Thursday, June 29, 2017

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

`ಅಂಬುಜಕೆೆ ಭಾನುವಿನ ಉದಯದ ಚಿಂತೆ / ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ' ಇವು  ಬಸವಣ್ಣನವರ ವಚನವೊಂದರ ಎರಡು ಧ್ವನಿಪೂರ್ಣವಾದ ಸಾಲುಗಳು. ನಮ್ಮ ಚಿಂತೆಯನ್ನು ಅನುಸರಿಸಿಯೇ ನಮ್ಮ ಚಿಂತನೆಗಳು ಮೂಡುವುದನ್ನೂ ಆ ಚಿಂತನೆಯಂತೆಯೇ ನಾವು ಕ್ರಿಯಾಶೀಲರಾಗುವುದನ್ನು ಈ ಸಾಲುಗಳು ಸೂಚ್ಯವಾಗಿ ಅರುಹುತ್ತವೆ. ಕನ್ನಡದ ಮಹಾಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ತಮ್ಮೊಂದಿಗಿನ `ಸಂವಾದ'ವೊಂದರಲ್ಲಿ ಭಾಗವಹಿಸಿ ಚಳವಳಿಗಳು ಮತ್ತು ಪ್ರಗತಿಪರ ಸಾಹಿತ್ಯದ ಬಗೆಗಿನ ತಮ್ಮ ಮಾಮೂಲಿ ವಿಷಕಾರುವಿಕೆಯನ್ನು ಮಾಡಿದ್ದು ವರದಿಯಾಗಿದೆ. ಕೆಲವು ವರ್ಷಗಳ ಹಿಂದೆ ಭೈರಪ್ಪನವರು ಏನಾದರೂ ಹೇಳಿಕೆ ನೀಡಿದರೆ ಅದಕ್ಕೆ ನಮ್ಮ ಸಾಹಿತ್ಯ ವಲಯದಿಂದ ಬಹುದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿತ್ತು. ಆದರೆ ಇತ್ತೀಚೆಗೆ ಅವರ ಹೇಳಿಕೆಗೆ ಕನ್ನಡದ ಯಾವ ಮುಖ್ಯ ಬರಹಗಾರರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುತ್ತಿಲ್ಲ. ಇದಕ್ಕೆ ಅವರ ವಿಚಾರವನ್ನು ಎಲ್ಲರೂ ಒಪ್ಪಿಕೊಂಡರು ಎಂದಾಗಲೀ ಅವರ ವಿಚಾರವನ್ನು ಎದುರಿಸುವ ಸಾಮಥ್ರ್ಯ ಯಾರಿಗೂ ಇಲ್ಲದಾಯಿತು ಎಂದಾಗಲೀ ಅರ್ಥವಲ್ಲ. ಬದಲಿಗೆ ಈ ಮನುಷ್ಯನ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ತೀಮರ್ಾನಕ್ಕೆ ಬಹುತೇಕರು ಬಂದಿದ್ದಾರೆಂದರ್ಥ. ಏಕೆಂದರೆ ದಾವಣಗೆರೆಯಲ್ಲಿ ಸಂವೇದನೆಯ ಸೂಕ್ಷ್ಮತೆಯ ಬಗ್ಗೆ ಮಾತಾಡಿರುವ ನಮ್ಮ ಭೈರಪ್ಪನವರು ಕನ್ನಡದ ಶಕ್ತಿಶಾಲಿ ಬರಹಗಾರರಲ್ಲಿ ಬಹುತೇಕ ಏಕೈಕ `ಸಂವಾದಸಾಧ್ಯ ಲೇಖಕ' ಅನ್ನಬಹುದು. ವರ್ಷಕ್ಕೆ ಒಂದೋ ಎರಡೋ ಬಾರಿ ಹುತ್ತದೊಳಗಿನಿಂದ ಹೊರಗೆ ಬರುವ ಹಾವೊಂದು ವಿಷವನ್ನು ಕಾರಿ ಮತ್ತೆ ಹುತ್ತ ಸೇರಿಕೊಳ್ಳುವ ಒಂದು ಚಿತ್ರಣವನ್ನು ನಾವು ಕಣ್ಣಮುಂದೆ ತಂದುಕೊಳ್ಳುವುದು ಅವರಿಗೆ ಮಾಡುವ ಅವಮಾನವೇನೂ ಆಗಲಿಕ್ಕಿಲ್ಲ. 

