Saturday, April 13, 2024

ಕಣ್ಣಿಗೆ ಕಟ್ಟುವ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ!

 



ಪಂಜಾಬಿಗೆ ಪ್ರವಾಸ ಹೋದವರು  ಅವಶ್ಯವಾಗಿ ನೋಡುವ ಮೂರು ಸ್ಥಳಗಳೆಂದರೆ ಒಂದು ಅಮೃತಸರದ ಸುವರ್ಣಮಂದಿರ, ಇನ್ನೊಂದು ಭಾರತ ಪಾಕಿಸ್ತಾನಗಳ ಗಡಿಯಾದ ವಾಘಾ ಬಾರ್ಡರ್‌ ಮತ್ತು ಮೂರನೆಯದೇ ಅಮೃತಸರದ ಸುವರ್ಣಮಂದಿರದ ಪಕ್ಕವೇ ಇರುವ ಐತಿಹಾಸಿಕ ಮಹತ್ವದ ಜಲಿಯನ್‌ ವಾಲಾಭಾಗ್.‌  ಆಧುನಿಕ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಯಂಕರವಾದ ಹತ್ಯೆಯ ಕಾರಣ ಹೆಸರುವಾಸಿ  ಆಗಿರುವಂಥದ್ದು ಜಲಿಯನ್ ವಾಲಾ ಬಾಗ್.  ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ ನಡೆದದ್ದು ೧೯೧೯ರ ಏಪ್ರಿಲ್‌ ೧೩ ರಂದು.  

ಅಂದು ಅಲ್ಲಿ ರೌಲತ್‌ ಕಾಯ್ದೆಯನ್ನು ವಿರೋಧಿಸಿ ಮತ್ತು ಬಂಧನಕ್ಕೊಳಗಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದ್ದೀನ್‌ ಕಿಚ್ಲೇವ್‌ ಮತ್ತು ಡಾ ಸತ್ಯಪಾಲ್‌ ಅವರ ಬಿಡುಗಡೆಗೆ ಒತ್ತಾಯಿಸಿ ಶಾಂತಿಯುತವಾಗಿ ಸಭೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ  ತಾತ್ಕಾಲಿಕ ಅಧಿಕಾರದಲ್ಲಿದ್ದ ಜನರಲ್‌ ಡಯರ್ ಎಂಬ ಕ್ರೂರಿ  ಬ್ರಿಟೀಷ್‌ ಆರ್ಮಿಯಲ್ಲಿದ್ದ ಸಿಕ್‌ ಮತ್ತು ಗೂರ್ಖಾ ಬ್ರಿಗೇಡ್‌ ಗಳನ್ನೇ ಬಳಸಿಕೊಂಡು ಅಮಾನವೀಯವಾಗಿ ಗುಂಡಿನ ಮಳೆಗರೆದು ಅಪಾರ ಸಂಖ್ಯೆಯ ಸಾವುನೋವಿಗೆ ಕಾರಣವಾದ. ಮೂರು ಕಡೆಗಳಲ್ಲಿ ಕಟ್ಟಡಗಳಿದ್ದು ಒಂದು ಕಡೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುವ ಈ ಸ್ಥಳಕ್ಕೆ ಬಂದ ಡಯರ್‌ ಪ್ರವೇಶ ಅವಕಾಶವಿದ್ದ ದ್ವಾರಕ್ಕೆ ತನ್ನ ಸೈನ್ಯವನ್ನು ನಿಲ್ಲಿಸಿ  ಫೈಯರ್‌ ಮಾಡಲು ಆದೇಶ ನೀಡಿದ. ಒಳಗೆ ಸಿಕ್ಕಿಬಿದ್ದವರು ಎತ್ತಲೂ ಹೋಗಲು ಆಗದೆ ದಾರುಣ ಸಾವನ್ನಪ್ಪಿದರು. ಈ ಕ್ರೂರ ಘಟನೆಯಲ್ಲಿ ಸತ್ತವರ ಸಂಖ್ಯೆಯ ಬಗ್ಗೆ ನಿಖರತೆಯಿಲ್ಲವಾದರೂ ಸತ್ತವರ ಸಂಖ್ಯೆ ವಿವಿಧ ವರದಿಗಳ ಪ್ರಕಾರ ೪೦೦ ರಿಂದ ೧೫೦೦ ರ ವರೆಗೆ ಇದೆ. ಈ ಸಾವಲ್ಲದೆ ಅನೇಕರು ವಿಪರೀತವಾಗಿ ಗಾಯಗೊಂಡರು. ಹೀಗೆ ಗುಂಡು ಹಾರಿಸುವಾಗ ಅನೇಕರು ಏನು ಮಾಡಲು ತೋರದೆ ಅಲ್ಲಿದ್ದ ಬಾವಿಗೆ ಹಾರಿ ಪ್ರಾಣಬಿಟ್ಟರು.

