಹಂಬಲ. ಇದು ಮೇಲಿನದಕ್ಕೆ ಹೋಲಿಸಿದರೆ ಸಾಕಷ್ಟು ವ್ಯಾಪಕವಾದ ಸಾಮಾಜಿಕ ಆಯಾಮವನ್ನೂ ಮಹತ್ವವನ್ನೂ ಹೊಂದಿರುವ ಕಾರಣ. ಇದು ಸಮಸಮಾಜದ ಕನಸು ಕಾಣುತ್ತಿರುವ ಎಲ್ಲರೂ ತಾತ್ವಿಕವಾಗಿ ಬೆಂಬಲಿಸಲೇಬೇಕಾದ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಂಡ್ಯದಲ್ಲಿ ಮಾಂಸಾಹಾರಕ್ಕೆ ಒತ್ತಾಯ ಮಾಡುತ್ತಿರುವವರು ಮುಂದಿಡುತ್ತಿರುವ ಅಂಶ ಇದುವೇ ಆಗಿದೆ. ಆಹಾರದ ಪದ್ಧತಿಗಳ ನಡುವಿನ ಭೇದಭಾವ ಹೋಗಬೇಕು ಎಂಬ ಅವರ ಕಾಳಜಿಯನ್ನು ನಾವು ಸಂಶಯಪಡಬೇಕಿಲ್ಲ. ಆದರೆ ಅದಕ್ಕೆ ಆಯ್ದುಕೊಂಡ ಸಂದರ್ಭ ಎಷ್ಟು ಉಚಿತ ಎನ್ನುವುದು ಪ್ರಶ್ನಾರ್ಹ.  ತಮ್ಮ ಆಹಾರದ ಬಗ್ಗೆ ಯಾರಿಗೇ ಆಗಲಿ ಗೌರವವಿರಬೇಕು. ಅದಕ್ಕೆ ಅವಮರ್ಯಾದೆ ಆದಾಗ ಸಕಾರಣಯುಕ್ತವಾಗಿ ಪ್ರಶ್ನಿಸಬೇಕು ಎನ್ನುವುದಾದರೆ ನಿಜವಾಗಿಯೂ ಮುಖ್ಯಮಂತ್ರಿಯೊಬ್ಬರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರು ಅದು ಅಪವಿತ್ರ, ಅಸಹ್ಯ ಎಂದು ಈ ನಾಡಿನ ʻಸನಾತನಿಶ್ರೇಷ್ಠರುʼ ಪುಕಾರು ಎಬ್ಬಿಸಿದಾಗ ʼಇದು ಶಾಸ್ತ್ರೋಕ್ತವಾಗಿ ತಪ್ಪಲ್ಲʼ ಎಂದು ದೇವಸ್ಥಾನದವರೇ ಹೇಳಿದಾಗಲೂ ಈ ಸನಾತನಿಗಳು ಅದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸಿದಾಗ ಅದನ್ನು ಈ ವರ್ಗ ತೀರಾ ಗಂಭೀರವಾಗಿ ಪರಿಗಣಿಸಿ ಪ್ರತಿಭಟಿಸಬೇಕಿತ್ತು. ಆದರೆ ಅದು ಹಾಗೆ ಆಗಲೇ ಇಲ್ಲ. ಎಲ್ಲೋ ಒಂದೆರಡು ಕಡೆ ಸಾಂಕೇತಿಕವಾಗಿ ಪ್ರತಿರೋಧ ವ್ಯಕ್ತವಾಗಿ ತಣ್ಣಗಾಯಿತು.  ಈಗಲೂ ಮಾಂಸಾಹಾರಿಗಳಿಗೆ ತಮ್ಮ ಆಹಾರದ ಬಗ್ಗೆ ದೊಡ್ಡಮಟ್ಟದ ಗೌರವ ಇದೆ ಎಂದು ಹೇಳಲಾಗದು. ಹಾಗಾಗಿಯೇ ಅವರು ಕೆಲವು ವಾರ ಮಾಂಸ ತಿನ್ನದಿರುವ, ಅದನ್ನು ಮನೆಯ ಹೊರಗಡೆ ಬೇಯಿಸುವ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಇದು ʻತಾವು ತಪ್ಪು ಮಾಡುತ್ತಿದ್ದೇವೆʼ, ʻಮಾಂಸಾಹಾರ ಅಪವಿತ್ರʼ ಎಂದು ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗುವುದಿಲ್ಲವೇ?

ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಹುಟ್ಟಿಕೊಂಡಿರುವ ಬೇಡಿಕೆಗೆ ಇನ್ನೂ ಎರಡು ಅಂಶಗಳನ್ನು ನೋಡಬಹುದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅನಗತ್ಯವಾಗಿ ಮಾಂಸಾಹಾರವನ್ನು ಪ್ರಸ್ತಾಪಿಸಿ ನಿಯಮವೊಂದನ್ನು ಮಾಡಿದ್ದಾರೆ ಎಂಬುದು ಅದರಲ್ಲಿ ಒಂದು. ಮೂಲತಃ ಬ್ರಾಹ್ಮಣ ಸಮೂದಾಯಕ್ಕೆ ಸೇರಿರುವ ಅವರನ್ನು ಹಣಿಯಲು ಇದು ಒಂದು ಅಸ್ತ್ರವಾಗಿಯೂ ಕೆಲವರಿಗೆ ಸಿಕ್ಕಂತಾಗಿದೆ. ʼಇದು ಇಡೀ ಸಮ್ಮೇಳನವನ್ನು ಬ್ರಾಹ್ಮಣೀಕರಣ ಮಾಡುವ ಹುನ್ನಾರʼ ಎಂಬ ಟೀಕೆ ಬಂದಿರುವುದು ಈ ಹಿನ್ನಲೆಯಲ್ಲಿಯೇ. ಇನ್ನೊಂದು ಮದ್ಯ ಮಾಂಸಗಳು ವರ್ಜ್ಯ ಎಂದು ಭಾವಿಸಲಾಗುವ ಶರಣ ಸಂಸ್ಕೃತಿಗೆ ಸೇರಿರುವ ವಯೋವೃದ್ಧರೂ ಜ್ಞಾನವೃದ್ಧರೂ ಆಗಿರುವ ಗೊ ರು ಚನ್ನಬಸಪ್ಪ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವಂಥದ್ದು. ಅವರು ತಮ್ಮ ಹಿರಿತನಕ್ಕೆ ಮತ್ತು ಮಿತಿಗೆ ಅನುಗುಣವಾಗಿ, ʼಆಹಾರ ನೀಡಿಕೆ ವಿಷಯ ಅಲ್ಲಿನ ಸ್ವಾಗತ ಸಮಿತಿಗೆ ಬಿಟ್ಟ ವಿಷಯʼ ಎಂದು ಹೇಳಿದ್ದಾರೆ. ಸಿದ್ಧಲಿಂಗಯ್ಯನವರೋ ದೇವನೂರ ಅವರೋ ಅಧ್ಯಕ್ಷರಾಗಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಗೊತ್ತಿಲ್ಲ.

ಅಲ್ಲಲ್ಲಿ ಒಂಟಿ ಒಂಟಿಯಾಗಿ ಕೇಳಿ ಬರುವ ಧ್ವನಿ ಎತ್ತರಕ್ಕೆ ಏರಲಾರದು ಬಿತ್ತರಕ್ಕೆ ವ್ಯಾಪಿಸಲಾರದು ಎಂದು ಮಾಂಸಾಹಾರಕ್ಕೆ ಒತ್ತಾಯಿಸುತ್ತಿರುವವರೆಲ್ಲ ಒಂದು ʼಬಾಡೂಟ ಬಳಗʼವನ್ನೂ ರಚಿಸಿಕೊಂಡು ಸಾಂಘಿಕವಾಗಿ ತಮ್ಮ ಹಕ್ಕೊತ್ತಾಯವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪತ್ರಿಕಾ ಗೋಷ್ಠಿ, ಪ್ರತಿಭಟನೆ, ಮನವಿ ಸಲ್ಲಿಕೆ ಇತ್ಯಾದಿ ಕಾರ್ಯಗಳು ಈ ಹಕ್ಕೊತ್ತಾಯದ ಭಾಗವಾಗಿ ನಡೆಯುತ್ತಿವೆ. ಈ ಬಗ್ಗೆ ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಸಲ್ಲಿಸುವುದಾಗಿಯೂ ತಮ್ಮ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಗದಿದ್ದರೆ ತಾವೇ ಈ ಮಾಂಸಾಹಾರದ ವ್ಯವಸ್ಥೆ ಮಾಡುವುದಾಗಿಯೂ ಹೇಳಿಕೆ ನೀಡಿ ಒಂದು ರೀತಿಯ ಒತ್ತಡವನ್ನೂ ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಶತಶತಮಾನಗಳಿಂದ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ಕಾಣುತ್ತಿರುವುದು, ಬಹುಸಂಖ್ಯಾತರ ಆಹಾರ ಪದ್ಧತಿಯೊಂದನ್ನು ಅವಮಾನಿಸುವ ಕ್ರಮವೇ ಆಗಿದೆ. ಇದನ್ನು ಹೋಗಲಾಡಿಸಲು ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂಬುದು ಇವರ ಒಟ್ಟಾರೆ ಬೇಡಿಕೆಯ ಸಾರಾಂಶ. ಇವರ ಹೇಳಿಕೆಯಲ್ಲಿ ಅರ್ಧಭಾಗ, ಅಂದರೆ ʼಶತಶತಮಾನಗಳಿಂದ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ಕಾಣುತ್ತಿರುವುದು ಮತ್ತು ಆ ಮೂಲಕ ಬಹುಸಂಖ್ಯಾತರ ಆಹಾರ ಪದ್ಧತಿಯೊಂದನ್ನು ಅವಮಾನಿಸುತ್ತಿರುವುದುʼ ಇದನ್ನು ಒಪ್ಪಿಕೊಳ್ಳಲು ಯಾರಿಗೂ ಸಮಸ್ಯೆಯಿಲ್ಲ. ಏಕೆಂದರೆ ಇದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿರುವ ಸತ್ಯವಾಗಿದೆ. ಆದರೆ ಇದಕ್ಕೆ ಪರಿಹಾರವಾಗಿ ಅಂದರೆ ʻಇದನ್ನು ಹೋಗಲಾಡಿಸಲು ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕುʼ ಎಂಬುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲು ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿಯೇ ಇದರ ಪರ ಮತ್ತು ವಿರೋಧ ಅಭಿಪ್ರಾಯಗಳ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ವ್ಯಾಪಕವಾಗಿ ನಡೆದಿದೆ. ಈ ಸಮಸ್ಯೆ ಎಷ್ಟು ಆಳ ಮತ್ತು ಅಗಲಗಳನ್ನು ಹೊಂದಿದೆ ಎಂಬುದನ್ನು ಕೆಲವು ಅಂಶಗಳ ಪರಿಶೀಲನೆಯ ಮೂಲಕ ನೋಡೋಣ.