ಭೈರಪ್ಪನವರು ಕಳೆದ ವರ್ಷ ಬಹುತೇಕ ಹಸಿದವರ ಹೊಟ್ಟೆಗೆ ಒಂದಿಷ್ಟು ಅನ್ನಸಿಗುವುದಕ್ಕೆ ದಾರಿಯಾದ `ಅನ್ನಭಾಗ್ಯ'ದ ಬಡವರ ಉಣ್ಣುವ ತಟ್ಟೆಗೆ ಕಲ್ಲುಹಾಕುವ ಮಾತುಗಳನ್ನು ಆಡಿ ಸಾಹಿತ್ಯ ಮಾತ್ರವಲ್ಲ ಅದರಾಚೆಗಿನ ದುಡಿಯುವ ವರ್ಗದಿಂದಲೂ ಎರ್ರಾಬಿರ್ರಿ ಬೈಸಿಕೊಂಡು ಹೋದವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಇದೇ ಮೊದಲೇನೋ. ಅವರ ಹೇಳಿಕೆಗಳಿಗೆ ಮತ್ತು ಅವರು ತಮ್ಮ ಕೃತಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಪ್ರತಿಪಾದಿಸುವ ಅನ್ಯಮತಧರ್ಮಗಳ ಬಗೆಗಿನ ದ್ವೇಷ-ರೋಷಗಳಿಗೆ, ತಮ್ಮದೇ ಧರ್ಮದ ಮಹಿಳೆಯರು, ದಲಿತರು ಮುಂತಾದವರ ಏಳಿಗೆ ಬಗೆಗಿನ ಅಸೂಯೆಗೆ ವ್ಯಕ್ತವಾಗುವ ಧನಾತ್ಮಕವೂ ವ್ಯಾಪಕವೂ ಆದ ಟೀಕೆಗಳು ಅವರನ್ನು ಮುಟ್ಟುತ್ತವೆಯೋ  ಇಲ್ಲವೋ ಭಗವಂತನೇ ಬಲ್ಲ. ಏಕೆಂದರೆ ಆ ಟೀಕೆಗಳಿಗೆ ಅವರಿಂದ ಯಾವುದೇ ಬಗೆಯ ಪ್ರತಿಕ್ರಿಯೆ ಬರುವುದಿಲ್ಲ. ಹಾಗೆ ನೋಡಿದರೆ `ವಿವಾದಾತ್ಮಕ' ಎಂದು ಕರೆಯಬಹುದಾದ ಹೇಳಿಕೆ ನೀಡುವ, ಕೃತಿರಚಿಸುವ ಲೇಖಕರು ಕನ್ನಡದಲ್ಲಿ ಭೈರಪ್ಪ ಒಬ್ಬರೇ ಅಲ್ಲ. ಇನ್ನೂ ಹಲವರು ಇದ್ದರು ಮತ್ತು ಇದ್ದಾರೆ. ಆದರೆ ಅವರೆಲ್ಲರಲ್ಲಿ ಇರುವ ಒಂದು ಗುಣವಿಶೇಷತೆ ಎಂದರೆ ಈ ರೀತಿಯ ಧನಾತ್ಮಕವೋ ಋಣಾತ್ಮಕವೋ ಆದ ಟೀಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಬಂದಾಗ, ವಿವಾದಗಳು ಎದ್ದಾಗ, ಅವುಗಳಿಗೆ ತಮ್ಮ ಪ್ರತಿಕ್ರಿಯೆ ನೀಡುವಂಥದ್ದು ಮತ್ತು  ಆ ಮೂಲಕ ಎದ್ದ ವಿವಾದವನ್ನು ಮುಕ್ತಾಯ ಮಾಡುವುದು ಅಥವಾ ಆ ಬಗ್ಗೆ ಒಂದಿಷ್ಟು ಆರೋಗ್ಯಕರ ಚಚರ್ೆ ನಡೆಯುವಂತೆ ಮಾಡುವುದು. ಆದರೆ ಭೈರಪ್ಪನವರದ್ದು ಇದಕ್ಕೆ ವಿರುದ್ಧವಾದ ನಡೆ. ಒಮ್ಮೆ ಅವರು ಇಂತಹ ವಿವಾದಕ್ಕೆಡೆಮಾಡುವ ಹೇಳಿಕೆಯನ್ನು ನೀಡಿ ಅಂತರ್ಗತರಾದರೆ ಮುಗಿಯಿತು. ಅದರ ಬಗ್ಗೆ ಎಂತಹ ಉಗ್ರ ಪ್ರತಿಕ್ರಿಯೆ ಬಂದರೂ ಅದಕ್ಕೆ ಅವರು ಏನೊಂದೂ ಪ್ರತಿಕ್ರಿಯೆ ನೀಡಲಾರರು. ಯಾರೇ ಹೋರಾಡಲಿ ಊರೇ ಕೂಗಾಡಲಿ ಅವರ ನೆಮ್ಮದಿಗೆ ಭಂಗವಿಲ್ಲ! ಅವರು ಮತ್ತೆ ನಮಗೆ ಕಾಣಸಿಗುವುದು ಇನ್ನೊಂದೋ ಎರಡೋ ವರ್ಷಗಳ ನಂತರ. ಅದೂ ಇನ್ನೊಂದು ಇಂತಹ ವಿವಾದಾಸ್ಪದ ಹೇಳಿಕೆಯೊಂದಿಗೇ. ಇದೇ ಹಿನ್ನಲೆಯಲ್ಲಿ ಅವರನ್ನು ನಾನು ಅವರನ್ನು `ಸಂವಾದಸಾಧ್ಯ ಲೇಖಕ' ಎಂದದ್ದು. ಅವರ ಈ ಸಂವಾದರಾಹಿತ್ಯವೇ ಅವರ ಹೇಳಿಕೆಗಳನ್ನು ಸಾಹಿತ್ಯವಲಯ ತೀವ್ರ ನಿರ್ಲಕ್ಷಕ್ಕೆ ತಳ್ಳಲು ಇಂದು ಕಾರಣವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಓದುವ ವರ್ಗವನ್ನು ಹೊಂದಿಯೂ ಬೌದ್ಧಿಕವಲಯದಿಂದ ತಿರಸ್ಕಾರಕ್ಕೊಳಗಾದ ಭೈರಪ್ಪನವರು ವರ್ಷಕ್ಕೆ ಒಂದೋ ಎರಡೋ ಕಡೆ ನೇರವಾಗಿ ಓದುಗರೊಂದಿಗೆ ನಡೆಸುವ ಸಂವಾದದ ವರದಿಗಳು, ಐದೋ ಆರೋ ವರ್ಷಕ್ಕೊಮ್ಮೆ ಬರುವ ಅವರ `ಮಹಾ'ಕಾದಂಬರಿಗಳು ಅವರನ್ನು ಒಮ್ಮೆಗೆ ಸುದ್ದಿಗೆ ತಂದು ಒಂದಿಷ್ಟು ದಿನ ಚಲಾವಣೆಗೊಳಿಸಿ ಸುಮ್ಮನಾಗಿಸುತ್ತವೆ. ಅವರ ಈ `ಅಪಾರ ಓದುವ ವರ್ಗ' ವಿಶಿಷ್ಟ ಬಗೆಯದು. ಕುವೆಂಪು ಸಾಹಿತ್ಯವನ್ನು ವಿಮಶರ್ೆ ಮಾಡುತ್ತ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್, `ಪ್ರಕೃತಿ ಎಂಬುದು ಕುವೆಂಪು ಅವರ ಮಿತ್ರನೂ ಹೌದು ಶತ್ರುವೂ ಹೌದು' ಎಂದು ಬರೆದಿದ್ದರು. ಇದನ್ನೇ ಭೈರಪ್ಪನವರಿಗೆ ಅನ್ವಯಿಸಿ ಹೇಳುವುದಾದರೆ `ಅವರ ಅಪಾರ ಓದುವ ವರ್ಗ ಅವರ ಮಿತ್ರನೂ ಹೌದು ಶತ್ರುವೂ ಹೌದು. ಮಿತ್ರ ಯಾಕೆಂಬುದದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಶತ್ರುಯಾಕೆಂದರೆ ಅವರಲ್ಲಿ ಬಹಳಷ್ಟು ಓದುಗರು ಸಾಹಿತ್ಯಕ್ಕಿಂತ ಧಾಮರ್ಿಕ ಕಾರಣಗಳಿಗಾಗಿ ಅವರ ಕೃತಿಗಳನ್ನು ಓದುವಂಥವರು ಅಥವಾ ಪಾರಾಯಣ ಮಾಡುವಂಥವರು. ಇನ್ನು ಕೆಲವರು ಓದದೆಯೂ ಅವರ `ಅಭಿಮಾನಿ' ಆದವರು; ಅವರನ್ನು ಒಂದು ರೀತಿಯಲ್ಲಿ ಆರಾಧಿಸುವಂಥವರು. ಯಾವುದೇ ಲೇಖಕ ಇರಬಹುದು. ಅವನು ಈ ರೀತಿಯ ಭಾವನಾತ್ಮಕ ಭಕ್ತರ ನಡುವೆ ಸಿಕ್ಕಿಹಾಕಿಕೊಂಡರೆ ಅವನ ಕಥೆ ಮುಗಿಯಿತು.  ಅಲ್ಲಿಂದ ಮುಂದೆ ಆ ಲೇಖಕ ತನ್ನ ಭಕ್ತರ `ಭಾವನೆಗೆಗಳಿಗೆ ಧಕ್ಕೆ' ಬರದ ರೀತಿಯಲ್ಲಿ ಬರೆಯಬೆಕಾದ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡಬೇಕಾಗುತ್ತದೆ. (ಈಗ ಉಡುಪಿಯ ಕೃಷ್ಣಮಠದ ಆವರಣದಲ್ಲಿ ರಂಜಾನ್ ಇಫ್ತಾರ್ ಕೂಟ ನಡೆಸಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡುತ್ತಿರುವ ಪೇಜಾವರ ಸ್ವಾಮಿಗಳನ್ನು ನೆನಪಿಸಿಕೊಳ್ಳಬಹುದು) ಆ ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ಏಕೆಂದರೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಕಷ್ಟವನ್ನು ಪರಿಹರಿಸದಿದ್ದರೆ ತಾವು ಅದುವರೆಗೂ ಹೊತ್ತು ಮೆರೆಸುತ್ತಿದ್ದ ದೇವರ ಮೂತರ್ಿಯನ್ನೆ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸುವ ಈ ಭಕ್ತರು ಲೇಖಕನಂಥ ಬಡಪ್ರಾಣಿಯನ್ನು ಸುಮ್ಮನೆ ಬಿಡುತ್ತಾರೆಯೇ? ಹೆಚ್ಚುಕಡಿಮೆ ಭೈರಪ್ಪನವರಂತೆ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯಂಥವರಿಗೆ ಈ ರೀತಿಯ ಇಕ್ಕಟ್ಟುಗಳು ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಭೈರಪ್ಪನವರು ತಮ್ಮ ಓದುಗರೊಂದಿಗೆ ನಡೆಸುವ ಸಂವಾದದ ಸ್ವರೂಪ ಸಾಮಾನ್ಯವಾಗಿ ಹೇಗಿರುತ್ತದೆ ಎಂಬುದಕ್ಕೆ ಒಂದು ನಿದರ್ಶನ ಕೊಡಬಹುದು ಅನ್ನಿಸುತ್ತಿದೆ. 2011 ರಲ್ಲಿ ಇರಬಹುದು. ತೀರ್ಥಹಳ್ಳಿಯಲ್ಲಿ ಭೈರಪ್ಪನವರೊಡನೆ ಸಂವಾದ ಕಾರ್ಯಕ್ರಮವೊಂದು ಏಪರ್ಾಡಾಗಿತ್ತು. ನಾನು ಅಲ್ಲಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಕಾರಣಕ್ಕೋ ಏನೋ ಆ ಕಾರ್ಯಕ್ರಮದ ವೇದಿಕೆಗೆ ನನ್ನನ್ನು ಸಂಘಟಕರು ಕರೆದಿದ್ದರು. ಭೈರಪ್ಪನವರ ಆರಂಭದ ಕಾದಂಬರಿಗಳನ್ನು ನನ್ನ ತಾರುಣ್ಯದ ಆರಂಭದ ದಿನಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸೊಂಟನೋವು ಬಂದರೂ ಏಳದೇ ಹಟವಿಟ್ಟು ಓದುತ್ತಿದ್ದ ಮತ್ತು ಅವುಗಳಿಂದ ಬಹಳಷ್ಟು ಪ್ರಭಾವಿತನಾಗಿದ್ದ ನಾನು ಸಹಜವಾಗಿಯೇ ಆಸಕ್ತಿಯಿಂದ ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಹೋಗುವಾಗ ನನ್ನ ಕಾರು ಕೆಟ್ಟು ನಾನು ದಾರಿಮೇಲೆ ಆದಾಗ ಸಂಘಟಕರು ಬೇರೆ ಕಾರು ಕಳಿಸಿ ನನ್ನನ್ನು ಆ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ ದೊಡ್ಡಗುಣವನ್ನೂ ತೋರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಭೈರಪ್ಪನವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಗೆ ಹೋಗಿ ಅವರಿಗೆ ನಮಸ್ಕರಿಸಿ ನನ್ನ ಗೌರವವನ್ನು ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಬಂದ ನನಗೆ ಸಭಾಂಗಣದ ತುಂಬ ಜನ ಇದ್ದದ್ದು ನೋಡಿ ಆಶ್ಚರ್ಯವಾಯಿತು. ಏಕೆಂದರೆ ಅತಿರಥಮಹಾರಥರೆನಿಸುವ ಕನ್ನಡದ ಸಾಹಿತಿಗಳನ್ನು ನಾನು ಮತ್ತು ನನ್ನ ಹಿಂದಿನ ಅಧ್ಯಕ್ಷರು ತೀರ್ಥಹಳ್ಳಿಗೆ ಕರೆಸಿದಾಗ್ಯೂ ಅಷ್ಟೊಂದು ಜನ ಸೇರಿರಲಿಲ್ಲ. ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದೆ. ಎಂದೆಂದೂ ಆಸ್ಪತ್ರೆಯ ಹೊರಗೆ ಕಾಲು ಹಾಕದ ಯಾವಾಗಲೂ `ಬ್ಯೂಜಿ' ಆಗಿರುವ ವೈದ್ಯರೂ ಸೇರಿದಂತೆ ವಿವಿಧ ವಲಯದ ಜನ ಅಲ್ಲಿ ಸೇರಿದ್ದರು. ಭೈರಪ್ಪನವರ ಯಾವುದಾದರೂ ಪುಸ್ತಕ ಪ್ರಕಟವಾದ ಕೂಡಲೇ ಅದರ ನೂರಾರು ಪ್ರತಿಗಳನ್ನು ತರಿಸಿಕೊಂಡು ಮನೆಮನೆಗೆ ತಲುಪಿಸಿ `ಓದಿಸುವ ಕಾಯಕ'ದಲ್ಲಿ ನಿರತರಾಗಿದ್ದ ಇಬ್ಬರು ಮೂವರು `ಸಾಹಿತ್ಯ ಪರಿಚಾರಕ'ರೂ ಸಭಿಕರ ಮಧ್ಯೆ ಅತ್ತಿಂದಿತ್ತ ಓಡಾಡುತ್ತಿದ್ದರು. ಎಂದೂ ಬರದ ಇವರೆಲ್ಲ ಎಲ್ಲಿಂದ ಬಂದರು ಎಂದು ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಸತ್ಯ ಅರ್ಥವಾಯಿತು. ಅವರೆಲ್ಲ `ಸಾಹಿತ್ಯಾಭಿಮಾನಿಗಳು' ಆಗಿರಲಿಲ್ಲ. `ಭೈರಪ್ಪಾಭಿಮಾನಿಗಳು' ಆಗಿದ್ದರು. ತೀರ್ಥಹಳ್ಳಿಯವರೇ ಆದ ಕುವೆಂಪು ಅವರ ಯಾವ ಒಂದು ಪುಸ್ತಕದ ಹೆಸರು ಗೊತ್ತಿರದವರೂ ಅಲ್ಲಿ ಬಹಳಷ್ಟು ಜನರಿದ್ದರು. ವಿಶೇಷವೆಂದರೆ ಬಹುತೇಕ ಒಂದೇ `ಕುಲಬಾಂಧವ'ರಾಗಿದ್ದರು! ಇದು ಎಂಥದ್ಧಾದರೂ ಆಗಲಿ ಸಂವಾದ ಹೇಗೆ ನಡೆಯಿತು ಗಮನಿಸಿ:  

ಅದನ್ನು ಸಂವಾದ ಎಂದು ಹೇಗೆ ಕರೆಯಬಹುದೋ ತಿಳಿಯದು. ಆರಂಭದಲ್ಲಿಯೇ ಸಭಿಕರಿಗೆ ಮೂರು ಕಂಡೀಶನ್ಗಳನ್ನು ಹಾಕಲಾಯಿತು. ಮೊದಲ ಎರಡು ಕಂಡೀಶನ್ಗಳನ್ನು ಭೈರಪ್ಪನವರೇ ಮೈಕು ಹಿಡಿದುಕೊಂಡು ಹೇಳಿದರು. ಅವೆಂದರೆ ಒಂದು: `ಯಾರು ರಾಜಕೀಯದ ಪ್ರಶ್ನೆಗಳನ್ನು ಕೇಳಬಾರದು'. ಇನ್ನೊಂದು: `ಪ್ರಶ್ನೆಗಳು ಶುದ್ಧ ಸಾಹಿತ್ಯದ ಬಗ್ಗೆ ಮಾತ್ರ ಇರಬೇಕು'. ಮೂರನೇ ಕಂಡೀಶನ್ನನ್ನು ಅವರ ಪರವಾಗಿ ಸಂಘಟಕರು ಅನೌನ್ಸ್ ಮಾಡಿದರು. ಆ ಕಂಡೀಶನ್: `ಪ್ರಶ್ನೆಗಳನ್ನು ಯಾರೂ ಎದ್ದುನಿಂತು ಕೇಳಬಾರದು, ಕೇಳಬಯಸುವ ಪ್ರಶ್ನೆಯನ್ನು ಚೀಟಿಯಲ್ಲಿ ಬರೆದು ಕೊಡಬೇಕು,' ನನಗೆ ಈ ಶರತ್ತುಗಳನ್ನು ನೋಡಿ ಕಿರಿಕಿರಿಯಾಗತೊಡಗಿತು. ಸಂಘಟಕರು ಕುಳಿತ ಜನರಿಗೆ ಬಿಳಿಹಾಳೆಯ ಖಾಲೀ ಚೀಟಿಗಳನ್ನು ಹಂಚಿದರು. ಹಂಚಲ್ಪಟ್ಟ ಚೀಟಿಗಳನ್ನು ಸಭಿಕರಿಂದ ಸಂಗ್ರಹಿಸಿ ಒಂದು ಬುಟ್ಟಿಯಲ್ಲಿ ಸಂಗ್ರಹಿಸಿ ವೇದಿಕೆಗೆ ತರಲಾಯಿತು. ವೇದಿಕೆಯ ಮೇಲೆ ಭೈರಪ್ಪನವರು ಮಧ್ಯೆ ಕುಳಿತಿದ್ದರು. ಒಂದು ಕಡೆ ನಾನು ಇನ್ನೊಂದು ಕಡೆ ಸಂಘಟಕರ ಪರವಾಗಿ ಹಿರಿಯರೊಬ್ಬರು ಕುಳಿತಿದ್ದರು. ಆ ಹಿರಿಯರು ಬುಟ್ಟಿಯೊಳಗಿನ ಚೀಟಿಗಳನ್ನು ಒಂದೊಂದಾಗಿ ಭೈರಪ್ಪನವರಿಗೆ ಕೊಡುತ್ತಾ ಹೋದರು. ಭೈರಪ್ಪನವರು ಅವನ್ನು ಬಿಚ್ಚಿನೋಡಿ ಕೆಲವು ಚೀಟಿಯೊಳಗಿನ ಕೆಲವು ಪ್ರಶ್ನೆಗಳನ್ನು `ಆಯ್ದುಕೊಂಡು' ಉತ್ತರಿಸುತ್ತಾ ಹೋದರು. ಕೆಲವು ಚೀಟಿಗಳನ್ನು ಬಿಚ್ಚಿನೋಡಿ ಏನೊಂದೂ ಮಾತನಾಡದೆ ಅವನ್ನು ಪಕ್ಕಕ್ಕೆ ತಳ್ಳುತ್ತಾ ಹೋದರು. ಹೀಗೆ ತಳ್ಳಲ್ಪಟ್ಟ ಚೀಟಿಗಳನ್ನು ಟೇಬಲ್ ಕೆಳಗೆ ಇಟ್ಟಿದ್ದ ಇನ್ನೊಂದು ಬುಟ್ಟಿಗೆ (ಕಸದಬುಟ್ಟಿ)ಗೆ ಹಾಕುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಕಸದ ಬುಟ್ಟಿಗೆ ಹಾಕಲಾದ ಚೀಟಿಗಳಲ್ಲಿ ಯಾವ ಪ್ರಶ್ನೆಗಳಿದ್ದವು ಎಂಬುದು ಯಾರಿಗೂ ತಿಳಿಯಲೇ ಇಲ್ಲ. 