***

ಈ ಹೇಯ ಕೃತ್ಯವನ್ನು ಎಸಗಿದ ಡೈಯರ್‌ ನ ಜೀವನ ವೃತ್ತಾಂತವನ್ನು ನಾವು ತುಸು ನೋಡುವುದಾದರೆ ಅವನು ಆಗಿನ ಭಾರತದ ಭಾಗವೇ ಆಗಿದ್ದ ಈಗಿನ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮೂರಿಯಲ್ಲಿಯೇ  ಜನಿಸಿದವನು. ಅವನು ತನ್ನ ಆರಂಭಿಕ ಶಿಕ್ಷಣವನ್ನು ಮಾಡಿದ್ದು ಮೂರಿ ಮತ್ತು ನಮ್ಮ ಹಿಮಚಲಪ್ರದೇಶದ ಶಿಮ್ಲಾದಲ್ಲಿಯೇ. ಮುಂದೆ ಐರ್ಲೆಂಡಿಗೆ ಹೋಗಿ ಪದವಿ ಶಿಕ್ಷಣ ಪಡೆದನಾದರೂ ಅನೇಕ ಭಾರತೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವನಾಗಿದ್ದ ಇವನು ಮತ್ತೆ ಭಾರತಕ್ಕೆ ಬಂದು ಈಗಿನ‍ ಝಾನ್ಸಿಯ ಚರ್ಚ್‌ ಒಂದರಲ್ಲಿ ಮದುವೆಯೂ ಆದ.  ಮೊದಲು ಬಂಗಾಳ ಮಿಲಿಟರಿಯಲ್ಲಿ ನಂತರ ಹೊಸದಾಗಿ ರಚಿತವಾದ ಭಾರತೀಯ ಬ್ರಿಟಿಷ್‌ ಆರ್ಮಿಯಲ್ಲಿ ಸೇರಿ ಹಂತಹಂತವಾಗಿ ಮೇಲೇರಿದ.  ಈ ಘಟನೆಯನ್ನು ಅವನು ನಡೆಸಿದಾಗ ಅವನು ತಾತ್ಕಾಲಿಕ ಬ್ರಿಗೇಡಿಯರ್‌ ಆಗಿದ್ದ.

ಅವನು ಎಸಗಿದ ಈ ಘಟನೆ ಭಾರತ ಮತ್ತು ಬ್ರಿಟನ್‌ ಎರಡೂ ದೇಶಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಯಿತಾದರೂ ಅವನಿಗೆ ಹೇಳಿಕೊಳ್ಳುವಂಥ ಶಿಕ್ಷೆಯೇನೂ ಆಗಲಿಲ್ಲ. ಆಗ ಬ್ರಿಟಿಷ್‌ ಸೈನ್ಯದ ಉಸ್ತುವಾರಿಯಾಗಿದ್ದ ಚರ್ಚಿಲ್‌,  ಡಯರ್‌ ನನ್ನು ಶಿಸ್ತುಕ್ರಮಕ್ಕೆ ಒಳಪಡಿಸಬಯಸಿದ. ಆದರೆ ಬ್ರಿಟಿಷ್‌ ಕೌನ್ಸಿಲ್‌ ಅವನಿಗೆ ರಾಜಿನಾಮೆ ನೀಡುವ ಆಯ್ಕೆಯನ್ನು ನೀಡಿತು. ಚರ್ಚಿಲ್‌ ಭಾಷಣದ ಕಾರಣದಿಂದ ಬ್ರಿಟನ್‌ ಪಾರ್ಲಿಮೆಂಟಿನಲ್ಲಿ ೧೯೨೦ ರಲ್ಲಿ ನಡೆದ ಗೊತ್ತುವಳಿಯಲ್ಲಿ ಡಯರ್‌ ನ ಕಾರ್ಯಕ್ಕೆ ಅನುಮೋದನೆ ಪಡೆಯುವ ಗೊತ್ತುವಳಿಯು ಸರ್ಕಾರದ ಪರವಾಗಿ ೨೩೦ ಹಾಗೂ ವಿರುದ್ಧವಾಗಿ  ೧೨೯ ಮತ ಪಡೆಯುವ ಮೂಲಕ ಬಿದ್ದುಹೋಯಿತು!