ಮೊದಲನೆಯದಾಗಿ ಇವರು ಹೇಳುವಂತೆ ಆಹಾರದ ವಿಷಯದಲ್ಲಿ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ʼಕೀಳಾಗಿʼ ಕಾಣುವುದು ಸರಿಯಲ್ಲ ಎಂಬುದೇನೋ ನಿಜ. ಆದರೆ ಮಾಂಸಾಹಾರಿಗಳು ಆಹಾರದ ವಿಷಯದಲ್ಲಿ ʼತಾವೆಲ್ಲ ಒಂದುʼ ಎಂದು ಭಾವಿಸುತ್ತಾರೆಯೇ? ಖಂಡಿತಾ ಇಲ್ಲ. ಅವರಲ್ಲಿಯೂ ಮತ್ತೆ ಒಳಭೇದವಿದೆ.  ಈ ಬಗ್ಗೆ ಹಿರಿಯ ಸಂಶೋಧಕರಾದ ರಹಮತ್‌ ತರೀಕೆರೆಯವರು ತಮ್ಮ ಸಂಶೋಧನಾ ಗ್ರಂಥವೊಂದರಲ್ಲಿ ವ್ಯಾಪಕವಾಗಿ ಚರ್ಚೆಮಾಡಿದ್ದಾರೆ. ಅವರು ಹೇಳುವ ಪ್ರಕಾರ ಆಹಾರ ಪದ್ಧತಿಗಳನ್ನು ಆಧರಿಸಿ ಇರುವ ಈ ಭೇದಭಾವ ಕೇವಲ ಸಸ್ಯಾಹಾರಿಗಳ ಮತ್ತು ಮಾಂಸಾಹಾರಿಗಳ ಮಧ್ಯೆ ಮಾತ್ರವಿಲ್ಲ. ಮಾಂಸಾಹಾರಿಗಳು ಕೂಡ ತಾವೆಲ್ಲ ಒಂದು ಎಂದು ಭಾವಿಸುವುದಿಲ್ಲ. ಅದರಲ್ಲಿನ ಒಳಭೇದ ಹೇಗಿದೆ ಎಂದರೆ ಸಸ್ಯವನ್ನು ತಿನ್ನುವ ಪ್ರಾಣಿಗಳನ್ನು (ಕುರಿ, ಕೋಳಿ ಇತ್ಯಾದಿ) ತಿನ್ನುವವರು ಶ್ರೇಷ್ಠ; ಮಾಂಸವನ್ನು ತಿನ್ನುವ ಪ್ರಾಣಿಗಳನ್ನು (ಬೆಕ್ಕು, ನಾಯಿ ಇತ್ಯಾದಿ) ತಿನ್ನುವವರು ಕನಿಷ್ಠ! ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ನೀಡಿದರೆ ಈ ಸಮಸ್ಯೆ ಬಗೆಹರಿಯುವ ಬದಲು ಇನ್ನಷ್ಟು ಕಗ್ಗಂಟಾಗುವ ಅಪಾಯವೇ ಹೆಚ್ಚು.

ಗಂಟು ಕಗ್ಗಂಟಾಗುವ ಅಪಾಯ

ಅದು ಹೇಗೆ ಎಂದರೆ ಒಂದು ವೇಳೆ ಇವರ ಬೇಡಿಕೆಗೆ ಮಾನ್ಯತೆ ನೀಡಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಸಂಘಟಕರು ಒಪ್ಪಿಕೊಂಡರು ಎಂದೇ ಇಟ್ಟುಕೊಳ್ಳೋಣ. ಆಗ ಮೊದಲನೆಯದಾಗಿ ಯಾವ ಪ್ರಾಣಿಯ ಮಾಂಸವನ್ನು ನೀಡಬೇಕು ಎಂಬ ಪ್ರಶ್ನೆ ಎದುರಾಗಬಹುದು. (ತರಕಾರಿಯ ವಿಷಯದಲ್ಲಿ ಯಾವ ತರಕಾರಿಯ ಸಾರು ಮಾಡಬೇಕು ಎಂಬುದು ಸಮಸ್ಯೆಯಾಗಲಾರದು). ಸಂಘಟಕರು ಖರ್ಚುವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸಾವಿರಾರು ಜನರಿಗೆ ಊಟದ ವ್ಯವಸ್ಥೆಮಾಡಬೇಕಾಗುವುದರಿಂದ ಅಗ್ಗದ ಮಾಂಸವನ್ನು ಖರಿದಿಸಲು ಅನಿವಾರ್ಯವಾಗಿ ಮುಂದಾಗಬೇಕಾಗಬಹುದು. ಆಗ ಅವರು ದನದ ಮಾಂಸ (ಬೀಫ್)ಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಹೀಗೆ ಅವರು ಮುಂದುವರೆದರೆ ಗೋವನ್ನು `ಅಮ್ಮ’ `ಅಮ್ಮ’ ಎಂದು ಕರೆಯುವ ಹಿಂದುತ್ವವಾದಿಗಳು ಸುಮ್ಮನಿರುತ್ತಾರೆಯೇ? ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಧ್ವಜಹಿಡಿದು ಎದ್ದುನಿಲ್ಲುತ್ತಾರೆ! ಅಷ್ಟು ಮಾಡಿದರೆ ಪುಣ್ಯ. ಅದಕ್ಕೆ ಜನಾಂಗೀಯ ಧಾರ್ಮಿಕ ದ್ವೇಷ ಇತ್ಯಾದಿ ಬಣ್ಣಬಳಿದು, ಇದು ʻಅಲ್ಪಸಂಖ್ಯಾತರ ತುಷ್ಟೀಕರಣʼ ಎಂದು ಮುಸ್ಲಿಮರ ಮೇಲಿನ ತಮ್ಮ ಪರಂಪರಾನುಗತ ದ್ವೇಷವನ್ನು ಕಕ್ಕತೊಡಗುತ್ತಾರೆ.