ಸಂವಾದ ಎಂದರೆ ಪ್ರಶ್ನೆಕೇಳುವುದು ಮತ್ತು ಉತ್ತರ ಹೇಳುವುದು ಇರುತ್ತದೆ ಎಂದು ತಿಳಿದುಕೊಂಡಿದ್ದ ನನಗೆ ಈ ವಿಚಿತ್ರವಾದ `ಚೀಟಿಸಂವಾದ' ನೋಡಿ ತುಂಬಾ ನಿರಾಸೆಯಾಯಿತು. ದೊಡ್ಡಸಾಹಿತಿ ಎಂದು ರಜಾದಿನವನ್ನೂ ಗಮನಿಸದೇ ಬಂದಿದ್ದ ಪತ್ರಿಕೆಯ ವರದಿಗಾರಿಗೆ ಚಿಕ್ಕ ಪ್ರಶ್ನೆಗಳನ್ನೂ ಕೇಳಲು ಬಿಡಲಿಲ್ಲ. ಅವರಲ್ಲಿ ಬಹಳಷ್ಟು ಜನ ನಿರಾಶರಾಗಿ `ಇದು ಯಾವ ಸೀಮೆ ಸಂವಾದರೀ' ಎಂದು ತಲೆಕೊಡವಿಕೊಂಡು ಎದ್ದು ಹೋದರು. ಇಡೀ ಕಾರ್ಯಕ್ರಮ ಸಂವಾದ ಎಂದು ಕರೆಸಿಕೊಂಡಿದ್ದರೂ ಮಾತನಾಡಿದ್ದು ಭೈರಪ್ಪ ಮಾತ್ರ. ಎಲ್ಲರೂ ಅವರು ಹೇಳಿದ್ದನ್ನು ಕೇಳಿದರು ಅಷ್ಟೆ. ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ನಾನು ಸಂಘಟಕರಿಗೆ ಹೇಳಿದೆ, ಈ ರೀತಿ ಸಂವಾದ ಮಾಡುವ ಬದಲು ಈ ಎಲ್ಲ ಚೀಟಿಗಳನ್ನು ಭೈರಪ್ಪನವರ ಮನೆಗೇ ಕಳಿಸಿ ಅಲ್ಲಿಂದ ಉತ್ತರ ತರಿಸಿಕೊಳ್ಳಬಹುದಿತ್ತು  ಅವರನ್ನು ಅಷ್ಟು ದೂರದಿಂದ ಕರೆಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅವರ ಎಲ್ಲ ಸಂವಾದಗಳು ಹೀಗೆಯೇ ನಡೆಯದಿರಬಹುದಾದರೂ ಬಹುತೇಕ ಅವುಗಳ ಒಳಸ್ವರೂಪಗಳಲ್ಲಿ ಬಹಳ ವ್ಯತ್ಯಾಸವಿರುವುದಿಲ್ಲ.

ಭೈರಪ್ಪನವರು ನಮ್ಮಲ್ಲಿ ತಮ್ಮ ಕೃತಿಗಳಿಂದ ಹೇಗೆ ಪ್ರಸಿದ್ಧರೋ ಹಾಗೇ ಈ ಬಗೆಯ ಚಚರ್ಾಸ್ಪದ ಹೇಳಿಕೆಗಳಿಂದಲೂ ಪ್ರಸಿದ್ಧರು. ಅವರ ಇಂತಹ ಹೇಳಿಕೆಗಳ ಒಂದು ದೊಡ್ಡ ಸರಮಾಲೆಯೇ ಇದೆ. ಮೂರು-ನಾಲ್ಕು ಸಂದರ್ಭಗಳನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದು. ಅವರಿಗೆ ನಾಡಿನ ಅತಿದೊಡ್ಡ ಸಾಹಿತ್ಯ ಪ್ರಶಸ್ತಿಯಾದ ಪಂಪಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸುತ್ತಾ ಬನವಾಸಿಯಲ್ಲಿ, 'ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ' ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಗ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮದ ವೇದಿಕೆಯಿಂದ ಪ್ರತಿಕ್ರಿಯೆ ನೀಡಿದ್ದ ಚಂಪಾ, `ಇದು ಭೈರಪ್ಪನವರ ಹೇಳಿಕೆ ಅಷ್ಟೇ ಆಗಿರಲಾರದು. ಅದು ಅವರ ಆಶಯ ಕೂಡ ಆಗಿರಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆ ಆಗಬಾರದು ಎಂಬುದು ಅವರ ಆಶಯವಾಗಿರದಿದ್ದರೆ ಅವರು ಇಂತಹ ಹೇಳಿಕೆಯನ್ನು ನೀಡುತ್ತಿರಲಿಲ್ಲ.' ಎಂದು ಪ್ರತಿಕ್ರಿಯಿಸಿದ್ದರು. ಇನ್ನೊಂದು ಸಂದರ್ಭ:  ಭೈರಪ್ಪನವರು ಶಿವಮೊಗ್ಗದ ಕನರ್ಾಟಕ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ `ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮಾಕ್ಸರ್ಿಸ್ಟ್, ಬಂಡಾಯ, ಸ್ತ್ರೀವಾದಿ ದಲಿತ ಹೀಗೆ ನಾನಾ ಸಾಹಿತ್ಯಗಳು ಯಾವುದೇ ರಸವನ್ನು ಹೊಂದದೆ ಸಾಹಿತ್ಯ ಕ್ಷೇತ್ರದ ಮೇಲೆ ದಾಳಿಮಾಡಿದವು' ಎಂದಿದ್ದರು. ಹೀಗೆ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯ ಜನಮಾನಸದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದ್ದ ಅವರು ಇದು ಕನ್ನಡ ಸಾಹಿತ್ಯಕ್ಕೆ ಜನಜೀವನಕ್ಕೆ ಆದ ಒಂದು ನಷ್ಟ ಎಂಬರ್ಥದ ಮಾತುಗಳನ್ನು ಆಡಿದ್ದರು. 