ಆದರೆ ಅವನು ಈ ಹೇಯ ಕೃತ್ಯವನ್ನು ಹೊಗಳಿ ಕೊಂಡಾಡುವವರೂ ಆಗೇನೂ ಕಡಿಮೆ ಸಂಖ್ಯೆಯಲ್ಲಿ ಇರಲಿಲ್ಲ. ಭಾರತದಲ್ಲಿ ಹುಟ್ಟಿಬೆಳೆದು ಐರ್ಲೆಂಡಿನಲ್ಲಿ ವ್ಯಾಸಂಗಮಾಡಿ ಭಾರತದ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಇವನು ಕೊನೆಗೆ ಬ್ರಿಟನ್‌ ನಲ್ಲಿ ತನ್ನ ಕೊನೆಯ ಕಾಲವನ್ನು ಕಳೆದ. ಈ ಘಟನೆಯು ನಡೆದು ಎರಡು ವರ್ಷದ ನಂತರ ಅಂದರೆ ೧೯೨೧ ರಲ್ಲಿ ಅವನಿಗೆ ಬ್ರಿಟನ್ನಿನಲ್ಲಿ ದೊಡ್ಡ ನಾಗರೀಕ ಸನ್ಮಾನವನ್ನು ಮಾಡಿ ದೊಡ್ಡ ಮೊತ್ತದ ನಿಧಿಯೊಂದನ್ನು ಸಂಗ್ರಹಮಾಡಿ ನೀಡಿದರು! ಆಗ ಬ್ರಿಟೀಷ್‌ ಆಡಳಿತದ ಪರವಾಗಿ ತುತ್ತೂರಿ ಬಾರಿಸುವ ಪತ್ರಿಕೆಯಾಗಿದ್ದ ʼಮಾರ್ನಿಂಗ್‌ ಪೋಸ್ಟ್‌ʼ ( ಇದು ಮುಂದೆ ಡೇಲಿ ಟಿಲಿಗ್ರಾಫ್‌ʼನಲ್ಲಿ ಲೀನವಾಯಿತು) ಈ ನಿಧಿಯ ಸಂಗ್ರಹದ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿತು.  ಅದೇ ಪತ್ರಿಕೆ ಅವನನ್ನು “ಭಾರತವನ್ನು ರಕ್ಷಿಸಿದ ವ್ಯಕ್ತಿ” ಎಂದು ಕೊಂಡಾಡಿತು. ಡಯರ್‌ ಗೆ ಈ ರೀತಿ ನಿಧಿ ಸಂಗ್ರಹ ಮಾಡಿದ್ದನ್ನು ಅತ್ಯಂತ ಪ್ರಬಲವಾಗಿ ವಿರೋಧಿಸಿದ ಭಾರತೀಯ ಲೇಖಕ ಎಂದರೆ ರವೀಂದ್ರನಾಥ ಟ್ಯಾಗೋರ್.‌  ಹತ್ಯಾಕಾಂಡಕ್ಕೆ ಒಳಗಾದವರ ಕುಟುಂಬಗಳಿಗೆ ಸರಿಯಾದ ಪರಿಹಾರವೇ ಇನ್ನೂ ಸಿಕ್ಕಿರದಿದ್ದಾಗ ಹತ್ಯಾಕಾಂಡ ಮಾಡಿದ ವ್ಯಕ್ತಿಗೆ ಈ ರೀತಿ ನಿಧಿ ಸಂಗ್ರಹಿಸಿಕೊಡುವ ಕಾರ್ಯವನ್ನು ಅವರು ಪ್ರಬಲವಾಗಿ ವಿರೋಧಿಸಿದರು. ಕೊನೆಗೂ ಬಾಧಿತರಿಗೆ ೫೦೦ ರೂ ಗಳ ಚಿಕ್ಕ ಪರಿಹಾರ ದೊರೆಯಿತು!