ಇನ್ನು ಮಾಂಸಾಹಾರಿಗಳಾದ ಬೆಕ್ಕು,ನಾಯಿ, ಹಾವು ಇತ್ಯಾದಿಗಳನ್ನು ಬಳಸುವುದು ಸಾಧ್ಯವಿಲ್ಲದ ಮಾತು. ಏಕೆಂದರೆ ಅವು ಎಲ್ಲ ಮಾಂಸಹಾರಿಗಳ ಆಹಾರವಲ್ಲ ಎಂಬುದು ಒಂದು ಕಾರಣವಾದರೆ ಅವುಗಳ ದೊಡ್ಡ ಪ್ರಮಾಣದ ಅಲಭ್ಯತೆ ಇನ್ನೊಂದು ಕಾರಣ. ಹಂದಿಗಳ ಬಳಕೆ ಕೂಡ ಧಾರ್ಮಿಕ ಆಯಾಮ ಪಡೆಯುವುದರಿಂದ ಅದೂ ಆಗದ ಮಾತು. ಅಂತಿಮವಾಗಿ ಉಳಿದ ಆಯ್ಕೆ ಎಂದರೆ ಬಹುಬಳಕೆಯ ಕುರಿ ಮತ್ತು ಕೋಳಿಗಳು. ಪಾಪ ಇವುಗಳು ಅದೇನು ಕರ್ಮ ಮಾಡಿವೆಯೋ ಏನೋ. ಇವುಗಳ ಬಳಕೆಯ ಬಗ್ಗೆ ಒಂದಿಷ್ಟು ಸಹಮತ ಮೂಡಬಹುದೇನೋ. ಆದರೆ ಇವುಗಳ ಬಳಕೆ ಕೂಡ ನಿರ್ವಿಘ್ನವಾಗಿ ನಡೆಯುತ್ತದೆ ಎನ್ನಲಾಗದು. ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡಬೇಕಾಗುವುದರಿಂದ ಸಾವಿರಗಟ್ಟಲೆ ಈ ಪ್ರಾಣಿಗಳು ಬೇಕಾಗಬಹುದು. ಆಗ ಬಹಳ ದೊಡ್ಡಮಟ್ಟದಲ್ಲಿ ಈ ಪ್ರಾಣಿಗಳ ʻಮಾರಣಹೋಮʼ ನಡೆಯಬೇಕಾಗುತ್ತದೆ. ಆಗ ಇದಕ್ಕೆ ʼಪ್ರಾಣಿದಯಾ ಸಂಘʼಗಳು ಅಡ್ಡಿಪಡಿಸಲಾರವೇ? (ಸಧ್ಯಕ್ಕೆ ಸಸ್ಯದಯಾ ಸಂಘಗಳು ಇಲ್ಲವಾದ್ದರಿಂದ ಸಸ್ಯಾಹಾರಕ್ಕೆ ಈ ಸಮಸ್ಯೆ ಇಲ್ಲ).

ಇನ್ನು ವಿತರಣೆ ಸಮಸ್ಯೆ. ಒಂದು ವೇಳೆ ಈ ಎಲ್ಲ ಸಮಸ್ಯೆಗಳನ್ನು ಏನೋ ಹೊಂದಾಣಿಕೆ ಮಾಡಿಕೊಂಡು ಮಾಂಸಾಹಾರವನ್ನು ಮಾಡುವುದು ಎಂದು ಅಂದುಕೊಂಡರೂ ಅದರ ವಿತರಣೆ ಅಷ್ಟು ಸುಲಭವಲ್ಲ. ಎರಡು ರೀತಿಯ ಆಹಾರ ಎಂದಾಗ ಅದನ್ನು ಸಾಮಾನ್ಯವಾಗಿ ಬೇರೆ ಬೇರೆ ಪೆಂಡಾಲುಗಳಲ್ಲಿಯೇ ಮಾಡುವುದು ರೂಢಿ. ಇದರಿಂದ ಮತ್ತೆ ಯಾವ ಭೇದಭಾವವನ್ನು ತೊಡೆದುಹಾಕಬೇಕು ಎಂದು ಇಷ್ಟೆಲ್ಲ ಹೋರಾಟ ನಡೆಯುತ್ತಿದೆಯೋ ಆ ಹೋರಾಟಕ್ಕೆ ವಿರುದ್ಧವಾಗಿ ಆ ಭೇದಭಾವ ಇನ್ನಷ್ಟು ಢಾಳಾಗಿ ಕಾಣತೊಡಗುತ್ತದೆ. ಇದು ಮತ್ತೆ ಮಾಂಸಾಹಾರಿಗಳನ್ನು ಅಸ್ಪೃಶ್ಯರಂತೆ ಕಾಣುವ ಕ್ರಮವೇ ಆಗುವುದರಿಂದ ಇದು ಇರಕೂಡದು, ಒಂದೇ ಪೆಂಡಾಲಿನಲ್ಲಿ ಇವುಗಳ ವ್ಯವಸ್ಥೆಯಾಗಬೇಕು ಬೇಕಾದವರು ಬೇಕಾದದ್ದನ್ನು ಆಯ್ದುಕೊಂಡು ಊಟಮಾಡಲಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಇದು ವಾಸ್ತವದಲ್ಲಿ ಆಗದ ಮಾತು. ಏಕೆಂದರೆ ಕುರಿ, ಕೋಳಿ ತಿನ್ನುವವರು ತಮ್ಮಂತೆಯೇ ಮಾಂಸಾಹಾರಿಗಳಾದ ಬೆಕ್ಕು, ಜಿರಲೆ ಇತ್ಯಾದಿ ತಿನ್ನುವವರ ಜೊತೆಗೆ ಕೂತು ಊಟಮಾಡಲು ಮುಜುಗರ ಪಡುತ್ತಾರೆ ಎನ್ನುವುದಾದರೆ ಎಂದೆಂದೂ ಮಾಂಸಾಹಾರವನ್ನೇ ಮುಟ್ಟದ ಸಸ್ಯಾಹಾರಿಗಳು ಇವರ ಜೊತೆ ಕುಳಿತು ಊಟಮಾಡುತ್ತಾರೆಯೇ? ಸಾಧ್ಯವಿಲ್ಲ. ಈ ಬಗ್ಗೆ ಯಾರನ್ನಾದರೂ ಒತ್ತಾಯಪಡಿಸುವುದು ಸರಿಯಾಗುತ್ತದೆಯೇ? ಮತ್ತೆ ಇದು ಜನರನ್ನು ಪ್ರತ್ಯೇಕಿಸುವ ಸಂಗತಿಯೇ ಆಗುತ್ತದೆ. ಒಂದು ವೇಳೆ ಎರಡೂ ಆಹಾರಗಳನ್ನು ಒಂದೇಕಡೆ ವಿತರಿಸುವ ವ್ಯವಸ್ಥೆಯಾದರೆ ಅಲ್ಲಿ ಇಡುವ ಸಸ್ಯಾಹಾರ ಹಾಗೇ ಉಳಿದುಬಿಡುತ್ತದೆ. ಏಕೆಂದರೆ ʼಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೆಲ್‌ʼ ಗಳಲ್ಲಿ ಸಸ್ಯಾಹಾರವನ್ನು ಉಂಡು ಉಂಡು ಬೇಜಾರಾದ ಮಾಂಸಾಹಾರಿಗಳು ಮಾತ್ರ ಒಂದು ಬದಲಾವಣೆಗಾಗಿ ಸಸ್ಯಾಹಾರವನ್ನು ಊಟಮಾಡುತ್ತಾರೆಯೇ ಹೊರತು ಎಂದೆಂದೂ ಮಾಂಸಾಹಾರವನ್ನೇ ಊಟಮಾಡದವರು ಅಲ್ಲಿಗೆ ಹೋಗುವುದೇ ಇಲ್ಲ. ಇಲ್ಲಿಯೂ ಸಸ್ಯಾಹಾರಿಗಳು ಊಪವಾಸವಿರುವ ಸಂದರ್ಭ ಬಂದರೂ ಊಟದ ಕೌಂಟರ್‌ಗಳ ಕಡೆ ತಲೆಹಾಕುವುದಿಲ್ಲ.