ಹಾಗೆಯೇ ಕನಕಪುರದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಚಳವಳಿಗಳ ಬಗ್ಗೆ ತಮ್ಮ ಅಖಂಡವಾದ ತಿರಸ್ಕಾರವನ್ನೂ ಶುದ್ಧಸಾಹಿತ್ಯದ ಬಗೆಗಿನ ತಮ್ಮ ಅಪರಿಮಿತ ಪ್ರೇಮವನ್ನು ವ್ಯಕ್ತಪಡಿಸಿ ಪ್ರಗತಿಪರ ಲೇಖಕರನೇಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಕ್ಕೆ ಅಪಸ್ವರ ಅದೇ ಮೊದಲೇನೂ ಆಗಿರಲಿಲ್ಲ. ಅಪಸ್ವರ, ಭಿನ್ನಾಭಿಪ್ರಾಯ ಇವೆಲ್ಲ ಮೊದಲೂ ಇದ್ದವು. ನಂತರವೂ ಬಂದವು. ಆದರೆ ನನಗೆ ತಿಳಿದ ಮಟ್ಟಿಗೆ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಅಧ್ಯಕ್ಷರ ಭಾಷಣದ ಪ್ರತಿಯೊಂದಕ್ಕೆ ಬೆಂಕಿಹಚ್ಚಿ ಸುಡುವ ಘಟನೆ ನಡೆದದ್ದು ಕನಕಪುರ ಸಮ್ಮೇಳನವೊಂದರಲ್ಲಿಯೇ. ಇದು ಹೀಗಾದರೆ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಇನ್ನೊಂದು ಘಟನೆ ನಡೆಯಿತು.  ಹೊಟ್ಟೆಪಾಡಿಗೆ ಮನೆಬಿಟ್ಟು ಹೊರಗೆ ದುಡಿಯಲು ಹೋಗುವ ಮಹಿಳೆಯರ ಶೀಲ-ಚಾರಿತ್ರ್ಯಗಳನ್ನು ಜನ ಸಂಶಯದಿಂದ ಕಾಣುವಂತೆ ಮಾಡಬಲ್ಲ ಕೃತಿಯೊಂದನ್ನು ಅದೇ ಆಗ ಹೊರತಂದು ಮಹಿಳೆಯರ ಘನತೆ ಗೌರವಗಳಿಗೆ ಧಕ್ಕೆ ತರುವಂಥ ಕೆಲಸ ಮಾಡಿದ `ಆರೋಪ'ಕ್ಕೆ ಗುರಿಯಾಗಿದ್ದ ಅವರು ಆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಹೋದನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ ನಾಡಿನ ಮುಖ್ಯ ಮಹಿಳಾ ಸಾಹಿತಿಗಳೆಲ್ಲರೂ ಅವರ ಸ್ತ್ರೀದ್ವೇಷವನ್ನು ಹಿಗ್ಗಾಮುಗ್ಗಾ ಥಳಿಸಿ `ಮಹಾಮಂಗಳಾರತಿ' ಎತ್ತಿದ್ದು ದೊಡ್ಡ ಸುದ್ಧಿಯಾಯಿತು.  

ಹೆಚ್ಚೂ ಕಡಿಮೆ ಅವರು ಇದುವರೆಗೆ ಆಡುತ್ತಾ ಬಂದ ಮಾತುಗಳನ್ನೇ ದಾವಣಗೆರೆಯಲ್ಲೂ ಮತ್ತೆ ಆಡಿದ್ದಾರೆ. ಅನಂತಮೂತರ್ಿ ಅವರ ಬಗ್ಗೆ (ಬಹುಶಃ ತೇಜಸ್ವಿ ಮಾಡಿದ್ದಿರಬೇಕು) ಒಂದು ಟೀಕೆ ಇತ್ತು, ಅನಂತಮೂತರ್ಿ ಬರೆದದ್ದು ಒಂದೇ ಒಂದು ಕತೆ ಅದು `ಎಂದೆಂದೂ ಮುಗಿಯದ ಕತೆ' ಎಂದು. ಹಾಗೇ ಭೈರಪ್ಪನವರ ಬಗ್ಗೆಯೂ ಪ್ರೀತಿಯಿಂದಲೇ ಮಾಡಬಹುದಾದ ಒಂದು ಟೀಕೆ ಎಂದರೆ `ಭೈರಪ್ಪ ಯಾವಾಗಲೂ ಹೇಳುವುದು ಬರೆಯುವುದು ಒಂದೇ ಒಂದು ತತ್ವ, ಅದು, `ಸಮಾಜ ಬದಲಾವಣೆ ಸಾಹಿತ್ಯದ ಅಂದರೆ ಸಾಹಿತಿಯ ಜವಾಬ್ದಾರಿ ಅಲ್ಲ, ಅದು ಆಗಬೇಕಾದ ಕೆಲಸವೂ ಅಲ್ಲ.' ಇನ್ನೊಂದು ಅಂಶವೇನೆಂದರೆ ಭೈರಪ್ಪನವರಿಗೆ ನಮ್ಮ ವಿಶ್ವವಿದ್ಯಾಲಯಗಳ ಬಗ್ಗೆ ಅಲ್ಲಿನ `ಬುದ್ಧಿಜೀವಿ' ಪ್ರಾಧ್ಯಾಪಕರ ಬಗ್ಗೆ ಅಪಾರವಾದ ಕೋಪ. ಈ ಪ್ರಾಧ್ಯಾಪಕರು ಸಿದ್ಧಾಂತಗಳನ್ನು ವಿದ್ಯಾಥರ್ಿಗಳ ತಲೆಯಲ್ಲಿ ತುರುಕುತ್ತಾರೆ ಎಂಬುದು ಅವರ ಕೋಪಕ್ಕೆ ಇರುವ ಮುಖ್ಯ ಕಾರಣ. ಅವರ ಯಾವುದೇ ಈ ಬಗೆಯ ಅಪರೂಪದ ಸಂವಾದದ ವರದಿಯಲ್ಲಿ ಅವರ ಈ ಬುದ್ದಿಜೀವಿಗಳ ಬಗೆಗಿನ ಕೋಪ ವ್ಯಕ್ತವಾಗದಿದ್ದರೆ ಅದು ಅವರ ಕಾರ್ಯಕ್ರಮವೇ ಅಲ್ಲವೇನೋ ಅನ್ನಿಸುವಷ್ಟು