ಹೀಗೆ ಉರಿದು ಮೆರೆದ ಈ ಡೈಯರ್‌ ನ ಕೊನೆಯ ಕಾಲವೇನೂ ಸರಿಯಿರಲಿಲ್ಲ. ಪಾರ್ಶ್ವವಾಯುವಿಗೆ ತುತ್ತಾಗಿ ಈ ಘಟನೆ ನಡೆದ ಎಂಟು ವರ್ಷಕ್ಕೆ ೧೯೨೭ ರಲ್ಲಿ ತನ್ನ ೬೩ನೇ ವಯಸ್ಸಿನಲ್ಲಿ ಸತ್ತುಹೋದ. ಸಾಯುವಾಗ ತನ್ನ ಸಾವಿನ ಹಾಸಿಗೆಯ ಮೇಲೆ ಅವನು  ಈ ಘಟನೆಯನ್ನು ಕುರಿತು, “ಕೆಲವರು ನಾನು ಮಾಡಿದ್ದು ಸರಿ ಎನ್ನುತ್ತಾರೆ; ಮತ್ತೆ ಕೆಲವರು ತಪ್ಪು ಎನ್ನುತ್ತಾರೆ ಆದರೆ ನಾನು ಮಾಡಿದ್ದು ತಪ್ಪೋ ಸರಿಯೋ ಎಂಬುದನ್ನು ನನ್ನ ನಿರ್ಮಾಪಕನಿಂದ (ಮೇಕರ್)‌ ತಿಳಿದುಕೊಳ್ಳಬಯಸುತ್ತೇನೆ” ಎನ್ನುತ್ತಿದ್ದನೆಂಬ ಮಾತು ಜನಜನಿತವಾಗಿದೆ.

***

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಸದಾ ಉರಿಯುವ ಬೆಂಕಿಯಂತೆ ದಾಖಲಾಗಿರುವ ಈ ರಕ್ತಸಿಕ್ತ ಘಟನೆ ಮೈ ಜುಂ ಅನ್ನಿಸುವಂಥದ್ದು.   ಘಟನೆ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ

 ಧಾರ್ಮಿಕವಾಗಿ ಅಷ್ಟೇನು ನಿಷ್ಠಾವಂತ ಭಕ್ತನಲ್ಲದ ನಾನು ಸುಮ್ಮನೆ ಸುವರ್ಣಮಂದಿರದ ಒಳಗೆ ಹೋಗಿ ಸುತ್ತಾಡಿ ಒಂದಿಷ್ಟುಹೊತ್ತು ಕುಳಿತೆದ್ದು ಸೀದಾ ಜಲಿಯನ್‌ ವಾಲಾಭಾಗ್‌ ಗೆ ಬಂದೆ. ಒಮ್ಮೆಲೆ ಇತಿಹಾಸದ ಘಟನೆ ನೆನಪಿಗೆ ಬಂದು ಮೈ ಬಿಸಿ ಆದದ್ದು ಸುಳ್ಳಲ್ಲ. ಹುತಾತ್ಮ ಯೋಧರಿಗೆ ಯೋಗ್ಯ ಗೌರವ ಸಲ್ಲಿಸುವ ರೀತಿಯಲ್ಲಿ ಸ್ಥಳವನ್ನು ಅಭಿವೃದ್ಧಿ ಪಡಿಸಿದ್ದು ಕಂಡು ಸಮಾಧಾನವಾಯಿತು.

ಸುಮಾರು ನಾಲ್ಕು ಫೋಟೋ ಮತ್ತು ವಿಡಿಯೋ ಗ್ಯಾಲರಿಗಳನ್ನು ಮಾಡಿ ಅಲ್ಲಿನ ಚಿತ್ರಗಳು ಕಾಲದ ಪತ್ರಿಕಾ ಸುದ್ದಿಗಳು ಘಟನೆ ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಒಂದು ವಿಡಿಯೋ ಥೇಟರ್ ಕೂಡ ಮಾಡಿ ಘಟನೆಯನ್ನು ತೋರಿಸಿ ಜನರಿಗೆ ದೇಶಾಭಿಮಾನ ಹುಟ್ಟುವಂತೆ ಮಾಡಿದ್ದಾರೆ.

                                               ಡೈಯರ್ ಗುಂಡು

ಹಾರಿಸತೊಡಗಿದಾಗ ಗುಂಡಿಗೆ ಬಲಿ ಆಗುವುದಕ್ಕಿಂತ ಅಲ್ಲಿದ್ದ ಬಾವಿಯೊಂದಕ್ಕೆ ಹಾರಿ ಪ್ರಾಣಬಿಡುವುದನ್ನು ಆಯ್ಕೆ ಮಾಡಿಕೊಂಡ ದೇಶಭಕ್ತರ ಕರುಳು ಕಿವುಚುವ ದೃಶ್ಯ ಕಣ್ಮುಂದೆ ಬರುವಂತೆ ಬಾವಿಯನ್ನೂ ಅಭಿವೃದ್ಧಿಪಡಿಸಿ ನೋಡಲು ವ್ಯವಸ್ಥೆ ಮಾಡಲಾಗಿದೆ.