ಅಶ್ಪೃಶ್ಯತೆ ಆದರೂ ಸರಿ ಬೇರೆ ಬೇರೆ ಕಡೆ ವ್ಯವಸ್ಥೆಮಾಡಿವುದೇ ಸರಿ ಎಂದರೂ ಸಮಸ್ಯೆ ಬಗೆಹರಿಯುವುದಿಲ್ಲ. ʻಬಾಡೂಟʼ ಎಂಬುದು  ಕೇವಲ ಹಸಿವನ್ನು ಹಿಂಗಿಸುವ ಒಂದು ಸಾಮಾನ್ಯ ಆಹಾರ ಅಲ್ಲ. ಅದು ಒಂದು ಸಂಭ್ರಮ! ಸಂಭ್ರಮವಿದ್ದಲ್ಲಿ, ಸ್ಪರ್ಧೆ, ಸಮಸ್ಯೆಗಳೂ ಸಾಮಾನ್ಯ. ಅದು ಏನೆಲ್ಲ ಅನಾಹುತ ಮಾಡುತ್ತದೆ ಎಂಬುದನ್ನು ಈ ಲೇಖನದ ಆರಂಭದ ಒಂದು ಉದಾಹರಣೆಯಲ್ಲಿ ನೋಡಿದ್ದೇವೆ. ಲೇಖಕರು ತಮ್ಮ ಲೇಖನದಲ್ಲಿ ಕೊಡುವ ಇನ್ನೊಂದು ಉದಾಹರಣೆಯಲ್ಲಿ ಮಧ್ಯಮವರ್ಗದ ಮಹಿಳೆಯಾದ ಅವರ ಅಮ್ಮ ದುಬಾರಿ ಮಾಂಸವನ್ನು ಹೆಚ್ಚು ಬಳಸಲು ಆಗದಿದ್ದಕ್ಕೆ ಮಾಂಸದ ಸಾರಿನಲ್ಲಿ ಕಡಿಮೆ ಖರ್ಚಿನ ತರಕಾರಿ ತುಂಡುಗಳನ್ನು ಎಸೆದು ಹೊಂದಾಣಿಕೆ ಮಾಡುತ್ತಿದ್ದರಂತೆ. ಸಮ್ಮೇಳನದ ಸಂಘಟಕರೂ ದೊಡ್ಡಪ್ರಮಾಣದಲ್ಲಿ ಇಂತಹ ವ್ಯವಸ್ಥೆಮಾಡುವಾಗ ಹೀಗೆ ತರಕಾರಿ ತುಂಡು ಸೇರಿಸುವುದು ಅನಿವಾರ್ಯವಾದೀತು. ಆಗ ಊಟಮಾಡುವಾಗ ತಮಗೆ ತರಕಾರಿ ತುಂಡು ಬಂತೆಂದೂ, ಮಾಂಸದ ತುಂಡು ಬರಲಿಲ್ಲವೆಂದೂ, ಅದು ಬಂದರೂ ದೇಹದ ʼಕನಿಷ್ಠʼಭಾಗದ ತುಂಡು ಬಂದಿತೆಂದೂ (ಪ್ರಾಣಿಗಳ ದೇಹದ ಬೇರೆ ಬೇರೆ ʼಪೀಸ್‌ʼಗಳಿಗೆ ಬೇರೆ ಬೇರೆ ಹಂತದ ಗೌರವಗಳಿವೆ.) ಖ್ಯಾತೆ ತೆಗೆಯುವವರು ಸಾಮಾನ್ಯ.