ಅದು ಸಾಮಾನ್ಯವಾಗಿಬಿಟ್ಟಿದೆ. ಭೈರಪ್ಪನವರು ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಈ ತತ್ವಸಿದ್ಧಾಂತಗಳಿಗೆ ಕನ್ನಡ ಸಾಹಿತ್ಯ ತೆರೆದುಕೊಳ್ಳದೇ ಇದ್ದಿದ್ದರೆ ಇಂದಿನ ಕನ್ನಡ ಸಾಹಿತ್ಯದ ಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಈಗಲೂ ನಾವೆಲ್ಲರೂ ಅಲ್ಲಿಂದ ಹಿಂದೆ ಇದ್ದ `ರಸಭರಿತ' ಸಾಹಿತ್ಯವನ್ನೇ ಬರೆಯುತ್ತಾ ಓದುತ್ತಾ ಇರಬೇಕಾಗುತ್ತಿತ್ತು. ಇಲ್ಲವೇ ಅಲ್ಲಿಂದ ಹಿಂದಿನ ಕೃತಿಗಳ ಪರಿಷ್ಕೃತ ಆವೃತ್ತಿಗಳನ್ನು ತರುತ್ತಾಹೋಗಬೇಕಾಗುತ್ತಿತ್ತು. ಆದರೆ ಕನ್ನಡ ಸಾಹಿತ್ಯ ಈ ತತ್ವಸಿದ್ಧಾಂತಗಳಿಗೆ ತೆರೆದುಕೊಂಡಿದ್ದರಿಂದಲೇ ಇಂದು ಇಡೀ ದೇಶ ಗಮನಿಸುವಷ್ಟು ಮಹತ್ವದ ಸಾಹಿತ್ಯವನ್ನು (ಕನ್ನಡಕ್ಕೆ ಬಂದಿರುವ ಜ್ಞಾನಪೀಠ ಮತ್ತಿತರ ಪ್ರಶಸ್ತಿಗಳ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಮಾತನ್ನು ಹೇಳುತ್ತಿಲ್ಲ) ರಚಿಸಲು ಸಾಧ್ಯವಾಯಿತು. ಈ ತತ್ವಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯವೇ ಕನರ್ಾಟಕ ಮಾತ್ರವಲ್ಲ ಭಾರತದ ಬಹುಪಾಲು ಜನರಿಗೆ ಉಸಿರಾಡುವ ಶಕ್ತಿಯನ್ನೂ ಬಿಡುಗಡೆಯ ಬದುಕನ್ನೂ ನೀಡಿತು. ಹಾಗಾಗಿ ಭೈರಪ್ಪನವರು ಹೇಳುವಂತೆ ಈ ತತ್ವಸಿದ್ದಾಂತಗಳು ಕನ್ನಡ ಸಾಹಿತ್ಯಕ್ಕೆ ಬಂದದ್ದು ಒಂದು `ದಾಳಿ'ಯಾಗಿ ಅಲ್ಲ; ಬಿಡುಗಡೆಯ ಒಂದು `ದಾರಿ'ಯಾಗಿ.

ಭೈರಪ್ಪನವರಂತಹ ಲೇಖಕರಿಗೆ ಓದುಗನಲ್ಲಿ ರಸಾನಂದವನ್ನುಂಟುಮಾಡುವುದು ಆ ಮೂಲಕ `ಜನಮಾನಸದಲ್ಲಿ ಯಶಸ್ವಿಯಾಗುವ' ಸಾಹಿತ್ಯ ರಚಿಸುವುದು ಆದ್ಯತೆಯಾಗಿದ್ದರೆ ಈ ಬಗೆಯ ಸಾಹಿತ್ಯ ರಚಿಸಿದ ಲೇಖಕರಿಗೆ `ಜನಮಾನಸವನ್ನು ಬಂಧನಗಳಿಂದ ಬಿಡುಗಡೆಗೊಳಿಸುವುದು' ಅವರ `ಸಂಕಟಗಳಿಗೆ ತಕ್ಕಮಟ್ಟಿನ ಸಾಂತ್ವಾನವನ್ನು ಹೇಳುವುದು' ಆದ್ಯತೆಯಾಗಿತ್ತು. ಕೊನೆಯಲ್ಲಿ ಬಸವಣ್ಣನವರ ಮೇಲೆ ಉಲ್ಲೇಖಿಸಲ್ಪಟ್ಟ ವಚನಸಾಲುಗಳಿಗೆ ಬರುವುದಾದರೆ ಭ್ರಮರವಾಗಿ ಬಂಡುಂಬುವುದು ಭೈರಪ್ಪನಂಥವರ ಚಿಂತೆಯಾದರೆ ಸರ್ವರಿಗೂ ಚೈತನ್ಯವನ್ನು ನೀಡುವ `ಭಾನು'ವಿನ ಉದಯಕ್ಕಾಗಿ `ಅಂಬುಜ'ವಾಗಿ ಕಾತುರದಿಂದ ಕಾಯುವ ಮತ್ತು ಈ ಉದಯಉತ್ಸಾಹ ಜನರಲ್ಲಿ ಕುಗ್ಗದಂತೆ ಕಾಗೆಗಳಾಗಿ ಕೂಗಿಕೂಗಿ ಎಚ್ಚರಿಸುವ ಚಿಂತೆಗಳು ಬಂಡಾಯವೂ ಸೇರಿದಂತೆ ಬಹುತೇಕ ಪ್ರಗತಿಪರ ಲೇಖಕರದ್ದು. ಅವರವರ ಆಲೋಚನಾ ಕ್ರಮ ಅವರವರ ಬರಹಗಳ ಆದ್ಯತೆಯನ್ನು ನಿರ್ಧರಿಸುತ್ತವೆ. ಇಷ್ಟಾಗಿಯೂ ಭೈರಪ್ಪನವರು ಹೇಳುವ `ರಸಭರಿತ' ಅಥವಾ `ರಸಪೂರಿತ' ಸಾಹಿತ್ಯ ಎಂಬುದು ರಸಪೂರಿತ ಮಾವಿನ ಹಣ್ಣೋ ಅಥವಾ ಕಬ್ಬಿನ ಜಲ್ಲೆಯೋ ಇದ್ದಂತೆ. ಅವನ್ನು ಒಂದು ಸಾರಿ ತಿಂದು (ಓದಿ) ಆನಂದಿಸಿದರೆ ಅಲ್ಲಿ ಉಳಿಯುವುದು ಸಿಪ್ಪೆ ಮತ್ತು ಹೋಟೆ ಮಾತ್ರ. ಮತ್ತೆ ಆ ಕೃತಿಗಳ ಕಡೆ ನೋಡುವಂಥದ್ದೇನೂ ಇರುವುದಿಲ್ಲ. 