ಹುತಾತ್ಮರ ದೊಡ್ಡ ಸ್ಮಾರಕ ನಿರ್ಮಿಸಿ ಯುವಜನತೆ ಪ್ರೇರಣೆ ಪಡೆಯುವಂತೆ ಮಾಡಿದ್ದಾರೆ. ಅನೇಕ ಹುತಾತ್ಮರ ಕೆಚ್ಚೆದೆಯ ಮಾತುಗಳನ್ನು ಆಳೆತ್ತರದ ಕಲ್ಲು ಕಂಬಗಳನ್ನು ನಿಲ್ಲಿಸಿ ಅವುಗಳ ಮೇಲೆ ಕೆತ್ತಿದ್ದಾರೆ. ಆರದ ಅಮರಜ್ಯೋತಿಯೊಂದನ್ನು ಇರಿಸಿ ನಾವು ಹುತಾತ್ಮ ಯೋಧರಿಗೆ ನಮ್ಮ ಶ್ರದ್ಧಾಪೂರ್ವಕ ಗೌರವ ಸಲ್ಲಿಸುವ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ.

ಒಟ್ಟಿನಲ್ಲಿ ಹುತಾತ್ಮ ದೇಶಭಕ್ತರಿಗೆ ಗರಿಷ್ಠ ಪ್ರಮಾಣದಲ್ಲಿ ಯಾವರೀತಿ ಗೌರವ ಸಲ್ಲಿಸಬಹುದೋ ಎಲ್ಲ ಕೆಲಸಗಳನ್ನೂ ಇಲ್ಲಿ ಮಾಡಿದ್ದಾರೆ ಎನ್ನಬಹುದು.  ಏಪ್ರಿಲ್‌ ಹದಿಮೂರರ ಈ ದಿನ ಈ ಕರಾಳ ಘಟನೆಯನ್ನು ನೆನಪುಮಾಡಿಕೊಳ್ಳುವ ದಿನವಾಗಿ ಈ ಟಿಪ್ಪಣಿ. ಹಾಗೂ ಕೆಲವು ಫೋಟೋಗಳು ತಮಗಾಗಿ. ಪಂಜಾಬಿನ ಪ್ರವಾಸಕ್ಕೆ ಹೋಗುವವರು ತಪ್ಪದೆ ಈ ಸ್ಥಳಕ್ಕೆ ಹೋಗಿಬನ್ನಿ.

ರಾಬು

೧೩-೦೪-೨೦೨೪

 

Sunday, June 4, 2023

ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್..


ಈ ಪುಸ್ತಕವನ್ನು ಪಡೆಯುವ ಬಗೆ

ಇದು ನನ್ನ ಹೊಸ ಪುಸ್ತಕ. ಭಾರತ ಜನತೆಯಲ್ಲಿ ಅದರಲ್ಲಿಯೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಅವರು ಮತಮೌಢ್ಯಗಳಿಂದ ದೂರವಾಗಿ ಅವರಿವರ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಉದ್ದೇಶದ ಒಟ್ಟು 30 ಲೇಖನಗಳು ಇದರಲ್ಲಿವೆ. ಈ ಪುಸ್ತಕವು 176 ಪುಟಗಳನ್ನು ಹೊಂದಿದ್ದು 180 ರೂ ಮುಖಬೆಲೆ ಹೊಂದಿದೆ. ವೈಯಕ್ತಿಕ ಬಳಕೆಗಾಗಿ ಅಂಚೆ ಮೂಲಕ ತರಿಸಿಕೊಳ್ಳುವವರು ಅಂಚೆ ವೆಚ್ಚ ರೂ. 20ನ್ನು ಸೇರಿಸಿ ಒಟ್ಟು ರೂ. 200 ನ್ನು ನನ್ನ 9481504080 (Rajendra Buradikatti) ನಂಬರಿಗೆ PhonePay ಮಾಡಿ ಅದರ ಸ್ಕ್ರೀನ್ ಶಾಟ್ ಮತ್ತು ತಮ್ಮ ವಿಳಾಸವನ್ನು ವಾಟ್ಸಪ್ ಮೂಲಕ 8310938434 ನಂಬರಿಗೆ ಕಳಿಸಿದರೆ ನೋಂದಾಯಿತ ಅಂಚೆ ಮೂಲಕ ಪುಸ್ತಕವನ್ನು ಕಳಿಸಿಕೊಡಲಾಗುವುದು.

ಪುಸ್ತಕ ಮಾರಾಟಗಾರರು ಸಗಟು ಖರೀದಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ – 577204 ದೂ:9449886390, 9916197291 email: geethanjalipusthakaprakashana@gmail.com