ಇವೆಲ್ಲ ಅನವಶ್ಯಕ ಚರ್ಚೆಯೆಂದೂ ಸಾಹಿತ್ಯ ಸಮ್ಮೇಳನಕ್ಕೆ ಬರುವವರೆಲ್ಲ ಪ್ರಬುದ್ಧರಾಗಿರುತ್ತಾರೆಂದೂ ಕೆಲವರು ಹೇಳಬಹುದೇನೋ. ಆದರೆ ಅಷ್ಟು ಪ್ರಬುದ್ಧರನ್ನೇ ಸೇರಿಸಿಕೊಂಡು ಮಾಡುವ ಸಮ್ಮೇಳನ ಇದಲ್ಲ. ಇಲ್ಲಿ ವಿಶಾಲ ಹೃದಯರೂ, ಸಂಕುಚಿತ ಬುದ್ಧಿಯವರೂ, ʼಸಣ್ಣಮನಸ್ಸಿನ ದೊಡ್ಡಜನʼರೂ ಎಲ್ಲರೂ ಇರುತ್ತಾರೆ. ಮೂರು ದಿನ ಊಟಮಾಡಿದರೂ ಒಂದು ಸಲವೂ ನನಗೆ ಊಟದಲ್ಲಿ ಒಂದೇ ಒಂದು ʼಲೆಗ್‌ ಪೀಸ್‌ʼ ಬರಲಿಲ್ಲ ಎಂದು ಭಾಷಣ ಮಾಡುವುದನ್ನೆ ಬಿಟ್ಟು ಸಿಟ್ಟಾಗಿ ಹೊರಡುವ ವಿದ್ವಾಂಸರೂ ಇರುತ್ತಾರೆ ಅನ್ನುವುದನ್ನು ಗಮನಿಸಬೇಕು. (ಸರಿಯಾದ ವಸತಿ ವ್ಯವಸ್ಥೆಮಾಡಿಲ್ಲ, ವಾಹನದ ವ್ಯವಸ್ಥೆ ಮಾಡಿಲ್ಲ ಎಂದು ಹೀಗೆ ವಿದ್ವಾಂಸರೂ, ಕಲಾವಿದರೂ ಮುನಿಸಿಕೊಳ್ಳುವ ಉದಾಹರಣೆಗಳು ಈ ಹಿಂದಿನ ಸಮ್ಮೇಳನಗಳಲ್ಲಿ ಈಗಾಗಲೇ ನಡೆದೇ ಇವೆ). ಅಲ್ಲಿ ಮದುವೆಯೇ ನಿಂತುಹೋದಂತೆ ಇಲ್ಲಿ ಸಾಹಿತ್ಯ ಸಮ್ಮೇಳನವೇ ನಿಂತುಹೋಗದಿದ್ದರೂ ಅಧ್ವಾನವಂತೂ ಆಗಬಹುದು. ಎಲ್ಲೇ ಬಾಡೂಟ ನಡೆಯಲಿ. ಹತ್ತು ಊಟಗಳಲ್ಲಿ ಮೂರು ನಾಲ್ಕರಲ್ಲಾದರೂ ಗಲಾಟೆಗಳಾಗದಿದ್ದರೆ ಅದು ಬಾಡೂಟಕ್ಕೇ ಅವಮಾನ! ಏಕೆಂದರೆ ಅದರ ಮಹಿಮೆಯೇ ಅಂಥದ್ದು ಹೀಗಾಗಿ ಬಾಡೂಟ ಎಂಬುದು ಊಟ ಮಾತ್ರವಲ್ಲ; ಸ್ಪೋಟವೂ ಹೌದು! ಅದಕ್ಕೆ ಬಾಂಧವ್ಯವನ್ನು ಬೆಸೆಯುವ ಗುಣವಿದ್ದಂತೆ ಬಂಧುಗಳನ್ನು ಛಿದ್ರಛಿದ್ರಮಾಡುವ ಸ್ಪೋಟಕ ಗುಣವೂ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಊಟೋಪಚಾರವೆಂಬ ಪ್ರತಿಷ್ಠೆ

ಸಾಹಿತ್ಯ ಸಮ್ಮೇಳನಗಳು ಈಗಾಗಲೇ ಊಟದ ಸಮ್ಮೇಳನಗಳಾಗುತ್ತಿವೆ ಎಂಬ ವ್ಯಾಪಕವಾದ ಟೀಕೆಗಳಿವೆ. ಇದಕ್ಕೆ ಕಾರಣಗಳೂ ಇವೆ. ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಿಗೆ ಭಾಗವಹಿಸುವ ವಿದ್ವಾಂಸರು ಯಾರು ಅವರ ಅರ್ಹತೆಗಳೇನು? ಅಲ್ಲಿ ನಡೆಸುವ ಗೋಷ್ಠಿಗಳು ಪ್ರಸ್ತುತವೇ ಇಂತಹ ಚರ್ಚೆಗಳಿಗಿಂತ ಊಟ ತಿಂಡಿಗಳ ಚರ್ಚೆಗಳೇ ಮಾಧ್ಯಮಗಳಲ್ಲಿ ದೊಡ್ಡ ಸ್ಥಾನವನ್ನೂ ವ್ಯಾಪಕ ಪ್ರಚಾರವನ್ನೂ ಪಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಅಂದರೆ ಊಟತಿಂಡಿಗಳ ಚರ್ಚೆಗಳು ನಡೆಯಲೇಬಾರದು ಎಂದಲ್ಲ. ಆದರೆ ಅವು ಸಾಹಿತ್ಯದ ಚರ್ಚೆಯನ್ನು ಹಿಮ್ಮೆಟ್ಟಿಸಿ ಮುಂದೆ ಬಂದು ಚರ್ಚೆಗೊಳಗಾಗಬಾರದು. ಈ ಹಿಂದಿನ ಸಮ್ಮೇಳನಗಳಲ್ಲಿ ಇದನ್ನು ಗಮನಿಸಿ ರಾಯಚೂರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕರು, ಸಾಹಿತ್ಯ ಸಮ್ಮೇಳನಗಳಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಸಂಘಟನೆಯ ವತಿಯಿಂದ ಮಾಡುವುದನ್ನು ಕೈಬಿಟ್ಟು ತೀರಾ ಕನಿಷ್ಠ ಮೊತ್ತದ ನೋಂದಣಿ ಶುಲ್ಕವನ್ನು ವಿಧಿಸಿ, ಊಟ ತಿಂಡಿಗಳು ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ಹೊಟೆಲ್‌ಗಳ ವ್ಯವಸ್ಥೆಮಾಡಿ (ಈಗ ಪುಸ್ತಕದ ಅಂಗಡಿಗಳ ವ್ಯವಸ್ಥೆ ಮಾಡಿದಂತೆ) ಸಮ್ಮೇಳನ ಮಾಡುವುದೇ ಸೂಕ್ತ ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಗೋಷ್ಠಿಗಳ ವ್ಯವಸ್ಥೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ. ಅಲ್ಲಿನ ಊಟೋಪಚಾರ ಮತ್ತು ಮನರಂಜನೆಯ ವ್ಯವಸ್ಥೆಯನ್ನು ಅಲ್ಲಿ ಸ್ಥಳೀಯವಾಗಿ ರಚನೆಯಾಗುವ ಸ್ವಾಗತ ಸಮಿತಿ ಮಾಡುತ್ತದೆ. ಈ ಸ್ವಾಗತ ಸಮಿತಿಯಲ್ಲಿ ಅಲ್ಲಿನ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಅಪರೂಪಕ್ಕೆ ತಮ್ಮ ಜಿಲ್ಲೆಗೆ ಬರುವ ಈ ಸಮ್ಮೇಳನವನ್ನು ಅವರೆಲ್ಲ ʼಪ್ರತಿಷ್ಠೆʼಯ ಸಂಗತಿಯಾಗಿ ತೆಗೆದುಕೊಳ್ಳುತ್ತಾರೆ. ಬಂದವರಿಗೆ ಸರಿಯಾಗಿ ಊಟೋಪಚಾರ ಮಾಡದಿದ್ದರೆ ತಮ್ಮ ಜಿಲ್ಲೆಯ ಮರ್ಯಾದೆ ಹರಾಜಾಗುತ್ತದೆ ಎಂಬ ಆತಂಕಕ್ಕೆ ಒಳಗಾಗುವ ಅವರು ಏನಾದರೂ ಸರಿ ಸರಿಯಾದ ಊಟೋಪಚಾರ ಮಾಡಲೇಬೇಕು ಎಂಬ ಹಟಕ್ಕೆ ಬೀಳುತ್ತಾರೆ. ಹಾಗಾಗಿ ಈ ಸಲಹೆಯನ್ನು ಇದುವರೆಗೂ ಯಾವ ಸ್ವಾಗತ ಸಮಿತಿಗಳೂ ಗಂಭೀರವಾಗಿ ಪರಿಗಣಿಸಿಲ್ಲ.