ಆದರೆ ಸಿದ್ಧಾಂತ ಆಧಾರಿತ ಸಾಹಿತ್ಯ ಕೃತಿಗಳು `ರಸಾನಂದ'ಕ್ಕಿಂತ `ಜಾಗೃತಿ'ಯನ್ನು ಗುರಿಯಾಗಿಟ್ಟುಕೊಂಡಿರುವುದರಿಂದ ಅವುಗಳು ಎಲ್ಲಿಯವರೆಗೂ ನಮ್ಮ ಸಮಾಜ ಸಮಸ್ಯೆಗಳಿಂದ ಸಂಪೂರ್ಣವಾಗಿ ಬಿಡುಗಡೆಹೊಂದುವುದಿಲ್ಲವೋ ಅಲ್ಲಿಯವರೆಗೂ ತಮ್ಮ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ. ಇದೇ ಸಿದ್ಧಾಂತಕ್ಕನುಗುಣವಾಗಿ ರಚಿತವಾದ ಸಾಹಿತ್ಯದ ಶಕ್ತಿ! ಇಲ್ಲಿ ಎದುರಾಗುವ ಪ್ರಮುಖ ಪ್ರಶ್ನೆ ಎಂದರೆ ಎಲ್ಲ ಸಿದ್ಧಾಂತಗಳಿಂದ ಬಿಡಿಸಿಕೊಂಡ, ಭೈರಪ್ಪನವರು ಪದೇಪದೇ ಹೇಳುವ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಎಂಬುದು. ಏಕೆಂದರೆ ನಮ್ಮೆಲ್ಲರ ನಿಲುವುಗಳೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ನಿಲುವುಗಳೇ ಆಗಿರುತ್ತವೆಯಂತೆ. ನಾನು ಯಾವ ರಾಜಕೀಯ ನಿಲುವಿಗೂ ಸೇರಿದವನಲ್ಲ ಎಂಬ ನಿಲುವು ಕೂಡ ನಮ್ಮ ಒಂದು ರಾಜಕೀಯ ನಿಲುವೇ ಆಗಿರುತ್ತದೆ ಹೇಗೋ ಹಾಗೆ ನಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ ಎಂಬ ಧೋರಣೆಯೂ ನಮ್ಮ ಒಂದು ಸೈದ್ಧಾಂತಿಕ ಧೋರಣೆಯೇ ಆಗಿರುತ್ತದೆ! ಹೀಗಾಗಿ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಇಲ್ಲ. ಒಂದುವೇಳೆ ಅದು `ಇರಲು ಸಾಧ್ಯ' ಎಂದು ವಾದಕ್ಕಾಗಿ ಒಪ್ಪಿಕೊಂಡರೂ ಈ `ಶುದ್ಧಸಾಹಿತ್ಯ' ಎಂಬುದು `ಶುದ್ಧಚಿನ್ನ'ದಂತೆ ಬಹಳಷ್ಟು `ಬೆಲೆ'ಯುಳ್ಳದ್ದಾಗಿದ್ದರೂ `ಬಳಕೆ'ಗೆ ಬಾರದ್ದಾಗಿಯೇ ಇರಲು ಮಾತ್ರ ಸಾಧ್ಯ!! ಕೊನೆಯಮಾತು: ಕನ್ನಡ ಜನಜೀವನಕ್ಕೆ ಬಹುದೊಡ್ಡ ನಷ್ಟ ಆದದ್ದು ಭೈರಪ್ಪನವರು ಹೇಳುವಂತೆ ಅನ್ಯದೇಶಗಳಿಂದ ಕನ್ನಡಸಾಹಿತ್ಯವನ್ನು ಪ್ರವೇಶಮಾಡಿದ ಸಿದ್ಧಾಂತಗಳಿಂದ ಅಲ್ಲ; ಬದಲಾಗಿ ನಮ್ಮ ಸಾಹಿತ್ಯದ ಘನತೆ-ಗೌರವಗಳನ್ನು ಎತ್ತರಿಸಬಲ್ಲ ಎಲ್ಲಬಗೆಯ ಸಾಮಥ್ರ್ಯವಿದ್ದ ಭೈರಪ್ಪನವರಂತಹ ಒಬ್ಬ ಶಕ್ತಿಶಾಲಿ ಬರಹಗಾರರು ಮತಧರ್ಮ, ಕೋಮುವಾದ ಇಂತಹುಗಳ ಕಡೆ ವಾಲಿಕೊಂಡದ್ದರಿಂದ.
0-0-0-0-0
ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail.com
29-06-2017

No comments:

Post a Comment