ʻಕೂಡೂಟʼ ಮತ್ತು ʼಬಾಡೂಟʼ

ಸರಿ, ಸಮ್ಮೇಳನದಲ್ಲಿ ಊಟೋಪಚಾರವನ್ನು ʻಮಾಡುವುದುʼ ʼಬಿಡುವುದುʼ ಇವುಗಳಲ್ಲಿ ʼಮಾಡುವುದನ್ನೇ ಸಂಘಟಕರು ಆಯ್ಕೆಮಾಡಿಕೊಂಡಾಗ ಅದೊಂದು ದೊಡ್ಡ ಸವಾಲಿನ ಕೆಲಸವಾಗುವುದರಿಂದ ಅದರ ನಿರ್ವಹಣೆ ಅಷ್ಟು ಸುಲಭವಾಗಿ ಇರುವುದಿಲ್ಲ. ಅಂಥದ್ದರಲ್ಲಿ ಇಂಥಹ ಆಹಾರವನ್ನೇ ನೀಡಬೇಕು ಎಂದು ಬೇಡಿಕೆ ಇಡುವುದು, ಒತ್ತಡ ತರುವುದು ಸಜ್ಜನಿಕೆ ಅಲ್ಲ. ಅಷ್ಟಕ್ಕೂ ಯಾರೂ ಅಲ್ಲಿಗೆ ಊಟ ಮಾಡಲಿಕ್ಕೇ ಹೋಗಿರುವುದಿಲ್ಲ. ಅಲ್ಲಿ ಆಹಾರ ನೀಡುವುದು ಹಸಿವಿನಂತಹ ಒಂದು ಮೂಲಭೂತ ಅವಶ್ಯಕತೆಯನ್ನು ಪೂರೈಸಲಿಕ್ಕಾಗಿಯೇ ಹೊರತು ಹೋಗುವವರೆಲ್ಲರ ಅಪೇಕ್ಷೆಗಳನ್ನು ಪೂರೈಸಲಿಕ್ಕಲ್ಲ. ಇವತ್ತು ಬಾಡೂಟ ಬೇಕು ಎಂದು ಕೇಳುವವರು ಅದು ಪೂರೈಕೆಯಾದರೆ ಅದರ ಕಾಂಬಿನೇಷನ್‌ ಪರಿಪೂರ್ಣವಾಗಬೇಕಾರೆ ಜೊತೆಗೆ ʼಎಣ್ಣೆʼ ಕೂಡ ಇರಬೇಕು ಎಂಬ ಬೇಡಿಕೆ ಇಡಬಹುದು. ಇದು ಸರಿಯಾದ ನಡೆಯಲ್ಲ. ಹೀಗೆ, ʼಅಗತ್ಯʼ ಮತ್ತು ʼಅಪೇಕ್ಷೆʼ ಇವುಗಳ ಮಧ್ಯೆ ಘರ್ಷಣೆ ಉಂಟಾದರೆ ಸಂಘಟಕರು ಅಗತ್ಯಕ್ಕೇ ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ ಅಲ್ಲಿ ಸಸ್ಯಾಹಾರವನ್ನು ನೀಡುವುದೇ ಸರಿ. ಇದಕ್ಕೆ ಸಾಮಾಜಿಕ, ಧಾರ್ಮಿಕವಾದ ಯಜಮಾನಿಕೆ-ದಾಸ್ಯ, ಏಕಸಂಸ್ಕೃತಿ-ಬಹುಸಂಸ್ಕೃತಿ ಇತ್ಯಾದಿ ಅಂಶಗಳನ್ನು ತಳುಕುಹಾಕಿಕೊಳ್ಳುವುದು, ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿಕೊಂಡಂತಾಗುವುದರಿಂದ ಅದನ್ನು ಮಾಡಲಿಕ್ಕೆ ಹೋಗುವುದು ಸರಿಯಲ್ಲ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಆಹಾರದ ವಿಷಯಕ್ಕೆ ಸಂಬಂಧಿಸಿದಂತೆ ಜೀವಿಗಳನ್ನು ಸಸ್ಯಾಹಾರಿಗಳು, ಮಾಂಸಾಹಾರಿಗಳು ಮತ್ತು ಮಿಶ್ರಾಹಾರಿಗಳು ಎಂದು ಮೂರು ವಿಧವಾಗಿ ವಿಭಾಗಿಸಿಕೊಳ್ಳುವ ಒಂದು ವೈಜ್ಞಾನಿಕ ತತ್ವವಿದೆ.  ಸಸ್ಯಗಳನ್ನು ಮಾತ್ರ ತಿನ್ನುವಂಥವು ಸಸ್ಯಾಹಾರಿಗಳು, ಮಾಂಸವನ್ನು ಮಾತ್ರ ತಿನ್ನುವಂಥವು ಮಾಂಸಾಹಾರಿಗಳು, ಇವೆರಡನ್ನೂ ತಿನ್ನುವಂಥವು ಮಿಶ್ರಾಹಾರಿಗಳು ಎಂಬುದು ಈ ತತ್ವದ ಸರಳ ನಿರೂಪಣೆ. ಈ ಹಿನ್ನಲೆಯಲ್ಲಿ ನೋಡಿದರೆ ನಾವು ಮನುಷ್ಯರನ್ನು ಈಗ ಮಾಡುತ್ತಿರುವಂತೆ ʻಸಸ್ಯಾಹಾರಿಗಳುʼ ಮತ್ತು ʻಮಾಂಸಾಹಾರಿಗಳುʼ ಎಂದು ವಿಭಾಗಿಸುವುದೇ ತಪ್ಪು ಕ್ರಮ. ಅವರನ್ನು ʻಸಸ್ಯಾಹಾರಿಗಳುʼ ಮತ್ತು ʻಮಿಶ್ರಾಹಾರಿಗಳುʼ ಎಂಬು ವಿಭಾಗಿಸಿಕೊಳ್ಳುವುದು ಸರಿಯಾದ ಕ್ರಮ. ಏಕೆಂದರೆ ಮಾಂಸವನ್ನು ತಿನ್ನದೇ ಇರುವವರು ನಮಗೆ ಸಿಗುತ್ತಾರೆಯೇ ಹೊರತು ಸಸ್ಯವನ್ನು ತಿನ್ನದೇ ಇರುವವರು ಸಿಗುವುದೇ ಇಲ್ಲ!

ಹೀಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಬೇಕು ಎಂಬ ಬೇಡಿಕೆ ಸಮಂಜಸವಲ್ಲ. ಆ ಬೇಡಿಕೆಯನ್ನು ಮಾನ್ಯವಾಡುವುದು ಸಂಘಟಕರ ಸರಿಯಾದ ನಡೆಯೂ ಅಲ್ಲ. ವೈಯಕ್ತಿಕ ಹಂತದಲ್ಲಿ ಯಾರಾದರೂ ಅದನ್ನು ಮಾಡಿಕೊಳ್ಳುವುದಾದರೆ ಅದನ್ನು ವಿರೋಧಿಸಬೇಕಾಗಿಯೂ ಇಲ್ಲ. ಆದರೆ ಸಾಹಿತ್ಯ ಸಮ್ಮೇಳನದ ಸಂಘಟಕರು ಮಾತ್ರ ಅದಕ್ಕೆ ಮುಂದಾಗಬಾರದು. ಎಲ್ಲ ಸಾಮೂಹಿಕ ಸಭೆ ಸಮಾರಂಭಗಳು, ಬಹಳಷ್ಟು ದೊಡ್ಡ ಮಟ್ಟದ ಸಮ್ಮೇಳನಗಳಲ್ಲಿ ಸೇರುವ ಬೃಹತ್‌ ಜನಸಮೂಹಕ್ಕೆ ಆಹಾರ ನೀಡುವ ಸಂದರ್ಭದಲ್ಲಿ ಎಲ್ಲಕಡೆ ಅನುಸರಿಸುವ ʻಎಲ್ಲರ ಆಹಾರʼವಾದ ಸಸ್ಯಾಹಾರವನ್ನೇ ನೀಡುವ ಕ್ರಮವನ್ನು ಸಾಹಿತ್ಯ ಸಮ್ಮೇಳನದಲ್ಲಿಯೂ ಅನುಸರಿಸುವುದೇ ಸರಿಯಾದ ಕ್ರಮ.  ಸಮ್ಮೇಳನಕ್ಕೆ ಹುಲಿ, ಚಿರತೆ ಮುಂತಾದವುಗಳನ್ನು ಕರೆಸಿಕೊಳ್ಳುವುದಾದರೆ ಆ ಮಾತು ಬೇರೆ. ಈ ಹಿನ್ನಲೆಯಲ್ಲಿ ʼಬಾಡು ನಮ್ಮ ಗಾಡುʼ ಎಂಬ ಘೋಷವಾಕ್ಯಕ್ಕೆ ವ್ಯತಿರಿಕ್ತವಾಗಿ ʼಕೂಡೂಟದಲ್ಲಿ ಬಾಡೂಟ ಬೇಡʼ ಎಂಬ ಘೋಷವಾಕ್ಯ ಮುನ್ನೆಲೆಗೆ ಬರಲಿ.

*****

ಡಾ. ರಾಜೇಂದ್ರ ಬುರಡಿಕಟ್ಟಿ

೧೧-೧೨-೨೦೨೪